Tuesday, December 29, 2009

'ಶ್ರೀ' ಪಡ್ರೆಯವರಿಗೆ 'ವಿಲ್ ಗ್ರೋ' ಪ್ರಶಸ್ತಿ

ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಗೆ ಪ್ರತಿಷ್ಠಿತ 'ವಿಲ್ ಗ್ರೋ' ಪ್ರಶಸ್ತಿ ಸಂದಿದೆ. ಚೆನ್ನೈಯ ವಿಲ್ಗ್ರೋ ಸಂಸ್ಥೆ (ಹಿಂದೆ ರೂರಲ್ ಇನೊವೇಶನ್ ನೆಟ್ವರ್ಕ್) ಪತ್ರಕರ್ತ ವಿಭಾಗದಲ್ಲಿ ಪಡ್ರೆಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ಮತ್ತು ಫಲಕಗಳನ್ನೊಳಗೊಂಡಿದೆ.
ಆರು ಮಂದಿ ಪತ್ರಕರ್ತರ ಪೈಕಿ ಅಡಿಕೆ ಪತ್ರಿಕೆಯಲ್ಲಿ ಅನುಶೋಧನೆಗಳಿಗೆ ಕೊಟ್ಟ ಆದ್ಯತೆಗಳಿಗಾಗಿ ಶ್ರೀ ಪಡ್ರೆಯವರಿಗೆ ಈ ಪ್ರಶಸ್ತಿ ಕೊಡಲಾಗಿದೆ. ತೀರ್ಪುಗಾರರ ಮಂಡಳಿಯ ತೀರ್ಮಾನ ಮತ್ತು ಎಸ್ಎಂಎಸ್ - ಹೀಗೆ ಎರಡು ವಿಧಾನಗಳ ಮೂಲಕ ಒಟ್ಟಾರೆಯಾಗಿ ಈ ಆಯ್ಕೆ ನಡೆದಿದೆ.

'ಶ್ರೀ' ಪಡ್ರೆ ಕೇರಳದ ಕಾಸರಗೋಡು ಜಿಲ್ಲೆಯ ವಾಣಿನಗರದ ಕೃಷಿಕ. ಪ್ರವೃತ್ತಿಯಲ್ಲಿ ಕೃಷಿ ಪತ್ರಕರ್ತ. ಅಡಿಕೆ ಪತ್ರಿಕೆಯ ಸ್ಥಾಪಕ ಸಂಪಾದಕ. ಜಲಕೂಟ ಮತ್ತು ಅಡಿಕೆ ಪತ್ರಿಕೆಯ ಆಶ್ರಯದಲ್ಲಿ ದಶಕಕ್ಕೂ ಮಿಕ್ಕಿ ಮಳೆಕೊಯ್ಲಿನ ಬಗ್ಗೆ ಆಧ್ಯಯನ, ಬರವಣಿಗೆ, ದೇಶ-ವಿದೇಶಗಳಲ್ಲಿ ಮಳೆಕೊಯ್ಲಿನ ವಿವರಗಳನ್ನು ಸಂಗ್ರಹಿಸಿ, ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಇಂಗ್ಲಿಷಿನಲ್ಲೂ ಅಭ್ಯುದಯ ನುಡಿಚಿತ್ರ್ರ ಬರೆಯುತ್ತಾರೆ.
ಕಾಸರಗೋಡಿನ ಎಂಡೋಸಲ್ಫಾನ್ ದುರಂತವನ್ನು ಹೊರಜಗತ್ತಿಗೆ ತಿಳಿಸಿ ಅದನ್ನು ತಡೆಯುವ ಹೋರಾಟದಲ್ಲಿ ಭಾಗಿ. ನೆಲ-ಜಲ ಉಳಿಸಿ, ಹನಿಗೂಡಿಸುವ ಹಾದಿಯಲ್ಲಿ, ಮತ್ತೆ ರೂಪಾರೆಲ್ ಬತ್ತಲಿಲ್ಲ, ಬಾನಿಗೊಂದು ಆಲಿಕೆ, ಗುಜರಾತಿನ ನೀರ ತಿಜೋರಿ ಟಾಂಕಾ, ನೀರ ನೆಮ್ಮದಿಗೆ ನೂರಾರು ದಾರಿ, ನೀರ ಸಮಸ್ಯೆಗೆ ಇಲ್ಲಿವೆ ಪರಿಹಾರ, ಓಡಲು ಬಿಡದಿರಿ ಮಳೆನೀರ, ರೈನ್ ವಾಟರ್ ಹಾರ್ವೆಸ್ಟಿಂಗ್, ಮಣ್ಣು-ನೀರು ಇತ್ಯಾದಿ ಇವರ ಪ್ರಕಟಿತ ಕೃತಿಗಳು.

'ಗುಡ್ ನ್ಯೂಸ್ ಇಂಡಿಯಾ ಡಾಟ್ ಕಾಂ' ಎಂಬ ಜಾಲತಾಣ ಇವರನ್ನು 'ದ ರೈನ್ ಮ್ಯಾನ ಆಫ್ ಕೆನರಾ ಕೋಸ್ಟ್' ಎಂದು ಬಣ್ಣಿಸಿದೆ. ಅಶೋಕ ಫೆಲೋ ಕೂಡಾ ಆಗಿರುವ ಇವರಿಗೆ ಸಿಕ್ಕಿರುವ ಹತ್ತಾರು ಪ್ರಶಸ್ತಿಗಳಲ್ಲಿ ಗ್ರಾಮೀಣ ವರದಿಗಾಗಿ ಇರುವ ಸ್ಟೇಟ್ಸ್ಮೆನ್ ರಾಷ್ಟ್ರೀಯ ಪ್ರಶಸ್ತಿ, ಪಾವನಾ ಪರಿಸರ ಪ್ರಶಸ್ತಿ, ಕರ್ನಾಟಕ ಸರಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಚರಕ ಪತ್ರಿಕೋದ್ಯಮ ಗುರು ಪ್ರಶಸ್ತಿ ಮುಖ್ಯವಾದುವು.

ಅಭಿವೃದ್ಧಿ- ಪರಿಸರ ಪತ್ರಿಕೋದ್ಯಮ ಪ್ರಶಸ್ತಿ

(ಚಿತ್ರದಲ್ಲಿ - ಅನಿತಾ ಪೈಲೂರು, ರಾಧಾಕೃಷ್ಣ ಎಸ್.ಭಡ್ತಿ, ಜಿ.ಕೃಷ್ಣಪ್ರಸಾದ್)
ರಾಜ್ಯ ಸರಕಾರವು ಕಳೆದ ಮೂರು ವರುಷಗಳ 'ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪ್ರಶಸ್ತಿ'ಗಳನ್ನು ಪ್ರಕಟಿಸಿದೆ. ಪ್ರಶಸ್ತಿಯು ತಲಾ ಐವತ್ತು ಸಾವಿರ ರೂಪಾಯಿ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.
ಪ್ರಶಸ್ತಿ ಪುರಸ್ಕೃತರು
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ : ಟೈಮ್ಸ್ ಆಫ್ ಇಂಡಿಯಾ ಕನ್ನಡ ಆವೃತ್ತಿಯ ಸಂಪಾದಕ ಈಶ್ವರ ದೈತೋಟ (2007), ಧಾರವಾಡ ಆಕಾಶವಾಣಿ ಕೇಂದ್ರದ ಸಹಾಯಕ ನಿಲಯ ನಿರ್ದೆಶಕ ಸಿ.ಯು.ಬೆಳ್ಳಕ್ಕಿ (2008), ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು (2009).

ಪರಿಸರ ಪತ್ರಿಕೋದ್ಯಮ ಪ್ರಶಸ್ತಿ : ಸಹಜ ಸಮೃದ್ಧದ ಮುಖ್ಯಸ್ಥ ಜಿ.ಕೃಷ್ಣಪ್ರಸಾದ್ (2007), ಹಿರಿಯ ಪತ್ರಕರ್ತ ಟಿ.ಆರ್.ಅನಂತರಾಮ (2008), ವಿಜಯಕರ್ನಾಟಕದ ಮುಖ್ಯ ಉಪಸಂಪಾದಕ ರಾಧಾಕೃಷ್ಣ ಎಸ್.ಭಡ್ತಿ (2009)

ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅಧ್ಯಕ್ಷರಾಗಿದ್ದ ಆಯ್ಕೆ ಸಮಿತಿಯಲ್ಲಿ - ಡಾ.ಎ.ಎನ್.ಯಲ್ಲಪ್ಪ ರೆಡ್ಡಿ, ಡಾ.ಎಚ್.ಆರ್.ಕೃಷ್ಣಮೂರ್ತಿ, ದು.ಗು.ಲಕ್ಷ್ಮಣ - ಸದಸ್ಯರು.

ಪ್ರಶಸ್ತಿ ಪುರಸ್ಕೃತರಿಗೆ ಹಾರ್ದಿಕ ಅಭಿನಂದನೆಗಳು.

Monday, December 28, 2009

ಸಾವಯವ ಸೂರು 'ನೇಸರ'

ಸಾವಯವ ಕೃಷಿ - ಕಾಲದ ಅನಿವಾರ್ಯತೆ. ಅರೋಗ್ಯ ಉಳಿಸಲು, ಉಳಿಯಲು ಇದೊಂದೇ ಮಾರ್ಗ. ಬೆಳೆಸಿದರೆ ಸಾಕೆ, ವ್ಯವಸ್ಥಿತವಾದ ಮಾರುಕಟ್ಟೆ ಸೃಷ್ಟಿಯಾಗಬೇಡ್ವೇ?

ಮೈಸೂರಿನ ಗೀತಾರಸ್ತೆಯಲ್ಲಿರುವ 'ನೇಸರ' ಸಾವಯವ ವಸ್ತುಗಳ ಮಾರಾಟಕ್ಕಾಗಿ ರೂಪುಗೊಂಡ ಸಂಸ್ಥೆ. ಸಾವಯವ ಕೃಷಿಕರನ್ನು ಗುರುತಿಸುವುದು, ಉತ್ಪಾದಕ ಮತ್ತು ಗೃಹಕರ ನಡುವಿನ ಕೊಂಡಿಯಾಗುವುದು, ಸಾವಯವ ಕೃಷಿ ಕೂಟಗಳನ್ನು ಏರ್ಪಡಿಸುವುದು, ಪ್ರವಾಸ, ಪತ್ರಿಕೆ, ನಾಟಿ ಬೀಜ ಸಂರಕ್ಷಣೆ, ಗ್ರಂಥಾಲಯ, ಸಾವಯವ ಅಡುಗೆ....ಇವು ನೇಸರದ ಉದ್ದೇಶಗಳು.

25 ಮಂದಿ ನೋಂದಾಯಿತ ಕೃಷಿಕರಿದ್ದಾರೆ. ನೋಂದಣಿ ಅಂದರೆ ಯಾವುದೇ ಪ್ರಮಾಣೀಕೃತ ಸಂಸ್ಥೆಗಳಿಂದ ದೃಢೀಕರಣವಲ್ಲ. ತಾನೇ ಹಾಕಿಕೊಂಡ ಕೆಲವು 'ಬಿಗಿ' ನಿಯಮಗಳಿಗನುಸಾರವಾಗಿ `ಅಪ್ಪಟ ಸಾವಯವ ಕೃಷಿಕ'ರನ್ನು ಗೊತ್ತುಮಾಡುತ್ತದೆ.

ಸಾವಯವ ದೃಢೀಕರಣಕ್ಕಾಗಿ ಪ್ರಶ್ನೆಗಳನ್ನು ಮುದ್ರಿಸಿದೆ. ಇದಕ್ಕೆ ತೋಟದ ಮಾಲಿಕ ಉತ್ತರಿಸಬೇಕಾಗುತ್ತದೆ. ನಂತರ ಮೂರ್ನಾಲ್ಕು ಮಂದಿಯ ಪರೀಕ್ಷಾ ತಂಡ ತೋಟಕ್ಕೆ ಭೇಟಿ ನೀಡಿ ಪರೀಕ್ಷಿಸುತ್ತದೆ. ''ಹೀಗೆ ಕೃಷಿಕರಲ್ಲಿಗೆ ಭೇಟಿನೀಡುವಾಗ ಅವರ ಸ್ವಭಾವ ಮತ್ತು ಮಾತಿನಿಂದಲೇ ಗೊತ್ತಾಗಿಬಿಡುತ್ತದೆ. ಸಾವಯವದ ಕುರಿತು ಮಾನಸಿಕ ದೃಢತೆಯೂ ತಿಳಿಯುತ್ತದೆ ನೇಸರದ ಮುಖ್ಯ ಸಂಪನ್ಮೂಲ ಕೃಷಿಕ ಎ.ಪಿ.ಚಂದ್ರಶೇಖರ್ ಹೇಳುತ್ತಾರೆ.

ಕೆಲವರು ಹೇಳುವುದಿದೆ. 'ನಮ್ಮ ತೋಟ ಶುದ್ಧ ಸಾವಯವ. ಆದರೆ ರಸಬಾಳೆಗೆ ಫ್ಲುರಿಡಾನ್ ಸ್ವಲ್ಪ ಹಾಕಿದ್ದೇನೆ' ಇದಕ್ಕೇನನ್ನೋಣ? ಇಂತಹವರಿಗೆ ತಿಳಿ ಹೇಳುವ ಕೆಲಸ ಮತ್ತು ಪರ್ಯಾಯ ದಾರಿಗಳನ್ನು ನೇಸರ ಹೇಳುತ್ತದೆ.

ಸಾವಯವ ಪರೀಕ್ಷೆಯಲ್ಲಿ ಗೆದ್ದ ಕೃಷಿಕರ ತೋಟದ ಉತ್ಪನ್ನಗಳಿಗೆ ನೇಸರದಲ್ಲಿ ಪ್ರಥಮಾದ್ಯತೆ. ಆರಂಭದಲ್ಲಿ ಇಪ್ಪತ್ತೈದು ಮಂದಿಯೂ ಉತ್ಪನ್ನಗಳನ್ನು ನೇಸರದಲ್ಲಿ ಇಡುತ್ತಿದ್ದರು. ಈಗ ಹನ್ನೆರಡು ಮಂದಿ ಮಾತ್ರ. ಕಾರಣ, ಒಬ್ಬೊಬ್ಬರ ತೋಟವಿರುವುದು ಪೇಟೆಯಿಂದ ಬಹಳಷ್ಟು ದೂರ. ದಿನನಿತ್ಯ ಸಿಗುವ ಪೇರಳವೋ, ನಿಂಬೆಯೋ ನೇಸರಕ್ಕೆ ಸಮಯಕ್ಕೆ ಸರಿಯಾಗಿ ತಲಪಿಸುವುದು ತ್ರಾಸ. ಸಿಗುವ ಮೊತ್ತ ಪ್ರಯಾಣ ವೆಚ್ಚಕ್ಕೆ ಸರಿಸಮ. ಹಾಗಾಗಿ ಪೇಟೆಯ ಸುತ್ತಮುತ್ತ ಇರುವ, ದಿನಕ್ಕೊಮ್ಮೆ ಪೇಟೆಗೆ ಬರುವ ಕೃಷಿಕರ ವಸ್ತುಗಳು ಮಾತ್ರ ನೇಸರದಲ್ಲಿವೆ.

'ಕೃಷಿಕರೇ ತಮ್ಮ ವಸ್ತುಗಳಿಗೆ ದರ ನಿಗದಿ ಮಾಡುತ್ತಾರೆ. ಅವರ ದರಕ್ಕೆ ಶೇ.20ನ್ನು ಸೇರಿಸಿ ನೇಸರದಲ್ಲಿ ಮಾರಾಟ. ಆದರೆ ಕೃಷಿಕರು ತಂದ ತಕ್ಷಣ ಹಣ ನೀಡುವ ವ್ಯವಸ್ಥೆ ಇಲ್ಲ. ಮಾರಾಟವಾದ ಸರಕಿಗೆ ಮಾತ್ರ ಹಣ ಪಾವತಿ'.

ಒಂದೇ ಜಾತಿಯ ನಿಂಬೆ ಬೇರೆ ಬೇರೆ ದರದಲ್ಲಿ ಬಂದಿರುತ್ತವೆ. ಆಗದು ಇಂತಹವರ ತೋಟದ್ದು ಎಂಬ `ಬ್ರಾಂಡ್' ಮೇಲೆ ವ್ಯಾಪಾರವಾಗುತ್ತದೆ. ಒಂದು ವೇಳೆ ಉತ್ಪನ್ನ ಉಳಿದರೆ? ಅದಕ್ಕೆ ಕೃಷಿಕರೇ ಹೊಣೆ. ಉಳಿದ ಮಾರುಕಟ್ಟೆಗಿಂತ ಶೇ.25 ಸಾವಯವ ಉತ್ಪನ್ನಗಳಿಗೆ ಹೆಚ್ಚು. 'ವಿಷ ತಿನ್ನುವುದೇ ಬೇಡ ಎಂಬವರು ಬಂದೇ ಬರುತ್ತಾರೆ'

ಶುಕ್ರವಾರ ದೊಡ್ಡ ಸಂತೆ. ಆಗ ನೇಸರದ ಒಳಗಿನ ವಸ್ತುಗಳೆಲ್ಲವೂ ಹೊರಗಿನಂಗಳಕ್ಕೆ. ಕೊತ್ತಂಬರಿ ಸೊಪ್ಪು, ಶ್ರೀಗಂಧದ ಸೊಪ್ಪು.....ಹೀಗೆ ಸೊಪ್ಪು ತರಕಾರಿಗಳಿಗೆ ಡಿಮಾಂಡ್. ಬಾಳೆದಿಂಡಿಗೆ ಬೇಡಿಕೆ ಹೆಚ್ಚು! 'ನಮ್ಮಲ್ಲಿ ಬೀಜರಹಿತ ಚಿಕ್ಕು ಇದೆ. ಇದರ ಹಣ್ಣಿಗೆ ಮುಂಗಡ ಬುಕ್ಕಿಂಗ್ ಇದೆ' ನಿರ್ಮಲ ಎ.ಪಿ. ಮಾತಿನ ಮಧ್ಯೆ ಹೇಳಿದರು.

ಸಂತೆಗೆ ಜನ ಮುಗಿಬೀಳುವ ಕಾರಣ, ಟೋಕನ್ ವ್ಯವಸ್ಥೆ. ಒಟ್ಟು ಬಂದು ಖರೀದಿಸುವ ಹಾಗಿಲ್ಲ. ಇದರಲ್ಲಿ ನೇಸರದ ಸದಸ್ಯರಿಗೆ ಟೋಕನ್ನಿಂದ ವಿನಾಯಿತಿ. ಯಾವುದೇ ಸರತಿ ಸಾಲಿರಲಿ, ಇವರಿಗೆ ಲಗಾವಿಲ್ಲ.

ತಿಂಗಳಿಗೆ ಏನಿಲ್ಲವೆಂದರೂ 50,000 ರೂ. ವ್ಯಾಪಾರ. ಅದರಲ್ಲಿ ಮೂರನೇ ಒಂದು ಪಾಲು ಇಂದ್ರಪ್ರಸ್ಥದ ಸುಮಾರು ನೂರಕ್ಕೂ ಮಿಕ್ಕಿದ ಮೌಲ್ಯವರ್ಧಿತ ಉತ್ಪನ್ನಗಳೇ! ಶರಬತ್ತು, ಉಪ್ಪಿನಕಾಯಿ, ಜ್ಯಾಂಗಳು, ಒಣಗಿಸಿದ ಹಣ್ಣುಗಳು, ಒಣಗಿಸಿದ ಸಿಪ್ಪೆಗಳು, ಹಪ್ಪಳ, ಸೆಂಡಿಗೆ, ಬಾಳಕ, ಚಟ್ನಿಪುಡಿಗಳು, ಕಷಾಯಗಳು, ಮಸಾಲೆಗಳು, ಔಷಧೀಯ ಐಟಂಗಳು, ಮಾರ್ಜಕಗಳು, ಹಸಿರು ಉತ್ಪನ್ನಗಳು.....ಹೀಗೆ ಒಂದೇ ಎರಡೇ....

ಅಕ್ಕಿ, ಬೆಲ್ಲ, ತುಪ್ಪ, ಜೋಳ ವಸ್ತುಗಳಿಗೆ ನಿಶ್ಚಿತ ಗ್ರಾಹಕರು. ಅಕ್ಕಿಯನ್ನು ಹಾಸನದಿಂದ ತರಿಸಿ ವಿತರಿಸುತ್ತಾರೆ. ಮೊದಲು ನೇಸರದಲ್ಲಿ ಸಕ್ರ್ರಿಯವಾಗಿದ್ದ ಕೃಷಿಕರೊಬ್ಬರು ಹೈದರಾಬಾದ್ನಲ್ಲಿದ್ದಾರೆ. ಅವರು ತೊಗರಿ ಒದಗಿಸುತ್ತಾರೆ. ಶಿವಮೊಗ್ಗದಿಂದ ಒಂದಷ್ಟು ವಸ್ತುಗಳು.

ನೇಸರದ ಗ್ರಾಹಕರು - ಉತ್ಪನ್ನಗಳನ್ನು 'ಬಳಸಿ ನೋಡಿದ ಗ್ರಾಹಕರು.' ಅವರಿಂದಲೇ ಪ್ರಚಾರ. ಹೊಸಹೊಸ ಗ್ರಾಹಕರು ಬರುತ್ತಾರೆ. ಪ್ಲಾಸ್ಟಿಕ್ ಬಳಸಬಾರದು - ನೇಸರದ ತತ್ವ. ಆದರೆ ವಸ್ತುಗಳನ್ನು ಕಾಪಾಡಲು ಪ್ಲಾಸ್ಟಿಕ್ ಅನಿವಾರ್ಯ. ಪ್ಲಾಸ್ಟಿಕ್ ಬಳಸದಿದ್ದರೆ, ಒಯ್ಯುವವರೇ ಇಲ್ಲ! ಜ್ಯೂಸ್ ಬಾಟಲ್ಗಳ ಲೇಬಲ್ನ್ನು ಆಗಾಗ ಬದಲಿಸುತ್ತಲೇ ಹಾಗಿದ್ದರೆ ವ್ಯಾಪಾರ ಜಾಸ್ತಿ - ಎಪಿಯವರು ವ್ಯಾಪಾರದ ಸೂಕ್ಷ್ಮಗಳನ್ನು ಹೇಳುತ್ತಾರೆ.

ಸಾವಯವ ಉತ್ಪನ್ನಗಳಿಗೆ ಉಳಿದ ಮಾರುಕಟ್ಟೆಗಿಂತ ದರ ಜಾಸ್ತಿ. ಹಾಗಿದ್ದರೂ ಸ್ವಚ್ಚ ಆಹಾರವನ್ನು ಬಯಸುವ ಗ್ರಾಹಕರಿದ್ದಾರೆ. ನೇಸರವು ಬದುಕಿನ 'ಬೇಕು'ಗಳನ್ನು ಒದಗಿಸುತ್ತದೆ. ವಿಷ ತಿಂದು 'ವಿಷಕಂಠ'ರಾದ ನಮ್ಮ ಮನಸ್ಸು ಸಾವಯವಕ್ಕೆ ಸಜ್ಜಾಗಬೇಕು, ಅಷ್ಟೇ.

Monday, December 21, 2009

ಕಾಮ್ ಪರಿಕಲ್ಪನೆ - 'ರೈತಸ್ನೇಹಿ ಮಾಧ್ಯಮ'



ಶಿರಸಿ ಸನಿಹದ ಹಳ್ಳಿ ಬೆಂಗಳಿಯ ಪ್ರಸನ್ನ ಹೆಗಡೆಯವರ ಮನೆಯಂಗಳದಲ್ಲಂದು ಕೃಷಿ ಮಾತುಕತೆ! ಒಂದೆಡೆ ಊರಿನ ರೈತರು. ಮತ್ತೊಂದೆಡೆ ಬರವಣಿಗೆಯಲ್ಲಿ 'ರೈತಸ್ನೇಹ' ಅಂದರೇನೆಂದು ಆಗಲಷ್ಟೇ ಇಣುಕತೊಡಗಿದ ಹವ್ಯಾಸಿ ಪತ್ರಕರ್ತರು.

'ಒಂದು ಕಾಲಘಟ್ಟದಲ್ಲಿ - ಹೆಚ್ಚು ಇಳುವರಿಗಾಗಿ ರಾಸಾಯನಿಕ ಬಳಸಿ ಅಂತ ಅಧಿಕಾರಿಗಳು ಪ್ರಚಾರ ಮಾಡಿದರು. ನೀವು (ಮಾಧ್ಯಮದವರು) ಇನ್ನಷ್ಟು ಬೆನ್ನು ತಟ್ಟಿದಿರಿ. ಈಗ ತಕ್ಷಣ ರಾಸಾಯನಿಕ ಬಿಡಿ ಅಂದ್ರೆ ಹೇಗೆ' ರೈತರ ಮೊನಚು ಪ್ರಶ್ನೆಗೆ ಮೌನವೇ ಉತ್ತರ.

'ಹಳ್ಳಿಯ ಯುವಜನ ನಗರಕ್ಕೆ ಹೋಗ್ತಾರಲ್ಲಾ. ಅಸಹಾಯಕರಾಗಿ ಹೋಗ್ತಿಲ್ಲ. ಹಳ್ಳಿಯಲ್ಲಿ ಕೃಷಿಗೆ ಗೌರವವಿಲ್ಲದ ಕಾರಣ, ಅದನ್ನರಸಿ ಹೋಗ್ತಾರೆ' ಪತ್ರಕರ್ತರೊಬ್ಬರ ಚೋದ್ಯಕ್ಕೆ ಕೃಷಿಕ ಸುಧಾಕರ ಹೇಮಾದ್ರಿಯವರ ಉತ್ತರ.

'ರೈತ ಮುಗ್ಧ. ಆತನಿಗೆ ಹೈಟೆಕ್ ಗೊತ್ತಿಲ್ಲ. ಅವನನ್ನು ಶೋಷಿಸಬೇಡಿ' - ಮಾಧ್ಯಮಕ್ಕೆ ಕೃಷಿಕರ ಮನವಿ. ಒಟ್ಟಿನಲ್ಲಿ 'ಜವಾಬ್ದಾರಿಯುತ ಕೃಷಿಮಾಧ್ಯಮ' ಬೇಕೆಂಬ ಆಗ್ರಹವಿತ್ತು. ಬೆಂಗಳಿಯಲ್ಲಿ ಮೂಡಿದ ಈ ಹಕ್ಕೊತ್ತಾಯವನ್ನು ಒಂಭತ್ತು ವರುಷದ ಹಿಂದೆಯೇ 'ಕೃಷಿ ಮಾಧ್ಯಮ ಕೇಂದ್ರ' ಮನಗಂಡಿದೆ. ಧಾರವಾಡ ಕೇಂದ್ರವಾಗಿ ಈ ಸಂಸ್ಥೆ ಹುಟ್ಟಿದುದರ ಉದ್ದೇಶವೂ ಇದುವೇ!

ಕೃಷಿಕಪರ ಪತ್ರಿಕೋದ್ಯಮ - ಎರಡು ದಶಕದ ಈಚೆಗಿನ ಎದ್ದು ಕಾಣಿಸತೊಡಗಿದ ಪರಿಕಲ್ಪನೆ. ಕೃಷಿಯ ಕುರಿತು ವಿಜ್ಞಾನಿಗಳೇ ಬರೆಯಬೇಕು ಎಂದಿದ್ದ ಸ್ಥಿತಿಯನ್ನು ಬದಲಿಸಿ, ರೈತರೂ ತಮ್ಮ ಅನುಭವದ ಮೂಸೆಯಿಂದ ಬರೆಯಬಹುದೆಂದು ಅಡಿಕೆ ಪತ್ರಿಕೆ ತೋರಿಕೊಟ್ಟಿತು. ಈ ಹಾದಿಯಲ್ಲೀಗ ಕೃಷಿ ಮಾಧ್ಯಮ ಕೇಂದ್ರ ದೊಡ್ಡ ಹೆಜ್ಜೆ ಇಟ್ಟಿದೆ. ಮುಖ್ಯವಾಹಿನಿ ಪತ್ರಿಕೆಗಳಿಗೆ 'ಸೆಡ್ಡು ಹೊಡೆಯದೆ' ರೈತರ ದನಿಯಾಗಿ ಪತ್ರಕರ್ತರನ್ನು ರೂಪಿಸುತ್ತಿದೆ.

ಕೇಂದ್ರದ ಕೃಷಿ ಪತ್ರಿಕೋದ್ಯಮ ತರಬೇತಿ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಅನನ್ಯ. ಇಲ್ಲಿ ಸಿದ್ಧ 'ಅಕಾಡೆಮಿಕ್' ಪಠ್ಯಗಳಿಲ್ಲ. ವಿದ್ಯಾರ್ಠಿ ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಬೇಕಿಲ್ಲ. ಅಂಕಪಟ್ಟಿಯಿಲ್ಲ. ವಯಸ್ಸಿನ ಕಟ್ಟುಪಾಡುಗಳಿಲ್ಲ. ಕೇಂದ್ರದ ನಿರ್ದೇಶನಗಳನ್ನು ಅಕ್ಷರಶಃ ಪಾಲಿಸಿದರೆ - 'ಸಚಿವರು ಉತ್ಪಾದನಾ ವೆಚ್ಚ ತಗ್ಗಿಸಲು ಕರೆ ಕೊಟ್ಟರು' ಎಂದು ಬರೆವ 'ಮಾಮೂಲಿ ಪತ್ರಕರ್ತ'ರಿಗಿಂತ ಭಿನ್ನವಾಗಿ ಬರೆಯಬಲ್ಲ ಗಟ್ಟಿತನ ಬಂದುಬಿಡುತ್ತದೆ!

ತರಬೇತಿಗೆ ಮೊದಲು ಆಯ್ಕೆಯ ಪ್ರಕ್ರಿಯೆಯಿದೆ. ಇದಕ್ಕಾಗಿ ವಿದ್ಯಾರ್ಥಿ ಕೃಷಿ/ಗ್ರಾಮೀಣ ಕುರಿತಾದ ಬರೆಹ ಬರೆಯಬೇಕು. ಅದರ ಆಳ-ಎತ್ತರ ಹೊಂದಿ ಆಯ್ಕೆ. ವಶೀಲಿ, ಒತ್ತಡ ತಂತ್ರಗಳಿಗೆ ಎಡೆಯಿಲ್ಲ. ವೆಚ್ಚವನ್ನು ಸರಿದೂಗಿಸಲಷ್ಟೇ ಶುಲ್ಕ. ಒಂದು ವರುಷಕ್ಕೆ ಗರಿಷ್ಠ ಅಂದರೆ ಮೂವತ್ತು ವಿದ್ಯಾರ್ಥಿಗಳು. ಮೆಟ್ರಿಕ್ನಿಂದ ಶುರುವಾಗಿ ಪಿಎಚ್.ಡಿ. ತನಕದ ವಿದ್ಯಾಭ್ಯಾಸ ಹೊಂದಿದ; ಹಾರೆ ಹಿಡಿದು ಕೃಷಿ ಮಾಡುವಲ್ಲಿಂದ ಕೃಷಿರಂಗದಲ್ಲೇ ಪೂರ್ತಿಯಾಗಿ ಇದ್ದೂ ಈ ವರೆಗೆ ಲೇಖನ ಬರೆಯದ ಕೃಷಿ ಅಧಿಕಾರಿಗಳೂ ವಿದ್ಯಾರ್ಥಿಗಳು!

ತರಬೇತಿಯ ಆರಂಭ ನಾಲ್ಕು ದಿವಸಗಳ ಕಾರ್ಯಾಗಾರದ ಮೂಲಕ. ನಿಮಿಷ ನಿಮಿಷಕ್ಕೂ ಲೆಕ್ಕಣಿಕೆಗೆ ಕೆಲಸ. ಕೃಷಿ/ಗ್ರಾಮೀಣ ಪತ್ರಿಕೋದ್ಯಮದ ಮಹತ್ವ-ಸ್ವರೂಪ, ಬರವಣಿಗೆಯ ತಂತ್ರಗಾರಿಕೆ, ಛಾಯಾ ಪತ್ರಿಕೋದ್ಯಮ, ಕ್ಷೇತ್ರ ಭೇಟಿ, ರೈತರನ್ನು ಸಂದರ್ಶಿಸುವಾಗ ವಹಿಸಬೇಕಾದ ಎಚ್ಚರ ಮೊದಲಾದ ವಿಚಾರಗಳಲ್ಲಿ ಅನುಭವಿಗಳಿಂದ ತಿಳಿವಳಿಕೆ. ಸ್ನೇಹಪೂರ್ಣ ಆದರೆ ಗಂಭೀರ ವಾತಾವರಣ. ಕ್ಲಾಸಿನ ನಂತರವೂ ತರಬೇತಿಯುದ್ದಕ್ಕೂ 'ಮಾತುಕತೆಗೆ ಸಿಗುವ' ಸಂಪನ್ಮೂಲ ವ್ಯಕ್ತಿಗಳು. ಇವರೆಲ್ಲರೂ ಕೃಷಿ ಪತ್ರಿಕೋದ್ಯಮದಲ್ಲಿ ಎದ್ದು ಕಾಣುವ ಹೆಸರುಗಳೇ.

ಸ್ವ-ಮೌಲ್ಯಮಾಪನ

ಎರಡು ದಿವಸ ಕ್ಷೇತ್ರ ಭೇಟಿ. ಅದಕ್ಕೆ ಮುನ್ನ ಭೇಟಿಯಲ್ಲಿ ವಹಿಸಬೇಕಾದ ಎಚ್ಚರದ ಕುರಿತು ಪಾಠ. ಕ್ಷೇತ್ರ ಭೇಟಿಯ ನಂತರ ಲೇಖನ ಬರೆದು ಮರುದಿವಸದ ಸೆಶನ್ ಶುರುವಾಗುವುದರೊಳಗೆ ಒಪ್ಪಿಸಲೇಬೇಕು. ಸಂಪನ್ಮೂಲ ವ್ಯಕ್ತಿಗಳಿಂದ ಮೌಲ್ಯಮಾಪನ.
ಶಿಕ್ಷಣ ಸಂಸ್ಥೆಗಳಲ್ಲಿ ಇದ್ದಂತೆ ಕೆಂಪು ಶಾಯಿಯ ಗುರುತು ಹಾಕಿ, ಅಂಕ ಕೊಡುವ ಕ್ರಮವಿಲ್ಲ. ಇದಕ್ಕಾಗಿ ಗುಂಪು ಚರ್ಚೆ. ತಮ್ಮ ಲೇಖನವನ್ನು ತಾವೇ ಓದಿದ ನಂತರ, ಲೇಖನ ಪುಷ್ಟಿಗೊಳಿಸಲು ಬೇಕಾದ ಅಂಶಗಳ ಬಗ್ಗೆ ಇತರ ವಿದ್ಯಾರ್ಥಿ, ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ. ಕೊನೆಗೆ 'ಲೇಖನ ಹೀಗಿರಬೇಕಿತ್ತು' ಎಂಬಲ್ಲಿಗೆ ಮೌಲ್ಯಮಾಪನ ಮುಕ್ತಾಯ.
'ಮೌಲ್ಯಮಾಪನದ ಎರಡನೆ ದಿನಕ್ಕಾಗುವಾಗ ಮೊದಲ ದಿವಸದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಯಿತು' ಎನ್ನುತ್ತಾರೆ ಈ ವರುಷದ ವಿದ್ಯಾರ್ಥಿ ಉಡುಪಿಯ ಶಶಿಧರ ಹೆಮ್ಮಣ್ಣ.

ಮೂರು ದಿವಸದ ತರಬೇತಿಯ ನಂತರ, ಅಭ್ಯರ್ಥಿಗಳು ಪ್ರತಿ ತಿಂಗಳು ಒಂದೊಂದು ವಿಚಾರದ ಬಗ್ಗೆ ಲೇಖನ ಬರೆಯಬೇಕು. ಅಂಚೆ ಅಥವಾ ಮಿಂಚಂಚೆ ಮೂಲಕ ರವಾನೆ. ಇದನ್ನು ಕೇಂದ್ರವೇ ಮೌಲ್ಯಮಾಪನ ಮಾಡಿ, ಏನು ಪೂರಕ ಮಾಹಿತಿ ಬೇಕಿತ್ತು, ಎಲ್ಲೆಲ್ಲಿ ತಪ್ಪಿತು, ವಿಷಯದ ಯಾವ ಭಾಗ ಸುಧಾರಣೆಯಾಗಬೇಕು.. ಹೀಗೆ ಲೇಖನದಲ್ಲೇ ತಿದ್ದಿ ವಿದ್ಯಾರ್ಥಿಗೆ ಮರಳಿಸುತ್ತದೆ. ಸತತ ಎರಡು ತಿಂಗಳು ಅಸೈನ್ಮೆಂಟ್ ಕಳಿಸದ ವಿದ್ಯಾರ್ಥಿಗಳ ನೊಂದಾವಣೆ ರದ್ದು.

ಸ್ಪೂನ್ ಫೀಡಿಂಗ್!

ಕಾರ್ಯಾಗಾರಕ್ಕೂ ಮೊದಲೇ ವರ್ಷದುದ್ದಕ್ಕೂ ವಹಿಸಬೇಕಾದ ಎಚ್ಚರಗಳನ್ನು ಕಿಟ್ ರೂಪದಲ್ಲಿ ವಿದ್ಯಾರ್ಥಿಗೆ ನೀಡಲಾಗುತ್ತದೆ. ಪರಿಣಾಮಕಾರಿ ಕೃಷಿಕಪರ ಲೇಖನ ಬರೆಯಲು ಏನೇನು ವಿಚಾರ ಗಮನಿಸಬೇಕು, ಏನು ಮಾಡಬಾರದು, ಲೇಖನ ಬರೆಯುವಾಗ ಮಾರ್ಜಿನ್ ಎಷ್ಟು ಬೇಕು, ಲೇಖನದಲ್ಲಿ ಬರಹಗಾರರ ವಿಳಾಸ ಎಲ್ಲಿರಬೇಕು, ಫೋಟೋದ ಹಿಂದೆ ವಿವರಗಳನ್ನು ಹೇಗೆ ಬರೆಯುವುದು, ಲೇಖನಗಳನ್ನು ಅಂಚೆಗೆ ಹಾಕುವ ಮುನ್ನ ಕವರಿಗೆ ವಿಳಾಸ ಬರೆಯುವುದು ಹೇಗೆ, ಸ್ಟಾಂಪ್ ಎಲ್ಲಿ ಹಚ್ಚಬೇಕು, 'ಇಂದ' ವಿಳಾಸ ಎಲ್ಲಿ ಬರೆಯುವುದು. ಲೇಖನ ಮೂರ್ನಾಲ್ಕು ಪುಟಗಳಿದ್ದರೆ ಅದನ್ನೆಲ್ಲಾ ಜೋಡಿಸುವ ಕುರಿತು ಮಾಹಿತಿಯಿದೆ. ಕಿಟ್ನೊಂದಿಗೆ ಮಾದರಿ ರೂಪದಲ್ಲಿ ಸೂಕ್ತ ಜೆಮ್ ಕ್ಲಿಪ್, ಅಂಟು ಇತ್ಯಾದಿ ಸಾಮಗ್ರಿಗಳನ್ನೂ ಅಭ್ಯರ್ಥಿಗಳಿಗೆ ನೀಡುವಲ್ಲಿಯ ತನಕದ ಕಾಳಜಿ ಕೇಂದ್ರದ್ದು. ಕಿಟ್ನ ಜತೆಗೆ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಬಂದ ಉತ್ತಮ ಕೃಷಿ-ಗ್ರಾಮೀಣ ಲೇಖನಗಳನ್ನೂ ಪರಾಮರ್ಶೆಗಾಗಿ ಕೊಡುತ್ತಾರೆ. ಈ ರೀತಿಯ 'ಸ್ಪೂನ್ ಫೀಡಿಂಗ್' ಪತ್ರಿಕೋದ್ಯಮ ಶಿಕ್ಷಣ ಕ್ಷೇತ್ರದಲ್ಲೇ ಅನನ್ಯ!

'ಇಷ್ಟೆಲ್ಲಾ ವಿವರ ಕೊಟ್ಟರೂ ಹೆಚ್ಚಿನವರೂ ಅದನ್ನು ಓದಿಕೊಂಡು ಬರುವುದಿಲ್ಲ. ಪತ್ರಕರ್ತನಿಗೆ ಓದು ಮುಖ್ಯ' ಎನ್ನುತ್ತಾರೆ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಅಡ್ಡೂರು ಕೃಷ್ಣರಾವ್.

ಕೇಂದ್ರ ನೀಡಿದ್ದ ಸೂಚನೆಯನ್ನು ವಿದ್ಯಾರ್ಥಿ ಎಷ್ಟು ಪಾಲಿಸಿದ್ದಾರೆ, ಬರೆಹ ಎಷ್ಟು ಸುಧಾರಿಸಿದೆ ಎಂಬ ಮಾನದಂಡದಂತೆ 'ಉತ್ತಮ ವಿದ್ಯಾರ್ಥಿ' ಎಂಬ ಆಯ್ಕೆ. ಇವರಿಗೆ 'ಕಾಮ್ ಫೆಲೋ' ಎಂಬ ಬಿರುದು. ತರಬೇತಿಯ ಕೊನೆಗೆ ಕೆಂದ್ರದ ವಾರ್ಷಿಕೋತ್ಸವ. ಅದರಲ್ಲಿ ಬಿರುದು ಪ್ರದಾನ.

ನಾಗೇಶ ಹೆಗಡೆ, ಹೆಚ್.ಎನ್.ಆನಂದ, ಶ್ರೀ ಪಡ್ರೆ, ಅಡ್ಡೂರು ಕೃಷ್ಣ ರಾವ್, ಜಿ. ಕೃಷ್ಣಪ್ರಸಾದ್, ಶಿವಾನಂದ ಕಳವೆ, ಮಲ್ಲಿಕಾರ್ಜುನ ಹೊಸಪಾಳ್ಯ, ಆನಂದತೀರ್ಥ ಪ್ಯಾಟಿ, ಗಾಣದಾಳು ಶ್ರೀಕಂಠ, ಪುರ್ಣಪ್ರಜ್ಞ ಬೇಳೂರು...ಹೀಗೆ ಕನ್ನಾಡಿನ ಪ್ರಮುಖ ಅಭ್ಯುದಯ ಪತ್ರಕರ್ತರು ಕೇಂದ್ರದ ಸಂಪನ್ಮೂಲ ವ್ಯಕ್ತಿಗಳು. ಅಕಡೆಮಿಕ್ ಶಿಬಿರಗಳಲ್ಲಿ ತಂತಮ್ಮ 'ಲೆಕ್ಚರ್' ಆದ ನಂತರ ಸಂಪನ್ಮೂಲ ವ್ಯಕ್ತಿಗಳು ತಮ್ಮಷ್ಟಕ್ಕೆ ತೆರಳುತ್ತಾರೆ. ಇಲ್ಲ ಹಾಗಲ್ಲ. ಮೂರೂ ದಿವಸವೂ ವಿದ್ಯಾರ್ಥಿಗಳೊಂದಿಗೆ ಇರುತ್ತಾರೆ. ಊಟ-ವಸತಿ ಅವರೊಂದಿಗೆ. ಹೀಗಾಗಿ ಪತ್ರಿಕೋದ್ಯಮದ ಕುರಿತಾದ ವಿಚಾರಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶ. ಸಂಪನ್ಮೂಲ ವ್ಯಕ್ತಿಗಳು ಮತ್ತು ಅಭ್ಯರ್ಥಿಗಳ ಮಧ್ಯೆ ಯಾವುದೇ ಅಂತರವಿಲ್ಲ, ಗತ್ತು-ಗೈರತ್ತುಗಳಿಲ್ಲ.

ಕಾಮ್ ಫೆಲೋ!

ಎಪ್ಪತ್ತಕ್ಕೂ ಮಿಕ್ಕಿ 'ಕಾಮ್ ಫೆಲೋ'ಗಳು ಕೃಷಿ ಮಾಧ್ಯಮ ಕೇಂದ್ರದ ದೊಡ್ಡ ಆಸ್ತಿ. ಮುಖ್ಯವಾಹಿನಿಯ ಕೃಷಿ ಪುಟಗಳಲ್ಲಿ ಕೆಲವೊಂದು ಸಲ ಫೆಲೋಗಳ ಬರೆಹಗಳೇ ತುಂಬಿರುವುದು ಯಶಸ್ವೀ ತರಬೇತಿಯ ಫಲ. ಅಡಿಕೆ ಪತ್ರಿಕೆ ಕಾಮ್ ವಿದ್ಯಾರ್ಥಿಗಳ ಬರೆಹದ ಬೈಲೈನ್ ಜತೆ 'ಕಾಮ್ ಫೆಲೋ' ಅಂತ ಉಲ್ಲೇಖಿಸುವ ಪರಿಪಾಠ ಶುರುಮಾಡಿದೆ. 'ಇದರಿಂದಾಗಿ ಇನ್ನಷ್ಟು ಸ್ಪೂರ್ತಿ ಸಿಗುತ್ತದೆ' ಎನ್ನುತ್ತಾರೆ ಈ ಸಾಲಿನ ಕಾಮ್ ಫೆಲೋ ಪಡೆದ ಬೆಳಗಾವಿಯ ಕೃಷಿ ಅಧಿಕಾರಿ ಲೀಲಾ ಕೌಜಗೇರಿ. 'ಯಾಕೆ ಬರೆಯಬೇಕು, ಯಾರಿಗಾಗಿ ಬರೆಯಬೇಕು ಎಂಬುದನ್ನು ಕಾಮ್ ಕಲಿಸಿಕೊಟ್ಟಿದೆ' ಎಂಬ ಅನುಭವ ಅರುವತ್ತರ ಯೌವನೆ ಅನುಸೂಯಾ ಶರ್ಮಾ ಅವರದು.

ರಾಜ್ಯಮಟ್ಟದ ಪ್ರಷಸ್ತಿ

ಅರ್ಥಪೂರ್ಣ ಕೃಷಿ-ಗ್ರಾಮೀಣ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಕೇಂದ್ರವು ಪ್ರತೀವರುಷ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಿದೆ. 'ಕೃಷಿಕರ ಅಗತ್ಯಗಳನ್ನಾಧರಿಸಿದ, ಅವರ ನೋವು ನಲಿವುಗಳ ಮೇಲೆ ಬೆಳಕು ಚೆಲ್ಲುವ, ಅವರ ಸಮಸ್ಯೆಗಳ ಬಗ್ಗೆ ಜನಾಭಿಪ್ರಾಯ ಮೂಡಿಸುವ ವಸ್ತುನಿಷ್ಠ ಹಾಗೂ ವಿಚಾರಪೂರ್ಣ ಬರೆಹಗಳು ಕೃಷಿ ಪತ್ರಿಕೋದ್ಯಮವನ್ನು ಸದೃಢಗೊಳಿಸಬೇಕೆಂಬ ಆಶಯದೊಂದಿಗೆ ಪ್ರಶಸ್ತಿ ನೀಡಲಾಗುತ್ತದೆ' ಎನ್ನುತ್ತಾರೆ ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು.

ಇದೀಗ ದೇಶಪಾಂಡೆ ಪೌಂಡೇಶನ್ ನೆರವಿನೊಂದಿಗೆ ಕೇಂದ್ರ ತನ್ನ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಿದೆ.. 'ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ ಸರಣಿ'ಗೆ ಚಾಲನೆ. ವಿವಿಧ ಪತ್ರಿಕೋದ್ಯಮ ವಿಭಾಗಗಳು, ಕೃಷಿ ಸಂಬಂಧಿ ವಿದ್ಯಾಲಯಗಳಲ್ಲಿ ಕಾರ್ಯಾಗಾರ ನಡೆಸುವ ಮೂಲಕ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕುರಿತು ಪ್ರಾಥಮಿಕ ಮಾಹಿತಿ ನೀಡುವುದು ಉದ್ದೇಶ.
ಕೃಷಿ-ಗ್ರಾಮೀಣ ಪತ್ರಿಕೆಗಳು ಹಾಗೂ ಸರಕಾರದ ನಡುವೆ ಅರ್ಥಪೂರ್ಣ ಕೊಂಡಿ ಕಲ್ಪಿಸುವ ಉದ್ದೇಶದಿಂದ ಮತ್ತು ಪತ್ರಿಕೆಗಳ ಬಲವರ್ಧನೆಯ ದೃಷ್ಟಿಯಿಂದ 'ಕೃಷಿ ಸಂಪಾದಕರ ಪರಿಷದ್' ಅಸ್ತಿತ್ವಕ್ಕೆ ಬಂದಿದೆ.
ಹತಾಶೆ ಕವಿದಿರುವ ಒಕ್ಕಲುತನದಲ್ಲಿ ಸ್ಪೂರ್ತಿಯ ಚಿಲುಮೆಗಳಂತಿರುವ ಮೌನ ಸಾಧಕರ ಯಶೋಗಾಥೆಗಳನ್ನು ಪುಸ್ತಕ ರೂಪದಲ್ಲಿ - ಅದರಲ್ಲೂ ಸುಲಭವಾಗಿ ಕೈಗೆಟಕುವ ದರದಲ್ಲಿ ಮುದ್ರಿಸಿ ರೈತರ ಕೈಗಿಡುವತ್ತ ಹೊಸ ಹೆಜ್ಜೆ ಇಟ್ಟಿದೆ. ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ, ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ, ಸಾವಯವದ ಹಾದಿ.. ಹೀಗೆ ಚಿಕ್ಕ ಚೊಕ್ಕ ಪುಸ್ತಕ. ಅಲ್ಲದೆ ಕಾಕೋಳದ ಯಶೋಗಾಥೆ, ನಂದಿ ಹಳ್ಳಿಯ ಉದ್ಯಮಶೀಲ ದಂಪತಿ, ಸಾವಯವ ತಾರಸಿ ತೋಟ, ಜಲನೆಮ್ಮದಿಯತ್ತ ಕಾಕೋಳ ಇತರ ಪ್ರಕಟಣೆಗಳು.

ಕಾಮ್ ಚಟುವಟಿಕೆಗಳ ಮುಖವಾಣಿ 'ಕಾಮ್ ನ್ಯೂಸ್' ಮಾಸಿಕ ಪ್ರಕಟಣೆ. ದಾನಿಗಳ ಸಹಯೋಗ. ಅದರಲ್ಲಿ ಕಾಮ್ ವಿದ್ಯಾರ್ಥಿಗಳ, ಫೆಲೋಗಳ ಮತ್ತು ಚಟುವಟಿಕೆಗಳ ವರದಿ.

ಪತ್ರಿಕೋದ್ಯಮ ತರಬೇತಿಗೆ ನೂರೈವತ್ತಕ್ಕೂ ಮಿಕ್ಕಿ ಪ್ರವೇಶಗಳು ಬರುತ್ತಿವೆ. 'ಬಂದ ಅರ್ಜಿಗಳಲ್ಲಿ 25-30ನ್ನು ಹಿಂಡಿ ತೆಗೆದರೂ ಕೊನೆಯಲ್ಲಿ ಉಳಿಯುವವರು 10-15 ಮಂದಿ ಮಾತ್ರ.'!

ಕೇಂದ್ರದ ಕೇಂದ್ರಸ್ಥಳ ಧಾರವಾಡ. ಮಾಧ್ಯಮ ಕೇಂದ್ರದ ಸಾರಥ್ಯ ಅನಿತಾ ಪೈಲೂರು. ಆರಂಭದಲ್ಲಿ ಪರ್ಯಾಯ ಕೃಷಿ ಮಾಧ್ಯಮ ಕೇಂದ್ರ ಎಂದಿತ್ತು. ಇತ್ತೀಚೆಗೆ ಹೆಸರು ಹೃಸ್ವವಾಗಿದೆ.

ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ಸಂಘಟಕರು ಎದುರು ಕಾಣಿಸಿಕೊಳ್ಳುವುದೇ ಇಲ್ಲ! ನೇಪಥ್ಯದಲ್ಲಿರುತ್ತಾರೆ. ಸಂಸ್ಥೆ ಈಗ ಹತ್ತರ ಹೊಸ್ತಿಲಲ್ಲಿದೆ. ಒಂದಷ್ಟು ಕಾರ್ಯ ಹೂರಣಗಳು ಬಗಲಲ್ಲಿವೆ.

'ಕಾಮ್' ಅಜೆಂಡಾದಲ್ಲಿ ಅಮೂರ್ತವಾಗಿರುವ ಕೃಷಿ-ಗ್ರಾಮೀಣ ವಿಚಾರಗಳ ಕುರಿತಾದ ಮನೋಪ್ಯಾಕೇಜ್ನ ಮೂರ್ತತೆಗೆ ಇನ್ನಷ್ಟು ಹೆಗಲುಗಳು ಬೇಕಾಗಿವೆ. ನಮ್ಮ ಪತ್ರಿಕಾ ಸಂಸ್ಥೆಗಳೂ ಈ ಕೆಲಸಕ್ಕೆ ಸಹಕಾರ ಕೊಟ್ಟರೆ ಇನ್ನಷ್ಟು 'ಸಾಮಥ್ರ್ಯವರ್ಧನೆ' ಸಾಧ್ಯವಾಗಬಹುದು.

(ದಿನಾಂಕ ೨೧-೧೨-೨೦೦೯, ಸೋಮವಾದ ವಿಜಯಕರ್ನಾಟಕದ ’ಲವಲವಿಕೆ’ಯ ಕೃಷಿ ಪುಟದಲ್ಲಿ ಈ ಬರೆಹ ಪ್ರಕಟವಾಗಿದೆ. ಸಂಪಾದಕರಿಗೆ ಧನ್ಯವಾದಗಳು. ಲೇಖನದ ಪೂರ್ತಿ ಭಾಗ ಇಲ್ಲಿದೆ)

Sunday, December 20, 2009

ಮಾಣಿಯಲ್ಲಿ 'ಕೃಷಿ ಉತ್ಸವ'


ಬಂಟ್ವಾಳದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ 'ಕೃಷಿ ಉತ್ಸವ'ವು ಮಾಣಿಯಲ್ಲಿಂದು ಜರುಗಿತು. ಸಂಸದ ಶ್ರೀ ನಳಿನ್ ಕುಮಾರ್ ಕಟೀಲು ದೀಪ ಬೆಳಗಿಸಿ, ವೇದಿಕೆಯಲ್ಲಿ ಮುಂಭಾಗದಲ್ಲಿ ರೂಪಿಸಲಾಗಿದ್ದ 'ಬಾಕಿಮಾರು ಗದ್ದೆ'ಗೆ ಹಾಲೆರೆದು, ವೇದಿಕೆಯಲ್ಲಿದ್ದ ತುಳಸಿ ಕಟ್ಟೆಗೆ ದೀಪ ಜ್ವಲಿಸಿ ಉತ್ಸವಕ್ಕೆ ಚಾಲನೆ ಕೊಟ್ಟರು. ಶಾಸಕ ಶ್ರೀ ರಮಾನಾಥ ರೈ, ಹಿರಿಯರಾದ ಶ್ರೀ ಸಂಕಪ್ಪ ರೈ ವೇದಿಕೆಯಲ್ಲಿ ಉಪಸ್ಥಿತಿ.

ನಂತರ ವಿಚಾರ ಗೋಷ್ಠಿಗಳು. ವಿವಿಧ ವಿಚಾರಗಳ ಮಂಡನೆ. ಶ್ರೀ ಬಡೆಕ್ಕಿಲ ಶ್ಯಾಮಪ್ರಸಾದ್ ಶಾಸ್ತ್ರಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗಂಧ ಬೆಳೆದ ಕೃಷಿಕ. ಅವರ ಅನುಭವ ಕಥನ - ಇಡೀ ಕೃಷಿ ಉತ್ಸವದ ಹೈಲೈಟ್! ಪವರ್ ಪಾಯಿಂಟ್ ಮೂಲಕ ವಿಚಾರದ ಪ್ರಸ್ತುತಿ.

ನಲವತ್ತಕ್ಕೂ ಮಿಕ್ಕಿದ ಮಳಿಗೆಗಳು. ಕಬ್ಬಿನ ಹಾಲಿನಿಂದ ಸ್ಪ್ರೇಯರ್ ತನಕ! ತರಕಾರಿ ಬೀಜಗಳಿಗೆ ಸ್ವಲ್ಪ ಮಟ್ಟಿನ ಆಸಕ್ತಿ. ಮಹಿಳೆಯರ ಒಲವು ನರ್ಸರಿಗಳತ್ತ - ಹೂ ಗಿಡಗಳತ್ತ!

'ಇಂತಹ ಕೃಷಿ ಉತ್ಸವಗಳಿಂದ ಕೃಷಿಯತ್ತ ಹೆಚ್ಚು ಆಸಕ್ತಿ ಹುಟ್ಟಿಸುವ ಮತ್ತು ಕೃಷ್ಯುತ್ಪನ್ನಗಳಿಗೆ ಗ್ರಾಹಕರನ್ನು ಸೆಳೆಯುವ ಅಜ್ಞಾತ ಕೆಲಸವಾಗುತ್ತಿದೆ. ಇದೊಂದು ಖುಷಿ ಉತ್ಸವ' - ಒಂದೇ ವಾಕ್ಯದಲ್ಲಿ ಮೇಳದ ಆಶಯವನ್ನು ಕಟ್ಟಿಕೊಟ್ಟರು ನಳಿನ್ ಕುಮಾರ್ ಕಟೀಲ್.

ಒಟ್ಟೂ ವ್ಯವಸ್ಥೆಯಲ್ಲಿ ಅಚ್ಚುಕಟ್ಟು-ಶಿಸ್ತು ಉತ್ಸವದ ಧನಾಂಶ.






Tuesday, December 15, 2009

ಮನೆಬಾಗಿಲಿಗೆ ವಿಷರಹಿತ ತರಕಾರಿ!

ಮೂಡಬಿದಿರೆಯ ವಿಶಾಲನಗರ ಐನೂರು ಮನೆಗಳಿರುವ ಬಡಾವಣೆ. ಲ್ಯಾನ್ಸಿ ಕ್ರಾಸ್ತಾರ ತರಕಾರಿ ಬೈಕ್ ಬಾರದಿದ್ದರೆ ಇಲ್ಲಿನ ಕೆಲವು ಮನೆಗಳಲ್ಲಿ ಅಡುಗೆಯೇ ಆಗುವುದಿಲ್ಲ!

ಮಾರ್ಕೆಟ್ನಲ್ಲಿ ತಾಜಾ ಹೊಳಪುಳ್ಳ ತರಕಾರಿಗಳೇನೋ ಲಭ್ಯ. ಆದರೆ ಲ್ಯಾನ್ಸಿ ತರುವ ವಿಷರಹಿತ ತರಕಾರಿಗಳನ್ನು ತಿಂದವರಿಗೆ ಅದು ಬೇಡ. ಇವು ಸಿಗುವಷ್ಟು ಕಾಲ ಅವರು ಮಾರ್ಕೆಟ್ ಕಡೆಗೆ ಸುಳಿಯುವುದೇ ಇಲ್ಲ.

ಲ್ಯಾನ್ಸಿಯವರ ತರಕಾರಿ ಕೃಷಿಗೀಗ ಹದಿಮೂರು ವರುಷ. 'ಸಾವಯವ ತರಕಾರಿ ಎಷ್ಟು ಒಯ್ದರೂ ಮಾರ್ಕೆಟ್ ಇದೆ. ನನ್ನ ಬೆಳೆಯನ್ನು ನಾನೇ ಮಾರ್ಕೆಟ್ ಮಾಡುತ್ತೇನೆ.' ಲ್ಯಾನ್ಸಿಯವರ ಈ ಸಾಧನೆಯ ಹಿಂದೊಂದು ಕತೆಯಿದೆ.

ಪೈಸೆಪೈಸೆಗೂ ತತ್ವಾರವಿದ್ದ ಅಂದು ಇವರಮ್ಮ ಸೆಲಿನ್ ಕ್ರಾಸ್ತಾ ಬಸಳೆ ಬೆಳೆದು ಕಟ್ಟು ಮಾಡಿ 'ಮಾರಿ ಬಾ' ಎಂದು ಕೈಗಿತ್ತರು. ಮಾರುಕಟ್ಟೆ ನೋಡಿ ಗೊತ್ತಿತ್ತೇ ವಿನಃ ಮಾರಾಟದ ಅನುಭವವಿರಲಿಲ್ಲ. ಕಟ್ಟಿಗೆ ಮೂರು ರೂಪಾಯಿಯಂತೆ ಕೊಟ್ಟದ್ದಾಂಯಿತು. ಇನ್ನೇನು ಸ್ಥಳ ಬಿಡಬೇಕು ಎನ್ನುವಾಗ ಅಂಗಡಿಯವ ಅದನ್ನೇ ಐದು ರೂಪಾಯಿಗೆ ಮಾರಿದ. ಲ್ಯಾನ್ಸಿಗೆ ಆಘಾತ. ಅಂದೇ, ಅಲ್ಲೇ 'ಮುಂದೆ ನಾನೇ ಮಾರುತ್ತೇನೆ' ಎಂಬ ಶಪಥ ಮಾಡಿದರು.

ಅದು ಒಂದೆಡೆ ಕುಳಿತು ಮಾಡುವ ವ್ಯಾಪಾರ. ನಗರಗಳಲ್ಲಿ ಗಾಡಿಗಳಲ್ಲಿ ಮಾರುವುದಿದೆ. ಇದೇ ದಾರಿ ತುಳಿದ ಲ್ಯಾನ್ಸಿ ಜನ ವಸತಿಯಿರುವಲ್ಲಿ 'ಬಸಳೆ..ಬಸಳೆ' ಎಂದು ಕೂಗಿದರು. ಒಂದೆರಡು ಗಂಟೆಯಲ್ಲೇ ಕೈಯಲ್ಲಿದ್ದ ಮ್ಹಾಲು ಖಾಲಿ. ಇವರಿಗೂ ಐದು ರೂಪಾಯಿ ಸಿಕ್ಕಿತು. ಮಧ್ಯವರ್ತಿಗಳಿಲ್ಲದ ವ್ಯಾಪಾರಕ್ಕೆ ನಾಂದಿ.

ತೊಂಡೆ, ಬೆಂಡೆ, ಅಲಸಂಡೆ, ಹರಿವೆ, ಹೀರೆ - ಹೀಗೆ ತರಕಾರಿಗಳ ಸಾಲು. ವಾರಕ್ಕೆ ಮೂರು ಸಲ ಸರಬರಾಜು. ನಿಶ್ಚಿತ ಗಿರಾಕಿಗಳು. ಸ್ಟಾಂಡರ್ ದರ. ನಗದು ವ್ಯವಹಾರ. 'ತರಕಾರಿ ಮಾರಿ ಹಿಂದಿರುಗುವಾಗ ಇವರ ಕಿಸೆ ನೋಡಬೇಕು' ಎಂದು ನೆರೆಯ ಕೃಷಿಕ ಎಡ್ವರ್ಡ್ ರೆಬೆಲ್ಲೋ ತಮಾಷೆ ಮಾಡುತ್ತಾರೆ!

ತೊಂಡೆಕಾಯಿಗೆ ಮಾರುಕಟ್ಟೆಯಲ್ಲಿ ಕಿಲೋಗೆ ಇಪ್ಪತ್ತು ರೂಪಾಯಿ ಇದ್ದರೆ ಲ್ಯಾನ್ಸಿ ಮಾರುಕಟ್ಟೆ ದರದ ಸರಾಸರಿ ಬೆಲೆ ನಿಗದಿ ಮಾಡುತ್ತಾರೆ. ಮಾರುಕಟ್ಟೆ ದರ ಏರಿದರೂ, ಇವರದು ಫಿಕ್ಸೆಡ್. ಅಲ್ಲಿ ಇಳಿದರೂ, ಇವರದು ಇಳಿಯುವುದಿಲ್ಲ!

ಬೆಳಿಗ್ಗೆ ವಿತರಣೆಗೆ ಹಿಂದಿನ ರಾತ್ರಿಯೇ ಸಿದ್ಧತೆ. ಅರ್ಧ, ಒಂದು ಕಿಲೋದ ಪೂರ್ವಪ್ಯಾಕಿಂಗ್. ಮನೆಮಂದಿಯ ಸಮಷ್ಠಿ ಕೆಲಸ. ಬೈಕ್ನ ಹಿಂದೆ ಕಳಚಿ ಜೋಡಿಸಬಲ್ಲ (ಡಿಟೇಚೇಬಲ್) ಸ್ಟಾಂಡ್ ಮಾಡಿಸಿದ್ದಾರೆ. ಜಾಗವಿರುವಲ್ಲೆಲ್ಲಾ ತರಕಾರಿ ಚೀಲ ಇಳಿಬಿಡುತ್ತಾರೆ. ಇದನ್ನು 'ತರಕಾರಿ ಬೈಕ್' ಅನ್ನೋಣ.

'ನನ್ನನ್ನು ಕಾಯುವ ಐವತ್ತು ಮನೆಗಳಿಗೆ ಬೆಳಿಗ್ಗೆ 9 - 10 ರೊಳಗೆ ತರಕಾರಿ ಕೊಡಬೇಕು. ನಂತರ ಹೆಚ್ಚಿನವರೂ ಡ್ಯೂಟಿಗೆ ಹೋಗುತ್ತಾರೆ. ನಂಬಿದ ಮನೆಯವರಿಗೆ ತೊಂದರೆಯಾಗಬಾರದಲ್ಲಾ' ಎನ್ನುವ ಕಾಳಜಿ. ಒಂದು ದಿನವೂ ಮಾರಾಟವಾಗಿಲ್ಲ ಎಂದು ಪುನಃ ತಂದುದಿಲ್ಲವಂತೆ.

ಶಿಕ್ಷಕರು, ವ್ಯಾಪಾರಸ್ಥರು, ಕಚೇರಿಗೆ ಹೋಗುವ ವಿವಿಧ ಕುಟುಂಬಗಳ ಸಂಪರ್ಕ. 'ಐವತ್ತಲ್ಲ, ನೂರು ಮನೆಗಳಿಗೂ ಕೊಡುವಷ್ಟು ಬೇಡಿಕೆಯಿದೆ. ಆದರೆ ಪೂರೈಸಲು ಕಷ್ಟ.' ಇವರ ಮಾರಾಟತಂತ್ರವನ್ನು ಇನ್ನೂ ಕೆಲವರು ಅನುಸರಿಸಿದರಂತೆ. ಇವರಿಗಿಂತ ಮೊದಲೇ ತಲಪಿ ಮಾರಿ ಪೈಪೋಟಿ ಕೊಡಲು ಯತ್ನಿಸಿದರಂತೆ. ಆದರೆ ಕಡಿಮೆ ಗುಣಮಟ್ಟ ಮತ್ತು ಅಸಮರ್ಪಕ ಪೂರೈಕೆಯ ಕಾರಣ ಈ ಗಿರಾಕಿಗಳೇ ಅವರನ್ನು ತಿರಸ್ಕರಿಸಿಬಿಟ್ಟರು.

ತಾಜಾ ತರಕಾರಿಯನ್ನೇ ಕೊಡುತ್ತಾರೆ. ಅಕಸ್ಮಾತ್ ಕೆಲವೊಮ್ಮೆ ಸ್ವಲ್ಪ ಬಾಡಿದ್ದರೆ, ಹುಳು ಹಿಡಿದಿದ್ದರೆ, 'ಇದು ಅಷ್ಟು ಚೆನ್ನಾಗಿಲ್ಲ' ಅಂತ ಹೇಳುತ್ತಾರೆ. ದರದಲ್ಲಿ ಹೊಂದಾಣಿಕೆ. ಈ ಪಾರದರ್ಶಕತೆ ವಿಶಾಲನಗರದಲ್ಲಿ ಇವರಿಗೆ ಹೆಸರು ತಂದಿದೆ.
ಮದುವೆ, ಹಬ್ಬಗಳಂದು ಕೆಲವರು ಮುಂದಾಗಿ ಕಾದಿರಿಸುತ್ತಾರೆ. ಮನೆಗೆ ಬಂದು ಒಯ್ಯುವವರೂ ಇದ್ದಾರೆ. ಮನೆಯಿಂದ ಹಿರಡುವ ತರಕಾರಿ ಬೈಕಿಗೆ ದಾರಿಯ ಮಧ್ಯೆ ಕೆಲವು ನಿಲುಗಡೆ.

ದಶಂಬರದಿಂದ ಮೇ ತನಕ ತರಕಾರಿ ಋತು. 'ಆರು ತಿಂಗಳು ನಮ್ಮನ್ನು ತರಕಾರಿ ಸಾಕುತ್ತದೆ', ಲ್ಯಾನ್ಸಿಯವರ ತಂದೆ ರಾಬರ್ಟ್ ಕ್ರಾಸ್ತಾ ಹೇಳುತ್ತಾರೆ. ಅಷ್ಟು ಕಾಲ ಇವರ ವಿಷರಹಿತ ತರಕಾರಿಯ ರುಚಿಯುಂಡ ಗ್ರಾಹಕರು, ಉಳಿಗಾಲದಲ್ಲಿ ಮಾರ್ಕೆಟನ್ನು ಆಶ್ರಯಿಸಬೇಕು. ಆಗ ರುಚಿ ವ್ಯತ್ಯಾಸ ಗೊತ್ತಾಗುತ್ತದೆ. ಜನ 'ನಿಮ್ಮದು ಎಂತಹ ರುಚಿ ಮಾರಾಯ್ರೆ' ಅಂತ ಪ್ರತಿಕ್ರಿಯಿಸುತ್ತಾರೆ. ಈ ಅಭಿಪ್ರಾಯ ಇವರ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿಸುತ್ತದೆ.

ಎರಡು ವರುಷದ ಹಿಂದೆ ಬಂಪರ್. ಬೆಲೆಯೂ, ಬೆಳೆಯೂ. ಆಗ ವಾರಕ್ಕೆ ಮೂರ್ನಾಲ್ಕು ಸಲ 'ತರಕಾರಿ ಬೈಕಿ'ಗೆ ಕೆಲಸ. ಈ ವರುಷ ಕಡಿಮೆ. ವಾರಕ್ಕೆ ಎರಡೇ ಸಲ. ಸರ್ತಿಗೆ ಐನೂರರಿಂದ ಸಾವಿರದ ಸಂಪಾದನೆ.

ನಾಲ್ಕು ವರುಷದ ಹಿಂದಿನ ವರೆಗೆ ರಿಕ್ಷಾ ಇತ್ತು. ತರಕಾರಿ ಕೊಟ್ಟು ಮರಳುವಾಗ ದಾರಿಗುಂಟ ಬಿದ್ದಿರುವ ಸೆಗಣಿ ಹೆಕ್ಕಿ ತರುತ್ತಿದ್ದರು. ಕೆಲವರು ಗೇಲಿ ಮಾಡುತ್ತಿದ್ದರಂತೆ! 'ರಿಕ್ಷಾದಲ್ಲಿ ತರಕಾರಿ ಕೊಂಡೊಯ್ಯಲು ಸುಲಭ. ಕ್ರಮೇಣ ಬಾಡಿಗೆಗೆ ರಿಕ್ಷಾ ಅಪೇಕ್ಷಿಸಿ ಬರುವವರ ಸಂಖ್ಯೆ ಹೆಚ್ಚಾಗಿ, ಕೃಷಿಯತ್ತ ಗಮನ ಕಡಿಮೆಯಾಗತೊಡಗಿತು. ಹೊತ್ತಿಲ್ಲ, ಗೊತ್ತಿಲ್ಲ! ಹಾಗಾಗಿ ರಿಕ್ಷಾ ಮಾರಿದೆ. ಬೈಕ್ ತೆಕ್ಕೊಂಡೆ' ಎನ್ನುತ್ತಾರೆ.

ಒಟ್ಟು ಮೂರೂವರೆ ಎಕರೆ ಜಮೀನು. ಅದರಲ್ಲಿ ಒಂದೂವರೆ ಎಕರೆ ಹುಲ್ಲು. ಇಪ್ಪತ್ತು ಸೆಂಟ್ಸ್ನಲ್ಲಿ ತರಕಾರಿ. ಉಳಿದಂತೆ ಅಡಿಕೆ ಕೃಷಿ. ಜತೆಗೆ ಹೈನುಗಾರಿಕೆ. ಪತ್ನಿ ಸೆವೆರಿನ್ ಕ್ರಾಸ್ತಾರ ಉಸ್ತುವಾರಿಕೆ.

ತರಕಾರಿ ಕೃಷಿಯನ್ನು ಇನ್ನಷ್ಟು ವಿಸ್ತರಿಸಬಹುದಲ್ಲಾ? 'ಬೇಡಿಕೆ ಉಂಟೆಂದು ತರಕಾರಿ ಹೆಚ್ಚು ಮಾಡಿದರೆ ನಿರ್ವಹಣೆ ಕಷ್ಟ. ನನ್ನ ಈಗಿನ ವ್ಯವಸ್ಥೆಗೆ ಇಷ್ಟು ತರಕಾರಿ ಕೈತುಂಬಾ ಕೆಲಸ ಕೊಡುತ್ತದೆ.'

Sunday, December 13, 2009

ಡಿಸೆಂಬರಿನಲ್ಲಿ ಮಾವು!

ಜಾಗತಿಕ ತಾಪಮಾನದ ಕುರಿತು ಒಂದೆಡೆ ಕೊಪನ್ ಹೆಗನ್ ನಲ್ಲಿ ಒಂದೆಡೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಜುನಾಗಢದ ರೈತರ ಮುಖದಲ್ಲಿ ಅದು ಮಂದಹಾಸ ಸೃಷ್ಟಿಸಿದೆ. ಬಿರು ಬೇಸಗೆಯಲ್ಲಿ ಕಟಾವಿಗೆ ಬರಬೇಕಿದ್ದ ಮಾವಿನ ಹಣ್ಣು ಈ ಬಾರಿ ಚಳಿಗಾಲದ ನಡುವೆಯೆ ಬೆಳೆದು ನಿಂತಿರುವುದು ರೈತರಲ್ಲಿ ಸಂತಸವುಂಟುಮಾಡಿದೆ.

'ಇದೊಂದು ಅದ್ಭುತ. ಇದಕ್ಕೂ ಮುನ್ನ ಡಿಸೆಂಬರಿನಲ್ಲಿ ಮಾವಿನ ಬೆಳೆಯನ್ನು ನೋಡಿಯೇ ಇಲ್ಲ. 2009ರಲ್ಲಿ ಮೊದಲ ಬಾರಿಗೆ ಮಾವಿನ ಕೊಯಿಲು ನಡೆಯುತ್ತಿದೆ' ಎಂದು ವಿಶೇಷ ಕೇಸರ್ ಜಾತಿಯ ಮಾವು ಕೃಷಿ ಕೈಗೊಂಡಿರುವ ಚಂದೂಬಾಯ್ ಘೆಸಾಡಿಯಾ ಹೇಳಿದ್ದಾರೆ.

'ವಾಸ್ತವವಾಗಿ ಮಾವಿನ ಹಣ್ಣು ಮೇ ಇಲ್ಲವೇ ಜೂನ್ ತಿಂಗಳಲ್ಲಿ ಕೊಯಿಲಿಗೆ ಸಿದ್ಧವಾಗಿರುತ್ತದೆ. ಆದರೆ ಈ ಬಾರಿ ಡಿಸೆಂಬರ್ ತಿಂಗಳಲ್ಲಿ ಮಾವಿನಹಣ್ಣು ಸಿಗುತ್ತಿರುವುದು ಆಶ್ಚರ್ಯವುಂಟುಮಾಡುತ್ತಿದೆ' ಎಂದು ಮತ್ತೋರ್ವ ರೈತ ಬಿಫುಲ್ ಬಾಯ್ ಅಕ್ಬಾರಿ ಹೇಳಿದ್ದಾರೆ.

ಗುಜರಾತಿನ ಒಂದು ಲಕ್ಷದ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ಕೇಸರ್ ತಳಿಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತಿದೆ. ಆದರೆ ಹವಾಮಾನ ಬದಲಾವಣೆ ಮಾವಿನ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಡಿಸೆಂಬರಿನಲ್ಲಿ ಮಾವು ಕೊಯ್ಲಿಗೆ ಬಂದಿರುವುದು ಅಪಾಯಕಾರಿ ಬೆಳವಣಿಗೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

(ಕೃಪೆ: ಉದಯವಾಣಿ: 13-12-2009, ಪುಟ 5)

Saturday, December 12, 2009

ಸಾವಯವದ ದೊಡ್ಡ ಹೆಜ್ಜೆ : 'ಎರಾ'

ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯಿತು. ಬರೋಬ್ಬರಿ ಮಳಿಗೆಗಳು. ಚರುಮುರಿಯಿಂದ ಟ್ರಾಕ್ಟರ್ ತನಕ! ಆರುನೂರು ಮಳಿಗೆ ಸುತ್ತು ಹಾಕಿ ನಿಂತಾಗ ಸಾಕೋ ಸಾಕು! ಈ ಮಧ್ಯೆ ರೈತ ಮಟ್ಟದಲ್ಲಿ ಸಾವಯವದ ಕಾಳಜಿ ಹೊತ್ತ ಅದನ್ನು ವೃತದಂತೆ ನಿಭಾಯಿಸುವ ಕೆಲವೇ ಕೆಲವು ರೈತರ ಮಳಿಗೆಗಳು ಹೆಚ್ಚು ಗಮನ ಸೆಳೆದುವು. ಬೆಂಗಳೂರಿನ 'ಎರಾ ಆರ್ಗಾನಿಕ್’ ಇಂತಹ ಮಳಿಗೆಗಳಲ್ಲಿ ಒಂದು.

ಎರಾದ ರೂವಾರಿ ಜಯರಾಮ್. ಸಂಸ್ಥೆ ಹುಟ್ಟಿಗೆ ದಿಕ್ಕು ತೋರಿದ್ದು ಜರ್ಮನಿಯ ಸಾವಯವ ಸಮ್ಮೇಳನ. ಅಲ್ಲಿ ಸಾಮಾನ್ಯ ಗ್ರಾಹಕನೂ (ರೈತ) ಮಾರುಕಟ್ಟೆ ಹಿಡಿವ ರೀತಿ. ಈ ಕುರಿತು ಮಾಹಿತಿ ಸಂಗ್ರಹ. ಆರಂಭ2007 ಎಪ್ರಿಲ್ನಲ್ಲಿ. ಜೀವನಾವಶ್ಯಕ ವಸ್ತುಗಳೆಲ್ಲಾ ಇಲ್ಲಿ ಲಭ್ಯ. ತರಕಾರಿ, ಧಾನ್ಯಗಳಿಂದ ತೊಡಗಿ ಅಂಗಿ-ಬನಿಯನ್ ತನಕ!

ಆಂಧ್ರದ ಸಾವಯವ ಹತ್ತಿ ಬಟ್ಟೆಯ ಅಂಗಿ; ಪಾಂಡಿಚೇರಿಯ ಸಿದ್ಧ ಉಡುಪುಗಳು, ಚೆನ್ನೈಯ ಕಡ್ಲೆಕಾಯಿ ಎಣ್ಣೆ, ಗಾಣ ಎಣ್ಣೆ, ಅಕ್ಕಿ, ಬೆಲ್ಲ; ಕೇರಳದ ಸಂಬಾರವಸ್ತು, ಕೆಂಪಕ್ಕಿ, ಗೇರುಬೀಜ, ಕರಕುಶಲವಸ್ತು; ಕೊಡೈಕನಾಲ್ನಿಂದ ಕ್ಯಾರೆಟ್, ತರಕಾರಿ, ಹಲಸಿನಹಣ್ಣು; ಊಟಿಯ ಚಹ; ಹಿಮಾಚಲ ಪ್ರದೇಶದಿಂದ ಸೇಬು; ಮೈಸೂರಿನಿಂದ ಜ್ಯಾಂ, ಉಪ್ಪಿನಕಾಯಿ; ಬೆಳಗಾಂನಿಂದ ಬೆಲ್ಲ, ಈರುಳ್ಳಿ; ಗದಗದಿಂದ ಗೋಧಿ, ಹಸಿ ಕಡ್ಲೆ; ಧಾರವಾಡ-ಮಂಡ್ಯಗಳಿಂದ ಬೆಲ್ಲ, ಕೊಡಗಿನ ಕಿತ್ತಳೆ - ಹೀಗೆ ಇಲ್ಲಿನ 'ವಿಶೇಷ'ಗಳ ಪಟ್ಟಿ ದೊಡ್ಡದು.
'ಎರಾ ಆರ್ಗಾನಿಕ್’ ಸ್ವಿಜéರ್ಲ್ಯಾಂಡ್ ಮೂಲದ ಅಂತಾರಾಷ್ಟ್ರೀಯ ಸಂಸ್ಥೆ ಐಎಂಒದಲ್ಲಿ ನೋಂದಣಿ. ಇದರಲ್ಲಿ ದೃಢೀಕರಣಗೊಂಡ ರೈತರು, ಸಂಸ್ಥೆಗಳು ದೇಶದುದ್ದಕ್ಕೂ ಬಹಳಷ್ಟಿದ್ದಾರೆ. ಇವರಿಂದ ಉತ್ಪನ್ನ ಖರೀದಿ. ಇದಕ್ಕಾಗಿ ಜಯರಾಮ್ ಎಲ್ಲಾ ರಾಜ್ಯಗಳ ಸಾವಯವ ಮಾರಾಟ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ.

ಖರೀದಿಸುವ ಉತ್ಪನ್ನಗಳಿಗೆ ಎರಾ ದರ ನಿಗದಿ ಮಾಡುವುದಿಲ್ಲ. ರೈತರ ದರಕ್ಕೆ ಶೇ.20-30 ಸೇರಿಸಿ ಮಾರಾಟ. ಬೇಗ ಕೆಡುವ ತರಕಾರಿ, ಹಣ್ಣುಗಳಂತಹ ವಸ್ತುಗಳಿಗೆ ಶೇ.40ರ ತನಕ ಹೆಚ್ಚು. 'ಸಾವಯವ ತರಕಾರಿ, ಸೊಪ್ಪುಗಳಂತಹ ವಸ್ತುಗಳ ಲಭ್ಯತೆ ಬೆಂಗಳೂರು ಸುತ್ತಮುತ್ತ ಸೀಮಿತ. ದೂರದೂರಿಂದ ಬರುವ ವಸ್ತುವಿಗೆ ದರ ಏರಿಕೆ ಅನಿವಾರ್ಯ'.

ಸಿಗುವ ತರಕಾರಿಗಳು ಸ್ಥಳೀಯ. ಬೇಡಿಕೆಯಷ್ಟು ಸಿಗುತ್ತಿಲ್ಲ. ಸಿಕ್ಕರೂ ಸಾವಯವವಲ್ಲ! ಸಮಯಕ್ಕೆ ಸರಿಯಾಗಿ ಸಿಗದಿದ್ದಾಗ 'ಸಾತ್ವಿಕ ಜಗಳ ಆಡುವ' ಗ್ರಾಹಕರೂ ಇದ್ದಾರೆ! ಇದನ್ನರಿತ ಜಯರಾಂ ತನ್ನ ತೋಟದಲ್ಲಿ ಸೊಪ್ಪುತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. 'ಗಿರಾಕಿಗಳಿಗೆ ಉತ್ಪನ್ನಗಳನ್ನು ಪ್ಯಾಕ್, ಸೀಲ್ ಮಾಡಿದರಷ್ಟೇ ಖುಷಿ. ಇಲ್ಲದಿದ್ದರೆ ಒಯ್ಯುವುದೇ ಇಲ್ಲ. ಪ್ಯಾಕಿಂಗ್ ಫಸ್ಟ್ - ಪ್ರಾಡಕ್ಟ್ ನೆಕ್ಸ್ಟ್!

'ಎರಾ'ಕ್ಕೆ ಜಯರಾಮ್ ಸಾಂಸ್ಥಿಕ ರೂಪ ನೀಡಿದ್ದಾರೆ. ಗ್ರಾಹಕರೇ ಸದಸ್ಯರು. ಐವರು ಸಿಬ್ಬಂದಿ. ಎಲ್ಲರಿಗೂ ಸಮವಸ್ತ್ರ. ವ್ಯವಹಾರದ ಅವಧಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9.30. ಆರು ತಿಂಗಳಲ್ಲಿ ಮಣ್ಣಾಗುವ ಬಯೋಡಿಗ್ರೇಡೇಬಲ್ ಪ್ಲಾಸ್ಟಿಕ್ ಬಳಕೆ. ಬಟ್ಟೆಯ ಚೀಲ ತಂದವರಿಗೆ ಬಿಲ್ಲಿನಲ್ಲಿ ಒಂದು ರೂಪಾಯಿ ಕಡಿತ!

ಮಳಿಗೆ ಪೂರ್ತಿ ಪರಿಸ್ನೇಹಿ. ಗೋಡೆ ತುಂಬಾ ಹಸೆ ಚಿತ್ರ. ಕಲ್ಲು, ಮರ, ಬೇರು ಬಳಸಿದ ರ್ಯಾಕ್ಗಳು. ವ್ಯವಸ್ಥಿತವಾಗಿ ಪೇರಿಸಿಟ್ಟ ಸಾವಯವ ಉತ್ಪನ್ನಗಳು. ಮಹಡಿಯಲ್ಲಿ ಸಭಾಭವನ. ಕಿಟಕಿಗೆ ಲಾವಂಚದ ಪರದೆ. ಸೌರವಿದ್ಯುತ್. ಜಲಮರುಪೂರಣ. ಗೋಡೆಗಳಲ್ಲಿ ಪಾರಂಪರಿಕ ಹಸೆಚಿತ್ತಾರ. ಮಹಾರಾಷ್ಟ್ರದ 'ವರ್ಲಿ' ವರ್ಣಚಿತ್ರಗಳು.

ಗ್ರಾಹಕರ ವಿಳಾಸ ದಾಖಲೆ. ಬಹುತೇಕ ಕೊಳ್ಳುಗರು ಪಟ್ಟಣಿಗರಾದ್ದರಿಂದ, 'ಸಾವಯವ ಕೃಷಿ' ನೋಡಿದ ಅನುಭವವಿರುವುದಿಲ್ಲ. ಆಸಕ್ತ ಗ್ರಾಹಕರಿಗೆ ಪ್ರತಿ ತಿಂಗಳು ತೋಟ ಭೇಟಿ ಮೂಲಕ ಸಾವಯವ ಕೃಷಿಯನ್ನು ಪರಿಚಯ. ಜತೆಗೆ ತಿಂಗಳೊಂದು ಮುಖಾಮುಖಿ ಕಾರ್ಯಕ್ರಮ.

ಬೇರೆ ಪ್ರಮಾಣೀಕೃತ ಸಂಸ್ಥೆಗಳು ಅಂಗೀಕರಿಸಿದ ಉತ್ಪನ್ನಗಳನ್ನು ಇವರು ಖರೀದಿಸುತ್ತಾರೆಯೇ? 'ದೃಢೀಕರಣ ಕೊಟ್ಟ ಕಂಪೆನಿ ಐಎಂಒಗೆ ಸುದ್ದಿ ತಿಳಿಸುತ್ತಿರುತ್ತದೆ. ಐಎಂಒ ನಮಗೆ. ನಮ್ಮ ಪಟ್ಟಿಗೆ ಹೆಸರು ಸೇರಿದಾಕ್ಷಣ ಉತ್ಪನ್ನಗಳನ್ನು ಎರಾಕ್ಕೆ ತರಬಹುದು.'
ರೈತರ ತೋಟಗಳ 'ಗುಂಪು ದೃಢೀಕರಣ'ಕ್ಕೂ ಮಾಡುವ ಎರಾ ವ್ಯವಸ್ಥೆ ಮಾಡುತ್ತದೆ. ಇದಕ್ಕೆ ಐಎಂಓದ ಕೆಲವೊಂದು ನಿಯಮಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ತೋಟಕ್ಕೆ ಬಂದು ಪರೀಕ್ಷಿಸಿ ತ್ರೃಪ್ತಿಯಾಗಬೇಕು. ಬೆಂಗಳೂರು ಸುತ್ತಮುತ್ತ ಅರುವತ್ತೈದಕ್ಕೂ ಹೆಚ್ಚು ತೋಟಗಳು ಈಗಾಗಲೇ ದೃಢೀಕರಣಗೊಂಡಿವೆ; ಇನ್ನಷ್ಟು ಯತ್ನ ನಡೆದಿದೆ.

ಜಯರಾಂ ನ್ಯಾಯವಾದಿ. ನಲವತ್ತೆರಡು ಎಕ್ರೆಯಲ್ಲಿ ಸಾವಯವ ಕೃಷಿಯನ್ನೂ ಮಾಡುತ್ತಾರೆ. ''ಬದುಕಿಗೆ ಸಾಕಷ್ಟು ಸಂಪಾದನೆಯಿದೆ. ವೃತ್ತಿಗೆ ತೊಂದರೆಯೆಂಬುದನ್ನು ತಿಳಕೊಂಡೇ ಈ ಚಳುವಳಿಗೆ ಧುಮುಕಿದ್ದೇನೆ. ಇದರಲ್ಲಿ ಖುಷಿಯಿದೆ. ಕೃಷ್ಯುತ್ಪನ್ನವನ್ನು ಕೊಳ್ಳುವವರಿಲ್ಲ. ಪಟ್ಟಭದ್ರ್ರರ ಹಿಡಿತದಲ್ಲಿರುವ ಮಾರುಕಟ್ಟೆಗೆ ಒಯ್ದರೂ, ಕೀಳಾಗಿ ಕಾಣುವ ಪ್ರವೃತ್ತಿ. ಎರಾ ಸ್ಥಾಪನೆಗೆ ಇದೂ ಒಂದು ಕಾರಣ.

(ಎರಾ ಆರ್ಗಾನಿಕ್ #348, ಡಾಲರ್ಸ್ ಕಾಲನಿ, ಆರ್.ಎಮ್.ವಿ.ಕ್ಲಬ್ ಡಬಲ್ ರೋಡ್, ಆರ್.ಎಮ್.ವಿ. ಎರಡನೇ ಹಂತ, ಬೆಂಗಳೂರು - 560 094 ದೂರವಾಣಿ: 080-32007273, 99005 43881)

Saturday, December 5, 2009

ಸುಭಗತೆಗೆ ಅಲಿಖಿತ 'ಪೇಟೆಂಟ್'!

ಧಾರವಾಡದ ಕೃಷಿ ಮೇಳದಲ್ಲಿ ಕೃಷಿ ಸಲಕರಣೆಗಳ ಮಳಿಗೆಯೊಂದಿತ್ತು. ಕತ್ತಿ, ಚೂರಿ, ಮಚ್ಚು...ಗಳು ಸಾಲಾಗಿ ಜೋಡಿಸಿದ್ದುವು. ಇವುಗಳ ವಿಶೇಷವಿರುವುದು ಅವುಗಳ 'ಹಿಡಿ'ಯ ನೋಟದಲ್ಲಿ! ಅವು ಪೈಬರ್ನಿಂದ ತಯಾರಿಸಿದವುಗಳು. ಬಹಳ ಆಕರ್ಷಕವಾದ ನೋಟ. ಅಷ್ಟೇ ಹರಿತ. ಎಲ್ಲವೂ ಕಂಪೆನಿ ತಯಾರಿಗಳು. ಮುಂದಿನ ದಿನಗಳಲ್ಲಿ ಇವಕ್ಕೆ ಪೇಟೆಂಟ್ ಸಿಕ್ಕರೂ ಆಶ್ಚರ್ಯವಿಲ್ಲ.
ಆದರೆ ಇಲ್ಲಿ ವಿಷಯ ಮುಖ್ಯವಾಗುವುದು ಪೇಟೆಂಟ್ ಕುರಿತಾಗಿ ಅಲ್ಲ. ಮಳಿಗೆಯಲ್ಲಿ ಆಕರ್ಷಕವಾಗಿ ಕಾಣುವ 'ನೋಟ' (ಫಿನಿಶಿಂಗ್) - ಅದರ ಯಶಸ್ಸು. ಇಂತಹ 'ಕಾಣುವ ನೋಟ'ದ ಹೊರತಾಗಿ, ಅದರ ಗುಣಮಟ್ಟದಲ್ಲಿ ನೋಟವನ್ನು ಕೊಡುವ ಜಾಣರು ನಮ್ಮ ಹಳ್ಳಿಗಳಲ್ಲಿ ಈಗಲೂ ಇದ್ದಾರೆ.

ಫೈಬರ್ ಹಿಡಿಯನ್ನು ಕಂಡಾಗ, ನನ್ನೂರಿನ ಅಪ್ಪಣ್ಣ ಆಚಾರ್ಯರು ನೆನಪಾದರು. ಇಡೀ ಗ್ರಾಮದಲ್ಲಿ ಕತ್ತಿ, ಮಚ್ಚು, ಗರಗಸಗಳ ಅಲಗು ತುಂಡಾದರೆ, ಹರಿತ ಕಡಿಮೆಯಾದರೆ ಪರಿಕರದೊಂದಿಗೆ ಆಚಾರ್ಯರ ಮನೆಮುಂದೆ ಪ್ರತ್ಯಕ್ಷರಾಗುವ ಮಂದಿ! ಅವರು ಕತ್ತಿ, ಮುಟ್ಟಿಯನ್ನು ಒಮ್ಮೆ ಕುಲುಮೆಯಲ್ಲಿಟ್ಟು, ನೀರಲ್ಲಿ ಅದ್ದಿ, ಮುಟ್ಟಿಯಿಂದ ನಾಲ್ಕೈದು ಪೆಟ್ಟು ಬಡಿದರೆ ಸಾಕು, ಮತ್ತೆ ಆರು ತಿಂಗಳಿಗೆ ಇವರ ಕುಟೀರಕ್ಕೆ ಬರುವುದೇ ಬೇಡ. ಅಷ್ಟು ಹಿಡಿತ, ನೋಟ. ಜತೆಗೆ ಕೈಗುಣವೂ! ಹೀಗಾಗಿ ಇವರ ತಯಾರಿ ಕುಟೀರದ ಮುಂದೆ ಜನಸಂದಣಿಯಿರುತ್ತಿತ್ತು.

ಇನ್ನೊಬ್ಬರು ಆನಂದ ಆಚಾರ್ಯರು. ಇವರು ಯಕ್ಷಗಾನ ಅರ್ಥಧಾರಿಗಳು. ಕತ್ತಿಯ ಅಲಗಿಗೆ ಕಾಯಕಲ್ಪ ಕೊಡುವಲ್ಲಿ ಎತ್ತಿದ ಕೈ. ಯಕ್ಷಗಾನದ ಸುದ್ದಿ ಮಾತನಾಡುತ್ತಾ, ಕುಲುಮೆಯ ಚಕ್ರವನ್ನು ನಾವೇ ತಿರುಗಿಸಿ ಸಹಕರಿಸಿದರೆ ಒಂದಿಪ್ಪತ್ತು ನಿಮಿಷದಲ್ಲಿ ಕತ್ತಿ ಹರಿತವಾಗಿ ನಿಮ್ಮ ಕೈಗೆ. ಕುಲುಮೆ ಕಾಯಕ ಅವರಿಗೆ ಹೊಟ್ಟೆಪಾಡು. ಆದರೆ ಅದರಲ್ಲಿರುವ ಪ್ರೀತಿ ಮತ್ತು ಫಿನಿಶಿಂಗ್ ಕಂಡಾಗ ಕಂಪೆನಿಗಳೂ ನಾಚಬೇಕು.

ಇನ್ನೊಬ್ಬರು ದೇರಪ್ಪ ಆಚಾರ್ಯ. ಇವರು ವರುಷಪೂರ್ತಿ ಬ್ಯುಸಿ! ಮನೆಯ ಸೂರನ್ನು ನಿರ್ಮಿಸುವುದರಲ್ಲಿ ಪರಿಣತ. ಮನೆಯ ಆಯ - ಉದ್ದಗಲದ ಅಳತೆ ಕೊಟ್ಟರೂ ಸಾಕು. ಒಂದೈದು ನಿಮಿಷದಲ್ಲಿ 'ಕ್ಯಾಲಿಕ್ಯುಲೇಟರ್ ಇಲ್ಲದೆ' ನಿರ್ಮಿಸಲುದ್ದೇಶಿಸಿದ ಮನೆಗೆ ಎಷ್ಟು ಮರ ಬೇಕು, ಎಷ್ಟು ಹಂಚು ಬೇಕು, ಎಷ್ಟು ಆಣಿ ಬೇಕು.. ಎಂಬ ಲೆಕ್ಕಾಚಾರ ಮುಂದಿಡುತ್ತಾರೆ.

ಮನೆಯ ಸೂರಿನ ಮರದ ಕೆಲಸಗಳು ಬಹಳ ಸೂಕ್ಷ್ಮ ಮತ್ತು ಜಾಣ್ಮೆ ಬೇಡುವಂತಹುದು. ಇವರು ಉಳಿ-ಗೀಸುಳಿಯೊಂದಿಗೆ ಮರವನ್ನು ಮುಟ್ಟಿದರೆ ಸಾಕು, ಬೇಕಾದಂತೆ ಬಾಗುತ್ತದೆ-ಬಳುಕುತ್ತದೆ! ಅವರ ಕೈಯಲ್ಲಿ ಒಂಚೂರು ಮರವೂ ವ್ಯರ್ಥವಾಗುವುದಿಲ್ಲ.
ಸೂರಿಗೆ ಬೇಕಾದ ಎಲ್ಲಾ ಮರಗಳು ವಿನ್ಯಾಸವಾದ ಬಳಿಕ ಮಾಡಿಗೆ ಏರಿ ಪಕ್ಕಾಸುಗಳನ್ನೆಲ್ಲಾ ಸಿಕ್ಕಿಸಿ, ಹಂಚು ಜೋಡಿಸಿ ಕೆಳಗಿಳಿದಾಗಲೇ ಆಚಾರ್ಯರ ಕೆಲಸ ಮುಗಿಯುವುದು! ಇವರ ಕೆಲಸದಲ್ಲಿನ ನೂಜೂಕು ಇದೆಯಲ್ಲಾ - ನಮ್ಮ ಯಾವ ತಾಂತ್ರಿಕ ಪಠ್ಯದಲ್ಲೂ ಇಲ್ಲದಂತಹ ಸಂಗತಿ.

ಇತ್ತೀಚೆಗೆ ಒಬ್ಬರು ಹೇಳಿದರು 'ಎಂತಹ ಕೆಲಸವನ್ನೂ ಮಾಡಬಹುದು, ಏನಂತೆ'! ಇದು ಉಡಾಫೆಯಂತೆ ಕಂಡರೂ, ನಮ್ಮಲ್ಲಿ ಉತ್ತರ ಕರ್ನಾಟಕದಿಂದ ಬಂದ ಶ್ರಮಿಕರು ತೋಟದ ಕೆಲಸ ಮಾಡಿಲ್ಲವೇ? ಆದರೆ ಮಾಡಿದ ಕೆಲಸದಲ್ಲಿರುವ ಫಿನಿಶಿಂಗ್ - ಇದಕ್ಕೆ ಅನುಭವ ಮತ್ತು ಕೆಲಸದಲ್ಲಿನ ಪ್ರೀತಿ ಮಾನದಂಡ. ಜತೆಗೆ ಅದೃಷ್ಟವೂ! ಇದು ಎಲ್ಲರಿಗೂ ಬರುವುದಿಲ್ಲ.

ನನ್ನಜ್ಜಿ ಮನೆಯಲ್ಲಿ ಎತ್ತುಗಳ ಮೂಲಕ ಗದ್ದೆ ಬೇಸಾಯ. ಗದ್ದೆ ಉಳುವಲ್ಲಿ ಮುಂಡಪ್ಪ ಮೂಲ್ಯ ಎಂಬವರು ಸ್ಪೆಷಲಿಸ್ಟ್. ಎಂತಹ ರಂಪಾಟ ಮಾಡುವ ಎತ್ತುಗಳೇ ಆಗಲಿ, ಅವನ್ನು ಗದ್ದೆಗೆ ಇಳಿಸಿ ನೊಗವಿರಿಸಿ, ನೇಗಿಲು ಹಿಡಿದು 'ಹೂಂ..ಪಡ..ಪಡ..' ಅಂತ 'ಹೂಟೆಭಾಷೆ'ಯಲ್ಲಿ ಮಾತನಾಡಿದರೆ ಸಾಕು, ಅವರು ಹೇಳಿದಂತೆ ಕೇಳುತ್ತವೆ!

'ಮುಂಡಪ್ಪರು ಗದ್ದೆಗಳಿದರೆ ಮತ್ತೆ ಅತ್ತ ಕಡೆ ಮನೆಯಜಮಾನ ಹೋಗಬೇಕಿಲ್ಲ' ಎಂಬ ಪ್ರತೀತಿಯೂ ಇತ್ತು. ಗದ್ದೆ ಉತ್ತು, ಎತ್ತುಗಳನ್ನು ಮೀಯಿಸಿ, ಮೇಯಿಸಿ; ನೊಗ, ನೇಗಿಲನ್ನು ಶುಚಿಗೊಳಿಸಿ, ಯಥಾಸ್ಥಾನದಲ್ಲಿಟ್ಟು, ತಾನೂ ಶುಚಿಯಾಗಿ ಜಗಲಿಯಲ್ಲಿ ಜಪ್ಪನೆ ಕೂರಿ, 'ಅಜ್ಜಮ್ಮಾ.. ಯಾನ್ ಬತ್ತೆ' ಎಂದಾಗ ನನ್ನ ಪದ್ದಜ್ಜಿ ಏಳೆಂಟು ದೋಸೆ, ದೊಡ್ಡ ಚೆಂಬಲ್ಲಿ ಕಾಪಿ ಜತೆಗೆ ವೀಳ್ಯದ ಹರಿವಾಣ ತಂದಿಡುವ ದೃಶ್ಯ ಕಣ್ಣೆದುರು ಬರುತ್ತದೆ.

ಇಂತಹ 'ಫಿನಿಶಿಂಗ್' ಇರುವ ಎಷ್ಟು ಮಂದಿ ನಮ್ಮ ನಡುವೆ ಇಲ್ಲ. ಅಂತಹವರನ್ನು ಮಾತನಾಡಿಸುವುದು ಬಿಡಿ, ಅವರ ಕೆಲಸದ ಚಂದವನ್ನೂ ನೋಡುವ ಮನಸ್ಸು ನಮಗಿರುವುದಿಲ್ಲ.

ಧಾರವಾಡದ ಶಿವರಾಂ ಪೈಲೂರು ಅವರ ಮನೆಗೊಮ್ಮೆ ಹೋಗಿ. ಅಲ್ಲಿನ ಪ್ರತೀಯೊಂದು ವಸ್ತುವೂ ಒಪ್ಪ ಓರಣವಾಗಿರುವುದು. ಅವರು ಬರೆವ ಕಾಗದ, ಅದನ್ನು ಕವರಿಗೆ ತುಂಬಿಸುವ ರೀತಿ, ವಿಳಾಸ ಬರೆವ ಪರಿ, ಅಂಚೆ ಚೀಟಿ ಅಂಟಿಸುವ ತನಕದ ಸುಭಗತೆ. ಚಿತ್ರ ಕಲಾವಿದ ಶಿವರಾಮ್ ಅವರನ್ನೊಮ್ಮೆ ನೋಡಿ. ಅವರಲ್ಲಿರುವ ಪುಸ್ತಕಗಳ ಅಂಚುಗಳು ಒಂಚೂರೂ ಮಡಚಿರುವುದಿಲ್ಲ. ಹತ್ತು ವರುಷದ ಹಿಂದಿನ ಕೆಲವು ಪುಸ್ತಕಗಳು ಹೊಸತರಂತೆ ಇವೆ. ಪ್ರತೀಯೊಂದು ಅಕ್ಷರ ಬರೆವಾಗಲೂ ಕೊಡುತ್ತಾರೆ- 'ಫಿನಿಶಿಂಗ್'! ಈ ಅಕ್ಷರಗಳ ಮುಂದೆ ನಮ್ಮ ಕಂಪ್ಯೂಟರಿನ 'ಫಾಂಟ್'ಗಳು ನಾಚಬೇಕು.

ಇಂತಹ ನೋಟ ಯಾ ಫಿನಿಶಿಂಗ್ ಇದೆಯಲ್ಲಾ - ಇವೆಲ್ಲಾ ಕಲಿತು ಬರುವುದಲ್ಲ. ಕೆಲಸಗಳಲ್ಲಿ 'ಫಿನಿಶಿಂಗ್' ಇರುವ ಅಪ್ಪಣ್ಣರಂತಹ, ದೇರಪ್ಪರಂತಹ, ಮುಂಡಪ್ಪರಂತಹ ಹಿರಿಯರ ಕೆಲಸಗಳೆಲ್ಲಾ ಕಾಲದ ಅಲಿಖಿತ ದಾಖಲೆಗಳು. ಇವರ ಕೆಲಸಗಳಿಗೆ ಜನರೇ ಅಂದು ಹಾರ್ದಿಕವಾಗಿ ಕೊಟ್ಟ ಗೌರವ ಇದೆಯಲ್ಲಾ - ಅದುವೇ ನಿಜವಾದ ಅಲಿಖಿತ ಪೇಟೆಂಟ್!

Tuesday, December 1, 2009

ಹಸಿರು ಪ್ರೀತಿಯ ಏಜಿಯಂ!

ಮಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕಿನ ಏಜಿಯೆಂ (ಅಸಿಸ್ಟಾಂಟ್ ಜನರಲ್ ಮ್ಯಾನೇಜರ್, ಸಹಾಯಕ ವ್ಯವಸ್ಥಾಪಕ) ಚೈತನ್ಯ ಎಂ.ತಲ್ಲೂರು. ಎಲ್ಲಾ ಏಜಿಯೆಂಗಳಿಗಿರುವಂತೆ ಸವಲತ್ತಿದೆ. ಸ್ಟೇಟಸ್ ಇದೆ. ಆದರೆ ಇವರೆಂದೂ 'ಮಗುಮ್ಮಾಗಿ'ರುವುದಿಲ್ಲ. ಇವರಿಗೆ 'ಮಾತೇ ಮಾಣಿಕ್ಯ'. ಕೃಷಿಯ ಸುದ್ದಿ ಬಂದಾಗ ಇವರ ಮೈಯೆಲ್ಲಾ ಕಣ್ಣಾಗುತ್ತದೆ!

ವಾಸ್ತವ್ಯದ ಮನೆ? ದುಬಾರಿ ಕ್ರೋಟಾನ್, ಗುಲಾಬಿ, ಲಾನಿನ ಹುಲ್ಲಿನಿಂದ ಅಂದವರ್ಧನೆ. ಇದಕ್ಕೊಬ್ಬ ಮಾಲಿ. ನಿತ್ಯ ನೀರೆರೆಯುವ 'ದೊಡ್ಡ' ಕೆಲಸ. ಗಿಡಗಳು ನೆಲಕಚ್ಚಿದಾಗ ಮತ್ತೆ ಪುನಃ ತಂದು ನೆಡುವುದು. ನೀರು ಹಾಕುವುದು, ಆರೈಕೆ ಮಾಡುವುದು - ಇಷ್ಟು ಕೆಲಸ. ಅನಾವಶ್ಯಕವಾದ ಈ 'ಸಾಂಪ್ರದಾಯಿಕ' ಕೆಲಸಕ್ಕೆ ತಲ್ಲೂರು ತಡೆಯಾಜ್ಞೆ! ಅಲ್ಲೆಲ್ಲಾ ತರಕಾರಿ ಕೃಷಿ. ಮಾಲಿ ಅದಕ್ಕೆ ಹೊಂದಿಕೊಂಡಿದ್ದಾರೆ.

ತಲ್ಲೂರು ತರಕಾರಿ ಬೆಳೆಯಬೇಕಾಗಿಲ್ಲ. ತಿಂಗಳ ಕೊನೆಗೆ ಗರಿಗರಿ ಎಣಿಸುವ ಹುದ್ದೆ. ಎಡಗೈಗೆ, ಬಲಗೈಗೆ ಸಹಾಯಕರು. ಓಡಲು ಕಾರು - ಎಲ್ಲವೂ ಇದೆ. 'ಸಹಜವಾಗಿ ಬದುಕಬೇಕು' ಎನ್ನುವುದು ಜಾಯಮಾನ. 'ವಿಷರಹಿತವಾಗಿ ಒಂದಾರು ತಿಂಗಳಾದರೂ ತರಕಾರಿ ತಿನ್ನಬಹುದಲ್ಲಾ' ಎನ್ನುತ್ತಾರೆ.

ಕಳೆದ ವರುಷ ಮೆಣಸು, ಮೂಲಂಗಿ, ಬದನೆ, ಅಲಸಂಡೆ, ನಾಲ್ಕು ವಿಧದ ಬೀನ್ಸ್ ಬರೋಬ್ಬರಿ. ಈ ವರುಷ ಬದನೆ, ಅಲಸಂಡೆ, ಅವರೆಯ ಸರದಿ. ಟೊಮ್ಯಾಟೋ ಗಿಡಗಳದ್ದೇ ಸಿಂಹಪಾಲು. 'ದಿನಂಪ್ರತಿ ಎಂಟ್ಹತ್ತು ಟೊಮೆಟೋ ಸಿಕ್ಕೇ ಸಿಕ್ತದೆ. ಅದರ ಸಲಾಡ್, ಸಾಸ್ ಇಲ್ಲದೆ ಊಟವಿಲ್ಲ'. ಕುಂಡಗಳಲ್ಲಿ ಬ್ರಾಹ್ಮಿ, ಒಂದೆಲಗ. ಈಗ 'ಯಾಮ್ ಬೀನ್' ಎಂಬ ಗೆಡ್ಡೆತರಕಾರಿ ಅವರ ತೋಟದ ಹೊಸ ಅತಿಥಿ!

ಒಂದು ಕೊತ್ತಂಬರಿ ಸೊಪ್ಪಿನ ಕಟ್ಟು, ಶುಂಠಿಯ ತುಂಡು ಬೇಕೆಂದರೂ, ಬೈಕ್ ಚಾಲೂ ಮಾಡಿ ಮಾರುಕಟ್ಟೆಗೆ ಹೋಗಬೇಕು. ಟ್ರಾಫಿಕ್ ಜಾಂ ಬೇರೆ. ವಾಹನ ನಿಲುಗಡೆಗೆ ಮೊದಲೇ ಸ್ಥಳವಿಲ್ಲ. ಯಾರ್ಯಾರದ್ದೋ ಪಿರಿಪಿರಿ! ಒಂದಷ್ಟು ಮಾಲಿನ್ಯ ಸೇವನೆ. ಜತೆಗೆ ಟೆನ್ಶನ್. ಇದನ್ನೆಲ್ಲಾ ಅನುಭವಿಸಿ ಮನೆ ಸೇರಿದಾಗ ಕೊತ್ತಂಬರಿ ಸೊಪ್ಪು ಬಾಡಿರುತ್ತದೆ! ಪೇಟೆಯ ಜೀವನವನ್ನು ತಲ್ಲೂರು ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ.

ಮಾತನಾಡುತ್ತಿದ್ದಂತೆ - 'ಶುಂಠಿ ನಮ್ಮ ನಿರಖು ಠೇವಣಿ. ಇಷ್ಟದ ದಾಲ್ ತೊವ್ವೆಗೆ ಇದಿಲ್ಲದೆ ರುಚಿಯೇ ಇಲ್ಲ. ಹಿತ್ತಿಲಿನಲ್ಲಿದೆ, ಬೇಕಾದಾಗ ಠೇವಣಿ ಮುರಿದರಾಯಿತು' ಮನೆಯೊಡತಿ ಅನಿತಾ ದನಿಸೇರಿಸಿದರು.

'ಮಂಗಳೂರಿಗೆ ಒಂದು ದಿವಸ ತರಕಾರಿಯ ಲಾರಿ ಬಾರದಿದ್ದರೆ ಇಲ್ಲಿನ ಅಡುಗೆ ಮನೆಗಳಲ್ಲಿ ಸಾಂಬಾರು ಆಗುವುದೇ ಇಲ್ಲ'! ಹತ್ತು ರೂಪಾಯಿಯ ತರಕಾರಿಗೆ ನೂರು ರೂಪಾಯಿ ಆಗುತ್ತದೆ - ವಾಸ್ತವದತ್ತ ಬೆಳಕು ಚೆಲ್ಲುತ್ತಾರೆ.

ನಿತ್ಯ ಬೆಳಿಗ್ಗೆ ಒಂದಷ್ಟು ಹೊತ್ತು ಗಿಡಗಳ ಜತೆ. 'ಇದೆಲ್ಲಾ ಸಹಾಯಕರನ್ನು ನಂಬಿ ಮಾಡುವ ಕೆಲಸವಲ್ಲ. ಸ್ವತಃ ಮಾಡಿದಾಗ ತರಕಾರಿಯ ರುಚಿಯೇ ಬೇರೆ'. 'ತನ್ನ ಮಕ್ಕಳಿಗಿಂತ ಹೆಚ್ಚು ಗಿಡಗಳನ್ನು ಪ್ರೀತಿಸುತ್ತಾರೆ. ಒಂದು ಗಿಡಕ್ಕೆ ಏಟಾದರೂ ಅವರು ಸಹಿಸುವುದಿಲ್ಲ.' ಗಂಡನ ಕೆಲಸಕ್ಕೆ ಅನಿತಾ ಸಹಮತ.

ಸರಿ, ತರಕಾರಿ ಬೆಳೆಯುತ್ತಾರೆ. ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ಮಂದಿ. ಇಷ್ಟು ಮಂದಿಗೆ ಇಷ್ಟೊಂದು ತರಕಾರಿ ಬೇಕಾ? ಪ್ರಶ್ನೆ ಸಹಜವಾಗಿ ಮೂಡುತ್ತದೆ. 'ಬ್ಯಾಂಕಿನ ಕ್ಯಾಂಟಿನ್ಗೆ ಈ ತರಕಾರಿ. ಸಾಂಬಾರಿಗೂ ಇದೇ. ಬ್ಯಾಂಕಿನಲ್ಲಿ ನನ್ನ ತರಕಾರಿಗೆ ಗಿರಾಕಿಗಳಿದ್ದಾರೆ. ಹಣಕ್ಕಾಗಿ ಅಲ್ಲ. ಇನ್ನೂ ಹೆಚ್ಚು ಉಳಿದರೆ ಗಣಕಯಂತ್ರದಲ್ಲಿ 'ತಾಜಾ ತರಕಾರಿ ಕ್ಯಾಂಟಿನ್ನಲ್ಲಿ ಲಭ್ಯ' ಅಂತ ಬರೆದುಬಿಡುತ್ತೇನೆ. ಪ್ರತೀ ಟೇಬಲ್ಗೂ ಗಣಕಯಂತ್ರವಿದೆ. ತೆರೆದಾಕ್ಷಣ ತರಕಾರಿ ಕತೆ ಬಂದುಬಿಡುತ್ತದೆ'. ನಿರ್ವಿಷ ತರಕಾರಿ ಹಂಚುವ ತಲ್ಲೂರು ತಂತ್ರವಿದು.

ಬಸವರಾಜ್ ಮಾಲಿ. ಜನರೇಟರ್ ಉಸ್ತುವಾರಿಯ ಮಹೇಶ್ - ಇವರಿಬ್ಬರು ತಲ್ಲೂರು ತರಕಾರಿ ಕೃಷಿಯಲ್ಲಿ ಸಹಕರಿಸುವವರು. ಹಗಲುಹೊತ್ತು ಗಿಡಗಳ ಉಸ್ತುವಾರಿ ಇವರದ್ದೇ. 'ಸಾಹೇಬ್ರು ಏನೋ ಮಾಡ್ತಾರೆ' ಅಂತ ಗೊತ್ತಿದೆ. 'ಮೇಲಧಿಕಾರಿ ಅಲ್ವಾ' ಅಂತ ಸ್ಪಂದಿಸುತ್ತಾರೆ. ಈಗಂತೂ ತರಕಾರಿ ಕೃಷಿಯಲ್ಲಿ ಅವರು ಸ್ಪೆಷಲಿಸ್ಟ್

ತರಕಾರಿ ಕೃಷಿಗೆ ಯಾವುದೇ ರಾಸಾಯನಿಕ ಇದುವರೆಗೆ ಬಳಸಿಲ್ಲ. ನೈಸರ್ಗಿಕವಾಗಿ ಬೆಳೆದಾಗ ತರಕಾರಿ ರುಚಿ. ಕೆಲವೊಂದು ಕೀಟಗಳು ಬಾಧೆ ಕೊಡುತ್ತಿವೆ. ವಿಷರಹಿತ ಚಿಕಿತ್ಸೆಯ ಹುಡುಕಾಟದಲ್ಲಿದ್ದಾರೆ.

ತಲ್ಲೂರು ಕೃಷಿಕ ಅಲ್ಲ! ಮೂಡಿಗೆರೆಯಲ್ಲಿ ಬ್ಯಾಂಕಿನ ಕೃಷಿ ವಿಭಾಗದ ಕ್ಷೇತ್ರಾಧಿಕಾರಿಯಾಗಿದ್ದರು. ಕೃಷಿಕರೊಂದಿಗೆ ಬೆರೆಯುವ ಅವಕಾಶ ಪ್ರಾಪ್ತವಾದುದರಿಂದ, 'ನಾನೂ ಕೃಷಿ ಮಾಡಬೇಕು' ಎಂಬು ತುಡಿತ ಶುರುವಾಗಿತ್ತು. ಅದು ಅನುಷ್ಠಾನಕ್ಕೆ ಬಂದುದು ಮಂಗಳೂರಿನಲ್ಲಿ.

ಮನೆಸುತ್ತ ತರಕಾರಿ ಗಿಡಗಳು ತುಂಬಿವೆ. 'ಜಾಗವಿಲ್ಲವಲ್ಲಾ' ಕೊರಗು. ತಾರಸಿಯಲ್ಲಿ ಬೆಳೆಸಿದರೆ ಹೇಗೆ? ಆಲೋಚನೆಯಲ್ಲಿದ್ದಾರೆ ಏಜಿಯಂ. ತಲ್ಲೂರು ದಂಪತಿಗಳ 'ತರಕಾರಿ ಬ್ಯಾಂಕಿಂಗ್'ನಲ್ಲಿ ನೋಡುವಂತಹ, ತಿಳಿದುಕೊಳ್ಳುವಂತಹ ವಿಚಾರ ಇಲ್ಲದಿರಬಹುದು. ಆದರೆ ಕುತೂಹಲ. ಪ್ರಯತ್ನ ಮತ್ತು ಪ್ರಯೋಗ ಸೇರಿದೆ.