Wednesday, April 28, 2010

ಕತ್ತೆಗೂ 'ಕತ್ತೆ ಕೆಲಸ'!


ಬದುಕಿನಲ್ಲಿ 'ಕತ್ತೆ ಕೆಲಸ' ಅಂತ ಮಾತಿದೆ. ಅಂದರೆ ಅವಿರತವಾಗಿ ಕೆಲಸ ಮಾಡುವವ. ಕತ್ತೆಗೂ ಕೂಡಾ ಈ ಮಾತು ಅನ್ವಯ. ತನ್ನನ್ನು ನಂಬಿದ ಯಜಮಾನನ ಕುಟುಂಬ ಒಂದೆಡೆ, ತನ್ನ ಬಹಿರ್ದೆಶೆಯನ್ನು ಗೊಬ್ಬರವಾಗಿ ಬಳಸುವ ತೋಟದೆಜಮಾನ ಮತ್ತೊಂದೆಡೆ.

ತುಮಕೂರು ಜಿಲ್ಲೆಯ ಬಹುತೇಕ ತೆಂಗಿನ ತೋಟದಲ್ಲಿ ಗೊಬ್ಬರಕ್ಕಾಗಿ 'ಕತ್ತೆ ಕಟ್ಟುವುದು' ಅತ ಒಂದು ಕೃಷಿಪದ್ಧತಿಯಿದೆ. ನೂರು ಕತ್ತೆಗಳ ಒಂದು ಗುಂಪನ್ನು ಇಂದು ಒಂದೆಡೆ ಕಟ್ಟಿದರೆ, ನಾಳೆ ಅದರ ಪಕ್ಕ. ಹೀಗೆ ವಿವಿಧ ಹಂತಗಳಲ್ಲಿ ಕಟ್ಟುತ್ತಾರೆ. ಅವುಗಳ ಮಲಮೂತ್ರ ಮಣ್ಣಿಗೆ ಸೇರಿ ತೆಂಗಿಗೆ ಉತ್ತಮ ಗೊಬ್ಬರ. ತೋಟದ ವಿಸ್ತೀರ್ಣ ಹೆಚ್ಚಿದಷ್ಟೂ 'ಕತ್ತೆ ಕಟ್ಟುವ' ದಿವಸಗಳು ಹೆಚ್ಚಾಗುತ್ತದೆ. ಇಂತಿಷ್ಟು ದಿವಸ ಅಂತ ಮೊದಲೇ ನಿರ್ಧಾರ.

ಕತ್ತೆಗೆ ದಿನವೊಂದಕ್ಕೆ ಮೂರು ರೂಪಾಯಿ ಸಂಬಳ! ಕತ್ತೆಯ ರಕ್ಷಣೆ, ಆರೈಕೆ ಕತ್ತೆಯ ಯಜಮಾನನದ್ದು. ಬೆಳಿಗ್ಗೆ ಒಂಭತ್ತರಿಂದ ಸಂಜೆ ತನಕ ಕೆರೆಯ ದಂಡೆ, ರಸ್ತೆ ಬದಿಗಳಲ್ಲಿ ಕತ್ತೆಗಳನ್ನು ಮೇಯಿಸಿ, ಸಂಜೆಯಾಗುತ್ತಲೇ ಮೋದಲೇ ನಿಶ್ಚಯವಾದ ತೋಟದಲ್ಲಿ ಕಟ್ಟುತ್ತಾರೆ. ಅಕಸ್ಮಾತ್ ಕತ್ತೆ ತಪ್ಪಿಸಿ ಪಕ್ಕದ ತೋಟಕ್ಕೆ ನುಗ್ಗಿ ಹಾಳುಮಾಡಿದರೆ, ಐನೂರು ರೂಪಾಯಿ ಜುಲ್ಮಾನೆಯನ್ನು ಕತ್ತೆಯೊಡೆಯನಿಗೆ!

ಕತ್ತೆ ಕಟ್ಟುವುದರಲ್ಲೂ ಜಾಣ್ಮೆಯಿದೆ. ಆಚೀಚೆ ಗೂಟಗಳನ್ನು ಊರಿ ನೆಲಮಟ್ಟದಲ್ಲಿ ಹಗ್ಗವನ್ನು ಬಿಗಿಯುತ್ತಾರೆ. ಹಗ್ಗಕ್ಕೆ ಎದುರುಬದುರಾಗಿ ಕತ್ತೆಗಳನ್ನು ನಿಲ್ಲಿಸಿ, ಅವುಗಳ ಕಾಲನ್ನು ಹಗ್ಗಕ್ಕೆ ಸೇರಿಸಿ ಕಟ್ಟುತ್ತಾರೆ. ಇದರಿಂದಾಗಿ ಅವುಗಳು ತಪ್ಪಿಸಲಾರವು.
ಮಳೆಗಾಲದಲ್ಲಿ ತೋಟದ ಯಜಮಾನ ಸೂರು ನಿರ್ಮಿಸಿಕೊಡುತ್ತಾರೆ. ಮೊದಲು ಅರ್ಧಡಿ ಮಣ್ಣನ್ನು ಹಾಕಿ ಸಮತಟ್ಟು ಗೊಳಿಸುತ್ತಾರೆ. ಇದರ ಮೇಲೆ ಎಂಟು ದಿವಸ ಕತ್ತೆಗಳ ವಸತಿ. ಪುನಃ ಇನ್ನರ್ಧಅಡಿ ಮಣ್ಣಿನ ಪಾಯ. ಪುನಃ ಕತ್ತೆ ಕಟ್ಟುವುದು. ಒಂದು ತಿಂಗಳಾಗುವಾಗ 'ಕತ್ತೆ ಗೊಬ್ಬರ' ಸಿದ್ಧ! ಹೀಗೆ 'ಕತ್ತೆ ಕಟ್ಟಿದರೆ' ತಲೆಗೆ ಐವತ್ತು ಪೈಸೆ ಕಡಿಮೆ!

ಕತ್ತೆಯ ಬದಲಿಗೆ ಕುರಿಗಳನ್ನು ಕಟ್ಟುತ್ತಾರೆ. ಕುರಿಗಾದರೆ ಅವುಗಳು ತಪ್ಪಿಸದಂತೆ ಅತ್ತಿತ್ತ ಒಯ್ಯುಬಹುದಾದ ರೆಡಿಮೇಡ್ ಬೇಲಿ ಬೇಕಾಗುತ್ತದೆ. ಒಂದು ರಾತ್ರಿ ಒಂದೆಡೆ, ನಾಳೆ ಅದರ ಪಕ್ಕ. ಐನೂರು ಕುರಿಗಳ ಮಂದೆ. ಒಂದು ಕುರಿಗೆ ಒಂದು ರಾತ್ರಿಗೆ ಒಂದು ರೂಪಾಯಿ!

'ಕಳೆದ ಇಪ್ಪತ್ತು ವರುಷಗಳಿಂದ ನಮ್ಮ ತೋಟಕ್ಕೆ ಕುರಿ ಕಟ್ತೀವಿ. ಇದಕ್ಕಾಗಿಯೇ ವರುಷಕ್ಕೆ ಒಂದು ಲಕ್ಷ ಬೇಕು' ಬಿಳಿಗೆರೆಯ ಕೃಷಿಕ ವೆಂಕಟರಾಮ್ ಅನುಭವ.

ಬಿಳಿಗೆರೆ ಸುತ್ತಮುತ್ತ 'ಕುರಿ ಕಟ್ಟುವ' ಆರು ಮಂದಿಯಿದ್ದಾರೆ. ಇವರು ಬೇರೆಡೆಯಿಂದ ಬಂದವರು. ಮಳೆಗಾಲದಲ್ಲಿ ತಮ್ಮೂರಿಗೆ ಹೊರಟುಹೋಗುತ್ತಾರೆ. ಕತ್ತೆಗಿಂತ ಕುರಿಯಲ್ಲಿ ಲಾಭ ಹೆಚ್ಚು. ಕತ್ತೆ ಒಂದು ವರುಷಕ್ಕೆ ಒಂದೇ ಮರಿ. ಕುರಿಯಾದರೆ ಮೂರ್ನಾಲ್ಕು.ಅದರ ಮಾರಾಟವು ಹೆಚ್ಚುವರಿ ಬೋನಸ್.

ಬಿಳಿಗೆರೆಯಲ್ಲಿ ಎರಡು 'ಕತ್ತೆ ಬ್ಯಾಚ್' ಇದೆ. ಎಲ್ಲವೂ ಮುಂಗಡ ಬುಕ್ಕಿಂಗ್. ಹಾಗಾಗಿ ಎಲ್ಲರಿಗೂ ಪೂರೈಸಲು ತ್ರಾಸ ಎನ್ನುತ್ತಾರೆ ಒಂದು ಕತ್ತೆ ಮಂದೆಯೊದರ ಮಾಲಿಕ ಮಂಜಣ್ಣ. ಇವರಜ್ಜ ಹೊನ್ನಪ್ಪರ ಬಳುವಳಿಯಿದು. ಮೆಟ್ರಿಕ್ ಓದಿದ ಮಗ ರಂಗಸ್ವಾಮಿಗೂ 'ಕತ್ತೆ ಕಾಯುವ' ಹುಮ್ಮನಸ್ಸು.

ಹೊಸದಾಗಿ ಮಂದೆ ಹೊಂದಲು ಬಂಡವಾಳ ಬೇಕು. ಒಂದು ಕತ್ತೆಗೆ 1000-1500 ರೂಪಾಯಿ ದರ. ಮಧುಗಿರಿ ಸುತ್ತ ಮುತ್ತ ಲಭ್ಯ. 'ವಯಸ್ಸಾದಾಗ ದುಡಿಯಲು ಕಷ್ಟಪಡುತ್ತವೆ. ಆಗ ಅದನ್ನು ಬದಲಿಸುತ್ತಿರಬೇಕು. ಹೊಸದಾಗಿ ಕತ್ತೆಮಂದೆಯನ್ನು ಹೊಂದಲು ಒಮ್ಮೆಗೆ ಬಂಡವಾಳ ಹಾಕಿದರೆ ಸಾಕು, ಐದು ವರುಷಕ್ಕೆ ಚಿಂತೆಯಿಲ್ಲ' ಮಂಜಣ್ಣ ಹೇಳುತ್ತಾರೆ.

ಹೇಳುವಂತಹ ರೋಗವಿಲ್ಲ. ಅಪರೂಪಕ್ಕೆ ಸಾಯುವುದಿದೆ. ಈ ಸಂಖ್ಯೆ ಹತ್ತು ತಲುಪಿದಾಗ ಒಮ್ಮೆ 'ರೀಫಿಲ್'! ಹೊಸಬರು ಈ ಕೆಲಸಕ್ಕೆ ಮುಂದೆ ಬರುವುದಿಲ್ಲ. ಮೊದಲು ಕತ್ತೆ ಕಟ್ಟುತ್ತಿರುವವರು ಸಣ್ಣಪುಟ್ಟ ಜಮೀನು ಹೊಂದಿದ್ದಾರೆ. ಕೆಲವರು ವಿದ್ಯಾಭ್ಯಾಸಕ್ಕಾಗಿ ನಗರ ಸೇರಿದ್ದಾರೆ.

ಕತ್ತೆಯ ಹೆಗಲ ಮೇಲೆ ಮಣ್ಣಿನ ಚೀಲ ನೀರಿನ ಚೀಲಗಳನ್ನು ಸಾಗಿಸುತ್ತಾರೆ. ಮಣ್ಣನ್ನು ಸಾಗಿಸಲು ಹೆಚ್ಚಾಗಿ ಬಳಕೆ. ಈಗೀಗ ದೈತ್ಯ ಯಂತ್ರಗಳಿಂದಾಗಿ ಈ ಕೆಲಸಕ್ಕೆ ವಿಶ್ರಾಂತಿ. ಮಣ್ಣು ಸಾಗಿಸುವುದು ಶ್ರಮದ ಕೆಲಸ. ಕತ್ತೆಗಲ್ಲ, ಕತ್ತೆಕಾಯುವವನಿಗೆ! ಪ್ರತೀ ಸಲವೂ ಮಣ್ಣಿನ ಚೀಲವನ್ನು ಕತ್ತೆಗಳ ಮೇಲೇರಿಸಿ, ಅವುಗಳನ್ನು ಇಳಿಸುವ ವರೆಗೂ ಕಾಯುವವ ಜತೆಗಿರಬೇಕು. ತುಂಬಾ ಶ್ರಮಬೇಡುವ ಕೆಲಸವಾದ್ದರಿಂದ ಕತ್ತೆಗಳು ತೋಟವನ್ನು ಫಲವತ್ತಾಗಿ ಮಾಡಿದರೆ ಸಾಕು!

ತೋಟದ ಒಡೆಯನೇ ಕತ್ತೆಯನ್ನು ಯಾಕೆ ಹೊಂದಬಾರದು? ಜತೆಗಿದ್ದ ಮಹಾಲಿಂಗಯ್ಯನವರು ಹೇಳುತ್ತಾರೆ - 'ಅವುಗಳ ನಿರ್ವಹಣೆ ಕಷ್ಟ. ಅವರಿಗದು ಹುಟ್ಟು ವೃತ್ತಿ. ಉಳಿದವರು ಕಲಿತಾಗಬೇಕು. ಅವುಗಳ ನಿರ್ವಹಣೆ, ಸಹವಾಸ ಕಷ್ಟ. ಒಂದು ದಿವಸ ಎಡವಟ್ಟಾದರೂ ತೊಂದರೆ ತಪ್ಪಿದಲ್ಲ'.

ರಾಸಾಯನಿಕ, ಸಾವಯವ, ಶೂನ್ಯ ಕೃಷಿ ಎಂದು ಬಡಿದಾಡುವ ಮನುಷ್ಯರನ್ನು ನೋಡಿ ಹೇಳುತ್ತವೆ - 'ನಮ್ಮನ್ನು ಕಟ್ಟಿ ನೋಡಿ - ಶುದ್ಧ ನೈಸರ್ಗಿಕ ಗೊಬ್ಬರ ಮಾಡಿ ಕೊಡುತ್ತೇವೆ'!

Tuesday, April 13, 2010

ರಾಜಧಾನಿಯಲ್ಲಿ ಸಾವಯವ ಹುಡುಕಾಟ!

ಸಕ್ಕರೆ ಕಾಯಿಲೆಯವರು ಬಳಸಬಹುದಾದ 'ಡಯಾಬಿಟೀಸ್ ರೈಸ್' ಕೇಳಿದ್ದೀರಾ, ಬಾಣಂತಿ ಬತ್ತ ನೋಡಿದ್ದೀರಾ? ಸದಾ ಪಾಲಿಶ್ ಅಕ್ಕಿ ತಿಂದು ಬೇಸರವೇ! ಜವಾರಿ ಭತ್ತದ ಅಕ್ಕಿ ತಿಂದು ಕುಟುಂಬವನ್ನು ರೋಗ ರುಜಿನಗಳಿಂದ ಮುಕ್ತಗೊಳಿಸಲು ಆಸಕ್ತಿಯೇ? ಅಕ್ಕಿಗೊಂದು, ಅವಲಕ್ಕಿಗೊಂದು, ತಂಬಿಟ್ಟಿಗೊಂದು, ರೊಟ್ಟಿಗೆ ಮತ್ತೊಂದು, ಕಜ್ಜಾಯಕ್ಕೆ ಇನ್ನೊಂದು, ಚಕ್ಕುಲಿಗೆ.. ಹೀಗೆ ಅಡುಗೆ ಮನೆಯಲ್ಲಿ ಬಳಸುವ ಅಕ್ಕಿಗಳು ನೂರಾರು..

ರಾಜಧಾನಿಯ ಗಾಂಧಿ ಭವನದಲ್ಲಿ ಜರುಗಿದ 'ಭತ್ತ ಉತ್ಸವ'ದಲ್ಲಿ ಸಹಜ ಸಮೃದ್ಧದ ಜಿ.ಕೃಷ್ಣಪ್ರಸಾದ್ ಅಕ್ಕಿಯ ವಿಶ್ವರೂಪವನ್ನು ತೆರೆದಿಡುತ್ತಿದ್ದರು. ಇತ್ತ ಮಳಿಗೆಯಲ್ಲಿ 'ಬಾಣಂತಿ ಭತ್ತದ ಬೀಜ ಬೇಕಾಗಿತ್ತು, ರಾಜಮುಡಿ ಇದೆಯಾ? 'ನವರ' ಎಲ್ಲಿ ಸಿಗುತ್ತೆ? ಗಂಧಸಾಲೆ, ಜೀರಿಗೆ ಸಾಂಬ, ಘಂಗಡಲೆ, ಕರಿಭತ್ತ, ಕರಿಗಜಿವಿಲಿ, ಕಪ್ಪುಅಕ್ಕಿ..ಗಳ ಕುರಿತು ಮಾಹಿತಿ ಇದೆಯಾ? ಒಂಚೂರು ಬೀಜ ಸಿಗಬಹುದಾ? - ಹೀಗೆ ಅನೇಕರ ಬೆರಗು ಪ್ರಶ್ನೆಗಳು.

'ಸಹಜ ಸಮೃದ್ಧ' ಸಾವಯವ ಕೃಷಿಕರ ಸಂಸ್ಥೆಯು ಸಹಯೋಗಕಾರರೊಂದಿಗೆ ಭತ್ತ ಉತ್ಸವವನ್ನು ನಗರದ ಮಧ್ಯೆ ಇಟ್ಟುಕೊಂಡಿತ್ತು. ಹಿಂದಿನ ಎಲ್ಲಾ ಉತ್ಸವಗಳು ಬಹುತೇಕ ಹಳ್ಳಿಗಳಲ್ಲೇ ನಡೆಯುತ್ತಿದ್ದುವು. 'ನಗರದ ಜನಗಳಿಗೆ ಭತ್ತದ ವೈವಿಧ್ಯವನ್ನು ತೋರಿಸುವುದೇ ಈ ಉತ್ಸದವ ಉದ್ದೇಶ' ಎನ್ನುತ್ತಾರೆ ಕೃಷ್ಣಪ್ರಸಾದ್.

ಸಹಜ ಸಮೃದ್ಧವು 'ಭತ್ತ ಉಳಿಸಿ ಆಂದೋಳನ'ದ ಜತೆಗೂಡಿ ಕಣ್ಮರೆಯಾಗುತ್ತಿರುವ ಅಪರೂಪದ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿದೆ. ಇವರೊಂದಿಗೆ ಕನ್ನಾಡಿನ ಭತ್ತ ಸಂರಕ್ಷಕರು ಕೈಜೋಡಿಸುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ದೇಸಿ ಭತ್ತದ ತಳಿಗಳನ್ನು ಬೆಳೆಯುತ್ತಿದ್ದಾರೆ. ದೊಡ್ಡಪ್ರಮಾಣದಲ್ಲಿ ಸಾವಯವ ಭತ್ತ ಉತ್ಪಾದನೆಯಾಗುತ್ತಿದೆ.

ಪಾಲಿಶ್ ಅಕ್ಕಿಯನ್ನು ತಿಂದು, ರಾಸಾಯನಿಕ ಹಾಕಿದ-ವಿಷ ಸಿಂಪಡಿಸಿದ ಭತ್ತವನ್ನು ಅಡುಗೆ ಮನೆಯೊಳಗೆ ತಂದಿರುವುದರ ಪರಿಣಾಮ, ಒಂದಲ್ಲ ಒಂದು ಕಾಯಿಲೆಗಳು ಶರೀರ ಹೊಕ್ಕಿವೆ. ನಮ್ಮೊಳಗಿದ್ದು ಕ್ಷಣಕ್ಷಣಕ್ಕೂ ನಮ್ಮನ್ನು ತಿನ್ನುತ್ತಿವೆ. ಯಾವ ಔಷಧಿಗೂ ಬಗ್ಗುವುದಿಲ್ಲ, ಒಗ್ಗುವುದಿಲ್ಲ. 'ನಮ್ಮ ಹೊಲ ಸಾವಯವ ಆದರೆ ಸಾಲದು, ನಮ್ಮ ಅಡುಗೆ ಮನೆಗಳೂ ಸಾವಯವವಾಗಬೇಕು. ವೈಯಕ್ತಿಕವಾಗಿ ನಾವೂ ಸಾವಯವವಾಗಬೇಕು' ಪತ್ರಕರ್ತ ಶಿವಾನಂದ ಕಳವೆ ಸಿಕ್ಕಾಗಲೆಲ್ಲಾ ಈ ಮಾತನ್ನು ಹೇಳುತ್ತಿರುವುದರ ಉದ್ದೇಶವೇ ಅದು.

'ಸಾವಯವದ ಕುರಿತು ಹುಡುಕಾಟ ಶುರುವಾಗಿದೆ. ಮುಖ್ಯವಾಗಿ ನಗರದ ಮಂದಿ ಸಾವಯವ ಉತ್ಪನ್ನವನ್ನು ಬಯಸುತ್ತಾರೆ. ಅವರಿಗೆ ಸಿಗುವಂತೆ ಮಾಡಬೇಕಾದುದು ನಮ್ಮ ಆಂದೋಳನದ ಮುಂದಿನ ಗುರಿ' ಎನ್ನುತ್ತಾರೆ ಸಹಜ ಸಮೃದ್ಧದ ಅಧ್ಯಕ್ಷ ಎನ್.ಆರ್.ಶೆಟ್ಟಿ.

ಭತ್ತದ ಉತ್ಸವದ ಕೆಲವು ಹೈಲೈಟ್ಸ್ಗಳನ್ನು ಶೆಟ್ಟರು ಕಟ್ಟಿ ಕೊಟ್ಟದ್ದು ಹೀಗೆ - ಆಯುರ್ವೇದ ವೈದ್ಯರೊಬ್ಬರಿಗೆ ಔಷಧೀಯ ಅಕ್ಕಿಯೆಂದರೆ ಅದು 'ನವರ' ಅಂತ ಗೊತ್ತಿತ್ತು. ಎಲ್ಲಿ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಅದನ್ನು ಹುಡುಕಿಕೊಂಡು ಬಂದಿದ್ದರು. ಹಲವು ಮಂದಿ ಆಯುರ್ವೇದ ಡಾಕ್ಟರ್ಗಳು ಇಂತಹುದೇ ತಳಿ ಬೇಕೆಂದು ಪಟ್ಟು ಹಿಡಿದು ಬೇಡಿಕೆ ಸಲ್ಲಿಸಿದ್ದರು. ಡಾಕ್ಟರ್ಗಳಿಗೆ ವಿಷಮುಕ್ತ ಆಹಾರದ ಅರಿವು ಬಂದುಬಿಟ್ಟರೆ; ತಮ್ಮ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಈ ಕುರಿತಾದ ಅರಿವು ಹರಿದುಬಿಡುತ್ತದೆ. ಇದೊಂದು ಒಳ್ಳೆಯ ಬೆಳವಣಿಗೆ.

ಕೊಡಗಿನ ಕೆ.ಆರ್.ಪುರದಿಂದ ಭತ್ತ ಬೆಳೆಯುವ ರೈತರು 'ಔಷಧೀಯ, ಪರಿಮಳಯುಕ್ತ ಭತ್ತದ ಬೀಜ ಕೊಡಿ. ನಾವು ಬೆಳೆದ ಕೊಡ್ತೀವಿ. ಮುಂದಿನ ಸಲ ನಮ್ಮಲ್ಲಿ ಭತ್ತದ ಉತ್ಸವ ಮಾಡಿ' ಅಂದರು. ಡಯಾಬಿಟೀಸ್, ಸಕ್ಕರೆ ಕಾಯಿಲೆಗೆ ಬಳಸುವ ಅಕ್ಕಿಯಿದೆ ಎಂದಷ್ಟೇ ಗೊತ್ತು. ಯಾವುದೆಂದು ಗೊತ್ತಿರಲಿಲ್ಲ - ಇಲ್ಲಿಗೆ ಬಂದಾಗ ಅದು 'ದೊಡ್ಡ ಬೈರನೆಲ್ಲು' ಕೆಂಪಕ್ಕಿ ಅಂತ ಗೊತ್ತಾಯಿತು - ಸಂತಸ ಹಂಚಿಕೊಂಡರು ಬಸನಗೌಡರು.

'ಉತ್ಸವದಲ್ಲಿ ಶುದ್ಧ ಅಕ್ಕಿಯೋ, ಭತ್ತವೋ ಸಿಗುತ್ತೆ ಅಂತ ಕೈಯಲ್ಲಿ ಸ್ವಲ್ಪ ದುಡ್ಡನ್ನಿಟ್ಟುಕೊಂಡು ಬಂದಿದ್ದೆ. ಇಲ್ಲಿ ಸ್ವಲ್ಪವಷ್ಟೇ ಸಿಕ್ಕಿತು' ಅಂತ ನೆಲಮಂಗಳದ ಮಹಾಲಕ್ಷ್ಮೀಯವರ ಸಾತ್ವಿಕ ಸಿಟ್ಟು! ಇವರಂತೆ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಒಯ್ಯಲು ಬಂದವರ ಸಂಖ್ಯೆ ಜಾಸ್ತಿ ಇತ್ತು.

ಒಂದೇ ಹೊತ್ತಲ್ಲಿ ಹದಿಮೂರು ಕ್ವಿಂಟಾಲ್ ಅಕ್ಕಿ ಖಾಲಿ' ಎನ್ನುತ್ತಾರೆ ಕೃಷ್ಣಪ್ರಸಾದ್. ಇಷ್ಟೊಂದು ಪ್ರಮಾಣದಲ್ಲಿ ಜನರಿಂದ ಬೇಡಿಕೆ ಬರುತ್ತೇಂತ ಗೊತ್ತಿರಲಿಲ್ಲ ಅನ್ನುತ್ತಾರೆ. ಇವೆಲ್ಲಾ 'ಭತ್ತ ಉತ್ಸವ'ದ ಫಲಶೃತಿಗಳು. ಉತ್ಸವಗಳ ಹಿಂದಿನ ಆಶಯಗಳು ಅಡುಗೆ ಮನೆಯಲ್ಲಿ ಚರ್ಚೆಯಾಗಲು ಸುರುವಾಗಿದೆ. ನಮ್ಮ ಆಹಾರದಲ್ಲಿ 'ನಾವೆಲ್ಲೋ ತಪ್ಪಿದ್ದೇವೆ' ಎನ್ನುತ್ತಾ ಬಾಳಿನ ಪುಟಗಳನ್ನು ತೆರೆದು ನೋಡುವ ಪ್ರಕ್ರಿಯೆ ಆರಂಭವಾಗಿದೆ!

ಸಹಜ ಸಮೃದ್ಧವು ಮೂವತ್ತಕ್ಕೂ ಮಿಕ್ಕಿ ಭತ್ತದ ತಳಿಯನ್ನು ಪ್ರದರ್ಶನಕ್ಕಿಟ್ಟಿತ್ತು. ತುಮಕೂರಿನ ಭೂಮಿ ಸಂಸ್ಥೆಯು ಚೌಳು ನಿರೋಧಕ ದೇಸಿ ಭತ್ತದ ತಳಿಗಳಾದ ಬಿಳಿ ತೋಕದಡ್ಲು, ಕಾಸರನೆಲ್ಲು, ಸಣ್ಣಕೊಡ್ಲು, ಸಣ್ಣನೆಲ್ಲು, ಮುಳುಭತ್ತ, ಕರಿತೋಕವಡ್ಲುತಳಿಗಳನ್ನು ತೋರಿಸುತ್ತಿದರು. ಹೊಳೆನರಸೀಪುರದ ಸಾವಯವ ಕೃಷಿಕರ ಸಂಘ, ಹರಿಹರ-ಕುಂಬಳೂರಿನ ಶರಣ ಮುದ್ದಣ ಸಾವಯವ ಕೃಷಿಕರ ಬಳಗಗಳು ತಂತಮ್ಮೂರಿನ ವಿವಿಧ ತಳಿಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಆಸಕ್ತರನ್ನು ಸೆಳೆದಿತ್ತು.

ಉತ್ಸವದಲ್ಲಿ ಭಾಗವಹಿಸಿದ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರು, 'ನನ್ನಲ್ಲಿ ಅನೇಕ ಮಂದಿ ಡಾಕ್ಟರ್ಗಳು ಸಾವಯವ ಅಕ್ಕಿ, ಗಸೋಧಿಯ ಬಗ್ಗೆ ಸಂದರ್ಭ ಸಿಕ್ಕಾಗಲೆಲ್ಲಾ ಮಾತನಾಡ್ತಾರೆ. ತಂದು ಕೊಡಿ ಅಂತ ಕೇಳ್ತಾರೆ. ತೆಕ್ಕೊಳ್ಳುವವರು ಇದ್ದಾರೆ. ಪೂರೈಕೆ ವ್ಯವಸ್ಥೆ ಆಗಬೇಕು. ಹಾಪ್ಕಾಮ್ಸ್ನಂತೆ ಸಾವಯವ ಉತ್ಪನ್ನಗಳಿಗೂ ದೊಡ್ಡ ಮಟ್ಟದ ಮಳಿಗೆಯ ಆವಶ್ಯಕತೆ ಇದೆ.' ಎಂದರು. ಕೃಷಿ ಕುಟುಂಬದಿಂದ ವಿಧಾನಸಭೆಯ ಮೆಟ್ಟಲೇರಿದ ಶೋಭಕ್ಕ, ಕೃಷಿ ಸಂಸ್ಕೃತಿಯಿಂದ ರೂಪುಗೊಂಡವರು. ಅವರು ಮನಸ್ಸು ಮಾಡಿದರೆ ಕಷ್ಟವಲ್ಲ. ಚಿಟಿಕೆ ಹೊಡೆವಷ್ಟೇ ಕೆಲಸ!

Tuesday, April 6, 2010

ಭೂರಹಿತನ ಕೃಷಿ-ಬದುಕು!


ಕಂಠೇಶ್ - ಅರಣ್ಯ ಇಲಾಖೆಯ ನರ್ಸರಿಯಲ್ಲಿ ಮಾಲಿ. ಮೂಲತಃ ಕಡೂರಿನವರು. ಪಾಲಿಗೆ ಬಂದ ಎರಡೆಕ್ರೆಯ ಹೊಲದ ಯಜಮಾನ. ಅದರ ಪಾಲನೆಯನ್ನು ಸಹೋದರರಿಗೆ ಬಿಟ್ಟುಕೊಟ್ಟು 'ಹೆಚ್ಚು' ಸಂಪಾದನೆಯ ನಿರೀಕ್ಷೆಯಲ್ಲಿ ಸೇರಿಕೊಂಡುದು ಮೂಡಿಗೆರೆ ಸನಿಹದ ಫಲ್ಗುಣಿಯ ಸಚ್ಚೇನಹಳ್ಳಿ ಸರಕಾರಿ ನರ್ಸರಿಗೆ!

ಹದಿಮೂರು ವರುಷದ ಹಿಂದೆ ಇನ್ನೂರ ಎಂಭತ್ತು ರೂಪಾಯಿ ಸಂಬಳದ ದುಡಿಮೆಯೀಗ ಅಬ್ಬಬ್ಬಾ ಅಂದರೆ ಮೂರು ಸಾವಿರ ರೂಪಾಯಿಗೇರಿದೆ. ಪತ್ನಿ, ಮೂವರು ಮಕ್ಕಳು. ನರ್ಸರಿಯಲ್ಲೇ ಚಿಕ್ಕ ಗುಡಿಸಲು. ಸನಿಹದಲ್ಲೇ ಭಾವನ ಕುಟುಂಬ. ಅವರೂ ನರ್ಸರಿಯಲ್ಲಿ ಮಾಲಿ. ಒಂಭತ್ತು ಸದಸ್ಯರ ಒಗ್ಗಟ್ಟಿನ ಜೀವನ.

ನರ್ಸರಿಯ ಗಿಡಗಳ ಆರೈಕೆ-ರಕ್ಷಣೆ ಕಂಠೇಶರ ಮುಖ್ಯ ಕಾಯಕ. ಇಲಾಖೆ ನೀಡುವ ಮಾರ್ಗದರ್ಶನ, ಸೂಚಿಸುವ ಗೊಬ್ಬರ-ಸಿಂಪಡಣೆ-ಗಿಡಗಳನ್ನಷ್ಟೇ ಬಳಸಿ ಗಿಡ ತಯಾರಿ.

ಮೂರು ವರುಷದ ಹಿಂದೆ ಫಲ್ಗುಣಿಗೆ ಸರಕಾರದ ಸಾವಯವ ಯೋಜನೆಗಳ ಅನುಷ್ಠಾನಕ್ಕೆ ಬಂದ 'ಭೂಮಿ ಅಭಿವೃದ್ಧಿ ಸುಸ್ಥಿರ ಸಂಸ್ಥೆ'ಯ ಸಂಪರ್ಕ-ಒಡನಾಟ. ಸಭೆಗಳಲ್ಲಿ ಭಾಗಿ. ಎರೆಗೊಬ್ಬರ ತಯಾರಿಯ ಮಾಹಿತಿ. ಸ್ವಂತದ್ದಾದ ಜಮೀನು-ಮನೆ ಇಲ್ಲದ ಕಾರಣ ಯಾವ ಪ್ಯಾಕೇಜ್ಗಳಿಗೂ ಕಂಠೇಶ್ ಅನರ್ಹರು. ಇವರ 'ವಿಶೇಷಾಸಕ್ತಿ'ಗೆ ಮಾನ್ಯತೆ ನೀಡಿದ ಭೂಮಿ ಸಂಸ್ಥೆಯು ಎರೆತೊಟ್ಟಿ ನಿರ್ಮಿಸಲ್ಲು ಸಹಕಾರ ನೀಡಿತು.

ಸಾವಯವದ ಕುರಿತು ಕಂಠೇಶ್ರಿಗೆ ಗೊತ್ತಿತ್ತು. ಸ್ವತಃ ಮಾಡಿ ನೋಡುವ ಕುತೂಹಲ. ತಮ್ಮ ಮನೆಯ ಮುಂದೆ ಮೂವತ್ತಾರು 'ವಿಶೇಷ ತಳಿ'ಯ ಹಲಸಿನ ಮರಗಳಿವೆ. ಬಿದ್ದ ಹಲಸಿನ ಎಲೆಗಳನ್ನು ಬಳಸಿ ಎರೆಗೊಬ್ಬರ ತಯಾರಿಗೆ ನಾಂದಿ.
ಎರಡು ಹಸುಗಳು. ಅದರ ಸೆಗಣಿ, ಗಂಜಲ ಕಚ್ಚಾವಸ್ತು. ಒಂದು ಎರೆಗೊಬ್ಬರ ತೊಟ್ಟಿ. ಮತ್ತೊಂದು ಕಾಂಪೋಸ್ಟ್ ತೊಟ್ಟಿ. ತಯಾರಾದ ಗೊಬ್ಬರವನ್ನು ನರ್ಸರಿಗೆ ಬಳಸಿದರು. ಮೊದಲು 'ಸರಕಾರಿ ಗೊಬ್ಬರ' ತಿಂದು ಬೆಳೆದದ್ದಕ್ಕಿಂತಲೂ ಸೊಂಪಾಗಿ ಗಿಡಗಳು ಮೇಲೆದ್ದುವು!

'ಕಳೆದ ವರುಷ ಒಂದು ಟನ್ ಗೊಬ್ಬರ ಮಾರಿದೆ. ತಮ್ಮ ನರ್ಸರಿಗೆ ಬಳಸಿ ಮಿಕ್ಕುಳಿದದ್ದನ್ನು ಮಾರಲು ಹಿರಿಯಧಿಕಾರಿಗಳು ಒಪ್ಪಿದ್ದಾರೆ' ಎನ್ನುವ ಕಂಠೇಶ್, 'ಎರೆಗೊಬ್ಬರ ಬಳಸಿದ್ದರಿಂದ ಗಿಡಗಳಿಗೆ ರೋಗ ಕಡಿಮೆ. ಸರಕಾರದ ನರ್ಸರಿ ಅಲ್ವಾ. ಅವರು ಕೊಡುವ ಸಿಂಪಡಣೆಯನ್ನು ಒಮ್ಮೆಯಾದರೂ ಕೊಡಬೇಡ್ವಾ'!

ಈ ವರುಷ ಎರಡು ಟನ್ ಗೊಬ್ಬರದ ನಿರೀಕ್ಷೆ. ಒಂದು ಕಿಲೋ ಗೊಬ್ಬರಕ್ಕೆ ಮೂರುವರೆ ರೂಪಾಯಿಯಂತೆ ಮಾರಾಟ. ನರ್ಸರಿಗೆ ಬಳಸಿದ್ದಕ್ಕೆ ಇಲಾಖೆ ಎರಡು ರೂಪಾಯಿ ನೀಡುತ್ತದೆ. 'ಮನೆ, ಜಾಗ, ಅವಕಾಶ ನೀಡಿದ್ದಾರಲ್ಲಾ' ದನಿಗೂಡಿಸುತ್ತಾರೆ ಕಂಠೇಶ್. ಎರೆಗೊಬ್ಬರಕ್ಕೆ ಹಲಸು ಮತ್ತು ನೇರಳೆ ಗಿಡಗಳು ಬಹುಬೇಗ ಸ್ಪಂದಿಸುತ್ತವೆ. ಎರೆಗೊಬ್ಬರವನ್ನು ಹುಡುಕಿ ಬರುವ ಅಡಿಕೆ-ಮೆಣಸು ಕೃಷಿಕರು ಇವರಿಗೆ ಗಾಹಕರು.

ಹಲಸಿನ ಒಣ ಎಲೆಯು ಬೇಗ ಕರಗುವ ಸಾಮಥ್ರ್ಯ ಹೊಂದಿದ್ದು ಎರಡೇ ತಿಂಗಳಲ್ಲಿ ಗೊಬ್ಬರ ಸಿಗುತ್ತದಂತೆ. ಸಾಮಾನ್ಯವಾಗಿ ಎರೆಗೊಬ್ಬರ ತಯಾರಾಗಲು ಮೂರುವರೆ ತಿಂಗಳು ಬೇಕೇ ಬೇಕು.

ಕಂಠೇಶ್ ಮನೆಬಳಕೆಗಾಗಿ ತರಕಾರಿ ಬೆಳೆದಿದ್ದಾರೆ. ಸೀಮೆಬದನೆ, ಟೊಮೇಟೊ, ಮೆಣಸು.. ಹೀಗೆ. ಬೇಸಿಗೆಯಲ್ಲಿ ನೀರಿಗೆ ತತ್ವಾರ. ಸ್ವ-ಆಸಕ್ತಿಯಿಂದ ನರ್ಸರಿ ಗಿಡಗಳನ್ನೂ ಮಾಡುತ್ತಿದ್ದಾರೆ. ಎಲ್ಲಾ ಸೇರಿ ಸಂಬಳದಷ್ಟೇ ಇಲ್ಲಿನ ಉತ್ಪನ್ನಗಳು ಕೈಗೆ ಬರುತ್ತವೆ.
ನರ್ಸರಿ ಗಿಡಗಳನ್ನು ತಯಾರಿಸುವ ಹೊತ್ತಿಗೆ ಕೊಟ್ಟಿಗೆ ಗೊಬ್ಬರವನ್ನು ಹೊರಗಿನಿಂದ ಖರೀದಿಸುತ್ತಾರೆ. ಇದನ್ನು ಮಣ್ಣು-ಮರಳಿನೊಂದಿಗೆ ಪ್ಲಾಸ್ಟಿಕ್ ತೊಟ್ಟೆಗೆ ಹಾಕಿ ಗಿಡ ನಾಟಿ. ಗಿಡ ಬೆಳೆಯುತ್ತಿದ್ದಂತೆ ಗೊಬ್ಬರದೊಂದಿಗೆ ಬಂದ ಕೆಲವು ಸೊಪ್ಪು ತರಕಾರಿಗಳ ಬೀಜ ಮೊಳಕೆಯೊಡೆದು ಸಸಿಯಾಗಿ ನಿತ್ಯದೂಟಕ್ಕೆ ಸುಗ್ರಾಸವಾಗುತ್ತಿದೆ!
ದನಗಳ ಹೊಟ್ಟೆ ಸೇರಿದ ಬೀಜಗಳಿಗೆ ಚೆನ್ನಾಗಿ 'ಬೀಜೋಪಚಾರ'ವಾಗುವುದಿಂದ ಸೊಪ್ಪು ಚೆನ್ನಾಗಿ ಬರುತ್ತದೆ. ರುಚಿಯೂ ಕೂಡಾ ಎನ್ನುತ್ತಾರೆ ಜಯಮ್ಮ ಕಂಠೇಶ್. ಏನಿಲ್ಲವೆಂದರೂ ಹದಿನೈದಕ್ಕೂ ಮಿಕ್ಕಿ ಸೊಪ್ಪು ತರಕಾರಿಗಳು ಸಿಕ್ಕೇ ಸಿಗ್ತವೆ. ಹರಿವೆ, ಮುಳ್ಳರಿವೆ, ಕೀರೆ, ಗೋಣಿಸೊಪ್ಪು, ಬೆರಕೆ ಸೊಪ್ಪು, ಕತ್ತಿ ಸೊಪ್ಪು, ಕೋಳಿಕಾಲು ಸೊಪ್ಪು.. ಹೀಗೆ. 'ಸಾರ್. ಸುತ್ತಮುತ್ತ ಇವೆಲ್ಲಾ ನೋಡೋಕೆ ಸಿಗೊಲ್ಲ. ಅಪರೂಪದ್ದು' ಜತೆಗಿದ್ದ ಭೂಮಿಯ ರವಿ ಪಿಸುಗುಟ್ಟಿದರು.

ನರ್ಸರಿಯಲ್ಲಿರುವ ಮೂವತ್ತಾರು ಹಲಸಿನ ಮರಗಳು ಒಂದೊಂದರಲ್ಲಿ 150-200 ಹಣ್ಣುಗಳು ಬಿಡುತ್ತವೆ. ಅವೆಲ್ಲಾ ಬೀಜಕ್ಕಾಗಿ. ಗಿಡ ಅಭಿವೃದ್ಧಿ ಮಾಡಲು. 'ಒಂದು ಎಲೆಯೂ ನನ್ನ ಕಣ್ತಪ್ಪಿಸಿ ಹೋಗದು. ಒಂದೊಂದು ಎಲೆಯೂ ನನಗೆ ಪೈಸೆಗೆ ಸಮಾನ' - ಕಂಠೇಶ್.

'ಬೆಳೆಯವ ಮನಸ್ಸು ಬೇಕು. ಸ್ವಂತ ಮಾಡುವ ಛಲ ಬೇಕು. ಇಲ್ಲದಿದ್ದರೆ ಮೂರು ಸಾವಿರ ಬಿಡಿ, ಹನ್ನೆರಡು ಸಾವಿರ ಸಿಕ್ಕರೂ ಜೀವನಕ್ಕೆ ಸಾಲದು' ಎನ್ನುವಾಗ ಬದುಕಿನ ಅನಿವಾರ್ಯತೆ, ಸವಾಲನ್ನು ಎದುರಿಸುವ ಕಂಠೇಶರ ಛಲ ಮಿಂಚಿ ಮರೆಯಾಯಿತು.
ಸ್ವಂತದ್ದಾಗ ಮನೆ, ಭೂಮಿಯಿದ್ದರೂ ಕೃಷಿಯೆಂದರೆ 'ಅದೊಂದು ಅವಮಾನ' ಅಂತ ಭಾವಿಸುವ ಪ್ರಸ್ತುತ ಕಾಲಘಟ್ಟದಲ್ಲಿ, ಯಾವುದೇ ಗೊಣಗಾಟವಿಲ್ಲದೆ 'ಕೃಷಿಯನ್ನು ಮಾಡುತ್ತಿರುವ' ಕಂಠೇಶ್ ಪ್ರತ್ಯೇಕವಾಗಿ ಕಾಣುತ್ತಾರೆ.