Wednesday, March 23, 2011

`ಸ್ವಾವಲಂಬಿ ಬದುಕು'

ಪಡೀಲು ಶಂಕರ ಭಟ್ - ಯಶಸ್ವೀ ಕೃಷಿಕ. ಏಳು ದಶಕದ ಕೃಷಿ ಅನುಭವ. ಯಾವುದೇ ಸಮಸ್ಯೆ-ಸವಾಲುಗಳಿಗೆ ಗೊಣಗಾಟವಿಲ್ಲದ ಸ್ವ-ದಾರಿ. ಅನುಭವದ ಜಾಣ್ಮೆ. ಮಾದರಿ ಬದುಕು. ತುಂಬು ಜೀವನಾಸಕ್ತಿ. ಕೊಡುಗೈ ದಾನಿ. ಯಕ್ಷಗಾನ ಪ್ರೇಮಿ.

ಶಂಕರ ಭಟ್ಟರ ವ್ಯಕ್ತಿತ್ವವನ್ನು ಅಕ್ಷರದಲ್ಲಿ ಹಿಡಿದಿಡಲು ಕಷ್ಟ. ಅದು ತುಂಬಿದ ಕೊಡ. ಮಾತು, ಕೆಲಸಗಳಲ್ಲಿ ಜಾಳಿಲ್ಲ. ಅಪ್ಪಟ ಪೈರು. 'ಅವರು ಮುಟ್ಟಿದ್ದೆಲ್ಲಾ ಚಿನ್ನ' ಎಂದು ಹತ್ತಿರದಿಂದ ಬಲ್ಲವರ ಮಾತು.

ಕೃಷಿಯಲ್ಲಿ ಸಾಕಷ್ಟು ಪಲ್ಲಟಗಳಾಗಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಹೇಗೆ? ಐದಾರು ವರುಷದ ಹಿಂದೆ ಅವರೊಮ್ಮೆ ಸಿಕ್ಕಾಗ ಪ್ರಶ್ನೆಸಿದ್ದೆ. 'ಪಲ್ಲಟಗಳು ಕೃಷಿಯಲ್ಲಿ ಯಾಕೆ, ನಮ್ಮ ಬದುಕಿನಲ್ಲೂ ಆಗುವುದಿಲ್ವಾ. ಬಂದುದನ್ನು ಬಂದ ಹಾಗೆ ಸ್ವೀಕರಿಸುವುದು ಮಾನವ ಧರ್ಮ. ಸ್ವೀಕರಿಸಿದ ಬಳಿದ ಅದನ್ನು ನಿಭಾಯಿಸುವುದು ಇದೆಯಲ್ಲಾ, ಅದು ಅನುಭವದಿಂದಲೇ ಬರಬೇಕು.' ಎಂದಿದ್ದರು.

ಶಂಕರ ಭಟ್ಟರು ಗತಿಸಿ ಮಾರ್ಚ್ 17ಕ್ಕೆ ಒಂದು ವರುಷ. ಅವರು ಜೀವತದಲ್ಲಿರುವಾಗಲೇ ತಮ್ಮ ಕುಟುಂಬ ವಿವರಗಳನ್ನೊಳಗೊಂಡ 'ನೆನಪಿನ ಬುತ್ತಿ' ಎಂಬ ಕೃತಿಯನ್ನು ಪ್ರಕಟಿಸಿದ್ದರು. ಅವರನ್ನು ಹತ್ತಿರದಿಂದ ಬಲ್ಲ ಅನೇಕ ಆಢ್ಯರು ಬರೆದ ಲೇಖನಗಳಿವೆ. ಬರೆಹಗಳಲ್ಲಿ ಭಟ್ಟರ ಕೃಷಿ ಸಾಧನೆಗಳಿವೆ. ಮನೆಯ ಯಜಮಾನನೊಬ್ಬನ ಯಶಸ್ವೀ ಬದುಕಿನ ಗಾಥೆಗಳಿವೆ. ವಂಶ ವಿವರಗಳಿವೆ.

ವರ್ಷಾಂತಿಕದ ಆಮಂತ್ರಣ ಬಂದಾಗ, 'ನೆನಪಿನ ಬುತ್ತಿ' ಪುಸ್ತಕವನ್ನು ತಿರುವು ಹಾಕಿದೆ. ಅದರಲ್ಲಿ ಕೃಷಿಯ ಕುರಿತಾಗಿ ಉಲ್ಲೇಖವಿರುವ ಬರೆಹಗಳಿಂದಾಯ್ದ (ಮುಖ್ಯವಾಗಿ ಪ್ರೊ.ವಿ.ಬಿ.ಅರ್ತಿಕಜೆ ಮತ್ತು ಡಾ.ಯದುಕುಮಾರ್ ಅವರ ಬರೆಹ) ಒಂದಷ್ಟು ವಿಚಾರಗಳು ಮೆದುಳಿಗೆ ಮೇವನ್ನು ನೀಡುತ್ತದೆ.

ಹೈನುಗಾರಿಕೆ ಅವಲಂಬನಾ ಕೆಲಸವಲ್ಲ. ಮನೆಯವರೇ ಸ್ವತಃ ಮಾಡುವಂತಾದ್ದು. ಜಾನುವಾರುಗಳ ಬಗ್ಗೆ ಪ್ರೀತಿ ಬೇಕು. ನಮ್ಮ ತೋಟಕ್ಕೆ ನಮ್ಮದೇ ಸ್ಲರಿ-ಗೊಬ್ಬರ. ಗೋಬರ್ ಗ್ಯಾಸ್ನಿಂದ ಕಟ್ಟಿಗೆ ಉಳಿತಾಯ. ಮನೆಗೆ ಬೇಕಾದಷ್ಟು ಹಾಲು. ನಾಟಿ ಹಸುವಾದರೆ ಸಾಕಣೆ ಖರ್ಚು ಕಡಿಮೆ, ಹಾಲೂ ಕಡಿಮೆ! ಗೋಮೂತ್ರದಿಂದ ಆರ್ಕವನ್ನು ಮಾಡಬಹುದು. ಸಂಕರತಳಿಗಳಾದರೆ ಹಾಲಿನ ಪ್ರಮಾಣ ಹೆಚ್ಚು. ಖರ್ಚೂ ಹೆಚ್ಚು. ಆರೋಗ್ಯ ಕಡಿಮೆ.

ಕೂಲಿ ಕೆಲಸದವರ ಅಭಾವ, ಹೆಚ್ಚಿದ ಮಜೂರಿ, ಪಶುಆಹಾರದ ದರದಲ್ಲಿ ಏರಿಕೆ. ಇದರಿಂದಾಗಿ ಆರ್ಥಿಕವಾಗಿ ಹೈನುಗಾರಿಕೆಯನ್ನು ಸಮತೋಲನಗೊಳಿಸಲು ತ್ರಾಸ. ಇದು ಕೃಷಿಗೆ ಪೂರಕವಾದ್ದರಿಂದ ದೂರಗಾಮಿ ಪರಿಣಾಮದಲ್ಲಿ ಲಾಭದಾಯಕ. 'ಹೇಳುವುದೊಂದು, ತೋರಿಸುವುದೊಂದು, ತರುವುದೊಂದು ಎಂಬಂತಹ ಸಾವಯವ, ರಸಗೊಬ್ಬರಗಳಿಗಿಂತ ನಮ್ಮಲ್ಲಿ ತಯಾರಾದ ಗೊಬ್ಬರ ಅಥವಾ ಸ್ಲರಿ ಎಷ್ಟೋ ಉತ್ತಮ. ಹಾಗಾಗಿ ಹೈನುಗಾರಿಕೆ ಇಂದಿಗೂ ಸೂಕ್ತ
ಕೃಷಿಯಲ್ಲಿ ಲಾಭ ಪಡೆಯಲು ತುಂಬ ಕಷ್ಟವಿದೆ. ಆದರೆ ಸುಖಮಯ ಜೀವನಕ್ಕೆ ತೊಂದರೆಯಾಗದು.

ಈಗ ಎಲ್ಲೆಲ್ಲೂ ಅಡಿಕೆ, ತೆಂಗು, ರಬ್ಬರ್, ಗೇರು ಕೃಷಿಗಳಿಂದಾಗಿ ಕೃಷಿ ವಿಸ್ತರಣೆಯಾಯಿತು. ಕೃಷಿ ಕಾರ್ಮಿಕರ ಕುಟುಂಬ ಸದಸ್ಯರ ಸಂಖ್ಯೆ ಕೂಡಾ ಹೆಚ್ಚಾಯಿತು. ಉಳ್ಳವರು ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪೇಟೆ-ಪಟ್ಟಣಗಳಲ್ಲಿ ಸೆಟ್ಲ್ ಆದರು. ಊರು ಬೆಳೆದಂತೆ ಕಟ್ಟಡ, ಮನೆಗಳು, ಸೇತುವೆಗಳು, ರಸ್ತೆಗಳು ಮೊದಲಾದ ಮೂಲಭೂತ ಸೌಕರ್ಯಗಳು ಹೆಚ್ಚಾದುವು. ಕಾರ್ಮಿಕರ ಇದಕ್ಕೆ ಹಂಚಿ ಹೋದರು. ಕೆಲಸದವರು ಸಾಕಷ್ಟು ಮಂದಿ ಇದ್ದಾಗ ಸಣ್ಣಪುಟ್ಟ ಕೆಲಸಗಳಿಗೂ ಅವರನ್ನೇ ಅವಲಂಬಿಸಿ ಸ್ವತಃ ಕೆಲಸ ಮಾಡುವುದನ್ನು ನಿಲ್ಲಿಸಿದೆವು. ಒಂದರ್ಥದಲ್ಲಿ ಸೋಮಾರಿಗಳಾದೆವು. ನಮ್ಮ ಮಕ್ಕಳನ್ನು ಕೃಷಿಯಿಂದ ಬಿಡಿಸಿ ಉದ್ಯೋಗಕ್ಕೆ ಕಳುಹಿಸಿದೆವು. ಈಗ ಕಷ್ಟ ಅನುಭವಿಸುತ್ತಿದ್ದೇವೆ.

ಈಗ ಹಲವು ರೀತಿಯ ಯಂತ್ರೋಪಕರಣಗಳು ಬಂದಿವೆ. ಬರುತ್ತಲೇ ಇವೆ. ಗೊಬ್ಬರದ ಬದಲು ಸ್ಲರಿ, ರಸಾವರಿ ವ್ಯವಸ್ಥೆ ಮಾಡಿ, ತೋಟದೊಳಗೆ ಗಾಡಿ ಅಥವಾ ರಿಕ್ಷಾ, ಜೀಪು ವಾಹನಗಳು ಹೋಗುವಂತೆ ಮಾಡಿದರೆ ಕಾರ್ಮಿಕರ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಹಗುರ ಮಾಡಬಹುದು. ಕಳೆ ತೆಗೆಯಲು, ಔಷಧಿ ಸಿಂಪಡಣೆಗೆ ಸಹಾಯಕವಾಗುವ ಪಂಪು, ಅಡಿಕೆ ಸುಲಿಯುವ ಯಂತ್ರಗಳು ಬಂದಿವೆ. ಬೆಲೆ ಇಳಿತದಿಂದ, ಕೆಲಸಗಾರರ ಕೊರತೆಯಿಂದ ಕಂಗೆಡದೆ, ಧೈರ್ಯವಾಗಿ ತನ್ನಿಂದಾದಷ್ಟು ಕೆಲಸವನ್ನು ಮಾಡುತ್ತಾ ಬಂದರೆ ಅತೀವ ಲಾಭದಾಯಕವಲ್ಲದಿದ್ದರೂ ಸ್ವಾವಲಂಬಿಯಾಗಿ ಬದುಕಬಹುದು.

ಶಂಕರ ಭಟ್ಟರ ಕೃಷಿ ಲೆಕ್ಕಾಚಾರ ಪಕ್ಕಾ. ಅಡಿಕೆ ಕೃಷಿಯಲ್ಲಿ ಕೊಯ್ಲೋತ್ತರ ಸಂಸ್ಕರಣೆ ಅಚ್ಚುಕಟ್ಟು. ಅಡಿಕೆ ಸುಲಿದ ನಂತರ ಗ್ರೇಡ್ ಮಾಡುವುದರಲ್ಲಿ ಸ್ವ-ವಿಧಾನ. ಇವರ ಕೈಯಲ್ಲಿ ಒಮ್ಮೆ ಗ್ರೇಡ್ ಆದ ಅಡಿಕೆ ಹೆಚ್ಚಿನ ಧಾರಣೆ ಖಚಿತ. ಇದರಿಂದಾಗಿ ಇವರ ಮನೆಗೆ ವ್ಯಾಪಾರಿಗಳು ಬಂದು ಅಡಿಕೆ ಖರೀದಿ ಮಾಡುತ್ತಿದ್ದರು.

ಕೃಷಿ ಜೀವನದಲ್ಲಿ ಆರ್ಥಿಕತೆಯ ನಿಭಾವಣೆ, ಕೃಷಿಗೆ ಆಧುನೀಕರಣದ ಸ್ಪರ್ಶ, ಕೃಷಿಭೂಮಿಯನ್ನು ಖರೀದಿಸುವಾಗ ಎಚ್ಚರವಹಿಸಬೇಕಾದ ಅಂಶಗಳು, ಯವ್ಯಾವ ಸಮಯದಲ್ಲಿ ಕೃಷಿಗೆ ಪೂರಕವಾದ ವಸ್ತುಗಳಗಳನ್ನು ಖರೀದಿಸಬೇಕು.. ಮುಂತಾದ ವಿಚಾರದಲ್ಲಿ ಶಂಕರ ಭಟ್ಟರಲ್ಲಿ ನಿಖರ ನಿಲುವಿತ್ತು.

ಇವರಿಗೆ ದುಡಿತವೆಂದರೆ ಪ್ರೀತಿ. ಭತ್ತದ ಕೃಷಿ ಸಹಿತ ಬಹುತೇಕ ಎಲ್ಲಾ ಬೆಳೆಗಳನ್ನು ಬೆಳೆದ ಅನುಭವಿ. ಮಾರುಕಟ್ಟೆ ವಿಚಾರದಲ್ಲೂ ಇದಮಿತ್ಥಂ ಎಂಬ ತಿಳುವಳಿಕೆ.

ಅಡಿಕೆ ತೋಟದಲ್ಲಿ ದಿನಾ ಬಿದ್ದ ಅಡಿಕೆಯನ್ನು ಹೆಕ್ಕುವುದು ದೊಡ್ಡ ಕೆಲಸ. ದೊಡ್ಡ ತೋಟವಾದರೆ ಹೆಕ್ಕಿ ಪೂರೈಸುವಂತಹುದಲ್ಲ. ಅದಕ್ಕಾಗಿ ಇವರು ಶಾಲೆಗೆ ಹೋಗುವ ಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಅಡಿಕೆ ಹೆಕ್ಕಲು ಹುರಿದುಂಬಿಸುತ್ತಿದ್ದರು. ಮಕ್ಕಳಿಗೆ ಪುಸ್ತಕ-ಬಟ್ಟೆಗಳಿಗೆ ಕಾಸೂ ಆಯಿತು, ಸಂಪಾದನೆಯೂ ಆಯಿತು. ಮಾನವ ಸಂಪನ್ಮೂಲದ ಬಳಕೆಯ ಚಿಕ್ಕ ಮಾದರಿ.

ಹೀಗೆ ಕೃಷಿಯಲ್ಲಿ ಚಿಕ್ಕ ಚಿಕ್ಕ ವಿಚಾರಗಳಿಗೂ ಮಹತ್ತಿದೆ. ಬದುಕಿನಲ್ಲಿ ಮಹತ್ತನ್ನು ಸಾಧಿಸಿ ತೋರಿಸಿದ ಕೀರ್ತಿಶೇಷ ಶಂಕರ ಭಟ್ಟರಿಗೆ ಇದು ಅಕ್ಷರ ನಮನ.

Tuesday, March 22, 2011

ರೈತನಿಗಿಲ್ಲಿ ಮೊದಲ ಮಣೆ

'ಭಾರತದಲ್ಲಿ ಹದಿಮೂರು ಟನ್ ಗೇರುಬೀಜಕ್ಕೆ ಬೇಡಿಕೆಯಿದೆ. ಆರೇಳು ಟನ್ ಮಾತ್ರ ಉತ್ಪಾದನೆಯಾಗುತ್ತಿದ್ದು, ಮಿಕ್ಕುಳಿದುದನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಗೇರುಬೀಜಕ್ಕೆ ಎಂದೂ ಬೇಡಿಕೆ ಕಡಿಮೆಯಾಗದು' ಎಂದವರು ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ ಮುಖ್ಯಸ್ಥ ಎಂ.ಜಿ.ಭಟ್.

ಉಳಿದ ಕೃಷಿಗೆ ಹೋಲಿಸಿದರೆ ಗೇರು ಕೃಷಿ ಹೆಚ್ಚು ಶ್ರಮ ಬೇಡದ ಕೆಲಸ. ವರುಷ ಆರೇಳು ತಿಂಗಳುಗಳ ಶ್ರಮ. ಮಾರುಕಟ್ಟೆಯಲ್ಲಿ ಗೇರುಬೀಜದ ಪ್ರಸಕ್ತ ದರ ಕಿಲೋಗೆ ಎಂಭತ್ತು ರೂಪಾಯಿ.
ನಮ್ಮ ಕೃಷಿಕರಲ್ಲಿ ಅನೇಕರಿಗೆ ಇಳಿಜಾರಾದ ಗುಡ್ಡ ಭೂಮಿಯಿದೆ. ಅವೆಲ್ಲಾ ರಬ್ಬರ್ ಕೃಷಿಗಾಗಿ ನುಣುಪಾಗಿದೆ. ಬೆಲೆಯ ಮೋಹಕ್ಕೆ ಒಳಗಾಗಿ ಹೊಸ ಹೊಸ ಬೆಳೆಯತ್ತ ವಾಲುವುದು ಸಹಜ. ಆದರೆ ಭವಿಷ್ಯ? 'ರಬ್ಬರಿಗಿಂತ ಗೇರು ಎಷ್ಟೋ ವಾಸಿ. ಲಾಭದಾಯಕವೂ ಕೂಡಾ' ಎಂದು ದನಿಸೇರಿಸಿದರು ಕೃಷಿಕ ದೇರಣ್ಣ ರೈ.

'ಹಲವಾರು ಮಂದಿ ಗೇರು ಯಾಕೆ ಹಾಕ್ತಿಯಾ? ರಬ್ಬರ್ ಹಾಕು ಅಂತ ಒತ್ತಾಯಿಸಿದರು. ಗೇರು ಕೃಷಿಯ ಬಗ್ಗೆ ವಿಶ್ವಾಸವಿದ್ದರೂ, ರಬ್ಬರ್ ಕೂಡಾ ಜತೆಗಿರಲಿ. ಲಾಭ ನಷ್ಟದ ಲೆಕ್ಕವನ್ನು ಪ್ರತ್ಯಕ್ಷ ನೋಡಿದ ಹಾಗಾಯಿತು. ಹಾಗಾಗಿ ಒಂದು ಪ್ಲಾಟ್ನಲ್ಲಿ ರಬ್ಬರ್ ಮತ್ತು ಇನ್ನೊಂದರಲ್ಲಿ ಗೇರು ಕೃಷಿ ಮಾಡಿದ್ದೇನೆ' ಎಂದರು. ರೈಗಳು ಎರಡೂ ಬೆಳೆಯ ಲೆಕ್ಕ ಪತ್ರಗಳನ್ನು ದಾಖಲಿಸುತ್ತಾರೆ.
ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯವು ಮಾರ್ಚ್ ಒಂದರಂದು ಗೇರು ದಿನೋತ್ಸವ ಆಚರಿಸಿತು. ಇದು ಹದಿನಾಲ್ಕನೇ ದಿನೋತ್ಸವ. ಗೇರು ಕೃಷಿಕರನ್ನು ಆಹ್ವಾನಿಸಿ, ಯಶಸ್ವೀ ಗೇರು ಕೃಷಿಕರ ತೋಟಗಳಿಗೆ ಕರೆದುಕೊಂಡು ಹೋಗಿ, ಅಲ್ಲಿನ ಕೃಷಿ ಪದ್ಧತಿಗಳನ್ನು ತೋರಿಸುವುದು ವಿಶೇಷ. ಇದರಿಂದಾಗಿ ಕೃಷಿ ಪದ್ಧತಿಗಳ ವೈವಿಧ್ಯತೆಯನ್ನು ಪ್ರತ್ಯಕ್ಷ ನೋಡಿದಂತಾಗುತ್ತದೆ. ತಾವೆಲ್ಲಿ ಎಡವುತ್ತೇವೆ ಎಂಬುದರ ಕುರಿತಾಗಿ ಪರಾಮರ್ಶೆಯೂ ಜತೆಜತೆಗೆ ನಡೆಯುತ್ತಿದೆ.

ಮೊದಲು ಎರಡು ತಂಡಗಳಲ್ಲಿ ಕೇಂದ್ರದ ಗೇರು ತಾಕುಗಳ ವೀಕ್ಷಣೆ. ವಿಜ್ಞಾನಿಗಳಿಂದ ವಿವರಣೆ. ಕೃಷಿಕರ ಪ್ರಶ್ನೆಗಳಿಗೆ ನಗುಮುಖದ ಉತ್ತರ. ಕೆಲವೊಂದು ಸಲ ಪ್ರಶ್ನೆಗಳಿಗೆ ರೈತರಿಂದ ಅಲ್ಲಲ್ಲೇ ಉತ್ತರ-ಸಮಾಧಾನ.

ಇದೇ ಕೇಂದ್ರದಲ್ಲಿ ವಿಜ್ಞಾನಿಯಾಗಿ ನಿವೃತ್ತರಾಗಿ, ಈಗ ಕೃಷಿಕರಾಗಿರುವ ಯದುಕುಮಾರ್ ಅವರ ತೋಟಕ್ಕೆ ಈ ಸಲ ಭೇಟಿ. ಮುನ್ನೂರಕ್ಕೂ ಮಿಕ್ಕಿ ಕೃಷಿಕರ ಭಾಗಿ. ವಿಆರ್ಐ-3, ವೆಂಗುರ್ಲ-4, ಉಲ್ಲಾಳ-3 ಮತ್ತು ಭಾಸ್ಕರ ಗೇರು ತಳಿಗಳನ್ನು ಯದುಕುಮಾರ್ ಹೊಂದಿದ್ದರು. ಎಲ್ಲವೂ ಆರಂಭಿಕ ಬೆಳವಣಿಗೆ. ಆರೋಗ್ಯಕರ ಇಳುವರಿ. ಕೃಷಿಯ ಏಳು-ಬೀಳುಗಳು, 'ಮಾಡಿ-ಬೇಡಿ'ಗಳನ್ನು ತಮ್ಮ ಅನುಭವಮೂಸೆಯಿಂದ ವಿವರಿಸಿದರು.

'ಗೇರು ಬೆಳೆಯುವ ರೈತರಲ್ಲಿಗೆ ಹೋದಾಗ ವೆರೈಟಿಗಳ ಪರಿಚಯವಾಗುತ್ತದೆ. ಬೆಳೆಕ್ರಮ ಅರಿವಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ತಳಿಗಳ ಕುರಿತಾದ ಆಯ್ಕೆಯಲ್ಲಿ ರೈತರು ಮೋಸ ಹೋಗುವುದೇ ಹೆಚ್ಚು. ಅದರ ಪರಿಚಯ ಮೊದಲೇ ಇರಬೇಕು' - ಯದುಕುಮಾರರ ಕಿವಿಮಾತು.
ಮಧ್ಯಾಹ್ನದ ಹೊತ್ತಿಗೆ ಸಭಾ ಕಲಾಪ. ಅತಿಥಿ ವಿಜ್ಞಾನಿಗಳಿಂದ ಅನುಭವ ವಿನಿಮಯ. ಕೊನೆಗೆ ಪ್ರಶ್ನೋತ್ತರ. ಕರ್ನಾಟಕ ಗೇರು ನಿಗಮದ ಅಧಿಕಾರಿ ವಿಜಯಲಾಲ್ ಮೀನಾ ಈ ಸಲದ ಅತಿಥಿ. 'ಎಷ್ಟೋ ಕಡೆ ಬೆಳೆದು ನಿಂತ ಗೇರು ಮರಗಳನ್ನು ಕಡಿದು ರಬ್ಬರ್ ಗಿಡಗಳನ್ನು ನೆಡುವುದನ್ನು ನೋಡಿದ್ದೇನೆ. ಇದು ಒಳ್ಳೆಯದಲ್ಲ. ಕೃಷಿಯಲ್ಲಿ ತಕ್ಷಣದ ಬದಲಾವಣೆ ಪ್ರಯೋಜನ ಬಾರದು. ಗೇರಿನ ಈ ವರೆಗಿನ ಇತಿಹಾಸದಲ್ಲಿ ಬೆಲೆ ಕುಸಿತದಿಂದ ಯಾವ ರೈತರಿಗೂ ತೊಂದರೆಯಾಗಿಲ್ಲ' ಎಂದರು.

ಗೇರು ಬೀಜಕ್ಕೇನೋ ಮಾರುಕಟ್ಟೆಯಿದೆ. ಆದರೆ ಗೇರು ಹಣ್ಣನ್ನು ಮೌಲ್ಯವರ್ಧನೆ ಮಾಡಲು ಸಾಧ್ಯವಿಲ್ಲವೇ? ರೈತರೊಬ್ಬರ ಪ್ರಶ್ನೆ. ಇದಕ್ಕೆ ಆಡಳಿತಾತ್ಮಕವಾದ ಉತ್ತರವೇನೋ ದೊರೆಯಿತು. 'ಇದರಿಂದ ತಯಾರಿಸುವ ಸ್ಕ್ವಾಷ್ಗೆ ಡಿಮಾಂಡ್ ಇಲ್ಲ' ವರಿಷ್ಠರಿಂದ ಉತ್ತರ. 'ಕೇರಳದಲ್ಲಿ ಇದೆಯಲ್ಲಾ' ರೈತರಿಂದ ಪ್ರತ್ಯುತ್ತರ.

ಈ ಸಂವಾದದ ಹಿನ್ನೆಲೆಯಲ್ಲಿ ಕೇರಳದ 'ಕ್ಯಾಶ್ಯೂ ಕೋಲಾ' ಮಾಡುವ ಘಟಕವೊಂದರ ಸೂಕ್ಷ್ಮ ಪರಿಚಯ ನಿಮಗೆ ಹೇಳಲೇ ಬೇಕು - ಕೇರಳದ ಕಣ್ಣೂರು ಜಿಲ್ಲೆಯ ವಾಣಿಯಂಪಾರದ ಕೃಷಿಕ ಟೋಮಿಚ್ಚನ್. ಇವರಿಗೆ ಟೋಮ್ಕೋ ಉದ್ಯಮದ ಮೂಲಕ ಗೇರು ಹಣ್ಣಿನ ಪೇಯ ತಯಾರಿ ವೃತ್ತಿ. ಇವರ ಲಘುಪೇಯ ಮತ್ತು ಸಿರಪ್ಗಳು ಕಣ್ಣೂರಿನ ಮುಖ್ಯ ಕೇಂದ್ರಗಳಲ್ಲಿ, ಮಾರ್ಜಿನ್ ಶಾಪ್, ಹಣ್ಣು ತರಕಾರಿ ಅಂಗಡಿ, ಬೇಕರಿ, ಹಾಲಿನ ಬೂತ್ಗಳಲ್ಲಿ ಪೇಯ ಸಿಗುತ್ತಿದ್ದು ಆಶಾದಾಯಕ ಗ್ರಾಹಕ ಒಲವು ಪಡೆಯುತ್ತಿದೆ.

ಗೇರು ಹಣ್ಣಿನಲ್ಲಿರುವ ಗಂಟಲು ಕೆರೆಯುವ ಗುಣ ಟೋಮ್ಕೋದಲಿಲ್ಲ. ಪೇಯದ ಬಾಟಲಿಂಗ್ ತುಂಬ ಆಕರ್ಷಕ. ಬಾಟ್ಲಿಯ ಆಕಾರ ತಲೆಕೆಳಗಾದ ಗೇರುಹಣ್ಣಿನಂತಿದೆ. ಮುಚ್ಚಳ ಬೀಜದಂತೆ. ಮುಚ್ಚಳದ ಆಕಾರ, ಬಣ್ಣ ಗೇರು ಬೀಜದಂತೆ. 250 ಎಂ.ಎಲ್.ಪೇಯಕ್ಕೆ ಹದಿನೇಳು ರೂಪಾಯಿ, ಐನೂರಕ್ಕೆ ಮೂವತ್ತು ರೂಪಾಯಿ. ಸಿರಪ್ಗೆ ಐದಾರು ಪಾಲು ನೀರು ಯಾ ಸೋಡ ಸೇರಿಸಿ ಕುಡಿಯಬಹುದು. ಇದು ಗೇರು ಹಣ್ಣಿನ ಸಾಧ್ಯತೆ. ನಮ್ಮಲ್ಲಿ ಇದಿನ್ನೂ ಪ್ರಯೋಗ ಹಂತದಲ್ಲಿದೆಯಷ್ಟೇ. ಕೇರಳಿಗರು ಇಂತಹ ಮೌಲ್ಯವರ್ಧನೆಯಲ್ಲಿ ಯಾವಾಗಲೂ ಮುಂದು.

ಗೇರು ಸಂಶೋಧನಾಲಯಕ್ಕೀಗ ರಜತ ಸಂಭ್ರಮ. ಗೇರು ದಿನೋತ್ಸವ ರಜತದ ಮೊದಲ ಕಲಾಪ. ನಮ್ಮ ಹೆಚ್ಚಿನ ಸಂಶೋಧನಾಲಯಗಳಿಗೆ ರೈತರೆಂದರೆ ಯಾಕೋ ಅಲರ್ಜಿ.. ಆದರೆ ಗೇರು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಗಳೆಂದರೆ ರೈತರಿಗೆ ಪ್ರೀತಿ. ಅವರಿಗೆ ಸದಾ ತೆರೆದ ಬಾಗಿಲು. ರೈತರ ತೋಟಕ್ಕೆ ಸ್ವತಃ ವಿಜ್ಞಾನಿಗಳೇ ಭೇಟಿ ಕೊಡುವುದು ವಿಶೇಷ. ಹಾಗಾಗಿ ಇಲ್ಲಿಂದ ಯಾವುದೇ ಸಮಾರಂಭದ ಕರೆ ಹೋದಾಗಲೂ ಕೃಷಿಕರಿಂದ ಸಭಾಭವನ ತುಂಬಿರುತ್ತದೆ.

Friday, March 11, 2011

ಮರೆಯಾಗುತ್ತಿದೆ 'ಸ್ಥಳೀಯತೆ'

ಈಚೆಗೆ ಹುಬ್ಬಳ್ಳಿಗೆ ಹೋಗಿದ್ದಾಗ ಮಾಧ್ಯಮ ಪರಿಚಿತರೋರ್ವರ ಮನೆಗೆ ಭೇಟಿ ಕೊಟ್ಟಿದ್ದೆ. ಮನೆಯ ಎಲ್ಲಾ ಸದಸ್ಯರು ಅಪರಿಚಿತರು. ಅವರು ಹಳ್ಳಿಯಿಂದ ಉದ್ಯೋಗ ನಿಮಿತ್ತ ನಗರಕ್ಕೆ ಬಂದು ಏಳೆಂಟು ವರುಷವಾಗಿತ್ತು. ಮಕ್ಕಳೆಲ್ಲಾ ನಗರದಲ್ಲೇ ಓದಿದವರು. 'ಅರ್ಧಕಾಲಿನ ಪ್ಯಾಂಟ್' ನಿತ್ಯ ಉಡುಪು. ಮನೆಗೆ ಆಹ್ವಾನಿಸಿದ ಯಜಮಾನ ತನ್ನ ಮಡದಿ ಮತ್ತು ಇಬ್ಬರು ಮಕ್ಕಳ ಪರಿಚಯ ಮಾಡಿಸಿದರು. ಯಾಂತ್ರಿಕ ನಗುವಿನೊಂದಿಗೆ ನಮಸ್ಕಾರ ವಿನಿಮಯ.

ಒಂದರ್ಧ ನಿಮಿಷದಲ್ಲಿ ತನಗೆ ಸಂಬಂಧಪಟ್ಟ ವಿಚಾರವಲ್ಲವಿದು ಎನ್ನುತ್ತಾ ಮನೆಯೊಡತಿ ಎದ್ದು ಹೋದರೆ, ಮಕ್ಕಳು ತಂತಮ್ಮ ಕೋಣೆ ಸೇರಿದರು.
'ನೀರು ಬೇಕಿತ್ತಲ್ಲಾ' ಅಂದಾಗ ಯಜಮಾನರೇ ಹೋಗಿ ತಂಪು ಪೆಟ್ಟಿಗೆಯಿಂದ ಬಾಟಲ್ ತಂದಿಟ್ಟರು. ಮನೆಯೊಡತಿ ಧಾರಾವಾಹಿಯೊಳಗೆ ಮುಳುಗೇಳುತ್ತಿದ್ದರು. ಉದ್ದೇಶಪೂರ್ವಕವಾಗಿಯೇ ಮಕ್ಕಳ ಕೋಣೆಗೆ ಹೋಗಿ ಮಾತನಾಡಿದರೆ 'ಒಂದು ಮಾರ್ಕಿನ ಪ್ರಶ್ನೆಯ ಉತ್ತರ'ದಂತೆ 'ಹೌದು, ಇಲ್ಲ' ಎಂದಷ್ಟೇ ಉತ್ತರ. ಅವರನ್ನು ಮಾತನಾಡಿಸುವ ಕುರಿತಾದ ಬತ್ತಳಿಕೆಯ ಎಲ್ಲಾ ಅಸ್ತ್ರಗಳೂ ಮುಗಿಯಿತು!

'ಬನ್ನಿ ಹತ್ತಿರದಲ್ಲೇ ಕ್ಯಾಂಟಿನ್ ಇದೆ. ಚಹಾ ಕುಡಿಯೋಣ' ಅನ್ನುತ್ತಾ ಮನೆಯ ಯಜಮಾನ ಕೈಹಿಡಿದು ಒತ್ತಾಯಿಸಿದರು. ಇದೆಲ್ಲಾ ನನಗೆ ವಿಚಿತ್ರವಾಗಿ ಕಂಡಿತು. ಮನೆ ಅಂದಾಗ 'ಚಾ, ಕಾಫಿ, ಉಪಾಹಾರ, ಊಟ, ಮಾತುಕತೆ' ಇದ್ದೇ ಇರಬೇಕಲ್ಲಾ. ಇಲ್ಲಿ ಯಾಕೆ ತದ್ವಿರುದ್ಧ! ಹಾಂ.. 'ಪೇಟೆ ಮನೆ ಅಲ್ವಾ' ಸಮಾಧಾನ ಪಟ್ಟುಕೊಂಡೆ.

ಪರಸ್ಪರ ಮಾತುಕತೆಯಿಲ್ಲ. ಉಪಚಾರ ಇಲ್ಲ. ಸಂವಹನ ಇಲ್ಲ. 'ಗಂಡ, ಹೆಂಡತಿ, ಮಕ್ಕಳು' ಎಂಬ ಪದಗಳು ವ್ಯಕ್ತಿಗಳನ್ನು ಗುರುತಿಸಲು ಮಾತ್ರ. ಬಹುಶಃ ಪೇಟೆ ಮನೆಯಲ್ಲಿ 'ಅಂತಸ್ತು ಕಾಪಾಡಿಕೊಳ್ಳುವುದು' ಎಂಬ ಸ್ವಯಂರೂಢ ಪ್ರಕ್ರಿಯೆಯಿರಬಹುದೋ ಏನೋ?

ಪುತ್ತೂರಿನ ಅನುರಾಗ ವಠಾರದಲ್ಲಿ ಜರುಗಿದ ಸಾಹಿತ್ಯ ಸಂಸ್ಕೃತಿ ಸಲ್ಲಾಪದ ಸಮಾರೋಪ ಉಪನ್ಯಾಸದಲ್ಲಿ ಕುಮಟಾದ ಪ್ರಾಧ್ಯಾಪಕ ಡಾ.ಶ್ರೀಧರ್ ಬಳೆಗಾರ್ ಹೇಳಿದ ವಿಚಾರಗಳು ನನ್ನ ಈ ನೆನಪನ್ನು ಕೆದಕಿದುವು. ಬದುಕಿನಲ್ಲಿ ಮಾತು 'ಕತೆ'ಯಾಗಿ ಬಂದಾಗ ಸ್ಪಷ್ಟವಾದ ಸಂವಹನ. ಎಷ್ಟೋ ಕತೆಗಳು, ಕಾದಂಬರಿಗಳು ಇಂತಹ ಮಾತುಕತೆಗಳಿಂದ ರೂಪಿತವಾದಂತಹುಗಳು. ಜೀವನದಲ್ಲಿ ಮಾತುಕತೆಯೇ 'ಹೌದು-ಇಲ್ಲ'ಗಳಿಗೆ ಸೀಮಿತವಾದರೆ ಎಂತಹ ಕತೆಯನ್ನು ಕಟ್ಟಬಹುದು? ಎಂತಹ ಬದುಕನ್ನು ರೂಪಿಸಬಹುದು?

ಒಂದೆಡೆ ಮಾತುಕತೆಗಳು ಮೌನವಾಗಿವೆ. ಇನ್ನೊಂದೆಡೆ 'ಸ್ಥಳೀಯತೆ'ಗಳು ಕಣ್ಣೆದುರೇ ಕುಸಿಯುತ್ತಿವೆ. ಡಾ.ಶ್ರೀಧರ್ ಅವರು ಸ್ಥಳೀಯತೆ ನಾಶದತ್ತ ಬೀರಿದ ಬೆಳಕಿನ ಒಂದೆಳೆ ಇಲ್ಲಿದೆ:

ಸ್ಥಳೀಯತೆ ಎಂದರೇನು? 'ಯಾವುದನ್ನು ಈ ಆಧುನಿಕ ಜಗತ್ತಿನಲ್ಲಿ ಮೌಲ್ಯ ಅಂತ ಅದನ್ನು ಪಡೆಯುವುದಕ್ಕೆ ಓಡುತ್ತಾ ಇದ್ದೇವೋ, ಆ 'ವೇಗ ಇಲ್ಲದಂತಹ' ನಿಧಾನವಾದ ನೆಮ್ಮದಿಯ ಪ್ರಕ್ರಿಯೆ. ಒಂದಷ್ಟು ಸಂಯಮದಿಂದ ನಿತ್ಯ ಅನುಭವಿಸುವ ವಿಧಾನ. ನಡವಳಿಕೆಯಲ್ಲಿ ಕೃತ್ರಿಮತೆ ಇಲ್ಲದೆ ಕನಿಷ್ಠವಾಗಿ ಇರುವುದು. ಕಷ್ಟವನ್ನು ಸಹಿಸುವಂತಾದ್ದು..'

ಇಂತಹ ಸ್ಥಳೀಯತೆಯನ್ನು ಅಣಕಿಸುವಂತೆ ಪ್ರಸ್ತುತ ಬದುಕಿನ ವೇಗ ಗಣನೆಗೆ ಸಿಕ್ಕದು. ಈ ವೇಗ, ಆವೇಶ, ಒತ್ತಡಗಳೇ 'ಮೌಲ್ಯ ಅಂತ ಗಣಿಸ'ಲ್ಪಡುತ್ತವೆ. ಅದಕ್ಕೆ ಪೂರಕವಾದ ಒಳಸುರಿಗಳನ್ನು ನಗರದ 'ವ್ಯವಸ್ಥೆ'ಗಳು ಪೂರೈಸುತ್ತವೆ. ಮನೆಯೊಳಗೆ ನಡೆಯುವ ಬಹುತೇಕ ವಿಚಾರಗಳನ್ನು ಮಧ್ಯವರ್ತಿಗಳು, ವ್ಯಾಪಾರಿಗಳ ಮೂಲಕ ಪಡೆಯುವ ವ್ಯವಸ್ಥೆಯಿದೆ.

ನಗರದಲ್ಲಿ ಮಧ್ಯಾಹ್ನದ ಹೊತ್ತಿಗೆ ಅತಿಥಿಗಳು ಬಂದಾಗ ಮನೆಯೊಡತಿಗೆ ಚಡಪಡಿಕೆಯಾಗುವುದಿಲ್ಲ. ಟೆನ್ಶನ್ ಆಗುವುದಿಲ್ಲ. ಒಂದು ಕಿಲೋ ಅನ್ನ, ಅರ್ಧ ಲೀಟರ್ ಸಾಂಬಾರ್ ಸಿಗುವ ಅಂಗಡಿಗಳು ಕೈಯಳತೆಯಲ್ಲಿವೆ. ಒಂದು ಫೋನ್ ರಿಂಗ್ ಕೊಟ್ಟರೆ ಸಾಕು, ಹತ್ತೇ ನಿಮಿಷದಲ್ಲಿ ಮನೆಯಂಗಳದಲ್ಲಿ ಹಾರ್ನ್ ಕೇಳುತ್ತದೆ.

ಇತ್ತೀಚೆಗಿನ ವರುಷಗಳಲ್ಲಿ ಕುಟುಂಬ ಸಹಿತ ಉದ್ಯೋಗಕ್ಕಾಗಿ ನಿರಂತರ ವಲಸೆ ಹೋಗುವ ಒಂದಷ್ಟು ಮಂದಿಗಳನ್ನು ಬಸ್ಗಳಲ್ಲಿ ಕಾಣಬಹುದು. ಇವರೆಲ್ಲಾ ನಗರದಲ್ಲಿ ಯಾರದ್ದೋ ಮನೆಯಲ್ಲಿದ್ದುಕೊಂಡು, ಕೆಲಸ ಮಾಡುತ್ತಾ ಇರುತ್ತಾರೆ. ಯಾರದ್ದೋ ಕಟ್ಟಡ ಕಾಮಗಾರಿಯ ಮೂಲಕ ನಗರದ 'ಅಭಿವೃದ್ಧಿ'ಗೆ ಹೆಗಲು ಕೊಡುತ್ತಾರೆ. ಈ ಮಂದಿ ತಮ್ಮ ಹಳ್ಳಿಯ ಬದುಕು, ಪರಿಸರ, ನೆಲ, ತಾನು ನಂಬಿದ ದೈವ, ನೆರೆಕರೆ' ಇವರನ್ನೆಲ್ಲಾ ಬಿಟ್ಟು 'ಅಭಿವೃದ್ಧಿ ಎಂಬ ಹಾರ್ಡ್ ವೇರ್' ಕಟ್ಟುವ ಕೆಲಸದಲ್ಲಿ ನಿರತರಾಗಿರುತ್ತಾರೆ.

ಇನ್ನೊಂದಿಷ್ಟು ಮಂದಿ ಹಳ್ಳಿ ಮನೆಯಿಂದ ಗಂಟುಮೂಟೆ ಕಟ್ಟಿ (ಸೂಟ್ಕೇಸ್ಗಳಲ್ಲಿ) ವೋಲ್ವೋ ಬಸ್ನಲ್ಲಿ ಕುಳಿತಿದ್ದಾರೆ. ಬಸ್ಸಿನ ಹೊರಗಡೆ ಅವರನ್ನು ಬೀಳ್ಕೊಡಲು ಬಂದ ಕುಟುಂಬಸ್ತ್ಥರು ನೆರೆದಿರುತ್ತಾರೆ. ಅವರೆಲ್ಲಾ ನಗರದಲ್ಲಿ 'ಸಾಪ್ಟ್ವೇರ್'ನ್ನು ಅಭಿವೃದ್ಧಿಪಡಿಸಲು ಹೊರಟಿದ್ದಾರೆ.

ಈ ಎರಡೂ ವರ್ಗದ ಜನರನ್ನು ನಗರಕ್ಕೆ ಪ್ರದಾನ ಮಾಡುವುದು ನಮ್ಮ ಹಳ್ಳಿಗಳು. ಕೃಷಿ ಪ್ರಯೋಜನವಿಲ್ಲ, ಹಳ್ಳಿಯ ಬದುಕಿನಲ್ಲಿ ನೆಮ್ಮದಿಯಿಲ್ಲ, ಯಾವುದೇ ವ್ಯವಸ್ಥೆಗಳಿಲ್ಲ ಎನ್ನುತ್ತಾ ಇವರನ್ನು ನಾವೇ ಹಳ್ಳಿಯಿಂದ ದಬ್ಬುತ್ತಿದ್ದೇವೆ. ಅಲ್ಲಲ್ಲಾ.. ಬೀಳ್ಕೊಡುತ್ತಿದ್ದೇವೆ. ಹತ್ತು ಹಲವು ಕನಸುಗಳನ್ನು ಕಟ್ಟಿಕೊಳ್ಳುತ್ತ ನಗರ ಸೇರಿದ ಜೀವಗಳು ಅಲ್ಲಿನ ಉಸಿರುಗಟ್ಟಿಸುವ ವಾತಾವರಣವನ್ನೇ 'ವ್ಯವಸ್ಥೆ' ಅಂತ ಸ್ವೀಕರಿಸಿಕೊಂಡು, ಅದರಲ್ಲಿ ಮೌಲ್ಯವನ್ನು ಕಾಣುತ್ತಾ, ತಾನು ಹುಟ್ಟಿ ಬೆಳೆದ ಹಳ್ಳಿಯನ್ನು ಹಳಿಯುತ್ತಾ ದಿವಸಗಳನ್ನು ಕೊಲ್ಲುತ್ತಾ ಇರುತ್ತಾರೆ!

ಈ ರೀತಿಯ ನಗರದ ವ್ಯವಸ್ಥೆಯನ್ನು ಅಭಿವೃದ್ಧಿ ಎನ್ನುತ್ತಾ ಮಾಧ್ಯಮಗಳು, ರಾಜಕಾರಣಿಗಳು, ಶಿಕ್ಷಣ ವ್ಯವಸ್ಥೆಗಳು ಸದಾ ನೀರೆರೆಯುತ್ತವೆ. ಹಳ್ಳಿ ಮರೆತ ಮಂದಿ ನಗರದಲ್ಲಿ 'ಸೆಟ್ಲ್' ಆಗುತ್ತಾರೆ. ಅವರ ಕುಟುಂಬ ಬೆಳೆಯುತ್ತದೆ. ಆ ಮನೆಯ ಮಂದಿಗೆ 'ಮಾತುಕತೆ' ದೂರವಾಗುತ್ತದೆ. ಹಳ್ಳಿ ಅಸಹ್ಯವಾಗುತ್ತದೆ.

ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿರುವ 'ಪ್ರಜ್ಞಾವಂತ' ತರಕಾರಿ ವ್ಯಾಪಾರಿ ಡೇವಿಡ್, 'ನಗರಕ್ಕೆ ಹಳ್ಳಿಯಿಂದ ಸಂಪನ್ಮೂಲಗಳು ಹರಿಯುತ್ತದೆ. ನಗದಾಗುತ್ತದೆ. ಅಲ್ಲೇ ಅದು ಟರ್ನ್ ಓವರ್ ಆಗುತ್ತಾ ಇರುತ್ತದೆ. ಅದು ನಗದಾಗಿ ಹಳ್ಳಿಯತ್ತ ಹರಿದು ಬರುತ್ತಿದ್ದರೆ ಇಂದು ಹಳ್ಳಿಗಳ ಸಂಕಷ್ಟ ಇಷ್ಟೊಂದು ಭೀಕರ ಇರುತ್ತಿರಲಿಲ್ಲ' ಎಂದು ಮಾತಿನ ಮಧ್ಯೆ ಹೇಳಿದರು. 'ಸ್ಥಳೀಯತೆ' ಯಾಕೆ ನಾಶವಾಗುತ್ತಿದೆ ಎಂಬುದಕ್ಕೆ ಉತ್ತರದ ಚಿಕ್ಕ ಎಳೆ ಇದರಲ್ಲಿದೆಯಲ್ವಾ.