Friday, September 13, 2024

ಸಮ್ಮನಸ್ಸಿಗೆ ಶರಣು

ಪಡುಬಿದ್ರೆ ಸನಿಹದ ಅಕ್ಷರ ಪ್ರೇಮಿ ಆನಂದ್ ನನ್ನ ಕೃಷಿ ಸಂಬಂಧಿ 'ಮಣ್ಣಿಗೆ ಮಾನ' ಹಾಗೂ ಯಕ್ಷಗಾನ ಕುರಿತಾದ 'ಮಣಿಸರ' ಎರಡು ಪುಸ್ತಕಗಳನ್ನು ಖರೀದಿಸಿದ್ದರು. ಅವರು ನನ್ನ ಬಹುತೇಕ ಪುಸ್ತಕಗಳ ಓದುಗ ಕೂಡಾ. ಅವರ ಮನೆಯಲ್ಲಿದ್ದ ಚಿಕ್ಕ ಗ್ರಂಥಾಲಯವೇ ಅಕ್ಷರಪ್ರೀತಿಗೆ ಸಾಕ್ಷಿ.

ಈಚೆಗೆ ಅವರ ಮನೆಯಲ್ಲಿ ಸಾಹಿತ್ಯ ಕಾರ್ಯಕ್ರಮ. ಎರಡೂ ಪುಸ್ತಕಗಳ ಐವತ್ತೈವತ್ತು ಪ್ರತಿಗಳನ್ನು ಹಂಚಲು ಖರೀದಿಸಿದ್ದರು. 'ಕಾಫಿ, ಚಹ ಹೇಗೂ ಇದ್ದೇ ಇರುತ್ತದೆ. ಮನೆಗೆ ಒಯ್ಯಲು ಪುಸ್ತಕಗಳ ಉಡುಗೊರೆ. ಬಂದವರೆಲ್ಲರೂ ಅಕ್ಷರ ಪ್ರೇಮಿಗಳೇ' ಎಂದು ಹಿಮ್ಮಾಹಿತಿ ನೀಡಿದ್ದರು.

ಅವರ ಸಮ್ಮನಸ್ಸನ್ನು ಮನಸಾ ಕೊಂಡಾಡಿದೆ. 'ನನ್ನ ಪುಸ್ತಕವನ್ನು ಖರೀದಿಸಿದ್ದಾರೆ' ಎನ್ನುವುದರಿಂದ ಅಲ್ಲ. ಮಾರುಕಟ್ಟೆಯಲ್ಲಿ ನೂರಾರು ಅಲ್ಲ, ಸಾವಿರಾರು; ಸಿದ್ಧ, ಪ್ರಸಿದ್ಧ ಲೇಖಕರ ಪುಸ್ತಕಗಳು ಪೈಪೋಟಿಯಲ್ಲಿ ಇಲ್ವಾ.  ಅಂತಹುದರಲ್ಲಿ ನನ್ನ ಪುಸ್ತಕವನ್ನೇ ಖರೀದಿಸಿದ್ದಾರೆ ಎಂದರೆ ಹೆಮ್ಮೆ.  

ಸ್ನೇಹ, ವಿಶ್ವಾಸ ಹಾಗೂ ಬಂಧುತ್ವಕ್ಕೆ 'ಮಾನ ನೀಡುವುದು' ಅಂದರೆ ಇದೇ ಅಲ್ವಾ. ಎಲ್ಲೋ ಒಂದು ಕಡೆ ನಮ್ಮನ್ನು ಪ್ರೀತಿಸುವವರು ಇದ್ದಾರೆ ಖಂಡಿತ. 

ಕೀರ್ತಿಶೇಷ ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್ಟರ ಒಂದು ಮಾತು ನೆನಪಾಯಿತು.. "ಕುಳಿತ ಪ್ರೇಕ್ಷಕರು ರಂಗದ ಅಭಿನಯವನ್ನು ನೋಡ್ತಾರೋ ಇಲ್ವೋ ಬೇರೆ ಮಾತು. ಅವರ ಮಧ್ಯೆ ಒಬ್ಬ ನನ್ನ ಅಭಿನಯವನ್ನು ಮೆಚ್ಚುವವನಿದ್ದಾನೆ. ಅವನಿಗಾಗಿ ನಾನು ಅಭಿನಯ ಮಾಡಲೇ ಬೇಕು."

ಆನಂದ್ ಅವರ ಸಮ್ಮನಸ್ಸಿಗೆ ಶರಣು. ಆನಂದ್ ಹಾದಿಯಲ್ಲಿ ಸಾಗೋಣವೇ. ನೂರು ಬೇಡ, ಹತ್ತು ಪುಸ್ತಕ ಸಾಕು! ಏನಂತೀರಿ

(ನಾ. ಕಾರಂತ ಪೆರಾಜೆ : 9448625794)


Tuesday, May 28, 2024

'ಫಲಪ್ರದ' : ಒಂದು ಖುಷಿಯ ಕ್ಷಣ


ಮೇ 24ರಿಂದ 26 ಪುತ್ತೂರಿನಲ್ಲಿ ಹಲಸು ಮೇಳ ಸಂಪನ್ನವಾಯಿತು. ಬಂಟ್ವಾಳ ತಾಲೂಕಿನ ಕೇಪು ಉಬರು-ಮುಳಿಯ 'ಹಲಸು ಸ್ನೇಹಿ ಕೂಟ' ಕಲಾಪಗಳ ಹಿನ್ನೋಟ 'ಫಲಪ್ರದ ಪುಸ್ತಕ' ಅನಾವರಣಗೊಂಡಿತ್ತು.

ಹನ್ನೊಂದು ವರುಷಗಳ ಹಿಂದೆ ಕೂಟದ ಆಯೋಜನೆಯಲ್ಲಿ ಮುಳಿಯ ಶಾಲೆಯಲ್ಲಿ 'ಕಾಡು ಮಾವಿನ ಮೆಲುಕು' ಕಾರ್ಯಕ್ರಮ ಜರುಗಿತ್ತು. ನನ್ನಲ್ಲಿದ್ದ ಚಿಕಣಿ ಕ್ಯಾಮರಾದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿದ್ದೆ. ಅದೊಂದು ಹವ್ಯಾಸ. ಬೇಕೋ ಬೇಡ್ವೋ ಬೇರೆ ಮಾತು. ಹಾಗೆಂದು 'ರೈಸಲು' ಅಲ್ಲ. ದಾಖಲೆಗಾಗಿ ಇರಲಿ ಎನ್ನುವ ಕಾರಣಕ್ಕಾಗಿ.

ಅಂದು ಕ್ಲಿಕ್ಕಿಸಿದ ಒಂದು ಚಿತ್ರ 'ಫಲಪ್ರದ'ದಕ್ಕೆ ಆಯ್ಕೆ ಮಾಡಿದೆ. ಚಿತ್ರ ಸಾಮಾನ್ಯವಾಗಿತ್ತು. ಅಧ್ಯಾಪಕ, ಕಲಾವಿದ ಅರವಿಂದ ಕುಡ್ಲರು ತುಂಬಾ ಸುಂದರವಾಗಿ ಚಿತ್ರವನ್ನು ಕ್ಲಿಕ್ಕಿಸಿದ್ದಾರೆಂದು ರಾಧಾ ಮುಳಿಯರಿಂದ ತಿಳಿಯಿತು. ಅವರಲ್ಲಿ ವಿನಂತಿಸಿ ಚಿತ್ರವನ್ನು ಪಡಕೊಂಡೆ.

ಇದನ್ನು ಗುಣಮಟ್ಟಕ್ಕೆ ಏರಿಸಿ, ವಿನ್ಯಾಸಿಸಿದವರು ಹೆಮ್ಮೆಯ ಕಲಾವಿದ ಶಿವರಾಮ್ . (ಎಸ್ಸಾರ್ ಪುತ್ತೂರು). ಚಿತ್ರದಲ್ಲಿರುವ ರೂಪದರ್ಶಿಗಳು - ವರ್ಚಸ್ವಿ ಮತ್ತು ನಿಹಾರಿಕ. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಇವರಿಬ್ಬರ ಉಪಸ್ಥಿತಿ ಇರಬೇಕಿತ್ತೆನ್ನುವ ನಿರೀಕ್ಷೆಯಿತ್ತು. ಹಾಗಾಗಲಿಲ್ಲ.

ಮೇಳದ ಎರಡನೇ ದಿವಸ ಪಾಲಕರೊಂದಿಗೆ ಇವರಿಬ್ಬರೂ ಪ್ರತ್ಯಕ್ಷ! ಪುಸ್ತಕವನ್ನು ಹಿಡಿದುಕೊಂಡು ಸಂಭ್ರಮಿಸಿದರು. ಅವರ ನೀರೀಕ್ಷೆಯಲ್ಲಿದ್ದ ಲೇಖಕನಿಗೂ ಹೇಗಾಗಬೇಡ.. ನೀವೇ ಊಹಿಸಿ. ಖುಷಿಯ ಕ್ಷಣ.

ಫಲಪ್ರದ ಪುಸ್ತಕ ಬಿಡುಗಡೆಯೂ ಮೇಳದೊಂದಿಗೆ ಹೊಸೆದ ಚಿಕ್ಕ ಕಲಾಪ. ಹಲಸು ಸ್ನೇಹಿ ಕೂಟದೊಂದಿಗೆ ಮನಸಾ ಹದಿಮೂರು ವರುಷಗಳ ನಂಟು. ಅಲ್ಲಿನ ಕಾರ್ಯಕ್ರಮಗಳ ವರದಿ ಅಲ್ಲ, ಸಾರವನ್ನು ಅಡಿಕೆ ಪತ್ರಿಕೆಯಲ್ಲಿ ದಾಖಲಿಸುತ್ತಾ ಬಂದಿದ್ದೆ. ಅದನ್ನೆಲ್ಲಾ ಒಟ್ಟು ಸೇರಿಸಿದ ಗುಚ್ಛ 'ಫಲಪ್ರದ'.

ಕೂಟದ ಎಲ್ಲರೂ ಸುಮನಸ ಸ್ನೇಹಿತರು. ಎಂದೂ ಹಗುರವಾಗಿ ಕಂಡವರಲ್ಲ, ಮಾತನಾಡಿದವರಲ್ಲ. ದರ್ಪವನ್ನು ತೋರಿದವರಲ್ಲ. ಚುಚ್ಚಿ ಮಾತನಾಡಿದವರಲ್ಲ. ಕಷ್ಟ ಕಾಲದಲ್ಲಿ ಬೊಗಸೆ ತುಂಬಿಸಿದವರು. ತಮ್ಮನಂತೆ, ಅಣ್ಣನಂತಿರುವ ಬಾಂಧವ್ಯ. ಭಾವ, ಗುಣ, ಸಹಕಾರಕ್ಕೆ ಹೇಗೆ ಪ್ರತಿಫಲ ಸಲ್ಲಿಸಲಿ? ಕಾಲ ಕೂಡಿ ಬಂತು, 'ಫಲಪ್ರದ' ಪುಸ್ತಕ ಅವರ ಹಸ್ತದಲ್ಲಿಟ್ಟಾಗ ತೃಪ್ತಭಾವ. ಪುಸ್ತಕ ಪ್ರಕಟಣೆಯ ವೆಚ್ಚವನ್ನು ಕೂಟದ ಸ್ನೇಹಿತರು ಭರಿಸಿದ್ದಾರೆ.

ಫಲಪ್ರದ : 'ಹಲಸು ಸ್ನೇಹಿ ಕೂಟ' ಹಿನ್ನೋಟದ ಹೆಜ್ಜೆಗಳು. ಒಂದು ದಾಖಲಾತಿ. ಪುಸ್ತಕಕ್ಕಾಗಿ ಬೇಡಿಕೆ ಸಲ್ಲಿಸಿದವರ ಪಟ್ಟಿ ದೊಡ್ಡದಿದೆ. ಇದು 'ಲಾಭ ಮಾಡಲು' ಪ್ರಕಟಿಸಿದ ಪುಸ್ತಕವಲ್ಲ. ಹಾಗೆಂದು ಉಚಿತವಾದರೆ 'ನಂಗೊಂದಿರಲಿ, ಮನೆಗೆ ಇನ್ನೊಂದಿರಲಿ' ಎಂಬ ಮನವಿ ರಾಚುತ್ತದೆ!

ಒಬ್ಬ ವ್ಯಕ್ತಿ, ಆತನಲ್ಲಿರುವ ಕಲೆ, ಪ್ರಕಟಗೊಂಡ ಕೃತಿ..ಗಳ ಸ್ವೀಕಾರಕ್ಕೆ ಜಾತಿ, ಪಂಥ, ಅಂತಸ್ತು, ಪ್ರತಿಷ್ಠೆಗಳೇ ಮಾನದಂಡವಾಗಬಹುದಾದ ಕಾಲಘಟ್ಟದಲ್ಲಿ 'ಪುಸ್ತಕವನ್ನು ಜನರು ಇಷ್ಟಪಡಬೇಕು' ಎನ್ನುವ ನಿರೀಕ್ಷೆಗಳೇ ಢಾಳಾಗಿ ಕಾಣುತ್ತದೆ.

ಬೇರೆ ಬೇರೆ ಸಂದರ್ಭದಲ್ಲಿ ಇದೆಲ್ಲಾ ಅನುಭವಕ್ಕೆ ಬಂದ ವಿಚಾರಗಳು. ಅಂತಹ ಹತ್ತಾರು ಘಟನೆಗಳಿವೆ. ಮುಂದೆ ಬರೆಯುವೆ.