Tuesday, June 28, 2011

ಧರ್ಮಸ್ಥಳ ಹಲಸು ಮೇಳ








ಜೂನ್ 26, 27ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಹಲಸಿನ ಹಬ್ಬ. ಹಿರಿಯ ಕೃಷಿಕ ಡಾ.ಎಲ್.ಸಿ.ಸೋನ್ಸ್ ಅವರಿಂದ ಉದ್ಘಾಟನೆ. ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ. ಬೆಂಗಳೂರು ಕೃಷಿ ವಿವಿ ಉಪಕುಲಪತಿ ಡಾ.ನಾರಾಯಣ ಗೌಡರಿಂದ ದಿಕ್ಸೂಚಿ ಭಾಷಣ. ಡಿ.ಹರ್ಷೇಂದ್ರ ಕುಮಾರ್, ಡಾ.ಎಲ್.ಎಚ್.ಮಂಜುನಾಥ್, ಹೆಚ್. ಗೋಪಾಲ ಭಂಡಾರಿ, ಎಸ್.ಡಿ.ಸಂಪತ್ ಸಾಮ್ರಾಜ್ಯ ಉಪಸ್ಥಿತಿ.

'ಹಲಸಿನ ಮರಗಳು ನಾಟಾಕ್ಕಾಗಿ ನಾಶವಾಗುತ್ತಿವೆ. ದೇವಸ್ಥಾನ, ಮನೆ, ಮಂದಿರಗಳ ರಚನೆಗಳಿಗೆ ಹಲಸಿನ ಮರಗಳನ್ನೇ ಹೆಚ್ಚು ಬಳಸಲಾಗುತ್ತದೆ. ಹೀಗೆ ಕಡಿದ ಮರದ ಬದಲಿಗೆ ಹೊಸತಾಗಿ ನೆಡುವ ಪರಿಪಾಠ ಬಂದಿಲ್ಲ. ಕಳೆದ ಮೂರು ವರುಷಗಳಿಂದ ಎರಡು ಸಾವಿರಕ್ಕೂ ಮಿಕ್ಕಿ ಹಲಸಿನ ಗಿಡಗಳನ್ನು ಧರ್ಮಸ್ಥಳ ಸುತ್ತಮುತ್ತ ನೆಟ್ಟಿದ್ದೇವೆ. ಯೋಜನೆಯ ಮೂಲಕ ಲಕ್ಷಾಂತರ ಗಿಡಗಳನ್ನು ಹಂಚುವ ಕೆಲಸ ನಿಕಟ ಭವಿಷ್ಯದಲ್ಲಿ ರೂಪಿಸುತ್ತೇವೆ,' ಹೀಗಂದವರು ಡಾ.ಹೆಗ್ಗಡೆಯವರು.

ಹಲಸು ಆಂದೋಳನದ ಶ್ರೀ ಪಡ್ರೆ, ಅರಭಾವಿಯ ಡಾ.ಜಗದೀಶ್, ಕಸಿ ತಜ್ಞ ಗುರುರಾಜ್ ಬಾಳ್ತಿಲ್ಲಾಯ, ತೂಬುಗೆರೆ ಹಲಸು ಬೆಳೆಗಾರರ ಸಂಘದ ರವಿಕುಮಾರ್ ಇವರಿಂದ ಹಲಸಿನ ವಿವಿಧ ಆಯಾಮಗಳ ಕುರಿತು ವಿಚಾರ. ಬೆಂಗಳೂರು ಜಿಕೆವಿಕೆಯ ಶ್ರೀಮತಿ ಉಷಾ ರವೀಂದ್ರ, ಶಿರಸಿಯ ಶ್ರೀಮತಿ ಮಮತಾ ವಿನಾಯಕ ಭಟ್ ಇವರಿಂದ ಮೌಲ್ಯವರ್ಧನಾ ಪ್ರಾತ್ಯಕ್ಷಿಕೆ.

ಸಖರಾಯಪಟ್ಟಣ, ತೂಬುಗೆರೆ, ತರೀಕೆರೆಗಳ ಹಲಸಿನೊಂದಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧ ತಳಿಗಳ ಹಲಸಿನ ಪ್ರದರ್ಶನ. ರುಚಿಯಷ್ಟೇ ಹೆಸರುಗಳಲ್ಲಿಯೂ ವೈವಿಧ್ಯ! ಜೇನುತುಪ್ಪ ಹಲಸು, ಕೆಂಪು ಹಲಸು, ಏಕಾದಶಿ ಹಲಸು, ಕರಡಿ ಹಲಸು, ಕೋತಿ ಹಲಸು..ಹೀಗೆ. ಪ್ರಸಿದ್ಧ 'ಕಾಚಹಳ್ಳಿ' ಹಲಸಿನ ಯಜಮಾನ ಕಾಚಹಳ್ಳಿ ನರಸಿಂಹಯ್ಯನವರಿಗೆ ತಮ್ಮ ಹಲಸಿನ ಕುರಿತು ಮಾತನಾಡಲು ಕುತೂಹಲ, ಹೆಮ್ಮೆ.

ಹಲಸಿನ ಹಣ್ಣಿನ ಹಪ್ಪಳ, ಬೀಜದ ಹೋಳಿಗೆ, ಎಳೆ ಗುಜ್ಜೆಯ ಉಪ್ಪಿನಕಾಯಿ, ಹಣ್ಣಿನ ಇಡ್ಲಿ, ದೋಸೆ, ಗಟ್ಟಿ, ಮುಳುಕ, ಹಲಸಿನ ಮಂಚೂರಿ ಸ್ಟಾಲ್ಗಳಲ್ಲಿ ರಶ್. ರಿಪ್ಪನ್ಪೇಟೆಯ ಜವಳಿಯವರ ಕಸಿ ಗಿಡಗಳ ಮಳಿಗೆಯಲ್ಲೂ ಒಂದಷ್ಟು ಆಸಕ್ತರು.

ತೂಬುಗೆರೆ ರವಿಕುಮಾರ್ ತಮ್ಮ ಮಳಿಗೆಯಲ್ಲಿ ಬ್ಯುಸಿ. ಹಲಸನ್ನು ಕೊಯ್ದು, ಸೊಳೆ ತೆಗೆದು, ಪ್ಲಾಸ್ಟಿಕ್ ಪ್ಯಾಕೆಟ್ ಮಾಡುವುದರಲ್ಲೇ ತಲ್ಲೀನ. ಮಾತಿಗೆಳೆದರೂ ಮಾತನಾಡದಷ್ಟು ಕೈಕೆಲಸ. ಒಂದು ಸೊಳೆಗೆ ಮೂರು ರೂಪಾಯಿ. 'ನಮ್ಮೂರಿಗಿಂತ ಇದು ಚೆನ್ನಾಗಿದೆ' ಎನ್ನುತ್ತಾ ಸೊಳೆಗಳನ್ನು ಖರೀದಿಸಿ ತಿನ್ನುವ ಹಲಸು ಪ್ರಿಯರು ಗಮನ ಸೆಳೆಯುತ್ತಿದ್ದರು. 'ಇಲ್ಲಿ ಫ್ರೀ ಬಿಡಿ, ಮನೆ ಬಾಗಿಲಿಗೆ ಒಯ್ದು ಕೊಟ್ಟರೂ ಹಲಸಿನ ಹಣ್ಣು ಬೇಡ. ಅಲ್ನೋಡಿ. ಮೂರು ರೂಪಾಯಿ ಕೊಟ್ಟು ಸೊಳೆ ತಿನ್ತಾರೆ,' ಎಂದು ಮುಳಿಯ ವೆಂಕಟಕೃಷ್ಣ ಶರ್ಮರಿಂದ ಛೇಡನೆ.

ಬಾಳೆ ಎಲೆಯನ್ನು ಬಾಡಿಸಿ 8-10 ಹಣ್ಣನ್ನು ಪ್ಯಾಕ್ ಮಾಡಿದ್ದರು. ಚಹಾದೊಂದಿಗೆ ಹಣ್ಣಿನ ಪ್ಯಾಕೆಟ್. ಇನ್ನೊಂದೆಡೆ ಸೊಳೆಯನ್ನು ವಿತರಿಸುವಾಗ ಕೈಗೆ ಪ್ಲಾಸ್ಟಿಕ್ ತೊಟ್ಟೆಯ 'ಗ್ಲೌಸ್' ತೊಟ್ಟಿರುವುದು ಉತ್ತಮ ಬೆಳವಣಿಗೆ. ಮಧ್ಯಾಹ್ನದೂಟದಲ್ಲೂ ಹಲಸಿನ ಒಂದೆರಡು ಐಟಂ ಇತ್ತು. 'ಹಲಸು ಮೇಳ ಅಂದಾಗ ಅನ್ನ, ಮಜ್ಜಿಗೆ ಇವೆರಡು ಹೊರತುಪಡಿಸಿ ಮಿಕ್ಕಿದ್ದೆಲ್ಲಾ ಹಲಸಿನದ್ದೇ ಖಾದ್ಯಗಳು ಆಗಬೇಕಿತ್ತು,' ಎಂದು ಕಾಸರಗೋಡಿನ ಕೃಷಿಕ ಕೇಶವ ಭಟ್ಟರ ಅಭಿಪ್ರಾಯ.

Sunday, June 26, 2011

ಹಲಸಿನ 'ರುಚಿ ನೋಡಿ ತಳಿ ಆಯ್ಕೆ'








ಕಾಸರಗೋಡು ಜಿಲ್ಲೆಯ ಮೀಯಪದವು ಚೌಟರ ಚಾವಡಿಯಲ್ಲೊಂದು (ಜೂನ್ ೧೨, ೨೦೧೧) 'ಹಲಸಿನ ಹಬ್ಬ'. ಸುತ್ತಲಿನ ಊರುಗಳ ಸುಮಾರು ನಲವತ್ತು ವಿವಿಧ ಹಲಸುಗಳು ಒಡಲನ್ನು ಸೀಳಿಸಿಕೊಂಡು ಸೊಳೆಯಿಂದ ಕಳಚಿಕೊಂಡಿದ್ದುವು. ತೀರ್ಪುಗಾರರ ಆಯ್ಕೆಗಾಗಿ ಕಾಯುತ್ತಿದ್ದುವು. ಒಂದಷ್ಟು ಮಂದಿ ಹಲಸು ಪ್ರಿಯರು ವೀಕ್ಷಕರು.

ರುಚಿ, ಬಣ್ಣ, ನೋಟ, ಫಿಲ್ಲಿಂಗ್, ಗಾತ್ರ ಮೊದಲಾದ ಮಾನದಂಡ ಅನುಸರಿಸಿ ಮೊದಲ ಐದು ಬಹುಮಾನಗಳು. ಐವರು ತೀರ್ಪುಗಾರರು. 'ಈಗ ಮೌಲ್ಯಮಾಪನಕ್ಕೆ ಸುರು. ಎಲ್ಲಾ ಹಲಸು ಪ್ರಿಯರು ಚಾವಡಿಯ ಹೊರಭಾಗದ ಆಸನದಲ್ಲಿ ಆಸೀನರಾಗಬೇಕು,' ಹಬ್ಬದ ರೂವಾರಿ ಡಾ.ಡಿ.ಸಿ.ಚಾಟರಿಂದ ಸಾತ್ವಿಕ ಆದೇಶ. ಎಲ್ಲರೂ ಆಸೀನರಾಗುತ್ತಿದ್ದಂತೆ ಹಲಸಿನ ಹಣ್ಣಿನ ಗಟ್ಟಿ ಮತ್ತು ಪಾಯಸ ಸಮಾರಾಧನೆ. ಜತೆ ಜತೆಗೆ ಒಳಗಿದ್ದ ಹಣ್ಣುಗಳ ಜಾತಕ ಪರಿಶೀಲನೆಯೂ ನಡೆಯುತ್ತಿತ್ತು.

ದೇರಂಬಳ ತ್ಯಾಂಪಣ್ಣ ಶೆಟ್ಟಿಯವರ ಹಲಸಿನ ಹಣ್ಣಿಗೆ ಪ್ರಥಮ ಸ್ಥಾನ. ಉಂಬಳಿಕೋಡಿ ಪದ್ಮನಾಭ ರೈ, ಕಣಕ್ಕೂರು ತಿರುಮಲೇಶ್ವರ ಭಟ್, ಬೊಳುವಾಯಿ ಬಿ.ಟಿ.ಭಂಡಾರಿ ಮತ್ತು ಬೊಳುವಾಯಿ ಲಕ್ಷ್ಮೀನಾರಾಯಣ ಇವರ ಹಲಸುಗಳಿಗೆ ನಂತರದ ಸ್ಥಾನ. ಎಲ್ಲಾ ವಿಜೇತರಿಗೆ ನಗದು ಬಹುಮಾನ.

ಇದರಲ್ಲೇನು ವಿಶೇಷ? ಸ್ಥಳೀಯ ಮಟ್ಟದ ಉತ್ತಮ ಹಲಸಿನ ಆಯ್ಕೆಗಾಗಿ ಈ ಸ್ಪರ್ಧೆ. 'ಸ್ಪರ್ಧೆಗೆ ಬಂದಿರುವುದು ಕೇವಲ ನಲವತ್ತು. ಆದರೆ ಬಾರದಿರುವುದು ಎಷ್ಟೋ ಇದೆ. ನಮ್ಮೂರಿನ ಉತ್ತಮ ಹಲಸಿನಸ ಮರವನ್ನು ಆಯ್ಕೆ ಮಾಡಿ, ಕಸಿ ಕಟ್ಟಿ ಅಭಿವೃದ್ಧಿ ಪಡಿಸುವುದು ಉದ್ದೇಶ. ಇದರಿಂದಾಗಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಾಧ್ಯ,' ಹಬ್ಬದ ಆಶಯವನ್ನು ಚೌಟರು ಹೇಳುತ್ತಾರೆ. ಇದು ರೈತ ಮಟ್ಟದ 'ರುಚಿ ನೋಡಿ ತಳಿ ಆಯ್ಕೆ' ಪ್ರಕ್ರಿಯೆ.

ಸ್ಥಳೀಯವಾಗಿ ಆಹಾರ ಭದ್ರತೆ ನೀಡಬಲ್ಲ ಹಲಸು ನಿಧಾನವಾಗಿ ಮನದ ಕದ ತಟ್ಟುತ್ತಿದೆ. 'ಒಂದಾದರೂ ಗಿಡ ಇರಲಿ' ಎಂಬ ಪ್ರಕ್ರಿಯೆ ಮತ್ತು ಪ್ರಜ್ಞೆ ಬರಲಾರಂಭಿಸಿದೆ. ಕಸಿ ಗಿಡಗಳ ಅರಸುವಿಕೆ ಶುರುವಾಗಿದೆ. ಕಸಿ ತಜ್ಞರ ಹುಡುಕಾಟ ತೀವ್ರವಾಗಿದೆ. ಹಲಸಿನ ಮಾತುಕತೆಗಳಿಂದ ರೈತರೊಳಗೆ ಪರಸ್ಪರ ಕೊಂಡಿ ನಿರ್ಮಾಣವಾಗುತ್ತಿದೆ. ಇವೆಲ್ಲದರ ಫಲಶ್ರುತಿಯ ಒಂದೆಳೆ ಮೀಯಪದವಿನ ಹಬ್ಬ.
ಈಚೆಗೆ ತಿರುವನಂತಪುರದಲ್ಲಿ ರಾಷ್ಟ್ರೀಯ ಹಲಸು ಮೇಳ ಜರುಗಿತ್ತು. ಆಹಾರ ಸುರಕ್ಷೆಯಲ್ಲಿ ಹಲಸಿನ ಪಾತ್ರದ ಕುರಿತು ಮೂರು ದಿವಸ ಚರ್ಚೆ ನಡೆದಿತ್ತು. 'ಇಂತಹ ಚರ್ಚೆಯನ್ನು ನಮ್ಮೂರಲ್ಲೂ ಆರಂಭಿಸಬೇಕು' ಎಂಬ ಚೌಟರ ಮನದ ತುಡಿತದ ಮೂರ್ತ ರೂಪ ಹಲಸು ಹಬ್ಬ. ತಮ್ಮಂದಿರಾದ ಪ್ರಭಾಕರ ಚೌಟ, ಮನೋಹರ ಚೌಟರ ಹೆಗಲೆಣೆ. ಸ್ಥಳೀಯ ಸಂಸ್ಥೆಗಳ ಸಹಯೋಗ.

ಬಿದ್ದು ಹಾಳಾಗಿ ಹೋಗುತ್ತಿರುವ ಹಲಸಿನ ಮೌನಕ್ಕೆ ನೂರಕ್ಕೂ ಮಿಕ್ಕಿ ಹಲಸು ಪ್ರಿಯರು ಮಾತಾಗಲು ಪ್ರಯತ್ನಿಸಿದರು. ಈ ಋತುವಿನಲ್ಲಿ ಎರಡೂವರೆ ಟನ್ನಿಗಿಂತಲೂ ಅಧಿಕ ಹಲಸಿನ ಸೊಳೆಯನ್ನು ಮಾರಾಟ ಮಾಡಿದ ಅಡ್ಕತ್ತಿಮಾರ್ ಸುಬ್ರಹ್ಮಣ್ಯ ಭಟ್ಟರ ಹಲಸು ಗಾಥೆಗೆ ಕಿವಿಯಾದವರೇ ಅಧಿಕ. ಹಬ್ಬಕ್ಕೆಂದೇ ತೊಟ್ಟೆತ್ತೋಡಿ ಪ್ರೇಮಾ. ಕೆ. ಭಟ್ಟರು ಹಲಸಿನ ರೆಚ್ಚೆಯ 'ಜೆಲ್ಲಿ' ತಯಾರಿಸಿ ತಂದಿದ್ದರು. ಸಭೆಯ ಆರಂಭಕ್ಕೆ ಮೊದಲೇ ಜೆಲ್ಲಿಯ ತಟ್ಟೆ ಖಾಲಿ.

ಜೆಲ್ಲಿಯ ಸವಿಗೆ ಮಾರುಹೋದವರು ರೆಸಿಪಿಯನ್ನು ಕಾಗದಕ್ಕಿಳಿಸುತ್ತಿದ್ದರು. 'ಹಲಸಿನಿಂದ ನಲವತ್ತು ವೆರೈಟಿ ಖಾದ್ಯವನ್ನು ಮಾಡುತ್ತೇನೆ' ಎನ್ನುವಾಗ ಪ್ರೇಮಾ ಅವರಿಗೆ ಖುಷಿ. ಈಚೆಗೆ ಹವಾಯ್ಯ ಕೆನ್ ಲವ್ ಕನ್ನಾಡಿಗೆ ಬಂದಿದ್ದರು. ಅವರು ತಂದಿದ್ದ ಹಲಸಿನ ಹಣ್ಣಿನ ಒಣಸೊಳೆ ಮತ್ತು ಅದರ ರುಚಿಗೆ ಕೃಷಿಕ ಕೃಷ್ಣರಾಜ್ ಗಿಳಿಯಾಲ್ ಮಾರುಹೋಗಿದ್ದರು. ಸ್ವತಃ ತಾವೇ ಒಣಸೊಳೆಯನ್ನು ತಯಾರಿಸಿ ಮೀಯಪದವಿಗೆ ತಂದಿದ್ದು, ರುಚಿ ತೋರಿಸಿದರು.

ಎಪ್ರಿಲ್ ಮಧ್ಯಭಾಗದಲ್ಲಿ ಅಳಿಕೆ ಸನಿಹದ ವೆಂಕಟಕೃಷ್ಣ ಶರ್ಮರು ತಮ್ಮ ಮನೆಯಂಗಳದಲ್ಲಿ ಈ ರೀತಿಯ ತಳಿ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ನಡೆಸಿದ್ದರು. ಅಲ್ಲೂ ಮೂರ್ನಾಲ್ಕು ಉತ್ತಮ ಗಿಡಗಳನ್ನು ಪತ್ತೆ ಮಾಡಿ ಕಸಿ ಕಟ್ಟುವ ಪ್ರಯತ್ನ. ಈಗಾಗಲೇ ಶರ್ಮರು ಒಂದೆಕ್ರೆಯಲ್ಲಿ ಹಲಸಿನ ತೋಟಕ್ಕೆ ನಾಂದಿ ಹಾಡಿದ್ದಾರೆ. ಇನ್ನೂ ಮೂರೆಕ್ರೆಯ ಯೋಚನೆ-ಯೋಜನೆ ಸಿದ್ಧವಾಗುತ್ತಿದೆ.
'ನೋಡಿ, ಒಂದೆರಡು ವರುಷದಲ್ಲಿ ನನ್ನ ತೋಟದಲ್ಲೂ ಹಲಸಿನ ಹಲಸಿನ ತಳಿ ಬ್ಯಾಂಕ್ ಆಗುತ್ತದೆ' ಎನ್ನುತ್ತಾರೆ ಚೌಟರು. ಅಡ್ಯನಡ್ಕದ ವಾರಣಾಶಿ ಕೃಷ್ಣಮೂರ್ತಿಯವರು ಕೂಡಾ ಹಲಸಿನ ತೋಟ ಎಬ್ಬಿಸುವ ಉತ್ಸಾಹದಲ್ಲಿದ್ದಾರೆ.

ಬಿಡಿಬಿಡಿಯಾಗಿದ್ದ ಹಲಸು ಪ್ರಿಯರನ್ನು ಹಬ್ಬ ಒಂದೇ ಸೂರಿನಡಿ ತಂದಿದೆ. ದೂರವಾಣಿ, ಮೊಬೈಲ್, ಮಿಂಚಂಚೆಗಳು ವಿನಿಮಯವಾಗಿದೆ. ನಿರ್ಲಕ್ಷಿತ ಹಣ್ಣಿಗೆ ಪುನಶ್ಚೇತನ ಕೊಡುವ 'ಹಲಸಿನ ಹುಚ್ಚಿರುವ' ಕೃಷಿಕರು ಒಂದಾಗುತ್ತಿದ್ದಾರೆ. ಸ್ಥಳೀಯ ಆಹಾರ ಭದ್ರತೆಯನ್ನು ಒದಗಿಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ ಹಲಸಿನ ಕುರಿತಾದ ನಮ್ಮ 'ಮೈಂಡ್ಸೆಟ್' ಬದಲಾಗಬೇಕು.
ಈಗಾಗಲೇ ಮೂವತ್ತಕ್ಕೂ ಮಿಕ್ಕಿ ಹಲಸಿನ ಮೇಳಗಳು ಕೇರಳ ಮತ್ತು ಕರ್ನಾಟಕಗಳಲ್ಲಾಗಿದೆ. ಕೃಷಿ ವಿವಿಯ ಕದ ತಟ್ಟಿದೆ. ಬೆಂಗಳೂರಿನ ಸನಿಹದ ತೂಬುಗೆರೆಯಲ್ಲಿ ಹಲಸು ಬೆಳೆಗಾರರ ಸಂಘ ಸ್ಥಾಪನೆಯಾಗಿದೆ. ಇತ್ತ ಇಡುಕ್ಕಿಯಲ್ಲೂ 'ಜಾಕ್ಕೋ' ಸಂಸ್ಥೆ ರೂಪು ಪಡೆಯುವುದರಲ್ಲಿದೆ.

Tuesday, June 21, 2011

ಧರ್ಮಸ್ಥಳದಲ್ಲಿ ಹಲಸಿನ ಹಬ್ಬ

ಜೂನ್ 26, 27ರಂದು ಧರ್ಮಸ್ಥಳದಲ್ಲಿ ರಾಜ್ಯಮಟ್ಟದ ಹಲಸಿನ ಹಬ್ಬ. 'ಹಲಸಿನ ಭವಿಷ್ಯ ಮತ್ತು ಅವಕಾಶಗಳು' ಕುರಿತು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಂದ ಪವರ್ ಪಾಯಿಂಟ್ (ಪಪ) ಪ್ರಸ್ತುತಿ. ಕಸಿ ತಜ್ಞ ಗುರುರಾಜ್ ಬಾಳ್ತಿಲ್ಲಾಯರಿಂದ ಹಲಸಿನ ಗಿಡಗಳ ಕಸಿ ವಿಧಾನಗಳು ಮಾಹಿತಿ.

'ಹಲಸಿನ ತಳಿಗಳ ಬೇಸಾಯ ಮತ್ತು ಕೊಯ್ಲೋತ್ತರ ಸಂಸ್ಕರಣೆ ಕುರಿತು ಅರಬಾವಿ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕ ಕಾಲೇಜಿನ ಜಗದೀಶ್ ಎಸ್.ಎಲ್. ಇವರಿಂದ ಪಪ, ತೂಬುಗೆರೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್, 'ಹಲಸಿನ ಬೆಳೆಗಾರರ ಸಂಘದ ರಚನೆ ಮತ್ತು ಕಾರ್ಯಚಟುವಟಿಕೆಗಳು' ಕುರಿತು ಮಾಹಿತಿ.

ಮೌಲ್ಯವರ್ಧನೆ, ಪ್ರಾತ್ಯಕ್ಷಿಕೆ, ಖಾದ್ಯಗಳ ಪ್ರದರ್ಶನ, ಹಲಸಿನ ವಿವಿಧ ತಳಿಗಳ ಪ್ರದರ್ಶನ, ಸ್ಪರ್ಧೆ.. ಹೀಗೆ ಎರಡು ದಿವಸ ಪೂರ್ತಿ ಕಲಾಪ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬ್ರಹ್ಮಾವರ ಮತ್ತು ಮಂಗಳೂರಿನ ಕೆ.ವಿ.ಕೆ., ಮತ್ತು ಇತರರ ಸಹಯೋಗ.

ದಿನಾಂಕ 26, ಭಾನುವಾರದಂದು ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಬೆಳಿಗ್ಗೆ ಗಂಟೆ 10ಕ್ಕೆ ಪದ್ಮ ಭೂಷಣ, ರಾಜರ್ಷಿ, ಡಾ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೃಷಿಕ ಡಾ.ಎಲ್.ಸಿ.ಸೋನ್ಸ್ ರಿಂದ ಮೇಳದ ಉದ್ಘಾಟನೆ. ಬೆಂಗಳೂರು ಕೃಷಿ ವಿವಿಯ ಉಪಕುಲತಿ ಡಾ.ಕೆ.ನಾರಾಯಣ ಗೌಡರಿಂದ ದಿಕ್ಸೂಚಿ ಭಾಷಣ.

Thursday, June 16, 2011

ಶಿರಸಿ ಹಲಸು ಮೇಳದ ಹೈಲೈಟ್ : 'ತಳಿ ಬ್ಯಾಂಕ್'





'ಎರಡು ದಿವಸದ ಹಲಸು ಮೇಳದ ಸಂದರ್ಭದಲ್ಲಿ ರೈತರಿಂದ ಇಪ್ಪತ್ತು ಟನ್ ಹಲಸಿನ ಹಣ್ಣು ಸಂಗ್ರವಾಗಿ ಮಾರಿಹೋಗಿದೆ' ಎಂದು ಹಿಮ್ಮಾಹಿತಿ ನೀಡುತ್ತಾರೆ ಕದಂಬ ಸಂಸ್ಥೆಯ ವಿಶ್ವೇಶ್ವರ ಭಟ್. ಜೂನ್ 11, 12ರಂದು ಶಿರಸಿಯಲ್ಲಿ ಕದಂಬವು ಹಲಸು ಮೇಳವನ್ನು ಆಯೋಜಿಸಿತ್ತು.

ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಂದ ಮೇಳಕ್ಕೆ ಶುಭ ಚಾಲನೆ. ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಇವರ ಅಧ್ಯಕ್ಷತೆ. ಬೆಂಗಳೂರು ಕೃಷಿ ವಿವಿಯ ಡಾ.ನಾರಾಯಣ ಗೌಡರಿಂದ ಪ್ರದರ್ಶನ ಉದ್ಘಾಟನೆ. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಂದ ಹಲಸಿನ ಮೌಲ್ಯವರ್ಧನೆ, ರಾಷ್ಟ್ರ-ಅಂತಾರಾಷ್ಟ್ರಿಯ ಹಲಸು ಸುದ್ದಿಗಳ ಕುರಿತಾದ ಪವರ್ಪಾಯಿಂಟ್ ಪ್ರಸ್ತುತಿ.

ಮುನ್ನೂರಕ್ಕೂ ಹೆಚ್ಚು ಹಲಸಿನ ಪಾಕಗಳ ಪ್ರವೀಣೆ ಸಾಗರದ ಗೀತಕ್ಕ, ಹಲಸುಪ್ರಿಯ ಬಾಳೆಹೊನ್ನೂರಿನ ವಿಠಲ ರಾವ್, ದೇವರುಗದ್ದೆ ಸುಬ್ರಹ್ಮಣ್ಯ ಮತ್ತು ಹಲಸು ಆಂದೋಳನದ ಶ್ರೀ ಪಡ್ರೆಯವರಿಗೆ ಸಂಮಾನ.

ಸಂಮಾನ ಅಂದಾಗ ಸಹಜವಾಗಿ ಶಾಲು, ಹಾರ, ಫಲ ಸಮರ್ಪಣೆ ಇದ್ದೇ ಇದೆ ತಾನೆ. 'ಏನ್ರಿ, ತಟ್ಟೆಯಲ್ಲಿ ಹಲಸು ಇಲ್ಲವೇ ಇಲ್ಲವಲ್ಲ' ವಿಠಲ ರಾಯರು ನವಿರಾಗಿ ಚುಚ್ಚಿದರು! ಮತ್ತೆ ಸೇರಿತು, ಸಂಮಾನ ತಟ್ಟೆಗೆ ಹಲಸಿನ ಹಣ್ಣಿನ ಪ್ಯಾಕೆಟ್.

ಸಭೆಯಲ್ಲಿ ಪ್ರೇಕ್ಷಕರಾಗಿ ಕುಳಿತಿದ್ದ ಹಿರಿಯಜ್ಜಿ ಒಬ್ಬರು ಹಲಸಿನ ಹಣ್ಣಿನ (ಹಹ) ಪೇಡಾ ತಯಾರಿಸಿ ಮೇಳಕ್ಕೆ ತಂದಿದ್ದರು. ಸಭಾ ಕಲಾಪ ನಡೆಯುತ್ತಿದ್ದಾಗ ಅದನ್ನು ವೇದಿಕೆಯಲ್ಲಿ ತಂದಿಟ್ಟು ಗಮನ ಸೆಳೆದರು. ವೇದಿಕೆಯಲ್ಲಿದ್ದವರ ಬಾಯಿ ಸಿಹಿ. 'ಹಣ್ಣು ಕೊಟ್ರೆ ಇನ್ನಷ್ಟು ಮಾಡ್ತೀರಾ' ಕಾಗೇರಿಯವರಿಂದ ಪ್ರತಿಕ್ರಿಯೆ. 'ಧಾರಾಳ' ಎನ್ನುವಾಗ ಅಜ್ಜಿಯ ಮುಖ ಅರಳಿತು.

ಹಹದ ಪಾಕಶಾಲೆಯಲ್ಲಿ ಎರಡು ದಿನವೂ ಹಲಸಿನದ್ದೇ ಖಾದ್ಯ. ಬಿಡುವಿಲ್ಲದ ತಯಾರಿ. ಹಲಸಿನ ಐಸ್ಕ್ರೀಂ; ಹಪ್ಪಳ, ಸೆಂಡಿಗೆ, ಚಿಪ್ಸ್ಗಳ ಮಳಿಗೆಗಳು, ಗಜಾನನ ಹೆಗಡೆಯವರ ಹಲಸಿನ ಹಪ್ಪಳದ ಅಚ್ಚು ಮಾರಾಟದ ಮಳಿಗೆ. 'ಎರಡು ದಿವಸದಲ್ಲಿ ನಾಲ್ಕುನೂರು ಅಚ್ಚು ಮಾರಾಟವಾಯಿತು' ಎನ್ನುತ್ತಾರೆ. ಹಲಸಿನ ಮರದಿಂದ ತಯಾರಿಸಿದ ದಾರಂದ (ಬಾಗಿಲಿನ ಚೌಕಟ್ಟು), ಪೀಠೋಪಕರಣಗಳ ಪ್ರದರ್ಶನ ಮೇಳಕ್ಕೆ ಈ ವರುಷ ಹೊಸ ಸೇರ್ಪಡೆ.

ಸೋಮನಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ 'ಹಲಸಿನ ತಳಿ ಸಂಗ್ರಹ' ಆರಂಭವಾಗಿದೆ. ಕದಂಬದ ನೇತೃತ್ವ. 'ಇದರಿಂದಾಗಿ ನಮಗೆ ಗೊತ್ತಿಲ್ಲದೆ ಎಷ್ಟೋ ತಳಿಗಳ ಪತ್ತೆಯಾಗಬಹುದು. ಉತ್ತರ ಕನ್ನಡದ ತಳಿ ಸಂಗ್ರಹದ ಈ ಬ್ಯಾಂಕ್ ರೂಪೀಕರಣ ಒಳ್ಳೆಯ ಪ್ರಯತ್ನ' ಎನ್ನುತ್ತಾರೆ ಪತ್ರಕರ್ತ ಬಾಲಚಂದ್ರ ಹೆಗಡೆ ಸಾಯಿಮನೆ.

ಪ್ರತಿ ವರುಷ ಮೇಳಗಳು ನಡೆಯುತ್ತವೆ. ಕಸಿ ಗಿಡಗಳತ್ತ ಜನರ ಒಲವು ಹೆಚ್ಚಾಗುತ್ತಿದೆ. ನಮ್ಮ ಮಧ್ಯೆ ಇರುವ ಕಸಿತಜ್ಞರ ಮೂಲಕ ಒಂದಷ್ಟು ಮಂದಿಗೆ ಕಸಿ ಕಟ್ಟುವ ತರಬೇತಿ ನೀಡಿ ಇನ್ನಷ್ಟು ಕಸಿಗಾರರನ್ನು ರಂಗಕ್ಕಿಳೀಸುವ ತುರ್ತು ಇದೆ. ಈ ನಿಟ್ಟಿನಲ್ಲಿ ಕದಂಬ, ನ್ಯಾಶನಲ್ ಹಾರ್ಟಿಕಲ್ಚರ್ ಮಿಶನ್ಗಳು ಯೋಚಿಸಬಹುದೇನೋ?
(ಚಿತ್ರ: ಮಾಹಿತಿ : ಶ್ರೀ ಪಡ್ರೆ)

Thursday, June 9, 2011

ಕೇರಳ ರಾಜಧಾನಿಯಲ್ಲಿ ಹಲಸಿನ ಪರಿಮಳ









ಕೇರಳದ ತಿರುವನಂತಪುರದ 'ಕನಕಕುನ್ನು ಅರಮನೆ'ಯಲ್ಲಿ ಜೂನ್ ನಾಲ್ಕರಿಂದ ಆರರ ತನಕ ಪ್ರಥಮ ರಾಷ್ಟ್ರೀಯ ಹಲಸು ಮೇಳ. ಐವತ್ತಕ್ಕೂ ಮಿಕ್ಕಿ ಮಳಿಗೆಗಳು. ಅದರಲ್ಲಿ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳದ್ದು ಸಿಂಹಪಾಲು. ಖಾದ್ಯಗಳ 'ಲೈವ್ ತಯಾರಿ' ವಿಶೇಷ.

ಕನಕಕುನ್ನು ಅರಮನೆಯ ಸಭಾಭವನದಲ್ಲಿ ಮೇಳದ ಕಲಾಪಗಳು. ಆವರಣದಲ್ಲಿ ಮಳಿಗೆಗಳು. ಹಲಸಿನ ಕಸಿ ಗಿಡಗಳತ್ತ ಒಲವು. ನಗರ ಮಂದಿ ಹಲಸನ್ನೇ ಖರೀದಿಸುತ್ತಿದ್ದರು. ಕಲಾಪಗಳಿಗೆ ನೋಂದಣಿ ಮಾಡಿಸಿಕೊಂಡ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ. ಮಳಿಗೆಗಳಿಗೆ ಮುಕ್ತ ಎಂಟ್ರಿ. ಹಾಗಾಗಿ ಮೂರು ದಿವಸವೂ ಮಳಿಗೆ ರಶ್.

ಹವಾಯ್ಯ ಕೆನ್ಲವ್ ಮೂರೂ ದಿವಸವೂ ಮೇಳದಲ್ಲಿದ್ದರು. ಅಡುಗೆ ಸ್ಪರ್ಧೆ, ಅಡುಗೆ ತರಬೇತಿಗಳಿದ್ದುವು. ಅಡಿಕೆ ಪತ್ರಿಕೆ ಆಯೋಜಿಸಿದ ಹಲಸಿನ ಕುರಿತಾದ ಚಿತ್ರಪ್ರದರ್ಶನ ಮಳಿಗೆ ಪ್ರವೇಶದಲ್ಲಿತ್ತು. ಇಲಾಖೆಗಳು ತಮ್ಮ ಮಳಿಗೆಯನ್ನು ಆಕರ್ಷಕವಾಗಿ ಜೋಡಿಸುವತ್ತ ಕಾಳಜಿ ವಹಿಸಿದ್ದುವು. ಮೇಳಕ್ಕೆ ಹಲಸಿನ ಮೂಡ್ ಬರುವಂತೆ ಹಲಸಿನ ಕಾಯಿಂದ, ಎಲೆಯಿಂದ, ಮರದ ಗೆಲ್ಲುಗಳಿಂದ ಅಲಂಕಾರ ಮಾಡಿದ್ದರು. ಕೆಲವು ಮಳಿಗೆಯಲ್ಲಿ ರುಚಿ ತೋರಿಸಿ ಮಾರಾಟ ಮಾಡುವ ತಂತ್ರಗಳಿದ್ದುವು.

ಮೂರೂ ದಿವಸವೂ ಪತ್ರಿಕೆಗಳಲ್ಲಿ ಹಲಸಿನದ್ದೇ ಸುದ್ದಿ. ವಾಹಿನಿಗಳಲ್ಲೂ ಸೈ. ಕಾಳಜಿಯುಳ್ಳ, ಜವಾಬ್ದಾರಿಯುಳ್ಳ ಹಲವು ಪತ್ರಕರ್ತರು ಮೇಳಪೂರ್ತಿ ತಿರುಗಾಡುತ್ತಾ ತಮಗೆ ಬೇಕಾದ ವಿಷಯವನ್ನು ದಾಖಲಿಸುತ್ತಿದ್ದರು. ನಮ್ಮ ಕರ್ನಾಟಕದಲ್ಲಾದರೆ? ಒಂದು ಕಾಲಂ ನ್ಯೂಸ್! ಒಂದು ಫೋಟೋ!

'ಶಾಂತಿಗ್ರಾಮ' ಎಂಬ ಸರಕಾರೇತರ ಸಂಸ್ಥೆಯು ಸಹಯೋಗಕಾರರೊಂದಿಗೆ ಮೇಳವನ್ನು ಆಯೋಜಿಸಿತ್ತು.

Wednesday, June 8, 2011

'ಒಂದು ಸೊಳೆಯದ್ರೂ ತಟ್ಟೆಗೆ ಹಾಕ್ರಿ'


ಮೇ ಕೊನೆಗೆ ಚಿಕ್ಕಮಗಳೂರಿನಲ್ಲಿ ಸರಕಾರಿ ಕೃಪಾಪೋಶಿತ 'ಹಲಸು ಮೇಳ'. ಕುವೆಂಪು ರಂಗಮಂದಿರದಂತಹ ಸಾವಿರ ಆಸನಗಳುಳ್ಳ ಸಭಾಮಂದಿರ. ಮೇಳಕ್ಕೆ ಬಂದಿರೋ ಹಲಸು ಪ್ರಿಯರು ಅಬ್ಬಬ್ಬಾ ಅಂದರೂ ನೂರು ಮೀರದು. ಅದರಲ್ಲಿ ಅರ್ಧಕ್ಕರ್ಧ ಸರಕಾರಿ ವರಿಷ್ಠರು. ಹತ್ತಾರು ಸ್ಟಾಲ್ ತೆರೆದಿದ್ದರೂ ಭರ್ತಿಯಾದುದು ಐದೇ!

'ಎರಡು ತಿಂಗಳಿನಿಂದಲೇ ಮೇಳಕ್ಕೆ ಕೆಲಸ ಮಾಡಿದ್ವಿ. ಆದ್ರೂ ಜನ ಬಂದಿಲ್ವಲ್ಲಾ' ತೋಟಗಾರಿಕಾ ಇಲಾಖೆಯ ವರಿಷ್ಠರೊಬ್ಬರ ಪ್ರತಿಕ್ರಿಯೆ. 'ಹೌದಲ್ಲಾ, ಕೆಲಸ ಮಾಡಿದ್ರಿ, ಅದು ಕೃಷಿಕರಿಗೆ ತಲುಪಿದೆಯಾ. ನೀವು ಭೇಟಿಯಾಗಿದ್ರಾ' ಎಂದು ಕೇಳಿದರೆ, 'ಸಾಹೇಬ್ರು ಕರೀತಾರೆ' ಎನ್ನುತ್ತಾ ಅವರು ನಾಪತ್ತೆ!

ದೊಡ್ಡ ದೊಡ್ಡ ಪ್ಲೆಕ್ಸಿಗಳಿಗೆ ತೊಂದರೆಯಿರಲಿಲ್ಲ. ಉದ್ಘಾಟನೆ ಮಗಿಯುವಾಗ ಹೊಟ್ಟೆ ರಾಗ ಹಾಡುತ್ತಿತ್ತು. ತಟ್ಟೆ ಹಿಡಿದ್ರೆ ಬಿಸಿಬೇಳೆ ಬಾತ್, ಮೊಸರನ್ನ. 'ಏನ್ರಿ ಇದು, ಒಂದೇ ಒಂದು ಹಲಸು ರೆಸಿಪಿ ಇಲ್ವಲ್ಲಾ, ಸ್ಟಾಲಲ್ಲಿ ಹಲಸಿನ ಹಣ್ಣು ಇದೆಯಲ್ವಾ. ಒಂದೊಂದು ಸೊಳೆ ತಟ್ಟೆಗೆ ಹಾಕ್ರಿ,' ಛೇಡಿಸಿದರು ಬಾಳೆಹೊನ್ನೂರಿನ ವಿಠಲ ರಾವ್.

ಸಾಗರದ ಕೃಷಿಕ ನಾಗೇಂದ್ರ ಸಾಗರ್ ಅವರ ಪರಿಶ್ರಮದ 'ಹಲಸು-ನಿರ್ಲಕ್ಷಿತ ಕಲ್ಪವೃಕ್ಷ' ಪುಸ್ತಿಕೆ ಮೇಳದ ನೆನಪಿಗೆ ಸಾಕ್ಷಿ. ಹಲಸಿನ ವಿವಿಧ ವಿಚಾರಗಳ ಕುರಿತು ಪವರ್ಪಾಯಿಂಟ್ ಪ್ರಸ್ತುತಿ. ಅಷ್ಟು ಹೊತ್ತಿಗೆ ಸಭಾಭವನ ಭಣಭಣ. ಮಾರುದ್ದದ ಆಮಂತ್ರಣ ಪತ್ರಿಕೆಯಲ್ಲಿ ಅಚ್ಚಾದ ಗಣ್ಯರಲ್ಲಿ ಶೇ.90ರಷ್ಟು ಗೈರುಹಾಜರಿ. ಇದು ಸರಕಾರಿ ಕಾರ್ಯಕ್ರಮಗಳ ಆರ್ಥಶೂನ್ಯ ಶಿಷ್ಟಾಚಾರ. 'ಇವರೆಲ್ಲಾ ಬರುತ್ತಿದ್ದರೆ ಉದ್ಘಾಟನೆ ಮುಗಿಯುವಾಗಲೇ ಸಂಜೆಯಾಗುತ್ತಿತ್ತು'!

'ಭಾಗವಹಿಸಿದವರಿಗೆ ಐವತ್ತು ರೂಪಾಯಿ ಕೊಟ್ರೆ ಹಾಲ್ ಫುಲ್ ಆಗ್ತಿತ್ತು' ಹಿಂದಿನ ಸೀಟಿನಿಂದ ಒಬ್ಬರು ಗೊಣಗಿದರು. ಸರಕಾರಿ ಕಾರ್ಯಕ್ರಮವೆಂದರೆ ನಮ್ಮ ಜನಗಳು ಆರ್ಥ ಮಾಡುವ ರೀತಿನೇ ಬೇರೆ. ಬಹುತೇಕ ಕಾರ್ಯಕ್ರಮಗಳಲ್ಲಿ ಇಂತಹ ಮನೋಧರ್ಮ ಪ್ರಕಟವಾಗುತ್ತಿರುವುದನ್ನು ಕಂಡಿದ್ದೇನೆ.

ಸರಿ, ಮೇಳದ ಕಲಾಪಗಳು ಢಾಳಾದಷ್ಟು ಪ್ರದರ್ಶನ ಸೊರಗಲಿಲ್ಲ. ರಿಪ್ಪನ್ಪೇಟೆ ಅಂಕುರ್ ನರ್ಸರಿಯ ಅನಂತಮೂರ್ತಿ ಜವಳಿಯವರು ಕಸಿಗಿಡದೊಂದಿಗೆ ಬೆಳ್ಳಂಬೆಳಿಗ್ಗೆ ಹಾಜರ್. ಇವರ ಐದು ವಿಧದ ಆರುನೂರು ಕಸಿ ಗಿಡಗಳು ಮೇಳದ ಆಕರ್ಷಣೆ. ಸಂಜೆಯ ಹೊತ್ತಿಗೆ ಎಲ್ಲವೂ ಖಾಲಿ.

ಅವರು ತಂದಿರುವ ಹಲಸು ತಳಿಗಳು: ಸರ್ವಋತು ಹಲಸು - 'ಶ್ರೀ ವಿಜಯ'. ದಪ್ಪನಾದ, ಸಿಹಿಯಾದ ಅರಶಿನ ಸೊಳೆ. ಚಿಪ್ಸ್, ಹಪ್ಪಳ, ತರಕಾರಿಯಾಗಿ ಬಳಕೆ. ನೆಟ್ಟು ಐದೇ ವರುಷದಲ್ಲಿ ಇಳುವರಿ. ಮಳೆಗಾಲದಲ್ಲಿ ರುಚಿ ಸಪ್ಪೆಯಾಗುತ್ತದೆ.

ಮಂಕಾಳೆ (ಕೆಂಪು) ಚಂದ್ರ ಹಲಸು : ಇದಕ್ಕೆ 2002ರಲ್ಲಿ ಕೆಳದಿಯಲ್ಲಿ ಜರುಗಿದ ಹಲಸು ಮೇಳದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದ ಕೀರ್ತಿ. ದಪ್ಪ ಸೊಳೆ, ಹಳದಿ-ಕೆಂಪು-ಕೇಸರಿ ಮಿಶ್ರಿತ ಬಣ್ಣ. ಸಿಹಿ-ಹುಳಿ ರುಚಿಯ ಹಿತವಾದ ಸ್ವಾದ. ಆರು ವರುಷದಲ್ಲಿ ಇಳುವರಿ.

ರುದ್ರಾಕ್ಷಿ ಹಲಸು (ಕೆಂಪು) : ಒಂದು ಗೊಂಚಲಲ್ಲಿ ಸುಮಾರು ನೂರು ಕಾಯಿ ಬಿಡುತ್ತದೆ. ಗಟ್ಟಿ ಸೊಳೆ. ಹಪ್ಪಳ, ತರಕಾರಿಯಾಗಿ ಬಳಕೆ. ಇನ್ನೊಂದು ರುದ್ರಾಕ್ಷಿ (ಅರಶಿನ) : ಗೊಂಚಲು ಗೊಂಚಲಾಗಿ ಹಿಡಿಯುವುದು ಗುಣ. ಮಳೆಗಾಲದಲ್ಲಿ ಹಣ್ಣಿನ ರುಚಿ ಸಪ್ಪೆ.

ಮೇಣ ರಹಿತ ಹಲಸು : ಒಂದೊಂದು ಹಲಸು ಇಪ್ಪತ್ತು ಕಿಲೋ ತೂಗುತ್ತದೆ. ಬಿಳಿ ವರ್ಣದ ಗಟ್ಟಿ ಸೊಳೆ. ಅತೀ ಮಳೆಯಲ್ಲೂ ರುಚಿ ಕಳೆದುಕೊಳ್ಳುವುದಿಲ್ಲ. ಹಿತವಾದ ಸಿಹಿ-ಹುಳಿ ರುಚಿ. ಹೆಚ್ಚು ಸೇವಿಸಿದರೂ ಹೊಟ್ಟೆ ಕೆಡುವುದಿಲ್ಲ.

ಜವಳಿಯವರು ಹಲಸಿನ ಗಿಡಗಳ ಜತೆ, ಆಯಾಯ ತಳಿಯ ಹಲಸಿನ ಹಣ್ಣನ್ನೂ ತಂದಿದ್ದರು. ಗಿಡ ಖರೀದಿಗೆ ಸೊಳೆ ಫ್ರೀ! 'ರುಚಿ ತೋರಿಸಿದಾಗ ಜನರಿಗೆ ನಂಬುಗೆ ಬರುತ್ತದೆ' ಎನ್ನುತ್ತಾರೆ. ಇನ್ನೊಂದು ಮಳಿಗೆಯಲ್ಲಿ ಬೆಂಡೆಕರೆಯ ಬಿ.ಎನ್.ಶರತ್ ತಮ್ಮ 'ರಾಮಚಂದ್ರ ಹಲಸು' ಗಿಡಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

ಸಖರಾಯಪಟ್ಟಣದ 'ಪರಿವರ್ತನ್' ಸಂಸ್ಥೆಯ ಅಧ್ಯಕ್ಷ ಶಿವಣ್ಣ, ಹಲಸಿನ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಒಣಸೊಳೆ, ಹಣ್ಣಿನ ನಿರ್ಜಲೀಕೃತ ಸೊಳೆ, ಬೇಯಿಸಿ ಒಣಗಿಸಿದ ಗುಜ್ಜೆ, ಹಪ್ಪಳ, ಹಲಸಿನ ಪೌಡರ್, ಸಿರಪ್, ಉಪ್ಪಿನಕಾಯಿ, ಕ್ಯಾಂಡಿ..ಗಳು ಹಲಸು ಪ್ರಿಯರನ್ನು ಸೆಳೆದಿತ್ತು. ಕೇರಳದ ಉದ್ದಿಮೆಯೊಂದರಿಂದ ಕಲಿತು ಬಂದ ಈ ಉತ್ಪನ್ನಗಳನ್ನು ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮಾಡುವ ನಿರೀಕ್ಷೆ. 'ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳಾಗಿವೆ. ಕಾಲೇಜು ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಶಿಕ್ಷಣ ನೀಡಿ, ಈ ವ್ಯವಸ್ಥೆಗೆ ಬಳಸಿಕೊಳ್ಳಬೇಕು. ಇಲ್ಲಿನ ಉತ್ಪನ್ನ ಇಲ್ಲೇ ಮಾರುಕಟ್ಟೆಯಾಗಬೇಕು. ಆಗಲೇ ಯಶಸ್ವಿ' ಎಂಬುದು ಶಿವಣ್ಣ ಅಭಿಮತ.

ಸಖರಾಯಪಟ್ಟಣ ಹಲಸಿನೂರು. ಒಂದೊಂದು ಹಿತ್ತಿಲಲ್ಲಿ ಒಂದೊಂದು ರುಚಿಯ ಹಲಸು. ನಮ್ಮ ಮಲೆನಾಡಿನ ಅಪ್ಪೆಮಿಡಿಯ ಹಾಗೆ. ಮೇಳದಲ್ಲಿ ಪ್ರದರ್ಶನಕ್ಕೆಂದು ಹದಿನೈದು ತಳಿಗಳ ಹಲಸು ತರಲಾಗಿತ್ತು. ಆಸಕ್ತರಿಗೆ ಒಂದೊಂದು ಸೊಳೆ ತಿನ್ನಲಡ್ಡಿಯಿರಲಿಲ್ಲ. ಬಾಯಿ ಚಪಲ ಹೆಚ್ಚಾದರೆ ಹಣ್ಣನ್ನೇ ಖರೀದಿಸಲು ಅವಕಾಶವಿತ್ತು.

ಜಿಲ್ಲೆಯ ವಿವಿಧ ಭಾಗಗಳ ಹಲಸಿನ ಸಂಗ್ರಹ ಇಲಾಖೆಯ ಮಳಿಗೆಯಲ್ಲಿತ್ತು. ಬಾಳೆಹೊನ್ನೂರಿನ ವಿಠಲರಾಯರ ಸಂಗ್ರಹವೇ ಸಿಂಹಪಾಲು. ವೆಲ್ಲಾಲ್ ಕೆವಿಕೆ ತಳಿ, ಮೇಣರಹಿತ, ರಸಭರಿತ, ಇಬ್ಬೀಡ್.. ತಳಿಗಳನ್ನು ವಿಠಲ ರಾಯರು ಮೇಳಕ್ಕಾಗಿಯೇ ತಂದಿದ್ದರು. ತಿರುವನಂತಪುರಂ ಹಲಸಿಗೆ ವಿಶೇಷ ಮನ್ನಣೆ.

ದೊಡ್ಡ ವ್ಯವಸ್ಥೆ ಅಂದ ಮೇಲೆ ಎಡವಟ್ಟು ಸಾಮಾನ್ಯ. ತೋಟಗಾರಿಕಾ ಉಪ ನಿರ್ದೇಶಕ ಶಕೀಲ್ ಅಹಮದ್ ಇವರ ಉತ್ಸಾಹದಿಂದ ಹಲಸು ಮೇಳ ಸಂಪನ್ನವಾಗಿತ್ತು. ಇವರೊಂದಿಗೆ ಶಿವಮೊಗ್ಗದ ಲಕ್ಷ್ಮೀನಾರಾಯಣ ಹೆಗಡೆ, ನಾಗೇಂದ್ರ ಸಾಗರ್ ಸಾಥ್ ನೀಡಿದ್ದರು. ಬಹಳ ವ್ಯವಸ್ಥಿತವಾಗಿ ಯೋಚನೆ, ಯೋಚನೆ ರೂಪುಗೊಂಡಿತ್ತು. ಹೀಗಿದ್ದೂ ಮೇಳದಲ್ಲಿ ಹಲಸು ಪ್ರಿಯರ ಸಂಖ್ಯೆ ಕಡಿಮೆಯಾಗಲು ಕಾರಣವೇನು?

ಗ್ರಾಸ್ರೂಟ್ ವರೆಗೂ ಕೆಲಸದ ಜಾಲ ವಿಸ್ತರಿಸದಿರುವುದೇ ಕಾರಣ. ಕೇವಲ ಆದೇಶ, ಸುತ್ತೋಲೆಗಳಿಂದ ಕೆಲಸವಾಗದು. ಜನರ ಮಧ್ಯೆ ಹೋಗಿ ಮನಸ್ಸನ್ನು ತೆರೆದಾಗಲೇ, ಸರಕಾರಿ ಕಾರ್ಯಕ್ರಮಗಳಿಗೂ ಜನಸ್ಪಂದನ ದೊರೆಯುತ್ತದೆ.

'ಅಧಿಕಾರಿಗಳಲ್ಲಿ ಉತ್ಸಾಹ ಪುಟಿಯುತ್ತಿದ್ದರೂ, ಕೆಳಗಿನವರಲ್ಲಿ ಉತ್ಸಾಹ ಬೇಕಲ್ವಾ ಸಾರ್' - ಜವಳಿಯವರು ನನ್ನ ಸಂಶಯಕ್ಕೆ ಮಂಗಳ ಹಾಡಿದರು.

Thursday, June 2, 2011

ಕನ್ನಾಡಿಗೆ ಹವಾಯಿಯ ಕೆನ್




ಹವಾಯಿಯ ಹಣ್ಣು ಕೃಷಿಕ ಕೆನ್ ಲವ್ ಮೂರನೆ ಬಾರಿ ಕನ್ನಾಡಿಗೆ ಬಂದಿದ್ದಾರೆ. ಜೂನ್ 4ರಿಂದ 6ರ ತನಕ ತಿರುವನಂತಪುರದಲ್ಲಿ ನಡೆಯುವ 'ಹಲಸು ರಾಷ್ಟ್ರೀಯ ಸಮ್ಮೇಳನ'ದಲ್ಲಿ ಭಾಗವಹಿಸಲಿದ್ದಾರೆ.

ಬಂಟ್ವಾಳ ತಾಲೂಕು ಇಡ್ಕಿದು ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೂನ್ 2ರಂದು 'ಜಲಮರುಪೂರಣ ಕಾರ್ಯಾಗಾರ' ನಡೆದಿತ್ತು. ಈ ಸಂದರ್ಭದಲ್ಲಿ ದೇವಳಕ್ಕೆ ಕೆನ್ ಭೇಟಿ ನೀಡಿದರು.

ಮೇಣರಹಿತ ಹಲಸನ್ನು ಇಷ್ಟಪಟ್ಟ ಕೆನ್, ಕೋಂಕೋಡಿ ತಿರುಮಲೇಶ್ವರ ಭಟ್ಟರಲ್ಲಿಗೆ ಭೇಟಿ. ಅಲ್ಲಿ ಹಲಸಿನ ಸೊಳೆಗಳನ್ನು ಹೊಟ್ಟೆಗಿಳಿಸಿದರು.

ಸೂರಿಕುಮೇರಿಯ ಗಣೇಶ್ ಭಟ್ ಅವರಲ್ಲಿಗೆ ಭೇಟಿ. ದೀವಿಹಲಸು, ಮಲಯನ್ ಆಪಲ್, ಜಂಬುನೇರಳೆ, ನೀಲಂ ಮಾವುಗಳ ಪರಿಚಯ. 'ಇಲ್ಲಿರುವಂತೆ ಹವಾಯಿಯಲ್ಲೂ ಕೂಡಾ ಕಾಳಪ್ಪಾಡಿ ಹಣ್ಣಿಗೆ ಆಂಥ್ರಾಕ್ನಾಸ್ ರೋಗ ಇದೆ' ಎಂದರು.

ಪಡಾರು ರಾಮಕೃಷ್ಣ ಶಾಸ್ತ್ರಿಯವರಲ್ಲಿ ಸ್ಥಳೀಯ ತೊಂಡೆಕಾಯಿಯನ್ನು ನೋಡಿದ ಕೆನ್, 'ಇದನ್ನು ನಮ್ಮೂರಲ್ಲಿ ಕಳೆನಾಶಕ ಸಿಂಪಡಿಸಿ ನಾಶ ಮಾಡ್ತಾರೆ. ಬಳಸಿ ಗೊತ್ತಿಲ್ಲ' ಎಂದರು. 'ಪುನಃ ಹವಾಯ್ಗೆ ಮರಳಿದ ಬಳಿಕ ಇದರ ಬಳಕೆ ಕುರಿತು ಅರಿವನ್ನು ಮೂಡಿಸುವ ಪ್ರಯತ್ನ ಮಾಡಬೇಕಿದೆ'.

ಮಧ್ಯಾಹ್ನ ಮಾಣಿಯ ಪಡಾರು ರಾಮಕೃಷ್ಣ ಶಾಸ್ತ್ರಿಯವರಲ್ಲಿ ಭೋಜನ. ಕಾನಕಲ್ಲಟೆ, ಮ್ಯಾಂಗೋಸ್ಟೀನ್, ಗಾರ್ಸೀನಿಯಾ ಕೋವಾ, ಪಪ್ಪಾಯಿ, ನ್ಯಾಚುರಲ್ ಐಸ್ಕ್ರೀಂನವರ 'ನೇರಳೆಹಣ್ಣಿನ ಐಸ್ಕ್ರೀಂ'.. ಹೀಗೆ ವಿವಿಧ ವೈವಿಧ್ಯಗಳು. ಚಳ್ಳೆಕಾಯಿ ಉಪ್ಪಿನಕಾಯಿಯನ್ನು ಸ್ವಲ್ಪ ಹೆಚ್ಚೇ ಸವಿದ ಕೆನ್, ಮನೆಯೊಡತಿ ಸುಮ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಸಂಜೆ ಅಡಿಕೆ ಪತ್ರಿಕೆ ಕಚೇರಿಗೆ ಭೇಟಿ. ಸಂಗ್ರಹಿತ ಬೀಜ, ಹಣ್ಣುಗಳ ಪ್ಯಾಕ್-ಅಪ್. ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು ಕೆನ್ ಅವರಿಗೆ ಸಾಥ್ ನೀಡಿದರು.