Thursday, June 27, 2013

ಮಂಚಿ ಪದ್ಮನಾಭ ಆಚಾರ್ ವಿಧಿವಶ

            
               ಕೃಷಿಕ ತಂತ್ರಜ್ಞ ಮಂಚಿ ಪದ್ಮನಾಭ ಆಚಾರ್ (58) ಅಲ್ಪಕಾಲದ ಅಸೌಖ್ಯದಿಂದ ಜೂ.27ರಂದು ವಿಧಿವಶರಾದರು. ಪತ್ನಿ ಹೇಮಾ ಸೇರಿದಂತೆ ಸಹೋದರರು, ಬಂಧುಗಳು ಮತ್ತು ಮತ್ತು ಅಸಂಖ್ಯಾತ ಆಪ್ತರನ್ನು ಅಗಲಿದ್ದಾರೆ. ಇವರು ಹಿರಿಯ ಸಹಕಾರಿ ದಿ. ಮಂಚಿ ನಾರಾಯಣ ಆಚಾರ್ ಅವರ ಪುತ್ರ.

                 ಪದ್ಮನಾಭ ಆಚಾರ್ ಕೃಷಿಕರಾಗಿದ್ದುಕೊಂಡು ಕೃಷಿ ತಾಂತ್ರಿಕತೆಯಲ್ಲಿ ಆಸಕ್ತರು. ಮಂಚಿಯಲ್ಲಿ ಸ್ವಂತದ್ದಾದ ವರ್ಕ್ ಶಾಪ್ ಹೊಂದಿದ್ದರು. ಕೃಷಿ ಕೆಲಸಗಳಿಗೆ ಅನುಕೂಲವಾಗುವ 'ಸಹಾಯಿ'ಗಳನ್ನು ಆವಿಷ್ಕರಿಸಿದ್ದರು. ತಾನೇ ಆವಿಷ್ಕರಿಸಿದ ಊರುಗೋಲನ್ನು ಹೋಲುವ ಚಿಕ್ಕ ಸಾಧನದಿಂದ ಅಡಿಕೆ ತೋಟದ ಚಿಕ್ಕಪುಟ್ಟ ಕೆಲಸಗಳನ್ನು ನಿರಾಯಾಸವಾಗಿ ಮಾಡುತ್ತಿದ್ದರು. ಈ ಸಾಧನದ ಕ್ಷಮತೆ ಮತ್ತು ವಿನ್ಯಾಸವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಶ್ಲಾಘಿಸಿದ್ದರು.

                 ಪದ್ಮನಾಭ ಆಚಾರ್ ಅವರು ಪುತ್ತೂರಿನ ಗಿಡ ಗೆಳೆತನ ಸಂಘದ ಮಾಜಿ ಅಧ್ಯಕ್ಷ. ಮಂಚಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಕ್ರಿಯ. ಕೃಷಿಯಲ್ಲಿ ಹನಿನೀರಾವರಿ, ಸ್ಪ್ರಿಂಕ್ಲರ್.. ಮೊದಲಾದ ವಿಚಾರದಲ್ಲಿ ಅಪಾರ ಜ್ಞಾನ ಹೊಂದಿದ್ದರು. ಹಳೆಯ ಮರದ ಪರಿಕರಗಳನ್ನು ಹೊಸ ವಿನ್ಯಾಸದೊಂದಿಗೆ ನವೀಕರಿಸುವ ಜ್ಞಾನ ಹೊಂದಿದ್ದರು. ಅವರ ಮನೆಯಲ್ಲಿರುವ ವಿವಿಧ ವೈವಿಧ್ಯ ವಸ್ತುಗಳು ಪದ್ಮನಾಭ ಆಚಾರರ ಆಸಕ್ತಿಗಳಿಗೆ ಕನ್ನಡಿ.

                 ಕೆಲವು ವರುಷಗಳಿಂದ ದೈಹಿಕವಾದ ಅಸೌಖ್ಯತೆಯಿದ್ದರೂ ಅದನ್ನು ಮರೆತು ತನ್ನ ಆಸಕ್ತಿಯ 'ಸಂಶೋಧನೆ'ಯತ್ತ ನಿತ್ಯ ಚಿತ್ತ. ಪುತ್ತೂರಿನಲ್ಲಿ ಜರುಗಿದ ಯಂತ್ರಮೇಳ - 12ರಲ್ಲಿ ತನ್ನೆಲ್ಲಾ ಆವಿಷ್ಕಾರವನ್ನು ಸ್ವತಃ ಉಪಸ್ಥಿತರಿದ್ದು ಪ್ರದರ್ಶನಕ್ಕಿಟ್ಟಿದ್ದರು. ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದರು.

              'ಮನೆಯ ಎಲ್ಲಾ ಚಟುವಟಿಕೆಗಳನ್ನು ಪದ್ಮನಾಭ ನೋಡಿಕೊಳ್ಳುತ್ತಿದ್ದ. ಯಾವುದೇ ಸಮಾರಂಭವಿರಲಿ ಅಲ್ಲಿನ ಎಲ್ಲಾ ವಿಭಾಗಗಳ ಹೊಣೆಯನ್ನು ಸ್ವತಃ ಹೊತ್ತುಕೊಳ್ಳುತ್ತಿದ್ದ. ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ. ಮನೆಮಂದಿಗೆ ಆಪ್ತನಾಗಿದ್ದ. ಊರವರಲ್ಲಿ ಕೂಡಾ ಬಾಂಧವ್ಯವಿತ್ತು..' ತಮ್ಮನ ಗುಣವನ್ನು ಹೃದಯಪೂರ್ವಕವಾಗಿ ಮಂಚಿ ಶ್ರೀನಿವಾಸ ಆಚಾರ್ ಹೇಳುತ್ತಾರೆ.

ಬಾಲಹೆಜ್ಜೆಯ ಸಂಶೋಧನೆಗೆ ವಿಶ್ವ ಸ್ವೀಕಾರ


            ಪುತ್ತೂರಿನ ಇಬ್ಬರು ವಿದ್ಯಾರ್ಥಿನಿಯರಿಂದ ದೇಶಕ್ಕೆ ಗೌರವ! ಇವರ ವಿಜ್ಞಾನ ಸಂಶೋಧನೆಯು ವಿಶ್ವಮಟ್ಟದಲ್ಲಿ ಪ್ರಶಂಸಿಸಲ್ಪಟ್ಟಿದೆ. ಸಂಶೋಧಿತ ಸರಕುಗಳೊಂದಿಗೆ ಕಡಲು ಹಾರಿ, ತೀರ್ಪುಗಾರರ ಹುಬ್ಬೇರಿಸಿ ಚಿನ್ನದ ಪದಕಗಳನ್ನು ಹೊತ್ತು ತಂದಿದ್ದಾರೆ. ಕಲಿತ ಶಾಲೆಗೆ, , ಕಲಿಯಲು ಅನುವು ಮಾಡಿದ ಹೆತ್ತವರಿಗೆ ಸಂಮಾನ.

             ವಿಜ್ಞಾನ ಆಸಕ್ತ ವಿದ್ಯಾರ್ಥಿಗಳು ಪ್ರಸ್ತುತಪಡಿಸುವ ಸಂಶೋಧನೆಗಳು ಮೊದಲು ರಾಜ್ಯ ಮಟ್ಟದಲ್ಲಿ ಆಯ್ಕೆಯಾಗುತ್ತದೆ. ಬಳಿಕ ದೇಶಮಟ್ಟ. ಪುತ್ತೂರಿನ ವಿವೇಕಾನಂದ ಕಾಲೇಜಿನ ಎರಡನೇ ಪಿಯುಸಿ ವಿದ್ಯಾರ್ಥಿನಿ ರಶ್ಮಿಪಾರ್ವತಿ ಮತ್ತು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಹತ್ತರ ವಿದ್ಯಾರ್ಥಿನಿ ಸಿಂಧೂರ ಶಂಕರ್ - ಇವರಿಬ್ಬರು ಈ ಹಂತಗಳನ್ನು ದಾಟಿ ವಿಶ್ವಮಟ್ಟದಲ್ಲಿ ಕರಾವಳಿಯ ಮಣ್ಣಿನ ಬೌದ್ಧಿಕ ಗಟ್ಟಿತನವನ್ನು ಸ್ಥಾಪಿಸಿದ್ದಾರೆ.

               ಇವರಿಗೆ ಕೃಷಿಕ ಸಂಶೋಧಕ ವಿಟ್ಲ ಬದನಾಜೆ ಶಂಕರ ಭಟ್ಟರ ನಿರ್ದೇಶನ. ಪಾರಂಪರಿಕ ಜ್ಞಾನಗಳನ್ನು ಬಳಸಿದಾಗ ಸಮಾಜಕ್ಕೆ ಪ್ರಯೋಜನ. ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡುವ ಆಸಕ್ತಿಯಿದೆ. ಹೆತ್ತವರಿಗೆ ಉತ್ಸಾಹವಿದೆ. ಅಧ್ಯಾಪಕರ ಬೆಂಬಲವಿದೆ. ನಾಟಿ ಜ್ಞಾನಗಳು ವಿಶ್ವದ ವಿಜ್ಞಾನಿಗಳಿಂದ ಸ್ವೀಕಾರವಾಗಿರುವುದು ದೇಶಕ್ಕೆ ಹೆಮ್ಮೆ ಎನ್ನುತ್ತಾರೆ ಭಟ್.

                ಕಾಲೇಜೊಂದರ ಹೆತ್ತವರ ಸಭೆಯಲ್ಲಿ ಭಾಗವಹಿಸಿದ್ದೆ. ಹತ್ತನೇ ತರಗತಿಯಲ್ಲಿ ಆರುನೂರರ ಆಚೀಚೆ ಅಂಕ ಪಡೆದ ವಿದ್ಯಾರ್ಥಿಗಳೊಂದಿಗೆ ಹರಟುತ್ತಿದ್ದೆ. 'ಇಂಜಿನಿಯರಿಂಗ್, ಮೆಡಿಕಲ್, ಕಂಪ್ಯೂ ವಿಜ್ಞಾನ..'ಗಳ ಕನಸು ಮನಸಿನ ದಂಡು ಅಧಿಕವಿತ್ತು. 'ನಾನು ಉಪನ್ಯಾಸಕನಾಗುತ್ತೇನೆ' ಎಂದು ಯಾರೂ ಹೇಳಿಲ್ಲ! ಶೈಕ್ಷಣಿಕ ಪಲ್ಲಟದ ಪ್ರಸ್ತುತ ದಿನಮಾನದಲ್ಲಿ ಸಂಶೋಧನ ಮಾರ್ಗದಲ್ಲಿ ಸಾಗಿದ ವಿದ್ಯಾರ್ಥಿಗಳ ಬಾಲಹೆಜ್ಜೆಗೆ ಅಭಿನಂದನೆ.

                ತೆಂಗಿನ ಒಣ ಗರಿಯ ಕೆಳಭಾಗ 'ಕೊತ್ತಳಿಗೆ'. (ಕೊತ್ತಳಿಂಗೆ, coconut palm petiole). ಇದರಿಂದ ಉಪ್ಪು ತಯಾರಿಯ ವಿಧಾನಗಳ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡವರು, ರಶ್ಮೀ ಪಾರ್ವತಿ. ಅಮೆರಿಕಾದ ಹ್ಯೂಸ್ಟನ್ನಿನ ಒಲಿಂಪಿಯಾಡ್ ವಿಜ್ಞಾನ ಮೇಳದಲ್ಲಿ ಪ್ರಬಂಧ ಮಂಡನೆ. ಮಾರ್ಗದರ್ಶಕ ಶಂಕರ ಭಟ್ ಉಪ್ಪು ತಯಾರಿ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಹೇಳುತ್ತಾರೆ: ಐವತ್ತು ಕಿಲೋ ಒಣ ಕೊತ್ತಳಿಗೆಯನ್ನು ಸುಟ್ಟು ಭಸ್ಮ ಮಾಡಿ. ನೀರಿನಲ್ಲಿ ಕದಡಿ. ಏಳು ಪದರವಿರುವ ಹತ್ತಿಯ ಬಟ್ಟೆಯಿಂದ ಮೂರು ಸಲ ಸೋಸಿ. ಈ ನೀರನ್ನು ಬತ್ತಿಸಿದರೆ ಸಿಗುತ್ತದೆ, 'ಕೊತ್ತಳಿಗೆಯ ಉಪ್ಪು'. ಇದಕ್ಕೆ ನಿತ್ಯ ಸೇವಿಸುವ ಉಪ್ಪಿನ ಸವಿ ಇದೆಯಲ್ಲಾ, ಇದಕ್ಕಿಂತ ಹತ್ತು ಪಟ್ಟು ಅಧಿಕ ಸವಿ!

               ಅರ್ಧ ಕ್ವಿಂಟಾಲ್ ಕೊತ್ತಳಿಗೆಯಲ್ಲಿ ಮುಕ್ಕಾಲು ಕಿಲೋ ಕೊನೆ ಉತ್ಪನ್ನವಾದ ಉಪ್ಪು ಲಭ್ಯ. ಆಯುರ್ವೇದದಲ್ಲಿ ಈ ಉಪ್ಪಿನ ಬಳಕೆಯಿದೆ. ಒಂದು ಚೀಲ ಗೊಬ್ಬರಕ್ಕೆ ಹದಿನೈದು-ಇಪ್ಪತ್ತು ಗ್ರಾಮ್ ಕೊತ್ತಳಿಗೆ ಉಪ್ಪು ಸೇರಿಸಿದರೆ ಆಯಿತು, ಜೈವಿಕ ಗೊಬ್ಬರಗಳಲ್ಲಿರುವ ಬ್ಯಾಕ್ಟೀರಿಯಾಗಳು ಉತ್ತೇಜಿತವಾಗುತ್ತವೆ. ಪಶುಗಳ ಚರ್ಮರೋಗಗಳಿಗೆ ಉಪ್ಪಿನ ತಯಾರಿ ಔಷಧವನ್ನು ಬಳಸುವ ಕ್ರಮ ಪಶು ವೈದ್ಯಕೀಯದಲ್ಲಿದೆ.
 
              ಸಂಶೋಧನೆಗೆ ಒಳಪಡಿಸಿದಾಗ ಉಪ್ಪಿನಲ್ಲಿ ಕ್ಲೋರಿನ್, ಪೊಟ್ಯಾಶಿಯಂ, ಕಾರ್ಬನ್, ಸೋಡಿಯಂ, ಅಲ್ಯೂಮಿನಿಯಂ, ಸಿಲಿಕಾನ್..ಗಳಿವೆ. ಮಳೆಗಾಲದ ಮಧ್ಯದಲ್ಲಿ ತೆಂಗಿನ ಮರಗಳ ಬುಡಗಳಿಗೆ ಕೃಷಿಕರು ಉಪ್ಪು ಹಾಕುತ್ತಾರೆ. ಇದಲ್ಲದೆ ಮಣ್ಣಿನಲ್ಲಿರುವ ಲವಣಾಂಶವನ್ನೂ ತೆಂಗಿನ ಮರ ಹೀರಿಕೊಂಡು ಎಳನೀರಿನ ಮೂಲಕ, ಕೊತ್ತಳಿಗೆ ಮೂಲಕ ಪುನಃ ಡಿಸ್ಚಾರ್ಜ್ ಮಾಡುತ್ತದೆ.

              ಬದನಾಜೆಯವರಿಗೆ ತೆಂಗು, ಅದರ ಮೌಲ್ಯವರ್ಧನೆ, ಔಷಧೀಯ ವಿಚಾರಗಳ ವೈಜ್ಞಾನಿಕ ಸಂಶೋಧನೆಗಳಿಗೆ ವಿಶ್ರಾಂತಿಯಿಲ್ಲ. ಮಾತಿಗಿಳಿದರೆ ಅಂಕಿಅಂಶಗಳೊಂದಿಗೆ ನಿಖರ ಮಾಹಿತಿ. ಒಂದು ಮರದಲ್ಲಿ ವರುಷಕ್ಕೆ ಹನ್ನೆರಡು ತೆಂಗಿನಗರಿ ಒಣಗಿ (ಮಡಲು) ಬೀಳಬೇಕು. ಒಂದು ತೆಂಗಿನ ಮಡಲು ಬೆಳೆದು ಒಣಗುವ ಹಂತ ತಲುಪಲು ಮೂರು ವರುಷ ಬೇಕು. ಹಾಗಾಗಿ ಒಂದು ಸದೃಢ ಮರದಲ್ಲಿ ಮೂವತ್ತಾರು ಗರಿಗಳು ಇರುತ್ತದೆ.

               ಕೊತ್ತಳಿಗೆಯನ್ನು ಕತ್ತರಿಸಿ ಬಿಸಿನೀರಿನ ಒಲೆಗಾಗಿ ಸಂಗ್ರಹ ಮಾಡಿಟ್ಟರೆ, ಇನ್ನೂ ಕೆಲವರು ಬಿದ್ದ ಮಡಲನ್ನು ಅಲ್ಲಲ್ಲೇ ತುಂಡರಿಸಿ ಬುಡಕ್ಕೆ ಹಾಕುತ್ತಾರೆ. ಆ ಮರದ ಸತ್ವ ಅದರ ಬುಡಕ್ಕೆ ಮರು ಉಣಿಕೆ. ಕೊತ್ತಳಿಗೆಯಲ್ಲಿರುವ ಔಷಧೀಯ ಗುಣಗಳು ದೊಡ್ಡಪ್ರಮಾಣದಲ್ಲಿ ಸಂಶೋಧನೆಯಾದರೆ ಕೃಷಿ ರಂಗದಲ್ಲೊಂದು ದೊಡ್ಡ ಹೆಜ್ಜೆಯಾಗಬಹುದು.

                ಸಿಂಧೂರ ಶಂಕರ್ ಸಂಶೋಧನೆಗೆ ಆಯ್ದುಕೊಂಡ ವಿಷಯ - ವೃಕ್ಷಗಳ ಫಲವತ್ತತೆ ಹೆಚ್ಚಿಸುವ, ಕೀಟ ಮತ್ತು ಶಿಲೀಂಧ್ರ ನಾಶಕ ಔಷಧಿ ತಯಾರಿ. ನೆದರ್ಲ್ಯಾಂಡಿನ ಇನೆಸ್ಫೋ ವಿಜ್ಞಾನ ಮೇಳದಲ್ಲಿ ಪ್ರಸ್ತುತಿ. ಸಂಶೋಧನಾ ವಿಷಯದ ಮುಖ್ಯ ಒಳಸುರಿ ಗೇರುಬೀಜದ ಸಿಪ್ಪೆಯ ಎಣ್ಣೆ. ಇದಕ್ಕೆ ಅರಶಿನ, ಅಂಟುವಾಳ, ತೆಂಗಿನೆಣ್ಣೆ.. ಮೊದಲಾದ ಸಸ್ಯಜನ್ಯ ವಸ್ತುಗಳ ಬಳಕೆ. ಇದರೊಂದಿಗೆ ಗೇರು ಎಣ್ಣೆಯನ್ನು ಕರಗಿಸಲಿರುವ ವಸ್ತುವೊಂದರ ಬೆರಕೆ. ಹೀಗೆ ಲಭಿಸಿದ ದ್ರಾವಣಕ್ಕೆ ಹೆಸರು 'ಫಲಿನಿ'. ನೂರು ಲೀಟರ್ ನೀರಿಗೆ ಮೂರು ಲೀಟರ್ ಫಲಿನಿ ಸೇರಿಸಿ ಅಡಿಕೆ, ದ್ರಾಕ್ಷಿ, ಕಾಫಿ, ಕೊಕ್ಕೋ ಗಿಡಗಳಿಗೆ ಕೃಷಿಕರು ಸಿಂಪಡಿಸುತ್ತಿದ್ದಾರೆ. ದಶಕದೀಚೆಗೆ ಉತ್ತಮ ಫಲಿತಾಂಶ ಪ್ರಾಪ್ತವಾಗುತ್ತಿದೆ ಎನ್ನುತ್ತಾರೆ ಭಟ್.

               ಸಿಂಧೂರ ಫಲಿನಿಯನ್ನು ವೈಜ್ಞಾನಿಕ ಸಂಶೋಧನೆಗೆ ಅಳಪಡಿಸಿದ್ದಾರೆ. ಸಂಶೋಧನಾಲಯಕ್ಕೆ ಓಡಿದ್ದಾರೆ. ವಿಜ್ಞಾನಿಗಳನ್ನು ಭೇಟಿಯಾಗಿದ್ದಾರೆ. ವರದಿಯನ್ನು ತರಿಸಿಕೊಂಡಿದ್ದಾರೆ. ಫಲಾಫಲಗಳನ್ನು ದಾಖಲಿಸಿದ್ದಾರೆ. ಪ್ರಾಕ್ಟಿಕಲ್ ವಿಚಾರಗಳಿಗೆ ಒತ್ತುನೀಡಿದ್ದರಿಂದಲೇ ಇವರಿಬ್ಬರ ವರದಿಗಳಿಗೆ ಪ್ರಶಸ್ತಿ ಪ್ರಾಪ್ತವಾಗಿದೆ. ಧೀಮಂತ್ ಸೇಡಿಯಾಪು ಮತ್ತು ಶ್ರೀಕುಮಾರ್ ಜಂಟಿಯಾಗಿ 'ಬಸವನಹುಳು ನಿಯಂತ್ರಣಕ್ಕೆ ಸೀಗೆಕಾಯಿಯ ಔಷಧದ ಸಿಂಪಡಣೆ'; 'ಆಸ್ಪತ್ರೆಗಳಲ್ಲಿ ತ್ಯಾಜ್ಯಗಳನ್ನು ತುಂಬುವ ನೂತನ ಕಸದ ಬುಟ್ಟಿ' ವಿಚಾರದ ಪ್ರಸ್ತುತಿಯನ್ನು ಆದಿತ್ಯ ಎಸ್.ಎನ್., ಶಿವಪ್ರಸಾದ್ ಬಿ. ಮಾಡಿದ್ದಾರೆ. ಈ ಎರಡೂ ಪ್ರಬಂಧಗಳಿಗೂ ಬೆಳ್ಳಿಯ ಪುರಸ್ಕಾರ.

                  ಅಂತಾರಾಷ್ಟ್ರೀಯ ವಿಜ್ಞಾನಿಗಳ ಕೈಯಲ್ಲಿ ಭಾರತದ ಜ್ಞಾನ ವರದಿಗಳ ರೂಪದಲ್ಲಿವೆ. ಭಾರತಕ್ಕೆ ಬೇರೆ ಬೇರೆ ರೂಪದಲ್ಲಿ ನುಗ್ಗಿ, ನಮ್ಮ ಪಾರಂಪರಿಕ ಜ್ಞಾನವನ್ನು ದಾಖಲಿಸಿ, 'ಅದು ತಮ್ಮದೆಂದು' ಸ್ಥಾಪಿಸಿದ ಉದಾಹರಣೆಗಳು ಕಣ್ಣ ಮುಂದಿವೆ. ಅರಶಿನ, ಕಹಿಬೇವು..ಗಳು ಹುನ್ನಾರಗಳಿಂದ ಪೇಟೆಂಟ್ ಪಡಕೊಂಡಿದ್ದರೂ, ಬಳಿಕ ರದ್ದಾದುದು ಇತಿಹಾಸ. 'ಇದನ್ನು ಲಕ್ಷ್ಯದಲ್ಲಿಸಿಕೊಂಡೇ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಜ್ಞಾನಕ್ಕೆ ಪೇಟೆಂಟ್ ಮಾಡುವ ಉದ್ದೇಶವಿದೆ' ಎನ್ನುತ್ತಾರೆ ಶಂಕರ ಭಟ್.

                 ಕೃಷಿಯಲ್ಲಿ ಸಂಶೋಧನೆಗಳು ಅಪರಿಮಿತ. 'ಲ್ಯಾಬ್ ಟು ಲ್ಯಾಂಡ್' ಆಶಯವಾದರೂ ಬಹುತೇಕ ಫೈಲಿನೊಳಗೆ ಅವಿತುಕೊಳ್ಳುತ್ತವೆ. ಸಂಶೋಧನೆಗಳನ್ನು ಹೊಲಕ್ಕೆ ತರುವ, ರೈತರಿಗೆ ತಲಪಿಸುವ ಬೆರಳೆಣಿಕೆಯ ಪ್ರಾಮಾಣಿಕ ವಿಜ್ಞಾನಿಗಳಿರುವುದರಿಂದ ಸಂಶೋಧನಾಲಯಗಳು ಉಸಿರಾಡುತ್ತಿವೆ! ಬಾಲವಿಜ್ಞಾನಿಗಳ ಬಾಲಹೆಜ್ಜೆಯ ಪ್ರಬಂಧವು ಹಸಿರು ಉಸಿರಿನ ವಿಜ್ಞಾನಿಗಳ ಸಂಶೋಧನೆಗೆ ಒಳಸುರಿ.

                 ಸಂಶೋಧನೆಗಳು ಕೃಷಿಕಪರವಾಗಿದ್ದರೂ ಅಲ್ಲೋ ಇಲ್ಲೋ ಕೆಲವು ವಿಜ್ಞಾನಿಗಳು ಬಹುರಾಷ್ಟ್ರೀಯ ಕಂಪೆನಿಗಳ ಏಜೆಂಟರಂತೆ ನಡೆದುಕೊಳ್ಳುತ್ತಿರುವುದು ಮಾಧ್ಯಮಗಳಿಂದ ವ್ಯಕ್ತವಾಗುವ ವಿಚಾರ. ಫಕ್ಕನೆ ನೋಡಿದರೆ ವಿಷ ಕಂಪೆನಿಗಳ ಏಜೆಂಟರಂತೆ ಭಾಸವಾಗುತ್ತದೆ. ತನ್ನ ಸಂಶೋಧನೆ, ದೇಶ, ಸಮಾಜಕ್ಕೆ ಕಿಂಚಿತ್ತೂ ಗೌರವ ಕೊಡದವರು ಎಷ್ಟು ಮಂದಿ ಬೇಕು? ಸಂಶೋಧನೆಯ ಅರ್ಥವೇ ಮಸುಕಾಗಿದೆ.

                    ಶಾಲಾ ಹಂತದಿಂದಲೇ 'ಸಂಶೋಧನೆ' ಪರಿಕಲ್ಪನೆ, ಪ್ರಕ್ರಿಯೆಗಳು ವಿದ್ಯಾರ್ಥಿಗೆ ಕಲಿಕೆಯಾಗಿಯೇ ಒದಗಿದಾಗ ಅದರ ಕಷ್ಟ ಸುಖಗಳ ಕನಿಷ್ಠ ಜ್ಞಾನವೂ ಲಭಿಸುತ್ತದೆ. ಇಂದು ಕೃಷಿ ವಿಚಾರಗಳು ಶೈಕ್ಷಣಿಕವಾಗಿ ದೂರವಾಗಿವೆ. ಕೃಷಿಗೂ ವಿದ್ಯಾರ್ಥಿಗಳಿಗೂ, ಕೃಷಿಗೂ ಶೈಕ್ಷಣಿಕ ಸಂಸ್ಥೆಗಳಿಗೂ, ಕೃಷಿಗೂ ಪಠ್ಯ ರೂಪೀಕರಣ ಸಮಿತಿಗಳಿಗೆ 'ಕೃಷಿಯೊಂದು ಬದುಕು' ಎನ್ನುವುದು ಅರ್ಥವಾಗಿಲ್ಲ, ಅರ್ಥವಾಗುತ್ತಿಲ್ಲ. ಈ ಕಾಲಘಟ್ಟದಲ್ಲಿ ಕೃಷಿಯ ಹಿನ್ನೆಲೆಯನ್ನಿಟ್ಟುಕೊಂಡು ವಿಶ್ವಮಟ್ಟದಲ್ಲಿ ಚಿನ್ನ, ಬೆಳ್ಳಿ ತಂದ ವಿದ್ಯಾರ್ಥಿಗಳ ಸಂಶೋಧನಾ ಬಾಲನಡೆಯಲ್ಲಿ ಸಂದೇಶವಿಲ್ವಾ.
  
                   ಶಾಲೆಯಲ್ಲಿ ಯಾವ ವಿದ್ಯಾರ್ಥಿಯೂ ಶ್ರೇಷ್ಟನಲ್ಲ, ಯಾರೂ ಕನಿಷ್ಟರಲ್ಲ. ಆದರೆ ಬೌದ್ಧಿಕ ಮಟ್ಟದಲ್ಲಿ ಒಬ್ಬೊಬ್ಬರದು ಒಂದೊಂದು ಮೆಟ್ಟಿಲು. ಪಠ್ಯೇತರ ವಿಚಾರಗಳಿಗೆ ಮಾನ್ಯತೆ ಸಿಕ್ಕಾಗ ಅದು ಇತರ ವಿದ್ಯಾರ್ಥಿಗಳನ್ನೂ ಪ್ರಚೋದಿಸುತ್ತವೆ. ಈ ವರುಷ ನನ್ನಲ್ಲಿಗೆ ಏಳೆಂಟು ವಿದ್ಯಾರ್ಥಿಗಳು ಪ್ರಾಜೆಕ್ಟ್ಗಾಗಿ ಬಂದಿದ್ದಾರೆ. ಎಲ್ಲರಿಗೂ ಹೇಗೆ ನಾನು ಮಾರ್ಗದರ್ಶಕನಾಗಲಿ. ಆದರೆ ವಿಜ್ಞಾನ ಸಂಶೋಧನೆಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳ ಮನಃಸ್ಥಿತಿ, ಹೆತ್ತವರ ನಿರ್ಧಾರವನ್ನು ಮಾನಿಸಬೇಕು, ಎನ್ನುತ್ತಾರೆ ಶಂಕರ ಭಟ್ಟರು.

                      ಅಂಕ ಆಧಾರಿತವಾದ ಶೈಕ್ಷಣಿಕ ಪಠ್ಯಕ್ರಮದಲ್ಲಿ ಮಕ್ಕಳನ್ನು ಓದಿಸುತ್ತೇವೆ. ಓಡುತ್ತಿರುವ ಕಾಲದ ಜತೆಗೆ ಅಪ್ಡೇಟ್ ಆಗಬೇಕೆನ್ನುವುದು ಹಪಹಪಿ. ಹಾಗಾಗಿ ಒಂದೊಂದು ಮಾರ್ಕಿಗೂ ಪೈಪೋಟಿ. ನನಗನ್ನಿಸುತ್ತದೆ - ಪೈಪೋಟಿ ಬೇಕಾದುದೇ. ಆದರೆ ಬೌದ್ಧಿಕವಾಗಿ ಗಟ್ಟಿ ಮಾಡದ ಸ್ಪರ್ಧೆಗಳು ಬರಿಗುಲ್ಲು-ನಿದ್ದೆಗೇಡು. ಅಂಕದ ಹಿಂದೆ ಓಡಿ ಯಶಸ್ಸಾಗಬಹುದು. ಆದರೆ ಅಂತಿಮ ಬಿಂದು ತಲುಪಿದಾಗ ಜ್ಞಾನ ಕೈಕೊಡುತ್ತದೆ! ಒತ್ತಡ ಅಂಟಿಕೊಳ್ಳುತ್ತದೆ. ಶಾಲಾ ಹಂತದಿಂದಲೇ ಸಂಶೋಧನೆಯಂತಹ ಜ್ಞಾನವನ್ನು ಗಟ್ಟಿಗೊಳಿಸುವ ಪಠ್ಯೇತರ ಶಿಕ್ಷಣ ಸಿಕ್ಕರೆ ವಿದ್ಯಾರ್ಥಿ ಜೀವನ ಯಶಸ್ಸು.


Monday, June 10, 2013

ಆಹಾರ ಸಂರಕ್ಷಣೆಯಿಂದ ಬದುಕಿಗೆ ಭದ್ರತೆ


 
               ಆಪ್ತರೊಬ್ಬರ ಮನೆ ತಲುಪಿದಾಗ ಮಧ್ಯಾಹ್ನ ಮೀರಿತ್ತು. ಮನೆಮಂದಿ ಭೋಜನ ಪೂರೈಸಿದ್ದಕ್ಕೆ ಬಟ್ಟಲು ಸಾಕ್ಷಿಯಾಗಿತ್ತು. ಉಂಡಾಯಿತು ಎಂದರೆ ಹೊಟ್ಟೆಗೆ ದ್ರೋಹ. ಉಣ್ಣದಿರೊಣವೇ, ಹೊಟ್ಟೆಯೊಳಗೆ ತಳಮಳ. ತಡವಾದುದಕ್ಕೆ ಸಬೂಬು ಹೇಳುತ್ತಿರುವಾಗಲೇ, 'ಮಧ್ಯಾಹ್ನದ ಹೊತ್ತು. ಉಂಡು ಹೋಗಲೇ ಬೇಕು' ಎನ್ನುವ ಒತ್ತಾಯ. ಶುರುವಾಯಿತು ನೋಡಿ, ಮನೆಯೊಳಗೆ ಟೆನ್ಶನ್. ಗೊಣಗಾಟ. ಕಾರಣವಿಷ್ಟೇ, ಮಾಡಿದ ಖಾದ್ಯ ಮುಗಿದಿತ್ತು. ಪುನಃ ಮಾಡುವಷ್ಟು ಪುರುಸೊತ್ತಿಲ್ಲ. ಮನೆಯೊಳಗೆ ಪರಿಕರಗಳಿಲ್ಲ! 'ಅನ್ನದೊಂದಿಗೆ ಉಪ್ಪಿನಕಾಯಿ, ಮಜ್ಜಿಗೆ ಸಾಕು' ಎಂದು ಬಿನ್ನವಿಸಿ, ಅದರಲ್ಲೇ ಮೃಷ್ಟಾನ್ನವನ್ನು ಆರೋಪಿಸಿ ಉಂಡು ಹೊರಟೆ.

                ಯಾಕೆ ಹೀಗೆ? ಅಕಾಲದಲ್ಲಿ ಅತಿಥಿಗಳು ಬಂದರೆ ರಕ್ತದೊತ್ತಡ ಯಾಕೆ ಏರುತ್ತದೆ? ಅಮ್ಮ, ಅಜ್ಜಿಯಂದಿರ ಬದುಕು ಟೆನ್ಶನ್ ಫ್ರೀಯಾಗಿತ್ತಲ್ವಾ. ನೆಂಟರು ಬಂದಾಗ ಮುಖ ಅರಳುತ್ತಿತ್ತು. ಅರ್ಧ ಗಂಟೆಯೊಳಗೆ ಚಟ್ನಿ, ಗೊಜ್ಜು, ಸಾರು, ತಂಬುಳಿ ಸಿದ್ಧವಾಗುತ್ತಿತ್ತು. ಮಾಡಿದ ಖಾದ್ಯದ ವಿಶೇಷ, ಒಳಸುರಿಗಳ ಸಿದ್ಧತೆಯನ್ನು ಹೇಳಿದಷ್ಟು ತೃಪ್ತಿಯಾಗದು.

               ಆಹಾರ ಸಂರಕ್ಷಣೆಯ ಪರಿಕಲ್ಪನೆ ಹಿರಿಯರ ಯಶಸ್ವೀ ಬದುಕಿನ ಗುಟ್ಟು. ಬದುಕಿನೊಂದಿಗೆ ಹೊಸೆದ ಪ್ರಕ್ರಿಯೆ. ಅದಕ್ಕೆಂದೇ ಪ್ರತ್ಯೇಕ ಕಾನೂನುಗಳಿರಲಿಲ್ಲ. ಪ್ರಕೃತ ಕೇಂದ್ರ ಸರಕಾರವು ಆಹಾರ ಭದ್ರತೆಯ ಕಾನೂನನ್ನು ಕೈಯಲ್ಲಿ ಹಿಡಿದಿದೆ. ಕಿಲೋ, ಗ್ರಾಮ್, ಲೀಟರ್ ಮೂಲಕ ಒಬ್ಬೊಬ್ಬನಿಗೆ ಇಂತಿಷ್ಟು ಆಹಾರ ಎಂಬ ಲೆಕ್ಕಾಚಾರ ಮಾಡುತ್ತಿದೆ. ಆಹಾರ ಸಂರಕ್ಷಣೆ ಇದ್ದಾಗ ಭದ್ರತೆಯ ಅಂಜಿಕೆ ಯಾಕೆ?

               ಆಹಾರ ಸಂರಕ್ಷಣೆಯೆನ್ನುವುದು ಹಳ್ಳಿ ಜ್ಞಾನ. ಹಳ್ಳಿ ಬದುಕಿನೊಂದಿಗೆ ನಿತ್ಯ ಸಂವಹನ ಮಾಡುವ ಅಲಿಖಿತ ಜ್ಞಾನ. ಅಜ್ಜಿಯಿಂದ ಮೊಮ್ಮಗನಿಗೆ ಹರಿದು ಬರುವ ಪ್ರಾಕ್ಟಿಕಲ್ ವಿದ್ಯೆ. ಹಳ್ಳಿಯ, ಹಳ್ಳಿಗರ, ಹಳ್ಳಿಜ್ಞಾನದ ಅನಾದರ ಮತ್ತು ಗ್ರಾಮೀಣ ಭಾರತವನ್ನು ನೋಡುವ ದೊರೆಗಳ ಅಪಕ್ವ ಬೌದ್ಧಿಕ ಮಟ್ಟಗಳಿಂದಾಗಿ ಆಹಾರ ಸಂರಕ್ಷಣೆಯಂತಹ ದೇಸಿ ಜ್ಞಾನಕ್ಕೆ ಮಸುಕು.

ಹಿರಿಯರ ನೆನಪಿನಲ್ಲಿರುವ ಕೆಲವು ಸಂರಕ್ಷಣಾ ವಿಧಾನಗಳು:
               ಹಲಸು ನಿರ್ಲಕ್ಷಿತ ಹಣ್ಣು. ಅಕ್ಕಿಗೆ ತತ್ವಾರವಾಗಿದ್ದಾಗ ಉಸಿರು ನಿಲ್ಲಿಸಿದ ಹಿರಿಯಣ್ಣ. ಹಲಸಿನ ಬೀಜವು ತರಕಾರಿ, ಸಿಹಿತಿಂಡಿಗಳಿಗೆ ಒಳಸುರಿ. ನೆಲಮಟ್ಟದಿಂದ ಮೂರಡಿ ಕೆಳಗಿನ ಮಣ್ಣನ್ನು ನೀರಿನಲ್ಲಿ ತೋಯಿಸಿ, ಅದರಲ್ಲಿ ಹಲಸಿನ ಬೀಜವನ್ನು ಅದ್ದಿ ಕಾಪಾಡುತ್ತಿದ್ದರು. ತಾಜಾತನ ಕಳೆದುಕೊಳ್ಳದ ಬೀಜಕ್ಕೆ ವರುಷದ ತಾಳಿಕೆ. ಬೇಕಾದಾಗ ಬೇಕಾದಷ್ಟೇ ಬಳಕೆ. ಸೌತೆಕಾಯಿ, ಉಪ್ಪುಸೊಳೆ ಪದಾರ್ಥ ಮತ್ತು ನುಗ್ಗೆಸೊಪ್ಪಿನ ಪಲ್ಯಕ್ಕೆ ಒಳಸುರಿ. ಹಲಸಿನ ಬೀಜವನ್ನು ಹದಕ್ಕೆ ಬೇಯಿಸಿ ರುಚಿಗೆ ಉಪ್ಪು ಸೇರಿಸಿ, ನಂತರ ಮೂರ್ನಾಲ್ಕು ದಿವಸ ಬಿಸಿಲಿನ ಸ್ನಾನ ಮಾಡಿಸಿ. ಮಕ್ಕಳಿಗದು ಮಳೆಗಾಲದ ಕುಟುಂ ಕುಟುಂ ತಿಂಡಿ. ದೊಡ್ಡವರಿಗೂ ಸಹ. ಶಾಲೆಯ ಕಂಪಾಸ್ ಬಾಕ್ಸ್ನಲ್ಲಿ, ಚೀಲದ ಸಂಚಿನಲ್ಲಿ ಈ 'ಸಾಂತಾಣಿ'ಗೆ ಖಾಯಂ ಜಾಗ!

              ಬಲಿತ ಹಲಸಿನ ಸೊಳೆಯನ್ನು ಬೀಜದಿಂದ ಬೇರ್ಪಡಿಸಿ, ಉಪ್ಪುನೀರಿನಲ್ಲಿ ಮುಳುಗಿಸಿಟ್ಟರೆ ವರುಷವಾದರೂ ಕೆಡದು. ಕರಾವಳಿಯಲ್ಲಿದು 'ಉಪ್ಪುಸೊಳೆ'. ಇದನ್ನು ತಯಾರಿಸುವ ವಿಶೇಷಜ್ಞರು ಉಪ್ಪುಸೊಳೆಗಾಗಿಯೇ ಕೆಲವು ಮರಗಳನ್ನು ಗೊತ್ತು ಮಾಡುವುದುಂಟು. ಹಲಸಿನ ಗುಜ್ಜೆ, ಹೆಬ್ಬಲಸನ್ನು ಚಿಕ್ಕ ತುಂಡು ಮಾಡಿ ಉಪ್ಪುನೀರಿನಲ್ಲಿ ಹಾಕಿಟ್ಟರೆ ಆರು ತಿಂಗಳ ತಾಳಿಕೆ. ಇದರ ಪಲ್ಯ, ರೊಟ್ಟಿ, ದೋಸೆ, ಹಪ್ಪಳ, ಉಂಡ್ಲುಕಾಳುಗಳು.. ರುಚಿ. ಹಲಸು, ಗೆಣಸು, ಮರಗೆಣಸುಗಳ ಹಪ್ಪಳ, ಚಿಪ್ಸ್ಗಳು ಸಂರಕ್ಷಣೆ ಮಾಡಿಡುವಂತಾದ್ದು. ಇವು ಮನೆಯೊಳಗಿದ್ದರೆ ಮಳೆಗಾಲ, ಚಳಿಗಾಲದಲ್ಲಿ ಬೇಕರಿಗೆ ಓಡಬೇಕಾಗಿಲ್ಲ! ಅಜೀರ್ಣ ಮಾಡಿಕೊಳ್ಳಬೇಕಾಗಿಲ್ಲ!

                  ಮಾಂಬಳ - ಕಾಡುಮಾವಿನ ಹಣ್ಣಿನ ರಸದ ಘನ ರೂಪ. ಬದುಕಿನಲ್ಲಿ ಮರೆಯಾದ, ಮರೆಯಾಗುತ್ತಿರುವ ರುಚಿ. ಕಾಡು ಮಾವಿನ ಹಣ್ಣನ್ನು ತೊಳೆದು, ರಸವನ್ನು ಹಿಂಡಿ, ಅದನ್ನು ಬಿಸಿಲಿನಲ್ಲಿ ಒಣಗಿಸುವುದು. ಗೆರಸೆಯ (ಭತ್ತ, ಧಾನ್ಯ ಗೇರುವ) ಮೇಲೆ ಹತ್ತಿ ವಸ್ತ್ರವನ್ನು ಹಾಸಿ ಅದರ ಮೇಲೆ ರಸ ಎರೆಯಬೇಕು. ಮರುದಿನ ಒಣಗಿದ ಹಣ್ಣಿನ ರಸದ ಮೇಲೆ ಪುನಃ ಎರೆತ. ಹೀಗೆ ಹದಿನೈದು ದಿವಸದ ಲೇಯರ್. ಬಿಸಿಲಿನ ಸ್ನಾನದೊಂದಿಗೆ ಹದವಾದ ಘನ ವಸ್ತುವೇ ಮಾಂಬಳ. ಕಾಡು ಮಾವಿನ ಸಿಹಿ-ಹುಳಿಯನ್ನು ಹೊಂದಿಕೊಂಡು ರುಚಿ. ಸುಮಾರು ಅರ್ಧ ಇಂಚು ದಪ್ಪ. ಒಂದು ವರುಷವಾದರೂ ಕೆಡದು. ತಂಪು ಪೆಟ್ಟಿಗೆಯಲ್ಲಿಟ್ಟರೆ ಬಾಳ್ವಿಕೆ ಹೆಚ್ಚು. ಕಾಡು ಮಾವಿನ ಹಣ್ಣಿನ ರಸ ದಪ್ಪವಾದಷ್ಟು ಒಳ್ಳೆಯದು. ತೆಳುವಾಗಿದ್ದರೆ ಒಣಗುವುದಿಲ್ಲ.

               ಹಣ್ಣು ಹಲಸಿನ ಸೊಳೆಯನ್ನು ಕೊಚ್ಚಿ, ಅದಕ್ಕೆ ಬೆಲ್ಲ ಹಾಕಿ ತಳಹಿಡಿಯದಂತೆ ಜಾಗ್ರತೆಯಿಂದ ಗಟ್ಟಿಯಾಗುವ ತನಕ ಕಾಯಿಸಿದಾಗ ಸಿಗುವ ಉತ್ಪನ್ನ 'ಬೆರಟ್ಟಿ'. ಇದರ ಗಟ್ಟಿ ಪಾಕ (ಅಂದರೆ ಬೆಲ್ಲದಷ್ಟು) ತಾಳಿಕೆ ಹೆಚ್ಚು. ಹಲಸಿನ ಋತುವಿನ ಬಳಿಕ 'ಹಲಸಿನ ಹಣ್ಣಿನ ಪಾಯಸ'ಕ್ಕೆ ಬೆರಟ್ಟಿ ಬಳಕೆ. ಚಿಕ್ಕ ಮಕ್ಕಳಿಗಿದು ಚಾಕೋಲೇಟ್.

              ಬಲಿತ ಮಾವಿನ ಕಾಯಿಯನ್ನು ತೊಳೆದು ಉಪ್ಪುನೀರಿನಲ್ಲಿ ಹಾಕಿಡುವಂತಹ ಪದ್ಧತಿ ಪಾರಂಪರಿಕ. ಉಪ್ಪು ಸಂರಕ್ಷಕವಾಗಿ ಕೆಲಸ ಮಾಡುವುದರಿಂದ ಮಾವಿನಕಾಯಿ ಹಾಳಾಗದು. ಒಂದು ವರುಷವಾದರೂ ಕೆಡದು. ಮಾವಿನ ಋತು ಕಳೆದ ಬಳಿಕ 'ನೀರು ಮಾವಿನಕಾಯಿ'ಯನ್ನು ತೆಗೆದು ಮಾಡುವ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಪಲ್ಯ, ಗೊಜ್ಜು, ಚಟ್ನಿ, ಸಾರು ಇದ್ದರೆ ನಾಲ್ಕು ತುತ್ತು ಹೆಚ್ಚೇ ಹೊಟ್ಟೆಗಿಳಿಯುತ್ತದೆ. ಮಾವಿನ ಕಾಯನ್ನು ತೆಳುವಾಗಿ ಕೆತ್ತಿ, ಒಣಗಿಸಿಟ್ಟು ಪದಾರ್ಥಕ್ಕೆ ಬಳಸುತ್ತಿದ್ದರು. ಹುಣಸೆ ಹುಳಿಗೆ ಪರ್ಯಾಯ.

               ಹಸಿಮೆಣಸನ್ನು ಪೂರ್ತಿ ತುಂಡಾಗದಂತೆ ಉದ್ದಕ್ಕೆ ಸೀಳಿ, ಉಪ್ಪು ಹಾಕಿ, ಮೆಣಸು ಬಾಡುವಷ್ಟು ಬೇಯಿಸಿ. ಅದನ್ನು ಮಜ್ಜಿಗೆಯಲ್ಲಿ ಮುಳುಗಿಸಿ ಬಿಸಿಲಿನಲ್ಲಿ ಒಣಗಿಸಿ. ಮರುದಿವಸ ಪುನಃ ಮಜ್ಜಿಗೆಯಲ್ಲಿ ಮಿಂದೆದ್ದು ಬಿಸಿಲ ಸ್ನಾನ. ಹೀಗೆ ಮೂರ್ನಾಲ್ಕು ದಿವಸದ ಪ್ರಕ್ರಿಯೆಯ ಬಳಿಕ ಗಾಳಿಯಾಡದಂತೆ ಕಾಪಿಟ್ಟರೆ ಮಳೆ, ಚಳಿಗಾಲದಲ್ಲಿ ಬಳಕೆ. ಎಣ್ಣೆಯಲ್ಲಿ ಕರಿದ ಮೆಣಸು ಊಟಕ್ಕೆ ಅದರಲ್ಲೂ ಗಂಜಿಯೂಟಕ್ಕೆ ಜತೆ. ಇದೇ ರೀತಿ ಹಾಗಲಕಾಯಿ, ಬದನೆಕಾಯನ್ನು ಕೂಡಾ ಬಿಸಿಲಿನಲ್ಲಿ ಒಣಗಿಸಿ ಸಂರಕ್ಷಣೆ ಮಾಡುತ್ತಿದ್ದರು. ಇದಕ್ಕೆ ಮಾತ್ರ ಮಜ್ಜಿಗೆಯ ಬಳಕೆಯಿಲ್ಲ.

               ಮಲೆನಾಡಿನ ಮಿಠಾಯಿ 'ಸುಕೇಳಿ'. ಎಲ್ಲಾ ಪ್ರದೇಶದ ಬೇಡಿಕೆಯ ಸಿಹಿತಿಂಡಿ. ಬಾಳೆಹಣ್ಣನ್ನು ಸಿಪ್ಪೆತೆಗೆದು, ಬಿಸಿಪೆಟ್ಟಿಗೆ(ಡ್ರೈಯರ್)ಯಲ್ಲಿ ಒಂದು ದಿವಸ ನಿರ್ಜಲಿಸಲು ಇಡುತ್ತಾರೆ. ಮರುದಿವಸ ಚಿಕ್ಕ ಚಿಪ್ಸಿನ ಗಾತ್ರಕ್ಕೆ ಕತ್ತರಿಸುತ್ತಾರೆ. ಮೂರನೇ ದಿವಸ ಪುನಃ ಬಿಸಿಪೆಟ್ಟಿಗೆಯಲ್ಲಿ ಸಣ್ಣ ಉರಿಯಲ್ಲಿ ಸ್ನಾನ. ಸಾಮಾನ್ಯ ಗಾತ್ರದ ಹತ್ತು ಕಿಲೋ ಬಾಳೆಹಣ್ಣಿನಿಂದ ಒಂದು ಕಿಲೋ ಸುಕೇಳಿ ತಯಾರು. ಉತ್ತಮ ನೋಟ ಮತ್ತು ರುಚಿ. ತಾಳಿಕೆ ಮೂರು ತಿಂಗಳು. ಒಣಪ್ರದೇಶದಲ್ಲಾದರೆ ಆರು ತಿಂಗಳು. ಶೀರ, ಪಾಯಸಗಳಿಗೆ ದ್ರಾಕ್ಷಿಯ ಬದಲಿಗೆ ಬಳಕೆ. ಸುಕೇಳಿಗೆ ಬೂದು ಬಾಳೆಹಣ್ಣು ಹೆಚ್ಚು ಒಗ್ಗುತ್ತದೆ.

                ಕೋಕಂ, ಪುನರ್ಪುಳಿಯ ಬಳಕೆ ಎಲ್ಲರಿಗೂ ಗೊತ್ತು. ಎಪ್ರಿಲ್, ಮೇ ತಿಂಗಳಲ್ಲಿ ರಸವನ್ನು ತೆಗೆದಿಟ್ಟರೆ, ಮುಂದಿನ ಬೇಸಿಗೆ ಕೊನೆಯವರೆಗೂ ಬಳಸಬಹುದಾದ ಆರೋಗ್ಯದಾಯಕ ಪೇಯ. ಅದರ ಒಣಸಿಪ್ಪೆಗೆ ಬಹು ಬೇಡಿಕೆ. ಸಿಪ್ಪೆಯಿಂದ ತಯಾರಿಸಿದ ತಿಳಿಸಾರು ಬೆಳ್ತಿಗೆ ಅಕ್ಕಿಯ ಅನ್ನಕ್ಕೆ ಕಾಂಬಿನೇಶನ್. ಹಿಮ್ಮಡಿ ಒಡೆದಾಗ ಮತ್ತು ಬೆಂಕಿ ತಗುಲಿದ ಗಾಯಕ್ಕೆ ಲೇಪಿಸಲು ಪುನರ್ಪುಳಿಯ ಬೀಜದಿಂದ ಮುಲಾಮು ತಯಾರಿಸುವ ಪದ್ಧತಿ ಹಳ್ಳಿಬದುಕಿನಲ್ಲಿದೆ.

                   ಭತ್ತ, ಅಕ್ಕಿಯನ್ನು ಸಂರಕ್ಷಿಸಲು ಭತ್ತದ ಹುಲ್ಲಿನಿಂದ 'ಮುಡಿ' ತಯಾರಿಸುವ ಜಾಣ್ಮೆ ಅಪ್ಪಟ ದೇಸಿ. ಭತ್ತದ ಕೃಷಿಯ ಹಿಂಬೀಳಿಕೆಯೊಂದಿಗೆ ಈ ಅಪೂರ್ವ ತಂತ್ರಜ್ಞಾನಕ್ಕೆ ಇಳಿಲೆಕ್ಕ. ಮುಡಿಯಲ್ಲಿ ಭತ್ತ, ಅಕ್ಕಿಯನ್ನು ತುಂಬಿ ಅಟ್ಟದಲ್ಲಿಟ್ಟರೆ ಎರಡು-ಮೂರು ವರುಷ ತಾಜಾ ಆಗಿ ಉಳಿಯುತ್ತದೆ! ಮುಡಿಯಲ್ಲಿ ಭತ್ತ ಮಾತ್ರವಲ್ಲ ಹೆಸರು ಕಾಳು, ಉದ್ದು, ಹುರುಳಿಯನ್ನು ಸಂರಕ್ಷಿಸಲು ಮುಡಿ ಉಪಾಧಿ. ಮುಡಿಯನ್ನು ಇಲಿಯೂ ಕೊರೆಯುವುದಿಲ್ಲ. ಅಷ್ಟೊಂದು ಭದ್ರ. ಉಪನಯನದಂತಹ ಸಂಸ್ಕಾರಕರ್ಮಗಳಲ್ಲಿ 'ಅಜ್ಜಿ ಮನೆಯ ಬಳುವಳಿ'ಯಾಗಿ ಅಕ್ಕಿಮುಡಿಯನ್ನು ಕೊಡುವ ಸಂಪ್ರದಾಯವಿದೆ. ಹಾಲ್ಗಳಿಗೆ ಉಪನಯನ ವರ್ಗಾವಣೆ ಆದ ಮೇಲೆ ಮುಡಿಯೂ, ಅಜ್ಜಿಯೂ ನಾಪತ್ತೆ!

                      ಪಿಜ್ಜಾ, ಬರ್ಗರ್, ಗೋಬಿಮಂಚೂರಿಯನ್.. ತಿನ್ನಬೇಕೆಂಬ ಹಠವಿರುವ, ಇವುಗಳು ಆರೋಗ್ಯಕ್ಕೆ ಹಾನಿಯಾಗದೆಂದು ಬಿಂಬಿಸುವ ಮಂದಿಗೆ ಪಾರಂಪರಿಕ ಆಹಾರಗಳೆಂದರೆ ಅಷ್ಟಕ್ಕಷ್ಟೇ. ಅಭಿವೃದ್ಧಿ ಯುಗದಲ್ಲಿ ಜೀವಿಸುವಾಗ ಪುನಃ ಹಿಂದಿನ ಕಾಲಕ್ಕೆ ಮರಳಬೇಕೆನ್ನುವುದೂ ಅಪ್ರಸ್ತುತ. ಆದರೆ ಜೀವನಶೈಲಿಯಲ್ಲಿ ಅಲ್ಲದಿದ್ದರೂ, ಆಹಾರದ ವಿಚಾರದಲ್ಲಿ ನಾವು ಒಂದು ಹೆಜ್ಜೆ ಹಿಂದೆ ಹೋಗದಿದ್ದರೆ ಆಸ್ಪತ್ರೆಗಳುಂಟು, ಮೆಡಿಕಲ್ ಶಾಪ್ಗಳುಂಟು!

Thursday, June 6, 2013

ಕನ್ನಾಡಿಗೆ ಅಂಬೆಗಾಲಿಕ್ಕಿದ ಸೇಬು

 
             'ಅರೋಗ್ಯವರ್ಧನೆಗೆ ದಿನಕ್ಕೊಂದು ಸೇಬು ತಿನ್ನಿ,' ಮಗು ಸೇಬುಹಣ್ಣನ್ನು ಕಚ್ಚಿ ತಿನ್ನುತ್ತಿದ್ದ ಚಿತ್ರದಲ್ಲಿದ್ದ ಘೋಷವಾಕ್ಯ. ಆರೋಗ್ಯಸಂಬಂಧಿ ಹಣ್ಣುಗಳ ಸೇವನೆಯ ವಿಚಾರ ಬಂದಾಗ ಸೇಬಿಗೆ ಮೊದಲ ಮಣೆ. ಪೂಜಾ ಸಂದರ್ಭದಲ್ಲಿ ದೇವರ ಸಮರ್ಪಣೆಯ ಹಣ್ಣಿನ ತಟ್ಟೆಯಲ್ಲಿ ಸೇಬು ಇದ್ದರೆ ಅಂತಸ್ತು ವೃದ್ಧಿ! ಕ್ರೀಂ ಪಾರ್ಲರಿನಲ್ಲಿ ಆಪಲ್ ಜ್ಯೂಸ್ ಆರ್ಡರ್ ಮಾಡುವುದೂ ಪ್ರೆಸ್ಟೀಜ್. ಸೇಬುಹಣ್ಣು ಇಲ್ಲದೆ ಸಂಮಾನ ಸಮಾರಂಭಗಳಿಲ್ಲ.
            ಸೇಬು ಚಳಿ ಪ್ರದೇಶದ ಹಣ್ಣು. ಹತ್ತಾರು ವಿಧಗಳ ರಾಸಾಯನಿಕ, ಹಾರ್ಮೋನುಗಳನ್ನು ಎರಚಿ ಕೃಷಿ. ಹಾಳಾಗದಿರಲೆಂದು ವಿಷ ದ್ರಾವಣದ ಸ್ನಾನ. ಬಣ್ಣಗೆಡದಿರಲು ಕೆಮಿಕಲ್ ಲೇಪ. ಸೌಂದರ್ಯ ಕೆಡದಿರಲು, ಸಿಹಿ ವರ್ಧನೆಗೆ, ತಾಜಾ ನೋಟಕ್ಕೆ ವಿವಿಧ ವಿಷ ಸಿಂಚನಗಳು! ಮನೆಯೊಳಗೆ ತಂದಿಟ್ಟರೆ ತಿಂಗಳಾದರೂ ಹಾಳಾಗದು, ಕೊಳೆಯದು, ವಾಸನೆ ಬಾರದು. ಸೇಬು ಮಾತ್ರವಲ್ಲ, ಬಹುತೇಕ ಮಾರುಕಟ್ಟೆ ಉದ್ದೇಶಕ್ಕಾಗಿ ಬೆಳೆದ ಹಣ್ಣುಗಳ ಹಿಂದಿರುವ ಕಹಿ-ಸಿಹಿ!
              ಮಾವು, ಹಲಸು, ಚಿಕ್ಕು, ಬಾಳೆಯಂತೆ ಸೇಬು ಹಣ್ಣು ಕೂಡಾ ಕನ್ನಾಡಿನ ತೋಟಗಳಲ್ಲಿ ಬೆಳೆಯುವಂತಾದರೆ, ರಾಸಾಯನಿಕಗಳಿಂದ ತೋಯ್ದ ಹಣ್ಣುಗಳಿಗೆ ವಿದಾಯ ಹೇಳಬಹುದಲ್ವಾ. ಚಳಿ ಪ್ರದೇಶದ ಹಣ್ಣು ಉಷ್ಣ ನೆಲದಲ್ಲಿ ಬೆಳೆಯಬಹುದಾ? ಫಲ ನೀಡಬಹುದಾ? ನೀಡಿದರೂ ಅಲ್ಲಿನಂತೆ ರುಚಿ ನೀಡಬಹುದಾ? ಈ ಎಲ್ಲಾ ಪ್ರಶ್ನೆಗಳಿಗೆ ತಜ್ಞರು ಉತ್ತರದ ಹುಡುಕಾಟದಲ್ಲಿರುವಾಗಲೇ ಕನ್ನಾಡಿಗೆ ಸೇಬು ಪ್ರವೇಶ ಮಾಡಿದೆ. ಹೂ ಬಿಟ್ಟಿದೆ. ಕೆಲವೆಡೆ ಕಾಯಿ ಬಿಟ್ಟು ಮಾಗುವ ಹಂತಕ್ಕೂ ಬಂದುಬಿಟ್ಟಿದೆ. ಕನ್ನಾಡಿನ ಸೇಬು ಕೃಷಿಯ ಅಂಬೆಗಾಲಿನ ಹಿಂದೆ ಹಿಮಾಚಲ ಪ್ರದೇಶದ ಬೆಸುಗೆಯಿದೆ.
              ಡಾ.ಚಿರನ್ಜಿತ್ ಪರ್ಮಾರ್ (74) ಹಿಮಾಚಲ ಪ್ರದೇಶದವರು. ತೋಟಗಾರಿಕಾ ತಜ್ಞ. ಇಂಡೋನೇಶ್ಯಾದ ಜಾವಾ ದ್ವೀಪದ 'ಬಾಟು'ವಿಗೊಮ್ಮೆ ಭೇಟಿ ನೀಡಿದ್ದರು. ಬಾಟು ಉಷ್ಣಪ್ರದೇಶ. ತನ್ನ ಶಿಷ್ಯ ಸುನಿಲ್ ನೆರವಿನಿಂದ ಅಲ್ಲಿನ ಸೇಬು ತೋಟಗಳ ಭೇಟಿ. ತೆಂಗು, ಬಾಳೆಗಳ ಮಧ್ಯೆ ಬಾಟುವಿನದ್ದೇ ಆದ ಸೇಬಿನ ತಳಿಗಳು ಫಲದ ಭಾರದಿಂದ ತೊನೆಯುವುದನ್ನು ಕಂಡು ಪರ್ಮಾರ್ ದಿಗಿಲು.
               ಐದು ದಶಕದಿಂದ ಬಾಟುವಿನಲ್ಲಿ ಸೇಬು ಕೃಷಿಯಿದೆ. ಪ್ರಸ್ತುತ ಸುಮಾರು ಎರಡು ಸಾವಿರ ಹೆಕ್ಟೇರಿನಷ್ಟು ವಿಸ್ತಾರದಲ್ಲಿ ಹಬ್ಬಿದ ಸೇಬು ವರುಷದಲ್ಲಿ ಎರಡು ಸಲ ಕೊಯಿಲು. ಹೆಕ್ಟಾರಿಗೆ ಅರುವತ್ತೇಳು ಟನ್ ಇಳುವರಿ. ಹಿಮಾಚಲ ಪ್ರದೇಶದಲ್ಲಿ ವರುಷಕ್ಕೆ ಒಮ್ಮೆ ಮಾತ್ರ ಬೆಳೆ. ಒಂದು ಹೆಕ್ಟೇರಿಗೆ ಸುಮಾರು ಆರರಿಂದ ಏಳು ಟನ್ ಇಳುವರಿ ಸಿಗುತ್ತಿದೆ. ಬಾಟುವಿನ ಇಳುವರಿ ಮತ್ತು ಮಾರುಕಟ್ಟೆ ಅದ್ಭುತ ಮತ್ತು ಅಧ್ಯಯನಯೋಗ್ಯ' ಎನ್ನುತ್ತಾರೆ.
                 ಬಾಟುವಿನ ಕೃಷಿಕರಲ್ಲಿ ಪರ್ಮಾರ್ ಮಾತುಕತೆ. ಕೃಷಿಯ ಸೂಕ್ಷ್ಮಗಳ ಅಧ್ಯಯನ. ತಮ್ಮೂರಿನ ಕೃಷಿಯ ಅನುಭವ ವಿನಿಮಯ. ಬಾಟುವಿನಲ್ಲಿ ಸೇಬು ಕೊಯಿಲು ಆದ ಬಳಿಕ ಗಿಡದ ಎಲೆಗಳನ್ನೆಲ್ಲಾ ಕೈಯಲ್ಲೇ ಕಿತ್ತು ತೆಗೆಯುತ್ತಾರೆ. ಎರಡೇ ತಿಂಗಳಲ್ಲಿ ಪುನಃ ಚಿಗುರಿ, ನಾಲ್ಕು ತಿಂಗಳಲ್ಲಿ ಫಸಲು ಆರಂಭ. ಮಾರುಕಟ್ಟೆಯ ದರವನ್ನು ಹೊಂದಿಕೊಂಡು ಬೆಳೆ ಪಡೆಯಲು ಕೊಯಿಲಿನ ಸಮಯವನ್ನೇ ನಿಯಂತ್ರಣ ಮಾಡುವ ಜಾಣ್ಮೆ.
              ಪ್ರಕೃತಿದತ್ತವಾಗಿ ಚಳಿಗಾಲದಲ್ಲಿ ಸೇಬಿನ ಮರ ಎಲೆಯನ್ನು ಉದುರಿಸುತ್ತವೆ. ಉಷ್ಣತೆ ಏರಿದಾಗ ಮತ್ತೆ ಚಿಗುರೊಡೆದು, ಹೂಬಿಟ್ಟು ಕಾಯಾಗುತ್ತದೆ. ಬಾಟುವಿನಲ್ಲಿ ಎಲೆ ಉದುರಿಸುವ ಪ್ರಕ್ರಿಯೆಯನ್ನು ಕೃತಕವಾಗಿ ಮಾಡುವ 'ಚಿಲ್ಲಿಂಗ್' ವಿಧಾನ ಪರ್ಮಾರ್ ಅವರನ್ನು ಸೆಳೆಯಿತು. ಉಷ್ಣ ಪ್ರದೇಶದ ಬಾಟುವಿನಲ್ಲಿ ಸಾಧ್ಯವಾಗುವ ಈ ಪ್ರಯೋಗ ಭಾರತದಲ್ಲೂ ಸಾಧ್ಯವಾಗಬಹುದು ಎಂಬ ಸಂಶೋಧನಾ ದೃಷ್ಟಿ.
               ಈ ಪ್ರಯೋಗದ ಅನುಷ್ಠಾನಕ್ಕಾಗಿ ದೇಶದ ಪ್ರತಿಷ್ಠಿತ ಉದ್ಯಮಿಗಳನ್ನು ಪತ್ರ ಮೂಲಕ ಸಂಪರ್ಕಿಸಿದರು. ಪತ್ರಿಕೆಗಳಲ್ಲಿ ಬಾಟುವಿನ ಸೇಬು, ಕೃಷಿ ಕ್ರಮ, ನಮ್ಮ ನೆಲಕ್ಕೆ ಹೊಂದುವ ಲಕ್ಷಣಗಳನ್ನೊಳಗೊಂಡ ಲೇಖನಗಳನ್ನು ಬರೆದರು. ಸಂಶೋಧನಾ ಕೇಂದ್ರಗಳಿಗೆ ಭೇಟಿಯಿಟ್ಟು ಬಾಟುವನ್ನು ತೆರೆದಿಟ್ಟರು. ಕೃಷಿಕರ ಜತೆ ಅನುಭವ ಹಂಚಿಕೊಂಡರು. ಉತ್ತೇಜಿತ ಸ್ಪಂದನದ ಕೊರತೆಯಿಂದ ನಿರಾಶೆ. ಪರ್ಮಾರ್ ಪ್ರಯೋಗದ ಸುಳಿವು ಅಡಿಕೆ ಪತ್ರಿಕೆಗೆ ಲಭಿಸಿತು. ಸುಳಿವಿನ ಬೆನ್ನೇರಿ, ವಿಷಯ ಕೆದಕಿ ಅಡಿಕೆ ಪತ್ರಿಕೆಯಲ್ಲಿ 2-3 ಕಂತುಗಳಲ್ಲಿ ಲೇಖನ ಪ್ರಕಟ. ಕರ್ನಾಟಕ, ತಮಿಳುನಾಡಿನಲ್ಲೂ ಸೇಬು ಕೃಷಿ ಯಶಸ್ಸಾಗಬಹುದು ಎನ್ನುವ ಪರ್ಮಾರ್ ವಿಶ್ವಾಸಕ್ಕೆ ಕರಾವಳಿಯ ಕೃಷಿಕ ಕಾಟುಕುಕ್ಕೆ ಕೃಷ್ಣ ಶೆಟ್ಟರ ಸಾಥ್.
                ಪರ್ಮಾರ್ ನಿರ್ದೇಶನದಲ್ಲಿ ಪ್ರಾಯೋಗಿಕವಾಗಿ ಸೇಬು ಬೆಳೆಸುವ ಉದ್ದೇಶದಿಂದ ಹಿಮಾಚಲ ಪ್ರದೇಶದಿಂದ ಸೇಬು ಗಿಡಗಳು ಬಂದುವು. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ಸುಮಾರು ಮೂವತ್ತು ರೈತರು ಗಿಡಗಳನ್ನು ಪಡೆದರು. ಆರೈಕೆ ಮಾಡಿದರು. ಈ ವರುಷದ ಆರಂಭದಲ್ಲಿ ಪುನಃ ಗಿಡಗಳು ಬಂದು ಹಂಚಲ್ಪಟ್ಟವು. ಸೇಬು ಗಿಡದ ಒಡನಾಟದಲ್ಲಿ ಒಬ್ಬೊಬ್ಬರದು ಒಂದೊಂದು ಅನುಭವ. 'ಸೇಬು ಹಣ್ಣು ಯಾವಾಗ ತಿನ್ನಬಹುದು' ಎಲ್ಲರ ಅಂತಿಮ ನಿರೀಕ್ಷೆ.
              ಉಡುಪಿಯ ಕೃಷಿತಜ್ಞ ಗುರುರಾಜ ಬಾಳ್ತಿಲ್ಲಾಯರಲ್ಲಿ ಹೂ ಬಿಟ್ಟಿತು. ಶೃಂಗೇರಿಯ ಕೃಷಿಕ, ಸಾಮಾಜಿಕ ಕಾರ್ಯಕರ್ತ ಅನಂತಯ್ಯರಿಗೆ ಕಾಯಿ ಬಿಟ್ಟಾಗ ಖುಷಿ. ತುಮಕೂರಿನ ಕೃಷಿಕ ಗಂಗಾಧರ ಮೂರ್ತಿಯವರ ಎಲ್ಲಾ ಗಿಡಗಳು ಸದೃಢವಾಗಿ ಬೆಳೆದು, ಕಾಯಿ ಹಣ್ಣಾಗುವ ಹಂತಕ್ಕೆ ಬಂದಾಗ 'ತಮ್ಮೂರಲ್ಲೂ ಸೇಬು ಕೃಷಿ ಸಾಧ್ಯ' ಎಂಬ ಭರವಸೆ ಮನದ ಮೂಲೆಯಲ್ಲಿ ಚಿಗುರಲು ಆರಂಭ. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ. ಕುತೂಹಲಿ ಕೃಷಿಕರ ಭೇಟಿ. ಮಾರುಕಟ್ಟೆಗೆ ಅಲ್ಲದಿದ್ದರೂ, ತಿನ್ನುವುದಕ್ಕಾದರೂ ಹಣ್ಣು ಸಿಕ್ಕರೆ ಸಾಕು ಎನ್ನುವ ಸಮಾಧಾನ.
           ಇಲ್ಲಿನ ಸೇಬು ಕೃಷಿಯ ಅನುಭವಗಳನ್ನು ಚಿತ್ರ ಸಹಿತ ಪರ್ಮಾರರಿಗೆ ರವಾನೆ. ಕನ್ನಾಡಿಗೆ ಭೇಟಿ ನೀಡಿ ಕೃಷಿಕರ ಅನುಭವಗಳನ್ನು ದಾಖಲಿಸುವ ತುಡಿತ. ಎಪ್ರಿಲ್ ಮೂರನೇ ವಾರದಲ್ಲಿ ಪರ್ಮಾರ್ ಕೃಷ್ಣ ಶೆಟ್ಟರಲ್ಲಿಗೆ ಭೇಟಿ ನೀಡಿದರು. ಬೆಳೆದ ಗಿಡದೊಂದಿಗೆ ಮಾತನಾಡಿದರು. ಹೊಸ ಗಿಡವನ್ನು ನೆಟ್ಟು, ನೀರು ಉಣಿಸಿ ಸಂಭ್ರಮಪಟ್ಟರು. ಬಾಟುವಿನಲ್ಲಿ ಕಾಯಿ ಬಿಡಲು ಐದಾರು ವರ್ಷ ಬೇಕು. ಇಲ್ಲಿ 2-3 ವರುಷಕ್ಕೇ ಕಾಯಿ ಬಿಟ್ಟಾಗ ಪರ್ಮಾರ್ ಅವರಿಗೆ ಖುಷಿ ಜತೆಯಲ್ಲಿ ಹೆಚ್ಚು ಅಧ್ಯಯನಕ್ಕೆ ತೊಡಗುವಂತೆ ಪ್ರೇರಣೆ.
            ಕೃಷ್ಣ ಶೆಟ್ಟರು ಐವತ್ತು ಸೇಬು ಗಿಡಗಳ ತೋಟ ಎಬ್ಬಿಸಿದ್ದಾರೆ. ಪತ್ರಿಕೆಯ ಲೇಖನವೊಂದರಿಂದ ಪ್ರಭಾವಿತರಾಗಿ ಸೇಬು ಗಿಡವನ್ನು ತರಿಸುವುದು ಮಾತ್ರವಲ್ಲ, ಆಸಕ್ತ ಕೃಷಿಕರಿಗೆ ಹಂಚಿದ ಸಂಘಟನಾ ಕೌಶಲಕ್ಕೆ ಶಹಬ್ಬಾಸ್. ಏನಿಲ್ಲವೆಂದರೂ ಸಾವಿರಕ್ಕೂ ಮಿಕ್ಕಿ ಗಿಡಗಳು ಕನ್ನಾಡನ್ನು ಪ್ರವೇಶಿಸಿವೆ. ಸೇಬು ಬೆಳೆವ ಕೃಷಿಕರೊಳಗೆ ಸಂವಹನ, 'ಬೇಕು-ಬೇಡಗಳ ಮಾಹಿತಿಗಳು ವಿನಿಮಯವಾಗುತ್ತಿವೆ.
           ಸದ್ಯದ ಸೇಬು ಕೃಷಿ ಪ್ರಯೋಗದಿಂದ ಒಂದಂತೂ ಸ್ಪಷ್ಟ - 'ರುಚಿ ನೋಡಲು ಮನೆ ಹಿತ್ತಿಲಲ್ಲಿ ಸೇಬು ಬೆಳೆಯಬಹುದು' ಎಂಬ ವಿಶ್ವಾಸ. ಅದರ ಆರೈಕೆ, ರೋಗ ಮತ್ತಿತರ ಸೂಕ್ಷ್ಮ ವಿಚಾರಗಳನ್ನು ಹೇಳುವ ಹಂತಕ್ಕಿನ್ನೂ ತಲುಪಿಲ್ಲ. ವಾಣಿಜ್ಯ ಮಟ್ಟದಲ್ಲಿ ಬೆಳೆಯಬಹುದು ಎಂದು ಗಟ್ಟಿ ದನಿಯಲ್ಲಿ ಹೇಳುವ ದಿನವಿನ್ನೂ ಬಂದಿಲ್ಲ. ಚಳಿ ಪ್ರದೇಶದ ಹಣ್ಣಿನ ರುಚಿ, ಸ್ವಾದಗಳು ಇಲ್ಲೂ ಸಿಕ್ಕೀತೇ ಎನ್ನುವ ಪ್ರಶ್ನೆಗೆ ಉತ್ತರಕ್ಕಾಗಿ ಕಾಯಬೇಕು. ಹಿಮಾಚಲ ಪ್ರದೇಶದಿಂದ ಗಿಡ ತರಿಸುವುದರ ಬದಲು ಇಲ್ಲೇ ಅಭಿವೃದ್ಧಿ ಮಾಡುವುದು ಮುಂದಿನ ಪ್ರಕ್ರಿಯೆ.
             ಕೃಷಿಕರ ಮಟ್ಟದಲ್ಲಿ ಸದ್ದಿಲ್ಲದೆ ಪ್ರಯೋಗಗಳು ನಡೆದಿವೆ. ಒಂದು ಸಂಶೋಧನಾ ಕೇಂದ್ರ ಮಾಡಬಹುದಾದ ಕೆಲಸವನ್ನು ಪರ್ಮಾರ್ ಒಬ್ಬರೇ ಮಾಡಿದ್ದಾರೆ. ಅದಕ್ಕಾಗಿ ಸ್ವತಃ ಹಣವನ್ನು ವ್ಯಯಿಸಿದ್ದಾರೆ. ಕೃಷಿಕರ ಹಂತದಲ್ಲಿ ಇಷ್ಟು ಮಾಡಿ ತೋರಿಸಿದ ಬಳಿಕ, ಹುಟ್ಟು ಹಿಡಿದು ಮುನ್ನಡೆಸುವವರು ಬೇಕು. ಪರ್ಮಾರ್ ಅವರ ಯತ್ನವು ತೋಟಗಾರಿಕೆ ಇಲಾಖೆಯ ಕೆಲಸವನ್ನು ಹಗುರಗೊಳಿಸಿವೆ. ಅಭಿವೃದ್ಧಿ ಪಡಿಸುವ ಹೊಣೆಯನ್ನು ಇಲಾಖೆ ಯಾಕೆ ಹೊರಬಾರದು? ತಳಿಯೊಂದರ ಅಭಿವೃದ್ಧಿಗೆ ಬೇಕಾದ ಎಲ್ಲಾ ಪ್ಯಾಕೇಜ್ಗಳು ಇಲಾಖೆಯಲ್ಲಿರುವುದರಿಂದ ಕಷ್ಟವಾಗಲಾರದು. ಮನಸ್ಸು ಮತ್ತು ಕೃಷಿಕಪರ ಒಲವು ಮೂಡಬೇಕಷ್ಟೇ.


 

ಕೊಲೆಸ್ಟರಾಲ್ ಇರುವುದು ತೆಂಗಿನಲ್ಲಲ್ಲ, ಮನಸ್ಸಿನಲ್ಲಿ..


              ಥಾಯ್ಲ್ಯಾಂಡಿನ ರಾಜಧಾನಿ ಬ್ಯಾಂಕಾಕ್. ನಮ್ಮೂರಿನ ಸೂಪರ್ ಬಜಾರನ್ನೂ ನಾಚಿಸುವ ಆಕರ್ಷಕ ಮಳಿಗೆ. ಏನುಂಟು ಏನಿಲ್ಲ! ಅಲ್ಲೊಂದೆಡೆ ಎಳನೀರನ್ನು (ಬೊಂಡ, ಸೀಯಾಳ) ಅಂದವಾಗಿ ಕೆತ್ತಿ, ಮುದ್ದುಮುದ್ದಾದ ಆಕಾರ ಕೊಟ್ಟು, ಕ್ಲಿಂಗ್ ಫಿಲ್ಮ್ ಸುತ್ತಿ ಮಾರಾಟಕ್ಕಿಟ್ಟಿದ್ದರು. ಪ್ರವಾಸಿಗನಾಗಿ ಹೋದ ಗುಲ್ಬರ್ಗದ ಮಿತ್ರ ಆನಂದರನ್ನು ಸೆಳೆಯಿತು. ಎಲ್ಲೋ ನೋಡಿದ, ಓದಿದ ನೆನಪು. ಥಟ್ಟನೆ ನೆನಪಾಯಿತು, ಅಡಿಕೆ ಪತ್ರಿಕೆ. ಅಂದವರ್ಧನೆಗೊಂಡ ಎಳನೀರಿನ ಫೋಟೋ ಕ್ಲಿಕ್ಕಿಸಿ ಮಿಂಚಂಚೆಯಲ್ಲಿ ಕಳುಹಿಸಿಕೊಟ್ಟರು. ಜತೆಗೆ ಸ್ವಲ್ಪ ಮಾಹಿತಿಯೂ ಕೂಡಾ.

               ಎಲ್ಲಾ ಉತ್ಪನ್ನಗಳ ಪ್ಯಾಕೆಟಿಗಂಟಿರುವಂತೆ ಎಳನೀರಿನ ಮೇಲೂ ಬಾರ್ಕೋಡ್. ತಯಾರಿ ಮತ್ತು ಅವಧಿ ಮುಗಿವ ದಿನಾಂಕ, ಎಳನೀರಿನಲ್ಲಿರುವ ಕಂಟೆಂಟ್, ತಯಾರಿ ಕಂಪೆನಿ.. ವಿವರಗಳುಳ್ಳ ಸ್ಟಿಕ್ಕರ್. ಫಕ್ಕನೆ ಸೆಳೆಯಬಲ್ಲ ನೋಟ. ತಂಪು ಪಾನೀಯಗಳಿಗಿರುವಷ್ಟೇ ಮಾನ-ಮರ್ಯಾದೆ! ತರಕಾರಿ, ಜೀನಸಿಗಳನ್ನು ಒಯ್ಯುವಂತೆ ಎಳನೀರನ್ನು ಒಯ್ಯುವ ಗ್ರಾಹಕರು.

                 ಒಂದು ಎಳನೀರಿಗೆ ಯಾ ಬೊಂಡಕ್ಕೆ ಎಷ್ಟಿರಬಹುದು? ಐವತ್ತರಿಂದ ಅರುವತ್ತು ಬಾತ್ Baht). . ಒಂದು ಬಾತ್ ಅಂದರೆ ಭಾರತದ ಒಂದು ರೂಪಾಯಿ ಎಂಭತ್ತಮೂರು ಪೈಸೆ. ವಿಮಾನ ನಿಲ್ದಾಣದಲ್ಲಿ ಒಂದು ಎಳನೀರಿಗೆ ಎಂಭತ್ತು ಬಾತಿನವರೆಗಿದೆ. ತೆಂಗಿನ ತಾಜಾ ಎಣ್ಣೆಯ (ತೆಂತಾ ಎಣ್ಣೆ, ವರ್ಜಿನ್ ಕೋಕನಟ್ ಆಯಿಲ್) ಏಳುನೂರ ಐವತ್ತು ಎಂ.ಎಲ್. ಬಾಟಲಿಗೆ ನಾಲ್ಕುನೂರ ಐವತ್ತು ಬಾತ್!

                ತೆಂಗು ಉತ್ಪಾದನೆಯಲ್ಲಿ ಥಾಯ್ಲ್ಯಾಂಡಿಗೆ ಆರನೇ ಸ್ಥಾನ. ಆದರೆ ಎಳನೀರಿನ ಮೌಲ್ಯವರ್ಧನೆಯಲ್ಲಿ ಹಿರಿಯಣ್ಣ. ಅಂದವರ್ಧಿಸಿಕೊಂಡ ಎಳನೀರು ದೇಶದೊಳಗೆ ಮಾತ್ರವಲ್ಲ, ಕಡಲಾಚೆಯ ದೇಶಗಳಿಗೂ ರಫ್ತಾಗುತ್ತದೆ. ಅಮೆರಿಕಾ, ಇಂಗ್ಲೇಂಡ್, ಜಪಾನ್, ಆಸ್ಟ್ರೇಲಿಯ, ಸಿಂಗಾಪುರ, ಹಾಂಗ್ಕಾಂಗ್, ಯುರೋಪ್.. ದೇಶಗಳಲ್ಲಿ ಬಾಯಾರಿದಾಗ ನೆನಪಾಗುವುದು ಥಾಯ್ ಎಳನೀರು. ಕೊಕೊನಟ್ ಜೆಲ್ಲಿ - ಪ್ರವಾಸಿಗರನ್ನು ಸೆಳೆಯುವ ಥಾಯ್ ಜನಪ್ರಿಯ ಉತ್ಪನ್ನ.

               ಆಕರ್ಷಕ ನೋಟ, ಸ್ವಚ್ಛತೆ, ಕನಿಷ್ಠ ಸಂಸ್ಕರಣೆ ಮಾಡಿ ಗ್ರಾಹಕರಿಗೆ ನೀಡುವುದು ಕಡಲಾಚೆಯ ದೇಶಗಳಲ್ಲಿ ಮಾಮೂಲಿ. ಥಾಯ್ಲ್ಯಾಂಡ್ ಮಾರುಕಟ್ಟೆ ಕೌಶಲ ಮೆಚ್ಚುವಂತಾದ್ದು. ಎಳನೀರಿಗೆ ರಾಜಮರ್ಯಾದೆ ನೀಡುವ ಅಲ್ಲಿನ ಕ್ರಮ ನೋಡಿದಾಗ ನಮ್ಮೂರಿನ ಎಳನೀರು ವ್ಯಾಪಾರ, ವ್ಯಾಪಾರಿಗಳ ನೆನಪಾಯಿತು,' ಎಂದು ಆನಂದ್ ಜ್ಞಾಪಿಸಿಕೊಳ್ಳುತ್ತಾ, 'ಕನ್ನಾಡಿನ ಪ್ರವಾಸಿಧಾಮಗಳಲ್ಲಿ ಎಳನೀರನ್ನು ಈ ರೀತಿ ಮಾಡಿ ನೀಡಿದರೆ ಡಿಮ್ಯಾಂಡ್ ಬರಬಹುದು' ಎಂದರು. ಹೌದಲ್ಲಾ.. ಕಾರ್ಪೋರೇಟ್ ವಲಯವನ್ನು ಈಗಾಗಲೇ ಸೆಳೆದ ಅಂದವರ್ಧಿತ ಎಳನೀರಿನ ಮಳಿಗೆಗಳು ಯಶಕಾಣುತ್ತಿವೆ.

                  ಈಚೆಗೆ ಕರಿಂಗಾಣದ ಡಾ.ಕೆ.ಎಸ್.ಕಾಮತರ ಮನೆಗೆ ಹೋಗಿದ್ದೆ. ಮಧ್ಯಾಹ್ನ ಭೋಜನಕ್ಕೆ ವಿಶೇಷ ಖಾದ್ಯ. ಯಾವುದರದು ಎಂದು ಆರ್ಥವಾಗಿಲ್ಲ. 'ಇದು ತೆಂಗಿನ ಮೊಳಕೆಯ (ಕೊಕನಟ್ ಆಪಲ್) ಪದಾರ್ಥ' ಎನ್ನುತ್ತಾ ಇನ್ನಷ್ಟು ಬಡಿಸಿದರು. 'ತೆಂಗಿನ ಮೊಳಕೆಯಿಂದಲೂ ಪದಾರ್ಥ ಮಾಡಲು ಆಗುತ್ತಾ' ಎನ್ನುತ್ತಾ ಜತೆಗಿದ್ದ ಹಾಸನಡ್ಕ ರಘುರಾಮ್ ಇನ್ನಷ್ಟು ಬಡಿಸಿಕೊಂಡರು.

                  ತೆಂಗಿಗೆ ದರ ಕಡಿಮೆಯಾದಾಗ ಸಹಜವಾಗಿ ಆತಂಕ, ದುಗುಡ. ಬೆಳೆಯಿದೆ, ಬೆಲೆಯಿಲ್ಲ. ಮಾರುಕಟ್ಟೆಗೆ ಒಯ್ದರೆ ಚಿಕ್ಕಾಸು ದರ. ಐದೋ ಆರೋ ರೂಪಾಯಿಗೆ ಕೃಷಿಕರಿಂದ ಖರೀದಿಸಿ, ಮರುಕ್ಷಣದಲ್ಲೇ ಹದಿನೈದೋ ಇಪ್ಪತ್ತು ರೂಪಾಯಿಗೆ ಮಾರುವ ವ್ಯಾಪಾರಿಗಳ ತಂತ್ರ. ಅದನ್ನು ಹಾರ್ದಿಕವಾಗಿ ಸ್ವೀಕರಿಸಿದ್ದೇವೆ ಬಿಡಿ. ದೂರದ ಹಳ್ಳಿಯಿಂದ ಉತ್ಪನ್ನವನ್ನು ಪಟ್ಟಣಕ್ಕೆ ತಂದುದಾಗಿದೆ, ಮರಳಿ ಒಯ್ಯುವ ಹಾಗಿಲ್ಲ. ಕೃಷಿಕನ ಈ ಅಸಹಾಯಕತೆ, ಸೌಜನ್ಯ ಮತ್ತು ಪ್ರಾಮಾಣಿಕತೆಯನ್ನು 'ಸದುಪಯೋಗ'ಮಾಡಿಕೊಳ್ಳುವ ಎಷ್ಟು ಮಂದಿ ಜಾಣರು ಬೇಕು!

                  ಕೃಷಿ ಉತ್ಪನ್ನಗಳಿಗೆ ದೂರದ ಪಟ್ಟಣದಲ್ಲೇ ಮಾರುಕಟ್ಟೆಯಾಗಬೇಕಿಲ್ಲ. ಹಳ್ಳಿಯಲ್ಲೇ ಮಾರುಕಟ್ಟೆ ಮಾಡುವ ಜಾಣ್ಮೆಯಿದ್ದರೆ ಲಾಭ. ಕಾಸರಗೋಡು ಜಿಲ್ಲೆಯ ಮೀಯಪದವಿನ ಡಾ.ಚಂದ್ರಶೇಖರ ಚೌಟರು ಕೆಲವು ವರುಷಗಳಿಂದ ತನ್ನ ತೋಟದ ಎಳನೀರನ್ನು ತನ್ನೂರಲ್ಲೇ ಮಾರುಕಟ್ಟೆ ಮಾಡಿ ಮುಗುಳ್ನಗೆ ಬೀರುತ್ತಿದ್ದಾರೆ. ಮೀಯಪದವು ದೊಡ್ಡ ಪಟ್ಟಣವಲ್ಲ. ಬಹುಪಾಲು ಕೃಷಿ ಕಾರ್ಮಿಕರು. ಎಳನೀರಿಗೆ ಅವರೇ ದೊಡ್ಡ ಗ್ರಾಹಕರು. ಮೀಯಪದವಿನಲ್ಲಿ ಎಳನೀರಿಗೆ ಎಂಟರಿಂದ ಹತ್ತು ರೂಪಾಯಿ ದರ ಸಿಗುತ್ತದೆ. ದೂರದ ಪಟ್ಟಣಕ್ಕೆ ಒಯ್ದರೆ ದರ ಹೆಚ್ಚು ಸಿಗಬಹುದೇನೋ? ಆದರೆ ಸಾರಿಗೆ, ಕೂಲಿ, ಶ್ರಮ.. ಗಳನ್ನು ಲೆಕ್ಕ ಹಾಕಿದರೆ ನನ್ನೂರಿನ ಮಾರುಕಟ್ಟೆಯೇ ಹಿರಿದು' ಎನ್ನುತ್ತಾರೆ.

                    ಕರಾವಳಿಯ ಯಶೋಗಾಥೆ ಹೀಗಾದರೆ ತುಮಕೂರು ಜಿಲ್ಲೆಯಲ್ಲಿ ತಿರುಗುಮುರುಗು. ಅಲ್ಲಿ ಎಳನೀರು ಕೀಳುವುದೆಂದರೆ ಆತ ಆರ್ಥಿಕವಾಗಿ ದಿವಾಳಿಯಂಚಿನಲ್ಲಿದ್ದಾನೆ ಎಂದರ್ಥವಂತೆ. ಎಳನೀರು ಮಾರುವುದು ಲಾಭದಾಯಕ ಅಂತ ಗೊತ್ತಿದೆ. ಆದರೆ ಮಾರಾಟ ಮಾಡುವವನತ್ತ ವಿಷಾದ ಭಾವ! 'ಗತಿಯಿಲ್ಲದೆ ಈ ಉದ್ಯೋಗಕ್ಕೆ ಬಂದಿದ್ದಾನೆ' ಎಂಬ ಕುಹಕ. ಹೀಗಾಗಿ ಮನಸ್ಸಿದ್ದರೂ ಸಾಮಾಜಿಕ ಮುಜುಗರದಿಂದಾಗಿ ಎಳನೀರು ಮಾರಾಟಕ್ಕೆ ಹಿಂದೇಟು ಹಾಕುವವರೇ ಅಧಿಕ.

                   ಕಾಯಿಲೆ ಬಂದರೆ ಮಾತ್ರ ಎಳನೀರು ಕೀಳುತ್ತಾರೆ. ಅಮೃತತುಲ್ಯ ಪಾನೀಯ ಮನೆಯೊಳಗಿದ್ದರೂ ಕಂಪೆನಿ ಪ್ರಣೀತ ತಂಪುಪಾನೀಯಗಳಿಗೆ ಮಣೆ. ಎಲ್ಲೆಲ್ಲಿ ಆಸ್ಪತ್ರೆಗಳಿವೆಯೋ ಅಲ್ಲೆಲ್ಲಾ ಎಳನೀರಿಗೆ ಭರ್ಜರಿ ಮಾರಾಟ. ನಮ್ಮ ಕ್ರಿಕೆಟ್ ತಾರೆಯರು ಆಟದ ಮಧ್ಯೆ ಪೆಪ್ಸಿ, ಕೋಲಾ ಕುಡಿದಂತೆ, ಎಳನೀರಿನ ರೋಚಕ ಜಾಹೀರಾತು ಬಂದುಬಿಟ್ರೆ ತೆಂಗಿಗೂ ಬೆಲೆ ಬರಬಹುದೋ ಏನೋ!?

                     ಸನಿಹದ ಕೇರಳ ರಾಜ್ಯ ಮೌಲ್ಯವರ್ಧನೆಯಲ್ಲಿ ಮುಂದು. ಮನೆಮಟ್ಟದಿಂದ ಕಂಪೆನಿವರೆಗೆ ವಿವಿಧ ಉತ್ಪನ್ನಗಳು ಬೆಳಕು ಕಂಡಿವೆ. ವರ್ಜಿನ್ ಕೋಕನಟ್ ಆಯಿಲಿನಿಂದ ಸ್ನಾನದ ಸಾಬೂನು ವರೆಗೆ ಎಷ್ಟೊಂದು ಐಟಂಗಳು. ಚಟ್ನಿಹುಡಿ, ವಿನೇಗರ್, ಹೇರ್ಟೋನ್, ತೆಂಗಿನ ಬರ್ಫಿ, ಶಿಶುಸಾಬೂನು, ತೆಂಗಿನ ಹಾಲಿನ ಚಾಕೋಲೇಟ್.. ತೆಂಗಿನೆಣ್ಣೆಯ ಬಳಕೆ ಕೇರಳದಲ್ಲಿ ಪಾರಂಪರಿಕ. ನಖಶಿಖಾಂತ ಎಣ್ಣೆಪೂಸಿ, ಸ್ನಾನ ಮಾಡುವ ಪರಿ.

                      ಕನ್ನಾಡಿನಲ್ಲೂ ವೈಯಕ್ತಿಕ ಮಟ್ಟದಲ್ಲಿ ತೆಂಗಿನ ಮೌಲ್ಯವರ್ಧನೆ ಕೆಲಸಗಳಾಗಿವೆ. ತೆಂಗಿನ ತಾಜಾ ಎಣ್ಣೆ, ತೆಂಗಿನ ತಾಜಾ ಹಾಲು, ಐಸ್ಕ್ರೀಂ ಉದ್ದಿಮೆಗಳದು ಚಿಕ್ಕ ಹೆಜ್ಜೆ. ರಾಜಧಾನಿಯ ಕೆಲವು ಹೋಟೆಲುಗಳಲ್ಲಿ ತೆಂಗಿನ ತಾಜಾ ಹಾಲಿನ ಬಳಕೆಯಿದೆ.

                        ದೂರದ ಬ್ಯಾಂಕಾಕಿನ ಸುದ್ದಿ ಮಾತನಾಡುತ್ತೇವೆ. ಅವರ ಶ್ರಮವನ್ನು ಶ್ಲಾಘಿಸುತ್ತೇವೆ. ನಮ್ಮೂರಿನ ತೆಂಗು, ಅದರ ಉತ್ಪನ್ನಗಳತ್ತ ಯೋಚನೆ ಬರುತ್ತಿಲ್ಲ. ತೆಂಗು, ತೆಂಗಿನೆಣ್ಣೆ ಎಂದಾಕ್ಷಣ 'ಕೊಲೆಸ್ಟರಾಲ್' ಎನ್ನುತ್ತಾ ಗರ ಬಡಿದವರಂತೆ ವರ್ತಿಸುತ್ತೇವೆ. ವೈದ್ಯಕೀಯ ಮೂಲಗಳೂ ಸಾಥ್ ನೀಡುತ್ತಿವೆ. ವರುಷಪೂರ್ತಿ ತೆಂಗಿನ ಉತ್ಪನ್ನಗಳನ್ನು ಬಳಸುವ ಮಂದಿ ಕೊಲೆಸ್ಟರಾಲಿನಿಂದ ಬಳಲಿ ಬೆಂಡಾಗಿದ್ದಾರೆಯೇ? ತೆಂಗಿನೆಣ್ಣೆ, ಕೊಲೆಸ್ಟರಾಲ್ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಬೆಸುಗೆ ಹಾಕುವ ಯತ್ನಗಳು ಇಂದು ನಿನ್ನೆಯದಲ್ಲ. ಕೊಲೆಸ್ಟರಾಲ್ ಇರುವುದು ತೆಂಗಿನಲ್ಲಲ್ಲ, ಮನಸ್ಸಿನಲ್ಲಿ. ಮೈಂಡ್ಸೆಟ್ ಬದಲಾದರೆ ಕೊಲೆಸ್ಟರಾಲಿನ ಬಾಧೆಯಿಲ್ಲ.

                      ತೆಂಗು, ಕೊಲೆಸ್ಟರಾಲ್.. ಸುತ್ತ ಮನಸ್ಸು ಸುತ್ತುತ್ತಿದ್ದಾಗ ಅಣೆಕಟ್ಟೆ ವಿಶ್ವನಾಥ್ ತೆಂಗಿನ ವಿಸ್ಮಯ ಜಗತ್ತು ಪುಸ್ತಕ ಕಳುಹಿಸಿಕೊಟ್ಟರು. ಅವರ ಮೂರು ವರುಷಗಳ ಅಧ್ಯಯನ ಫಲದಿಂದ ಪುಸ್ತಕ ಹೊರಬಂದಿದೆ. ಕೃಷಿಕನ ಅನುಭವ, ಬಳಕೆ ಮತ್ತು ವೈದ್ಯಕೀಯ ಮಾಹಿತಿಗಳನ್ನು ಕಲೆಹಾಕಿ ಸಿದ್ಧಪಡಿಸಿದ ಪುಸ್ತಕ. ವಿಶ್ವನಾಥ್ಗೆ ತುಮಕೂರಿನ ತೆಂಗು ಕೃಷಿ, ಕೃಷಿಕ, ಕೃಷಿಸಮಸ್ಯೆಯತ್ತ ಲಕ್ಷ್ಯ. ಹಾಗೆಂತ ತೆಂಗಿನ ಕಾಣದ ಮುಖಗಳ ಪರಿಚಯ ಮಾಡಿಕೊಟ್ಟಿರುವುದು ಪುಸ್ತಕದ ಹಿರಿಮೆ.

                       ತೆಂಗಿನ ಸಂಶೋಧನಾ ಮಾಹಿತಿಯನ್ನು ಒಂದೆಡೆ ಹೇಳುತ್ತಾರೆ - ಪ್ರತಿನಿತ್ಯ ತೆಂಗಿನ ಎಣ್ಣೆಯನ್ನು ಬಳಸುವ ಜನರಲ್ಲಿ ಹೃದಯ ಸಂಬಂಧಿ ರೋಗಗಳು ಕಡಿಮೆ. ತೆಂಗಿನೆಣ್ಣೆ ಹೆಚ್ಚಾಗಿ ಬಳಸದ ಅಮೆರಿಕಾದಲ್ಲಿ ಹೃದಯದ ಕಾಯಿಲೆಗಳಿಂದ ಮರಣಿಸುವ ಪ್ರಮಾಣ ಜಾಸ್ತಿ. ಶ್ರೀಲಂಕಾದಲ್ಲಿ ಜನರ ನಿತ್ಯ ಆಹಾರದ ಬಹುಭಾಗ ತೆಂಗು. ಅಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಮರಣಿಸುವವರ ಸಂಖ್ಯೆ ಕಡಿಮೆ.

                       ತೆಂಗಿನ ಉತ್ಪನ್ನ ತಯಾರಿಗೆ ಸಾಧ್ಯತೆಗಳು ಹೆಚ್ಚು. ಅವಕಾಶಗಳ ಬಾಗಿಲು ತೆಗೆಯುವ ಕೆಲಸವಾದರೆ ಬೆಳೆಗಾರರಿಗೆ ಆಸಕ್ತಿ ಕುದುರಬಹುದು. ತೆಂಗು ಮಂಡಳಿಯಂತಹ ಸರಕಾರಿ ಪ್ರಣೀತ ಸಂಸ್ಥೆಗಳು ತೆಂಗಿನ ಕೆಲಸಗಳತ್ತ ಚಿಕ್ಕ ನೋಟ ಬೀರಿ ಆ ಜ್ಞಾನವನ್ನು ಹಂಚಿದರೂ ಸಾಕು, ಅದು ದೊಡ್ಡ ಹೆಜ್ಜೆ ಮೂಡಿಸಬಹುದು.

ಹತ್ತು ಪೈಸೆಗೆ ಒಂದು ಲೀಟರ್ ನೀರು!


              ಕನ್ನಾಡಿನ ಕುಡಿಯುವ ನೀರಿನಲ್ಲಿ ಶೇ.60ರಷ್ಟು ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್, ಶೇ.20 ನೈಟ್ರೇಟ್ ಮತ್ತು ಶೇ.38ರಷ್ಟು ಸೂಕ್ಷ್ಮಾಣುಗಳು ಸೇರಿವೆ - ಸಮೀಕ್ಷಾ ವರದಿಯೊಂದರ ವರದಿ.

            ಉತ್ತರ ಕರ್ನಾಟಕದ ಬಹುಪಾಲು ಪ್ರದೇಶಗಳಲ್ಲಿ ಕೊಳವೆ ಬಾವಿಗಳ ನೀರಿನಲ್ಲಿ ಫ್ಲೋರೈಡ್, ಕ್ಲೋರಿನ್, ಜಡಧಾತುಗಳು, ಸೀಸ, ಅರ್ಸೆನಿಕ್, ಸೂಕ್ಷ್ಮಾಣುಜೀವಿಗಳು ಸೇರಿ ನೀರು ಅಶುದ್ಧವಾಗಿರುವುದು ಹೊಸ ವಿಚಾರವಲ್ಲ.
ಗದಗ, ಧಾರವಾಡ.. ಮೊದಲಾದ ಪ್ರದೇಶಗಳಲ್ಲಿ ಮಳೆ ಕೈಕೊಟ್ಟಿದೆ. ಬರ ಸ್ವಾಗತಿಸಿದೆ. ಹೊಲಗಳು ಭಣಭಣ. ಜನರು ಗುಳೆ ಹೋಗುತ್ತಿದ್ದಾರೆ. ಕೊಳವೆ ಬಾವಿಗಳ ನೀರು ಪಾತಾಳಕ್ಕಿಳಿದಿವೆ. ಭೂಗರ್ಭದಲ್ಲಿದ್ದ ನೀರನ್ನು ಮೇಲೆತ್ತಿ ನೇರ ಬಳಸಿದರೆ ಕಾಯಿಲೆಗಳಿಗೆ ಎಂಟ್ರಿ ನೀಡಿದಂತೆ. 
 
             ಅಶುದ್ಧ ನೀರಿನ ಬಳಕೆಯ ತೊಂದರೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕ್ಷೇತ್ರಾಧ್ಯಯನದಿಂದ ಅಭ್ಯಸಿಸಿದೆ. ಶಾರೀರಿಕ-ಮಾನಸಿಕ, ನರಮಂಡಲದ ಹಾನಿ, ಕ್ಯಾನ್ಸರ್, ಚರ್ಮರೋಗ, ಎಲುಬು ಮತ್ತು ಹಲ್ಲುಗಳ ಮೇಲೆ ಪರಿಣಾಮ, ಕರುಳು ಬೇನೆ, ವಾಂತಿ-ಭೇದಿ, ರಕ್ತದೊತ್ತಡ.. ಮೊದಲಾದ ಕಾಯಿಲೆಗಳಿಗೆ ದಾರಿ. ಕುಡಿ ನೀರಿಗೆ ರುಚಿಯಿಲ್ಲ, ಕೆಟ್ಟ ವಾಸನೆ. ಅನ್ನ ಮಾಡಿದರೆ ಅನ್ನದ ಬಣ್ಣ ಹಳದಿ!

              ನಗರದಲ್ಲಿ ಉಳ್ಳವರು ಸಿದ್ಧ ಬಾಟಲ್ ನೀರನ್ನು ಖರೀದಿಸಿ ಸುಧಾರಿಸಿಕೊಳ್ಳುತ್ತಾರೆ. ಆದರೆ ಬಡವರ ಕತೆ..! ದುಡಿದರೆ ಮಾತ್ರ ಉಣ್ಣಲು ಸಾಧ್ಯ. ಇಂದಿಗಿದ್ದರೆ ನಾಳೆಗಿಲ್ಲ. ಹೀಗಿರುವಾಗ ಬಾಟಲ್ ನೀರು ಕನಸಿನ ಮಾತು. ಈ ಮಧ್ಯೆ 'ಶುದ್ಧ ನೀರನ್ನು ಒದಗಿಸುತ್ತೇವೆ' ಎಂದು ಸಾಮಾನ್ಯ ನೀರನ್ನೇ ಬಾಟಲಿಯಲ್ಲಿ ತುಂಬಿ ಮಾರುವ ದಂಧೆಗಳು!
ಈ ಹಿನ್ನೆಲೆಯಲ್ಲಿ ಹಳ್ಳಿ ಮಂದಿ ಕಾಯಿಲೆಗಳಿಗೆ ತುತ್ತಾಗಬಾರದು, ಶುದ್ಧ ನೀರನ್ನು ಬಳಸಬೇಕು ಎಂಬ ದೂರದೃಷ್ಟಿಯಿಂದ ಗ್ರಾಮಾಭಿವೃದ್ಧಿ ಯೋಜನೆಯು 'ಶುದ್ಧಗಂಗಾ' ಎಂಬ ಯೋಜನೆಯೊಂದಕ್ಕೆ ಶ್ರೀಕಾರ ಬರೆಯಿತು. ಇದು ರಾಜರ್ಶಿ ಡಾ.ವೀರೇಂದ್ರ ಹೆಗ್ಗಡೆಯವರ ಮಿದುಳ ಮರಿ.

            ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರಿಕೆರೆ; ಗದಗ, ರೋಣ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ ನಲವತ್ತು ಶುದ್ಧಗಂಗಾ ಘಟಕಗಳಿವೆ. ಒಂದು ಘಟಕ ಸ್ಥಾಪನೆಗೆ ಹತ್ತು ಲಕ್ಷ ರೂಪಾಯಿ ವೆಚ್ಚ. ಕಟ್ಟಡ, ಸ್ಥಳ.. ಹೀಗೆ ಘಟಕದ ಮೂರನೇ ಒಂದು ಭಾಗ ಸ್ಥಳೀಯ ಪಂಚಾಯತ್, ಸಂಘಸಂಸ್ಥೆಗಳ ಪಾಲು.

           'ಹೆಚ್ಚು ಸಮಸ್ಯೆಯಿರುವ ಗದಗ ಜಿಲ್ಲೆಯಲ್ಲಿ ಹತ್ತು ಘಟಕಗಳು ಆರಂಭವಾಗಿದೆ. ಎಲ್ಲವೂ ಹಳ್ಳಿ ಪ್ರದೇಶದಲ್ಲಿವೆ,' ಎನ್ನುತ್ತಾರೆ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ. ಈಚೆಗೆ ಲಕ್ಕುಂಡಿಗೆ ಭೇಟಿಯಿತ್ತಾಗ ಶುದ್ಧಗಂಗಾ ಘಟಕ ಆರಂಭವಾಗಿತ್ತಷ್ಟೇ. ಜನರ ಒಲವು ಹತ್ತಿರವಾಗುತ್ತಿದೆ.

ಯಾಂತ್ರಿಕ ಸೋಸು ವಿಧಾನ

          ಸುಲಭದಲ್ಲಿ ಹೇಳುವುದಾದರೆ 'ಹಿಮ್ಮುಖ ಪ್ರವಾಹ ತಂತ್ರಜ್ಞಾನ'ದ (Reverse Osmosis Technology) ಮೂಲಕ ನೀರನ್ನು ಶುದ್ಧೀಕರಿಸುವುದು. ನೀರಿನಲ್ಲಿರುವ ಅಜ್ಞಾತ ಅಶುದ್ಧ ವಸ್ತುಗಳನ್ನು ವೈಜ್ಞಾನಿಕವಾಗಿ ಬೇರ್ಪಡಿಸಿ, ಶುದ್ಧ ನೀರನ್ನು ಕೊಡುವ ವಿಧಾನ. ಮುಂದುವರಿದ ದೇಶಗಳು ಈ ತಂತ್ರಜ್ಞಾನವನ್ನು ಬಳಸುತ್ತಿವೆ.

            ಕೊಳವೆ ಬಾವಿಯ ನೀರನ್ನು ಟ್ಯಾಂಕ್ ಒಂದರಲ್ಲಿ ಸಂಗ್ರಹಿಸಲಾಗುತ್ತದೆ. ಇಲ್ಲಿಂದ ಯಂತ್ರಕ್ಕೆ ನೀರು ಹರಿದು ನಾಲ್ಕು ಹಂತಗಳಲ್ಲಿ ಸೋಸಲ್ಪಟ್ಟು ಬೇರೊಂದು ಸಂಗ್ರಹ ಟ್ಯಾಂಕಿಯಲ್ಲಿ ಸಂಗ್ರಹವಾಗುತ್ತದೆ. ನೂರು ಲೀಟರ್ ನೀರು ಸೋಸಿದರೆ ಎಂಭತ್ತು ಲೀಟರ್ ಶುದ್ಧ, ಇಪ್ಪತ್ತು ಲೀಟರ್ ಅಶುದ್ಧ ಜಲ ಲಭ್ಯ. ಆಶುದ್ಧ ಜಲವು ಯೋಗ್ಯವಲ್ಲ. ಆದರೆ ತರಕಾರಿ, ಹೂವಿನ ತೋಟಗಳಿಗೆ, ದನಗಳ ಸ್ನಾನಕ್ಕೆ ಓಕೆ.

             ಘಟಕದಲ್ಲಿ ಐದು ಸಾವಿರ ಲೀಟರ್ ಸಂಗ್ರಹ ಸಾಮಥ್ರ್ಯದ ಟ್ಯಾಂಕಿಯಿದೆ. ಗಂಟೆಗೆ 1200 ಲೀಟರ್ ನೀರನ್ನು ಯಂತ್ರವು ಸೋಸಿ ಸಂಗ್ರಹಿಸುತ್ತದೆ. 'ಆರಂಭದ ದಿವಸಗಳಲ್ಲಿ ನೀರಿನಲ್ಲಿ 3450 ಟಿಡಿಎಸ್ ಇತ್ತು, ಈಗದು 138ಕ್ಕೆ ಇಳಿದಿದೆ, ನೀರಿನ ಶುದ್ಧತೆಯನ್ನು ಹೇಳುತ್ತಾರೆ ಗದಗ ಯೋಜನಾ ನಿದರ್ೇಶಕ ಜಯಂತ.

              ಒಂದು ಘಟಕಕ್ಕೆ ನಿತ್ಯ ಇಪ್ಪತ್ತು ಲೀಟರಿನಂತೆ ಐನೂರು ಮನೆಗಳಿಗೆ ಶುದ್ಧ ನೀರನ್ನು ಒದಗಿಸುವ ಸಾಮಥ್ರ್ಯ. ವಿದ್ಯುತ್ ಸರಬರಾಜು ಸಮರ್ಪಕವಾಗಿದ್ದರೆ ಮಾತ್ರ! ವಿದ್ಯುತ್ ವ್ಯತ್ಯಯದ ಸಮಯದಲ್ಲಿ ರಾತ್ರಿ ಪಾಳಿಯಲ್ಲೂ ಶುದ್ಧೀಕರಿಸುವ ಕೆಲಸ. 
 
ತಿಂಗಳಿಗೊಂದು ಕಾರ್ಡು

             ಘಟಕದ ಸದಸ್ಯತ್ವ ಅರುವತ್ತು ರೂಪಾಯಿ. ಒಂದು ಕುಟುಂಬಕ್ಕೆ ದಿವಸಕ್ಕೆ ಇಪ್ಪತ್ತು ಲೀಟರ್ ನೀರು. ಇಪ್ಪತ್ತು ಲೀಟರಿಗೆ ಎರಡು ರೂಪಾಯಿ ಶುಲ್ಕ. ತಿಂಗಳಿಗೆ ಅರುವತ್ತು ರೂಪಾಯಿ. ತಿಂಗಳಾರಂಭದಲ್ಲಿ ಅರುವತ್ತು ರೂಪಾಯಿ ಪಾವತಿಸಿ, ಕಾರ್ಡನ್ನು ಗ್ರಾಹಕರು ಪಡೆಯಬೇಕು. ನೀರು ಒಯ್ಯುವಾಗಲೆಲ್ಲಾ ಕಾರ್ಡು ತೋರಿಸಿ ಎಂಟ್ರಿ ಮಾಡಿಸುವುದು ಕಡ್ಡಾಯ.
ಸೋಸು ನೀರನ್ನು ಘಟಕದ ಹೊರಗೆ ಸುಲಭವಾಗಿ ಸಂಗ್ರಹಿಸಲು ನಳ್ಳಿ ವ್ಯವಸ್ಥೆ. ಬೆಳಿಗ್ಗೆ ಮತ್ತು ಸಂಜೆ ನಿಗದಿತ ಸಮಯ.

             ನೀರೊಯ್ಯಲು ಘಟಕವೇ ಫುಡ್ಗ್ರೇಡೆಡ್ ಕ್ಯಾನ್ ನೀಡಿದೆ. ಕ್ಯಾನಿಗೆ ನೂರ ಎಪ್ಪತ್ತೈದು ರೂಪಾಯಿ ದರ. 'ಕ್ಯಾನ್ ಬೇಡ - ಕೊಡಪಾನ, ಬಾಲ್ದಿ, ಮಗ್ಗಳಲ್ಲಿ ನೀರು ಒಯ್ಯುತ್ತೇವೆ ಎನ್ನುತ್ತಿದ್ದರು. ಅವುಗಳು ಶುಚಿಯಾಗಿರುವುದಿಲ್ಲ. ಅಶುಚಿ ಪಾತ್ರೆಯಲ್ಲಿ ಶುದ್ಧ ನೀರು ಒಯ್ದರೆ ನೀರೂ ಆಶುಚಿಯಲ್ವಾ. ಹಾಗಾಗಿ ಕ್ಯಾನಿನಲ್ಲೇ ನೀರು ಕೊಂಡೊಯ್ಯುವಂತೆ ತಿಳಿ ಹೇಳುತ್ತಿದ್ದೇವೆ' ಎನ್ನುತ್ತಾರೆ ಘಟಕ ಮೇಲ್ವಿಚಾರಕ ವಿಜಯಕುಮಾರ.

             ಶ್ರಮಿಕ ವರ್ಗದವರಾದ್ದರಿಂದ ಕ್ಯಾನ್, ನೀರಿನ ಶುಲ್ಕಗಳನ್ನು ಏಕಕಂತಿನಲ್ಲಿ ಪಾವತಿಸಲು ತ್ರಾಸ. ಇವರಿಗೆ ಅನುಕೂಲವಾಗಲೆಂದು ಯೋಜನೆಯು ತನ್ನ 'ಪ್ರಗತಿ ನಿಧಿ' ವಿಭಾಗದಿಂದ ಅಲ್ಪ ಪ್ರಮಾಣದ ಸಾಲ ನೀಡುತ್ತಾರೆ. ವರ್ಷ ಮುಗಿಯುವಾಗ ಕಂತೂ ಮುಗಿದಿರುತ್ತದೆ. ಉತ್ತಮ ಸಾಮಾಜಿಕ ಸ್ಪಂದನ ದೊರಕುತ್ತಿದ್ದು, ಆರೋಗ್ಯ ಕಾಳಜಿಯ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ.

            ಶುಭ ಸಮಾರಂಭ, ಮದುವೆಗಳಿದ್ದಾಗ ನೀರಿನ ಬಳಕೆ ಹೆಚ್ಚು. ಒಂದು ವಾರ ಮುಂಚಿತವಾಗಿ ಘಟಕಕ್ಕೆ ತಿಳಿಸಿದರೆ ಸಾಕು, ಸಕಾಲಕ್ಕೆ ಶುದ್ಧ ನೀರಿನ ಸರಬರಾಜು. ಇದಕ್ಕೆ ಮಾತ್ರ ಶುಲ್ಕ ಸ್ವಲ್ಪ ಅಧಿಕ.

ಬೇಕಿದೆ, ಅರಿವಿನ ಹರಿವು

             ಆರಂಭದಲ್ಲಿ ಗದಗ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯೋಜನೆಯ ಮುಖ್ಯಸ್ಥರು ಸಂದರ್ಶಿಸಿದಾಗ ಎದುರಾದುದು ಆರೋಗ್ಯದ ಅರಿವಿಲ್ಲದ ಬದುಕು. 'ಅದು ದೇವರು ಕೊಟ್ಟ ಶಿಕ್ಷೆ' ಅಂತ ಭಾವಿಸುವವರೇ ಅಧಿಕ. ಮೆಡಿಕಲ್ ಶಾಪ್, ಆಸ್ಪತ್ರೆಗಳ ನಿರತ ಸಂಪರ್ಕ! ಬಹುತೇಕ ಮನೆಗಳಲ್ಲಿ ಹಲ್ಲಿನ ಸಮಸ್ಯೆ, ಗಂಟು ನೋವು, ಆಶಕ್ತತೆ ಎದ್ದು ಕಾಣುತ್ತಿತ್ತು. ಆರೋಗ್ಯ, ನೀರಿನ ಸಮಸ್ಯೆಗಳನ್ನು ಮನಮುಟ್ಟುವಂತೆ ವಿವರಿಸುವ ಕೆಲಸ. ಜತೆಗೆ ಸಭೆಗಳ ಆಯೋಜನೆ.

             ಈ ಮಧ್ಯೆ 'ನೀರಿನಿಂದ ಫ್ಲೋರೈಡ್ ಬೇರ್ಪಡಿಸಿದರೆ ಅಕ್ಕಿ ಬೇಯುವುದಿಲ್ಲ. ಅನ್ನಕ್ಕೆ ರುಚಿಯಿಲ್ಲ. ಬೇಯುವಾಗ ಲೇಟ್. ಹೊಟ್ಟೆಗೆ ಹಾಳು, ಗ್ಯಾಸ್ ಆಗುತ್ತೆ. ಬಾಯಿಹುಣ್ಣು ಆಗುತ್ತೆ' ಅಂತ ಹಲವರ ಅಪಪ್ರಚಾರ. ಕಡೂರಿನಲ್ಲಿ ಶುದ್ಧ ನೀರನ್ನು ಬಳಸಿದವರಲ್ಲಿ ರೋಗಗಳ ಪ್ರಮಾಣ ಕಡಿಮೆಯಾದುವು. ಮಾತ್ರೆಗಳನ್ನು ನುಂಗುವ ಪರಿಪಾಠ ಇಳಿಮುಖವಾಯಿತು. ಔಷಧಕ್ಕೆ ರೋಗಿಗಳು ಬರುವುದಿಲ್ಲವೆಂದು ತಿಳಿದು ಡಾಕ್ಟರರೇ ಶುದ್ಧ ನೀರಿನ ಬಗ್ಗೆ ಮಿಸ್ಗೈಡ್ ಮಾಡಿದ ದೃಷ್ಟಾಂತವಿದೆ ಎನ್ನುತ್ತಾರೆ ಯೋಜನಾಧಿಕಾರಿ ನವೀನ.

             ಜನರಲ್ಲೇ ಆರೋಗ್ಯದ ಅರಿವು ಮೂಡಬೇಕು. ಶಿಕ್ಷಣ ಮತ್ತು ಆರೋಗ್ಯವು ಒಂದೇ ನಾಣ್ಯದ ಎರಡು ಮುಖಗಳು. ಶೈಕ್ಷಣಿಕವಾಗಿ ಮುಂದುವರಿದವರು 'ತಮ್ಮ ಜವಾಬ್ದಾರಿ' ಎಂದರಿತು ಅಕ್ಷರ ರಹಿತರಿಗೆ ಮಾರ್ಗದರ್ಶನ ಮಾಡಬೇಕು. ಇಂತಹ ಬದಲಾವಣೆ ಸಮಾಜದ ಮಧ್ಯೆದಿಂದಲೇ ಬಂದಾಗ ಶುದ್ಧಗಂಗಾದಂತಹ ಯೋಜನೆ ಹಲವು ಹಳ್ಳಿಗಳನ್ನು ಸಂಪರ್ಕಿಸುತ್ತದೆ.
ಲಕ್ಷಗಟ್ಟಲೆ ವೆಚ್ಚದ ಘಟಕಕ್ಕೆ ತಿಂಗಳೊಂದಕ್ಕೆ ಇಪ್ಪತ್ತೈದು ಸಾವಿರ ರೂಪಾಯಿಗೂ ಮಿಕ್ಕಿದ ಮೊತ್ತ ನಿರ್ವಹಣೆಗೆ ಬೇಕು. ಗರಿಷ್ಠ ಫಲಾನುಭವಿಗಳು ನೀರನ್ನು ಬಳಸಿದಾಗ ಮಾತ್ರ ಸಶಕ್ತವಾದೀತು. ಘಟಕದ ನಿರ್ವಹಣಾ ವೆಚ್ಚವನ್ನು ಘಟಕವೇ ಗಳಿಸಬೇಕು. ಆರಂಭದಲ್ಲದು ಕಷ್ಟ. ಆರೇಳು ತಿಂಗಳುಗಳ ಬಳಿಕ ಕಷ್ಟವಾಗದು. ಅಲ್ಲಿಯವರೆಗೆ ಗ್ರಾಮಾಭಿವೃದ್ಧಿ ಯೋಜನೆಯು ಘಟಕವನ್ನು ಆಧರಿಸುತ್ತದೆ.

             ಯೋಜನೆಯು ಯಂತ್ರಗಳಿಗಾಗಿ ಅಮೇರಿಕದ ಅಕ್ವಾಸಫಿ ಎಂಬ ಸಂಸ್ಥೆಯೊಂದಿಗೆ ಹಾಗೂ ನಾರ್ವೆಯ್ ಮಾಲ್ತೆವಿಂಜೆ ಡಿ.ಡಬ್ಲ್ಯೂ.ಎಸ್. ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.


 

ಕಾಫಿ ತೋಟದಿಂದ ಲೋಟದವರೆಗೆ - ಕಾಫಿಬೈಟ್



               ಫೆಬ್ರವರಿ ಮಧ್ಯದಲ್ಲಿ ಚಿಕ್ಕಮಗಳೂರು ಪ್ರವಾಸದಲ್ಲಿದ್ದೆ. ಮೂರ್ನಾಲ್ಕು ದಿವಸ ಅಕಾಲ ಮಳೆ. ರಸ್ತೆಗಳೆಲ್ಲಾ ಕೊಚ್ಚೆ. ಚರಂಡಿ ವ್ಯವಸ್ಥೆ ಕೈಕೊಟ್ಟುದರಿಂದ ಮುಖ್ಯ ರಸ್ತೆಯಲ್ಲೇ ನೀರಿನ ಹರಿವು.

            "ಕಾಫಿ ಕೊಯ್ಲಿನ ಸಮಯ. ಈಗ ಮಳೆ ಬರಬಾರ್ದು. ಕಾಫಿ ಗಿಡಗಳು ಚಿಗುರಿ ಹೂವರಳಿ ಬಿಡುತ್ತದೆ. ಇದರಿಂದಾಗಿ ಮುಂದಿನ ವರುಷ ಫಸಲಿಗೆ ತೊಂದರೆಯಾಗ್ತದೆ," ಎಂದರು ಕೃಷಿಕ ಚಂದ್ರಶೇಖರ್. ಬಹುತೇಕ ಎಲ್ಲಾ ಕೃಷಿಕರಲ್ಲೂ ಇದೇ ಆತಂಕ.
              'ಈ ವರುಷ ರೇಟ್ ಚೆನ್ನಾಗಿಯೇ ಇದೆ. ಆದರೆ ಕೆಲವು ರೈತರಿಗೆ ಬೆಳೆ ಓಕೆ. ಇನ್ನೂ ಕೆಲವೆಡೆ ಬೆಳೆಯಿಲ್ಲದ ಆತಂಕವಿದೆ,' ಮನೋಜ್ ಅನುಭವ ಹಂಚಿಕೊಳ್ಳುತ್ತಾರೆ. ಬೆಲೆ-ಬೆಳೆಗಳ ಮಧ್ಯದ ಹಾವೇಣಿ ಕೃಷಿಕರನ್ನು ಸಂಕಟದತ್ತ ತಳ್ಳಿಬಿಡುತ್ತವೆ.
 
             ಚಿಕ್ಕಮಗಳೂರಿನ ಕೆಲವು ಕಾಫಿ ತೋಟ ವೀಕ್ಷಿಸಿ ಮರಳುತ್ತಿದ್ದಂತೆ ಕೃಷಿಕ ಸ್ನೇಹಿತ ಅಚ್ಚನಹಳ್ಳಿ ಸುಚೇತನ ಕಳುಹಿಸಿದ 'ಕಾಫಿ ಬೈಟ್' ಪುಸ್ತಿಕೆ ಕಾಯುತ್ತಿತ್ತು. ಸುಚೇತನ ಸಕಲೇಶಪುರ ತಾಲೂಕಿನ ದೇವಲಕೆರೆಯವರು. ಕಾಫಿ ಮುಖ್ಯ ಕೃಷಿ. ಕಾಫಿ ಕೃಷಿಯ ಸೂಕ್ಷ್ಮತೆ, ಮಾರುಕಟ್ಟೆ, ವಿಶ್ವದ ಸ್ಥಿತಿಗತಿಗಳನ್ನು ಬಲ್ಲರು. ಕಾಫಿಬೈಟಿನ ಕುತೂಹಲಕರ ವಿಚಾರಗಳು ನಿಮಗಾಗಿ :-

                 ವಿಶ್ವದ ಸುಮಾರು ಐವತ್ತು ದೇಶಗಳಲ್ಲಿ ಕಾಫಿಯನ್ನು ಬೆಳೆಯಲಾಗುತ್ತದೆ. ಇಪ್ಪತ್ತೈದು ಮಿಲಿಯನಿಗೂ ಹೆಚ್ಚು ಕಾಫಿ ಬೆಳೆಗಾರರಿದ್ದಾರೆ. ಭಾರತದಲ್ಲಿ 1.57 ಲಕ್ಷ ಕಾಫಿ ಹಿಡುವಳಿದಾರರು. ಅದರಲ್ಲಿ ಶೇ. 70ರಷ್ಟು ಎರಡು ಹೆಕ್ಟೇರಿಗಿಂತಲೂ ಕಡಿಮೆ ಜಾಗ ಹೊಂದಿದವರು. ಕರ್ನಾಟಕ ರಾಜ್ಯ ಜಾಗತಿಕವಾಗಿ ಶೇ. 3.5ರಷ್ಟು ಮತ್ತು ರಾಷ್ಟ್ರೀಯವಾಗಿ ಶೇ. 70ರಷ್ಟು ಕಾಫಿಯನ್ನು ಉತ್ಪಾದಿಸುತ್ತದೆ.

               ವಿಶ್ವದ ಕಾಫಿ ಉತ್ಪಾದನೆಯಲ್ಲಿ ಲ್ಯಾಟೀನ್ ಅಮೇರಿಕಾದ ಪಾಲು ಶೇ. 60. ಏಷ್ಯಾ ಖಂಡ ಶೇ. 25ರಷ್ಟು ಉತ್ಪಾದಿಸಿ ಎರಡನೇ ಸ್ಥಾನದಲ್ಲಿದೆ. ಆಫ್ರಿಕಾ ಖಂಡಕ್ಕೆ ಮೂರನೇ ಸ್ಥಾನ. ಮೆಕ್ಸಿಕೋ ಪ್ರಮುಖ ಕಾಫಿ ಉತ್ಪಾದಕ ದೇಶ. ಮುಖ್ಯ ರಫ್ತು ಕಾಫಿ. ದೇಶಕ್ಕೆ ಕಾಫಿ ರಫ್ತಿನಿಂದ ಬರುವ ಆದಾಯ 800 ಮಿಲಿಯನ್ ಡಾಲರ್.
 
                 ಜತೆಜತೆಗೆ ಕಾಫಿಯ ಸಂಶೋಧನಾ ಲೋಕದ ಕೆಲಸಗಳನ್ನು ಸುಚೇತನ ಕಾಫಿಬೈಟಲ್ಲಿ ತುಂಬಿದ್ದಾರೆ. ಕೆಫಿನ್ ಇರುವ ಕಾಫಿ ಸೇವನೆಯು ಅಕಾಲ ಸಾವನ್ನು ಮುಂದೂಡುತ್ತದೆ. ಮಹಿಳೆಯರನ್ನು ಹೃದಯ ರೋಗದಿಂದ ಕಾಪಾಡುತ್ತದೆ. ದಿನಕ್ಕೆ ಆರು ಲೋಟಗಳಷ್ಟು ಕಾಫಿ ಸೇವನೆಯು ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುವುದಿಲ್ಲ. ಮಹಿಳೆಯರು ಹಠಾತ್ತಾಗಿ ಹೃದಯಾಘಾತಕ್ಕೆ ಒಳಗಾಗುವುದನ್ನು ಕಾಫಿ ನಿರ್ಬಂಧಿಸುತ್ತದೆ ಎನ್ನುತ್ತದೆ ಅಧ್ಯಯನ.

                ಎಂಭತ್ತನಾಲ್ಕು ಸಾವಿರ ಮಹಿಳೆಯರ ಮತ್ತು ನಲವತ್ತೊಂದು ಸಾವಿರ ಪುರುಷರ ಕಾಫಿ ಸೇವನೆಯ ಮೇಲೆ ಇಪ್ಪತ್ತು ವರುಷಗಳಿಂದ ನಿಗಾ ಇರಿಸಿಕೊಂಡು ಬಂದು ಈ ತೀರ್ಮಾನಕ್ಕೆ ಬರಲಾಗಿದೆ. ಪ್ರತಿ ಎರಡರಿಂದ ನಾಲ್ಕು ವರುಷಗಳಿಗೊಮ್ಮೆ ಅಧ್ಯಯನಕ್ಕೆ ಒಳಪಡಿಸಿದವರ ಕಾಫಿ ಸೇವನೆ, ಆಹಾರ ಪಥ್ಯ ಮತ್ತು ಸಿಗರೇಟ್ ಸೇವನೆ ಹವ್ಯಾಸಗಳನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡು ಸಂಶೋಧನೆ ಮಾಡಲಾಗಿದೆಯಂತೆ.

                 ನಿತ್ಯ ಎರಡರಿಂದ ಮೂರು ಕಪ್ ಕಾಫಿ ಸೇವಿಸುವ ಮಹಿಳೆಯರನ್ನು ಕಾಫಿ ಸೇವಿಸದವರಿಗೆ ಹೋಲಿಸಿದರೆ ಹೃದಯಾಘಾತದ ಸಾಧ್ಯತೆ ಶೇಕಡ 25ರಷ್ಟು ಕಡಿಮೆ. ಕ್ಯಾನ್ಸರ್ ಕಾಯಿಲೆ ಸಾಧ್ಯತೆಯೂ ಕಡಿಮೆ
 
               'ದಿನಕ್ಕೆ ಒಂದು ಕಪ್ ಕಾಫಿ ಸೇವನೆಯಿಂದ ಇಳಿ ವಯಸ್ಸಿನಲ್ಲಿ ಬಾಧಿಸುವ ಮರೆಗುಳಿತನ ಕಾಯಿಲೆಯಿಂದ ದೂರ ಇರಬಹುದು' ಎನ್ನುವುದು ಅಂತಾರಾಷ್ಟ್ರೀಯ ಸಂಶೋಧಕರ ವರದಿ. ಕೊಬ್ಬಿನಾಂಶ ಮೆದುಳಿನಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸಬಲ್ಲುದು. ನಂತರ ಅವು ಚದುರಿದಾಗ ಉಂಟಾಗುವ ಲೋಳೆಯಂತರಹ ಸಶೇಷ ನಿರ್ಮಾಣವಾಗಿ ಮರೆಗುಳಿ ರೋಗಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೊಬ್ಬು ಜಾಸ್ತಿಯಾದಾಗ ಆಗುವ ಅವಾಂತರವನ್ನು ಕಾಫಿಯ ಕೆಫಿನ್ ತಡೆಯಬಲ್ಲುದು ಎನ್ನುತ್ತಾರೆ ಸಂಶೋಧಕರು
 
                 ಸುಚೇತನ (9448530176) ಸ್ವತಃ ಕಾಫಿ ಬೆಳೆಗಾರರಾದ್ದರಿಂದ ಸುಖ ದುಃಖಗಳನ್ನು ಅನುಭವಿಸಿದವರು. ಹಾಗಾಗಿ ಕಾಫಿಬೈಟಿನ ಬರೆಹಗಳೆಲ್ಲವೂ ಅನುಭವದ ಮೂಸೆಯಿಂದ ಹೊರಬಂದಿದೆ. ಕರ್ನಾಟಕದಲ್ಲಿ ಕಾಫಿ ಬೆಳೆ ಕುಸಿತದ ಕಾರಣವನ್ನು ಸುಚೇತನ ಬರೆಯುತ್ತಾರೆ, 1980-81ರಲ್ಲಿ ಕರ್ನಾಟಕದಲ್ಲಿ ನೂರು ಹೆಕ್ಟೇರಿಗೂ ಹೆಚ್ಚಿನ ವಿಸ್ತೀರ್ಣದ ಕಾಫಿ ತೋಟಗಳನ್ನು ಹೊಂದಿದವರ ಸಂಖ್ಯೆ 123 ಮಾತ್ರ. 2000-01ರಲ್ಲಿ ಅಂತಹ ಶ್ರೀಮಂತ ಜಮೀನುದಾರರ ಸಂಖ್ಯೆ ನಲವತ್ತಕ್ಕೆ ಇಳಿಯಿತು. ಆ ಬಳಿಕ ಇನ್ನೂ ಇಳಿತ ಕಂಡಿದೆ. ಕಾರಣ, ಎಲ್ಲಾ ಕಾಫಿ ತೋಟಗಳನ್ನು ತಮ್ಮ ಬಗಲಿಗೆ ಹಾಕಿಕೊಳ್ಳುತ್ತಿರುವ ಟಾಟಾ ಕಾಫಿ ಮತ್ತು ಇತರ ಕಂಪೆನಿಗಳ ದಾಹ.

              ಇಂದು ಕಾಫಿ, ನಾಳೆ ಭತ್ತ, ನಾಡಿದ್ದು.. ಇನ್ನೇನೋ. ಹೊಸ ಉದ್ಯಮಗಳಿಗೆ ರತ್ನಗಂಬಳಿ ಹಾಸುತ್ತಿರುವ ಸರಕಾರಕ್ಕೆ ಕೃಷಿಕನ ಬದುಕು ಬೇಕಾಗಿಲ್ಲ. ಹಾಗಾಗಿಯೇ ನೋಡಿ, ಕಂಪೆನಿಗಳು ಕೃಷಿಕನ ಅಂಗಳದಲ್ಲಿ ಬಿಡಾರ ಹೂಡುತ್ತಿವೆ!

ಸುಚೇತನ - 9448530176

ಶ್ರಮ ಹಗರುಗೊಳಿಸುವ ಸಹಕಾರಿ ತರಕಾರಿ ಕೃಷಿ


              ಒಂದು ಕಾಲಘಟ್ಟ ನೆನಪಾಗುತ್ತದೆ. ಹತ್ತು ಮಂದಿ ಜತೆ ಸೇರಿ ಗದ್ದೆಯಲ್ಲಿ ತರಕಾರಿ ಮಾಡುವ ವ್ಯವಸ್ಥೆ. ಪ್ರತಿಯೊಬ್ಬನಿಗೂ ಇಂತಿಷ್ಟು ಸಾಲು ಎನ್ನುವ ಲೆಕ್ಕಾಚಾರ. ಏತದಿಂದ ನೀರೆತ್ತಿ ನೀರಾವರಿ. ಬೆಳ್ಳಂಬೆಳಿಗ್ಗೆ ಅವರವರ ಪಾಲಿನ ತರಕಾರಿ ಸಾಲಿಗೆ ನೀರುಣಿಕೆ, ಗೊಬ್ಬರ ಮೊದಲಾದ ಆರೈಕೆಗಳು ಸೂರ್ಯೋದಯವಾಗುವಾಗ ಮುಗಿದು ಬಿಡುತ್ತದೆ. ದಿನಕ್ಕೊಬ್ಬರಂತೆ ಏತವನ್ನು ಜಗ್ಗುವ ಸರದಿ. ಯಾರಲ್ಲಿ ತರಕಾರಿ ಇಳುವರಿ ಬಂತೋ ಅದನ್ನು ಸ್ಥಳೀಯವಾಗಿಯೇ ವಿನಿಮಯ.
ಹಸಿಮೆಣಸಿನಕಾಯಿ, ಸೌತೆ, ಬೆಂಡೆ, ಅಲಸಂಡೆ, ಗೆಣಸು.... ಬೆಳೆಸದವರಿಲ್ಲ. ಮನೆಗಳಲ್ಲಿ ಸೌತೆ, ಕುಂಬಳ ಕಾಯಿಗಳನ್ನು ತೆಂಗಿನ ಹಸಿ ಗರಿಯ ಒಂದು ಸೀಳಿನಲ್ಲಿ ಕಟ್ಟಿ ತೂಗಾಡಿಸಿ ಕಾಪಿಡುವುದು ಪಾರಂಪರಿಕ ಕ್ರಮ. ರಾಸಾಯನಿಕ, ವಿಷವನ್ನು ಬಳಸದ್ದರಿಂದ ತಾಳಿಕೆಯೂ ಹೆಚ್ಚು. ರುಚಿಯೂ ಅಧಿಕ.

              ಸೌತೆಕಾಯಿ ಅಂದಾಗ ಏನು ಮಾಡಬಹುದು ಹೇಳಿ? ಪದಾರ್ಥ, ಪಲ್ಯ ಬಿಟ್ಟರೆ ಫಕ್ಕನೆ ಹೊಳೆಯದು. ಹಿರಿಯನ್ನು ಕೇಳಿ. ಸೌತೆಯ ಕಡುಬು, ಪಾಯಸ, ದೋಸೆ, ಬೀಜದ ಸಾರು, ಒಳ ಹೂರಣವನ್ನು ಕೆರೆದು ಬೆಲ್ಲ ಮಿಶ್ರಮಾಡಿದ ಪಾಕ.. ಇವೆಲ್ಲಾ ಕಾಲದ ಧಾವಂತದಲ್ಲಿ ಮರೆತುಹೋಗಿದೆ. ಅಲ್ಲೋ ಇಲ್ಲೋ ಉಳಿದುಕೊಂಡಿವೆಯಷ್ಟೇ. ಇಂತಹ ಮನೆಗಳಲ್ಲಿ ದಿಢೀರ್ ನೆಂಟರು ಬಂದಾಗ ಮನೆಯೊಡತಿಯ ರಕ್ತದೊತ್ತಡ ಏರುವುದಿಲ್ಲ. ಸೌತೆಯೊಂದರಿಂದಲೇ ಖಾರದಿಂದ ಸಿಹಿ ತನಕ ಮಾಡಿದ ಅಡುಗೆಗಳು ಬರೆದಿಟ್ಟರೆ ಪುಸ್ತಕದಲ್ಲಿ ಮಾತ್ರ ಉಳಿದಿರುವುದು ನಮ್ಮ ಪಾಡು.

                ಸಹಕಾರಿ ಕೃಷಿ ಮಾಡುವುದರಿಂದ ತರಕಾರಿಯೊಂದಿಗೆ ಇತರ ಪ್ರಯೋಜನಗಳನ್ನು ಗುರುತು ಹಾಕಿಕೊಳ್ಳಬಹುದು. ತರಕಾರಿ ಕೃಷಿಯು ಗಿಡಗಳ ಜತೆಗಿದ್ದೇ ಮಾಡುವ ಕೆಲಸ. ಇದು ಅವಲಂಬನಾ ಕೆಲಸವಲ್ಲ. ಸಹಾಯಕರನ್ನು ನಂಬಿ ಮಾಡುವಂತಹುದಲ್ಲ. ಸ್ವತಃ ತೊಡಗಿಸಿಕೊಂಡರೆ ಮಾತ್ರ ಪ್ರತಿಫಲ. ಒಂದು ದಿವಸ ನಿಗಾ ತಪ್ಪಿದರೆ ಸಾಕು, ಆರೈಕೆ ಮಾಡಿದ ಗಿಡಗಳು ಸೊರಗಿರುತ್ತದೆ. ಕೂಡು ಕೃಷಿಯಲ್ಲಿ ಶ್ರಮವಿನಿಮಯವಿದೆ. ಇಂದು ಒಬ್ಬನಿಗೆ ಗೈರುಹಾಜರಾಗುವ ಸಂದರ್ಭ ಬಂದರೆ, ಅವನ ಸಾಲಿನ ಕೆಲಸವನ್ನು ಪಕ್ಕದ ಸಾಲಿನ ಮಾಡುತ್ತಾನೆ. ಗಿಡಗಳ ರಕ್ಷೆಗಾಗಿ ಪ್ರತಿಯೊಬ್ಬನಿಗೂ ಬೇಲಿ ಹಾಕಬೇಕಾಗಿಲ್ಲ. ಎಲ್ಲರಿಗೂ ಒಂದೇ ಬೇಲಿ ಸಾಕು. ಹಲವರ ನಿಗಾ ಇರುವಾಗ ಒಂದು ಗಿಡ ಸೊರಗಿದರೂ ಗೊತ್ತಾಗಿಬಿಡುತ್ತದೆ. ಆರೈಕೆ ಮಾಡಲು ಸುಲಭ.

                ಈಚೆಗೆ ಅಳಿಕೆ (ದ.ಕ.) ಸನಿಹದ ಮುಳಿಯಕ್ಕೆ ಭೇಟಿ ನೀಡಿದ್ದೆ. ವಿ.ಕೆ.ಶರ್ಮರ ಬೈಲುಗದ್ದೆಯೊಂದರಲ್ಲಿ ತರಕಾರಿ ಕೃಷಿ. ಸುತ್ತಲಿನ ಐದಾರು ಮಂದಿ ಜತೆಸೇರಿ ಹತ್ತು ಸೆಂಟ್ಸ್ ವಿಸ್ತಾರದಲ್ಲಿ ಕೃಷಿ ಮಾಡಿದ್ದರು. ಸೌತೆ, ಮುಳ್ಳುಸೌತೆ, ಅಲಸಂಡೆ, ಬೆಂಡೆ, ಸೊರೆ.. ಹೀಗೆ ಹಲವು ಬೇಸಿಗೆ ತರಕಾರಿಗಳು. ಎರಡೂವರೆ ತಿಂಗಳ ಶ್ರಮ. ನೀರಿನ ಸಂಪನ್ಮೂಲ ಕಡಿಮೆಯಾಗುತ್ತಾ ಬಂದಂತೆ ಬಳ್ಳಿಗಳೂ ಕೊನೆಯುಸಿರುಬಿಟ್ಟಿರುತ್ತವೆ.

               ಮನೆಬಳಕೆಗೆ ಮಿಕ್ಕಿದ್ದು ಸ್ಥಳೀಯವಾಗಿ ಮಾರಾಟ. ಈ ವರುಷ ಉತ್ತೇಜಿತ ದರವಿದ್ದುದರಿಂದ ಬೆಳೆದವರ ಮುಖ ಅರಳಿದೆ. ಸೌತೆ ಕಿಲೋಗೆ ಹದಿನೈದು ರೂಪಾಯಿ, ಬೆಂಡೆಗೆ ಮೂವತ್ತು, ಅಲಸಂಡೆಗೆ ಮೂವತ್ತು.. ಹೀಗೆ. ವಿಸ್ತಾರವಾಗಿ ತರಕಾರಿ ಗಿಡ/ಬಳ್ಳಿಗಳು ಹಬ್ಬಿವೆ. ಹಾಗಾಗಿ ಒಂದೇ ಕಡೆಗೆ ಕೀಟ ಬಾಧೆ ಕಡಿಮೆ. ಬಯೋಡೈಜೆಸ್ಟರ್ ದ್ರಾವಣ ಮತ್ತು ಸುಡುಮಣ್ಣು, ಹಟ್ಟಿಗೊಬ್ಬರ ಉಣಿಸಿದ್ದರಿಂದಾಗಿ ಗಿಡಗಳು ಸದೃಢವಾಗಿವೆ ಎನ್ನುತ್ತಾರೆ ಶರ್ಮ.

                ಸಹಕಾರಿ ಕ್ರಮದಲ್ಲಿ ಕೃಷಿ ಮಾಡಿದ್ದರಿಂದ ಕೆಲಸಗಳು ಹಗುರವಾಗಿವೆ. ಒಬ್ಬ ರಜೆ ಮಾಡಿದರೂ ಇನ್ನೊಬ್ಬ ಆ ಜಾಗವನ್ನು ತುಂಬುತ್ತಾನೆ. ಏತವನ್ನು ಜಗ್ಗಿ ನೀರು ಹಾಯಿಸಲು ನಾಲ್ಕೈದು ಮಂದಿ ಬೇಕು. ಒಬ್ಬೊಬ್ಬ ಕೃಷಿ ಮಾಡಿದರೆ ತ್ರಾಸ. ನಿರ್ವಹಣೆ ಕಷ್ಟ. ಎಲ್ಲರೂ ಸೇರಿ ಮಾಡುವುದರಿಂದ ಸುಲಭವಾಗಿದೆ' ಎನ್ನುತ್ತಾರೆ ತರಕಾರಿ ಬೆಳೆದ ನಾರಾಯಣ. ಹತ್ತಿರ ಹತ್ತಿರ ಸಾಲುಗಳಿರುವುದರಿಂದ ನೀರಿನ ಪ್ರಮಾಣವೂ ಕಡಿಮೆ ಸಾಕಾಗುತ್ತದೆ.

                 ಸಹಕಾರಿ ಕ್ರಮದಲ್ಲಿ ಕೃಷಿಗೆ - ಏಕಮನಸ್ಕರಾಗಿರಬೇಕು, ಹೊಂದಾಣಿಕೆ ಗುಣವಿರಬೇಕು. ನನ್ನದೇ ಅಂತಿಮ ಮಾತು ಎನ್ನುವ ಮಂದಿಗೆ ನೋ ಎಂಟ್ರಿ! ಕಳೆದ ಐದು ವರುಷದಿಂದ ಶಮರ್ಾರ ಗದ್ದೆ ತರಕಾರಿಗೆ ಮೀಸಲು. ನಾವೇ ಬೆಳೆದ ತರಕಾರಿಯನ್ನು ಮೆಲ್ಲುವುದು ಖುಷಿಯಲ್ವಾ. ಮನಸ್ಸು, ವಿಷರಹಿತ ಆಹಾರದ ಅರಿವು ಬೇಕಷ್ಟೇ.