Tuesday, July 28, 2020

ನಾಂದ್ರೋಡು – ಇನ್ನು ನೆನಪು ಮಾತ್ರ


ಪ್ರಗತಿಪರ ಕೃಷಿಕ, ಹೊಸ ಯಂತ್ರಗಳ ಆವಿಷ್ಕಾರ, ಅಂಗಳದಲ್ಲಿ ಭತ್ತದ ಕೃಷಿ, ಅಕ್ಕಿ ಮಾಡುವ ಯಂತ್ರ, ನೇಜಿ ನೆಡುವ ಯಂತ್ರ, ಅಕ್ಕಿ ಶುಚಿ ಗೊಳಿಸುವ ಯಂತ್ರ,... ಹೀಗೆ ಅನೇಕ ಆವಿಷ್ಕಾರ ಮಾಡಿದ ಏತಡ್ಕದ ನಾಂದ್ರೋಡು ಮಹಾಲಿಂಗೇಶ್ವರ ಭಟ್ಟರು (86) ನಿಧನರಾದರು. ಕಾಲು ಶತಮಾನದ ಹಿಂದೆ ಹೊಳೆಯನ್ನು ದಾಟಲು ತೊಟ್ಟಿಲು ನಿರ್ಮಿಸಿ ಸುಲಭ ವಿಧಾನ ಮಾಡಿದ್ದರು. ಕಟ್ಟವನ್ನು ಮರದಲ್ಲಿ ನವೀನ ರೀತಿಯಲ್ಲಿ ನಿರ್ಮಿಸಿ ಕೃಷಿಕರಿಗೆ ಮಾರ್ಗದರ್ಶನ ಮಾಡಿದ್ದರು. ಅಂಗಳದಲ್ಲಿ ಸುವಾಸನೆ ಭರಿತ ಬಾಸ್ಮತಿ ಭತ್ತ ಬೆಳೆದವರು. ಪುತ್ತೂರಿನಲ್ಲಿ ಕಳೆದ ವರುಷ ಜರುಗಿದ ಯಂತ್ರಮೇಳದಲ್ಲಿ ಭಾಗವಹಿಸಿದಾಗ ‘ರೇಡಿಯೋ ಪಾಂಚಜನ್ಯ’ಕ್ಕೆ ಅವರನ್ನು ಸಂದರ್ಶನ ಮಾಡಿದ್ದೆ. ಅವರೊಬ್ಬ ‘ಭತ್ತದ ಬ್ಯಾಂಕ್’ ಆಗಿದ್ದರು. ಅಗಲಿದ ನಾಂದ್ರೋಡು ಅವರಿಗೆ ಭಾಷ್ಪಾಂಜಲಿ.
(ಚಿತ್ರ : ವೇಣು ಕಳೆಯತ್ತೋಡಿ)

Saturday, July 11, 2020

ಎಂ.ಎಸ್.ರಘುನಾಥ ರಾವ್ ಅವರ ವೃತ್ತಿ ಬದುಕಿನ ಕಥನ 'ಅಕ್ಷರಯಾನ' ಲೋಕಾರ್ಪಣೆ

ಜೀವನ ಪಾಠಕ್ಕಿಂತ ಮಿಗಿಲಾದ ಪಾಠ ಬೇರೊಂದಿಲ್ಲ. ಓರ್ವನ ಅನುಭವ ಇನ್ನೊಬ್ಬನಿಗೆ ಕೈದೀವಿಗೆಯಾಗುತ್ತದೆ. ಶ್ರಮದ ಮೂಲಕ ಬದುಕನ್ನು ಕಟ್ಟುವುದು ಹೇಳಿದಷ್ಟು ಸುಲಭವಲ್ಲ. ರೀತಿ ಬೆಳೆದ ರಘುನಾಥ ರಾಯರು ವೃತ್ತಿ ಬದ್ಧತೆಯಿಂದ ಮುದ್ರಣ ಕ್ಷೇತ್ರಕ್ಕೆ ಗೌರವ ತಂದಿದ್ದಾರೆ. ರಾಜೇಶ್ ಪವರ್ ಪ್ರೆಸ್ ಪುತ್ತೂರಿನ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆಎಂದು ಸವಣೂರಿನ ವಿದ್ಯಾರಶ್ಮೀ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಹೇಳಿದರು

ದರ್ಭೆಯ ರಾಜೇಶ್ ಪವರ್ ಪ್ರೆಸ್ಸಿನಲ್ಲಿ ಜರುಗಿದ ಸರಳ ಸಮಾರಂಭದಲ್ಲಿ (10-7-2020) ಎಂ.ಎಸ್.ರಘುನಾಥ ರಾಯರ ವೃತ್ತಿ ಬದುಕಿನ ಅನುಭವ ಗಾಥೆ 'ಅಕ್ಷರಯಾನ' ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, “ಹಿರಿಯರು ಬದುಕಿ ತೋರಿಸಿದ ಜೀವನದ ದರ್ಶನಗಳು ಯುವಕರಿಗೆ ಸ್ಫೂರ್ತಿಯ ದೀವಿಗೆಯಾಗುತ್ತದೆ. ಅಕ್ಷರಯಾನವು ಕಾಲದ ದಾಖಲಾತಿಯಾಗುವುದರಲ್ಲಿ ಸಂಶಯವಿಲ್ಲ.” ಎಂದರು.

ಅಕ್ಷರಯಾನದ ಸಂಪಾದಕ ಹಾಗೂ ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆಯವರು ಕೃತಿಯನ್ನು ಪರಿಚಯಿಸುತ್ತಾ, “ಮುದ್ರಣ ಕ್ಷೇತ್ರದಲ್ಲಿ ಇಂತಹ ಅನುಭವ ಕಥನ ಅಪರೂಪಎಂದರು. ಹಿರಿಯ ಸಾಹಿತಿ ಗೋಪಾಲಕೃಷ್ಣ ಶಗ್ರಿತ್ತಾಯರು ರಘುನಾಥ ರಾಯರ ಒಟ್ಟೂ ಬದುಕನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿ ಅಭಿನಂದಿಸಿದರು. ಕಲಾವಿದ ಪ್ರಸನ್ನ ರೈ ಸವಣೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ, ವಿವೇಕಾನಂದ ಶಿಶುಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಕುಂಬಳೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಆರಂಭದಲ್ಲಿ ರಘುನಾಥ ರಾಯರು ಸ್ವಾಗತಿಸಿದರು. ನಾರಾಯಣ ನಿರ್ವಹಿಸಿ, ವಂದಿಸಿದರು. ಶ್ಯಾಮಲಾ ರಘುನಾಥ ರಾವ್, ರಾಜೇಶ್, ಸ್ವಪ್ನಾ, ಕು.ಅನಘಾ, ಕು.ಅನನ್ಯಾ.. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಪ್ರೆಸ್ಸಿನ ಲೆಕ್ಕಪತ್ರಗಳ ಉಸ್ತುವಾರಿಯಾಗಿರುವ ಲೋನಾ ಪಿಂಟೋ ಸಹಿತ ಸಿಬ್ಬಂದಿಗಳು ಸಮಾರಂಭಕ್ಕೆ ಸಾಕ್ಷಿಯಾದರು.