Sunday, November 18, 2018

ಓದುವ ಗೀಳು ತಂದ 'ಚಂದಮಾಮ'

 
ಯಾಕೋ.. ಶಾಲಾ ದಿನಗಳಿಂದಲೇ ಪುಸ್ತಕದ ಗೀಳು. ಇದಕ್ಕೆ ಕಾರಣ ಪ್ರಾಥಮಿಕ ಶಾಲೆಯಲ್ಲಿದ್ದ ಚಿಕ್ಕ ಗ್ರಂಥಾಲಯ. ತಿಂಗಳಿಗೆ ಎರಡು ಬಾರಿ ನೀಡುತ್ತಿದ್ದ ಪುಸ್ತಕದ ಓದು. ಕೃಷ್ಣಪ್ಪ ಮಾಸ್ತರರ ಒತ್ತಾಸೆ. ಓದದೆ ಕಲಿಯುವುದೇನನ್ನು ಎಂದು ಓದದ ಸಹಪಾಠಿಗಳಿಗೆ ಬೆತ್ತದ ರುಚಿ ತೋರಿಸಿದ ಆ ದಿನಗಳು ಮರೆಯುವುದಿಲ್ಲ. 

ಹೈಸ್ಕೂಲ್ ಓದುತ್ತಿದ್ದಾಗ ಚಂದಮಾಮ, ಬಾಲಮಿತ್ರ, ಚುಟುಕ.. ಮೊದಲಾದ ನಿಯತಕಾಲಿಕಗಳತ್ತ ಆಸಕ್ತಿ ಹೆಚ್ಚಾಯಿತು. ಒಂದೇ 'ಧಮ್ಮಿನಲ್ಲಿ' ಎಲ್ಲಾ ಪುಟಗಳನ್ನು ಓದುವ ತವಕ, ಚಪಲ. ಕೆಲವೊಮ್ಮೆ ಪತ್ರಿಕೆಗಳಲ್ಲಿ 'ಉಚಿತ ಪುಸ್ತಕಗಳಿಗೆ ಬರೆಯಿರಿ' ಎನ್ನುವ ಜಾಹೀರಾತುಗಳು ಆಸಕ್ತಿದಾಯಕವಾಗಿರುತ್ತಿತ್ತು. ಹೀಗೆ ಪಡೆದ ಪುಸ್ತಕಗಳು ಕೈ ಸೇರಿದಾಗ ನಿರಾಶೆ! 

 ಸುಳ್ಯ ಸನಿಹದ ಪೆರಾಜೆಯು ಒಂದು ಕಾಲಘಟ್ಟದಲ್ಲಿ ತ್ರಿಶಂಕು ಗ್ರಾಮ! ಆಚೆ ಕೊಡಗಿಗೂ ಬೇಡ, ಇತ್ತ ದಕ್ಷಿಣ ಕನ್ನಡವೂ ಸ್ವೀಕರಿಸದ ಹಳ್ಳಿ. ಕೊಡಗಿನ ಭೂಪಟದಲ್ಲಿ ಚಿಕ್ಕ ಬಾಲ! ವಿದ್ಯುತ್ ಶುಲ್ಕ ಪಾವತಿಸಲೂ ದೂರದ ಮಡಿಕೇರಿಗೆ ಹೋಗಬೇಕಾಗಿತ್ತು. ಈಗ ಗ್ರಾಮ ಬೆಳೆದಿದೆ. ಶೈಕ್ಷಣಿಕವಾಗಿ ಮುಂದಿದೆ. ಸೌಕರ್ಯಗಳೆಲ್ಲಾ ಬಂದಿವೆ. 

ಅಂಚೆ ಕಚೇರಿಯ ಪಕ್ಕ ಅಂಚೆ ಮಾಸ್ತರರ ಅಂಗಡಿಯಿತ್ತು. ಅವರು ಯಕ್ಷಗಾನ ಪ್ರಿಯರು. ವೈಯಕ್ತಿಕವಾಗಿ ಹಿತರು. ಅಂಗಡಿಯು ಊರಿನ ಆಗುಹೋಗುಗಳ ಕೇಂದ್ರ! ಅಲ್ಲಿಗೆ ಯಾರೆಲ್ಲಾ ಬರುತ್ತಾರೆ ಎಂದು ಅಂಚೆಯಣ್ಣನಿಗೆ ಗೊತ್ತು. ಅವರು ಪೆಟ್ಟಿಗೆಯೊಂದರಲ್ಲಿ ಅಂಚೆಯನ್ನು ಹಾಕಿಡುತ್ತಿದ್ದರು. ಸಂಬಂಧಪಟ್ಟವರು ಒಯ್ಯುತ್ತಿದ್ದರು. 

ತಂದೆಯ ಆಪ್ತರೊಬ್ಬರು ಚಂದಮಾಮದ ಚಂದಾದಾರರು. ತಿಂಗಳಿಗೊಮ್ಮೆ ಅವರ ಮನೆಗೆ ಹೋಗಿ ಓದುತ್ತಿದ್ದೆ. ಪತ್ರಿಕೆ ಖರೀದಿಸಲು ಆರ್ಥಿಕ ಶಕ್ತಿಯಿಲ್ಲದ ಕಾಲ. ಅಂದು ಅಂಚೆಯಲ್ಲಿ ಬಂದ ಚಂದಮಾಮ ಪುಸ್ತಕವನ್ನು ಬಿಡಿಸಿ ಕುಳಿತು ಓದುತ್ತಿದ್ದೆ. ಇನ್ನೊಬ್ಬರ ಹೆಸರಿಗೆ ಬಂದ ಅಂಚೆಯನ್ನು ಒಡೆಯುವುದು ತಪ್ಪೆಂದು ಗೊತ್ತಿತ್ತು. ಆದರೆ ಓದುವ ಚಟ ಹಾಗೆ ಮಾಡಿಸಿತ್ತು.
ಸ್ವಲ್ಪ ಹೊತ್ತಾಗಿರಬಹುಷ್ಟೇ. ತನಗೆ ಬಂದ ಅಂಚೆಯನ್ನು ಒಯ್ಯಲು ಆ ಅಪ್ತರು ಬಂದರು. ತಕ್ಷಣ ಪುಸ್ತಕವನ್ನು ನೀಡಿದೆ. ಅಲ್ಲಿದ್ದ ಪ್ರತಿಷ್ಠಿತ ವ್ಯಕ್ತಿಯೋರ್ವ, ಹಣ ಕೊಟ್ಟು ಪುಸ್ತಕ ಪರ್ಚೇಸ್ ಮಾಡುವ ಯೋಗ್ಯತೆ ಇಲ್ಲದಿದ್ದ ಮೇಲೆ ಓದುವ ದೊಡ್ಡಸ್ತಿಕೆ ಯಾಕೆ? ನಾಚಿಕೆಯಾಗುವುದಿಲ್ವಾ. ಅನ್ನಬೇಕೇ? ತಲೆ ತಗ್ಗಿಸಿ ಮರಳಿದೆ. 

ಚುಚ್ಚು ಮಾತುಗಳು ಚುಚ್ಚಿತು. ಬಹುಕಾಲ ಚುಚ್ಚುತ್ತಿದ್ದುವು. ತುತ್ತಿಗೂ ತತ್ವಾರವಿದ್ದರೂ 'ಯೋಗ್ಯತೆ'ಯ ಕುರಿತು ತುಂಬಾ ಹಗುರವಾಗಿ ಮಾತನಾಡಿದ್ದರಿಂದ ನೋವು ಅನುಭವಿಸಿದ್ದೆ. ಬಳಿಕ ಐದಾರು ತಿಂಗಳು ಓದುವಿಕೆಗೆ ಸ್ವ-ಘೋಷಿತ ರಜೆ! ಆ ಆಪ್ತರಿಗೆ ಯಾಕೋ ಸಂಶಯ ಬಂದು ಅಷ್ಟೂ ತಿಂಗಳ ಪುಸ್ತಕವನ್ನು ತಂದು ಕೊಟ್ಟರು. 

ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಪೆರಾಜೆಯಿಂದ ಸುಳ್ಯಕ್ಕೆ ಐದಾರು ಕಿಲೋಮೀಟರ್ ನಿತ್ಯ ಬಸ್ ಪ್ರಯಾಣ. ಬಹುಶಃ ಎರಡೋ ಮೂರು ರೂಪಾಯಿ ಟಿಕೇಟ್. ಹಳೆಯ ಚಂದಮಾಮದ ಸಂಚಿಕೆಗಳು ಅಣಕಿಸುತ್ತಿದ್ದುವು.  ಓದದೆ ಚಡಪಡಿಕೆ. ಮನೆಯಲ್ಲಿ ಹಣ ಕೊಡುವ ಸ್ಥಿತಿಯಿದ್ದಿರಲಿಲ್ಲ. ವಾರದ ಕೊನೆಗೆ ಸುಳ್ಯದಿಂದ ಪೆರಾಜೆಗೆ ಕಾಲ್ನಡಿಗೆ ಜಾಥಾ! ಬಸ್ಸಿನ ಹಣವನ್ನು ಉಳಿಸುತ್ತಿದ್ದೆ. ಅದರಲ್ಲಿ ಚಂದಮಾಮ ಖರೀದಿಸಿ ಓದಲು ಶುರು ಮಾಡಿದೆ. 

ಮೊದಲು ಹಣ ನೀಡಿ ಖರೀದಿಸಿದ ಚಂದಮಾಮದ ಪುಟಗಳಲ್ಲಿ ಕೀಳಾಗಿ, ಹಗುರವಾಗಿ ಮಾತನಾಡಿದರ ಮುಖವೇ ಕಾಣುತ್ತಿತ್ತು. ಮತ್ತೆಂದೂ ಪುಕ್ಕಟೆಯಾಗಿ ಪತ್ರಿಕೆಯನ್ನೋ, ನಿಯತಕಾಲಿಕೆಯನ್ನು ಓದಿಲ್ಲ. ಕೊಂಡು ಓದುವ 'ಯೋಗ್ಯತೆ' ಬಂತು! ನಂತರದ ದಿವಸಗಳಲ್ಲಿ ಒಂದೆರಡು ದಿನಪತ್ರಿಕೆಗಳು ಸಾಥ್ ಆದುವು.  
 
ಹೀಗೆ ರೂಢನೆಯಾದ 'ಕೊಂಡು ಓದುವ' ಹುಚ್ಚು ಅಧರ್ಾಯುಷ್ಯ ದಾಟಿದರೂ ನಿಂತಿಲ್ಲ!  ಅವರ ಚುಚ್ಚು ಮಾತುಗಳು ಆಸಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಯಿತೇನೋ ಹೌದು. ಆದರೆ ಬದುಕಿನಲ್ಲಿ 'ಮಮರ್ಾಘಾತ' ಮಾಡುವಂತಹ ವ್ಯಕ್ತಿಗಳು 'ಹಿತರ' ಸೋಗಿನಲ್ಲಿ ಈಗಲೂ ಇದ್ದಾರೆ. ನಿತ್ಯ ಗೆಜಲುತ್ತಾ ಇರುವುದು ಇಂತಹವರ ಸ್ವಭಾವ. ಅವರು ಕೊಡುವ, ಕೊಟ್ಟ ನೋವು ಫಕ್ಕರೆ ಆರುವುದಿಲ್ಲ.   

          ಹೀಗೆ ಶುರುವಾದ ಪುಸ್ತಕದ ಹುಚ್ಚು ನಿಜಾರ್ಥದ ಹುಚ್ಚಾಗಿ ಪರಿಣಾಮಿಸಿತು. ಚಿಕ್ಕ ಪುಸ್ತಕ ಭಂಡಾರದ ಹುಟ್ಟಿಗೂ ಕಾರಣವಾಯಿತು. (ಲೇಖನದ ಜತೆಗಿರುವ ಚಂದಮಾಮ ಮುಖಚಿತ್ರ  1954 ನವೆಂಬರ ತಿಂಗಳ ಸಂಚಿಕೆಯದ್ದು. ಜಾಲತಾಣ ಕೃಪೆ) 

ಸುದ್ದಿ ಬಿಡುಗಡೆ / ಊರುಸೂರು 7 / 21-10-2018
 



ಜಿಹ್ವಾಚಾಪಲ್ಯ ವೃದ್ಧಿಸುವ ರುಚಿವರ್ಧಕ


           ಬಸ್ಸಿನ ಮುಂದಿನ ಆಸನದಲ್ಲಿದ್ದ ಅಡುಗೆ ವಿಶೇಷಜ್ಞರ ಮಾತಿಗೆ ಕಿವಿಯೊಡ್ಡಬೇಕಾದ ಪ್ರಮೇಯ ಬಂತು. ಅವರಿಬ್ಬರು ದೊಡ್ಡ ಸಮಾರಂಭಗಳ ಅಡುಗೆಯ ಜವಾಬ್ದಾರಿಯನ್ನು ನಿಭಾಯಿಸಿದ ಅನುಭವಿಗಳು. ಒಬ್ಬರೆಂದರು, ಮೊನ್ನೆ ಎರಡು ಸಾವಿರ ಮಂದಿಯ ಅಡುಗೆಗೆ ಶಹಬ್ಬಾಸ್ ಸಿಕ್ಕಿದ್ದೇ ಸಿಕ್ಕಿದ್ದು. ಯಾವಾಗಲೂ ಹಾಕುವುದಕ್ಕಿಂತ ಸ್ವಲ್ಪ ಹೆಚ್ಚೇ ಟೇಸ್ಟ್ ಮೇಕರ್ ಹಾಕಿದ್ದೆ, ಎಂದಾಗ ಇನ್ನೊಬ್ಬರು ದನಿ ಸೇರಿಸಿದರು, ಅಂಗಡಿಯಲ್ಲಿ ಟೇಸ್ಟ್ ಮೇಕರ್ ಅಂತ ಕೇಳಿದ್ರೆ ಆಯಿತು, ಏನೋ ಬಿಳಿ ಪುಡಿ ಕೊಡ್ತಾರೆ. ಅದು ಎಂತಾದ್ದು ಅಂತ ಗೊತ್ತಿಲ್ಲ. ಈಚೆಗೆ ಎಲ್ಲರೂ ಹಾಕ್ತಾರೆ, ನಾನ್ಯಾಕೆ ಹಾಕಬಾರ್ದು? ಆ ಪುಡಿ ಹಾಕಿದರೆ ಸಾರು, ಸಾಂಬಾರಿನ ರುಚಿಯೇ ಬೇರೆ.
          ದಂಗಾಗುವ ಸರದಿ ನನ್ನದು. ಹೋಟೆಲ್, ಉದ್ಯಮಗಳಲ್ಲಿ ರುಚಿವರ್ಧಕವನ್ನು ಬಳಸುವುದನ್ನು ಕಿವುಡಾಗಿ, ಕುರುಡಾಗಿ ಒಪ್ಪಿಕೊಂಡಾಗಿದೆ. ಅಡುಗೆ ವಿಶೇಷಜ್ಞರು ಅಪರೂಪಕ್ಕೆ ಬಳಸುತ್ತಾರೆನ್ನುವುದು (ಎಲ್ಲರೂ ಅಲ್ಲ) ಇಂದಷ್ಟೇ ತಿಳಿಯಿತು. ಸಮಾರಂಭಗಳ ಸಂಖ್ಯೆ ಅಧಿಕವಾಗುತ್ತಾ ಬಂದ ಹಾಗೆ ಸೂಪಜ್ಞರಲ್ಲೂ ತಮ್ಮದೇ ಕೈರುಚಿ ಮೇಲುಗೈಯಾಗಬೇಕೆನ್ನುವ ಪೈಪೋಟಿ ಸಹಜ. ಒಂದು ಸಮಾರಂಭದಲ್ಲಿ ಅಡುಗೆ ಸೈ ಎನಿಸಿದರೆ ಮತ್ತೊಂದು ಅಡುಗೆ ಹುಡುಕಿಕೊಂಡು ಬರುತ್ತದೆ. ಆದರೆ ಈ ವಿಚಾರವು ಸಮಾರಂಭದ ಯಜಮಾನನಿಗೆ ಗೊತ್ತಿದೆಯೋ ಇಲ್ವೋ.
          ಇದು ರುಚಿವರ್ಧಕದ ಮಾತಾಯಿತು. ತರಕಾರಿ, ಜೀನಸುಗಳಿಗೆ ಸಹಜವಾಗಿ ಮಾರುಕಟ್ಟೆಯನ್ನು ಅವಲಂಬಿಸಬೇಕು. ಮಾರುಕಟ್ಟೆಯ ತರಕಾರಿ ಅಂದಾಗ ಅದು ರಾಸಾಯನಿಕದಲ್ಲಿ ಮಿಂದೆದ್ದು ಬಂದವುಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಕ್ಕಿಯಿಂದ ಉಪ್ಪಿನ ತನಕ ಸಾಚಾತನಕ್ಕೆ ಪ್ರತ್ಯೇಕ ಪರೀಕ್ಷೆ ಬೇಕಾಗುವ ಕಾಲಮಾನ. ಇವುಗಳೊಂದಿಗೆ ಉದರಕ್ಕಿಳಿಯುವ ಖಾದ್ಯಗಳಿಗೂ ಈಗ ರುಚಿವರ್ಧಕದ ಸ್ಪರ್ಶ!  ಕಾರ್ಬೈಡ್ ಹಾಕಿ ದಿಢೀರ್ ಹಣ್ಣು ಮಾಡಿದ ಬಾಳೆಹಣ್ಣುಗಳು ಭೋಜನದೊಂದಿಗೆ ಬೋನಸ್. ಉಚಿತವಾಗಿ ಕೊಡುವ ಕೃತಿ ಒಳಸುರಿಗಳಿಂದ ತಯಾರಿಸಿದ ಐಸ್ಕ್ರೀಂನಲ್ಲಿ ಏನೆಲ್ಲಾ ಇವೆಯೋ? ಹಾಗೆಂತ ರುಚಿವರ್ಧಕ ಬಳಸದೆ ತಮ್ಮ ಅನುಭವ ಮತ್ತು ಕೈಗುಣದಿಂದ ಶುಚಿರುಚಿಯಾದ ಭೋಜನವನ್ನು ಸಿದ್ಧಪಡಿಸುವ ವಿಶೇಷಜ್ಞರನ್ನು ನಾವೆಷ್ಟು ಗೌರವಿಸಿದ್ದೇವೆ?
          ಒಂದೆರಡು ವರುಷದ ಹಿಂದೆ ಮ್ಯಾಗಿ ನಿಷೇಧದ ಕಾವು ದೇಶವಲ್ಲ, ವಿಶ್ವಾದ್ಯಂತ ಕಂಪನ ಮೂಡಿಸಿತ್ತು. ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಸೀಸ, ರುಚಿವರ್ಧಕವು ಉದ್ಯಮದ ಅಡಿಗಟ್ಟನ್ನು ಅಲ್ಲಾಡಿಸಿದ್ದುವು.  ಕೋಟಿಗಟ್ಟಲೆ ಉತ್ಪನ್ನ ಬೆಂಕಿಗಾಹುತಿಯಾಗಿದೆ. ಜಾಹೀರಾತುಗಳ ಮೂಲಕ ನಂಬಿಸಿದ ಸಂಸ್ಥೆಯು ವಿಶ್ವಾಸ ಕಳೆದುಕೊಂಡಿದೆ. ತಿನ್ನುವ ಎಲ್ಲಾ ವಸ್ತುಗಳನ್ನು ಸಂಶಯ ದೃಷ್ಟಿಯಿಂದ ನೋಡುವ ಸ್ಥಿತಿ ರೂಪುಗೊಂಡಿದೆ. ಸೇಬು- ದ್ರಾಕ್ಷಿಯೊಳಗಿರುವ ರಾಸಾಯನಿಕ, ಹಾಮರ್ೋನುಗಳ ಕುರಿತು, ಕಲ್ಲಂಗಡಿಗೆ ಇಂಜೆಕ್ಟ್ ಮಾಡುವ ವಿವಿಧ ಮುಖಗಳನ್ನು ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ. ರಾಸಾಯನಿಕ ಸಿಂಪಡಣೆಗಳ ಕರಾಳ ಮುಖಗಳತ್ತ ವಿವಿಧ ಮಾಧ್ಯಮಗಳು ಸತ್ಯಗಳನ್ನು ಬಿಚ್ಚಿಡುತ್ತಿವೆ. 
          ತಮಿಳುನಾಡಿನಿಂದ ಬರುವ ತರಕಾರಿಗಳಿಗೆ ಕೇರಳ ರಾಜ್ಯವು ಅವಲಂಬಿತ. ನಿರ್ವಿಷ ಆಹಾರದ ಕುರಿತು ಕೇರಳದಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಮಾಡುತ್ತಾ ಇವೆ. ಆರೋಗ್ಯ ಕಾಳಜಿಯಿದ್ದ ಮಂದಿ ಸಾವಯವಕ್ಕೆ ಬದಲಾಗುತ್ತಿದ್ದಾರೆ. ಸ್ವಾವಲಂಬನೆಯತ್ತ ಹೊರಳುತ್ತಿದ್ದಾರೆ. ಕೈತೋಟಗಳನ್ನು ಎಬ್ಬಿಸುವ ಮನಃಸ್ಥಿತಿ ನಿರ್ಮಾಣವಾಗುತ್ತಿದೆ. ಮಾವು, ಹಲಸು, ಗೆಡ್ಡೆ, ಎಲೆಗಳು ತರಕಾರಿಯಾಗಿ ಉದರ ಸೇರುತ್ತಿದೆ. ರಾಸಾಯನಿಕದ ಪರಿಣಾಮ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ, ಹೊರ ರಾಜ್ಯಗಳಿಂದ ತರಕಾರಿಯನ್ನು ತರಿಸದೇ ಇರಲು ಕೆಲವು ವ್ಯಾಪಾರಿಗಳು ನಿರ್ಧರಿಸಿದ್ದಾರೆ! 
          ಸಾವಯವದ ಅರಿವು ಪ್ರಚಾರದಲ್ಲಷ್ಟೇ ಉಳಿದಿವೆ! ಅನುಷ್ಠಾನ ತೀರಾ ಕಡಿಮೆ. ಸಾವಯವದ ಸಾರ ಮನದೊಳಗೆ ಇಳಿಯುವುದಂತೂ ನಿಧಾನ. ಆಹಾರದಲ್ಲಿ ವಿಷದ ಪ್ರಮಾಣಗಳು ಪತ್ತೆಯಾಗುತ್ತಲೇ ಇದ್ದಂತೆ ನಿರ್ವಿಷ ಆಹಾರಗಳ ಹುಡುಕಾಟದತ್ತ, ಬೆಳೆಯುವತ್ತ ಯೋಜನೆ, ಯೋಚನೆಗಳು ಹೆಜ್ಜೆಯೂರುತ್ತಿವೆ.  ಕೆಲವು ಸಂಘಟನೆಗಳು ನಗರಗಳಲ್ಲಿ ಸಾವಯವದ ಮಹತ್ವ, ನಿರ್ವಿಷ ಆಹಾರದ ಅಪಾಯಗಳತ್ತ ಅರಿವು ಚೆಲ್ಲುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿವೆ. ಪಾಲಿಶ್ ಮಾಡದ ಅಕ್ಕಿಯನ್ನು ಅರಸಿ ಬರುವ, ವಿಳಾಸ ಕೇಳುವ ಅಮ್ಮಂದಿರು ಎಚ್ಚರವಾಗಿದ್ದಾರೆ.
          ವಿವಿಧ ರೂಪಗಳಲ್ಲಿ ರಾಸಾಯನಿಕಗಳನ್ನು ಗೊತ್ತಿಲ್ಲದೆ ಬದುಕಿನಂಗವಾಗಿ ಸ್ವೀಕರಿಸಿದ್ದೇವೆ. ಗೊತ್ತಾದ ಬಳಿಕ ದೂರವಿರುವುದರಲ್ಲಿ ಆರೋಗ್ಯ ಭಾಗ್ಯ. ತಕ್ಷಣ ಎಲ್ಲವನ್ನೂ ವಜ್ರ್ಯ ಮಾಡಲಸಾಧ್ಯ. ಹಂತ ಹಂತವಾಗಿ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಒಂದಷ್ಟು ದಿವಸ ಹೆಚ್ಚು ಬಾಳಬಹುದೇನೋ? ನಿರ್ವಿಷವಾಗಿ ಕೃಷಿ ಉತ್ಪನ್ನಗಳನ್ನು ಬೆಳೆದುಕೊಡುವ ಕೃಷಿಕರನ್ನು ಪ್ರೋತ್ಸಾಹಿಸೋಣ.

 ಸುದ್ದಿ ಬಿಡುಗಡೆ / ಊರುಸೂರು | 14-10-2018

ಭೂತಕಾಲವನ್ನು ಅಕ್ಷರಗಳಲ್ಲಿ ಕಟ್ಟಿಡುವ ಅಧ್ಯಾಪಕ



                "ಬರಹಗಾರರು ಐಡಿಯಾ ಫೈಲ್ ಇಟ್ಟುಕೊಳ್ಳಬೇಕು. ಇದರಲ್ಲಿ ಬರಹಗಳಿಗೆ ಒಳಸುರಿಯಾಗಬಹುದಾದ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳ ಕಟ್ಟಿಂಗ್ಗಳನ್ನು ಫೈಲ್ ಮಾಡುತ್ತಿರಬೇಕು. ಭವಿಷ್ಯದಲ್ಲಿ ಇದು ಲೇಖಕನಿಗೆ ಮಾಹಿತಿ ಒದಗಿಸುವ ಕಿಟ್." - ಕಾರ್ಯಾಗಾರಗಳಲ್ಲಿ ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ಹೇಳುತ್ತಿರುವ ಮಾತುಗಳಿವು.
                2018 ಸೆಪ್ಟೆಂಬರಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನವಾಗಿತ್ತು. ಪುಸ್ತಕಗಳ ಮಳಿಗೆಗಳ ಒಂದು ಪಾಶ್ರ್ವದಲ್ಲಿ ಜೋನ್ ವೇಗಸ್ ಅವರ ಮಳಿಗೆ. ಇವರು ಕಡಬ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ. ಇವರ ಮಳಿಗೆ ಹೊರತು ಪಡಿಸಿ ಮಿಕ್ಕೆಲ್ಲಾ ಮಳಿಗೆಗಳಲ್ಲೂ ರಶ್! ಯಾಕೆಂದರೆ ಇವರಲ್ಲಿ ಖರೀದಿ ಉತ್ಪನ್ನಗಳಿರಲಿಲ್ಲ. ಮಾಹಿತಿಗಳನ್ನು ಆಪೋಶನ ಮಾಡಬಹುದಾದ ಸಿಹಿ ಸರಕುಗಳಿದ್ದುವು. ಅವುಗಳು ಬೆಲೆ ಕಟ್ಟಲಾಗದ ಸರಕುಗಳು!
                ದಿನಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟವಾದ ಅಪರೂಪದ ಘಟನೆಗಳ ಕಟ್ಟಿಂಗ್ಗಳನ್ನು ಅಂದವಾಗಿ ಬುಕ್ಬೈಂಡ್ ಮಾಡಿ ಪ್ರದರ್ಶನಕ್ಕಿಟ್ಟಿದ್ದರು. ಕೆಲವೊಂದನ್ನು ಎನ್ ಲಾರ್ಜ್  ಮಾಡಿಸಿ ತೂಗುಹಾಕಿದ್ದರು. ಸಮ್ಮೇಳನಕ್ಕೆ ಆಗಮಿಸಿದ ಬಹುತೇಕ ಅಕ್ಷರಪ್ರಿಯರಿಗೆ ಬುಕ್ಬೈಂಡಿನೊಳಗೆ ಅವಿತ ಅಕ್ಷರಗಳು ಕಾಣಲಿಲ್ಲ! ನೋಡುವ ಕುತೂಹಲವೂ ಇಲ್ಲವೆನ್ನಿ! ಮೇಲ್ನೋಟಕ್ಕೆ ಫಕ್ಕನೆ ಗೋಚರವಾಗದ ಇವರ ಶ್ರಮ ಸಣ್ಣದಲ್ಲ. 
                ಜೋನ್ ವೇಗಸ್ ಅಕ್ಷರ ಪ್ರಿಯರು. ಅನೇಕ ಸಾಹಿತ್ಯ ಕೃತಿಗಳ ಓದುಗ. ಇವರ ವೃತ್ತಿ ಗಳಿಕೆಯಲ್ಲಿ ಶೇ.20ರಷ್ಟು ಪತ್ರಿಕೆ, ಪುಸ್ತಕಗಳ ಖರೀದಿಗೆ ಮೀಸಲು. ಮಕ್ಕಳಲ್ಲಿ ಅಕ್ಷರ ಪ್ರೀತಿಯೊಂದಿಗೆ ಪುಸ್ತಕದ ಆಸಕ್ತಿಯನ್ನು ಮೂಡಿಸುತ್ತಿರುವ ಅಪರೂಪದ ಶಿಕ್ಷಕ. ಶಾಲೆಗಳಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಿಗೆ ಪುಸ್ತಕವೇ ಬಹುಮಾನ.
                ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯಿಲ್ಲ ಎಂದು ಆರೋಪಿಸುತ್ತೇವೆ. ಹೆತ್ತವರ ಮನದೊಳಗೆ ಪುಸ್ತಕಗಳು ಸ್ಥಾನ ಪಡೆದರೆ ಮಕ್ಕಳು ಅನುಸರಿಸುತ್ತಾರೆ. ಶಾಲೆಗಳಲ್ಲಿ ಶಿಕ್ಷಕರು ಪುಸ್ತಕದ ಒಲವು ತೋರಿದರೆ ವಿದ್ಯಾರ್ಥಿಗಳು ಅನುಸರಿಸುತ್ತಾರೆ. ಎಂದು ತಮ್ಮ ಅನುಭವವನ್ನು ಹೇಳಲು ಖುಷಿ. ಪತ್ರಿಕೆಗಳನ್ನು ಓದುತ್ತಾ ಮುಖ್ಯವಾದ ಘಟನೆಗಳನ್ನು ಸಂಗ್ರಹಿಸಿದ್ದಾರೆ.
                ಕ್ರೀಡೆ, ಪ್ರಕೃತಿ, ಜೀವಿಗಳ ಲೋಕ, ಜೀವಜಾಲ, ಜೀವ ವೈವಿಧ್ಯ, ಪಕ್ಷಿ ಪ್ರಪಂಚ, ಭಾರತ ದರ್ಶನ, ಕಲಾಭಿವ್ಯಕ್ತಿ, ನೆನಪುಗಳು, ದಿನಬಳಕೆ ಸಾಧನಗಳು, ದುರ್ಘಟನೆಗಳು, ದುರಂತಗಳು.. ಹೀಗೆ ಸುಮಾರು ಮೂವತ್ತೈದು ವಿಷಯವಾರು ಮಾಹಿತಿಗಳು ಆಸಕ್ತಿದಾಯಕ. ಎಲ್ಲದಕ್ಕೂ ಪ್ರತ್ಯಪ್ರತ್ಯೇಕವಾದ ಪುಸ್ತಕಗಳ ಸಂಚಿ. ಕಳೆದ ವರುಷ ಕಡಬದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದ್ದೆ. ಬಹುತೇಕ ವಿದ್ಯಾರ್ಥಿಗಳ ಆಸಕ್ತರಾಗಿದ್ದರು. ಎನ್ನುವ ಸಂತಸ ಹಂಚಿಕೊಂಡರು.
                ಉದಾ: 1989, ಎಪ್ರಿಲ್ 29-30 - ಬಾಂಗ್ಲಾದ ಭೀಕರ ಚಂಡಮಾರುತ. ಮೂರು ಲಕ್ಷ ಮಂದಿ ಸಾವು. 1991 ಮೇ 21ರಂದು ರಾಜೀವ ಗಾಂಧಿ ನಿಧನ, 2001 ಜನವರಿ 26 ಗುಜರಾತಿನಲ್ಲಿ ಭೂಕಂಪ. 1995 ಜನವರಿ 17 - ಜಪಾನಿನಲ್ಲಿ ಭೂಕಂಪ. ಐದು ಸಾವಿರಕ್ಕೂ ಮಿಕ್ಕಿ ಸಾವು. ಮೂರು ಲಕ್ಷದ ತೊಂಭತ್ತು ಸಾವಿರ ಕೋಟಿ ರೂಪಾಯಿ ನಷ್ಟ... ವೇಗಸ್ ಅವರ ಇಂತಹ ಮಾಹಿತಿಗಳ ಸಂಗ್ರಹ ಕೈಂಕರ್ಯಕ್ಕೆ ವಿಂಶತಿಯ ಸಡಗರ.
                ವೇಗಸ್ ಮಾಸ್ಟ್ರು ಡಾ.ಶಿವರಾಮ ಕಾರಂತರ ಅಭಿಮಾನಿ. ಅವರ ಕೃತಿಗಳ ಓದುಗ. ಪತ್ರಿಕೆಗಳಲ್ಲಿ ಅವರ ಕುರಿತು ಪ್ರಕಟವಾದ ಲೇಖನ, ವಿಮರ್ಶೆ, ವರದಿಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿದ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಚಿತ್ರಗಳು ಮಕ್ಕಳನ್ನು ಸೆಳೆಯಬೇಕು. ಈಗ ಮೊಬೈಲ್ಗಳು ರಾಶಿರಾಶಿ ಚಿತ್ರಗಳನ್ನು ತೋರಿಸುತ್ತಿವೆ. ಇದರಿಂದಾಗಿ ಬೆರಗಿನ ಲೋಕವನ್ನು ನೋಡುವ ಮನಸ್ಥಿತಿ ದೂರವಾಗಿದೆ. ಯೂಟ್ಯೂಬ್ಗಳು ಮಕ್ಕಳಲ್ಲಿರುವ ಬೆರಗಿನ ನೋಟವನ್ನು ಕಸಿದಿದೆ ಎಂದು ವಿಷಾದಿಸುವ ಜೋನ್ ವೇಗಸ್, ನಾಣ್ಯ, ಅಂಚೆಚೀಟಿ ಸಂಗ್ರಹ ಹೇಗೆ ಹವ್ಯಾಸವೋ ಅದೇ ರೀತಿ ಪತ್ರಿಕೆಗಳ ಮಾಹಿತಿಗಳ ಸಂಗ್ರಹವೂ ಹವ್ಯಾಸವಾಗಿ ಬೆಳೆಯಬೇಕು, ಎನ್ನುತ್ತಾರೆ.
                ಅಧ್ಯಾಪಕರಿಗೆ ಮಕ್ಕಳೆಂದರೆ ಪ್ರೀತಿ. ಯಾರಿಗೆ 'ಮಕ್ಕಳ ಮೇಲೆ ಪ್ರೀತಿ' ಮನಸಾ ಹುಟ್ಟಿತೋ ಆಗ ಕಲಿಕೆಯು ವಿದ್ಯಾರ್ಥಿಗೂ, ಅಧ್ಯಾಪಕನಿಗೂ ಭಾರವಾಗುವುದಿಲ್ಲ! ಬೆರಗಿನ ಲೋಕದಲ್ಲಿ ಕಲಿಕೆಯನ್ನು ಕಟ್ಟಿಕೊಳ್ಳುವಂತಹ ವಾತಾವರಣ ಶಾಲೆಗಳಲ್ಲಿ ಸೃಷ್ಟಿಯಾಗಬೇಕು. ಇವುಗಳು ಪುಸ್ತಕ, ಪತ್ರಿಕೆಗಳ ಅಕ್ಷರಗಳಿಂದ ಸಾಧ್ಯ.
                ಜೋನ್ ವೇಗಸ್ ಅವರ ಕೈಂಕರ್ಯದಲ್ಲಿ ಹೊಸತೇನೂ ಇಲ್ಲದಿರಬಹುದು. ಆದರೆ ಭೂತಕಾಲವನ್ನು ಅಕ್ಷರರೂಪದಲ್ಲಿ ಕಟ್ಟಿಡುವ ಸದ್ದಿಲ್ಲದ ಕಾಯಕ. ಒಂದೊಂದು ಚಿತ್ರಕ್ಕೆ ಸಂದು ಹೋದ ಘಟನೆಗಳನ್ನು, ಅದರ ಪರಿಣಾಮಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುವ ತಾಕತ್ತಿದೆ. ಅಧ್ಯಾಪಕ ಜೋನ್ ವೇಗಸ್ ಅವರಿಗೆ ಅಭಿನಂದನೆಗಳು.

 (ಸುದ್ದಿ ಬಿಡುಗಡೆ - 7-10-2018 - ಊರು ಸೂರು)