Thursday, September 27, 2018

ನೀರಲ್ಲ, ಅಮೃತ

ನೀರಲ್ಲ, ಅಮೃತ
ಊರಿನ ನೀರಿನ ಕತೆಗಳು

“ಕರ್ನಾಟಕ ಇಂದು ಸಾಮೂಹಿಕ ಜಲಸಾಕ್ಷರತೆಯಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಂತ ಹಿಂದಿದೆ. ಕನ್ನಾಡು ಜಲಸಾಕ್ಷರವಾದರೆ ಅದೆಷ್ಟೋ ಬವಣೆ ಕಳೆಯಲು ಸಾಧ್ಯ. ನಾನೂರು ಮಿಲ್ಲಿಮೀಟರ್ ಮಳೆಯಲ್ಲೂ ನೆಮ್ಮದಿ ಉಳಿಸುವ ದಾರಿಯನ್ನು ನೆರೆಯ ಮಹಾರಾಷ್ಟ್ರದಲ್ಲಿ ‘ಪಾನಿ ಪೌಂಡೇಶನ್’ ಮಾಡಿ ತೋರಿಸುತ್ತಿದೆ. ಓದುಗರಿಗೆ, ಆಡಳಿತಕ್ಕೆ ನೀರ ನೆಮ್ಮದಿಯ ದಾರಿ ತೋರಿಸುತ್ತಾ ಅವರನ್ನು ಕೆಲಸಕ್ಕಿಳಿಯಲು ಈ ಕೃತಿ ಪ್ರೇರೇಪಣೆ ಕೊಡಲಿ..” ಬೆನ್ನುಡಿಯಲ್ಲಿ ಜಲತಜ್ಞ ‘ಶ್ರೀ ಪಡ್ರೆ’



ಮೂವತ್ತಮೂರು ಲೇಖನಗಳ ಗುಚ್ಛ. ನೀರಿನ ಸಾಧಕರ ಸಾಧನೆಗೆ ಕನ್ನಡಿ. ಮಾಡಿ ನೋಡಿದ ಮಾದರಿಗಳು. ಸ್ವಾನುಭವ ಕಥನ......ಮಳೆ ನೀರಿನ ಪ್ರೀತಿಯ ಉಜಿರೆಯ ದಂಪತಿ, ಸೂರಿನ ನೀರನ್ನೇ ಮೆಚ್ಚಿದ ಡಾಕ್ಟರ್, ಇಲ್ಲಿದೆ, ನಾಲ್ಕು ದಶಕದ ಮಳೆಲೆಕ್ಕ, ದ.ಕ.ಜಿಲ್ಲೆಯ ಶಾಲೆಗಳಲ್ಲಿ ನೀರಿನ ಅರಿವಿನ ಜುಳುಜುಳು, ಆತ್ಮವಿಶ್ವಾಸ ತಂದ ಕಟ್ಟ, ಜಲದಾಯಿ ಕೊಂಬುಗಿಂಡಿ, ವಾರಾಟ್ಟಾರ್ ನದಿಗೆ ಪುನರ್ಜನ್ಮ.. ನೀರಿನ ಬರಕ್ಕೆ ಬೆಚ್ಚಿದ ಕರಾವಳಿ......... ಪುಸ್ತಕ ನಿಮಗಿಷ್ಟವಾಗಬಹುದು.

                                           

ಈ ಪುಸ್ತಕದ ಬೆಲೆ ರೂ.95 .                ರಿಯಾಯಿತಿ ಬೆಲೆ   - ರೂ.75



ಪುಸ್ತಕದ ಕುರಿತು ತಮಗೆ ಆಸಕ್ತಿಯಿದ್ದರೆ ಎಂಓ ಮಾಡಬಹುದು. ಅಥವಾ ಆನ್ ಲೈನ್ ಮೂಲಕವೂ ಪಾವತಿ ಸಲ್ಲಿಸಬಹುದು. ಪುಸ್ತಕವನ್ನು ಸಾದಾ ಅಂಚೆಯಲ್ಲಿ ಕಳುಹಿಸಲಾಗುವುದು. ತಾವು ಎಂಒ ಅಥವಾ ಆನ್ ಲೈನ್ ಪಾವತಿ ಕಳುಹಿಸಿದ ತಕ್ಷಣ 9448625794 ಸಂಖ್ಯೆಗೆ ತಮ್ಮ ವಿಳಾಸವನ್ನು ಮೆಸ್ಸೇಜ್ ಅಥವಾ ವಾಟ್ಸಾಪ್ ಸಂದೇಶ ಕಳುಹಿಸಿದರೆ ಉಪಕಾರ. ಇಲ್ಲಿದಿದ್ದರೆ ಯಾರ ಪಾವತಿ ಎಂದು ಗೊತ್ತಾಗದು.

(ನನ್ನ ವಿಳಾಸ : ನಾ. ಕಾರಂತ ಪೆರಾಜೆ, ಅಂಚೆ ಪೆಟ್ಟಿಗೆ 08, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು – 574 201 – ದ.ಕ. 9448625794, karanth2005@gmail.com)
Bank Detakls :
 Name : Narayana Karantha : Bank – Canara Bank, Puttur (Karnataka – D.K.Dist) S.B.A/c No. 0615101028712 :  IFSC Code – CNRB 0000615

Sunday, September 9, 2018

ಅಕಾಲ ಹಲಸು ಸಂಗಮ - ಎರಡನೇ ದಿವಸ



ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ-ಬಿ.ಸಿ.ರೋಡಿನಲ್ಲಿ ಸೆ.8ರಂದು ಆರಂಭಗೊಂಡ 'ಅಕಾಲ ಹಲಸು ಸಂಗಮ'ವು ಇಂದು (ಸೆ.9) ಸಮಾಪನಗೊಂಡಿತು. ಪೂರ್ವಾಹ್ನ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಮಂಚಿ ಶ್ರೀನಿವಾಸ ಆಚಾರ್ ಅವರ ಅಧ್ಯಕ್ಷತೆಯಲ್ಲಿ 'ಹಲಸು ಮಾತುಕತೆ'ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಗಳಾದ ಗ್ಯಾಬ್ರಿಯಲ್ ಸ್ಟಾನಿ ವೇಗಸ್ (ತಳಿ ಆಯ್ಕೆ), ಸಖರಾಯಪಟ್ಟಣದ ಶಿವಣ್ಣ (ಮೌಲ್ಯವರ್ಧನೆ) ಮತ್ತು ವೇಣುಗೋಪಾಲ ಎಸ್.ಜೆ.(ಕಸಿ) - ವಿಚಾರಗಳನ್ನು ಮಂಡಿಸಿದರು. ಬಳಿಕ ಶ್ರೀಮತಿ ನಳಿನಿ ಮಾಯಿಲಂಕೋಡಿ ಮತ್ತು ಶ್ರೀಮತಿ ಉಮಾಶಂಕರಿ ಮರಿಕೆ ಇವರು ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸಂಜೆ ಪುತ್ತೂರು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶ್ರೀ ಮಹೇಶ್ ಪುಚ್ಚಪ್ಪಾಡಿಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿತು. ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
    ಪುತ್ತೂರಿನ ನವಚೇತನ ಸ್ನೇಹ ಸಂಗಮ ಮತ್ತು ಅಕಾಲ ಹಲಸು ಸಂಗಮ ಸ್ವಾಗತಿ ಸಮಿತಿಯ ಜಂಟಿ ಆಶ್ರಯದಲ್ಲಿ ಎರಡು ದಿವಸಗಳ 'ಅಕಾಲ ಹಲಸು ಸಂಗಮ' ಜರುಗಿತು. ಐವತ್ತಕ್ಕೂ ಮಿಕ್ಕಿ ಮಳಿಗೆಗಳಿದ್ದುವು. 

Saturday, September 8, 2018

ಅಕಾಲ ಹಲಸು ಸಂಗಮ - ವಿವಿಧ ವೈವಿಧ್ಯ ಮಳಿಗೆಗಳು.


ನವಚೇತನ ಸ್ನೇಹ ಸಂಗಮ ಪುತ್ತೂರು ಮತ್ತು ಅಕಾಲ ಹಲಸು ಸಂಗಮ ಸ್ವಾಗತ ಸಮಿತಿ ಬಂಟ್ವಾಳ - ಇವರ ಜಂಟಿ ಆಶ್ರಯದಲ್ಲಿ ಇಂದು (ಸೆ.8)ರಂದು ಬಿ.ಸಿ.ರೋಡಿನಲ್ಲಿ 'ಅಕಾಲ ಹಲಸು ಸಂಗಮ' ಕಾರ್ಯಕ್ರಮ ಶುಭಾರಂಭಗೊಂಡಿತು. ನಲವತ್ತಕ್ಕೂ ಮಿಕ್ಕಿದ ಹಲಸಿನ ಖಾದ್ಯಗಳ ಮಳಿಗೆಗಳಿದ್ದುವು. ಬೆಂಗಳೂರು ಐ ಐ ಹೆಚ್ ಆರ್ ಸಂಸ್ಥೆಯನ್ನು ಕರುಣಾಕರನ್ ಮತ್ತು ಬಳಗ ಪ್ರತಿನಿಧಿಸಿದ್ದರು. 'ಸಿದ್ಧು' ಕೆಂಪು ತಳಿ ಹಲಸು ಗಮನ ಸೆಳೆದಿತ್ತು.

ಹಲಸಿನ ಐಸ್ ಕ್ರೀಮ್, ಜ್ಯಾಕ್ ಬಿರಿಯಾಣಿ ಮಿಕ್ಸ್, ಜ್ಯಾಕ್ ಲಡ್ಡು, ಜ್ಯಾಕ್ ಚಾಕೋಲೇಟ್, ಪಾಯಸ ಮಿಕ್ಸ್, ಬೆರಟ್ಟಿ, ಹ ಬೀಜದ ಹೋಳಿಗೆ, ಹಲ್ವ, ಬಿದಿರಕ್ಕಿ ಹಲಸು ಪಾಯಸ, ಹ ಬೀಜದ ಜಾಮೂನ್, ಹಲಸಿನ ಉಂಡ್ಲುಕ, ಹ ಹಪ್ಪಳ, ಹ ಹಣ್ಣಿನ ಹಪ್ಪಳ, ಮಾಂಬಳ, ಚಿಪ್ಸ್, ಸಾಟ್, ಹಲಸಿನ ಹಣ್ಣಿನ ಸ್ಕ್ವಾಷ್, ವಿವಿಧ ಬಗೆಯ ಉಪ್ಪಿನಕಾಯಿಗಳು, ಹ ಹಣ್ಣಿನ ಹೋಳಿಗೆ... ಹೀಗೆ ವಿವಿಧ ವೈವಿಧ್ಯ ರುಚಿಗಳಿದ್ದುವು.

ಮೀಯಪದವಿನ ರವಿಶಂಕರ್ ಸುಣ್ಣಂಗುಳಿ ಇವರ ಮಳಿಗೆಯಲ್ಲಿ ಹಲಸಿನ ಉಪ್ಪಿನಸೊಳೆಯಿಂದ ತಯಾರಿಸಿದ 'ಉಪ್ಪುಸೊಳೆ ಫ್ರೈ' ಹಲಸು ಹಬ್ಬಕ್ಕಾಗಿಯೇ ಸಿದ್ಧಪಡಿಸಿದ ರೆಸಿಪಿ. ಸವಿದ ಅನೇಕ ಮಂದಿ ಉತ್ತಮ ಹಿಮ್ಮಾಹಿತಿ ನೀಡಿದ್ದರು.

ಸಂಘಟಕರು ಹಲಸು ಸಂಗಮಕ್ಕಾಗಿಯೇ - ಮಿಲ್ಮಾ ಮಿಲ್ಕಿ ಜ್ಯಾಕ್ ಪೇಡ, ಪಾಯಸಮ್ ಮಿಕ್ಸ್, ಡಿಹೈಡ್ರೇಟೆಡ್ ಜ್ಯಾಕ್, ಬಿರಿಯಾಣಿ ಮಿಕ್ಸ್, ಹಲ್ವಾ, ಹೋಳಿಗೆ, ಬರ್ಫಿ, ಬೆರಟ್ಟಿ..'- ದೂರದೂರಿಂದ ತರಿಸಿ ಪ್ರದರ್ಶನಕ್ಕಿಟ್ಟಿದ್ದರು. ಇವುಗಳಲ್ಲಿ ಕೆಲವು ಮಾರಾಟಕ್ಕೂ ಲಭ್ಯ. ಸೆಪ್ಟೆಂಬರ್ 9ರಂದು ದಿನಪೂರ್ತಿ ಹಲಸಿನ ಹಬ್ಬ ಜರುಗಲಿದೆ.

ಅಕಾಲ ಹಲಸು ಸಂಗಮ - 2018





        ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಮೊದಲ ಬಾರಿಗೆ 'ಅಕಾಲ ಹಲಸು ಸಂಗಮ' ಎನ್ನುವ ಎರಡು ದಿವಸಗಳ (ಸೆಪ್ಟೆಂಬರ್ 8, 9 - 2018) ಹಲಸಿನ ಹಬ್ಬವು ಇಂದು ಉದ್ಘಾಟನೆಗೊಂಡಿತು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಹಲಸು ಹಬ್ಬವನ್ನು ಉದ್ಘಾಟಿಸಿದರು.
         ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇದರ ಅಧ್ಯಕ್ಷ ಶ್ರೀ ಸುದರ್ಶನ್ ಜೈನ್ ಸಭಾಧ್ಯಕ್ಷತೆ ವಹಿಸಿದ್ದರು. ರೋಟರಿ ಅಸಿಸ್ಟಾಂಟ್ ಗವರ್ನರ್ ಶ್ರೀ ಪ್ರಕಾಶ್ ಕಾರಂತ್ ನರಿಕೊಂಬು ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ಕೆಯ್ಯೂರು ನಾರಾಯಣ ಭಟ್ ಶುಭಾಶಂಸನೆ ಮಾಡಿದರು.
         ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರಿಂದ 'ಹಲಸು ವಿಶ್ವ ದರ್ಶನ' ಪವರ್ ಪಾಯಿಂಟ್ ಪ್ರಸ್ತುತಿ ಜರುಗಿತು. ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಜಿ.ಆನಂದ 'ಹಲಸು ಮಾತುಕತೆ'ಯ ಅಧ್ಯಕ್ಷರಾಗಿದ್ದರು.
     ಅಪರಾಹ್ನ 'ವೆಂಕಟೇಶ ಕೃಪಾ' ಉದ್ದಿಮೆ ಕಾರ್ಕಳ-ಸಾಣೂರಿನ ಸಂತೋಷ್, ಎಸ್.ಆರ್.ಆರ್ಗಾನಿಕ್ಸ್ ಇದರ ಗೀತಾ ಕಾಮತ್ ಮತ್ತು ಸಖರಾಯಪಟ್ಟಣದ ಶಿವಣ್ಣ - 'ಹಲಸಿನ ಖಾದ್ಯ'ಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪತ್ರಕರ್ತ, ಅಂಕಣಕಾರ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಹಲಸಿನ ಎಳೆ ಗುಜ್ಜೆಯ ಮೇಣವನ್ನು ಕೈಗೆ ಅಂಟಿಸಿಕೊಳ್ಳದೆ ಗುಜ್ಜೆಯನ್ನು ಕಟ್ ಮಾಡುವ ಶಿವಣ್ಣ ಅವರ ವಿಧಾನವು ಎಲ್ಲರ ಗಮನ ಸೆಳೆಯಿತು.

Friday, September 7, 2018

‘ಶ್ರೀ’ ಪಡ್ರೆಯವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ



                ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ, ಜಲತಜ್ಞ, ಹಲಸು ಆಂದೋಳನಕಾರ ಶ್ರೀ ಪಡ್ರೆಯವರಿಗೆ ಈ ಸಾಲಿನ ‘ಕಾರಂತ ಹುಟ್ಟೂರ ಪ್ರಶಸ್ತಿ’.  ಕೋಟತಟ್ಟು ಗ್ರಾಮಪಂಚಾಯಿತಿ ಮತ್ತು ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ಪ್ರಶಸ್ತಿಯಿದು.
              ಕಾರಂತರ ಚಿಂತನೆ, ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಅಭಿವೃದ್ಧಿ ಪತ್ರಿಕೋದ್ಯಮ, ಜಲಸಂರಕ್ಷಣೆಯಲ್ಲಿ ಗಣನೀಯ ಕೊಡುಗೆ ನೀಡಿದ ಶ್ರೀ ಪಡ್ರೆಯವರಿಗೆ ಕಾರಂತರ ಜನ್ಮದಿನವಾದ ಅಕ್ಟೋಬರ್ 10ರಂದು ಕೋಟದ “ಥೀಂ ಪಾರ್ಕ್’ನಲ್ಲಿ ಪ್ರಶಸ್ತಿ ಪ್ರದಾನ.
            ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಹದಿನೇಳು ಕೃತಿಗಳ ರಚಯಿತರು. ರಾಷ್ಟ್ರೀಯ, ರಾಜ್ಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದ ಶ್ರೀ ಪಡ್ರೆಯವರಿಗೆ ಈಗ ‘ಕಾರಂತ ಹುಟ್ಟೂರ ಪ್ರಶಸ್ತಿ’ಯ ಗೌರವ.


ಅಕಾಲ ಹಲಸು ಮೇಳ – ಬಂಟ್ವಾಳ



ಹಲಸಿನ ಋತು ಮುಗಿದಿದೆ. ಅಲ್ಲಿಲ್ಲಿ ಅಕಾಲ ಹಲಸು ಸುದ್ದಿ ಮಾಡುತ್ತಿದೆ. ಅಕಾಲ ಹಲಸಿನ ತಳಿ ಅಭಿವೃದ್ಧಿ, ಮೌಲ್ಯವರ್ಧನೆ ಕುರಿತು ಎರಡು ದಿವಸದ ಉತ್ಸವ . ಸೆಪ್ಟೆಂಬರ 8 ಮತ್ತು 9. ಬಿ.ಸಿ.ರೋಡು ಬಂಟ್ವಾಳದ ಸ್ಪರ್ಶ ಕಲಾ ಮಂದಿರ.

ನಗರದ ಹಸಿರು ಮನಸಿಗರಿಗೆ ‘ರೆಡಿ ಟು ಪ್ಲಾಂಟ್’




 
           ಕಂಪ್ಯೂಟರ್ ಹತ್ತಿರ ಅಲಂಕಾರಕ್ಕಾಗಿ ಹೂ ಕುಂಡ ಬೇಕಾಗಿತ್ತು. ಅಂಗಡಿಗೆ ಹೋಗುತ್ತೇವೆ. ತಾಜಾ ಹೂವನ್ನು ಹೋಲುವ ಪ್ಲಾಸ್ಟಿಕ್ ಹೂಗಳಿರುವ ಕುಂಡವನ್ನು ತರುತ್ತೇವೆ. ಒಂದಷ್ಟು ಸಮಯದ ಬಳಿಕ ಬಣ್ಣ ಮಾಸುತ್ತದೆ. ಕುಂಡ ಮೂಲೆ ಸೇರುತ್ತದೆ.
           ಇಲ್ನೋಡಿ, ಪ್ಲಾಸ್ಟಿಕ್ ಹೂವನ್ನು ತಾಜಾ ಹೂವೆಂದು ಯಾಕೆ ಭ್ರಮಿಸಬೇಕು? ತಾಜಾ ಹೂವಿನ ಕುಂಡ ಕಂಪ್ಯೂಟರ್ ಹತ್ತಿರ ಇರಲೆಂದೇರೆಡಿ ಪ್ಲಾಂಟ್ರೆಡಿಯಾಗಿದೆ! ಪ್ಲಾಸ್ಟಿಕ್ ರಹಿತ. ಪರಿಸ್ನೇಹಿ.
           ಉ..ಜಿಲ್ಲೆ ಶಿರಸಿಯಇನ್ನೋಸೆಂಟರ್ಸಂಸ್ಥೆಯು ಮುಖ್ಯವಾಗಿ ನಗರದ ಹೂ ಮನಸ್ಸಿಗರಿಗಾಗಿ ರೆಡಿ ಪ್ಲಾಂಟ್ ಸಿದ್ಧಪಡಿಸಿದೆ. ಮಣ್ಣಿಲ್ಲ, ಜಾಗವಿಲ್ಲ, ಗಿಡ ಎಲ್ಲಿಂದ ತರಲಿ... ಸಮಸ್ಯೆಯೇ ಇಲ್ಲ. ಪುಟ್ಟ ಕುಂಡದೊಳಗೆ ಗೊಬ್ಬರದ ಮಿಶ್ರಣವಿದೆ. ಕುಂಡದ ಹೊರಗೆ ಹೂವಿನ ಬೀಜಗಳ ಪ್ಯಾಕೆಟ್ ಇದೆ.
           ನೀವು ಮಾಡಬೇಕಾದುದಿಷ್ಟೇ. ಕುಂಡದೊಳಗೆ ಬೀಜ ಹಾಕಿ ನೀರು ಉಣಿಸಿದರಾಯಿತು. ಒಳಗಿರುವ ಪೋಷಕಾಂಶ ಭರಿತ ಮಣ್ಣಿನಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. ಸ್ವಲ್ಪ ನಿಗಾ ವಹಿಸಿದರೆ ಸಾಕು. ನೋಡಿ, ಕುಂಡದಲ್ಲಿ ತಾಜಾ ಹೂವಿನ ನಗು. ಕೃಷಿಯ ಅನುಭವ ಇಲ್ಲದವರಿಗೆ ವ್ಯವಸ್ಥೆ ಖುಷ್. ಹೂ ಯಾಕೆ, ತರಕಾರಿ ಬೀಜವನ್ನೂ ಊರಬಹುದು.
         “ಈಗಾಗಲೇ ಕೃಷಿಯಲ್ಲಿ ಬಳಸುತ್ತಿರುವ ಗೊಬ್ಬರವನ್ನು ರೈತರ ತೋಟ, ಗದ್ದೆಗಳ ತ್ಯಾಜ್ಯದಿಂದ ಮಾಡಲಾಗಿದ್ದು, ಜೊತೆಗೆ ಎರೆಗೊಬ್ಬರ, ತೆಂಗಿನ ನಾರಿನ ಪುಡಿ ಹಾಗೂ ಮರದ ಪುಡಿಯನ್ನು ಸಮ್ಮಿಶ್ರಮಾಡಿ ಬಳಸಿದ್ದೇವೆ,” ಎನ್ನುತ್ತಾರೆ ರೆಡಿ ಪ್ಲಾಂಟ್ ಇದರ ಮುಖ್ಯಸ್ಥ ಶಶಿ ಹೆಗಡೆ.
         ಮನೆಯೊಳಗೆ ಹತ್ತಾರು ಕುಂಡಗಳಿದ್ದರೆ ಬಗೆಬಗೆಯ ಹೂಗಳ ಅಂದವನ್ನು ಸವಿಯಬಹುದು. ಮನೆಯ ಬಾಲ್ಕನಿ, ಕಿಟಕಿಗಳ ಅಂದವನ್ನು ಹೆಚ್ಚಿಸಬಹುದು. ಕಚೇರಿಯ ಮೇಜಿನ ಮೇಲೆ ಅಲಂಕಾರಕ್ಕಾಗಿ ಇಡಬಹುದು. ನಂನಮ್ಮ ಮನಸ್ಸಿನ ಸೌಂದರ್ಯದಂತೆ ವಿನ್ಯಾಸ ಮಾಡಬಹುದು.
          “ಕುಂಡದೊಳಗಿನ ಮಣ್ಣು ಪರೀಕ್ಷೆಗೆ ಒಳಪಟ್ಟಿದೆ. ಪ್ರತಿ ಮಿಶ್ರಣದ ಪೋಷಕಾಂಶಗಳ ಹಾಗೂ ಪಿ.ಎಚ್.ಮೌಲ್ಯ ದೃಢೀಕರಿಲ್ಪಟ್ಟಿದೆ. ಬೇರೆ ಬೇರೆ ಬೆಳಕಿನ ಪರಿಸರಗಳಲ್ಲಿ ಮೊಳಕೆಯ ಪ್ರಮಾಣವನ್ನು ಪರೀಕ್ಷಿಸಿಯೇ ಬೀಜಗಳನ್ನು ಪೂರೈಸುತ್ತಿದ್ದೇವೆ. ಇದರೊಳಗಿನ ಮಣ್ಣಿನ ಫಲವತ್ತತೆಯು ಹದಿನೆಂಟು ತಿಂಗಳ ತಾಳಿಕೆ ಹೊಂದಿರುತ್ತದೆ.,” ಎನ್ನುತ್ತಾರೆ.
           ಕುಂಡವನ್ನು ಉಡುಗೊರೆ, ಸಭೆ ಸಮಾರಂಭಗಳಲ್ಲಿ ಸ್ಮರಣಿಕೆಯಾಗಿ ನೀಡಲು ಸೂಕ್ತವಾಗಿದೆ. ಹೆಚ್ಚು ಶ್ರಮವಿಲ್ಲದೆ ಮನೆಯ ಜಗಲಿಯ ಸುತ್ತ, ಅಂಗಳ ಸುತ್ತ ಕುಂಡಗಳನ್ನಿಟ್ಟು ಹೂ ಬೆಳೆಸಬಹುದು. ಬೇಕಾದರೆ ತರಕಾರಿ ಕೂಡಾ!
ಕುಂಡದ ಅಳತೆ 12 ಘಿ 12, ಎತ್ತರ ಹದಿಮೂರು ಸೆಂಟಿಮೀಟರ್. ಬೆಲೆ ಒಂದು ನೂರ ಅರುವತ್ತು ರೂಪಾಯಿ.                        
      'ಇನ್ನೋಸೆಂಟರ್ನಲ್ಲಿ ಶಶಿಯವರು ಚೀಫ್ ಎಕ್ಸ್ಕ್ಯೂಟಿವ್ ಆದರೆ, ಹರ್ಷ ಮಾರುಕಟ್ಟೆ ಪರಿಣತ. ಇವರಿಬ್ಬರ ಯೋಚನೆ, ಯೋಜನೆಯಂತೆ ದೊಡ್ಡ ಗಾತ್ರದ ಕುಂಡಗಳು ನಿಕಟಭವಿಷ್ಯದಲ್ಲಿ ವಿನ್ಯಾಸ ಪಡೆಯುತ್ತವೆ.  (9739903856)