Tuesday, November 18, 2014

ಕೆನ್ ಲವ್ ವ್ಯಕ್ತಿಯಲ್ಲ, ಒಂದು ಸಂಸ್ಥೆ!



               "ಕೃಷಿಯ ಆದಾಯ ವರ್ಧನೆ ಮಾಡದಿದ್ರೆ  ನಮ್ಮ ಮಕ್ಕಳನ್ನು ಕೃಷಿಯಲ್ಲಿ ಉಳಿಸಿಕೊಳ್ಳಲು ಅಸಾಧ್ಯ. ಮುಂದಿನ ಜನಾಂಗ ಕೃಷಿಯಲ್ಲಿ ಉಳಿಯಬೇಕಿದ್ದರೆ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡುವುದೊಂದೇ ದಾರಿ."
              ಹವಾಯಿಯ ಕೃಷಿಕ ಕೆನ್ ಲವ್ ಕನ್ನಾಡಿಗೆ ಬಂದು, ಕೃಷಿಕರನ್ನು ಭೇಟಿ ಮಾಡಿದಾಗ ಹೇಳಿದ  ಅನುಭವದ ಮಾತಿದು. ನವೆಂಬರ್ ಮೊದಲ ವಾರದಲ್ಲಿ ರಾಜಧಾನಿ, ಕರಾವಳಿ, ಕೇರಳದ ಕೆಲವು ತೋಟಗಳಿಗೆ ಸುತ್ತಿ ಕೃಷಿಕರೊಂದಿಗೆ ಮಾತನಾಡಿದರು. ಇಲ್ಲಿನ ಹಣ್ಣುಗಳ ವೈವಿಧ್ಯಗಳನ್ನು ನೋಡಿ ಅನುಭವ ಪಡೆದುಕೊಂಡರು. ಕಾರ್ಮಿಕ ಸಮಸ್ಯೆ, ಯುವಕರ ವಲಸೆ, ಅಸ್ಥಿರ ಮಾರುಕಟ್ಟೆಯಂತಹ ಸಂಕಟಗಳು ಭಾರತ ಮಾತ್ರವಲ್ಲ ಹವಾಯಿಯಲ್ಲೂ ಕೃಷಿಕರ ನಿದ್ದೆಗೆಡಿಸಿತ್ತು.
                ಇಲ್ಲಿನ ಏಕಬೆಳೆ ಪದ್ಧತಿಯನ್ನು ವೀಕ್ಷಿಸಿದ ಕೆನ್, ಏಕಬೆಳೆಯಿಂದ ಒಮ್ಮೆಗೆ ಲಾಭ ತರಬಹುದೇನೋ. ಆದರೆ ಕೃಷಿ ಯಶ ಕಾಣಬೇಕಾದರೆ ಬೆಳೆಯಲ್ಲಿ ವೈವಿಧ್ಯಗಳನ್ನು ತರಲೇಬೇಕು. ತಂತಮ್ಮ ಪ್ರದೇಶಕ್ಕೆ ಯಾವ್ಯಾವ ಬೆಳೆಗಳು ಹೊಂದಬಹುದೆನ್ನುವುದನ್ನು ಅರಿತು ಕೃಷಿ ಮಾಡಿದರೆ ಒಳ್ಳೆಯದು, ಎಂದರು.
              ಒಂದು ಕಾಲಘಟ್ಟದಲ್ಲಿ ಕೃಷಿ ಸಂಕಟಗಳು ಹವಾಯಿಯನ್ನು ತಲ್ಲಣಗೊಳಿಸಿತ್ತು. ಅಲ್ಲಿನ ಕೋನಾ ಕಾಫಿ ಕೃಷಿಯು ಸಮಸ್ಯೆಗಳಿಂದ ನಲುಗಿದಾಗ ಕೆನ್ ಮುಂದಾಳ್ತನದಲ್ಲಿ ಕೃಷಿಕರ ತಂಡವು ಪರಿಹಾರವನ್ನು ಕಂಡುಕೊಳ್ಳಲು ಹೆಜ್ಜೆಯೂರಿತು. ಕೃಷಿಯ ಸಂಕಟಗಳಿಗೆ ಸರಕಾರವನ್ನು ಯಾಚಿಸಿದರೆ ಪ್ರಯೋಜನವಾಗದು. ಕೃಷಿಕರೇ ಪರಸ್ಪರ ಒಟ್ಟಾಗಿ ಯೋಜನೆಯನ್ನು ರೂಪಿಸಿಕೊಳ್ಳಬೇಕೆಂಬುದು ಕೆನ್ ಪ್ರತಿಪಾದನೆ.
                ಹವಾಯಿ ಹಣ್ಣುಗಳ ವೈವಿಧ್ಯಕ್ಕೆ ಖ್ಯಾತಿ. ಕೆನ್ ಹಣ್ಣು ಬೆಳೆಗಾರ. ಕಳೆದ ಶತಕದ ಆರಂಭದಲ್ಲಿ ರಫ್ತು ಮಾಡುವ ಅವಕಾಡೋದಲ್ಲಿ  (ಬೆಣ್ಣೆ ಹಣ್ಣು)  ಕಂಡು ಬಂದ ಹಣ್ಣುಹುಳವು ರಫ್ತು ಉದ್ಯಮಕ್ಕೆ ತಿಲಾಂಜಲಿ ನೀಡಿತು. ಈಗ ಈ ದ್ವೀಪ ಬೆಳೆಯುವ ಯಾವುದೇ ತಾಜಾ ಹಣ್ಣನ್ನೂ ಹೊರಗೆ ಒಯ್ಯುವುದು ಕಾನೂನು ರೀತ್ಯಾ ಅಪರಾಧ! ಕಣ್ಣೆದುರಿನಲ್ಲಿ ಯಥೇಷ್ಟ ಹಣ್ಣುಗಳಿದ್ದರೂ ಮಾರುಕಟ್ಟೆ ಮಾಡಲು ಅಸಾಧ್ಯವಾದ ಸನ್ನಿವೇಶ. ಆಮದು ಹಣ್ಣುಗಳತ್ತ ವ್ಯಾಪಾರಿಗಳ ಚಿತ್ತ. ಮಾರಾಟ ಅವಕಾಶಗಳಿಗೆ ಇಳಿಲೆಕ್ಕ.
             ಪರಿಣಾಮ, ಸ್ಥಳೀಯ ತಳಿಗಳು ಕಣ್ಮರೆಯಾದುವು. ನೂರಕ್ಕೂ ಮಿಕ್ಕಿ ಬಾಳೆ ವೈವಿಧ್ಯಗಳಿದ್ದುವು. ಈಗದು ಐವತ್ತೂ ಮೀರದು. ರೈತರಿಗೂ ಆಸಕ್ತಿ ಕುಗ್ಗಿತು. ಕಂಪೆನಿಗಳು ನೀಡುವ ಹಣ್ಣುಗಳಿಗೆ ಕೈಒಡ್ಡಬೇಕಾದ ಸ್ಥಿತಿ. ಬೆಳೆದ ಹಣ್ಣುಗಳು ಮಣ್ಣಲ್ಲಿ ಮಣ್ಣಾಗಿ ಹೋಗುವುದನ್ನು ನೋಡುವ ದಾರುಣ ಸ್ಥಿತಿ.
            ಸ್ಥಳೀಯ ಮಾರುಕಟ್ಟೆ ಸೃಷ್ಟಿ, ಕೃಷಿಕರಿಗೆ ಮತ್ತೆ ಒಲವು ಮೂಡಿಸುವ ಯತ್ನ - ಇವೆರಡೇ ಮುಂದಿದ್ದ ಆಯ್ಕೆ. ಕಳೆದುಕೊಂಡಿರುವ ಹಣ್ಣುಗಳ ಪತ್ತೆಗೆ ಮೊದಲಾದ್ಯತೆ ನೀಡಿದರು. ವರ್ಷಪೂರ್ತಿ ವಿವಿಧ ಹಣ್ಣುಗಳನ್ನು ಪಡೆಯಲು ತಂತ್ರಗಳ ರೂಪುರೇಷೆ. ಕೃಷಿಕನೇ ಮಾರಾಟಗಾರನಾಗಬೇಕೆನ್ನುವ ಸಂಕಲ್ಪ. ಇವೆಲ್ಲವನ್ನೂ ಕ್ರೋಢಿಸಿಕೊಂಡು ಹವಾಯ್ ಪ್ರವಾಸೋದ್ಯಮ ಕೇಂದ್ರವಾಗಬೇಕೆನ್ನುವ ದೂರದೃಷ್ಟಿ.
              ಕೆನ್ ಯೋಚನೆಗಳಿಗೆ ಹೆಗಲೆಣೆಯಾಗುವ ತಂಡ ಸಿದ್ಧವಾಯಿತು. ಕಳೆದುಹೋಗಿರುವ ಹಣ್ಣುಗಳನ್ನು ಪಟ್ಟಿ ಮಾಡಿ ಮತ್ತೆ ತೋಟಕ್ಕೆ ತರುವ ಯೋಚನೆಗೆ ಚಾಲನೆ ಕೊಟ್ಟರು. ವರುಷದ ಎಲ್ಲಾ ತಿಂಗಳುಗಳಲ್ಲಿ ಹಣ್ಣು ಪಡೆಯುವ '12 ಟ್ರೀಸ್ ಪ್ರಾಜೆಕ್ಟ್' ಅನುಷ್ಠಾನಿಸಿದರು. ಕೆನ್ ಸ್ವತಃ ಬೆಳೆಸಿ ತೋರಿಸಿದ ಬಳಿಕ ಕೃಷಿಕರಿಗೆ ನಂಬುಗೆ ಬಂತು. ಯೋಜನೆಯನ್ನು ಅನುಸರಿಸಿದರು.
              ಮಾರುಕಟ್ಟೆಯಲ್ಲಿ ರೈತನೇ ವ್ಯಾಪಾರಿ. ಅವರವರ ತೋಟದ ಹಣ್ಣುಗಳನ್ನು ಆಕರ್ಷಕ ನೋಟಗಳಲ್ಲಿ ಬಿಂಬಿಸುವ ಯತ್ನ. ಸೈನ್ಬೋಡರ್್ಗಳ ಮುದ್ರಣ. ಬೆಳೆ ವಿವಿರಗಳಿರುವ ಫಲಕ. ಒಂದೊಂದು ಹಣ್ಣುಗಳಿಗೂ ರೈತನದ್ದೇ ಬ್ರಾಂಡಿಗ್. ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಮಾರಿಹೋಗುತ್ತದೆ ಎನ್ನುವ ಧೈರ್ಯ ಬಂತು. ಕೃಷಿಗೆ ಮರಳಲು ಹುಮ್ಮಸ್ಸು ಹೆಚ್ಚಿತು.
ಲಾಂಗಾನ್, ರಂಬುಟಾನ್, ಜಂಬುನೇರಳೆ, ಅಬಿಯು, ಮೊಂಬಿನ್, ಇಪ್ಪತ್ತೈದಕ್ಕೂ ಮಿಕ್ಕಿದ ಬೆಣ್ಣೆಹಣ್ಣುಗಳ ತಳಿಗಳು, ಜಬೋಟಿಕಾಬಾ, ಫ್ಯಾಶನ್ಫ್ರುಟ್, ಸ್ಟಾರ್ಫ್ರುಟ್.. ಹೀಗೆ ಒಂದೊಂದೇ ಮಾರುಕಟ್ಟೆಯ ಜಗಲಿಯೇರಿದುವು. ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿದ್ದಾಗ, ಮೌಲ್ಯವರ್ಧನೆಯಿಂದ ಹೇಗೆ ದುಪ್ಪಟ್ಟು ಗಳಿಸಬಹುದೆನ್ನುವ ಅಧ್ಯಯನ. ತನ್ನ ಅಡುಗೆಮನೆಯಲ್ಲಿ ಉತ್ಪನ್ನಗಳನ್ನು ತಯಾರಿಸಿ, ಜನರಿಗೆ ರುಚಿಹತ್ತಿಸಿ, ಮಾರಾಟ ಮಾಡುವ ಯೋಚನೆ ಯಶವಾಯಿತು. ನೂರಕ್ಕೂ ಮಿಕ್ಕಿ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನವನ್ನು ಕೆನ್ ಅವರೊಬ್ಬರೇ ಮಾಡುತ್ತಾರೆ.
               ಪ್ರವಾಸಿ ತಾಣ, ಹೋಂ ಸ್ಟೇ, ರೈತ ಸಂತೆಗಳಲ್ಲಿ ಉತ್ಪನ್ನಗಳನ್ನು ಸಿಗುವಂತೆ ಮಾಡಿದರು. ಪ್ರವಾಸಿಗರು ಯಾವ ಉತ್ಪನ್ನವನ್ನು ಅಪೇಕ್ಷಿಸುತ್ತಾರೋ ಅದನ್ನು ಒದಗಿಸುವ ಕೃಷಿಕರ ಮಾರಾಟ ಜಾಲವನ್ನು ಸೃಷ್ಟಿಸಿದರು. ಕೆನ್ ಹೇಳುತ್ತಾರೆ, ಒಣ ಅಂಜೂರ, ಜೇನಿನಲ್ಲಿ ಹಾಕಿದ ಒಣ ಹಲಸಿನ ಹಣ್ಣು, ಚಾಕೋಲೇಟಿನಲ್ಲಿ ಅದ್ದಿನ ಹಲಸಿನ ಹಣ್ಣು, ಬಾಳೆಹಣ್ಣಿನ ಕೆಚಪ್, ವಿವಿಧ ಉಪ್ಪಿನಕಾಯಿಗಳಿಗೆ ಬೇಡಿಕೆ ಹೆಚ್ಚು. ಮನೆಯ ಉತ್ಪನ್ನಗಳನ್ನು ಗ್ರಾಹಕರು ಇಷ್ಟ ಪಡುತ್ತಾರೆ. ಉತ್ಪನ್ನಗಳ ರುಚಿ ತೋರಿಸಿ ಗ್ರಾಹಕರನ್ನು ಸೆಳೆಯುತ್ತೇವೆ. ಅವರಿಗೆ ಇಷ್ಟವಾದರೆ ಮಾರಾಟ ಸಲೀಸು. ಮತ್ತೆ ಅವರೇ ಹುಡುಕಿ ಬರುತ್ತಾರೆ.
               ಹೋಟೆಲಿನ ಬಾಣಸಿಗರನ್ನು ಭೇಟಿಯಾಗಿ ಸಂಘಟಿಸಿದರು. ಯಾವ ನಮೂನೆಯ ಹಣ್ಣುಗಳಿಗೆ, ಯಾವ ತಿಂಗಳಲ್ಲಿ ಬೇಡಿಕೆಯಿದೆ ಎನ್ನುವ ಮಾಹಿತಿ ಸಂಗ್ರಹಿಸಿ ಅದರಂತೆ ಪೂರೈಸಿ ಮಾರಾಟ ಕೊಂಡಿ ಗಟ್ಟಿಯಾಗಿಸಿದರು. ಹೀಗೆ ಕೃಷಿಕರನ್ನು ಕೃಷಿಯಲ್ಲಿ ಉಳಿಸಲು ಕೆನ್ ಮಾಡಿದ ಕೆಲಸಗಳು ಹಲವು ಮಂದಿ ದುಡಿಯುವ ಒಂದು ಕ್ರಿಯಾಶೀಲ ಸಂಸ್ಥೆಗೆ ಸಮನಾದದ್ದು.
ಕನ್ನಾಡಿಗೆ ಬಂದಾಗ ಕರಾವಳಿಯ ತೋಟಗಳಿಗೆ ಕೆನ್ ಭೇಟಿಯಿತ್ತರು. ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸ್, ಪುತ್ತೂರಿನ ವಿವೇಕಾನಂದ ಕಾಲೇಜು, ಕಬಕ ನಿನ್ನಿಕಲ್ಲಿನ ಜ್ಯಾಕ್ ಅನಿಲರ ನರ್ಸರಿ, ಪುತ್ತೂರಿನ ಗಿಡ ಗೆಳೆತನ ಸಂಘ 'ಸಮೃದ್ಧಿ', ಮೀಯಪದವಿನ ಡಾ.ಡಿ.ಸಿ.ಚೌಟರ ತೋಟ, ಮುಳಿಯ ವೆಂಕಟಕೃಷ್ಣ ಶರ್ಮರ ತೋಟ,.. ಹೀಗೆ ವಿವಿಧ ತೋಟಗಳನ್ನು ಭೇಟಿ ಮಾಡಿದಾಗ ಅವರು ಪ್ರತಿಪಾದಿಸಿದ ಅಂಶಗಳು ನಮ್ಮೂರಿಗೂ ಹೊಂದುತ್ತದೆ :
             ಹಣ್ಣನ್ನು ತಿನ್ನಲು ಮಾತ್ರವಲ್ಲ, ಪಂಚತಾರಾ ಹೋಟೆಲಿನ ಅಡುಗೆಗೂ ಬಳಸಬೇಕು. ಅದನ್ನು ಒಂದು ಆದಾಯ ತರುವಂತಹ ಬೆಳೆ ಎಂದು ಪರಿಗಣಿಸಬೇಕು. ಒಂದೇ ತಳಿಯನ್ನು ಬೆಳೆಯುವ ಪರಿಪಾಠದ ಬದಲು ಚಿಕ್ಕ ಚಿಕ್ಕ ತೋಟಗಳಲ್ಲಿ ಬೇರೆ ಬೇರೆ ಋತುಗಳಲ್ಲಿ ಫಲ ಕೊಡುವ ಹಣ್ಣುಗಳನ್ನು ಬೆಳೆಸಿ. ಹಣ್ಣುಗಳನ್ನು ಆಕರ್ಷಕವಾಗಿ ಪ್ಯಾಕಿಂಗ್ ಮಾಡಿದರೆ ಗ್ರಾಹಕರು ನೋಟಕ್ಕೆ ಆಕಷರ್ಿತರಾಗುತ್ತಾರೆ. ತೋಟದಲ್ಲಿ ಬೆಳೆಯಲು 'ಬೆಳೆ ಯೋಜನೆ' ಮಾಡಿದರೆ ಒಂದು ಬೆಳೆ ಕೈಕೊಟ್ಟರೂ ಆಧೀರರಾಗುವ ಪ್ರಮೇಯ ಬರುವುದಿಲ್ಲ.
              ಹಣ್ಣುಗಳನ್ನು ಕೊಯಿಲು ಮಾಡಿದ ತಕ್ಷಣ ಮಾರಾಟ ಮಾಡುವ ಜಾಲವನ್ನು ಸೃಷ್ಟಿಸಿಕೊಳ್ಳಬೇಕು. ಕೊಯ್ದಾಗ ತೋಟದಲ್ಲೇ ಪ್ಯಾಕಿಂಗ್ ಮಾಡಿದರೆ ಬಾಳಿಕೆ ಹೆಚ್ಚು. ಹಣ್ಣುಗಳಿಗೆ ಪ್ರಿಕೂಲಿಂಗ್ ವ್ಯವಸ್ಥೆ ಬಾಳಿಕೆ ಹೆಚ್ಚಿಸಲು ತುಂಬ ಪ್ರಯೋಜನಕರ. ಕೆಲವು ಹಣ್ಣುಗಳು ಬಹಳ ಮೃದುವಾಗಿದ್ದು, ಕೊಯ್ಯಲು ಜಾಣ್ಮೆ ಬೇಕಾಗುತ್ತದೆ. ಇಂಥವನ್ನು ಕೊಯ್ದ ಕೂಡಲೇ ಅಚ್ಚುಕಟ್ಟ್ಟಾಗಿ ಪೆಟ್ಟಿಗೆಗಳಲ್ಲಿ ಒಂದೇ ಪದರದಲ್ಲಿ ಪ್ಯಾಕ್ ಮಾಡಬೇಕು. ಪ್ರತಿ ಕೃಷಿಕರು ತಮ್ಮ ಉತ್ಪನ್ನಗಳಿಗೆ ಬ್ರಾಂಡಿಂಗ್ ಮಾಡಿದರೆ ಮಾತ್ರ ಯಶ.
                 ಗ್ರಾಹಕರಿಗೆ ಆಯ್ಕೆಗೆ ಅವಕಾಶ ಕೊಡಿ. ಜತೆಗೆ ಅರಿವನ್ನೂ ಮೂಡಿಸಿ. ಪ್ರಕೃತ ಮಾರುಕಟ್ಟೆಯ ಒಲವು ಹೇಗಿದೆ ಎನ್ನುವ ಅಧ್ಯಯನ ಕಾಲಕಾಲಕ್ಕೆ ಮಾಡುತ್ತಿರಿ. ಬೆಳೆಗಳ ಬೆಲೆಯನ್ನು ಕೃಷಿಕನೇ ನಿರ್ಧರಿಸಬೇಕು. ಎಂದೂ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಮಾರಬೇಡಿ. ಕೃಷಿ ಪ್ರವಾಸೋದ್ಯಮ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಿ... ಹೀಗೆ ಕೆನ್ ತಮ್ಮೂರಿನಲ್ಲಿ ಮಾಡಿದ ಕೆಲಸಗಳನ್ನು ವಿವರಿಸುತ್ತಾ, ಮನಸ್ಸು ಮಾಡಿದರೆ ನಿಮ್ಮೂರಲ್ಲೂ ಸಾಧ್ಯ ಎನ್ನಲು ಮರೆಯಲಿಲ್ಲ.
             ಕೆನ್ ಜಪಾನಿನಲ್ಲಿ 'ಫ್ರುಟ್ ಪಾರ್ಕ್’ ವೀಕ್ಷಿಸಿದ್ದರು. ಅದರಲ್ಲಿ ಒಂದು ಬೆಳೆಯ ಬೀಜಪ್ರದಾನದಿಂದ ತೊಡಗಿ ಹಣ್ಣುಗಳನ್ನು ಮೌಲ್ಯವರ್ಧನೆ ಮಾಡುವ ತನಕದ ವಿವಿಧ ಹಂತದ ಮಾಹಿತಿ, ಪ್ರಾತ್ಯಕ್ಷಿಕೆಯಿದೆ. ಆ ಸರಹದ್ದಿನಲ್ಲಿ ಸಿಗುವ ಹಣ್ಣುಗಳ ಮಾಹಿತಿ ಪಾರ್ಕಿನಲ್ಲಿ ಸಿಗುವಂತಹ ವ್ಯವಸ್ಥೆಯಿದೆ. ಕೃಷಿಕ ಅಲ್ಲಿಗೆ ಹೋದರೆ ಹಣ್ಣುಗಳ ಪೂರ್ತಿ ಜ್ಞಾನ ಸಿಗುತ್ತದೆ. ಇಂತಹ ಪರಿಕಲ್ಪನೆ ಕಾಲದ ಅನಿವಾರ್ಯತೆ.
              ಹವಾಯಿಯ ಟ್ರಾಫಿಕಲ್ ಫ್ರುಟ್ ಅಸೋಸಿಯೇಶನ್ನಿನ ಅಧ್ಯಕ್ಷರಾಗಿರುವ ಕೆನ್ ಲವ್ ಕರ್ನಾಾಟಕ ಪ್ರವಾಸ ಮುಗಿಸಿ ಈ ವಾರ ಹವಾಯಿಗೆ ಹಾರಲಿದ್ದಾರೆ. ಒಬ್ಬ ಕೃಷಿಕನ ನೋವು-ನಲಿವು ಇನ್ನೊಬ್ಬ ಕೃಷಿಕನಿಗೆ ಗುರುತಿಸಲು ಕಷ್ಟವಲ್ಲ. ಹೀಗೆ ಅರ್ಥಮಾಡಿಕೊಳ್ಳುವಲ್ಲಿ ಭಾಷೆ ಅಡ್ಡಿಯಾಗಿಲ್ಲ. ನಾವು ಅಸಡ್ಡೆಯಿಂದ ಬದಿಗಿಟ್ಟ, ಆಲಸ್ಯದಿಂದ ಲಕ್ಷ್ಯವಹಿಸದ ಹಲವಾರು ಗಿಡ, ಸಸ್ಯ, ಹಣ್ಣುಗಳನ್ನು ಕೆನ್ ಅವರ ಮೂರನೇ ಕಣ್ಣು ಗ್ರಹಿಸಿ, ನಾಲ್ಕನೇ ಕಣ್ಣು ಕ್ಲಿಕ್ಕಿಸಿಕೊಂಡಿತು. 

Thursday, November 6, 2014

ಭರವಸೆಯ ಹಾದಿಗೆ ಕಣ್ಣೀರ ಬೆಳಕು

              ಬದುಕಿನಲ್ಲಿ ಕಾಂಚಾಣಗಳ ಕುಣಿತಕ್ಕೆ ಜೀವದ ಬೆಲೆ. ಅದು ಜೀವವನ್ನೂ ರೂಪಿಸಬಹುದೆಂಬ ಭ್ರಮೆ. ಹಣದ ಹಣಾಹಣಿಯಲ್ಲಿ ಬದುಕು ಏಗುತ್ತಿದ್ದರೂ ಅದಕ್ಕೆ ಶ್ರೀಮಂತಿಕೆಯ ಲೇಪ. ಸದಾ ಆನಂದವನ್ನು ತೊರಿಸುವ ಕಾಂಚಾಣ ನಮಗರಿವಿಲ್ಲದೆ ಬದುಕನ್ನು ವಾಲಿಸುತ್ತದೆ.
             ಕಾಂಚಾಣಕ್ಕೆ ಚಂಚಲ ಗುಣ. ಉಳ್ಳವರಲ್ಲೇ ಠಿಕಾಣಿ. ಬೆವರೆಂದರೆ ಅಷ್ಟಕ್ಕಷ್ಟೇ. ತನುಶ್ರಮಿಕರ ಜಗಲಿ ಏರಲೂ ಸಂಕೋಚ. ಪೈಸೆ ಪೈಸೆಗೂ ಒದ್ದಾಡುವವರನ್ನು ಕಂಡೂ ಕಾಣದಂತಿರುವ ನಿಷ್ಕರುಣಿ. ಮೂಡುಬಿದಿರೆಯ ಕಲಾವತಿ ಜಿ.ಎನ್.ಭಟ್ ಹೇಳುತ್ತಾರೆ, "ಹಣ ನಮ್ಮನ್ನು ಆಳಬಾರದು. ಜೀವನಕ್ಕೆ ನೆರವಾಗಬೇಕು. ಅದು ಮನೆಯೊಳಗೆ ಕಾಲು ಮುರಿದು ಬಿದ್ದುಬಿಟ್ಟರೆ ಸರ್ವಸ್ವವನ್ನೂ  ಆಪೋಶನ ಮಾಡಿಬಿಡುತ್ತದೆ."
             ಇವರ ಮಾತು ಒಗಟಾಗಿ ಕಂಡರೂ ಅದರೊಳಗೆ ಅವರ ಗತ ಬದುಕು ಮುದುಡಿದೆ. ಬೇಡ ಬೇಡವೆಂದರೂ ಮತ್ತದು ಕಾಡುತ್ತಲೇ ಇದೆ. ಕಾಡಿದಷ್ಟೂ ದುಗುಡ, ಆತಂಕ. ಆಗ ಭರವಸೆಯ ದಾರಿಗಳು ಮಸುಕಾಗಿ ಕಣ್ಣೀರಲ್ಲಿ ತೋಯುತ್ತದೆ. ಆ ಹಾದಿಗೆ ಕಣ್ಣೀರಿನಲ್ಲಲ್ಲದೆ ಬೇರೆ ಉಪಾಧಿಯಿಂದ ಬೆಳಕು ಒಡ್ಡಲು ಅಸಾಧ್ಯ.
              ಒಂದು ಕಾಲಘಟ್ಟದಲ್ಲಿ ಕಲಾವತಿ ಭಟ್ಟರದು ಐಷರಾಮಿ ಬದುಕು. ಪತಿ ನರಹರಿ. ಮೂಲತಃ ಕೃಷಿಕರು. ಪೂಜಾ, ಸ್ಕಂದಪ್ರಸಾದ್ ಇಬ್ಬರು ಮಕ್ಕಳು. ರಾಜಧಾನಿಯಲ್ಲಿ ಹತ್ತಾರು ಜನರಿಗೆ ಉದ್ಯೋಗ ನೀಡುವ ಸದೃಢ ಉದ್ಯಮ. ಕನಸಿನ  ಸೌಧಗಳು ಮೇಲೇಳುತ್ತಿದ್ದಂತೆ ಕೈಹಿಡಿದ ಕಾಂಚಾಣ ಮುನಿಸುಗೊಂಡು ಅರ್ಧದಲ್ಲೇ ಕೈಬಿಟ್ಟಿತು. ಬದುಕು ಕುಸಿಯಿತು. ಉಟ್ಟ ಉಡುಗೆಯಲ್ಲಿ ಮರಳಿ ಮಣ್ಣಿಗೆ. ನರಹರಿಯವರಿಗೆ ಅನಾರೋಗ್ಯ ಕಾಡಿತು. ಚಿಕಿತ್ಸೆ ಫಲಕಾರಿಯಾಗದೆ ಮೂರು ವರುಷದ ಹಿಂದೆ ಇಹಲೋಕ ತ್ಯಜಿಸಿದರು.
                 ಒಂದೆಡೆ ನೆಲಕಚ್ಚಿದ ಉದ್ಯಮದಿಂದ ಆರ್ಥಿಕ ಸೋಲು. ಮತ್ತೊಂದೆಡೆ ಪತಿಯ ಮರಣದ ದುಃಖ. ಇನ್ನೊಂದೆಡೆ ಬೆಳೆಯುತ್ತಿರುವ ಮಕ್ಕಳ ಜವಾಬ್ದಾರಿ. ಇವು ಮೂರನ್ನು ಹೊರಲೇಬೇಕಾದ ಅನಿವಾರ್ಯತೆ.  ಸುತ್ತೆಲ್ಲಾ ನೆಂಟರಿದ್ದಾರೆ. ಬಂಧುಗಳಿದ್ದಾರೆ. ಆಪ್ತರಿದ್ದಾರೆ. ಮರುಗುವ ಜನರಿದ್ದಾರೆ. ಯಾರಿಗೂ ಹೊರೆಯಾಗಬಾರದೆನ್ನುವ ಯೋಚನೆಯ ಬದ್ಧತೆ.
ಗಂಡನ ಕೊನೆ ದಿನಗಳಲ್ಲಿ ಹೊಟ್ಟೆಪಾಡಿಗಾಗಿ ಉಪ್ಪಿನಕಾಯಿ ವ್ಯಾಪಾರಕ್ಕೆ ಶ್ರೀಕಾರ ಬರೆದ ದಿನಗಳನ್ನು ಜ್ಞಾಪಿಸುತ್ತಾರೆ,       ಹಣದಲ್ಲಿ ಬದುಕಿದ ನಮಗೆ ಉಪ್ಪಿನಕಾಯಿ ಮಾರಾಟ ಮಾಡಲು ಮನಸ್ಸು ಹಿಂಜರಿಯಿತು. ಹೊಂದಿಕೊಳ್ಳಲು ತಿಂಗಳುಗಳೇ ಬೇಕಾಗಿತ್ತು. ನಾವಿಬ್ಬರು ಜತೆಯಾಗಿ ಮನೆಮನೆಗೆ ಹೋಗಿ ಬಾಗಿಲು ತಟ್ಟಿದೆವು. ಅಂದಂದಿನ ವ್ಯಾಪಾರ ಅಂದಂದಿನ ಊಟಕ್ಕೆ ಸಾಕಾಗುತ್ತಿತ್ತು. ಮೂಡುಬಿದಿರೆಯಲ್ಲಿ ಉದ್ಯಮಿಯಾಗಿರುವ ಸಹೋದರ, ಮಾವ ಇವರೆಲ್ಲರೂ ಆಪತ್ತಿನಲ್ಲಿ ಸಹಕಾರ ಮಾಡಿದ್ದಾರೆ. ಮಾಡುತ್ತಿದ್ದಾರೆ.
              ಮೂಡುಬಿದಿರೆಯ ಹೃದಯಸ್ಥಾನದಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ದಂಪತಿಗಳು ಸಂಜೆ ಹೊತ್ತು ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದರು. ಯಾರಲ್ಲೂ ತಮ್ಮ ಕತೆಯನ್ನು ಹೇಳಿಲ್ಲ. ಗ್ರಾಹಕರೊಂದಿಗೆ ಕನಿಷ್ಠ ಮಾತುಕತೆ. ದಿವಸಕ್ಕೆ ಐದಾರು ಕಿಲೋ ಉಪ್ಪಿನಕಾಯಿ ಮಾರಾಟ. ಈಗಲೂ ಕೂಡಾ. ನೋಡಿಯೂ ನೋಡದಂತಿರುವ ಪರಿಚಿತರು, ಗೇಲಿ ಮಾಡುವ, ಚುಚ್ಚು ಮಾತಿನಲ್ಲಿ ಸಂತೋಷ ಪಡುವ, ರಾಚುವ ಅನುಕಂಪಗಳಿಂದ ಕಲಾವತಿ ಅವರ ಬದುಕು ಸುಧಾರಿಸಲಿಲ್ಲ!
              ಪತಿಯವರ ಅಗಲಿಕೆಯ ನಂತರವೂ ಕಟ್ಟೆಯಲ್ಲಿ ವ್ಯಾಪಾರವನ್ನು ಮುಂದುವರಿಸಿದ್ದಾರೆ. ನಾಳೆಯ ಚಿಂತೆಯಿಲ್ಲ. ಇಂದಿಗೆ ಏನು? ಅದನ್ನು ಉಪ್ಪಿನಕಾಯಿ ಪೂರೈಸುತ್ತದೆ. ಬಡತನ ಕಾರಣವಾಗಿ ಮಕ್ಕಳೊಂದಿಗೆ ಹಗುರವಾಗಿ ಮಾತನಾಡುವವರಿದ್ದಾರೆ. ನಿನ್ನ ಮಕ್ಕಳನ್ನು ಕೆಲಸಕ್ಕೆ ಕಳಿಸು ಎಂದು ಸಲಹೆ ಕೊಡುವ ಮಂದಿ ಎಷ್ಟು ಬೇಕು? ಬದುಕಿನ ಸ್ಥಿತಿಯನ್ನು ಹೇಳುತ್ತಿದ್ದಂತೆ ಗಂಟಲು ಆರುತ್ತದೆ.
              ಶುಚಿ-ರುಚಿಯೇ ಯಶಸ್ವೀ ವ್ಯಾಪಾರದ ಗುಟ್ಟು. ಸ್ವತಃ ಓಡಾಡಿ ಒಳಸುರಿಗಳನ್ನು ಸಂಗ್ರಹಿಸುತ್ತಾರೆ. ಉಪ್ಪಿನಲ್ಲಿ ಹಾಕಿದ ಮಾವು, ನೆಲ್ಲಿ, ಕರಂಡೆ, ಅಂಬಟೆ, ಅಪ್ಪೆಮಿಡಿಗಳ ಸಂಗ್ರಹ ಕೋಣೆಯೊಳಗೆ ಭದ್ರ. ಬೇಕಾದಾಗ ಬೇಕಾದಷ್ಟೇ ತಯಾರಿ. ಹೋಂವರ್ಕ್, ಪರೀಕ್ಷೆ ಏನೇ ಇರಲಿ ಪೂಜಾ, ಸ್ಕಂದಪ್ರಸಾದರಿಗೆ ಪ್ಯಾಕಿಂಗ್ ಕೆಲಸ. ಶಾಲೆಗೆ ಹೋಗುವಾಗ ಮನೆಗಳಿಗೆ ಡೋರ್ ಡೆಲಿವರಿ. ಉಜಿರೆಯಲ್ಲಿ ಜರುಗಿದ ತುಳು ಸಮ್ಮೇಳನದಲ್ಲಿ ಮೊದಲ ಬಾರಿಗೆ ಉಪ್ಪಿನಕಾಯಿ ಮಳಿಗೆ ತೆರೆದರು. ಬಳಿಕ ಕೃಷಿ ಮೇಳ, ನುಡಿಸಿರಿಗಳಲ್ಲಿ ವ್ಯಾಪಾರ.
             ನೂರು, ಇನ್ನೂರು, ಒಂದು ಕಿಲೋಗ್ರಾಮ್ಗಳ ಪ್ಯಾಕೆಟ್. ಮನೆಗೆ ಬಂದು ಒಯ್ಯುವ, ಮೊದಲೇ ಕಾದಿರಿಸುವ ಗ್ರಾಹಕರಿದ್ದಾರೆ. ಉಪ್ಪಿನಕಾಯಿ ಜತೆಯಲ್ಲಿ ಸಾಂಬಾರು ಪುಡಿ, ರಸಂಪುಡಿ, ಚಟ್ನಿ, ಪುಳಿಯೋಗರೆ ಮೊದಲಾದ ಉಪಉತ್ಪನ್ನಗಳು. ಮಾರಾಟಕ್ಕೆ ಇಲಾಖೆಗಳ ಪರವಾನಿಗೆ ಪಡೆದುಕೊಂಡಿದ್ದಾರೆ.
                 ಕಳೆದ ವರುಷದ ವಿಶ್ವ ನುಡಿಸಿರಿಯಲ್ಲಿ ವ್ಯಾಪಾರ ಚೆನ್ನಾಗಿ ಆಯಿತು. ಅಲ್ಲಿನ ಪ್ರಾಧ್ಯಾಪಕರ ಕುಟುಂಬಗಳು ಉಪ್ಪಿನಕಾಯಿಯನ್ನು ಬಹಳ ಮೆಚ್ಚಿಕೊಂಡಿದೆ. ಲಾಭಾಂಶದಿಂದ ದ್ವಿಚಕ್ರ ವಾಹನ ಖರೀದಿಸಿದೆ. ನನಗೆ ಉಪ್ಪಿನಕಾಯಿ ಲಕ್ಷ್ಮಿಗೆ ಸಮಾನ, ಖುಷಿಯಿಂದ ಹೇಳುತ್ತಾರೆ, ಬಡತನ  ಮಕ್ಕಳ ಬದುಕಿಗೆ ಅಂಟಬಾರದು. ಅವರು ನನ್ನಂತೆ ಆಗಬಾರದು. ಸಮಕಾಲೀನ ವಿದ್ಯಮಾನಕ್ಕೆ ಅಪ್ಡೇಟ್ ಆಗುತ್ತಿದ್ದರೆ ಮಾತ್ರ ಸಮಾಜದಲ್ಲಿ ಸ್ಥಾನ-ಮಾನ. ಸ್ಕಾಲರ್ಶಿಪ್, ದಾನಿಗಳ ನೆರವಿನಿಂದ ಮಕ್ಕಳ ವಿದ್ಯಾಭ್ಯಾಸ.
                 ಮಗ ಸ್ಕಂದ ಪ್ರಥಮ ಪದವಿ ಓದುತ್ತಿದ್ದಾನೆ. ಮಗಳು ಪೂಜಾ ಸಿ.ಎ.ಕಲಿಕೆ. ಕಳೆದ ವರುಷ ಮಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ.ಪದವಿಯಲ್ಲಿ ಎಂಟನೇ ರ್ಯಾಂಕ್ ಪಡೆದ ಪ್ರತಿಭಾವಂತೆ. ಅವಳ ಸಾಧನೆಯನ್ನು ಗುರುತಿಸಿ ದಾನಿಗಳಿಂದ ಆರ್ಥಿಕ ಪುರಸ್ಕಾರ. ಅವಳು ಓದಿದ ಶಾಲೆಯು ಕಲಾವತಿಯವರನ್ನು 'ಹೆಮ್ಮೆಯ ತಾಯಿ' ಎಂದು ಗೌರವಿಸಿತ್ತು. ರ್ಯಾಂಕಿನ ಸುದ್ದಿ ತಿಳಿದ ಪೂಜಾ ಅಮ್ಮನನ್ನು ಅಪ್ಪಿ ಹೇಳಿದ್ದೇನು ಗೊತ್ತೇ,. ’ಬೇರೆ ಅಮ್ಮಂದಿರು ಆಗ್ತಿದ್ರೆ ಯಾವುದೋ ಉದ್ಯೋಗಕ್ಕೆ ಕಳಿಸ್ತಿದ್ದರು. ನೀನು ಗ್ರೇಟ್ ಅಮ್ಮಾ” ಎನ್ನುವಾಗ ಕಣ್ಣು ಆದ್ರ್ರವಾಗುತ್ತದೆ.
                 ಪೂಜಾಳಲ್ಲಿ ಒಂದು ಸಂಕಲ್ಪವಿದೆ. ಸಿ.ಎ.ಕಲಿಕೆ ಮುಗಿದು, ಅದನ್ನೇ ವೃತ್ತಿಯಾಗಿಸಿ, ಆರ್ಥಿಕವಾಗಿ ಸದೃಢವಾಗಿ ಸ್ವಂತದ್ದಾದ ಮನೆ ಹೊಂದಿದ ಬಳಿಕವೇ ಮದುವೆಯ ಯೋಚನೆ! ಅಬ್ಬಾ.. ಎಳೆಯ ಮನಸ್ಸಿನ ನಿರ್ಧಾರದ ಮುಂದೆ ಮಾತು ಮೂಕವಾಗುತ್ತದೆ. ಅಮ್ಮ-ತಮ್ಮನ ಭವಿಷ್ಯದ ಬದುಕಿಗಾಗಿ ಮದುವೆಯನ್ನೇ ಮುಂದೂಡುವ ಎಳೆಮನಸ್ಸಿನ ಪೂಜಾಳ ಯೋಚನೆಯಲ್ಲಿ ತ್ಯಾಗದ ಎಳೆಯಿಲ್ವಾ. ಮಗನ ಕಲಿಕೆಯಲ್ಲಿ ಭಾವಿ ಬದುಕಿನ ನಿರೀಕ್ಷೆಯಿಟ್ಟ ಅಮ್ಮನ ಮನದೊಳಗೆ 'ನನ್ನ ಮಗ ಲೆಕ್ಚರ್' ಆಗಬೇಕೆನ್ನುವ ಆಶೆಯ ಮೊಳಕೆ ಹುಟ್ಟಿದೆ.
                'ಸ್ವಾಭಿಮಾನ ಇದ್ದವರು ಸಾಲ ಮಾಡರು', ಕಲಾವತಿಯವರು ಆಗಾಗ್ಗೆ ಹೇಳುವ ಮಾತಿನೊಂದಿಗೆ ಗತ ಬದುಕಿನ ನೋವಿನೆಳೆ ಮಿಂಚಿ ಮರೆಯಾಗುತ್ತದೆ. ಬಿಡುವಿದ್ದಾಗ ಸಹೋದರ ಸದಾಶಿವರ ಜವುಳಿ ಅಂಗಡಿಯಲ್ಲಿ ಸಹಾಯಕರಾಗಿ ಕಾಣಿಸಿಕೊಳ್ಳುವ ಮಕ್ಕಳಿಗೆ ಮಾವನ ಅಂಗಡಿ ಮನೆಗೆ ಸಮಾನ. ದುಡಿಯದಿದ್ದರೂ ಅಳಿಯ-ಸೊಸೆಗೆ ಮಾವ ನೀಡುವ ನೆರವಿಗೆ ತಂತಮ್ಮ ಬೆವರಿನ ಸ್ಪರ್ಶವಿರಬೇಕೆನ್ನುದು ತಾಯಿಯ ಆಸೆ. ತನ್ನಕ್ಕನ ಈ ಮನೋನಿರ್ಧಾರವನ್ನು ತಮ್ಮ ಎಂದು ಪ್ರಶ್ನಿಸಿಲ್ಲ. ಪ್ರಶ್ನಿಸುವುದಿಲ್ಲ ಗೌರವಿಸಿದ್ದಾರೆ.
                  ವಿವಾಹ ಪೂರ್ವದಲ್ಲಿ ಕಲಾವತಿ ಶಾಲೆಯೊಂದರಲ್ಲಿ ಅರೆಕಾಲಿಕ ಅಧ್ಯಾಪಿಕೆಯಾಗಿದ್ದರು. ಇನ್ನೇನು ಹುದ್ದೆ ಖಾಯಂಗೊಳ್ಳುವಾಗ ವಿವಾಹ ನಿಶ್ಚಯವಾಯಿತು. ದುಡಿಯುವ ಹೆಂಡತಿ ಬೇಡ-ಪತಿಯ ಅಪೇಕ್ಷೆ. 'ಅಧ್ಯಾಪಿಕೆಯಾಗಿಯೇ ಮುಂದುವರಿಯುತ್ತಿದ್ದರೆ ಇಂತಹ ಸಂಕಷ್ಟ ಬರುತ್ತಿರಲಿಲ್ಲ' ಎನ್ನುವಾಗ ದುಃಖದ ಕಟ್ಟೆ ಒಡೆಯುತ್ತದೆ. ಸಾವರಿಸಿಕೊಂಡು ನನಗೆ ಮಕ್ಕಳೇ ಸರ್ವಸ್ವ. ಅವರಿಗೆ ಕಷ್ಟದ ಪರಿಜ್ಞಾನವಿದೆ. ಪೈಸೆ ಪೈಸೆಯ ಬೆಲೆ ಗೊತ್ತಿದೆ. ಇತರರ ಮುಂದೆ ಅವರೆಂದೂ ಕೈಚಾಚರು. ವಿದ್ಯೆ ಅವರನ್ನು ರಕ್ಷಿಸುತ್ತದೆ, ಎನ್ನುತ್ತಾ ಒಂದು ಕ್ಷಣ ರೆಪ್ಪೆ ಮುಚ್ಚಿದರು.
                  ಬರಿಗೈಯಲ್ಲಿ ಮೂಡುಬಿದಿರೆಗೆ ಬಂದ ಕಲಾವತಿ ಪಡಿತರ ಚೀಟಿಗಾಗಿ ಅಲೆದ ಕತೆಯನ್ನು ಅವರಿಂದಲೇ ಕೇಳಬೇಕು. ಸರಕಾರಿ ಕಚೇರಿಗಳ ಒಂದೊಂದು ಮೇಜುಗಳಲ್ಲಿ ಕುಣಿಯುವ ಕಾಂಚಾಣದ ಕುಣಿತದ ತಾಳಕ್ಕೆ ಇವರಿಗೆ ಹೆಜ್ಜೆ ಹಾಕಲು ಕಷ್ಟವಾಯಿತು. ಆದರೆ ಇಲಾಖೆಯಲ್ಲಿದ್ದ ಸಹೃದಯಿ ಮನಸ್ಸುಗಳು ಕಲಾವತಿಯವರ ನೆರವಿಗೆ ಬಂತೆನ್ನಿ.
                    ನಿಜಕ್ಕೂ ಕಲಾವತಿ ಮಹಾತಾಯಿ. ಬದುಕನ್ನು ಬಂದ ಹಾಗೆ ಸ್ವೀಕರಿಸಿದವರು. ಉಪ್ಪಿನಕಾಯಿ ವೃತ್ತಿಯೇ ಅವರಿಗೆ ದೇವರು. ಕಣ್ಣೀರಿನ ಅಭಿಷೇಕ. ನಾಲ್ಕು ಕಾಸು ಕೈಗೆ ಸೇರಿದಾಗ ಸುವಾಸಿತ ಹೂಗಳ ಅರ್ಚನೆ. ಮಕ್ಕಳುಣ್ಣುವಾಗ ಕಣ್ತುಂಬಾ ನೋಡಿ ಆನಂದಿಸುವ ತಾಯಂದಿರು ಎಷ್ಟಿದ್ದಾರೆ? ನಾವಿಲ್ಲಿ ಒಂದು ಗಮನಿಸಬೇಕು. ಮಕ್ಕಳ ಮುಂದೆ ಕಣ್ಣೀರಿನ ಕತೆಯನ್ನು ಎಂದೂ ಹೇಳರು. ತನ್ನ ಕಣ್ಣೀರು ಮಕ್ಕಳಿಗೆ ಗೋಚರವಾಗಬಾರದೆನ್ನುವ ಎಚ್ಚರಿಕೆ ಅವರಲ್ಲಿ ಸದಾ ಜಾಗೃತ. ಸ್ವಾಭಿಮಾನಿ-ಸ್ವಾವಲಂಬಿ ಬದುಕನ್ನು ಅಪ್ಪಿಕೊಂಡ ಕಲಾವತಿಯವರ ಬಡತನ ಈಗ ನಾಚಿ ನೀರಾಗುತ್ತಿದೆ!