Monday, November 21, 2011

ಕನ್ನಡ ಮನಸ್ಸುಗಳ ತಡಕಾಟ!



ಕಳೆದ ಶನಿವಾರ ಸಂಪನ್ನಗೊಂಡ ಅಳಿಕೆಯ (ದ.ಕ.) ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ. ಪ್ರತಿನಿಧಿ ಬ್ಯಾಜ್ ಹಾಕಿದ ಓರ್ವ 'ಕನ್ನಡ ಪುತ್ರ' ತನ್ನ ನಾಲ್ಕನೇ ತರಗತಿಯ ಚಿರಂಜೀವಿಯೊಂದಿಗೆ ಬಂದರು. ಪುಸ್ತಕ ಆಯಲು ಅವರನ್ನು ಮೊಬೈಲ್ ಬಿಡುತ್ತಿಲ್ಲ! ಮಗು ನಾಲ್ಕೈದು ಕನ್ನಡ ಪುಸ್ತಕಗಳನ್ನು ಆಯ್ದು, 'ಅಪ್ಪಾ, ಇಂಗ್ಲಿಷ್ ಕಥೆ ಪುಸ್ತಕ ಮನೆಯಲ್ಲಿ ಉಂಟು. ಕನ್ನಡ ಪುಸ್ತಕ ಇಲ್ಲ. ನನಗಿದು ಬೇಕು' ಎಂಬ ಬೇಡಿಕೆಯನ್ನು ಮುಂದಿಟ್ಟ.


'ಛೆ.. ಇಂಗ್ಲಿಷ್ ಪುಸ್ತಕವನ್ನೇ ಓದಬೇಕೆಂದು ಮಿಸ್ ಹೇಳಿಲ್ವಾ. ಕನ್ನಡ ಪುಸ್ತಕ ಬೇಡ. ಇಂಗ್ಲಿಷ್ನದ್ದು ತೆಕ್ಕೋ' ಎನ್ನುತ್ತಾ, ಮಗನ ಕೈಯಲ್ಲಿದ್ದ ಪುಸ್ತಕವನ್ನು ಸೆಳೆದು-ಕುಕ್ಕಿ, ಪುನಃ ಮೊಬೈಲ್ನ ದಾಸರಾದರು. ಮಗುವಿನ ಮೋರೆ ಸಣ್ಣದಾಯಿತು. ಕುಕ್ಕಿದ ಪುಸ್ತಕವನ್ನು ಪುನಃ ಆಯ್ದು ಅಪ್ಪನ ಮೋರೆ ನೋಡಿದ. ಪಾಪ, ಈ ಅಪ್ಪನಿಗೆ ಮಗನ ಮುಖಭಾವವನ್ನು ಓದಲು, ಅದಕ್ಕೆ ಸ್ಪಂದಿಸಲು ಪುರುಸೊತ್ತು ಎಲ್ಲಿದೆ? ಪುರುಸೊತ್ತು ಇದ್ದರೂ ಮುಖವನ್ನು ಓದಲಾಗದ ಅನಕ್ಷರಸ್ಥ.


'ನಿನಗೆ ಹೇಳಿದ್ರೆ ಅರ್ಥವಾಗುವುದಿಲ್ವಾ' ಎಂದು ಪುಸ್ತಕವನ್ನು ಎಳೆದು ಪುಸ್ತಕವನ್ನು ಮೇಜಿನ ಮೇಲೆ ಬಿಸಾಡಿ, ಮಗನನ್ನು ಎಳೆದುಕೊಂಡು ಹೋಗಬೇಕೇ?' ಅವರ ಅಂಗಿಗೆ ತೂಗಿಸಿದ ಬ್ಯಾಜ್ ಆಗ ನಕ್ಕಿತು!


ಕುತೂಹಲದಿಂದ ಅವರನ್ನು ಸ್ವಲ್ಪ ಹೊತ್ತು ಅನುಸರಿಸಿದೆ. ಇನ್ನೊಂದು ಮಳಿಗೆಯಲ್ಲೂ ಪುನರಾವರ್ತನೆ. ಕೊನೆಗೆ ಅಪ್ಪನ ಕೆಂಗಣ್ಣಿಗೆ ಬಲಿಯಾದ ಬಾಲಕ ಇಂಗ್ಲಿಷ್ ಪುಸ್ತಕ ಖರೀದಿಯಲ್ಲೇ ತೃಪ್ತಿಪಟ್ಟ. ಅದೂ ಬರೋಬ್ಬರಿ ಒಂದು ಸಾವಿರ ರೂಪಾಯಿಯ ಪುಸ್ತಕ. ಇದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗ್ಲ ನಂಟಿನ ಅಪ್ಪ-ಮಗನ ಪುಸ್ತಕದ ಕತೆ.


'ಕನ್ನಡ ಮನಸ್ಸು' ಕುರಿತು ಮಾತನಾಡುವಾಗ, ಯೋಚಿಸುವಾಗ ಈ ಅಪ್ಪ-ಮಗನನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಅಜ್ಞಾತವಾಗಿ ರಿಂಗಣಿಸುವ ಆಂಗ್ಲ ಮನಸ್ಸು ಇದೆಯಲ್ಲಾ, ಬಹುತೇಕ ಮನೆಮನೆಯಲ್ಲಿ ಪ್ರಕಟವಾಗುವಂತಾದ್ದೇ. 'ಸಾಹಿತ್ಯ ಸಮ್ಮೇಳನದಲ್ಲಿ ಆಂಗ್ಲ ಪುಸ್ತಕದ ಮಾರಾಟಕ್ಕೆ ನಿಷೇಧ ಹೇರಬೇಕು,' ಪ್ರತ್ಯಕ್ಷದರ್ಶಿ ಅಕ್ಷರಪ್ರಿಯರೊಬ್ಬರ ಅನಿಸಿಕೆ.


ಮಳಿಗೆಯಲ್ಲಿ ಆಂಗ್ಲ ಪುಸ್ತಕಗಳೇ ಇಲ್ಲದಿರುತ್ತಿದ್ದರೆ? ಆ ಬಾಲಕನಿಗೆ ಕನ್ನಡ ಪುಸ್ತಕ ಸಿಗುತ್ತಿತ್ತೇನೋ? ಒತ್ತಾಯಕ್ಕಾದರೂ ಮಗನ ಆಸೆಯನ್ನು ಅಪ್ಪ ಪೂರೈಸುತ್ತಿದ್ದರೇ? - ಹೀಗೆ ಪ್ರಶ್ನೆಗಳನ್ನು ಪಟ್ಟಿ ಮಾಡಿದರೆ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಕೇವಲ ಬ್ಯಾಜ್ ಧರಿಸಿ ಸಮ್ಮೇಳನದಲ್ಲಿ ಭಾಗವಹಿಸಿ 'ನಾನೊಬ್ಬ ಕನ್ನಡ ಪ್ರೇಮಿ' ಎಂದು ತೋರಿಸಿ ಕೊಳ್ಳಬಹುದಷ್ಟೇ. ಇದರಿಂದ ಅವರಿಗಾಗಲೀ, ಸಮ್ಮೇಳನಕ್ಕಾಗಲೀ ಏನೂ ಪ್ರಯೋಜನವಿಲ್ಲ


'ಕನ್ನಡ ಮನಸ್ಸು'ಗಳ ಉದ್ದೀಪನಕ್ಕೆ ಸಾಹಿತ್ಯ ಸಮ್ಮೇಳನಗಳು ಒತ್ತುಕೊಡುತ್ತಿವೆ. ಎಷ್ಟು ಮನಸ್ಸುಗಳು ಸಭಾಮಂಟಪದಲ್ಲಿ ಮೇಳೈಸಿವೆ? ಎಷ್ಟು ಮನಸ್ಸುಗಳಿಗೆ ಕಲಾಪ ಹೂರಣ ಮನ ಹೊಕ್ಕಿವೆ? ಪ್ರಬಂಧ ಮಂಡಣೆಗೆ ಆರಂಭವಾಗುವಾಗ 'ಗೊಣಗುವ, ಅತೃಪ್ತಿ ಸೂಚಿಸುವ, ಚಡಪಡಿಸುವ' ಮಂದಿ ತನ್ನ ಆಚೀಚೆ ಕುಳಿತವರ 'ಕನ್ನಡ ಮನಸ್ಸನ್ನು' ಕೆದಕುತ್ತಾನೆ! ಚಿತ್ತಸ್ಥೈರ್ಯವನ್ನು ಒರೆಗೆ ಹಚ್ಚುತ್ತಾನೆ. ಇವೆಲ್ಲಾ ಸಮ್ಮೇಳನ ಕಲಾಪದ ಹೊರಗೆ ವಿಹರಿಸುವ ವಿಚಾರಗಳು.


'ಸಮ್ಮೇಳನಕ್ಕೆ ಹೋಗಿದ್ದೆ. ಭಾರೀ ಗೌಜಿ' ಎನ್ನುವಲ್ಲೇ ಸಂಭ್ರಮ. 'ಸಾವಿರಗಟ್ಟಲೆ ಜನ ಬಂದಿದ್ದರು. ಒಳ್ಳೆಯ ಊಟ' ಎನ್ನುತ್ತಾ ಬಾಯಿಚಪ್ಪರಿಸುವುದರಲ್ಲೇ ಸಂತೃಪ್ತಿ. 'ಇದೆಲ್ಲಾ ಮಾಮೂಲಿ ಮಾರಾಯ್ರೆ' ಎನ್ನುವ ಕನ್ನಡ ಮನಸ್ಸು ಮುಂದಿನ ಸಮ್ಮೇಳನದಲ್ಲೂ ಇದೇ ಪುನರುಕ್ತಿ. ನಡೆದ ಗೋಷ್ಠಿಗಳ ಮಥನ, ಸಾಹಿತಿಗಳ ಭಾಷಣಗಳ ಸಾರ ಗ್ರಹಿಕೆ, ಕನ್ನಡ ಪುಸ್ತಕಗಳ ಓದು ಮತ್ತು ಖರೀದಿ, ಕನ್ನಡ ನಾಡು-ನುಡಿಯ ಕುರಿತಾಗಿ ಶ್ರದ್ಧೆ-ಗೌರವ ಬಾರದ ಹೊರತು ಕನ್ನಡದ ಮನಸ್ಸನ್ನು ಹೇಗೆ ಕಟ್ಟಲು ಸಾಧ್ಯ ಹೇಳಿ? ಸಮ್ಮೇಳನಗಳನ್ನು ಒಪ್ಪದೆ, ವಿಚಾರಗಳನ್ನು ಮನನಿಸದೆ, ಕನ್ನಡಕ್ಕೆ ಮನ-ಮನೆಯಲ್ಲಿ ಸ್ಥಾನಕೊಡದೆ, 'ನಾನು ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದೆ' ಎಂದರೆ 'ಹೋದ ಪುಟ್ಟ.. ಬಂದ ಪುಟ್ಟ..' ಅಷ್ಟೇ.


ಸರಿ, ವಿಚಾರ ಎಲ್ಲೋ ಹೋಯಿತಲ್ವಾ. ಎರಡು ದಿವಸದ ಅಳಿಕೆಯ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು 'ಕನ್ನಡ ಮನಸ್ಸು'ಗಳನ್ನು ಕಂಡಾಗ ನನಗುದಿಸಿದ ವಿಚಾರಗಳು. ಉದ್ಘಾಟನಾ ಸಮಾರಂಭ ತಡವಾದುದು ಬಿಟ್ಟರೆ, ಮಿಕ್ಕಂತೆ ಯಶಸ್ವೀ ಸಮ್ಮೇಳನ. ಸಂವಾದವೊಂದರಲ್ಲಿ ಸಮ್ಮೇಳನಾಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರರು ತಮ್ಮ ಬಾಲ್ಯ-ಬದುಕನ್ನು ನೆನಪಿಸಿಕೊಂಡಾಗ, ಕಣ್ಣೀರಿನ ಒಂದು ಹನಿ ಬಿದ್ದುದು ನನಗೆ ಗೊತ್ತಾಗಲೇ ಇಲ್ಲ!


ಅಳಿಕೆಯ ಪ್ರಧ್ಯಾಪಕ ವದ್ವ ವೆಂಕಟ್ರಮಣ ಭಟ್ಟರ 'ಪತ್ರಿಕೆಗಳ ವಿಶ್ವರೂಪ' ಸಮ್ಮೇಳನದ ಆಕರ್ಷಣೆ. ದೈನಿಕ, ಸಾಪ್ತಾಹಿಕ, ಪಾಕ್ಷಿಕ, ಮಾಸಿಕಗಳ ಪ್ರದರ್ಶನ. 'ಐದು ಸಾವಿರಕ್ಕೂ ಮಿಕ್ಕಿ ಸಂಗ್ರಹವಿದೆ. ಇಲ್ಲಿಗೆ ಕೇವಲ ಒಂದು ಸಾವಿರ ಮಾತ್ರವಷ್ಟೇ ತಂದಿದ್ದೇನೆ' ಎಂದರು. ಅವರದ್ದೇ ಸಂಗ್ರಹದ 'ಚಿಟ್ಟೆಗಳ ಸಾಮ್ರಾಜ್ಯ' ವಿದ್ಯಾರ್ಥಿಗಳನ್ನು ಬಹುವಾಗಿ ಆಕರ್ಶಿಸಿತು.


ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮರು ಅಪರೂಪವಾಗುತ್ತಿರುವ ಹದಿನೈದಕ್ಕೂ ಮಿಕ್ಕಿ ಗೆಡ್ಡೆ ಗೆಣಸುಗಳನ್ನು ಹುಡುಕಿ ತಂದು ಪ್ರದರ್ಶನಕ್ಕಿಟ್ಟಿದ್ದರು. 'ಸಮ್ಮೇಳನ ಮುಗಿಯುವಾಗ ಕೆಂಪು ಕೂವೆ ಗೆಡ್ಡೆಯನ್ನು ನನಗೆ ಕೊಡ್ತೀರಾ', 'ಮನೆ ಮಟ್ಟದಲ್ಲಿ ಗೆಡ್ಡೆಗಳನ್ನು ಬೆಳೆಯಲು ಉತ್ತೇಜನ ಬಂದಿದೆ. ಮಾಹಿತಿ ಕೊಡಿ'.. ಹೀಗೆ ಮಾಹಿತಿ ಅಪೇಕ್ಷಿಸುವ ಮಂದಿಯನ್ನು ಗೆಡ್ಡೆಗೆಣಸುಗಳು ಆಕರ್ಷಿಸಿದುವು.

ಮತ್ತೊಂದೆಡೆ ಮಂಗಳೂರಿನ ಕಲಾವಿದ ದಿನೇಶ್ ಹೊಳ್ಳ ಮತ್ತು ಸಂಗಡಿಗರಿಂದ ಸ್ಥಳದಲ್ಲೇ ಚಿತ್ರ ರಚನೆ. ಕ್ಯಾರಿಕೇಚರ್, ತೈಲಚಿತ್ರ, ಶೇಡ್ ಚಿತ್ರಗಳ ರಚನೆ. 'ಹದಿನೇಳನೇ ಸಮ್ಮೇಳನ ಅಲ್ವಾ. ಹಾಗಾಗಿ ನಾವು ಹದಿನೇಳು ಮಂದಿ ಕಲಾವಿದರು ಭಾಗವಹಿಸಿದ್ದೇವೆ' ಎಂದರು. ಇವರೆಲ್ಲಾ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ, ಸ್ವ-ಇಚ್ಚೆಯಿಂದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ ಎಂಬುದು ಉಲ್ಲೇಖನೀಯ. ಪೂಜ್ಯ ಸಾಯಿಬಾಬಾ ಅವರ ಬದುಕಿನ ಕ್ಷಣಗಳ ಪ್ರದರ್ಶನ, ಪವರ್ ಪಾಯಿಂಟ್ ಪ್ರಸ್ತುತಿ ಚಿಂತನಾಗ್ರಾಸ.


ಅಳಿಕೆ ಸಮ್ಮೇಳನ (19-11-2011) ಯಶಸ್ವಿಯಾಗಿ ಮುಗಿದಿದೆ. ಮುಂದಿನ ಸಮ್ಮೇಳನ..? ಆಗಲೂ ಕನ್ನಡ ಮನಸ್ಸುಗಳ ಹುಡುಕಾಟ-ತಡಕಾಟ!

Sunday, November 20, 2011

ಅಂತಿಂಥಾ ಸೇತುವಲ್ಲ, ಬದುಕು ಕಟ್ಟಿದ ಸೇತು


ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಪುಟ್ಟ ಹಳ್ಳಿ ಶಿವಪುರ. ದಶಕದ ಹಿಂದೆ ಕೊಡಸಳ್ಳಿ ಜಲವಿದ್ಯುತ್ ಯೋಜನೆಗಾಗಿ ಕಾಳೀ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಕೊಡಸಳ್ಳಿಯನ್ನು ನೀರು ನುಂಗಿತು. ಶಿವಪುರವನ್ನು ಸಂಪರ್ಕಿಸುವ ಎಲ್ಲಾ ದಾರಿಗಳನ್ನು ಹಿನ್ನೀರು ಆಪೋಶನ ಮಾಡಿತು. ಮಿಕ್ಕ ಸುತ್ತಲಿನ ದಾರಿಗಳೆಲ್ಲಾ ಸುತ್ತುಬಳಸು.

ಯಲ್ಲಾಪುರ ಶಿವಪುರಕ್ಕೆ ಹತ್ತಿರ. ಕುಂಬ್ರಾಳದವರೆಗೆ ರಸ್ತೆ. ಹಿನ್ನೀರು ದಾಟಿದ ಬಳಿಕ ಆರೇಳು ಕಿಲೋಮೀಟರ್ ಕಾಡು ಹಳ್ಳಿಯೊಳಗೆ ಎಳೆದೊಯ್ಯುತ್ತದೆ. ನಂತರ ಸಿಗುವುದೇ ಐವತ್ತು ಮನೆಗಳಿರುವ ಶಿವಪುರ. ಒಂದು ಕಾಲಘಟ್ಟದಲ್ಲಿ ಕಾರ್ಮಿಕರು ಕೆಲಸ ಹುಡುಕಿ ಬರುವ ಊರಿದು.

ಹಿನ್ನೀರು ದಾಟಲು ದೇಸೀ ತೆಪ್ಪ. ಆಧಾರ ಹಲಗೆಯಲ್ಲಿ ನಿಂತು ನದಿದಂಡೆಗೆ ಕಟ್ಟಿದ ಹಗ್ಗವನ್ನು ಜಗ್ಗುತ್ತಿದ್ದಂತೆ ತೆಪ್ಪ ಚಾಲೂ. ಮಿತ್ರ ಶಿವಾನಂದ ಕಳವೆ ಹಗ್ಗ ಜಗ್ಗುತ್ತಿದ್ದರು. ತೆಪ್ಪ ಚಲಿಸುತ್ತಿತ್ತು. ನದಿಯ ಮಧ್ಯಕ್ಕೆ ಬಂದಾಗ ಕಳವೆ, 'ಇನ್ನೂರು ಅಡಿ ಆಳವಿದೆ ಗೊತ್ತಾ, ಜಾಗ್ರತೆ' ಅಂದರು. ಅಷ್ಟರಲ್ಲಿ ಕೈನಡುಗಿ ಹಲಗೆ ಮೇಲೆ ಮೊಬೈಲ್ ಬಿತ್ತು. 'ಬಾಗಬೇಡಿ. ಮೊಬೈಲ್ ಬೇಕಾ, ಜೀವ ಬೇಕಾ' ನಿರ್ಧರಿಸಿ ಅಂದರು! ಜೀವ ಕೈಯಲ್ಲಿ ಹಿಡಿದು ಕಾಣದ ದೇವರನ್ನು ಜ್ಞಾಪಿಸಿಕೊಳ್ಳುವುದೊಂದೇ ದಾರಿ! 'ಛೇ, ಇದಕ್ಕೊಂದು ತೂಗುಸೇತುವೆಯಾದರೂ ಆಗಿರುತ್ತಿದ್ದರೆ, ಈ ಕಷ್ಟವಿಲ್ಲ' ಅಂದೆ.

ತೂಗುಸೇತುವೆ ಬಿಡಿ, ಊರಿನ ಚಿಕ್ಕ ತೋಡುಗಳಿಗೆ ಸಂಕವಿಲ್ಲ. ಅಡಿಕೆ ಮರವನ್ನು ಅಡ್ಡಲಾಗಿ ಮಲಗಿಸಿದರೆ ಅದೇ ಸೇತುವೆ. ಅದರ ಮೇಲೆ ಸಾಹಸದ ಬೈಕ್ ಸವಾರಿ. ಅಲ್ಲಿನವರಿಗೆ ಸಲೀಸು. ಕಾಳಿ ನದಿ ತಂದೊಡ್ಡಿದ ಹಿನ್ನೀರು ಸವಾಲಿಗೆ ಆರು ವರುಷದ ಹಿಂದೆ ಮಾಡಿದ ತೂಗುಸೇತುವೆಯ ಪ್ರಸ್ತಾಪ ತುಕ್ಕು ಹಿಡಿದು ಕರಟಲೊಂದೇ ಬಾಕಿ.

ಒಂದಲ್ಲ, ಶತಸೇತು

ಸ್ವಲ್ಪ ಸಮಯದ ನಂತರ ತೂಗುಸೇತುವೆಯ ಹರಿಕಾರ ಗಿರೀಶ್ ಭಾರದ್ವಾಜರಿಗೆ ರಿಂಗಿಸಿದೆ. ಅವರಾಗ ಆಗಷ್ಟೇ ಮುಗಿಸಿದ ಪಂಜಿಕಲ್ಲಿನ 'ಶತಸೇತು'ವೆಯ ಫೈಲನ್ನು ಮುಚ್ಚುತ್ತಿದ್ದರು! ನಾಡಿನ ದೊರೆಯಿಂದ ಲೋಕಾರ್ಪಣೆಗಾಗಿ ಸಿದ್ಧತೆ ನಡೆಯುತ್ತಿತ್ತು.

ನೂರನೇ ಸೇತುವೆ ಅಂದಾಗ ಒಂದನೇ ಸೇತುವೆಯನ್ನು ಮರೆಯಲುಂಟೇ? ಒಂದು 'ನೂರು' ಆಗಲು ಬರೋಬ್ಬರಿ ಇಪ್ಪತ್ತೆರಡು ವರುಷಗಳ ಅವಿರತ ದುಡಿಮೆ. ಒಂದೊಂದು ಸೇತುವೆಯು ಹೊಸ ಹೊಸ ಅನುಭವಗಳನ್ನು ಕಟ್ಟಿಕೊಡುತ್ತಿತ್ತು. ಅದರ ಹಿಂದೆ ರಾಜಕೀಯ ವ್ಯವಸ್ಥೆಯ ಗಬ್ಬಿನ ಅನುಭವಗಳಿವೆ. ಸಾಮಾಜಿಕ ಬದುಕಿನ ಮಧ್ಯದಿಂದೆದ್ದ ಸತ್ಯದ ಅನುಭವಗಳಿವೆ. ಮೊಗೆದಷ್ಟೂ ರೋಚಕ.

ಶಿವಪುರದಂತೆ ಅಸಂಖ್ಯಾತ ಹಳ್ಳಿಗಳಿಂದು ಕತ್ತಲೆಯ ಕೂಪದಲ್ಲಿವೆ. 'ಅಭಿವೃದ್ಧಿ' ಎಂಬುದು ಕನಸು. ಮೂಲಭೂತ ಆವಶ್ಯತೆಗಳಿಗಾಗಿ ಪರದಾಟ. ಮಳೆಗಾಲದಲ್ಲಂತೂ ಪೂರ್ತಿ ದ್ವೀಪ. ಇಂತಹ ಹಳ್ಳಿಗಳಿಂದು ಗಿರೀಶ ಭಾರದ್ವಾಜರನ್ನು ಜ್ಞಾಪಿಸಿಕೊಳ್ಳುತ್ತವೆ. ಅವರ ಮಿದುಳ ಮರಿಯಾದ ತೂಗುಸೇತುವೆ ದಡ ದಡಗಳನ್ನು ಬೆಸೆದಿವೆ. ಮನ-ಮನಗಳನ್ನು ಒಗ್ಗೂಡಿಸಿವೆ. ಹೊಸ ಬದುಕಿಗೆ ದಾರಿ ಮಾಡಿಕೊಟ್ಟಿದೆ.

ನದಿಯ ಆಚೀಚೆ ದಡದಲ್ಲಿ ಎರಡು ಪೈಲಾನ್(ಗೋಪುರ)ಗಳು, ಇವಕ್ಕೆ ಬಂಧಿಸಲ್ಪಟ್ಟ ರೋಪ್ಗಳು ಸೇತುವೆಗೆ ಮೂಲಾಧಾರ. ಎರಡೂ ತುದಿಯಿರುವುದು ದಡದಾಚೆಗಿನ ಕಾಂಕ್ರಿಟ್ ರೂಪಿತ 'ಆಂಕರ್'ನಲ್ಲಿ. ಕೇಬಲ್ಗಳಿಗೆ ಸಸ್ಪೆಂಡರ್ಸ್ ತೂಗಿಸಿ, ಅದಕ್ಕೆ ಚ್ಯಾನೆಲ್ನ್ನು ಬಂಧಿಸುತ್ತಾರೆ. ಇದರ ಮೇಲೆ ಫೆರೋಸಿಮೆಂಟ್ ಸ್ಲಾಬ್ಗಳನ್ನು ಜೋಡಿಸಿದರೆ ತೂಗುಸೇತುವೆ ಸಿದ್ಧ.

'ಸುಳ್ಯ ಸನಿಹದ ಅಮಚೂರು ಶ್ರೀಧರ ಭಟ್ಟರು ಮಳೆಗಾಲದಲ್ಲಿ ಅತ್ತಿತ್ತ ಸಂಚರಿಸಲು ಮರದಿಂದ ಮರಕ್ಕೆ ಕೇಬಲ್ಗಳನ್ನು ಜೋಡಿಸಿ ಸೇತುವೆ (ಪಾಲ, ಕೈತಾಂಗು) ರಚಿಸಿದ್ದರು. ಇದು ಭವಿಷ್ಯದ ನನ್ನೆಲ್ಲಾ ಸೇತುವೆಗಳಿಗೆ ಮೂಲ' ಎನ್ನುತ್ತಾರೆ. ಆರಂಭದ ದಿನಗಳಲ್ಲಿ ತಾಂತ್ರಿಕ ಕಾಲೇಜುಗಳ ಭೇಟಿ, ವರಿಷ್ಠರೊಂದಿಗೆ ಸಂಪರ್ಕ. ಪುಸ್ತಕಗಳ ಅಧ್ಯಯನ, ತಾಂತ್ರಿಕಾಂಶಗಳ ಅಭ್ಯಾಸಗಳ ಪರಿಣಾಮವಾಗಿ ಊರಿನ ಸನಿಹದ ಅರಂಬೂರು ತೂಗುಸೇತುವೆ ರಚನೆಯಾಯಿತು. ಈ ಯಶಸ್ಸನ್ನು ನೂರನೇ ಸೇತುವೆಯ ಖುಷಿಯಲ್ಲಿದ್ದ ಸಂದರ್ಭದಲ್ಲಿ ಗಿರೀಶರು ನೆನಪಿಸಿಕೊಂಡರು.

ಒಂದು ಸೇತುವೆ ಬಿಡಿ, ಚಿಕ್ಕ 'ಮೋರಿ' ರಚನೆಯಾಗಲು ಎಷ್ಟು ಸಮಯ ಬೇಕು? ಮಾಣಿಯಿಂದ ಮಡಿಕೇರಿ ತನಕ ಸಂಚರಿಸಿದರೆ ಸತ್ಯ ಗೋಚರಿಸುತ್ತದೆ. ಇನ್ನೂ ಮುಗಿಯದ ಅರ್ಧಂಬರ್ಧ ಸ್ಮಾರಕಗಳು ಎಷ್ಟು ಬೇಕು? ಸರಕಾರ ನಂಬಿದ 'ಪ್ರಾಮಾಣಿಕ ಗುತ್ತಿಗೆದಾರ' ಸಿಕ್ಕರೆ ಅಬ್ಬಬ್ಬಾ ಅಂದರೂ ನಾಲ್ಕೈದು ವರುಷ ಬೇಕೇ ಬೇಕು.

ವರುಷವಲ್ಲ, ಮೂರೇ ತಿಂಗಳು

ಗಿರೀಶರ ತೂಗುಸೇತುವೆ ನಿರ್ಮಾಣಕ್ಕೆ ವರುಷವಲ್ಲ, ಕೇವಲ ಮೂರು ತಿಂಗಳು. ಕಾಂಕ್ರಿಟ್ ಸೇತುವೆ ವೆಚ್ಚದ ಐದನೇ ಒಂದು ಪಾಲು. ಸಕಾಲಕ್ಕೆ ಮೊತ್ತ ಸಿಕ್ಕರೆ ಮಾತ್ರ! ಸೇತುವೆ ಪೂರ್ತಿಯಾದರೂ ಹಣ ನೀಡದೆ ಸತಾಯಿಸಿದ, 'ಇಂದು-ನಾಳೆ' ಎಂದು ಗೋಳುಹೊಯ್ಸಿದ ಅಧಿಕಾರಿಗಳ ಪರಿಚಯ ಗಿರೀಶರಿಗೆ ಮಾಸಿಲ್ಲ!

'ಸರಕಾರದ ಹಣವಲ್ವಾ, ನಾಳೆ ಸಿಕ್ಕೇ ಸಿಗುತ್ತದೆ,' ಗಿರೀಶರ ಆರಂಭದ ದಿನಗಳ ನಂಬುಗೆಯನ್ನು 'ಯಶಸ್ಸಿಯಾಗಿ' ತಳಮಟ್ಟದ ಆಡಳಿತ ವ್ಯವಸ್ಥೆಗಳು ಹುಸಿಮಾಡಿವೆ. 'ತೊಂದರೆಯಿಲ್ಲ, ಕೊಟ್ಟಾರು' ಎನ್ನುತ್ತಾ ಸಾಲ ಮಾಡಿ, ಸೇತುವೆಗೆ ಹಣವನ್ನು ಸುರಿದು, ಬಳಿಕ ಕೈಕೈ ಹಿಸುಕಿಕೊಂಡ ಆ ದಿನಗಳು ಇನ್ನೂ ಹಸಿಯಾಗಿವೆ. ಅಲ್ಲಿಂದೀಚೆಗೆ ರೊಕ್ಕ ಸಿಕ್ಕರೆ ಮಾತ್ರ ಕೆಲಸ.

ಖಾಸಗಿ ಸಹಭಾಗಿತ್ವದಲ್ಲಿ ಎಂದೂ ಕಹಿ ಅನುಭವ ಆದದ್ದಿಲ್ಲ ಎನ್ನುತ್ತಾರೆ. 'ನಾನು ಸೇತುವೆಯ ಕಂಟ್ರಾಕ್ಟರ್ ಎಂದು ಎಷ್ಟೋ ಜನರಲ್ಲಿ ತಪ್ಪು ಕಲ್ಪನೆಯಿದೆ. ಹಾಗಲ್ಲ. ನನ್ನಲ್ಲಿ ಸೇತುವೆ ಪರಿಕಲ್ಪನೆಯಿದೆ. ಹಣ ಕೊಟ್ಟರೆ ಮಾಡಿಕೊಡುತ್ತೇನೆ. ಅಷ್ಟೇ'.

ಕೇರಳದಲ್ಲಿ ಜನಬೆಂಬಲ ಹೆಚ್ಚಂತೆ. ಕೆಲಸ ಆಗುವಲ್ಲೆಲ್ಲಾ ಕುತೂಹಲಿಗರ ದಂಡು ಅಧಿಕ. ಸೇತುವೆ ಕೆಲಸ ಪೂರ್ತಿಯಾಗುವಾಗ ಹಲವರು ಸ್ನೇಹಿತರಾಗಿಬಿಡುತ್ತಾರೆ. ಆದರೆ ಕನ್ನಾಡಿನಲ್ಲಿ..? ಒಂದೊಂದು ಸೇತುವೆ ಆಗುತ್ತಿದ್ದಂತೆ, ಇಲ್ಲಿ ನೈತಿಕತೆಯ ಒಂದೊಂದೇ ಮೆಟ್ಟಿಲು ಕುಸಿಯುವ ಅನುಭವವಾಗುತ್ತದೆ!
ಶತಕ ಸಂಭ್ರಮದ ಗಿರೀಶ್ ಭಾರದ್ವಾಜರ ಖುಷಿಯ ಹಿಂದೆ ಮೂವತ್ತು ಮಂದಿಯ 'ಸೇನಾ ಪಡೆ'ಯ ಶ್ರಮವಿದೆ. ಅಹೋರಾತ್ರಿ ದುಡಿತ. 'ಯಜಮಾನ ಇವರನ್ನು ನಂಬಿದ್ದಾರೆ, ಇವರು ಯಜಮಾನರನ್ನು ನಂಬಿದ್ದಾರೆ,' ಇದೇ ಯಶಸ್ಸಿನ ಗುಟ್ಟು. ಒಮ್ಮೆ ಮನೆಬಿಟ್ಟರೆ ವಾರವಲ್ಲ, ತಿಂಗಳುಗಟ್ಟಲೆ ಒಂದೆಡೆ ಟೆಂಟ್. ಅಲ್ಲೇ ಊಟ, ವಸತಿ. ಸಹಾಯಕರಿಗೆ ಟೆಂಟ್ನಲ್ಲಿ ವ್ಯವಸ್ಥೆ ಮಾಡಿಕೊಟ್ಟು, ತಾನು ಹತ್ತಿರದ ನಗರದ ಐಷರಾಮಿ ಹೋಟೆಲಿನಲ್ಲಿ ವಿಶ್ರಾಂತಿ ಮಾಡಬಹುದಿತ್ತು. ಆದರೆ ಗಿರೀಶ್ ಎಂದೂ ಆ ತಪ್ಪು ಮಾಡಿಲ್ಲ. 'ದನಿ-ಆಳು' ಸಂಬಂಧ ಇಲ್ಲಿಲ್ಲ. 'ನಮ್ಮ ಸಮಾಜದ ಮಧ್ಯೆ ಇರುವ ಎಲ್ಲಾ ಸಮಸ್ಯೆಗಳು ಈ ರೀತಿಯ ಅಂತರದಿಂದ ಉದ್ಭವವಾಗುತ್ತದೆ' ಎನ್ನುತ್ತಾರೆ.

ಕಳೆದ ವಾರವಷ್ಟೇ ಫೋನಿಸಿದ್ದೆ. ಕುದುರೆಮುಖದ ಹತ್ತಿರ ಸೇತುವೆ ಕೆಲಸ ನಡೆಯುತ್ತಿತ್ತು. 'ನೂರ ಮೂರನೇ ಸೇತುವೆ ನಡೀತಿದೆ, ನೋಡಲು ಬರ್ತೀರಾ' ಅಂತ ಆಹ್ವಾನಿಸಿದರು. ಏನೇ ಸಿಹಿ-ಕಹಿ ಬಂದರೂ ಹೊಸ ಸೇತುವೆಗೆ ಅಡಿಗಲ್ಲನ್ನು ಹಾಕುವಾಗ ಹಿಂದಿನ ಎಲ್ಲವನ್ನೂ ಮರೆತುಬಿಡುತ್ತಾರೆ. ಅದು ಮುಗಿಯುತಾ ಬರುವಾಗ ಮತ್ತೊಂದಕ್ಕೆ ನೀಲನಕ್ಷೆ ತಯಾರಾಗಿ ಬಿಡುತ್ತದೆ.

ನೀರಿಗೆ ಅಡ್ಡವಾಗಿ ಸೇತುವೆ. ನೀರು ಹರಿಯುತ್ತಾ ಇರುತ್ತದೆ. ಜೀವನವೂ ಹಾಗೆ. ಗಿರೀಶರ ಸೇತುವೆ ನಿರ್ಮಾಣವೂ ಹಾಗೆ. ಒಂದು ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾಯಿತೆಂದರೆ ಹಳ್ಳಿಯು ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಂತೆ. ಈ ಜೀವಮಾನದಲ್ಲಿ ಸೇತುವೆ ಆಗದ ಎಷ್ಟೋ ಹಳ್ಳಿಗಳಲ್ಲಿ 'ಅ' ಅಕ್ಷರದೊಳಗೇ ಸುತ್ತುತ್ತಿದ್ದ ಕಂದಮ್ಮಗಳು 'ಎಬಿಸಿಡಿ' ಕಲಿತದ್ದಿದ್ದರೆ ಅದು ಗಿರೀಶರಿಂದ. ಶತಸೇತುವಿನ 'ಅಧಿಪತಿ'ಗೆ ಅಭಿನಂದನೆ. ಅಭಿವಂದನೆ.

ಹಾ.. ಮರೆತುಬಿಟ್ಟೆ. 'ಶಿವಪುರದ ಸೇತುವೆ ಫೈಲ್ ಏನಾಯಿತು?' ಸಾರ್. ಆ ಕಡೆಯಿಂದ ಗಿರೀಶರ ಉತ್ತರ. 'ಆರು ವರುಷದ ಹಿಂದೆ ಯೋಜನೆ ಮಾಡಿಕೊಟ್ಟಿದ್ದೆ. ಈಗ ಪುನಃ ನವೀಕರಣ ಮಾಡಿ ಕೊಟ್ಟಿದ್ದೇನೆ. ಫೈಲ್ ಚಾಲೂ ಆಗುವುದಕ್ಕೆ ಶುರುವಾಗಿದೆಯಂತೆ. ಬಹುಬೇಗನೆ ಸೇತುವೆ ಆಗುವ ಲಕ್ಷಣ ಕಾಣುತ್ತದೆ' ಎಂದರು. ಅಬ್ಬಾ.. ಅಂತೂ ಶಿವಪುರದ ಸಮಸ್ಯೆಯ ಮೋಕ್ಷಕ್ಕಿನ್ನು ಇಳಿಲೆಕ್ಕ ಅಂತ ಊಹಿಸಬಹುದೋ ಏನೋ.

'ಬನ್ನಿ, ತೆಕ್ಕೊಳ್ಳಿ.. ಹತ್ತು ರೂಪಾಯಿಗೆ ಪುಸ್ತಕ'!

ಆಳ್ವಾಸ್ ನುಡಿಸಿರಿಗೆ ನಿನ್ನೆ (13-11-2011) ತೆರೆ. ಕನ್ನಡ ನಾಡು-ನುಡಿಯ ನಿಜಾರ್ಥದ ಹಬ್ಬ. ಪುಸ್ತಕ ಮಳಿಗೆಗಳನ್ನು ಸುತ್ತುತ್ತಿದ್ದೆ. ಅಬ್ಬಾ.. ಒಂದೇ ಕಡೆ ಎಷ್ಟೊಂದು ಪುಸ್ತಕಗಳು. ಆಯ್ಕೆಗೆ ಉತ್ತಮ ಅವಕಾಶ.

ಪುಸ್ತಕ ಖರೀದಿಸಲೆಂದೇ ದೂರದೂರಿನಿಂದ ಆಗಮಿಸಿದ ಅಕ್ಷರ ಪ್ರಿಯರು ಮುಖತಃ ಸಿಕ್ಕಾಗಲೆಲ್ಲಾ, 'ವಾ.. ಎಷ್ಟೊತ್ತಿಗೆ ಬಂದ್ರಿ.. ಇವತ್ತು ಇರ್ತೀರಾ' ಎಂಬ ಉಭಯಕುಶಲೋಪರಿ. 'ಅಬ್ಬಾ.. ಎಷ್ಟೋ ಸಮಯದಿಂದ ಹುಡುಕುತ್ತಿದ್ದ ಪುಸ್ತಕ ಸಿಕ್ತು,' ಎಂಬ ಖುಷಿ. 'ಐದು ಸಾವಿರದ್ದು ತೆಕ್ಕೊಂಡೆ. ಇನ್ನೂ ಬೇಕಿತ್ತು. ಹಣ ತಂದಿಲ್ಲ', ಎಂಬ ನಿರಾಶೆ ಪ್ರಕಟಿತ ಸಂತೋಷ. 'ನೀವು ಎಷ್ಟು ರೂಪಾಯಿಯದ್ದು ತೆಕ್ಕೊಂಡ್ರಿ', ಮರುಪ್ರಶ್ನೆ. 'ವಾ.. ಸೂಪರ್.. ಮೋರ್ ಬುಕ್ಸ್.. ವೆರೈಟಿ ಟೈಟಲ್..', ಕನ್ನಡ ಹಬ್ಬದಲ್ಲಿ ಆಂಗ್ಲದಲ್ಲೇ ಹಠದಿಂದ ಮಾತನಾಡುವ ಟಿಪ್ಟಾಪ್ ಮಂದಿ... ಹೀಗೆ ಒಂದೇ ಸೂರಿನಡಿ ಹಲವು ರುಚಿಯ, ಆಸಕ್ತಿಯ ಸಾಕಾರ.

'ಬನ್ನಿ ಸಾರ್, ಕೇವಲ ಹತ್ತು ರೂಪಾಯಿಗೆ ಪುಸ್ತಕ. ಯಾವುದು ಬೇಕಾದ್ರೂ ತೆಕ್ಕೊಳ್ಳಿ,' ಮಳಿಗೆಯೊಂದರಿಂದ ಕೂಗು. ಒಂದೆಡೆ ಹಳೆ ಪುಸ್ತಕಗಳನ್ನು ಪೇರಿಸಿಟ್ಟಿದ್ದರು. ಮತ್ತೊಂದೆಡೆ ಹುಡುಕುವ ಭರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಶಿ. ತರಕಾರಿಯಂತೆ. 'ಎಂತದ್ದೋ ಹುಡುಕುತ್ತಾರೆ ಸಾರ್, ಹತ್ತು ರೂಪಾಯಿಯಲ್ವಾ. ಒಂದಾದ್ರೂ ಪುಸ್ತಕ ಒಯ್ದರೆ ಇಷ್ಟು ಹೊತ್ತಿಗೆ ಪುಸ್ತಕವೆಲ್ಲಾ ಖಾಲಿಯಾಗಿರುತ್ತಿತ್ತು,' ಹುಬ್ಬು ಗಂಟಿಕ್ಕಿದ ನಿಟ್ಟುಸಿರು.

ಪುಸ್ತಕಗಳಲ್ಲಿ ಕಾದಂಬರಿಗಳದ್ದು ಸಿಂಹಪಾಲು. ಅವರಿಗೆ ಹೊಟ್ಟೆಪಾಡೋ ಇನ್ನೊಂದೋ.. ಹತ್ತು ರೂಪಾಯಿಗೆ ಕೊಡಲು ಮುಂದಾದ ಆ ವ್ಯಾಪಾರಿಯ ಕುರಿತು ಮರುಕವಾದುದಲ್ಲ, ಗೌರವ ಉಂಟಾಯಿತು. 'ಹೌದು ಸಾರ್, ಹೊಸ ಪುಸ್ತಕ ಅಂದ್ರೆ ದರ ಜಾಸ್ತಿ. ಒಂದೊಂದು ಕಾದಂಬರಿಯ ಬೆಲೆ ನೂರು ರೂಪಾಯಿಯಿಂದ ಆರಂಭವಾಗುತ್ತೆ. ಐನೂರೋ, ಆರುನೂರು ತನಕ ಇದೆ. ಇಲ್ಲಿ ಹೊಸ ಕಾದಂಬರಿಗಳು ಸಿಗದಿದ್ದರೂ ಮಾರುಕಟ್ಟೆಯಲ್ಲಿ ಸಿಗದವುಗಳು ಸಿಗುತ್ತೆ,' ಎನ್ನುತ್ತಾ, 'ಹತ್ತು ರೂಪಾಯಿಗೆ ಪುಸ್ತಕ, ಬನ್ನಿ.' ಆತನ ಮಾಮೂಲಿ ವೃತ್ತಿ ಖಯಾಲಿಗೆ ಬಿದ್ದ.

ಹಳೆಯ ಕಾದಂಬರಿಗಳು, ವೈಚಾರಿಕ ಪುಸ್ತಕಗಳು 'ಕಡಿಮೆ ಬೆಲೆ' ಎಂಬ ಕಾರಣಕ್ಕೆ ಸಾಕಷ್ಟು ಅಕ್ಷರ ಪ್ರಿಯರ ಮನೆ ತಲುಪಿವೆ. 'ಒಳ್ಳೆಯ ಯೋಚನೆ ಅಲ್ವಾ, ನನ್ನಲ್ಲೂ ತುಂಬಾ ಪುಸ್ತಕ ಇದೆ. ಒಮ್ಮೆ ಓದಿ ಆಗಿದೆ. ಇನ್ನಾರೂ ಓದುವವರಿಲ್ಲ. ಮಗಳು ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದಾಳೆ. ಮಗ ಈಗಷ್ಟೇ ಇಂಜಿನಿಯರ್. ಹಾಗಾಗಿ ಇದ್ದ ಪುಸ್ತಕಗಳನ್ನು ಇಂತಹ ಮೇಳದಲ್ಲಿ ಕಡಿಮೆ ಬೆಲೆಗೆ ಮಾರಿದರೆ ಹೇಗೆ,' ಜತೆಗಿದ್ದ ಶಂಕರ ವಿನೋದಕ್ಕೆ ಹೇಳಿದರೂ, ಕಾಲದ ವಿಷಾದ ಅದರಲ್ಲಿದೆ.

ಮನೆಯಲ್ಲಿ ಚಿಕ್ಕದಾದರೂ ಪುಸ್ತಕ ಭಂಡಾರ ಬೇಕು ಎಂದು ಊರು ಸೂರಿನಲ್ಲಿ ಪ್ರತಿಪಾದಿಸಿದ್ದೆ. ಪುಸ್ತಕ ಭಂಡಾರದ ಬಾಗಿಲನ್ನು ತೆಗೆಯಲು ಹರಸಾಹಸ ಪಡುವ ದಿನಮಾನಗಳಿವು. ಶಂಕರನ ಮಾತನ್ನು 'ಶೂನ್ಯವೇಳೆ'ಯಲ್ಲಿ ಯೋಚಿಸಲು ಇರುವುದಲ್ಲ, ಖಂಡಿತ. ಮಗನಿಗೆ, ಮಗಳಿಗೆ ಬೇಡ. ತನಗೆ ವಯಸ್ಸಾಯಿತು. ಇದ್ದ ಪುಸ್ತಕಗಳು ಗೆದ್ದಲು ನುಂಗುವ ಮೊದಲು ಆಸಕ್ತರ ಕೈಗೆ ಇಡುವುದೇ ಪುಣ್ಯದ ಕೆಲಸ ಎಂಬ ನಿಧರ್ಾರ ಶಂಕರನ ಮಾತಿನ ಹಿಂದಿನ ದನಿ.

ಅವನ ವಿಚಾರ ಏನಿದೆಯೋ, ಇಳಿ ಬಿಸಿರಕ್ತದ ಬಹುತೇಕರ ವಿಚಾರವೂ ಭಿನ್ನವಾಗಿಲ್ಲ. 'ಹೊಸ ಪುಸ್ತಕ ಬಿಡಿ, ಇರುವುದನ್ನು ಏನು ಮಾಡುವುದು' ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಪ್ರಶ್ನೆ ಕೇಳಿದವನನ್ನು ಜಾಣ್ಮೆಯ ಉತ್ತರದಿಂದ ಬಾಯಿ ಮುಚ್ಚಿಸಬಹುದು. ಆದು ಸಮಸ್ಯೆಗೆ ಪರಿಹಾರವಲ್ಲ.

'ಮಕ್ಕಳಲ್ಲಿ ಓದುವ ಪ್ರವೃತ್ತಿ ಇಲ್ಲ,' ಎಂದು ಗೊಣಗುವ ಹೆತ್ತವರಾದ ನಾವು ಎಷ್ಟು ಓದುತ್ತೇವೆ ಹೇಳಿ? ಶಾಲೆಗಳಲ್ಲಿ ಓದುವ 'ಹುಚ್ಚನ್ನು' ಹಿಡಿಸುವ ಎಷ್ಟು ವ್ಯವಸ್ಥೆಗಳಿವೆ? ಪುಸ್ತಕದ ಕಪಾಟಿನ ಬೀಗವನ್ನು ತೆರೆಯದ ಎಷ್ಟು ಶಾಲೆಗಳು ಬೇಕು? ಅಧ್ಯಾಪಕರಿಗೆ ಓದುವ ಗೀಳು ಇದೆಯೇ? ಸಮಾರಂಭದಲ್ಲಿ ಹಾರದ ಬದಲು ಪುಸ್ತಕವನ್ನು ನೀಡಿದಾಗ ಮುಖ ಯಾಕೆ ಹುಳಿಹಿಂಡಿದಂತಾಗುತ್ತದೆ?.. ಹೀಗೆ ಪ್ರಶ್ನೆಗಳನ್ನು ಒಂದರ ಕೆಳಗೆ ಇನ್ನೊಂದನ್ನು ಬರೆಯುತ್ತಾ ಹೋದಂತೆ ಪುಟ ಭರ್ತಿಯಾಗುತ್ತದೆ. ದಿಗಿಲಾಗುತ್ತದೆ.

ಬಾಲ್ಯದಿಂದಲೇ ಓದುವ ಗೀಳು ಹುಟ್ಟಿದರೆ, ಪ್ರೌಢರಾದಾಗ ಕೊನೇಪಕ್ಷ ದಿನಪತ್ರಿಕೆಯನ್ನು ಓದುವಷ್ಟಾದರೂ ರೂಪುಗೊಳ್ಳಬಹುದು. 'ಯಾರಿಗೆ ಪುರುಸೊತ್ತುಂಟು ಮಾರಾಯ್ರೆ. ಪೇಪರ್ ಓದಲೇ ಸಮಯವಿಲ್ಲ' ಎನ್ನುತ್ತಾ ಟಿವಿ ಮುಂದೆ ಜಪ್ಪೆಂದು ಕುಳಿತುಕೊಳ್ಳುತ್ತೇವಲ್ಲಾ. ನಾವೇ ಹೀಗಿರುತ್ತಾ ನಮ್ಮ ಮಕ್ಕಳು ಎಷ್ಟು ಪುಸ್ತಕ ಓದಬಹುದು ಹೇಳಿ?

'ನನ್ನ ಮಗನಿಗೆ ಟಿವಿ ಅಂದರೆ ಆಯಿತು' ಎಂದು ಬೀಗುತ್ತೇವೆ. 'ಅವನಿಗೆ ಶಾಲೆ ಪುಸ್ತಕ ಓದಿಯೇ ಆಗುವುದಿಲ್ಲ. ಮತ್ತೆ ಬೇರೆ ಪುಸ್ತಕ ಓದಲು ಎಲ್ಲಿ ಸಮಯವಿದೆ, ಪಾಪ' ಎಂದು ಮಕ್ಕಳ ಎದುರೇ ಪ್ರಶಂಸಿಸುತ್ತೇವೆ. 'ಏನೋ.. ಶಾಲೆ ಪುಸ್ತಕ ಓದಿಯಾಯಿತಾ.. ಅದನ್ನು ಬಿಟ್ಟು ಬೇರೆ ಪುಸ್ತಕ ಓದುತ್ತಿಯೋ' ಎಂದು ಗದರುವ ಅಮ್ಮ. ಮಕ್ಕಳ ಬೌದ್ಧಿಕ ವೃದ್ಧಿಗೆ ಮನೆಮನೆಯಲ್ಲಿ ಕಾವಲು ಪಡೆ.
'ಇಡೀ ದಿನ ಶಾಲೆ ಪುಸ್ತಕವನ್ನು ಎಷ್ಟೂಂತ ಓದುತ್ತಿಯೋ.. ಒಂದರ್ಧ ಗಂಟೆ ತೇಜಸ್ವಿಯವರ ಪರಿಸರ ಕತೆ ಓದೂ' ಎಂದು ಪ್ರೀತಿಯಿಂದ, ಅಭಿಮಾನದಿಂದ ಮಗನ/ಮಗಳ ಕೈಗೆ ಪುಸ್ತಕವನ್ನು ಕೊಡುವ ಅಮ್ಮ/ಅಪ್ಪನನ್ನು ತೋರಿಸ್ತೀರಾ?
ಯಾವಾಗ ಮಕ್ಕಳ ಕೈಗೆ ಪುಸ್ತಕವನ್ನು ಕೊಡುವ ಅಪ್ಪನೋ, ಅಮ್ಮನೋ ರೂಪುಗೊಳ್ಳುತ್ತಾರೋ, ಆ ಮನೆಯಲ್ಲಿ ಪುಸ್ತಕ ಸಂಸ್ಕೃತಿ ಬೆಳೆಯುತ್ತದೆ. ಅಕ್ಷರ ಗೌರವ ಉಂಟಾಗುತ್ತದೆ. ಒಂದೊಂದೇ ಪುಸ್ತಕ ಸೇರಿ ಚಿಕ್ಕ ಗ್ರಂಥಾಲಯವಾದಾಗ ಅಭಿಮಾನವಾಗುತ್ತದೆ. ಆಗ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಿಗೆ ಸುತ್ತಾಡಲು ಅರ್ಹತೆ ಬರುತ್ತದೆ! ಹೀಗಾದಾಗ ಶಂಕರನಂತಹ 'ಅಕ್ಷರಪ್ರೀತಿಯ ಸಾಹಿತಿ'ಗೆ ಬಂದ ವಿಷಾದದ ಕ್ಷಣಿಕ ಎಳೆ ನಮ್ಮ ಭವಿಷ್ಯದಲ್ಲಿ ಖಂಡಿತಾ ಬಾರದು, ಬರಬಾರದು. ಬರಲಾರದು.

Tuesday, November 1, 2011

ಕದಿರು: ಕಾಲೇಜು ಮಟ್ಟದ ಕನ್ನಡ ಲೇಖನ ಸ್ಪರ್ಧೆ


ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಯುಕ್ತ ಆಶ್ರಯದ ಮಹತ್ವದ ಸ್ಪರ್ಧೆ.

ಕಣಜ-www.kanaja.in ಇದು ಕರ್ನಾಟಕ ಜ್ಞಾನ ಆಯೋಗವು ರೂಪಿಸಿ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ – ಬೆಂಗಳೂರು ಇವರು ಜಾರಿಗೊಳಿಸುತ್ತಿರುವ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಕನ್ನಡ, ಕೃಷಿ, ವಿಜ್ಞಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾವಿರಾರು ಲೇಖನಗಳನ್ನು ಪ್ರಕಟಿಸಿರುವ ಕಣಜವು ಇದೀಗ ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಬರವಣಿಗೆಯನ್ನು ಪ್ರೋತ್ಸಾಹಿಸಲು ಈ ಸ್ಪರ್ಧೆಯನ್ನು ಏರ್ಪಡಿಸಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಡನೆ ನಡೆಸುತ್ತಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನಲ್ಲಿ ಇರದ 17 ರಿಂದ 20 ವಯಸ್ಸಿನ ಯುವಕರಿಗೆ ಅವಕಾಶವಿದೆ.

* ಲೇಖನ ತಲುಪಲು ಕಡೇ ದಿನಾಂಕ 14 ನವೆಂಬರ್ 2011 * ಪ್ರತೀ ಲೇಖನದ ಪದಮಿತಿ : ಗರಿಷ್ಠ 1000 ಪದಗಳು *
ರಾಜ್ಯ ಮಟ್ಟದ ನಗದು ಬಹುಮಾನಗಳು * ಮೊದಲ ಬಹುಮಾನ : ರೂ. 40,000 * ಎರಡನೇ ಬಹುಮಾನ : ರೂ. 30,000
·ಮೂರನೇ ಬಹುಮಾನ :ರೂ. 25,000 * ಜಿಲ್ಲಾ ಮಟ್ಟದ ನಗದು ಬಹುಮಾನಗಳು * ಮೊದಲ ಬಹುಮಾನ : ರೂ. 5,000 * ಎರಡನೇ ಬಹುಮಾನ : ರೂ. 3,000 * ಮೂರನೇ ಬಹುಮಾನ : ರೂ. 2,000 * ಜೊತೆಗೆ, ಜಿಲ್ಲಾ ಮಟ್ಟದಲ್ಲಿ ಹತ್ತು ಪ್ರಶಂಸಾ ಬಹುಮಾನಗಳು ಮತ್ತು ವಿಶೇಷ ಪುಸ್ತಕಗಳ ಕೊಡುಗೆ

ನೀವು ಯಾವ ವಿಷಯಗಳ ಬಗ್ಗೆ ಬರೆಯಬಹುದು?

ಸಾಂಸ್ಕೃತಿಕ ಪರಂಪರೆ – ಸಂಪ್ರದಾಯ, ಜಾನಪದ ಆಚರಣೆಗಳು. ಕೃಷಿಯಲ್ಲಿ ಹೊಸ ವಿಧಾನಗಳು, ರೈತರ, ವಿಷಯತಜ್ಞರ, ಹಿರಿಯರ ಪಾರಂಪರಿಕ ಅನುಭವಗಳು, ಸಂದರ್ಶನ ಇತ್ಯಾದಿ – ನಿಮ್ಮ ಊರಿನ ವಿಶೇಷ ಸಂಗತಿ ಕುರಿತ ಲೇಖನ. ಲೇಖನದ ಜೊತೆಗೆ ಸೂಕ್ತ ಛಾಯಾಚಿತ್ರಗಳನ್ನೂ ತೆಗೆದು ಕಳಿಸಿಕೊಡಿ.

ನಿಮ್ಮ ಕಾಲೇಜಿನಲ್ಲಿ ನಡೆಸಿದ ವಿಶೇಷ (ಹೆಚ್ಚು ಪ್ರಚಲಿತದಲ್ಲಿ ಇರದ ಸಂಗತಿಗಳು) ವಿಜ್ಞಾನ ಪ್ರಯೋಗಗಳು, ಪರಿಸರ ಸಮೀಕ್ಷೆಗಳು, ಅಪರೂಪದ ಪ್ರೇಕ್ಷಣೀಯ ತಾಣ ಇತ್ಯಾದಿಗಳ ಬಗೆಗೆ ವಿವರವಾದ ಲೇಖನ. ನೀವು ಹುಡುಕಿದ ಯಾವುದೇ ಹೊಸ ಸಂಗತಿಯ ಬಗ್ಗೆ ಮಾಹಿತಿಪೂರ್ಣವಾದ ಲೇಖನ.

ಯಾವುದು ಬೇಡ?

ಸಾಮಾಜಿಕ ಸಮಸ್ಯೆಗಳು ಮತ್ತಿತರ ವಿಷಯಗಳ ಬಗ್ಗೆ ಮಾಡಿದ ಚರ್ಚಾಸ್ಪರ್ಧೆಯ ಮಾಹಿತಿ ಅಥವಾ ನಿಮ್ಮ ಕಾಲೇಜಿಗಾಗಿ, ಸ್ಪರ್ಧೆಗಾಗಿ ಬರೆದ ಪ್ರಬಂಧಗಳು ಬೇಡ. ನಿಮ್ಮ ಅಭಿಪ್ರಾಯಗಳು, ಕನಸುಗಳು, ವಿಚಾರಗಳು ತುಂಬಿರುವ ಲೇಖನಗಳು ಬೇಡ; `ಕಣಜ’ಕ್ಕೆ ಬೇಕಿರುವುದು ಕೇವಲ ಮಾಹಿತಿಯುಕ್ತ, ಜ್ಞಾನ ಕೇಂದ್ರಿತ ಲೇಖನಗಳು. ದಯವಿಟ್ಟು ಬೇರೆ ಪುಸ್ತಕ, ಮಾಹಿತಿ ಮೂಲಗಳಿಂದ ನಕಲು ಮಾಡಬೇಡಿ.

ನಿಯಮಗಳು

ನಿಮ್ಮ ಮೊದಲ ಲೇಖನದ ಜೊತೆಗೆ ಕಾಲೇಜಿನ ಮುಖ್ಯಸ್ಥರಿಂದ ವಿದ್ಯಾರ್ಥಿ ದೃಢೀಕರಣ ಪತ್ರವನ್ನು ಲಗತ್ತಿಸಿ ಕಳಿಸಬೇಕು.
ನೀವು ಕಳಿಸಿದ ಯಾವುದೇ ಲೇಖನವನ್ನು ಸೂಕ್ತವಾಗಿ ಸಂಪಾದಿಸಿ ಪ್ರಕಟಿಸುವ ಅಥವಾ ತಿರಸ್ಕರಿಸುವ ಹಕ್ಕು `ಕಣಜ’ ಸಂಪಾದಕೀಯ ತಂಡಕ್ಕೆ ಇರುತ್ತದೆ. ಪ್ರತೀ ವಿದ್ಯಾರ್ಥಿಯು ಗರಿಷ್ಠ ಎರಡು ಲೇಖನಗಳನ್ನು ಕಳಿಸಬಹುದು.

ಲೇಖನ ಕಳಿಸಬೇಕಾದ ವಿಳಾಸ

ಸಲಹಾ ಸಮನ್ವಯಕಾರ, ಕಣಜ ಅಂತರಜಾಲ ಕನ್ನಡ ಜ್ಞಾನಕೋಶ, ನಂ.24/2,3, ವಿಜ್ಞಾನ ಭವನ, 22ನೇ ಮುಖ್ಯ ರಸ್ತೆ,
ಬನಶಂಕರಿ 2ನೇ ಹಂತ, ಬೆಂಗಳೂರು 560070 - ಮಿಂಚಂಚೆ (ಈಮೈಲ್) kadiru@kanaja.in, ದೂರವಾಣಿ: 080 – 26716244

ಎಲ್ಲ ಲೇಖನಗಳನ್ನು kadiru@kanaja.in ಈ ಈಮೈಲ್ ವಿಳಾಸಕ್ಕೆ ಕಳಿಸಿಕೊಡಿ.

ಡಿಸೆಂಬರಿನಲ್ಲಿ ಬೆಂಗಳೂರಿನಲ್ಲಿ ಸಮಾರಂಭದ ಮೂಲಕ ಬಹುಮಾನಗಳನ್ನು ನಾಡಿನ ಗಣ್ಯರಿಂದ ವಿತರಿಸಲಾಗುವುದು.