Wednesday, November 6, 2013

ಬಿಸಿಯೂಟದ ರುಚಿಯಾಗಬೇಕಾದರೆ...








            ಶಾಲೆಯ ಬಿಸಿಯೂಟದ ಬಿಸಿಬಿಸಿ ಸುದ್ದಿಗಳು ರಾಜ್ಯವಲ್ಲ, ದೇಶ ಮಟ್ಟದಲ್ಲಿ ರಾಚುತ್ತಿವೆ. ಜತೆಗೆ ರಾಜಕೀಯದ ವಾಸನೆ. ಅದಕ್ಕೊಂದಿಷ್ಟು ಜಾತಿ, ಮತದ ಲೇಪ. ಇಂತಹ ಪತನಸುಖಿಗಳಿಂದಾಗಿ ಚಿಣ್ಣರು ಹೈರಾಣ. ಹೆತ್ತವರು ಕಂಗಾಲು. ದಾರಿಕಾಣದ ಆಧ್ಯಾಪಕರು. ನುಣುಚಿಕೊಳ್ಳುವ ಆಡಳಿತ ವ್ಯವಸ್ಥೆ. ಮಾತು ತಿರುಚುವ ದೊರೆಗಳು.

          ಮಂತ್ರಿಗಳು, ಅದಿಕಾರಿಗಳು, ಹೆತ್ತವರು ಒಮ್ಮೆ ಶಾಲೆಗೆ ಬನ್ನಿ. ಬಿಸಿಯೂಟವನ್ನು ಉಣ್ಣಿ. ಆಗಷ್ಟೇ ಗೊತ್ತಾಗುತ್ತದೆ - ಅದರ ರುಚಿ! ಕಷ್ಟ-ಕೋಟಲೆಗಳು. ಕಾಯಕಷ್ಟಗಳು. ಗುಣಮಟ್ಟಕ್ಕಾಗಿ ಪಡುವ ಪಾಡು. ಸರಕಾರದ ಪೈಸೆ ಲೆಕ್ಕಾಚಾರದ ಒಳಸುರಿಗಳಿಗೆ ಪರದಾಟ. ಶುಚಿ-ರುಚಿಗೆ ಪೇಚಾಟ. ಇಷ್ಟಿದ್ದೂ ಪಾಠದೊಂದಿಗೆ ಬಿಸಿಯೂಟವನ್ನು ಉಣಿಸುವ ಅಧ್ಯಾಪಕರ ತನು ಶ್ರಮ ಎಲ್ಲೂ ದಾಖಲಾಗುವುದಿಲ್ಲ. ಆಡಳಿತಕ್ಕೆ ದಾಖಲಾಗಬೇಕಾಗಿಲ್ಲ. ಅಲ್ಲಿನವರಿಗೆ ಬೇಕಾಗಿಯೂ ಇಲ್ಲ.
ಅಕ್ಕಿಯಿಂದ ತರಕಾರಿ ತನಕ ಗುಣಮಟ್ಟದ ಪದಾರ್ಥಗಳು ಮಾರುಕಟ್ಟೆಯಲ್ಲಿ ಲಭಿಸುತ್ತದೆ ಎನ್ನುವುದರಲ್ಲಿ ವಿಶ್ವಾಸವಿಲ್ಲ. ಸರ್ವತ್ರ ಕಲಬೆರಕೆ. ಎಲ್ಲದಕ್ಕೂ ವಿಷದ ಸ್ನಾನ. ತಾಜಾ ಎನ್ನುವುದು ಮರೀಚಿಕೆ.  ಟೊಮೆಟೋ, ಕ್ಯಾಬೇಜ್, ಹೂಕೋಸು.. ಹೀಗೆ ಎಷ್ಟು ಬೇಕು, ವಿಷದ ಬಂಧುಗಳು! ಬಿಸಿಯೂಟದ ಪದಾರ್ಥದಲ್ಲಿ ಇವೆಲ್ಲಾ ಚಿಣ್ಣರ ಉದರ ಸೇರುತ್ತದೆ.

          ಮನಸ್ಸಿದ್ದರೆ ಮಾರ್ಗವಿದೆ. ಹಳೆಯ ಮಾತಿದು. ನಿತ್ಯ ಪ್ರಸ್ತುತ. ಚಿಣ್ಣರ ಆರೋಗ್ಯ ಕಾಪಾಡಲು ಕಬ್ಬಿಣದಂಶದ ಮಾತ್ರೆಗಳನ್ನು ಈಚೆಗೆ ನುಂಗಿಸಲಾಗಿತ್ತು. ಬೇಕೋ ಬೇಡವೋ ಪ್ರಶ್ನಿಸುವಂತಿಲ್ಲ. ಕೆಲವರಿಗೆ ಏನೂ ಆಗಿಲ್ಲದಿರುವುದು ಪುಣ್ಯ. ಅನಾರೋಗ್ಯಕ್ಕೆ ತುತ್ತಾದವರು ಮರುತ್ತರ ಹೇಳಿಲ್ಲ. ಹೇಳಿದರೂ ಕೇಳುವವರು ಯಾರು? ಇದರ ಬದಲು ಕಬ್ಬಿಣದ ಅಂಶ ಇರುವ ಖಾದ್ಯಗಳನ್ನು ಬಿಸಿಯೂಟಕ್ಕೆ ಯಾಕೆ ಬಡಿಸಬಾರದು. 

          ಈ ಮಾತನ್ನು ಖಾದಿ ದಿರುಸಿನ ಗಣ್ಯರಲ್ಲಿ ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದೆ. 'ಖರ್ಚು ಬರುವುದಿಲ್ವಾ. ಬೊಕ್ಕಸದಲ್ಲಿ ಹಣ ಬೇಡ್ವಾ' ಎಂಬ ಉತ್ತರಕ್ಕೆ ನಗಲೋ, ಅಳಲೋ! ಕೋಟಿ ಕೋಟಿ ಕಾಂಚಾಣವನ್ನು ನುಂಗುವ,  ರೈತರ ಭೂಮಿಯನ್ನೇ ಸದ್ದಿಲ್ಲದ ಸ್ವಾಹಾ ಮಾಡುವ, ಚೂರುಪಾರು ಜಾಗವನ್ನು ಕುಟುಂಬಸ್ಥರ ಹೆಸರಿಗೆ ಬರೆಸಿಕೊಂಡ ಕನ್ನಾಡಿನ ಗಣ್ಯರ ಇತಿಹಾಸ ಜನರ ಬಾಯಲ್ಲೇ ಕುಣಿದಾಡುತ್ತಿದೆ! ಮಕ್ಕಳಿಗೆ ನೀಡುವ ಆಹಾರಕ್ಕೆ ಮಾತ್ರ ಆರ್ಥಿಕ ಕೊರತೆ. ಈಚೆಗೆ ಹಾಲು ಸೇರಿಕೊಂಡಿದೆ. ಶ್ಲಾಘನೀಯ.  

          ಆಹಾರವೇ ಔಷಧ. ಔಷಧೀಯ ಗುಣವುಳ್ಳ ಆಹಾರದ ಸೇವನೆಯ ಬೌದ್ಧಿಕ ಜ್ಞಾನವು ಹಿರಿಯರ ಬಳುವಳಿ. ಋತುಮಾನಕ್ಕನುಸಾರವಾದ ವಿವಿಧ ಖಾದ್ಯಗಳು ಬದುಕಿನಂಗವಾಗಿದ್ದ ದಿನಗಳಿದ್ದುವಲ್ಲಾ. ಹಿತ್ತಿಲಿಗೊಮ್ಮೆ ಸುತ್ತು ಬಂದರೆ ಆಯಿತು, ಕೈತುಂಬಾ ತರಕಾರಿಗಳು, ಕುಡಿಗಳು, ಸೊಪ್ಪುಗಳು. ಅವುಗಳು ಅನ್ನದೊಂದಿಗೆ ಹೊಟ್ಟೆ ಸೇರಿ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟ ಹಿರಿಯರು ಈಗಲೂ ಸಾಕ್ಷಿಯಾಗಿ ಸಿಗುತ್ತಾರೆ. ಅವರೆಂದೂ ಚಿಕ್ಕಪುಟ್ಟ ಶೀತ-ಜ್ವರಕ್ಕೆ ಮೆಡಿಕಲ್ ಶಾಪಿಗೆ ಓಡಿಲ್ಲ, ಆಸ್ಪತ್ರೆಗೆ ದಾಖಲಾಗಿಲ್ಲ. 

              ಈಚೆಗೆ ಹುಬ್ಬಳ್ಳಿಗೆ ಹೋಗಿದ್ದೆ. ಮನೆಯೊಂದರಲ್ಲಿ ಶತಮಾನ ದಾಟಿದ ವೃದ್ಧೆಯೊಬ್ಬರು ಬಾವಿಯಿಂದ ನೀರು ಸೇದುತ್ತಿದ್ದರು! ಹತ್ತಡಿಯ ಬಾವಿಯಲ್ಲ, ಇನ್ನೂರು ಅಡಿ! ಜೀವಿತನ ಗುಟ್ಟೇನು? 'ನಾವೇ ಬೆಳೆದ ರಾಗಿ, ಜೋಳವನ್ನು ತಿಂತೀವಿ. ಹೊಲದಲ್ಲಿ ದುಡಿತೀವಿ. ತಿನ್ನೋಕೆ ಬೇಕಾದವನ್ನೆಲ್ಲಾ  ಬೆಳೀತೀವಿ..', ಆ ಅಜ್ಜಿ ಲಟಲಟನೆ ಮಾತನಾಡುತ್ತಿದ್ದಂತೆ ಅಳಿಕೆ ಮುಳಿಯದ ವೆಂಕಟಕೃಷ್ಣ ಶರ್ಮರು ನೆನಪಾದರು.

          ಶರ್ಮರು ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ ಅಧ್ಯಾಪಕರು. ನಿರ್ವಿಷವಾದ ಆಹಾರವನ್ನು ಸೇವಿಸುವತ್ತ, ಅದನ್ನೇ ಮಾಹಿತಿ ರೂಪದಲ್ಲಿ ನೀಡುವ ಅಪರೂಪದ ವ್ಯಕ್ತಿ. 'ನಮ್ಮ ಅಡುಗೆ ಮನೆಗೆ ನಮ್ಮದೇ ತರಕಾರಿ' ಎನ್ನುವ ಅವರ ಬದುಕಿನ ಹಿಂದೆ ಭವಿಷ್ಯದ ಕಾಳಜಿಯಿದೆ. ಆರೋಗ್ಯದ ಗುಟ್ಟಿದೆ. ಹಸುರು ಪ್ರೀತಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂತಃಕರಣ ಶುದ್ಧವಿದೆ. ಗಂಟಲ ಮೇಲಿನ ಮಾತು ದೂರ. 

          ಶರ್ಮರು ತರಕಾರಿ ಬೆಳೆಯುತ್ತಾರೆ, ತಿನ್ನುತ್ತಾರೆ, ಹಂಚುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಒಯ್ಯಲು ಕಟ್ಟಿ ಕೊಡುತ್ತಾರೆ. ಬೀಜಗಳನ್ನು ನೀಡಿ ತರಕಾರಿ ಬೆಳೆಸುವಂತೆ ಪ್ರೇರೇಪಿಸುತ್ತಾರೆ. ಇವೆಲ್ಲವೂ ಆರ್ಥಿಕ ಲಾಭಕ್ಕಾಗಿ ಅಲ್ಲ! ಸ್ವಂತಕ್ಕಾಗಿ ಬೆಳೆವ ತರಕಾರಿಯಲ್ಲಿ ಬಹುಪಾಲು ಅವರ ಶಾಲೆಯ ಬಿಸಿಯೂಟದ ಪದಾರ್ಥಕ್ಕೆ ಮೀಸಲು. ಬಾಳೆಕಾಯಿ, ಬಾಳೆದಿಂಡು, ಕುಂಡಿಗೆ, ಹಲಸು, ಕಣಿಲೆ, ನೆಲಬಸಳೆ, ಪಪ್ಪಾಯಿ, ಗೆಡ್ಡೆಗಳು, ಕೆಸು.. ನಿತ್ಯ ಬದುಕಿನಲ್ಲಿ ಮರೆಯಾಗುತ್ತಿರುವ ತರಕಾರಿಗಳು ಬಿಸಿಯೂಟದೊಂದಿಗೆ ಮಕ್ಕಳ ಉದರಾಗ್ನಿಯನ್ನು ತಣಿಸುತ್ತದೆ.

          ಚಿಣ್ಣರು ಪಾರಂಪರಿಕ ಖಾದ್ಯಕ್ಕೆ ಒಗ್ಗಿಕೊಂಡಿದ್ದಾರೆ. ಅವರಿಗೆ ಹಲಸು ಹೊಲಸಾಗುವುದಿಲ್ಲ. ಗೆಡ್ಡೆಗಳತ್ತ ತಾತ್ಸಾರವಿಲ್ಲ. ತಂಬುಳಿ, ಚಟ್ನಿ ಮಾಡಿದಾಗ ಗೊಣಗಾಟವಿಲ್ಲ. ತರಕಾರಿ ತುಂಬಿದ ಶರ್ಮರ ದ್ವಿಚಕ್ರ ನಿಂತರೆ ಸಾಕು, ವಿದ್ಯಾರ್ಥಿಗಳು ಅವರನ್ನು ಮುತ್ತಿಕೊಳ್ಳುತ್ತಿರುವ ದೃಶ್ಯದಲ್ಲಿ ಮಾತೃತ್ವ ಎದ್ದುಕಾಣುತ್ತದೆ. ನಿರ್ವಿಷವಾದ ತರಕಾರಿ ಪದಾರ್ಥವನ್ನು ಸವಿಯುವ ಈ ಶಾಲೆಯ ಚಿಣ್ಣರು ಭಾಗ್ಯವಂತರು.

          ಬಿಸಿಯೂಟ ಪದಾರ್ಥದ ಕತೆಯನ್ನು ಆಲಿಸಿದ ಹೆತ್ತವರೂ ಕೂಡಾ ಪಾರಂಪರಿಕ ವ್ಯವಸ್ಥೆಗೆ ಉತ್ಸುಕರಾಗುತ್ತಿದ್ದಾರೆ. ಮಕ್ಕಳ ಒತ್ತಾಯಕ್ಕಾದರೂ ತಿಮರೆ ಚಟ್ನಿ, ತಗತ್ತೆ ಪಲ್ಯ, ಹಲಸಿನ ಸಾಂಬಾರು.. ಮಾಡುತ್ತಾರಂತೆ. ಶರ್ಮರಿಗೆ ಆಹಾರದ ಕುರಿತು ಕಾಳಜಿಯಿದೆ. ಚಿಣ್ಣರಲ್ಲಿ ಪ್ರೀತಿಯಿದೆ. ಅದು ಮಕ್ಕಳ ಆಹಾರದ ಮೂಲಕ ಪ್ರತಿಫಲಿತವಾಗುತ್ತದೆ.

          ಶಾಲೆಯ ಆಡಳಿತ ಮಂಡಳಿ, ಗುರುವೃಂದ, ಬಿಸಿಯೂಟವನ್ನು ತಯಾರಿಸುವ ಸಹಾಯಕರೇ ಆಗಿರಲಿ, ಮಾಡುವ ಕೆಲಸದಲ್ಲಿ ಪ್ರೀತಿ-ವಿಶ್ವಾಸಗಳಿದ್ದರೆ ಬಿಸಿಯೂಟ ರುಚಿಯಾಗುತ್ತದೆ. ಗೊಣಗಾಟ, ಅತೃಪ್ತಿಗಳೇ ವೃತ್ತಿಯಾದಾಗ ಜಿರಳೆ, ಇಲಿ, ಹಲ್ಲಿ.. ಕಾಣಿಸಿಕೊಳ್ಳಬಹುದು! ಭವಿಷ್ಯದ ಉತ್ತರಾಧಿಕಾರಿಗಳಾಗಿ ಶಿಕ್ಷಣವನ್ನು ಪಡೆಯುವ ಮಕ್ಕಳನ್ನು ಆರೋಗ್ಯವಂತರಾಗಿ ಬೆಳೆಸುವ ಹೊಣೆ ನಮ್ಮೆಲ್ಲರದು ತಾನೆ. ಈ ನಿಟ್ಟಿನಲ್ಲಿ ಅಧ್ಯಾಪಕರಿಗೆ ಬಿಸಿಯೂಟದ ನಿರ್ವಹಣೆಯ ಭಾರವನ್ನು ಹಗುರಗೊಳಿಸಬೇಕು.

          ಈಗ ಆಟಿಯ (ಆಷಾಢ) ಹಬ್ಬ. ಗೌಜಿ-ಗದ್ದಲ. ಸಂತೋಷದ ಸಮಯ. ಆಷಾಢ, ಶ್ರಾವಣ.. ಹೀಗೆ ಪ್ರತಿಯೊಂದು ತಿಂಗಳಿಗೂ ಅದರದ್ದೇ ಅದ ಮಹತ್ತು. ಹಿರಿಯರ ಬದುಕಿನಲ್ಲಿ ಇವೆಲ್ಲಾ ಹೊಸೆದುಕೊಂಡಿತ್ತು. ಅದಕ್ಕೆ ಗಮ್ಮತ್ತಿನ ಸ್ಪರ್ಶ ಇರಲಿಲ್ಲ. ಅಡುಗೆ ಮನೆಯು ನಿತ್ಯ ಗಮ್ಮತ್ತಿನ ತಾಣ. ಈಗ ಗೋಬಿ ಮಂಚೂರಿಯನ್ ಕಾಲ. ಹಾಗಾಗಿ ಅಜ್ಜಿಯಿಂದ ಬಂದ ಜ್ಞಾನವನ್ನು ಒಂದು ದಿನದ ಗಮ್ಮತ್ತಿನ ಮೂಲಕವಾದರೂ ಆಚರಿಸುತ್ತೇವಲ್ಲಾ..!

          ಬಂಟ್ವಾಳ ತಾಲೂಕಿನ ಶೈಕ್ಷಣಿಕ ಸಂಸ್ಥೆಗಳು ಆಗಸ್ಟ್ 12ರಂದು ಆಟಿ ಹಬ್ಬವನ್ನು ಆಚರಿಸಿದುವು. ಪಾರಂಪರಿಕವಾದ ಆಹಾರ ಕ್ರಮವನ್ನು ಚಿಣ್ಣರಿಗೆ ಬೋಧಿಸುವುದಲ್ಲದೆ, ಅದರ ಅನುಷ್ಠಾನವನ್ನು ಮಾಡುವ ದೂರದೃಷ್ಟಿ. ಕಳೆದ ವರುಷ ಆಹಾರ ಸನ್ನದು ಎಂಬ ನೂತನ ಪರಿಕಲ್ಪನೆ ಕೆಲೆವೆಡೆ ಯಶವಾಗಿತ್ತು. ಬಹುತೇಕ ಶಾಲೆಗಳು ಆಟಿಯ ಮಹತ್ವನ್ನು ಸಾರುವ ಕಲಾಪಗಳನ್ನು ರೂಢಿಸಿಕೊಂಡಿದ್ದುವು.

          ಆಟಿಯ ಹಬ್ಬಕ್ಕಾಗಿ ಕೇಪು-ಕಲ್ಲಂಗಳ ಸರಕಾರಿ ಪ್ರೌಢ ಶಾಲೆಗೆ ಹೋಗಿದ್ದೆ. ಬಹಳ ಅರ್ಥವತ್ತಾಗಿ ಹಬ್ಬವನ್ನು ಆಚರಿಸಿದ್ದರು. ಮಕ್ಕಳೊಂದಿಗೆ ಹೆತ್ತವರೂ ಭಾಗವಹಿಸಿದ್ದರು. ಪತ್ರೊಡೆ, ಉಪ್ಪುಸೊಳೆ ಖಾದ್ಯ, ಸಿಹಿ ತಿಂಡಿ.. ಹೀಗೆ ಪಾರಂಪರಿಕ ಪಾಕಗಳನ್ನು ಮಾಡಿ ಹೆತ್ತವರು ಮಕ್ಕಳ ಕೈಯಲ್ಲಿ ಕಳುಹಿಸಿದ್ದರು. ಆಟಿಯ ಮಹತ್ವದೊಂದಿಗೆ, ಆರೋಗ್ಯಪೂರ್ಣವಾದ ಆಹಾರವನ್ನು ಮಾಡುವ ಮಾಹಿತಿ ಖುಷಿ ಕೊಟ್ಟ ವಿಚಾರ.

              ಈಚೆಗೆ ಕೇಪು ಶಾಲೆಯು ಮಕ್ಕಳಲ್ಲಿ ಸಾವಯವ ಕೃಷಿಯ ಅರಿವು ಮೂಡಿಸುವಂತಹ ಅಪರೂಪದ ಕೆಲಸ ಮಾಡುತ್ತಿದೆ. ಮುಖ್ಯ ಗುರು ರಮೇಶ್ ಬಾಯಾರು ಅವರ ಕನಸಿನ ಕೆಲಸವಿದು. ತರಕಾರಿ ಬೀಜ ನೀಡಿ, ತರಕಾರಿ ಕೃಷಿಯನ್ನು ಮಾಡುವ ಕುರಿತು ಅನುಭವಿಗಳಿಂದ ತರಬೇತಿ ಕೆಲಸ ಆಗುತ್ತಿದೆ. ಕೃಷಿಕರ ತೋಟಗಳಿಗೆ ಮಕ್ಕಳನ್ನು ಭೇಟಿ ಮಾಡಿಸಿ ಹಸಿರಿನ ಪರಿಚಯ ಮಾಡಲಾಗುತ್ತದೆ. 'ಗ್ರಾಮೀಣ ಭಾಗದ ಮಕ್ಕಳಾದರೂ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಹಳ್ಳಿಯ ನೈಜ ಬದುಕಿನಿಂದ ಅವರು ಕಳೆದುಹೋಗಬಾರದಲ್ವಾ' ಎನ್ನುವ ಕಾಳಜಿ ರಮೇಶ ಬಾಯಾರು ಅವರದು. 

                 ಕೇಪು ಶಾಲೆಯ ಬಿಸಿಯೂಟ ತಯಾರಿಯ ಕೊಠಡಿಯತ್ತ ಎಲ್ಲಾ ಅಧ್ಯಾಪಕರ ಕಾಳಜಿ. ಅಕ್ಕಿಯನ್ನಿಡಲು ಪ್ರತ್ಯೇಕ ವ್ಯವಸ್ಥೆ. ಪದಾರ್ಥ ತಯಾರಿಸುವಾಗ ಸಹಾಯಕರಿಗೆ ವಿಶೇಷ ನಿಗಾ. ಮನೆಯಲ್ಲಿ ಬೆಳೆದ ತರಕಾರಿಯನ್ನು ಮಕ್ಕಳು ತಂದಾಗ ಪ್ರೋತ್ಸಾಹದ ಮಾತು. ಉಣ್ಣುವ-ತಿನ್ನುವ ವಿಚಾರದಲ್ಲಿ ಜಾಗ್ರತೆ.

                 ಶಾಲಾ ಪಠ್ಯದಲ್ಲಿ ಹಸುರಿಲ್ಲ. ಕೃಷಿಯಿಲ್ಲ. ಕೃಷಿಕನ ಯಶೋಗಾಥೆಗಳಿಲ್ಲ. ಬೌದ್ಧಿಕ ಸಾಮಥ್ರ್ಯವನ್ನು ಗಟ್ಟಿಮಾಡದ ಪಠ್ಯದೊಂದಿಗೆ ಕೃಷಿ, ಪರಿಸರ, ತೋಟದ ಪಾಠ ಮಾಡುವ ಕೇಪು ಶಾಲೆಯ ಅಧ್ಯಾಪಕ ವೃಂದದ ಶ್ರಮ ಶ್ಲಾಘನೀಯ. ಹೇಳುವಂತಹ ದೊಡ್ಡ ಪರಿಣಾಮಗಳನ್ನು ನಿರೀಕ್ಷಿಸಲಾಗದಿದ್ದರೂ, ಎಳೆಯ ಮನಸ್ಸುಗಳ ಹಳ್ಳಿಪ್ರೀತಿಯ ಅಡಿಗಟ್ಟು ಭದ್ರವಾಗುತ್ತದೆ. ಬಿಸಿಯೂಟ ರುಚಿಯಾಗುತ್ತದೆ.

ಕೃಷಿ ಸಂಸ್ಕೃತಿಯಿಂದ ಸಂಪತ್ತಿನ ಸೃಷ್ಟಿ









                ಪುತ್ತೂರಿನಲ್ಲಿ ೨೭-೧೦-೨೦೧೩ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 'ಕೃಷಿ ಹಬ್ಬ' ಜರುಗಿತು. ಭಾರತೀಯ ಕಿಸಾನ್ ಸಂಘದ ಸಾರಥ್ಯ. ಜರುಗಿದ ನಾಲ್ಕು ಕೃಷಿ ಮಾತುಕತೆಗಳು ಸಂದುಹೋದ ಕೃಷಿ ಬದುಕಿನತ್ತ ತಿರುಗಿ ನೋಡುವಂತೆ ಮಾಡಿತು. ಇವುಗಳನ್ನು ಸಂಕ್ಷಿಪ್ತವಾಗಿ 'ಅವಿಲಿ'ನಲ್ಲಿ (ಉದಯವಾಣಿ ಸುದಿನದಲ್ಲಿ ಕಾಲಂ) ದಾಖಲಿಸುತ್ತಿದ್ದೇನೆ. ಮೊದಲನೇ ಕಂತು ಉಪನ್ಯಾಸಕ, ಕೃಷಿಕ ಅವಿನಾಶ್ ಕೊಡೆಂಕಿರಿ ಪ್ರಸ್ತುತಪಡಿಸಿದ 'ಕೃಷಿ ಸಂಸ್ಕೃತಿ'ಯತ್ತ ಚಿತ್ತ. 

               ಕೃಷಿಯು ಭಾರತದ ಜೀವನಾಡಿ. ಕೃಷಿ ಸಂಸ್ಕೃತಿಯು ತಾಯಿಬೇರು. ಬದುಕನ್ನು ಸಮೃದ್ಧವಾಗಿ ಕಟ್ಟಿಕೊಟ್ಟ ಕೃಷಿ ಸಂಸ್ಕೃತಿಯ ಉಸಿರನ್ನು ಉಳಿಸಬೇಕಾದ ದಿನಮಾನದಲ್ಲಿದ್ದೇವೆ. ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನಗಳು ಸಂಸ್ಕ್ರತಿಯನ್ನು ಓವರ್ಟೇಕ್ ಮಾಡಿ ಬೀಸುಹೆಜ್ಜೆ ಹಾಕುತ್ತಿವೆ. ಪರಿಣಾಮವಾಗಿ ಜೀವನಾಧಾರವಾಗಿರುವ ಹಲವಾರು ಸಂಗತಿಗಳು ನಿತ್ಯ ಜೀವನದಿಂದ ಮರೆಯಾಗಿವೆ.

                ಇದು ಲೆಕ್ಕಾಚಾರದ ಕಾಲ. ಗಣಕಯಂತ್ರದಿಂದ ತೊಡಗಿ ಕಂಪ್ಯೂತನಕ ಪಕ್ಕಾ ಲೆಕ್ಕ. ಕೃಷಿಯಲ್ಲಿ ಲೆಕ್ಕಾಚಾರ ಬೇಕು, ನಿಜ. ಆದರೆ ಲೆಕ್ಕಾಚಾರವೇ ಕೃಷಿಯಲ್ಲ. ಅದು ಬದುಕನ್ನು ಆಧರಿಸದು. ಯಾಕೆ ಹೇಳಿ, ಕಂಪ್ಯೂಗೆ ಮೀರಿದ ಲೆಕ್ಕಾಚಾರ ಭೂಒಡಲಿನಲ್ಲಿದೆ! ಮಾರುಕಟ್ಟೆ ಆಧಾರಿತ ಕೃಷಿಯ ಒಲವಿನಿಂದ ಲೆಕ್ಕಾಚಾರದ ಕೃಷಿ ಮಾಡುತ್ತಾ ಹೋದರೆ ಸಂಸ್ಕೃತಿಯು ಲೆಕ್ಕಕ್ಕೆ ಸಿಗುವುದಿಲ್ಲ! ಹಣಕಾಸಿನಿಂದ ಅಳೆಯಲು ಸಿಗದು ಮತ್ತು ಸಾಧ್ಯವಿಲ್ಲ.  

               ಭಾರತೀಯ ಭಾಷೆಗಳಿಗೆ ಸಮೃದ್ಧಿ ತಂದ ಗರಿಮೆ ಕೃಷಿ ಸಂಸ್ಕೃತಿಯದ್ದು. ಭತ್ತದ ಬೇಸಾಯದಲ್ಲಿ ಎಷ್ಟೊಂದು ಶಬ್ದ ಭಂಡಾರಗಳು? ಅದನ್ನೀಗ ಮಾತನಾಡುತ್ತಾ ಇಲ್ಲ. ನಮ್ಮೆದುರೇ ಬಿಕ್ಕಳಿಸುತ್ತಾ ಇದ್ದರೂ ಆಕಳಿಸುತ್ತಾ ಕಣ್ಣುಜ್ಜಿಕೊಳ್ಳುತ್ತಿದ್ದೇವೆ. ಸಂಪತ್ತನ್ನು ಸೃಷ್ಟಿ ಮಾಡುವ ತಾಕತ್ತು ಕೃಷಿ ಸಂಸ್ಕೃತಿಗಿದೆ. ಕಾಲದ ಧಾವಂತದಲ್ಲಿ ಕೊಚ್ಚಿಹೋಗುತ್ತಿರುವ ಇದಕ್ಕೆ ಮತ್ತೊಮ್ಮೆ ಮರುಜೀವ ನೀಡಲೇ ಬೇಕು. 

              ಕೃಷಿ ಸಂಸ್ಕ್ಕೃತಿಯಲ್ಲಿ ಜೀವಪರವಾದ ದೃಷ್ಟಿಕೋನವಿದೆ. ಭಾವನಾತ್ಮಕವಾದ ಸಂಬಂಧವಿದೆ. ಭಾರತೀಯರು ಭಾವಜೀವಿಗಳಾಗುವುದಕ್ಕೆ ಒಳಸುರಿಯನ್ನು ಸಂಸ್ಕೃತಿ ನೀಡಿದೆ. ಹಾಗಾಗಿಯೇ ಭಾರತೀಯರಿಗೆ ಭೂಮಿಯೆಂದರೆ ಮಾತೃತ್ವದ ಪ್ರತೀಕ. ದನ, ಪ್ರಾಣಿ, ಪಕ್ಷಿ, ಗಿಡ, ಮರ..ಗಳಲ್ಲಿ ಪೂಜ್ಯ ಭಾವನೆ. ಭೂಮಿ ನಿತ್ಯ ಒಡನಾಟದ ಸ್ನೇಹಿತ. ಭೂಮಿಯನ್ನು ಅಗೆಯಲು, ಕೊರೆಯಲು ಉತ್ತಮ ತಿಥಿ, ವಾರಗಳನ್ನು ಗೊತ್ತುಮಾಡುತ್ತಾನೆ. ಯಾವ ದಿವಸ ಭೂಮಿಯನ್ನು ಅಗೆಯಬಾರದೆನ್ನುವುದು ಗೊತ್ತಿದೆ. ಉತ್ತಮ ದಿನಗಳನ್ನು ನೆನಪಿಟ್ಟುಕೊಳ್ಳುತ್ತಾನೆ. ಪೃಕೃತಿಯಿಂದ ಸಿಗುವ ವಸ್ತು ವೈವಿಧ್ಯಗಳನ್ನು ದೇವತಾಭಾವನೆಯಿಂದ ನೋಡುತ್ತಾನೆ. ಜೀವಪರವಾದ ದೃಷ್ಟಿಕೋನ ಅಂಕುರಿಸುತ್ತದೆ. ಕೃಷಿಯನ್ನು ಬಿಟ್ಟು ಹೊರಪ್ರಪಂಚಕ್ಕೆ ಬಂದಾಗ ವ್ಯವಹಾರಿಕ ಪ್ರಜ್ಞೆ ತಕ್ಷಣ ತೆರೆದುಕೊಳ್ಳುತ್ತದೆ. 

              ನಮ್ಮ ಮಧ್ಯೆ ಕೃಷಿ ಸಂಸ್ಕೃತಿಯನ್ನು ಬದುಕಿಗಂಟಿಸಿಕೊಂಡೇ ಬಂದಿರುವ ಹಿರಿಯರಿದ್ದಾರೆ. ಅವರನ್ನೊಮ್ಮೆ ಮಾತನಾಡಿಸಿ ನೋಡಿ. ಕೃಷಿಯಲ್ಲೇ ಎಷ್ಟು ಖುಷಿಯಾಗಿದ್ದರು. ನೆಮ್ಮದಿಯಾಗಿದ್ದರು. ಸಂತಸವಾಗಿದ್ದರು. ಅವರು ಬೌದ್ಧಿಕವಾಗಿ ಎಷ್ಟೊಂದು ಗಟ್ಟಿಮಾಡಿದ್ದವು. ವಿರಾಮ ಸಮಯದಲ್ಲಿ  ಗಮಕ, ಯಕ್ಷಗಾನ, ನಾಟಕ, ಪುರಾಣಗಳ ಓದು, ಸಾಹಿತ್ಯಿಕ ಅಧ್ಯಯನಗಳು ಬೌದ್ಧಿಕವಾಗಿ ಎತ್ತರದ ಸ್ಥಾನವನ್ನು ತಂದುಕೊಟ್ಟಿತ್ತು. ಜಾನಪದವಾದ ಅಂಶಗಳತ್ತ ನೋಡಿದರೆ ಕೃಷಿಯಲ್ಲಿ ಅದರ ಮೂಲಬೀಜವಿದೆ. ಜಗತ್ತಿಗೆ ಜಾನಪದದ ಸತ್ವವನ್ನು ನೀಡಿದವರು ನಾವು. ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಾನಪದದ ವಿಚಾರಗಳು ಉತ್ಪನ್ನವಾಗುತ್ತಾ ಇರುತ್ತವೆ. ಇವೆಲ್ಲಾ ಕೃಷಿಯಿಂದ ನಿಕಷಿತವಾದವುಗಳು.  

              ಗಿಡ ನೆಟ್ಟು ಪೋಷಿಸಿ ಉತ್ಪನ್ನವನ್ನು ಪಡೆದು ಮಾರುಕಟ್ಟೆ ಮಾಡುವ ವಿಚಾರಗಳನ್ನು ಕೃಷಿ ಸ್ವೀಕರಿಸಿಲ್ಲ. ಸುತ್ತುಮುತ್ತಲಿನ ಪರಿಸರ ಜ್ಞಾನ, ಸಹಜೀವಿಗಳ ನಡವಳಿಕೆ, ಕಾರ್ಯ-ಕಾರಣಗಳ ಅರಿವು, ಮಿತಿಯನ್ನು ಮೀರಿದರೆ ಆಗುವಂತಹ ಗೊಂದಲಗಳ ಅರಿವು, ಅದರಿಂದ ಬಿಡಿಸಿಕೊಳ್ಳಬೇಕಾದ ಜಾಣ್ಮೆಗಳನ್ನು ಬದುಕು ಕಲಿಸಿಕೊಡುತ್ತಿತ್ತು. ಹಾಗಾಗಿ ಕೃಷಿ ಸಂಸ್ಕತಿಯನ್ನು ಸಮಗ್ರವಾಗಿ ನೋಡಬೇಕೇ ವಿನಾ ಕೇವಲ ಆಹಾರವನ್ನು ಬೆಳೆಯುವ ವ್ಯಾಪ್ತಿಯಲ್ಲಲ್ಲ. 

              ಪ್ರಕೃತ ನಮಗೆ ಗೊತ್ತಿಲ್ಲದ ಹಾಗೆ ಕೃಷಿ ಸಂಸ್ಕೃತಿಯ ವಿರುದ್ಧಮುಖವಾಗಿ ಈಜುತ್ತಿದ್ದೇವೆ. ಇದನ್ನು ಉಳಿಸಿಕೊಳ್ಳಬೇಕೇ ಎನ್ನುವ ಪ್ರಶ್ನೆ, ಉಳಿಸಲೇ ಬೇಕು ಎನ್ನುವ ಗೊಂದಲದ ಮಧ್ಯೆ ಸಿಲುಕಿದ್ದೇವೆ. ಇಂದು ನಿದರ್ೇಶಿಸುವ ಕೃಷಿ ತತ್ವಗಳು ಆರ್ಥಿಕತೆಯನ್ನು  ಕ್ರೋಢೀಕರಿಸುವ ಉದ್ದೇಶ ಹೊಂದಿವೆ.  ಬಯಕೆಯನ್ನು ಮತ್ತೆ ಮತ್ತೆ ಹುಟ್ಟು ಹಾಕುವ ತತ್ವಗಳು. ಅದಕ್ಕೆ ಕೊನೆಯಿಲ್ಲ. ಹೊಸ ಉತ್ಪನ್ನ ತಯಾರಿ, ಬೇಡಿಕೆ, ಪೂರೈಕೆ - ಹೀಗೆ  ಲೆಕ್ಕಾಚಾರ. ನಮ್ಮೆಲ್ಲಾ ಬಯಕೆಗಳನ್ನು ಕೃಷಿಯೊಂದೇ ಪೂರೈಕೆ ಮಾಡಬಹುದೇ? ಆಗ ಬಯಕೆಗಳನ್ನು ಪೂರೈಸಲು ಬೇರೆ ದಾರಿ ಹಿಡಿಯುವುದು ಅನಿವಾರ್ಯ. ಆಗ  ಮೂಲಭೂತವಾದ ತೃಪ್ತಿ, ಸಮೃದ್ಧಿ ವಿಚಾರಗಳನ್ನು ಯೋಚಿಸುವ ನೆರವಾದ ಬೌದ್ಧಿಕತೆ ತಟಸ್ಥವಾಗುತ್ತದೆ.

               ಮಾರುಕಟ್ಟೆ ಕೇಂದ್ರಿತ ಹೊಸ ಆರ್ಥಿಕ ನೀತಿಯಿಂದಾಗಿ ಹಳೆ ಬೇರುಗಳು ಶಿಥಿಲವಾಗುತ್ತಿವೆ. ಕ್ಷಣ ತೃಪ್ತಿಯನ್ನು ನೀಡುವ ಅನಿಯಂತ್ರಿಕ ಬಯಕೆಗಳು ಅಟ್ಟಿಸಿಕೊಂಡು ಬರುತ್ತಿವೆ.  ಸಂಸ್ಕೃತಿಯು 'ಹಣ ಮಾಡುವ ದಂಧೆ'ಯಾಗಿರುವುದನ್ನು ಕಾಣುತ್ತಿದ್ದೇವೆ. ನೀರು ಮತ್ತು ನೀರಿಗೆ ಸಂಬಂಧಪಟ್ಟ ಜಾಗೃತಿ ಕೃಷಿಕನಿಗೆ ಇತ್ತು. ಅನ್ನ, ನೀರಿನ ಕುರಿತು ಕೃಷಿಕ ಯೋಚಿಸಿದ್ದ. ಅನ್ನವನ್ನು ದೇವರು ಅಂತ ಭಾವಿಸಿದ್ದ. ಆ ಕುರಿತು ಗೌರವದ, ಪೂಜ್ಯ ಭಾವನೆ ಇಂದಿಗೂ ಉಳಿದುಕೊಂಡಿರುವುದನ್ನು ಕಾಣಬಹುದು. ಒಟ್ಟಿನಲ್ಲಿ ಕೃಷಿ ಸಂಸ್ಕೃತಿಯ ಮರೆವು ಇದೆಯಲ್ಲಾ, ಸಂತೃಪ್ತ ಬದುಕಿನ ಇಳಿಲೆಕ್ಕ. ಬುದ್ಧಿಪೂರ್ವಕವಾಗಿ ನಾವೇ ಸೃಷ್ಟಿಸಿದ ಆತಂಕ. ಒಳಗಿದ್ದುಕೊಂಡೇ ಒದ್ದಾಡುವುದು ಅಥವಾ ಹೊರಗೆ ಬರುವ ದಾರಿಯನ್ನು ಕಂಡುಹಿಡಿಯುವುದು - ಈ ಆಯ್ಕೆಗಳು ನಮ್ಮ ಮುಂದಿವೆ.

Tuesday, November 5, 2013

ವರ್ಷಕ್ಕೆ ನಾಲ್ಕು ತಿಂಗಳು 'ಅಕ್ಕಿಖರೀದಿ'ಗೆ ರಜೆ!




             ನಾವು ಬೆಳೆದ ಅಕ್ಕಿಯ ಅನ್ನವನ್ನು ಉಣ್ಣುವುದು ಅಭಿಮಾನ. ಅಕ್ಕಿಯ ಕ್ರಯ ಏರುತ್ತಿದೆ. ಅವನವನ ಮನೆವೆಚ್ಚಕ್ಕೆ ಭತ್ತದ ಬೇಸಾಯ ಮಾಡುವುದು ಮುಂದಿನ ದಿನಗಳಲ್ಲಿ ಅಗತ್ಯ, ಎನ್ನುವ ರಾಮಣ್ಣ ಗೌಡರು ತಾವು ಅಂಗಳದಲ್ಲಿ ಬೆಳೆದ ಭತ್ತದ ಕೃಷಿಯನ್ನು ತೋರಿಸುತ್ತಾ, ಬೆಳಿಗ್ಗೆ ಎದ್ದಾಕ್ಷಣ ಅಂಗಳ ನೋಡಿದರೆ ಸಾಕು, ಮನಸ್ಸು ತುಂಬಿ ಬರುತ್ತದೆ, ಹಗುರವಾಗುತ್ತದೆ, ಎಂದರು.

               ಪುತ್ತೂರು ತಾಲೂಕು ಮಾಡಾವು 'ಜ್ಯೋತಿ ನಿಲಯ'ದ ರಾಮಣ್ಣ ಗೌಡರ ಮುಖ್ಯ ಕೃಷಿ ಅಡಿಕೆ. ಮೂರು ವರುಷದ ಹಿಂದೆ ಕೃಷಿ ಇಲಾಖೆಯ ನಿದರ್ೇಶನದಲ್ಲಿ ಮನೆಯಂಗಳದಲ್ಲಿ ಕೃಷಿ ಮಾಹಿತಿ ಕಾರ್ಯಕ್ರಮ ನಡೆದಿತ್ತು. ಅಂದು ಭತ್ತದ ಬೇಸಾಯದ ಕುರಿತು ಅನುಭವಿಗಳು ನೀಡಿದ ಮಾಹಿತಿಯು ಭತ್ತದ ಕೃಷಿಯತ್ತ ಒಲವನ್ನು ಮೂಡಿಸಿತು.

                 ಪ್ರತ್ಯೇಕವಾಗಿ ಬೇಸಾಯ ಮಾಡಲು ಜಾಗದ ಅಭಾವ. ಅಡಿಕೆ ಒಣಗಿಸುವ ಅಂಗಳದಲ್ಲೇ ಭತ್ತದ ಕೃಷಿ ಶುರು. ಸುಮಾರು ನಲವತ್ತು ಸೆಂಟ್ಸ್ ಆವರಿಸುವ ಜಾಗ ಭತ್ತದ ಬೇಸಾಯಕ್ಕೆ ಮೀಸಲು. ಈ ವರುಷದಿಂದ ಶ್ರೀ ಪದ್ಧತಿ ಕ್ರಮದಲ್ಲಿ ಕೃಷಿ. ಉಳುಮೆ ಬೇಡ. ಅಂಗಳವನ್ನು ಗದ್ದೆಯನ್ನಾಗಿ ಮಾರ್ಪಡಿಸಬೇಕಾಗಿಲ್ಲ. ನೀರು ನಿಲ್ಲಿಸಬೇಕಾಗಿಲ್ಲ.

                 ರಾಮಣ್ಣ ಗೌಡರು ಶ್ರೀಪದ್ಧತಿಯಲ್ಲಿ ಕೃಷಿ ಮಾಡಿದ ಕೃಷಿಕರ ಅನುಭವ ಪಡೆದರು. ಇಲಾಖೆಯು ಮಾಹಿತಿ ನೀಡಿತು. ನೋಡಿ. ಒಂದೊಂದು ಬುಡದಲ್ಲಿ ಎರಡು ಸಸಿ ನೆಟ್ಟಿದ್ದೆ. ಅವುಗಳೆಲ್ಲಾ ಇಪ್ಪತ್ತೈದಕ್ಕೂ ಮಿಕ್ಕಿ ಪಿಳ್ಳೆ ಬಿಟ್ಟಿರೋದು,' ಎನ್ನುವಾಗ ಖುಷಿಯ ನೆರಿಗೆ ಮುಖದಲ್ಲಿ ಮೂಡಿತು. ಸ್ಲರಿ ಸಿಂಪಡಣೆ ಹೊರತು ಪಡಿಸಿ ಮಿಕ್ಕ ಯಾವುದೇ ಗೊಬ್ಬರ ಉಣಿಸಿಲ್ಲ.

                    ಅಂಗಳಲ್ಲಿ ಮತ್ತು ಅಂಗಳದಿಂದ ಅನತಿ ದೂರದಲ್ಲಿ - ಹಿಗೆ ಎರಡು ಪ್ಲಾಟ್ ಮಾಡಿಕೊಂಡಿದ್ದಾರೆ. ಒಂದು ಪ್ಲಾಟಿಗೆ ಬೆಂಕಿ ರೋಗ ವಕ್ಕರಿಸಿತು. 'ಇದೆಲ್ಲಾ ಮಾಮೂಲಿ. ಎಲ್ಲಾ ಕಡೆ ಇದೆ' ಎಂದಿತು ಇಲಾಖೆ. 'ಪೊಟಾಶ್ ಹೆಚ್ಚೇ ಉಣಿಸಿದರೆ ಕಂಟ್ರೋಲ್ ಬರಬಹುದು' ಎಂದರು. ಸೆಗಣಿ ನೀರು ಮತ್ತು ಬೂದಿಯನ್ನು ಮಿಶ್ರಮಾಡಿ ಉಣಿಸಿದರು. 'ಹೇಳುವಂತಹ ಫಲಿತಾಂಶವಿಲ್ಲ. ನಾವು ತಿನ್ನುವ ಆಹಾರವಲ್ವಾ. ರಾಸಾಯನಿಕ ಸಿಂಪಡಣೆ ಮಾಡಲು ಮನಸ್ಸು ಬರಲಿಲ್ಲ' ಎನ್ನುತ್ತಾರೆ.

                    ಕಳೆದ ವರುಷ ಸುಮಾರು ಮೂರು ಕ್ವಿಂಟಾಲ್ ಭತ್ತದ ಇಳುವರಿ. ಈ ವರುಷ ನಾಲ್ಕು ಕ್ವಿಂಟಾಲಿನತ್ತ ಲಕ್ಷ್ಯ. ರಾಮಣ್ಣ ಗೌಡರದು ಹನ್ನೆರಡು ಮಂದಿ ಸದಸ್ಯರ ಕೂಡು ಕುಟುಂಬ. 'ವರ್ಷದಲ್ಲಿ ನಾಲ್ಕು ತಿಂಗಳು ನಾವು ಬೆಳೆದ ಅಕ್ಕಿಯನ್ನು ಉಣ್ಣುತ್ತೇವೆ. ಮುಂದಿನ ಸಲದಿಂದ ಇನ್ನೂ ವಿಸ್ತಾರ ಮಾಡಬೇಕೆಂದಿದೆ', ಹೊಸ ಸುಳಿವು ನೀಡಿದರು. ನೀರು ನಿಲ್ಲಿಸದೆ ಕೃಷಿ ಮಾಡುವುದರಿಂದ ಇಲಿ ಕಾಟ ಜಾಸ್ತಿ.

                     ಹೈನುಗಾರಿಕೆಯು ಬದುಕಿನೊಂದಿಗೆ ಹೊಸೆದ ವೃತ್ತಿ. ಎಂಟು ಹಸುಗಳಿವೆ. ಐದು ಕರೆವಿನದು. ಮನೆಮಂದಿಯ ನಿರ್ವಹಣೆ. ಇವರಿಗೆ ಪುತ್ತೂರಿನಲ್ಲಿ 'ಸಂಗೀತ ಕ್ಯಾಂಟಿನ್' ಹೋಟೇಲಿದೆ. ದಿವಸಕ್ಕೆ ಸುಮಾರು 50-60 ಲೀಟರ್ ಲಭ್ಯ. ಇದರಲ್ಲರ್ಧ ಹೋಟೇಲಿಗೆ ಒಯ್ದರೆ, ಮಿಕ್ಕುಳಿದುದು ಡೈರಿಗೆ. ಕೆ.ಎಂ.ಎಫ್.ನಿಂದ ಕೆಯ್ಯೂರು ಗ್ರಾಮದಲ್ಲಿ ಅತಿ ಹೆಚ್ಚು ಹಾಲು ಹಾಕುವ ಹೈನುಗಾರನೆಂಬ ಪುರಸ್ಕಾರ ಪ್ರಾಪ್ತಿ.

                     ಸ್ಲರಿ, ಕಾಂಪೋಸ್ಟ್ ಅಡಿಕೆ ಕೃಷಿಗೆ ಒಳಸುರಿ. 'ಅಡಿಕೆ ತೋಟವಿದ್ದವರು ಹೈನುಗಾರಿಕೆ ಮಾಡಲೇಬೇಕು' ಎನ್ನುವ ನಿಲುವು. ಪಶುಆಹಾರಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ತಂದು, ತಾವೇ ಪಾಕ ಮಾಡಿಕೊಳ್ಳುತ್ತಾರೆ. ಇವರಿಗೆ ಹೈನುಗಾರಿಕೆ ಎಂದೂ ಕಿರಿಕಿರಿ ಆದುದಿಲ್ಲ ಎನ್ನುವುದು ಗಮನಾರ್ಹ. ಅಝೋಲಾ ಬೆಳೆದು ಮಿತವಾಗಿ ಹಸುಗಳಿಗೆ ತಿನ್ನಿಸುತ್ತಾರೆ.

                     ಸುಮಾರು ನಾಲ್ಕು ದಶಕದಿಂದ ಪುತ್ತೂರಿನ ಬೈಪಾಸಿನಲ್ಲಿರುವ ಇವರ 'ಸಂಗೀತ ಕ್ಯಾಂಟಿನ್' ಕುರಿತು ಎರಡು ಮಾತು ಹೇಳಲೇಬೇಕು. ಇವರ ಸಹೋದರ ರಾಮಚಂದ್ರ ಗೌಡರ ಕೈರುಚಿಯನ್ನು ಉಣ್ಣುವುದಕ್ಕೆ ಬರುವ ಗ್ರಾಹಕರ ಗಡಣ ದೊಡ್ಡದು. ಗೊಣಗಾಟವಿಲ್ಲದೆ ಗ್ರಾಹಕರನ್ನು ಸಂತೃಪ್ತಿಪಡಿಸುವ ಅಣ್ಣ-ತಮ್ಮ ಇವರಿಬ್ಬರು ರಾಮ ಲಕ್ಷ್ಮಣರಿದ್ದಂತೆ ಎಂದರೆ ಅತಿಶಯೋಕ್ತಿಯಲ್ಲ. ವಾರದಲ್ಲಿ ಬಹುಪಾಲು ಇವರ ತೋಟದ ಉತ್ಪನ್ನಗಳು ಹೋಟೆಲಿನಲ್ಲಿ ಖಾದ್ಯವಾಗಿ ಉದರ ಸೇರುತ್ತವೆ.

                      ನಿಮ್ಮ ಹೋಟೆಲನ್ನು ಹುಡುಕಿ ಬರುವ ಗ್ರಾಹಕರಿದ್ದಾರೆ, ಇದರ ಮರ್ಮ ಏನು ಎಂದು ಪ್ರಶ್ನಿಸಿದೆ. ರಾಮಣ್ಣ-ರಾಮಚಂದ್ರ ಹೇಳುತ್ತಾರೆ, ಇದು ಗ್ಯಾಸ್ ಯುಗ. ನಾವು ಕಟ್ಟಿಗೆಯಲ್ಲೇ ಅಡುಗೆ ಮಾಡುತ್ತೇವೆ. ಹಾಗಾಗಿ ಖಾದ್ಯಕ್ಕೆ ರುಚಿ ಹೆಚ್ಚು. ಕಳೆದ ಮೂವತ್ತೆಂಟು ವರುಷದಿಂದ ಹೋಟೆಲಿನ ಅಡುಗೆ ಮನೆಗೆ ಗ್ಯಾಸ್ ಸಿಲಿಂಡರ್ ಬಂದಿಲ್ಲ. ಮುಖ್ಯವಾಗಿ ನಮ್ಮಲ್ಲಿಗೆ ಬರುವ ಗ್ರಾಹಕರು ಮನೆಗೆ ಬಂದ ನೆಂಟರಂತೆ. ಬಹುಶಃ ಈ ಪ್ರೀತಿ ಇರಬಹುದೇನೋ. ನಮ್ಮಲ್ಲಿ ಉಂಡವರು ಹರಸಿ ಹೋಗುತ್ತಾರೆ!.
                    
             ಹೋಟೇಲಿನಲ್ಲಿ ಉಳಿಯುವ ಅಡುಗೆ ತ್ಯಾಜ್ಯ, ಉಂಡ ಬಾಳೆಎಲೆಯನ್ನು ಸಂಗ್ರಹಿಸುತ್ತಾರೆ. ಮನೆಯ ಹಟ್ಟಿ ಪಕ್ಕ ಇರುವ ಕಾಂಪೋಸ್ಟ್ ಹೊಂಡಕ್ಕೆ ಸೇರಿಸುತ್ತಾರೆ. 'ಕೃಷಿಯಲ್ಲಿ ಯಾವುದೂ ವ್ಯರ್ಥವಲ್ಲ. ಜಾಣ್ಮೆಯಿಂದ ಕೃಷಿ ಮತ್ತು ಬದುಕನ್ನು ಸಮತೋಲನಗೊಳಿಸಿದರೆ ವಿಮುಖತೆ ಬಾರದು' ಎನ್ನುವ ಸಂದೇಶ ಅವರ ಬದುಕಿನಲ್ಲಿ ಕಂಡೆ. ಕೃಷಿ, ಹೈನುಗಾರಿಕೆ, ಹೋಟೆಲ್ ಉದ್ಯಮವನ್ನು ಜತೆಜತೆಯಾಗಿ ನಿಭಾಯಿಸುವ ರಾಮಣ್ಣ ಗೌಡರ ಕುಟುಂಬವು ಒಂದು ದಿವಸವೂ 'ನಮಗೆ ಕೃಷಿ ಸಾಕಪ್ಪಾ' ಎಂದು ಹೇಳಿಲ್ಲ. ಇವರು ಕೃಷಿಯ ವಿದ್ಯಮಾನಗಳತ್ತ ನಿತ್ಯ ಕುತೂಹಲಿ. (9480016812)


'ಕೃಷಿಕನ ಸಮಯಕ್ಕೂ ಬೆಲೆಯಿದೆ'

  
                ಕೃಷಿಕ ಪೈಲೂರು ಶ್ರೀನಿವಾಸ ರಾವ್ (70) ಕೃಷಿ ಚಿಂತಕ. ಸುಳ್ಯ ಸನಿಹದ ಕುಕ್ಕುಜಡ್ಕದ ಹಳ್ಳಿಯಲ್ಲಿದ್ದು ಕೃಷಿ ಮಾಡುತ್ತಾ ಕೃಷಿಯನ್ನೂ ಓದುತ್ತಾರೆ! ಓದಿದ ಅನುಭವವನ್ನು ಕೇಳುವ ಮನಸ್ಥಿತಿಯವರೊಂದಿಗೆ ಹಂಚಿಕೊಳ್ಳುತ್ತಾರೆ. ಕೃಷಿ ಪಲ್ಲಟಗಳ ಕಾಲಮಾನದಲ್ಲೂ ರಾಯರು ಅಧೀರಾಗದೆ, 'ಬಂದುದನ್ನು ಬಂದ ಹಾಗೆ ಸ್ವೀಕರಿಸಬೇಕು' ಎಂಬ ಮನೋಬಲವನ್ನು ಗಟ್ಟಿಮಾಡಿಕೊಂಡವರು. ಪೈಲೂರು ಅವರೊಂದಿಗೆ ಮಾತುಕತೆಯ ಸಂದರ್ಭದಲ್ಲಿ ಹಾದು ಹೋದ ಕೃಷಿಬದುಕಿನ ಒಳನೋಟಗಳಲ್ಲಿ ಭೂತಕಾಲದ ಖುಷಿಯಿದೆ. ವರ್ತಮಾನದ ಸಂಕಟವಿದೆ. ಭವಿಷ್ಯದ ನಿರೀಕ್ಷೆಯಿದೆ, ಆಶಾಭಾವನೆಯಿದೆ. 

          ಕೃಷಿಕನಿಗೆ ತನ್ನ ಕೃಷಿ ಉತ್ಪನ್ನವನ್ನು ಮಾರುಕಟ್ಟೆ ಮಾಡಲು ಆಸಕ್ತಿಯಿರುವುದು ಸಹಜ. ಆದರೆ ತಾನು ಬೆಳೆದುದನ್ನು ತಾನು, ತನ್ನ ಕುಟುಂಬ ತಿನ್ನುವಲ್ಲಿ ಮೊದಲಿಗೆ ಆಸ್ಥೆ ವಹಿಸಬೇಕು. ಮನೆಯಲ್ಲಿ ಬೆಳೆದುದು ಎಲ್ಲವನ್ನೂ ಮಾರುವ ಚಾಳಿ ಯಾಕೆ?  ಸ್ವಲ್ಪ ಸ್ನೇಹಿತರಿಗೂ ಹಂಚಿದರೆ ಏನು?  ಅಗ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಅದು ದುಡ್ಡು ಕೊಟ್ರೆ ಸಿಗುವುದಿಲ್ಲ. 

          ಸಾಲವೆಂಬುದು ಬಾಳಿನ ಶೂಲ. ಸಾಲ ನೀಡಲು ಹಣಕಾಸು ಸಂಸ್ಥೆಗಳು ಪೈಪೋಟಿಯಲ್ಲಿವೆ. ಸುಲಭದಲ್ಲಿ ಸಿಗುತ್ತೆಂದು ಮಾರು ಹೋಗುವವರೇ ಹೆಚ್ಚು. ಪಡಕ್ಕೊಂಡ ಸಾಲ ಕೃಷಿ ಕೆಲಸಗಳಿಗೆ ವಿನಿಯೋಗವಾದರೆ ಸರಿ. ಆದರೆ ಹೆಚ್ಚಿನ ಸಾಲಗಳು ಕೃಷಿಯೇತರ ಉದ್ದೇಶಗಳಿಗಾಗಿ ವೆಚ್ಚವಾಗುವ ಸಂಗತಿ ಸರ್ವವೇದ್ಯ. ಸಾಲವನ್ನು ಕಟ್ಟಲಾಗದೆ ಕೊನೆಗೆ ಆತ್ಮಹತ್ಯೆಯ ದಾರಿ ಹಿಡಿಯವ ಎಷ್ಟು ಮಂದಿ ಬೇಕು? ಹಾಗಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಲು ಬಲವಂತದಿಂದ ರೂಢಿಸಿಕೊಳ್ಳಬೇಕು. 

          ಕೃಷಿಕನಾದವನಿಗೆ ಸ್ವತಃ ದುಡಿತದ ಅಭ್ಯಾಸದೊಂದಿಗೆ, ಕೆಲಸವನ್ನು ಮಾಡಿಸಲೂ ತಿಳಿದಿರಬೇಕು. ನಾವು ಒಂದು ಗಂಟೆಯಲ್ಲಿ ಮುಗಿಸುವ ಕೆಲಸಕ್ಕೆ ಸಹಾಯಕರಿಗೆ ಒಂದು ದಿನ ಬೇಕು. ಕೆಲಸ ಮಾಡಿಸುವಾಗಲೇ ಯೋಚನೆ, ಯೋಜನೆಯನ್ನು ಹಾಕಿಕೊಂಡರೆ ಸುಲಭವ. ಯಾವ ಕೆಲಸಕ್ಕೆ ಎಷ್ಟು ಸಮಯ ಬೇಕು? ವಿಪರೀತ ಬಿಸಿಲು ಇದ್ದಾಗ, ನೆರಳು ಇದ್ದಾಗ ಯಾವ ಕೆಲಸ? ನಾಲ್ಕು ಮಂದಿ ಇದ್ದರೆ  ಯಾವ ಕೆಲಸವನ್ನು ಹಂಚಬೇಕು? ಒಬ್ಬನೇ ಬಂದಾಗ ಹೇಗೆ ದುಡಿಸಿಕೊಳ್ಳಬೇಕು? ವೇತನ ಎಷ್ಟು ಕೊಡಬಹುದು? ಕನಿಷ್ಠ ಜ್ಞಾನವನ್ನು ಹೊಂದಿಲ್ಲದಿದ್ದರೆ ಕೃಷಿಯಲ್ಲಿ ಯಶಸ್ಸಾಗುವುದು ಕಷ್ಟ. ನೂರು ರೂಪಾಯಿ ಖರ್ಚು ಮಾಡಿ, ಹತ್ತು ರೂಪಾಯಿ ಉತ್ಪನ್ನ ಲಭ್ಯವಾದರೆ ಏನು ಪ್ರಯೋಜನ?

          ಅಧಿಕ ಉತ್ಪನ್ನವನ್ನು ಸುಲಭವಾಗಿ ಪಡೆಯಲು ರಾಸಾಯನಿಕ, ಕೀಟನಾಶಕಗಳ ಬಳಕೆ ಈಚೀಚೆ ಹೆಚ್ಚುತ್ತಿದೆ. ಇದರಿಂದಾಗಿ ಮಣ್ಣಿನ ಫಲವತ್ತತೆ, ಎರೆಹುಳ, ಅಣುಜೀವಿಗಳ ನಾಶ. ಜತೆಗೆ ಪರಿಸರ ನಾಶ. ಕೊನೆಗೆ ಬದುಕೂ ನಾಶ. ಈ ವರ್ತುಲದಿಂದ ಹೊರಬರಲು ಯತ್ನಿಸಲೇ ಬೇಕು. ತನ್ನ ತೋಟಕ್ಕೆ ಬೇಕಾಗುವಷ್ಟು ಗೊಬ್ಬರವನ್ನು ತಯಾರಿಸುವ ಜಾಣ್ಮೆ ಕಲಿತುಕೊಳ್ಳಬೇಕು. ಕೃಷಿಯ ಖರ್ಚು ವೆಚ್ಚಗಳ ಕುರಿತು ನಿಯಂತ್ರಣ ಅಗತ್ಯ. ಈ ವರುಷ ನಮ್ಮ ಜಮೀನಿನಲ್ಲಿ ಒಟ್ಟು ಎಷ್ಟು ಉತ್ಪನ್ನವಾಗಬಹುದು? ಕನಿಷ್ಠ ಧಾರಣೆ ಎಷ್ಟು ಸಿಗಬಹುದು? ಎಂಬ ಲೆಕ್ಕಾಚಾರವನ್ನು ಹಾಕಿಟ್ಟುಕೊಳ್ಳಬೇಕು. ಸಿಕ್ಕ ಲಾಭಾಂಶದಲ್ಲಿ ಮೂರನೇ ಒಂದಂಶ ಕೃಷಿಗೆ ಬಳಸಿ. ನಂತರದ ಮೂರನೇ ಒಂದಂಶ ಜೀವನ ನಿರ್ವಹಣೆಗೆ ಮತ್ತು ಮಿಕ್ಕ ಮೂರನೇ ಒಂದನ್ನು ಉಳಿತಾಯ ಮಾಡಿ. ಕೃಷಿಕ ತನ್ನ ಲೆಕ್ಕವನ್ನು ತಾನು ಬರೆಯಬೇಕು. ಅಗ ಎಲ್ಲೆಲ್ಲಿ ಖಚರ್ು ಕಡಿಮೆ ಮಾಡಬಹುದೆನ್ನುವ ಪ್ಲಾನ್ ಮಾಡಿಕೊಳ್ಳಲು ಅನುಕೂಲ.

          ಕೃಷಿಕನ ಸಮಯಕ್ಕೂ ಬೆಲೆಯಿದೆ. ಹಳ್ಳಿಯಲ್ಲೇ ಸರಿದೂಗಿಸಬಹುದಾದ ಸಣ್ಣ ಪುಟ್ಟ ಕೆಲಸಗಳಿಗೂ ನಗರಕ್ಕೆ ಓಡುವುದರಿಂದ ಸಮಯವೂ ಹಾಳು, ಕೃಷಿಯೂ ಹಾಳು. ಕರೆ ಬಂತೆಂದು ಎಲ್ಲಾ ಸಮಾರಂಭಗಳಿಗೂ ಹೋಗುತ್ತಾ ಇದ್ದರೆ ಅದೇ ಕೆಲಸ ಮಾಡಬೇಕಷ್ಟೇ. ಅಗತ್ಯಬಿದ್ದರೆ ಮಾತ್ರ ಭಾಗವಹಿಸೋಣ. ಇನ್ನೊಬ್ಬರನ್ನು ತೃಪ್ತಿಪಡಿಸಲು, ಉದ್ಧಾರ ಮಾಡಲು ನಿಮ್ಮ ಅಮೂಲ್ಯ ಸಮಯ ಹಾಳುಮಾಡಬೇಡಿ. 

          ಬೇರೆ ತೋಟಗಳ ವೀಕ್ಷಣೆ, ಅಲ್ಲಿನ ಕೃಷಿಕರೊಂದಿಗೆ ಮುಖಾಮುಖಿಯಾದಾಗ ಕಷ್ಟ-ಸುಖಗಳ ವಿನಿಮಯವಾಗುವುದು. ಜ್ಞಾನ ಹೆಚ್ಚುವುದು. ಕೃಷಿ ಪತ್ರಿಕೆಯನ್ನು ಓದುವ ಅಭ್ಯಾಸವಿಟ್ಟುಕೊಂಡರೆ ಬೌದ್ಧಿಕ ಸಂಪತ್ತು ಅಪ್ಡೆಟ್ ಆಗುತ್ತಿರುತ್ತದೆ. ವಾಹಿನಿಗಳ ಕೃಷಿ ಕಾರ್ಯಕ್ರಮಗಳನ್ನು ನೋಡುತ್ತಿದ್ದರೆ ದೇಶಮಟ್ಟದಲ್ಲಿ ಏನೇನೂ ಬದಲಾವಣೆಗಳಾಗುತ್ತಿವೆ ಎಂಬ ಅರಿವು ಉಂಟಾಗುತ್ತದೆ. ಆಕಾಶವಾಣಿಯ ಕೃಷಿ ಕಾರ್ಯಕ್ರಮಗಳನ್ನು ಆಲಿಸುವ ಹವ್ಯಾಸವಿಟ್ಟುಕೊಳ್ಳಿ.
ನಾನು ಬೆಳ್ಳಂಬೆಳಿಗ್ಗೆ ಏಳುತ್ತೇನೆ. ಮನೆ, ಹಿತ್ತಿಲು ಶುಚಿಯಾಗಿಡುವುದು ಬದುಕಿಗಂಟಿದ ಶಿಸ್ತು. ನಿತ್ಯ ತೋಟಕ್ಕೆ ಎರಡು ಸಲ ಪಯಣ. ವಾರಕ್ಕೆ ಎರಡು ಸಲ ಅಂಚೆ ತರಲು ಹತ್ತಿರದ ಪೇಟೆಗೆ ಸವಾರಿ. ಹಲವು ವರುಷದಿಂದ ಸ್ಕೂಟರೊಂದು ನನ್ನ ಸಂಗಾತಿ. ನಾನು ಸಮಾಜದಲ್ಲಿ ನೋಡುತ್ತಾ ಇರುತ್ತೇನೆ, ಲಕ್ಷಗಟ್ಟಲೆ ಖರ್ಚು ಮಾಡಿದ ತಂಪುಕಾರಿನಲ್ಲಿ ಒಬ್ಬನೇ ಪಯಣಿಸುವುದು ಇದೆಯಲ್ಲಾ ನಿಜಕ್ಕೂ ಅದು ರಾಷ್ಟ್ರೀಯ ನಷ್ಟ! 

.. ಹೀಗೆ ಹಲವಾರು ವಿಚಾರಗಳನ್ನು ಪೈಲೂರು ಶ್ರೀನಿವಾಸ ರಾಯರು ಮಾತನಾಡುತ್ತಿದ್ದಂತೆ ಚೇರ್ಕಾಡಿ ರಾಮಚಂದ್ರ ರಾಯರು ನೆನಪಾದರು. ಯಾಕೆಂದರೆ ಚೇರ್ಕಾಡಿಯವರು ಏನು ಹೇಳ್ತಾರೋ, ಅದನ್ನೇ ಮಾಡಿ ತೋರಿಸಿದ್ದರು.

ತರಕಾರಿಯಲ್ಲಿವರು ಪೂರ್ಣ ಸ್ವಾವಲಂಬಿ


              'ನಮ್ಮ ಮನೆಯ ಊಟಕ್ಕೆ ನಮ್ಮದೇ ತರಕಾರಿ. ಅಂಗಡಿಯನ್ನು ಆಶ್ರಯಿಸುವುದಿಲ್ಲ' ಎನ್ನುತ್ತಾ ಕೃಷಿಕ ವರ್ಮುಡಿ ಶಿವಪ್ರಸಾದ್ ತರಕಾರಿ ತೋಟಕ್ಕೆ ಕರೆದೊಯ್ಯುತ್ತಾರೆ. ಅನುಭವವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ತಾನು ಮಾಡಿದ ಕೃಷಿ ಉಪಾಯಗಳನ್ನು ಹಂಚಿಕೊಳ್ಳುತ್ತಾರೆ. ವಿಷ ಸಿಂಪಡಿಸದೆ ತರಕಾರಿ ಬೆಳೆಯಲು ಸಾಧ್ಯ ಎಂಬುದನ್ನು ಬೆಳೆದು ತೋರಿದ್ದಾರೆ.

          ತೊಂಡೆಕಾಯಿ ಆಪತ್ತಿನ ಸಹಾಯಿ. ಇತರ ತರಕಾರಿಗಳು ಅಡುಗೆಗೆ ಕೈಕೊಟ್ಟಾಗ ತೊಂಡೆಚಪ್ಪರದಲ್ಲಿ ಹತ್ತಾರು ಕಾಯಿಗಳಾದರೂ ಇದ್ದೇ ಇರುತ್ತದೆ. 'ತೊಂಡೆಕಾಯಿ ಬಳ್ಳಿಗೆ ಎರಡು ವರುಷ ಆಯಸ್ಸು. ಒಮ್ಮೆ ನೆಟ್ಟ ಹೊಂಡದಲ್ಲಿ ಪುನಃ ನೆಡಬಾರದು. ಮಡಿ ಬದಲಿಸಬೇಕು' ಎನ್ನುವುದು ಅನುಭವ. ಸಾಕಷ್ಟು ಬಿಸಿಲು ಬೀಳುವ ಜಾಗದಲ್ಲಿ ನೆಟ್ಟರೆ ಕ್ರಿಮಿಕೀಟ ಕಡಿಮೆ.

          ತೊಂಡೆಕಾಯಿ ಚಪ್ಪರದ ಸುತ್ತಮುತ್ತ ಹೀರೆಕಾಯಿ, ಸೊರೆಕಾಯಿ, ಬದನೆ, ಬೆಂಡೆ, ಹಾಗಲಕಾಯಿ, ಹರಿವೆ. ಮನೆಯಂಗಳದಲ್ಲಿ ಚೀನಿಕಾಯಿ, ಮುಳ್ಳುಸೌತೆ, ಬೀನ್ಸ್, ಅಲಸಂಡೆ, ಬೆಂಡೆ. ಮಳೆಗಾಲದಲ್ಲಿ ಚೀನಿಕಾಯಿ ಯಾ ಗೋವೆಕಾಯಿಗೆ ಕೃತಕ ಪರಾಗಸ್ಪರ್ಶ ಮಾಡುತ್ತಾರೆ. 'ತರಕಾರಿ ತೋಟದ ಮಧ್ಯೆ ಅಲ್ಲಲ್ಲಿ ತುಳಸಿ, ಕಾಮಕಸ್ತೂರಿ ಗಿಡಗಳಿದ್ದರೆ ಕೀಟಗಳ ಧಾಳಿ ಕಡಿಮೆ' ಎನ್ನುವುದನ್ನು ಅನುಭವದಿಂದ ಕಂಡುಕೊಂಡ ಸತ್ಯ.  

          ಎರಡು ದಶಕದಿಂದ ತಮ್ಮದೇ ತರಕಾರಿ ಬೀಜಗಳ ಮರುಬಳಕೆ. ಸಸಿ ತಯಾರಿಸುವಾಗ ಮಾತ್ರ ಸುಡುಮಣ್ಣು. ನಂತರ ಹಟ್ಟಿಗೊಬ್ಬರ, ಸೆಗಣಿ ದ್ರಾವಣ. ಬಳ್ಳಿ ತರಕಾರಿಗಳ ಗಿಡಗಳು ಕ್ಷೀಣವಾದಾಗ ಅವುಗಳಿಗೆ ಕೋಳಿಗೊಬ್ಬರದ ಡೋಸೇಜ್. ಕಡಲೆ ಹಿಂಡಿ, ಸೆಗಣಿಯನ್ನು ಕೊಳೆಯಿಸಿ ಮಾಡಿದ ದ್ರಾವಣವು ಗಿಡಗಳಿಗೆ ಗ್ಲೂಕೋಸ್. ಕಾಸರಕ, ಗೇರು, ಕಹಿಬೇವು.. ಮೊದಲಾದ ಚೊಗರಿನಿಂದ ತಯಾರಿಸಿದ ಕಷಾಯಗಳ ಸಿಂಪಡಣೆಯಿಂದ ಕೀಟಬಾಧೆ ನಿಯಂತ್ರಣ. 'ನಮ್ಮ ತರಕಾರಿ, ಅಡಿಕೆ ತೋಟಗಳಿಗೆ ರಾಸಾಯನಿಕ ಗೊಬ್ಬರದ ಚೀಲಗಳು, ಸಿಂಪಡಣಾ ಶೀಸೆಗಳು ಬರುವುದಿಲ್ಲ' ಎನ್ನುವಲ್ಲಿ ಅಭಿಮಾನ. 

          ತರಕಾರಿಯೊಂದಿಗೆ ಹಲಸಿಗೆ ಮೊದಲ ಮಣೆ. ಹಲಸಿನ ಎಳೆ ಗುಜ್ಜೆಯಿಂದ ಹಣ್ಣಿನ ತನಕ ವಿವಿಧ ವೈವಿಧ್ಯ ಖಾದ್ಯಗಳ ತಯಾರಿ.  ಇವರ ಮನೆಯಲ್ಲಿ ವರುಷದಲ್ಲಿ ನಾಲ್ಕೈದು ಬಾರಿ ಸಮಾರಂಭಗಳು ಜರಗುತ್ತವೆ. ಏನಿಲ್ಲವೆಂದರೂ ನೂರು ಮಂದಿ ಅತಿಥಿಗಳು ಖಚಿತ. ಹೀಗಿದ್ದೂ ಮಾರುಕಟ್ಟೆಯಿಂದ ತರಕಾರಿ ಬರುವುದಿಲ್ಲ. ಹಲಸಿನ ಐಟಂ ಇಲ್ಲದೆ ಸಮಾರಂಭ ಇಲ್ಲ! 'ಇಂದು ಪೆಲಕಾಯಿ (ಹಲಸು) ಉಂಟು' ಎನ್ನುತ್ತಾ ಬರುವ ಹಲಸು ಪ್ರಿಯರೂ ಇದ್ದಾರಂತೆ! 

          ಶಿವಪ್ರಸಾದರ ಅಡುಗೆ ಮನೆ ನಿತ್ಯ ನೂತನ. ಮನೆಯೊಡತಿ ಶೈಲಜಾರಲ್ಲಿ ಹೊಸ ಹೊಸ ಮೆನುಗಳು ರೂಪುಗೊಳ್ಳುತ್ತ, ಅದರ ಅನುಷ್ಠಾನವಾಗುತ್ತಾ ಇರುತ್ತವೆ. ಮನೆಗೆ ನೆಂಟರು ಬಂದರಂತೂ ಖುಷಿಯೋ ಖುಷಿ. ಹೊಸ ಹೊಸ ಖಾದ್ಯಗಳು, ಸಿಹಿಗಳು ತಯಾರಾಗಿ ಬಿಡುತ್ತವೆ. 'ಕೃಷಿಕನಾದವನು ತರಕಾರಿಯಲ್ಲಿ ಶೇ.90ರಷ್ಟು ಸ್ವಾವಲಂಬಿಯಾಗಬೇಕು' ಎನ್ನುವುದು ಅವರ ಬದುಕಿನ ಬದ್ಧತೆ. 

          ಕಾಡು ಮಾವು, ಮಿಡಿ ಮಾವು, ಹಣ್ಣಿಗಿರುವ ಮಾವು.. ಹೀಗೆ ಅವರ ಗುಡ್ಡ ಪೂರ್ತಿ ಮಾವಿನ ಸಂಸಾರ. ಕಾಡು ಮಾವಿಗೆ ಹೆಚ್ಚು ಒಲವು. ಒಂದೊಂದು ಮರದ ಸುತ್ತ ರೋಚಕ ಕತೆಗಳು. 'ಇದು ಅಜ್ಜ ನೆಟ್ಟ ನೀಲಂ ತಳಿ, ಇದು ಚಿತ್ತೂರು ನೀಲಂ..' ಹೀಗೆ ಮಾತಿಗೆಳೆಯುತ್ತಾ, ಅಜ್ಜನ ಮಾವಿನ ಪ್ರೀತಿಯನ್ನು ಜ್ಞಾಪಿಸಿಕೊಳ್ಳುತ್ತಾರೆ:-    
     
            ಅಜ್ಜ ಸುಬ್ಬಯ ಭಟ್ಟರು ಅಡಿಕೆ ವ್ಯಾಪಾರಕ್ಕಾಗಿ ಮಂಗಳೂರಿಗೆ ಹೋಗುತ್ತಿದ್ದರು. ಮಾವು ಸೀಸನ್ನಿನಲ್ಲಿ ಮಂಗಳೂರಿನಿಂದ ಅಜ್ಜಿಗೆ ಕಸಿ ಮಾವಿನ ಹಣ್ಣಿನ ಉಡುಗೊರೆ. ಅಜ್ಜಿಗೆ ಮಾವಿನ ಹಣ್ಣೆಂದರೆ ಪ್ರಾಣ. ಆಗ 'ಹತ್ತು ಮಾವಿನ ಹಣ್ಣು ಖರೀದಿಸಿ ತಂದರೆ ಅದು ಗ್ರೇಟ್. ಅಂತಹವರು ಕಿಂಗ್!' ಎಂಬ ಭಾವನೆ. ಮಾವು ತಮಿಳುನಾಡಿನಿಂದ ಮಂಗಳೂರು ಮಾರುಕಟ್ಟೆಗೆ ಬರುತ್ತಿತ್ತು. 'ನಿನಗೆ ಪ್ರತೀ ವರುಷ ತರುವುದಕ್ಕಿಂತ ನಮ್ಮ ಭೂಮಿಯಲ್ಲಿ ಮಾಡಿದರೆ ಹೇಗೆ?' ಅಜ್ಜನ ದೂರದೃಷ್ಟಿ. ಅಜ್ಜಿಯಿಂದ ಹಸಿರು ನಿಶಾನೆ. 

              ಮಾವು ಮಾರುವವನ ದುಂಬಾಲು ಬಿದ್ದು, ಮೂಲ ನೆಲೆಯ ಪತ್ತೆ. ಐದು ಮಂದಿಯ ತಂಡ ಎತ್ತಿನ ಗಾಡಿಯಲ್ಲಿ ಸೇಲಂಗೆ ಪ್ರಯಾಣ. ಅದರಲ್ಲೊಬ್ಬ ಕಸಿ ಪ್ರವೀಣ. ಸುಂಕದ ಗೇಟ್ನಲ್ಲೆಲ್ಲಾ ನಿಭಾಯಿಸಿಕೊಂಡರು. ಸೇಲಂಗೆ ಹೋಗಿ ಕಸಿ ಕಟ್ಟಿ ಬಂದರು. ಅದರ ನಿರ್ವಹಣೆಗೆ ಸಹಾಯಕರನ್ನು ನೇಮಿಸಿದರು. ಮುಂದಿನ ವರುಷ ಗಿಡಗಳನ್ನು ತರಲು ಪುನಃ ಪ್ರಯಾಣ.  ಹೀಗೆ ಅಭಿವೃದ್ಧಿಯಾದ ಕಸಿ ಮಾವಿನ ಗಿಡಗಳು ವರ್ಮುಡಿಯವರ ತೋಟದಲ್ಲಿ ಅಲ್ಲದೆ, ಕುಟುಂಬಿಕರ ತೋಟದಲ್ಲೂ ಹಣ್ಣು ನೀಡುತ್ತಿದೆ. 
 
                ತರಕಾರಿ ಮಾತ್ರವಲ್ಲ, ತನ್ನೆಲ್ಲಾ ಕೃಷಿಯ ಸುತ್ತ ಬದ್ಧತೆಯ ಕವಚ. ಕೃಷಿಯಲ್ಲಿ ತಾನು ಕಂಡ, ಅನುಭವಿಸಿದ ಸತ್ಯ, ಸಿದ್ಧಾಂತಗಳಲ್ಲಿ ರಾಜಿಯಿಲ್ಲದ ಬದುಕು. ನಿರ್ವಿಷ, ಅಪ್ಪಟ ಸಾವಯವ ಕೃಷಿ.   (09495180307, 04998-225167)

Wednesday, September 11, 2013

ಗಂಗವ್ವ ದಂಪತಿಗೆ ಕೃಷಿ-ಖುಷಿಯಲ್ಲಿ ಆತ್ಮಾಭಿಮಾನ



             "ಹೈನುಗಾರಿಕೆಯಿಂದಲೇ ಮಗನನ್ನು ಇಂಜಿನಿಯರಿಂಗ್ ವರೆಗೆ ಓದಿಸಿದ್ದೇವೆ. ಈಗ ಅವನು ನೌಕರಿಯಲ್ಲಿದ್ದಾನೆ," ಎನ್ನುವಾಗ ಧಾರವಾಡ ಎರಿಕೊಪ್ಪದ ಗಂಗವ್ವ ಮುಖ ಅರಳುತ್ತದೆ. ಕೃಷಿಯಿಂದ ಕೃಷಿಕರು ವಿಮುಖವಾಗುತ್ತಿರುವ ಕಾಲಮಾನದಲ್ಲಿ ಗಂಗವ್ವ ಅವರ ಮಾತಿನ ಹಿಂದೆ ಕಾಯಕಷ್ಟದ ದಿನಗಳಿವೆ. ಕೃಷಿಯಲ್ಲಿ ಖುಷಿ ಕಂಡ ದಿನಗಳಿವೆ.

             ಹಟ್ಟಿತುಂಬಾ ಆಕಳು, ಎಮ್ಮೆಗಳಿದ್ದ ದಿವಸಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ನಿರ್ವಹಣೆಯ ಅನುಕೂಲಕ್ಕಾಗಿ ಈಗ ಎರಡೆರಡು ಎಮ್ಮೆ, ಆಕಳುಗಳಿವೆ. ಗಂಗವ್ವರ ಪತಿ ಶ್ರೀಕಾಂತ. ಕಾಲು ಶತಮಾನದಿಂದ ಎರಿಕೊಪ್ಪದಿಂದ ಹತ್ತು ಕಿಲೋಮೀಟರ್ ದೂರದ ಹುಬ್ಬಳ್ಳಿಗೆ ನಿತ್ಯ ಹಾಲು ಸರಬರಾಜು ಮಾಡುವುದು ಬದುಕಿನಂಗ.

            ಎರಿಕೊಪ್ಪ ಸುತ್ತಲಿನ ಸುಮಾರು ಇಪ್ಪತ್ತರಿಂದ ಮೂವತ್ತು ಮನೆಗಳಿಂದ ಹಾಲು ಖರೀದಿ. ಬೆಳಿಗ್ಗೆ ಆರು ಗಂಟೆಗೆ ಹೊರಟರೆ ಎಲ್ಲಾ ಕೆಲಸ ಮುಗಿಸಿ ಹನ್ನೆರಡು ಗಂಟೆ ಹೊತ್ತಿಗೆ ಮರಳುತ್ತಾರೆ. ಸೈಕಲಿನಲ್ಲಿ ಐದಾರು ಕ್ಯಾನ್ ಪೇರಿಸಿ ಹೊರಡುವ ಶ್ರೀಕಾಂತರು ತರುವ ಹಾಲನ್ನು ಕಾಯುವ ನಲವತ್ತು ಕುಟುಂಬಗಳಿವೆ. ಇವರೆಲ್ಲಾ ಬೇರೆ ಬೇರೆ ಕಚೇರಿಗಳಲ್ಲಿ ಉದ್ಯೋಗಿಗಳು.
ಒಂದು ಲೀಟರಿಗೆ ಇಪ್ಪತ್ತೈದು ರೂಪಾಯಿಯಂತೆ ಹಾಲು ಖರೀದಿ. ಮೂವತ್ತು ರೂಪಾಯಿಗೆ ಮಾರಾಟ. ಆಕಳಿನದೇ ಬೇಕೆಂದು ಬೇಡಿಕೆ ಮುಂದಿಡುವ ಗ್ರಾಹಕರಿದ್ದಾರೆ.

            ಆಕಳಿನ ಹಾಲಿಗೆ ಐದು ರೂಪಾಯಿ ಅಧಿಕ. ಮನೆಯಲ್ಲೇ ಸಿದ್ಧಪಡಿಸಿದ ಬೆಣ್ಣೆಗೂ ಖಾಯಂ ಗಿರಾಕಿಗಳು. ತಿಂಗಳಿಗೆ ಸುಮಾರು ಹತ್ತು ಕಿಲೋ ಬೆಣ್ಣೆ ಮಾರಾಟ. ಕಿಲೋಗೆ ಮುನ್ನೂರು ರೂಪಾಯಿ ದರ.

               "ಹುಬ್ಬಳ್ಳಿಯಲ್ಲಿ ಕೆ.ಎಂ.ಎಫ್. ಡೈರಿ ಘಟಕ ಆರಂಭವಾಗಿದೆ. ಹಾಗಾಗಿ ಸ್ವಲ್ಪಮಟ್ಟಿಗೆ ವ್ಯಾಪಾರ ಕಡಿಮೆ. ಆದರೂ ನಾನು ತರುವ ಹಾಲನ್ನೇ ಇಚ್ಛೆಪಡುವ, ಅದಕ್ಕಾಗಿ ಕಾಯುವ ಗ್ರಾಹಕರಿದ್ದಾರೆ. ಅವರಿಗೆ ತೊಂದರೆಯಾಗಬಾರದು," ಎನ್ನುವ ಪ್ರಾಮಾಣಿಕ ಕಾಳಜಿ ಶ್ರೀಕಾಂತರದು.

                ಪತಿ ಹಾಲು ವ್ಯಾಪಾರ ಮಾಡಿದರೆ, ಕಾಕಡ ಕೃಷಿಯು ಗಂಗವ್ವರ ಸುಪರ್ದಿ. ಮನೆಮುಂದೆ ಇಪ್ಪತ್ತು ಗುಂಟೆ ಜಾಗದಲ್ಲಿ ಐವತ್ತು ಕಾಕಡ ಗಿಡಗಳಿವೆ. ಎಲ್ಲವೂ ಎರಡು ವರುಷದ ಗಿಡಗಳು. ದಶಂಬರಿಂದ ಮೇ ತನಕ ದಿನಕ್ಕೆ 50-60 ಮಾರು ಹೂ ಮಾರಾಟ. ಸೀಸನ್ನಿನಲ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆ ದಿನಚರಿ ಆರಂಭವಾದರೆ ರಾತ್ರಿ ಹನ್ನೆರಡಾದರೂ ಹೂವಿನ ಕೆಲಸ ಮುಗಿಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮನೆಮಂದಿಯಲ್ಲದೆ ನೆರೆಕರೆಯ ಸಹಾಯಕರನ್ನು ಅವಲಂಬಿಸುತ್ತಾರೆ.
ಏನಿಲ್ಲವೆಂದರೂ ಕಾಕಡ ಹೂವಿನಿಂದ ದಿವಸಕ್ಕೆ ಸರಾಸರಿ ಐನೂರು ರೂಪಾಯಿ ರೊಕ್ಕ ಬರುತ್ತೆ. ಒಂದು ಸಾವಿರ ಬಂದುದೂ ಇದೆ ಎನ್ನುತ್ತಾರೆ ಗಂಗವ್ವ. ಗಿಡದಿಂದ ಆಯ್ದ ಮೊಗ್ಗನ್ನು ಕಟ್ಟಿ ಮಾಲೆ ಮಾಡುವುದು ತ್ರಾಸದ ಕೆಲಸ. ಜೂನಿನಿಂದ ಸೆಪ್ಟೆಂಬರ್ ತನಕ ಹೂ ಕಡಿಮೆ.

              ಗಿಡ ನೆಟ್ಟು ಆರು ತಿಂಗಳಲ್ಲಿ ಹೂ ಬಿಡಲು ಆರಂಭ. ಹಟ್ಟಿಗೊಬ್ಬರ ಉಣಿಕೆ. ಕೊಳವೆ ಬಾವಿಯ ನೀರಿನಿಂದ ನೀರಾವರಿ. ಗಿಡಗಳಿಗೆ ಧಾಳಿಯಿಡುವ ಕೀಟಗಳ ನಿಯಂತ್ರಣಕ್ಕೆ ವಾರಕ್ಕೆ ಎರಡು ಬಾರಿ ರಾಸಾಯನಿಕ ಸಿಂಪಡಣೆ. ಈ ಭಾಗದಲ್ಲಿ ರಾಸಾಯನಿಕ ಬಳಕೆ ಹೆಚ್ಚು. ಸಾವಯವ ಗೊತ್ತಿಲ್ಲ. ರಾಸಾಯನಿಕದ ಬದಲಿಗೆ ವಿಷರಹಿತ ಸಿಂಪಡಣೆಯನ್ನು ಪರಿಚಯಿಸಬೇಕಾಗಿದೆ ಎನ್ನುತ್ತಾರೆ, ಜತೆಗಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎಸ್.ಸೀತಾರಾಮ ಶೆಟ್ಟಿ. ಮಲ್ಲಿಗೆ ಕೃಷಿಯ ನಿರ್ವಹಣೆಗಾಗಿ ಯೋಜನೆಯ ವತಿಯಿಂದ ನೀಡಿದ ಸಾಲವು ಗಂಗವ್ವರಿಗೆ ನೆರವಾಗಿದೆ.

               ಈ ಭಾಗದಲ್ಲಿ ಕಾಕಡ ಹೂವಿನ ಕೃಷಿ ಅಂದರೆ ಅಸಡ್ಡೆ. ಶ್ರಮವಹಿಸಿ ದುಡಿದರೆ ರೊಕ್ಕ ಬರುತ್ತೆ ಎನ್ನುವ ಅನುಭವ ಇವರದು. ಶ್ರೀಕಾಂತರು ಹಾಲಿನೊಂದಿಗೆ ಗಂಗವ್ವ ಮಾಲೆ ಕಟ್ಟಿ ನೀಡಿದ ಮಲ್ಲಿಗೆಯ ಮಾಲೆಯನ್ನೂ ಒಯ್ಯುತ್ತಾರೆ. ಇದಕ್ಕೂ ನಿಶ್ಚಿತ ಗಿರಾಕಿಗಳಿದ್ದಾರೆ. ಮಾರುಕಟ್ಟೆಯಲ್ಲಿ ಹಾಲಿಗೆ ಮತ್ತು ಮಲ್ಲಿಗೆಗೆ ಎಷ್ಟೇ ದರದ ಏರಿಳಿತವಿದ್ದರೂ ಶ್ರೀಕಾಂತರ ಹಾಲು ಮತ್ತು ಮಲ್ಲಿಗೆಗೆ ವರುಷಪೂರ್ತಿ ಒಂದೇ ದರ. ಒಂದೇ ಗುಣಮಟ್ಟ. ಇದು ಅವರ ಶಿಸ್ತಿನ ಜೀವನ ಶೈಲಿ.

                 ಶ್ರೀಕಾಂತರು ಕಸಿ ಪ್ರವೀಣ. ಮಾವು ಕಸಿ ಗಿಡಗಳನ್ನು ತಯಾರಿಸುತ್ತಾರೆ. ಚಿಕ್ಕ ನರ್ಸರಿ ಹೊಂದಿದ್ದಾರೆ. 2-3 ವರುಷಗಳಿಂದ ಕಸಿ ಗಿಡಗಳಿಗೆ ಜನರು ಒಲವು ಹೆಚ್ಚಾಗುತ್ತಿದೆ. ಗಿಡಗಳನ್ನು ಹುಡುಕಿ ಬರುವವರು ಇದ್ದಾರೆ. ಇವರಿಗೆ ಹತ್ತೆಕ್ರೆ ಗದ್ದೆಯಿದೆ. ಮಲ್ಲಿಗೆಯ ಆಸಕ್ತಿ ಶುರುವಾದ ಬಳಿಕ ಭತ್ತದ ಕೃಷಿ ಹಿಂದೆ ಬಿದ್ದಿದೆ.

                   ಎರಿಕೊಪ್ಪದಲ್ಲಿ ಕೃಷಿಯಲ್ಲಿದ್ದುಕೊಂಡು, ಸಂಪಾದನೆಯಲ್ಲಿ ನಗರದಲ್ಲಿ ದುಡಿಯುವವರಿಗೆ ಸಮದಂಡಿಯಾಗಿರುವ ಗಂಗವ್ವ ಶ್ರೀಕಾಂತ ದಂಪತಿಗಳ ಕೃಷಿ ಬದುಕಿನಲ್ಲಿ ಸ್ವಾವಲಂಬಿ ಪಾಠವಿದೆ. ನೆಮ್ಮದಿಯ ಸೆಳೆಯಿದೆ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಕೃಷಿ ನೆರವಾಗಿದೆ ಎನ್ನುವ ಆತ್ಮಾಭಿಮಾನವಿದೆ.