Thursday, May 1, 2014

ಅನ್ನದ ಬಟ್ಟಲಲ್ಲಿ 'ಸತ್ಯದ ಬೆಳೆ'

                 ಎಪ್ರಿಲ್ 26. ರಾತ್ರಿ ಧಾರಾಕಾರ ಮಳೆ. ಕರೆಂಟ್ ಕೈಕೊಟ್ಟಿತ್ತು. ಜನರೇಟರ್ ಮುಷ್ಕರ ಹೂಡಿತ್ತು. ಚಾರ್ಜರಿನ ಬೆಳಕು ನಿಧಾನವಾಗಿ ನಿದ್ರೆಗೆ ಜಾರುತ್ತಿದ್ದಂತೆ ಪಾಕಶಾಲೆಯಲ್ಲಿ ಸೂಪಜ್ಞರ ಒತ್ತಡ ಏರುತ್ತಿತ್ತು! ಅನ್ನ, ಸಾರು, ಸಾಂಬಾರು, ಪಲ್ಯ, ಹೋಳಿಗೆ.. ಮಾಮೂಲಿ ಖಾದ್ಯಗಳಿರುತ್ತಿದ್ದರೆ ನಿರಾಳವಾಗಿರುತ್ತಿದ್ದರು. ಮರುದಿವಸ ದಕ್ಷಿಣ ಕನ್ನಡ ಜಿಲ್ಲೆಗೆ ಅಪರೂಪದ್ದಾದ ಸಿರಿಧಾನ್ಯಗಳ ಹಬ್ಬ. ಅಂದು ಸಿರಿಧಾನ್ಯಗಳದ್ದೇ ಖಾದ್ಯಗಳು. ತಯಾರಿಸಿದ ಅನುಭವವಿಲ್ಲ. ವ್ಯತ್ಯಾಸವಾದರೆ ಹೊಣೆಯನ್ನು ಅಡುಗೆಯವರೇ ಹೊತ್ತುಕೊಳ್ಳಬೇಕಲ್ಲಾ.. ಸೂಪಜ್ಞ ಚಂದ್ರಶೇಖರ ಭಟ್ ಆತಂಕ.
                 ಕಡಂಬಿಲ ಕೃಷ್ಣಪ್ರಸಾದ್, ಮುಳಿಯ ವೆಂಕಟಕೃಷ್ಣ ಶರ್ಮರು ಎರಡು ತಿಂಗಳ ಹಿಂದಿನಿಂದಲೇ ಹುಬ್ಬಳ್ಳಿಯಿಂದ ಸಿರಿಧಾನ್ಯ(millet, ಕಿರುಧಾನ್ಯ, ತೃಣಧಾನ್ಯ)ಗಳನ್ನು ತರಿಸಿ, ಜಿಲ್ಲೆಯ ಅಡುಗೆಗೆ ಮಿಳಿತವಾಗಬಹುದಾದ ಖಾದ್ಯಗಳನ್ನು ಅಡುಗೆಮನೆಯಲ್ಲಿ ಪ್ರಾಯೋಗಿಕವಾಗಿ ತಯಾರಿಸಿ, ಸವಿದು ಮೆನು ಸಿದ್ಧಪಡಿಸಿದ್ದರು. ಸೂಪಜ್ಞರ ಕ್ಷಣಕ್ಷಣದ ಸಂದೇಹಗಳನ್ನು ಅಡುಗೆಮನೆಯಲ್ಲಿದ್ದೇ ಪರಿಹರಿಸಬೇಕಾದ ಸವಾಲುಗಳು.
                ಅಂತೂ ಸಿದ್ಧವಾಯಿತು ನೋಡಿ : ರಾಗಿ ಹಾಲುಬಾಯಿ. ಊದಲು ಚಿತ್ರಾನ್ನ. ನವಣೆ ಅನ್ನ. ಸಾವೆ ಪಾಯಸ ಮತ್ತು ಮೊಸರನ್ನ. ಬರಗ ಕೇಸರಿಬಾತ್. ಜೋಳದ ರೊಟ್ಟಿ. ರಾಗಿ ಪಾನೀಯ. ಅಂದಿನ ಭೋಜನದಲ್ಲಿ ಅಕ್ಕಿಯ ಅನ್ನಕ್ಕೆ ರಜೆ. ಸಾರು, ಸಾಂಬಾರಿಗೆ ವಿಶ್ರಾಂತಿ. ಇದನ್ನೆಲ್ಲಾ ನಿತ್ಯ ಉಂಡ ನಾಲಗೆಗೆ ಸಿರಿಧಾನ್ಯಗಳ ಖಾದ್ಯಗಳು ಸವಿಯಾದುವು. ಜತೆಗೆ ಐಟಿ ಉದ್ಯೋಗಿ ಮಂಚಿಯ ವಸಂತ ಕಜೆಯವರ ರಾಗಿ ಐಸ್ಕ್ರೀಂ.
               ರಾಗಿಯ ಬಳಕೆ ಗೊತ್ತು. ರಾಗಿ ಮುದ್ದೆ, ದೋಸೆ, ಕಷಾಯ, ಅಂಬಲಿ..ಗಳ ಸವಿಯ ಪರಿಚಯವಿದೆ. ಒಂದು ಕಾಲಘಟ್ಟದಲ್ಲಿ ರಾಗಿಯನ್ನು ಕುಮೇರಿಗಳಲ್ಲಿ ಬೆಳೆಸುವ ಪರಿಪಾಠವಿತ್ತು. ಅರ್ಧ ಶತಮಾನಗಳ ಹಿಂದೆ ನವಣೆ, ಬರಗ, ಸಾಮೆ ಕರಾವಳಿಯಲ್ಲಿ ಬೆಳೆಯುತ್ತಿರುವ ಕಾಲವನ್ನು ಜ್ಞಾಪಿಸಿಕೊಳ್ಳುವ ಹಿರಿಯರು ಸಿಗುತ್ತಾರೆ. ಈಗ ಸಿರಿಧಾನ್ಯ ಬಿಡಿ, ಅನ್ನಕ್ಕೂ ಪರಾವಲಂಬನೆ. 
                 ಬದುಕಿನಿಂದ ದೂರವಾದ, ಬುದ್ಧಿಪೂರ್ವಕವಾಗಿ ದೂರಮಾಡಿದ, ಅರೋಗ್ಯಕ್ಕೆ ಸಾಥ್ ಆದ ಸಿರಿಧಾನ್ಯಗಳಲ್ಲಿ ಕೆಲವಾದರೂ ಊಟದ ಬಟ್ಟಲು ಸೇರಬೇಕು ಎನ್ನುವ ಆಶಯ. ಹಬ್ಬದಲ್ಲಿ ಮಾತಿನಷ್ಟೇ ಭೋಜನಕ್ಕೂ ಮಹತ್ವ.  ದೂರದೂರಿನಿಂದ ತರಿಸಿಕೊಂಡ ಸಿರಿಧಾನ್ಯಗಳು ಉದರ ಸೇರಿದಾಗ, 'ನಾವೂ ಬೆಳೆಯಬೇಕು, ತಿನ್ನಬೇಕು, ಸಿರಿಧಾನ್ಯಗಳು ಎಲ್ಲಿ ಸಿಗುತ್ತವೆ' ಎನ್ನುವ ಪ್ರಶ್ನೆ. 'ಸಿರಿಧಾನ್ಯಗಳು ಅನ್ನಕ್ಕೆ ಪರ್ಯಾಯವಾಗಬಹುದೆ?' ಎಂಬ ಕುತೂಹಲ.
                 ಇವುಗಳ ಮುಂದೆ ನಮ್ಮೂರಿನ ಭತ್ತದ ಸ್ಥಿತಿಯನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಭತ್ತದ ಬದುಕಿನಿಂದ ಸಂಸ್ಕೃತಿ ದೂರವಾಗಿದೆ. ಗದ್ದೆಗಳಲ್ಲೆಲ್ಲಾ ಬಹುಮಹಡಿ ಕಟ್ಟಡಗಳ ಅಡಿಪಾಯಗಳಾಗಿವೆ.  'ದುಡ್ಡು ಕೊಟ್ಟರೆ ಅಕ್ಕಿ ಅಂಗಡಿಯಲ್ಲಿದೆ' ಎನ್ನುವ ಮೈಂಡ್ ಸೆಟ್.  ಅಳಿದುಳಿದ ಗದ್ದೆಗಳಲ್ಲಿ ಬೇಸಾಯವಾಗುತ್ತಿರುವುದು ಸಮಾಧಾನ. ಅಮೈ ದೇವರಾಯರ ಮಾತು ನೆನಪಾಗುತ್ತದೆ, ಭತ್ತದ ಬೇಸಾಯವು ಕ್ಯಾಲಿಕ್ಯುಲೇಟರನ್ನು ಕೈಯಲ್ಲಿ ಹಿಡಿದು ಮಾಡುವಂತಹುದಲ್ಲ. ಅದು ಹೊಟ್ಟೆಯ ಪ್ರಶ್ನೆ.
ರಾಸಾಯನಿಕ ಬೇಡದ, ಎಲ್ಲಾ ಕಾಲದಲ್ಲೂ ಹೊಂದುವ ಸಿರಿಧಾನ್ಯವು ನಿಜಕ್ಕೂ 'ಸತ್ಯದಬೆಳೆ.' ಜನರಿಗೆ ಯಾವ ರೀತಿ ಖಾದ್ಯ ಇಷ್ಟವೋ ಅದನ್ನು ಮಾಡಿದರೆ ಇಷ್ಟವಾಗಬಹುದು. ಪಾಕವಿಧಾನಗಳ ದಾಖಲಾತಿ ಬೇಕಾಗಿದೆ. ಇದರಲ್ಲಿರುವ ಪೌಷ್ಟಿಕಾಂಶಗಳನ್ನು ಪ್ರಸ್ತುತ ಪಡಿಸಿದಷ್ಟೇ ಸಾಲದು; ಎಲ್ಲಿ ಸಿಗುತ್ತದೆ, ಬೆಳೆಯುವ ವಿಧಾನಗಳೂ ಕೃಷಿಕರನ್ನು ತಲುಪಬೇಕು - ಹಿರಿಯ ಪತ್ರಕರ್ತ ಶ್ರೀಪಡ್ರೆಯವರ ಕಿವಿಮಾತು.
                   ಮಂಗಳೂರಿನ ಗೃಹಿಣಿ ನಳಿನಿ ಮಾಯಿಲಂಕೋಡಿ, ಮಂಚಿಯ ಶಿಲ್ಪಾ ವಸಂತ ಕಜೆ ಸಿರಿಧಾನ್ಯ ಪ್ರಾತ್ಯಕ್ಷಿಕೆಗಾಗಿ ತೆಗೆದುಕೊಂಡ ಶ್ರಮ ಗುರುತರ. 'ನಮ್ಮ ಜನರ ಬಾಯಿಗೆ ಸಿರಿಧಾನ್ಯಗಳು ಹೇಗೆ ರುಚಿಸಬಹುದು. ಯಾವುದು ಆಗದೇ ಇರುವಂತಾದ್ದು' ಎಂದು ಯೋಚಿಸಿ ಡೆಮೋ ನೀಡಿದ್ದಾರೆ. ತಂತಮ್ಮ ಅಡುಗೆ ಮನೆಯಲ್ಲಿ ತಯಾರಿಸಿ, ಆಸಕ್ತರಿಗೆ ಹಂಚಿ, ಹಿಮ್ಮಾಹಿತಿ ಪಡೆದು, ಕೊನೆಗೆ ಅದನ್ನು ಕಾಗದಕ್ಕಿಳಿಸಿದ್ದಾರೆ. ಪ್ರಾತ್ಯಕ್ಷಿಕೆಯೊಂದಿಗೆ ಮಾಡುವ ವಿಧಾನವೂ ಜತೆಯಲ್ಲೇ ಸಿಕ್ಕಾಗ ಪರಿಣಾಮ ಹೆಚ್ಚು.
                ಅಡುಗೆ ಪ್ರಾತ್ಯಕ್ಷಿಕೆಗಳಿಗೆ ಮಹಿಳೆಯರ ಒಲವು ಹೆಚ್ಚು. ಸಿರಿಧಾನ್ಯ ಕಾರ್ಯಕ್ರಮದಲ್ಲಿ ಗಂಡಸರ ಸಂಖ್ಯೆಯೂ ಅಧಿಕವಿತ್ತು. ಕಾರಣವಿಷ್ಟೇ, ಹೊಸತಾದ ಬೆಳೆಯೊಂದರ ಕುರಿತ ಕಾಳಜಿ. ತಿಳಿದುಕೊಳ್ಳಬೇಕೆಂಬ ಹಪಾಹಪಿ. ಪ್ರಾತ್ಯಕ್ಷಿಕೆಯಲ್ಲಿ ತಯಾರಾದ ಖಾದ್ಯಗಳನ್ನು ಸವಿಯುವ ಕುತೂಹಲ. ಅಕ್ಕಿಯಿಂದ ಮಾಡಬಹುದಾದ ಎಲ್ಲಾ ಪದಾರ್ಥಗಳನ್ನು ಸಿರಿಧಾನ್ಯಗಳಿಂದ ಮಾಡಬಹುದು.
                 ಇಷ್ಟೊಂದು ಪೌಷ್ಟಿಕಾಂಶವಿರುವ ಸಿರಿಧಾನ್ಯಗಳು ಯಾಕೆ ಅಜ್ಞಾತವಾದುವು? ಸಿರಿಧಾನ್ಯಗಳ ಉಳಿವಿಗೆ ಶ್ರಮಿಸುತ್ತಿರುವ ಅನಿತಾ ಪೈಲೂರು ಹೇಳುತ್ತಾರೆ, ಪಡಿತರ ಬಂದ ನಂತರ ಅಕ್ಕಿ, ಗೋಧಿಗೆ ಬೇಡಿಕೆ. ಇದರ ಊಟ ಮಾಡಿದರೆ ಸ್ಟೇಟಸ್ ಹೆಚ್ಚು ಎನ್ನುವ ಭಾವನೆ. ಅಂಗಡಿಯಿಂದ ಕೊಂಡು ಉಣ್ಣುವ ಹಂಬಲ ಹೆಚ್ಚಾಯಿತು. ಜತೆಗೆ ಸಿರಿಧಾನ್ಯ ಉಣ್ಣುವವರು ಬಡವರು ಎನ್ನುವ ಮನಃಸ್ಥಿತಿ. ಇಳುವರಿ ಕೇಂದ್ರಿತ ಬೆಳೆಯನ್ನು ಮಾಡಲು ಆರಂಭಿಸಿದ ಬಳಿಕ ಸಿರಿಧಾನ್ಯಗಳಿಗೆ ಇಳಿಲೆಕ್ಕ. ನೂರಾರು ತಳಿಗಳು ಇರಬೇಕಾದ್ದಲ್ಲಿ ಈಗ ಕೇವಲ 20-25 ತಳಿಗಳು ಉಳಿದುಕೊಂಡಿವೆಯಷ್ಟೇ.
                 ಸಿರಿಧಾನ್ಯಗಳಿಗೆ ಹದಿನೈದು ಸಾವಿರ ವರುಷಗಳಿಗೂ ಮಿಕ್ಕಿದ ಇತಿಹಾಸವಿದೆ. 1940ರ ಹೊತ್ತಿಗೆ ಬೆಂಗಳೂರು ಸುತ್ತಮುತ್ತ ಹಾರಕ ಯಥೇಷ್ಟವಾಗಿ ಬೆಳೆಯುತ್ತಿದ್ದರು. ಯಾವ್ಯಾವ ಋತುವಿನಲ್ಲಿ ಏನೆಲ್ಲಾ ತಿನ್ನಬೇಕು ಎನ್ನುವುದು ಹಿರಿಯರಿಗೆ ಗೊತ್ತಿತ್ತು. ಅದು ಅನುಭವದಿಂದ ಬಂದಿರುವ ಜ್ಞಾನ. ಅಡುಗೆ ಮಾಡುವುದು ವಿಜ್ಞಾನವಲ್ಲ. ಅದೊಂದು ಅದ್ಭುತ. ಅಲ್ಲಿ ಪ್ಯಾಕೇಜ್ ಗುಲ್ಲು ಇಲ್ಲ, ಮಾರುಕಟ್ಟೆ ಲಾಬಿ ಇಲ್ಲ, ಬ್ರಾಂಡ್ಗಳ ಪೈಪೋಟಿ ಇಲ್ಲ!
                    ಬೆಂಗಳೂರಿನ ಡಾ.ಕೆ.ಸಿ.ರಘು - ಜಾಗತಿಕವಾಗಿ ಆಹಾರ, ಆರೋಗ್ಯದ ಕಣ್ಣಿಗೆ ಕಾಣದ ವ್ಯವಸ್ಥಿತ ಜಾಲಗಳತ್ತ ಬೆಳಕು ಹಾಕಿದರು : ಡಯಾಬಿಟೀಸ್ ಅಕ್ಕಿ, ಶುಗರ್ ಇಲ್ಲದ ಸಕ್ಕರೆ.. ಹೀಗೆ ಕಾಯಿಲೆಯ ಕನ್ನಡಕ ಹಾಕಿ ಆಹಾರವನ್ನು ನೋಡುತ್ತಿದ್ದೇವೆ. ಆಹಾರದಲ್ಲಿ ವೈವಿಧ್ಯತೆಯನ್ನು ಎಷ್ಟು ಉಳಿಸಿಕೊಳ್ಳುತ್ತೇವೋ ಆಗಲೇ ಆರೋಗ್ಯ. ನಾವು ಮಾದರಿ ಎಂದು ಸ್ವೀಕರಿಸಿದ ಅಮೇರಿಕಾದಲ್ಲಿ ಒಬ್ಬ ವರ್ಷಕ್ಕೆ ನಾಲ್ಕು ಸಾವಿರ ಡಾಲರ್ ಆಹಾರಕ್ಕೆ ಖರ್ಚು ಮಾಡಿದರೆ, ಎಂಟು ಸಾವಿರ ಡಾಲರ್ ಔಷಧಿಗೆ ಖರ್ಚಾಗುತ್ತದೆ. ಆದರೂ ಶೇ.60ರಷ್ಟು ಬೊಜ್ಜು ಇನ್ನೂ ಉಳಕೊಂಡಿದೆ!
                        ಆಹಾರಗಳು ಮನುಷ್ಯ ಸಮುದಾಯವನ್ನು ಸಾಕಿಕೊಂಡು ಬಂದಿದೆ. ಅದನ್ನು ಕಳೆಯೋದಕ್ಕೆ ನಮಗೆ ಹಕ್ಕಿದೆಯೇ? ಯಾವುದೇ ಒಂದು ಬೆಳೆಯ ಔಷಧೀಯ ಗುಣ ಗೊತ್ತಿಲ್ಲದೇ ಇದ್ದರೆ ಅದು ಕಳೆಯಾಗುತ್ತದೆ. ಮರೆಯಾಗುತ್ತದೆ. ಭಾರತದಲ್ಲಿ ಶೇ.71 ಮಂದಿ ರೈತರು ಕೃಷಿಯನ್ನು ಬಿಡಲು ಸಿದ್ಧರಾಗಿದ್ದಾರೆ. ಬೆಲೆಯಿಲ್ಲ, ಬೆಳೆಯಿಲ್ಲ.. ಹೀಗೆ ಇಲ್ಲಗಳ ಸಂತೆ. ಆಡಳಿತ ವ್ಯವಸ್ಥೆಗೆ ರೈತರ ಬಗ್ಗೆ ಗೊತ್ತಿಲ್ಲ. ಸಂವಹನವೂ ಇಲ್ಲ. ಎಲ್ಲವೂ ಸೂಪರ್ ಮಾರ್ಕೆಟಿನಲ್ಲಿ ಸಿಗುತ್ತದೆ, ಮತ್ಯಾಕೆ ಕೃಷಿ ಮಾಡಬೇಕು ಎನ್ನುವ ಮನಃಸ್ಥಿತಿಯನ್ನು ವ್ಯವಸ್ಥೆಗಳು ರೂಪಿಸುತ್ತಿವೆ.
                    'ಆಹಾರ ಸಂಸ್ಕರಣೆ' ಎನ್ನುವುದು ವ್ಯಾಪಾರ. ಇದನ್ನು ಡಾ.ರಘು ಅರ್ಥಪೂರ್ಣವಾಗಿ ಹೇಳುತ್ತಾರೆ - ಅಕ್ಕಿ ತೆಕ್ಕೊಂಡು ಮಿಲ್ಲಿಗೆ ಹೋಗ್ತೇವೆ.  ಮಿಲ್ಲಲ್ಲಿ ತೌಡು ಬೇರ್ಪಡುತ್ತದೆ. ತೌಡಿನಿಂದ ಎಣ್ಣೆ ಬೇರ್ಪಡಿಸಲು ಇನ್ನೊಂದು ಮಿಲ್ಲಿಗೆ. ಅಲ್ಲಿ ಅದರಿಂದ ವಿಟಮಿನ್ 'ಇ' ಬೇರ್ಪಡಿಸಿ, ಔಷಧೀಯ ಕಂಪೆನಿಗೆ ಮಾರುತ್ತೇವೆ. ಮತ್ತೊಂದೆಡೆ ಡಯಾಬಿಟಿನ್ ನಮಗೆ ವಕ್ಕರಿಸುತ್ತದೆ. ಅದೇ ಔಷಧ ಕಂಪೆನಿಯಿಂದ ಔಷಧ ಖರೀದಿಸುತ್ತೇವೆ. ಇದೊಂದು ಬ್ಯುಸಿನೆಸ್. 
                    ಬಂಟ್ವಾಳ ತಾಲೂಕಿನ ಕೇಪು ಹಲಸು ಸ್ನೇಹಿ ಕೂಟದ ಸಾರಥ್ಯದಲ್ಲಿ 'ಮನೆಮನೆಗೆ ಸಿರಧಾನ್ಯದಡುಗೆ' ಆಶಯದ ಹಬ್ಬವು ಕರಾವಳಿಗೆ ಬಹುಶಃ ಮೊದಲ ಹೆಜ್ಜೆಯೇನೋ. ಹೆಜ್ಜೆಗೆ ಹೆಜ್ಜೆ ಹಾಕಿದವರು ನೂರಕ್ಕೂ ಅಧಿಕ ಮಂದಿ. ಹೆಚ್ಚು ಪೌಷ್ಟಿಕಾಂಶದ, ಬರಕ್ಕೆ ತಡೆದಕೊಳ್ಳುವ ಸಿರಿಧಾನ್ಯಗಳ ಕೃಷಿ ಭವಿಷ್ಯ ಕರಾವಳಿಯ ಅಗತ್ಯವಾಗಬಹುದೇನೋ!
                   ’ಹಲಸು ಸ್ನೇಹಿ ಕೂಟವು ನಾಲ್ಕು ವರುಷದಿಂದ ಸಕ್ರಿಯ. ಶಿರಂಕಲ್ಲು ನಾರಾಯಣ ಭಟ್ಟರ ಮನೆಯಲ್ಲಿ ಸಾತ್ವಿಕ ಆಹಾರ, ಮಲ್ಯ ಶಂಕರನಾರಾಯಣ ಭಟ್ಟರಲ್ಲಿ ತರಕಾರಿ ಹಬ್ಬ, ಉಬರು ರಾಜಗೋಪಾಲ ಭಟ್ಟರಲ್ಲಿ ಮಾವು ಮತ್ತು ಹಲಸಿನ ಹಬ್ಬ, ಮಂಚಿಯ ವಸಂತ ಕಜೆ ಇವರ ಮನೆಯಂಗಳದಲ್ಲಿ ಗೆಡ್ಡೆ ತರಕಾರಿ ಮೇಳ, ಮುಳಿಯ ವೆಂಕಟಕೃಷ್ಣ ಶರ್ಮರ ಮನೆಯಲ್ಲಿ ಹಲಸಿನ ತಳಿ ಆಯ್ಕೆ.. ಮೊದಲಾದ ವಿಶಿಷ್ಟ ಕಲಾಪಗಳನ್ನು ಮೈಮೇಲೆ ಎಳೆದುಕೊಂಡಿದೆ. ಹೊಣೆ ಹೊತ್ತು ಯಶಸ್ಸಾಗಿದೆ. ಇವೆಲ್ಲಾ ಕೆಲವೇ ಹೆಗಲುಗಳ ಯೋಚನೆ, ಯೋಜನೆ.  ಹೆಗಲುಗಳ ಸಂಖ್ಯೆ ಹೆಚ್ಚಾಗಬೇಕು. ಮನೆಮನೆಯಲ್ಲಿ ಆಹಾರದ ಮಾತುಕತೆ ನಡೆಯಬೇಕು. ಆಗಲೇ ಆರೋಗ್ಯ-ಭಾಗ್ಯ.
 

Wednesday, April 30, 2014

ಕರಾವಳಿಗೆ ಅಪರೂಪದ್ದಾದ "ಸಿರಿಧಾನ್ಯಗಳ ಸಿರಿ"




              ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ ಎಪ್ರಿಲ್ 27ರಂದು ಸಿರಿಧಾನ್ಯ(millet)ಗಳ ಹಬ್ಬ. ದಕ್ಷಿಣ ಕನ್ನಡ ಜಿಲ್ಲೆಗೆ ಸಿರಿಧಾನ್ಯಗಳನ್ನು ಪರಿಚಯಿಸುವ ಕಾರ್ಯಕ್ರಮ. ಜೋಳ, ರಾಗಿ, ಬರಗ, ಸಾಮೆ, ನವಣೆ, ಸಜ್ಜೆ, ಹಾರಕ, ಊದಲು - ಸಿರಿಧಾನ್ಯಗಳು. ಇವುಗಳಲ್ಲಿ ರಾಗಿಯ ಬಳಕೆ ಕರಾವಳಿಯಲ್ಲಿದೆ.

             ಭತ್ತವನ್ನು ಮಿಲ್ಲಲ್ಲಿ ಅಕ್ಕಿ ಮಾಡುತ್ತೇವೆ. ತೌಡನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಬಿಡುತ್ತೇವೆ. ಎಲ್ಲವನ್ನೂ ಕಳಕೊಂಡು ಸೊರಗಿದ ಅಕ್ಕಿಯ 'ಬಿಳಿಯ ಅನ್ನ' ಬಟ್ಟಲಿಗೆ ಬಿದ್ದಾಗ ಉಣ್ಣುತ್ತೇವೆ. ಪೌಷ್ಟಿಕಾಂಶವನ್ನು ಕಳಕೊಂಡ ಈ ಅನ್ನವು ಶರೀರಕ್ಕೆ ಎಷ್ಟರ ಮಟ್ಟಿಗೆ ಪೌಷ್ಟಿಕತೆಯನ್ನು ನೀಡಬಹುದು? ಆದರೆ ಗ್ರಾಮೀಣ ಭಾಗಗಳಲ್ಲಿ ಕುಚ್ಚಲಕ್ಕಿಯ ಬಳಕೆ ಈಗಲೂ ಜೀವಂತವಾಗಿರುವುದು ಸಮಾಧಾನ.

              ಈ ಹಿನ್ನೆಲೆಯಲ್ಲಿ ಸಿರಿಧಾನ್ಯಗಳನ್ನು ನೋಡಿದಾಗ ಇದು ಪೌಷ್ಟಿಕಾಂಶಗಳ ಆಗರ. ನಾರಿನಿಂದ ವಿಟಮಿನ್ ತನಕ ವಿವಿಧ ವೈವಿಧ್ಯ ಆರೋಗ್ಯದಂಶಗಳು. ಅವುಗಳ ಸಂಸ್ಕರಣೆಯಲ್ಲಿನ ತೊಂದರೆಗಳು, ಒಂದು ರೂಪಾಯಿಗೆ ಪಡಿತರದಲ್ಲಿ ಸಿಗುವ ಅಕ್ಕಿ, ಇಳುವರಿ ಕೇಂದ್ರಿತ ಬೆಳೆಗಳ ಅವಲಂಬನೆ.. ಹೀಗೆ ಮೊದಲಾದ ಅಂಶಗಳು ಸಿರಿಧಾನ್ಯಗಳ ಇಳಿಲೆಕ್ಕಕ್ಕೆ ಕಾರಣ.
ಬದುಕಿನಿಂದ ಮರೆಯಾದ ಸಿರಿಧಾನ್ಯಗಳನ್ನು ಮರಳಿ ಅಡುಗೆ ಮನೆಗೆ ತರುವ, ಕರಾವಳಿಗೆ ಪರಿಚಯಿಸುವ ಆಶಯದ ಕಲಾಪವನ್ನು ಕೇಪು 'ಹಲಸು ಸ್ನೇಹಿ ಕೂಟ' ಆಯೋಜಿಸಿತ್ತು. ನೂರಕ್ಕೂ ಅಧಿಕ ಭಾಗಿ. ಒಂದೆಡೆ ಸಿರಿಧಾನ್ಯಗಳ ಕುರಿತು ಥಿಯರಿ. ಮತ್ತೊಂದೆಡೆ ಖಾದ್ಯಗಳ ಮೂಲಕ ಪ್ರಾಕ್ಟಿಕಲ್. ಹಬ್ಬದಲ್ಲಿ ಇವೆರಡೂ ಮಿಳಿತವಾಗಿತ್ತು.

           ಹಬ್ಬದಲ್ಲಿ ಅಕ್ಕಿಯ ಅನ್ನ, ಸಾರು, ಸಾಂಬಾರು, ಪಲ್ಯಗಳಿರಲಿಲ್ಲ. ಸಿರಿಧಾನ್ಯಗಳ ಖಾದ್ಯಗಳನ್ನು ನಮ್ಮೂರಿನ ಅಡುಗೆ ಮನೆಗೆ ಒಗ್ಗುವಂತೆ ಮಾಡುವ ಆಶಯದಿಂದ ರೂಪುಗೊಂಡವುಗಳು. ಊದಲು ಚಿತ್ರಾನ್ನ, ನವಣೆ ಅನ್ನ, ಸಾವೆಯ ಪಾಯಸ, ಬರಗ ಕೇಸರಿಬಾತ್, ಸಾವೆ ಮೊಸರನ್ನ, ಜೋಳದ ರೊಟ್ಟಿ, ರಾಗಿ ಪಾನೀಯ, ರಾಗಿ ಹಾಲುಬಾಯಿ, ಹಾರಕ ಉಪ್ಪಿಟ್ಟು.
ನಳಿನಿ ಸದಾಶಿವ ರಾವ್ ಮಾಯಿಲಂಕೋಡಿ ಮತ್ತು ಶಿಲ್ಪಾ ಕಜೆ ಇವರಿಂದ ಅಡುಗೆಯ ಡೆಮೋ.  ರಾಗಿ ಶ್ಯಾವಿಗೆ, ನವಣೆ ಬಿಸಿಬೇಳೆ ಬಾತ್, ಸಜ್ಜೆ ದೋಸೆ, ಸಜ್ಜೆ ತಾಲಿಪಟ್ಟು, ಜೋಳ-ರಾಗಿ-ಸಜ್ಜೆಯ ಅರಳಿಟ್ಟು, ರಾಗಿ ಕೇಕ್, ನವಣೆ ಹಲ್ವ.. ಪ್ರಾತ್ಯಕ್ಷಿಕೆಯಲ್ಲಿ ಸಿದ್ಧಗೊಂಡ ಖಾದ್ಯಗಳು ಕ್ಷಣಮಾತ್ರದಲ್ಲಿ ಪ್ರತಿನಿಧಿಗಳ ಉದರ ಸೇರಿತು! ಮಂಚಿಯ ವಸಂತ ಕಜೆಯವರು ಹಬ್ಬಕ್ಕಾಗಿಯೇ ಸಿದ್ಧಪಡಿಸಿದ 'ರಾಗಿ ಐಸ್ಕ್ರೀಮ್'ನ ರೆಸಿಪಿಯನ್ನು ಕಾಗದಕ್ಕಿಳಿಸಿಕೊಂಡವರು ಅಧಿಕ. ಬೆಂಗಳೂರಿನ ಅನಿತಾ ಪೈಲೂರು ಸಿರಿಧಾನ್ಯಗಳಿಗೆ ದನಿಯಾದರು.

              ಸಿರಿಧಾನ್ಯ ಹಬ್ಬವು ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಮತ್ತು ಕಡಂಬಿಲ ಕೃಷ್ಣಪ್ರಸಾದ್ ಇವರ ಮೆದುಳ ಮರಿ. ಉಬರು ರಾಜಗೋಪಾಲ ಭಟ್, ಶಿರಂಕಲ್ಲು ನಾರಾಯಣ ಭಟ್, ಮಲ್ಯ ಶಂಕರನಾರಾಯಣ ಭಟ್, ವರ್ಮುಡಿ ಶಿವಪ್ರಸಾದ್, ಬೈಂಕ್ರೋಡು ಗಿರೀಶ, ವೆಂಕಟಕೃಷ್ಣ ಬೈಂಕ್ರೋಡು... ಸಾಥ್. ಹಬ್ಬದಲ್ಲಿ ಕೂಟದ ಚಟುವಟಿಕೆಗಳ ವಾರ್ತಾಪತ್ರದ ಬಿಡುಗಡೆ.

            "ಎಲ್ಲಾ ಸಿರಿಧಾನ್ಯಗಳಲ್ಲಿ ಶೇ.16-20 ನಾರಿನ ಅಂಶವಿದೆ. ಪಾಲಿಶ್ ಮಾಡಿದ ಅಕ್ಕಿಯಲ್ಲಿ ಕೇವಲ ಶೇ.4-5 ಮಾತ್ರ. ಹಾಗಾಗಿ ಸಿರಿಧಾನ್ಯಗಳನ್ನು ಬಳಸುವ ರೂಢಿಯಾಗಬೇಕು. ಪಾಲಿಶ್ ಮಾಡದ ಅಕ್ಕಿಯನ್ನು ಸೇವಿಸುವ ಪದ್ಧತಿ ಮತ್ತೆ ರೂಢಿಸಿಕೊಂಡಾಗ ಆರೋಗ್ಯ", ಬೆಂಗಳೂರಿನ ಡಾ.ಕೆ.ಸಿ.ರಘು ಅವರಿಂದ ಆಹಾರಗಳ  ಜಾಗತಿಕ ಲಾಬಿಗಳ ಪ್ರಸ್ತುತಿ.

           ಮದುವೆ, ಉಪನಯನದಂತಹ ಸಮಾರಂಭದಲ್ಲಿ ಅಡುಗೆ ಮಾಡಿದ್ದೇವೆ. ಆದರೆ ಸಿರಿಧಾನ್ಯಗಳ ಖಾದ್ಯಗಳ ತಯಾರಿ ಇದೇ ಮೊದಲು, ಎಂದು ಖುಷಿ ಪಟ್ಟವರು ಅಂದಿನ ಸೂಪಜ್ಞರಾದ ಚಂದ್ರಶೇಖರ ಭಟ್ ಮತ್ತು ಶಿವರಾಮ ಭಟ್. ಮುಚ್ಚಿರ ಹಣ್ಣು, ಮ್ಯಾಂಗೋಸ್ಟಿನ್, ಸಿಂಧು ಮಾವು. ಮಾದೃ ಚಕ್ಕೋತ, ಪುರಿಕಾಯಿ ಹಣ್ಣು, ಬದನೆ - ತೊಂಡೆ ತಳಿಗಳು, ಬಳ್ಳಿ ಬಟಾಟೆ, ಜಾಂಜೀಬಾರ್ ಬಾಳೆ, ಬೆಣ್ಣೆಹಣ್ಣು... ಹೀಗೆ ವಿವಿಧ ವೈವಿಧ್ಯಗಳ ಹಣ್ಣುಗಳ ಪ್ರದರ್ಶನ.

          ’ನನ್ನ ಊಟದಲ್ಲಿ ದಿನಕ್ಕೆ ಒಂದಾದರೂ ಸಿರಿಧಾನ್ಯಗಳ ಐಟಂನ್ನು ಹೊಂದಿಸಬೇಕೆಂದಿದ್ದೇನೆ,’ ಮಡಿಕೇರಿಯ ಇಂಜಿನಿಯರ್ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರೆ, ’ಅಡುಗೆ ಮನೆಯ ಬಾಗಿಲನ್ನು ತಟ್ಟುವ ಇಂತಹ ಪ್ರಾಕ್ಟಿಕಲ್ ಕಾರ್ಯಕ್ರಮಗಳು ಕಾಲದ ಆವಶ್ಯಕತೆ” ಎಂದವರು ಮಂಗಳೂರಿನ ಪಶುವೈದ್ಯ ಡಾ.ಮನೋಹರ ಉಪಾಧ್ಯ.
ಆಹಾರದಲ್ಲಿ ಹೊಸ ಹಾದಿ ತೋರಿದ ಸಿರಿಧಾನ್ಯ ಹಬ್ಬವು ಅಡುಗೆ ಮನೆಗಳಿಗೆ ಸಂದೇಶ ರವಾನಿಸಿದೆ!


"ಅಡುಗೆ ಮನೆಯಲ್ಲಿದೆ ನಮ್ಮ ಆರೋಗ್ಯ" - ಸಿರಿಧಾನ್ಯ ಹಬ್ಬದಲ್ಲಿ ಡಾ.ಕೆ.ಸಿ.ರಘು






            "ಸಿರಿಧಾನ್ಯಗಳ ಸಮೃದ್ಧಿಯ ಹಿಂದೆ ಹದಿನೈದು ಸಾವಿರ ವರುಷಗಳ ಹಿರಿಯರ ಬೆವರಿದೆ. ನಾವದನ್ನು ಕಳಕೊಳ್ಳುತ್ತಿದ್ದೇವೆ. 1940ರಲ್ಲೆ ಬೆಂಗಳೂರು ಸುತ್ತಮುತ್ತ ಹಾರಕವನ್ನು ಯಥೇಷ್ಟವಾಗಿ ಬೆಳೆಯುತ್ತಿದ್ದೆ. ಈಗದನ್ನು ಹುಡುಕುವ ಸ್ಥಿತಿಗೆ ಬಂದಿದ್ದೇವೆ. ಉಣ್ಣುವ ಆಹಾರಗಳ ಔಷಧೀಯ ಗುಣಗಳ ಕುರಿತು ಅರಿವಿಲ್ಲ. ಆಹಾರವನ್ನು ತಿನ್ನುವುದಕ್ಕೆ ಕಷ್ಟ ಪಡುತ್ತಿದ್ದೇವೆ. ಆಹಾರಕ್ಕಿಂತ ಹೆಚ್ಚು ಔಷಧಗಳನ್ನು ಸೇವಿಸುವುದಕ್ಕೆ ನಮಗೆ ಖುಷಿ. ಯಾಕೆಂದರೆ ಆರೋಗ್ಯವನ್ನು ವೈದ್ಯಕೀಯಗೊಳಿಸುವ ಎಲ್ಲಾ ವ್ಯವಸ್ಥೆಗಳು ಆ ರಂಗದಲ್ಲಿದೆ," ಎಂದು ಅಂಕಣಕಾರ ಡಾ.ಕೆ.ಎಸ್.ರಘು ಹೇಳಿದರು.

             ಅವರು ರವಿವಾರ (೨೭-೪-೨೦೧೪) ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ಜರುಗಿದ 'ಮನೆಮನೆಗೆ ಸಿರಿಧಾನ್ಯದಡುಗೆ' ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡುತ್ತಾ, ’ನಮ್ಮ ಆರೋಗ್ಯವು ನಮ್ಮ ಅಡುಗೆ ಮನೆಯಲ್ಲಿದೆ. ಎಲ್ಲೆಲ್ಲೋ ಹುಡುಕಬೇಕಾಗಿಲ್ಲ. ಕಾಯಿಲೆಯ ಕನ್ನಡಕ ಹಾಕಿಕೊಂಡು ಆಹಾರವನ್ನು ನೋಡುವುದಕ್ಕೆ ಯಾವಾಗ ಆರಂಭಿಸಿದೆವೋ ಅಲ್ಲಿಂದ ನಮ್ಮ ದೇಹವು ಹಲವು ಕಾಯಿಲೆಗಳ ಮೂಟೆಯಾಗಿದೆ” ಎಂದರು.

           ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು ಸಮಾರೋಪ ಭಾಷಣ ಮಾಡುತ್ತಾ, ಸಿರಿಧಾನ್ಯಗಳನ್ನು ಬಳಸಿದಾಗ ಅದು ಉಳಿಯುತ್ತದೆ. ಕರಾವಳಿಗೆ ಹೊಸತಾದ ಸಿರಿಧಾನ್ಯವನ್ನು ಒಗ್ಗಿಸಿಕೊಳ್ಳುವುದು ಸೂಕ್ತ ಮತ್ತು ಅನಿವಾರ್ಯ’ ಎಂದರು.

            ಡಾ.ಮನೋಹರ ಉಪಾಧ್ಯ ಉಪಸ್ಥಿತರಿದ್ದರು. ಸಿರಿಧಾನ್ಯಗಳ ಆಹಾರ ಮತ್ತು ಔಷಧೀಯ ಗುಣಗಳ ಕುರಿತು ಜರುಗಿದ ಮಾಹಿತಿ ಪ್ರಸ್ತುತಿಯ ಬಳಿಕ ಸಂವಾದ ಜರುಗಿತು. ಮಂಗಳೂರಿನ ಗೃಹಿಣಿ ಶ್ರೀಮತಿ ಸರೋಜ ಪ್ರಕಾಶ್ ಅನುಭವ ಹಂಚಿಕೊಂಡರು. ಕರಾವಳಿ ಭಾಗಕ್ಕೆ ಹೊಸತಾದ ಸಿರಿಧಾನ್ಯಗಳ ರುಚಿರುಚಿಯಾದ ಅಡುಗೆ ಮಾಡಿದ ಚಂದ್ರಶೇಖರ ಭಟ್ ಮತ್ತು ಶಿವರಾಮ ಭಟ್ಟರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

             ದಕ್ಷಿಣ ಕನ್ನಡ ಜಿಲ್ಲೆಗೆ ಕಿರುಧಾನ್ಯಗಳನ್ನು (ಮಿಲ್ಲೆಟ್) ಪರಿಚಯಿಸುವ ಯತ್ನದ ಈ ಕಾರ್ಯಕ್ರಮವನ್ನು ಉಬರು-ಕೇಪು ಹಲಸು ಸ್ನೇಹಿ ಕೂಟ ಆಯೋಜಿಸಿತ್ತು. ಮುಳಿಯ ವೆಂಕಟಕೃಷ್ಣ ಶರ್ಮ ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು.

'ಮನೆಮನೆಗೆ ಸಿರಿಧಾನ್ಯದಡುಗೆ'







             "ಉತ್ತರ ಕರ್ನಾಟದಲ್ಲಿ ಬೆಳೆಯುವ ಸಿರಿಧಾನ್ಯಗಳ ಪರಿಚಯ ಕರಾವಳಿಯಲ್ಲಿ ತೀರಾ ಕಡಿಮೆ. ಸಿರಿಧಾನ್ಯಗಳ ಖಾದ್ಯವನ್ನುಂಡ ಹಿರಿಯರು ಆರೋಗ್ಯವಂತರಾಗಿ ಬಾಳಿದ್ದಾರೆ. ಸಿರಿಧಾನ್ಯಗಳನ್ನು ಬಡವರ ಆಹಾರ ಎಂದೇ ಬಿಂಬಿಸಲಾಗುತ್ತದೆ. ಆದರೆ ಬಡವರ ಆಹಾರದ ಪೌಷ್ಟಿಕಾಂಶಗಳ ಶ್ರೀಮಂತಿಕೆಯಲ್ಲಿ ಆರೋಗ್ಯದಾಯಕ ಬದುಕಿನ ಹಾದಿಯಿದೆ. ಸಿರಿಧಾನ್ಯಗಳನ್ನು ಬೆಳೆಸಿದಾಗಲೇ ಉಳಿಯುತ್ತದೆ. ಕರಾವಳಿ ಪ್ರದೇಶಕ್ಕೆ ಒಗ್ಗಬಹುದಾದ ಬೆಳೆಯಿದು," ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ 'ಸಿರಿ' ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮನೋರಮಾ ಭಟ್ ಅಭಿಪ್ರಾಯಪಟ್ಟರು.

           ಅವರು ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ 'ಹಲಸು ಸ್ನೇಹಿ ಕೂಟ' ಏರ್ಪಡಿಸಿದ 'ಮನೆಮನೆಗೆ ಸಿರಿಧಾನ್ಯದಡುಗೆ' ಕಾರ್ಯಕ್ರಮವನ್ನು ದೀಪಜ್ವಲಿಸಿ ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಸಭಾಧ್ಯಕ್ಷತೆಯನ್ನು ವಹಿಸಿ, "ಕಳೆದ ಶತಮಾನದ ಮಧ್ಯಭಾಗದಲ್ಲಿ  ಕರಾವಳಿಯಲ್ಲಿ ರಾಗಿಯ ಬೆಳೆ ಮತ್ತು ಬಳಕೆ ಯಥೇಷ್ಟವಾಗಿತ್ತು. ಈಗದು ಅಪರೂವಾಗಿದೆ. ಕರ್ನಾಟಕದ ಎಲ್ಲಾ ಬೆಳೆಗಳ ಪರಿಚಯ ನಮಗಿರಬೇಕು," ಎಂದರು.

           ಹಲಸು ಸ್ನೇಹಿ ಕೂಟದ ನಾಲ್ಕನೇ ವಾರ್ತಾಪತ್ರವನ್ನು (ಸಂ: ನಾ. ಕಾರಂತ ಪೆರಾಜೆ) ಪ್ರಯೋಗಶೀಲ ಗೃಹಿಣಿ ಶ್ರೀಮತಿ ನಳಿನಿ ಸದಾಶಿವ ರಾವ್ ಬಿಡುಗಡೆಗೊಳಿಸಿ ಮಾತನಾಡುತ್ತಾ, ಕಿರುಧಾನ್ಯಗಳು ಸತ್ವಯುತವಾದ ಆಹಾರ. ಇದು ಆರೋಗ್ಯಕ್ಕೆ ಉತ್ತಮ. ಅಕ್ಕಿ, ಗೋಧಿಗಳಿಗೆ ಪರ್ಯಾಯವಾಗಿ ಹೊಂದಿಕೊಳ್ಳುವ ಸಾಮರ್ಥ್ಯವಿದೆ, ಎಂದರು. ವೇದಿಕೆಯಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮ, ಉಬರು ರಾಜಗೋಪಾಲ ಭಟ್ ಉಪಸ್ಥಿತರಿದ್ದರು.

         ಕಡಂಬಿಲ ಕೃಷ್ಣಪ್ರಸಾದರ ಪ್ರಸ್ತಾವನೆಯೊಂದಿಗೆ ಸ್ವಾಗತ.  ನಾ. ಕಾರಂತ ಪೆರಾಜೆ ನಿರ್ವಹಣೆ. ಶಿರಂಕಲ್ಲು ನಾರಾಯಣ ಭಟ್ ವಂದನಾರ್ಪಣೆ. ಮಲ್ಯ ಶಂಕರನಾರಾಯಣ ಭಟ್, ಬೈಂಕ್ರೋಡು ಗಿರೀಶ, ಬೈಂಕ್ರೋಡು ವೆಂಕಟಕೃಷ್ಣ, ಅನಿಲ್ ಬಳೆಂಜ ವಿವಿಧ ಕಲಾಪವನ್ನು ನಿರ್ವಹಿಸಿದರು.

         ಪ್ರಾತ್ಯಕ್ಷಿಕೆ : ಸಿರಿಧಾನ್ಯಗಳ ಪರಿಚಯ ಮಾಡಿಕೊಟ್ಟವರು,  ಬೆಂಗಳೂರಿನ ಅನಿತಾ ಪೈಲೂರು. ನಳಿನಿ ಮಾಯಿಲಂಕೋಡಿ, ಶಿಲ್ಪಾ ಕಜೆ ಸಿರಿಧಾನ್ಯಗಳ ಖಾದ್ಯಗಳನ್ನು ಪ್ರಾತ್ಯಕ್ಷಿಕೆಯಲ್ಲಿ ತಯಾರಿಸಿದರು. ಎಲ್ಲಾ ಖಾದ್ಯಗಳ ರೆಸಿಪಿಯನ್ನು ಪ್ರತ್ಯೇಕವಾಗಿ ಬರೆದಿಟ್ಟು ಪ್ರದರ್ಶಿಸಿದರು.

ಡೆಮೋದಲ್ಲಿ ಸಿದ್ಧವಾದ ಖಾದ್ಯಗಳು : ರಾಗಿ ಶ್ಯಾವಿಗೆ, ನವಣೆ ಬಿಸಿಬೇಳೆ ಬಾತ್, ಸಜ್ಜೆ ದೋಸೆ, ಸಜ್ಜೆ ತಾಲಿಪಟ್ಟು, ಜೋಳ-ರಾಗಿ-ಸಜ್ಜೆಯ ಅರಳಿಟ್ಟು, ರಾಗಿ ಕೇಕ್, ನವಣೆ ಹಲ್ವ. ಮಂಚಿಯ ವಸಂತ ಕಜೆಯವರು ವಿಶೇಷವಾಗಿ ಕಾರ್ಯಕ್ರಮಕ್ಕೆಂದೇ 'ರಾಗಿ ಹಲ್ವ' ತಯಾರಿಸಿ ಸ್ವತಃ ವಿತರಿಸಿದ್ದರು. 

Sunday, April 20, 2014

ಅಡಿಕೆ ಮರವೇರಲು ಇನ್ನು ಸುಲಭ!

                 ಎರಡು ಸ್ಟೀಲ್ ಚೌಕಟ್ಟಿನ ಉಪಕರಣದ ಸಹಾಯದಿಂದ ಕಿರಣ್ ಸರಸರ ಅಡಿಕೆ ಮರ ಏರುತ್ತಿದ್ದಾರೆ. ಇನ್ನೂರಕ್ಕೂ ಅಧಿಕ ಕೃಷಿಕರು ಕಣ್ಣೆವೆ ಮುಚ್ಚದೆ ನೋಟಕರಾಗಿದ್ದಾರೆ. ಹದಿನೈದು ಅಡಿ ಏರಿದ ಕಿರಣ್ ಸಲಕರಣೆಯಲ್ಲೇ ಕುಳಿತು ಮಾತಿಗೆ ತೊಡಗಿದಾಗ ಕೃಷಿಕರಿಂದ ಕರತಾಡನದ ಗೌರವ. ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸಿಕ್ಕ ಅನುಭವ. ಅಭ್ಯಾಸವಾದರೆ ಕಷ್ಟವೇನಿಲ್ಲ, ಸುಲಭದಲ್ಲಿ ಮರ ಹತ್ತಬಹುದು.  ಟು ವೀಲರ್ ಕಲಿತ ಹಾಗೆ.. ಹೀಗೆ ಒಬ್ಬೊಬ್ಬರದು ಪರಸ್ಪರ ಮಾತುಕತೆ. ಒಂದಿಬ್ಬರು ಸಾಹಸದಿಂದ ಏರಿ ಇಳಿದಾಗ ಏನನ್ನೋ ಸಾಧಿಸಿದ ಖುಷಿ.

              ಸುಳ್ಯ-ಬೆಳ್ಳಾರೆಯಲ್ಲಿ ಜರುಗಿನ ಪ್ರಾತ್ಯಕ್ಷಿಕೆಯ ಒಂದು ನೋಟ. ಕಳೆದ ವರುಷದ ಮಳೆಯ ತೀವ್ರತೆಯ ಕರಾಳ ದಿನಗಳು ಇನ್ನೂ ಮಾಸಿಲ್ಲ. ಅಡಿಕೆ ಗೊನೆಗಳಿಗೆ ಬಾಧಿಸುವ ಮಹಾಳಿರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಿಸಲಾಗದಷ್ಟು ಹನಿ ಕಡಿಯದ ಮಳೆ. ಪರಿಣಾಮ, ಇಳುವರಿಯಲ್ಲಿ ಗಣನೀಯ ಇಳಿತ. ಮದ್ದು ಸಿಂಪಡಿಸುವ, ಗೊನೆ ಕೀಳುವ ಜಾಣ್ಮೆ ಕೆಲಸದವರ ಅಭಾವ. ಕೆಲಸಗಳು ಸಕಾಲಕ್ಕಾಗಿದೆ ನಾಶ ನಷ್ಟ. ಈ ಸಂಕಟಕ್ಕೆ ಪರಿಹಾರ ಬೇಕಿತ್ತು ಎನ್ನುವಾಗಲೇ ಕಿರಣರ ಮರವೇರುವ ಉಪಕರಣದ ಕ್ಷಮತೆ ಕತ್ತಲೆಯಲ್ಲಿ ಮಿಣುಕಿದ ಮಿಂಚುಳ್ಳಿ.

               ಕಿರಣರ 'ಅರೆಕಾ ಟ್ರೀ ಕ್ಲೈಂಬರ್' ಸಲಕರಣೆಯಲ್ಲಿ ಮರ ಏರುತ್ತಿದ್ದಾಗ ನನ್ನೂರಿನ ಸಂಕಪ್ಪ ಗೌಡ್ರು ನೆನಪಾದರು. ಅಡಿಕೆ ಋತುವಿನಲ್ಲಿ ಸುಮಾರು 20-30 ಅಡಿ ಉದ್ದದ ಬಿದಿರಿನ ದೋಟಿಯನ್ನು ಹೆಗಲಿಗೇರಿಸಿ, ಬೆವರೊರೆಸಿಕೊಂಡು ಸಾಗುವ ದೃಶ್ಯ ಮಾಸದ ನೆನಪು. ಇವರು ತಳೆ ಮೂಲಕ ಮರವೇರಿ ಅಡಿಕೆ ಕೊಯ್ಯುವ, ಮದ್ದು ಸಿಂಪಡಿಸುವ ಸ್ಪೆಶಲಿಸ್ಟ್. ಸಂಜೆ ಪುನಃ ಅದೇ ದಾರಿಯಲ್ಲಿ ಮರಳುವ ಸಂಕಪ್ಪರಲ್ಲಿ ಮುಂದಿನ ಕೆಲಸಗಳ 'ವೈಟಿಂಗ್ ಲಿಸ್ಟ್' ಒದ್ದೆಯಾಗಿ ಎದ್ದು ಕಾಣುತ್ತಿತ್ತು.  ಇದು ಒಂದು ಕಾಲಘಟ್ಟದ ಸ್ಥಿತಿ-ಗತಿ.

               ಕೃಷಿ ಕೆಲಸಗಳಲ್ಲಿ ಕುಶಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮರವೇರಿ ದುಡಿಯುವ ತಾಕತ್ತಿದ್ದರೂ ನಗರವನ್ನು ಸಂಪರ್ಕಿಸುವ ಬಸ್ಸಿನ ಹಾರ್ನಿಗೆ ಕಿವಿಯರಳುತ್ತದೆ. ನಗರಕ್ಕೆ ಹೋಗಿ ಕೆಲಸ ಮಾಡುತ್ತಾರೋ, ಬಿಡ್ತಾರೋ ಬೇರೆ ಮಾತು. ಸಂಜೆಯ ಬಸ್ಸಿನಲ್ಲಿ ಪುನಃ ಹಳ್ಳಿಯಲ್ಲಿಳಿದಾಗ ಸಾಧಕನೋರ್ವನ ಭಾವ ಮಿಂಚಿ ಮರೆಯಾಗುತ್ತದೆ! ಸಂಕಪ್ಪಣ್ಣನಂತಹ  ಕುಶಲಿ ಕೆಲಸಗಾರರ ಸ್ಥಾನ ತುಂಬಲು ಈಗ ಜರೂರಾಗಿ ಜನ ಬೇಕಾಗಿದ್ದಾರೆ!

                ಕಿರಣ್ ಹೇಳುತ್ತಾರೆ, ಕಾಯುತ್ತಾ ಕೂರುವ ಕಾಲ ಇದಲ್ಲ. ನಮಗೆ ಬೇಕಾದರೆ ನಾವೇ ದುಡಿಯಬೇಕು. ದುಡಿಯುವ ಮನಸ್ಸುಳ್ಳವರಿಗೆ ಪರಿಹಾರ ಇಲ್ಲಿದೆ. ಸಲಕರಣೆ ಮೂಲಕ ಮರ ಏರಿ, ಅಡಿಕೆ ಕೆಲಸಗಳನ್ನು ಮುಗಿಸಿಕೊಳ್ಳಿ. ಅಭ್ಯಾಸವಾದರೆ ನಿಮಿಷದೊಳಗೆ ಇಪ್ಪತ್ತು ಅಡಿಗೂ ಹೆಚ್ಚು ಏರಬಹುದು ಅಂದಾದ 'ಸಂಕಪ್ಪ ಗೌಡರು ಈಗಿರುತ್ತಿದ್ದರೆ ಎಷ್ಟು ಖುಷಿ ಪಡುತ್ತಿದ್ದರು' ಎಂದೆನಿಸಿತ್ತು. .


              ಕಿರಣ್ ಡಿಪ್ಲೋಮಾ ಓದಿದ್ದಾರೆ. ತಂದೆ ಕೃಷಿಮೂರ್ತಿಯವರೊಂದಿಗೆ ಕೃಷಿ ಕಾಯಕ. ಅಡಿಕೆ ಕೃಷಿಯ ವಿವಿಧ ಹಂತದ ಸಮಸ್ಯೆಗಳ ಅರಿವಿದ್ದ ಕಿರಣ್, ಅವರಲ್ಲಿ ಮರವೇರುವ ಸಲಕರಣೆಗಳ ವಿವಿಧ ನೀಲನಕ್ಷೆಗಳು ಬದಲಾಗುತ್ತಲೇ ಇದ್ದುವು. ಮೂರು ವರುಷದಲ್ಲಿ ಮೂರ್ನಾಲ್ಕು ಮಾದರಿಯ ಬಳಿಕ ಅಂತಿಮ ಉತ್ಪನ್ನ ಹೊರಬಂದಿದೆ.


               ಸಲಕರಣೆಯ ಯಶದ ಹಿಂದೆ ಕೊಯಂಬತ್ತೂರಿನ ವೆಂಕಟ್ ದಾಮೋದರ ನಾಯ್ಡು ಸಹಕಾರ ದೊಡ್ಡದು. ಅವರು ತೆಂಗು, ತಾಳೆ ಮರವೇರುವ ಸಲಕರಣೆಯನ್ನು ತಯಾರಿಸಿ, ಪ್ರಶಸ್ತಿ ಪಡೆದವರು.  ಅವರ ನಿರ್ದೇಶನದಲ್ಲಿ ಅಡಿಕೆ ಮರ ಏರುವ ಸಲಕರಣೆ ಅಭಿವೃದ್ಧಿ. ಆರರಿಂದ ಏಳು ಕಿಲೋ ಭಾರದ ಎರಡು ಸ್ಟೀಲ್ ಚೌಕಟ್ಟುಗಳೇ ಸಲಕರಣೆಯ ಹೃದಯ. ಸೊಂಟದ ಎತ್ತರಕ್ಕೆ ಒಂದು, ಇದಕ್ಕಿಂತ ಎರಡಡಿ ಕೆಳಗೆ ಇನ್ನೊಂದು ಚೌಕಟ್ಟು. ಮೇಲಿನ ಚೌಕಟ್ಟಿನಲ್ಲಿ ಕುಳಿತು, ಕೆಳಗಿನ ಚೌಕಟ್ಟನ್ನು ಕಾಲಿನಲ್ಲಿ ಮೇಲೆಳೆದು ಕೊಂಡು ಏರುತ್ತಾ ಹೋಗಬಹುದು. ಚೌಕಟ್ಟಿನಲ್ಲಿರುವ ರಬ್ಬರ್ ಬ್ರಶ್ಗಳು ಮೇಲೇರಿನ ಚೌಕಟ್ಟುಗಳನ್ನು ಮರಕ್ಕೆ ಅಪ್ಪಿ ಹಿಡಿದುಕೊಳ್ಳುತ್ತದೆ. ಒಂದು ಸಲಕ್ಕೆ ಎರಡೂ ಎರಡೂವರೆ ಅಡಿಯಷ್ಟು ಏರುತ್ತಾ ಹೋಗಬಹುದು. ತಕ್ಷಣ ಸಲಕರಣೆಯನ್ನು ಕಳಚಿ ಇನ್ನೊಂದು ಮರಕ್ಕೆ ಜೋಡಿಸುವ ಸರಳತೆ.


                 ಕಿರಣ್ ಹೇಳುತ್ತಾರೆ, ಮರದ ಗಾತ್ರಕ್ಕೆ ಹೊಂದಿಸಿಕೊಳ್ಳುವಂತೆ ಮಾಡುವ ಸಿಸ್ಟಮ್ ಇದೆ. ಚೌಕಟ್ಟಿನ ಸ್ಟೀಲು ಪಟ್ಟಿಗಳು, ಸ್ಪ್ರಿಂಗುಗಳು, ಸೆಲ್ಫ್ ಲಾಕಿಂಗ್ ಫಿನ್ಗಳು, ರಬ್ಬರ್ ಬುಶ್ಗಳು ನೈಲಾನ್ ಪಟ್ಟಿ ಆಸನ, ನೈಲನ್ ಬೆಲ್ಟ್ಗಳು. ಈ ಕಚ್ಚಾವಸ್ತುಗಳಲ್ಲಿ ತಯಾರಾಗುವ ಉಪಕರಣದ ಗುಣಮಟ್ಟದೊಂದಿಗೆ ರಾಜಿಯಿಲ್ಲ. ಎನ್ನುವ ಕಿರಣ್, "ಬೆಲೆ ಹತ್ತುಸಾವಿರದೈನೂರು ರೂಪಾಯಿ ಅಂದಾಗ ಹೆಚ್ಚಾಯಿತು ಅನ್ನಿಸುತ್ತೆ. ಆದರೆ ಉಪಕರಣಕ್ಕೆ ಕಳಪೆ ಕಚ್ಚಾವಸ್ತು ಬಳಸಿ ದರ ಕಡಿಮೆ ಮಾಡಿದೆ ಎಂದಿಟ್ಟುಕೊಳ್ಳಿ.  ಮರ ಏರಿ ಇಳಿಯುವಷ್ಟರದ ತನಕ ಏರಿದವರ ಆಯುಷ್ಯಕ್ಕೆ ನಾನು ಜವಾಬ್ದಾರಿಯಲ್ವಾ. ಅದರೊಂದಿಗೆ ನಾನ್ಯಾಕೆ ಆಟವಾಡಲಿ?" ಎನ್ನುತ್ತಾರೆ. ಕಿರಣ್ ತೀರ್ಥಹಳ್ಳಿ  ತಾಲೂಕಿನ ಕೋಣಂದೂರು ಸನಿಹದ ಮಲ್ಲೇಸರದವರು. ಓದಿದ್ದು ಡಿಪ್ಲೋಮಾ. ಕೃಷಿಯಲ್ಲಿ ಹೊಸತನ್ನು ಹುಡುಕುವ ಜಾಯಮಾನ. ತನ್ನ ತೋಟದಲ್ಲೇ ಪ್ರಥಮ ಪ್ರಯೋಗ.


                  ಬೇಸಿಗೆಗೆ ಓಕೆ, ಮಳೆಗಾಲಕ್ಕೆ ಬಳಕೆ ಕಷ್ಟವಲ್ಲವೇ? ಬಹುತೇಕ ಕೃಷಿಕರ ಪ್ರಶ್ನೆ. ಮಳೆಗಾಲದಲ್ಲಿ ಮರ ಜಾರುತ್ತದೆ. ಚೌಕಟ್ಟಿನಲ್ಲಿರುವ ರಬ್ಬರ್ ಬುಶ್ ಸಲಕರಣೆಯ ಪ್ರಧಾನಾಂಶ. ಅದಕ್ಕೆ ಗೋಣಿ ನಾರನ್ನು ಸುತ್ತಿದರೆ ಸುಲಭದಲ್ಲಿ ಜಾರದು. ಹೆಚ್ಚು ಮಳೆ ಬೀಳುವ ನಮ್ಮೂರಿನ ಅಡಿಕೆ ಮರಗಳಿಗೆ ಮಳೆಗಾಲದಲ್ಲಿ ಏರಿದ್ದೇನೆ. ಹೇಳುವಂತಹ ಸಮಸ್ಯೆ ಬಂದಿಲ್ಲ. ಬೇಸಿಗೆಯಲ್ಲಿ ಸರಸರನೆ ಏರುವಂತಹ ಹುಮ್ಮನಸ್ಸು ಮಳೆಗಾಲದಲ್ಲಿ ಬೇಡ. ಸ್ವಲ್ಪ ಜಾಗ್ರತೆ ವಹಿಸಿದರೆ ಕಷ್ಟವಲ್ಲ. ರಬ್ಬರ್ ಬುಶ್ಶಿನ ಬದಲಿಗೆ ಮೆಟಲಿನದು ಮಾಡಬಹುದೇನೋ ಮೊದಲಾದ ಸೂಕ್ಷ್ಮ ವಿಚಾರಗಳನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ.

                 ಕೃಷಿ ಯಾಂತ್ರೀಕರಣದ ವಿಚಾರ ಬಂದಾಗಲೆಲ್ಲಾ ಸಬ್ಸಿಡಿಗಳ ಮಾತು ಬಾರದೆ ಮುಂದೆ ಹೋಗದು. ಈ ಸಲಕರಣೆಯೂ ಸಬ್ಸಿಡಿಗೆ ಸಿಗುವ ಹಾಗೆ ಮಾಡಬಹುದಲ್ಲಾ..? ಸಹಜ ಪ್ರಶ್ನೆ. ಉಪಕರಣದ ದರವನ್ನು ದುಪ್ಪಟ್ಟು ಮಾಡಿ, ಅದರಲ್ಲಿ ಐವತ್ತು ಶೇಕಡಾ ಸಬ್ಸಿಡಿ ಅಂತ ತೆಕ್ಕೊಳ್ಳುವ ಬದಲು, ಆ ಬೆಲೆಗೆ ನಾನೇ ಒದಗಿಸುತ್ತೇನಲ್ಲಾ! ಜತೆಗೆ ಸಬ್ಸಿಡಿ ಫೈಲುಗಳ ಹಿಂದೆ ಓಡುವ ಕೆಲಸವೂ ತಪ್ಪಿತು. ಇಲಾಖಾ ಮೇಜುಗಳ ಮುಂದೆ ಗಂಟೆಗಟ್ಟಲೆ ಸಮಯ ಕೊಲ್ಲುವ ಸಂದರ್ಭವೂ ಬರುವುದಿಲ್ಲ. ಸಬ್ಸಿಡಿ ಬೇಕೇ ಬೇಕು ಎಂದಾರೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೃಷಿಕರೇ ಒತ್ತಾಯಿಸಬೇಕು ಅಂದಾಗ ಸಬ್ಸಿಡಿಯ ಮಾತು ಮೌನವಾಯಿತು!


                  ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ವಿಟ್ಲದ cpcri ರ್ತೋಟದಲ್ಲಿ ಎಪ್ರಿಲ್ ಮೊದಲ ವಾರ, ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಎರಡನೇ ವಾರದ ಪ್ರಾತ್ಯಕ್ಷಿಕೆ. ಫೇಸ್ಬುಕ್ಕಿನ ಅಗ್ರಿಕಲ್ಚರಿಸ್ಟ್ ಗುಂಪು ಪ್ರಾತ್ಯಕ್ಷಿಕೆಯ ಹೊಣೆ ಹೊತ್ತಿತ್ತು. ಬೆಳ್ಳಾರೆ ಕೃಷಿಕರ ವೇದಿಕೆಯ ಹೆಗಲೆಣೆ.


               ಇನ್ನೂರೈವತ್ತಕ್ಕೂ ಮಿಕ್ಕಿದ ಅಸಕ್ತರಿಗೆ ಆಮಂತ್ರಣ ಪತ್ರ ನೀಡಿಲ್ಲ. ಜಾಹೀರಾತು ಪ್ರಕಟಿಸಿಲ್ಲ. ಅಗ್ರಿಕಲ್ಚರಿಸ್ಟ್ ಗುಂಪಿನೊಳಗೆ ಸಂವಹನಗೊಂಡ ವಿಚಾರ ಕೃಷಿಕರ ಮಧ್ಯೆ ಮಾಹಿತಿ ಹಂಚಿತ್ತು. ಹಾದಿ ತಪ್ಪಿಸುತ್ತಿದೆ ಎಂಬ ಆರೋಪವನ್ನಂಟಿಸಿಕೊಂಡ ಫೇಸ್ಬುಕ್ಕನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಂಡರೆ ನಿಜಕ್ಕೂ ಅದೊಂದು ಸಶಕ್ತ ಮಾಧ್ಯಮ. ಬರೇ ಲೈಕ್ಗಳಿಗೆ ಅಂಟಿಕೊಳ್ಳದೆ, ಕಮೆಂಟಿಗಾಗಿ ಕಮೆಂಟನ್ನು ಬರೆಯುವ ಚಾಳಿಯಿಂದ ದೂರವಿದ್ದ ಬಹುತೇಕರಿಗೆ ಗುಂಪಿನ ಚಟುವಟಿಕೆ ಆಪ್ತವಾಗಿದೆ.


               ಸೀಪಿಸಿಆರ್ಐ ಪ್ರಾತ್ಯಕ್ಷಿಕೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭರು ಉಪಕರಣದ ಮೂಲಕ ತಾನೇ ಸ್ವತಃ ಅಡಿಕೆ ಮರವೇರಿ, ತನಗೆ ಅರುವತ್ತೆರಡು ವರುಷವಾಯಿತು ಎನ್ನುವುದನ್ನು ಮರೆತರು! ಸಲೀಸಾಗಿ ಏರುವ ಉಪಕರಣದ ಕ್ಷಮತೆಯನ್ನು ಶ್ಲಾಘಿಸಿದರು. ಅಡಿಕೆ ಸಂಸ್ಥೆಗಳು ಕನಿಷ್ಠ ಇಂತಹ ಪ್ರೋತ್ಸಾಹವನ್ನು ಕಿರಣರಿಗೆ ನೀಡಿದರೆ ಅವರ ಉಪಕರಣ ಕೃಷಿಕರ ಜಗಲಿಯೇರಬಹುದು. ಪ್ರಕೃತ ಅಡಿಕೆ ಮರವೇರುವ ಸರಳ ಸಾಧನೆಕ್ಕೆ ಕೃಷಿಕರಿಗೆ ಅಂಗೀಕಾರ ಸಿಕ್ಕಿದೆ.


              ತೆಂಗು ಅಭಿವೃದ್ಧಿ ಮಂಡಳಿಯು ಮೂರು ವರುಷದಿಂದ 'ಫ್ರೆಂಡ್ಸ್ ಆಫ್ ಕೊಕೊನಟ್ ಟ್ರೀಸ್' ಹೆಸರಿನ ಯೋಜನೆಯಡಿ ದೇಶದಾದ್ಯಂತ 21483 ಮಂದಿಗೆ ತೆಂಗು ಮರವೇರಲು ತರಬೇತಿ ನೀಡಿದೆ! ನಾವೂ ಚಿಕ್ಕ ರೀತಿಯಲ್ಲಾದರೂ ಅಡಿಕೆ ಮರ ಏರುವ ತರಬೇತಿಯನ್ನು ಯಾಕೆ ನಡೆಸಬಾರದು - ಎನ್ನುವ ಪ್ರಶ್ನೆಯನ್ನು ಅಡಿಕೆ ಪತ್ರಿಕೆಯ ಸಂಪಾದಕೀಯದಲ್ಲಿ ಶ್ರೀ ಪಡ್ರೆಯವರು ಮುಂದಿಟ್ಟಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸುವ ಅನಿವಾರ್ಯವಿದೆ.


Friday, March 28, 2014

'ನಾಂಡುವಾಲಿ'ಗೆ ಪುನರ್ಜನ್ಮ, ಎತ್ತಿನಹೊಳೆಗೋ..?


              ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಮತ್ತೆ ಹರಿಯುತ್ತಿದೆ, ನಾಂಡುವಾಲಿ ನದಿ. ಸುಮಾರು ಕಾಲು ಶತಮಾನದಿಂದ ಬತ್ತಿದ ನದಿ ಪುನರುಜ್ಜೀವನಗೊಂಡಿದೆ. ಅಂತರ್ಜಲದಿಂದ ಮೈತುಂಬಿದೆ. ವನರಾಜಿಯ ಹಾಸು ಹಸಿರಾಗಿವೆ. ಜನರ ಬದುಕು ಉಲ್ಲಸಿತವಾಗಿವೆ. ದಶಕದೀಚೆಗಿನ ಹಳ್ಳಿಯ ಚಿತ್ರದಲ್ಲಿ ರಾಜಸ್ಥಾನಕ್ಕೆ ಮಾತ್ರವಲ್ಲ, ದೇಶವೇ ತಿರುಗಿ ನೋಡುವ ಸಂದೇಶವಿದೆ.
ನದಿ ಹೇಗೆ ಬರಡಾಯಿತು? ಅವಿರತ ಕಾಡಿನ ನಾಶ. 'ಬೇಕಾದಂತೆ ಕಡಿದುಕೊಳ್ಳಿ' ಇಲಾಖೆಯ ಸಿಬ್ಬಂದಿಯಿಂದಲೇ ಹಸಿರು ನಿಶಾನೆ. ಸುಲಭದಲ್ಲಿ ಮರ ಸಿಗುತ್ತದೆ ಎಂದಾದರೆ ಯಾರಿಗೆ ಬೇಡ? ಮರಗಳು ಕೊಡಲಿಗೆ ಆಹುತಿಯದುವು. ಕಾಡು ನುಣುಪಾಗುತ್ತಲೇ ಹೋಯಿತು. ಭವಿಷ್ಯದ ಅರಿವು ಇರಲಿಲ್ಲ.
              ಪರಿಣಾಮ ಕಣ್ಣೆದುರಿಗಿದೆ. ಕೊಳವೆ ಬಾವಿ, ತೆರೆದ ಬಾವಿ ಮತ್ತು ನೀರಿನ ಎಲ್ಲಾ ಉಪಾಧಿಗಳು ಒಣ, ಭಣಭಣ. ಕುಡಿನೀರಿಗಾಗಿ ಏಳೆಂಟು ಕಿಲೋಮಿಟರ್ ದೂರ ಸಾಗುವಂತಹ ಬದುಕು. ಕೃಷಿ ದೂರ. ಹಳ್ಳಿಗರ ವಲಸೆ. ಸಾಲದ ಹೊರೆ. ಈ ಜಿಲ್ಲೆಗೆ ಹೆಣ್ಣು ಕೊಡಲು ಹಿಂಜರಿವ ಅಪ್ಪಾಮ್ಮಂದಿರು. ಉಟ್ಟ ಬಟ್ಟೆಯಲ್ಲೇ ದಿನವನ್ನು ಸಾಗಿಸುವಂತಹ ಬರ್ಬರ ದಿನಗಳು.
                ನದಿ ಪುನರುಜ್ಜೀವದ ಬಳಿಕ ಹಳ್ಳಿಯ ಚಿತ್ರ ಹೇಗಿದೆ? ಎಲ್ಲಾ ಹಳ್ಳಿಗಳಲ್ಲೂ ನೀರಿನ ಸಮೃದ್ಧತೆ. ಕೃಷಿಯ ಅಭಿವೃದ್ಧಿ. ಹೈನುಗಾರಿಕೆ ಹೆಚ್ಚಳ. ಸ್ವಂತ ಜಮೀನಿನಲ್ಲಿ ಬಿಡುವಿರದ ಕೆಲಸ. ನದಿಯಂತೆ ಬದುಕು ಕೂಡಾ ಪುನರುಜ್ಜೀವವಾದ ಸಂತಸ. ಮತ್ತೆ ನಳನಳಿಸುತ್ತಾ ಮೇಲೆದ್ದ ಅರಣ್ಯ.
                   ಕುಸಿದ ಬದುಕು ಮೇಲೆದ್ದುದು ಹೇಗೆ? ಜನರ ತನುಶ್ರಮ, ಯೋಜನೆ-ಯೋಚನೆ ಮತ್ತು ಅಲ್ಲಿನ 'ಸಂಭಾವ್' ಎನ್ನುವ ಸಂಸ್ಥೆಯ ಅವಿರತ ಹೋರಾಟಗಳು. ಹೋರಾಟ ಎಂದಾಗ ಫಕ್ಕನೆ ರಾಚುವುದು - ಧರಣಿ, ಮೆರವಣಿಗೆ, ಘೋಷಣೆ, ಪ್ರತಿಭಟನೆ, ಅವಾಚ್ಯ ಶಬ್ದಗಳು, ಇನ್ನೇನೋ. ಅಲ್ಲಿನ ಹೋರಾಟ ಅಂತಹುದಲ್ಲ, ಬದುಕನ್ನು ಹಳಿಗೆ ತರುವಲ್ಲಿ ಮಾಡಿಕೊಂಡ ಕಾರ್ಯಹೂರಣದ ಅನುಷ್ಠಾನದ ಕೆಲಸಗಳು.
                   ಅಬ್ಬಬ್ಬಾ ಅಂದರೆ ಮುನ್ನೂರೈವತ್ತು ಮಿ.ಮಿ. ಮಳೆ ಬೀಳುವ ಪ್ರದೇಶ. ಬಿದ್ದ ಮಳೆನೀರನ್ನು ಭೂ ಒಡಲಿಗಿಳಿಸಿ ನದಿಗೆ ಪುನರ್ಜನ್ಮವಿತ್ತ ಹಳ್ಳಿಗಳು ನಿಜಕ್ಕೂ ಭಗೀರಥರು. ಸಾಮಾಜಿಕ ಕಾರ್ಯಕರ್ತ ಫ್ಹರ್ಹಾದ್ ಕಂಟ್ರಾಕ್ಟರ್ ಸಾರಥ್ಯದಲ್ಲಿ ರೂಪುಗೊಂಡ 'ಸಂಭಾವ್' ಭಗೀರಥರಿಗೆ ಸಾಥ್ ಆಯಿತು. 2003ರಲ್ಲಿ ಕಾಣೆಯಾದ ನದಿಯನ್ನು ಹುಡುಕುವ ಕೈಂಕರ್ಯಕ್ಕೆ ಶ್ರೀಕಾರ! 
                  ಶುರುವಿಗೆ ಕೃಷಿ, ನೀರು, ಹಣಕಾಸು ಮತ್ತು ಸಾಮಾಜಿಕ ಪರಿಸ್ಥಿತಿಯ ಅಧ್ಯಯನ. ಬರಕ್ಕೆ ರೋಸಿಹೋದ ಜನರಲ್ಲಿ ವಿಶ್ವಾಸವನ್ನು ತುಂಬುವ, ಸಾಮೂಹಿಕ ಕೆಲಸಕ್ಕೆ ಮನವೊಲಿಸುವುದು ಸವಾಲಿನ ಕೆಲಸ. ಇದಕ್ಕಾಗಿ ಗ್ರಾಮ ಸಮಿತಿಗಳ ರೂಪೀಕರಣ. ಸಭೆ, ಮಾತುಕತೆ. ಪರಿಹಾರದ ಬೆಳ್ಳಿರೇಖೆ ಗೋಚರಿಸಿದಾಗ ತಮ್ಮ ಪಾಲಿನ ಆರ್ಥಿಕ ಕೊಡುಗೆಗೆ ಹಳ್ಳಿ ಸಿದ್ಧವಾಯಿತು.
                     ಮೊದಲಿಗೆ ಮದಕ(ಜೊಹಾಡ್)ಗಳಿಗೆ ಕಾಯಕಲ್ಪ. ಎತ್ತರದ ಜಾಗದಲ್ಲಿ ಯಥೇಷ್ಟ ನೀರು ಹಿಡಿದಿಡುವ ಪಾತಳಿಯಿದು. ಎಲ್ಲಾ ಮದಕಗಳು ಸಾರ್ವಜನಿಕ ಜಮೀನಿನಲ್ಲಿರುವಂತವು. ಮಳೆ ನೀರು ತುಂಬಿದಾಗ ಅಂತರ್ಜಲಕ್ಕೆ ಉಣಿಕೆ. ಜಾನುವಾರುಗಳಿಗೂ ಕುಡಿ ನೀರು. ತಪ್ಪಲಿನ ಪ್ರದೇಶದಲ್ಲೂ ಏರಿದ ಜಲಮಟ್ಟ.
                      ಮದಕ, ಬಾಂಧ್, ಹೊಲಗಳಿಗೆ ಒಡ್ಡು ಮೊದಲಾದ ಪಾರಂಪರಿಕ ನೆಲಜಲ ಸಂರಕ್ಷಣಾ ವಿಧಾನಗಳ ಅಳವಡಿಕೆ. ನದಿಗೆ ಅಡ್ಡವಾಗಿ ಅಣೆಕಟ್ಟು. ನದಿಯುದ್ದಕ್ಕೂ ಅಣೆಕಟ್ಟು (ಕಟ್ಟ) ಸಾಲುಗಳು. ಪಕ್ಕದಲ್ಲೇ ನೀರಾವರಿ ಬಾವಿಗಳು. ಮದಕಗಳದ್ದು ಕೂಡಾ ಸರಣಿ ರಚನೆ. ಒಂದು ತುಂಬಿ ಮತ್ತೊಂದು ತುಂಬುವ ರೀತಿ. ಖಾಸಗಿ ಜಮೀನಿನಲ್ಲೂ ಮದಕ ಮಾಡುವಂತೆ ಮನವೊಲಿಕೆ. ಆರ್ಥಿಕ ಅವಶ್ಯವನ್ನು ಬೇಡುವ ಕೆಲಸಗಳಿಗೆ ಸಂಭಾವ್ ಹೆಗಲೆಣೆ.
                    ಅರೆಮರುಭೂಮಿಯಲ್ಲಿ ಗಿಡ ನೆಟ್ಟು ಆರೈಕೆ ಮಾಡುವುದು ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಸಂಭಾವ್ ಟೊಂಕಕಟ್ಟಿತು. ಪ್ರತಿ ಹಳ್ಳಿಗಳಲ್ಲಿ ವನ ಸಂರಕ್ಷಣ ಸಮಿತಿಗಳು. ಸಮಿತಿಯಲ್ಲಿ ಕುಟುಂಬದ ಒಬ್ಬ ಸದಸ್ಯ. ಸ್ವ-ರೂಢಿತ ಕಾನೂನುಗಳು. ಒಂದು ಉದಾಹರಣೆ ನೋಡಿ. ಮದುವೆಯಂತಹ ಶುಭಸಮಾರಂಭಗಳಿಗೆ ಕಟ್ಟಿಗೆ ಬೇಕು. ಮರ ಕಡಿಯಲು ಸಮಿತಿಯ ಪರವಾನಿಗೆ ಬೇಕು. ಉಡಾಫೆಯಿಂದ ಕಡಿದರೆ ಶಿಕ್ಷೆಶುಲ್ಕ. ಮೊದಲ ಬಾರಿಗೆ ನೂರ ಐವತ್ತೊಂದು ರೂಪಾಯಿ, ಎರಡನೇ ಸಲ ಇನ್ನೂರೈವತ್ತೊಂದು, ಕೊನೆಗೆ ಒಂದು ಸಾವಿರದ ನೂರು ರೂಪಾಯಿ. ಕೊನೆಯ ಹಂತಕ್ಕೆ ತಲಪುವವರು ಕಡಿಮೆ.
                     ರಾಜಸ್ಥಾನದ ನಾಂಡುವಾಲಿ ನದಿಯ ಪುನರುಜ್ಜೀವನದ ಕೆಲಸವನ್ನು ಅಧ್ಯಯನ ಮಾಡಿದ ಹಿರಿಯ ಪತ್ರಕರ್ತ ಶ್ರೀ ಪಡ್ರೆ ಹೇಳುತ್ತಾರೆ, ದೇಶದಲ್ಲೇ ಮೊತ್ತಮೊದಲಿನ ನದಿ ಪುನರುಜ್ಜೀವನದ ನೀಲನಕ್ಷೆ ಹಾಕಿ ಐದು ವರುಷದೊಳಗೆ ಸಾಧಿಸಿ ತೋರಿಸಿದ ಹಳ್ಳಿಗಳಿವು. ಇವಿನ್ನೂ ಸಾಕ್ಷರತೆ ಮತ್ತಿತರ ಹಲವು ವಿಷಯದಲ್ಲಿ ಹಿಂದುಳಿದಿವೆ. ಆದರೆ ನಗರಗಳತ್ತ ವಲಸೆ ಮತ್ತು ರೈತ ಆತ್ಮಹತ್ಯೆಗಳೆಂಬ ದೇಶದ ಎರಡು ದೊಡ್ಡ ಸಮಸ್ಯೆಗಳಿಗೆ ಈ ಹಳ್ಳಿ ಜನ ಪರಿಹಾರದ ದಾರಿಯನ್ನು ಸದ್ದಿಲ್ಲದೆ ತೋರಿದ್ದಾರೆ
                   ಸಂಭಾವ್ ಸಂಸ್ಥೆಯ ಮುಖ್ಯಸ್ಥ ಫ್ಹರ್ಹಾದ್ ಕಾಂಟ್ರಾಕ್ಟರ್ ಅವರನ್ನು ’ಶ್ರೀ’ ಪಡ್ರೆಯವರು ಮಾತನಾಡಿಸಿದಾಗ, ನದಿ ಪುನರುಜ್ಜೀವನಕ್ಕೆ ಪ್ರಯಾಣ, ಆಡಳಿತ ಎಲ್ಲ ಸೇರಿ ಮೂವತ್ತು ಲಕ್ಷ ರೂಪಾಯಿ. ಇದರಲ್ಲಿ ಅರ್ಧದಷ್ಟು ಊರವರ ಪಾಲು. ಇಷ್ಟು ಕಡಿಮೆ ವೆಚ್ಚದಲ್ಲಿ ಆಗಿದೆ ಎಂದರೆ ಇಂಜಿನಿಯರುಗಳು ನಂಬುವುದಿಲ್ಲ. ಇಲ್ಲಿ ಬತ್ತಿದ ನದಿಯ ಪುನರುಜ್ಜೀವನ ಒಂದು ಮಾಧ್ಯಮ. ಸಮುದಾಯಗಳ ಪುನರುಜ್ಜೀವನಕ್ಕೆ ಮೊದಲ ಆದ್ಯತೆ. ಕೊನೆಗೆ ಗುರಿಯ ಹಿಂದೆಯಿದ್ದ ಸ್ವಾಭಿಮಾನ, ಆತ್ಮವಿಶ್ವಾಸ, ನಂಬಿಕೆ ಬೆಳೆಸಿಕೊಂಡು ಸಮಾಜವೇ ಈ ಜವಾಬ್ದಾರಿ ಹೊರುವಂತೆ ಪ್ರೇರೇಪಿಸುವುದು..
                    ನಾಂಡುವಾಲಿ ನದಿಯ ಪುನರ್ಜನ್ಮದ ಯಶವನ್ನು ಮನಸ್ಸಲ್ಲಿಟ್ಟುಕೊಂಡು ಕನ್ನಾಡನ್ನು ಸುತ್ತೋಣ. ನದಿಗೆ ಪುನರ್ಜನ್ಮ ಬಿಡಿ, ಅದರ ಪಾಡಿಗೆ ಹರಿಯುವ ನದಿಯನ್ನು ಎತ್ತಲೋ ತಿರುಗಿಸುವ ಯೋಜನೆ. ಇದು ಯಶವಲ್ಲ ಎಂದು ತಿಳಿದರೂ ಆಡಳಿತದ ಬಲದಿಂದ ಪ್ರಾಕೃತಿಕವಾದ ಸಂಪತ್ತನ್ನು ನಾಶ ಮಾಡುವ ಪ್ರಕ್ರಿಯೆ. ಅಂತರ್ಜಲ ವೃದ್ಧಿಗೆ ಪೂರಕವಾಗುವ ಎಲ್ಲಾ ಉಪಾಧಿಗಳನ್ನು ಯೋಜನೆಗಳ ಕೂಪಕ್ಕೆ ತಳ್ಳಿ ಓಟು ಬ್ಯಾಂಕನ್ನು ರೂಪಿಸುವ ಪರಿ. ನಾಗರಿಕರಿಗೆ ದೊಡ್ಡ ದೊಡ್ಡ ಯೋಜನೆಗಳನ್ನು ಹುಟ್ಟುಹಾಕಿ, ತಮ್ಮ ಅಪಕ್ವತೆಯನ್ನು ಪಕ್ವತೆಯ ಸೋಗುಮುಖದಿಂದ ತೋರಿಸುವ ಹಲವು ಮನಸ್ಸುಗಳ ಕಾರ್ಯವು ತಲೆತಗ್ಗಿಸುವಂತಾದ್ದು.
                       ಎತ್ತಿನಹೊಳೆ ಯೋಜನೆಯ ರೂವಾರಿ ಡಾ.ಜಿ.ಎಸ್.ಪರಮಶಿವಯ್ಯ ನಿನ್ನೆ (ಮಾ.11, ೨೦೧೪) ವಿಧಿವಶರಾದರು. ಬಯಲುಸೀಮೆಗಳ ನೀರಿನ ತತ್ವಾರಕ್ಕೆ ದನಿಯಾದ ತಜ್ಞ. ಮಾರ್ಚ್ ಮೊದಲ ವಾರ ದೊಡ್ಡಬಳ್ಳಾಪುರದಲ್ಲಿ  ಹೇಳಿದ ಮಾತುಗಳು ಪತ್ರಿಕೆಯಲ್ಲಿ ವರದಿಯಾಗಿವೆ, "ಎತ್ತಿನ ಹೊಳೆ ಯೋಜನೆಯಿಂದ ಲಭ್ಯವಾಗುವ ನೀರನ್ನು ಪಂಚಪಾತ್ರೆ ಉದ್ಧರಣೆಯಲ್ಲಿ ತೀರ್ಥದಂತೆ ಕೊಡಬಹುದು ಅಷ್ಟೇ. ಬಯಲುಸೀಮೆಯ ಒಂಭತ್ತು ಜಿಲ್ಲೆಗಳಿಗೆ 440 ಟಿಎಂಸಿ ನೀರು ಬೇಕು. ಆದರೆ, ಎತ್ತಿನಹೊಳೆ ಯೋಜನೆಯಿಂದ ಲಭ್ಯವಾಗುವುದು ಕೇವಲ ಇಪ್ಪತ್ತನಾಲ್ಕು ಟಿಎಂಸಿ ಮಾತ್ರ. ಈ ಯೋಜನೆಯಿಂದ ಯಾವುದೇ ಪ್ರಯೋಜನವಾಗದು. ನಾನು ವರದಿ ಕೊಟ್ಟು ನಲವತ್ತು ವರ್ಷಗಳೇ ಆಗಿವೆ. ಹಲವು ಮುಖ್ಯಮಂತ್ರಿಗಳು ಬಂದು ಹೋದರು," ಎನ್ನುವ ವಿಷಾದ ಪರಮಶಿವಯ್ಯರದು.
                    ಆ ಕಾಲಘಟ್ಟಕ್ಕೂ ಈಗಕ್ಕೂ ಪ್ರಾಕೃತಿಕವಾಗಿ ದೊಡ್ಡ  ವ್ಯತ್ಯಾಸವಿದೆ. ಮಾನವ ದುರಾಸೆಗಳಿಗೆ ಈಗಾಗಲೇ ಪ್ರಕೃತಿ ಮುನಿದಿರುವಾಗ ತರಾತುರಿಯ ಎತ್ತಿನಹೊಳೆ ಯೋಜನೆಯಿಂದ ಯಾರಿಗೆ ಪ್ರಯೋಜನ? ಅಧಿಕಾರದ ಬಲವು ಸಮಾಜಕ್ಕೆ, ಪ್ರಕೃತಿಗೆ ಮಾರಕವಾಗಬಾರದು? ಮಾರಕವಾದರೆ ರಾಜಸ್ಥಾನದ ನಾಂಡುವಾಲಿ ನದಿ ಮಾಯವಾದ ಉದಾಹರಣೆ ಮುಂದಿದೆ. ಪರಮಶಿವಯ್ಯ ಪಶ್ಚಿಮಾಭಿಮುಖವಾಗಿ ಹರಿಯುವ ನೇತ್ರಾವತಿ ನೀರಿನ ಹೆಚ್ಚುವರಿ ಭಾಗವನ್ನು ಬಳಸಿಕೊಂಡು, ಅದರ ಒಂಭತ್ತು ಉಪನದಿಗಳಿಗೆ ಅಡ್ಡವಾಗಿ 38 ಡ್ಯಾಮ್ಗಳನ್ನು ಕಟ್ಟಿ ಅವುಗಳನ್ನು ಕಾಲುವೆ ಮೂಲಕ ಹರಿಸಲಾಗುತ್ತದೆ. ಕೆರೆ ಕಟ್ಟೆಗಳನ್ನು ತುಂಬಲಾಗುತ್ತದೆ.. ಹೇಳಿದ್ದರು. ಸಾಧ್ಯಾಸಾಧ್ಯತೆಗಳ ವಿಮರ್ಶೆ ಬೇರೆ ವಿಚಾರ.
                   ನಮ್ಮ ಮಾಜಿ ಮುಖ್ಯಮಂತ್ರಿಗಳು ಹೇಳುತ್ತಾರೆ, ಎತ್ತಿನಹೊಳೆ ಯೋಜನೆಯೇ ಬೇರೆ, ನೇತ್ರಾವತಿ  ನದಿ ತಿರುವು ಯೋಜನೆಯೇ ಬೇರೆ. ಹೌದಾದರೆ ಮೊನ್ನೆ ಮುಖ್ಯಮಂತ್ರಿಗಳಿಂದ ಕೆಸರು ಕಲ್ಲು ಬಿತ್ತಲ್ಲಾ, ಅದು ಯಾವ ಯೋಜನೆಗೆ? ಅದು ಎತ್ತಿನಹೊಳೆ ಯೋಜನೆಗೆ ಎಂದಾದರೆ ನೇತ್ರಾವತಿ ಯೋಜನೆ ಬೇರೆ ಇದೆಯೇ? ಒಟ್ಟೂ ಗೊಂದಲದ ಹೇಳಿಕೆಗಳು. ಗೊಂದಲದ ಮನಃಸ್ಥಿತಿಗಳು.
                    ಸರಿ, ಎಲ್ಲಾ ಆದ ಮೇಲೆ ನಮ್ಮಿಂದ ತಪ್ಪು ಆಗಿದೆ, ಇನ್ನು ಸರಿ ಮಾಡ್ತೀವಿ ಎನ್ನುವಾಗ ಕಾಲ ಮಿಂಚಿರುತ್ತದೆ. ಹೊಸ ಯೋಜನಾ ಕಡತಗಳ ಫೈಲು ಸಹಿಗಾಗಿ ಕಾಯುತ್ತಿರುತ್ತದೆ!
 

Friday, March 7, 2014

ಚಪ್ಪರದಡಿಯ ಆಪ್ತತೆಯ ಪುಳಕ

            ಹಳ್ಳಿ ಮನೆ. ನಾಲ್ಕು ಮಂದಿಯ ಕುಟುಂಬ. ಚಿಕ್ಕ ತೋಟ. ಸಾಲವಿಲ್ಲದ ಬದುಕು. ಮೊನ್ನೆಯಷ್ಟೇ  ಮಹೇಶನ ವಿವಾಹ. ನೂರೈವತ್ತು ಮೀರದ ಆಪ್ತೇಷ್ಟರ ಉಪಸ್ಥಿತಿ. ಕೃಷಿ, ನೆಲ, ಜಲವನ್ನು ಪ್ರೀತಿಸುವ ಮಹೇಶನ ತಂದೆ ಮಣ್ಣಿನೊಂದಿಗೆ ಬದುಕು ಕಟ್ಟಿಕೊಂಡವರು. ಇವರ ಹಳ್ಳಿಪ್ರೀತಿ ತೋರಿಕೆಯದ್ದಲ್ಲ. ಅಪ್ಪಟ ಪ್ರೀತಿ.
          ಅಂಗಳ ತುಂಬಿದ ಅಡಿಕೆ ಸೊಗೆಯ ಚಪ್ಪರ. ಕಂಗಿನದೇ ಕಂಬಗಳು. ಹೆಣೆದ ತೆಂಗಿನ ಮಡಲಿನ ಆವರಣ. ಬಾಳೆಗಿಡದ ತೋರಣ. ಮಾವಿನ ಸೊಪ್ಪಿನ ಅಲಂಕಾರ. ವೀಳ್ಯದೆಲೆ, ಅಡಿಕೆಯಿಂದ ರೂಪುಗೊಂಡ  ಮಂಟಪ. ಅಂಗಳಕ್ಕೆ ಸೆಗಣಿ ಸಾರಿಸಿ ಶುಭ್ರಗೊಳಿಸಿದ್ದರು. ರಂಗೋಲಿಯ ಚಿತ್ತಾರ ಕಣ್ಮನ ಸೆಳೆದಿತ್ತು.
          ನೆಂಟರಿಷ್ಟರು ಆಗಮಿಸುತ್ತಿದ್ದಂತೆ ಸ್ವಾಗತ. ಮಾನಿನಿಯರಿಗೆ ಅರಸಿನ ಕುಂಕುಮದ ಬಾಗಿನ. ತೃಷೆಗೆ ಎಳನೀರಿನಿಂದ ಸಿದ್ಧಪಡಿಸಿದ ಪಾನೀಯ. ಮಧ್ಯಾಹ್ನದೂಟಕ್ಕೂ ಬಹುತೇಕ ತೋಟದ ಉತ್ಪನ್ನಗಳೇ. ಬಾಳೆಕಾಯಿ, ಸುವರ್ಣಗೆಡ್ಡೆ, ಕೆಸು, ಹಲಸು, ತಾವೇ ಬೆಳೆದ ತರಕಾರಿ.. ವಿವಿಧ ವೈವಿಧ್ಯ ಖಾದ್ಯಗಳು.
           ಚಪ್ಪರದಡಿಯಲ್ಲಂದು ಆಪ್ತತೆಯ ಪುಳಕ. ಬಂಧುಗಳ, ರಕ್ತಸಂಬಂಧಿಗಳ ಮಿಳಿತ.  ಹೆತ್ತವರಿಗೆ ಎಲ್ಲಿ ಆತಿಥ್ಯ ಲೋಪವಾಗುತ್ತದೋ ಎನ್ನುವ ಆತಂಕ, ಭಯ! ಅತಿಥಿಗಳಲ್ಲಿ ಸಹಕಾರ ಮನೋಭಾವ. ಎಲ್ಲರೂ ಉಭಯಕುಶಲೋಪರಿಯಲ್ಲಿ ತಲ್ಲೀನ. ಬದುಕಿನಲ್ಲಿ ಹಾದುಹೋದ ಕ್ಷಣಗಳ ಮರುಕಳಿಕೆ. ಮದುಮಕ್ಕಳನ್ನು  ಛೇಡಿಸಿ ಸುಸ್ತಾಗಿಸಿದಾಗಲೇ ವಿಶ್ರಾಂತಿಗೆ ಜಾರಿದ ಹೊಂತಕಾರಿಗಳ ಗೆಜಲುವಿಕೆ.
          ಮದುವೆ ಮನೆ ಅಂದ ಮೇಲೆ ಇಂತಹ ವಾತಾವರಣ ಇರಲೇಬೇಕು. ಇದರಲ್ಲೇನು ಮಹಾ? ಸರಿ,  ಈಗಿನ ಬಹುತೇಕ ಮದುವೆಗಳಲ್ಲಿ ಭಾವನೆಗಳು ಶುಷ್ಕವಾಗಿವೆ. ಮನಸ್ಸುಗಳನ್ನು, ಸಂಬಂಧಗಳನ್ನು ಬೆಸೆಯುವ ಮನಃಸ್ಥಿತಿ ಆದ್ರ್ರವಾಗಿಲ್ಲ. 'ಇಂತಿಷ್ಟು ಲಕ್ಷ ವೆಚ್ಚವಾಯಿತು' ಎನ್ನುವ ಘೋಷಣೆಯಲ್ಲೇ ತೃಪ್ತಿ, ಸಂತೃಪ್ತಿ. ಅದನ್ನು ಹತ್ತು ಮಂದಿಯಲ್ಲಿ ವಿನಿಮಯ ಮಾಡಿಕೊಂಡಾಗಲೇ ಸಾರ್ಥಕ.
           ರಾಜಧಾನಿಯಲ್ಲಿ ಉದ್ಯೋಗದಲ್ಲಿರುವ ಮಹೇಶನಿಗೆ ಕೈತುಂಬುವ ಉದ್ಯೋಗ. ಹತ್ತಿರದ ಪಟ್ಟಣದಿಂದ ವಸ್ತುಗಳನ್ನು ತರುವ ತಾಕತ್ತಿತ್ತು. ನಗರದ ಸಭಾಮಂದಿರದಲ್ಲೂ ಅದ್ದೂರಿಯಾಗಿ ಮದುವೆ ಏರ್ಪಡಿಸಬಹುದಿತ್ತು. ಬಯಲಾಟದ ಕರಪತ್ರ ಹಂಚಿದಂತೆ ಆಮಂತ್ರಣ ಪತ್ರಿಕೆಯನ್ನು ಹಂಚಬಹುದಿತ್ತು. ಹಳ್ಳಿಯ ಸಂಸ್ಕೃತಿಯಲ್ಲಿ ರೂಪುಗೊಂಡ ಮನಸ್ಸು ಅದ್ದೂರಿನತನಕ್ಕೆ  ಸ್ಪಂದಿಸಲಿಲ್ಲ.
            ನಗರದಲ್ಲಿ ವಾಸ ಮಾಡುವವರಿಗೆ ಸಭಾಮಂದಿರವನ್ನು ಅವಲಂಬಿಸುವುದು ಅನಿವಾರ್ಯ. ಆದರೆ ಹಳ್ಳಿಯಲ್ಲಿ ಎಲ್ಲಾ ಸೌಕರ್ಯಗಳಿದ್ದರೂ ನಗರಕ್ಕೆ ದೌಡಾಯಿಸುತ್ತೇವಲ್ಲಾ.  ವ್ಯವಸ್ಥೆಯಿಲ್ಲ, ಸಹಾಯಕರಿಲ್ಲ, ಸುಧಾರಿಸಲು ಕಷ್ಟ, ಬರುವವರಿಗೆ ತ್ರಾಸ, ಅಮೇರಿಕಾದ ಮಾವನಿಗೆ ಹಳ್ಳಿ ಮನೆ ಸೇರದು, ಸಿಂಗಾಪುರದ ಚಿಕ್ಕಪ್ಪನಿಗೆ ನಗರದ ತಂಪು ಕೋಣೆಯೇ ಬೇಕು, ದೆಹಲಿಯ ಅತ್ತೆಯ ಕಾರು ಅಂಗಳಕ್ಕೆ ಬಾರದು.. ಹೀಗೆ ನೂರಾರು ಸಬೂಬುಗಳು ಜಾತಕ ನೋಡುವಾಗಲೇ ಫಿಕ್ಸ್ ಆಗಿರುತ್ತವೆ. ಇವರೆಲ್ಲಾ ಬದುಕನ್ನು ಕಟ್ಟಿಕೊಂಡು ಪ್ರೌಢರಾಗಿ ನಗರಕ್ಕೆ ಹಾರಿದವರು. ಕಾಂಚಾಣದ ಸದ್ದಿನಿಂದ ಸಾಗಿ ಬಂದ ದಾರಿಗೆ ಮಸುಕು!
             ಸ್ವಲ್ಪ ಹೊಂದಾಣಿಸಿಕೊಂಡರೆ  ಸಭಾಭವನದಲ್ಲಿ ಆಗುವ ಸಂಭ್ರಮಕ್ಕಿಂತ ನೂರ್ಮಡಿ ವೈಭವವನ್ನು ಹಳ್ಳಿ ಮನೆಯ ಅಂಗಳ ನೀಡುತ್ತದೆ. ಕುಡಿಯಲು ಬಾಟಲಿ ನೀರು ಬೇಕಿಲ್ಲ. ಅದಕ್ಕಿಂತಲೂ ಶುದ್ಧವಾದ ಬಾವಿ ನೀರಿದೆ. ನಿರ್ವಿಷವಾಗಿ ಬೆಳೆದ ತೋಟದ ಉತ್ಪನ್ನವಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಶುದ್ಧ ಗಾಳಿಯಿದೆ, ನಿಶ್ಶಬ್ದ ವಾತಾವರಣವಿದೆ. ಒಂದು ದಿವಸದಲ್ಲಿ ಅಮೆರಿಕಾದ ಮಾವನ, ಸಿಂಗಾಪುರದ ಚಿಕ್ಕಪ್ಪನ ಆರೋಗ್ಯದಲ್ಲಿ ಏರುಪೇರಾಗದು.
             ಹಳ್ಳಿ ವಾತಾವರಣದಲ್ಲಿ ತಿಂಗಳ ಮೊದಲೇ ಮದುವೆಯ ಸಂಭ್ರಮ ಪದರ ಪದರವಾಗಿ ತೆರೆದುಕೊಳ್ಳುತ್ತಾ ಇರುತ್ತದೆ. ನೆರೆಕರೆಯವರು, ಹತ್ತಿರದ ಬಂಧುಗಳು ಆಗಿಂದಾಗ್ಗೆ ಬಂದು ಹೋಗುತ್ತಾ ವ್ಯವಸ್ಥೆಗೆ ಸ್ಪಂದಿಸುವ ಪರಿ. ಆಮಂತ್ರಣ ಪತ್ರದ ಮೊದಲ ಪ್ರತಿಯನ್ನು ದೇವರಿಗೆ ಸಮರ್ಪಿಸಿ ಸುಖಾಂತ್ಯವಾಗುವಂತೆ ಪ್ರಾರ್ಥನೆ. ಇದು ಮನೆಮಂದಿಯ ಮೂಲ ನಂಬುಗೆ. ಅಲ್ಲಿಂದ ಆಮಂತ್ರಣ ಪತ್ರ ಬಟವಾಡೆಯ ಕಾಯಕ. ಒಂದು ರೀತಿನ ಟೆನ್ಶನ್ ಕೆಲಸವೇ. ಇದೆಲ್ಲವೂ ಮದುವೆಯ ಸುತ್ತ ಹೆಣೆಯಲ್ಪಟ್ಟ ಅನುಭವಕ್ಕೆ ನಿಲುಕುವ ಕ್ಷಣಗಳು.
               ಹಳ್ಳಿಯಲ್ಲಿ ಸಮಸ್ಯೆ ಇದೆ. ಚಪ್ಪರ ಹಾಕುವಲ್ಲಿಂದ ಭೋಜನದ ತನಕ ತ್ರಾಸದ ಕೆಲಸವಿದೆ, ನಿಜ. ಸಹಕಾರ ಮನೋಭಾವ, ಜಾಣ್ಮೆ ಮತ್ತು ತನ್ನೂರಿನ-ತನ್ನ ಮನೆಯ ಕುರಿತು ಪ್ರೀತಿಯಿದ್ದರೆ ಎಲ್ಲಾ ಕಷ್ಟಗಳು ಹತ್ತಿಗಿಂತಲೂ ಹಗುರವಾಗಲಾರದೇ? ಸಹಕಾರ ಮನೋಭಾವ ಇಂದು ಉಳಿದಿದ್ದರೆ ಹಳ್ಳಿಯಲ್ಲಿ ಮಾತ್ರ. ಬದುಕಿನಲ್ಲಿ ಅದನ್ನು ಜೀವಂತವಾಗಿಟ್ಟರೆ ಸಮಸ್ಯೆಯಿಲ್ಲ.
               ಸಮಾರಂಭ ಅದ್ದೂರಿಯಾಗಿಯೇ ಮಾಡೋಣ. ಅದ್ದೂರಿಯೆಂದರೆ ಜನರನ್ನು ಒಗ್ಗೂಡಿಸುವುದಲ್ಲ. ಮೊದಲು ಮನಸ್ಸಿಗೆ ಅದ್ದೂರಿತನ ಬರಬೇಕು. ಆಗ ಮದುವೆಯ ಎಲ್ಲಾ ಕಲಾಪಗಳೂ ಸಂಭ್ರಮಿಸುತ್ತವೆ. ಖುಷಿ ಪಡುತ್ತವೆ. ನಗರದ ಜಂಜಾಟದಿಂದ ಆಗಮಿಸಿದ ಬಂಧುಗಳಿಗೆ ಮುಕ್ತ ವಾತಾವರಣವನ್ನು ಕಲ್ಪಿಸಿದ ಪುಣ್ಯ ಬರುತ್ತದೆ! ಬಾಲ್ಯದಲ್ಲಿ ತಾವು ಓಡಾಡಿದ ಜಾಗ, ಸಾಧಿಸಿದ ಬಾಲ್ಯ ಸಾಧನೆಗಳು, ಓದಿದ ಶಾಲೆ, ಬೆತ್ತದ ರುಚಿ ತೋರಿಸಿದ ಅಧ್ಯಾಪಕರು.. ಬದುಕಿನ ಪುಟಗಳನ್ನು ಪುನಃ ತೆರೆದು ಮೆಲುಕು ಹಾಕುವ ಅವಕಾಶ. ಮೂಲೆ ಸೇರಿದ ಅಜ್ಜಿ, ಊರುಗೋಲು ಹಿಡಿದ ಅಮ್ಮನ ಜತೆಯಲ್ಲಿ ಹರಟುವ ವಿಶೇಷ ದಿವಸವಾಗುತ್ತದೆ.
             ಮಹೇಶನ ಮದುವೆಯನ್ನು ನಗರದ ಸಭಾಮಂದಿರದಲ್ಲಿ ಮಾಡಿದರು ಎಂದು ಕಲ್ಪಿಸಿಕೊಳ್ಳೋಣ. ಮನೆಯ ಆಪ್ತತೆಯಂತೂ ದೂರ. ಹೇಗೂ ರಾಜಧಾನಿಯ ಉದ್ಯೋಗ. ಸ್ನೇಹಿತರು, ಪರಿಚಯದವರು.. ಸಾವಿರ ಮೀರಿದ ಆಮಂತ್ರಣ. ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ನಡು ಮಧ್ಯಾಹ್ನ ಬಂದುಬಿಡುತ್ತಾರೆ. ಖಾದ್ಯಗಳನ್ನು ಒತ್ತಡದ ಮಧ್ಯೆ ಅಷ್ಟಿಷ್ಟು ಹೊಟ್ಟೆ ಸೇರಿಸಿಕೊಳ್ಳುತ್ತಾರೆ. ಕೈಕುಲುಕಿ ಹೊರಟು ಹೋಗುತ್ತಾರೆ. ಬಡಿಸಿದ ಅರ್ಧಕ್ಕರ್ಧ ಖಾದ್ಯಗಳು ಎಲೆಯಲ್ಲಿ ಗುಡ್ಡೆಯಾಗಿರುತ್ತದೆ. ಮೂರು ಗಂಟೆಯ ಹೊತ್ತಿಗೆ ಸಭಾಭವನದಲ್ಲಿ ಸ್ಮಶಾನ ಮೌನ! ಮನೆಗೆ ಮರಳಿದ ಬಳಿಕ ಅದೇ ಜಗಲಿ, ಅದೇ ಬೆಂಚ್! ಮದುವೆಯ ಕುರುಹಿಗೆ ವಾರದ ಬಳಿಕ ಸಿಗುವ ಫೋಟೋ ಆಲ್ಬಂ. ತಿಂಗಳ ನಂತರ ವಶವಾಗುವ ವೀಡಿಯೋ ಸಿಡಿ.
             'ಹಳ್ಳಿಗಳು ವೃದ್ಧಾಶ್ರಮವಾಗುತ್ತಿವೆ' - ಹಳ್ಳಿ, ಗ್ರಾಮೀಣ ಸುದ್ದಿಗಳನ್ನು ಮಾತನಾಡುವಾಗಲೆಲ್ಲಾ ಈ ಮಾತನ್ನು ಹೇಳದೆ ಭಾಷಣ ಮುಂದೆ ಹೋಗದು. ಸರಿ, ಹಳ್ಳಿಯಲ್ಲಿ ಯುವಕರಿಲ್ಲ. ನಗರ ಸೇರಿದ್ದಾರೆ. ಅಪ್ಪಾಮ್ಮಂದಿರು ಹಳ್ಳಿ ಮನೆಯಲ್ಲಿದ್ದಾರೆ. ಬಾಲ್ಯದಿಂದಲೇ ಮಣ್ಣು, ಕೃಷಿಯ ಕುರಿತು ಒಲವು ಮೂಡಿಸಿದ್ದರೆ ನಗರ ಸೇರಿದ ಮಕ್ಕಳಿಗೂ ಮಣ್ಣು ಪರಿಮಳ ತಂದೀತು. ಹಾಗಾಗುತ್ತಿಲ್ಲ - ಕೃಷಿ ಪ್ರಯೋಜನವಿಲ್ಲ, ಬದುಕಲು ಸಾಧ್ಯವಿಲ್ಲ, ನನ್ನ ಮಕ್ಕಳಿಗೆ ಕೃಷಿ ಬೇಡವೇ ಬೇಡ - ನಿತ್ಯ ಗೊಣಗಾಟ. ಇದನ್ನು ಆಲಿಸುತ್ತಾ ಬಾಲ್ಯವನ್ನು ಕಳೆದ ಎಳೆಯ ಮನಸ್ಸುಗಳು 'ಮಣ್ಣಿನ ವೈರತ್ವ'ವನ್ನು ಅವಾಹಿಸಿಕೊಳ್ಳುತ್ತಾ ಪ್ರೌಢಾವಸ್ಥೆಗೆ ಕಾಲಿಡುತ್ತಾರೆ.
               ಕಾಲದ ಓಟ ವೇಗವಾಗಿದೆ. ಬದುಕು ಹಳಿ ತಪ್ಪುತ್ತಿದೆ. ಅದನ್ನು ಪ್ರೀತಿಯಿಂದ ಒಪ್ಪಿಕೊಳ್ಳುತ್ತಿದ್ದೇವೆ. ಕಾಂಚಾಣ ಎಲ್ಲೆಲ್ಲಿಂದಲೋ ಬಂದು ಕಿಸೆಯಲ್ಲಿ ಕುಣಿಯುತ್ತಿದ್ದಾಗ ಮಣ್ಣಿನ ಬದುಕು ಅರ್ಥ ಕಳೆದುಕೊಳ್ಳುತ್ತದೆ.  ಭೂಮಿ ಮಾರಿದಾಗ ಸಿಗುವ ಕೋಟಿಗಟ್ಟಲೆ ಹಣದಲ್ಲಿ ನಗರದ ಬದುಕಿಗೆ ಶ್ರೀಕಾರ ಬರೆಯುತ್ತೇವೆ. ಕ್ರಮೇಣ ಉಸಿರಾಡಲು ಗಾಳಿಗೂ ಹಣ ಕೊಡಬೇಕಾದ ದುರ್ಬರ ಸ್ಥಿತಿ ಬಂದಾಗ ಹಳ್ಳಿ ನೆನಪಾಗುತ್ತದೆ, ಕೃಷಿ ಬದುಕು ರಾಚುತ್ತದೆ. ಮತ್ತೆ ಮರಳಿ ಹಳ್ಳಿಗೆ ಬಂದಾಗ ಜೆಸಿಬಿ ಮನೆಯನ್ನು ಕೆಡವಿರುತ್ತದೆ! ತೋಟ ನೆಲಸಮವಾಗಿರುತ್ತದೆ.
                 ಮಹೇಶನಿಗೆ ಭವಿಷ್ಯದ ಬದುಕಿನ ಸ್ಪಷ್ಟತೆಯಿತ್ತು. ಎಂಬಿಎ ಓದುವಲ್ಲಿಯ ತನಕ ತಂದೆಯೊಂದಿಗೆ ಹೊಟ್ಟೆಪಾಡಿಗಾದರೂ ಕೃಷಿಯ ಅನುಭವ ಪಡೆದಿದ್ದಾನೆ. ಹಟ್ಟಿ ಗೊಬ್ಬರವನ್ನು ತಲೆ ಮೇಲೆ ಹೊತ್ತು ಅಡಿಕೆ ಗಿಡಗಳಿಗೆ ಉಣಿಸಿದ್ದಾನೆ. ತೆಂಗು, ಅಡಿಕೆ ಮರವೇರುವ ಶಿಕ್ಷಣವನ್ನು ತಂದೆ ಕಲಿಸಿದ್ದಾರೆ. ಹಟ್ಟಿಯಿಂದ ಸೆಗಣಿ ಬಾಚುವ ಕಾಯಕ ಮಾಡಿದ ಮಹೇಶನಿಗೆ 'ಎಂಬಿಎ ಕಲಿತುದಕ್ಕೆ ಮಾತ್ರ ಒಂದು ಉದ್ಯೋಗ'ವಷ್ಟೇ.
               ಮದುವೆ ಮನೆಯಿಂದ ಹೊರಟಾಗ ಆತ ಹೇಳಿದ ಮಾತು ರಿಂಗಣಿಸುತ್ತಿದೆ, "ರಾಜಧಾನಿಯ ಸಹವಾಸ ಸಾಕು ಮಾರಾಯ. ನೀರು, ಗಾಳಿಗೆ ಪರದಾಡುವ ಸ್ಥಿತಿ. ಆರೋಗ್ಯಕ್ಕೆ ಪೂರಕವಾದ ಆಹಾರಕ್ಕೂ ದಾರಿದ್ರ್ಯ. ಹಣವನ್ನು ಕೊಡುವುದಲ್ಲ, ಬಿಸಾಡಿದರೆ ಎಲ್ಲವೂ ಸಿಗುತ್ತದೆ ಎನ್ನುವ ಭ್ರಮೆ ಹಲವರಲ್ಲಿದೆ. ಅದು ಸುಳ್ಳು. ಆರೇ ತಿಂಗಳಲ್ಲಿ ನಾನು ಹಳ್ಳಿಗೆ ಬಂದುಬಿಡುತೇನೆ. ಅಪ್ಪಾಮ್ಮನೊಂದಿಗೆ ನೆಲೆಸುತ್ತೇನೆ. ಕೃಷಿ ವೃತ್ತಿಯನ್ನು ಸ್ವೀಕರಿಸುತ್ತೇನೆ."