Thursday, May 22, 2014

ಪುನರ್ಪುಳಿಯ ಸೋದರ - ಗಾರ್ಸೀನಿಯಾ ಕೋವಾ








              "ಈ ವರುಷ ಬಿಟ್ಟಷ್ಟು ಹಣ್ಣು ಇಷ್ಟು ವರುಷ ಬಿಟ್ಟಿರಲಿಲ್ಲ, ಯಥೇಷ್ಟ," ಕಸಿತಜ್ಞ ಶ್ಯಾಮ್ ಸುಂದರ್ ಖುಷಿ ಹಂಚಿಕೊಂಡರು. ಗಾರ್ಸೀನಿಯಾ ಕೋವಾ - ಇದು ಮುರುಗಲು (ಪುನರ್ಪುಳಿ, ಕೋಕಂ) ಹಣ್ಣಿನ ಸೋದರ. ಬಣ್ಣ, ರುಚಿಗಳಲ್ಲಿ ಭಿನ್ನ! ಗಾಢ ಹಳದಿ ಬಣ್ಣ. ನೋಡಲು ಚಂದ. ಜಾಯಿಕಾಯಿಯ ಗಾತ್ರ. ಕರಾವಳಿಗೆ ಅಪರೂಪ. ಸದಾ ಹಸಿರು ಮರ. ಕಿತ್ತಳೆ ವರ್ಣದ ಹಣ್ಣುಗಳು. ತೊಟ್ಟಿನಿಂದಾರಂಭಿಸಿ ಮೈಮೇಲೆ ಆರೆಂಟು ತಗ್ಗುಗೆರೆಗಳು. ಒತ್ತಡ ಹಾಕಿ ಒತ್ತಿದಾಗಲಷ್ಟೇ ಹಣ್ಣು ಇಬ್ಬಾಗವಾಗುವಷ್ಟು ಗಟ್ಟಿ. ಒಳಗೆ ಕಿತ್ತಳೆ ಬಣ್ಣದ ಗುಳ.  ಹುಳಿಮಿಶ್ರಿತ ಸಿಹಿ. ಪುನರ್ಪುಳಿ ಹಾಗೆ ತಿಂದಾಗ ಹಲ್ಲಿಗೆ ಅಂಟು ಮೆತ್ತಿಕೊಳ್ಳುವುದಿಲ್ಲ. ಬಣ್ಣವೂ ಅಂಟುವುದಿಲ್ಲ..
              ಹಣ್ಣಾದರೆ ನೋಡಲು ಚಂದ. ಮೂಲ ಮಲೇಶ್ಯಾ. ಬೀಜದಿಂದಾದ ಗಿಡವನ್ನು ಸಾಕಷ್ಟು ಮಂದಿ ಬೆಳೆಸಿದ್ದಾರೆ. ಬಹುತೇಕ ಯಾರಿಗೂ ಇಳುವರಿ ಇಲ್ಲ. ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಶ್ಯಾಮಸುಂದರ್ ಪುನರ್ಪುಳಿಯ ಅಡಿಗಿಡಕ್ಕೆ ಗಾರ್ಸೀನಿಯಾದ ಕುಡಿಯನ್ನು ಕಸಿ ಕಟ್ಟಿ (ಟಾಪ್ ವರ್ಕ್ ) ಅಭಿವೃದ್ಧಿ ಪಡಿಸಿದ್ದಾರೆ. ನೀರು, ಗೊಬ್ಬರ ಉಣಿಸಿ ಆರೈಕೆ ಮಾಡಿದ್ದಾರೆ. ಶ್ಯಾಮ ಸುಂದರ್ ಅವರಲ್ಲಿ ಏಳು ವರುಷದಿಂದ ಫಲ ನೀಡುತ್ತಿದೆ. 'ಬೀಜದಿಂದ ಹುಟ್ಟಿದ ಸಸಿಗಿಂತಲೂ ಕಸಿ ಕಟ್ಟಿದ ಸಸಿಯಲ್ಲಿ ಇಳುವರಿ ಪಡೆಯಲು ಸಾಧ್ಯ' ಎನ್ನುತ್ತಾರೆ.
             ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ'ಯ ಮೂಲಕ ಸಿಕ್ಕ ಎರಡು ಕುಡಿಗಳನ್ನು ಇವರು ಪುನರ್ಪುಳಿಯ (ಗಾರ್ಸೀನಿಯಾ ಇಂಡಿಕಾ, ಮುರುಗುಲು, ಕೋಕಂ) ಕಾಂಡಕ್ಕೆ ಕಸಿ ಮಾಡಿದ್ದರು. ಜನವರಿಯಲ್ಲಿ ಹೂ ಬಿಟ್ಟು, ಮೇ ತಿಂಗಳಲ್ಲಿ ಹಣ್ಣು ತಿನ್ನಲು ರೆಡಿ. ಮೇ ಕೊನೆಗೆ ಹಣ್ಣಿನ ಋತು ಮುಗಿಯುತ್ತದೆ. 
              ಉತ್ತಮ ನೋಟ ಮತ್ತು ಆಕರ್ಷಕ ಬಣ್ಣವಿರುವುದರಿಂದ ಮಾರಾಟ ಸಾಧ್ಯತೆಯಿದೆ. ಪ್ಯಾಕ್ ಮಾಡಿ ಮಾರಾಟಕ್ಕಿಟ್ಟರೆ ಮ್ಯಾಂಗೋಸ್ಟಿನ್, ರಂಬುಟಾನ್ಗಳ ಜತೆ ಪೈಪೋಟಿ ಮಾಡುವಷ್ಟು ಅಂದ ಹೊಂದಿದೆ. ಶ್ಯಾಮ್ ಸುಂದರ್ ಅವರಿಗೆ ಮಾರಾಟ ಅವಕಾಶಗಳು ಕಡಿಮೆ. ಹಾಗಾಗಿ ಆಸಕ್ತರಿಗೆ, ಸ್ನೇಹಿತರಿಗೆ, ಬಂಧುವರ್ಗದವರಿಗೆ ನೀಡುತ್ತಾರೆ.
               ಇದರ ಮೌಲ್ಯವರ್ಧನೆ ಕುರಿತು ಏನೂ ಅರಿವಿಲ್ಲ. ಮನೆಗೆ ಬಂದವರು ಹಣ್ಣನ್ನು ಒಯ್ಯುತ್ತಾರೆ, ತಿನ್ನುತ್ತಾರೆ ಅಷ್ಟೇ. ಮತ್ಯಾವ ಫೀಡ್ಬ್ಯಾಕೂ ಕೊಡುವುದಿಲ್ಲ ಎನ್ನುವುದು ಶ್ಯಾಮಸುಂದರ ಬೇಸರ. ಕೇರಳದ ತಳಿಪರಂಬದ ಕರಿಂಬಂ ಫಾರ್ಮಿನಲ್ಲಿ ಇದರ ದೊಡ್ಡ ತಾಯಿಮರವಿದೆ. ತೊಂಭತ್ತರ ದಶಕದ ಮಧ್ಯದಲ್ಲಿ ಗಾರ್ಸೀನಿಯಾ ಕನ್ನಾಡಿಗೆ ಬಂತು.
                ಮೂರ್ನಾಲ್ಕು ವರುಷದ ಹಿಂದೆ ಹವಾಯಿಯ ಹಣ್ಣು ಕೃಷಿಕ ಕೆನ್ ಲವ್ ಕನ್ನಾಡಿಗೆ ಬಂದಿದ್ದಾಗ ಇದರ ರಸಕ್ಕೆ ಮಾರುಹೋಗಿದ್ದರು. 'ಇದನ್ನು ಬೆಳೆದರೆ ಮಾರುಕಟ್ಟೆ ಮಾಡಬಹುದು' ಎಂದಿದ್ದರು. ಎರಡು ದಶಕದ ಹಿಂದೆ ಪುತ್ತೂರಿನ ಕೃಷಿಕ ಸೇಡಿಯಾಪು ಜನಾರ್ದನ ಭಟ್ಟರು ತಳಿಪರಂಬದ ಫಾರ್ಮಿನಿಂದ ಹಣ್ಣುಗಳನ್ನು ತಂದಿದ್ದರು. 'ಇದರ ಸ್ಕ್ವಾಷ್ ಮಾಡಿದ್ದೆ. ರುಚಿ ಸಾಮಾನ್ಯ. ತುಂಬಾ ಅಕರ್ಷಣೆ. ಜೇನಿನ ಬಣ್ಣ. ಶರಬತ್ತಿಗೆ ಉತ್ತಮ. ಸೋಡಾದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಒಂದು ಗ್ಲಾಸ್ ಕುಡಿದಾಗ ಮತ್ತೊಂದು ಗ್ಲಾಸ್ ಬೇಕೆನಿಸುತ್ತದೆ' ಎನ್ನುತ್ತಾರೆ.
             ಐದು ವರುಷದ ಹಿಂದೆ ಶ್ಯಾಮ್ಸುಂದರ್ ಅವರಲ್ಲಿಂದ ಮುಳಿಯ ವೆಂಕಟಕೃಷ್ಣ ಶರ್ಮರು ತಂದ ಕುಡಿಯನ್ನು ಪುನರ್ಪುಳಿಯ ಅಡಿಗಿಡಕ್ಕೆ ಕಸಿ ಕಟ್ಟಿದ್ದರು. ಈ ವರುಷ ಪ್ರಸವ ಪ್ರಕ್ರಿಯೆ ಶುರು! ಐದಾರು ಹಣ್ಣು ಸವಿಯಲು ಸಿಕ್ಕಿದೆ ಎನ್ನುತ್ತಾರೆ ಶರ್ಮ. ಮರದ ತುಂಬಾ ಹಣ್ಣುಗಳು ಹೆಚ್ಚಿರುವುದರಿಂದಲೋ ಏನೋ, ಈ ವರುಷ ಹಣ್ಣಿನ ಗಾತ್ರ ಸಣ್ಣದಾಗಿದೆ. ರುಚಿಯಲ್ಲಿ ವ್ಯತ್ಯಾಸವಿಲ್ಲ ಎನ್ನುವ ಹಿಮ್ಮಾಹಿತಿ ಕೊಡುತ್ತಾರೆ ಶ್ಯಾಮ್ ಸುಂದರ್. .(೦೮೨೫೬-೨೬೪೩೯೩)


Saturday, May 17, 2014

ಹರಟೆಯಲ್ಲಿ ಹುಟ್ಟಿಕೊಂಡ ವರ್ತಮಾನ ಭಾರತ






                ಸುಳ್ಯದ 'ಕೇಶವ ಕೃಪಾ'ದಲ್ಲೊಂದು ಹರಟೆ. ಬದುಕಿನ ಅಲಾರಂಗೆ ಪೂರಕ. ಇಲ್ಲಿ ಬುದ್ಧಿಗೆ ಕೆಲಸವಿತ್ತು.  ಯೋಚನೆಗಳನ್ನು ಕೆದಕುವ ಯತ್ನವಿತ್ತು. ಬೌದ್ಧಿಕ ಜ್ಞಾನಕ್ಕೆ ಮಸೆತ ನೀಡುವ ಗುರಿಯಿತ್ತು. ಮುಖ್ಯವಾಗಿ ಬದುಕಿನಲ್ಲಿ 'ಎಲ್ಲಿ ಎಡವಿದ್ದೇವೆ' ಎನ್ನುವ ಪಾಠವಿತ್ತು. ಉಳಿಸಿಕೊಂಡದ್ದಕ್ಕಿಂತ ಹೆಚ್ಚು ಕಳೆದುಕೊಂಡಿದ್ದರ ಜ್ಞಾಪನವಿತ್ತು. ಎಲ್ಲವನ್ನು ಗಾಳಿಸಿದಾಗ ಸಿಕ್ಕ ಉತ್ತರಕ್ಕೆ ಇಳಿಸಂಜೆಯ ಭಾವವಿತ್ತು. ಬದುಕಿನ ಕಾಲ ಮಿಂಚಿತ್ತು.
                'ಮೌಲ್ಯಗಳನ್ನು ರಕ್ಷಿಸುತ್ತಿರುವುದು ಹಿರಿಯರೋ? ಕಿರಿಯರೋ?' ಹರಟೆಯ ವಿಷಯ. ಕೇಶವ ಕೃಪಾಕ್ಕೆ ಕಾಲಿಟ್ಟಾಗ 'ನಿಮ್ಮದು ಯಾವ ಪಕ್ಷ, ಹಿರಿಯರದೋ, ಕಿರಿಯರದೋ' ವಿದ್ಯಾರ್ಥಿಗಳಿಂದ ಪ್ರಶ್ನೆ. ಅರೆ, ಸಂಸ್ಕಾರ ಶಿಕ್ಷಣವನ್ನು ಕಲಿಯುವ ಪುಟಾಣಿಗಳಿಗೆ ಪಕ್ಷದ ಉಸಾಬರಿ ಯಾಕಪ್ಪಾ? ಮತ್ತೆ ತಿಳಿಯಿತು, ಹರಟೆ ವೇದಿಕೆಯ ಎರಡು ಪಂಗಡಗಳನ್ನು ಪಕ್ಷ ಎಂದಿದ್ದಾರಷ್ಟೇ. ಚಿಕ್ಕ ಪುಟಾಣಿಗಳಲ್ಲೂ ಕುತೂಹಲ. ವಿಷಯದ ಆಳಕ್ಕೆ ಇಳಿಯಲು ತ್ರಾಸವಾದರೂ ಸ್ಪರ್ಶಿಸುವ ಕಾತರ. ಸುಮಾರು ಎರಡು ಗಂಟೆ ಪುಟಾಣಿಗಳು ಆಕಳಿಸಲಿಲ್ಲ. ಹಿರಿಯರು ಮೊಬೈಲುಗಳಲ್ಲಿ ಬೆರಳಾಡಿಸಲಿಲ್ಲ. ಹಸಿದ ಜ್ಞಾನದ ಮೂಸೆಯೊಂದಿಗೆ ಹರಟೆಯ ರಿಂಗಣದೊಂದಿಗೆ ದಿಂಞಣ.
              ಹಳ್ಳಿಗಳು ವೃದ್ಧಾಶ್ರಮವಾಗುತ್ತಿವೆ, ಹರಟೆಯ ಮಧ್ಯೆ ಚಿಮ್ಮಿದ ಸೊಲ್ಲು. ಕೃಷಿಯೂ ಗೌರವದ ವೃತ್ತಿ, ಹೊಟ್ಟೆ ತುಂಬುವ ಕಾಯಕ ಎನ್ನುವ ಮನಃಸ್ಥಿತಿ ಹೆತ್ತವರಲ್ಲಿ ಎಲ್ಲಿಯವರೆಗೆ ಇರುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆ ಲಂಬಿಸುತ್ತಲೇ ಇರುತ್ತದೆ. ತನಗೆ ಬದುಕನ್ನು, ಐಶ್ವರ್ಯವನ್ನು ನೀಡಿದ ಭೂಮಿಯನ್ನು ಕಾಂಚಾಣದ ಅಹಮಿಕೆ ಕುಣಿಸಿದಾಗ 'ಮನೆಯ ಸಂಸ್ಕೃತಿ' ಮೌನವಾಗುತ್ತದೆ. ಕೃಷಿ ಪ್ರಯೋಜನವಿಲ್ಲವೆಂದ ಹಿರಿಯರ ನಿತ್ಯ ಗೊಣಗಾಟದ ಮಾಲೆ ಪಟಾಕಿಗಳಿಂದ ಬಾಲ್ಯವನ್ನು ಕಟ್ಟಿಕೊಂಡ ಮನಸ್ಸುಗಳು ನಗರ ಸೇರುತ್ತವೆ. ಒಮ್ಮೆ ಯುವಕನನ್ನು ನಗರ ಸೆಳೆದುಕೊಂಡಿತೋ ಮತ್ತೆಂದೂ ಆತ ಹಳ್ಳಿಯ ಬಸ್ಸನ್ನು ಏರಲಾರ. ಈ ವಾಸ್ತವದೊಳಗೆ ಸುತ್ತಿದ ಹರಟೆ ಕೃಷಿಕನಿಗೆ ಹೆಣ್ಣು ಕೊಡುವುದಿಲ್ಲ ಎನ್ನುವಲ್ಲಿಗೆ ತಲಪುವಾಗ 'ಹಿರಿಯರ-ಕಿರಿಯರ' ಸಮರ್ಥನೆಗಳ ಮಹಾಪೂರ ಹರಿದಿತ್ತು.
              ಆಧುನಿಕ ವ್ಯವಸ್ಥೆಗಳು ಯುವಕರ ಜ್ಞಾನಾಭಿವೃದ್ಧಿಗೆ ಪೂರಕ ಎನ್ನುವಂತೆ ಬಿಂಬಿಸಲಾಗುತ್ತದೆ. ಎಸ್.ಎಂ.ಎಸ್.ಗಳು ಬದುಕನ್ನು ಕಸಿದುಕೊಳ್ಳುತ್ತವೆ. ಆವೇಶಭರಿತ ಮಾತು-ಕೃತಿಗಳಿಂದ ಅಪಾಯ ಹೆಚ್ಚು. ಅಪಕ್ವತೆಯನ್ನೇ ಪಕ್ವತೆಯೆಂದು ಪ್ರಸ್ತುತಪಡಿಸುವ ಕಾಲಮಾನದಲ್ಲಿ ಮೌಲ್ಯಗಳು ನಾಚಿ ನೀರಾಗುತ್ತವೆ. ಆ ಹೊತ್ತಿಗೆ ಬೇಕು, ಹಿರಿಯರ ಅನುಭವಜನ್ಯ ಅನುಭವಗಳು. ಅಂಗೈಯೊಳಗಿನ ಪ್ರಪಂಚ ಕ್ಷಣಿಕ. ಬೊಗಸೆ ಜ್ಞಾನ ಪರಿಪೂರ್ಣವಲ್ಲ. ಅದರಾಚೆಗೂ ಭಿನ್ನವಾದ ಲೋಕವಿದೆ ಎನ್ನುವ ಸತ್ಯವನ್ನು ಕಿರಿಯರಿಗೆ ತೋರಿಸುವ ಕೈತಾಂಗುಗಳು ಬೇಕಾಗಿವೆ. ಆಗಲೇ ಕಿರಿಯರ ಮೌಲ್ಯದ ಹುಡುಕಾಟದ ಹಾದಿ ಸುಗಮ.
                  ಪ್ರತಿಯೊಬ್ಬ ಕಿರಿಯನ ಹಿಂದೆ ಹಿರಿಯನೊಬ್ಬನ ತ್ಯಾಗವಿದೆ. ಅದಕ್ಕೆ 'ಬದುಕಿನ ಅನಿವಾರ್ಯ' ಪಟ್ಟವನ್ನು ಕಟ್ಟಲಾಗದು. ಅದು ಹಿರಿತನದ ವ್ಯಾಪ್ತಿ. ಮಾಡಲೇಬೇಕಾದ ಕರ್ಮ. ಹುಕ್ಕಬುಕ್ಕರ ಹಿಂದೆ ವಿದ್ಯಾರಣ್ಯ, ನರೇಂದ್ರರ ಹಿಂದೆ ರಾಮಕೃಷ್ಣ ಪರಮಹಂಸ, ಚಾಣಕ್ಯರ ಹಿಂದೆ ಚಂದ್ರಗುಪ್ತ.. ಇಲ್ಲಿರುವ ಮನಸ್ಸುಗಳಿಗೆ ಹೇಗೆ 'ಹಿರಿಯ-ಕಿರಿಯ' ಪಟ್ಟವನ್ನು ಕಟ್ಟಬಹುದು? ಒಬ್ಬನಿಂದಾಗಿ ಇನ್ನೊಬ್ಬನಲ್ಲ. ಅವನಿಲ್ಲದೆ ನಾನಿಲ್ಲ ಎಂಬ ಭಾವವಲ್ಲ.  ಎರಡೂ ಮಿಳಿತವಾದ ವ್ಯಕ್ತಿತ್ವ. ಹರಟೆಯಲ್ಲಿ ಬಹು ಸ್ವಾರಸ್ಯವಾಗಿ ಮೂಡಿ ಬಂದ ಪ್ರಸ್ತುತಿಗಳಿವು.
                 'ಕಿರಿಯರಿಗೆ ಹಿರಿಯರು ಮಾರ್ಗದರ್ಶನ ಮಾಡುತ್ತಾ ಇಲ್ಲ'? ಸತ್ಯವಲ್ವಾ? ಶಾಲೆಗೆ ಫೀಸು ಕಟ್ಟಿ, ಸಮವಸ್ತ್ರ ಖರೀದಿಸಿ, ಅಟೋರಿಕ್ಷಾಗೆ ವ್ಯವಸ್ಥೆ ಮಾಡಿದಲ್ಲಿಗೆ ಹಿರಿಯರ ಕರ್ತವ್ಯ ಮುಗಿಯಿತು ಎನ್ನುವ ಕಾಲಮಾನದಲ್ಲಿದ್ದೇವೆ. ಬೇಕಾದರೆ ಟ್ಯೂಶನ್ ಹೊರೆ. ಎಷ್ಟು ಹಿರಿಯರು ಮಕ್ಕಳಿಗೆ ಜೀವನಪಾಠ ಕಲಿಸಿದ್ದಾರೆ. ಗಿಡ, ಮರ, ಬಳ್ಳಿ, ಕಾಡುಹಣ್ಣುಗಳು, ತರಕಾರಿ, ಪರಿಸರ.. ತೋರಿಸಿದ್ದಾರೆ? ಊಟದ ಬಟ್ಟಲಿನಲ್ಲಿ ಎಷ್ಟು ರುಚಿಗಳನ್ನು ಉಣಿಸಿದ್ದಾರೆ? ಪೌರಾಣಿಕವಾದ ಸತ್ಯಗಳನ್ನು ದರ್ಶನ ಮಾಡುವ ಸ್ಥಿತಿ ಮನೆಯಲ್ಲಿದೆಯೇ? ಓದುವ ಪಾಲಕರು ಎಷ್ಟಿದ್ದಾರೆ? ನಾವು ಓದದೆ ಮಕ್ಕಳನ್ನು ಓದೆಂದು ಒತ್ತಾಯಿಸುವ ನಮಗೆ ನೈತಿಕ ಹಕ್ಕಿದೆಯೇ? ಮಗುವಿಗೆ ಕೆಟ್ಟ ಬಾಲ್ಯವನ್ನು ಕೊಟ್ಟವರು ಯಾರು? ಈ ಪ್ರಶ್ನೆಗಳನ್ನು ಮುಂದಿಟ್ಟಾಗ ಹಿರಿಯರ ಮಾತು ಮೌನವಾಗುತ್ತದೆ.
              ತಾಳ್ಮೆ ಇದ್ದರೆ ಮೌಲ್ಯ ಉಳಿಯುತ್ತದೆ. ಆವೇಶದಿಂದ ನಾಶ. ಬದುಕಿನಲ್ಲಿ ಅರ್ಚನೆ ಬೇಡ, ಅರ್ಪಣೆ ಬೇಕು. ಮೌಲ್ಯ ಎನ್ನುವುದು ಧರ್ಮದಿಂದ ಧರ್ಮಕ್ಕೆ ಬದಲಾಗುತ್ತದೆ. ಒಬ್ಬನ ಕಷ್ಟ ತನಗೆ ಗೊತ್ತಾಗಬೇಕಾದರೆ ತನಗೆ ಸ್ವತಃ ಕಷ್ಟ ಬಂದಾಗಲಷ್ಟೇ ಸಾಧ್ಯ. ಹಿರಿಯರ ಜ್ಞಾನ ದೀವಿಗೆಯು ಕಿರಿಯರಿಗೆ ಮಾರ್ಗದರ್ಶಿಯಾದಾಗ ಮೌಲ್ಯ ಉಳಿಯುತ್ತದೆ, ಬೆಳೆಯುತ್ತದೆ. ಆಗ ಮೌಲ್ಯಾಧಾರಿತ ಜೀವನಕ್ಕೆ ನಾಂದಿ. ಹಿರಿಯರಲ್ಲಿ ಜೀವನಾನುಭವ ಇದೆ. ಕಿರಿಯರಲ್ಲಿ ಕ್ರಿಯಾಶೀಲತೆಯಿದೆ. ಇವೆರಡೂ ಮಿಳಿತವಾದಾಗ ಮೌಲ್ಯದ ಉನ್ನತಿ.
               ಹರಟೆಯ ಕೊನೆಗೆ ಅರಿವಾಯಿತು, 'ಹಿರಿಯರ ನುಡಿ-ಕಿರಿಯರ ನಡೆ' ಒಂದಾಗಬೇಕಾದುದು ಭವಿಷ್ಯ ಭಾರತದ ಅಗತ್ಯ. ಹರಟೆಯಲ್ಲಿ ಎರಡೂ ಪಂಗಡಗಳ ತಿಕ್ಕಾಟ, ವಿಮರ್ಶೆ, ಕೊಂಕು, ವ್ಯಂಗ್ಯ, ಚುಚ್ಚುಮಾತುಗಳು ಸೋದಾಹರಣಗಳ ಮೂಲಕ ಮಿಂಚಿ ಮರೆಯಾಯಿತು. ಮಧ್ಯೆ ವಾತಾವರಣ ಬಿಸಿಯೇರಿದ ಅನುಭವ. ಪೌರಾಣಿಕ, ಚಾರಿತ್ರಿಕ, ಸಮಕಾಲೀನ ರಾಜಕೀಯ ವಿಶ್ಲೇಷಣೆ.
                  ವಾಹಿನಿಗಳಲ್ಲಿ ಹಿರೆಮಗಳೂರು ಕಣ್ಣನ್ ನಡೆಸಿಕೊಡುವ ಮಾದರಿ ಎಲ್ಲರಿಗೂ ಪರಿಚಿತ. ಕೇಶವ ಕೃಪಾದ ಹರಟೆಯೂ ಇದರದ್ದೇ ಅಚ್ಚು. ಹರಟೆ ಮುಗಿದ ಬಳಿಕವೂ ಮೌಲ್ಯಗಳ ಹುಡುಕಾಟದಲ್ಲಿ ಎಲ್ಲರ ಚಿತ್ತ ಸಕ್ರಿಯವಾಗಿರುವುದು ಕಾರ್ಯಕ್ರಮದ ಯಶದ ಸಂಕೇತ. ಒಂದು ಕಲಾಪ ಇಷ್ಟು ಗುಂಗು ಹಿಡಿಸಿದ್ದರೆ ಸಾರ್ಥಕ.
                 ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ 'ಹಿರಿಯ ವಿದ್ಯಾರ್ಥಿಗಳ ಪರಿಷತ್' ಸ್ಥಾಪನೆಯ ದಿನದಂದು ಹರಟೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಸ್ಖಲಿತ ಮಾತುಗಾರ ತುಮಕೂರಿನ ನಿಕೇತ್ ರಾಜ್, ಆಳ ಯೋಚನೆಯ ಪೂರ್ಣಾತ್ಮರಾಮ ಈಶ್ವರಮಂಗಲ, ಚಿಂತಕ ಸಂಪದಸಾಲು ಸಂಪಾದಕ ವೆಂಕಟೇಶ ಸಂಪ, ಚಿಮ್ಮು ಉತ್ಸಾಹದ ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಜೆ, ವಿಚಾರಗಳನ್ನು ತೂಗಿ ಮಾತನಾಡುವ ಅಧ್ಯಾಪಕ ಪಿ. ಪ್ರಕಾಶ್ ಮೂಡಿತ್ತಾಯ, ಭಾವಕ್ಕೆ ಭಾಷೆ ಕೊಡುವ ಲೇಖಕಿ ಸೌಮ್ಯಾ ಭಾಗ್ವತ್ ಕುಮಟಾ ಹರಟೆ ಮಾಡುತ್ತಿದ್ದರೆ, ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರು ವಿಷಯ ಮತ್ತು ಸಮಯದ ಮಿತಿಯಲ್ಲಿ ಮೂಗುದಾರ ಹಾಕುತ್ತಿದ್ದರು. ಒಟ್ಟಂದದ ಕಾರ್ಯಕ್ರಮ.
              ಸಮಕಾಲೀನ ವಿಚಾರವೊಂದರ ಮಥನಕ್ಕೆ ಹರಟೆಯಂತಹ ಮಾಧ್ಯಮ ಉತ್ತಮ. ಅದೂ ಪ್ರೇಕ್ಷಕರಲ್ಲಿ ಮತ್ತು ತರಲೆ ಮಾಡುವವರಲ್ಲಿ ಸಮಾನ ಮನಸ್ಕತೆ ಇದ್ದಾಗ ಮಾತ್ರ.
               ಕೇಶವ ಕೃಪಾವು ವೇದ-ಯೋಗ-ಕಲೆಗಳ ತಾಣ. ಪುರೋಹಿತ ನಾಗರಾಜ ಭಟ್ಟರ ಮೆದುಳಮರಿ. ಸಂಸ್ಕೃತಿಯನ್ನು ಪ್ರೀತಿಸುವ ಅಧ್ಯಾಪಕರು, ವಿದ್ಯಾರ್ಥಿಗಳು, ಪಾಲಕರು ಇಲ್ಲಿನ ಆಸ್ತಿ. ಜೀವನ ಪಾಠವನ್ನು ಕಲಿಸುವ ಅಪರೂಪದ ಗುರುಕುಲ.

Thursday, May 1, 2014

ಅನ್ನದ ಬಟ್ಟಲಲ್ಲಿ 'ಸತ್ಯದ ಬೆಳೆ'

                 ಎಪ್ರಿಲ್ 26. ರಾತ್ರಿ ಧಾರಾಕಾರ ಮಳೆ. ಕರೆಂಟ್ ಕೈಕೊಟ್ಟಿತ್ತು. ಜನರೇಟರ್ ಮುಷ್ಕರ ಹೂಡಿತ್ತು. ಚಾರ್ಜರಿನ ಬೆಳಕು ನಿಧಾನವಾಗಿ ನಿದ್ರೆಗೆ ಜಾರುತ್ತಿದ್ದಂತೆ ಪಾಕಶಾಲೆಯಲ್ಲಿ ಸೂಪಜ್ಞರ ಒತ್ತಡ ಏರುತ್ತಿತ್ತು! ಅನ್ನ, ಸಾರು, ಸಾಂಬಾರು, ಪಲ್ಯ, ಹೋಳಿಗೆ.. ಮಾಮೂಲಿ ಖಾದ್ಯಗಳಿರುತ್ತಿದ್ದರೆ ನಿರಾಳವಾಗಿರುತ್ತಿದ್ದರು. ಮರುದಿವಸ ದಕ್ಷಿಣ ಕನ್ನಡ ಜಿಲ್ಲೆಗೆ ಅಪರೂಪದ್ದಾದ ಸಿರಿಧಾನ್ಯಗಳ ಹಬ್ಬ. ಅಂದು ಸಿರಿಧಾನ್ಯಗಳದ್ದೇ ಖಾದ್ಯಗಳು. ತಯಾರಿಸಿದ ಅನುಭವವಿಲ್ಲ. ವ್ಯತ್ಯಾಸವಾದರೆ ಹೊಣೆಯನ್ನು ಅಡುಗೆಯವರೇ ಹೊತ್ತುಕೊಳ್ಳಬೇಕಲ್ಲಾ.. ಸೂಪಜ್ಞ ಚಂದ್ರಶೇಖರ ಭಟ್ ಆತಂಕ.
                 ಕಡಂಬಿಲ ಕೃಷ್ಣಪ್ರಸಾದ್, ಮುಳಿಯ ವೆಂಕಟಕೃಷ್ಣ ಶರ್ಮರು ಎರಡು ತಿಂಗಳ ಹಿಂದಿನಿಂದಲೇ ಹುಬ್ಬಳ್ಳಿಯಿಂದ ಸಿರಿಧಾನ್ಯ(millet, ಕಿರುಧಾನ್ಯ, ತೃಣಧಾನ್ಯ)ಗಳನ್ನು ತರಿಸಿ, ಜಿಲ್ಲೆಯ ಅಡುಗೆಗೆ ಮಿಳಿತವಾಗಬಹುದಾದ ಖಾದ್ಯಗಳನ್ನು ಅಡುಗೆಮನೆಯಲ್ಲಿ ಪ್ರಾಯೋಗಿಕವಾಗಿ ತಯಾರಿಸಿ, ಸವಿದು ಮೆನು ಸಿದ್ಧಪಡಿಸಿದ್ದರು. ಸೂಪಜ್ಞರ ಕ್ಷಣಕ್ಷಣದ ಸಂದೇಹಗಳನ್ನು ಅಡುಗೆಮನೆಯಲ್ಲಿದ್ದೇ ಪರಿಹರಿಸಬೇಕಾದ ಸವಾಲುಗಳು.
                ಅಂತೂ ಸಿದ್ಧವಾಯಿತು ನೋಡಿ : ರಾಗಿ ಹಾಲುಬಾಯಿ. ಊದಲು ಚಿತ್ರಾನ್ನ. ನವಣೆ ಅನ್ನ. ಸಾವೆ ಪಾಯಸ ಮತ್ತು ಮೊಸರನ್ನ. ಬರಗ ಕೇಸರಿಬಾತ್. ಜೋಳದ ರೊಟ್ಟಿ. ರಾಗಿ ಪಾನೀಯ. ಅಂದಿನ ಭೋಜನದಲ್ಲಿ ಅಕ್ಕಿಯ ಅನ್ನಕ್ಕೆ ರಜೆ. ಸಾರು, ಸಾಂಬಾರಿಗೆ ವಿಶ್ರಾಂತಿ. ಇದನ್ನೆಲ್ಲಾ ನಿತ್ಯ ಉಂಡ ನಾಲಗೆಗೆ ಸಿರಿಧಾನ್ಯಗಳ ಖಾದ್ಯಗಳು ಸವಿಯಾದುವು. ಜತೆಗೆ ಐಟಿ ಉದ್ಯೋಗಿ ಮಂಚಿಯ ವಸಂತ ಕಜೆಯವರ ರಾಗಿ ಐಸ್ಕ್ರೀಂ.
               ರಾಗಿಯ ಬಳಕೆ ಗೊತ್ತು. ರಾಗಿ ಮುದ್ದೆ, ದೋಸೆ, ಕಷಾಯ, ಅಂಬಲಿ..ಗಳ ಸವಿಯ ಪರಿಚಯವಿದೆ. ಒಂದು ಕಾಲಘಟ್ಟದಲ್ಲಿ ರಾಗಿಯನ್ನು ಕುಮೇರಿಗಳಲ್ಲಿ ಬೆಳೆಸುವ ಪರಿಪಾಠವಿತ್ತು. ಅರ್ಧ ಶತಮಾನಗಳ ಹಿಂದೆ ನವಣೆ, ಬರಗ, ಸಾಮೆ ಕರಾವಳಿಯಲ್ಲಿ ಬೆಳೆಯುತ್ತಿರುವ ಕಾಲವನ್ನು ಜ್ಞಾಪಿಸಿಕೊಳ್ಳುವ ಹಿರಿಯರು ಸಿಗುತ್ತಾರೆ. ಈಗ ಸಿರಿಧಾನ್ಯ ಬಿಡಿ, ಅನ್ನಕ್ಕೂ ಪರಾವಲಂಬನೆ. 
                 ಬದುಕಿನಿಂದ ದೂರವಾದ, ಬುದ್ಧಿಪೂರ್ವಕವಾಗಿ ದೂರಮಾಡಿದ, ಅರೋಗ್ಯಕ್ಕೆ ಸಾಥ್ ಆದ ಸಿರಿಧಾನ್ಯಗಳಲ್ಲಿ ಕೆಲವಾದರೂ ಊಟದ ಬಟ್ಟಲು ಸೇರಬೇಕು ಎನ್ನುವ ಆಶಯ. ಹಬ್ಬದಲ್ಲಿ ಮಾತಿನಷ್ಟೇ ಭೋಜನಕ್ಕೂ ಮಹತ್ವ.  ದೂರದೂರಿನಿಂದ ತರಿಸಿಕೊಂಡ ಸಿರಿಧಾನ್ಯಗಳು ಉದರ ಸೇರಿದಾಗ, 'ನಾವೂ ಬೆಳೆಯಬೇಕು, ತಿನ್ನಬೇಕು, ಸಿರಿಧಾನ್ಯಗಳು ಎಲ್ಲಿ ಸಿಗುತ್ತವೆ' ಎನ್ನುವ ಪ್ರಶ್ನೆ. 'ಸಿರಿಧಾನ್ಯಗಳು ಅನ್ನಕ್ಕೆ ಪರ್ಯಾಯವಾಗಬಹುದೆ?' ಎಂಬ ಕುತೂಹಲ.
                 ಇವುಗಳ ಮುಂದೆ ನಮ್ಮೂರಿನ ಭತ್ತದ ಸ್ಥಿತಿಯನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಭತ್ತದ ಬದುಕಿನಿಂದ ಸಂಸ್ಕೃತಿ ದೂರವಾಗಿದೆ. ಗದ್ದೆಗಳಲ್ಲೆಲ್ಲಾ ಬಹುಮಹಡಿ ಕಟ್ಟಡಗಳ ಅಡಿಪಾಯಗಳಾಗಿವೆ.  'ದುಡ್ಡು ಕೊಟ್ಟರೆ ಅಕ್ಕಿ ಅಂಗಡಿಯಲ್ಲಿದೆ' ಎನ್ನುವ ಮೈಂಡ್ ಸೆಟ್.  ಅಳಿದುಳಿದ ಗದ್ದೆಗಳಲ್ಲಿ ಬೇಸಾಯವಾಗುತ್ತಿರುವುದು ಸಮಾಧಾನ. ಅಮೈ ದೇವರಾಯರ ಮಾತು ನೆನಪಾಗುತ್ತದೆ, ಭತ್ತದ ಬೇಸಾಯವು ಕ್ಯಾಲಿಕ್ಯುಲೇಟರನ್ನು ಕೈಯಲ್ಲಿ ಹಿಡಿದು ಮಾಡುವಂತಹುದಲ್ಲ. ಅದು ಹೊಟ್ಟೆಯ ಪ್ರಶ್ನೆ.
ರಾಸಾಯನಿಕ ಬೇಡದ, ಎಲ್ಲಾ ಕಾಲದಲ್ಲೂ ಹೊಂದುವ ಸಿರಿಧಾನ್ಯವು ನಿಜಕ್ಕೂ 'ಸತ್ಯದಬೆಳೆ.' ಜನರಿಗೆ ಯಾವ ರೀತಿ ಖಾದ್ಯ ಇಷ್ಟವೋ ಅದನ್ನು ಮಾಡಿದರೆ ಇಷ್ಟವಾಗಬಹುದು. ಪಾಕವಿಧಾನಗಳ ದಾಖಲಾತಿ ಬೇಕಾಗಿದೆ. ಇದರಲ್ಲಿರುವ ಪೌಷ್ಟಿಕಾಂಶಗಳನ್ನು ಪ್ರಸ್ತುತ ಪಡಿಸಿದಷ್ಟೇ ಸಾಲದು; ಎಲ್ಲಿ ಸಿಗುತ್ತದೆ, ಬೆಳೆಯುವ ವಿಧಾನಗಳೂ ಕೃಷಿಕರನ್ನು ತಲುಪಬೇಕು - ಹಿರಿಯ ಪತ್ರಕರ್ತ ಶ್ರೀಪಡ್ರೆಯವರ ಕಿವಿಮಾತು.
                   ಮಂಗಳೂರಿನ ಗೃಹಿಣಿ ನಳಿನಿ ಮಾಯಿಲಂಕೋಡಿ, ಮಂಚಿಯ ಶಿಲ್ಪಾ ವಸಂತ ಕಜೆ ಸಿರಿಧಾನ್ಯ ಪ್ರಾತ್ಯಕ್ಷಿಕೆಗಾಗಿ ತೆಗೆದುಕೊಂಡ ಶ್ರಮ ಗುರುತರ. 'ನಮ್ಮ ಜನರ ಬಾಯಿಗೆ ಸಿರಿಧಾನ್ಯಗಳು ಹೇಗೆ ರುಚಿಸಬಹುದು. ಯಾವುದು ಆಗದೇ ಇರುವಂತಾದ್ದು' ಎಂದು ಯೋಚಿಸಿ ಡೆಮೋ ನೀಡಿದ್ದಾರೆ. ತಂತಮ್ಮ ಅಡುಗೆ ಮನೆಯಲ್ಲಿ ತಯಾರಿಸಿ, ಆಸಕ್ತರಿಗೆ ಹಂಚಿ, ಹಿಮ್ಮಾಹಿತಿ ಪಡೆದು, ಕೊನೆಗೆ ಅದನ್ನು ಕಾಗದಕ್ಕಿಳಿಸಿದ್ದಾರೆ. ಪ್ರಾತ್ಯಕ್ಷಿಕೆಯೊಂದಿಗೆ ಮಾಡುವ ವಿಧಾನವೂ ಜತೆಯಲ್ಲೇ ಸಿಕ್ಕಾಗ ಪರಿಣಾಮ ಹೆಚ್ಚು.
                ಅಡುಗೆ ಪ್ರಾತ್ಯಕ್ಷಿಕೆಗಳಿಗೆ ಮಹಿಳೆಯರ ಒಲವು ಹೆಚ್ಚು. ಸಿರಿಧಾನ್ಯ ಕಾರ್ಯಕ್ರಮದಲ್ಲಿ ಗಂಡಸರ ಸಂಖ್ಯೆಯೂ ಅಧಿಕವಿತ್ತು. ಕಾರಣವಿಷ್ಟೇ, ಹೊಸತಾದ ಬೆಳೆಯೊಂದರ ಕುರಿತ ಕಾಳಜಿ. ತಿಳಿದುಕೊಳ್ಳಬೇಕೆಂಬ ಹಪಾಹಪಿ. ಪ್ರಾತ್ಯಕ್ಷಿಕೆಯಲ್ಲಿ ತಯಾರಾದ ಖಾದ್ಯಗಳನ್ನು ಸವಿಯುವ ಕುತೂಹಲ. ಅಕ್ಕಿಯಿಂದ ಮಾಡಬಹುದಾದ ಎಲ್ಲಾ ಪದಾರ್ಥಗಳನ್ನು ಸಿರಿಧಾನ್ಯಗಳಿಂದ ಮಾಡಬಹುದು.
                 ಇಷ್ಟೊಂದು ಪೌಷ್ಟಿಕಾಂಶವಿರುವ ಸಿರಿಧಾನ್ಯಗಳು ಯಾಕೆ ಅಜ್ಞಾತವಾದುವು? ಸಿರಿಧಾನ್ಯಗಳ ಉಳಿವಿಗೆ ಶ್ರಮಿಸುತ್ತಿರುವ ಅನಿತಾ ಪೈಲೂರು ಹೇಳುತ್ತಾರೆ, ಪಡಿತರ ಬಂದ ನಂತರ ಅಕ್ಕಿ, ಗೋಧಿಗೆ ಬೇಡಿಕೆ. ಇದರ ಊಟ ಮಾಡಿದರೆ ಸ್ಟೇಟಸ್ ಹೆಚ್ಚು ಎನ್ನುವ ಭಾವನೆ. ಅಂಗಡಿಯಿಂದ ಕೊಂಡು ಉಣ್ಣುವ ಹಂಬಲ ಹೆಚ್ಚಾಯಿತು. ಜತೆಗೆ ಸಿರಿಧಾನ್ಯ ಉಣ್ಣುವವರು ಬಡವರು ಎನ್ನುವ ಮನಃಸ್ಥಿತಿ. ಇಳುವರಿ ಕೇಂದ್ರಿತ ಬೆಳೆಯನ್ನು ಮಾಡಲು ಆರಂಭಿಸಿದ ಬಳಿಕ ಸಿರಿಧಾನ್ಯಗಳಿಗೆ ಇಳಿಲೆಕ್ಕ. ನೂರಾರು ತಳಿಗಳು ಇರಬೇಕಾದ್ದಲ್ಲಿ ಈಗ ಕೇವಲ 20-25 ತಳಿಗಳು ಉಳಿದುಕೊಂಡಿವೆಯಷ್ಟೇ.
                 ಸಿರಿಧಾನ್ಯಗಳಿಗೆ ಹದಿನೈದು ಸಾವಿರ ವರುಷಗಳಿಗೂ ಮಿಕ್ಕಿದ ಇತಿಹಾಸವಿದೆ. 1940ರ ಹೊತ್ತಿಗೆ ಬೆಂಗಳೂರು ಸುತ್ತಮುತ್ತ ಹಾರಕ ಯಥೇಷ್ಟವಾಗಿ ಬೆಳೆಯುತ್ತಿದ್ದರು. ಯಾವ್ಯಾವ ಋತುವಿನಲ್ಲಿ ಏನೆಲ್ಲಾ ತಿನ್ನಬೇಕು ಎನ್ನುವುದು ಹಿರಿಯರಿಗೆ ಗೊತ್ತಿತ್ತು. ಅದು ಅನುಭವದಿಂದ ಬಂದಿರುವ ಜ್ಞಾನ. ಅಡುಗೆ ಮಾಡುವುದು ವಿಜ್ಞಾನವಲ್ಲ. ಅದೊಂದು ಅದ್ಭುತ. ಅಲ್ಲಿ ಪ್ಯಾಕೇಜ್ ಗುಲ್ಲು ಇಲ್ಲ, ಮಾರುಕಟ್ಟೆ ಲಾಬಿ ಇಲ್ಲ, ಬ್ರಾಂಡ್ಗಳ ಪೈಪೋಟಿ ಇಲ್ಲ!
                    ಬೆಂಗಳೂರಿನ ಡಾ.ಕೆ.ಸಿ.ರಘು - ಜಾಗತಿಕವಾಗಿ ಆಹಾರ, ಆರೋಗ್ಯದ ಕಣ್ಣಿಗೆ ಕಾಣದ ವ್ಯವಸ್ಥಿತ ಜಾಲಗಳತ್ತ ಬೆಳಕು ಹಾಕಿದರು : ಡಯಾಬಿಟೀಸ್ ಅಕ್ಕಿ, ಶುಗರ್ ಇಲ್ಲದ ಸಕ್ಕರೆ.. ಹೀಗೆ ಕಾಯಿಲೆಯ ಕನ್ನಡಕ ಹಾಕಿ ಆಹಾರವನ್ನು ನೋಡುತ್ತಿದ್ದೇವೆ. ಆಹಾರದಲ್ಲಿ ವೈವಿಧ್ಯತೆಯನ್ನು ಎಷ್ಟು ಉಳಿಸಿಕೊಳ್ಳುತ್ತೇವೋ ಆಗಲೇ ಆರೋಗ್ಯ. ನಾವು ಮಾದರಿ ಎಂದು ಸ್ವೀಕರಿಸಿದ ಅಮೇರಿಕಾದಲ್ಲಿ ಒಬ್ಬ ವರ್ಷಕ್ಕೆ ನಾಲ್ಕು ಸಾವಿರ ಡಾಲರ್ ಆಹಾರಕ್ಕೆ ಖರ್ಚು ಮಾಡಿದರೆ, ಎಂಟು ಸಾವಿರ ಡಾಲರ್ ಔಷಧಿಗೆ ಖರ್ಚಾಗುತ್ತದೆ. ಆದರೂ ಶೇ.60ರಷ್ಟು ಬೊಜ್ಜು ಇನ್ನೂ ಉಳಕೊಂಡಿದೆ!
                        ಆಹಾರಗಳು ಮನುಷ್ಯ ಸಮುದಾಯವನ್ನು ಸಾಕಿಕೊಂಡು ಬಂದಿದೆ. ಅದನ್ನು ಕಳೆಯೋದಕ್ಕೆ ನಮಗೆ ಹಕ್ಕಿದೆಯೇ? ಯಾವುದೇ ಒಂದು ಬೆಳೆಯ ಔಷಧೀಯ ಗುಣ ಗೊತ್ತಿಲ್ಲದೇ ಇದ್ದರೆ ಅದು ಕಳೆಯಾಗುತ್ತದೆ. ಮರೆಯಾಗುತ್ತದೆ. ಭಾರತದಲ್ಲಿ ಶೇ.71 ಮಂದಿ ರೈತರು ಕೃಷಿಯನ್ನು ಬಿಡಲು ಸಿದ್ಧರಾಗಿದ್ದಾರೆ. ಬೆಲೆಯಿಲ್ಲ, ಬೆಳೆಯಿಲ್ಲ.. ಹೀಗೆ ಇಲ್ಲಗಳ ಸಂತೆ. ಆಡಳಿತ ವ್ಯವಸ್ಥೆಗೆ ರೈತರ ಬಗ್ಗೆ ಗೊತ್ತಿಲ್ಲ. ಸಂವಹನವೂ ಇಲ್ಲ. ಎಲ್ಲವೂ ಸೂಪರ್ ಮಾರ್ಕೆಟಿನಲ್ಲಿ ಸಿಗುತ್ತದೆ, ಮತ್ಯಾಕೆ ಕೃಷಿ ಮಾಡಬೇಕು ಎನ್ನುವ ಮನಃಸ್ಥಿತಿಯನ್ನು ವ್ಯವಸ್ಥೆಗಳು ರೂಪಿಸುತ್ತಿವೆ.
                    'ಆಹಾರ ಸಂಸ್ಕರಣೆ' ಎನ್ನುವುದು ವ್ಯಾಪಾರ. ಇದನ್ನು ಡಾ.ರಘು ಅರ್ಥಪೂರ್ಣವಾಗಿ ಹೇಳುತ್ತಾರೆ - ಅಕ್ಕಿ ತೆಕ್ಕೊಂಡು ಮಿಲ್ಲಿಗೆ ಹೋಗ್ತೇವೆ.  ಮಿಲ್ಲಲ್ಲಿ ತೌಡು ಬೇರ್ಪಡುತ್ತದೆ. ತೌಡಿನಿಂದ ಎಣ್ಣೆ ಬೇರ್ಪಡಿಸಲು ಇನ್ನೊಂದು ಮಿಲ್ಲಿಗೆ. ಅಲ್ಲಿ ಅದರಿಂದ ವಿಟಮಿನ್ 'ಇ' ಬೇರ್ಪಡಿಸಿ, ಔಷಧೀಯ ಕಂಪೆನಿಗೆ ಮಾರುತ್ತೇವೆ. ಮತ್ತೊಂದೆಡೆ ಡಯಾಬಿಟಿನ್ ನಮಗೆ ವಕ್ಕರಿಸುತ್ತದೆ. ಅದೇ ಔಷಧ ಕಂಪೆನಿಯಿಂದ ಔಷಧ ಖರೀದಿಸುತ್ತೇವೆ. ಇದೊಂದು ಬ್ಯುಸಿನೆಸ್. 
                    ಬಂಟ್ವಾಳ ತಾಲೂಕಿನ ಕೇಪು ಹಲಸು ಸ್ನೇಹಿ ಕೂಟದ ಸಾರಥ್ಯದಲ್ಲಿ 'ಮನೆಮನೆಗೆ ಸಿರಧಾನ್ಯದಡುಗೆ' ಆಶಯದ ಹಬ್ಬವು ಕರಾವಳಿಗೆ ಬಹುಶಃ ಮೊದಲ ಹೆಜ್ಜೆಯೇನೋ. ಹೆಜ್ಜೆಗೆ ಹೆಜ್ಜೆ ಹಾಕಿದವರು ನೂರಕ್ಕೂ ಅಧಿಕ ಮಂದಿ. ಹೆಚ್ಚು ಪೌಷ್ಟಿಕಾಂಶದ, ಬರಕ್ಕೆ ತಡೆದಕೊಳ್ಳುವ ಸಿರಿಧಾನ್ಯಗಳ ಕೃಷಿ ಭವಿಷ್ಯ ಕರಾವಳಿಯ ಅಗತ್ಯವಾಗಬಹುದೇನೋ!
                   ’ಹಲಸು ಸ್ನೇಹಿ ಕೂಟವು ನಾಲ್ಕು ವರುಷದಿಂದ ಸಕ್ರಿಯ. ಶಿರಂಕಲ್ಲು ನಾರಾಯಣ ಭಟ್ಟರ ಮನೆಯಲ್ಲಿ ಸಾತ್ವಿಕ ಆಹಾರ, ಮಲ್ಯ ಶಂಕರನಾರಾಯಣ ಭಟ್ಟರಲ್ಲಿ ತರಕಾರಿ ಹಬ್ಬ, ಉಬರು ರಾಜಗೋಪಾಲ ಭಟ್ಟರಲ್ಲಿ ಮಾವು ಮತ್ತು ಹಲಸಿನ ಹಬ್ಬ, ಮಂಚಿಯ ವಸಂತ ಕಜೆ ಇವರ ಮನೆಯಂಗಳದಲ್ಲಿ ಗೆಡ್ಡೆ ತರಕಾರಿ ಮೇಳ, ಮುಳಿಯ ವೆಂಕಟಕೃಷ್ಣ ಶರ್ಮರ ಮನೆಯಲ್ಲಿ ಹಲಸಿನ ತಳಿ ಆಯ್ಕೆ.. ಮೊದಲಾದ ವಿಶಿಷ್ಟ ಕಲಾಪಗಳನ್ನು ಮೈಮೇಲೆ ಎಳೆದುಕೊಂಡಿದೆ. ಹೊಣೆ ಹೊತ್ತು ಯಶಸ್ಸಾಗಿದೆ. ಇವೆಲ್ಲಾ ಕೆಲವೇ ಹೆಗಲುಗಳ ಯೋಚನೆ, ಯೋಜನೆ.  ಹೆಗಲುಗಳ ಸಂಖ್ಯೆ ಹೆಚ್ಚಾಗಬೇಕು. ಮನೆಮನೆಯಲ್ಲಿ ಆಹಾರದ ಮಾತುಕತೆ ನಡೆಯಬೇಕು. ಆಗಲೇ ಆರೋಗ್ಯ-ಭಾಗ್ಯ.
 

Wednesday, April 30, 2014

ಕರಾವಳಿಗೆ ಅಪರೂಪದ್ದಾದ "ಸಿರಿಧಾನ್ಯಗಳ ಸಿರಿ"




              ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ ಎಪ್ರಿಲ್ 27ರಂದು ಸಿರಿಧಾನ್ಯ(millet)ಗಳ ಹಬ್ಬ. ದಕ್ಷಿಣ ಕನ್ನಡ ಜಿಲ್ಲೆಗೆ ಸಿರಿಧಾನ್ಯಗಳನ್ನು ಪರಿಚಯಿಸುವ ಕಾರ್ಯಕ್ರಮ. ಜೋಳ, ರಾಗಿ, ಬರಗ, ಸಾಮೆ, ನವಣೆ, ಸಜ್ಜೆ, ಹಾರಕ, ಊದಲು - ಸಿರಿಧಾನ್ಯಗಳು. ಇವುಗಳಲ್ಲಿ ರಾಗಿಯ ಬಳಕೆ ಕರಾವಳಿಯಲ್ಲಿದೆ.

             ಭತ್ತವನ್ನು ಮಿಲ್ಲಲ್ಲಿ ಅಕ್ಕಿ ಮಾಡುತ್ತೇವೆ. ತೌಡನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಬಿಡುತ್ತೇವೆ. ಎಲ್ಲವನ್ನೂ ಕಳಕೊಂಡು ಸೊರಗಿದ ಅಕ್ಕಿಯ 'ಬಿಳಿಯ ಅನ್ನ' ಬಟ್ಟಲಿಗೆ ಬಿದ್ದಾಗ ಉಣ್ಣುತ್ತೇವೆ. ಪೌಷ್ಟಿಕಾಂಶವನ್ನು ಕಳಕೊಂಡ ಈ ಅನ್ನವು ಶರೀರಕ್ಕೆ ಎಷ್ಟರ ಮಟ್ಟಿಗೆ ಪೌಷ್ಟಿಕತೆಯನ್ನು ನೀಡಬಹುದು? ಆದರೆ ಗ್ರಾಮೀಣ ಭಾಗಗಳಲ್ಲಿ ಕುಚ್ಚಲಕ್ಕಿಯ ಬಳಕೆ ಈಗಲೂ ಜೀವಂತವಾಗಿರುವುದು ಸಮಾಧಾನ.

              ಈ ಹಿನ್ನೆಲೆಯಲ್ಲಿ ಸಿರಿಧಾನ್ಯಗಳನ್ನು ನೋಡಿದಾಗ ಇದು ಪೌಷ್ಟಿಕಾಂಶಗಳ ಆಗರ. ನಾರಿನಿಂದ ವಿಟಮಿನ್ ತನಕ ವಿವಿಧ ವೈವಿಧ್ಯ ಆರೋಗ್ಯದಂಶಗಳು. ಅವುಗಳ ಸಂಸ್ಕರಣೆಯಲ್ಲಿನ ತೊಂದರೆಗಳು, ಒಂದು ರೂಪಾಯಿಗೆ ಪಡಿತರದಲ್ಲಿ ಸಿಗುವ ಅಕ್ಕಿ, ಇಳುವರಿ ಕೇಂದ್ರಿತ ಬೆಳೆಗಳ ಅವಲಂಬನೆ.. ಹೀಗೆ ಮೊದಲಾದ ಅಂಶಗಳು ಸಿರಿಧಾನ್ಯಗಳ ಇಳಿಲೆಕ್ಕಕ್ಕೆ ಕಾರಣ.
ಬದುಕಿನಿಂದ ಮರೆಯಾದ ಸಿರಿಧಾನ್ಯಗಳನ್ನು ಮರಳಿ ಅಡುಗೆ ಮನೆಗೆ ತರುವ, ಕರಾವಳಿಗೆ ಪರಿಚಯಿಸುವ ಆಶಯದ ಕಲಾಪವನ್ನು ಕೇಪು 'ಹಲಸು ಸ್ನೇಹಿ ಕೂಟ' ಆಯೋಜಿಸಿತ್ತು. ನೂರಕ್ಕೂ ಅಧಿಕ ಭಾಗಿ. ಒಂದೆಡೆ ಸಿರಿಧಾನ್ಯಗಳ ಕುರಿತು ಥಿಯರಿ. ಮತ್ತೊಂದೆಡೆ ಖಾದ್ಯಗಳ ಮೂಲಕ ಪ್ರಾಕ್ಟಿಕಲ್. ಹಬ್ಬದಲ್ಲಿ ಇವೆರಡೂ ಮಿಳಿತವಾಗಿತ್ತು.

           ಹಬ್ಬದಲ್ಲಿ ಅಕ್ಕಿಯ ಅನ್ನ, ಸಾರು, ಸಾಂಬಾರು, ಪಲ್ಯಗಳಿರಲಿಲ್ಲ. ಸಿರಿಧಾನ್ಯಗಳ ಖಾದ್ಯಗಳನ್ನು ನಮ್ಮೂರಿನ ಅಡುಗೆ ಮನೆಗೆ ಒಗ್ಗುವಂತೆ ಮಾಡುವ ಆಶಯದಿಂದ ರೂಪುಗೊಂಡವುಗಳು. ಊದಲು ಚಿತ್ರಾನ್ನ, ನವಣೆ ಅನ್ನ, ಸಾವೆಯ ಪಾಯಸ, ಬರಗ ಕೇಸರಿಬಾತ್, ಸಾವೆ ಮೊಸರನ್ನ, ಜೋಳದ ರೊಟ್ಟಿ, ರಾಗಿ ಪಾನೀಯ, ರಾಗಿ ಹಾಲುಬಾಯಿ, ಹಾರಕ ಉಪ್ಪಿಟ್ಟು.
ನಳಿನಿ ಸದಾಶಿವ ರಾವ್ ಮಾಯಿಲಂಕೋಡಿ ಮತ್ತು ಶಿಲ್ಪಾ ಕಜೆ ಇವರಿಂದ ಅಡುಗೆಯ ಡೆಮೋ.  ರಾಗಿ ಶ್ಯಾವಿಗೆ, ನವಣೆ ಬಿಸಿಬೇಳೆ ಬಾತ್, ಸಜ್ಜೆ ದೋಸೆ, ಸಜ್ಜೆ ತಾಲಿಪಟ್ಟು, ಜೋಳ-ರಾಗಿ-ಸಜ್ಜೆಯ ಅರಳಿಟ್ಟು, ರಾಗಿ ಕೇಕ್, ನವಣೆ ಹಲ್ವ.. ಪ್ರಾತ್ಯಕ್ಷಿಕೆಯಲ್ಲಿ ಸಿದ್ಧಗೊಂಡ ಖಾದ್ಯಗಳು ಕ್ಷಣಮಾತ್ರದಲ್ಲಿ ಪ್ರತಿನಿಧಿಗಳ ಉದರ ಸೇರಿತು! ಮಂಚಿಯ ವಸಂತ ಕಜೆಯವರು ಹಬ್ಬಕ್ಕಾಗಿಯೇ ಸಿದ್ಧಪಡಿಸಿದ 'ರಾಗಿ ಐಸ್ಕ್ರೀಮ್'ನ ರೆಸಿಪಿಯನ್ನು ಕಾಗದಕ್ಕಿಳಿಸಿಕೊಂಡವರು ಅಧಿಕ. ಬೆಂಗಳೂರಿನ ಅನಿತಾ ಪೈಲೂರು ಸಿರಿಧಾನ್ಯಗಳಿಗೆ ದನಿಯಾದರು.

              ಸಿರಿಧಾನ್ಯ ಹಬ್ಬವು ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಮತ್ತು ಕಡಂಬಿಲ ಕೃಷ್ಣಪ್ರಸಾದ್ ಇವರ ಮೆದುಳ ಮರಿ. ಉಬರು ರಾಜಗೋಪಾಲ ಭಟ್, ಶಿರಂಕಲ್ಲು ನಾರಾಯಣ ಭಟ್, ಮಲ್ಯ ಶಂಕರನಾರಾಯಣ ಭಟ್, ವರ್ಮುಡಿ ಶಿವಪ್ರಸಾದ್, ಬೈಂಕ್ರೋಡು ಗಿರೀಶ, ವೆಂಕಟಕೃಷ್ಣ ಬೈಂಕ್ರೋಡು... ಸಾಥ್. ಹಬ್ಬದಲ್ಲಿ ಕೂಟದ ಚಟುವಟಿಕೆಗಳ ವಾರ್ತಾಪತ್ರದ ಬಿಡುಗಡೆ.

            "ಎಲ್ಲಾ ಸಿರಿಧಾನ್ಯಗಳಲ್ಲಿ ಶೇ.16-20 ನಾರಿನ ಅಂಶವಿದೆ. ಪಾಲಿಶ್ ಮಾಡಿದ ಅಕ್ಕಿಯಲ್ಲಿ ಕೇವಲ ಶೇ.4-5 ಮಾತ್ರ. ಹಾಗಾಗಿ ಸಿರಿಧಾನ್ಯಗಳನ್ನು ಬಳಸುವ ರೂಢಿಯಾಗಬೇಕು. ಪಾಲಿಶ್ ಮಾಡದ ಅಕ್ಕಿಯನ್ನು ಸೇವಿಸುವ ಪದ್ಧತಿ ಮತ್ತೆ ರೂಢಿಸಿಕೊಂಡಾಗ ಆರೋಗ್ಯ", ಬೆಂಗಳೂರಿನ ಡಾ.ಕೆ.ಸಿ.ರಘು ಅವರಿಂದ ಆಹಾರಗಳ  ಜಾಗತಿಕ ಲಾಬಿಗಳ ಪ್ರಸ್ತುತಿ.

           ಮದುವೆ, ಉಪನಯನದಂತಹ ಸಮಾರಂಭದಲ್ಲಿ ಅಡುಗೆ ಮಾಡಿದ್ದೇವೆ. ಆದರೆ ಸಿರಿಧಾನ್ಯಗಳ ಖಾದ್ಯಗಳ ತಯಾರಿ ಇದೇ ಮೊದಲು, ಎಂದು ಖುಷಿ ಪಟ್ಟವರು ಅಂದಿನ ಸೂಪಜ್ಞರಾದ ಚಂದ್ರಶೇಖರ ಭಟ್ ಮತ್ತು ಶಿವರಾಮ ಭಟ್. ಮುಚ್ಚಿರ ಹಣ್ಣು, ಮ್ಯಾಂಗೋಸ್ಟಿನ್, ಸಿಂಧು ಮಾವು. ಮಾದೃ ಚಕ್ಕೋತ, ಪುರಿಕಾಯಿ ಹಣ್ಣು, ಬದನೆ - ತೊಂಡೆ ತಳಿಗಳು, ಬಳ್ಳಿ ಬಟಾಟೆ, ಜಾಂಜೀಬಾರ್ ಬಾಳೆ, ಬೆಣ್ಣೆಹಣ್ಣು... ಹೀಗೆ ವಿವಿಧ ವೈವಿಧ್ಯಗಳ ಹಣ್ಣುಗಳ ಪ್ರದರ್ಶನ.

          ’ನನ್ನ ಊಟದಲ್ಲಿ ದಿನಕ್ಕೆ ಒಂದಾದರೂ ಸಿರಿಧಾನ್ಯಗಳ ಐಟಂನ್ನು ಹೊಂದಿಸಬೇಕೆಂದಿದ್ದೇನೆ,’ ಮಡಿಕೇರಿಯ ಇಂಜಿನಿಯರ್ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರೆ, ’ಅಡುಗೆ ಮನೆಯ ಬಾಗಿಲನ್ನು ತಟ್ಟುವ ಇಂತಹ ಪ್ರಾಕ್ಟಿಕಲ್ ಕಾರ್ಯಕ್ರಮಗಳು ಕಾಲದ ಆವಶ್ಯಕತೆ” ಎಂದವರು ಮಂಗಳೂರಿನ ಪಶುವೈದ್ಯ ಡಾ.ಮನೋಹರ ಉಪಾಧ್ಯ.
ಆಹಾರದಲ್ಲಿ ಹೊಸ ಹಾದಿ ತೋರಿದ ಸಿರಿಧಾನ್ಯ ಹಬ್ಬವು ಅಡುಗೆ ಮನೆಗಳಿಗೆ ಸಂದೇಶ ರವಾನಿಸಿದೆ!


"ಅಡುಗೆ ಮನೆಯಲ್ಲಿದೆ ನಮ್ಮ ಆರೋಗ್ಯ" - ಸಿರಿಧಾನ್ಯ ಹಬ್ಬದಲ್ಲಿ ಡಾ.ಕೆ.ಸಿ.ರಘು






            "ಸಿರಿಧಾನ್ಯಗಳ ಸಮೃದ್ಧಿಯ ಹಿಂದೆ ಹದಿನೈದು ಸಾವಿರ ವರುಷಗಳ ಹಿರಿಯರ ಬೆವರಿದೆ. ನಾವದನ್ನು ಕಳಕೊಳ್ಳುತ್ತಿದ್ದೇವೆ. 1940ರಲ್ಲೆ ಬೆಂಗಳೂರು ಸುತ್ತಮುತ್ತ ಹಾರಕವನ್ನು ಯಥೇಷ್ಟವಾಗಿ ಬೆಳೆಯುತ್ತಿದ್ದೆ. ಈಗದನ್ನು ಹುಡುಕುವ ಸ್ಥಿತಿಗೆ ಬಂದಿದ್ದೇವೆ. ಉಣ್ಣುವ ಆಹಾರಗಳ ಔಷಧೀಯ ಗುಣಗಳ ಕುರಿತು ಅರಿವಿಲ್ಲ. ಆಹಾರವನ್ನು ತಿನ್ನುವುದಕ್ಕೆ ಕಷ್ಟ ಪಡುತ್ತಿದ್ದೇವೆ. ಆಹಾರಕ್ಕಿಂತ ಹೆಚ್ಚು ಔಷಧಗಳನ್ನು ಸೇವಿಸುವುದಕ್ಕೆ ನಮಗೆ ಖುಷಿ. ಯಾಕೆಂದರೆ ಆರೋಗ್ಯವನ್ನು ವೈದ್ಯಕೀಯಗೊಳಿಸುವ ಎಲ್ಲಾ ವ್ಯವಸ್ಥೆಗಳು ಆ ರಂಗದಲ್ಲಿದೆ," ಎಂದು ಅಂಕಣಕಾರ ಡಾ.ಕೆ.ಎಸ್.ರಘು ಹೇಳಿದರು.

             ಅವರು ರವಿವಾರ (೨೭-೪-೨೦೧೪) ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ಜರುಗಿದ 'ಮನೆಮನೆಗೆ ಸಿರಿಧಾನ್ಯದಡುಗೆ' ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡುತ್ತಾ, ’ನಮ್ಮ ಆರೋಗ್ಯವು ನಮ್ಮ ಅಡುಗೆ ಮನೆಯಲ್ಲಿದೆ. ಎಲ್ಲೆಲ್ಲೋ ಹುಡುಕಬೇಕಾಗಿಲ್ಲ. ಕಾಯಿಲೆಯ ಕನ್ನಡಕ ಹಾಕಿಕೊಂಡು ಆಹಾರವನ್ನು ನೋಡುವುದಕ್ಕೆ ಯಾವಾಗ ಆರಂಭಿಸಿದೆವೋ ಅಲ್ಲಿಂದ ನಮ್ಮ ದೇಹವು ಹಲವು ಕಾಯಿಲೆಗಳ ಮೂಟೆಯಾಗಿದೆ” ಎಂದರು.

           ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು ಸಮಾರೋಪ ಭಾಷಣ ಮಾಡುತ್ತಾ, ಸಿರಿಧಾನ್ಯಗಳನ್ನು ಬಳಸಿದಾಗ ಅದು ಉಳಿಯುತ್ತದೆ. ಕರಾವಳಿಗೆ ಹೊಸತಾದ ಸಿರಿಧಾನ್ಯವನ್ನು ಒಗ್ಗಿಸಿಕೊಳ್ಳುವುದು ಸೂಕ್ತ ಮತ್ತು ಅನಿವಾರ್ಯ’ ಎಂದರು.

            ಡಾ.ಮನೋಹರ ಉಪಾಧ್ಯ ಉಪಸ್ಥಿತರಿದ್ದರು. ಸಿರಿಧಾನ್ಯಗಳ ಆಹಾರ ಮತ್ತು ಔಷಧೀಯ ಗುಣಗಳ ಕುರಿತು ಜರುಗಿದ ಮಾಹಿತಿ ಪ್ರಸ್ತುತಿಯ ಬಳಿಕ ಸಂವಾದ ಜರುಗಿತು. ಮಂಗಳೂರಿನ ಗೃಹಿಣಿ ಶ್ರೀಮತಿ ಸರೋಜ ಪ್ರಕಾಶ್ ಅನುಭವ ಹಂಚಿಕೊಂಡರು. ಕರಾವಳಿ ಭಾಗಕ್ಕೆ ಹೊಸತಾದ ಸಿರಿಧಾನ್ಯಗಳ ರುಚಿರುಚಿಯಾದ ಅಡುಗೆ ಮಾಡಿದ ಚಂದ್ರಶೇಖರ ಭಟ್ ಮತ್ತು ಶಿವರಾಮ ಭಟ್ಟರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

             ದಕ್ಷಿಣ ಕನ್ನಡ ಜಿಲ್ಲೆಗೆ ಕಿರುಧಾನ್ಯಗಳನ್ನು (ಮಿಲ್ಲೆಟ್) ಪರಿಚಯಿಸುವ ಯತ್ನದ ಈ ಕಾರ್ಯಕ್ರಮವನ್ನು ಉಬರು-ಕೇಪು ಹಲಸು ಸ್ನೇಹಿ ಕೂಟ ಆಯೋಜಿಸಿತ್ತು. ಮುಳಿಯ ವೆಂಕಟಕೃಷ್ಣ ಶರ್ಮ ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು.

'ಮನೆಮನೆಗೆ ಸಿರಿಧಾನ್ಯದಡುಗೆ'







             "ಉತ್ತರ ಕರ್ನಾಟದಲ್ಲಿ ಬೆಳೆಯುವ ಸಿರಿಧಾನ್ಯಗಳ ಪರಿಚಯ ಕರಾವಳಿಯಲ್ಲಿ ತೀರಾ ಕಡಿಮೆ. ಸಿರಿಧಾನ್ಯಗಳ ಖಾದ್ಯವನ್ನುಂಡ ಹಿರಿಯರು ಆರೋಗ್ಯವಂತರಾಗಿ ಬಾಳಿದ್ದಾರೆ. ಸಿರಿಧಾನ್ಯಗಳನ್ನು ಬಡವರ ಆಹಾರ ಎಂದೇ ಬಿಂಬಿಸಲಾಗುತ್ತದೆ. ಆದರೆ ಬಡವರ ಆಹಾರದ ಪೌಷ್ಟಿಕಾಂಶಗಳ ಶ್ರೀಮಂತಿಕೆಯಲ್ಲಿ ಆರೋಗ್ಯದಾಯಕ ಬದುಕಿನ ಹಾದಿಯಿದೆ. ಸಿರಿಧಾನ್ಯಗಳನ್ನು ಬೆಳೆಸಿದಾಗಲೇ ಉಳಿಯುತ್ತದೆ. ಕರಾವಳಿ ಪ್ರದೇಶಕ್ಕೆ ಒಗ್ಗಬಹುದಾದ ಬೆಳೆಯಿದು," ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ 'ಸಿರಿ' ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮನೋರಮಾ ಭಟ್ ಅಭಿಪ್ರಾಯಪಟ್ಟರು.

           ಅವರು ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ 'ಹಲಸು ಸ್ನೇಹಿ ಕೂಟ' ಏರ್ಪಡಿಸಿದ 'ಮನೆಮನೆಗೆ ಸಿರಿಧಾನ್ಯದಡುಗೆ' ಕಾರ್ಯಕ್ರಮವನ್ನು ದೀಪಜ್ವಲಿಸಿ ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಸಭಾಧ್ಯಕ್ಷತೆಯನ್ನು ವಹಿಸಿ, "ಕಳೆದ ಶತಮಾನದ ಮಧ್ಯಭಾಗದಲ್ಲಿ  ಕರಾವಳಿಯಲ್ಲಿ ರಾಗಿಯ ಬೆಳೆ ಮತ್ತು ಬಳಕೆ ಯಥೇಷ್ಟವಾಗಿತ್ತು. ಈಗದು ಅಪರೂವಾಗಿದೆ. ಕರ್ನಾಟಕದ ಎಲ್ಲಾ ಬೆಳೆಗಳ ಪರಿಚಯ ನಮಗಿರಬೇಕು," ಎಂದರು.

           ಹಲಸು ಸ್ನೇಹಿ ಕೂಟದ ನಾಲ್ಕನೇ ವಾರ್ತಾಪತ್ರವನ್ನು (ಸಂ: ನಾ. ಕಾರಂತ ಪೆರಾಜೆ) ಪ್ರಯೋಗಶೀಲ ಗೃಹಿಣಿ ಶ್ರೀಮತಿ ನಳಿನಿ ಸದಾಶಿವ ರಾವ್ ಬಿಡುಗಡೆಗೊಳಿಸಿ ಮಾತನಾಡುತ್ತಾ, ಕಿರುಧಾನ್ಯಗಳು ಸತ್ವಯುತವಾದ ಆಹಾರ. ಇದು ಆರೋಗ್ಯಕ್ಕೆ ಉತ್ತಮ. ಅಕ್ಕಿ, ಗೋಧಿಗಳಿಗೆ ಪರ್ಯಾಯವಾಗಿ ಹೊಂದಿಕೊಳ್ಳುವ ಸಾಮರ್ಥ್ಯವಿದೆ, ಎಂದರು. ವೇದಿಕೆಯಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮ, ಉಬರು ರಾಜಗೋಪಾಲ ಭಟ್ ಉಪಸ್ಥಿತರಿದ್ದರು.

         ಕಡಂಬಿಲ ಕೃಷ್ಣಪ್ರಸಾದರ ಪ್ರಸ್ತಾವನೆಯೊಂದಿಗೆ ಸ್ವಾಗತ.  ನಾ. ಕಾರಂತ ಪೆರಾಜೆ ನಿರ್ವಹಣೆ. ಶಿರಂಕಲ್ಲು ನಾರಾಯಣ ಭಟ್ ವಂದನಾರ್ಪಣೆ. ಮಲ್ಯ ಶಂಕರನಾರಾಯಣ ಭಟ್, ಬೈಂಕ್ರೋಡು ಗಿರೀಶ, ಬೈಂಕ್ರೋಡು ವೆಂಕಟಕೃಷ್ಣ, ಅನಿಲ್ ಬಳೆಂಜ ವಿವಿಧ ಕಲಾಪವನ್ನು ನಿರ್ವಹಿಸಿದರು.

         ಪ್ರಾತ್ಯಕ್ಷಿಕೆ : ಸಿರಿಧಾನ್ಯಗಳ ಪರಿಚಯ ಮಾಡಿಕೊಟ್ಟವರು,  ಬೆಂಗಳೂರಿನ ಅನಿತಾ ಪೈಲೂರು. ನಳಿನಿ ಮಾಯಿಲಂಕೋಡಿ, ಶಿಲ್ಪಾ ಕಜೆ ಸಿರಿಧಾನ್ಯಗಳ ಖಾದ್ಯಗಳನ್ನು ಪ್ರಾತ್ಯಕ್ಷಿಕೆಯಲ್ಲಿ ತಯಾರಿಸಿದರು. ಎಲ್ಲಾ ಖಾದ್ಯಗಳ ರೆಸಿಪಿಯನ್ನು ಪ್ರತ್ಯೇಕವಾಗಿ ಬರೆದಿಟ್ಟು ಪ್ರದರ್ಶಿಸಿದರು.

ಡೆಮೋದಲ್ಲಿ ಸಿದ್ಧವಾದ ಖಾದ್ಯಗಳು : ರಾಗಿ ಶ್ಯಾವಿಗೆ, ನವಣೆ ಬಿಸಿಬೇಳೆ ಬಾತ್, ಸಜ್ಜೆ ದೋಸೆ, ಸಜ್ಜೆ ತಾಲಿಪಟ್ಟು, ಜೋಳ-ರಾಗಿ-ಸಜ್ಜೆಯ ಅರಳಿಟ್ಟು, ರಾಗಿ ಕೇಕ್, ನವಣೆ ಹಲ್ವ. ಮಂಚಿಯ ವಸಂತ ಕಜೆಯವರು ವಿಶೇಷವಾಗಿ ಕಾರ್ಯಕ್ರಮಕ್ಕೆಂದೇ 'ರಾಗಿ ಹಲ್ವ' ತಯಾರಿಸಿ ಸ್ವತಃ ವಿತರಿಸಿದ್ದರು. 

Sunday, April 20, 2014

ಅಡಿಕೆ ಮರವೇರಲು ಇನ್ನು ಸುಲಭ!

                 ಎರಡು ಸ್ಟೀಲ್ ಚೌಕಟ್ಟಿನ ಉಪಕರಣದ ಸಹಾಯದಿಂದ ಕಿರಣ್ ಸರಸರ ಅಡಿಕೆ ಮರ ಏರುತ್ತಿದ್ದಾರೆ. ಇನ್ನೂರಕ್ಕೂ ಅಧಿಕ ಕೃಷಿಕರು ಕಣ್ಣೆವೆ ಮುಚ್ಚದೆ ನೋಟಕರಾಗಿದ್ದಾರೆ. ಹದಿನೈದು ಅಡಿ ಏರಿದ ಕಿರಣ್ ಸಲಕರಣೆಯಲ್ಲೇ ಕುಳಿತು ಮಾತಿಗೆ ತೊಡಗಿದಾಗ ಕೃಷಿಕರಿಂದ ಕರತಾಡನದ ಗೌರವ. ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸಿಕ್ಕ ಅನುಭವ. ಅಭ್ಯಾಸವಾದರೆ ಕಷ್ಟವೇನಿಲ್ಲ, ಸುಲಭದಲ್ಲಿ ಮರ ಹತ್ತಬಹುದು.  ಟು ವೀಲರ್ ಕಲಿತ ಹಾಗೆ.. ಹೀಗೆ ಒಬ್ಬೊಬ್ಬರದು ಪರಸ್ಪರ ಮಾತುಕತೆ. ಒಂದಿಬ್ಬರು ಸಾಹಸದಿಂದ ಏರಿ ಇಳಿದಾಗ ಏನನ್ನೋ ಸಾಧಿಸಿದ ಖುಷಿ.

              ಸುಳ್ಯ-ಬೆಳ್ಳಾರೆಯಲ್ಲಿ ಜರುಗಿನ ಪ್ರಾತ್ಯಕ್ಷಿಕೆಯ ಒಂದು ನೋಟ. ಕಳೆದ ವರುಷದ ಮಳೆಯ ತೀವ್ರತೆಯ ಕರಾಳ ದಿನಗಳು ಇನ್ನೂ ಮಾಸಿಲ್ಲ. ಅಡಿಕೆ ಗೊನೆಗಳಿಗೆ ಬಾಧಿಸುವ ಮಹಾಳಿರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಿಸಲಾಗದಷ್ಟು ಹನಿ ಕಡಿಯದ ಮಳೆ. ಪರಿಣಾಮ, ಇಳುವರಿಯಲ್ಲಿ ಗಣನೀಯ ಇಳಿತ. ಮದ್ದು ಸಿಂಪಡಿಸುವ, ಗೊನೆ ಕೀಳುವ ಜಾಣ್ಮೆ ಕೆಲಸದವರ ಅಭಾವ. ಕೆಲಸಗಳು ಸಕಾಲಕ್ಕಾಗಿದೆ ನಾಶ ನಷ್ಟ. ಈ ಸಂಕಟಕ್ಕೆ ಪರಿಹಾರ ಬೇಕಿತ್ತು ಎನ್ನುವಾಗಲೇ ಕಿರಣರ ಮರವೇರುವ ಉಪಕರಣದ ಕ್ಷಮತೆ ಕತ್ತಲೆಯಲ್ಲಿ ಮಿಣುಕಿದ ಮಿಂಚುಳ್ಳಿ.

               ಕಿರಣರ 'ಅರೆಕಾ ಟ್ರೀ ಕ್ಲೈಂಬರ್' ಸಲಕರಣೆಯಲ್ಲಿ ಮರ ಏರುತ್ತಿದ್ದಾಗ ನನ್ನೂರಿನ ಸಂಕಪ್ಪ ಗೌಡ್ರು ನೆನಪಾದರು. ಅಡಿಕೆ ಋತುವಿನಲ್ಲಿ ಸುಮಾರು 20-30 ಅಡಿ ಉದ್ದದ ಬಿದಿರಿನ ದೋಟಿಯನ್ನು ಹೆಗಲಿಗೇರಿಸಿ, ಬೆವರೊರೆಸಿಕೊಂಡು ಸಾಗುವ ದೃಶ್ಯ ಮಾಸದ ನೆನಪು. ಇವರು ತಳೆ ಮೂಲಕ ಮರವೇರಿ ಅಡಿಕೆ ಕೊಯ್ಯುವ, ಮದ್ದು ಸಿಂಪಡಿಸುವ ಸ್ಪೆಶಲಿಸ್ಟ್. ಸಂಜೆ ಪುನಃ ಅದೇ ದಾರಿಯಲ್ಲಿ ಮರಳುವ ಸಂಕಪ್ಪರಲ್ಲಿ ಮುಂದಿನ ಕೆಲಸಗಳ 'ವೈಟಿಂಗ್ ಲಿಸ್ಟ್' ಒದ್ದೆಯಾಗಿ ಎದ್ದು ಕಾಣುತ್ತಿತ್ತು.  ಇದು ಒಂದು ಕಾಲಘಟ್ಟದ ಸ್ಥಿತಿ-ಗತಿ.

               ಕೃಷಿ ಕೆಲಸಗಳಲ್ಲಿ ಕುಶಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮರವೇರಿ ದುಡಿಯುವ ತಾಕತ್ತಿದ್ದರೂ ನಗರವನ್ನು ಸಂಪರ್ಕಿಸುವ ಬಸ್ಸಿನ ಹಾರ್ನಿಗೆ ಕಿವಿಯರಳುತ್ತದೆ. ನಗರಕ್ಕೆ ಹೋಗಿ ಕೆಲಸ ಮಾಡುತ್ತಾರೋ, ಬಿಡ್ತಾರೋ ಬೇರೆ ಮಾತು. ಸಂಜೆಯ ಬಸ್ಸಿನಲ್ಲಿ ಪುನಃ ಹಳ್ಳಿಯಲ್ಲಿಳಿದಾಗ ಸಾಧಕನೋರ್ವನ ಭಾವ ಮಿಂಚಿ ಮರೆಯಾಗುತ್ತದೆ! ಸಂಕಪ್ಪಣ್ಣನಂತಹ  ಕುಶಲಿ ಕೆಲಸಗಾರರ ಸ್ಥಾನ ತುಂಬಲು ಈಗ ಜರೂರಾಗಿ ಜನ ಬೇಕಾಗಿದ್ದಾರೆ!

                ಕಿರಣ್ ಹೇಳುತ್ತಾರೆ, ಕಾಯುತ್ತಾ ಕೂರುವ ಕಾಲ ಇದಲ್ಲ. ನಮಗೆ ಬೇಕಾದರೆ ನಾವೇ ದುಡಿಯಬೇಕು. ದುಡಿಯುವ ಮನಸ್ಸುಳ್ಳವರಿಗೆ ಪರಿಹಾರ ಇಲ್ಲಿದೆ. ಸಲಕರಣೆ ಮೂಲಕ ಮರ ಏರಿ, ಅಡಿಕೆ ಕೆಲಸಗಳನ್ನು ಮುಗಿಸಿಕೊಳ್ಳಿ. ಅಭ್ಯಾಸವಾದರೆ ನಿಮಿಷದೊಳಗೆ ಇಪ್ಪತ್ತು ಅಡಿಗೂ ಹೆಚ್ಚು ಏರಬಹುದು ಅಂದಾದ 'ಸಂಕಪ್ಪ ಗೌಡರು ಈಗಿರುತ್ತಿದ್ದರೆ ಎಷ್ಟು ಖುಷಿ ಪಡುತ್ತಿದ್ದರು' ಎಂದೆನಿಸಿತ್ತು. .


              ಕಿರಣ್ ಡಿಪ್ಲೋಮಾ ಓದಿದ್ದಾರೆ. ತಂದೆ ಕೃಷಿಮೂರ್ತಿಯವರೊಂದಿಗೆ ಕೃಷಿ ಕಾಯಕ. ಅಡಿಕೆ ಕೃಷಿಯ ವಿವಿಧ ಹಂತದ ಸಮಸ್ಯೆಗಳ ಅರಿವಿದ್ದ ಕಿರಣ್, ಅವರಲ್ಲಿ ಮರವೇರುವ ಸಲಕರಣೆಗಳ ವಿವಿಧ ನೀಲನಕ್ಷೆಗಳು ಬದಲಾಗುತ್ತಲೇ ಇದ್ದುವು. ಮೂರು ವರುಷದಲ್ಲಿ ಮೂರ್ನಾಲ್ಕು ಮಾದರಿಯ ಬಳಿಕ ಅಂತಿಮ ಉತ್ಪನ್ನ ಹೊರಬಂದಿದೆ.


               ಸಲಕರಣೆಯ ಯಶದ ಹಿಂದೆ ಕೊಯಂಬತ್ತೂರಿನ ವೆಂಕಟ್ ದಾಮೋದರ ನಾಯ್ಡು ಸಹಕಾರ ದೊಡ್ಡದು. ಅವರು ತೆಂಗು, ತಾಳೆ ಮರವೇರುವ ಸಲಕರಣೆಯನ್ನು ತಯಾರಿಸಿ, ಪ್ರಶಸ್ತಿ ಪಡೆದವರು.  ಅವರ ನಿರ್ದೇಶನದಲ್ಲಿ ಅಡಿಕೆ ಮರ ಏರುವ ಸಲಕರಣೆ ಅಭಿವೃದ್ಧಿ. ಆರರಿಂದ ಏಳು ಕಿಲೋ ಭಾರದ ಎರಡು ಸ್ಟೀಲ್ ಚೌಕಟ್ಟುಗಳೇ ಸಲಕರಣೆಯ ಹೃದಯ. ಸೊಂಟದ ಎತ್ತರಕ್ಕೆ ಒಂದು, ಇದಕ್ಕಿಂತ ಎರಡಡಿ ಕೆಳಗೆ ಇನ್ನೊಂದು ಚೌಕಟ್ಟು. ಮೇಲಿನ ಚೌಕಟ್ಟಿನಲ್ಲಿ ಕುಳಿತು, ಕೆಳಗಿನ ಚೌಕಟ್ಟನ್ನು ಕಾಲಿನಲ್ಲಿ ಮೇಲೆಳೆದು ಕೊಂಡು ಏರುತ್ತಾ ಹೋಗಬಹುದು. ಚೌಕಟ್ಟಿನಲ್ಲಿರುವ ರಬ್ಬರ್ ಬ್ರಶ್ಗಳು ಮೇಲೇರಿನ ಚೌಕಟ್ಟುಗಳನ್ನು ಮರಕ್ಕೆ ಅಪ್ಪಿ ಹಿಡಿದುಕೊಳ್ಳುತ್ತದೆ. ಒಂದು ಸಲಕ್ಕೆ ಎರಡೂ ಎರಡೂವರೆ ಅಡಿಯಷ್ಟು ಏರುತ್ತಾ ಹೋಗಬಹುದು. ತಕ್ಷಣ ಸಲಕರಣೆಯನ್ನು ಕಳಚಿ ಇನ್ನೊಂದು ಮರಕ್ಕೆ ಜೋಡಿಸುವ ಸರಳತೆ.


                 ಕಿರಣ್ ಹೇಳುತ್ತಾರೆ, ಮರದ ಗಾತ್ರಕ್ಕೆ ಹೊಂದಿಸಿಕೊಳ್ಳುವಂತೆ ಮಾಡುವ ಸಿಸ್ಟಮ್ ಇದೆ. ಚೌಕಟ್ಟಿನ ಸ್ಟೀಲು ಪಟ್ಟಿಗಳು, ಸ್ಪ್ರಿಂಗುಗಳು, ಸೆಲ್ಫ್ ಲಾಕಿಂಗ್ ಫಿನ್ಗಳು, ರಬ್ಬರ್ ಬುಶ್ಗಳು ನೈಲಾನ್ ಪಟ್ಟಿ ಆಸನ, ನೈಲನ್ ಬೆಲ್ಟ್ಗಳು. ಈ ಕಚ್ಚಾವಸ್ತುಗಳಲ್ಲಿ ತಯಾರಾಗುವ ಉಪಕರಣದ ಗುಣಮಟ್ಟದೊಂದಿಗೆ ರಾಜಿಯಿಲ್ಲ. ಎನ್ನುವ ಕಿರಣ್, "ಬೆಲೆ ಹತ್ತುಸಾವಿರದೈನೂರು ರೂಪಾಯಿ ಅಂದಾಗ ಹೆಚ್ಚಾಯಿತು ಅನ್ನಿಸುತ್ತೆ. ಆದರೆ ಉಪಕರಣಕ್ಕೆ ಕಳಪೆ ಕಚ್ಚಾವಸ್ತು ಬಳಸಿ ದರ ಕಡಿಮೆ ಮಾಡಿದೆ ಎಂದಿಟ್ಟುಕೊಳ್ಳಿ.  ಮರ ಏರಿ ಇಳಿಯುವಷ್ಟರದ ತನಕ ಏರಿದವರ ಆಯುಷ್ಯಕ್ಕೆ ನಾನು ಜವಾಬ್ದಾರಿಯಲ್ವಾ. ಅದರೊಂದಿಗೆ ನಾನ್ಯಾಕೆ ಆಟವಾಡಲಿ?" ಎನ್ನುತ್ತಾರೆ. ಕಿರಣ್ ತೀರ್ಥಹಳ್ಳಿ  ತಾಲೂಕಿನ ಕೋಣಂದೂರು ಸನಿಹದ ಮಲ್ಲೇಸರದವರು. ಓದಿದ್ದು ಡಿಪ್ಲೋಮಾ. ಕೃಷಿಯಲ್ಲಿ ಹೊಸತನ್ನು ಹುಡುಕುವ ಜಾಯಮಾನ. ತನ್ನ ತೋಟದಲ್ಲೇ ಪ್ರಥಮ ಪ್ರಯೋಗ.


                  ಬೇಸಿಗೆಗೆ ಓಕೆ, ಮಳೆಗಾಲಕ್ಕೆ ಬಳಕೆ ಕಷ್ಟವಲ್ಲವೇ? ಬಹುತೇಕ ಕೃಷಿಕರ ಪ್ರಶ್ನೆ. ಮಳೆಗಾಲದಲ್ಲಿ ಮರ ಜಾರುತ್ತದೆ. ಚೌಕಟ್ಟಿನಲ್ಲಿರುವ ರಬ್ಬರ್ ಬುಶ್ ಸಲಕರಣೆಯ ಪ್ರಧಾನಾಂಶ. ಅದಕ್ಕೆ ಗೋಣಿ ನಾರನ್ನು ಸುತ್ತಿದರೆ ಸುಲಭದಲ್ಲಿ ಜಾರದು. ಹೆಚ್ಚು ಮಳೆ ಬೀಳುವ ನಮ್ಮೂರಿನ ಅಡಿಕೆ ಮರಗಳಿಗೆ ಮಳೆಗಾಲದಲ್ಲಿ ಏರಿದ್ದೇನೆ. ಹೇಳುವಂತಹ ಸಮಸ್ಯೆ ಬಂದಿಲ್ಲ. ಬೇಸಿಗೆಯಲ್ಲಿ ಸರಸರನೆ ಏರುವಂತಹ ಹುಮ್ಮನಸ್ಸು ಮಳೆಗಾಲದಲ್ಲಿ ಬೇಡ. ಸ್ವಲ್ಪ ಜಾಗ್ರತೆ ವಹಿಸಿದರೆ ಕಷ್ಟವಲ್ಲ. ರಬ್ಬರ್ ಬುಶ್ಶಿನ ಬದಲಿಗೆ ಮೆಟಲಿನದು ಮಾಡಬಹುದೇನೋ ಮೊದಲಾದ ಸೂಕ್ಷ್ಮ ವಿಚಾರಗಳನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ.

                 ಕೃಷಿ ಯಾಂತ್ರೀಕರಣದ ವಿಚಾರ ಬಂದಾಗಲೆಲ್ಲಾ ಸಬ್ಸಿಡಿಗಳ ಮಾತು ಬಾರದೆ ಮುಂದೆ ಹೋಗದು. ಈ ಸಲಕರಣೆಯೂ ಸಬ್ಸಿಡಿಗೆ ಸಿಗುವ ಹಾಗೆ ಮಾಡಬಹುದಲ್ಲಾ..? ಸಹಜ ಪ್ರಶ್ನೆ. ಉಪಕರಣದ ದರವನ್ನು ದುಪ್ಪಟ್ಟು ಮಾಡಿ, ಅದರಲ್ಲಿ ಐವತ್ತು ಶೇಕಡಾ ಸಬ್ಸಿಡಿ ಅಂತ ತೆಕ್ಕೊಳ್ಳುವ ಬದಲು, ಆ ಬೆಲೆಗೆ ನಾನೇ ಒದಗಿಸುತ್ತೇನಲ್ಲಾ! ಜತೆಗೆ ಸಬ್ಸಿಡಿ ಫೈಲುಗಳ ಹಿಂದೆ ಓಡುವ ಕೆಲಸವೂ ತಪ್ಪಿತು. ಇಲಾಖಾ ಮೇಜುಗಳ ಮುಂದೆ ಗಂಟೆಗಟ್ಟಲೆ ಸಮಯ ಕೊಲ್ಲುವ ಸಂದರ್ಭವೂ ಬರುವುದಿಲ್ಲ. ಸಬ್ಸಿಡಿ ಬೇಕೇ ಬೇಕು ಎಂದಾರೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೃಷಿಕರೇ ಒತ್ತಾಯಿಸಬೇಕು ಅಂದಾಗ ಸಬ್ಸಿಡಿಯ ಮಾತು ಮೌನವಾಯಿತು!


                  ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ವಿಟ್ಲದ cpcri ರ್ತೋಟದಲ್ಲಿ ಎಪ್ರಿಲ್ ಮೊದಲ ವಾರ, ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಎರಡನೇ ವಾರದ ಪ್ರಾತ್ಯಕ್ಷಿಕೆ. ಫೇಸ್ಬುಕ್ಕಿನ ಅಗ್ರಿಕಲ್ಚರಿಸ್ಟ್ ಗುಂಪು ಪ್ರಾತ್ಯಕ್ಷಿಕೆಯ ಹೊಣೆ ಹೊತ್ತಿತ್ತು. ಬೆಳ್ಳಾರೆ ಕೃಷಿಕರ ವೇದಿಕೆಯ ಹೆಗಲೆಣೆ.


               ಇನ್ನೂರೈವತ್ತಕ್ಕೂ ಮಿಕ್ಕಿದ ಅಸಕ್ತರಿಗೆ ಆಮಂತ್ರಣ ಪತ್ರ ನೀಡಿಲ್ಲ. ಜಾಹೀರಾತು ಪ್ರಕಟಿಸಿಲ್ಲ. ಅಗ್ರಿಕಲ್ಚರಿಸ್ಟ್ ಗುಂಪಿನೊಳಗೆ ಸಂವಹನಗೊಂಡ ವಿಚಾರ ಕೃಷಿಕರ ಮಧ್ಯೆ ಮಾಹಿತಿ ಹಂಚಿತ್ತು. ಹಾದಿ ತಪ್ಪಿಸುತ್ತಿದೆ ಎಂಬ ಆರೋಪವನ್ನಂಟಿಸಿಕೊಂಡ ಫೇಸ್ಬುಕ್ಕನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಂಡರೆ ನಿಜಕ್ಕೂ ಅದೊಂದು ಸಶಕ್ತ ಮಾಧ್ಯಮ. ಬರೇ ಲೈಕ್ಗಳಿಗೆ ಅಂಟಿಕೊಳ್ಳದೆ, ಕಮೆಂಟಿಗಾಗಿ ಕಮೆಂಟನ್ನು ಬರೆಯುವ ಚಾಳಿಯಿಂದ ದೂರವಿದ್ದ ಬಹುತೇಕರಿಗೆ ಗುಂಪಿನ ಚಟುವಟಿಕೆ ಆಪ್ತವಾಗಿದೆ.


               ಸೀಪಿಸಿಆರ್ಐ ಪ್ರಾತ್ಯಕ್ಷಿಕೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭರು ಉಪಕರಣದ ಮೂಲಕ ತಾನೇ ಸ್ವತಃ ಅಡಿಕೆ ಮರವೇರಿ, ತನಗೆ ಅರುವತ್ತೆರಡು ವರುಷವಾಯಿತು ಎನ್ನುವುದನ್ನು ಮರೆತರು! ಸಲೀಸಾಗಿ ಏರುವ ಉಪಕರಣದ ಕ್ಷಮತೆಯನ್ನು ಶ್ಲಾಘಿಸಿದರು. ಅಡಿಕೆ ಸಂಸ್ಥೆಗಳು ಕನಿಷ್ಠ ಇಂತಹ ಪ್ರೋತ್ಸಾಹವನ್ನು ಕಿರಣರಿಗೆ ನೀಡಿದರೆ ಅವರ ಉಪಕರಣ ಕೃಷಿಕರ ಜಗಲಿಯೇರಬಹುದು. ಪ್ರಕೃತ ಅಡಿಕೆ ಮರವೇರುವ ಸರಳ ಸಾಧನೆಕ್ಕೆ ಕೃಷಿಕರಿಗೆ ಅಂಗೀಕಾರ ಸಿಕ್ಕಿದೆ.


              ತೆಂಗು ಅಭಿವೃದ್ಧಿ ಮಂಡಳಿಯು ಮೂರು ವರುಷದಿಂದ 'ಫ್ರೆಂಡ್ಸ್ ಆಫ್ ಕೊಕೊನಟ್ ಟ್ರೀಸ್' ಹೆಸರಿನ ಯೋಜನೆಯಡಿ ದೇಶದಾದ್ಯಂತ 21483 ಮಂದಿಗೆ ತೆಂಗು ಮರವೇರಲು ತರಬೇತಿ ನೀಡಿದೆ! ನಾವೂ ಚಿಕ್ಕ ರೀತಿಯಲ್ಲಾದರೂ ಅಡಿಕೆ ಮರ ಏರುವ ತರಬೇತಿಯನ್ನು ಯಾಕೆ ನಡೆಸಬಾರದು - ಎನ್ನುವ ಪ್ರಶ್ನೆಯನ್ನು ಅಡಿಕೆ ಪತ್ರಿಕೆಯ ಸಂಪಾದಕೀಯದಲ್ಲಿ ಶ್ರೀ ಪಡ್ರೆಯವರು ಮುಂದಿಟ್ಟಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸುವ ಅನಿವಾರ್ಯವಿದೆ.