Tuesday, December 23, 2014

ಕೃಷಿ ಗೋಷ್ಠಿಗಳಿಗೆ ಕೃಷಿಕರು ಬೇಕಾಗಿದ್ದಾರೆ!

                ಅದೊಂದು ಗುಲಾಬಿ ಕೃಷಿಯ ವಿಚಾರಗೋಷ್ಠಿ. ನೂರಕ್ಕೂ ಮಿಕ್ಕಿ ಮಹಿಳೆಯರ ಉಪಸ್ಥಿತಿ. ಗುಲಾಬಿ ಕೃಷಿಯಿಂದ ಮಾರುಕಟ್ಟೆ ತನಕದ ಮಾಹಿತಿ ಪ್ರಸ್ತುತಿ. ಸುಮಾರು ಒಂದು ಗಂಟೆಯ ಕಂಠತ್ರಾಣದ ಪರಿಣಾಮ ನೋಡೋಣ ಎಂದು 'ನಿಮ್ಮಲ್ಲಿ ಎಷ್ಟು ಮಂದಿ ಹೂವಿನ ಕೃಷಿ ಮಾಡ್ತೀರಿ,' ಎಂದು ಪ್ರಶ್ನಿಸಿದೆ. ಯಾರೂ ಸ್ಪಂದಿಸಲಿಲ್ಲ. ಕೊನೆಗೆ ತಿಳಿಯಿತು, ಇವರಾರಿಗೂ ಕೃಷಿ ಮಾಡಲು ಜಾಗವಿಲ್ಲ. ಆಯೋಜಕರ ವಿನಂತಿಯಂತೆ ಆಗಮಿಸಿದ್ದಾರೆ. ಹುಬ್ಬಳ್ಳಿಯ ಜಯಶಂಕರ್ ತಮಗಾದ ಕಸಿವಿಸಿಯನ್ನು ಹಂಚಿಕೊಂಡರು.
               ಗುಲಾಬಿ ಕೃಷಿಯ ಮಾಹಿತಿ ಬೆಳೆಯುವವರಿಗೆ ಸಹಾಯಿ. ಮಾಹಿತಿಯನ್ನು ಅನುಷ್ಠಾನ ಮಾಡುವ ಕೃಷಿಕರೇ ಗೋಷ್ಠಿಗೆ ಬರಬೇಕೇ ವಿನಾ ಇತರರಿಗದು ಹೊಂದದು. ಕೃಷಿಕರೇ ಇಲ್ಲದೆ ಮೇಲೆ ಯಾರಿಗಾಗಿ? ಬಹುತೇಕ ಆಯೋಜಕರಲ್ಲಿ 'ಸಭಾಭವನ ತುಂಬಿದರೆ ಸಾಕು' ಎನ್ನುವ ಮನೋಭಾವ. ಸ್ಮರಣಿಕೆ, ಹೂ, ಹಾರಗಳ ಭರಾಟೆಯಲ್ಲಿ ಜಯಶಂಕರರ ಒಂದು ಗಂಟೆಯ ಮರುಭರ್ತಿ ಹೇಗೆ? ಇಂತಹ ಕಾರ್ಯಕ್ರಮದಿಂದ ಏನು ಪ್ರಯೋಜನ? ಊಟೋಪಚಾರ, ಪ್ರಚಾರ, ಆಮಂತ್ರಣ, ಸಭಾ ಕಲಾಪ.. ಹೀಗೆ ಸಾವಿರಾರು ರೂಪಾಯಿ ಖರ್ಚು. ಪರಿಣಾಮ? ಕೃಷಿ ಕ್ಷೇತ್ರದಲ್ಲಿ ನಡೆಯುವ ಬಹುತೇಕ ಕೃಷಿ ಉತ್ಸವ, ಮೇಳಗಳ ಹಣೆಬರಹವಿದು.
              ಎರಡು ವರುಷಗಳ ಹಿಂದೆ ಕಾಫಿನಾಡಲ್ಲೊಂದು ಹಲಸು ಮೇಳ. ಪವರ್ ಪಾಯಿಂಟ್ ಸಿದ್ಧತೆಯೊಂದಿಗೆ ಮುನ್ನಾ ದಿನವೇ ಲಗ್ಗೆ ಹಾಕಿದ್ದೆ. ಮರುದಿವಸ ಸಮಯಕ್ಕೆ ಸರಿಯಾಗಿ ಹಾಜರಿದ್ದೆ. ರಕ್ತದೊತ್ತಡ ಏರಿಸಿಕೊಂಡ ಒಂದಿಬ್ಬರು ಸಿಬ್ಬಂದಿಗಳು ಮೇಲಧಿಕಾರಿಗಳನ್ನು  ಕಾಯುತ್ತಿದ್ದರು.  ಒಂಭತ್ತೂವರೆಯ ಕಾರ್ಯಕ್ರಮ ಹನ್ನೊಂದಕ್ಕೆ ಶುರುವಾಯಿತು. ಸಂಬಂಧಪಡದ ಗಣ್ಯರು, ಹಲಸಿನ ಹಣ್ಣನ್ನು ತಿನ್ನದ ಮಹಾನುಭಾವರು, ರಾಜಕೀಯ ಅಂಟಿಸಿಕೊಂಡವರಿಂದ ಕೊರೆತವೋ ಕೊರೆತ. ಉದ್ಘಾಟನೆ ಮುಗಿಯುವಾಗಲೇ ಊಟದ ತಟ್ಟೆ ಸದ್ದುಮಾಡುತ್ತಿತ್ತು.
                   ವಿಚಾರ ಗೋಷ್ಠಿಯ ಶುಭಚಾಲನೆಗೆ ಉದ್ಘೋಷಕರಿಂದ ಹಸಿರು ನಿಶಾನೆ. ಸಭಾಭವನದಲ್ಲಿದ್ದವರು  ಊಟದ ಟೇಬಲಿನ ಮುಂದೆ ಕ್ಯೂ ನಿಂತಿದ್ದರು. ಸಂಘಟಕರ, ಸಂಪನ್ಮೂಲ ವ್ಯಕ್ತಿಗಳ ಮೇಲಿನ ಗೌರವದಿಂದ ಉಪಸ್ಥಿತರಿದ್ದ ಹತ್ತಾರು ಮಂದಿ ಆಕಳಿಸುತ್ತಾ ಗೋಷ್ಠಿಗೆ ಸಾಕ್ಷಿಯಾದರು. ಊಟ ಮುಗಿಸಿ, ವೀಳ್ಯ ಜಗಿಯುತ್ತಾ, ಹರಟುತ್ತಾ ಬಹ್ವಂಶ ಕರಗಿಹೋದರು. ಗೋಷ್ಠಿ ನಡೆಯುತ್ತಾ ಇರುವಾಗ  ಸಮಾರೋಪಕ್ಕೆ ತರಾತುರಿ. ಮೂರು ದಿವಸದಿಂದ ನನ್ನಂತೆ ತಯಾರಿ ನಡೆಸಿ ಬಂದಿದ್ದ  ಸಂಪನ್ಮೂಲ ವ್ಯಕ್ತಿಗಳ ಸಮಯವು ಸಂಘಟಕರ ಅವಜ್ಞೆಯಿಂದಾಗಿ ಟುಸ್ಸಾಯಿತು!
                 ಬಹಳ ದೂರದಿಂದ ಆಗಮಿಸಿ ಹಲಸಿನ ಕುರಿತು ಉಪಯುಕ್ತವಾದ ಮಾಹಿತಿ ನೀಡಿದ್ದಾರೆ. ಇದು ಕೃಷಿಕರ ಅಭಿವೃದ್ಧಿಗೆ ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ,' ಉದ್ಘೋಷಕರ ತೀರ್ಪು ಆಲಿಸುತ್ತಿದ್ದಂತೆ  ಚೂರಿಯಿಂದ ಇರಿದ ಅನುಭವ. ಸಭಾಭವನದಲ್ಲಿದ್ದ ಹತ್ತೋ ಇಪ್ಪತ್ತೋ ಮಂದಿ ಇದ್ದರಲ್ಲಾ, ಅವರೆಲ್ಲಾ ಕೃಷಿಕರಲ್ಲ. ಮೇಳದ ಅನ್ಯಾನ್ಯ ವಿಭಾಗಗಳನ್ನು ನಿಭಾಯಿಸುತ್ತಿದ್ದವರಷ್ಟೇ.
                  ಇಷ್ಟು ಕಾರ್ಯಕ್ರಮಕ್ಕೆ ಲಕ್ಷಗಟ್ಟಲೆ ವೆಚ್ಚ! ಆ ಮೇಳದ ಉದ್ಘಾಟನೆಯಲ್ಲಿ ಭಾಗವಹಿಸಿ ಹೊಟ್ಟೆ ತುಂಬಾ ಉಂಡುಹೋಗಿದ್ರಲ್ಲಾ, ಅವರೆಲ್ಲಾ ಯಾರು? ಇವರು ಗೋಷ್ಠಿ ಬಿಡಿ, ಸಮಾರೋಪದಲ್ಲೂ ಪತ್ತೆ ಇಲ್ಲವಲ್ಲಾ. ವಾರದ ಬಳಿಕ ಸನಿಹದ ಕೃಷಿಕರೊಬ್ಬರು ಮಾತಿಗೆ ಸಿಕ್ಕರು - ಸಂಘಟಕರಿಗೆ ಮಾತ್ರ ಮೇಳದ ಅರಿವಿತ್ತು.  ಕೃಷಿಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಪ್ರಚಾರವಿರಲಿಲ್ಲ. ರಸ್ತೆ ಬದಿಯಲ್ಲಿ ದೊಡ್ಡ ದೊಡ್ಡ ಪ್ಲೆಕ್ಸಿಗಳನ್ನು ತೂಗಿಸಿದರೆ ಏನೂ ಪ್ರಯೋಜನ? 
              ಸರಕಾರಿ ಪ್ರಣೀತ ಕಲಾಪಗಳ ಕತೆನೂ ಇಷ್ಟೇನೇ. ಉದ್ಘಾಟನೆ, ಸಮಾರೋಪ, ಕಿರು ಪುಸ್ತಕ ಬಿಡುಗಡೆ.. ಈ ತ್ರಿದೋಷಗಳು ವಿಚಾರಗೋಷ್ಠಿಗಳಿಗೆ ದೊಡ್ಡ ಶಾಪ. ಇವು ಬೇಡವೆಂದಲ್ಲ, ಕಡಿಮೆ ಅವಧಿಯಲ್ಲಿ ಚೊಕ್ಕವಾಗಿ ಮಾಡಿ ವಿಷಯಕ್ಕೆ ನ್ಯಾಯ ಸಲ್ಲಿಸುವ ಎಷ್ಟು ಕಾರ್ಯಕ್ರಮಗಳು ಬೇಕು? ಶಿಷ್ಠಾಚಾರವನ್ನು ಬಿಡಲಾಗದ ಒದ್ದಾಟ, ಚಡಪಡಿಕೆ. ಆಹ್ವಾನಿಸಿದ ಕೃಷಿಕರಿಗೆ ನೋವಾದರೂ ಪರವಾಗಿಲ್ಲ,  ವರಿಷ್ಠರಿಗೆ ಎಲ್ಲಿ ನೋವಾಗಿಬಿಡುತ್ತದೋ ಎಂಬ ಭಯ. ಕೃಷಿಕಪರ ಮನಸ್ಸಿನ ಅಧಿಕಾರಿಗಳನ್ನೂ ಬಿಡದ   ಶಿಷ್ಠಾಚಾರದ ವೈರಸ್.
               ಗೋಷ್ಠಿಗಳಿಗೆ ಪ್ರಚಾರ ನೀಡಿ, ಕೃಷಿಕರನ್ನು ಸಂಪರ್ಕಿಸಿ, ಅವರನ್ನು ಗೌರವದಿಂದ ಆಹ್ವಾನಿಸುವ, ಗೌರವಿಸುವ ಸಂಘಟಕರು ಸಾಕಷ್ಟಿದ್ದಾರೆ. ಇಲ್ಲೂ 'ಬುದ್ಧಿಪೂರ್ವಕವಾಗಿ' ಎಡವಟ್ಟು ಆಗಿಬಿಡುತ್ತದೆ ಸಂಪನ್ಮೂಲ ವ್ಯಕ್ತಿಗಳು ಅನ್ಯಭಾಷಿಕರವರಾಗಿದ್ದರೆ ಅವರ ಪವರ್ ಪಾಯಿಂಟ್ ಪ್ರಸ್ತುತಿ, ಭಾಷಣಗಳು ಬಹುತೇಕರಿಗೆ ಅರ್ಥವಾಗದು. ಕೆಲವೆಡೆ ಕನ್ನಡಕ್ಕೆ ಭಾಷಾಂತರಿಸುವ ವ್ಯವಸ್ಥೆ ಇದ್ದರೂ ಹೊತ್ತು ಮೀರಿರುತ್ತದೆ. ಆಗ ಚಿತ್ತಸ್ಥಿತಿ ಅಸ್ವಸ್ಥವಾಗಿರುತ್ತವೆ!
                 ಅಕಾಡೆಮಿಕ್ ಉದ್ದೇಶದಿಂದ ಸಿದ್ಧಪಡಿಸಿದ ಪವರ್ಪಾಯಿಂಟ್ ಪ್ರಸ್ತುತಿಗಳಲ್ಲಿ ಸೆಂಟಿಮೀಟರ್ ಲೆಕ್ಕದಲ್ಲಿ ಅಡಿಕೆಯ ಗಾತ್ರ, ಕೊಕ್ಕೋದ ಬೀಜದ ಅಳತೆ, ಗ್ರಾಂಗಳಲ್ಲಿ ಅಡಿಕೆಯ ತೂಕ, ಮರಗಳ ಲೆಕ್ಕಾಚಾರ..ಗಳೇ ತುಂಬಿರುತ್ತವೆ. ಕೃಷಿಕರಿಗೆ ಇದು  ಅರ್ಥವಾದರೂ ತಮ್ಮ ಅನುಭವಕ್ಕೆ ನಿಲುಕದ್ದರಿಂದ ಆಸಕ್ತಿ ಕಳೆದುಕೊಳ್ಳುತ್ತಾರೆ. ಮಧ್ಯೆ ವಿತರಿಸುವ ಚಹ, ಬಿಸ್ಕತ್ತಿನಿಂದಲೂ ಆಸಕ್ತಿ ಕುದುರದು! ವಿಜ್ಞಾನಿಗಳ ಭಾಷೆ-ಭಾವ ಕೃಷಿಕರಿಗೆ ಅರ್ಥವಾಗದು. ಹಾಗೆಂದು ಸಂವಹನ ದೃಷ್ಟಿಯಿಂದ ಕೃಷಿಕರ ಬಾಷೆಯನ್ನೂ ಕಲಿಯುವ ಅಗತ್ಯವಿದೆ. ಆಗ ಮಂಡಿಸುವ ವಿಚಾರಗಳು ಅರ್ಥವಾಗುತ್ತವೆ. ಅನುಷ್ಠಾನ ಯೋಗ್ಯವೋ, ಅಲ್ವೋ ಎಂದು ತನ್ನ ಮಿತಿಯಲ್ಲಿ ನಿರ್ಧರಿಸಲು ಸಹಯವಾಗುತ್ತವೆ. ಅಪ್ಡೇಟ್ ಆಗದ ಪವರ್ಪಾಯಿಂಟ್ಗಳನ್ನು ಪದೇ ಪದೇ ತೋರಿಸುವ ಜಾಣರೂ ಇದ್ದಾರೆನ್ನಿ.
               ಗೋಷ್ಠಿಗಳ ಆಯೋಜನೆಯಲ್ಲಿ ಪ್ರೇಕ್ಷಕರ ಆಸಕ್ತಿ ಏನು ಎನ್ನುವುದು ಮುಖ್ಯ. ಪ್ರಸ್ತುತಿಯಾಗುವ ವಿಷಯ, ಆಸಕ್ತಿ - ಇವರೆಡೂ ಮಿಳಿತವಾಗದಿದ್ದರೆ ಕಲಾಪವೇ ಗುಳುಂ. ಸಭಾಭವನ ತುಂಬಿದೆ ಎಂದ ಮಾತ್ರಕ್ಕೆ ಒತ್ತಾಯದ ಮಾಘಸ್ನಾನವೂ ಸಮಂಜಸವಲ್ಲ. ಯಾವ ವಿಚಾರದ ಸುತ್ತ ಗೋಷ್ಠಿ ಏರ್ಪಸಿರುತ್ತೇವೋ, ಅದರಲ್ಲಿ ಆಸಕ್ತಿಯಿರುವ ಕೃಷಿಕರನ್ನಷ್ಟೇ ಆಹ್ವಾನಿಸಿದರೆ ಉದ್ದೇಶ ಸಾರ್ಥಕವಾಗುತ್ತದೆ. ಇಂತಹ ವ್ಯವಸ್ಥೆ ಮಾಡಿಕೊಳ್ಳಲು ತ್ರಾಸವಾದರೂ ಅನಿವಾರ್ಯ.
                ಪ್ರತಿಷ್ಠಿತ ಸಂಸ್ಥೆಗಳು ತಮ್ಮ ಮಹಾಸಭೆ, ಪ್ರದರ್ಶನ, ಬೆಳ್ಳಿ-ಚಿನ್ನದ ಹಬ್ಬಗಳನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳುವುದುಂಟು. ವಿಚಾರಗೋಷ್ಠಿಗಳೇ ಕಾರ್ಯಕ್ರಮದ ಜೀವಾಳ ಅಂತ ಮುಜುಗರವಾಗುವಷ್ಟೂ ಹೇಳುತ್ತಾರೆ. ಗೌಜಿ-ಗಮ್ಮತ್ತುಗಳ ಮಧ್ಯೆ ಗೋಷ್ಠಿಗಳು ನರಳುತ್ತಿರುತ್ತವೆ.  ಜತೆಗೆ ಜವಾಬ್ದಾರಿ ಹೊತ್ತ ವ್ಯಕ್ತಿಯೂ ನೋವಿಂದ ನರಳುವ ದೃಶ್ಯವನ್ನು ಹತ್ತಿರದಿಂದ ನೋಡಿದ್ದೇನೆ. ಪತ್ರಿಕೆಗಳಲ್ಲಿ  ಪೂರ್ಣಪುಟದ ಜಾಹೀರಾತು ಪ್ರಕಟವಾಗುತ್ತವೆ. ಅದರಲ್ಲಿ ಪದಾಧಿಕಾರಿಗಳ, ಅತಿಥಿಗಳ ಭಾವಚಿತ್ರಗಳು ಯಥೇಷ್ಟ.  ಉದ್ಘಾಟನೆ, ಸಮಾರೋಪ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿಚಾರಗಳು ಕಣ್ಣಿಗೆ ರಾಚುವಷ್ಟು ಮುದ್ರಿತವಾಗಿರುತ್ತವೆ. ಆದರೆ ಜಾಹೀರಾತಿನಲ್ಲಿ ಗೋಷ್ಠಿಗಳ ವಿವರಗಳಿಗೆ ಜಾಗವೇ ಇಲ್ಲ! ಗೋಷ್ಠಿಗಳಲ್ಲಿ ಆಯೋಜಕರ ಅನುಪಸ್ಥಿತಿಯೂ ದೊಡ್ಡ ವಿಪರ್ಯಾಸ.   
                 ಸರಕಾರದ ಮಟ್ಟದಲ್ಲಿ 'ರೈತ' ಎನ್ನುವ ಪದಪುಂಜ ಹೇಗೆ ಬಳಕೆಯಾಗುತ್ತದೋ, ಅದೇ ರೀತಿ ದೊಡ್ಡ ಸಮಾರಂಭಗಳಲ್ಲಿ 'ಕೃಷಿ ಗೋಷ್ಠಿ' ಎನ್ನುವುದು ಹೇಳಿಕೊಳ್ಳಲು ಇರುವ ವ್ಯವಸ್ಥೆಯಷ್ಟೇ. ಕೃಷಿ ಗೋಷ್ಠಿಯ ಇನ್ನೊಂದು ಸೋಲು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯಲ್ಲೂ ಆಗುವುದಿದೆ. 'ಇಂತಹವರ ಒತ್ತಾಯಕ್ಕೆ ನಾನು ಬಂದಿದ್ದೇನೆ' ಎನ್ನುವವರೂ ಇದ್ದಾರೆ. ಯಾರು ಯಾವ ವಿಷಯದಲ್ಲಿ ಪರಿಣತರೋ ಅಂತಹವರನ್ನು ಆಹ್ವಾನಿಸಿದರೆ ಸಂಘಟಕರಿಗೂ, ಕೃಷಿಕರಿಗೂ ಪ್ರಯೋಜನ.
ಕೃಷಿಕರ ಔದಾಸೀನ್ಯವೂ ಗೋಷ್ಠಿಗಳ ವಿಫಲತೆಗೆ ಮತ್ತೊಂದು ಕಾರಣ. ಗೋಷ್ಠಿ ನಡೆಯುವ ದಿನ, ವಿಷಯಗಳು ತಲುಪದಿರುವುದೇ ಹೆಚ್ಚು. ಒಂದು ವೇಳೆ ಎಲ್ಲವೂ ಗೊತ್ತಾಗಿದ್ದರೂ, ಅಲ್ಲಿಗೆ ಹೋಗಿ ಮಾಡುವುದೇನಿದೆ? ನಮ್ಮ ಅನುಭವದ ಮುಂದೆ ಅವೆಲ್ಲಾ ಏನು? ನಮಗೆ ಅವರು ಹೇಳಬೇಕಾಗಿಲ್ಲ... ಇಂತಹ ಮನಃಸ್ಥಿತಿಗಳೂ ಇಲ್ಲದಿಲ್ಲ. ತುಂಬಿದ ಕೊಡ ಎಂದೂ ತುಳುಕದು ಅಲ್ವಾ. ಮಾಹಿತಿಗಳು ಅಪ್ಡೇಟ್ ಆಗುವ ಕಾಲವಿದು. ಅನುಭವಕ್ಕೆ ವರ್ತಮಾನ ಸೇರಿಕೊಂಡರೆ ವೃತ್ತಿಯಲ್ಲಿ ಸುಭಗತೆ ಕಾಣುವುದಕ್ಕೆ ಸಾಧ್ಯ.
              ನಾಲ್ಕು ಅಡಿಕೆ ಗೊನೆ, ಕೊಕ್ಕೋ, ಬಾಳೆ, ಅಕ್ಕಿ ಮುಡಿ, ಗದ್ದೆ ಬೇಸಾಯದ ಸಲಕರಣೆಗಳು, ಜತೆಗೆ ಭೀಮ ಗಾತ್ರದ ಪ್ರೆಕ್ಸಿಗಳು.. ಇವಿಷ್ಟನ್ನು 'ಕೃಷಿ ಮೇಳ-ಉತ್ಸವ' ಎಂದು ಕರೆಯುವ ಚಾಳಿ ಬೇಕಾಗಿಲ್ಲ. ಬದಲಿಗೆ, ನಿಜವಾದ ಕೃಷಿಕರು ಉಪಸ್ಥಿತರಿರಲಿ. ಅವರನ್ನು ಗೌರವದಿಂದ ಕಾಣುವಂತಾಗಬೇಕು. ಆಹ್ವಾನಿಸಿದ ಸಂಪನ್ಮೂಲ ವ್ಯಕ್ತಿಗಳ ಅನುಭವದ ಮಾತಿಗೆ ಕಿವಿಗಳು ಸಾಕ್ಷಿಯಾಗಲಿ. ಕೃಷಿಕರ ಸಮಯಕ್ಕೂ ಬೆಲೆಯಿದೆ ಅಲ್ವಾ. ಹಸಿವು ನೀಗಲು ಊಟೋಪಚಾರ ಸಾಕು. ಕಾಂಚಾಣವೇ ನುಂಗುವ ಅದ್ದೂರಿತನದಿಂದ ಬರಿಗುಲ್ಲು-ನಿದ್ದೆಗೇಡು. ಕೃಷಿ ಕಾರ್ಯಕ್ರಮಗಳಿಗೆ 'ಜನ ಸೇರಿಸುವ' ಯತ್ನಕ್ಕಿಂತ 'ಜನರು ಬರುವಂತೆ ಮಾಡುವ' ಜಾಣ್ಮೆ ಮುಖ್ಯ.
 

Tuesday, November 18, 2014

ಕೆನ್ ಲವ್ ವ್ಯಕ್ತಿಯಲ್ಲ, ಒಂದು ಸಂಸ್ಥೆ!



               "ಕೃಷಿಯ ಆದಾಯ ವರ್ಧನೆ ಮಾಡದಿದ್ರೆ  ನಮ್ಮ ಮಕ್ಕಳನ್ನು ಕೃಷಿಯಲ್ಲಿ ಉಳಿಸಿಕೊಳ್ಳಲು ಅಸಾಧ್ಯ. ಮುಂದಿನ ಜನಾಂಗ ಕೃಷಿಯಲ್ಲಿ ಉಳಿಯಬೇಕಿದ್ದರೆ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡುವುದೊಂದೇ ದಾರಿ."
              ಹವಾಯಿಯ ಕೃಷಿಕ ಕೆನ್ ಲವ್ ಕನ್ನಾಡಿಗೆ ಬಂದು, ಕೃಷಿಕರನ್ನು ಭೇಟಿ ಮಾಡಿದಾಗ ಹೇಳಿದ  ಅನುಭವದ ಮಾತಿದು. ನವೆಂಬರ್ ಮೊದಲ ವಾರದಲ್ಲಿ ರಾಜಧಾನಿ, ಕರಾವಳಿ, ಕೇರಳದ ಕೆಲವು ತೋಟಗಳಿಗೆ ಸುತ್ತಿ ಕೃಷಿಕರೊಂದಿಗೆ ಮಾತನಾಡಿದರು. ಇಲ್ಲಿನ ಹಣ್ಣುಗಳ ವೈವಿಧ್ಯಗಳನ್ನು ನೋಡಿ ಅನುಭವ ಪಡೆದುಕೊಂಡರು. ಕಾರ್ಮಿಕ ಸಮಸ್ಯೆ, ಯುವಕರ ವಲಸೆ, ಅಸ್ಥಿರ ಮಾರುಕಟ್ಟೆಯಂತಹ ಸಂಕಟಗಳು ಭಾರತ ಮಾತ್ರವಲ್ಲ ಹವಾಯಿಯಲ್ಲೂ ಕೃಷಿಕರ ನಿದ್ದೆಗೆಡಿಸಿತ್ತು.
                ಇಲ್ಲಿನ ಏಕಬೆಳೆ ಪದ್ಧತಿಯನ್ನು ವೀಕ್ಷಿಸಿದ ಕೆನ್, ಏಕಬೆಳೆಯಿಂದ ಒಮ್ಮೆಗೆ ಲಾಭ ತರಬಹುದೇನೋ. ಆದರೆ ಕೃಷಿ ಯಶ ಕಾಣಬೇಕಾದರೆ ಬೆಳೆಯಲ್ಲಿ ವೈವಿಧ್ಯಗಳನ್ನು ತರಲೇಬೇಕು. ತಂತಮ್ಮ ಪ್ರದೇಶಕ್ಕೆ ಯಾವ್ಯಾವ ಬೆಳೆಗಳು ಹೊಂದಬಹುದೆನ್ನುವುದನ್ನು ಅರಿತು ಕೃಷಿ ಮಾಡಿದರೆ ಒಳ್ಳೆಯದು, ಎಂದರು.
              ಒಂದು ಕಾಲಘಟ್ಟದಲ್ಲಿ ಕೃಷಿ ಸಂಕಟಗಳು ಹವಾಯಿಯನ್ನು ತಲ್ಲಣಗೊಳಿಸಿತ್ತು. ಅಲ್ಲಿನ ಕೋನಾ ಕಾಫಿ ಕೃಷಿಯು ಸಮಸ್ಯೆಗಳಿಂದ ನಲುಗಿದಾಗ ಕೆನ್ ಮುಂದಾಳ್ತನದಲ್ಲಿ ಕೃಷಿಕರ ತಂಡವು ಪರಿಹಾರವನ್ನು ಕಂಡುಕೊಳ್ಳಲು ಹೆಜ್ಜೆಯೂರಿತು. ಕೃಷಿಯ ಸಂಕಟಗಳಿಗೆ ಸರಕಾರವನ್ನು ಯಾಚಿಸಿದರೆ ಪ್ರಯೋಜನವಾಗದು. ಕೃಷಿಕರೇ ಪರಸ್ಪರ ಒಟ್ಟಾಗಿ ಯೋಜನೆಯನ್ನು ರೂಪಿಸಿಕೊಳ್ಳಬೇಕೆಂಬುದು ಕೆನ್ ಪ್ರತಿಪಾದನೆ.
                ಹವಾಯಿ ಹಣ್ಣುಗಳ ವೈವಿಧ್ಯಕ್ಕೆ ಖ್ಯಾತಿ. ಕೆನ್ ಹಣ್ಣು ಬೆಳೆಗಾರ. ಕಳೆದ ಶತಕದ ಆರಂಭದಲ್ಲಿ ರಫ್ತು ಮಾಡುವ ಅವಕಾಡೋದಲ್ಲಿ  (ಬೆಣ್ಣೆ ಹಣ್ಣು)  ಕಂಡು ಬಂದ ಹಣ್ಣುಹುಳವು ರಫ್ತು ಉದ್ಯಮಕ್ಕೆ ತಿಲಾಂಜಲಿ ನೀಡಿತು. ಈಗ ಈ ದ್ವೀಪ ಬೆಳೆಯುವ ಯಾವುದೇ ತಾಜಾ ಹಣ್ಣನ್ನೂ ಹೊರಗೆ ಒಯ್ಯುವುದು ಕಾನೂನು ರೀತ್ಯಾ ಅಪರಾಧ! ಕಣ್ಣೆದುರಿನಲ್ಲಿ ಯಥೇಷ್ಟ ಹಣ್ಣುಗಳಿದ್ದರೂ ಮಾರುಕಟ್ಟೆ ಮಾಡಲು ಅಸಾಧ್ಯವಾದ ಸನ್ನಿವೇಶ. ಆಮದು ಹಣ್ಣುಗಳತ್ತ ವ್ಯಾಪಾರಿಗಳ ಚಿತ್ತ. ಮಾರಾಟ ಅವಕಾಶಗಳಿಗೆ ಇಳಿಲೆಕ್ಕ.
             ಪರಿಣಾಮ, ಸ್ಥಳೀಯ ತಳಿಗಳು ಕಣ್ಮರೆಯಾದುವು. ನೂರಕ್ಕೂ ಮಿಕ್ಕಿ ಬಾಳೆ ವೈವಿಧ್ಯಗಳಿದ್ದುವು. ಈಗದು ಐವತ್ತೂ ಮೀರದು. ರೈತರಿಗೂ ಆಸಕ್ತಿ ಕುಗ್ಗಿತು. ಕಂಪೆನಿಗಳು ನೀಡುವ ಹಣ್ಣುಗಳಿಗೆ ಕೈಒಡ್ಡಬೇಕಾದ ಸ್ಥಿತಿ. ಬೆಳೆದ ಹಣ್ಣುಗಳು ಮಣ್ಣಲ್ಲಿ ಮಣ್ಣಾಗಿ ಹೋಗುವುದನ್ನು ನೋಡುವ ದಾರುಣ ಸ್ಥಿತಿ.
            ಸ್ಥಳೀಯ ಮಾರುಕಟ್ಟೆ ಸೃಷ್ಟಿ, ಕೃಷಿಕರಿಗೆ ಮತ್ತೆ ಒಲವು ಮೂಡಿಸುವ ಯತ್ನ - ಇವೆರಡೇ ಮುಂದಿದ್ದ ಆಯ್ಕೆ. ಕಳೆದುಕೊಂಡಿರುವ ಹಣ್ಣುಗಳ ಪತ್ತೆಗೆ ಮೊದಲಾದ್ಯತೆ ನೀಡಿದರು. ವರ್ಷಪೂರ್ತಿ ವಿವಿಧ ಹಣ್ಣುಗಳನ್ನು ಪಡೆಯಲು ತಂತ್ರಗಳ ರೂಪುರೇಷೆ. ಕೃಷಿಕನೇ ಮಾರಾಟಗಾರನಾಗಬೇಕೆನ್ನುವ ಸಂಕಲ್ಪ. ಇವೆಲ್ಲವನ್ನೂ ಕ್ರೋಢಿಸಿಕೊಂಡು ಹವಾಯ್ ಪ್ರವಾಸೋದ್ಯಮ ಕೇಂದ್ರವಾಗಬೇಕೆನ್ನುವ ದೂರದೃಷ್ಟಿ.
              ಕೆನ್ ಯೋಚನೆಗಳಿಗೆ ಹೆಗಲೆಣೆಯಾಗುವ ತಂಡ ಸಿದ್ಧವಾಯಿತು. ಕಳೆದುಹೋಗಿರುವ ಹಣ್ಣುಗಳನ್ನು ಪಟ್ಟಿ ಮಾಡಿ ಮತ್ತೆ ತೋಟಕ್ಕೆ ತರುವ ಯೋಚನೆಗೆ ಚಾಲನೆ ಕೊಟ್ಟರು. ವರುಷದ ಎಲ್ಲಾ ತಿಂಗಳುಗಳಲ್ಲಿ ಹಣ್ಣು ಪಡೆಯುವ '12 ಟ್ರೀಸ್ ಪ್ರಾಜೆಕ್ಟ್' ಅನುಷ್ಠಾನಿಸಿದರು. ಕೆನ್ ಸ್ವತಃ ಬೆಳೆಸಿ ತೋರಿಸಿದ ಬಳಿಕ ಕೃಷಿಕರಿಗೆ ನಂಬುಗೆ ಬಂತು. ಯೋಜನೆಯನ್ನು ಅನುಸರಿಸಿದರು.
              ಮಾರುಕಟ್ಟೆಯಲ್ಲಿ ರೈತನೇ ವ್ಯಾಪಾರಿ. ಅವರವರ ತೋಟದ ಹಣ್ಣುಗಳನ್ನು ಆಕರ್ಷಕ ನೋಟಗಳಲ್ಲಿ ಬಿಂಬಿಸುವ ಯತ್ನ. ಸೈನ್ಬೋಡರ್್ಗಳ ಮುದ್ರಣ. ಬೆಳೆ ವಿವಿರಗಳಿರುವ ಫಲಕ. ಒಂದೊಂದು ಹಣ್ಣುಗಳಿಗೂ ರೈತನದ್ದೇ ಬ್ರಾಂಡಿಗ್. ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಮಾರಿಹೋಗುತ್ತದೆ ಎನ್ನುವ ಧೈರ್ಯ ಬಂತು. ಕೃಷಿಗೆ ಮರಳಲು ಹುಮ್ಮಸ್ಸು ಹೆಚ್ಚಿತು.
ಲಾಂಗಾನ್, ರಂಬುಟಾನ್, ಜಂಬುನೇರಳೆ, ಅಬಿಯು, ಮೊಂಬಿನ್, ಇಪ್ಪತ್ತೈದಕ್ಕೂ ಮಿಕ್ಕಿದ ಬೆಣ್ಣೆಹಣ್ಣುಗಳ ತಳಿಗಳು, ಜಬೋಟಿಕಾಬಾ, ಫ್ಯಾಶನ್ಫ್ರುಟ್, ಸ್ಟಾರ್ಫ್ರುಟ್.. ಹೀಗೆ ಒಂದೊಂದೇ ಮಾರುಕಟ್ಟೆಯ ಜಗಲಿಯೇರಿದುವು. ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿದ್ದಾಗ, ಮೌಲ್ಯವರ್ಧನೆಯಿಂದ ಹೇಗೆ ದುಪ್ಪಟ್ಟು ಗಳಿಸಬಹುದೆನ್ನುವ ಅಧ್ಯಯನ. ತನ್ನ ಅಡುಗೆಮನೆಯಲ್ಲಿ ಉತ್ಪನ್ನಗಳನ್ನು ತಯಾರಿಸಿ, ಜನರಿಗೆ ರುಚಿಹತ್ತಿಸಿ, ಮಾರಾಟ ಮಾಡುವ ಯೋಚನೆ ಯಶವಾಯಿತು. ನೂರಕ್ಕೂ ಮಿಕ್ಕಿ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನವನ್ನು ಕೆನ್ ಅವರೊಬ್ಬರೇ ಮಾಡುತ್ತಾರೆ.
               ಪ್ರವಾಸಿ ತಾಣ, ಹೋಂ ಸ್ಟೇ, ರೈತ ಸಂತೆಗಳಲ್ಲಿ ಉತ್ಪನ್ನಗಳನ್ನು ಸಿಗುವಂತೆ ಮಾಡಿದರು. ಪ್ರವಾಸಿಗರು ಯಾವ ಉತ್ಪನ್ನವನ್ನು ಅಪೇಕ್ಷಿಸುತ್ತಾರೋ ಅದನ್ನು ಒದಗಿಸುವ ಕೃಷಿಕರ ಮಾರಾಟ ಜಾಲವನ್ನು ಸೃಷ್ಟಿಸಿದರು. ಕೆನ್ ಹೇಳುತ್ತಾರೆ, ಒಣ ಅಂಜೂರ, ಜೇನಿನಲ್ಲಿ ಹಾಕಿದ ಒಣ ಹಲಸಿನ ಹಣ್ಣು, ಚಾಕೋಲೇಟಿನಲ್ಲಿ ಅದ್ದಿನ ಹಲಸಿನ ಹಣ್ಣು, ಬಾಳೆಹಣ್ಣಿನ ಕೆಚಪ್, ವಿವಿಧ ಉಪ್ಪಿನಕಾಯಿಗಳಿಗೆ ಬೇಡಿಕೆ ಹೆಚ್ಚು. ಮನೆಯ ಉತ್ಪನ್ನಗಳನ್ನು ಗ್ರಾಹಕರು ಇಷ್ಟ ಪಡುತ್ತಾರೆ. ಉತ್ಪನ್ನಗಳ ರುಚಿ ತೋರಿಸಿ ಗ್ರಾಹಕರನ್ನು ಸೆಳೆಯುತ್ತೇವೆ. ಅವರಿಗೆ ಇಷ್ಟವಾದರೆ ಮಾರಾಟ ಸಲೀಸು. ಮತ್ತೆ ಅವರೇ ಹುಡುಕಿ ಬರುತ್ತಾರೆ.
               ಹೋಟೆಲಿನ ಬಾಣಸಿಗರನ್ನು ಭೇಟಿಯಾಗಿ ಸಂಘಟಿಸಿದರು. ಯಾವ ನಮೂನೆಯ ಹಣ್ಣುಗಳಿಗೆ, ಯಾವ ತಿಂಗಳಲ್ಲಿ ಬೇಡಿಕೆಯಿದೆ ಎನ್ನುವ ಮಾಹಿತಿ ಸಂಗ್ರಹಿಸಿ ಅದರಂತೆ ಪೂರೈಸಿ ಮಾರಾಟ ಕೊಂಡಿ ಗಟ್ಟಿಯಾಗಿಸಿದರು. ಹೀಗೆ ಕೃಷಿಕರನ್ನು ಕೃಷಿಯಲ್ಲಿ ಉಳಿಸಲು ಕೆನ್ ಮಾಡಿದ ಕೆಲಸಗಳು ಹಲವು ಮಂದಿ ದುಡಿಯುವ ಒಂದು ಕ್ರಿಯಾಶೀಲ ಸಂಸ್ಥೆಗೆ ಸಮನಾದದ್ದು.
ಕನ್ನಾಡಿಗೆ ಬಂದಾಗ ಕರಾವಳಿಯ ತೋಟಗಳಿಗೆ ಕೆನ್ ಭೇಟಿಯಿತ್ತರು. ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸ್, ಪುತ್ತೂರಿನ ವಿವೇಕಾನಂದ ಕಾಲೇಜು, ಕಬಕ ನಿನ್ನಿಕಲ್ಲಿನ ಜ್ಯಾಕ್ ಅನಿಲರ ನರ್ಸರಿ, ಪುತ್ತೂರಿನ ಗಿಡ ಗೆಳೆತನ ಸಂಘ 'ಸಮೃದ್ಧಿ', ಮೀಯಪದವಿನ ಡಾ.ಡಿ.ಸಿ.ಚೌಟರ ತೋಟ, ಮುಳಿಯ ವೆಂಕಟಕೃಷ್ಣ ಶರ್ಮರ ತೋಟ,.. ಹೀಗೆ ವಿವಿಧ ತೋಟಗಳನ್ನು ಭೇಟಿ ಮಾಡಿದಾಗ ಅವರು ಪ್ರತಿಪಾದಿಸಿದ ಅಂಶಗಳು ನಮ್ಮೂರಿಗೂ ಹೊಂದುತ್ತದೆ :
             ಹಣ್ಣನ್ನು ತಿನ್ನಲು ಮಾತ್ರವಲ್ಲ, ಪಂಚತಾರಾ ಹೋಟೆಲಿನ ಅಡುಗೆಗೂ ಬಳಸಬೇಕು. ಅದನ್ನು ಒಂದು ಆದಾಯ ತರುವಂತಹ ಬೆಳೆ ಎಂದು ಪರಿಗಣಿಸಬೇಕು. ಒಂದೇ ತಳಿಯನ್ನು ಬೆಳೆಯುವ ಪರಿಪಾಠದ ಬದಲು ಚಿಕ್ಕ ಚಿಕ್ಕ ತೋಟಗಳಲ್ಲಿ ಬೇರೆ ಬೇರೆ ಋತುಗಳಲ್ಲಿ ಫಲ ಕೊಡುವ ಹಣ್ಣುಗಳನ್ನು ಬೆಳೆಸಿ. ಹಣ್ಣುಗಳನ್ನು ಆಕರ್ಷಕವಾಗಿ ಪ್ಯಾಕಿಂಗ್ ಮಾಡಿದರೆ ಗ್ರಾಹಕರು ನೋಟಕ್ಕೆ ಆಕಷರ್ಿತರಾಗುತ್ತಾರೆ. ತೋಟದಲ್ಲಿ ಬೆಳೆಯಲು 'ಬೆಳೆ ಯೋಜನೆ' ಮಾಡಿದರೆ ಒಂದು ಬೆಳೆ ಕೈಕೊಟ್ಟರೂ ಆಧೀರರಾಗುವ ಪ್ರಮೇಯ ಬರುವುದಿಲ್ಲ.
              ಹಣ್ಣುಗಳನ್ನು ಕೊಯಿಲು ಮಾಡಿದ ತಕ್ಷಣ ಮಾರಾಟ ಮಾಡುವ ಜಾಲವನ್ನು ಸೃಷ್ಟಿಸಿಕೊಳ್ಳಬೇಕು. ಕೊಯ್ದಾಗ ತೋಟದಲ್ಲೇ ಪ್ಯಾಕಿಂಗ್ ಮಾಡಿದರೆ ಬಾಳಿಕೆ ಹೆಚ್ಚು. ಹಣ್ಣುಗಳಿಗೆ ಪ್ರಿಕೂಲಿಂಗ್ ವ್ಯವಸ್ಥೆ ಬಾಳಿಕೆ ಹೆಚ್ಚಿಸಲು ತುಂಬ ಪ್ರಯೋಜನಕರ. ಕೆಲವು ಹಣ್ಣುಗಳು ಬಹಳ ಮೃದುವಾಗಿದ್ದು, ಕೊಯ್ಯಲು ಜಾಣ್ಮೆ ಬೇಕಾಗುತ್ತದೆ. ಇಂಥವನ್ನು ಕೊಯ್ದ ಕೂಡಲೇ ಅಚ್ಚುಕಟ್ಟ್ಟಾಗಿ ಪೆಟ್ಟಿಗೆಗಳಲ್ಲಿ ಒಂದೇ ಪದರದಲ್ಲಿ ಪ್ಯಾಕ್ ಮಾಡಬೇಕು. ಪ್ರತಿ ಕೃಷಿಕರು ತಮ್ಮ ಉತ್ಪನ್ನಗಳಿಗೆ ಬ್ರಾಂಡಿಂಗ್ ಮಾಡಿದರೆ ಮಾತ್ರ ಯಶ.
                 ಗ್ರಾಹಕರಿಗೆ ಆಯ್ಕೆಗೆ ಅವಕಾಶ ಕೊಡಿ. ಜತೆಗೆ ಅರಿವನ್ನೂ ಮೂಡಿಸಿ. ಪ್ರಕೃತ ಮಾರುಕಟ್ಟೆಯ ಒಲವು ಹೇಗಿದೆ ಎನ್ನುವ ಅಧ್ಯಯನ ಕಾಲಕಾಲಕ್ಕೆ ಮಾಡುತ್ತಿರಿ. ಬೆಳೆಗಳ ಬೆಲೆಯನ್ನು ಕೃಷಿಕನೇ ನಿರ್ಧರಿಸಬೇಕು. ಎಂದೂ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಮಾರಬೇಡಿ. ಕೃಷಿ ಪ್ರವಾಸೋದ್ಯಮ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಿ... ಹೀಗೆ ಕೆನ್ ತಮ್ಮೂರಿನಲ್ಲಿ ಮಾಡಿದ ಕೆಲಸಗಳನ್ನು ವಿವರಿಸುತ್ತಾ, ಮನಸ್ಸು ಮಾಡಿದರೆ ನಿಮ್ಮೂರಲ್ಲೂ ಸಾಧ್ಯ ಎನ್ನಲು ಮರೆಯಲಿಲ್ಲ.
             ಕೆನ್ ಜಪಾನಿನಲ್ಲಿ 'ಫ್ರುಟ್ ಪಾರ್ಕ್’ ವೀಕ್ಷಿಸಿದ್ದರು. ಅದರಲ್ಲಿ ಒಂದು ಬೆಳೆಯ ಬೀಜಪ್ರದಾನದಿಂದ ತೊಡಗಿ ಹಣ್ಣುಗಳನ್ನು ಮೌಲ್ಯವರ್ಧನೆ ಮಾಡುವ ತನಕದ ವಿವಿಧ ಹಂತದ ಮಾಹಿತಿ, ಪ್ರಾತ್ಯಕ್ಷಿಕೆಯಿದೆ. ಆ ಸರಹದ್ದಿನಲ್ಲಿ ಸಿಗುವ ಹಣ್ಣುಗಳ ಮಾಹಿತಿ ಪಾರ್ಕಿನಲ್ಲಿ ಸಿಗುವಂತಹ ವ್ಯವಸ್ಥೆಯಿದೆ. ಕೃಷಿಕ ಅಲ್ಲಿಗೆ ಹೋದರೆ ಹಣ್ಣುಗಳ ಪೂರ್ತಿ ಜ್ಞಾನ ಸಿಗುತ್ತದೆ. ಇಂತಹ ಪರಿಕಲ್ಪನೆ ಕಾಲದ ಅನಿವಾರ್ಯತೆ.
              ಹವಾಯಿಯ ಟ್ರಾಫಿಕಲ್ ಫ್ರುಟ್ ಅಸೋಸಿಯೇಶನ್ನಿನ ಅಧ್ಯಕ್ಷರಾಗಿರುವ ಕೆನ್ ಲವ್ ಕರ್ನಾಾಟಕ ಪ್ರವಾಸ ಮುಗಿಸಿ ಈ ವಾರ ಹವಾಯಿಗೆ ಹಾರಲಿದ್ದಾರೆ. ಒಬ್ಬ ಕೃಷಿಕನ ನೋವು-ನಲಿವು ಇನ್ನೊಬ್ಬ ಕೃಷಿಕನಿಗೆ ಗುರುತಿಸಲು ಕಷ್ಟವಲ್ಲ. ಹೀಗೆ ಅರ್ಥಮಾಡಿಕೊಳ್ಳುವಲ್ಲಿ ಭಾಷೆ ಅಡ್ಡಿಯಾಗಿಲ್ಲ. ನಾವು ಅಸಡ್ಡೆಯಿಂದ ಬದಿಗಿಟ್ಟ, ಆಲಸ್ಯದಿಂದ ಲಕ್ಷ್ಯವಹಿಸದ ಹಲವಾರು ಗಿಡ, ಸಸ್ಯ, ಹಣ್ಣುಗಳನ್ನು ಕೆನ್ ಅವರ ಮೂರನೇ ಕಣ್ಣು ಗ್ರಹಿಸಿ, ನಾಲ್ಕನೇ ಕಣ್ಣು ಕ್ಲಿಕ್ಕಿಸಿಕೊಂಡಿತು. 

Thursday, November 6, 2014

ಭರವಸೆಯ ಹಾದಿಗೆ ಕಣ್ಣೀರ ಬೆಳಕು

              ಬದುಕಿನಲ್ಲಿ ಕಾಂಚಾಣಗಳ ಕುಣಿತಕ್ಕೆ ಜೀವದ ಬೆಲೆ. ಅದು ಜೀವವನ್ನೂ ರೂಪಿಸಬಹುದೆಂಬ ಭ್ರಮೆ. ಹಣದ ಹಣಾಹಣಿಯಲ್ಲಿ ಬದುಕು ಏಗುತ್ತಿದ್ದರೂ ಅದಕ್ಕೆ ಶ್ರೀಮಂತಿಕೆಯ ಲೇಪ. ಸದಾ ಆನಂದವನ್ನು ತೊರಿಸುವ ಕಾಂಚಾಣ ನಮಗರಿವಿಲ್ಲದೆ ಬದುಕನ್ನು ವಾಲಿಸುತ್ತದೆ.
             ಕಾಂಚಾಣಕ್ಕೆ ಚಂಚಲ ಗುಣ. ಉಳ್ಳವರಲ್ಲೇ ಠಿಕಾಣಿ. ಬೆವರೆಂದರೆ ಅಷ್ಟಕ್ಕಷ್ಟೇ. ತನುಶ್ರಮಿಕರ ಜಗಲಿ ಏರಲೂ ಸಂಕೋಚ. ಪೈಸೆ ಪೈಸೆಗೂ ಒದ್ದಾಡುವವರನ್ನು ಕಂಡೂ ಕಾಣದಂತಿರುವ ನಿಷ್ಕರುಣಿ. ಮೂಡುಬಿದಿರೆಯ ಕಲಾವತಿ ಜಿ.ಎನ್.ಭಟ್ ಹೇಳುತ್ತಾರೆ, "ಹಣ ನಮ್ಮನ್ನು ಆಳಬಾರದು. ಜೀವನಕ್ಕೆ ನೆರವಾಗಬೇಕು. ಅದು ಮನೆಯೊಳಗೆ ಕಾಲು ಮುರಿದು ಬಿದ್ದುಬಿಟ್ಟರೆ ಸರ್ವಸ್ವವನ್ನೂ  ಆಪೋಶನ ಮಾಡಿಬಿಡುತ್ತದೆ."
             ಇವರ ಮಾತು ಒಗಟಾಗಿ ಕಂಡರೂ ಅದರೊಳಗೆ ಅವರ ಗತ ಬದುಕು ಮುದುಡಿದೆ. ಬೇಡ ಬೇಡವೆಂದರೂ ಮತ್ತದು ಕಾಡುತ್ತಲೇ ಇದೆ. ಕಾಡಿದಷ್ಟೂ ದುಗುಡ, ಆತಂಕ. ಆಗ ಭರವಸೆಯ ದಾರಿಗಳು ಮಸುಕಾಗಿ ಕಣ್ಣೀರಲ್ಲಿ ತೋಯುತ್ತದೆ. ಆ ಹಾದಿಗೆ ಕಣ್ಣೀರಿನಲ್ಲಲ್ಲದೆ ಬೇರೆ ಉಪಾಧಿಯಿಂದ ಬೆಳಕು ಒಡ್ಡಲು ಅಸಾಧ್ಯ.
              ಒಂದು ಕಾಲಘಟ್ಟದಲ್ಲಿ ಕಲಾವತಿ ಭಟ್ಟರದು ಐಷರಾಮಿ ಬದುಕು. ಪತಿ ನರಹರಿ. ಮೂಲತಃ ಕೃಷಿಕರು. ಪೂಜಾ, ಸ್ಕಂದಪ್ರಸಾದ್ ಇಬ್ಬರು ಮಕ್ಕಳು. ರಾಜಧಾನಿಯಲ್ಲಿ ಹತ್ತಾರು ಜನರಿಗೆ ಉದ್ಯೋಗ ನೀಡುವ ಸದೃಢ ಉದ್ಯಮ. ಕನಸಿನ  ಸೌಧಗಳು ಮೇಲೇಳುತ್ತಿದ್ದಂತೆ ಕೈಹಿಡಿದ ಕಾಂಚಾಣ ಮುನಿಸುಗೊಂಡು ಅರ್ಧದಲ್ಲೇ ಕೈಬಿಟ್ಟಿತು. ಬದುಕು ಕುಸಿಯಿತು. ಉಟ್ಟ ಉಡುಗೆಯಲ್ಲಿ ಮರಳಿ ಮಣ್ಣಿಗೆ. ನರಹರಿಯವರಿಗೆ ಅನಾರೋಗ್ಯ ಕಾಡಿತು. ಚಿಕಿತ್ಸೆ ಫಲಕಾರಿಯಾಗದೆ ಮೂರು ವರುಷದ ಹಿಂದೆ ಇಹಲೋಕ ತ್ಯಜಿಸಿದರು.
                 ಒಂದೆಡೆ ನೆಲಕಚ್ಚಿದ ಉದ್ಯಮದಿಂದ ಆರ್ಥಿಕ ಸೋಲು. ಮತ್ತೊಂದೆಡೆ ಪತಿಯ ಮರಣದ ದುಃಖ. ಇನ್ನೊಂದೆಡೆ ಬೆಳೆಯುತ್ತಿರುವ ಮಕ್ಕಳ ಜವಾಬ್ದಾರಿ. ಇವು ಮೂರನ್ನು ಹೊರಲೇಬೇಕಾದ ಅನಿವಾರ್ಯತೆ.  ಸುತ್ತೆಲ್ಲಾ ನೆಂಟರಿದ್ದಾರೆ. ಬಂಧುಗಳಿದ್ದಾರೆ. ಆಪ್ತರಿದ್ದಾರೆ. ಮರುಗುವ ಜನರಿದ್ದಾರೆ. ಯಾರಿಗೂ ಹೊರೆಯಾಗಬಾರದೆನ್ನುವ ಯೋಚನೆಯ ಬದ್ಧತೆ.
ಗಂಡನ ಕೊನೆ ದಿನಗಳಲ್ಲಿ ಹೊಟ್ಟೆಪಾಡಿಗಾಗಿ ಉಪ್ಪಿನಕಾಯಿ ವ್ಯಾಪಾರಕ್ಕೆ ಶ್ರೀಕಾರ ಬರೆದ ದಿನಗಳನ್ನು ಜ್ಞಾಪಿಸುತ್ತಾರೆ,       ಹಣದಲ್ಲಿ ಬದುಕಿದ ನಮಗೆ ಉಪ್ಪಿನಕಾಯಿ ಮಾರಾಟ ಮಾಡಲು ಮನಸ್ಸು ಹಿಂಜರಿಯಿತು. ಹೊಂದಿಕೊಳ್ಳಲು ತಿಂಗಳುಗಳೇ ಬೇಕಾಗಿತ್ತು. ನಾವಿಬ್ಬರು ಜತೆಯಾಗಿ ಮನೆಮನೆಗೆ ಹೋಗಿ ಬಾಗಿಲು ತಟ್ಟಿದೆವು. ಅಂದಂದಿನ ವ್ಯಾಪಾರ ಅಂದಂದಿನ ಊಟಕ್ಕೆ ಸಾಕಾಗುತ್ತಿತ್ತು. ಮೂಡುಬಿದಿರೆಯಲ್ಲಿ ಉದ್ಯಮಿಯಾಗಿರುವ ಸಹೋದರ, ಮಾವ ಇವರೆಲ್ಲರೂ ಆಪತ್ತಿನಲ್ಲಿ ಸಹಕಾರ ಮಾಡಿದ್ದಾರೆ. ಮಾಡುತ್ತಿದ್ದಾರೆ.
              ಮೂಡುಬಿದಿರೆಯ ಹೃದಯಸ್ಥಾನದಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ದಂಪತಿಗಳು ಸಂಜೆ ಹೊತ್ತು ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದರು. ಯಾರಲ್ಲೂ ತಮ್ಮ ಕತೆಯನ್ನು ಹೇಳಿಲ್ಲ. ಗ್ರಾಹಕರೊಂದಿಗೆ ಕನಿಷ್ಠ ಮಾತುಕತೆ. ದಿವಸಕ್ಕೆ ಐದಾರು ಕಿಲೋ ಉಪ್ಪಿನಕಾಯಿ ಮಾರಾಟ. ಈಗಲೂ ಕೂಡಾ. ನೋಡಿಯೂ ನೋಡದಂತಿರುವ ಪರಿಚಿತರು, ಗೇಲಿ ಮಾಡುವ, ಚುಚ್ಚು ಮಾತಿನಲ್ಲಿ ಸಂತೋಷ ಪಡುವ, ರಾಚುವ ಅನುಕಂಪಗಳಿಂದ ಕಲಾವತಿ ಅವರ ಬದುಕು ಸುಧಾರಿಸಲಿಲ್ಲ!
              ಪತಿಯವರ ಅಗಲಿಕೆಯ ನಂತರವೂ ಕಟ್ಟೆಯಲ್ಲಿ ವ್ಯಾಪಾರವನ್ನು ಮುಂದುವರಿಸಿದ್ದಾರೆ. ನಾಳೆಯ ಚಿಂತೆಯಿಲ್ಲ. ಇಂದಿಗೆ ಏನು? ಅದನ್ನು ಉಪ್ಪಿನಕಾಯಿ ಪೂರೈಸುತ್ತದೆ. ಬಡತನ ಕಾರಣವಾಗಿ ಮಕ್ಕಳೊಂದಿಗೆ ಹಗುರವಾಗಿ ಮಾತನಾಡುವವರಿದ್ದಾರೆ. ನಿನ್ನ ಮಕ್ಕಳನ್ನು ಕೆಲಸಕ್ಕೆ ಕಳಿಸು ಎಂದು ಸಲಹೆ ಕೊಡುವ ಮಂದಿ ಎಷ್ಟು ಬೇಕು? ಬದುಕಿನ ಸ್ಥಿತಿಯನ್ನು ಹೇಳುತ್ತಿದ್ದಂತೆ ಗಂಟಲು ಆರುತ್ತದೆ.
              ಶುಚಿ-ರುಚಿಯೇ ಯಶಸ್ವೀ ವ್ಯಾಪಾರದ ಗುಟ್ಟು. ಸ್ವತಃ ಓಡಾಡಿ ಒಳಸುರಿಗಳನ್ನು ಸಂಗ್ರಹಿಸುತ್ತಾರೆ. ಉಪ್ಪಿನಲ್ಲಿ ಹಾಕಿದ ಮಾವು, ನೆಲ್ಲಿ, ಕರಂಡೆ, ಅಂಬಟೆ, ಅಪ್ಪೆಮಿಡಿಗಳ ಸಂಗ್ರಹ ಕೋಣೆಯೊಳಗೆ ಭದ್ರ. ಬೇಕಾದಾಗ ಬೇಕಾದಷ್ಟೇ ತಯಾರಿ. ಹೋಂವರ್ಕ್, ಪರೀಕ್ಷೆ ಏನೇ ಇರಲಿ ಪೂಜಾ, ಸ್ಕಂದಪ್ರಸಾದರಿಗೆ ಪ್ಯಾಕಿಂಗ್ ಕೆಲಸ. ಶಾಲೆಗೆ ಹೋಗುವಾಗ ಮನೆಗಳಿಗೆ ಡೋರ್ ಡೆಲಿವರಿ. ಉಜಿರೆಯಲ್ಲಿ ಜರುಗಿದ ತುಳು ಸಮ್ಮೇಳನದಲ್ಲಿ ಮೊದಲ ಬಾರಿಗೆ ಉಪ್ಪಿನಕಾಯಿ ಮಳಿಗೆ ತೆರೆದರು. ಬಳಿಕ ಕೃಷಿ ಮೇಳ, ನುಡಿಸಿರಿಗಳಲ್ಲಿ ವ್ಯಾಪಾರ.
             ನೂರು, ಇನ್ನೂರು, ಒಂದು ಕಿಲೋಗ್ರಾಮ್ಗಳ ಪ್ಯಾಕೆಟ್. ಮನೆಗೆ ಬಂದು ಒಯ್ಯುವ, ಮೊದಲೇ ಕಾದಿರಿಸುವ ಗ್ರಾಹಕರಿದ್ದಾರೆ. ಉಪ್ಪಿನಕಾಯಿ ಜತೆಯಲ್ಲಿ ಸಾಂಬಾರು ಪುಡಿ, ರಸಂಪುಡಿ, ಚಟ್ನಿ, ಪುಳಿಯೋಗರೆ ಮೊದಲಾದ ಉಪಉತ್ಪನ್ನಗಳು. ಮಾರಾಟಕ್ಕೆ ಇಲಾಖೆಗಳ ಪರವಾನಿಗೆ ಪಡೆದುಕೊಂಡಿದ್ದಾರೆ.
                 ಕಳೆದ ವರುಷದ ವಿಶ್ವ ನುಡಿಸಿರಿಯಲ್ಲಿ ವ್ಯಾಪಾರ ಚೆನ್ನಾಗಿ ಆಯಿತು. ಅಲ್ಲಿನ ಪ್ರಾಧ್ಯಾಪಕರ ಕುಟುಂಬಗಳು ಉಪ್ಪಿನಕಾಯಿಯನ್ನು ಬಹಳ ಮೆಚ್ಚಿಕೊಂಡಿದೆ. ಲಾಭಾಂಶದಿಂದ ದ್ವಿಚಕ್ರ ವಾಹನ ಖರೀದಿಸಿದೆ. ನನಗೆ ಉಪ್ಪಿನಕಾಯಿ ಲಕ್ಷ್ಮಿಗೆ ಸಮಾನ, ಖುಷಿಯಿಂದ ಹೇಳುತ್ತಾರೆ, ಬಡತನ  ಮಕ್ಕಳ ಬದುಕಿಗೆ ಅಂಟಬಾರದು. ಅವರು ನನ್ನಂತೆ ಆಗಬಾರದು. ಸಮಕಾಲೀನ ವಿದ್ಯಮಾನಕ್ಕೆ ಅಪ್ಡೇಟ್ ಆಗುತ್ತಿದ್ದರೆ ಮಾತ್ರ ಸಮಾಜದಲ್ಲಿ ಸ್ಥಾನ-ಮಾನ. ಸ್ಕಾಲರ್ಶಿಪ್, ದಾನಿಗಳ ನೆರವಿನಿಂದ ಮಕ್ಕಳ ವಿದ್ಯಾಭ್ಯಾಸ.
                 ಮಗ ಸ್ಕಂದ ಪ್ರಥಮ ಪದವಿ ಓದುತ್ತಿದ್ದಾನೆ. ಮಗಳು ಪೂಜಾ ಸಿ.ಎ.ಕಲಿಕೆ. ಕಳೆದ ವರುಷ ಮಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ.ಪದವಿಯಲ್ಲಿ ಎಂಟನೇ ರ್ಯಾಂಕ್ ಪಡೆದ ಪ್ರತಿಭಾವಂತೆ. ಅವಳ ಸಾಧನೆಯನ್ನು ಗುರುತಿಸಿ ದಾನಿಗಳಿಂದ ಆರ್ಥಿಕ ಪುರಸ್ಕಾರ. ಅವಳು ಓದಿದ ಶಾಲೆಯು ಕಲಾವತಿಯವರನ್ನು 'ಹೆಮ್ಮೆಯ ತಾಯಿ' ಎಂದು ಗೌರವಿಸಿತ್ತು. ರ್ಯಾಂಕಿನ ಸುದ್ದಿ ತಿಳಿದ ಪೂಜಾ ಅಮ್ಮನನ್ನು ಅಪ್ಪಿ ಹೇಳಿದ್ದೇನು ಗೊತ್ತೇ,. ’ಬೇರೆ ಅಮ್ಮಂದಿರು ಆಗ್ತಿದ್ರೆ ಯಾವುದೋ ಉದ್ಯೋಗಕ್ಕೆ ಕಳಿಸ್ತಿದ್ದರು. ನೀನು ಗ್ರೇಟ್ ಅಮ್ಮಾ” ಎನ್ನುವಾಗ ಕಣ್ಣು ಆದ್ರ್ರವಾಗುತ್ತದೆ.
                 ಪೂಜಾಳಲ್ಲಿ ಒಂದು ಸಂಕಲ್ಪವಿದೆ. ಸಿ.ಎ.ಕಲಿಕೆ ಮುಗಿದು, ಅದನ್ನೇ ವೃತ್ತಿಯಾಗಿಸಿ, ಆರ್ಥಿಕವಾಗಿ ಸದೃಢವಾಗಿ ಸ್ವಂತದ್ದಾದ ಮನೆ ಹೊಂದಿದ ಬಳಿಕವೇ ಮದುವೆಯ ಯೋಚನೆ! ಅಬ್ಬಾ.. ಎಳೆಯ ಮನಸ್ಸಿನ ನಿರ್ಧಾರದ ಮುಂದೆ ಮಾತು ಮೂಕವಾಗುತ್ತದೆ. ಅಮ್ಮ-ತಮ್ಮನ ಭವಿಷ್ಯದ ಬದುಕಿಗಾಗಿ ಮದುವೆಯನ್ನೇ ಮುಂದೂಡುವ ಎಳೆಮನಸ್ಸಿನ ಪೂಜಾಳ ಯೋಚನೆಯಲ್ಲಿ ತ್ಯಾಗದ ಎಳೆಯಿಲ್ವಾ. ಮಗನ ಕಲಿಕೆಯಲ್ಲಿ ಭಾವಿ ಬದುಕಿನ ನಿರೀಕ್ಷೆಯಿಟ್ಟ ಅಮ್ಮನ ಮನದೊಳಗೆ 'ನನ್ನ ಮಗ ಲೆಕ್ಚರ್' ಆಗಬೇಕೆನ್ನುವ ಆಶೆಯ ಮೊಳಕೆ ಹುಟ್ಟಿದೆ.
                'ಸ್ವಾಭಿಮಾನ ಇದ್ದವರು ಸಾಲ ಮಾಡರು', ಕಲಾವತಿಯವರು ಆಗಾಗ್ಗೆ ಹೇಳುವ ಮಾತಿನೊಂದಿಗೆ ಗತ ಬದುಕಿನ ನೋವಿನೆಳೆ ಮಿಂಚಿ ಮರೆಯಾಗುತ್ತದೆ. ಬಿಡುವಿದ್ದಾಗ ಸಹೋದರ ಸದಾಶಿವರ ಜವುಳಿ ಅಂಗಡಿಯಲ್ಲಿ ಸಹಾಯಕರಾಗಿ ಕಾಣಿಸಿಕೊಳ್ಳುವ ಮಕ್ಕಳಿಗೆ ಮಾವನ ಅಂಗಡಿ ಮನೆಗೆ ಸಮಾನ. ದುಡಿಯದಿದ್ದರೂ ಅಳಿಯ-ಸೊಸೆಗೆ ಮಾವ ನೀಡುವ ನೆರವಿಗೆ ತಂತಮ್ಮ ಬೆವರಿನ ಸ್ಪರ್ಶವಿರಬೇಕೆನ್ನುದು ತಾಯಿಯ ಆಸೆ. ತನ್ನಕ್ಕನ ಈ ಮನೋನಿರ್ಧಾರವನ್ನು ತಮ್ಮ ಎಂದು ಪ್ರಶ್ನಿಸಿಲ್ಲ. ಪ್ರಶ್ನಿಸುವುದಿಲ್ಲ ಗೌರವಿಸಿದ್ದಾರೆ.
                  ವಿವಾಹ ಪೂರ್ವದಲ್ಲಿ ಕಲಾವತಿ ಶಾಲೆಯೊಂದರಲ್ಲಿ ಅರೆಕಾಲಿಕ ಅಧ್ಯಾಪಿಕೆಯಾಗಿದ್ದರು. ಇನ್ನೇನು ಹುದ್ದೆ ಖಾಯಂಗೊಳ್ಳುವಾಗ ವಿವಾಹ ನಿಶ್ಚಯವಾಯಿತು. ದುಡಿಯುವ ಹೆಂಡತಿ ಬೇಡ-ಪತಿಯ ಅಪೇಕ್ಷೆ. 'ಅಧ್ಯಾಪಿಕೆಯಾಗಿಯೇ ಮುಂದುವರಿಯುತ್ತಿದ್ದರೆ ಇಂತಹ ಸಂಕಷ್ಟ ಬರುತ್ತಿರಲಿಲ್ಲ' ಎನ್ನುವಾಗ ದುಃಖದ ಕಟ್ಟೆ ಒಡೆಯುತ್ತದೆ. ಸಾವರಿಸಿಕೊಂಡು ನನಗೆ ಮಕ್ಕಳೇ ಸರ್ವಸ್ವ. ಅವರಿಗೆ ಕಷ್ಟದ ಪರಿಜ್ಞಾನವಿದೆ. ಪೈಸೆ ಪೈಸೆಯ ಬೆಲೆ ಗೊತ್ತಿದೆ. ಇತರರ ಮುಂದೆ ಅವರೆಂದೂ ಕೈಚಾಚರು. ವಿದ್ಯೆ ಅವರನ್ನು ರಕ್ಷಿಸುತ್ತದೆ, ಎನ್ನುತ್ತಾ ಒಂದು ಕ್ಷಣ ರೆಪ್ಪೆ ಮುಚ್ಚಿದರು.
                  ಬರಿಗೈಯಲ್ಲಿ ಮೂಡುಬಿದಿರೆಗೆ ಬಂದ ಕಲಾವತಿ ಪಡಿತರ ಚೀಟಿಗಾಗಿ ಅಲೆದ ಕತೆಯನ್ನು ಅವರಿಂದಲೇ ಕೇಳಬೇಕು. ಸರಕಾರಿ ಕಚೇರಿಗಳ ಒಂದೊಂದು ಮೇಜುಗಳಲ್ಲಿ ಕುಣಿಯುವ ಕಾಂಚಾಣದ ಕುಣಿತದ ತಾಳಕ್ಕೆ ಇವರಿಗೆ ಹೆಜ್ಜೆ ಹಾಕಲು ಕಷ್ಟವಾಯಿತು. ಆದರೆ ಇಲಾಖೆಯಲ್ಲಿದ್ದ ಸಹೃದಯಿ ಮನಸ್ಸುಗಳು ಕಲಾವತಿಯವರ ನೆರವಿಗೆ ಬಂತೆನ್ನಿ.
                    ನಿಜಕ್ಕೂ ಕಲಾವತಿ ಮಹಾತಾಯಿ. ಬದುಕನ್ನು ಬಂದ ಹಾಗೆ ಸ್ವೀಕರಿಸಿದವರು. ಉಪ್ಪಿನಕಾಯಿ ವೃತ್ತಿಯೇ ಅವರಿಗೆ ದೇವರು. ಕಣ್ಣೀರಿನ ಅಭಿಷೇಕ. ನಾಲ್ಕು ಕಾಸು ಕೈಗೆ ಸೇರಿದಾಗ ಸುವಾಸಿತ ಹೂಗಳ ಅರ್ಚನೆ. ಮಕ್ಕಳುಣ್ಣುವಾಗ ಕಣ್ತುಂಬಾ ನೋಡಿ ಆನಂದಿಸುವ ತಾಯಂದಿರು ಎಷ್ಟಿದ್ದಾರೆ? ನಾವಿಲ್ಲಿ ಒಂದು ಗಮನಿಸಬೇಕು. ಮಕ್ಕಳ ಮುಂದೆ ಕಣ್ಣೀರಿನ ಕತೆಯನ್ನು ಎಂದೂ ಹೇಳರು. ತನ್ನ ಕಣ್ಣೀರು ಮಕ್ಕಳಿಗೆ ಗೋಚರವಾಗಬಾರದೆನ್ನುವ ಎಚ್ಚರಿಕೆ ಅವರಲ್ಲಿ ಸದಾ ಜಾಗೃತ. ಸ್ವಾಭಿಮಾನಿ-ಸ್ವಾವಲಂಬಿ ಬದುಕನ್ನು ಅಪ್ಪಿಕೊಂಡ ಕಲಾವತಿಯವರ ಬಡತನ ಈಗ ನಾಚಿ ನೀರಾಗುತ್ತಿದೆ!
   

Friday, October 17, 2014

ಹಸಿರ ಹಾಸುಗೆ ಹಾಸುವ ಏಕವ್ಯಕ್ತಿ ಸೈನ್ಯ

            ಮಂಗಳೂರಿನ ನಂದಿಗುಡ್ಡೆಯ ಸ್ಮಶಾನದಲ್ಲಿ ಜೀತ್ ಮಿಲನ್ ರೋಚ್ (37) ಜತೆಗೆ ಅಡ್ಡಾಡುತ್ತಿದ್ದಾಗ, "ನಿಜವಾದ ಆನಂದ ಅನುಭವಿಸುವ ಜಾಗವಿದು. ಮನುಷ್ಯಾತಿಕ್ರಮಣವಿಲ್ಲ. ರಾಗ ದ್ವೇಷಗಳ ಸೋಂಕಿಲ್ಲ. ಇಲ್ನೋಡಿ. ಎಷ್ಟೊಂದು ಮರಗಳು. ಹಕ್ಕಿಗಳು ಖುಷಿಯಲ್ಲಿವೆ. ಈ ಆನಂದ ಎಲ್ಲಿ ಸಿಗಬಹುದು? ಇಂತಹ ದಟ್ಟ ಹಸುರು ನಗರದಲ್ಲಿ ತುಂಬುವ ದಿನಗಳು ಬಂದಾವೇ?" ಪ್ರಶ್ನೆಯೊಂದಿಗೆ ಮಾತು ಮೌನವಾಯಿತು.
            ಜೀತ್ ಅಪ್ಪಟ ಪ್ರಕೃತಿ ಪ್ರೇಮಿ. ಹಸುರಿನ ಸುತ್ತ ಮನಸ್ಸು ಕಟ್ಟಿಕೊಳ್ಳುವ ಬದುಕು. ಕೃಷಿ ಕುಟುಂಬದ ಹಿನ್ನೆಲೆ. ಕೈತುಂಬುವ ವೃತ್ತಿಯಿದ್ದರೂ ಸಮಾಜಮುಖಿ ಚಿಂತನೆ. ಮಂಗಳೂರಿನ ಮೋರ್ಗನ್ಗೇಟಿನಲ್ಲಿ ವಾಸ. ಹದಿನಾಲ್ಕು ವರುಷದ ಹಿಂದೆ ಮನೆಯ ಸನಿಹ ಗಿಡಗಳನ್ನು ಬೆಳೆಸಿದಾಗ ಸಿಕ್ಕ ಹಸಿರಿನ ಆನಂದದಿಂದ ಪ್ರಚೋದಿತರಾದರು. ಈ ಸುಖ ನನಗೆ ಮಾತ್ರವಲ್ಲ, ಎಲ್ಲರಿಗೂ ಸಿಗುವಂತಾಗಬೇಕು - ರಸ್ತೆಯ ಇಕ್ಕೆಡೆ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ.
           ನರ್ಸರಿ, ಅರಣ್ಯ ಇಲಾಖೆಗಳಿಂದ ಗಿಡಗಳ ಖರೀದಿ. ರಸ್ತೆಬದಿಗಳಲ್ಲಿ ಗಿಡ ನೆಡುವ ಕಾಯಕ. ಬೇಸಿಗೆಯಲ್ಲಿ ನೀರುಣಿಸಿ ಆರೈಕೆ. ಸುಮಾರು ಹನ್ನೊಂದು ವರುಷ ಕಿಸೆಯಿಂದ ವೆಚ್ಚ ಮಾಡಿ ಒಂದೂವರೆ ಸಾವಿರ ಗಿಡಗಳನ್ನು ರಸ್ತೆಗಳ ಎರಡೂ ಬದಿಗಳಲ್ಲಿ ನೆಟ್ಟು ನಿಜವಾದ ವನಮಹೋತ್ಸವಕ್ಕೆ ಮುನ್ನುಡಿಯಿಟ್ಟರು. ಹಲವರ ಗೇಲಿಯ ಮಾತುಗಳಿಗೆ ಕಿವಿಯಾದರು. 'ಲಾಭವಿಲ್ಲದೆ ಯಾಕೆ ಮಾಡ್ತಾರೆ?' ಎನ್ನುವ ಕಟಕಿಯನ್ನೂ ಕೇಳಿದ್ದರು.
            ಐದು ವರುಷದ ಹಿಂದೆ ಕ್ಲಿಫೊರ್ಡ್ ಲೋಬೊ ಅರಣ್ಯ ಅಧಿಕಾರಿಯಾಗಿ ಬಂದಂದಿನಿಂದ ಜೀತ್ ಯೋಜನೆ, ಯೋಚನೆಗಳು ಹೊಸ ದಿಕ್ಕಿನತ್ತ ವಾಲಿದುವು. ಇಲಾಖೆಯೊಂದಿಗೆ ತನ್ನ ಕಾರ್ಯಸೂಚಿಯನ್ನು ಮಿಳಿತಗೊಳಿಸಿದರು.  ಜೂನ್ ತಿಂಗಳಲ್ಲಿ ನೀಲನಕ್ಷೆಯನ್ನು ಸಿದ್ಧಪಡಿಸಿ ಲೋಬೋ ಮುಂದಿರಿಸಿದರು. ಈ ಕಾಯಕಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಇಲಾಖೆ ನೀಡಿತು.
            ಒಮ್ಮೆ ಗಿಡ ನೆಟ್ಟರೆ ಜೀತ್ ಅದರ ಪೂರ್ತಿ ಹೊಣೆಯನ್ನು ಹೊತ್ತುಕೊಳ್ಳುತ್ತಾರೆ. ಒಂದು ವರುಷಗಳ ಕಾಲ ನೀರುಣಿಸಿ ಆರೈಕೆ ಮಾಡುತ್ತಾರೆ. ಗಿಡಗಳ ಬೆಳವಣಿಗೆಯನ್ನು ಗಮನಿಸುತ್ತಾರೆ. ರಕ್ಷಣೆಗೆ  ಇಲಾಖೆಯ ನೆರವಿದೆ. ಗಿಡಗಳನ್ನು ನೆಡುವ ಕೆಲಸಗಳಿಗೆ ಶ್ರಮಿಕರು, ವಾಹನ ಒದಗಣೆ, ಸಾರಿಗೆ ವೆಚ್ಚ,  ನೀರಿನ ವ್ಯವಸ್ಥೆ ಮಾಡುವ ಹಸುರು ಪ್ರಿಯರ ಹೆಗಲೆಣೆಯಿದೆ. ನನಗೆ ಹಣ ಬೇಡ. ಜನರ ಮನ ಬೇಕು, ಸಹಕಾರ ಬೇಕು. ಜನಸಹಭಾಗಿತ್ವದಲ್ಲಿ ಹಸುರೆಬ್ಬಿಸುವ ಕೆಲಸವಾಗಬೇಕು, ಎನ್ನುವ ಆಶೆಯನ್ನು ಹೊಂದಿದ್ದಾರೆ.
             ನಂದಿಗುಡ್ಡ ಸುತ್ತುಮುತ್ತ ರಸ್ತೆಗಳಿಗೆ ಕಾಂಕ್ರಿಟೀಕರಣದ ಸಂದರ್ಭ. ಹಲವಾರು ಗಿಡಗಳು ನೆಲಕ್ಕುರುಳಿದಾಗ ಮರುಗಿದರು. ಕಡಿಯುವವರಿಗೆ ನೆಟ್ಟವರಲ್ಲಿ ಒಂದು ಮಾತು ಕೇಳುವ ಸೌಜನ್ಯ ಇಲ್ಲ. ಒಳ್ಳೊಳ್ಳೆಯ ಗಿಡಗಳು ನಾಶವಾದುವು. ಬೇಸರ ಬಂತು. ಅನಾವಶ್ಯಕವಾಗಿ ಮನುಷ್ಯ ಪ್ರವೇಶ ಮಾಡದ ಸ್ಮಶಾನದ ಆವರಣವನ್ನು ಹಸುರು ಮಾಡಲು ನಿಶ್ಚಯಮಾಡಿದೆ. ನಂದಿಗುಡ್ಡದ ಐದು ಸ್ಮಶಾನವನ್ನು ಆರಿಸಿಕೊಂಡೆ. ಎಲ್ಲರ ಬೆಂಬಲ ಸಿಕ್ಕಿತು, ಎನ್ನುವ ಜೀತ್ ಒಂದು ಕಹಿ ಘಟನೆಯನ್ನು ಹೇಳಿದರು, ಒಂದೆರಡು ಸಲ ಸ್ಮಶಾನದೊಳಗೆ ಬೆಂಕಿಯಿಂದಾಗಿ ಕೆಲವು ಗಿಡಗಳು ನಾಶವಾಗಿತ್ತು. ಹಕ್ಕುಗಳ ಬಗ್ಗೆ ಹೋರಾಡುತ್ತೇವೆ, ಪ್ರತಿಭಟನೆ ಮಾಡುತ್ತೇವೆ. ಆದರೆ ನಮ್ಮ ಜವಾಬ್ದಾರಿಗಳು ನಮಗೆ ತಿಳಿಯದಿರುವುದು ದುರಂತ. ಸ್ಮಶಾನಗಳಲ್ಲಿ ಏನಿಲ್ಲವೆಂದರೂ ಎರಡು ಸಾವಿರಕ್ಕೂ ಮಿಕ್ಕಿ ಗಿಡಗಳಿವೆ.
               ಮಾವು, ಹಲಸು, ಬಸವನಪಾದ, ಚೆರ್ರಿ, ಶ್ರೀಗಂಧ, ರೆಂಜ, ಹೊನ್ನೆ, ಮಹಾಗನಿ, ಟೀಕ್, ಬಾದಾಮಿ, ಕೋಕಂ.. ಮೊದಲಾದ ಗಿಡಗಳನ್ನು ಆಯಾಯ ಜಾಗಕ್ಕೆ ಸೂಕ್ತವಾಗುವಂತೆ ನಾಟಿ. ಸಿಟಿ ಗ್ರೀನರಿಗೆ ಆಯ್ಕೆ ಮಾಡುವ ಗಿಡಗಳಲ್ಲಿ ಕೆಲವೊಂದು ಮಾನದಂಡಗಳಿವೆ. ಉದಾ: ಧಾರ್ಮಿಕ ಕೇಂದ್ರಗಳಿರುವಲ್ಲಿ ಹೂ ಬಿಡುವ ಗಿಡಗಳಿದ್ದರೆ ಒಳ್ಳೆಯದು. ಶಾಲಾ ಸನಿಹ ಹಣ್ಣುಗಳ ಗಿಡಗಳಿದ್ದರೆ ಒಳಿತು, ಎನ್ನುತ್ತಾರೆ ಲೋಬೋ. ವಿಶೇಷ ಆರ್ಥಿಕ ವಲಯದ ಸರಹದ್ದಿನಲ್ಲಿ ಸಾರ್ವಜನಿಕ ರಸ್ತೆಯಿಕ್ಕೆಡೆ ಗಿಡಗಳು ದೊಡ್ಡದಾದಾಗ ರಸ್ತೆಗೆ ತೊಂದರೆಯಾಗಬಹುದು ಎನ್ನುವ ಆಕ್ಷೇಪ ಬಂದಿತ್ತು. ಅದಕ್ಕಾಗಿ ಹೆಚ್ಚು ಎತ್ತರ ಬೆಳೆಯದ ಪುನರ್ಪುುಳಿ ಯಾ ಕೋಕಂ ಗಿಡಗಳನ್ನು ನೆಡಲಾಗಿದೆ.
              ಜೀತ್ ಕಣ್ಗಾವಲಲ್ಲಿ ಈ ವರೆಗೆ ನಲವತ್ತು ಸಾವಿರಕ್ಕೂ ಮಿಕ್ಕಿ ಗಿಡಗಳು ನಗರದಲ್ಲಿ ತಲೆಎತ್ತಿವೆ. ತಾನು ಕಾರು ಚಾಲನೆಯಲ್ಲಿದ್ದಾಗಲೂ ದೃಷ್ಟಿ ಮಾತ್ರ ಗಿಡಗಳತ್ತ. ಒಂದು ಗಿಡ ವಾಲಿದರೂ ನೆಟ್ಟಗೆ ಮಾಡಿಯೇ ಪ್ರಯಾಣ ಮುಂದುವರಿಯುತ್ತದೆ. ರಸ್ತೆಯುದ್ದಕ್ಕೂ ಗಿಡಗಳನ್ನೇನೋ ಬೆಳೆಸಿದ್ದೀರಿ. ದನಗಳು ತಿಂದು ಹಾಳು ಮಾಡುವುದಿಲ್ಲವೇ? ಮಾರ್ಮಿಕವಾಗಿ ಹೇಳುತ್ತಾರೆ, ನನಗೆ ದನಗಳ ಭಯವಿಲ್ಲ. ಜನಗಳ ಅಂಜಿಕೆಯಿದೆ. ನಗರದಲ್ಲಿ ದನಗಳು ಎಲ್ಲಿವೆ ಸಾರ್. ದಾರಿ ಪಕ್ಕ ಇದ್ದ ಗಿಡಗಳನ್ನು ಸಾಕುವುದು ಬೇಡ, ಅದನ್ನು ಮುರಿದು, ಚಿಗುರನ್ನು ಚಿವುಟಿ ಹಾಳು ಮಾಡುತ್ತಾರೆ?
             ನಗರದ ಬಹುಭಾಗ ಕಾಂಕ್ರಿಟ್ ಮನೆಗಳು. ಅಂಗಳವೂ ಕಾಂಕ್ರಿಟ್ಮಯ. ಒಂದು ಎಲೆ ಅಂಗಳದೊಳಗೆ ಬಿದ್ದರೂ ಗೊಣಗಾಟ. ಒಮ್ಮೆ ಹೀಗಾಯಿತು - ಗಿಡ ನೆಡುತ್ತಿದ್ದಾಗ, ನಮ್ಮ ಮನೆಯ ಮುಂದೆ ಗಿಡ ನೆಡಬೇಡಿ, ಅದು ದೊಡ್ಡದಾದ ಮೇಲೆ ಎಲೆ ನಮ್ಮ ಅಂಗಳಕ್ಕೆ ಬೀಳುತ್ತದೆ. ಅದನ್ನು ತೆಗೆಯುವುದೇ ಮತ್ತೆ ಕೆಲಸವಾದೀತು ಎಂದ ಶ್ರೀಮಂತ ಮನಸ್ಸುಗಳ ಹಸಿರುಪ್ರೀತಿಯನ್ನು ಜೀತ್ ಬಿಡಿಸುತ್ತಾರೆ.
             ಅಭಿವೃದ್ಧಿಗೆ ಮೊದಲ ಬಲಿ ಗಿಡ-ಮರಗಳು. ಅಭಿವೃದ್ಧಿಯು ಹಸಿರನ್ನು ಸಹಿಸುವುದಿಲ್ಲ. ಕೊಡಲಿ ಹಿಡಿದ ಕೈಗಳಿಗೆ ನಾಳೆಗಳು ಬೇಕಾಗಿಲ್ಲ. 'ಆಮ್ಲಜನಕ ಲ್ಯಾಬ್ನಲ್ಲಿದೆ. ಹಣ ನೀಡಿದರೆ ಕುಡಿನೀರು ಬಾಟಲಿಯಲ್ಲಿ ಸಿಗುತ್ತದೆ' ಎಂಬ ದೊಡ್ಡಣ್ಣನ ಯಜಮಾನಿಕೆ. ಹಾಗೆಂತ ಮನೆ ಮುಂದೆ ಇಂತಹ ಗಿಡ ನೆಡಿ ಎಂದು ಬಿನ್ನವಿಸುವ ಅಮ್ಮಂದಿರಿದ್ದಾರೆ. ಜಾಗ ತೋರಿಸಿ, ಗಿಡ ನೆಟ್ಟು,  ಸ್ವತಃ ನೀರೆರೆದು ಆರೈಕೆ ಮಾಡುವ ಕುಟುಂಬಗಳ ಸಸ್ಯ ಪ್ರೀತಿ ಅನನ್ಯ. ಜೀತ್ ಅವರೊಂದಿಗೆ ಮಡದಿ ಸೆಲ್ಮಾ ಮರಿಯಾ ಕೂಡಾ ಗಾಢವಾಗಿ ಹಸಿರನ್ನಂಟಿಸಿಕೊಂಡಿದ್ದಾರೆ.
              ವಿದ್ಯುತ್ ಸರಬರಾಜು ತಂತಿಗಳಿಗೆ ಮರಗಳ ಗೆಲ್ಲುಗಳು ಶಾಶ್ವತವಾಗಿ ತಾಗಬಾರದೆಂದು ಮರಗಳ ಬುಡವನ್ನೇ ಕಡಿದ ದಿನಗಳ ಕಹಿಯನ್ನು ಹಂಚಿಕೊಳ್ಳುತ್ತಾರೆ. ಇಲಾಖೆಯು ಇಂತಹ ಕೆಲಸಗಳಿಗೆ ಹೊರಗುತ್ತಿಗೆ ಕೊಡುತ್ತಿರುವುದರಿಂದ ಅವರಿಗೆ ಯಾವ ಗಿಡವಾದರೇನು? ನಾವು ಸಾಮಾನ್ಯವಾಗಿ ವಿದ್ಯುತ್ ತಂತಿಗಳು ಹೋದೆಡೆ ಹೆಚ್ಚು ಎತ್ತರಕ್ಕೆ ಬೆಳೆಯದ ಮರಗಳನ್ನು ಬೆಳೆಸುತ್ತೇವೆ. ಅದೆಂದೂ ತಂತಿಯನ್ನು ತಾಕಲಾರದು. ಹೀಗಿದ್ದರೂ ಗೆಲ್ಲು ಕಡಿಯುವ ಬದಲು ಮರದ ಬುಡವನ್ನೇ ಕಡಿದುಬಿಡುತ್ತಾರೆ.
             ಹತ್ತನೇ ತರಗತಿಯ ಒಳಗಿನ ವಿದ್ಯಾರ್ಥಿಗಳಿಗೆ ಪರಿಸರದ ಪಾಠ ಅಗತ್ಯವಾಗಿ ಬೇಕು ಎನ್ನುವ ಸತ್ಯವನ್ನು ಜೀತ್ ಕಂಡುಕೊಂಡಿದ್ದಾರೆ. ಪಿಯುಸಿಯ ಬಳಿಕ ಪುಸ್ತಕದೊಳಗೆ ಒದ್ದಾಡುವ ಬದುಕು. ಮತ್ತವರಿಗೆ ಪಠ್ಯೇತರ ಚಟುವಟಿಕೆಗಳತ್ತ ಚಿತ್ತ ಹೊರಳದು. ಮಂಗಳೂರು ನಗರದ ಕೆಲವು ಶಾಲೆಗಳು, ಚರ್ಚ್ ಗಳು ಜೀತ್ ಯೋಚನೆಗೆ ಸ್ಪಂದಿಸಿವೆ. ಮಕ್ಕಳಿಂದಲೇ ಗಿಡ ನೆಡುವ ಪ್ರಕ್ರಿಯೆ ಯಶಸ್ಸಾಗಿದೆ. ಶಿಕ್ಷಣ ಇಲಾಖೆಯು ಹಸಿರಿನ ಪಾಠಕ್ಕೆ ಶಾಲೆಗಳನ್ನು ಸಿದ್ಧಪಡಿಸುವುದು ಕಷ್ಟದ ಕೆಲಸವಲ್ಲ. ಮನಸ್ಸು ಬೇಕಷ್ಟೇ.
             ಬಜಪೆ ವಿಮಾನ ನಿಲ್ದಾಣದ ಸುತ್ತ ನಾಲ್ಕು ನೂರು ವಿವಿಧ ಸಸಿಗಳ ನಾಟಿ, ಸುರತ್ಕಲ್ಲಿಂದ ಬಿ.ಸಿ.ರೋಡು ತನಕದ ರಸ್ತೆಯ ಇಕ್ಕೆಲ, ಅಗಲೀಕರಣಕ್ಕೆ ಒಳಗಾದ ತಲಪಾಡಿ ರಸ್ತೆಗಳ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಟ್ಟ/ನೆಡುವ ಕೆಲಸಗಳ ಮುನ್ನೋಟವನ್ನು ಲೋಬೋ ಮುಂದಿಡುತ್ತಾರೆ. ಎಲ್ಲದಕ್ಕೂ ಇಲಾಖೆಯನ್ನೇ ನೆಚ್ಚಿಕೊಳ್ಳಬಾರದು. ಸಾರ್ವಜನಿಕರಿಗೂ ಬದ್ಧತೆಯಿದೆಯಲ್ವಾ. ಅವರು ಸಹಕರಿಸಿದರೆ ಪರಿಸರವನ್ನು ಉಳಿಸುವುದು ಕಷ್ಟವೇನಲ್ಲ. ಆದರೆ  ಹಾಗಾಗುತ್ತಿಲ್ಲ - ಲೋಬೋ ನೋವು.
              "ಮಹಾನಗರ ಪಾಲಿಕೆಯಲ್ಲಿ 'ಗ್ರೀನ್ ಸೆಸ್' ಅಂತ ತೆರಿಗೆಯನ್ನು ವಸೂಲಿ ಮಾಡುತ್ತಾರೆ. ಈ ಮೊತ್ತ ಎಲ್ಲಿ ವಿನಿಯೋಗವಾಗುತ್ತದೆ. ನಗರ ಎಷ್ಟು ಹಸಿರಾಗಿದೆ. ವರ್ಷಕ್ಕೊಮ್ಮೆ ನಗರದ ಹಸುರೀಕರಣಕ್ಕಾಗಿ ಸರಕಾರದ ವತಿಯಿಂದ ಭರ್ಜರಿ ವೆಚ್ಚದಲ್ಲಿ ಮೀಟಿಂಗ್ ಆಗುತ್ತದೆ. ಭೋಜನದೊಂದಿಗೆ ಹಸುರೀಕರಣದ ಕಲಾಪವೂ ಮುಗಿಯುತ್ತದೆ!" ಜೀತ್ ಆಡಳಿತದ ಒಂದು ಮುಖದತ್ತ ಬೆರಳು ತೋರುತ್ತಾರೆ.
             ಮಗುವನ್ನು ಬೆಳೆಸಲು ಎಷ್ಟು ಶ್ರಮವಿದೆಯೋ ಅಷ್ಟೇ ಶ್ರಮ ಮರವೊಂದನ್ನು ಬೆಳೆಸಲು ಬೇಕು. ಜೀತ್ ಅವರಂತೆ ನಗರದಲ್ಲಿ ಡ್ಯಾನಿಯಲ್, ಕಾರ್ತಿಕ್ ಸುವರ್ಣ, ಮೈನಾ ಶೇಟ್, ಸುಭಾಸ್ ಆಳ್ವ, ಮಧು,  ಹಸನಬ್ಬ... ಮೊದಲಾದ ಏಕವ್ಯಕ್ತಿ ಹಸುರು ಸೈನ್ಯವು ನಗರದ ಹಸುರೀಕರಣದಲ್ಲಿ ತೊಡಗಿಸಿಕೊಂಡಿದೆ. ಈ ಸೈನ್ಯಗಳನ್ನು ಗಟ್ಟಿಗೊಳಿಸುವ ಮನಸ್ಸುಗಳು ಬೇಕಾಗಿವೆ.
          ಆರ್ಥಿಕ ಶ್ರೀಮಂತಿಕೆ ಕಾಲಬುಡದಲ್ಲಿ ಬಿದ್ದಿದೆ ಎಂದು ನಾವೆಲ್ಲ ಭ್ರಮಿಸಿದ್ದೇವೆ. ಆದರೆ ಉಸಿರಿಗೆ ಶಕ್ತಿ ನೀಡುವ ಶ್ರೀಮಂತಿಕೆ ಹಸುರಿನಲ್ಲಿದೆ ಎನ್ನುವ ಜಾಣ ಮರೆವಿಗೆ ಚಿಕಿತ್ಸೆ ಬೇಕಾಗಿದೆ.

(published in udayavani/nelada nadi coloum)


ಅಪ್ಪೆಯ ನೋವಿಗೆ ದನಿಯಾದ ಮಾತುಕತೆ



             ಮಲೆನಾಡಿನ ಬದುಕಿನಲ್ಲಿ ಮಿಳಿತವಾದ ಅಪ್ಪೆಮಿಡಿಯ ಸುತ್ತ ಎಷ್ಟೊಂದು ಕತೆಗಳು! ಹಿತ್ತಿಲಿಂದ ಹಿತ್ತಿಲಿಗೆ ರುಚಿ ವೈವಿಧ್ಯವನ್ನು ಹೊಂದಿದ ಮಿಡಿಯು ಊಟದ ಬಟ್ಟಲನ್ನು ಸೇರಿದಾಗ ನೆನಪುಗಳು ಮಾತನಾಡುತ್ತವೆ. ಘಟನೆಗಳು ರೋಚಕತೆಯನ್ನು ಪಡೆಯುತ್ತವೆ. ಮನೆಗೆ ಆಗಮಿಸಿದ ಅತಿಥಿಗೆ ಮಿಡಿಗಳ ಸುದ್ದಿ ಹೇಳದೆ ಮಾತು ಮುಗಿಯದು.
               ಅಪ್ಪೆಯ ಇರುನೆಲೆಯಿಂದ ನೆಗೆದು ಬೇರೆ ಜಿಲ್ಲೆಗಳಲ್ಲಿ ಬೆಳೆದ ಮರಗಳು ನಿರಾಶೆ ಹುಟ್ಟಿಸಿವೆ. ಅಲ್ಲೋ ಇಲ್ಲೋ ಮಿಡಿ ಬಿಟ್ಟದ್ದು ಬಿಟ್ಟರೆ ಎಲ್ಲರಲ್ಲೂ ವಿಷಾದ. ಪುತ್ತೂರಿನ (ದ.ಕ.) ಗಿಡಗೆಳೆತನ ಸಂಘ 'ಸಮೃದ್ಧಿ'ಯು ಈಚೆಗೆ 'ಅಪ್ಪೆಮಿಡಿ ಮಾತುಕತೆ' ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಕರಾವಳಿಯಲ್ಲಿ ಕಣ್ಣುಮುಚ್ಚಾಲೆಯಾಡುತ್ತಿರುವ ಅಪ್ಪೆಯ ಕತೆಯನ್ನು ಬೊಗಸೆತುಂಬ ತಂದಿದ್ದ ಅಪ್ಪೆಪ್ರಿಯರ ನೋವಿಗೆ ಸಾಂತ್ವನ ಕೊಡುವ ಯತ್ನ.
                ಶಿರಸಿಯ ಅರಣ್ಯ ಕಾಲೇಜಿನ ಅರಣ್ಯ ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಡಾ.ವಾಸುದೇವ್ ಅಪ್ಪೆಯ ನೋವಿಗೆ ದನಿಯಾದರು. ಒಬ್ಬೊಬ್ಬರಲ್ಲಿ ಒಂದೊಂದು ಗಾಥೆ. 'ಇಪ್ಪತ್ತು ವರುಷದಿಂದ ಒಂದೇ ಒಂದು ಕಾಯಿ ಸಿಕ್ಕಿಲ್ಲ', ಎಂದು ಒಬ್ಬರ ನೋವಾದರೆ, ಮತ್ತೊಬ್ಬರದು, 'ವರುಷಕ್ಕೆ ಐದಾರು ಕಾಯಿ ಬಿಡುವ ಮರವನ್ನು ಉಳಿಸಬೇಕೇ?'.. ಇಂತಹ ಹಲವು ಪ್ರಶ್ನೆಗಳನ್ನು ವಾಸುದೇವ್ ಎದುರಿಸಬೇಕಾಯಿತು.
               ನಮ್ಮ ಪ್ರದೇಶಕ್ಕೆ ಹೆಚ್ಚು ಒಗ್ಗುವ, ಹೆಚ್ಚು ಕಾಯಿ ಕೊಡುವ ತಳಿಗಳ ಹುಡುಕಾಟ ಆಗಬೇಕು. ಮಲೆನಾಡಿನ ಹತ್ತಾರು ತಳಿಗಳನ್ನು ಬೆಳೆದು ನೋಡಬೇಕು. ಯಾವುದು ಕರಾವಳಿಗೆ ಸೂಕ್ತ ಎನ್ನುವ ಸಂಶೋಧನೆ  ಆಗಬೇಕಾಗಿದೆ. ಇದಕ್ಕೆಲ್ಲಾ ಸ್ವಲ್ಪ ದೀರ್ಘಕಾಲ ಸಮಯ ಬೇಕಾಗುತ್ತದೆ. ಈಗಾಗಲೇ ಕರಾವಳಿಯಲ್ಲಿ ಕಾಯಿ ಕೊಡುತ್ತಿರುವ ಕೃಷಿಕರ ಅನುಭವ, ತಳಿಗಳ ಅಭಿವೃದ್ಧಿ ಮಾಡಿಕೊಳ್ಳಬೇಕಾದುದು ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಪರಸ್ಪರ ಮಾತುಕತೆಗಳು ನಿರಂತರ ನಡೆಯುತ್ತಿರಬೇಕು. ಮಾಹಿತಿಗಳು ವಿನಿಮಯವಾಗುತ್ತಿರಬೇಕು, ಎನ್ನುತ್ತಾ ತಮ್ಮ ಅನುಭವ ಮತ್ತು ತನ್ನ ಕಾಲೇಜು ಮೂಲಕ ಆದ ತಳಿ ಅಭಿವೃದ್ಧಿ ಕೆಲಸಗಳ ಮಾಹಿತಿ ನೀಡಿದರು.
               ಡಾ.ವಾಸುದೇವ್ ಅಪ್ಪೆಮಿಡಿ ತಳಿಗಳಿಗೆ ವೈಜ್ಞಾನಿಕ ಅಡಿಗಟ್ಟು ಹಾಕುವಲ್ಲಿ ಶ್ರಮಿಸಿದವರು. ಆಗಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಅಪ್ಪೆತಳಿ ದಾಖಲಾತಿ ಕೆಲಸಗಳು ಕೃಷಿಕ ಮಟ್ಟದಲ್ಲಿ ನಡೆದಿತ್ತು. ಶಿವಾನಂದ ಕಳವೆ ತಂಡದ ನೇತೃತ್ವದಲ್ಲಿ ಶಿರಸಿ, ಸಾಗರದಲ್ಲಿ ಅಪ್ಪೆ ಮಿಡಿ ಮೇಳಗಳು ಜರುಗಿದ್ದುವು. ಕಸಿ ಗಿಡಗಳತ್ತ ಒಲವು ಹೆಜ್ಜೆಯೂರಿತ್ತು.
ಕೇಂದ್ರ ಸರಕಾರದ 'ಯುನೈಟೆಡ್ ನೇಶನ್ ಎನ್ವಾಯರನ್ಮೆಂಟ್ ಪ್ರೋಗ್ರಾಂ'ನ ಅಡಿಯ 'ಟ್ರಾಫಿಕಲ್ ಫ್ರುಟ್ ಟ್ರೀಸ್' ಯೋಜನೆಯ ಅನುಷ್ಠಾನದ ಹೊಣೆಯನ್ನು ಅರಣ್ಯ ಕಾಲೇಜು ಹೊತ್ತುಕೊಂಡಿತ್ತು. ಇದರ ಮೂಲಕ ಅಪ್ಪೆ ತಳಿಗಳ ಹುಡುಕಾಟ, ದಾಖಲಾತಿ, ಕೃಷಿಕರೊಂದಿಗೆ ಮಾತುಕತೆ ಪ್ರಕ್ರಿಯೆಗಳು. ಉಷ್ಣವಲಯದ ಕಾಡುಹಣ್ಣುಗಳ ವೈವಿಧ್ಯತೆ, ದಾಖಲಾತಿ, ಸಂರಕ್ಷಣೆ ಮತ್ತು ಬಳಕೆಯು ತಳಮಟ್ಟದಿಂದಲೇ ಆಗಬೇನ್ನುವುದು ಆಶಯ.
                ಮಲೆನಾಡಿನಲ್ಲಿ ಐನೂರಕ್ಕೂ ಮಿಕ್ಕಿ ಅಪ್ಪೆ ತಳಿಗಳಿವೆ. ಕಳೆದೈದು ವರುಷದಲ್ಲಿ ಯೋಜನೆಯಡಿ ನೂರು ಮೂರು ತಳಿಗಳನ್ನು ಆಯ್ಕೆಯಾಗಿವೆ.  ಮಾಳಂಜಿ, ಹಳದೋಟ, ನಂದಗಾರ, ಮಾವಿನಕಟ್ಟ, ದನ್ನಳ್ಳಿ, ಅನಂತಭಟ್ಟ, ಪುರಪ್ಪೆಮನೆ, ಕರೊಲ್ಲ (ಕಡಗಾಯಿ), ಮುದ್ಗಾರ್ (ಕೊಸಗಾಯಿ), ಗಡಹಳ್ಳಿ (ಕುಚ್ಚುಗಾಯಿ) - ಇವಕ್ಕೆ ಟಾಪ್ ಟೆನ್ ಯೋಗ. ಹಣ್ಣು ಜಾತಿಯದ್ದರಲ್ಲಿ 'ವರಟೆ ಗಿಡುಗ, ಮಾಣಗೂರು, ಆಪೂಸ್' ಶ್ರೇಷ್ಠ. ಮಿಡಿಯ ಗಾತ್ರ, ಪರಿಮಳ, ತಾಳಿಕೆ, ವರಷದ ಬಳಿಕವೂ ತಿರುಳು ಬಿಳಿಯಾಗಿರುವುದು, ಹೊರಗಿನ ಬಣ್ಣ ಮಾಸದಿರುವುದು, ಅಧಿಕ ಸೊನೆ.. ಮೊದಲಾದ ಮಾನದಂಡಗಳ ಪರೀಕ್ಷೆಯಲ್ಲಿ ಗೆದ್ದು ಬಂದವುಗಳು.  
           ದಾಖಲಾತಿಯ ನಂತರದ ಹಂತ ಗಿಡಗಳ ಅಭಿವೃದ್ಧಿ. ಕೃಷಿಕರ ಸಹಭಾಗಿತ್ವ. ಕಸಿ ಕೂಟಗಳ ರಚನೆ. ಕಸಿ ತಜ್ಞರನ್ನು ಒಂದೇ ಸೂರಿನಡಿ ತರುವ ಯತ್ನ. ಅವರಿಗೆ ಬೆಂಬಲ. ಕಸಿ ಗಿಡಗಳ ಅಭಿವೃದ್ಧಿ. ಸಾಲ್ಕಣಿ, ಸಿದ್ಧಾಪುರ, ಕಲ್ಲಬ್ಬೆಗಳಲ್ಲಿರುವ ಕಸಿಕೂಟಗಳಿಂದ ಏನಿಲ್ಲವೆಂದರೂ ಇಪ್ಪತ್ತು ಸಾವಿರಕ್ಕೂ ಮಿಕ್ಕಿ ಕಸಿ ಗಿಡಗಳು ಅಭಿವೃದ್ಧಿಗೊಂಡಿವೆ. ಇವುಗಳಲ್ಲಿ ಶೇ. 50-60ರಷ್ಟನ್ನು ಯೋಜನೆಯು ಖರೀದಿಸಿ ಕೃಷಿಕರಿಗೆ ನೀಡಿದೆ.  ಉಳಿದವುಗಳನ್ನು ಕಸಿಕೂಟಗಳೇ ಮಾರಾಟ ಮಾಡುತ್ತಿವೆ.
              ಈಗಾಗಲೇ ನಾಲ್ಕು ಸಾವಿರ ಬೆಳೆಗಾರರಿಗೆ ನಾವು ಅಭಿವೃದ್ಧಿ ಪಡಿಸಿದ ಗಿಡಗಳನ್ನು ನೀಡಿದ್ದೇವೆ.  ಒಬ್ಬರಿಗೆ ನೂರಾರು ಗಿಡ ಕೊಡುತ್ತಿಲ್ಲ. ಮನೆಮಟ್ಟಕ್ಕೆ ಎಷ್ಟು ಬೇಕೋ ಅಷ್ಟನ್ನು ನೀಡುತ್ತೇವೆ. ಹೀಗೆ ಒಯ್ದವರ ಹೆಸರು, ಸಂಪರ್ಕ, ತಳಿಗಳ ದಾಖಲಾತಿ ಇಟ್ಟುಕೊಳ್ಳುತ್ತೇವೆ. ನಂತರ ಅವರನ್ನು ಸಂಪರ್ಕಿಸಿ ಗಿಡಗಳ ಬೆಳವಣಿಗೆಯನ್ನು ವಿಚಾರಿಸುತ್ತೇವೆ, ಎನ್ನುತ್ತಾರೆ ವಾಸುದೇವ್.
              ತಳಿಗಳ ಅಭಿವೃದ್ಧಿ ಆಗುತ್ತಿದ್ದಂತೆ ಉಪ್ಪಿನಕಾಯಿ ಉದ್ಯಮಕ್ಕೆ ಒತ್ತು. ಸಾಲ್ಕಣಿಯ ಲಕ್ಷ್ಮೀನರಸಿಂಹ ಸ್ವಸಹಾಯ ಸಂಘದ ಮೂಲಕ ಉಪ್ಪಿನಕಾಯಿ ತಯಾರಿಗೆ ಅಡಿಗಟ್ಟು. ಗುಣಮಟ್ಟದ ಉತ್ಪನ್ನ ತಯಾರಿಸಲು ತರಬೇತಿ. ಅಧ್ಯಯನ ಪ್ರವಾಸ. ಇದರಿಂದಾಗಿ ಸಂಘದ ಸದಸ್ಯೆಯರಿಗೆ ಸ್ಫೂರ್ತಿ ಬಂದಿದೆ. ಕಳೆದ ವರುಷ ಎರಡೂವರೆ ಕ್ವಿಂಟಾಲ್ ಉಪ್ಪಿನಕಾಯಿ ಸಿದ್ಧಪಡಿಸಿದರೆ, ಈ ವರುಷ ಇದರ ಎರಡು ಪಟ್ಟು! ಮಾರುಕಟ್ಟೆ ಚೆನ್ನಾಗಿದೆ. ಶಿರಸಿಯ ಕದಂಬ ಮಾರ್ಕೆಟಿಂಗ್ ಸಂಸ್ಥೆಯು ಉತ್ಪನ್ನದ ಮಾರಾಟಕ್ಕೆ ಹೆಗಲು ನೀಡಿದೆ.
             ಅಪ್ಪೆ ತಳಿಗಳ ಜತೆಗೆ ಮುರುಗಲು, ಉಪ್ಪಾಗೆ, ಹಲಸಿನ ದಾಖಲಾತಿಗಳೂ ಜತೆಜತೆಗೆ ನಡೆದಿವೆ. ಗಿಡಗಳ ಅಭಿವೃದ್ದಿಯೂ ಆಗುತ್ತಿವೆ. ಹಲಸಿನ ಉತ್ತಮ ತಳಿಗಳ ಹಲಸಿಗೆ ಜನರೊಲವು ಹೆಚ್ಚುತ್ತಿದೆ. ಕೃಷಿಮೇಳ, ಸಮಾರಂಭಗಳಲ್ಲಿ ಮಳಿಗೆ ತೆರೆದು ಗಿಡಗಳನ್ನು ಜನರ ಬಳಿಗೆ ಕಾಲೇಜು ಒಯ್ಯುತ್ತಿದೆ. ಮೊದಲು ಕಾಲೇಜಿನ ಕ್ಯಾಂಪಸಿನಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮಾತ್ರ ಕಾಣಸಿಗುತ್ತಾರೆ. ಈಗ ಕಸಿ ಗಿಡಗಳಿಗಾಗಿ ಕೃಷಿಕರೂ ಬರತೊಡಗಿದ್ದಾರೆ. ಖುಷಿ ತಂದಿದೆ. ಈ ವರುಷದ ದಶಂಬರಕ್ಕೆ ಯೋಜನೆಯ ಅವಧಿ ಮುಗಿಯುತ್ತಿದ್ದರೂ, ಈ ಕೆಲಸವನ್ನು ಕೃಷಿಕರು, ಕಸಿಕೂಟಗಳು ಮುಂದುವರಿಸುತ್ತಾರೆ ಎನ್ನುವ ವಿಶ್ವಾಸ ನಮಗಿದೆ, ಎನ್ನುತ್ತಾರೆ ವಾಸುದೇವ್.
             ವಿಜ್ಞಾನಿಯೊಬ್ಬ ಕೃಷಿಯ ಪರವಾಗಿದ್ದರೆ ಕೃಷಿಕಪರವಾದ ಕೆಲಸಗಳನ್ನು ಹೇಗೆ  ಮಾಡಬಹುದು ಎನ್ನುವ ಮಾತಿಗೆ ವಾಸುದೇವ್ ನಮ್ಮ ಮುಂದೆ ಇದ್ದಾರೆ. ಕೇವಲ ಕುರ್ಚಿಗಂಟಿಕೊಳ್ಳದೆ ಹಳ್ಳಿಗಳಲ್ಲಿ ಓಡಾಡಿ, ಕೃಷಿಕರ ಒಲವನ್ನು ಸಂಪಾದಿಸಿದ ಇಂತಹ ಹಸುರು ಮನಸ್ಸುಗಳು ಹೆಚ್ಚು ರೂಪುಗೊಳ್ಳಲಿ. ಇವರೊಂದಿಗೆ ಕಾಲೇಜಿನ ವರಿಷ್ಠರು, ಸಿಬ್ಬಂದಿಗಳು, ವಿದ್ಯಾರ್ಥಿಗಳ ಅವಿರತ ಶ್ರಮವನ್ನು ಮರೆಯುವಂತಿಲ್ಲ.
              ಪುತ್ತೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಾಸುದೇವ್ ಅವರ ತಳಿ ಅಭಿವೃದ್ಧಿಯ ಗಾಥೆಗೆ ಕಿವಿಯಾದ ಕೃಷಿಕರು, 'ಯೋಜನೆಯನ್ನು ಇನ್ನೈದು ವರುಷ ಮುಂದುವರಿಸಲು ಯತ್ನಿಸಿ, ಎಂದು ಆಗ್ರಹಿಸಿದ್ದರು. (ವಾಸುದೇವ್ : 9448933680)


ಕನಸಿನ ಮನಸ್ಸುಗಳಿಗೆ ಹಸುರಿನ ಮುನ್ನುಡಿ


               ಪುತ್ತೂರಿನ (ದ.ಕ.) ವಿವೇಕಾನಂದ ಕಾಲೇಜಿನಲ್ಲಿ ಅಪರೂಪದ ಹಾಗೂ ಈ ಕಾಲಮಾನದ ಬದುಕಿಗೆ ಅನಿವಾರ್ಯವಾದ ವಿಚಾರ ಸಂಕಿರಣ. ವಿದ್ಯಾರ್ಥಿಗಳಿಗೆ ಕೃಷಿಯ ಅರಿವು ಮೂಡಿಸುವ ಆಶಯ. ವಿವೇಕಾನಂದ ಸೆಂಟರ್ ಫಾರ್ ರಿಸರ್ಚ್ ಸ್ಟಡೀಸ್ ಆಯೋಜನೆ. ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ವಿಘ್ನೇಶ್ವರ ವರ್ಮುುಡಿ ಇವರ ಮೆದುಳ ಮರಿ.
                ಎಲ್ಲರೂ ವ್ಯವಸಾಯದಿಂದ ವಿಮುಖರಾಗುತ್ತಿದ್ದಾರೆ. ಇವರೆಲ್ಲಾ ತಿನ್ನುವುದೇನನ್ನು? ಆರೋಗ್ಯ ಬೇಕಾದರೆ, ಸುಖದಿಂದ ಬದುಕಬೇಕಾದರೆ ಕೃಷಿಗೆ ಮರಳಲೇಬೇಕು ವಿಷಯುಕ್ತ ಆಹಾರದಿಂದ ವಿಮುಖರಾಗಲು ಕೃಷಿಯೊಂದೇ ದಾರಿ, ಅಧಿಕಾರವಾಣಿಯಿಂದ ಮಾತನಾಡಿದವರು ನಾಡೋಜ ಡಾ.ನಾರಾಯಣ ರೆಡ್ಡಿ. ಆಧುನಿಕ ತಂತ್ರಜ್ಞಾನದ ಬೀಸುಹೆಜ್ಜೆಯ ಒಳಗೆ ಮುದುಡಿ ಒದ್ದಾಡುವ ನಮಗೆ ರೆಡ್ಡಿಯವರ ಮಾತು ಕ್ಲೀಷೆ ಎಂದು ಕಂಡರೂ ಆಶ್ಚಯವಿಲ್ಲ. ಯಾಕೆಂದರೆ ರೆಡ್ಡಿಯವರದು ಮುದುಡುವ ಬದುಕಲ್ಲ. ಕೃಷಿ ನೆಲದಲ್ಲಿ ಅರಳಿದ ಬದುಕು, ಇತರರನ್ನು ಅರಳಿಸುವ ಜೀವನ. ಮಣ್ಣನ್ನು ಮೆಟ್ಟಿ, ಅದರೊಂದಿಗೆ ಬದುಕನ್ನು ಕಟ್ಟಕೊಂಡವರಿಗೆ ಮಾತ್ರ ಹೀಗೆ ಹೇಳಲು ಸಾಧ್ಯ.
                ತನ್ನ ಮಗ ಇಂಜಿನಿಯರ್, ಡಾಕ್ಟರ್ ಆಗಬೇಕೆನ್ನುವ ಕಾಣದ ಲೋಕದ ಕನಸನ್ನು ಕಟ್ಟಿಕೊಂಡೇ ಮಕ್ಕಳನ್ನು ಪಿ.ಯು.ಸಿ.ಗೆ ಸೇರಿಸಿಬಿಡುತ್ತೇವೆ. ಐಟಿ ಸಹವಾಸದಿಂದ ಮರಳಿ ಕೃಷಿಯನ್ನು ಅಪ್ಪಿಕೊಂಡ ಗುತ್ತಿಗಾರು ದೇವಸ್ಯ ಲಕ್ಷ್ಮಣರ ಮಾತು ಹೆಚ್ಚು ಪ್ರಸ್ತುತ - ಬಹುತೇಕ ಹೆತ್ತವರಿಗೆ ಐಟಿ ಏನೆಂಬುದೇ ಗೊತ್ತಿರುವುದಿಲ್ಲ. ಅಲ್ಲಿಯ ಬವಣೆಯ ಕಿಂಚಿತ್ ಅರಿವೂ ಇರುವುದಿಲ್ಲ. ಲಕ್ಷದ ಲಕ್ಷ್ಯದಲ್ಲಿ ಮಕ್ಕಳನ್ನು ಬೆಳೆಸುತ್ತಾ, ತಮ್ಮ ಆಸೆಯನ್ನು ಅವರ ಮೇಲೆ ಹೇರಿ ನಗರಕ್ಕೆ ಅಟ್ಟಿ ಬಿಡುತ್ತೇವೆ. ನಗರ ಸೇರಿದ ಯುವ ಮನಸ್ಸುಗಳ ಒದ್ದಾಟ ನಮಗೆ ಬಿಡಿ, ನಮ್ಮನ್ನು ವಿರೋಧಿಸುವವರಿಗೂ ಬೇಡ...
                 ಮಕ್ಕಳ ಮನಸ್ಸನ್ನು ಅರಿಯದೆ, ಓದದೆ ನಮ್ಮ ಅತೃಪ್ತಿಯನ್ನು ಹೇರಿ ತೃಪ್ತಿ ಪಡುವ ನಾವು ಮಕ್ಕಳನ್ನು ಕೂಪಕ್ಕೆ ತಳ್ಳುತ್ತಿದ್ದೇವೆ ಎನ್ನುವ ಕನಿಷ್ಠ ಪ್ರಜ್ಞೆ ಇಲ್ಲವಲ್ಲಾ. ಒಬ್ಬ ಅಧ್ಯಾಪಕ, ಉಪನ್ಯಾಸ, ಸಂಶೋಧಕನಾಗಬೇಕೆಂದು ನಾವು ಬಯಸುತ್ತಿಲ್ಲ. ನನ್ನ ಮಗ ಕೃಷಿಕನಾಗಬೇಕೇಂದು ಯಾವ ಅಪ್ಪನೂ ಹೇಳುತ್ತಿಲ್ಲ! ಯಾಕೆಂದರೆ ಸಮಸ್ಯೆಗಳ ಮಧ್ಯೆ ಬದುಕನ್ನು ಕಟ್ಟಿಕೊಳ್ಳಲು ತ್ರಾಸ ಪಡುತ್ತಿರುವ ಅಪ್ಪನ ಪಾಡು ಮಗನಿಗೆ ಬರಬಾರದೆನ್ನುವ ದೂರದೃಷ್ಟಿ. ಸರಿ, ಬೇರೆ ಕ್ಷೇತ್ರದಲ್ಲಿ ಸಮಸ್ಯೆ ಇಲ್ಲವೆಂದು ಹೇಳಿದವರಾರು? ಎಲ್ಲಾ ಕ್ಷೇತ್ರದಲ್ಲೂ ಸಮಸ್ಯೆಗಳು ಬೆಟ್ಟದಷ್ಟಿವೆ.
                   ಬದುಕಿನ ಒಟ್ಟು ಉದ್ದೇಶ ಹೊಟ್ಟೆಪಾಡು. ಮೂರು ಹೊತ್ತು ಉಣ್ಣಬೇಕು, ಕುಟುಂಬವನ್ನು ಸಾಕಬೇಕು, ಸಮಾಜದಲ್ಲಿ ಗೌರವದಿಂದ ಬದುಕಬೇಕು. ನಗರದಲ್ಲಿ ವಾಸ ಮಾಡುವ ಮಂದಿಗೆ ಉದ್ಯೋಗ ಅನಿವಾರ್ಯ. ಆದರೆ ಹಳ್ಳಿಯಲ್ಲಿ ಬೆಳೆದು, ಕೃಷಿಯಲ್ಲಿ ಬದುಕನ್ನು ರೂಪಿಸಿಕೊಂಡ ಅನೇಕ ಮನಸ್ಸುಗಳಿಗೆ ರಾಜಧಾನಿಯ ಕಾಂಚಾಣದ ಸದ್ದು ಸೆಳೆದುಬಿಡುತ್ತದೆ.
                ಕೃಷಿಯನ್ನು ಕೃಷಿಕರೇ ಪ್ರೀತಿಸದಿದ್ದರೆ ಮಕ್ಕಳು ಸಹಜವಾಗಿ ಬೇರೆ ಅವಕಾಶಕ್ಕಾಗಿ ಮುಖ ತಿರುಗಿಸುತ್ತಾರೆ.  ನಮ್ಮ ತೋಟದ ಉತ್ಪನ್ನಗಳನ್ನು ಊರಲ್ಲೇ ಮಾರುಕಟ್ಟೆ ಸೃಷ್ಟಿಸಲು ಯತ್ನಿಸಿದರೆ ಅದುವೇ ದೊಡ್ಡ ಆದಾಯ, ವಿಚಾರಸಂಕಿರಣದಲ್ಲಿ ಕೃಷಿಕ ಡಾ.ಡಿ.ಸಿ.ಚೌಟರ ಮಾತು ಮನನೀಯ. ಅವರ ತೋಟದ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ಮಾರುಕಟ್ಟೆ ಮಾಡಿದವರು. ಇತರರಿಗೂ ಪ್ರೇರೇಪಣೆ ನೀಡಿದವರು.
                 ಎಳೆಯ ವಯಸ್ಸಿನಲ್ಲಿ ಕೃಷಿಯ ಖುಷಿಯನ್ನು ಹಂಚಿಕೊಳ್ಳುವ ಮನಃಸ್ಥಿತಿ ಮನೆಯಲ್ಲಿಲ್ಲ. ಹೆತ್ತವರ ಮನದಲ್ಲಿಲ್ಲ. ನೂರಕ್ಕೆ ನೂರು ಅಂಕ ಪಡೆಯಬೇಕೆನ್ನುವ ಧಾವಂತದ ಪ್ರಖರದ ಹಿಂದೆ ಮಕ್ಕಳನ್ನು ಅಂಗಳಕ್ಕೆ ಇಳಿಯಲೂ ಬಿಡದ ಬಿಗುಸ್ಥಿತಿ! ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿಯ ಅರಿವನ್ನು ಬಿತ್ತುವ, ಬಿತ್ತಿದ ಅರಿವನ್ನು ಮೊಳಕೆ ಬರುವಂತೆ ಮಾಡುವ ಯತ್ನವನ್ನು ಮಾಡುತ್ತಿದೆ. ಕೃಷಿ ಲೋಕವನ್ನು ತೋರಿಸುವ ಹೊಣೆ ಹೊತ್ತಿದೆ.
                 'ಕೃಷಿ ಉಳಿಸಿ-ಕೃಷಿಯಲ್ಲಿ ತೊಡಗಿಸಿ' ಎನ್ನುವ ಧ್ಯೇಯ ವಾಕ್ಯದಡಿಯಲ್ಲಿ ವರುಷಪೂರ್ತಿ ಕಾರ್ಯಹೂರಣವನ್ನು ರೂಪಿಸಿದ ಡಾ.ವಿಘ್ನೇಶ್ವರ ವರ್ಮುಡಿ ಹೇಳುತ್ತಾರೆ, ಭವಿಷ್ಯದಲ್ಲಿ ನಮ್ಮ ಕೃಷಿ ಕ್ಷೇತ್ರ ಹಚ್ಚಹಸಿರಾಗಿ ಉಳಿಯಬೇಕಿದ್ದರೆ ಎರಡು ರೀತಿಯ ಕ್ರಾಂತಿಗಳಾಗಬೇಕು. ಮೊದಲನೆಯದು 'ಕೃಷಿಯಲ್ಲಿ ಯುವ ಕ್ರಾಂತಿ', ಮತ್ತೊಂದು 'ಎರಡನೇ ಹಂತದ ಹಸಿರು ಕ್ರಾಂತಿ'. ಕೃಷಿ ಕ್ಷೇತ್ರದಲ್ಲಿ ಯುವಕ್ರಾಂತಿಯಾಗಬೇಕಿದ್ದರೆ ಅವರನ್ನು ಆಕರ್ಶಿಸುವ ಮತ್ತು ಇಲ್ಲಿರುವ ಸಮಸ್ಯೆಗೆ ನಿವಾರಣೆಗೆ ಆದ್ಯತೆ ನೀಡಬೇಕು. ಯುವ ಜನಾಂಗವನ್ನು ಕೃಷಿ ಕ್ಷೇತ್ರದತ್ತ ಸೆಳೆಯುವ ಪ್ರಯತ್ನಗಳಾಗಬೇಕು'.
                 ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳು ಆಯ್ದ ವಿದ್ಯಾರ್ಥಿಗಳನ್ನು ವಿಚಾರಸಂಕಿರಣಕ್ಕೆ ಕಳುಹಿಸಿದ್ದುವು. ಕಲಾಪದಲ್ಲಿ ಭಾಗವಹಿಸಿದ ಮಂಗಳೂರು ವಿವಿಯ ವಿದ್ಯಾರ್ಥಿನಿ ರೇಖಾ ಅಭಿಪ್ರಾಯ ನೋಡಿ, ನಾವೆಲ್ಲಾ ಭೋಗದ ಜೀವನವನ್ನು ಒಪ್ಪಿಕೊಂಡಿದ್ದೇವೆ. ಕೈಯಲ್ಲಿರುವ ಮೊಬೈಲ್ ಸರ್ವಸ್ವವಾಗಿದೆ. ಕೃಷಿ ಮಾಡುವ ಅಪ್ಪ ಕೃಷಿಯಲ್ಲಿ ಪ್ರೀತಿ ಇಟ್ಟುಕೊಂಡಿಲ್ಲ. ಮಕ್ಕಳಲ್ಲಿ ಹೇಗೆ ಬರಲು ಸಾಧ್ಯ. ಒತ್ತಾಯಪೂರ್ವಕವಾಗಿ ಕೃಷಿಯಲ್ಲಿ ಪ್ರೀತಿಯನ್ನು ರೂಢಿಸಿಕೊಳ್ಳಬೇಕು.
                 ಪುತ್ತೂರಿನ ಕೋಡಿಬೈಲ್ ಏಜೆನ್ಸೀಸ್ ಇದರ ಯಜಮಾನರಾದ ಸತ್ಯನಾರಾಯಣ ತಮ್ಮ ತಂಡದೊಂದಿಗೆ ವಿದ್ಯಾರ್ಥಿಗಳಿಗೆ ವಿವಿಧ ಯಂತ್ರೋಪಕರಣಗಳ  ಪ್ರಾತ್ಯಕ್ಷಿಕೆ ನೀಡಿದ್ದರು. ಸ್ವತಃ ವಿದ್ಯಾರ್ಥಿಗಳ ಕೈಯಿಂದಲೇ ಚಾಲೂ ಮಾಡಿಸುತ್ತಿದ್ದರು. ಮರ ಕೊಯ್ಯಲುವ ಗರಗಸ, ಯಾಂತ್ರೀಕೃತ ಗಾಡಿ, ಪವರ್ ಸ್ಪ್ರೇಯರ್, ಕಳೆ ಕೊಚ್ಚು ಯಂತ್ರಗಳು ವಿದ್ಯಾರ್ಥಿಗಳನ್ನು ಸೆಳೆದಿತ್ತು.
                ವಿವೇಕಾನಂದ ಕಾಲೇಜಿನ ಕೃಷಿ ಕಾಳಜಿಗೆ ಅಭಿನಂದನೆ. ಪಠ್ಯದಲ್ಲಿ ಕೃಷಿಯ ಸೊಲ್ಲಿಲ್ಲದೇ ಇದ್ದರೂ ಪಠ್ಯೇತರ ಚಟುವಟಿಕೆಯಾಗಿ ಕೃಷಿಗೆ ವಿಶಯಕ್ಕೆ  ಒತ್ತು ನೀಡುತ್ತಿರುವುದು ಆದರ್ಶ. ಕಾಲೇಜು ಈಗ ಚಿನ್ನದ ಸಂಭ್ರಮದಲ್ಲಿದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಚಿನ್ನದ ಹೊಳಪನ್ನು ಬೀರುವ ಕಾಲೇಜಿನ ಉಪಕ್ರಮ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ. ಚಿನ್ನದ ನೆನಪಿಗಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಂದೆ ಹಲವು ಯೋಜನೆ, ಯೋಚನೆಗಳಿವೆ.

(ಕನ್ನಡ ಪ್ರಭ/ಅನ್ನದಬಟ್ಟಲು ಕಾಲಂ)


ಕೃಷಿಯ ಬೆರಗು ಮೂಡಿಸಿದ ಮುತ್ತಣ್ಣ


               ನವಂಬರ್ ಕನ್ನಡದ ತಿಂಗಳು. ರಾಜ್ಯೋತ್ಸವದ ಸಡಗರ. ಪ್ರಶಸ್ತಿಗಳಿಗಾಗಿ ಕಾದಾಟ, ಹೋರಾಟ, ಜಾತಿ ಲೆಕ್ಕಾಚಾರ, ರಾಜಕೀಯ ಮೇಲಾಟ. ಪ್ರಶಸ್ತಿ ಪಡೆದು ಬೀಗುವ ಮನಸ್ಸುಗಳು. ಪ್ರಶಸ್ತಿ ಸಲ್ಲಲೇಬೇಕಾದ ಅರ್ಹರ ಮಾತು ಮೌನವಾಗುವ ಹೊತ್ತು.
               ಅರ್ಹತೆಯೊಂದೇ ಮಾನದಂಡವಾಗಿರುವ ಪ್ರಶಸ್ತಿಯೊಂದನ್ನು ಸುಕೋ ಬ್ಯಾಂಕ್ ಸ್ಥಾಪಿಸಿದೆ. ಮೊದಲ ಪ್ರಶಸ್ತಿಗಳ ಘೋಷಣೆಯಾಗಿದೆ. ಪ್ರಶಸ್ತಿ ಆಯ್ಕೆ ತಂಡವು ಸದೃಢವಾಗಿದ್ದು ಎಲ್ಲೂ ಎಡವಟ್ಟಾಗುವ ಸಾಧ್ಯತೆಗಳಿಲ್ಲ. ಯಾಕೆಂದರೆ ರಾಜ್ಯದೆಲ್ಲೆಡೆ ಓಡಾಡಿ ಅರ್ಹರನ್ನು ಹುಡುಕಿ, ಅರ್ಜಿ ಗುಜರಾಯಿಸಿದವರಿದ್ದರೆ ಅವರ ತೋಟದಲ್ಲಿ ಓಡಾಡಿ ಇಂಚಿಂಚು ಪರೀಕ್ಷೆ ಮಾಡುತ್ತದೆ. ಮೊದಲ 'ಸುಕೃತ ಕೃಷಿ ಪ್ರಶಸ್ತಿ'ಗೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ನವಲಿಹಾಳಿನ ಮುತ್ತಣ್ಣ ಪೂಜಾರ್ ಆಯ್ಕೆಯಾಗಿದ್ದಾರೆ.
              ಮುತ್ತಣ್ಣರಿಗೆ ಕುರಿ ಸಾಕಣೆ ಕುಟುಂಬದ ವೃತ್ತಿ. ಅಕ್ಷರ ಕಲಿಯಬೇಕೆನ್ನುವ ಹಪಾಹಪಿ. ಮೊದಲಾಕ್ಷರ ಕಲಿಸುವವರಿಲ್ಲ. ಶಾಲೆಗೆ ತೆರಳುವ ವಿದ್ಯಾರ್ಥಿಗಳನ್ನು ನೋಡುತ್ತಾ ಕನಸು ಹೆಣೆದರು. ಅಪ್ಪನಲ್ಲಿ ರಂಪಾಟ. ಅಂಕಲಿಪಿ, ಪಾಟಿ ತಂದಿತ್ತರು. ಬರೆಯಲು ಗೊತ್ತಿಲ್ಲ. ದಾರಿಹೋಕರಲ್ಲಿ ವಿನಂತಿಸಿದರು. ಅವರು ಬರೆದುದನ್ನು ಕಲಿತರು. ಶಾಲೆಯ ಸಮಯಕ್ಕೆ ಹೊರಗೆ ನಿಂತು ಪಾಠಕ್ಕೆ ಕಿವಿಯಾದರು. ಕುರಿ ಕಾಯುವ ಕೆಲಸದ ಬಳಿಕ ಅಕ್ಷರದೊಂದಿಗೆ ಮಾತನಾಡಿದರು. ಅಕ್ಷರ ಪ್ರೇಮಕ್ಕೆ ಅಕ್ಷರವೇ ಒಲಿಯಿತು. ಅಕ್ಷರಗಳನ್ನು ಜೋಡಿಸಿ ತ್ರಾಸದಿಂದ ಓದಿದ ಮೊದಲ ಪದ - 'ಕಾಡು ಎಂದರೆ ನೀರು. ನೀರು ಎಂದರೆ ಅನ್ನ. ಅನ್ನ ಎಂದರೆ ಪ್ರಾಣ'. ಇದು ಅರಣ್ಯ ಇಲಾಖೆಯ ಫಲಕದ ಸಂದೇಶ.
            ಆತ್ಮವಿಶ್ವಾಸ ವೃದ್ಧಿಯಾಯಿತು. ಅಕ್ಷರ ಹೆಕ್ಕುವ ಕೆಲಸ ವೇಗ ಪಡೆಯಿತು. ಓದುವ ಕ್ರಿಯೆ ನಿರಂತರವಾಯಿತು. ತನ್ನ ಮಾವ ಸಿದ್ದಪ್ಪ ಹೆಗಡೆಯವರು ಹೊಲವನ್ನು ಹೊಂದಿದ್ದು, ಅವರ ಮಕ್ಕಳು ಅಕ್ಷರಸ್ಥರಾಗುತ್ತಿರುವುದು ಪ್ರೇರಣೆ ನೀಡಿತು. 'ಒಂದೆಡೆ ನಿಂತು ಕೃಷಿ ಮಾಡಿದರೆ ಖುಷಿ ಪಡುತ್ತಾ, ಮಕ್ಕಳನ್ನು ಶಾಲೆಗೆ ಸೇರಿಸಲು ಸಾಧ್ಯ' ಮುತ್ತಣ್ಣ ಪೂಜಾರರ ಯೋಚನೆ. ಕುರಿ ಸಾಕಿ ಸಂಪಾದಿಸಿದ ಹಣದಲ್ಲಿ ಹಾನಗಲ್ ಮಂತಗಿಯಲ್ಲಿ 1990ರಲ್ಲಿ ಚಿಕ್ಕ ಭೂಮಿ ಖರೀದಿಸಿದರು.
             ಮುತ್ತಣ್ಣ ಕುಟುಂಬಕ್ಕೆ ಚಿಕ್ಕೋಡಿಯಲ್ಲಿ ಸಣ್ಣ ಜಮೀನಿತ್ತು. ಕುರಿ ಸಾಕಣೆಯ ಪಾರಂಪರಿಕ ವೃತ್ತಿಯಿಂದಾಗಿ ಜಮೀನು ಹಡಿಲಿಗೆ ಬಿದ್ದಿತ್ತು. ಹಾನಗಲ್ ಜಮೀನಿನಲ್ಲಿ ಕೃಷಿ ಮಾಡಿ ಅನುಭವದ ಕೊರತೆಯಿಂದಾಗಿ ಸೋತರು. ಸೋಲನ್ನು ನೋಡಿ ಗೇಲಿ, ತಮಾಶೆ ಮಾಡಿದವರು ಅಧಿಕ.  ಕೃಷಿಕನಾಗಬೇಕೆಂಬ ಕನಸಿಗೆ ಅವಮಾನಗಳು ಪುಷ್ಟಿ ನೀಡಿದುವು. ಅಷ್ಟಿಷ್ಟು ಓದಲು ಗೊತ್ತು. ಕೃಷಿ ಕಲಿಕೆಗೆ ನಾಂದಿ. ಮತ್ತವರು ತಿರುಗಿ ನೋಡಿಲ್ಲ.
             ಬೀಳುತ್ತಾ ಏಳುತ್ತಾ ಬೆಳೆದ ಮುತ್ತಣ್ಣ ಈಗ ಮೂವತ್ತೊಂದು ಎಕರೆ ಜಮೀನಿನ ಒಡೆಯ. ಚಿಕ್ಕು, ಅಡಿಕೆ, ತೆಂಗು, ಕಬ್ಬು, ಬಾಳೆ, ಮಾವಿನ ಸಮೃದ್ಧತೆ ತೋಟದಲ್ಲಿದೆ. ಬದುವಿನಲ್ಲಿ ಮರಗಳ ಕೃಷಿ. ಜೋಳ, ಅಲಸಂಡೆ, ಉದ್ದು, ಶೇಂಗಾ, ಸೂರ್ಯಕಾಂತಿ, ಮೆಣಸು, ತರಕಾರಿ.. ಹೀಗೆ  ವೈವಿಧ್ಯದ ಬೆಳೆಗಳು. ಜತೆಗೆ ಮೀನು ಸಾಕಣೆ, ಎರೆಗೊಬ್ಬರ, ಜೇನು, ಹೈನುಗಾರಿಕೆ, ನಾಟಿ ಕೋಳಿಯಂತಹ ಉಪಕಸುಬು. ಮೂರು ಎಕರೆ ಭತ್ತದ ಬೇಸಾಯ. ಎರಡು ವರುಷದಿಂದ 'ಶ್ರೀ' ಪದ್ಧತಿಯನ್ನು ಅಳವಡಿಸಿ ಎಕರೆಗೆ ನಲವತ್ತ ನಾಲ್ಕು ಕ್ವಿಂಟಾಲ್ ಇಳುವರಿ ಪಡೆದರು.
             ಅಡಿಕೆ ಸಸಿಗಳ ನರ್ಸರಿ. ಮಾವು-ಚಿಕ್ಕು ಕಸಿ ಗಿಡಗಳಿಗೆ ಮೊದಲಾದ್ಯತೆ. ಕೃಷಿಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ ಮುತ್ತಣ್ಣ ತನ್ನ ಪಾರಂಪರಿಕ ವೃತ್ತಿಯನ್ನು ಮರೆಯಲಿಲ್ಲ. ಒಂದೂವರೆ ಸಾವಿರ ಕುರಿ ಸಂಸಾರವಿದೆ. ಇವರ ಸಹೋದರನಿಗೆ ಸಾಕಣೆ ಹೊಣೆ. ತೋಟದ ಬದುವಿನಲ್ಲಿ ಎರಡುವರೆ ಸಾವಿರಕ್ಕೂ ಮಿಕ್ಕಿ ತೇಗದ ಸಸಿಗಳು ಬೆಳೆಯುತ್ತಿವೆ. ಒಂದು ಸಾವಿರಕ್ಕೂ ಮಿಕ್ಕಿ ಮಾವಿನ ಮರಗಳು ಇಳುವರಿ ನೀಡುತ್ತಿವೆ.
              ಈಗ ಮುತ್ತಣ್ಣ ಅವರ ಹೊಲಕ್ಕೆ ಕೃಷಿಕರು ಭೇಟಿ ನೀಡುತ್ತಾರೆ. ಅನುಭವ ಹಂಚಿಕೊಳ್ಳುತ್ತಾರೆ. ವಿಚಾರ ಸಂಕಿರಣ ಏರ್ಪಡಿಸುತ್ತಾರೆ. ಕೃಷಿಯ ಆರಂಭದ ದಿವಸಗಳಲ್ಲಿ - ಕುರಿ ಕಾಯುವವನಿಗೆ ಕೃಷಿ ಒಲಿಯದು ಎಂದು - ಕೃಷಿಕರೇ ತಪ್ಪು ಮಾಹಿತಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ತನ್ನಂತೆ ಇತರರು ಮೋಸ ಹೋಗಬಾರದು ಎನ್ನುವ ಎಚ್ಚರ ಮುತ್ತಣ್ಣರಲ್ಲಿದೆ. ಹಾಗಾಗಿ ತನ್ನ ಅನುಭವನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳುತ್ತಾರೆ. ಇವರ ಬೆವರಿಗೆ ಈಗ ಬೆಲೆ ಬಂದಿದೆ. 'ಸುಕೃತ ಕೃಷಿ ಪ್ರಶಸ್ತಿ' ಮುಡಿಯೇರಿದೆ. ರಾಜ್ಯವೇ ಹೆಮ್ಮೆ ಪಡುವ ರೀತಿಯಲ್ಲಿ ಕೃಷಿ ಮಾಡಿದ ಮುತ್ತಣ್ಣ ಅವರ ಕೃಷಿ ಜೀವನ ಒಂದು ಜೀವಂತ ಪಾಠ.
              ಮುತ್ತಣ್ಣ ಅವರ ಸಾಧನೆಯನ್ನು ಶಿವಾನಂದ ಕಳವೆ ಹೀಗೆ ಕಟ್ಟಿಕೊಡುತ್ತಾರೆ, ಮುತ್ತಣ್ಣ ಕುರಿ ಕಾಯುತ್ತಾ ಇರಬಹುದಿತ್ತು. ಪರಾಳ (ಬುತ್ತಿಯ ಚೀಲ)ದಲ್ಲಿ ಒಂದು ಪಾಟಿ ಸೇರಿದ ಬಳಿಕ ಪವಾಡದಂತೆ ಬದಲಾವಣೆ ಘಟಿಸಿದೆ.. ಅಲೆಮಾರಿ ಹುಡುಗ ಅಕ್ಷರ ಕಲಿತು ಮಣ್ಣಿಗೆ ಮರಳಿ ಕೃಷಿ ಕಟ್ಟಿದ ರೀತಿ ಅಚ್ಚರಿ. 'ಬದುಕು ಬದಲಿಸಬಹುದು' ಎನ್ನುವುದಕ್ಕೆ ಇವರ ಕೃಷಿಗಾಥೆ ಸಾಕ್ಷಿಯಾಗಿದೆ.
               ಸುಕೃತ ಕೃಷಿ ತಂತ್ರಜ್ಞಾನ ಪ್ರಶಸ್ತಿಯನ್ನು ಸಾಗರ ಹೆಗಡೆ ಫಾರ್ಮಿನ ಲಕ್ಷ್ಮೀನಾರಾಯಣ ಹೆಗಡೆ ಪಡೆದಿದ್ದಾರೆ. ಅರ್ಜಿ, ಬಯೋಡಾಟ, ಫೋಟೋ ಯಾವುದನ್ನೂ ಸಲ್ಲಿಸದೆ ಅವರ ಸಾಧನೆಯೇ ಪ್ರಶಸ್ತಿಯನ್ನು ಹುಡುಕಿ ಬಂದಿದೆ. ಕೃಷಿಗೆ ಪೂರಕವಾಗುವಂತಹ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಹೆಗಡೆಯವರು ಮುಂದು.
                 ಸುಕೋ ಬ್ಯಾಂಕ್ ಪ್ರಾಯೋಜಿತ ಕೃಷಿ ಪ್ರಶಸ್ತಿ ಮತ್ತು ತಂತ್ರಜ್ಞಾನ ಪ್ರಶಸ್ತಿಗಳ ಮೊತ್ತ ತಲಾ ಒಂದು ಲಕ್ಷ ರೂಪಾಯಿಗಳು. ನಾಡಿನ ಅನುಭವಿಗಳಿರುವ ಆಯ್ಕೆ ಸಮಿತಿ. ಕೃಷಿ ಪತ್ರಕರ್ತ ಶಿವಾನಂದ ಕಳವೆ ಸಂಚಾಲಕರು. ಈ ವರುಷ ಯುವ ಕೃಷಿಕರಿಗೆ ಪ್ರಶಸ್ತಿ. ಆಹಾರ, ತೋಟಗಾರಿಕೆ ಅಥವಾ ವಾಣಿಜ್ಯ ಬೆಳೆಗಳಲ್ಲಿ ಸಾಧನೆ ಮಾಡಿರಬೇಕು. ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲುಸೀಮೆಯ ಯಾವುದೇ ಕೃಷಿ ಪರಸರದಲ್ಲಿ ಸಾಧನೆಗೈದವರಿಗೆ ಅವಕಾಶ.
(ಚಿತ್ರ, ಮಾಹಿತಿ - ಶಿವಾನಂದ ಕಳವೆ, ಶಿರಸಿ)