Thursday, August 13, 2015

Woman Jackfruit Entrepreneur from Thiruvananthapuram


Mini Udayakumar,  a Thiruvananthapuram (Kerala) housewife took training in Jackfruit Value Addition from CARD KVK Pathnamthitta six months ago and has straightaway plunged into production.

She makes Chakka Varatty, JF Mixture, Halwa, Jam, Jelly and few other products – but only jackfruit products. She has to buy fruits from neighbourhood or from Market. On an average, she shells out around 100 to 150 Rs for a firm fleshed (Varikka) jackfruit. Soft-fleshed ones are available damn cheap at Rs 25.

Mini’s hubby Udayakumar helps her. Mini is selling her products throw ‘Swadeshi’ for the time being. The couple have decided to start their own unit & brand very shortly.

                                                                      Phone : 90205  566123

(Courtesy : Shree Padre)

Monday, July 27, 2015

ಬದುಕಿನ ಹಳಿ ಜಾರುತ್ತಿದೆ, ಕೈತಾಂಗು ಬೇಕಾಗಿದೆ!

                 ಮ್ಯಾಗಿ ಬೂದಿಯಾಗುತ್ತಿದ್ದಂತೆ ಅದಕ್ಕಂಟಿದ ಕಳಂಕ ಮಸುಕಾಗುತ್ತಿದೆ! ಕಂಪೆನಿಯೇ ಕೋಟಿಗಟ್ಟಲೆ ಉತ್ಪನ್ನವನ್ನು ಸುಡುತ್ತಿದೆ. ಮ್ಯಾಗಿ ಮರೆವಿಗೆ ಜಾರುತ್ತಿರುವಾಗಲೇ ಆಹಾರ ಕಲಬೆರಕೆಯ ನಿರಾಕಾರ ಮುಖಗಳ ಸಾಕಾರತೆಯ ಗೋಚರ.  ಇವೆಲ್ಲಾ ಗೊತ್ತಿದ್ದೂ ಒಪ್ಪಿಕೊಂಡ ಮನಃಸ್ಥಿತಿ. ಒಂದು ಸಂಸ್ಕೃತಿಯನ್ನು ಹಾಳುಮಾಡಲು ಅಲ್ಲಿನ ಭಾಷೆ ನಾಶವಾದರೆ ಸಾಕಂತೆ. ಮನುಕೋಟಿ ನಾಶವಾಗಲು ಬಾಂಬ್ಗಳು, ಅಣ್ವಸ್ತ್ರಗಳು ಬೇಡ. ಆಹಾರ ವಿಷವಾದರೆ ಸಾಕು. ನಾವೆಲ್ಲಾ ಈ ಜಾಡಿನ ಜಾರುವ ಬದುಕಿನ ಹಳಿಯಲ್ಲಿ ವಾಲುತ್ತಿದ್ದೇವೆ.
                ವಾಹಿನಿಗಳನ್ನು ಆಗಾಗ್ಗೆ ಇಣುಕುತ್ತಿರುತ್ತೇನೆ. ಹಿಂಜುವ ಧಾರಾವಾಹಿ ಭರಾಟೆಯ ಮಧ್ಯೆಯೂ ಆಹಾರ ಸೇರಿರುವ ವಿಷಗಳ ಘೊರತೆಯ ಪ್ರಸಾರ. ಅಧ್ಯಯನ ವರದಿಗಳ ಬಿತ್ತರ. ಕಲಬೆರಕೆ ವ್ಯವಹಾರದ ಬಯಲು. ಲೋಕಕ್ಕೂ ತಮಗೂ ಸಂಬಂಧವಿಲ್ಲದಂತಿರುವ ಕಾಳಸಂತೆಕೋರರ ದರ್ಶನ. ಬೆಣ್ಣೆ, ಸಾಸ್, ಹಾಲು, ಐಸ್ಕ್ರೀಮ್, ಎಣ್ಣೆ... ಕೃತಕಗಳ ಮಾಲೆಗಳ ಯಶೋಗಾಥೆ ಬರುತ್ತಿದ್ದಾಗ ಚಾನೆಲ್ ಬದಲಾಯಿಸುತ್ತೇವೆ! ಕನಿಷ್ಠ ಅರಿವಿನ ದೃಷ್ಟಿಯಿಂದಲಾದರೂ ನೋಡಬಾರದೇ. ಮಕ್ಕಳಿಗೂ ತೋರಿಸಬಾರದೆ? ಬೆಳೆಯುತ್ತಿರುವ ಕಂದಮ್ಮಗಳ ಭವಿತವ್ಯಕ್ಕಾದರೂ ಆಹಾರದ ಅರಿವನ್ನು ಹೆಚ್ಚಿಸಿಕೊಳ್ಳಲೇಬೇಕಾಗಿದೆ.
               ಬಣ್ಣ ಹಾಕಿದ ಉಣ್ಣುವ ಅಕ್ಕಿಯಿಂದ ಬೇರ್ಪಟ್ಟ ಬಣ್ಣದೊಳಗೆ ಆರೋಗ್ಯದ ಗುಟ್ಟಿಲ್ಲ. ವಿಷ ಮಜ್ಜನದಿಂದ ಮಿಂದು ಅಡುಗೆ ಮನೆ ಸೇರಿದ ತರಕಾರಿಗಳಲ್ಲಿ ಸ್ವಾಸ್ಥ್ಯದ ಸೋಂಕಿಲ್ಲ. ಹಾಲೆನ್ನುತ್ತಾ ಹಾಲಾಹಲವನ್ನು ಕುಡಿಸುವ ಪ್ಯಾಕೆಟ್ಟಿನಲ್ಲಿ ಸದೃಢ ಭವಿಷ್ಯವಿಲ್ಲ. ಇಂತಹ ಇಲ್ಲಗಳ ಮಧ್ಯೆ ಈಗ ಹೊಕ್ಕಿದೆ - 'ಪ್ಲಾಸ್ಟಿಕ್ ಅಕ್ಕಿ'ಯ ಗುಮ್ಮ. ಚೀನದಿಂದ ಹಾರಿ ಭಾರತ ಸೇರಿದೆ. ವಿಯೆಟ್ನಾಂ, ಇಂಡೋನೇಶ್ಯಾ, ಮಲೇಶ್ಯಾ, ಸಿಂಗಾಪುರದಲ್ಲೂ ತಲ್ಲಣವನ್ನುಂಟುಮಾಡಿದೆ. ಬಹುಶಃ ಇಂದಲ್ಲ, ಹಲವು ವರುಷಗಳಿಂದಲೇ ಈ ಜಾಲ ಅಜ್ಞಾತವಾಗಿ ಜೀವಂತವಾಗಿದ್ದಿರಬಹುದು.
               ಅಕ್ಕಿಯೊಂದಿಗೆ ಕೃತಕ ಪ್ಲಾಸ್ಟಿಕ್ ಅಕ್ಕಿಯನ್ನು ಮಿಶ್ರ ಮಾಡಿದರೂ ಗೊತ್ತಾಗದಂತಹ ತಾಜಾತನ. ಸಿಹಿ ಗೆಣಸು, ಪ್ಲಾಸ್ಟಿಕ್, ಕೃತಕ ರಾಸಾಯನಿಕ ಅಂಟು ಇದರ ಒಳಸುರಿ. 'ಮೂರು ಬೌಲ್ ಪ್ಲಾಸ್ಟಿಕ್ ಅಕ್ಕಿಯ ಅನ್ನವನ್ನು ತಿಂದರೆ ಒಂದು ಪ್ಲಾಸ್ಟಿಕ್ ಚೀಲ ತಿಂದ ಸಮವಂತೆ!' ವಿಷವನ್ನು ತಿಂದು ತಿಂದು ವಿಷದ ಕೊಂಪೆಯಾದ ನಮ್ಮ ದೇಹವು ಪ್ಲಾಸ್ಟಿಕನ್ನು ಕೂಡಾ ಕರಗಿಸಬಲ್ಲುದು! ಸಿಂಥೆಟಿಕ್ ಅಕ್ಕಿಯ ಹಿಂದಿನ ಆರ್ಥಿಕ ವ್ಯವಹಾರದೊಳಗೆ ಮನುಕುಲದ ನಾಶದ ಬ್ಯಾಲೆನ್ಸ್ ಶೀಟ್ ಇದೆ.
ಚೀನಾ ಯಾಕೆ, ನಮ್ಮ ಸುತ್ತಮುತ್ತಲಿನ ಅಂಗಡಿಗಳಲ್ಲಿರುವ ಉತ್ಪನ್ನಗಳನ್ನು ಸಾಚಾ ಎನ್ನಲು ಧೈರ್ಯ ಬರುವುದಿಲ್ಲ. ಈಚೆಗೆ ರಾಜಧಾನಿಯಿಂದ ಬಂಧುವೊಬ್ಬರು ರಾಗಿಯನ್ನು ತಂದಿದ್ದರು. ನೀರಿನಲ್ಲಿ ತೊಳೆದಾಕ್ಷಣ ಅರ್ಧಕ್ಕರ್ಧ ಕಾಳುಗಳು ಬಿಳುಪಾದುವು. ಅದಾವುದೋ ಕಾಳು ರೂಪದ, ಥೇಟ್ ರಾಗಿಯನ್ನೇ ಹೋಲುವ ಬಿಳಿ ಹರಳುಗಳು. ಬಣ್ಣ ಮಿಶ್ರಿತ ನೀರಿಗೂ ಕಮಟು ವಾಸನೆ. ಕೈಗಂಟಿದ ಬಣ್ಣ ತೊಳೆದುಹೋಗದಷ್ಟು ಗಾಢ. ಅವರಿಗೆ ತಿಳಿಸಿದಾಗ, ಇಲ್ಲಾರಿ..... ನಾವು ಮನೆಯಲ್ಲಿ ಅದನ್ನೇ ಬಳಸೋದು. ನಮಗೇನೂ ಆಗಿಲ್ಲ. ಅದು ರಾಗಿಯ ಸಹಜ ಬಣ್ಣವಲ್ವಾ.. ಎಂದಾಗ ಸುಸ್ತಾದೆ.
               ಹಿಂದೊಮ್ಮೆ ಕೇರಳದಲ್ಲಿ ಕಾಳುಮೆಣಸು ಮಾರುವ ದಲ್ಲಾಳಿಗಳು ಮಾಡಿದ ಎಡವಟ್ಟು ಹಸಿಯಾಗಿದೆ. ಐವತ್ತು ಟನ್ ಕಾಳುಮೆಣಸಿಗೆ ಡೀಸಿಲ್ ಮಿಶ್ರ ಮಾಡಿದ್ದರು. ತೇವದಿಂದಾಗಿ ಬೂಸ್ಟ್ ಹಿಡಿಯಬಹುದೆಂಬ ಭಯ.  ದೀರ್ಘ ತಾಳಿಕೆಯ ದೂರದೃಷ್ಟಿ. ವಿದೇಶಕ್ಕೆ ರಫ್ತಾದ ಉತ್ಪನ್ನವು ಪುನಃ ಮರಳಿದಾಗ ಆಡಳಿತ ಚುರುಕಾಯಿತು. ಅಧಿಕಾರಿಗಳು ಟೈ ಸರಿಮಾಡಿಕೊಂಡರು. ಕಲಬೆರಕೆ ಪತ್ತೆಯಾಯಿತು. ಸುಮಾರು ಮೂವತ್ತೆಂಟು ಕೋಟಿಗೂ ರೂಪಾಯಿಗೂ ಮಿಕ್ಕಿದ ಕಾಳುಮೆಣಸನ್ನು ಸುಡುವ ಆದೇಶಕ್ಕೆ ಸಹಿ ಬಿತ್ತು.
              ಕುಡಿಯುವ ನೀರಿನಿಂದ ಅನ್ನದ ಬಟ್ಟಲ ತನಕ ಮಿಳಿತವಾದ ವಸ್ತುಗಳಲ್ಲಿ ಕಲಬೆರಕೆಯಿದೆ ಎಂಬ ಸತ್ಯವನ್ನು ಆರೋಗ್ಯ ಸಚಿವರೇ ಒಪ್ಪಿಕೊಂಡ ಹೇಳಿಕೆಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ರಾಗಿಹಿಟ್ಟು, ಹೆಸರುಬೇಳೆ, ಅಡುಗೆ ಎಣ್ಣೆ, ಚಹ, ಕಾಫಿ, ಹಾಲು, ಸಾಸ್, ಅವಲಕ್ಕಿ... ಹೀಗೆ ನೂರರ ಹತ್ತಿರ ಉತ್ಪನ್ನಗಳಿಗೆ ಸಾಚಾ ಲೇಬಲ್ ಹಚ್ಚಲು ಕಷ್ಟವಾಗುವಷ್ಟು ಜಾಲ ವಿಸ್ತೃತವಾಗಿದೆ. ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಡ್ಡಿಕೊಂಡ ಉತ್ಪನ್ನಗಳು ಅಯೋಗ್ಯವೆಂದು ಛೀಮಾರಿ ಹಾಕಿಸಿಕೊಂಡಿವೆ! ಯೋಚಿಸಲಾಗದಷ್ಟು ಬೃಹತ್ತಾಗಿ ಬೆಳೆದ ಕರಾಳ ಲೋಕದ ನೆರಳಿನಿಂದ ಬದುಕಿನ ಹಳಿ ತಪ್ಪುತ್ತಿದೆ. ಕೈತಾಂಗು ಬೇಕಾಗಿದೆ.
               ಆಹಾರದಲ್ಲಿ ಕಲಬೆರಕೆ ಹೊಸ ವಿಷಯವಲ್ಲ. ರಾಜಾರೋಷವಾಗಿ ನಡೆಯುವ ವ್ಯವಸ್ಥಿತ ವ್ಯವಹಾರ. ಸರಕಾರದ ವರಿಷ್ಠರಿಂದ ಅಂಗಡಿ ಮಾಲಕನ ತನಕದ ಕೈಗಳ ಕೈವಾಡ. ಅಕ್ಕಿಗೆ ಬಣ್ಣ, ಹಾಲಿಗೆ ಬಿಳಿ ವರ್ಣದ ಇನ್ನೇನೋ, ಸಕ್ಕರೆಯೊಂದಿಗೆ ಮಿಶ್ರವಾಗುವ ಅದಾವುದೋ ಹರಳು.. ಹೀಗೆ ಗುರುತು ಹಿಡಿಯದಷ್ಟು ಜಾಣ್ಮೆಯ ಕರಾಮತ್ತು. ಅಪರೂಪಕ್ಕೊಮ್ಮೆ ಅಲ್ಲಿಲ್ಲಿ ಪತ್ತೆಯಾಗುತ್ತದೆ. ಕೇಸ್ ದಾಖಲಾಗುತ್ತದೆ. ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ನ್ಯಾಯಾಲಯದ ಮೆಟ್ಟಿಲು ಏರುತ್ತದೆ. ಆಮೇಲೆ ಏನಾಗುತ್ತದೆ ಅಂತ ಗೊತ್ತಿಲ್ಲ.
                  ಆಹಾರದ ಕಲಬೆರಕೆಯನ್ನಷ್ಟೇ ಮಾತನಾಡುತ್ತೇವೆ. ಹಿಂದೆ ತಿರುಗಿ ನೋಡಿ. ಆಹಾರ ಉತ್ಪಾದನೆ ಮಾಡುವ ಹೊಲದಿಂದ ತೊಡಗಿ, ಯಾಂತ್ರೀಕರಣದ ವರೆಗೆ ಕಲಬೆರಕೆಯ ಮಾಲೆ ಮಾಲೆ. ಬೇಕೋ, ಬೇಡವೋ ಹೊಲಗಳಿಗೆ ರಾಸಾಯನಿಕ ಬೆರಕೆ ಮಾಡಿದೆವು. ಕೀಟನಾಶಕವನ್ನು ಸುರಿದೆವು. ಬಿತ್ತನೆಬೀಜ ಮೊಳಕೆ ಬಾರದ ದೃಷ್ಟಾಂತ ಎಷ್ಟು ಬೇಕು? ನೀರಿನಲ್ಲೂ ಕಲಬೆರಕೆಯಿಲ್ವಾ. ಸೇವಿಸುವ ಗಾಳಿಯೂ ಕಲ್ಮಶ. ಹಾಲಿಗೆ ನೀರು ತಾನಾಗಿ ಹರಿದು ಬರುವುದಿಲ್ಲವಲ್ಲಾ-ಅಲ್ಲೂ ಬೆರಕೆಯ ಭೂತ. ಹಾಲಿಗೆ ಅದಾವುದೋ ಪುಡಿ ಬೆರೆಸಿ 'ದಪ್ಪ ಹಾಲು' ಮಾರುವ ನಿಪುಣರು ಎಷ್ಟಿಲ್ಲ?
               ಬಳಸುವ ಯಂತ್ರೋಪಕರಣಗಳಲ್ಲೂ ಕಲಬೆರಕೆ! ಲಕ್ಷಗಟ್ಟಲೆ ಹಣ ತೆತ್ತರೂ ಅಸಲಿ ಪಡೆಯಲು ತ್ರಾಸ.   ಸಬ್ಸಿಡಿ ಫೈಲುಗಳು ಮಾಡುವ ರಾದ್ದಾಂತಗಳೇ ಬೇರೆ. ಪ್ರದರ್ಶಿಸುವುದು ಅಸಲಿ. ಬಿಕರಿ ಮಾಡುವುದು ನಕಲಿ. ಮನುಷ್ಯನ ಮನಃಸ್ಥಿತಿಯಲ್ಲೂ ಗೊಂದಲ. ಸಾಚಾತನದ ಯೋಚನೆಯಿಲ್ಲ. ದಿಢೀರ್ ಹಣ ಮಾಡುವ ಚಿತ್ತಸ್ಥಿತಿ. ಇದ್ದ ಸಂಪನ್ಮೂಲವನ್ನು ವೃದ್ಧಿಸುವ ಯೋಜನೆ. ಆಗ ಕೆಟ್ಟ ಯೋಚನೆಯ ಬೀಜದ ಮೊಳಕೆ. ಮೊಳಕೆಯೊಡೆದು ಮರವಾದರೆ ಸಾಕು, ಕಳಚಿಕೊಳ್ಳದಷ್ಟು ಬೇರುಗಳನ್ನು ಬದುಕಿನಲ್ಲಿ ಇಳಿಸಿರುತ್ತದೆ. ಜೀವನದ ರೂಪೀಕರಣದ ರೂಪವೇ ಹೀಗಿದ್ದ ಮೇಲೆ ಕಲಬೆರಕೆಯ ಭೂತವನ್ನು ಹೊಡೆದೋಡಿಸುವುದು ಹೇಗೆ?
              'ಗ್ರಾಹಕರೇ ದೇವರು' ಎಂಬ ಫಲಕ ಅಂಗಡಿಯಲ್ಲಿ ನೋಡಿದ್ದೇನೆ. ಸರಿ, ದೇವರು ಮಾತನಾಡುವುದಿಲ್ಲವಲ್ಲಾ! ಭಕ್ತನ ಕೋರಿಕೆಯನ್ನು ಈಡೇರಿಸುವುದು ದೇವರ ಕೆಲಸ! ಭಕ್ತನ ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳಲಾಗದ ಅಸಹಾಯಕತೆ. ನೋಡಿಯೂ ನೋಡದಂತಿರಬೇಕಾದ ಸ್ಥಿತಿ. ಆಮಿಷಗಳ ಮಹಾಪೂರ. ರಿಯಾಯಿತಿಗಳ ಕೊಡುಗೆ. ಹೊಗಳಿಕೆಯ ಹೊನ್ನಶೂಲ. ಬೇಡದಿದ್ದರೂ ಸಾಲ ಸೌಲಭ್ಯ. ದೇವರಿಗೆ ಇನ್ನೇನು ಬೇಕು? ದಿವ್ಯ ಮೌನ.
               ಭಾರತದಲ್ಲಿ ಆಹಾರ ಸುರಕ್ಷತೆ ಕಾಪಾಡಿಕೊಳ್ಳಲು ಜಾರಿಯಲ್ಲಿದ್ದ 'ಆಹಾರ ಕಲಬೆರಕೆ ತಡೆ ಕಾಯ್ದೆ-1954', ನಿಯಮಗಳು-1955 ಹಾಗೂ ಇತರ ಆಹಾರ ಸಂಬಂಧದ ಕಾಯ್ದೆಗಳನ್ನು ರದ್ದು ಪಡಿಸಿ ಹೊಸದಾಗಿ ಏಕೀಕೃತವಾದ 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006' ನಿಯಮಗಳು, ನಿಬಂಧನೆಗಳನ್ನು 2011 ಆಗಸ್ಟಿನಿಂದ ಜಾರಿಗೆ ತಂದಿದೆ. ತಿನ್ನಲು ಯೋಗ್ಯವಲ್ಲದ, ಹಾನಿಕಾರಕ, ನಕಲಿ ಪದಾರ್ಥಗಳನ್ನು ಬೆರೆಸುವುದು ತಪ್ಪೆಂದು ಒತ್ತಿ ಹೇಳಿದೆ. ಅನೈರ್ಮಲ್ಯ ವಾತಾವರಣದಲ್ಲಿ ಉತ್ಪನ್ನ ತಯಾರಿಕೆ, ಆಹಾರದಲ್ಲಿ ಪೌಷ್ಟಿಕತೆಯನ್ನು ಕಡಿಮೆ ಮಾಡುವುದು, ತಪ್ಪು ಜಾಹೀರಾತು ನೀಡುವುದು ತಪ್ಪೆಂದು ಹೇಳಿದೆ. ತಪ್ಪಿದಲ್ಲಿ ಇಪ್ಪತ್ತೈದು ಸಾವಿರದಿಂದ ಹತ್ತು ಲಕ್ಷ ರೂಪಾಯಿ ತನಕ ದಂಡ, ಆರೇಳು ತಿಂಗಳು ಜೀವಾವಧಿ ಶಿಕ್ಷೆ ವಿಧಿಸಿದೆ. ಇವೆಲ್ಲಾ ಪಾಲನೆ ಆಗುವುದು ಯಾವಾಗ?
              ಆಹಾರ ಕ್ರಮ, ಜೀವನ ಶೈಲಿಯಲ್ಲಿ ಮಾರ್ಪಾಡು, ಯೋಚನೆಗಳು ಮತ್ತು ಸಮಸಾಮಯಿಕ ವಿಚಾರಗಳ ಅರಿವನ್ನು ಪಡೆಯುವುದು ಅನಿವಾರ್ಯ. ಬಹುತೇಕ ಬಂದಿಗೆ ಕಲಬೆರಕೆ, ವಿಷಗಳ ಗಾಢತೆ ಗೊತ್ತಿದೆ. ಗಂಭೀರವಾಗಿ ಯೋಚಿಸಲು ಕಾಂಚಾಣದ ನಾದವು ಬಿಡುತ್ತಿಲ್ಲ. ಎಲ್ಲಿಯ ವರೆಗೆ ಆಹಾರದ ನಿರ್ಲಿಪ್ತತೆ ಇರುತ್ತದೋ ಅಲ್ಲಿಯ ವರೆಗೆ ಕಲಬೆರಕೆ ಮಾಡುವವರು ಮಗ್ಗುಲಲ್ಲೇ ಇರುತ್ತಾರೆ. ವಿಷ ಹಾಕುವವರು ನೆರೆಮನೆಯಲ್ಲೇ ಇರುತ್ತಾರೆ. ನಮ್ಮ ಮಕ್ಕಳ ಆರೋಗ್ಯ ಸ್ವಾಸ್ಥ್ಯಕ್ಕಾದರೂ ಆಹಾರ ಕ್ರಮಗಳಲ್ಲಿ ಮಾರ್ಪಾಡು ಅಗತ್ಯ. ಹೇಗೆಂಬುದು ನಂನಮ್ಮ ವಿವೇಚನೆಗೆ ಬಿಟ್ಟದ್ದು. ಯಾಕೆಂದರೆ ಅನುಸರಿಸುವ ಮಾದರಿಗಳು ಇಲ್ಲ. ಕತ್ತಲೆಯಲ್ಲಿ ಬೆಳಕನ್ನು ಅರಸಲು ಕಾನೂನು ಸಹಾಯ ಮಾಡದು.

ಚಿತ್ರ : ನೆಟ್
( ನೆಲದನಾಡಿ/ಉದಯವಾಣಿ/23-7-2015 ಪ್ರಕಟ)

Monday, July 6, 2015

ಹಲಸಿಗೆ ವ್ಯಾಪಕ ಮುಂಭಡ್ತಿ

              ಐದಾರು ದಶಕದ ಹಿಂದಿನ ಸ್ಥಿತಿಯನ್ನು ಕೃಷಿಕ ಅಡ್ಕ ಗೋಪಾಲಕೃಷ್ಣ ಭಟ್ ನೆನಪಿಸಿಕೊಂಡರು, "ತುತ್ತಿಗೆ ತತ್ವಾರದ ದಿನಗಳಲ್ಲಿ ಎರಡು ಸೌಟು ಗಂಜಿಯೊಂದಿಗೆ ಹೆಚ್ಚೇ ಹಲಸಿನ ಪಲ್ಯವನ್ನು ಸೇರಿಸಿಕೊಂಡು  ಹೊಟ್ಟೆ ತುಂಬಿಸುತ್ತಿದ್ದೆವು. ಮಧ್ಯಾಹ್ನ ಅತಿಥಿಗಳು ಬಂದಾಗ ಊಟದ ಮೊದಲು ಹಲಸಿನ ಹಣ್ಣಿನ ಸಮಾರಾಧನೆ. ಬಂದವರ ಅರ್ಧ ಹೊಟ್ಟೆ ತುಂಬಿತೋ, ನಂತರವಷ್ಟೇ ಭೋಜನ. ಹಲಸಿನ ಸೀಸನ್ ಮುಗಿಯುವಾಗ ಸಂಕಟವಾಗುತ್ತಿತ್ತು."
             2015 ಜೂನ್ 14. ಬಿ.ಸಿ.ರೋಡು (ದ.ಕ.) ಶ್ರೀನಿವಾಸ್ ರೆಸಿಡೆನ್ಸಿಯಲ್ಲಿ ಹಲಸಿನ ಸವಿಯೂಟ. ಇಪ್ಪತ್ತೆಂಟು ವಿಧದ ಹಲಸಿನ ಖಾದ್ಯಗಳು. 199 ರೂಪಾಯಿ ಶುಲ್ಕ ನೀಡಿ ನೂರಾರು ಹಲಸು ಪ್ರಿಯರು ಭಾಗವಹಿಸಿದ್ದರು. ಸವಿಯೂಟ ಸವಿದು ತೇಗಿದರು. ಕಬಾಬ್, ಮಂಚೂರಿಯನ್, ಹಲ್ವ, ಐಸ್ಕ್ರೀಮ್... ಇತ್ಯಾದಿ. ಗಂಜಿಯ ಬಟ್ಟಲಿಂದ ಹೋಟೆಲ್ ಟೇಬಲಿಗೆ ಹಲಸು ಏರಿದುದರ ಹಿಂದೆ ದಶಕದ ಅಜ್ಞಾತ ಶ್ರಮವಿದೆ.
              2002ರಲ್ಲಿ ಸಾಗರ ತಾಲೂಕಿನ ಕೆಳದಿಯಲ್ಲಿ ಮೊದಲ ಹಲಸು ಮೇಳ ಜರುಗಿತು. ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರದ ಆಯೋಜನೆ. ನಿರ್ದಿಷ್ಟವಾದ ಕಾರ್ಯಯೋಜನೆ ಇರಲಿಲ್ಲವಾದರೂ ಆ ಭಾಗದ ವಿವಿಧ ತಳಿಗಳು ಒಂದೆಡೆ ಸೇರಿದುವು. ಮಾತುಕತೆ ಆರಂಭವಾದುವು. ಐದಾರು ವರುಷ ಬಳಿಕ ಪ್ರಥಮವಾಗಿ ಕೇರಳದ ವಯನಾಡಿನ ಉರವು ಸಂಸ್ಥೆಯು ಮೇಳದ ಸ್ವರೂಪ ನೀಡಿದರೆ, ಕನ್ನಾಡಿನಲ್ಲಿ ಬೈಫ್ ಉತ್ಸವವಾಗಿ ಆಚರಿಸಿತು. ಆ ಬಳಿಕ ಮೇಳಗಳ ಮಾಲೆ. ಈ ವರೆಗೆ ಏನಿಲ್ಲವೆಂದರೂ ಎಪ್ಪತ್ತೈದಕ್ಕೂ ಮಿಕ್ಕಿ ಮೇಳಗಳು ಸಂಪನ್ನವಾಗಿರಬಹುದು. ದೂರದ ಮಿಜೋರಾಂ, ಮಹಾರಾಷ್ಟ್ರದ ದಾಪೋಲಿ, ತಮಿಳುನಾಡಿನಲ್ಲೂ ಕೂಡಾ.
             ಬೆಂಗಳೂರು ವಿಶ್ವವಿದ್ಯಾನಿಲಯದ ಆಗಿನ ಉಪಕುಲಪತಿ ಡಾ.ನಾರಾಯಣ ಗೌಡರ ಮುಂದಾಳ್ತನದಲ್ಲಿ ವಿವಿಯ ಒಳಗೆ ಹಲಸಿನ ಪರಿಮಳ ಹಬ್ಬಿತು. ತೂಬುಗೆರೆ ಹಲಸು ಬೆಳೆಗಾರರ ಸಂಘ ಸ್ಥಾಪನೆಯಾಯಿತು. ವಿವಿ ಆವರಣದಲ್ಲಿ ಸೆಮಿನಾರು, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನಗಳು ಏರ್ಪಾಡಾದುವು. ಲಾಲ್ಭಾಗಿನಲ್ಲಿ ಹಲಸಿನ ಮಾರಾಟಕ್ಕೆ ವ್ಯವಸ್ಥೆಯಾಯಿತು. ಕೃಷಿಕರಿಗೆ ಬಿಸಾಕು ದರದ ಬದಲಾಗಿ ಉತ್ತಮ ವರಮಾನ ಬರಲು ಆರಂಭವಾಯಿತು.
               ಮೇಳಗಳು ಮೂಡಿಸಿದ ಭರವಸೆಯ ಹಿಂದೆ ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಶ್ರಮವಿದೆ. ಹಲಸು ಆಂದೋಳನವನ್ನು ಹುಟ್ಟುಹಾಕಿದ ಪತ್ರಿಕೆಯು ದೇಶವಲ್ಲ, ವಿದೇಶಿ ಹಲಸು ಪ್ರಿಯರ ಕದವನ್ನೂ ತಟ್ಟಿದೆ. ಹೊಸ ವಿಚಾರಗಳ ತುಣುಕುಗಳನ್ನು ಜಾಲತಾಣಗಳ ಗುಂಪುಗಳ, ಮಿಂಚಂಚೆ ಮೂಲಕ ವಿನಿಮಯ. ಕನ್ನಡೇತರ ಭಾಷೆಗಳನ್ನು ತಲಪಿದ್ದು ಹೀಗೆ. ಹೊಸ ತಳಿ, ಉತ್ಪನ್ನಗಳ ಸುಳಿವು ಸಿಕ್ಕಾಗ ಬೆನ್ನೇರಿ ಮಾಹಿತಿ ಕಲೆ ಹಾಕುವ ನಿರಂತರ ಕೆಲಸಗಳು. ಇದರಿಂದಾಗಿ ಹಲಸಿನ ಕೆಲಸಗಳು ಮತ್ತು ಅಂತಹ ಸಂಘಟನೆ, ವ್ಯಕ್ತಿಗಳನ್ನು ಒಗ್ಗೂಡಿಸುವ ಕೆಲಸ ನಡೆಯುತ್ತಾ ಬಂತು.
                ಮೇಳಗಳಲ್ಲಿ ಮೊದಲಿಗೆ ಹಪ್ಪಳ, ಚಿಪ್ಸ್ನಂತಹ ಸಾಂಪ್ರದಾಯಿಕ ಉತ್ಪನ್ನಗಳೇ ಪ್ರದರ್ಶನಗಳಲ್ಲಿ ಕಂಡು ಬಂದುವಷ್ಟೇ. ಹೊಸಹೊಸ ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿರಲಿಲ್ಲ. ಹಲಸಿನ ಮೌಲ್ಯವರ್ಧನೆ ನಕ್ಷೆಯಲ್ಲಿ ಭಾರತ ಇಲ್ಲ. ದೇಶದಲ್ಲಿ ಇಂದು ಕಿಂಚಿತ್ತಾದರೂ ಮೌಲ್ಯವರ್ಧನೆ ನಡೆಯುತ್ತಿರುವುದು ಮಹಾರಾಷ್ಟ್ರ, ಕೀರ್ನಾಟಕ, ಕೇರಳ ರಾಜ್ಯಗಳಲ್ಲಿ. ಹಲಸಿನ ಸಾಮೂಹಿಕ ಜಾಗೃತಿ ಮೂಡಿಸುವಲ್ಲಿ ಕೇರಳ ಉಳಿದೆರಡು ರಾಜ್ಯಗಳನ್ನೂ ತುಂಬ ಹಿಂದೆ ಹಾಕಿದೆ.
            ವಯನಾಡಿನ ಎಡವಗ ಪಂಚಾಯತ್ ಹಲಸಿನ ಮೌಲ್ಯವರ್ಧನೆಗೆ ದೊಡ್ಡ ಅಡಿಗಟ್ಟು ಹಾಕಿತ್ತು. ಸ್ಥಳೀಯರನ್ನು ಒಳಗೊಳ್ಳುವ ಹಲಸಿನ ಉತ್ಪನ್ನ ತಯಾರಿ ಮತ್ತು ಬಿಕರಿ ವ್ಯಾಪಕವಾದ 'ಕೃಷಿಕ ಆತ್ಮಹತ್ಯೆಯನ್ನು ತಡೆಯುವ ಉಪಾಯ' ಎಂದೂ ಪಂಚಾಯತಿಗೆ ಮನದಟ್ಟಾಗಿದೆ. ಯಾವುದೋ ಕಾರಣದಿಂದ ಯೋಜನೆಯು ಕಾರ್ಯಗತವಾಗಿಲ್ಲ. 'ಹಲಸು ಬದುಕಿನ ಶಾಕ್ ಅಬ್ಸೋರ್ಬರ್' ಎಂದು ಡಾ.ನಾರಾಯಣ ಗೌಡರು ಆಗಾಗ್ಗೆ ಹೇಳುತ್ತಿರುತ್ತಾರೆ. ನಡುವಿಲ್ ಎಂಬ ಹಳ್ಳಿಮೂಲೆಯ ಪಂಚಾಯತ್ ಉತ್ಸವ ಮಾಡುವ ಮೂಲಕ ಗಮನ ಸೆಳೆದಿದೆ.
               ಈಚೆಗೆ ಕಣ್ಣೂರು ಸನಿಹದ ತಳಿಪರಂಬದಲ್ಲಿ ಹಲಸಿನ ಮೌಲ್ಯವರ್ಧನೆಗಾಗಿಯೇ ಆರ್ಟೋಕಾರ್ಪಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹುಟ್ಟಿದೆ. ವರಟ್ಟಿ, ಚಿಪ್ಸ್ಗಳಲ್ಲದೆ ಹಲಸಿನ ಬೀಜದ ಹುಡಿ, ಸೊಳೆಯ ಹುಡಿ, ಪಲ್ಪ್.. ಸಿದ್ಧ ಮಾಡುವ ಈ ಸಂಸ್ಥೆಗೆ ಉತ್ತಮ ಪ್ರತಿಕ್ರಿಯೆ. "ಕೇರಳವು ಹಲಸಿನ ಬಳಕೆಯಲ್ಲಿ, ಮೌಲ್ಯವರ್ಧನೆಯಲ್ಲಿ ಮುಂದು. ಸಮಾಜದ ವಿವಿಧ ವರ್ಗದವರಲ್ಲಿ ಉತ್ಸವಗಳು ಹೊಸ ಉತ್ಸಾಹ ಮೂಡಿಸಿದೆ. ಇಪ್ಪತ್ತಕ್ಕೂ ಮಿಕ್ಕಿ ಗುಂಪುಗಳು ಸಕ್ರಿಯವಾಗಿವೆ. ಒಂದು ಹಲಸಿನ ಹಣ್ಣು/ಕಾಯಿಂದ ಒಂದು ಸಾವಿರ ರೂಪಾಯಿ ಟರ್ನ್ ಓವರ್ ಗಳಿಸಬಹುದೆನ್ನುವ ವಿಶ್ವಾಸ ಬಂದಿದೆ" ಎನ್ನುತ್ತಾರೆ ಹಿರಿಯ ಪತ್ರಕರ್ತ ಶ್ರೀ ಪಡ್ರೆ.
                ಕೇರಳದ ಪಾಲಕ್ಕಾಡಿನ ಪೇಯೆಸ್ಸೆಸ್ಪಿ ಕಳೆದ ವರ್ಷ ಆರು ಟನ್ ಹಲಸಿನ ಕಾಯಿಸೊಳೆ ಒಣಗಿಸಿ ಮಾರಿದೆ. ಕನ್ನಾಡಿನ ಶಿರಸಿಯಲ್ಲಿ ವಿನುತ ಪರಮೇಶ್ವರ ಹೆಗಡೆ ಐದು ವರುಷದಿಂದ ಹಲಸಿನ ಹಣ್ಣಿನ ಬಾರ್ ತಯಾರಿಸುತ್ತಿದ್ದಾರೆ. ಇದುವರೆಗೆ ಮೂರು ಟನ್ ಬಾರ್ ತಯಾರಿಸಿ ಮಾರುಕಟ್ಟೆಗೆ ಒದಗಿಸಿದ ಇವರನ್ನು ಈಚೆಗೆ ಸನ್ಮಾನಿಸಿದ್ದಾರೆ. ಇದನ್ನು ಶಿರಸಿಯ ಕದಂಬ ಸಂಸ್ಥೆಯು ಮಾರುಕಟ್ಟೆ ಮಾಡುತ್ತಿದೆ. ಶಿರಸಿಯಲ್ಲಿ ಚಿಪ್ಸ್ ಉದ್ಯಮ ಬೆಳೆಸಿರುವ ಜೈವಂತ್ ಗಣೇಶ್ ವರ್ಷದ ಏಳು ತಿಂಗಳ ಕಾಲ ದಿನಕ್ಕೆ ಒಂದು ಟನ್ ಚಿಪ್ಸ್ ತಯಾರಿಸುತ್ತಿದ್ದಾರೆ!
                 ಈಚೆಗೆ ಉ.ಕ. ಜಿಲ್ಲೆಯ ಕುಮಟಾದಲ್ಲಿ ಶಿರಸಿಯ ಕದಂಬ ಸಂಸ್ಥೆಯು ಹಲಸಿನ ಮೇಳವನ್ನು ಸಂಘಟಿಸಿತ್ತು. ಸುಮಾರು ಅರುವತ್ತು ಮಂದಿ ಹೆಣ್ಮಕ್ಕಳು ಖಾದ್ಯಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೇಳಕ್ಕಾಗಿಯೇ ಹೈದ್ರಾಬಾದಿನ 'ತಿನ್ಲೇ' ಸಂಸ್ಥೆಯು ಪ್ರಾಯೋಗಿಕವಾಗಿ ತಯಾರಿಸಿದ ಹಲಸಿನ ಸಾಂಬಾರು, ಪಾಯಸ, ಜಾಮೂನು, ಶೀರಾವನ್ನು ಬಾಟಲುಗಳಲ್ಲಿ ಪ್ರದರ್ಶನಕ್ಕಿಟ್ಟಿತ್ತು. "ಈ ಉತ್ಪನ್ನಗಳಿಗೆ ಯಾವುದೇ ಸಂರಕ್ಷಕಗಳನ್ನು ಬಳಸಿಲ್ಲ. ಆರು ತಿಂಗಳು ತಾಳಿಕೆ. ಇಂತಹ ತಕ್ಷಣ ಬಳಸಬಹುದಾದ ಉತ್ಪನ್ನ ಮಾಡಬಹುದೆಂದು ತೋರಿಸಲು ನಾವಿದನ್ನು ಮಾಡಿತಂದಿದ್ದೇವೆ" ಎನ್ನುತ್ತಾರೆ ಬ್ರಹ್ಮಾವರ ಮೂಲಕ ಸಂಸ್ಥೆಯ ಶ್ರೀಕಾಂತ್ ಭಟ್.
                      ದಕ್ಷಿಣ ಭಾರತದಲ್ಲಿ ದೊಡ್ಡ, ಸಣ್ಣ ಮಟ್ಟದ ಉದ್ಯಮಗಳು ಸೇರಿದಂತೆ ಮೂವತ್ತಕ್ಕೂ ಮಿಕ್ಕಿದ ಕಂಪೆನಿಗಳು ಹಲಸಿನ ಹಣ್ಣಿನ ಐಸ್ಕ್ರೀಮ್ ತಯಾರಿಸುತ್ತಿರುವುದು ಗಮನಾರ್ಹ. ಕಳೆದೈದು ವರುಷದಲ್ಲಿ ಚಿಕ್ಕಪುಟ್ಟ ಪೇಟೆ, ಪಟ್ಟಣಗಳಲ್ಲೂ ಗ್ರಾಹಕರು ರೂಪುಗೊಂಡಿದ್ದಾರೆ. ಹಲಸಿನ ಮೌಲ್ಯವರ್ಧನೆಯ ಸಾಧ್ಯತೆಗಳು ಅಗಣಿತ. ಮೌಲ್ಯವರ್ಧನೆಯಲ್ಲಿ ಗುಣಮಟ್ಟ, ಬ್ರಾಂಡಿಂಗ್, ನೋಟ, ಪ್ಯಾಕಿಂಗ್.. ಮೊದಲಾದ ಮಾರುಕಟ್ಟೆ ಜಾಣ್ಮೆಗಳಲ್ಲಿ ಸುಧಾರಿಸಬೇಕಾಗಿದೆ. ಬೆಂಗಳೂರಿನ ಎಡಬಲದ ಐದಾರು ಜಿಲ್ಲೆಗಳಲ್ಲಿ ಹೆಚ್ಚು ಕಡಿಮೆ ಐನೂರು ಎಕ್ರೆ ಹಲಸಿನದೇ ತೋಪುಗಳು ಮೇಲಕ್ಕೇಳುತ್ತಿದೆ.
                ಸಮಸ್ಯೆಗಳೂ ಬೆಟ್ಟದಷ್ಟಿವೆ. ಎಲ್ಲವೂ ಸುಗಮ ಎನ್ನುವಂತಿಲ್ಲ. ಉತ್ಪನ್ನ ತಯಾರಿಸಲು ಸಿದ್ಧ ತಂತ್ರಜ್ಞಾನವಿಲ್ಲ. ಶ್ರಮ ಉಳಿಸುವ ಉಪಕರಣಗಳ ಆವಿಷ್ಕಾರವಾಗಿಲ್ಲ. ಉದ್ದಿಮೆಗಳ ಸಮಸ್ಯೆಗಳಿಗೆ ಪರಿಹಾರ ಹೇಳುವವರಿಲ್ಲ. ಮೌಲ್ಯವರ್ಧನೆಗೆ ವ್ಯವಸ್ಥಿತ ತರಬೇತಿ ನೀಡುವ ಸಂಸ್ಥೆಗಳಿಲ್ಲ. ಮರದಿಂದ ಕಾಯಿ ಇಳಿಸುವುದು ಕಷ್ಟ. ಹಲಸಿನ ರಾಶಿಯಲ್ಲಿ ಉತ್ತಮ ಹಣ್ಣನ್ನು ಆಯ್ಕೆ ಮಾಡುವ ವ್ಯವಸ್ಥೆ.. ಹೀಗೆ ಹತ್ತಾರು 'ಬೇಕು'ಗಳಿವೆ. ಕಸಿ ಗಿಡಗಳಿಗೆ ಬೇಡಿಕೆ ಯಥೇಷ್ಟವಾಗಿದ್ದರೂ, ಕಸಿಯು ಸಂಕೀರ್ಣವಾದ ಕಾರಣ ಪೂರೈಕೆ ಕಡಿಮೆ.
                 ಐದಾರು ವರುಷಗಳ ಹಲಸಿನ ಆಂದೋಳನದಲ್ಲಿ ಮೂಡಿಬಂದ ಯಶೋಗಾಥೆಗಳು ನೂರಾರು, ಅಲ್ಲ-ಸಾವಿರಾರು. ಈಗ ಆಗಿರುವ ಮೌಲ್ಯವರ್ಧನೆ ಕೆಲಸಗಳೆಲ್ಲಾ ಹಲಸಿನಲ್ಲಿ ಪ್ರೀತಿ ಇರುವ ಮಂದಿಯಿಂದಷ್ಟೇ ಆಗಿದೆ. ಇಷ್ಟು ದೊಡ್ಡ ದೇಶದಲ್ಲಿ ಎರಡು ಕೃಷಿ ವಿಜ್ಞಾನ ಕೇಂದ್ರ ಮತ್ತು ಎರಡು ಕೃಷಿ ವಿಶ್ವವಿದ್ಯಾಲಯಗಳು ಮಾತ್ರ ಹಲಸಿನ ಕೆಲಸ ಮಾಡುತ್ತಿವೆ. ಮಿಕ್ಕಂತೆ ಸರಕಾರದ ಕೃಷಿ ಪೂರಕ ಇಲಾಖೆಗಳು ಹೃತ್ಪೂರ್ವಕವಾಗಿ ಸ್ಪಂದನ ನೀಡಿದ್ದು ಕಡಿಮೆ.
                    ಇದುವರೆಗೆ ಜರುಗಿದ ಮೇಳಗಳಿಗೆ ಬಂದ ಮೌಲ್ಯವರ್ಧಿತ ಉತ್ಪನ್ನಗಳು ಮಾರಾಟವಾಗದೆ ಹಿಂದೆಹೋದ ದೃಷ್ಟಾಂತ ಇಲ್ಲವೇ ಇಲ್ಲ. ಉತ್ಪನ್ನವನ್ನು ಕೊಂಡುಕೊಳ್ಳಲು ಗ್ರಾಹಕರು ತುದಿಗಾಲಲ್ಲಿದ್ದಾರೆ. ಪೂರೈಕೆ ಸರಪಳಿ ವಿಸ್ತರಿಸಬೇಕು. ವರುಷದ ಹನ್ನೆರಡು ತಿಂಗಳೂ ಹಲಸಿನ ಉತ್ಪನ್ನ ಸಿಗುವಂತಹ ತಂತ್ರಜ್ಞಾನಗಳು ಮೊದಲಾದ್ಯತೆಯಲ್ಲಿ ಆಗಬೇಕು.
                ಐದಾರು ವರುಷದ ಆಂದೋಳನದ ಫಲಶ್ರುತಿಯಾಗಿ ಹಿತ್ತಿಲಿನ ಹಲಸು ಬಟ್ಟಲಿಗೆ ಬಂದಿದೆ. ಕೇಳುವವರೇ ಇಲ್ಲದ ಹಲಸನ್ನು ಚರಿತ್ರೆಯಲ್ಲೇ ಮೊತ್ತಮೊದಲ ಬಾರಿ ಮಾರಿ ಅಷ್ಟಿಷ್ಟು ಗಳಿಸಿದ ಕೃಷಿಕರಿದ್ದಾರೆ. ಫ್ರೀಝ್ ಡ್ರೈ ಹಲಸನ್ನು ಹೊರತಂದ ಕೇರಳದ ಜೇಮ್ಸ್ ಜೋಸೆಫ್ ಅವರ ಅವಿರತ ಯತ್ನದಿಂದ ಹಲಸು ಪಂಚತಾರಾ ಹೋಟೆಲುಗಳನ್ನೂ ಪ್ರವೇಶಿಸಿದೆ. ಅಲ್ಲೂ ಗೌರವದ ಸ್ಥಾನ ಪಡೆಯುತ್ತಿದೆ.


(ಉದಯವಾಣಿಯ ನೆಲದ ನಾಡಿ ಕಾಲಂನಲ್ಲಿ 2-7-2015ರಂದು ಪ್ರಕಟ)


Thursday, June 25, 2015

ಜಿಹ್ವಾಚಾಪಲ್ಯ ವೃದ್ಧಿಸುವ ರುಚಿವರ್ಧಕ

               ಬಸ್ಸಿನ ಮುಂದಿನ ಆಸನದಲ್ಲಿದ್ದ ಅಡುಗೆ ವಿಶೇಷಜ್ಞರ ಮಾತಿಗೆ ಕಿವಿಯೊಡ್ಡಬೇಕಾದ ಪ್ರಮೇಯ ಬಂತು. ಅವರಿಬ್ಬರು ದೊಡ್ಡ ಸಮಾರಂಭಗಳ ಅಡುಗೆಯ ಜವಾಬ್ದಾರಿಯನ್ನು ನಿಭಾಯಿಸಿದ ಅನುಭವಿಗಳೆಂದು ಅರಿತುಕೊಂಡೆ. ಒಬ್ಬರೆಂದರು, "ಮೊನ್ನೆ ಎರಡು ಸಾವಿರ ಮಂದಿಯ ಅಡುಗೆಗೆ ಶಹಬ್ಬಾಸ್ ಸಿಕ್ಕಿದ್ದೇ ಸಿಕ್ಕಿದ್ದು. ಯಾವಾಗಲೂ ಹಾಕುವುದಕ್ಕಿಂತ ಸ್ವಲ್ಪ ಹೆಚ್ಚೇ ಟೇಸ್ಟ್ ಮೇಕರ್ ಹಾಕಿದ್ದೆ", ಎಂದಾಗ ಇನ್ನೊಬ್ಬರು ದನಿ ಸೇರಿಸಿದರು, "ಅಂಗಡಿಯಲ್ಲಿ ಟೇಸ್ಟ್ ಮೇಕರ್ ಅಂತ ಕೇಳಿದ್ರೆ ಆಯಿತು, ಏನೋ ಬಿಳಿ ಪುಡಿ ಕೊಡ್ತಾರೆ. ಅದು ಎಂತಾದ್ದು ಅಂತ ಗೊತ್ತಿಲ್ಲ. ಈಚೆಗೆ ಎಲ್ಲರೂ ಹಾಕ್ತಾರೆ, ನಾನ್ಯಾಕೆ ಹಾಕಬಾರ್ದು? ಆ ಪುಡಿ ಹಾಕಿದರೆ ಸಾರು, ಸಾಂಬಾರಿನ ರುಚಿಯೇ ಬೇರೆ. ಯಾರಿಗೂ ಗೊತ್ತಾಗಬಾರದಷ್ಟೇ."
                ದಂಗಾಗುವ ಸರದಿ ನನ್ನದು. ಹೋಟೆಲ್, ಉದ್ಯಮಗಳಲ್ಲಿ ರುಚಿವರ್ಧಕಯೆನ್ನುವ ರಾಸಾಯನಿಕ  ಬಳಸುವುದನ್ನು ಕಿವುಡಾಗಿ, ಕುರುಡಾಗಿ ಒಪ್ಪಿಕೊಂಡಾಗಿದೆ. ಸಮಾರಂಭಗಳಿಗೆ ಉಣಿಸುವ ಅಡುಗೆ ಸೂಪಜ್ಞರು ಕೂಡಾ ಬಳಸುತ್ತಾರೆನ್ನುವುದು (ಎಲ್ಲರೂ ಅಲ್ಲ) ಇಂದಷ್ಟೇ ತಿಳಿಯಿತು. ಸಮಾರಂಭಗಳು ಅಧಿಕವಾಗುತ್ತಾ ಬಂದ ಹಾಗೆ ಸೂಪಜ್ಞರಲ್ಲೂ ತಮ್ಮದೇ ಕೈರುಚಿ ಮೇಲುಗೈಯಾಗಬೇಕೆನ್ನುವ ಪೈಪೋಟಿ. ಒಂದು ಸಮಾರಂಭದಲ್ಲಿ ಅಡುಗೆ ಸೈ ಎನಿಸಿದರೆ ಮತ್ತೊಂದು ಅಡುಗೆ ಹುಡುಕಿಕೊಂಡು ಬರುತ್ತದೆ. ಇದಕ್ಕಾಗಿ ಸೂಪಜ್ಞರು ಪಾಲಿಸುವ ಉಪಾಯ - ಅಡುಗೆಗೆ ಟೇಸ್ಟ್ ಮೇಕರ್ ಬಳಕೆ.  ಈ ರುಚಿವರ್ಧಕವನ್ನು ಮನೆಯ ಯಜಮಾನನ ಗಮನಕ್ಕೆ ತಾರದೇ ಸ್ವತಃ ಒಯ್ಯುತ್ತಾರೆ. ಬಳಸುತ್ತಾರೆ.
                ಸಮಾರಂಭಗಳಲ್ಲಿ ಐನೂರು, ಸಾವಿರ, ಎರಡು ಸಾವಿರ ಮಂದಿಗೆ ಅಡುಗೆ ಮಾಡಬೇಕೆಂಬಾಗ ತರಕಾರಿ, ಜೀನಸುಗಳಿಗೆ ಸಹಜವಾಗಿ ಮಾರುಕಟ್ಟೆಯನ್ನು ಅವಲಂಬಿಸಬೇಕು. ಮಾರುಕಟ್ಟೆಯ ತರಕಾರಿ ಅಂದಾಗ ಅದು ರಾಸಾಯನಿಕದಲ್ಲಿ ಮಿಂದೆದ್ದು ಬಂದವುಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಕ್ಕಿಯಿಂದ ಉಪ್ಪಿನ ತನಕ ಸಾಚಾತನಕ್ಕೆ ಪ್ರತ್ಯೇಕ ಪರೀಕ್ಷೆ ಬೇಕಾಗುವ ಕಾಲಮಾನ. ಇವುಗಳೊಂದಿಗೆ ಉದರಕ್ಕಿಳಿಯುವ ಖಾದ್ಯಗಳಿಗೂ ಈಗ ರುಚಿವರ್ಧಕದ ಸ್ಪರ್ಶ!  ಕಾರ್ಬ್ಯೆೈಡ್ ಹಾಕಿ ದಿಢೀರ್ ಹಣ್ಣು ಮಾಡಿದ ಬಾಳೆಹಣ್ಣುಗಳು ಭೋಜನದೊಂದಿಗೆ ಬೋನಸ್. ಉಚಿತವಾಗಿ ಕೊಡುವ ಐಸ್ಕ್ರೀಂನಲ್ಲಿ ಇನ್ನು ಏನೆಲ್ಲಾ ಇವೆಯೋ ಗೊತ್ತಿಲ್ಲ. ಹಾಗೆಂತ ರುಚಿವರ್ಧಕ ಬಳಸದೆ ತಮ್ಮ ಅನುಭವ ಮತ್ತು ಕೈಗುಣದಿಂದ ಶುಚಿರುಚಿಯಾದ ಭೋಜನವನ್ನು ಸಿದ್ಧಪಡಿಸುವ ಸೂಪಜ್ಞರು ಎಷ್ಟು ಮಂದಿ ಇಲ್ಲ.
                ಮ್ಯಾಗಿ ನಿಷೇಧದ ಕಾವು ದೇಶವಲ್ಲ, ವಿಶ್ವಾದ್ಯಂತ ಕಂಪನ ಮೂಡಿಸಿದೆ. ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಸೀಸ, ರುಚಿವರ್ಧಕವು ಉದ್ಯಮದ ಅಡಿಗಟ್ಟನ್ನು ಅಲ್ಲಾಡಿಸಿದೆ. ಕೋಟಿಗಟ್ಟಲೆ ಉತ್ಪನ್ನ ಬೆಂಕಿಗಾಹುತಿಯಾಗಿದೆ.  ಜಾಹೀರಾತುಗಳ ಮೂಲಕ ನಂಬಿಸಿದ ಸಂಸ್ಥೆಯು ವಿಶ್ವಾಸ ಕಳೆದುಕೊಂಡಿದೆ. ತಿನ್ನುವ ಎಲ್ಲಾ ವಸ್ತುಗಳನ್ನು ಸಂಶಯ ದೃಷ್ಟಿಯಿಂದ ನೋಡುವ ಸ್ಥಿತಿ ರೂಪುಗೊಂಡಿದೆ. ಸೇಬು- ದ್ರಾಕ್ಷಿಯೊಳಗಿರುವ ರಾಸಾಯನಿಕ, ಹಾರ್ಮೋನುಗಳ ಕುರಿತು, ಕಲ್ಲಂಗಡಿಗೆ ಇಂಜೆಕ್ಟ್ ಮಾಡುವ ವಿವಿಧ ಮುಖಗಳನ್ನು ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ. ರಾಸಾಯನಿಕ ಸಿಂಪಡಣೆಗಳ ಕರಾಳ ಮುಖಗಳತ್ತ ವಿವಿಧ ಮಾಧ್ಯಮಗಳು ಬೊಬ್ಬಿಡುತ್ತಿವೆ.  ಮ್ಯಾಗಿಯಲ್ಲಿರುವ ಅಕರಾಳ ವಿಕಾರಳ ಮುಖದ ದರ್ಶನವಾದಾಗ ಈ ಎಲ್ಲಾ ವಿಚಾರಗಳತ್ತ ತಿಳಿಯಲು ಈಗಲಾದರೂ ಮೈಕೊಡವಿ ಎದ್ದೇವಲ್ಲಾ!
                   ತಮಿಳುನಾಡಿನಿಂದ ಬರುವ ತರಕಾರಿಗಳಿಗೆ ಕೇರಳ ರಾಜ್ಯವು ಅವಲಂಬಿತ. ನಿರ್ವಿಷ ಆಹಾರದ ಕುರಿತು ಕೇರಳದಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಮಾಡುತ್ತಾ ಇವೆ. ಆರೋಗ್ಯ ಕಾಳಜಿಯಿದ್ದ  ಮಂದಿ ಸಾವಯವಕ್ಕೆ ಬದಲಾಗುತ್ತಿದ್ದಾರೆ. ಸ್ವಾವಲಂಬನೆಯತ್ತ ಹೊರಳುತ್ತಿದ್ದಾರೆ. ಕೈತೋಟಗಳನ್ನು ಎಬ್ಬಿಸುವ ಮನಃಸ್ಥಿತಿ ನಿರ್ಮಾಣವಾಗುತ್ತಿದೆ. ಮಾವು, ಹಲಸು, ಗೆಡ್ಡೆ, ಎಲೆಗಳು ತರಕಾರಿಯಾಗಿ ಉದರ ಸೇರುತ್ತಿದೆ. "ರಾಸಾಯನಿಕದ ಪರಿಣಾಮ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ, ಹೊರ ರಾಜ್ಯಗಳಿಂದ ತರಕಾರಿಯನ್ನು ತರಿಸದೇ ಇರಲು ಕೆಲವು ವ್ಯಾಪಾರಿಗಳು ನಿರ್ಧರಿಸಿದ್ದಾರೆ," ಎನ್ನುತ್ತಾರೆ ಕಾಸರಗೋಡಿನ ಕೃಷಿಕ ಗೋಪಾಲ ರಾವ್.
                     ಮುಖ್ಯವಾಗಿ ಟೊಮೆಟೋ, ದೊಣ್ಣೆಮೆಣಸು, ಕ್ಯಾಬೇಜ್, ಹೂಕೋಸುಗಳಿಗೆ ಸುಮಾರು ಹತ್ತಕ್ಕೂ ಹೆಚ್ಚು ಬಾರಿ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ ಎಂದು ಕೃಷಿಕ ಮಿತ್ರರನೇಕರು ಹೇಳಿಕೊಂಡಿದ್ದಾರೆ. ಯಾವ್ಯಾವ ಕೃಷಿಗೆ ಎಂತಹ ವಿಷವನ್ನು ಸಿಂಪಡಣೆ ಮಾಡಬೇಕೆಂದು ಅಂಗಡಿಯಾತನೇ ಬೋಧನೆ ಮಾಡುತ್ತಾನೆ. ಕೊನೆಗೆ ಎಷ್ಟು ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕೆಂಬ ಡೋಸೇಜನ್ನೂ ಹೇಳುತ್ತಾರೆ. ಇಂತಹ ವ್ಯವಹಾರವನ್ನು ಕಣ್ಣಾರೆ ನೋಡಿದ ಬಳಿಕ ಈ ನಾಲ್ಕು ಉಗ್ರರಿಗೆ ನಾನಂತೂ ವಿದಾಯ ಹೇಳಿದ್ದೇನೆ!
                  ಕನ್ನಾಡಿನಲ್ಲಿ ಸಾವಯವದ ಅರಿವು ಈಗಲ್ಲ ದಶಕದೀಚೆಗೆ ಪ್ರಚಾರವಾಗುತ್ತದಷ್ಟೇ ಹೊರತು ಅದು ಮನಸ್ಸಿಗೆ ಇಳಿದಿರುವುದು ತೀರಾ ಕಡಿಮೆ. ಆಹಾರದಲ್ಲಿ ವಿಷದ ಪ್ರಮಾಣಗಳು ಪತ್ತೆಯಾಗುತ್ತಲೇ ಇದ್ದಂತೆ ನಿರ್ವಿಷ ಆಹಾರಗಳ ಹುಡುಕಾಟದತ್ತ, ಬೆಳೆಯುವತ್ತ ಯೋಜನೆ, ಯೋಚನೆಗಳು ಹೆಜ್ಜೆಯೂರಿವೆ. ಸಮಾನಾಸಕ್ತ ಸಂಘಟನೆಗಳು ನಗರಗಳಲ್ಲಿ ಸಾವಯವದ ಮಹತ್ವ, ನಿರ್ವಿಷ ಆಹಾರದ ಅಪಾಯಗಳತ್ತ ಅರಿವು ಚೆಲ್ಲುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಪಾಲಿಶ್ ಮಾಡದ ಅಕ್ಕಿಯನ್ನು ಅರಸಿ ಬರುವ, ವಿಳಾಸ ಕೇಳುವ ಅಮ್ಮಂದಿರು ಎಚ್ಚರವಾಗಿದ್ದಾರೆ. ಮ್ಯಾಗಿ ನಿಷೇಧದ ಬಳಿಕವಂತೂ ಇಂತಹ ಪ್ರಕ್ರಿಯೆ ತೀವ್ರವಾಗಿದೆ.
                    ಮೂಲಿಕಾ ತಜ್ಞ ಪಾಣಾಜೆಯ ವೆಂಕಟ್ರಾಮ ದೈತೋಟ ಎಚ್ಚರಿಸುತ್ತಾರೆ, "ನಿರ್ವಿಷ ಆಹಾರದ ಕಾಳಜಿ ಎಲ್ಲಿಯವರೆಗೆ ನಮಗೆ ಬರುವುದಿಲ್ಲವೋ ಅಲ್ಲಿಯವರೆಗೆ ಖಾಯಿಲೆಗಳು ತಪ್ಪಿದಲ್ಲ. ಆಹಾರವೇ ಔಷಧಿಯಾಗಬೇಕು. ಈಗೆಲ್ಲವೂ ತಿರುಗುಮುರುಗು. ರಾಸಾಯನಿಕ ರಹಿತವಾದ ಆಹಾರದ ಸೇವನೆಯಿಂದ ಕಾಯಿಲೆಗಳನ್ನು ದೂರವಿಡಬಹುದು." ವೆಂಕಟ್ರಾಮದ ಕಿವಿಮಾತಿಗೆ ನಮ್ಮ ಹಿರಿಯರ ಬದುಕು ಆದರ್ಶವಾಗಿತ್ತು.
                ವಿವಿಧ ರೂಪಗಳಲ್ಲಿ ರಾಸಾಯನಿಕಗಳನ್ನು ಗೊತ್ತಿಲ್ಲದೆ ಬದುಕಿನಂಗವಾಗಿ ಸ್ವೀಕರಿಸಿದ್ದೇವೆ. ಗೊತ್ತಾದ ಬಳಿಕ ದೂರವಿರುವುದರಲ್ಲಿ ಆರೋಗ್ಯ ಭಾಗ್ಯ. ತಕ್ಷಣ ಎಲ್ಲವನ್ನೂ ವಜ್ರ್ಯ ಮಾಡಲಸಾಧ್ಯ. ಹಂತ ಹಂತವಾಗಿ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಒಂದಷ್ಟು ದಿವಸ ಹೆಚ್ಚು ಬಾಳಬಹುದೇನೋ? ನಿರ್ವಿಷವಾಗಿ ಕೃಷಿ ಉತ್ಪನ್ನಗಳನ್ನು ಬೆಳೆದುಕೊಡುವ ಕೃಷಿಕರನ್ನು ಪ್ರೋತ್ಸಾಹಿಸೋಣ.

Friday, June 12, 2015

'ನಿಷೇಧ ಗುಮ್ಮ'ನಿಂದ ಮತಿಯ ಮಸೆತದ ಹರಿತ!

              ಅಬ್ಬಾ, ಎಷ್ಟೊಂದು ತಳಮಳ. ಅಡುಗೆ ಮನೆಗಳಲ್ಲಿ ವಿಷಾದದ ರಾಗ. ಊಟದ ಬಟ್ಟಲು ಬರಿದು. ಕಂದಮ್ಮಗಳು ಉಪವಾಸ. ಮುಂದಿನ ಹಾದಿ ಶೂನ್ಯ. ಅಮ್ಮಂದಿನ ಮುಖದಲ್ಲಿ ನಗುವಿಲ್ಲ. ಆಗಸವೇ ತಲೆಮೇಲೆ ಬಿದ್ದ ಅನುಭವ.
ಮ್ಯಾಗಿ ನಿಷೇಧದ  ರಾದ್ದಾಂತವಿದು. ತಿಂಗಳುಗಳಿಂದ ಮ್ಯಾಗಿಯದೇ ಗುಮ್ಮ. ನಿಷೇಧಗಳ ಸರಮಾಲೆ. ರೋಚಕ ಸುದ್ದಿಗಳ ಗೊಂಚಲುಗಳು. ಮನದ ಮೂಲೆಯಲ್ಲಿ ಚಿಗುರೊಡೆದ ಅನಾರೋಗ್ಯದ ಭೀತಿ. ಕಳಚಿಕೊಳ್ಳಲಾಗದ ನಂಟು. ಯಾವುದೋ ಒಂದು ಬ್ಯಾಚಿನಲ್ಲಿ ಇತ್ತೂಂತ ಎಲ್ಲವನ್ನೂ ನಿಷೇಧಿಸಬೇಕೇ ಎಂಬ ಗೊಣಗಾಟ. ಮ್ಯಾಗಿಗೆ ಹೊಂದಿಕೊಂಡ ಕಂದನಿಗೆ ಬೇರೆ ಆಹಾರ ಹೊಂದಿಸಲಾಗದ ಒದ್ದಾಟ.
           ಮ್ಯಾಗಿಯಲ್ಲಿ ಸೀಸ ಮತ್ತು ರುಚಿವರ್ಧಕದ ಅಂಶಗಳು ಮಿತಿಗಿಂತ ಹೆಚ್ಚಿವೆ ಎನ್ನುವುದು ನಿಷೇಧಕ್ಕೆ ಕಾರಣ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರವು ಉತ್ಪನ್ನವನ್ನು ಪರೀಕ್ಷೆಗೆ ಒಳಪಡಿಸಲು ಆದೇಶಿಸಿತ್ತು.  ಪರೀಕ್ಷಾ ಫಲಿತಾಂಶ ಬರುತ್ತಲಿದೆ. 'ಯಾವುದೇ ಹಾನಿಕಾರಕ ಅಂಶಗಳಿಲ್ಲ, ಧಾರಾಳವಾಗಿ ಬಳಸಬಹುದು' ಎಂಬ ವರದಿ ಬಂದರೂ ಆಶ್ಚರ್ಯವಿಲ್ಲ. ಒಂದು ವೇಳೆ ಸಾರ್ವತ್ರಿಕವಾಗಿ ನಿಷೇಧಕ್ಕೆ ಒಳಗಾಯಿತೆನ್ನಿ, ತಿಂಗಳೊಳಗೆ ಹೊಸ ಅವತಾರದ ಉತ್ಪನ್ನಗಳು ವಿವಿಧ ಬಣ್ಣದ ಪ್ಯಾಕ್ಗಳಲ್ಲಿ ಗೋಚರ. ರತ್ನಗಂಬಳಿಯ ಸ್ವಾಗತ. 
             ಉತ್ಪನ್ನದಲ್ಲಿ ಶರೀರಕ್ಕೆ ಬೇಡದ ರಾಸಾಯನಿಕಗಳು ಸೇರಿವೆ - ನಿಷೇಧದಿಂದ ಸ್ಪಷ್ಟವಾಗಿ ಜನರಲ್ಲಿ ಅರಿವು ಮೂಡಿದ ಅಂಶ. ಬೇರೆ ಬೇರೆ ಮೂಲಗಳಲ್ಲಿ ಹಿಂದೆ ಪ್ರಚುರವಾಗುತ್ತಿದ್ದಾರೂ ದೈತ್ಯ ಕಂಪೆನಿಯ ದೊಡ್ಡ ಸ್ವರದ ಮುಂದೆ ಈ ಕ್ಷೀಣ ಸ್ವರ ಕೇಳಿಸುವಿದಿಲ್ಲ. ಒಂದತೂ ಸ್ಪಷ್ಟ. ನಿಷೇಧ ಹಿಂತೆಗೆಯಲ್ಪಟ್ಟಿತು ಎನ್ನೋಣ.  ಮೊದಲಿನಂತೆ ಪ್ರೀತಿಯಿಂದ ಸ್ವಾಗತಿಸುವವರ ಸಂಖ್ಯೆ ಕಡಿಮೆಯಾದೀತು ಮತ್ತು ಬಳಸುವಾಗ ಹತ್ತಾರು ಬಾರಿ ಯೋಚಿಸುವ ಮನಃಸ್ಥಿತಿ ಬರಬಹುದು.
           1983ರಲ್ಲಿ '2 ನಿಮಿಷದ ಮ್ಯಾಗಿ' ಅಡುಗೆ ಮನೆ ಹೊಕ್ಕಿತು. ಕಂಪೆನಿಗೆ ಉದ್ಯೋಗಸ್ಥ ಯುವ ಮನಸ್ಸುಗಳ ಟಾರ್ಗೆಟ್.  ಬೆಳಗ್ಗಿನ ಒತ್ತಡಕ್ಕೆ ದೇವರೇ ಕೊಟ್ಟ ವರ! ಎರಡು ನಿಮಿಷದಲ್ಲಿ ತಿಂಡಿ ಸಿದ್ಧವಾಗುತ್ತದೆ ಎಂದರೆ ಯಾರಿಗೆ ಬೇಡ ಹೇಳಿ. ಆರ್ಥಿಕ ಉದಾರಿಕರಣದ ಬಳಿಕ ಉದ್ದಿಮೆಯ ಹೆಜ್ಜೆ ದೊಡ್ಡದಾಯಿತು. ಮಕ್ಕಳನ್ನು ಟಾರ್ಗೆಟ್  ಮಾಡಲು ಶುರು ಮಾಡಿತು. 'ಆರೋಗ್ಯಯುತ ಉತ್ಪನ್ನ' ಎಂದು ಬಿಂಬಿಸಿತು. ಒಂದು ಅಂಕಿ ಅಂಶದ ಪ್ರಕಾರ ಭಾರತವೊಂದರಲ್ಲೇ ಮ್ಯಾಗಿಯು ಕಂಪೆನಿಗೆ 390 ಮಿಲಿಯನ್ ಡಾಲರ್ ಆದಾಯ!
             ಖ್ಯಾತ ಅಂಕಣಕಾರ ಅಜಿತ್ ಪಿಳ್ಳೈ ಹೇಳುತ್ತಾರೆ, "ಯಾವಾಗ ನೆಸ್ಲೆ ಕಂಪೆನಿ ಮ್ಯಾಗಿಯುನ್ನು ಆರೋಗ್ಯಯುತ ಉತ್ಪನ್ನವೆಂದು ವ್ಯಾಪಾರ ಮಾಡತೊಡಗಿತೋ ಆಗ ಮ್ಯಾಗಿಯ ಅಗಾಧ ವಿಶ್ವ ಸೃಷ್ಟಿಯಾಯಿತು. ಇದಕ್ಕೆ ಹೊಂದಿಕೆಯಾಗುವಂತೆ ಕಂಪೆನಿಯು 2005ರಲ್ಲಿ ಆಟಾ (ಹೆಲ್ತ್) ನೂಡಲ್ಸ್ ಪರಿಚಯಿಸಿತು. ಜಾಹೀರಾತಿನಲ್ಲಿ ಆರೋಗ್ಯಕರ, ಪ್ರೋಟೀನ್, ವಿಟಮಿನ್, ಫೈಬರ್, ಪೌಷ್ಟಿಕಾಂಶಗಳಿರುವ ಉತ್ಪನ್ನವೆಂದು ಬಿಂಬಿಸುತ್ತಾ ಬಂತು."
              ಹಾನಿಕಾರಕ ಅಂಶಗಳು ಪತ್ತೆಯಾದ ತಕ್ಷಣ ಸರಕಾರ ಭರವಸೆಯ ಹೆಜ್ಜೆಯೇನೋ ಇಟ್ಟಿದೆ. ಕನ್ನಾಡಿನ ಆರೋಗ್ಯ ಮಂತ್ರಿಗಳು 'ಸುಮ್ಮನೆ ಬಿಡುವುದಿಲ್ಲ' ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಎಲ್ಲವೂ ಸರಿ. ನೆಸ್ಲೆಯಂತಹ ದೊಡ್ಡ ಕಂಪೆನಿಗಳಿಗೆ ಇದೆಲ್ಲಾ ಮಾಮೂಲಿ! ಬಹುಶಃ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೊಡೆತ ಬೀಳಬಹುದೆಂದು ಕಂಪೆನಿ ಊಹಿಸಿರಲಿಲ್ಲ. ಗೊತ್ತಾಗುತ್ತಿದ್ದರೆ ಅಲ್ಲಿಂದಲ್ಲಿಗೆ ಹೊಂದಾಣಿಸುತ್ತಿತ್ತೋ ಏನೋ?  ಸಾಮಾನ್ಯರಿಗೆ ಗೊತ್ತಾಗದ, ಅರ್ಥವಾಗದ ಪ್ರಬಲವಾದ ಲಾಬಿಗಳು ಸರಕಾರದ ವ್ಯವಸ್ಥೆಯನ್ನು ಮಣಿಸುವಷ್ಟು ಸಶಕ್ತವಾಗಿದೆ. ಈ ಜಾಲದಿಂದ ಹೊರಬಂದು ನ್ಯಾಯ ಒದಗಿಸಿಕೊಡುವುದೇ ನಿಜವಾದ ಪ್ರಜಾ ಆಡಳಿತ. ಎಷ್ಟು ಸಾಧ್ಯವಾಗುತ್ತೋ ಗೊತ್ತಿಲ್ಲ.
                ಮ್ಯಾಗಿ ಬೇಯುತ್ತಾ ಇದ್ದಂತೆ, ಮಾವು ಸುದ್ದಿ ಮಾಡಲು ಹೊರಟಿತು. ಮೈಸೂರಿನಲ್ಲಿರುವ ಒಂಭತ್ತು ಗೋದಾಮುಗಳಲ್ಲಿರುವ ಮಾವಿನ ಹಣ್ಣುಗಳನ್ನು ನಾಶಮಾಡಲಾಯಿತು.  ಕ್ಯಾಲ್ಸಿಯಂ ಕಾರ್ಬ್ಯ್ ಡ್ ಹರಳು ಬಳಸಿ ಕೃತಕವಾಗಿ ಹಣ್ಣು ಮಾಡಿದ್ದಾರೆ ಎನ್ನುವ ಕಾರಣ. ಹೀಗೆ ಮಾಡಿದರೆ ಹಣ್ಣುಗಳು ತಾಜಾ ಆಗಿ ಕಾಣುವುದಲ್ಲದೆ, ಬೇಕಾದ ಸಮಯಕ್ಕೆ ಹಣ್ಣುಗಳು ಲಭ್ಯವಾಗುವಂತೆ ಮಾಡುವ ಜಾಣ್ಮೆಯಿದು. ವ್ಯಾವಹಾರಿಕ  ಒತ್ತಡದಲ್ಲಿ ಮಿತಿಗಿಂತ ಹೆಚ್ಚು ಕಾರ್ಬ್ಯ್ ಡ್  ಬಳಸುವ ವಿಚಾರ ಸಾಮಾನ್ಯರಿಗೂ ಗೊತ್ತು. ನಮ್ಮ ನಡುವೆ ನಡೆಯುವ ವಿದ್ಯಮಾನಗಳನ್ನು ಕಣ್ಣು ಮುಚ್ಚಿ ಸ್ವೀಕರಿಸಿದ್ದೇವೆ.
               ಬೆಂಗಳೂರಿನ ದೇಸಾಯಿ ಆಸ್ಪತ್ರೆಯ ಡಾ.ನಳಿನಿ ಅವರು ಕಾರ್ಬ್ಯ್ ಡ್  ಬಳಕೆಯ ದುಷ್ಪರಿಣಾಮ ಹೇಳುತ್ತಾರೆ, ಕಾರ್ಬ್ಯ್ ಡ್ ನಲ್ಲಿರುವ ಸೋಡಿಯಂ ಹಾಗೂ ಕಾರ್ಬೋನಿಕ್  ಆಸಿಡ್ ಕ್ರಮೇಣ ದೇಹಕ್ಕೆ ಸೇರಿ ಮೆದುಳು, ನರಗಳು, ಶ್ವಾಸಕೋಶ, ಕಿಡ್ನಿ ವೈಫಲ್ಯ ಹಾಗೂ ನಿರಂತರ ಬಳಕೆಯಿಂದ ಕ್ಯಾನ್ಸರಿನಂತಹ ಮಾರಕ ರೋಗಗಳಿಗೆ ದಾರಿ ಮಾಡಿ ಕೊಡಬಲ್ಲುದು. ಬಾಳೆಕಾಯಿ, ಪಪ್ಪಾಯಿ, ಮಾವುಗಳನ್ನು ಮಾಗಿಸಲು ಬಳಸುವ ತಂತ್ರದಿಂದ ವ್ಯಾಪಾರಿ ಬಚಾವ್. ಆದರೆ ಗ್ರಾಹಕ? ಒಂದೆರಡು ದಿವಸ ಇಂತಹ ಹಣ್ಣುಗಳನ್ನು ತಿಂದರೆ ಆರೋಗ್ಯ ಕೆಡದು. ನಿರಂತರ ಬಳಕೆಯಿಂದ ಹಾನಿಯಂತೂ ಖಂಡಿತ.
               ನಾಳೆ ನಮಗೆ ಬಾಳೆಹಣ್ಣು ಬೇಕು - ಎಂದಾದರೆ ಅಂಗಡಿಯಾತನಿಗೆ ಇಂದು ಸಂಜೆ ಹೇಳಿದರೆ ಆಯಿತು, ಒಂದು ರಾತ್ರಿಯಲ್ಲಿ ಹಣ್ಣು ಮಾಡಿಕೊಡುವ ವ್ಯವಸ್ಥೆ. ಬಳಸುವವರಿಗೆ ಕಾರ್ಬ್ಯ್ ಡ್  ರಾಸಾಯನಿಕ ಮತ್ತು ಅರೋಗ್ಯದ ಹಾನಿಯ ಅರಿವು ಇರುವುದಿಲ್ಲ. ಹದಿನೈದಕ್ಕೂ ಹೆಚ್ಚು ಕೀಟನಾಶಕ ಸಿಂಪಡಣೆಯಿಂದ ತೋಯ್ದ, ಲಕಲಕ ಹೊಳೆಯುವ ಟೊಮೆಟೋ, ಹೂಕೋಸು, ಕ್ಯಾಬೇಜು, ದೊಣ್ಣೆಮೆಣಸುಗಳನ್ನು ಒಪ್ಪಿಕೊಂಡಂತೆ ಬಾಳೆಹಣ್ಣನ್ನೂ ಒಪ್ಪಿದ್ದೇವೆ, ಅಪ್ಪಿದ್ದೇವೆ. ನಿಷೇಧದ ಗುಮ್ಮ ಅಬ್ಬರಿಸಿದಾಗ ಬಣ್ಣ ಬಯಲಾಗುತ್ತದಷ್ಟೇ.
              ಇನ್ನು ಅಡಿಕೆಯತ್ತ ಹೊರಳಿ. ಆಗಾಗ್ಗೆ ಗುಟ್ಕಾ ನಿಷೇಧದ ಗುಮ್ಮನ ಅವತಾರ. ಲಕ್ಷಾಂತರ ಮಂದಿಯ ಅನ್ನದ ಬಟ್ಟಲು ಕಂಪಿಸಿವೆ. ಗುಟ್ಕಾದ ಮುಖ್ಯ ಕಚ್ಚಾವಸ್ತು ಅಡಿಕೆ. ಇದರೊಂದಿಗೆ ರಾಸಾಯನಿಕ ಒಳಸುರಿಗಳು ಸೇರಿದಾಗ ಗುಟ್ಕಾ ಆಗುತ್ತದೆ. ಮೈಸೂರಿನ 'ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರ' ವರದಿ ಪ್ರಕಾರ ಅಡಿಕೆಯಲ್ಲಿ ಶೇ.46 ಶರ್ಕರಪಿಷ್ಠ, 4.2 ಪ್ರೊಟಿನ್, 8-12 ರಷ್ಟು ಕೊಬ್ಬು, ಜತೆಗೆ ಕಬ್ಬಿಣ, ಕ್ಯಾಲ್ಸಿಯಂನಂತರ ಲವಣಗಳು, ಜೀವಸತ್ವಗಳಿವೆ. ಇದನ್ನು 'ಶ್ರೇಷ್ಠ ನೈಸರ್ಗಿಕ ಸುಗಂಧ ದ್ರವ್ಯ' ಎಂದು ಪುರಾಣಗಳು ಉಲ್ಲೇಖಿಸಿವೆ. ಪಾಶ್ಚಾತ್ಯರಲ್ಲಿ ಅಧಿಕವಾಗುತ್ತಿರುವ 'ಮುಪ್ಪಿನ ಮರೆವು' ಕಾಯಿಲೆಗೂ ಅಡಿಕೆ ಔಷಧವಾಗಿ ಒಳಸುರಿ.
             ಗುಟ್ಕಾ, ಪಾನ್ ಪರಾಗ್, ಪಾನ್ ಮಸಾಲ ನಿಷೇಧ ಎಂದಾಗ ಅಡಿಕೆಯೂ ನಿಷೇಧಕ್ಕೆ ಒಳಪಡುತ್ತದೆ. ಇದರ ಬದಲು ಅಡಿಕೆಯೊಂದಿಗೆ ಮಿಶ್ರಣ ಮಾಡುವ ದೇಹದ ಅರೋಗ್ಯಕ್ಕೆ ಮಾರಕವಾಗಿರುವ ರಾಸಾಯನಿಕ ಅಂಶಗಳನ್ನು ಮಾತ್ರ ನಿಷೇಧಿಸಬೇಕೆಂದು ಯಾಕೆ ತೋರುತ್ತಿಲ್ಲ? ಇದನ್ನು ಸರಕಾರಕ್ಕೆ ಹಲವಾರು ಸಂಘಟನೆಗಳು ಮನದಟ್ಟು ಮಾಡಲು ಶ್ರಮಿಸಿವೆ, ಶ್ರಮಿಸುತ್ತಿವೆ. ಆಡಳಿತ ವ್ಯವಸ್ಥೆಗಳ ಹಿಂದೆ ಜಾಣ ಕುರುಡು, ಕಿವುಡು ಮತ್ತು  ಅಡಿಕೆಯ ಹಿಂದಿನ ವ್ಯವಸ್ಥಿತ ಲಾಬಿ, ಪಿತೂರಿಗಳ ಕೊಂಡಿಗಳು ಬಲವಾಗಿರುವುದು ನಮ್ಮ ಕಣ್ಣಿಗೆ ಕಾಣುತ್ತಿಲ್ಲ. ಗುಟ್ಕಾ ಮೇಲಿನ ಆಪಾದನೆಗಳು ನ್ಯಾಯಾಲಯದ ಮೆಟ್ಟಲೇರಿದೆ. ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗೆಗಿನ ವರದಿ ಕಾನೂನು ಮೇಜಿನಲ್ಲಿದೆ.
               ಕಳೆದ ವರುಷ ಐರೋಪ್ಯ ರಾಷ್ಟ್ರಗಳ ಒಕ್ಕೂಟವು ಭಾರತದಿಂದ ತರಿಸಿಕೊಳ್ಳುವ ಅಲ್ಫಾನ್ಸೋ ಮಾವು ಹಾಗೂ ಕೆಲವು ತರಕಾರಿಗಳನ್ನು ನಿಷೇಧಿಸಿತ್ತು. ಭಾರತದಿಂದ ರಫ್ತಾಗುವ ಒಟ್ಟು ಹಣ್ಣು, ತರಕಾರಿಗಳಲ್ಲಿ ಶೇ.50ರಷ್ಟು ಐರೋಪ್ಯ ರಾಷ್ಟ್ರಗಳಿಗೆ ಮೀಸಲು. ನಿಷೇಧದ ಗುಮ್ಮದಿಂದಾಗಿ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಆದಾಯದ ಹಳಿಗಳು ಅಲ್ಲಾಡಿದುವು. ಗುಣಮಟ್ಟ ನಿಯಂತ್ರಣ ಸುಧಾರಿಸಿದೆ ಎನ್ನುವ ಕಾರಣದಿಂದ ಈಗಂತೂ ನಿಷೇಧದ ಉರುಳು ಸಡಿಲವಾಗಿದೆ.
ಗೋಬಿ ಮಂಚೂರಿಯನ್, ತರಕಾರಿ, ಸಿದ್ಧ ಪೇಯಗಳು, ಜೀನಸು... ಹೀಗೆ ಬದುಕಿನಲ್ಲಿ ಬಳಕೆಯಾಗುವ ಬಹುತೇಕ ಎಲ್ಲದರಲ್ಲಿಯೂ ರಾಸಾಯನಿಕಗಳ ಮೇಲಾಟ. ದೇಹಕ್ಕೆ ಮಾರಕವಾಗಿವ ಅಂಶಗಳಿರುವ ಉತ್ಪನ್ನಗಳನ್ನು ವೈಭವೀಕರಿಸುವುದು ನಮಗೆ ಹೆಮ್ಮೆ!  ಎಲ್.ಕೆ.ಜಿ., ಯು.ಕೆ.ಜಿ. ಚಿಣ್ಣರ ಬುತ್ತಿಪಾತ್ರೆ ಬಿಡಿಸಿ ನೋಡಿ - ಬಣ್ಣ ಬಣ್ಣದ ಸಿದ್ಧ ಆಹಾರಗಳ ಕಲರವ. ಬೆಣ್ಣೆ, ಸಾಸ್, ಹಾಲಿನ ವಿಷಕಾರಕ ಅಂಶಗಳನ್ನು ವಾಹಿನಿಗಳು ಕಿವಿಗೆ ಹೊಗ್ಗಿಸುತ್ತಲೇ ಇವೆ. ಅದಕ್ಕೂ, ನಮಗೂ ಸಂಬಂಧವಿಲ್ಲವೆಂಬತೆ ವರ್ತಿಸುತ್ತೇವೆ. ಹಾನಿಕಾರಕ ಅಂಶಗಳ ಉತ್ಪನ್ನಗಳನ್ನು ಕಡಿಮೆ ಮಾಡಿದಷ್ಟೂ ಆರೋಗ್ಯ-ಭಾಗ್ಯ. ಗ್ರಾಹಕ ಎಲ್ಲಿಯವರೆಗೆ ಆಕಳಿಸುತ್ತಾನೋ ಅಲ್ಲಿಯ ವರೆಗೆ ರಾಸಾಯನಿಕ, ವಿಷಕಾರಿ ಉತ್ಪನ್ನಗಳು ಅಡುಗೆ ಮನೆಗೆ ನುಗ್ಗುತ್ತಲೇ ಇರುತ್ತವೆ. ನಿಷೇಧ ಗುಮ್ಮ ತಟ್ಟಿದಾಗ ಕೊಡವಿ ಎಚ್ಚರವಾಗುತ್ತೇವೆ. ಆಗಷ್ಟೇ ಅರಿವಿನ ಮಸೆತಕ್ಕೆ ಶ್ರೀಕಾರ.

(ಉದಯವಾಣಿಯ ನೆಲದ ನಾಡಿ ಅಂಕಣ/11-6-2015/ ಪ್ರಕಟ)
ಚಿತ್ರ ಕೃಪೆ : ನೆಟ್


ಪಿಲಿಕುಳದಲ್ಲಿ ವಸಂತೋತ್ಸವದ ಖುಷಿ



               ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಮೇ ಕೊನೆಗೆ ವಸಂತ ಋತುವಿನ ಖುಷಿ  ಆಚರಣೆ. ವನರಾಜಿ ಸಂಭ್ರಮಿಸುವ ಮಾಸದಲ್ಲಿ ಮನಕ್ಕೆ ಪುಳಕವೀಯುವ ವಾತಾವರಣ. ನಗರದ ನಿತ್ಯ ಜಂಜಾಟದ ಮಧ್ಯೆ ಒಂದು ಹೊತ್ತು ಖುಷಿ ಅನುಭವಿಸುವ ಅವಕಾಶ. ಹಳ್ಳಿ ಬದುಕಿನ ಪ್ರತಿಫಲನ. ಹಳ್ಳಿ ತಿಂಡಿಗಳ ಮರು ನೆನವರಿಕೆ. ಬದುಕಿನಿಂದ ಮರೆಯಾದ ರುಚಿಗಳನ್ನು ಮತ್ತೆ ಪಡೆದ ಸಂತಸ.
                 ಸುಮಾರು ಅರುವತ್ತು ಮಳಿಗೆಗಳು. ನಲವತ್ತಕ್ಕೂ ಮಿಕ್ಕಿದ ಮಳಿಗೆಗಳಲ್ಲಿ ಕೃಷಿಯ ಟಚ್. ಗಿಡಗಳ ಮಾರಾಟದಿಂದ ಮೌಲ್ಯವರ್ಧನೆಯ ತನಕ. ಸಾವಯವ ಉತ್ಪನ್ನಗಳಿಗೆ ಆದ್ಯತೆ. ಬೆಳಗ್ಗಿನಿಂದ ಸಂಜೆ ತನಕ ಮುಗಿಬೀಳುವ ಕೊಳ್ಳುಗರು. ನಗರದಲ್ಲಿ ಬದುಕನ್ನು ಕಟ್ಟಿಕೊಂಡವರು, ನಗರದ ಸುತ್ತಮುತ್ತ ಇರುವ ಹಳ್ಳಿಗರೂ ಕೂಡಾ ಮಳಿಗೆಗಳಿಗೆ ಭೇಟಿ ನೀಡಿದ್ದರು. ತಮಗೆ ಬೇಕಾದ ಉತ್ಪನ್ನಗಳನ್ನು ಮನಸಾ ತಿಂದರು. ಮನೆಗೂ ಒಯ್ದರು.
                ಇದರಲ್ಲೇನು ವಿಶೇಷ? ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇಬ್ರಾಹಿಂ ಹೇಳುತ್ತಾರೆ, "ಹಳ್ಳಿ ಸೊಗಸಿನ ಆಹಾರ ವೈವಿಧ್ಯಗಳನ್ನು ಪಟ್ಟಣಿಗರೂ ಸವಿಯಬೇಕು. ಉತ್ಪನ್ನಗಳಿಗೆ ನಗರದಲ್ಲಿ ಕೊಳ್ಳುಗರು ರೂಪುಗೊಳ್ಳಬೇಕು. ಆಗ ಹಳ್ಳಿ-ಪಟ್ಟಣದ ಕೊಂಡಿ ಬೆಸೆಯುತ್ತದೆ. ಬದುಕಿನ ಧಾವಂತದಲ್ಲಿ ಎಷ್ಟೋ ಗ್ರಾಮೀಣ ವಿಚಾರಗಳು ಮರೆತುಹೋಗಿದೆ. ಅದನ್ನು ಮತ್ತೊಮ್ಮೆ ನೆನಪಿಸುವ ಉದ್ದೇಶವೇ ವಸಂತೋತ್ಸವ."
                   ಬಂಟ್ವಾಳದ 'ಹಲಸು ಪ್ರೇಮಿ ಕೂಟ'ವು ಸ್ಥಳದಲ್ಲೇ ಹಲಸಿನ ತಿಂಡಿಗಳನ್ನು ಸಿದ್ಧಪಡಿಸುತ್ತಿದ್ದರು. ತಿಂಡಿಗಳನ್ನು ಖರೀದಿಸಲು ಕ್ಯೂ! ಒಂದೊಂದು ಐಟಂ ಸಿದ್ಧವಾಗುವುದೇ ತಡ, ಹತ್ತು ನಿಮಿಷದಲ್ಲಿ ಖಾಲಿ ಖಾಲಿ. "ಮಾಂಸದಲ್ಲಿ ಸಿದ್ಧಪಡಿಸುವ 'ಕಬಾಬ್' ಎಲ್ಲರಿಗೂ ಗೊತ್ತು. ಹಲಸಿನಿಂದ ಕಬಾಬನ್ನು ತಯಾರಿಸಲು ಸಾಧ್ಯವೆಂಬುದನ್ನು ಕೂಟವು ತೋರಿಸಿದೆ. ಸಸ್ಯಾಹಾರಿಗಳಿಗೆ ಮಾಂಸದ ಕಬಾಬ್ ವಜ್ರ್ಯ. ಅದರ ರುಚಿ ಹೇಗಿರಬಹುದು ಎನ್ನುವ ಕುತೂಹಲಿಗರ ಉತ್ಸಾಹವನ್ನು ಹಲಸಿನ ಕಬಾಬ್ ತಣಿಸಿದೆ. ಮಾಡಿದಷ್ಟೂ ಮುಗಿಯುವ ಕಬಾಬಿಗೆ ಗ್ರಾಹಕರು ಹೆಚ್ಚಿದ್ದರು," ಎನ್ನುತ್ತಾರೆ ಕೂಟದ ಸಾರಥ್ಯ ವಹಿಸಿದ ಮೌನೀಶ್ ಮಲ್ಯ.
               ಮಲ್ಯರು ತಮ್ಮ ಮಳಿಗೆಯಲ್ಲಿ ಇಪ್ಪತ್ತೇಳು ಹಲಸಿನ ಖಾದ್ಯಗಳನ್ನು ಸಿದ್ಧಪಡಿಸಿದ್ದರು. ಹಲಸಿನ ಹಣ್ಣಿನ ಪಾಯಸ, ಜಿಲೇಬಿ. ಕೇಕ್, ಲಾಲಿ, ಹಪ್ಪಳ, ಚಿಪ್ಸ್, ಹಲ್ವ.... ಮೊದಲಾದ ಉತ್ಪನ್ನಗಳಿಗೆ ಎಷ್ಟೊಂದು ಬೇಡಿಕೆ? ಸಿದ್ಧಾಹಾರದ ರಿಂಗಣದ ಮಧ್ಯೆ ಹಳ್ಳಿರುಚಿಗೂ ಸ್ಥಾನ-ಮಾನ. ಅಮ್ಮಂದಿರ ಒಲವು ಹೆಚ್ಚು. ಸ್ಥಳದಲ್ಲೇ ಉದರಕ್ಕಿಳಿಸುವುದರೊಂದಿಗೆ ಮನೆಗೂ ಕಟ್ಟಿಕೊಂಡು ಒಯ್ಯುವಷ್ಟು ಹಲಸಿನ ನಂಟು.
                ಕೇಪು 'ಹಲಸು ಸ್ನೇಹಿ ಕೂಟ'ದ ಮಳಿಗೆಯು ಪಪ್ಪಾಯಿ, ಮಾವು ಹಲಸಿನ ಹಣ್ಣಿನ ಮಾರಾಟದಲ್ಲಿ ತೊಡಗಿತ್ತು. ಇಡೀ ಹಣ್ಣು, ಹಣ್ಣಿನ ಅರ್ಧ ಭಾಗ, ಸೊಳೆಗಳನ್ನು ಖರೀದಿಸುವ ಗ್ರಾಹಕರ ಮೊಗದಲ್ಲಿ ಸಂತಸ. ಇಡೀ ಹಣ್ಣಿಗಿಂತ ಅರ್ಧ ಹಣ್ಣನ್ನು ಅಪೇಕ್ಷಿಸುವ ಗ್ರಾಹಕರ ಸಂಖ್ಯೆ ದೊಡ್ಡದು. ಸಣ್ಣ ಕುಟುಂಬದಲ್ಲಿ ಮೂರ್ನಾಾಲ್ಕು ಜನರಿಗೆ ದೊಡ್ಡ ಗಾತ್ರದ ಹಲಸಿನ ಹಣ್ಣು ಮಿಕ್ಕುತ್ತದೆ. ಅರ್ಧ ಆದ್ರೆ ಓಕೆ. ಹಲಸಿನ ಹಣ್ಣನ್ನು ಕೊಯ್ದು, ಸೊಳೆ ಎಬ್ಬಿಸುವುದೇ ತ್ರಾಸದ ಕೆಲಸ. ಅಂತಹವರಿಗೆ ಆರ್ಧ ಭಾಗ ಹಣ್ಣು  ಲಭ್ಯವಾಗಬೇಕು, ಎನ್ನುತ್ತಾರೆ ಕೂಟದ ಕಡಂಬಿಲ ಕೃಷ್ಣಪ್ರಸಾದ್. ಮಾವಿನಹಣ್ಣಿನ ಸಾಟ್ ಯಾ ಮಾಂಬಳಕ್ಕೆ ಬೇಡಿಕೆಯಿದ್ದರೂ ಉತ್ಪನ್ನವಿರಲಿಲ್ಲ.
                 ಮಂಗಳೂರಿನ ಸಾವಯವ ಕೃಷಿಕ-ಗ್ರಾಹಕ ಬಳಗದ ನಲವತ್ತೆಂಟು ಮಂದಿ ಸಾವಯವ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು.  ನಾವು ತಿನ್ನುವ ಆಹಾರ ಬಹುತೇಕ ವಿಷಮಯ. ಸಿಂಪಡಣೆ ಇಲ್ಲದೆ ಆಹಾರ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವ ಮನಃಸ್ಥಿತಿ. ನಿಧಾನ ವಿಷ ಸೇವನೆಯ ಪರಿಣಾಮವಾಗಿ ಆರೋಗ್ಯ ಕೈಕೊಡುತ್ತಿದೆ ಎನ್ನುವ ಅರಿವು ಜನರಲ್ಲಿ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾವಯವ ಮಳಿಗೆಗಳಲ್ಲಿ ರಶ್. ಅಕ್ಕಿ, ಬೆಲ್ಲ, ಸಂಬಾರದಿಂದ ತೊಡಗಿ ಹಣ್ಣುಗಳ ತನಕ ಜನರೊಲವು.
             ಈಚೆಗೆ ಮಂಗಳೂರಿನಲ್ಲಿ ಸಾವಯವದ ಅರಿವು ನಿಧಾನಕ್ಕೆ ತೆರೆದುಕೊಳ್ಳುತ್ತಿದೆ. ಜನರ ಆಸಕ್ತಿ ಸಾವಯವದತ್ತ ವಾಲುತ್ತಿದೆ. ಆರೋಗ್ಯವಂತರಾಗಿರಲು ಸಾವಯವ ಉತ್ಪನ್ನಗಳನ್ನು ಬಳಸದೆ ವಿಧಿಯಿಲ್ಲ ಎನ್ನುವ ನಿರ್ಧಾರಗಳು ಸುಶಿಕ್ಷಿತರಲ್ಲಿ ಮೂಡುತ್ತಿದೆ. ಕಳೆದೊಂದು ವರುಷದಿಂದ ನಿರಂತರವಾಗಿ ನಡೆಯುತ್ತಿದ್ದ ಸಾವಯವ ಸಂತೆಯ ಯಶೋಗಾಥೆ ಇದಕ್ಕೆ ಸಾಕ್ಷಿ, ಎನ್ನುತ್ತಾರೆ ಅಡ್ಡೂರು ಕೃಷ್ಣ ರಾವ್.
               ಮಾವು, ಹಲಸಿನ ಕಸಿಗಿಡಗಳು, ವಿವಿಧ ಮಾವಿನ ಹಣ್ಣುಗಳ ಪ್ರದರ್ಶನ, ವಿಟ್ಲದ ವಿಶಾಲ್ ಐಸ್ಕ್ರೀಂನವರ ಹಲಸು-ಮಾವಿನ ತಾಜಾ ಐಸ್ಕ್ರಿಂ, ಮತ್ಸ್ಯಾಹಾರ....ಹೀಗೆ ವಸಂತೋತ್ಸವದಲ್ಲಿ ವಿವಿಧ ವೈವಿಧ್ಯ ಆಹಾರಗಳ ಕಲರವ. ಪಿಲಿಕುಲ ನಿಸರ್ಗಧಾಮದ ಆಡಳಿತ ಮಂಡಳಿಯ ಡಾ.ಡಿ.ಸಿ.ಚೌಟರ ಕನಸಿನ ವಸಂತೋತ್ಸವಕ್ಕೆ ಜಿಲ್ಲಾಡಳಿತ ಸಾಥ್ ನೀಡಿತ್ತು. ಜಿಲ್ಲಾಧಿಕಾರಿಗಳಂತೂ ಫುಲ್ ಖುಷ್!
              ಸಂತೆಗಳು ವ್ಯಾಪಾರ ಕೇಂದ್ರಗಳು. ಹಳ್ಳಿ ಉತ್ಪನ್ನಗಳಿಗಿಂದು ಎಲ್ಲೆಡೆಯೂ ಬೇಡಿಕೆಯಿದೆ. ಸಾವಯವ ಉತ್ಪನ್ನಗಳ ಮಾರಾಟಕ್ಕೆ ಕಷ್ಟ ಪಡಬೇಕಾಗಿಲ್ಲ. ಜನರಲ್ಲಿ ಕೊಳ್ಳುವ ಸಾಮಥ್ರ್ಯವೂ ಯಥೇಷ್ಟವಿದೆ. ಹಣವಿದ್ದರೆ ಏನನ್ನೂ ಸಾಧಿಸಬಹುದೆನ್ನುವ ಕಾಲಮಾನದಲ್ಲಿದ್ದೇವೆ. ಸಾವಯವ ಉತ್ಪನ್ನಗಳನ್ನು ಖರೀದಿಸಿ, ಅನ್ನದ ಬಟ್ಟಲನ್ನು ತುಂಬಿದರೆ ಸಾಕೆ? ಜತೆಯಲ್ಲಿ ಸಾವಯವ ಮನಸ್ಸೂ ರೂಪುಗೊಳ್ಳಬೇಡವೇ? ಸಂತೆಗಳು ಇಂತಹ ಮನಸ್ಸುಗಳ ರೂಪೀಕರಣಕ್ಕೆ ಉಪಾಧಿ.
ಮಂಗಳೂರಿನ ಸಾವಯವ ಆಂದೋಳನ, ಹಲಸು ಪ್ರೇಮಿ ಕೂಟ, ಹಲಸು ಸ್ನೇಹಿ ಕೂಟ... ಮೊದಲಾದ ಕೃಷಿಕ ತಂಡಗಳು ವಸಂತೋತ್ಸವದಲ್ಲಿ ಭಾಗವಹಿಸಿದ್ದುವು.  ಈ ತಂಡದ ಸದಸ್ಯರಲ್ಲಿ ಸಾವಯವ ಮನಸ್ಸು ರೂಪುಗೊಂಡ ಪರಿಣಾಮವಾಗಿ ಅವುಗಳ ಬತ್ತಳಿಕೆಯಲ್ಲಿ ಯಶೋಗಾಥೆಗಳ ರಾಶಿಗಳಿವೆ. ಇವುಗಳೆಲ್ಲದರ ಉದ್ದೇಶ ಉತ್ಪನ್ನಗಳ ಮಾರಾಟ ಮಾಡಿ ಲಾಭ ಗಳಿಸುವುದಲ್ಲ. ಉತ್ಪನ್ನಗಳೊಂದಿಗೆ ಸಾವಯವ ಮನಸ್ಸು ರೂಪುಗೊಳ್ಳಬೇಕು ಎನ್ನುವ ಉದ್ದೇಶ. ನಾಡಿನಾದ್ಯಂತ ಇಂತಹ ಮನಸ್ಸುಗಳು ಸೃಷ್ಟಿಯಾದುದರ ಪರಿಣಾಮವಾಗಿ ನಿರ್ವಿಷ ಆಹಾರದ ಕಲ್ಪನೆ ಸಾಕಾರಗೊಳ್ಳುತ್ತಿವೆ.

Tuesday, June 2, 2015

ಜೂನ್ 14 - ಹಲಸಿನ ಸವಿಯೂಟ