Wednesday, January 20, 2016

ಕಾನೂನಿನೊಳಗೆ ನಲುಗುತ್ತಿರುವ 'ಕಲ್ಪರಸ'ಕ್ಕೆ ಎಂದು ಶಾಪಮೋಕ್ಷ?

  ಇದು ತೆಂಗು ಅಭಿವೃದ್ಧಿ ಮಂಡಳಿಯ ಜಾಹೀರಾತು - ನೀರಾ ಆರೋಗ್ಯಕ್ಕೆ ಉತ್ತಮ ಪೇಯ ಎಂದು ಅಧಿಕೃತವಾಗಿ ಘೋಷಿಸಿದೆ.

                "ಡೈರಿ ಹಾಲಿಗಿಂತ ತೆಂಗಿನ ಹಾಲಿನಲ್ಲಿ ಸತ್ತ್ವಾಂಶ ಹೆಚ್ಚು. ನಿಯಸಿನ್ ಅಥವಾ ವಿಟಾಮಿನ್3 ಪೋಷಕಾಂಶವಿದೆ. ಡೈರಿದ್ದರಲ್ಲಿರುವುದಕ್ಕಿಂತ ಕಬ್ಬಿಣ ಮತ್ತು ತಾಮ್ರದ ಅಂಶವೂ ತೆಂಗಿನ ಹಾಲಿನಲ್ಲಿ ಹೆಚ್ಚು. ಡೈರಿ ಹಾಲಲ್ಲಿರುವ ಲ್ಯಾಕ್ಟೋಸ್ ಎನ್ನುವ ಸಕ್ಕರೆ ಇದರಲ್ಲಿಲ್ಲ. ಇದನ್ನು ಕರಗಿಸಲು ಕೆಲವರಿಗೆ ಕಷ್ಟವಾಗುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ತೆಂಗಿನ ಹಾಲನ್ನು ಬಳಸಬಹುದು," ಎನ್ನುತ್ತದೆ,  ಕೊಚ್ಚಿಯಲ್ಲಿರುವ ಭಾರತೀಯ ತೆಂಗು ಮಂಡಳಿ. ಇತ್ತೀಚೆಗೆ ಸುವಾಸಿತ 'ಕುಡಿಯಲು ಸಿದ್ಧ' ತೆಂಗಿನ ಹಾಲನ್ನು ಮೂರು ಪರಿಮಳಗಳಲ್ಲಿ ಮಂಡಳಿಯು ಉತ್ಪಾದಿಸಿದೆ. ನಿಕಟಭವಿಷ್ಯದಲ್ಲಿ ಕಾಫಿ ಮತ್ತು ಬಾದಾಮ್ ಪರಿಮಳದ ಪಾನೀಯ ಬಿಡುಗಡೆಯಾಗುತ್ತದೆ.
              ದ.ಕ. ಜಿಲ್ಲೆಯ ಬಂಟ್ವಾಳ ಪುಣಚದಲ್ಲಿ 'ತೆಂಗು ಉತ್ಪಾದಕರ ಸಂಘ'ವನ್ನು ಕಾಸರಗೋಡು ಸಿಪಿಸಿಆರ್ಐ ನಿರ್ದೇಶಕ ಡಾ.ಪಿ.ಚೌಡಪ್ಪನವರು ಉದ್ಘಾಟಿಸಿ ಮಾತನಾಡುತ್ತಿದ್ದಾಗ ತೆಂಗು ಮಂಡಳಿಯ ಮಾತು ನೆನಪಾಯಿತು. ಚೌಡಪ್ಪ ಹೇಳುತ್ತಾರೆ, ತೆಂಗಿನ 'ನೀರಾ' ಸೇವನೆಗೆ ಮಾನಸಿಕ ತಡೆಯಿದೆ. ಶೇಂದಿ ಅಂತ ತಪ್ಪು ಕಲ್ಪನೆಯಿದೆ. ಅದಕ್ಕಾಗಿ ನೀರಾಕ್ಕೆ 'ಕಲ್ಪರಸ' ಅಂತ ಹೆಸರಿಸಿದ್ದೇವೆ. ಉತ್ತಮ ಪೋಷಕಾಂಶವುಳ್ಳ ಕಲ್ಪರಸವನ್ನು ಮರದಿಂದ ಇಳಿಸಲು ಸರಕಾರದ ಪರವಾನಿಗೆ ಇಲ್ಲ. ಸರಕಾರ ಲೈಸನ್ಸ್  ಕೊಟ್ಟುಬಿಟ್ಟರೆ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ! ಸಂಘವನ್ನು ರೈತ ಸಂಘ- ಹಸಿರುಸೇನೆ, ಮಂಗಳೂರು ತೆಂಗು ಉತ್ಪಾದಕರ ಜಿಲ್ಲ ಫೆಡರೇಶನ್ ಆಯೋಜಿಸಿದ್ದುವು.
             ತೆಂಗಿನಕಾಯಿಗೆ ಖುಷಿ ದರವಿಲ್ಲ. ಮಾರುಕಟ್ಟೆಗೆ ಒಯ್ದ ತೆಂಗನ್ನು ದರವಿಲ್ಲದೆ ಮರಳಿ  ಮನೆಗೆ ತಂದ ಕೃಷಿಕರಿದ್ದಾರೆ. ಜಾಣ್ಮೆಯನ್ನು ಬಳಸಿ ಮೌಲ್ಯವರ್ಧಿತ ಉತ್ಪನ್ನವನ್ನು ಮಾಡಿ ಉತ್ತಮ ದರವನ್ನು ಪಡೆದ ಯಶೋಗಾಥೆಗಳು ದೇಶವಲ್ಲ, ವಿದೇಶದಲ್ಲೂ ಆಸಕ್ತಿ ಹುಟ್ಟಿಸುತ್ತದೆ. ಕನ್ನಾಡಿನಲ್ಲಿ ತೆಂಗಿನ ತಾಜಾ ಎಣ್ಣೆ (ತೆಂತಾ ಎಣ್ಣೆ -  ವರ್ಜಿನಲ್ ಕೊಕನಟ್ ಆಯಿಲ್) ತಯಾರಿಸುವ ಉದ್ದಿಮೆಗಳು ಮನೆ ಮಟ್ಟದಿಂದ ಫ್ಯಾಕ್ಟರಿ ತನಗೆ ಬೆಳೆದಿವೆ. ಫಿಲಿಪ್ಪೈನ್ಸ್ಗೆ ಭೇಟಿ ನೀಡಿದ್ದ ಶಿರಸಿಯ ಕೃಷಿಕ ಬಾಲಚಂದ್ರ ಹೆಗಡೆ ಸಾಯಿಮನೆ ಮಾತಿಗೆ ಸಿಕ್ಕಾಗ ಹೇಳಿದ್ದರು, ನಾವಿಲ್ಲಿ ಶ್ಯಾವಿಗೆ ಮಾಡಿದಷ್ಟೇ ಸುಲಭದಲ್ಲಿ ಅಲ್ಲಿ ಮನೆಮನೆಗಳ ಹಿಂಕೋಣೆಗಳಲ್ಲಿ ಕುಟುಂಬ ಸದಸ್ಯರೇ ತೆಂತಾ ಎಣ್ಣೆ ಹಿಂಡುತ್ತಾರೆ. ಕಳೆದ ಅರ್ಧ ದಶಕದಲ್ಲಿ ಅಲ್ಲಿ ತೆಂತಾ ಘಟಕಗಳ ಸಂಖ್ಯೆ ಆರು ಸಾವಿರ ಮೀರಿದೆ.
              ಫಿಲಿಪೈನ್ಸ್ನಲ್ಲಿ ತೆಂಗಿನ ಮರವೊಂದು ವರುಷಕ್ಕೆ ಹನ್ನೆರಡು ಸಾವಿರ 'ಪಿಸೋ' ಮೌಲ್ಯದ ತೆಂಗಿನ ಸಕ್ಕರೆ ಕೊಡುತ್ತದೆ! (ಒಂದು ಫಿಲಿಪೈನ್ಸ್ ಪಿಸೋ ಅಂದರೆ ಭಾರತದ 1.37 ರೂ.) ಈ ಮರದಿಂದ ಕೊಬ್ಬರಿ ತಯಾರಿಸಿದರೆ ಸಿಗುವುದು ಕೇವಲ ಮುನ್ನೂರ ಇಪ್ಪತ್ತು ಪಿಸೋ. ಅಲ್ಲಿನ ಜೆರ್ರಿ ತಾರೆ ಕುಟುಂಬವು ದೇಶದಲ್ಲೇ ಹೆಚ್ಚು ಸಕ್ಕರೆ ಮತ್ತು ಸಿರಪ್ ತಯಾರಿಸುತ್ತಾರೆ. ಅವರ ಅನುಭವ ನೋಡಿ. ತೆಂಗಿನ ಮರವು ವರುಷಕ್ಕೆ ಸುಮಾರು ನಾಲ್ಕು ನೂರ ಎಂಭತ್ತು ಲೀಟರ್ 'ಕೊಕ್ಕೊ ಸ್ಯಾಪ್' (ನೀರಾ) ಉತ್ಪಾದಿಸುತ್ತದೆ. ಇನ್ನೂ ಅರಳದ ತೆಂಗಿನ ಹೂವಿನಿಂದ ಸಂಗ್ರಹಿಸುವ ದ್ರವವಿದು. ಒಂದು ಕಿಲೋ ಸಕ್ಕರೆ ಆಗಲು ಎಂಟು ಕಿಲೋ ನೀರಾ ಬೇಕು. ನಾಲ್ಕು ನೂರ ಎಂಭತ್ತು ಲೀಟರಿನಲ್ಲಿ ಅರುವತ್ತು ಕಿಲೋ ಸಕ್ಕರೆ.  ಮಾರುಕಟ್ಟೆ ದರ ಕಿಲೋಗೆ ಇನ್ನೂರು ಪಿಸೋ. ಒಂದು ಹೆಕ್ಟಾರಿನಲ್ಲಿ ನೂರ ನಲವತ್ತು ಮರಗಳು. ಕೇವಲ ತೆಂಗಿನಕಾಯಿ, ಎಳನೀರು ಮಾರಾಟದಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಥಿರತೆ ಕಾಣಲು ಕಷ್ಟಸಾಧ್ಯ. ಮೌಲ್ಯವರ್ಧನೆಯಿಂದ ಬೆಲೆಯೂ ವರ್ಧಿಸುತ್ತದೆ ಎನ್ನುವುದಕ್ಕೆ ವಿಶ್ವಾದ್ಯಂತ ಅನೇಕ ಯಶೋಗಾಥೆಗಳಿವೆ.
              ಅರ್ಥಿಕ ತಜ್ಞ ಡಾ. ವಿಘ್ನೇಶ್ವರ ವಮರ್ುಡಿಯವರು ತೆಂಗಿನ ವಿಶ್ವದರ್ಶನವನ್ನು ಮಾಡಿಸುತ್ತಾರೆ : ತೊಂಭತ್ತು ರಾಷ್ಟ್ರಗಳಲ್ಲಿ ತೆಂಗು ಉತ್ಪನ್ನಗಳ ಮಾರಾಟ ಜಾಲವಿದೆ. ಭಾರತದ ಹದಿನೆಂಟು ರಾಜ್ಯಗಳಲ್ಲಿ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳಾಗುತ್ತಿವೆ. ಕರ್ನಾಟಕ, ಕೇರಳ, ತಮಿಳುನಾಡು ಮುಂಚೂಣಿಯಲ್ಲಿದೆ. ಎಂಭತ್ತ ನಾಲ್ಕು ರಾಷ್ಟ್ರಗಳಿಗೆ ಉತ್ಪನ್ನಗಳು ರಫ್ತಾಗುತ್ತಿವೆ. ತೆಂಗಿನಪುಡಿ ಸೇರಿಸಿದ ಪಾನ್ 'ಕೊಕೊನಟ್ ಬೀಡಾ'ವು ನಮ್ಮ ದೇಶದ ಪಾನ್ ರುಚಿಪ್ರಿಯರ ಉದರ ಸೇರುತ್ತಿದೆ. ಹುಡುಕಿ ಬರುವ  ಗ್ರಾಹಕರಿದ್ದಾರೆ. ನಗರಗಳಲ್ಲಿ ತೆಂಗಿನ ಸಣ್ಣ ಹೋಳಿಗೆ ಎರಡು ರೂಪಾಯಿ ದರ. ಒಂದು ತೆಂಗಿನಲ್ಲಿ ಇಪ್ಪತ್ತು ಹೋಳು ಎಂದಾದರೂ ಒಂದು ತೆಂಗಿನಕಾಯಿಗೆ ನಲವತ್ತು ರೂಪಾಯಿ! ಇದು ಮೌಲ್ಯವರ್ಧನೆಯ ತಾಕತ್ತು.
                 ಎಳನೀರು ಶಕ್ತಿಶಾಲಿ ಪೇಯ. ಉಳ್ಳವರು ಮಾತ್ರ ಕುಡಿಯುತ್ತಾರೆ ಎನ್ನುವ ಕಾಲಘಟ್ಟವಿತ್ತು. ಕೊಳ್ಳುವ ಸಾಮಥ್ರ್ಯ ಹೆಚ್ಚಾದಂತೆ ಎಳನೀರಿನ ಬಳಕೆ ಹೆಚ್ಚಾಗುತ್ತದೆ. ಹಗಲಿಡೀ ದುಡಿವ ಶ್ರಮಿಕರಿಗೂ ಒಂದೆರಡು ಎಳನೀರು ಕುಡಿದು ದೇಹಾರೋಗ್ಯವನ್ನು ಕಾಪಾಡಿಕೊಳ್ಳುವಷ್ಟು ಅರಿವು ಮೂಡಿದೆ. ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಅಂಗಡಿಯಲ್ಲಿ ಬೊಂಡವನ್ನು ಮುಂಗಡ ಕಾದಿರಿಸುತ್ತಾರೆ. ಅದರಲ್ಲೂ ಸ್ಥಳೀಯ ಎಳನೀರು ಮಾರುಕಟ್ಟೆಗೆ ಬಂದರೆ ಸಾಕು, ತಕ್ಷಣದಲ್ಲಿ ಖಾಲಿ ಖಾಲಿ!                      
             ಬಾಟ್ಲಿಯಲ್ಲಿ ಸಿಗುವ ಬಣ್ಣ ಬಣ್ಣದ ನೀರಿಗಿಂತ ಆರೋಗ್ಯದಾಯಕ ಎನ್ನುವ ಕಾಳಜಿಯಿದೆ. ಪೊಳ್ಳಾಚಿಯಿಂದ ಮಂಗಳೂರು ಮಾರುಕಟ್ಟೆಗೆ ವಾರಕ್ಕೆ ಎರಡು ಲಾರಿ ಲೋಡು ಗೆಂದಾಳಿ ಎಳನೀರು ಬರುತ್ತದೆ! ಒಂದು ಗೆಂದಾಳಿ ಎಳನೀರಿಗೆ 30-35 ರೂಪಾಯಿ. ಮೀಯಪದವಿನ ಡಾ.ಡಿ.ಸಿ.ಚೌಟರು ತನ್ನ ತೋಟದ ಎಳನೀರನ್ನು ಸ್ಥಳೀಯವಾಗಿ ಮಾರುತ್ತಾರೆ. ಕೊಂಡಾಣದ ಚಂದ್ರಶೇಖರ ಗಟ್ಟಿಯವರು ಮಾರುಕಟ್ಟೆ ಮಾಡಲೆಂದೇ ತೆಂಗಿನ ತೋಟ ಎಬ್ಬಿಸಿದ್ದಾರೆ.
                 ಕೇರಳದ ಮಂಜೇಶ್ವರ ಕಡಂಬಾರಿನಲ್ಲಿ ಎಳನೀರು ಪ್ಯಾಕೇಜಿಂಗ್ ಉದ್ದಿಮೆಯೊಂದು ಒಂದೂವರೆ ವರುಷದಿಂದ ಸದ್ದಾಗುತ್ತಿದೆ. ಯುವಕ ಸಫ್ವಾನ್ ಮೊದಿನ್ ಅವರ ಕನಸು. ಗ್ಲೋಬಲ್ ಅಸೋಸಿಯೇಟ್ಸ್ - ಉದ್ದಿಮೆ ಹೆಸರು. 'ಪುಶ್ ಡ್ರಿಂಕ್ಸ್' ಹೆಸರಿನಲ್ಲಿ ಉತ್ಪನ್ನ ತಯಾರಿಸುತ್ತಿದ್ದಾರೆ. ಕಾಲು ಲೀಟರ್ ಎಳೆನೀರಿನ ಬಾಟಲ್ನಲ್ಲಿ ಸೂಪರ್ ಮಾರ್ಕೆಟಿನಲ್ಲಿ ಲಭ್ಯ. ಈ ಉತ್ಪನ್ನಕ್ಕೆ ಒಂಭತ್ತು ತಿಂಗಳ ತಾಳಿಕೆ. ಎಲ್ಲವೂ ಯಂತ್ರಚಾಲಿತ. ತೆಂಗು ಅಭಿವೃದ್ಧಿ ಮಂಡಳಿಯ ತಂತ್ರಜ್ಞಾನ. ಸ್ಥಳೀಯವಾಗಿ ಸ್ವಲ್ಪ ಪ್ರಮಾಣದಲ್ಲಿ  ಎಳನೀರು ಸಂಗ್ರಹ. ಮಿಕ್ಕಂತೆ ಕೇರಳ, ತಮಿಳುನಾಡಿನಿಂದ ತರಿಸಿಕೊಳ್ಳುತ್ತಾರೆ. ಯುರೋಪು ದೇಶಕ್ಕೆ ರಫ್ತು ಮಾಡುವಷ್ಟು ಸದೃಢವಾಗಿದೆ.
              ಕರಾವಳಿ ಮೂಲಕ ಮುಂಬಯಿಗ ರಘುನಂದನ್ ಕಾಮತ್ ಅಂದರೆ ಫಕ್ಕನೆ ಪರಿಚಯ ಸಿಗದು. ಆದರೆ 'ನ್ಯಾಚುರಲ್ ಐಸ್ಕ್ರೀಂ' ಅನ್ನಿ. ಎಲ್ಲರಿಗೂ ಗೊತ್ತು. ಐಸ್ಕ್ರೀಮಿಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಲಸಿನ ಹಣ್ಣನ್ನು ಒಯ್ದ ಸಾಹಸಿ. ಎಳನೀರಿನಲ್ಲಿರುವ ಗಂಜಿ(ಬಾವೆ)ಯನ್ನು ತೆಗೆದು ಐಸ್ಕ್ರೀಮಿನಲ್ಲಿ ಬಳಸುವ ಉದ್ದಿಮೆ ಕ್ಲಿಕ್ ಆಗಿದೆ. ಇದಕ್ಕಾಗಿ ಹಿಂದಿನ ವರುಷ ತುಂಡರಿಸಿದ ಎಳನೀರಿನ ಸಂಖ್ಯೆ ಆರು ಲಕ್ಷ! ಕೃಷಿ ಲೇಖಕ ಪಡಾರು ಒಂದು ಅಂಕೆಸಂಖ್ಯೆಯನ್ನು ಹೇಳುತ್ತಾರೆ, ದೇಶಾದ್ಯಂತ ದಿನಕ್ಕೆ ಸುಮಾರು ಹದಿನೈದು ಸಾವಿರ ಲೀಟರ್ ನೇಚುರಲ್ ಐಸ್ಕ್ರೀಮನ್ನು ಕಾಮತರು ತಮ್ಮ ಔಟ್ಲೆಟ್ ಮೂಲಕ ಗ್ರಾಹಕರಿಗೆ ತಿನ್ನಿಸುತ್ತಾರೆ. ಅದರಲ್ಲಿ ಸೀತಾಫಲಕ್ಕೆ ಮೊದಲ ಮಣೆ. ನಂತರದ ಸ್ಥಾನ ಎಳನೀರಿನದು.
              ಸಿಪಿಸಿಆರ್ಐ ಯೋಚನೆಯ 'ಕಲ್ಪರಸ'ವನ್ನು ಪ್ರಸಿದ್ಧೀಕರಿಸಲು ಕೃಷಿಕರು ಆಸಕ್ತರಾಗಿದ್ದಾರೆ. ಕರ್ನಾಟಕದಲ್ಲಿ ಕಾನೂನು ತೊಡಕಿದೆ. ಎಲ್ಲರೂ ನೀರಾ ಇಳಿಸುವಂತಿಲ್ಲ. ನಮ್ಮ ತೋಟದ ತೆಂಗಿನ ಮರದಿಂದ ಕಲ್ಪರಸವನ್ನು ಇಳಿಸಲು ನಾವು ಸರಕಾರದ ಮುಂದೆ ನಿಲ್ಲಬೇಕಾ? ನಮಗೆ ಹಕ್ಕಿಲ್ವಾ? ವಿಧಾನಸೌಧದ ಅಧಿಕಾರಿಗಳು ಪರ್ಮಿಶನ್ ಕೊಡ್ತೇವೆ ಅಂತ ಹೇಳಿ ವರುಷಗಳೇ ಸಂದಿವೆ. ಬಜೆಟಿನಲ್ಲೂ ಪ್ರಸ್ತಾವವಾಗಿದೆ. ಹಾಗಾಗಿ ಕಲ್ಪರಸ ಉದ್ದಿಮೆಯನ್ನು ಸ್ಥಾಪಿಸುವ ನನ್ನ ನಿರ್ಧಾರವನ್ನು ಬದಲಿದೆ, ಎಂದು ವಿಷಾದಿಸುತ್ತಾರೆ, ಕೃಷಿಕ ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್.
             ರಾಜೇಶ್ ವಿಷಾದದಲ್ಲೂ ಅರ್ಥವಿದೆ. ನಮ್ಮ ಕಾನೂನುಗಳೇ ನಮಗೆ ತೊಡಕು. ಕೃಷಿ, ಕೃಷಿಕ, ಮಾರುಕಟ್ಟೆಯು ಹಳಿಯಲ್ಲಿ ಸಂಚರಿಸದೆ ಕಂಪಿಸುತ್ತಿದೆ. ಪರ್ಯಾಯ ಬದುಕನ್ನು ರೂಪಿಸಲು ಸಂಪನ್ಮೂಲಗಳಿವೆ. ಇದನ್ನು ಕ್ರೋಢೀಕರಿಸುವ ಮನಸ್ಸುಗಳಿವೆ. ಕಾನೂನಿನ ತೊಡಕು, ಸರಕಾರದ ನೀತಿ, ಅಧಿಕಾರಿಗಳ ಕರಾಮತ್ತು.. ಹೀಗೆ ವಿವಿಧ ವ್ಯವಸ್ಥೆಗಳು ಕೃಷಿಕರ ಮನಸ್ಸನ್ನು ಮುದುಡಿಸುತ್ತಿವೆ. ಕಲ್ಪರಸಕ್ಕೆ ಉತ್ತಮ ಅವಕಾಶಗಳಿದ್ದು, ಜನ ಸ್ವೀಕೃತಿಯೂ ಉತ್ತಮವಾಗಿದೆ. ಹಾಗಾಗಿ ಕಲ್ಪರಸ ಅಥವಾ ನೀರಾ ಇಳಿಸಲು ಪರವಾನಿಗೆ ನೀಡಿದರೆ ಮೌಲ್ಯವರ್ಧಿತ ಉತ್ಪನ್ನವೊಂದು ತೆಂಗು ಕೃಷಿಕರ ಬಾಳಿನಲ್ಲಿ ಮುಗುಳ್ನಗೆ ಮೂಡಿಸಬಹುದು.


Tuesday, January 19, 2016

ಸಂತೆಯಲ್ಲಿ ಚಿಗುರುವ ಸ್ವಾವಲಂಬಿಯ ಸ್ವಾಭಿಮಾನ

               ವಾರದ ಸಂತೆಯಲ್ಲೊಮ್ಮೆ ಕಣ್ಣೋಡಿಸಿ. ಗ್ರಾಹಕರನ್ನು ಆಕರ್ಶಿಸಲು ಗುಲ್ಲೆಬ್ಬಿಸುತ್ತಾ ವ್ಯವಹಾರ ಕುದುರಿಸುವ ವ್ಯಾಪಾರಿಗಳ ಜಾಣ್ಮೆ ಹತ್ತಿರದಿಂದ ನೋಡಬೇಕು. ಇವರ ಮಧ್ಯೆ ಗುಲ್ಲಿಗೆ ಕಿವುಡಾಗಿ, ಮಾತನ್ನು ಮೌನವಾಗಿಸಿ ಗ್ರಾಹಕರನ್ನು ಸೆಳೆಯುವ ಅಮ್ಮಂದಿರು. ಇವರದು ಏಕಾಂಗಿ ವ್ಯಾಪಾರ. ತಾವೇ ಬೆಳೆದ ಬೆಳೆಯನ್ನು ಮಾರುವ ಖುಷಿ. ನೂರು, ಸಾವಿರ ರೂಪಾಯಿ ಕೈಗೆ ಬಂದರೆ ಕೋಟಿ ಸಿಕ್ಕಿದ ಆನಂದ. ಸಂತೆಯಲ್ಲಿ ಇವರದು ಕಾಲಮಿತಿ ವ್ಯವಹಾರ. ವಸ್ತುವಿನ ತಾಜಾತನವನ್ನು ಇಚ್ಚಿಸುವ, ಗುಣಮಟ್ಟವನ್ನು ಬಯಸುವ ಗ್ರಾಹಕರು. ಇವರ ಅಸ್ತಿತ್ವ ಸಂತೆಯಲ್ಲಿ ದಾಖಲಾಗುವುದಿಲ್ಲ.
               ವೀಳ್ಯದೆಲೆ, ತರಕಾರಿ, ಹೂ, ಸೊಪ್ಪು, ಹಣ್ಣುಗಳನ್ನು ಬೆಳೆದು ಸ್ವತಃ ಸಂತೆಯಲ್ಲಿ ಕುಳಿತು ಮಾರುತ್ತಾರೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದ್ದರಿಂದ ನಷ್ಟವಾಗುವ ಪ್ರಮಾಣ ಕಡಿಮೆ. ಹಾಗೆಂತ ಸಂತೆಯಲ್ಲಿ ಕಿರುಕುಳ ತಪ್ಪಿದ್ದಲ್ಲ! ದೊಡ್ಡ ತಿಮಿಂಗಿಲಗಳು ಸಣ್ಣವನ್ನು ನುಂಗಿದ ಹಾಗೆ! ದೊಡ್ಡ ವ್ಯಾಪಾರಿಗಳ ಕಂಠತ್ರಾಣದ ಮಧ್ಯೆ ಕ್ಷೀಣ ಧ್ವನಿ ಎಬ್ಬಿಸುವ ಇವರದು ಮೂಕ ರೋದನ. ವ್ಯಾಪಾರ ಮಾಡುವ ಜಾಗದ ತಕರಾರಿನಿಂದ ತೊಡಗಿ ದರ ನಿಗದಿ ತನಕ ಲಾಬಿಗೆ ಮಣಿಯಬೇಕಾದ ಸಂದಿಗ್ಧತೆಗಳೂ ಬರುವುದುಂಟು.
               ಮೈಸೂರು ಸಮೀಪದ ಹಳ್ಳಿ ಸಂತೆಗೊಮ್ಮೆ ಬಂಧುವೊಬ್ಬರೊಂದಿಗೆ ಹೋಗಿದ್ದೆ.  ನಸುಕು ಏರುವ ಮೊದಲೇ ಬರೋಬ್ಬರಿ ವ್ಯವಹಾರ. ಹಸಿರು ತರಕಾರಿಗಳ ಮೇಲಾಟ. ಒಂದೆಡೆ ಸುಮಾರು ಅರುವತ್ತೈದು ಎಪ್ಪತ್ತು ಮೀರಿದ ವಯೋವೃದ್ಧೆಯೋರ್ವರು  ಕೊತ್ತಂಬರಿ ಸೊಪ್ಪಿನ ಕಟ್ಟುಗಳನ್ನಿಟ್ಟು ಕುಳಿತಿದ್ದರು. ಕೊತ್ತಂಬರಿ ಸೊಪ್ಪಿನಲ್ಲಿ ಎಷ್ಟು ಲಾಭವಾದೀತೆಂದು ಊಹಿಸಿ. ಒಂದು ಕಟ್ಟಿಗೆ ಹತ್ತು ರೂಪಾಯಿ. ತಾಜಾ ಸೊಪ್ಪಲ್ವಾ, ಸಹಜವಾಗಿ ಗಿರಾಕಿಗಳು ಆಕರ್ಶಿತರಾಗಿದ್ದಾರೆ. ಅವರ ಮುಗ್ಧತೆಗೆ ಮಾರುಹೋಗಿ ಮಾತನಾಡಿಸಿದೆ. ಲಾಭದ ಪ್ರಶ್ನೆಯಲ್ಲ. ಕೈಖರ್ಚಿಗೆ ಹಣ ಬೇಕಲ್ಲ ಮಗಾ. ಇನ್ನೊಬ್ಬರಲ್ಲಿ ಬೇಡ್ಬಾರ್ದು ಎನ್ನುತ್ತಾ ಹಣದ ಎಣಿಗೆಯಲ್ಲಿ ಮಗ್ನರಾದರು.
             ಅವರ ಸ್ವಾಭಿಮಾನದ ಮಾತು ಆಗಾಗ್ಗೆ ಕಾಡುತ್ತದೆ. ಮಗ, ಸೊಸೆ, ಅಳಿಯ, ಮೊಮ್ಮಗಳಂದಿರ ಸಂಸಾರ. ವ್ಯಾಪಾರ ಮಾಡಬೇಕೆಂದೇನೂ ಇಲ್ಲ. ಕೈಖರ್ಚಿಗೆ ಎಷ್ಟು ಬೇಕಾಗಬಹುದು. ನೂರೋ, ಇನ್ನೂರೋ ಅಷ್ಟೇ. ತನಗೆ ಬೇಕಾದಷ್ಟು ಹಣವನ್ನು ತಾನೇ ಗಳಿಸುವ ಮನೋನಿರ್ಧಾರದ ಮುಂದೆ ನಿಜಕ್ಕೂ ಕುಬ್ಜನಾದೆ. ವ್ಯಾಪಾರ ಮುಗ್ದು ಹೋಯಿತು. ’ನಾನು ಬರ್ತೇನೆ’  ಎನ್ನುತ್ತಾ ಹೊರಟರು. ಅರಳಿದ ಮುಖದ ಮರೆಯಲ್ಲಿ ಸ್ವಾವಲಂಬಿ ಬದುಕಿನ ಸಂದೇಶ ಇಣುಕುತ್ತಿತ್ತು.
              ಇಂತಹ ಅಮ್ಮಂದಿರಿಗೆ ಬದುಕನ್ನು ಕಟ್ಟಿಕೊಳ್ಳುವ ಛಾತಿಯಿದೆ, ಸಂಪನ್ಮೂಲವಿದೆ, ಅವಕಾಶವಿದೆ.  ಎಲ್ಲಕ್ಕಿಂತಲೂ ಮುಖ್ಯವಾಗಿ  ಬೆಳೆದ ವಸ್ತುಗಳನ್ನು ಮಾರುವ ಮನೋದೃಢತೆಯಿದೆ. ಇವರಿಗೆ ಸಬ್ಸಿಡಿ ಗೊತ್ತಿಲ್ಲ, ಬೇಕಾಗಿಲ್ಲ. ಸರಕಾರದ ಸಹಾಯಧನ, ಸಹಕಾರಗಳ ಫೈಲುಗಳು ಇವರಲ್ಲಿಗೆ ನುಗ್ಗುವುದಿಲ್ಲ. ತಮ್ಮ ಪಾಡಿಗೆ ತಾವಿದ್ದುಕೊಳ್ಳುವ ಅಪ್ಪಟ ಮುಗ್ಧತೆಗಳೇ ಹಳ್ಳಿಯ ಜೀವಾಳ. ಕನ್ನಾಡಿನ ಸಂತೆಗಳು ಅಪ್ಪಟ ಹಸಿರು ಮನಸ್ಸುಗಳನ್ನು ಸೃಷ್ಟಿಸುತ್ತವೆ. ಅದು ಹಳ್ಳಿಯ ತಾಕತ್ತು.
ಮೈಸೂರಿನ ಸಂತೆಯಲ್ಲಿ ನೋಡಿದ ಸ್ವಾವಲಂಬಿ ಬದುಕಿನ ಗಾಥೆಯು ಕಾಲ ಬಯಸುವ, ಬೇಡುವ ಸೆಳಕು. ಬದುಕನ್ನು ಎತ್ತರಿಸುವ ಸೆಳಕುಗಳ ಬಳುಕಿಗೆ ಬೆಳಕು ಹಾಕುವ ವ್ಯವಸ್ಥೆಗಳು ವಿರಳ. ಯಾಕೆಂದರೆ ಆ ಯಶವು ಸದ್ದು ಮಾಡುವುದಿಲ್ಲ, ಸದ್ದಾಗುವುದಿಲ್ಲ. ಸರಿ, ಹರಿಹರಕ್ಕೆ ಭೇಟಿ ನೀಡಿದ್ದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಮಾಲಿನಿ ಹೆಗ್ಡೆಯವರೊಂದಿಗೆ ಸ್ವಾವಲಂಬಿ  ಮನಸ್ಸುಗಳ ಅನುಭವಗಳನ್ನು ಮೆಲುಕು ಹಾಕುತ್ತಿದ್ದೆ. ಕೆಂಚನಹಳ್ಳಿಯ ಕೆಂಚಮ್ಮ ಅವರ ಬದುಕಿಗೆ ಹೆಗ್ಡೆಯವರು ಕನ್ನಡಿಯಾದರು.
              ಹದಿನಾರು ಗುಂಟೆ ಮನೆಗೆ ಹೊಂದಿಕೊಂಡಿರುವ ಜಾಗ ಮತ್ತು ಒಂದೆಕ್ರೆ ಗದ್ದೆ. ಗಂಡ ಹನುಮಂತಪ್ಪ. ಇಬ್ಬರು ಮಕ್ಕಳು. ನೂರಾರು ಕೂಲಿ ಕಾರ್ಮಿಕರಿಗೆ ಹನುಮಂತಪ್ಪ ಯಜಮಾನರಾಗಿದ್ದರು. ತಮಗೆಷ್ಟು ಮಂದಿ ಬೇಕು ಎಂದರೆ ಸಾಕು, ಶ್ರಮಿಕರನ್ನು ಒದಗಿಸುವ ವ್ಯವಸ್ಥೆ. ಅದಕ್ಕೊಂದಿಷ್ಟು ಪಗಾರ. ಕಾರ್ಮಿಕ ಅಭಾವ ತಲೆದೋರಿದಾಗ ಈ ವೃತ್ತಿಗೆ ವಿದಾಯ. ಕೂಲಿ ಮಾಡುವುದು ಅವಮಾನ! ಮಡದಿ ಕೆಂಚಮ್ಮ ಗಂಡನ ಆಸರೆಗೆ ನಿಂತರು. ಅನ್ಯಾನ್ಯ ಕಾರಣಗಳಿಂದಾಗಿ ಭತ್ತದ ಬೇಸಾಯ ಕೈಕೊಡುತ್ತಿತ್ತು. ಗದ್ದೆಯನ್ನು ಗುತ್ತಿಗೆಗೆ ನೀಡಿದ್ದರು.
                ಹದಿನಾರು ಗುಂಟೆಯಲ್ಲಿ ಹೊಸ ಕೃಷಿಗೆ ಶ್ರೀಕಾರ. ಆ ಭಾಗಕ್ಕೆ ಹೂವಿನ ಕೃಷಿ ಅಪರೂಪ. ಗ್ರಾಮಾಭಿವೃದ್ಧಿ ಯೋಜನೆಯಿಂದ ತರಬೇತಿ. ಹೂ ಕೃಷಿ ಮಾಡುವವರಲ್ಲಿಗೆ ಅನುಭವಕ್ಕಾಗಿ ಪ್ರವಾಸ. ಕೆಂಚಮ್ಮರಿಗೆ ವಿಶ್ವಾಸವೃದ್ಧಿ. ಗುಲಾಬಿ ಹೂಗಳ ಮೂರು ತಳಿಗಳನ್ನು ಆಯ್ಕೆ ಮಾಡಿ ನೂರು ಗಿಡಗಳನ್ನು ನೆಟ್ಟು ಆರೈಕೆ ಮಾಡಿದರು. ಆರೇ ತಿಂಗಳಲ್ಲಿ ಒಂದೊಂದು ಹೂ ಹಣವನ್ನು ಕೊಟ್ಟಿತು! ಸ್ಥಳೀಯ ಹರಿಹರದಲ್ಲಿ ಹೂವಿನ ಮಾರುಕಟ್ಟೆ. ಏನಿಲ್ಲವೆಂದರೂ ದಿವಸಕ್ಕೆ ಐನೂರು ರೂಪಾಯಿ ರೊಕ್ಕ ಕೈಯೊಳಗೆ ಬರುತ್ತದೆ.
                ಹನುಮಂತಪ್ಪನವರು ಧಾರವಾಡಕ್ಕೆ ಹೋಗಿದ್ದಾಗ ಕಾಲು ಕಿಲೋ ನುಗ್ಗೆ ಬೀಜ ತಂದಿದ್ದರು. ಆಸಕ್ತರಿಗೆ ಹಂಚಿದ್ದರು. ಈಗವರಲ್ಲಿ ನಲವತ್ತು ನುಗ್ಗೆ ಮರಗಳಿವೆ. ಒಂದೊಂದು ಕಾಯಿಯೂ ಏಟಿಯಂ. ವಾರಕ್ಕೊಮ್ಮೆ ಇನ್ನೂರು ಕಾಯಿ ಮಾರುತ್ತಾರೆ. ಐನೂರರಿಂದ ಆರು ನೂರು ರೂಪಾಯಿ ಸಂಪಾದನೆ. ಅದೂ ತಾನು ಬಳಸಿ, ಬೀಗರಿಗೆ ಕೊಟ್ಟು, ಆಪ್ತೇಷ್ಟರಿಗೆ ಹಂಚಿ ಮಿಕ್ಕಿದ್ದು. ’ಇದು ಹಿಂಡುವ ಎಮ್ಮೆ. ದಿನಾ ಕರಿತಾ ಬೇಕ”, ಎಂದರು.
              ಋತುಮಾನಕ್ಕನುಗುಣವಾಗಿ ತರಕಾರಿ ಬೆಳೆಯುತ್ತಾರೆ. ಅದರಲ್ಲೂ ವಾರಕ್ಕೆ ಎಂಟುನೂರು ರೂಪಾಯಿಯಿಂದ ಒಂದು ಸಾವಿರ ಗಳಿಕೆ. ಆರು ಗುಂಟೆ ಜಾಗದಲ್ಲಿ ಎಂಟು ತಿಂಗಳಲ್ಲಿ ತರಕಾರಿಯಿಂದಲೇ ಮೂವತ್ತೆರಡು ಸಾವಿರ ತೆಗ್ದೆ, ಖುಷಿ ಹಂಚಿಕೊಂಡರು. ಒಂದು ಆಕಳಿದೆ. ಹಾಲು ಮಾರಾಟದಿಂದ ತಿಂಗಳಿಗೆ ಐದು ಸಾವಿರ ರೂಪಾಯಿ ಖಚಿತ. ಎರೆತೊಟ್ಟಿ ಮಾಡಿಕೊಂಡಿದ್ದಾರೆ. ಯೋಜನಾಬದ್ಧವಾಗಿ ಕೃಷಿ ಮಾಡುವ ಜಾಣ್ಮೆಯನ್ನು ಗ್ರಾಮಾಭಿವೃದ್ದಿ ಯೋಜನೆ ಕಲಿಸಿಕೊಟ್ಟಿದೆ.
ತರಕಾರಿ, ಹೂಗಳನ್ನು ಕೆಂಚಮ್ಮ ವಾರದ ಸಂತೆಯಲ್ಲಿ ಕುಳಿತು ಮಾರುತ್ತಾರೆ. ಆರಂಭದಲ್ಲಿ ಹಗುರವಾಗಿ ಮಾತನಾಡುತ್ತಿದ್ದರಂತೆ. ಗೇಲಿ ಮಾಡುತ್ತಿದ್ದರಂತೆ. ಬದುಕಿನ ಬಂಡಿ ಏರಿದ ಮೇಲೆ ಇಂತಹ ಮಾತುಗಳನ್ನು ಕೆಂಚಮ್ಮ ಕೇಳಿಸಿಕೊಂಡಿಲ್ಲ. ಬೆಳ್ಳಂಬೆಳಿಗ್ಗೆ ಸಂತೆಗೆ ಹೋದರೆ ಹನ್ನೆರಡು ಗಂಟೆಯೊಳಗೆ ಐಟಂ ಖಾಲಿ. ನುಗ್ಗೆ ಕೋಡಿಗೆ ಬೇಡಿಕೆ. ಹಬ್ಬದ ಸಮಯದಲ್ಲಿ ಹೂವಿಗೆ ಏರುದರ. ಚಿಕ್ಕ ಚಿಕ್ಕ ಆದಾಯಗಳು ಕೆಂಚಮ್ಮರ ಬದುಕಿನಲ್ಲಿ ನಗು ಮೂಡಿಸಿದೆ. ಚಿಕ್ಕ ಕೃಷಿಯಿಂದ ಶ್ರೀಮಂತಿಕೆ ಬಂದಿಲ್ಲ. "ನಮ್ಮ ಜಾಗ, ನಮ್ಮ ದುಡಿಮೆ. ಇದು ರಾಜ ಬದುಕಲ್ವಾ", ಎಂದರು. ಕೆಂಚಮ್ಮರ ಮಾತು ಮುಗಿಯುವಷ್ಟರಲ್ಲಿ ಅನೇಕ ಶ್ರೀಮಂತ ಶುಷ್ಕ ಮನಸ್ಸುಗಳು ಮನದಲ್ಲಿ ಹಾದು ಹೋಗಿ ಮುದುಡಿದುವು!
             ಇವರ ಬದುಕಿನಲ್ಲಿ ಏನೂ ಸಂದೇಶ ಕಾಣದೇ ಇರಬಹುದು. ಸ್ವಾವಲಂಬಿಯಾಗಿ ಹಂಗಿಲ್ಲದೆ ಬದುಕಬೇಕೆಂಬ ಬದ್ಧತೆಯಿದೆಯಲ್ಲಾ, ಅದು ಜೀವನೋತ್ಸಾಹ. ಕೆಂಚಮ್ಮ ದಂಪತಿಗಳ ದುಡಿಮೆಗಳು ಆ ಊರಿನಲ್ಲಿ ಮಾತಿಗೆ ವಿಷಯ. ಇಂತಹ ಬದ್ಧತೆಯ ಬದುಕಿನ, ತಮ್ಮ ಕಾಲ ಮೇಲೆ ನಿಲ್ಲಬೇಕೆಂಬ ಛಾತಿಯ ಸಾವಿರಾರು ಕುಟುಂಬಗಳ ಯಶೋಗಾಥೆಗಳು ಕನ್ನಾಡಿನ ಆತ್ಮಹತ್ಯೆಗೆ ಉತ್ತರವಾಗಲಾರದೇ?  ಸಮಸ್ಯೆಗಳನ್ನು ವೈಭವೀಕರಿಸದೆ ಜಾಣ್ಮೆಯಿಂದ ಎದುರಿಸಿ ನಗುತ್ತಿರುವ ಜೀವನ ಪದ್ಧತಿಗಳು ಒತ್ತಡದ ಬದುಕಿಗೆ ಉತ್ತರವಾಗಲಾರದೇ? ಸರಕಾರದ ಮುಂದೆ ಕೈಚಾಚದೆ, ಸಹಾಯಧನಗಳ ಹಿಂದೆ ಓಡದೆ, ಸಬ್ಸಿಡಿಗಳಿಗೆ ಅಲೆದಾಡದ ಈ ಬದುಕಿನಲ್ಲಿ ನೆಮ್ಮದಿ ಕಾಣುವುದಿಲ್ಲವೇ?
               ಒಂದೆಡೆ ನಿದ್ದೆಗೆಡಿಸುವ ಕೋಟಿಗಳ ಲೆಕ್ಕಗಳು ಹುಟ್ಟುಹಾಕುವ ರಾದ್ದಾಂತಗಳಿಗೆ ಎಣೆಯಿಲ್ಲ. ಮತ್ತೊಂದೆಡೆ ಮರ್ಯಾದೆಯ ಬದುಕಿಗಾಗಿ ಪಡುವ ಒದ್ದಾಟ. ಒಂದು ರೂಪಾಯಿ ಗಳಿಸಲು ಪರದಾಟ. ಹಳ್ಳಿಯ ಇಂತಹ ಚಿತ್ರಗಳು ಆಡಳಿತ ವ್ಯವಸ್ಥೆಗಳ ಕಡತದೊಳಗೆ ಕ್ಲಿಕ್ ಆಗವುದಿಲ್ಲ. ಒಂದು ವೇಳೆ ಹಳ್ಳಿಗಳ ಉದ್ಧಾರಕ್ಕಾಗಿ ಆರ್ಥಿಕ ಸಹಕಾರಗಳು ಹರಿದು ಬಂತೆನ್ನಿ. ಅಬ್ಬಾ.. ಅದನ್ನು ಮಧ್ಯದಲ್ಲೇ ಹರಿದು ಮುಕ್ಕುವ ಭ್ರಷ್ಟ ಕೈಗಳಿಗೆ ಭದ್ರ ಕಣ್ಗಾವಲು ಇದೆ! ಈ ಮಧ್ಯೆ ಯೋಜನೆಗಳಿಗೆ ಸಹಿ ಬೀಳುತ್ತಾ ಇರುತ್ತವೆ. ಕಾಗದಗಳಲ್ಲಿ ಹಳ್ಳಿಗಳು ಉದ್ಧಾರವಾಗುತ್ತಾ ಇರುತ್ತವೆ! ಶ್ರಮಜೀವಿಗಳ ದುಡಿತಕ್ಕೆ ವಿಶ್ರಾಂತಿಯೇ ಇರುವುದಿಲ್ಲ. ಕೆಂಚಮ್ಮನಂತಹ ಬದ್ಧತೆಯ ಸ್ವಾವಲಂಬಿ ಬದುಕು ನಿಜಾರ್ಥದಲ್ಲಿ ಗ್ರಾಮೀಣ ಭಾರತದ  ಉಸಿರು.



Monday, January 18, 2016

ರಾಷ್ಟ್ರೀಯ ವಿಜ್ಞಾನ ಚಲನ ಚಿತ್ರೋತ್ಸವಕ್ಕೆ ಕಾನ್ಮನೆ ಸಾಕ್ಷ್ಯ ಚಿತ್ರ

             ಮಕ್ಕಳಿಗೆ ಪರಿಸರ ಪಾಠ ಹೇಳುವುದು ಬಹಳ ಇಷ್ಟದ ಕೆಲಸ, ಆದರೆ ಇದನ್ನು ಕೆಮರಾ ಮುಂದೆ ಹೇಳುವುದಕ್ಕೆ ಬೇಸರ. ಮತ್ತೆ ಮತ್ತೆ ಶರ್ಟ್ ಬದಲಿಸುತ್ತಾ ಚಿತ್ರೀಕರಣಕ್ಕೆ ನಿಲ್ಲುವುದು ಬಹಳ ಬೇಜಾರು ತಂದಿತ್ತು. ಮರದ ಕತೆ ಹೇಳುತ್ತಾ ಸಸ್ಯ ವಿಸ್ಮಯ ವಿವರಿಸುತ್ತಾ 4 -5 ದಿನ ಕಳೆಯಿತು. ಒಂದು 15 ನಿಮಿಷದ ಸಾಕ್ಷ್ಯ ಚಿತ್ರಕ್ಕೆ ಸಮಯ ಜಾಸ್ತಿಯಾಯ್ತು, ಮನಸ್ಸು ಕೃಷಿ ಪ್ರವಾಸದ ಕಾಯಕ ನೆನಪಿಸಿ ಕೆಮರಾದಿಂದ ದೂರ ಓಡಲು ಹಂಬಲಿಸುತ್ತಿತ್ತು.
              'ಸರ್, ಈಗ ನಿಮಗೆ ಬೇಜಾರಾಗುತ್ತೆ , ನಂತ ನಿಮಗೆ ಖುಷಿಯಾಗುತ್ತೆ ' ಎಂದರು ಚಿತ್ರ ನಿರ್ಮಾಪಕರಾದ ಮೈಸೂರು ವಿಶ್ವವಿದ್ಯಾಲಯದ EMRC(Educational Multimedia Research Centre University of Mysore). ಗೋಪಿನಾಥ್.
               ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ನಡೆಯುವ ದೇಸಿ ಜ್ಞಾನದ ಪರಿಸರ ಶಿಕ್ಷಣ ಪ್ರಯೋಗದ ಕುರಿತು ಮೈಸೂರು ವಿವಿಯ ಎಮ್ ಆರ್ ಸಿ 'Kaanmane-Nurturing Nature' ಕಿರು ಚಿತ್ರ ನಿರ್ಮಿಸಿತ್ತು. ಇದು ಇಂದು ಆರನೇ ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದ 144 ಚಿತ್ರಗಳಲ್ಲಿ 12 ಚಿತ್ರಗಳನ್ನು ಪ್ರದರ್ಶನ,ಸ್ಪರ್ಧೆಗೆ ಆಯ್ಕೆಮಾಡಲಾಗಿದೆ. ಇದರಲ್ಲಿ ಕಾನ್ಮನೆ ಚಿತ್ರವೂ ಒಂದಾಗಿದೆ. ಬರುವ ಫೆಬ್ರುವರಿ 9-12 ರವರೆಗೆ ಮುಂಬೈದಲ್ಲಿ ನಡೆಯಲಿರುವ ವಿಜ್ಞಾನ ಚಿತ್ರೋತ್ಸವದಲ್ಲಿ ಇದು ಪ್ರದರ್ಶನಗೊಳ್ಳಲಿದೆ.
            ಖ್ಯಾತ ಬರಹಗಾರ ಮಿತ್ರ , EMRC ನಿರ್ದೇಶಕ ಡಾ.ನಿರಂಜನ ವಾನಳ್ಳಿ ಇದನ್ನು ನಿರ್ದೇಶಿಸಿದ್ದಾರೆ.ರಾಷ್ಟ್ರೀಯ ವಿಜ್ಞಾನ ಚಲನ ಚಿತ್ರೋತ್ಸವಕ್ಕೆ ಕಾನ್ಮನೆ ಸಾಕ್ಷ್ಯ ಚಿತ್ರ ಅಯ್ಕೆಯಾಗಿರುವದು ನನಗಂತೂ ಸಂತಸ ತಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅರಣ್ಯವಾಸಿಗಳ ನೆಲಮೂಲ ಜ್ಞಾನವನ್ನು ಪರಿಸರ ಶಿಕ್ಷಣಕ್ಕೆ ಬಳಸುವ ಪ್ರಯತ್ನಕ್ಕೆ ಸಿಕ್ಕದೊಡ್ಡ ಪ್ರೋತ್ಸಾಹ ಇದಾಗಿದೆ.

Sunday, November 8, 2015

ನೇರಳೆಯ ನೆರಳು ಎಬ್ಬಿಸಿದ ಹಸಿರು ಜ್ಞಾನ


              ಪೆರ್ಲ-ಬಜಕೂಡ್ಲು ದೇವಳದ ಸನಿಹ ನೇರಳೆ ಹಣ್ಣಿನ ಮರ. ಮಕ್ಕಳನ್ನು ಸೆಳೆದ ಹಿರಿಯಜ್ಜ. ಆಗಸದೆತ್ತರಕ್ಕೆ ಏರಲಾರರರು ಎಂದು ಗೊತ್ತಿದ್ದೇ ಗೊಂಚಲು ಗೊಂಚಲು ಹಣ್ಣುಗಳನ್ನು ಬಿಡುತ್ತಿತ್ತು. ಬುಡದಲ್ಲಿ ಬಣ್ಣದ ಚಿತ್ತಾರದ ಬಿನ್ನಾಣ. ಊರಿನ ಕಿರಿಯ-ಹಿರಿಯರ ಬದುಕಿಗದು ಸಾಕ್ಷಿ. ಮಂತ್ರದ ನಾದದ ನಿನಾದಕ್ಕೆ ಕಿವಿಯಾಗಿ ಸದೃಢವಾಗಿ ಬೆಳೆದಿತ್ತು.
ಬ್ರಹ್ಮಕಲಶೋತ್ಸವದ ಸಂದರ್ಭ. ಅಭಿವೃದ್ಧಿಯ ನೀಲನಕಾಶೆ ಸಿದ್ಧವಾದಾಗ ಮರವನ್ನು ತೆಗೆಯುವ ನಿರ್ಧಾರ. ಕಡಿಯದಿದ್ದರೆ ಅಭಿವೃದ್ಧಿ ಕೆಲಸಗಳಿಗೆ ತೊಡಕು. ಅಂದು ನೇರಳೆಯ ತಂಪು ನೆರಳಿನಲ್ಲಿ ಬಿಸಿಯುಸಿರು. ಧರೆಗುರುಳಿದಾಗ ಊರಿನ ಮಂದಿಗೆ ರಕ್ತ ಸಂಬಂಧಿಯನ್ನು ಕಳೆದುಕೊಂಡ ಭಾವ-ಅನುಭಾವ.
             ಊರಿನ ಭಾವಜೀವಿಗಳ ಮನದೊಳಗೆ ನೇರಳ ಮರ ಆಳವಾಗಿ ಬೇರುಬಿಟ್ಟಿತ್ತು. ಕರುಳಬೇರನ್ನೇ ತುಂಡರಿಸಿದ ಅಪರಾಧಿ ಭಾವ. ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ. ದೇವಳದ ಜಾಗದಲ್ಲಿ ವನವೊಂದನ್ನು ಎಬ್ಬಿಸುವ ಸಂಕಲ್ಪ. ನೂರಾರು ಮಂದಿ ಖುಷಿಯಿಂದ ಸ್ಪಂದಿಸಿದರು. ಪರಿಣಾಮ, ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಾಗಿಕೊಂಡ ಜಾಗದಲ್ಲಿ ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಆರೈಕೆ ಮಾಡಲಾಗುತ್ತಿದೆ.
               "ಪೂಜಾ ಕೈಂಕರ್ಯಕ್ಕೆ ಬೇಕಾದ ಪತ್ರೆಗಳು, ಹೂಗಳು, ಸಮಿತ್ತುಗಳು ಸಿಗುವಂತಿರಬೇಕು. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಹೊಸದಾಗಿ ಧ್ವಜಮರ(ಕೊಡಿಮರ)ಕ್ಕೆ ಮರವನ್ನು ಬೇರೆಡೆಯಿಂದ ತರಲಾಗಿತ್ತು. ಮುಂದಿನ ಬ್ರಹ್ಮಕಲಶದ ಸಂದರ್ಭದಲ್ಲಿ ನಮ್ಮ ಮರವೇ ಕೊಡಿಮರವಾಗಬೇಕು, ಎನ್ನುವ ದೂರದೃಷ್ಟಿ ಹೊಂದಿದ್ದಾರೆ" ಉಮೇಶ್ ಕೆ. ಪೆರ್ಲ. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ಅಧ್ಯಾಪಕ. ದೇವಳದ ಹಸಿರು ಕೈಂಕರ್ಯದ ಜವಾಬ್ದಾರಿ ಹೆಗಲಿಗೇರಿಸಿಕೊಂಡವರು.
                ಒಂದೂವರೆ ಎಕ್ರೆ ಪ್ರದೇಶದಲ್ಲಿ ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಡಲಾಗಿದೆ. ಕದಂಬ, ನೇರಳೆ, ಶ್ರೀಗಂಧ, ಅಶ್ವತ್ಥ, ಬಿಲ್ವ... ಹೀಗೆ. ಇಲ್ಲಿರುವ ಒಂದೊಂದು ಗಿಡಗಳ ಹಿಂದೆ ಸು- ಮನಸ್ಸಿದೆ, ಉದ್ದೇಶವಿದೆ. ಗಿಡದಿಂದ ಗಿಡಕ್ಕೆ ಇಪ್ಪತ್ತು ಅಡಿಗಳ ಅಂತರ. ಯಾವ್ಯಾವ ಸಾಲಿನಲ್ಲಿ ಯಾವ ಜಾತಿಯ ಮರ ಇರಬೇಕೆಂದು ಮೊದಲೇ ಗೊತ್ತು ಮಾಡಿದ್ದಾರೆ. ಇದರ ಲಿಖಿತ ದಾಖಲಾತಿಯೂ ಇದೆ. ಗಿಡಗಳ ಪರಿಚಯಕ್ಕಾಗಿ ಲೇಬಲ್ ಅಂಟಿಸಿದ್ದಾರೆ.
                'ನಮ್ಮದೂ ಒಂದು ಗಿಡವಿರಬೇಕು' ಎಂದಾದರೆ ಐನೂರು ರೂಪಾಯಿ ನಿರ್ವಹಣೆ ಶುಲ್ಕ ನೀಡಿ,  ಯಾವ ಗಿಡ ಎಂದು ಸೂಚಿಸಿದರಾಯಿತು. ಈ ಮೊತ್ತದಲ್ಲಿ ಗಿಟ ನೆಟ್ಟು, ಆರೈಕೆ ಮಾಡಲಾಗುತ್ತದೆ. ದೇವಳದ ಇನ್ನಿತರ ಸೇವೆಗಳ ಮಧ್ಯೆ ಇದನ್ನು 'ಹಸಿರು ಸೇವೆ' ಎಂದು ಹೊಸದಾಗಿ ನಾಮಕರಣ ಮಾಡಿದರೆ ಹೇಗೆ? ಹಸಿರು ಎಲ್ಲರಿಗೂ ಉಸಿರು ತಾನೆ. "ಈಗಾಗಲೇ ನೂರಕ್ಕೂ ಮಿಕ್ಕಿ ಮಂದಿ ಸ್ಪಂದಿಸಿದ್ದಾರೆ. ಇನ್ನಷ್ಟು ಮಂದಿ ಉತ್ಸುಕತೆ ತೋರಿದ್ದಾರೆ. ಈ ಕುರಿತು ಪ್ರತ್ಯೇಕ ಸಮಿತಿ ರೂಪಿಕರಿಸಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಯೋಚನೆಯಿದೆ, ಎನ್ನುತ್ತಾರೆ ಉಮೇಶ್. ದೇವಳದ ಮೊಕ್ತೇಸರರಾದ ಕೃಷ್ಣ ಶ್ಯಾನುಭಾಗ್ ಹೆಗಲೆಣೆ.
                 2015 ಜುಲಾಯಿ ತಿಂಗಳಲ್ಲಿ ಗಿಡವನ್ನು ನೆಡಲಾಗಿದೆ. ಗಿಡಗಳ ಪಕ್ಕ ಚಿಕ್ಕ ಇಂಗುಗುಂಡಿ. ಒಂದೂವರೆ ಎಕ್ರೆಗೆ ಜೀವಂತ ಬೇಲಿ ನಿರ್ಮಾಣ ಮಾಡಿದ್ದಾರೆ. ಹೆಚ್ಚು ಆರ್ಥಿಕ ಹೊರೆ ಬೇಡುವ ಕೆಲಸ. ಗಿಡ ನೆಡುವ, ಗೊಬ್ಬರ ಹಾಕುವ  ಚಿಕ್ಕಪುಟ್ಟ ಕೆಲಸಗಳಿಗೆ ವಿದ್ಯಾರ್ಥಿಗಳ ಸಹಕಾರ. ಉದ್ಯೋಗ ಖಾತರಿ ಯೋಜನೆಯ ಸದಸ್ಯರ ಶ್ರಮವನ್ನೂ ಬಳಸಿಕೊಳ್ಳಲಾಗಿದೆ. ಊರವರ ಶ್ರಮ ಗುರುತರ. ಮಕ್ಕಳ ಹುಟ್ಟುಹಬ್ಬ, ಹಿರಿಯ ನೆನಪು, ಶುಭಸಮಾರಂಭಗಳ ದಿವಸಗಳಂದು ಗಿಡಗಳನ್ನು ನೆಡುವ ಆಶಯವನ್ನು ಹಲವರು ಅನುಷ್ಠಾನ ಮಾಡಿದ್ದಾರೆ.
                 ಈಗಿನ ವೇಗ ನೋಡಿದರೆ ವನವನ್ನು ಪುನಃ ಒಂದೆಕ್ರೆ ವಿಸ್ತಾರಗೊಳಿಸುವ ಮಾನಸ ನೀಲನಕ್ಷೆ ಸಿದ್ಧವಾಗಿದೆ. ಹಸಿರಿನ ಮಧ್ಯೆ ಗಾಢ ಹಸಿರನ್ನು ಎಬ್ಬಿಸುವ ದೇವಳದ ಕೈಂಕರ್ಯ ನಿಜಕ್ಕೂ ಮಾದರಿ. ಅಳಿವಿನಂಚಿಗೆ ಜಾರುತ್ತಿರುವ ತಳಿಗಳನ್ನು ನೆಟ್ಟು ಉಳಿಸಲು ಇಂತಹ ಆಂದೋಳನಗಳಿಂದ ಸಾಧ್ಯ. ಒಂದು ನೇರಳೆ ಮರ ಕಟ್ಟಿಕೊಟ್ಟ ಹಸಿರಿನ ಜ್ಞಾನವು ಬಜಕೂಡ್ಲನ್ನು ಆವರಿಸಿದೆ ಎಂದಾದರೆ ಉಳಿದೆಡೆ ಯಾಕೆ ಸಾಧ್ಯವಿಲ್ಲ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ತನ್ನ ಸೀಮೆಯಲ್ಲೂ ಹಸಿರೆಬ್ಬಿಸುವ ಕೆಲಸ ಮಾಡಿದೆ.
               ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯು ಪೆರ್ಲ ಪೇಟೆಯಲ್ಲಿದೆ. ಕನ್ನಾಡಿನ ಸರಹದ್ದಿನಲ್ಲಿರುವ ಶಾಲೆಗೆ ಸುಮಾರು ಹನ್ನೆರಡೆಕ್ರೆ ಸ್ವಂತ ಭೂಮಿ. ಶಾಲೆಯ ಕಟ್ಟಡವು ಗುಡ್ಡದ ತಳ ಮತ್ತು ಮೇಲೆ ನಿರ್ಮಾಣವಾಗಿದೆ. ಪೂರ್ತಿ ಮುರಕಲ್ಲಿನ (ಲ್ಯಾಟರೈಟ್) ಹಾಸು. ಒಂದೂವರೆ ದಶಕದ ಹಿಂದಿನ ಆ ದಿನವನ್ನು ಉಮೇಶ್ ಜ್ಞಾಪಿಸಿಕೊಂಡರು. ಮನೆಯಿಂದ ಮಧ್ಯಾಹ್ನ ಶಾಲೆಗೆ ಬರುತ್ತಿದ್ದೆ. ವಿದ್ಯಾರ್ಥಿಗಳು ಡಾನ್ಸ್ ಪ್ರಾಕ್ಟಿಸ್ ಮಾಡುತ್ತಿದ್ದರು. ಪಾದೆಯೂ (ಮುರಕ್ಕಲ್ಲು) ಬಿಸಿ, ಸೂರ್ಯನ ಬಿಸಿ. ಮಕ್ಕಳು ಬೆವರು ಸುರಿಸುತ್ತಾ ಕಷ್ಟ ಪಡುವುದನ್ನು ನೋಡಿ ಸಂಕಟ ಪಟ್ಟೆ. ಹಸಿರೆಬ್ಬಿಸುವ ಸಂಕಲ್ಪದ ಬೀಜ ಅಂದು ಬಿತ್ತಲ್ಪಟ್ಟಿತು. ವಿದ್ಯಾರ್ಥಿಗಳ ಬಿಸಿಲಿನ ಸ್ನಾನವು ಆಗಿನ ಮುಖ್ಯೋಪಾಧ್ಯಾಯ ಶಿವಕುಮಾರ್ ಅವರ ಮನತಟ್ಟಿತು.
                  1998. ಶಾಲೆಯಲ್ಲಿ 'ನೇಚರ್ ಕ್ಲಬ್' ಉದ್ಘಾಟನೆ. ಅಪ್ಪಟ ಪರಿಸರವಾದಿ ದಿ.ಶಂಪಾ ದೈತೋಟರಿಂದ ಶುಭ ಚಾಲನೆ. ಅಧ್ಯಾಪಕರು, ವಿದ್ಯಾರ್ಥಿಗಳಲ್ಲಿ ಹಸಿರೆಬ್ಬಿಸುವ ಸತ್ಸಂಕಲ್ಪ. ಕಾರ್ಯಕ್ರಮ ಮುಗಿಯುವಾಗ ಎಲ್ಲರ ಮನದಲ್ಲೂ ಹಸಿರೆದ್ದಿತ್ತು. ಶಂಪಾರ ಪರಿಸರದ ಪಾಠವು ಮಕ್ಕಳ ಮತಿಗೆ ನಿಲುಕಿತ್ತು, ಸಿಲುಕಿತ್ತು. ಹದಿನೇಳು ವರುಷವಾಯಿತು. ಈಗ ನೋಡಿ, ಬೋಳು ಮುರಕಲ್ಲಿನ ಮೇಲೆ ಎದ್ದ ಹಸಿರು ಸಂಪತ್ತು.
              ಆಗ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ನೋಡಿದರೆ ನಂಬಲಾಗದಷ್ಟು ಪರಿವರ್ತನೆ. ಗಿಡ, ಪೊದೆ, ಮರಗಳ ರಾಶಿ. ಎರಡು ಕಡೆ ಸುಮಾರು ನಾಲ್ಕೆಕರೆಯಲ್ಲಿ ಗಾಢ ಕಾಡು ಬೆಳೆದಿದೆ. ಹಲಸು, ಹೆಬ್ಬಲಸು, ಚಂದಳಿಕೆ, ಅಶ್ವತ್ಥ, ನೇರಳೆ, ಮಂದಾರ, ಗೋಳಿ, ಮಹಾಗನಿ, ಮರುವ.. ಮೊದಲಾದ ಮರಗಳಿವೆ. ಅರಣ್ಯ ಇಲಾಖೆಯ ಹಸಿರು ಪ್ರೀತಿಯ ಅಧಿಕಾರಿಗಳನ್ನೂ ಕಾಡು ಸೆಳೆದಿದೆ. ಏನಿಲ್ಲವೆಂದರೂ ಇನ್ನೂರೈವತ್ತಕ್ಕೂ ಮಿಕ್ಕಿ ವಿವಿಧ ಜಾತಿಯ ಮರ, ಗಿಡಗಳಿವೆ. ಕಲ್ಲಿನ ಮಧ್ಯೆ ಅಲ್ಲಿಲ್ಲಿ ಇದ್ದ ಮಣ್ಣಿನಲ್ಲಿ ಮರಗಳು ಬೇರಿಳಿಸಿಕೊಂಡಿವೆ.
             ಕಳೆದ ವಾರವಷ್ಟೇ ಕಾಡಿನ ಮಧ್ಯೆ ಓಡಾಡುತ್ತಿದ್ದಾಗ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಡಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. "ಈಗ ನೋಡಿ ಮಕ್ಕಳಿಗೆ ಪ್ರಕೃತಿಯ ಮಧ್ಯೆಯೇ ಪಾಠ, ಆಟ. ಸಹಜ ನೆರಳು, ಗಾಳಿ. ಮಕ್ಕಳು ಖುಷ್. ಇಷ್ಟೇ ಅಲ್ಲ. ಮರದ ನೆರಳಿನಲ್ಲಿ ಸಣ್ಣ ಕಾರ್ಯಕ್ರಮ ಮಾಡಬಹುದಾದ ವೇದಿಕೆ ನಿರ್ಮಿಸಬೇಕೆಂದಿದೆ," ಎಂದರು ಉಮೇಶ್. ಇವರು ನೇಚರ್ ಕ್ಲಬ್ಬಿಗೆ ದೊಡ್ಡ ಹೆಗಲನ್ನು ನೀಡಿದ್ದರು. ಈಗ ಆ ಜವಾಬ್ದಾರಿಯನ್ನು ಅಧ್ಯಾಪಕ ಪ್ರವೀಣ್ ನಿಭಾಯಿಸುತ್ತಾರೆ.
              ಇಷ್ಟಾಗಬೇಕಾದರೆ ಅಧ್ಯಾಪಕರ ತನುಶ್ರಮ ಗಮನೀಯ. ಹಲವರ ಗೇಲಿ ಮಾತುಗಳನ್ನು ಕೇಳುತ್ತಾ, ನೆಟ್ಟ ಗಿಡವು ಅನ್ಯರ ಪಾಲಾದಾಗ ಮರುಗುತ್ತಾ, ಪಶುಗಳು ನಾಶ ಮಾಡಿದಾಗ ಪುನಃ ನೆಡುತ್ತಾ, ಹಸಿರಿನ ಅರಿವಿಲ್ಲದ ಮಂದಿ ಗಿಡಗಳನ್ನು ಕಿತ್ತು ಬಿಸಾಕಿದಾಗ ಕಣ್ಣೀರು ಹಾಕುತ್ತಾ.. ಹೀಗೆ ಸಾಗಿ ಬಂದ ದಿನಗಳು ಕಷ್ಟದಾಯಕ. ಶತಯತ್ನ ರಕ್ಷಣೆ ಮತ್ತು ಆರೈಕೆಯ ಫಲವಾಗಿ ರೂಪುಗೊಂಡ ಪೆರ್ಲ ಶಾಲೆಯ ಕಾಡಿನ ಕತೆ ನಾಡಿಗೆ ಮಾದರಿ. ನಿಜಾರ್ಥದ ಹಸಿರು ಸೇವೆ. ಈಗಿನ ಮುಖ್ಯಗುರು ಸುಬ್ರಹ್ಮಣ್ಯ ಶಾಸ್ತ್ರಿ, ಅಧ್ಯಾಪಕ ವೇಣುಗೋಪಾಲ, ಅಧ್ಯಾಪಕರ ವೃಂದ, ಪಾಲಕರು.. ಹೀಗೆ ಹಲವರ ಶ್ರಮವು ಕಾಡಿಗೆ ರಕ್ಷೆ.
             1998ರ ಸುಮಾರಿಗೆ ಮೇ ತಿಂಗಳಲ್ಲಿ ಶಾಲೆಯ ಬಾವಿ ಒಣಗುತ್ತಿತ್ತು. ಈಗ ಈ ಬಾವಿ ಸೇರಿದಂತೆ ಸುತ್ತಲಿನ ಊರಿನ ಬಾವಿಯಲ್ಲೂ ನೀರಿನ ಸಮೃದ್ಧತೆ. ಮುರಕ್ಕಲ್ಲಿನಲ್ಲಿ ಎದ್ದ ಹಸಿರುಗೋಡೆಯು ಮಳೆನೀರನ್ನು ಭೂ ಒಡಲಿಗೆ ಇಂಗಿಸುತ್ತಿದೆ. ಗುಡ್ಡದ ಮೇಲಿನ ಶಾಲೆಯ ಚಾವಣಿ ನೀರನ್ನು ನೈಸರ್ಗಿಕ ಹೊಂಡಗಳಿಗೆ ತಿರುಗಿಸಿದ್ದಾರೆ. ಬೆಳೆಯುತ್ತಿರುವ ಮರಗಳು ಮುರಕ್ಕಲ್ಲಿನ ಸೆರೆಗಳಲ್ಲಿ ಬೇರು ಇಳಿಸುತ್ತಿದೆ. ಇದೂ ನೀರಿಂಗಲು ಸಹಾಯಿ.
              ಇಂತಹ ಹಸಿರು ಸೇವೆಗೆ ಸಾರ್ವಜನಿಕರ ಸಹಕಾರ ಬೇಕು. ಕೇವಲ ಅಧ್ಯಾಪಕರು, ವಿದ್ಯಾರ್ಥಿಗಳು ಆರ್ಥಿಕ ಭಾರವನ್ನು ಹೊರುವುದು ತ್ರಾಸ. ಬೆಳೆದ ಕಾಡಿನ ರಕ್ಷಣೆಯಾಗಬೇಕು. ಭದ್ರವಾದ ಆರ್ಥಿಕ ಅಡಿಗಟ್ಟು ಬೇಕು. ಹಸಿರು ಪ್ರೀತಿಯ ಸನ್ಮನಸ್ಸಿನವರತ್ತ ಕಾಡು ಕಾದು ನೋಡುತ್ತಿದೆ.

(ಉದಯವಾಣಿ-ನೆಲದನಾಡಿ ಅಂಕಣ-5-11-2015)


Tuesday, October 27, 2015

ಹಸುರು ಮನದ ಹಸಿಯಾದ ಹಸಿರುಕಾಡು

               "ಹಸಿರೆಬ್ಬಿಸುವ ಅಭ್ಯಾಸ ಬದುಕಿನ ಭಾಗವಾಗಬೇಕು. ಕಾಡಿಲ್ಲದೆ ಬದುಕಿಲ್ಲ. ಕಾಡು ಕಾಡುತ್ತಾ ಇರಬೇಕು. ಜಲದ ಮುಖ್ಯ ಸಂಪನ್ಮೂಲವೇ ಮರಗಳು," ಪುತ್ತೂರಿಗೆ 'ಬಾಲವನ ಪ್ರಶಸ್ತಿ' ಸ್ವೀಕಾರಕ್ಕಾಗಿ ಆಗಮಿಸಿದ ಹಿರಿಯ ಪರಿಸರ-ವಿಜ್ಞಾನ ಪತ್ರಕರ್ತ ನಾಗೇಶ ಹೆಗಡೆ ಮಾತಿಗೆ ಸಿಕ್ಕರು. ಹಠಕಟ್ಟಿ ಹಸಿರನ್ನು ನಾಶಮಾಡುತ್ತಿರುವ ರಾಜಧಾನಿಯ ಒಂದು ಜೀವಂತ ಹಸಿರಿನ ಕತೆಗೆ ಕಿವಿಯಾದೆ.   
             ಬೆಂಗಳೂರಿನ ಟಿ.ಜಿ.ಹಳ್ಳಿ ಕೆರೆ ಮತ್ತು ಹೇಸರಘಟ್ಟ ಕೆರೆಗಳು ಬೆಂಗಳೂರಿಗೆ ನೀರೊದಗಿಸುವ ಜಲನಿಧಿಗಳಾಗಿದ್ದುವು. ಕೊಳವೆಬಾವಿಗಳ ಕೊರೆತ ಹೆಚ್ಚಾಯಿತು. ಕೆರೆಗಳು ಬಾಯಾರಿದುವು. ನೀರಿನ ಮಟ್ಟ ಕುಸಿದು ಹನಿ ನೀರಿಗೆ ಬಾಯ್ಬಿಟ್ಟವು. ಹೂಳು ತುಂಬಿತು. ಕೆರೆ ಎನ್ನುವ ಸಮೃದ್ಧ ಸಂಪನ್ನತೆಯ ತೇವ ಪೂರ್ತಿ ಆರಿತು. ಈಗ ಬೆಂಗಳೂರು ಶುದ್ಧ ನೀರಿಗಾಗಿ ಒದ್ದಾಡುತ್ತಿದೆ! ಎಲ್ಲೆಲ್ಲಿಂದಲೋ ನೀರು ಬರುತ್ತೆ ಬಿಡಿ.
            ಬೆಂಗಳೂರಿನ ಲಾಲ್ಭಾಗ್, ಕಬ್ಬನ್ ಪಾರ್ಕ್ - ಈ ಎರಡು ಹೆಸರು ಹೇಳುವಾಗಲೇ ಮಾತು ನಿಂತುಬಿಡುತ್ತದೆ. ಓಡಾಡಬಹುದಾದ, ಪರಿಸರವನ್ನು ಕಣ್ತುಂಬಿಕೊಳ್ಳಬಹುದಾದ ಬೇರೆ ಸ್ಥಳಗಳಿಲ್ಲ. ಹೆಸರಿಸುವಂತಹ ಜಾಗವಿಲ್ಲ. ಮಾರ್ಗದ ಇಕ್ಕೆಲಗಳು ಕಾಂಕ್ರಿಟ್ಮಯ. ವಿವಿಧ ಕನಸುಗಳನ್ನು ಹೊತ್ತು ಬೆಂಗಳೂರಿಗೆ ನುಗ್ಗುತ್ತಿರುವ ಹಸಿ ಮನಸ್ಸುಗಳ ಹಸಿರಿನ ಹುಡುಕಾಟ. ಏದುಸಿರಿನ ಉಸಿರಾಟ. ಅಗಣಿತ ಮ್ಹಾಲ್ಗಳು, ಫ್ಲೈಓವರ್ಗಳು. ಕಟ್ಟಡ ಕಾಮಗಾರಿಗಳು. ಮಣ್ಣೆಂಬುದು ಮರೀಚಿಕೆ.
            ರಾಜಧಾನಿಯಲ್ಲಿ ಗಿಡಗಳನ್ನು ನೆಡಬೇಕೆನ್ನುವ ಆಸಕ್ತರಿದ್ದಾರೆ. ಹಸಿರೆಬ್ಬಿಸುವ ತುಡಿತವಿದೆ. ಮನೆಯ ಸುತ್ತ ಗಿಡಗಳನ್ನು ನೆಟ್ಟು ಪೋಷಿಸುವ ಮನಸ್ಸಿದೆ. ನೆಡಲು ಜಾಗವೇ ಇಲ್ಲ. ಎಲ್ಲಿ ನೆಡಬೇಕು? ಈ ಯೋಚನೆ ಬಂದಾಗ ಟಿ.ಜಿ.ಹಳ್ಳಿ ಕೆರೆ ಸುತ್ತಲಿನ ಐನೂರ ಮೂವತ್ತೆಕ್ರೆ ಕಾಡನ್ನು ಮಾನವ ಹಸ್ತಕ್ಷೇಪದಿಂದ ಮುಕ್ತಗೊಳಿಸಿ ವನವನ್ನಾಗಿ ಪರಿವರ್ತಿಸುವ ನಿರ್ಧಾರ. ಸಂಬಂಧಪಟ್ಟ ವರಿಷ್ಠರಿಗೆ, ಸರಕಾರಕ್ಕೆ ಮನವಿ. "ನಮ್ಮಲ್ಲಿ ದುಡ್ಡು ಕೇಳ್ಬೇಡಿ. ಹಣ ಮಾಡುವ ಉದ್ದೇಶ ಇದಲ್ಲ. ಹಸಿರು ಎಬ್ಬಿಸ್ತೀವಿ. ಮರಗಳ ಕಡಿತವಾಗದಂತೆ ನೋಡಿ ಕೊಳ್ತೀವಿ," ಮುಂತಾದ ಕಾರ್ಯಹೂರಣ ಮುಂದಿಟ್ಟರು. ಉದ್ದೇಶಶುದ್ಧಿಯನ್ನರಿತ ಅಧಿಕಾರಿಗಳಿಂದ ಹಸಿರು ನಿಶಾನೆ.
             ಈಗ ಆ ಕಾಡು ಬರೇ ಕಾಡಲ್ಲ. ಅದು 'ಸ್ಫೂರ್ತಿವನ'. ಎಂಟು ವರುಷದಿಂದ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ನಿರ್ವಹಣೆಗೆ ಹಸಿರು ಮನಸ್ಸಿನ ತಂಡವಿದೆ. ದನ, ಕುರಿ ಮೇಯಿಸುವುದು, ಕಾಡು ಕಡಿಯುವ-ಸವರುವ ಕತ್ತಿಗಳ ಹರಿತ ಕಡಿಮೆಯಾಗಿದೆ. ಗಿಡ ನೆಡುವ ಆಸಕ್ತರಿಗೆ ಮುಕ್ತ ಪ್ರವೇಶ. ಒಬ್ಬರು ಗಿಡ ನೆಡಲು ಮುಂದೆ ಬಂದರೆ ನೆಟ್ಟು, ಅರೈಕೆ ಮಾಡಿ ಬೆಳೆಸಿ, ಅದು ತಾನಾಗಿ ನೆಲಕ್ಕೊರಗುವ ವರೆಗೆ ತಂಡದ್ದೇ ಜವಾಬ್ದಾರಿ.
             ಬೆಂಗಳೂರಿನ ಮೂನ್ನೂರಿಪ್ಪತ್ತು ಶಾಲೆಗಳ ಹೆತ್ತವರು ಈ ಆಂದೋಳನಕ್ಕೆ ಸ್ಪಂದಿಸಿದ್ದಾರೆ. ಹುಟ್ಟುಹಬ್ಬ, ಮಕ್ಕಳಿಗೆ ರ್ರ್ಯಾಂಕ್  ಬಂದಾಗ, ಹಿರಿಯ ನೆನಪಿನಲ್ಲಿ, ವಿವಾಹ ವಾರ್ಶಿಕೋಕೋತ್ಸವ, ಸಮಾರಂಭ.. ಹೀಗೆ ಒಂದೊಂದು ನೆನಪಿನಲ್ಲಿ ಗಿಡಗಳನ್ನು ನೆಡಲು ಉತ್ಸುಕರಾಗಿದ್ದಾರೆ. ಹಸಿರೆಬ್ಬಿಸುವ ಮನಸ್ಸಿದೆ, ಜಾಗವಿಲ್ಲ ಎನ್ನುವ ಚಡಪಡಿಕೆಯ ಮಂದಿಗೆ ಖುಷಿಯಾಗಿದೆ.
              ಗಿಡಗಳನ್ನು ನೆಡುವಲ್ಲಿ 'ಸ್ಫೂರ್ತಿವನ'ವು ದಾನಿಗಳ ಶ್ರಮಹಗುರ ಮಾಡುವ ಉಪಾಯವೊಂದನ್ನು ಮುಂದಿಟ್ಟಿದೆ. ಒಂದು ಗಿಡಕ್ಕೆ ಒಂದೂವರೆ ಸಾವಿರದಂತೆ ಪಾವತಿ ಮಾಡಿದರೆ ಅವರ ಹೆಸರಿನಲ್ಲಿ ಗಿಡ ನೆಟ್ಟು ಆರೈಕೆ ಮಾಡುವ ಜವಾಬ್ದಾರಿ. ಬೆಂಗಳೂರು ಸುತ್ತುಮುತ್ತ ಇಲ್ಲಿನ ಪರಿಸರಕ್ಕೆ ಹೊಂದುವ ಮೂವತ್ತರಿಂದ ನಲವತ್ತು ಜಾತಿಯ ಕಾಡು ಗಿಡಗಳಿವೆ. ಇದರಲ್ಲಿ ಯಾವ ಗಿಡವನ್ನು ಅಪೇಕ್ಷಿಸುತ್ತಾರೋ ಅದನ್ನು ನೆಟ್ಟು ಪಾಲಿಸಲಾಗುತ್ತದೆ. ಈ ವ್ಯವಸ್ಥೆ ಸಾಕಷ್ಟು ಪಾಲಕರಿಗೆ ಸ್ವೀಕೃತಿಯಾಗಿದೆ.
              ಸಮಯ ಹೊಂದಿಸಿಕೊಂಡು ವಿವಾಹ ಮಂಟಪಗಳಿಗೆ ಹೋಗಿ ಮುಖ್ಯಸ್ಥರೊಡನೆ ಮಾತುಕತೆ ಮಾಡ್ತೀವಿ. ಉದ್ದೇಶ ಸ್ಪಷ್ಟಪಡಿಸುತ್ತೇವೆ. ಮದುವೆಗಾಗಿ ಲಕ್ಷಗಟ್ಟಲೆ ಖರ್ಚು ಮಾಡುವಾಗ ಸಾವಿರದೈನೂರು ರೂಪಾಯಿ ಖರ್ಚು ಮಾಡಲು ಹಿಂದೇಟು ಹಾಕುವುದಿಲ್ಲ. ಬಡಾವಣೆಗಳಲ್ಲಿರುವ ವಿದ್ಯಾರ್ಥಿಗಳ ಪಾಲಕರೇ ಹಸಿರೆಬ್ಬಿಸುವ ಈ ಕಾಯಕದ ಪ್ರಚಾರಕರು. ಒಬ್ಬರ ನಿರ್ಧಾಾರ ಇನ್ನೊಬ್ಬರಿಗೆ ಸ್ಫೂರ್ತಿ.  ಹಾಗಾಗಿ ಮುನ್ನೂರಿಪ್ಪತ್ತು ಶೈಕ್ಷಣಿಕ ಸಂಸ್ಥೆಗಳಿಗೆ ವಿಚಾರ ತಲುಪಿದೆ.  ಸ್ಪಂದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಾವಾಗಿ ಬರುತ್ತಾ ಇದ್ದಾರೆ. ತಂಡದಲ್ಲಿ ಬೆರಳೆಣಿಕೆಯ ಸದಸ್ಯರಿದ್ದು ವಿವಿಧ ಜವಾಬ್ದಾರಿಗಳಲ್ಲಿರುವವರು. ವೇಗವಾಗಿ ಕೆಲಸ ಆಗುತ್ತಿಲ್ಲ ಎನ್ನುವ ವಿಷಾದವೂ ಇದೆ.
                ಯಾರ್ಯಾರ ಗಿಡೆ ಎಲ್ಲೆಲ್ಲಿ ಎನ್ನುವ ದಾಖಲೆಯಿದೆ. ಗಿಡಗಳಲ್ಲಿ ಲೇಬಲ್ ಅಂಟಿಸಿಲ್ಲ. ಗಿಡದ ದಾತಾರರ ವಿಳಾಸದಿಂದ ಹಿಡಿದು ಗಿಡದ ಪೂರ್ತಿ ಜಾತಕ, ನೆಟ್ಟ ಜಾಗವನ್ನು ಜಿಪಿಎಸ್ ಮೂಲಕ ನೋಡುವ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನೂರನೇ ವರುಷದ ನೆನಪಿಗೆ ನೂರು ಗಿಡಗಳನ್ನ ಪ್ರಾಯೋಜಿಸಿದ್ದಾರೆ. ಸಾಪ್ಟ್ವೇರ್ ಕಂಪೆನಿಗಳ ಬೆಂಬಲವಿದೆ. ವಿವಿಧ ಕಂಪೆನಿಗಳಲ್ಲಿರುವ ಉದ್ಯೋಗಸ್ಥರು ನೆನಪಿಗಾಗಿ ಸ್ಫೂರ್ತಿವನದತ್ತ ಮುಖ ಮಾಡುತ್ತಿದ್ದಾರೆ.
               ಪ್ರಾಮಾಣಿಕ ಸಹಾಯಕರ ಅಲಭ್ಯತೆ - ಈ ಕಾಯಕದಲ್ಲಿ ಎದುರಾಗುವ ತೊಡಕು. ಸ್ಥಳೀಯರು ಸಿಕ್ತಾ ಇಲ್ಲ. ಸಿಕ್ಕರೂ ಮುಂಗಡ ತೆಕ್ಕೊಂಡು ನಾಪತ್ತೆ! ಸಮಸ್ಯೆಗಳ ಮಧ್ಯೆ ಗಿಡಗಳ ಆರೈಕೆ ನಡೆಯುತ್ತಿದೆ. ಗರಿಷ್ಠ ಭದ್ರತೆ ನೀಡುತ್ತಿದ್ದೇವೆ. ಬೆಂಕಿಯ ಭಯದಿಂದ ಕಾಡನ್ನು ರಕ್ಷಿಸುವುದು ತಲೆನೋವು. ಪ್ರತೀ ಊರಲ್ಲೂ ಇಂತಹ ವನಗಳನ್ನು ರೂಪಿಸುವಂತಹ ಅಗತ್ಯವಿದೆ. ಕಾಡಿರುವ ಮಲೆನಾಡು, ಕರಾವಳಿಗಳಲ್ಲೂ ಗಿಡ ನೆಡುವ ಪರಿಪಾಠ ಶುರುವಾಗಬೇಕು.
              ನಾಗೇಶ ಹೆಗಡೆಯವರು ಮಾತು ನಿಲ್ಲಿಸಿದರು. 'ಹೇಗಿದೆ ಕಾಡಿನ ಕತೆ' ಪ್ರಶ್ನಿಸಿದರು. "ಬೆಂಗಳೂರಿಗರು ವೀಕೆಂಡ್ ಬಂದ್ರೆ ಸಾಕು, ನಗರದಿಂದ ಹೊರಗೆ ಹೋಗೋಕೆ ಕಾದಿರ್ತಾರೆ. ಬಹಳಷ್ಟು ಮಂದಿ ಹೊರವಲಯದಲ್ಲಿ ಜಾಗ ಖರೀದಿಸಿ ವೀಕೆಂಡ್ ಅಗ್ರಿಕಲ್ಚರ್ ಶುರು ಮಾಡಿದ್ದಾರೆ. ಕಾಂಕ್ರಿಟ್ ಕಾಡೊಳಗೆ ಹಸಿರಿಗಾಗಿ ತುಡಿಯುವ ಮನಸ್ಸುಗಳಿವೆ. ಉದ್ಯೋಗದ ಒತ್ತಡವು ಹಸಿರ ಪ್ರೀತಿಗೆ ಬ್ರೇಕ್ ಹಾಕುತ್ತಿದೆ. ನಗರ ಮೋಹದಿಂದ ಬಂದವರು ನಾಲ್ಕೈದು ವರುಷದಲ್ಲೇ ಹಳ್ಳಿಯನ್ನು ನೆನಪು ಮಾಡಿಕೊಳ್ಳುವ ಸ್ಥಿತಿಯಿದೆ," ಬೆಂಗಳೂರಿನ ಪ್ರಕೃತ ಸ್ಥಿತಿಯನ್ನು ನಾಗೇಶ್ ಕಟ್ಟಿಕೊಡುತ್ತಾ ಫಕ್ಕನೆ ಕೋಲಾರವನ್ನು ನೆನಪಿಸಿಕೊಂಡರು, "ನೋಡಿ, ಕೋಲಾರದಲ್ಲಿ ಕ್ಯಾರೆಟ್ ಬೆಳೆಯುತ್ತಾರೆ. ಕ್ಯಾರೆಟನ್ನು ತೊಳೆದು ಸ್ವಚ್ಛಗೊಳಿಸಲು ಎಷ್ಟೊಂದು ನೀರು ಪೋಲು ಆಗುತ್ತದೆ ಗೊತ್ತಾ. ಟ್ಯಾಂಕರ್, ಡೀಸಿಲ್ ಪಂಪ್ಗಳು ಕೆರೆಯಿಂದ ಅವಿರತ ಪಂಪ್ ಮಾಡುತ್ತಲೇ ಇವೆ. ಅಲ್ಲಿನ ನೀರಿನ ಸಮಸ್ಯೆಗೆ ಇದೂ ಒಂದು ಅಜ್ಞಾತ ಕಾರಣ. "
                  ಕನ್ನಾಡಿನಲ್ಲಿ ತೊಂಭತ್ತೆಂಟು ತಾಲೂಕುಗಳಲ್ಲಿ ಸರಕಾರವು ಬರ ಘೋಷಿಸಿದೆ. ಬರ ಪ್ರದೇಶವನ್ನು ಸಮಿತಿಯೊಂದು ಗೊತ್ತುಮಾಡುತ್ತದೆ. ಮುನ್ನೂರ ಇಪ್ಪತ್ತು ಕೋಟಿ ಅನುದಾನಕ್ಕೂ ಸಹಿ ಬಿದ್ದಿದೆ. ಇದು ಹೇಗೆ ಖರ್ಚಾಗುತ್ತೆ ಎನ್ನುವ ಅಂಕಿಅಂಶ ಎಲ್ಲೂ ಸಿಗೋದಿಲ್ಲ. ಒಂದೆಡೆ ಹಣ ಖರ್ಚಾಗುತ್ತೆ. ಇನ್ನೊಂದೆಡೆ ಬರದ ಊರಿನ ಬೆಳಗು-ಸಂಜೆಗಳ ಜತೆ ಕೋಟಿಗಳು ನಗುತ್ತಾ ಕರಗುತ್ತವೆ. ಬೇಸಿಗೆಯ ನೀರಿನ ಬರಕ್ಕೆ ಪರಿಹಾರ ನಂನಮ್ಮಲ್ಲೇ ಇದೆ.  
                  ಸೋಲಾರ್ ವಿದ್ಯುತ್ತಿನ ಮೂಲಕ ಸಮುದ್ರದ ನೀರು ಬಳಕೆ ಮಾಡಲು ಸಾಧ್ಯವಾ? ಸಾಧ್ಯ ಎನ್ನುವುದಕ್ಕೆ ಸಿಂಗಾಪುರದ ಉದಾಹರಣೆ ಮುಂದಿದೆ. ಸಿಂಗಾಪುರದಲ್ಲಿ ನೀರು ಎನ್ನುವುದು ಅಮೃತ. ಪೋಲು ಬಿಡಿ, ಹನಿ ನೀರಿಗೂ ಕೋಟಿ ರೂಪಾಯಿ ಮೌಲ್ಯ. ಸಿಂಗಾಪುರಕ್ಕೆ ಚಿಕ್ಕ ಪ್ರಮಾಣದಲ್ಲಿ ನೀರು ಮಲೇಶ್ಯಾ ಒದಗಿಸುತ್ತದೆ. ಮಳೆ ನೀರಿನ ಕೊಯ್ಲು ವ್ಯಾಪಕವಾಗಿದೆ. ಬಳಸು ನೀರನ್ನು ಶುದ್ಧಗೊಳಿಸಿ ಮರುಬಳಕೆ ಮಾಡುವ ತಂತ್ರಜ್ಞಾನವಿದೆ. ನಗರದ ತ್ಯಾಜ್ಯ ನೀರೆಲ್ಲವನ್ನೂ ಸಂಗ್ರಹಿಸಿ, ಶುದ್ಧೀಕರಿಸಿ, ಪುನಃ ಬಳಕೆ ಮಾಡುವ ವಿಧಾನ. ಸಮುದ್ರದ ನೀರನ್ನು ಶುದ್ಧ ಮಾಡಿ ಕುಡಿಯಲು ಉಪಯೋಗಿಸುವ ವ್ಯವಸ್ಥಿತ ಯೋಜನೆಯಿಂದಾಗಿ ಸಿಂಗಾಪುರ ನೀರಿನ ಬಳಕೆಯಲ್ಲಿ ಪ್ರಪಂಚದಲ್ಲೇ ಐಕಾನ್ ಆಗಿದೆ. ನಮ್ಮಲ್ಲಿ ಅಷ್ಟಾಗದಿದ್ದರೂ ಒಂದಷ್ಟು ಪ್ರಮಾಣದಲ್ಲಿ ಮಾಡಲು ಸಾಧ್ಯವಿಲ್ಲವಾ? ರಾಜಕೀಯ ಶಕ್ತಿ ಮಾತ್ರ ಸಾಲದು. ಇಚ್ಚಾಶಕ್ತಿಯೂ ಬೇಕು. ಮನಸ್ಸಿನಿಂದ ಹುಟ್ಟಿದ ಕಾಳಜಿಯೂ ಬೇಕು.
                ಪುತ್ತೂರಿನಲ್ಲಿ 'ಬಾಲವನ ಪ್ರಶಸ್ತಿ' ಸ್ವೀಕರಿಸಿದ ಬಳಿಕ ನಾಗೇಶ ಹೆಗಡೆಯವರು ಶಾಲಾ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದಿರು. ವಿಜ್ಞಾನ, ಪರಿಸರ, ಸಮಸಾಮಯಿಕ ವಿಚಾರಗಳ ಪ್ರಶ್ನೆಗಳಿಗೆ ಮಗುವಾಗಿ ಉತ್ತರಿಸಿದರು. ವಿಜ್ಞಾನವನ್ನು ಸರಳ ಕನ್ನಡದಲ್ಲಿ ಅರ್ಥವಾಗುವ ಹಾಗೆ ಮಾತನಾಡುವ, ಬರೆಯುವ ನಾಗೇಶ್ ಮಕ್ಕಳನ್ನು ಆವರಿಸಿಕೊಂಡರು.

 (ಉದಯವಾಣಿ/ನೆಲದನಾಡಿ ಅಂಕಣ/24-10-2015)


Sunday, October 4, 2015

ನೀರನ್ನು ಸೃಷ್ಟಿಸಲು ಸಾಧ್ಯವೇ?



            ರಾಜಧಾನಿಗೆ ಪ್ರಯಾಣಿಸುತ್ತಿದ್ದಾಗ ಗೌರಿಬಿದನೂರಿನ ರೈತರೊಬ್ಬರ ಪರಿಚಯವಾಯಿತು. ನೀರಿನ ಸಂಕಟಗಳದ್ದೇ ಮಾತುಕತೆ. ರಾಜಕಾರಣದ ಆಟಗಳ ಆಟೋಪ. ಕರ್ನಾಟಕವನ್ನು ಉತ್ತರ, ದಕ್ಷಿಣ ಎಂದು ವಿಭಾಗಿಸುವ, ಭಾವನೆಗಳಿಗೆ ಘಾಸಿ ಮಾಡುವ, ಸಂಘರ್ಷಗಳನ್ನು ಒಂದು ವ್ಯವಸ್ಥೆಯೊಳಗೆ ಜೀವಂತವಾಗಿಡುವ ಕಾಣದ ಕೈಗಳ ಕರಾಮತ್ತುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಅವರಲ್ಲಿ ನೀರಿಗಾಗಿ ಮನಸ್ಸುಗಳನ್ನು ಒಡೆಯುವ ರಾಜಕೀಯ ವ್ಯವಸ್ಥೆಗಳತ್ತ ಆಕ್ರೋಶವಿತ್ತು.
            "ಅತ್ತ ಕಳಸಾ-ಬಂಡೂರಿ, ಇತ್ತ ನೇತ್ರಾವತಿ, ಮೊತ್ತೊಂದೆಡೆ ಕಾವೇರಿ, ಇನ್ನೊಂದೆಡೆ ಮಹದಾಯಿ.. ಹೀಗೆ ಸಮಸ್ಯೆಗಳನ್ನು ವಿವಾದದ ಸುಳಿಯಲ್ಲಿ ಸಿಲುಕಿಸುವುದೇ ರಾಜಕೀಯ ಶಕ್ತಿಗಳ ಗುರಿ ಎನ್ನುವಂತಾಗಿದೆ. ಇವರಿಗೆಲ್ಲಾ ಪರಿಹಾರಕ್ಕೆ ದಾರಿಗಳು ಗೊತ್ತಿವೆ. ಓಟು ಬ್ಯಾಂಕುಗಳು ಈ ದಾರಿಗಳನ್ನು ವಿಮುಖಗೊಳಿಸುತ್ತಿವೆ. ಸಾರ್ವಜನಿಕ ಆಸ್ತಿಗಳು, ಜನರ ಸಂಕಷ್ಟಗಳು ಅವರಿಗೆ ಬೇಕಾಗಿಲ್ಲ. ಜನರನ್ನು ಕೆರಳಿಸುವ ಹೇಳಿಕೆಗಳಿಂದ ಆಗುವ ವಿಘ್ನಗಳಿಂದ ಖುಷಿ ಪಡುವ ಜನನಾಯಕರು ಇರುವಲ್ಲಿಯ ತನಕ ಸಮಸ್ಯೆಗಳು ಶಾಶ್ವತವಾಗಿರುತ್ತವೆ." ಎಂದರು.
             "ಕೆರೆಗಳಿಂದಾಗಿ ಜೀವಜಲವು ಉಸಿರಾಡುತ್ತಿವೆ. ಕರ್ನಾಟಕದಲ್ಲಿ ಎಷ್ಟೊಂದು ಕೆರೆಗಳಿದ್ದುವು. ಇದಕ್ಕಾಗಿ ಭೂಮಿಯನ್ನು ಉಂಬಳಿ ಬಿಡುವ ಸನ್ಮಸ್ಸಿನವರಿದ್ದರು. ಧಾರ್ಮಿಕ, ಸಾಮಾಜಿಕ ಭಾವನೆಗಳು ಆ ಊರಿನ ನೀರಿನ ಆವಶ್ಯಕತೆಗಳನ್ನು ನೀಗಿಸುತ್ತಿದ್ದುವು. ಹಿಂದಿನ ಕಾಲದಿಂದಲೂ ನೀರಿಗೆ ಮೊದಲಾದ್ಯತೆ. ಆ ಬಳಿಕವೇ ಕೃಷಿ, ಅಭಿವೃದ್ಧಿಯತ್ತ ಯೋಚನೆ. ಇಂತಹ ಸಂಸ್ಕೃತಿಯಿರುವ ಕರ್ನಾಟಕವನ್ನು ರಾಜಕೀಯ ವಾತಾವರಣ ಹಾಳುಮಾಡಿತು. ಮೊದಲಾದ್ಯತೆಯಲ್ಲಿರಬೇಕಾದ ನೀರಿನ ಲಭ್ಯತೆಯು ಕೊನೆಯ ಆಯ್ಕೆಯಾಗಿ ಬದಲಾಯಿತು." ಅವರು ಮಾತನಾಡುತ್ತಿದ್ದಾಗ ಇಡೀ ಕನ್ನಾಡಿನ ನೀರಿನ ಕಣ್ಣೀರಿಗೆ ದನಿಯಾದಂತೆ ಕಂಡಿತು.
           ಸರಕಾರಕ್ಕೆ ಗ್ರಾಮ ಭಾರತದ ಹಿತ ಬೇಕಾಗಿಲ್ಲ. ಕೋಟಿಗಳ ಮುಂದೆ ಎಷ್ಟು ಸೊನ್ನೆಯನ್ನಿಡಬೇಕೆಂಬ ಲೆಕ್ಕಚಾರ. ಎಷ್ಟು ಸೊನ್ನೆಗಳನ್ನಿಡಬೇಕೆಂದು ನಿರ್ಧರಿಸುವ ಅಧಿಕಾರಿಗಳಿದ್ದಾರೆ. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಗಳಾದಾಗ ಅಷ್ಟಿಷ್ಟು ನೀಡಿ ಕೈತೊಳೆದುಕೊಂಡರು. ಕೇಂದ್ರದಿಂದಲೂ ಅಧ್ಯಯನ ತಂಡ ಬಂತು. ಅವೆಲ್ಲಾ ಕಾಗದದಲ್ಲಿ ಉಳಿದು ಬಿಡುತ್ತವಷ್ಟೆ. ನಮ್ಮ ಬದುಕಿಗೆ ಬೇಕಾದ ವ್ಯವಸ್ಥೆಯನ್ನು ನಾವೇ ಪೂರೈಸಿಕೊಳ್ಳಬೇಕು. ನೀರಿನ ವಿಚಾರಕ್ಕೆ ಬಂದರೆ ಅಳಿದುಳಿದ ಕೆರೆಗಳಲ್ಲಿ ನೀರು ಬತ್ತಿವೆ. ಅಂತರ್ಜಲ ಆಳಕ್ಕಿಳಿದಿದೆ. ಕೊಳವೆಬಾವಿಗಳನ್ನು ಕೊರೆಯಲು ಪೈಪೋಟಿ. ನದಿಗಳಲ್ಲಿ ನೀರಿಲ್ಲ. ಇಷ್ಟೆಲ್ಲ ತೊಂದರೆಗಳಿಗೆ ಯಾರು ಕಾರಣ?
         ರೈತರ ಕುರಿತು ಹಗುರವಾಗಿ ಮಾತನಾಡುವ ನಮ್ಮ ನಡುವಿನ ಸಾಕ್ಷರರ ಚಿತ್ರ ಹಾದುಹೋದುವು. ಯಾವುದೇ ಪದವಿಯನ್ನು ಓದದ ಅವರು ಕೃಷಿ, ನೀರಿನ ಜ್ಞಾನದಲ್ಲಿ ಅಪ್ಡೇಟ್ ಆಗಿದ್ದರು. ರಾಜಧಾನಿಯಲ್ಲಿ ಬಸ್ಸಿಳಿದು (ಮೆಜೆಸ್ಟಿಕ್) ಒಂದರ್ಧ ಗಂಟೆ ಮಾತನಾಡುವಾಗ ಹೇಳಿದ ಒಂದೆರಡು ವಾಕ್ಯ ಮರೆಯಲಾರೆ - ರೈತನ ಬೆನ್ನು ತಟ್ಟುವವರು ಯಾರೂ ಇಲ್ಲ. ಅನ್ನದಾತ ಎಂದು ಅಟ್ಟಕ್ಕೇರಿಸುವ ಕೆಟ್ಟ ಚಾಳಿ.  ನಿಜಕ್ಕೂ ರೈತ ಸಮೂಹಕ್ಕೆ ಅವಮಾನ ಮಾಡಿದಂತೆ. ನೋಡಿ, ನಾವು ನಿಂತ ಜಾಗ ಇದೆಯಲ್ಲಾ, ಮೊದಲು ಇದೊಂದು ದೊಡ್ಡ ಕೆರೆಯಾಗಿತ್ತು. ಈಗ ಹೇಗಿದೆ? ಇದೊಂದು ಉದಾಹರಣೆ ಮಾತ್ರ. ರಾಜ್ಯದ ಎಲ್ಲಾ ಕೆರೆಗಳ ಸ್ಥಿತಿಯೂ ಇದೇ. ಕೆರೆಗಳ ಪುನರ್ಜ್ಜೀವನ ಮತ್ತು ನೀರಿಂಗಿಸುವ ಕೆಲಸ ನಡೆಯಬೇಕಾಗಿದೆ. ಜತೆಗೆ ಅರಣ್ಯೀಕರಣವೂ ಕೂಡಾ.
         ಕೆರೆಗಳು - ನೀರೊದಗಿಸುವ ಜಲನಿಧಿಗಳು. ಒಂದು ಕೆರೆ ತುಂಬಿದಾಗ ಸುತ್ತಲಿನ ಬಾವಿ, ಚಿಕ್ಕ ಕೆರೆಗಳು, ಅಂತರ್ಜಲ, ಒರತೆ ತುಂಬಿ ನೀರಿನ ಸಮೃದ್ಧತೆ. ಆ ನೀರಿನ ಸುತ್ತ ಸಾಂಸ್ಕೃತಿಕವಾದ ಭಾವನೆಗಳು. ದೈವಿಕ ದೃಷ್ಟಿಕೋನ. ಒಂದಷ್ಟು ಆಚಾರಗಳು, ವಿಚಾರಗಳು. ಇಂತಹ ಕಟ್ಟುಪಾಡುಗಳನ್ನು ಹಿರಿಯರು ನೀರುಳಿಸುವ ಲಕ್ಷ್ಯದಲ್ಲಿಟ್ಟೇ ರೂಪಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ಅಂತಹ ವ್ಯವಸ್ಥೆಯನ್ನು ಪ್ರಶ್ನಿಸಿದೆವು. ವಿಮರ್ಶಿಸಿದೆವು. ಮೂಢನಂಬಿಕೆ ಎಂದೆವು. ಶೋಷಣೆ ಎನ್ನುವ ಹಣೆಪಟ್ಟಿ ಹಾಕಿದೆವು. ಪರಿಣಾಮ ಕಣ್ಣ ಮುಂದಿದೆ.
         ನಮ್ಮ ಹಿರಿಯರನ್ನು ಮಾತನಾಡಿಸೋಣ. ಅವರಿಗೆ ಭೂಮಿಯು ತಾಯಿ ಸದೃಶ. ನದಿಗಳೆಲ್ಲಾ ಅಕ್ಕ ತಂಗಿಯರು. ಅವರನ್ನು ಆರಾಧಿಸಿದರು. ತಂತಮ್ಮ ಮಿತಿಯ ಜ್ಞಾನದಿಂದ ನೀರಿನ ಹರಿವನ್ನು ತಡೆದು ಭೂಮಿಗೆ ಇಂಗಿಸುವ ಯತ್ನ ಮಾಡಿದರು. ಕೆರೆ, ಮದಕ, ಪಳ್ಳ, ಹಳ್ಳ, ಬಾವಿಗಳಲ್ಲಿರುವ ನೀರಿನ ಲಭ್ಯತೆಯಂತೆ ಕೃಷಿ ಮಾಡಿದರು. ಅರಣ್ಯವನ್ನು ಬೆಳೆಸಿದರು. ಮಳೆಗಾಲದಲ್ಲಿ ಒಸರಾಗಿ ಹರಿಯುವ ನೀರನ್ನು ಬಳಸಿಕೊಂಡರು. ಎಲ್ಲೆಲ್ಲಾ ಸಂಗ್ರಹಿಸಿಕೊಳ್ಳಲು ಸಾಧ್ಯವಿದೆಯೋ ಅಲ್ಲೆಲ್ಲಾ ನೀರನ್ನು ಸಂಗ್ರಹಿಸಿ ಬಳಸಿದರು, ಭೂ ಒಡಲಿಗೆ ಉಣಿಸಿದರು.
         ಕೃಷಿಕ ಡಾ.ಡಿ.ಸಿ.ಚೌಟರು 'ಮದಕ' ಎನ್ನುವ ಪುಸ್ತಕದಲ್ಲಿ ಮಾರ್ಮಿಕವಾಗಿ ಹೇಳುತ್ತಾರೆ, "ನಮ್ಮ ಜಲಮೂಲಗಳು ಬತ್ತುತ್ತಿವೆ. ಕಾಡು ಕಡಿದು ಮೂಲನಿವಾಸಿಗಳನ್ನು ಓಡಿಸಿ ಸಹಸ್ರಾರು ಕೋಟಿ ರೂಪಾಯಿಯ ಸಂಪತ್ತನ್ನು ವ್ಯಯಿಸಿ ಅಣೆಕಟ್ಟೆಗಳನ್ನು ಕಟ್ಟಿ ನೀರು ಹಂಚುವ ಕಾರ್ಯಕ್ಕೆ ತೊಡಗಿದ್ದೇವೆ. ಭೂಮಿಯ ಗರ್ಭದಿಂದ ಸಾವಿರ ಅಡಿಯ ಕೊಳವೆಬಾವಿಗಳನ್ನು ಹಾಕಿ ನೀರು ಹೀರಹತ್ತಿದೆವು. ಈಗ ಸಮುದ್ರದ ನೀರಿನ ಉಪ್ಪನ್ನು ಶುದ್ಧಗೊಳಿಸಿಸುವ ಸಾಹಸಕ್ಕೆ ಹೊರಟಿದ್ದೇವೆ. ಈ ಎಲ್ಲಾ ಸಾಹಸಗಳು ಪಟ್ಟಣದ ಅವಶ್ಯಕತೆಗಳನ್ನು ಪೂರೈಸಲು. ಕೃಷಿಗಾಗಿ ಅಲ್ಲ. ಇವು ಸೃಷ್ಟಿಯ ನಿಯಮಗಳನ್ನು ಬದಲಿಸಿ ನಿಸರ್ಗದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸುವ ಮನುಷ್ಯನ ಹುನ್ನಾರ."
         "ಮಳೆನೀರು ಕೆರೆ, ಬಾವಿ, ನದಿಗಳೆಲ್ಲ ಸೇರಿ ಹರಿದು ಸಮುದ್ರ ಸೇರುತ್ತದೆ. ಸಮುದ್ರದ ನೀರು ಆವಿಯಾಗಿ ಆಕಾಶ ಸೇರುತ್ತದೆ. ಆವಿ ಮೋಡವಾಗಿ, ಮೋಡ ಮಳೆಯಾಗಿ ಭೂಮಿ ಸೇರುತ್ತದೆ. ಬಾಯಾರಿದ ಭೂಮಿ ತೃಪ್ತಿಯಿಂದ ನೀರು ಕುಡಿದು ಒಸರಾಗಿ ಹೊರ ಬಿಡುತ್ತದೆ. ಆ ಒಸರು ಮತ್ತೆ ಸಮುದ್ರ ಸೇರುವ ತವಕದಲ್ಲಿರುತ್ತದೆ. ಈ ಸಹಜ ಕ್ರಿಯೆಯನ್ನೇ ಬದಲಿಸ ಹೊರಟ ಮನುಷ್ಯನ ಅಹಂಕಾರಕ್ಕೆ ನೀರನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಇಪ್ಪತ್ತನೇ ಶತಮಾನವು ಅಣೆಕಟ್ಟೆಗಳನ್ನು, ಕಾಲುವೆಗಳನ್ನು, ಕೊಳವೆಬಾವಿಗಳನ್ನು ತಂದು ಪ್ರಕೃತಿ ಸಹಜ ಸಂಪತ್ತಿನೊಂದಿಗೆ ಆಟವಾಡಿತು. ನಮ್ಮ ಸಹಜ ಪ್ರಕೃತಿಯ ನೀರಿನ ಮೇಲೆ ಹಲವು ಅತ್ಯಾಚಾರಗಳನ್ನು ಇಂಜಿನಿಯರುಗಳು ಮಾಡಿದರು. ಅರಣ್ಯಗಳನ್ನು ನಾಶ ಮಾಡಿದರು. ನದಿಗಳು ಬತ್ತಿದುವು. ನೀರಿನ ಬದಲಿಗೆ ವಿದ್ಯುಚ್ಛಕ್ತಿ ಕೊಟ್ಟರು. ಸದಾ ಹರಿಯುತ್ತಿದ್ದ ನದಿಗಳು ಬೇಸಿಗೆಯಲ್ಲಿ ಬತ್ತಿ ಮಳೆಗಾಲದಲ್ಲಿ ಮಾತ್ರ ಹರಿಯುವಂತೆ ಮಾಡಿದರು.."
         ಪ್ರಕೃತ ಕನ್ನಾಡು ಅನುಭವಿಸುವ ಸಂಕಟಗಳ ಹಿಂದೆ ಅಭಿವೃದ್ಧಿ ಮತ್ತು ಅನಿವಾರ್ಯ ಎಂಬೆರಡು ಶಬ್ದಗಳು ಹೊಸೆದುವು. ಹಾಗಾಗಿ ಕೆರೆಗಳ ನಾಡಲ್ಲಿ ಕೆರೆಗಳನ್ನು ಹುಡುಕುವ ದುಃಸ್ಥಿತಿ. ಹೂಳು ತುಂಬಿ ಕೆರೆಗಳೇ ನಾಪತ್ತೆಯಾಗಿವೆ. ಎಷ್ಟೋ ಕೆರೆಗಳು ಅಭಿವೃದ್ಧಿಯಾಗಿರುವುದು ಕಡತದಲ್ಲಿ ಮಾತ್ರ. ಕೋಟಿ ಕೋಟಿಗಳ ಲೆಕ್ಕಣಿಕೆಯಲ್ಲಿರುವ ನಮ್ಮ ಆಡಳಿತ ವ್ಯವಸ್ಥೆಯು ದೂರಗಾಮಿ ಯೋಜನೆಗಳನ್ನು ಹಾಕಿಕೊಳ್ಳದಿರುವುದರಿಂದ ಸಂಕಟಗಳ ಸರಮಾಲೆಗಳು ಅನುಭವಕ್ಕೆ ಬರುತ್ತವೆ. ರಿಸಾರ್ಟ್, ಓಟು ಬ್ಯಾಂಕ್, ಕೆಸರೆರೆಚಾಟ, ಹಗುರ ಮಾತುಗಳೇ ರಾಜಕಾರಣದ ಅರ್ಹತೆಯಾಗಿರುವ ಪ್ರಕೃತ ದಿನಮಾನದಲ್ಲಿ ಗಟ್ಟಿಯಾಗಿ ನೀರಿನ ದನಿ ಎಬ್ಬಿಸುವ ಕಂಠವು ತ್ರಾಣ ಕಳೆದುಕೊಂಡಿದೆ.
         ಆರಂಭದಲ್ಲಿ ಮಾತಿಗೆ ಸಿಕ್ಕ ರೈತರ ಮಾತನ್ನು ಉಲ್ಲೇಖಿಸುತ್ತೇನೆ, ನಂನಮ್ಮ ನೀರಿನ ಸಮಸ್ಯೆಗೆ ನಮ್ಮಲ್ಲೇ ಪರಿಹಾರವಿದೆ. ನಮ್ಮೂರಲ್ಲಿ ಬಹಳ ಮಿತವಾಗಿ ಮಳೆ ಬರುತ್ತದೆ. ಮಳೆ ಬಂದಾಗ ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸರಕಾರ ಸ್ಪಂದಿಸಬೇಕು. ಚಿಕ್ಕಪುಟ್ಟ ಕೆರೆಗಳ ದುರಸ್ತಿಗಳನ್ನು ಆಯಾಯ ವ್ಯಾಪ್ತಿಯ ರೈತರೇ ಪಕ್ಷ, ಜಾತಿಗಳನ್ನು ಮರೆತು ಮಾಡಬೇಕು. ಬಿಗುಮಾನ ತೊರೆದು ಅಧಿಕಾರಿಗಳು ರೈತರನ್ನು ಒಲಿಸಿಕೊಂಡರೆ ಈ ಕೆಲಸ ದೊಡ್ಡದೇನಲ್ಲ. ನೀರಿನ ಮೂಲಗಳ ಸಂರಕ್ಷಣೆಯಾಗಬೇಕು.
         ನೀರಿನ ಹೋರಾಟದ ಕಾವು ಕನ್ನಾಡು ಹಬ್ಬುತ್ತಿದೆ. ಮಳೆಯೂ ಕೈಕೊಡುತ್ತಿದೆ. ಮತಿಯೂ ತಪ್ಪುತ್ತಿದೆ. ಗೌರವಾನ್ವಿತ ಹುದ್ದೆಯಲ್ಲಿರುವವರು ಗೌರವ ಬದಿಗಿರಿಸಿ ಹಗುರವಾಗಿ ಸುದ್ದಿಗಳನ್ನು ಹರಿಯಬಿಡುತ್ತಾರೆ. ರಾಜಕೀಯ ರಕ್ಷಣೆಗಾಗಿ ಸಾಮಾಜಿಕ ಜವಾಬ್ದಾರಿ ಮತ್ತು ವ್ಯವಸ್ಥೆಯನ್ನು ಬಲಿಕೊಡಲು ಹೇಸದ, ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಜನಪರವಾಗಿ ನಿಲ್ಲದಿದ್ದರೆ - ನಮ್ಮ ಇಂಧನ ಸಚಿವರು ಹೇಳಿದಂತೆ 'ದೇವರೇ ಗತಿ'!
        'ಜಲ ಭಾಗ್ಯ' - ಮಾನ್ಯ ಮುಖ್ಯಮಂತ್ರಿಗಳೇ, ಹೊಸ ಭಾಗ್ಯ ಯೋಜನೆಯನ್ನು ಘೋಷಿಸುವಿರಾ? ಇದು ಕನ್ನಾಡಿನ ಜನರ ಆದ್ಯತೆಯ ಕೂಗು. ಹಲವು ಭಾಗ್ಯಗಳನ್ನು ರೂಪಿಸಿದ ತಮಗಿದು ಕಷ್ಟವಾಗಲಾರದು. ಈ ಯೋಜನೆ ನಿಜಾರ್ಥದಲ್ಲಿ ಜನಹಿತವಾಗಿರಲಿ. ಜೀವ ಹಿತವಾಗಿರಲಿ.   
 

ಜಲಸಾಕ್ಷರತೆ ಹೆಚ್ಚಿಸಲು ಜಿಲ್ಲೆಗೊಂದು 'ರೈನ್ ಸೆಂಟರ್' ಬೇಕು





               "ನೀರಿನ ಪ್ರಸ್ತುತ ಸ್ಥಿತಿಗತಿಯ ಅರಿವು ಮೂಡಿಸಿ ಮುಂದಿನ ದಿನಗಳಲ್ಲಿ ಬರಲಿರುವ ಕಠಿಣ ಪರಿಸ್ಥಿತಿ ಎದುರಿಸಲು ರಾಜ್ಯ ಸಜ್ಜಾಗಬೇಕಿದೆ.  ಜಲಸಾಕ್ಷರತೆಯ ಮೂಲಕ ಸಂರಕ್ಷಣೆಯ ಮಾರ್ಗದರ್ಶನಕ್ಕೆ, ನೀರಿನ ಮಿತಬಳಕೆಗೆ  ಜಾಗೃತಿ ಮೂಡಿಸಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ 'ರೈನ್ ಸೆಂಟರ್'ಗಳನ್ನು ತುರ್ತಾಗಿ ಆರಂಭಿಸಬೇಕು" ಎಂದು ರಾಜ್ಯದ ಜಲತಜ್ಞರು, ಪತ್ರಕರ್ತರು ಸರಕಾರವನ್ನು ಆಗ್ರಹಿಸಿದ್ದಾರೆ. ಶಿರಸಿಯ ಕಳವೆಯ ಕಾನ್ಮನೆಯಲ್ಲಿ ನಡೆದ ’ಜಲವರ್ತಮಾನ ಹಾಗೂ ನಾಳಿನ ಭವಿಷ್” ಕುರಿತ ಸಮಾಲೋಚನೆಯಲ್ಲಿ ಜಲಸಂರಕ್ಷಕರು, ಪತ್ರಕರ್ತರು ಜಲಕ್ಷಾಮದ ಸ್ಥಿಗತಿಗಳನ್ನು ಕೂಲಂಕುಶವಾಗಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ.
            1983ರ ಬರಗಾಲದಿಂದ ಈವರೆಗೂ ರಾಜ್ಯದ ಒಂದಿಲ್ಲೊಂದು ಕಡೆ ಜಲಕ್ಷಾಮವಿದೆ. ಇಂದು ರಾಜ್ಯವ್ಯಾಪಿಯಾಗಿ ಭೀಕರ ಬರ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಬರಕ್ಕೆ ಅಂಜದ ಶ್ರೀಸಾಮಾನ್ಯರು ಪ್ರತಿ ಜಿಲ್ಲೆಯಲ್ಲಿದ್ದಾರೆ. ನೀರಿನ ವಿಚಾರಗಳನ್ನು ಮಣ್ಣಿನಲ್ಲಿ ಕಾರ್ಯನಿರ್ವಹಿಸಿ ನೀರ ನೆಮ್ಮದಿ ಕಂಡವರಲ್ಲಿ ಚರ್ಚಿಸಬೇಕು, ಪಾಠ ಕಲಿಯಬೇಕು. ರಾಜ್ಯದ ಬರದ ತುರ್ತು ಸಂದರ್ಭದಲ್ಲಿ ಆಪತ್ಕಾಲಕ್ಕೆ ಆಗಬೇಕಾದ ಬುದ್ಧಿವಂತಿಕೆಯನ್ನು ಬದುಕಿನಲ್ಲಿ ಅಳವಡಿಸಬೇಕಾಗಿದೆ. ಇದಕ್ಕೆ ಪೂರಕವಾಗಿ ಮಾಧ್ಯಮ ಹಾಗೂ ಕೃಷಿಕರಿಗೆ ಜಲಸಂರಕ್ಷಣೆಯ ಮಣ್ಣಿನ ಮಾದರಿ ದರ್ಶನಕ್ಕೆ ನೆರವಾಗುವಂತೆ ಬರ ಗೆದ್ದವರ, ನೀರುಳಿಸಿ ನೆಮ್ಮದಿ ಕಂಡವರ ವಿವರಗಳಿರುವ  'ಜಲಯೋಧರ  ಡೈರಕ್ಟರಿ' ಪ್ರಕಟಿಸಲು ಸಮಾಲೋಚನಾ ಸಭೆ ನಿರ್ಧರಿಸಿದೆ.                
              ರಾಜ್ಯದ ವಿವಿಧ ಪ್ರದೇಶಗಳಿಂದ ಜಲಸಂರಕ್ಷಕರು, ಕೃಷಿ ಸಾಧಕರು, ಜಲಪತ್ರಕರ್ತರು ಭಾಗವಹಿಸಿ ಜಲಪರಂಪರೆ ಮತ್ತು ಪ್ರಸ್ತುತ ಸ್ಥಿತಿಗತಿ ಕುರಿತು ಮಾತುಕತೆ ನಡೆಸಿದರು. 20 ಗೋಷ್ಠಿಗಳಲ್ಲಿ ಸತತ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಿತು. ಕಳವೆಯ ಗ್ರಾಮ ಅರಣ್ಯ ಸಮಿತಿ, ಕರ್ನಾಟಕ ಅರಣ್ಯ ಇಲಾಖೆ ನೇತ್ರತ್ವದಲ್ಲಿ ನಡೆದ ಕಣಿವೆಕೆರೆ, ಕಟ್ ಅಗಳ, ಅರಣ್ಯಾಭಿವೃದ್ಧಿ ಸೇರಿದಂತೆ ವಿವಿಧ ಜಲಸಂರಕ್ಷಣಾ ರಚನಾತ್ಮಕ ಮಾದರಿಗಳನ್ನು ಜಲತಜ್ಞರು ವೀಕ್ಷಿಸಿದರು.
         ಸಮಾರೋಪ ಸಮಾರಂಭ - ಅಕ್ಟೋಬರ್ 4 ರವಿವಾರ ಸಾಯಂಕಾಲ ನಡೆಯಿತು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ ಭಾಗವಹಿಸಿದ್ದರು. "ಪರಿವರ್ತನೆಯೆಂಬುದು ಎಲ್ಲರೂ ಸೇರಿ ಜಾಗೃತರಾಗಿ ಹೋರಾಟದಿಂದ ನಡೆಯುವ ಕೆಲಸವಷ್ಟೇ ಅಲ್ಲ. ಶೇಕಡಾ ಐದರಷ್ಟು ಜನ ಸೇರಿ ರಚನಾತ್ಮಕ ಕಾರ್ಯ ಶುರುಮಾಡಿದರೂ ದೊಡ್ಡ ಸಾಧನೆ ಸಾಧ್ಯವಿದೆ. ಬರದ ಸಂದರ್ಭದಲ್ಲಿ  ಜಲ ಜಾಗೃತಿಯ ವಿಚಾರದಲ್ಲಿ  ರಾಜ್ಯದ ಜಲಸಂರಕ್ಷಣೆಯ ಪರಿಣಿತರು ಒಂದಾಗಿ ಕಳವೆಯ ಕಾನ್ಮನೆಯಲ್ಲಿ ಸಮಾಲೋಚನೆ ನಡೆಸುತ್ತಿರುವದು ಅತ್ಯಂತ ಮಹತ್ವದ ಸಂಗತಿಯಾಗಿದೆ" ಎಂದರು.
           ನೀರಿನ ಸಮಸ್ಯೆಗೆ ಬೃಹತ್ ಯೋಜನೆಗಳು ಮಾತ್ರ ಪರಿಹಾರವಲ್ಲ. ಬಿದ್ದ ಹನಿಯನ್ನು ಬಿದ್ದಲ್ಲಿ ಇಂಗಿಸುವ, ಹಿಡಿದಿಡುವ ಕೆಲಸ ಮುಖ್ಯವಿದೆ. ಚೆನೈ ನಗರದ ಮಳೆಕೊಯ್ಲು ಮಾದರಿಯಿಂದ ಪ್ರೇರಣೆ ಪಡೆದು ಬೆಂಗಳೂರು ನಗರದಲ್ಲಿ ನೀರಿಂಗಿಸುವದನ್ನು ಕಡ್ಡಾಯಗೊಳಿಸುವ ಪ್ರಯತ್ನ  ನಡೆದಿತ್ತು. ಕಾನೂನು ಬಿಗಿಗೊಳಿಸಿ ಪರಿಣಾಮಕಾರಿಯಾಗಿ ಜಲಸಂರಕ್ಷಣಾ ಮಾದರಿ ಅಳವಡಿಸಲು ಸರಕಾರ, ಸಾರ್ವಜನಿಕರು ಪ್ರಯತ್ನಿಸಬೇಕು. ಆಗ ಜಲಕ್ಷಾಮ ಎದುರಿಸಬಹುದು ಎಂದು ಮಸ್ಕಿ ನುಡಿದರು.
       "ನೀರಿಂಗಿಸುವ ಸಕಾಲಿಕ ಮಾರ್ಗದರ್ಶನ ನೀಡುವ ಕಾರ್ಯಕರ್ತರೇ ಕರ್ನಾಟಕ ದೊಡ್ಡ ಆಸ್ತಿ. ಇದರಿಂದಲೇ ಹಲವು ಹಳ್ಳಿಗಳು ಜಲಕ್ಷಾಮ ಎದುರಿಸಲು ಸಾಧ್ಯವಾಗಿದೆ.  ಎರಡು ದಶಕಗಳಿಂದ ಕೆಲಸ ನಡೆಯುತ್ತಿದೆ. ಕಣ್ಣು, ಕಿವಿ, ಹೃದಯವಿದ್ದ ಎಲ್ಲರಿಗೂ ಇಂದು ಜಲಸಂರಕ್ಷಣೆಯ ಮಹತ್ವ ತಿಳಿದಿದೆ, ಮಾಧ್ಯಮಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿವೆ. ಇಷ್ಟಾಗಿಯೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದಿರುವದು ವಿಷಾದದ ಸಂಗತಿಯಾಗಿದೆ" ಎಂದು ಹಿರಿಯ ಪತ್ರಕರ್ತ ಶ್ರೀ'ಪಡ್ರೆ ಹೇಳಿದರು.
         "ಕರ್ನಾಟಕದಲ್ಲಿ ಈಗ ಪ್ರಪ್ರಥಮವಾಗಿ ನೆಲಮೂಲದಲ್ಲಿ ಕಾರ್ಯನಿರ್ವಹಿಸಿದವರು ಒಂದೆಡೆ ಸೇರಿದ್ದೇವೆ. ಶ್ರೀಸಾಮನ್ಯರು ಅಳವಡಿಸಬಹುದಾದ ಸುಲಭ ಸಾಧ್ಯ ವಿಧಾನಗಳನ್ನು  ಮಾಡಿತೋರಿಸಿದವರ ಅನುಭವ ಹಂಚಿಕೆ ನಡೆದಿದೆ. ನೀರಿನ ಸಮಸ್ಯೆ ರಾಜ್ಯ ರಾಜ್ಯಗಳನ್ನು  ಒಡೆಯುತ್ತಿದೆ, ನೀರಿಂಗಿಸುವ ರಚನಾತ್ಮಕ ಕೆಲಸ ಹೃದಯಗಳನ್ನು ಒಟ್ಟಿಗೆ ಸೇರಿಸುತ್ತಿದೆಯೆಂಬುದಕ್ಕೆ  ಬರದ ಸೀಮೆಯ ಜನಗಳೂ ಇಲ್ಲಿ ಸೇರಿರುವದು ಸಾಕ್ಷಿಯಾಗಿದೆ" ಎಂದರು.
            ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಡಾ.ಪ್ರಕಾಶ್ ಭಟ್ ವಹಿಸಿದ್ದರು. "ಇಂದು ಒಬ್ಬ ಸಾಮಾನ್ಯ ಕಾರಿನ ಚಾಲಕನೂ ಮಹದಾಯಿ ನದಿ 'ಪಾಲ್ತೂ(ವ್ಯರ್ಥ)' ಆಗಿ ಸಮುದ್ರ ಸೇರುತ್ತಿದೆಯೆಂದು ಮಾತಾಡುತ್ತಿದ್ದಾನೆ. ಜಲಮೂಲ, ಅರಣ್ಯ ಸಂಬಂಧ, ಜೀವರಾಶಿಗಳ ತಿಳುವಳಿಕೆಯಿಲ್ಲದೇ ಮಾತಾಡುವ 'ಟಿಎಮ್ಸಿ ಮನಸ್ಥಿತಿ'ಯ ಹೋರಾಟದ ಪರಿಣಾಮವಿದು. ನೀರಿನ ಬಳಕೆ ಜ್ಞಾನ ವಿಸ್ತರಿಸುತ್ತಿರುವ ವರ್ತಮಾನದಲ್ಲಿ ನಮ್ಮ ಜ್ಞಾನ ನದಿ ಸಮುದ್ರ ಸೇರುವುದೇ ವ್ಯರ್ಥ ಎನ್ನುವದಕ್ಕೆ ಮಿತಿಗೊಂಡಿದ್ದು ಆತಂಕದ ಸಂಗತಿ" ಎಂದರು. ಇದನ್ನು ಬದಲಿಸಲು ಮಳೆನೀರಿನತ್ತ ಎಲ್ಲರ ಗಮನ ಸೆಳೆಯೋಣ ಎಂದರು.
         ಕೋಲಾರದ ದೊಡ್ಡ ಕಲ್ಲಹಳ್ಳಿಯ ಏಳು ವರ್ಷದ ಬಾಲಕಿ ಟ್ಯಾಂಕರ್ ನೀರಿಗೆ ನಿಂತಿದ್ದು ಕಂಡಾಗ ಕಾನ್ಮನೆಯ ಜಲವರ್ತಮಾನ ಕಾರ್ಯಕ್ರಮಕ್ಕೆ ಮುಖ್ಯ ಪ್ರೇರಣೆಯಾಯಿತು. ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಕಳೆದ 14 ವರ್ಷಗಳಿಂದ ಸತತವಾಗಿ ನಡೆಸುತ್ತಿರುವ ಕಾರ್ಯಕ್ರಮಗಳಿಂದ ನಮ್ಮ ಸಂಪರ್ಕಜಾಲ ರಾಜ್ಯದಲ್ಲಿ  ಬೆಳೆದಿದೆ. ನಾವು ಆಹ್ವಾನಿಸಿದ ಜಲತಜ್ಞರು, ಪತ್ರಕರ್ತರ ಭಾಗವಹಿಸುವಿಕೆಯಿಂದ ಮಾತುಕತೆ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಖೇನ ಜಲಜಾಗೃತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸೋಣವೆಂದು ಕಾರ್ಯಕ್ರಮ ಸಂಘಟಕ ಶಿವಾನಂದ ಕಳವೆ ಹೇಳಿದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹೊಸಪಾಳ್ಯ ಸ್ವಾಗತಿಸಿದರು, ಪೂರ್ಣಪ್ರಜ್ಞ ಬೇಳೂರು ವಂದಿಸಿದರು.