Monday, May 24, 2010

ಹಳ್ಳಿ ಕಟ್ಟುವ 'ಚಾವಡಿ'

ಕೃಷಿಗೆ ಪೂರಕವಾಗಿಲ್ಲದ ಅಂತರ್ಜಲ ಮಸೂದೆ ಇನ್ನೇನು ಮಂಜೂರಾಗಲಿದೆ. ಮರಗಳನ್ನು ತಮಗಿಷ್ಟ ಬಂದಂತೆ ಕಡಿದು, ಪರಿಸರವನ್ನು ನುಣುಪಾಗಿಸುವ (!) ಮಾರಕ ವಿಧೇಯಕದ ಅಡಿಕಟ್ಟು ಸಿದ್ಧವಾಗುತ್ತಿದೆ. ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ಮಸೂದೆಯು ಚರ್ಚೆಯಲ್ಲಿದೆ. ಇವೆಲ್ಲಾ ತೆರೆಮರೆಯಲ್ಲಿ ಸದ್ದಿಲ್ಲದೆ ತಂಪುಕೋಣೆಯಲ್ಲಿ ರೂಪುಗೊಳ್ಳುತ್ತಿವೆ. ಜಾಲತಾಣಗಳಲ್ಲಿ ಪ್ರಕಟಿಸಿದರೆ 'ಸಾರ್ವಜನಿಕರಿಗೆ ತಿಳಿಸಿದಂತೆ' ಎಂದು ವರಿಷ್ಠರು ತಿಳಿದಂತಿದೆ.

ಇಂದು ಕಂಪ್ಯೂಟರ್ ಪ್ರವೇಶಿಸದ ಹಳ್ಳಿಗಳು ಎಷ್ಟಿಲ್ಲ? ಕಂಪ್ಯೂಟರ್ ಇದ್ದರೂ, ಜಾಲತಾಣ ಸಂದರ್ಶಿಸಲು ಎಷ್ಟು ಮಂದಿಗೆ ಸಾಧ್ಯವಾಗಿದೆ? ಬ್ರಾಡ್ ಬ್ಯಾಂಡ್ಗಳು ಎಷ್ಟು ಹಳ್ಳಿಗಳಿಗೆ ನುಗ್ಗಿವೆ? ಪ್ರತಿಯೊಂದು ವಿಧೇಯಕಗಳಿಗೂ ಸಾರ್ವಜನಿಕ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಇದು ಬಳಕೆದಾರನಿಗೆ ಹೇಗೆ ತಿಳಿಯಬೇಕು? ಪತ್ರಿಕೆಯ ಮೂಲೆಯಲ್ಲೆಲ್ಲೋ ಇಲಾಖೆಯು ಜಾಹೀರಾತು ಕೊಟ್ಟ ಮಾತ್ರಕ್ಕೆ ತಿಳಿಯುತ್ತದೇನು?

ಇಂತಹ ಸಂದರ್ಭದಲ್ಲಿ ಪರಸ್ಪರ ಮಾತುಕತೆಗಳಿಂದ 'ತಮಗೇನು ಬೇಕು', 'ವಿಧೇಯಕದಲ್ಲಿ ಏನು ತೊಂದರೆಗಳಿವೆ', 'ಸರಕಾರದಿಂದ ನಮಗೆ ಎಂತಹ ಸವಲತ್ತುಗಳು ಬಂದಿಲ್ಲ', 'ಬದುಕಿಗೆ ಮಾರಕವಾಗುವಂತಹ ಕಾನೂನುಗಳು ಏನಿವೆ? - ಇಂತಹ ಸಂವಹನಗಳು ಹಳ್ಳಿಗಳಲ್ಲಿ ನಡೆಯದಿದ್ದರೆ; ಪ್ರತಿದಿನ ಒಂದೊಂದು ವಿಧೇಯಕಗಳು ನಮ್ಮ ಕಿಟಕಿಯೊಳಗೆ ಪ್ರವೇಶಿಸಿ ಬದುಕನ್ನು ಕಸಿಯುತ್ತವೆ.

ಪರಸ್ಪರ ಸಿಕ್ಕಾಗ, ಸಮಾರಂಭಗಳಲ್ಲಿ ಮುಖತಃ ಭೇಟಿಯಾದಾಗ ಮಾತ್ರ ಕೃಷಿ ಮಾತುಕತೆಗಳು ನುಸುಳುತ್ತವೆ! ಅದೂ 'ಋಣಾತ್ಮಕ' ವಿಷಯಗಳಲ್ಲಿ, ಪರದೂಷಣೆಯಲ್ಲೇ ಗಿರಕಿ ಹೊಡೆಯುತ್ತಿರುತ್ತವೆ!

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಮೀಯಪದವಿನಲ್ಲಿ ಇಂತಹ ಕೃಷಿ ಮಾತುಕತೆಗಳಿಗಾಗಿ 'ಚೌಟರ ಚಾವಡಿ' ಸಜ್ಜಾಗಿದೆ. ಖಾಸಗಿ ನೆಲೆಯಲ್ಲಿ ರೂಪುಗೊಂಡಿದ್ದರೂ, ಕೃಷಿ ಮಾತುಕತೆಗಳಿಗೆ ಸದಾ ತೆರೆದ ಬಾಗಿಲು.

ಚಾವಡಿಯ ಆಧ್ಯಕ್ಷ ಡಾ.ಡಿ.ಸಿ.ಚೌಟ ಹೇಳುತ್ತಾರೆ - ಹಳ್ಳಿಗಳ ಕೃಷಿ ಸಂಪತ್ತಿಗೆ ನಷ್ಟ ಸಂಭವಿಸದಂತೆ ಹಳ್ಳಿಯ ಬದುಕು ಮತ್ತು ಕೃಷಿ ಸಂಸ್ಕೃತಿಯ ಸುತ್ತ ನಿರಂತರ ಸಂವಾದ ನಡೆಯುತ್ತಲೇ ಇರಬೇಕು. ಸಂವಾದ, ಚರ್ಚೆ ಮತ್ತು ವಿಚಾರ ಸಂಕಿರಣಗಳ ಕೇಂದ್ರಸ್ಥಾನದಲ್ಲಿ ಕೃಷಿಕ ಸಮುದಾಯ ಇರಬೇಕು. ಕೃಷಿಕ ಸಮುದಾಯದ ದೇಶೀಯ ಜ್ಞಾನ ಪರಂಪರೆಯ ಅನಾವರಣ ಮತ್ತು ಬಳಕೆಯನ್ನು ಸಮರ್ಪಕ-ಪರಿಣಾಮಕಾರಿಯಾಗಿ ಮಾಡಬೇಕೆಂಬ ಉದ್ದೇಶಕ್ಕೆ ಅನುಗುಣವಾಗಿ ಕೃಷಿಕರ ಸಮುದಾಯ ಭವನ 'ಚೌಟರ ಚಾವಡಿ' ನಿರ್ಮಾಣವಾಗಿದೆ.

'ಕೃಷಿ ಮತ್ತು ಗ್ರಾಮೀಣ ಬದುಕಿನ ಭವಿಷ್ಯದ ಚಿಂತನ-ಮಂಥನ'ದೊಂದಿಗೆ ಚಾವಡಿ ಶುಭಾರಂಭಗೊಂಡಿತ್ತು. ನಮ್ಮ ಬಹುತೇಕ ಮಾತುಕತೆಗಳಲ್ಲಿ ಕೃಷಿ ಕ್ಷೇತ್ರದ ಗಣ್ಯರು, ಕೃಷಿಕರು, ವಿಜ್ಞಾನಿಗಳು ತಮ್ಮ ಅನುಭವವನ್ನು ಹೇಳುತ್ತಾರೆ. ಇಲ್ಲಿ ಹಾಗಲ್ಲ. ಕೃಷಿ ಕುಟುಂಬದಲ್ಲಿ ಹುಟ್ಟಿ, ಬೆಳೆದು, ಪ್ರಸ್ತುತ ಉದ್ಯೋಗ ನಿಮಿತ್ತ ಅನ್ಯಕ್ಷೇತ್ರದಲ್ಲಿದ್ದು ಸದಾ 'ಕೃಷಿ ತುಡಿತ'ವನ್ನು ಅಂಟಿಸಿಕೊಂಡಿರುವ ಗಣ್ಯರಿಲ್ಲಿ ಮಾತುಕತೆಯಲ್ಲಿ ತೊಡಗಿರುವುದು ಗಮನಾರ್ಹ.

ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೃಷಿ ಮೂಲದಿಂದ ಬೆಳೆದವರು. ಅವರು ಯಾವುದೇ ದೇಶಕ್ಕೆ ಹೋದರೂ ಕೃಷಿಕರನ್ನು ಮಾತನಾಡಿಸುವ ಒಲವು. ಅವರ ಚಿತ್ರಗಳಲ್ಲೆಲ್ಲಾ ಕೃಷಿ/ಹಳ್ಳಿ ಟಚ್.

ಕೃಷಿಯಲ್ಲಿ 'ವಿದ್ಯುತ್, ನೀರು, ಬೆಲೆ' ಇವಿಷ್ಟಕ್ಕೆ ಸರಕಾರ ನಿಗಾ ವಹಿಸಿದರೆ ಸಾಕು, ಮಿಕ್ಕೆಲ್ಲಾ ಪ್ರಕೃತಿಯೊಂದಿಗೆ ರೈತನೇ ನಿಭಾಯಿಸುತ್ತಾನೆ. ಕೃಷಿಯು ಪಾರಂಪರಿಕವಾಗಿ ಬದುಕಿನಲ್ಲಿ ಬೇರೂರಿದ ಕಸುಬು. ಪ್ರಸ್ತುತ ಮಳೆಯನ್ನೇ ನಂಬಿ ಬೆಳೆಯಬೇಕಾದ ಭೂಮಿಗಳಿಗೆ ತೊಂದರೆಯಾಗಿದೆ. ರೈತರು ಕಂಗಾಲಾಗಿದ್ದಾರೆ. ನೀರಿನ ಸಂಕಟ ಬೇರೆ. ಇಂತಹ ತೊಂದರೆಗಳಿಗೆ ಪರಿಹಾರ ಏನು?' ಹೀಗೆ ತಮ್ಮ ಆರೆಕ್ರೆ ಕೃಷಿಯ ಅನುಭವದೊಂದಿಗೆ ವಾಸ್ತವಿಕ ವಿಚಾರಗಳತ್ತ ನೋಟ ಬೀರಿದರು.

ಡಾ.ಬಿ.ಎ.ವಿವೇಕ ರೈಯವರು ಇಂದಿನ ಕೃಷಿ, ಕೃಷಿಕರ ಹಿಂದಿನ ರಾಜಕೀಯ ಹುನ್ನಾರಗಳತ್ತ ಬೆಳಕು ಚೆಲ್ಲುತ್ತಾ, 'ಕೃಷಿಕರೆಂದು ಹೇಳುವ ಕೃಷಿಕರಿಗೆ ಬೇರೆ ಬೇರೆ ಬಣ್ಣ, ಧ್ವಜಗಳಿವೆ! ನಿಜವಾದ ಕಾಳಜಿ ಮಸುಕಾಗಿ ಫ್ಯಾಶನ್ ರೂಪ ಪಡೆದಿವೆ. ಇವೆಲ್ಲಾ ಪಕ್ಷಗಳೊಂದಿಗೆ ಗುರುತಿಸಿಕೊಂಡಿವೆ. ಇಂದಿನ ಜಾಗತಿಕ ವ್ಯವಸ್ಥೆಯು ಕೃಷಿಕನಿಂದ ಭೂಮಿ, ನೀರು, ಬೀಜಗಳನ್ನು ಕಸಿದುಕೊಂಡಿದೆ. ಅದನ್ನು ಮತ್ತೆ ಹೇಗೆ ಮರಳಿ ಪಡೆಯಬೇಕು? ಕೃಷಿಯಿಂದು ದುರುಪಯೋಗವಾಗುತ್ತದೆ. ಇಂಡಿಯಾದಲ್ಲಿ ಭ್ರಷ್ಠಾಚಾರ ನಾಚಿಕೆಯಿಲ್ಲದೆ ನಡೆಯುತ್ತಿವೆ.'

'ಇವರಿಗೇನು ಕೃಷಿ ಗೊತ್ತು' ಎಂದು ಇಂತಹ ಚಿಂತನೆಗಳನ್ನು ಬದಿಗಿಡಬೇಕಾಗಿಲ್ಲ. ಸ್ವಲ್ಪ ಹೊತ್ತು ನಿಂತು ಚಿಂತಿಸಿದರೆ ಗಾಢತೆಯ ಅರಿವಾಗುತ್ತದೆ. 'ನಿಂತು ಚಿಂತಿಸಲು' ನಮಗೆ ಪುರುಸೊತ್ತಿಲ್ಲವಲ್ಲಾ! ತಕ್ಷಣದ ಪ್ರತಿಕ್ರಿಯ ನೀಡುತ್ತಾ, ಋಣಾತ್ಮಕ ಚಿಂತನೆಯನ್ನೇ ಧನಾತ್ಮಕ ಎಂದು ಸ್ವೀಕರಿಸುವ ನಮ್ಮ ಬೌದ್ಧಿಕ ದಿವಾಳಿಗೆ ಯಾರನ್ನು ದೂರಬೇಕು?

ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು - '2025ರ ಹೊತ್ತಿಗೆ ನಮ್ಮ ರಾಜ್ಯದ ಕೃಷಿ ಪರಿಸ್ಥಿತಿ ಹೇಗಿರಬಹುದು' ಎಂಬ ಹೊಸ ಬಾಣ ಬಿಟ್ಟಾಗ, ಒಂದು ಕ್ಷಣ ಮೌನ. 'ಪಟ್ಟಣದ ಕಡೆಗೆ ಜನ ಹೋಗುತ್ತಾರೆ. ಅಲ್ಲಿನ ಸಮಸ್ಯೆಯಿಂದಾಗಿ ಹೆಚ್ಚಿನವರು ಕೃಷಿಗೆ ಮರಳುವುದು ಖಚಿತ. ಹಾಗೆ ಮರಳುವಾಗಿ ಮೊದಲಿನ ತಮ್ಮ ಕೃಷಿ ಭೂಮಿ ನಾಪತ್ತೆಯಾಗಿರುತ್ತದೆ! ಮತ್ತದೇ ತಲ್ಲಣದ ಬದುಕು. 'ಮರಳಿ ಹಳ್ಳಿಗೆ ಹೋಗೋಣ' ಎಂಬ ಹೊಸದೊಂದು ಚಳುವಳಿಯೇ ಬೇಕಾಗಬಹುದೇನೋ?

ರೈತರ ಸಮಸ್ಯೆಗಳಿಗೆ ವೈಯಕ್ತಿಕವಾಗಿ ರೈತರೇ ಚಿಂತಿಸಿದರೆ ಸಾಲದು. ಸಾಧ್ಯವೂ ಇಲ್ಲ. ನೋವಿಗೆ ಮಾತು ಕೊಡುವ ಕೆಲಸ ಇಂತಹ ಹಳ್ಳಿ ಕಟ್ಟುವ ಚಾವಡಿಗಳಿಂದಾಗಬೇಕು. ಈಗಿನ ಕೃಷಿ ತಲ್ಲಣಗಳಿಗೆ ಬೆಳಕಿಂಡಿಯಾದೀತು. ಬದುಕಿನಲ್ಲಿ ಮಾತುಗಳೇ ದೂರವಾಗುತ್ತಿರುವ ಕಾಲಘಟ್ಟದಲ್ಲಿ 'ಮಾತನಾಡೋಣ ಬನ್ನಿ' ಎಂದು ಕರೆಯುತ್ತಿರುವ ಚೌಟರ ಚಾವಡಿ ಒಂದು ಸ್ಟೆಪ್ಪಿಂಗ್ ಸ್ಟೋನ್. ಇಂತಹ ವೇದಿಕೆಗಳು ಹಳ್ಳಿಹಳ್ಳಿಗಳಲ್ಲಿ ರೂಪಗೊಳ್ಳಬೇಕು. ಆದರವು ಬಣ್ಣ, ಧ್ವಜಗಳಿಂದ ಮುಕ್ತವಾಗಿರಲಿ.

Saturday, May 15, 2010

ವಿಷರಹಿತ ಶುಂಠಿ ಕೃಷಿ

ರಾಸಾಯನಿಕ ಗೊಬ್ಬರ ಬಳಸದ, ವಿಷ ಸಿಂಪಡಿಸದೆ ಶುಂಠಿ ಕೃಷಿ ಮಾಡಲು ಸಾಧ್ಯವಾ?
ಸಕಲೇಶಪುರ ಸನಿಹದ ಯಡೆಹಳ್ಳಿ-ಕಾಡುಗದ್ದೆಯ ಚಿದಂಬರಂ ಹತ್ತು ಗುಂಟೆ (ಕಾಲು ಎಕ್ರೆ) ಯಲ್ಲಿ ನಾಲ್ಕು ವರುಷಗಳಿಂದ ವಿಷರಹಿತವಾಗಿ ಶುಂಠಿ ಬೆಳೆಯುತ್ತಿದ್ದಾರೆ.

'ಶುಂಠಿಗೆ ಬೀಜೋಪಚಾರ ಮುಖ್ಯ. ಮಣ್ಣಿನಲ್ಲಿ ಹೆಚ್ಚು ತೇವಾಂಶವಿದ್ದರೆ ರೋಗ ಹುಡುಕಿ ಬರುತ್ತೆ' ಎನ್ನುತ್ತಾರೆ. ಕೇರಳದ ಕೃಷಿಕರೊಬ್ಬರಿಂದ ಕಲಿತುಕೊಂಡ ಬೀಜೋಪಚಾರವನ್ನು ವಿವರಿಸಿದ್ದು ಹೀಗೆ : ಬೇಕಾಗುವ ವಸ್ತುಗಳು - ಬೇವಿನ ಎಣ್ಣೆ 300 ಎಂ.ಎಲ್., ಹಸುವಿನ ಗಂಜಲ ಐದು ಲೀಟರ್ ಮತ್ತು ಹೊಗೆಸೊಪ್ಪು 200 ಗ್ರಾಂ. ನಾಲ್ಕು ಕಿಲೋ ಸೆಗಣಿ - ಮೊದಲು ಹೊಗೆಸೊಪ್ಪನ್ನು ಇಪ್ಪತ್ತು ನಿಮಿಷ ಕುದಿಸಿ ಕಷಾಯ ಮಾಡಿಟ್ಟುಕೊಳ್ಳಿ. ಬೇವಿನೆಣ್ಣೆ, ಗಂಜಲ ಮತ್ತು ಈ ಕಷಾಯವನ್ನು ಅರುವತ್ತು ಲೀಟರ್ ನೀರಿನೊಂದಿಗೆ ಬೆರೆಸಿ. ಇದರಲ್ಲಿ ಹದಿನೈದು ನಿಮಿಷ ಶುಂಠಿಬೀಜವನ್ನು ಅದ್ದಿಡಿ. ನೆರಳಿನಲ್ಲಿ ಯಾವುದೇ ಮರದ ಸೊಪ್ಪನ್ನು ಹರಡಿಟ್ಟುಕೊಳ್ಳಿ. ನೆನೆಸಿದ ಬೀಜವನ್ನು ತೆಗೆದು ಗುಡ್ಡೆಹಾಕಿ. ಇಪ್ಪತ್ತು ದಿವಸದಲ್ಲಿ ಮೊಳಕೆಯೊಡೆಯುತ್ತದೆ.

ನೆಡುವಾಗಲೂ ತಮ್ಮದೇ ವಿಧಾನ. ಹದಿನೈದಡಿ ಉದ್ದ, ಮೂರೂವರೆ ಅಡಿ ಅಗಲ ಬರುವಂತಹ ಹನ್ನೆರಡು ಮಡಿಗಳು. ಪ್ರತಿ ಮಡಿಯ ಮಧ್ಯೆ ಮತ್ತು ಮಡಿಗಳ ಸುತ್ತಲೂ ನೀರು ಹರಿದುಹೋಗುವಂತೆ ಕಣಿಗಳ (ಚಿಕ್ಕ ಕಾಲುವೆ) ವ್ಯವಸ್ಥೆ.

ಮಡಿಯಲ್ಲಿ ಬೇವಿನಹಿಂಡಿ ಹರಡಿ ಮಣ್ಣಿನೊಂದಿಗೆ ಮಿಶ್ರ ಮಾಡುತ್ತಾರೆ. ಅಡಿಗೊಂದರಂತೆ ಶುಂಠಿಯ ಮೊಳಕೆಯನ್ನು ಮೇಲ್ಬದಿ ಬರುವಂತೆ ಮಣ್ಣಿನಲ್ಲಿ ಊರಿ, ಅದರ ಮೇಲೆ ಕೊಟ್ಟಿಗೆ ಗೊಬ್ಬರ ಹಾಕಿ ಮುಚ್ಚುವುದು. ಕಳೆ ಬಾರದಂತೆ ಒಣಹುಲ್ಲನ್ನು ಹರಡಿದರೆ ಆಯಿತು. ಹುಲ್ಲಿನ ಬದಲಿಗೆ ಸೊಪ್ಪನ್ನೂ ಬಳಸಬಹುದು.

ಹದಿನೈದನೇ ದಿವಸದಿಂದ ಸ್ಲರಿ ಮತ್ತು ಜೀವಾಮೃತ ಉಣಿಕೆ. ನಲವತ್ತೈದನೇ ದಿನಗಳಲ್ಲಿ ಗಿಡ ಮೇಲೆದ್ದು ಬರುತ್ತದೆ. ಕಾಂಪೋಸ್ಟ್, ಎರೆಗೊಬ್ಬರ, ದ್ರವರೂಪಿ ಗೊಬ್ಬರಗಳು, ಸ್ಲರಿ, ಜೈವಿಕ ಗೊಬ್ಬರಗಳನ್ನು ಕಾಲ ಕಾಲಕ್ಕೆ ನೀಡಿದ್ದಾರೆ.

ಕೆಲವು ಸಲ ಕೊಳೆ ರೋಗ ಬರುವುದುಂಟು. 'ಸುಣ್ಣ ಮತ್ತು ಮೈಲುತುತ್ತು ಅಥವಾ ಗಂಜಲವನ್ನು ಮಿಶ್ರಮಾಡಿ ಕೊಳೆಯುಕ್ತ ಶುಂಠಿ ಗಿಡಗಳಿಗೆ ಕೊಟ್ಟರೆ ಶಮನವಾಗುತ್ತದೆ' ಇದು ಮಾಡಿ ನೋಡಿದ ಅನುಭವ. 'ತೇವ ಹೆಚ್ಚಾದರೆ ಕೊಳೆ ರೋಗ ಬರುತ್ತದೆ. ಹಾಗಂತ ಆ ರೋಗ ನಿವಾರಣೆಗೆ ಯದ್ವಾತದ್ವಾ ವಿಷ, ಕ್ರಿಮಿನಾಶಕ ಹೊಡೆಯುವ ಅಗತ್ಯವಿಲ್ಲ' ಎನ್ನುವುದು ಕಿವಿಮಾತು.

'ನೆಟ್ಟು 8-9 ತಿಂಗಳಲ್ಲಿ ಶುಂಠಿ ಅಗೆಯಲು ಸಿದ್ಧ. ರೋಗ ಬರಬಹುದೆಂಬ ಭೀತಿಯಿಂದ ಐದಾರು ತಿಂಗಳಲ್ಲೇ ಕೆಲವರು ಶುಂಠಿ ತೆಗೆಯುತ್ತಾರೆ. ಆದರದು ಹೆಚ್ಚು ಬಲಿತಿರುವುದಿಲ್ಲ.'

ಬೀಜದ ಆಯ್ಕೆಯಲ್ಲೂ ಕೆಲವು ಕಟ್ಟುಪಾಡುಗಳು - 'ಕನಿಷ್ಠ ಒಂಭತ್ತು ತಿಂಗಳು ನೆಲದೊಳಗೆ ಇದ್ದ ಶುಂಠಿಯನ್ನು ತೆಗೆಯುವಾಗಲೇ ಮೊಳಕೆಯೊಡೆದ ಕಣ್ಣನ್ನು ಬೀಜಕ್ಕಾಗಿ ತೆಗೆದಿಡಬೇಕು. ಮೊಳಕೆ ದೊಡ್ಡದಾದರೆ ನೆಡುವ ಹಂತದಲ್ಲಿ ಅಜಾಗ್ರತೆಯಿಂದ ಮುರಿಯುತ್ತದೆ. ಅಂತಹುದಕ್ಕೆ ಬೆಳವಣಿಗೆ ಕಡಿಮೆ.'

'ಶುಂಠಿ ಬೀಜವನ್ನು ನಾನು ಕೊಂಡು ತರುವುದಿಲ್ಲ. ನಮ್ಮ ತೋಟದಲ್ಲೇ ಬೇಕಾದಷ್ಟು ಸಾವಯವ ಗೊಬ್ಬರ ತಯಾರಿಸುತ್ತೇನೆ. ಬೇವಿನ ಹಿಂಡಿ, ಬೇವಿನೆಣ್ಣೆ, ಜೀವಾಮೃತಕ್ಕೊಂದಿಷ್ಟು ಬೆಲ್ಲ, ಕೆಲಸಕ್ಕೆ ಅಪರೂಪಕ್ಕೆ ಆಳುಗಳು - ಇವು ಬಿಟ್ಟರೆ ಬೇರೆ ನಗದು ಖರ್ಚೆಲ್ಲ. ಅಂದಾಜು 1000 ರೂಪಾಯಿಯಲ್ಲಿ ಎಲ್ಲವೂ ಮುಗಿಯುತ್ತವೆ. ಪ್ರತಿ ವರ್ಷ ಸರಾಸರಿ ಏಳು ಕ್ವಿಂಟಾಲ್ (ಹನ್ನೆರಡು ಚೀಲ) ಚೀಲ ಶುಂಠಿ ಸಿಗುತ್ತಿದೆ.'

ಮಡಿಯಲ್ಲಿ ಶುಂಠಿ ಬೀಜ ನೆಟ್ಟು ಗಿಡ ಬೆಳೆಯಲು ಹೇಗೂ ಎರಡು ತಿಂಗಳು ಬೇಕು. ಈ ಅವಧಿಯ ಮಧ್ಯೆ ಅಲಸಂಡೆ, ಬೆಂಡೆ, ಹಾಗಲ, ಮೆಣಸು, ಬೂದುಗುಂಬಳ, ಟೊಮೆಟೋ ಇತ್ಯಾದಿ ತರಕಾರಿ ಬೆಳೆದಿದ್ದಾರೆ. ಪ್ರತ್ಯೇಕ ಗೊಬ್ಬರ ಇಲ್ಲ.

ಏಳು ವರ್ಷ ಹಿಂದೆ ಒಂದೆಕೆಯಲ್ಲಿ ರಾಸಾಯನಿಕ ಬಳಸಿ ಶುಂಠಿ ಕೃಷಿ ಮಾಡಿದ್ದರಂತೆ. ಅದಕ್ಕೆ ವಿಷ ಹೊಡೆದು ಸಾಕಾಯ್ತು. ಹೇಳುವಂತಹ ಆದಾಯವೂ ಸಿಗಲಿಲ್ಲ. ಅಲ್ಲಿಂದ ಈ ತನಕ ವಿಷಮುಕ್ತ ಕೃಷಿ. ಅಂದು ರಾಸಾಯನಿಕ ಕೃಷಿಯಲ್ಲಿ ಸಿಕ್ಕಷ್ಟೇ ಇಳುವರಿ ಆಗ ಸಾವಯವದಲ್ಲೂ ಬರುತ್ತಿದೆಯಂತೆ.

ಚಿದಂಬರಂ ನಿವೃತ್ತ ಸೈನಿಕ. ತಂದೆ ತೀರಿಕೊಂಡಾಗ ಮನೆಯ ಜವಾಬ್ದಾರಿ ಹೆಗಲೇರಿತು. ಈ ಕಡೆ ಸಾವಯವ ಕೃಷಿಯ ರೂಢಿಯೇ ಇಲ್ಲ. ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಸಾವಯವದ ಅರಿವು ಕೊಟ್ಟಾಗ ಕಣ್ತೆರೆಯಿತು. ನಾಲ್ಕೆಕರೆಯಲ್ಲಿ ಮೂರೆಕರೆಯಷ್ಟು ಸಾವಯವ ಭತ್ತ ಬೆಳೆಯುತ್ತಿದ್ದಾರೆ.

ಮೂಡಿಗೆರೆ ಸನಿಹದ ಫಲ್ಗುಣಿಯ ಕೆ.ಕೆ.ಗೋಪಾಲ್ ಹದಿನೈದು ವರುಷದಿಂದ ಐದು ಕ್ವಿಂಟಾಲ್ ಶುಂಠಿ ಬೆಳೆಯುತ್ತಾರೆ. ಅವರದು ಅಡಿಕೆ ತೋಟ. ಖಾಲಿ ಜಾಗ ಇರುವಲ್ಲೆಲ್ಲಾ 15-20 ಉದ್ದದ ಮಡಿ ಮಾಡಿ ಶುಂಠಿ ಕೃಷಿ. ಗೌರಿ ಹಬ್ಬ ಬಂದಾಗ ಕೀಳುತ್ತಾರೆ. 'ನಾಟಿ ಶುಂಠಿ ತಳಿಗೆ ರೋಗವಿಲ್ಲ. ಹೈಬ್ರಿಡ್ಗೆ ರೋಗ ಜಾಸ್ತಿ' ಎನ್ನುವ ಗೋಪಾಲ್ ಹಟ್ಟಿ ಗೊಬ್ಬರ, ಎರೆಗೊಬ್ಬರ ಬಳಸಿ ಕೃಷಿ ಮಾಡುತ್ತಾರೆ.

Wednesday, May 5, 2010

ಮೌನ ಮುರಿದ 'ಅನ್ನದ ಬಟ್ಟಲ ಮಾತುಕತೆ'

ಭತ್ತದ ಬೇಸಾಯವು ಭತ್ತ ಬೆಳೆದು, ಅಕ್ಕಿ ಮಾಡಿ ಮಾರುವುದಕ್ಕೋ, ಉಣ್ಣುವುದಕ್ಕೋ ಸೀಮಿತವಲ್ಲ. ಅದೊಂದು ಸಂಸ್ಕೃತಿ. ಇದು ತುಳುನಾಡಿನ ಸಂಸ್ಕೃತಿಯ ಅಡಿಗಲ್ಲು. ಯಾವುದೇ ಸಮಾರಂಭಕ್ಕೆ ಮನೆಯ ಯಜಮಾನ ಹೋಗಲಿ, ಇಳಿಹೊತ್ತಾಗುತ್ತಲೇ, 'ಹಾಲು ಕರೆಯುವುದಕ್ಕಿದೆ' ಎನ್ನುತ್ತಾ ಚಡಪಡಿಸುತ್ತಾನೆ. ಮೇಯಲು ಬಿಟ್ಟ ಹಸು- ಕರು ಸಂಜೆ ಹೊತ್ತಿಗೆ ಹಟ್ಟಿಗೆ ಬಾರದಿದ್ದರೆ, ಮನೆಯೊಡತಿಗೆ ಟೆನ್ಶನ್ ಏರುತ್ತದೆ!

ಇವೆಲ್ಲಾ ಸಂಸ್ಕೃತಿಯೊಂದಿಗೆ ಮಿಳಿತವಾದ ಬದುಕಿನ ಮಾದರಿಗಳು. ಕ್ಯಾಲಿಕ್ಯುಲೇಟರ್ ಕೈಗೆ ಬಂದಾಗ ಭತ್ತದ ಬೇಸಾಯವು 'ಲಾಭ-ನಷ್ಟ'ದ ಲೆಕ್ಕಾಚಾರಕ್ಕೆ ಇಳಿಯಿತು. ಮೊದಲಿದ್ದ ಲವಲವಿಕೆಯ ದಿನಗಳಿಗೆ ಇಳಿಲೆಕ್ಕ ಶುರುವಾಯಿತು. ಭತ್ತದ ಕೃಷಿ, ಸಂಸ್ಕೃತಿಯಿಂದು 'ತೀವ್ರನಿಗಾ' ವಿಭಾಗದಲ್ಲಿದೆ!

ಬರಿದಾಗುತ್ತಿರುವ ಅನ್ನದ ಬಟ್ಟಲಿನ ಕುರಿತು, ಸುಳ್ಯದಲ್ಲೊಂದು ಮಾತುಕತೆ. ಜತೆಗೆ ಡಾ.ಸುಂದರ ಕೇನಾಜೆಯವರ 'ಬತ್ತದ ಲೋಕ' ಕೃತಿ ಬಿಡುಗಡೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂಬಳೆ ಸುಂದರ ರಾಯರು ಒಂದು ಮಾತನ್ನು ಹೇಳಿದರು - ಇಂದು ಭತ್ತ ಉಳಿಸಿ ಆಂದೋಳನ ಕನ್ನಾಡಿನಾದ್ಯಂತ ಹಬ್ಬುತ್ತಿದೆ. ಒಳ್ಳೆಯ ಲಕ್ಷಣ. ಜತೆಜತೆಗೆ 'ಗದ್ದೆ ಉಳಿಸಿ' ಆಂದೋಳನವೂ ಆಗಬೇಕು ಎಂದರು.

ಕರಾವಳಿ ಭತ್ತದ ಕಣಜ! ಈ ಹೆಗ್ಗಳಿಕೆಯಲ್ಲೇ ಕಣಜವನ್ನು ಸೂರೆಗೊಂಡಿದ್ದೇವೆ. ಪ್ರಸ್ತುತ ಮುಡಿಗಟ್ಟಲೆ ಇಳುವರಿ ಕೊಡುವ ಗದ್ದೆಗಳು ಅಡಿಕೆ ತೋಟದಡಿಯಲ್ಲಿವೆ. ಕೆಲವು ಹೆದ್ದಾರಿಯಡಿ ಅಪ್ಪಚ್ಚಿಯಾಗಿವೆ. ಮತ್ತೆಷ್ಟೋ ದೈತ್ಯ ಕಟ್ಟಡಗಳಿಗೆ ಅಡಿಗಟ್ಟಾಗಿದೆ. ಇಂತಹ ಸನ್ನಿವೇಶದಲ್ಲಿ 'ಗದ್ದೆ ಉಳಿಸಿ' ಆಂದೋಳನ ನಿಕಟಭವಿಷ್ಯದ ಆದ್ಯತೆ.

ನಮ್ಮದು ಅನ್ನ ಸಂಸ್ಕೃತಿ. ಆ ಜಾಗದಲ್ಲೀಗ 'ಚಪಾತಿ'ಗೆ ಸ್ಥಾನ. ಚಪಾತಿಯಿಲ್ಲದೆ ಊಟವಿಲ್ಲ. ಅದೇನೂ ಅನಿವಾರ್ಯವಲ್ಲ, ಸ್ಟೈಲ್! ಸಹಜ ಸಮೃದ್ಧದ ಅಧ್ಯಕ್ಷ ಎನ್.ಆರ್.ಶೆಟ್ಟಿ ಹೇಳುತ್ತಾರೆ - 'ಆಹಾರ ಔಷಧಿಯಾಗಬೇಕಿತ್ತು. ಆದರೀಗ ಔಷಧಿಯೇ ಆಹಾರವಾಗಿದೆ'!
ಹೌದಲ್ಲ. ಭತ್ತದಲ್ಲಿ ಎಷ್ಟೊಂದು ವಿಧ-ವೈವಿಧ್ಯ. ಒಂದೊಂದು ರೋಗಕ್ಕೆ ಒಂದೊಂದು ಭತ್ತ. ಬಾಣಂತಿಗೊಂದು, ಸಕ್ಕರೆ ಕಾಯಿಲೆಗೊಂದು, ರಕ್ತದ ಒತ್ತಡದ ಶಮನಕ್ಕೆ ಮತ್ತೊಂದು.. ಇದರ ಅನ್ನವನ್ನು ಸೇವಿಸಿದರೆ ರೋಗಶಮನ. ಗದ್ದೆಗಳೇ ಇಲ್ಲದ ಮೇಲೆ ಭತ್ತವೆಲ್ಲಿ! ಮಾತ್ರೆಗಳೇ ಆಹಾರ! ಒಬ್ಬೊಬ್ಬರ ಹೊಟ್ಟೆಯೊಳಗೆ ಏನಿಲ್ಲವೆಂದರೂ ದಿನಕ್ಕೆ ಕಾಲು ಕಿಲೋ ಗುಳಿಗೆಗಳು ಇಳಿಯುತ್ತವೆ.

ಆರುವತ್ತೈದಕ್ಕೂ ಮಿಕ್ಕಿ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿರುವ ಅಮೈ ದೇವರಾವ್, ಎಪ್ಪತ್ತು ದೇಸೀ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡುತ್ತಿರುವ ಮಂಡ್ಯದ ಬೋರೇಗೌಡರ 'ಅನ್ನದ ಬಟ್ಟಲ ಮಾತುಕತೆ' - ಕೇಳಿ ಮರೆಯುವಂತಹುದಲ್ಲ. ಬೋರೇಗೌಡರಿಗೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನಾಲ್ಕೆಕ್ರೆ ಗದ್ದೆ. ಮಾಧ್ಯಮಗಳಲ್ಲಿ ಬರುವ ಯಶೋಗಾಥೆಗಳ ಹಿಂದೆ ಬಿದ್ದು 'ಭತ್ತದ ಹುಚ್ಚು' ಹಿಡಿಸಿಕೊಂಡವರು. ಇತ್ತ ತಮಿಳುನಾಡು, ಅತ್ತ ಒರಿಸ್ಸಾಕ್ಕೂ ಹೋಗಿ ಭತ್ತದ ಮಾದರಿಗಳನ್ನು ತಂದು ಬೆಳೆದ ಸಾಹಸಿ.
ಭತ್ತದ ಋತು ಮುಗಿದ ಬಳಿಕವೂ ಗದ್ದೆಯ 'ಡೆಮೋ' ಇರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. 'ಇಪ್ಪತ್ತು ದೇಶಗಳ ರೈತರು, ವಿಜ್ಞಾನಿಗಳು ನನ್ನ ಗದ್ದೆಗೆ ಬಂದು ನೋಡಿ ಹೋಗಿದ್ದಾರೆ. ಆದರೆ ಅನತಿ ದೂರದ ಕೃಷಿ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಸಂಶೋಧನಾ ಕೇಂದ್ರಕ್ಕೆ ಈ ವಿಚಾರ ತಿಳಿದಿಲ್ಲ. ಅವರು ಬರಲೂ ಇಲ್ಲ' ಎನ್ನುತ್ತಾರೆ ಬೋರೇಗೌಡರು. ನಮ್ಮ ಸಂಶೋಧನೆಗಳು, ವಿಜ್ಞಾನಿಗಳಿಗೆ ರೈತರ ಹೊಲ, ಬೆವರಿನ ಕತೆಗಳು ಬೇಕಾಗಿಲ್ಲ. ತಮ್ಮ ನಾಲ್ಕು ಗೋಡೆಯ ಮಧ್ಯೆ ಕಂಡುಕೊಂಡ 'ಮಹಾಸತ್ಯ'ವೇ ಅಂತಿಮ! ಹಾಗಾಗಿ ನೋಡಿ - ಸಂಶೋಧನೆ, ವಿಜ್ಞಾನಿ, ರೈತ - ಈ ಸರಳರೇಖೆಗಳು ಎಲ್ಲೂ ಸಂಧಿಸುವುದೇ ಇಲ್ಲ.

'ಎಂತಹ ಬರವೇ ಬರಲಿ, ನಾನು ಮಾತ್ರ ವರುಷಪೂರ್ತಿ ಮೂರು ಹೊತ್ತು ಉಣ್ಣುತ್ತೇನೆ' - ಅಮೈ ದೇವರಾಯರ 'ಗಟ್ಟಿ' ಮಾತು! ಅವರಿಗೆ ವಿಶ್ವಾಸವಿದೆ - ನಾನು ಬೆಳೆದ ಅಕ್ಕಿಯನ್ನು ಉಣ್ಣುವುದಕ್ಕಿಂತ ಹೆಚ್ಚಿನ ಸಂತೃಪ್ತಿ, ನೆಮ್ಮದಿ ಬೇರೇನಿದೆ?
'ನನ್ನ ಅನ್ನಕ್ಕೆ ಪ್ರತ್ಯೇಕ ರುಚಿ. ಯಾವುದೇ ಸಮಾರಂಭಕ್ಕೆ ಹೋದರೂ ಅನ್ನ ರುಚಿಸುವುದಿಲ್ಲ. ನನಗೀಗ ಅರುವತ್ತೈದು ವರುಷ. ಈಗಲೂ ನನ್ನ ಆಹಾರ ಅನ್ನ-ಗಂಜಿ, ಚಪಾತಿಯಲ್ಲ! ಭತ್ತದಷ್ಟು ಶೀಘ್ರ ಇಳುವರಿ ಕೊಡುವ ಬೇರೆ ಯಾವ ಕೃಷಿಯಿದೆ? ಮೂರೇ ತಿಂಗಳಲ್ಲಿ ಇಳುವರಿ ನಿಮ್ಮ ಅಂಗಳಕ್ಕೆ! ಭತ್ತದ ಕೃಷಿ ಲಾಭವಿಲ್ಲದಿದ್ದರೂ ನಷ್ಟವಿಲ್ಲ. ವರ್ಷಪೂರ್ತಿ ಉಣ್ಣಬಹುದಲ್ಲಾ ಮಾರಾಯ್ರೆ - ದೇವರಾಯರ ವಿಶ್ವಾಸದ ಮಾತು. ಇದು ಅನುಭವದಿಂದ ರೂಢಿತವಾದ ವಿಶ್ವಾಸ. ಅಡಿಕೆಗಾಗಿಯೇ ದೊಡ್ಡದೊಡ್ಡ ಅಂಗಳ ಮಾಡ್ತೀರಲ್ಲಾ - ಅಡಿಕೆ ಸಿಪ್ಪೆ ಹಾಸಿ, ಅದರ ಮೇಲೆ ಮಣ್ಣನ್ನು ಹಾಕಿ ಭತ್ತದ ಕೃಷಿ ಮಾಡಬಹುದಲ್ಲಾ - ಮನಸ್ಸು ಬೇಕಷ್ಟೇ. ದೇವರಾಯರ ಹಿರಿ ಕಿವಿಮಾತು, 'ಮಾಜಿ ಭತ್ತದ ಕೃಷಿಕ'ರನ್ನು ಚುಚ್ಚದೆ ಬಿಡದು!

ಮನೆಯ ಚಾವಡಿಯಲ್ಲಿ, ಗದ್ದೆ ಹುಣಿಗಳಲ್ಲಿ, ಊರಿನ ಅಶ್ವತ್ಥಕಟ್ಟೆಯ ಬುಡದಲ್ಲಿ ಎಷ್ಟು ಕೃಷಿ ಮಾತುಕತೆಗಳು ನಡೆದಿಲ್ಲ? ಈಗ ಮನೆಗಳಿಗೆ ಚಾವಡಿಗಳೇ ಇಲ್ಲ, ಗದ್ದೆಯಿಲ್ಲದ ಮೇಲೆ ಹುಣಿಗಳೆಲ್ಲಿ? ಅಶ್ವತ್ಥ ಮರವು ಸಮೂಲ ನಾಶವಾಗಿದೆ? ಹಾಗಾಗಿ ಇಂತಹ ಮಾತುಕತೆಗಳೆಲ್ಲಾ ಮೌನವಾಗಿವೆ! ಅವಕ್ಕೆ ಮಾತುಕೊಡುವ ದಿವಸಗಳು ಬಂದಿದೆ.

Wednesday, April 28, 2010

ಕತ್ತೆಗೂ 'ಕತ್ತೆ ಕೆಲಸ'!


ಬದುಕಿನಲ್ಲಿ 'ಕತ್ತೆ ಕೆಲಸ' ಅಂತ ಮಾತಿದೆ. ಅಂದರೆ ಅವಿರತವಾಗಿ ಕೆಲಸ ಮಾಡುವವ. ಕತ್ತೆಗೂ ಕೂಡಾ ಈ ಮಾತು ಅನ್ವಯ. ತನ್ನನ್ನು ನಂಬಿದ ಯಜಮಾನನ ಕುಟುಂಬ ಒಂದೆಡೆ, ತನ್ನ ಬಹಿರ್ದೆಶೆಯನ್ನು ಗೊಬ್ಬರವಾಗಿ ಬಳಸುವ ತೋಟದೆಜಮಾನ ಮತ್ತೊಂದೆಡೆ.

ತುಮಕೂರು ಜಿಲ್ಲೆಯ ಬಹುತೇಕ ತೆಂಗಿನ ತೋಟದಲ್ಲಿ ಗೊಬ್ಬರಕ್ಕಾಗಿ 'ಕತ್ತೆ ಕಟ್ಟುವುದು' ಅತ ಒಂದು ಕೃಷಿಪದ್ಧತಿಯಿದೆ. ನೂರು ಕತ್ತೆಗಳ ಒಂದು ಗುಂಪನ್ನು ಇಂದು ಒಂದೆಡೆ ಕಟ್ಟಿದರೆ, ನಾಳೆ ಅದರ ಪಕ್ಕ. ಹೀಗೆ ವಿವಿಧ ಹಂತಗಳಲ್ಲಿ ಕಟ್ಟುತ್ತಾರೆ. ಅವುಗಳ ಮಲಮೂತ್ರ ಮಣ್ಣಿಗೆ ಸೇರಿ ತೆಂಗಿಗೆ ಉತ್ತಮ ಗೊಬ್ಬರ. ತೋಟದ ವಿಸ್ತೀರ್ಣ ಹೆಚ್ಚಿದಷ್ಟೂ 'ಕತ್ತೆ ಕಟ್ಟುವ' ದಿವಸಗಳು ಹೆಚ್ಚಾಗುತ್ತದೆ. ಇಂತಿಷ್ಟು ದಿವಸ ಅಂತ ಮೊದಲೇ ನಿರ್ಧಾರ.

ಕತ್ತೆಗೆ ದಿನವೊಂದಕ್ಕೆ ಮೂರು ರೂಪಾಯಿ ಸಂಬಳ! ಕತ್ತೆಯ ರಕ್ಷಣೆ, ಆರೈಕೆ ಕತ್ತೆಯ ಯಜಮಾನನದ್ದು. ಬೆಳಿಗ್ಗೆ ಒಂಭತ್ತರಿಂದ ಸಂಜೆ ತನಕ ಕೆರೆಯ ದಂಡೆ, ರಸ್ತೆ ಬದಿಗಳಲ್ಲಿ ಕತ್ತೆಗಳನ್ನು ಮೇಯಿಸಿ, ಸಂಜೆಯಾಗುತ್ತಲೇ ಮೋದಲೇ ನಿಶ್ಚಯವಾದ ತೋಟದಲ್ಲಿ ಕಟ್ಟುತ್ತಾರೆ. ಅಕಸ್ಮಾತ್ ಕತ್ತೆ ತಪ್ಪಿಸಿ ಪಕ್ಕದ ತೋಟಕ್ಕೆ ನುಗ್ಗಿ ಹಾಳುಮಾಡಿದರೆ, ಐನೂರು ರೂಪಾಯಿ ಜುಲ್ಮಾನೆಯನ್ನು ಕತ್ತೆಯೊಡೆಯನಿಗೆ!

ಕತ್ತೆ ಕಟ್ಟುವುದರಲ್ಲೂ ಜಾಣ್ಮೆಯಿದೆ. ಆಚೀಚೆ ಗೂಟಗಳನ್ನು ಊರಿ ನೆಲಮಟ್ಟದಲ್ಲಿ ಹಗ್ಗವನ್ನು ಬಿಗಿಯುತ್ತಾರೆ. ಹಗ್ಗಕ್ಕೆ ಎದುರುಬದುರಾಗಿ ಕತ್ತೆಗಳನ್ನು ನಿಲ್ಲಿಸಿ, ಅವುಗಳ ಕಾಲನ್ನು ಹಗ್ಗಕ್ಕೆ ಸೇರಿಸಿ ಕಟ್ಟುತ್ತಾರೆ. ಇದರಿಂದಾಗಿ ಅವುಗಳು ತಪ್ಪಿಸಲಾರವು.
ಮಳೆಗಾಲದಲ್ಲಿ ತೋಟದ ಯಜಮಾನ ಸೂರು ನಿರ್ಮಿಸಿಕೊಡುತ್ತಾರೆ. ಮೊದಲು ಅರ್ಧಡಿ ಮಣ್ಣನ್ನು ಹಾಕಿ ಸಮತಟ್ಟು ಗೊಳಿಸುತ್ತಾರೆ. ಇದರ ಮೇಲೆ ಎಂಟು ದಿವಸ ಕತ್ತೆಗಳ ವಸತಿ. ಪುನಃ ಇನ್ನರ್ಧಅಡಿ ಮಣ್ಣಿನ ಪಾಯ. ಪುನಃ ಕತ್ತೆ ಕಟ್ಟುವುದು. ಒಂದು ತಿಂಗಳಾಗುವಾಗ 'ಕತ್ತೆ ಗೊಬ್ಬರ' ಸಿದ್ಧ! ಹೀಗೆ 'ಕತ್ತೆ ಕಟ್ಟಿದರೆ' ತಲೆಗೆ ಐವತ್ತು ಪೈಸೆ ಕಡಿಮೆ!

ಕತ್ತೆಯ ಬದಲಿಗೆ ಕುರಿಗಳನ್ನು ಕಟ್ಟುತ್ತಾರೆ. ಕುರಿಗಾದರೆ ಅವುಗಳು ತಪ್ಪಿಸದಂತೆ ಅತ್ತಿತ್ತ ಒಯ್ಯುಬಹುದಾದ ರೆಡಿಮೇಡ್ ಬೇಲಿ ಬೇಕಾಗುತ್ತದೆ. ಒಂದು ರಾತ್ರಿ ಒಂದೆಡೆ, ನಾಳೆ ಅದರ ಪಕ್ಕ. ಐನೂರು ಕುರಿಗಳ ಮಂದೆ. ಒಂದು ಕುರಿಗೆ ಒಂದು ರಾತ್ರಿಗೆ ಒಂದು ರೂಪಾಯಿ!

'ಕಳೆದ ಇಪ್ಪತ್ತು ವರುಷಗಳಿಂದ ನಮ್ಮ ತೋಟಕ್ಕೆ ಕುರಿ ಕಟ್ತೀವಿ. ಇದಕ್ಕಾಗಿಯೇ ವರುಷಕ್ಕೆ ಒಂದು ಲಕ್ಷ ಬೇಕು' ಬಿಳಿಗೆರೆಯ ಕೃಷಿಕ ವೆಂಕಟರಾಮ್ ಅನುಭವ.

ಬಿಳಿಗೆರೆ ಸುತ್ತಮುತ್ತ 'ಕುರಿ ಕಟ್ಟುವ' ಆರು ಮಂದಿಯಿದ್ದಾರೆ. ಇವರು ಬೇರೆಡೆಯಿಂದ ಬಂದವರು. ಮಳೆಗಾಲದಲ್ಲಿ ತಮ್ಮೂರಿಗೆ ಹೊರಟುಹೋಗುತ್ತಾರೆ. ಕತ್ತೆಗಿಂತ ಕುರಿಯಲ್ಲಿ ಲಾಭ ಹೆಚ್ಚು. ಕತ್ತೆ ಒಂದು ವರುಷಕ್ಕೆ ಒಂದೇ ಮರಿ. ಕುರಿಯಾದರೆ ಮೂರ್ನಾಲ್ಕು.ಅದರ ಮಾರಾಟವು ಹೆಚ್ಚುವರಿ ಬೋನಸ್.

ಬಿಳಿಗೆರೆಯಲ್ಲಿ ಎರಡು 'ಕತ್ತೆ ಬ್ಯಾಚ್' ಇದೆ. ಎಲ್ಲವೂ ಮುಂಗಡ ಬುಕ್ಕಿಂಗ್. ಹಾಗಾಗಿ ಎಲ್ಲರಿಗೂ ಪೂರೈಸಲು ತ್ರಾಸ ಎನ್ನುತ್ತಾರೆ ಒಂದು ಕತ್ತೆ ಮಂದೆಯೊದರ ಮಾಲಿಕ ಮಂಜಣ್ಣ. ಇವರಜ್ಜ ಹೊನ್ನಪ್ಪರ ಬಳುವಳಿಯಿದು. ಮೆಟ್ರಿಕ್ ಓದಿದ ಮಗ ರಂಗಸ್ವಾಮಿಗೂ 'ಕತ್ತೆ ಕಾಯುವ' ಹುಮ್ಮನಸ್ಸು.

ಹೊಸದಾಗಿ ಮಂದೆ ಹೊಂದಲು ಬಂಡವಾಳ ಬೇಕು. ಒಂದು ಕತ್ತೆಗೆ 1000-1500 ರೂಪಾಯಿ ದರ. ಮಧುಗಿರಿ ಸುತ್ತ ಮುತ್ತ ಲಭ್ಯ. 'ವಯಸ್ಸಾದಾಗ ದುಡಿಯಲು ಕಷ್ಟಪಡುತ್ತವೆ. ಆಗ ಅದನ್ನು ಬದಲಿಸುತ್ತಿರಬೇಕು. ಹೊಸದಾಗಿ ಕತ್ತೆಮಂದೆಯನ್ನು ಹೊಂದಲು ಒಮ್ಮೆಗೆ ಬಂಡವಾಳ ಹಾಕಿದರೆ ಸಾಕು, ಐದು ವರುಷಕ್ಕೆ ಚಿಂತೆಯಿಲ್ಲ' ಮಂಜಣ್ಣ ಹೇಳುತ್ತಾರೆ.

ಹೇಳುವಂತಹ ರೋಗವಿಲ್ಲ. ಅಪರೂಪಕ್ಕೆ ಸಾಯುವುದಿದೆ. ಈ ಸಂಖ್ಯೆ ಹತ್ತು ತಲುಪಿದಾಗ ಒಮ್ಮೆ 'ರೀಫಿಲ್'! ಹೊಸಬರು ಈ ಕೆಲಸಕ್ಕೆ ಮುಂದೆ ಬರುವುದಿಲ್ಲ. ಮೊದಲು ಕತ್ತೆ ಕಟ್ಟುತ್ತಿರುವವರು ಸಣ್ಣಪುಟ್ಟ ಜಮೀನು ಹೊಂದಿದ್ದಾರೆ. ಕೆಲವರು ವಿದ್ಯಾಭ್ಯಾಸಕ್ಕಾಗಿ ನಗರ ಸೇರಿದ್ದಾರೆ.

ಕತ್ತೆಯ ಹೆಗಲ ಮೇಲೆ ಮಣ್ಣಿನ ಚೀಲ ನೀರಿನ ಚೀಲಗಳನ್ನು ಸಾಗಿಸುತ್ತಾರೆ. ಮಣ್ಣನ್ನು ಸಾಗಿಸಲು ಹೆಚ್ಚಾಗಿ ಬಳಕೆ. ಈಗೀಗ ದೈತ್ಯ ಯಂತ್ರಗಳಿಂದಾಗಿ ಈ ಕೆಲಸಕ್ಕೆ ವಿಶ್ರಾಂತಿ. ಮಣ್ಣು ಸಾಗಿಸುವುದು ಶ್ರಮದ ಕೆಲಸ. ಕತ್ತೆಗಲ್ಲ, ಕತ್ತೆಕಾಯುವವನಿಗೆ! ಪ್ರತೀ ಸಲವೂ ಮಣ್ಣಿನ ಚೀಲವನ್ನು ಕತ್ತೆಗಳ ಮೇಲೇರಿಸಿ, ಅವುಗಳನ್ನು ಇಳಿಸುವ ವರೆಗೂ ಕಾಯುವವ ಜತೆಗಿರಬೇಕು. ತುಂಬಾ ಶ್ರಮಬೇಡುವ ಕೆಲಸವಾದ್ದರಿಂದ ಕತ್ತೆಗಳು ತೋಟವನ್ನು ಫಲವತ್ತಾಗಿ ಮಾಡಿದರೆ ಸಾಕು!

ತೋಟದ ಒಡೆಯನೇ ಕತ್ತೆಯನ್ನು ಯಾಕೆ ಹೊಂದಬಾರದು? ಜತೆಗಿದ್ದ ಮಹಾಲಿಂಗಯ್ಯನವರು ಹೇಳುತ್ತಾರೆ - 'ಅವುಗಳ ನಿರ್ವಹಣೆ ಕಷ್ಟ. ಅವರಿಗದು ಹುಟ್ಟು ವೃತ್ತಿ. ಉಳಿದವರು ಕಲಿತಾಗಬೇಕು. ಅವುಗಳ ನಿರ್ವಹಣೆ, ಸಹವಾಸ ಕಷ್ಟ. ಒಂದು ದಿವಸ ಎಡವಟ್ಟಾದರೂ ತೊಂದರೆ ತಪ್ಪಿದಲ್ಲ'.

ರಾಸಾಯನಿಕ, ಸಾವಯವ, ಶೂನ್ಯ ಕೃಷಿ ಎಂದು ಬಡಿದಾಡುವ ಮನುಷ್ಯರನ್ನು ನೋಡಿ ಹೇಳುತ್ತವೆ - 'ನಮ್ಮನ್ನು ಕಟ್ಟಿ ನೋಡಿ - ಶುದ್ಧ ನೈಸರ್ಗಿಕ ಗೊಬ್ಬರ ಮಾಡಿ ಕೊಡುತ್ತೇವೆ'!

Tuesday, April 13, 2010

ರಾಜಧಾನಿಯಲ್ಲಿ ಸಾವಯವ ಹುಡುಕಾಟ!

ಸಕ್ಕರೆ ಕಾಯಿಲೆಯವರು ಬಳಸಬಹುದಾದ 'ಡಯಾಬಿಟೀಸ್ ರೈಸ್' ಕೇಳಿದ್ದೀರಾ, ಬಾಣಂತಿ ಬತ್ತ ನೋಡಿದ್ದೀರಾ? ಸದಾ ಪಾಲಿಶ್ ಅಕ್ಕಿ ತಿಂದು ಬೇಸರವೇ! ಜವಾರಿ ಭತ್ತದ ಅಕ್ಕಿ ತಿಂದು ಕುಟುಂಬವನ್ನು ರೋಗ ರುಜಿನಗಳಿಂದ ಮುಕ್ತಗೊಳಿಸಲು ಆಸಕ್ತಿಯೇ? ಅಕ್ಕಿಗೊಂದು, ಅವಲಕ್ಕಿಗೊಂದು, ತಂಬಿಟ್ಟಿಗೊಂದು, ರೊಟ್ಟಿಗೆ ಮತ್ತೊಂದು, ಕಜ್ಜಾಯಕ್ಕೆ ಇನ್ನೊಂದು, ಚಕ್ಕುಲಿಗೆ.. ಹೀಗೆ ಅಡುಗೆ ಮನೆಯಲ್ಲಿ ಬಳಸುವ ಅಕ್ಕಿಗಳು ನೂರಾರು..

ರಾಜಧಾನಿಯ ಗಾಂಧಿ ಭವನದಲ್ಲಿ ಜರುಗಿದ 'ಭತ್ತ ಉತ್ಸವ'ದಲ್ಲಿ ಸಹಜ ಸಮೃದ್ಧದ ಜಿ.ಕೃಷ್ಣಪ್ರಸಾದ್ ಅಕ್ಕಿಯ ವಿಶ್ವರೂಪವನ್ನು ತೆರೆದಿಡುತ್ತಿದ್ದರು. ಇತ್ತ ಮಳಿಗೆಯಲ್ಲಿ 'ಬಾಣಂತಿ ಭತ್ತದ ಬೀಜ ಬೇಕಾಗಿತ್ತು, ರಾಜಮುಡಿ ಇದೆಯಾ? 'ನವರ' ಎಲ್ಲಿ ಸಿಗುತ್ತೆ? ಗಂಧಸಾಲೆ, ಜೀರಿಗೆ ಸಾಂಬ, ಘಂಗಡಲೆ, ಕರಿಭತ್ತ, ಕರಿಗಜಿವಿಲಿ, ಕಪ್ಪುಅಕ್ಕಿ..ಗಳ ಕುರಿತು ಮಾಹಿತಿ ಇದೆಯಾ? ಒಂಚೂರು ಬೀಜ ಸಿಗಬಹುದಾ? - ಹೀಗೆ ಅನೇಕರ ಬೆರಗು ಪ್ರಶ್ನೆಗಳು.

'ಸಹಜ ಸಮೃದ್ಧ' ಸಾವಯವ ಕೃಷಿಕರ ಸಂಸ್ಥೆಯು ಸಹಯೋಗಕಾರರೊಂದಿಗೆ ಭತ್ತ ಉತ್ಸವವನ್ನು ನಗರದ ಮಧ್ಯೆ ಇಟ್ಟುಕೊಂಡಿತ್ತು. ಹಿಂದಿನ ಎಲ್ಲಾ ಉತ್ಸವಗಳು ಬಹುತೇಕ ಹಳ್ಳಿಗಳಲ್ಲೇ ನಡೆಯುತ್ತಿದ್ದುವು. 'ನಗರದ ಜನಗಳಿಗೆ ಭತ್ತದ ವೈವಿಧ್ಯವನ್ನು ತೋರಿಸುವುದೇ ಈ ಉತ್ಸದವ ಉದ್ದೇಶ' ಎನ್ನುತ್ತಾರೆ ಕೃಷ್ಣಪ್ರಸಾದ್.

ಸಹಜ ಸಮೃದ್ಧವು 'ಭತ್ತ ಉಳಿಸಿ ಆಂದೋಳನ'ದ ಜತೆಗೂಡಿ ಕಣ್ಮರೆಯಾಗುತ್ತಿರುವ ಅಪರೂಪದ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿದೆ. ಇವರೊಂದಿಗೆ ಕನ್ನಾಡಿನ ಭತ್ತ ಸಂರಕ್ಷಕರು ಕೈಜೋಡಿಸುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ದೇಸಿ ಭತ್ತದ ತಳಿಗಳನ್ನು ಬೆಳೆಯುತ್ತಿದ್ದಾರೆ. ದೊಡ್ಡಪ್ರಮಾಣದಲ್ಲಿ ಸಾವಯವ ಭತ್ತ ಉತ್ಪಾದನೆಯಾಗುತ್ತಿದೆ.

ಪಾಲಿಶ್ ಅಕ್ಕಿಯನ್ನು ತಿಂದು, ರಾಸಾಯನಿಕ ಹಾಕಿದ-ವಿಷ ಸಿಂಪಡಿಸಿದ ಭತ್ತವನ್ನು ಅಡುಗೆ ಮನೆಯೊಳಗೆ ತಂದಿರುವುದರ ಪರಿಣಾಮ, ಒಂದಲ್ಲ ಒಂದು ಕಾಯಿಲೆಗಳು ಶರೀರ ಹೊಕ್ಕಿವೆ. ನಮ್ಮೊಳಗಿದ್ದು ಕ್ಷಣಕ್ಷಣಕ್ಕೂ ನಮ್ಮನ್ನು ತಿನ್ನುತ್ತಿವೆ. ಯಾವ ಔಷಧಿಗೂ ಬಗ್ಗುವುದಿಲ್ಲ, ಒಗ್ಗುವುದಿಲ್ಲ. 'ನಮ್ಮ ಹೊಲ ಸಾವಯವ ಆದರೆ ಸಾಲದು, ನಮ್ಮ ಅಡುಗೆ ಮನೆಗಳೂ ಸಾವಯವವಾಗಬೇಕು. ವೈಯಕ್ತಿಕವಾಗಿ ನಾವೂ ಸಾವಯವವಾಗಬೇಕು' ಪತ್ರಕರ್ತ ಶಿವಾನಂದ ಕಳವೆ ಸಿಕ್ಕಾಗಲೆಲ್ಲಾ ಈ ಮಾತನ್ನು ಹೇಳುತ್ತಿರುವುದರ ಉದ್ದೇಶವೇ ಅದು.

'ಸಾವಯವದ ಕುರಿತು ಹುಡುಕಾಟ ಶುರುವಾಗಿದೆ. ಮುಖ್ಯವಾಗಿ ನಗರದ ಮಂದಿ ಸಾವಯವ ಉತ್ಪನ್ನವನ್ನು ಬಯಸುತ್ತಾರೆ. ಅವರಿಗೆ ಸಿಗುವಂತೆ ಮಾಡಬೇಕಾದುದು ನಮ್ಮ ಆಂದೋಳನದ ಮುಂದಿನ ಗುರಿ' ಎನ್ನುತ್ತಾರೆ ಸಹಜ ಸಮೃದ್ಧದ ಅಧ್ಯಕ್ಷ ಎನ್.ಆರ್.ಶೆಟ್ಟಿ.

ಭತ್ತದ ಉತ್ಸವದ ಕೆಲವು ಹೈಲೈಟ್ಸ್ಗಳನ್ನು ಶೆಟ್ಟರು ಕಟ್ಟಿ ಕೊಟ್ಟದ್ದು ಹೀಗೆ - ಆಯುರ್ವೇದ ವೈದ್ಯರೊಬ್ಬರಿಗೆ ಔಷಧೀಯ ಅಕ್ಕಿಯೆಂದರೆ ಅದು 'ನವರ' ಅಂತ ಗೊತ್ತಿತ್ತು. ಎಲ್ಲಿ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಅದನ್ನು ಹುಡುಕಿಕೊಂಡು ಬಂದಿದ್ದರು. ಹಲವು ಮಂದಿ ಆಯುರ್ವೇದ ಡಾಕ್ಟರ್ಗಳು ಇಂತಹುದೇ ತಳಿ ಬೇಕೆಂದು ಪಟ್ಟು ಹಿಡಿದು ಬೇಡಿಕೆ ಸಲ್ಲಿಸಿದ್ದರು. ಡಾಕ್ಟರ್ಗಳಿಗೆ ವಿಷಮುಕ್ತ ಆಹಾರದ ಅರಿವು ಬಂದುಬಿಟ್ಟರೆ; ತಮ್ಮ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಈ ಕುರಿತಾದ ಅರಿವು ಹರಿದುಬಿಡುತ್ತದೆ. ಇದೊಂದು ಒಳ್ಳೆಯ ಬೆಳವಣಿಗೆ.

ಕೊಡಗಿನ ಕೆ.ಆರ್.ಪುರದಿಂದ ಭತ್ತ ಬೆಳೆಯುವ ರೈತರು 'ಔಷಧೀಯ, ಪರಿಮಳಯುಕ್ತ ಭತ್ತದ ಬೀಜ ಕೊಡಿ. ನಾವು ಬೆಳೆದ ಕೊಡ್ತೀವಿ. ಮುಂದಿನ ಸಲ ನಮ್ಮಲ್ಲಿ ಭತ್ತದ ಉತ್ಸವ ಮಾಡಿ' ಅಂದರು. ಡಯಾಬಿಟೀಸ್, ಸಕ್ಕರೆ ಕಾಯಿಲೆಗೆ ಬಳಸುವ ಅಕ್ಕಿಯಿದೆ ಎಂದಷ್ಟೇ ಗೊತ್ತು. ಯಾವುದೆಂದು ಗೊತ್ತಿರಲಿಲ್ಲ - ಇಲ್ಲಿಗೆ ಬಂದಾಗ ಅದು 'ದೊಡ್ಡ ಬೈರನೆಲ್ಲು' ಕೆಂಪಕ್ಕಿ ಅಂತ ಗೊತ್ತಾಯಿತು - ಸಂತಸ ಹಂಚಿಕೊಂಡರು ಬಸನಗೌಡರು.

'ಉತ್ಸವದಲ್ಲಿ ಶುದ್ಧ ಅಕ್ಕಿಯೋ, ಭತ್ತವೋ ಸಿಗುತ್ತೆ ಅಂತ ಕೈಯಲ್ಲಿ ಸ್ವಲ್ಪ ದುಡ್ಡನ್ನಿಟ್ಟುಕೊಂಡು ಬಂದಿದ್ದೆ. ಇಲ್ಲಿ ಸ್ವಲ್ಪವಷ್ಟೇ ಸಿಕ್ಕಿತು' ಅಂತ ನೆಲಮಂಗಳದ ಮಹಾಲಕ್ಷ್ಮೀಯವರ ಸಾತ್ವಿಕ ಸಿಟ್ಟು! ಇವರಂತೆ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಒಯ್ಯಲು ಬಂದವರ ಸಂಖ್ಯೆ ಜಾಸ್ತಿ ಇತ್ತು.

ಒಂದೇ ಹೊತ್ತಲ್ಲಿ ಹದಿಮೂರು ಕ್ವಿಂಟಾಲ್ ಅಕ್ಕಿ ಖಾಲಿ' ಎನ್ನುತ್ತಾರೆ ಕೃಷ್ಣಪ್ರಸಾದ್. ಇಷ್ಟೊಂದು ಪ್ರಮಾಣದಲ್ಲಿ ಜನರಿಂದ ಬೇಡಿಕೆ ಬರುತ್ತೇಂತ ಗೊತ್ತಿರಲಿಲ್ಲ ಅನ್ನುತ್ತಾರೆ. ಇವೆಲ್ಲಾ 'ಭತ್ತ ಉತ್ಸವ'ದ ಫಲಶೃತಿಗಳು. ಉತ್ಸವಗಳ ಹಿಂದಿನ ಆಶಯಗಳು ಅಡುಗೆ ಮನೆಯಲ್ಲಿ ಚರ್ಚೆಯಾಗಲು ಸುರುವಾಗಿದೆ. ನಮ್ಮ ಆಹಾರದಲ್ಲಿ 'ನಾವೆಲ್ಲೋ ತಪ್ಪಿದ್ದೇವೆ' ಎನ್ನುತ್ತಾ ಬಾಳಿನ ಪುಟಗಳನ್ನು ತೆರೆದು ನೋಡುವ ಪ್ರಕ್ರಿಯೆ ಆರಂಭವಾಗಿದೆ!

ಸಹಜ ಸಮೃದ್ಧವು ಮೂವತ್ತಕ್ಕೂ ಮಿಕ್ಕಿ ಭತ್ತದ ತಳಿಯನ್ನು ಪ್ರದರ್ಶನಕ್ಕಿಟ್ಟಿತ್ತು. ತುಮಕೂರಿನ ಭೂಮಿ ಸಂಸ್ಥೆಯು ಚೌಳು ನಿರೋಧಕ ದೇಸಿ ಭತ್ತದ ತಳಿಗಳಾದ ಬಿಳಿ ತೋಕದಡ್ಲು, ಕಾಸರನೆಲ್ಲು, ಸಣ್ಣಕೊಡ್ಲು, ಸಣ್ಣನೆಲ್ಲು, ಮುಳುಭತ್ತ, ಕರಿತೋಕವಡ್ಲುತಳಿಗಳನ್ನು ತೋರಿಸುತ್ತಿದರು. ಹೊಳೆನರಸೀಪುರದ ಸಾವಯವ ಕೃಷಿಕರ ಸಂಘ, ಹರಿಹರ-ಕುಂಬಳೂರಿನ ಶರಣ ಮುದ್ದಣ ಸಾವಯವ ಕೃಷಿಕರ ಬಳಗಗಳು ತಂತಮ್ಮೂರಿನ ವಿವಿಧ ತಳಿಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಆಸಕ್ತರನ್ನು ಸೆಳೆದಿತ್ತು.

ಉತ್ಸವದಲ್ಲಿ ಭಾಗವಹಿಸಿದ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರು, 'ನನ್ನಲ್ಲಿ ಅನೇಕ ಮಂದಿ ಡಾಕ್ಟರ್ಗಳು ಸಾವಯವ ಅಕ್ಕಿ, ಗಸೋಧಿಯ ಬಗ್ಗೆ ಸಂದರ್ಭ ಸಿಕ್ಕಾಗಲೆಲ್ಲಾ ಮಾತನಾಡ್ತಾರೆ. ತಂದು ಕೊಡಿ ಅಂತ ಕೇಳ್ತಾರೆ. ತೆಕ್ಕೊಳ್ಳುವವರು ಇದ್ದಾರೆ. ಪೂರೈಕೆ ವ್ಯವಸ್ಥೆ ಆಗಬೇಕು. ಹಾಪ್ಕಾಮ್ಸ್ನಂತೆ ಸಾವಯವ ಉತ್ಪನ್ನಗಳಿಗೂ ದೊಡ್ಡ ಮಟ್ಟದ ಮಳಿಗೆಯ ಆವಶ್ಯಕತೆ ಇದೆ.' ಎಂದರು. ಕೃಷಿ ಕುಟುಂಬದಿಂದ ವಿಧಾನಸಭೆಯ ಮೆಟ್ಟಲೇರಿದ ಶೋಭಕ್ಕ, ಕೃಷಿ ಸಂಸ್ಕೃತಿಯಿಂದ ರೂಪುಗೊಂಡವರು. ಅವರು ಮನಸ್ಸು ಮಾಡಿದರೆ ಕಷ್ಟವಲ್ಲ. ಚಿಟಿಕೆ ಹೊಡೆವಷ್ಟೇ ಕೆಲಸ!

Tuesday, April 6, 2010

ಭೂರಹಿತನ ಕೃಷಿ-ಬದುಕು!


ಕಂಠೇಶ್ - ಅರಣ್ಯ ಇಲಾಖೆಯ ನರ್ಸರಿಯಲ್ಲಿ ಮಾಲಿ. ಮೂಲತಃ ಕಡೂರಿನವರು. ಪಾಲಿಗೆ ಬಂದ ಎರಡೆಕ್ರೆಯ ಹೊಲದ ಯಜಮಾನ. ಅದರ ಪಾಲನೆಯನ್ನು ಸಹೋದರರಿಗೆ ಬಿಟ್ಟುಕೊಟ್ಟು 'ಹೆಚ್ಚು' ಸಂಪಾದನೆಯ ನಿರೀಕ್ಷೆಯಲ್ಲಿ ಸೇರಿಕೊಂಡುದು ಮೂಡಿಗೆರೆ ಸನಿಹದ ಫಲ್ಗುಣಿಯ ಸಚ್ಚೇನಹಳ್ಳಿ ಸರಕಾರಿ ನರ್ಸರಿಗೆ!

ಹದಿಮೂರು ವರುಷದ ಹಿಂದೆ ಇನ್ನೂರ ಎಂಭತ್ತು ರೂಪಾಯಿ ಸಂಬಳದ ದುಡಿಮೆಯೀಗ ಅಬ್ಬಬ್ಬಾ ಅಂದರೆ ಮೂರು ಸಾವಿರ ರೂಪಾಯಿಗೇರಿದೆ. ಪತ್ನಿ, ಮೂವರು ಮಕ್ಕಳು. ನರ್ಸರಿಯಲ್ಲೇ ಚಿಕ್ಕ ಗುಡಿಸಲು. ಸನಿಹದಲ್ಲೇ ಭಾವನ ಕುಟುಂಬ. ಅವರೂ ನರ್ಸರಿಯಲ್ಲಿ ಮಾಲಿ. ಒಂಭತ್ತು ಸದಸ್ಯರ ಒಗ್ಗಟ್ಟಿನ ಜೀವನ.

ನರ್ಸರಿಯ ಗಿಡಗಳ ಆರೈಕೆ-ರಕ್ಷಣೆ ಕಂಠೇಶರ ಮುಖ್ಯ ಕಾಯಕ. ಇಲಾಖೆ ನೀಡುವ ಮಾರ್ಗದರ್ಶನ, ಸೂಚಿಸುವ ಗೊಬ್ಬರ-ಸಿಂಪಡಣೆ-ಗಿಡಗಳನ್ನಷ್ಟೇ ಬಳಸಿ ಗಿಡ ತಯಾರಿ.

ಮೂರು ವರುಷದ ಹಿಂದೆ ಫಲ್ಗುಣಿಗೆ ಸರಕಾರದ ಸಾವಯವ ಯೋಜನೆಗಳ ಅನುಷ್ಠಾನಕ್ಕೆ ಬಂದ 'ಭೂಮಿ ಅಭಿವೃದ್ಧಿ ಸುಸ್ಥಿರ ಸಂಸ್ಥೆ'ಯ ಸಂಪರ್ಕ-ಒಡನಾಟ. ಸಭೆಗಳಲ್ಲಿ ಭಾಗಿ. ಎರೆಗೊಬ್ಬರ ತಯಾರಿಯ ಮಾಹಿತಿ. ಸ್ವಂತದ್ದಾದ ಜಮೀನು-ಮನೆ ಇಲ್ಲದ ಕಾರಣ ಯಾವ ಪ್ಯಾಕೇಜ್ಗಳಿಗೂ ಕಂಠೇಶ್ ಅನರ್ಹರು. ಇವರ 'ವಿಶೇಷಾಸಕ್ತಿ'ಗೆ ಮಾನ್ಯತೆ ನೀಡಿದ ಭೂಮಿ ಸಂಸ್ಥೆಯು ಎರೆತೊಟ್ಟಿ ನಿರ್ಮಿಸಲ್ಲು ಸಹಕಾರ ನೀಡಿತು.

ಸಾವಯವದ ಕುರಿತು ಕಂಠೇಶ್ರಿಗೆ ಗೊತ್ತಿತ್ತು. ಸ್ವತಃ ಮಾಡಿ ನೋಡುವ ಕುತೂಹಲ. ತಮ್ಮ ಮನೆಯ ಮುಂದೆ ಮೂವತ್ತಾರು 'ವಿಶೇಷ ತಳಿ'ಯ ಹಲಸಿನ ಮರಗಳಿವೆ. ಬಿದ್ದ ಹಲಸಿನ ಎಲೆಗಳನ್ನು ಬಳಸಿ ಎರೆಗೊಬ್ಬರ ತಯಾರಿಗೆ ನಾಂದಿ.
ಎರಡು ಹಸುಗಳು. ಅದರ ಸೆಗಣಿ, ಗಂಜಲ ಕಚ್ಚಾವಸ್ತು. ಒಂದು ಎರೆಗೊಬ್ಬರ ತೊಟ್ಟಿ. ಮತ್ತೊಂದು ಕಾಂಪೋಸ್ಟ್ ತೊಟ್ಟಿ. ತಯಾರಾದ ಗೊಬ್ಬರವನ್ನು ನರ್ಸರಿಗೆ ಬಳಸಿದರು. ಮೊದಲು 'ಸರಕಾರಿ ಗೊಬ್ಬರ' ತಿಂದು ಬೆಳೆದದ್ದಕ್ಕಿಂತಲೂ ಸೊಂಪಾಗಿ ಗಿಡಗಳು ಮೇಲೆದ್ದುವು!

'ಕಳೆದ ವರುಷ ಒಂದು ಟನ್ ಗೊಬ್ಬರ ಮಾರಿದೆ. ತಮ್ಮ ನರ್ಸರಿಗೆ ಬಳಸಿ ಮಿಕ್ಕುಳಿದದ್ದನ್ನು ಮಾರಲು ಹಿರಿಯಧಿಕಾರಿಗಳು ಒಪ್ಪಿದ್ದಾರೆ' ಎನ್ನುವ ಕಂಠೇಶ್, 'ಎರೆಗೊಬ್ಬರ ಬಳಸಿದ್ದರಿಂದ ಗಿಡಗಳಿಗೆ ರೋಗ ಕಡಿಮೆ. ಸರಕಾರದ ನರ್ಸರಿ ಅಲ್ವಾ. ಅವರು ಕೊಡುವ ಸಿಂಪಡಣೆಯನ್ನು ಒಮ್ಮೆಯಾದರೂ ಕೊಡಬೇಡ್ವಾ'!

ಈ ವರುಷ ಎರಡು ಟನ್ ಗೊಬ್ಬರದ ನಿರೀಕ್ಷೆ. ಒಂದು ಕಿಲೋ ಗೊಬ್ಬರಕ್ಕೆ ಮೂರುವರೆ ರೂಪಾಯಿಯಂತೆ ಮಾರಾಟ. ನರ್ಸರಿಗೆ ಬಳಸಿದ್ದಕ್ಕೆ ಇಲಾಖೆ ಎರಡು ರೂಪಾಯಿ ನೀಡುತ್ತದೆ. 'ಮನೆ, ಜಾಗ, ಅವಕಾಶ ನೀಡಿದ್ದಾರಲ್ಲಾ' ದನಿಗೂಡಿಸುತ್ತಾರೆ ಕಂಠೇಶ್. ಎರೆಗೊಬ್ಬರಕ್ಕೆ ಹಲಸು ಮತ್ತು ನೇರಳೆ ಗಿಡಗಳು ಬಹುಬೇಗ ಸ್ಪಂದಿಸುತ್ತವೆ. ಎರೆಗೊಬ್ಬರವನ್ನು ಹುಡುಕಿ ಬರುವ ಅಡಿಕೆ-ಮೆಣಸು ಕೃಷಿಕರು ಇವರಿಗೆ ಗಾಹಕರು.

ಹಲಸಿನ ಒಣ ಎಲೆಯು ಬೇಗ ಕರಗುವ ಸಾಮಥ್ರ್ಯ ಹೊಂದಿದ್ದು ಎರಡೇ ತಿಂಗಳಲ್ಲಿ ಗೊಬ್ಬರ ಸಿಗುತ್ತದಂತೆ. ಸಾಮಾನ್ಯವಾಗಿ ಎರೆಗೊಬ್ಬರ ತಯಾರಾಗಲು ಮೂರುವರೆ ತಿಂಗಳು ಬೇಕೇ ಬೇಕು.

ಕಂಠೇಶ್ ಮನೆಬಳಕೆಗಾಗಿ ತರಕಾರಿ ಬೆಳೆದಿದ್ದಾರೆ. ಸೀಮೆಬದನೆ, ಟೊಮೇಟೊ, ಮೆಣಸು.. ಹೀಗೆ. ಬೇಸಿಗೆಯಲ್ಲಿ ನೀರಿಗೆ ತತ್ವಾರ. ಸ್ವ-ಆಸಕ್ತಿಯಿಂದ ನರ್ಸರಿ ಗಿಡಗಳನ್ನೂ ಮಾಡುತ್ತಿದ್ದಾರೆ. ಎಲ್ಲಾ ಸೇರಿ ಸಂಬಳದಷ್ಟೇ ಇಲ್ಲಿನ ಉತ್ಪನ್ನಗಳು ಕೈಗೆ ಬರುತ್ತವೆ.
ನರ್ಸರಿ ಗಿಡಗಳನ್ನು ತಯಾರಿಸುವ ಹೊತ್ತಿಗೆ ಕೊಟ್ಟಿಗೆ ಗೊಬ್ಬರವನ್ನು ಹೊರಗಿನಿಂದ ಖರೀದಿಸುತ್ತಾರೆ. ಇದನ್ನು ಮಣ್ಣು-ಮರಳಿನೊಂದಿಗೆ ಪ್ಲಾಸ್ಟಿಕ್ ತೊಟ್ಟೆಗೆ ಹಾಕಿ ಗಿಡ ನಾಟಿ. ಗಿಡ ಬೆಳೆಯುತ್ತಿದ್ದಂತೆ ಗೊಬ್ಬರದೊಂದಿಗೆ ಬಂದ ಕೆಲವು ಸೊಪ್ಪು ತರಕಾರಿಗಳ ಬೀಜ ಮೊಳಕೆಯೊಡೆದು ಸಸಿಯಾಗಿ ನಿತ್ಯದೂಟಕ್ಕೆ ಸುಗ್ರಾಸವಾಗುತ್ತಿದೆ!
ದನಗಳ ಹೊಟ್ಟೆ ಸೇರಿದ ಬೀಜಗಳಿಗೆ ಚೆನ್ನಾಗಿ 'ಬೀಜೋಪಚಾರ'ವಾಗುವುದಿಂದ ಸೊಪ್ಪು ಚೆನ್ನಾಗಿ ಬರುತ್ತದೆ. ರುಚಿಯೂ ಕೂಡಾ ಎನ್ನುತ್ತಾರೆ ಜಯಮ್ಮ ಕಂಠೇಶ್. ಏನಿಲ್ಲವೆಂದರೂ ಹದಿನೈದಕ್ಕೂ ಮಿಕ್ಕಿ ಸೊಪ್ಪು ತರಕಾರಿಗಳು ಸಿಕ್ಕೇ ಸಿಗ್ತವೆ. ಹರಿವೆ, ಮುಳ್ಳರಿವೆ, ಕೀರೆ, ಗೋಣಿಸೊಪ್ಪು, ಬೆರಕೆ ಸೊಪ್ಪು, ಕತ್ತಿ ಸೊಪ್ಪು, ಕೋಳಿಕಾಲು ಸೊಪ್ಪು.. ಹೀಗೆ. 'ಸಾರ್. ಸುತ್ತಮುತ್ತ ಇವೆಲ್ಲಾ ನೋಡೋಕೆ ಸಿಗೊಲ್ಲ. ಅಪರೂಪದ್ದು' ಜತೆಗಿದ್ದ ಭೂಮಿಯ ರವಿ ಪಿಸುಗುಟ್ಟಿದರು.

ನರ್ಸರಿಯಲ್ಲಿರುವ ಮೂವತ್ತಾರು ಹಲಸಿನ ಮರಗಳು ಒಂದೊಂದರಲ್ಲಿ 150-200 ಹಣ್ಣುಗಳು ಬಿಡುತ್ತವೆ. ಅವೆಲ್ಲಾ ಬೀಜಕ್ಕಾಗಿ. ಗಿಡ ಅಭಿವೃದ್ಧಿ ಮಾಡಲು. 'ಒಂದು ಎಲೆಯೂ ನನ್ನ ಕಣ್ತಪ್ಪಿಸಿ ಹೋಗದು. ಒಂದೊಂದು ಎಲೆಯೂ ನನಗೆ ಪೈಸೆಗೆ ಸಮಾನ' - ಕಂಠೇಶ್.

'ಬೆಳೆಯವ ಮನಸ್ಸು ಬೇಕು. ಸ್ವಂತ ಮಾಡುವ ಛಲ ಬೇಕು. ಇಲ್ಲದಿದ್ದರೆ ಮೂರು ಸಾವಿರ ಬಿಡಿ, ಹನ್ನೆರಡು ಸಾವಿರ ಸಿಕ್ಕರೂ ಜೀವನಕ್ಕೆ ಸಾಲದು' ಎನ್ನುವಾಗ ಬದುಕಿನ ಅನಿವಾರ್ಯತೆ, ಸವಾಲನ್ನು ಎದುರಿಸುವ ಕಂಠೇಶರ ಛಲ ಮಿಂಚಿ ಮರೆಯಾಯಿತು.
ಸ್ವಂತದ್ದಾಗ ಮನೆ, ಭೂಮಿಯಿದ್ದರೂ ಕೃಷಿಯೆಂದರೆ 'ಅದೊಂದು ಅವಮಾನ' ಅಂತ ಭಾವಿಸುವ ಪ್ರಸ್ತುತ ಕಾಲಘಟ್ಟದಲ್ಲಿ, ಯಾವುದೇ ಗೊಣಗಾಟವಿಲ್ಲದೆ 'ಕೃಷಿಯನ್ನು ಮಾಡುತ್ತಿರುವ' ಕಂಠೇಶ್ ಪ್ರತ್ಯೇಕವಾಗಿ ಕಾಣುತ್ತಾರೆ.

Wednesday, March 31, 2010

ಅಡಿಕೆಯನ್ನಾಧರಿಸಿದ ತೊಂಡೆಕೃಷಿ

'ಈಗಿನ ಅಡಿಕೆ ಬೆಲೆಯನ್ನು ನೋಡಿದರೆ, ಅಡಿಕೆಕೃಷಿಗಿಂತ ತರಕಾರಿ ಕೃಷಿ ಒಳ್ಳೆಯದು' ಎನ್ನುತ್ತಾರೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಸನಿಹದ ಎ.ಸುಬ್ರಹ್ಮಣ್ಯ ಭಟ್. ಇವರಿಗೆ ಮುಖ್ಯ ಕೃಷಿ ಅಡಿಕೆ. ಜತೆಗೆ ಬಾಳೆ, ಭತ್ತ, ತರಕಾರಿ. ದಿನನಿತ್ಯದ ಕೃಷಿ ನಿರ್ವಹಣಾ ವೆಚ್ಚವನ್ನು ತರಕಾರಿ ಭರಿಸುತ್ತದೆ.

ಕಳೆದ ೩-೪ ವರುಷದಿಂದ ತೊಂಡೆಕಾಯಿ ಇವರಿಗೆ ಆದಾಯ ತರುವ ಉಪಕೃಷಿ. ಸನಿಹದ ಪುತ್ತೂರು ಮುಖ್ಯ ಮಾರುಕಟ್ಟೆ. ವಾರಕ್ಕೆ ಸರಾಸರಿ ಆರರಿಂದ ಏಳು ಕ್ವಿಂಟಾಲ್ ಇಳುವರಿ. ಕಿಲೋಗೆ ಸರಾಸರಿ 6 ರೂಪಾಯಿ ದರದಂತೆ ಮಾರಾಟ. ಸೀಸನ್ನಲ್ಲಿ ಇಪ್ಪತ್ತಾರು ಸಿಕ್ಕಿದ್ದೂ ಇದೆ!

ತೊಂಡೆ ಕೃಷಿಯಲ್ಲಿ 'ಮಾಡಿ-ನೋಡಿದ' ಸ್ವ-ಅನುಭವ. ತೊಂಡೆ ಕೃಷಿಯ ಅನುಭವಿ ಗುಂಡಿಮಜಲು ಗೋಪಾಲ ಭಟ್ ಇವರಿಗೆ ಪ್ರೇರಣೆ. ಎರಡೂವರೆ ಅಡಿ ಅಗಲ, ಮೂರುವರೆ ಅಡಿ ಉದ್ದ, ಮೂರಡಿ ಅಳದ ಹೊಂಡ. ಇದರೊಳಗೆ ಸುಡುಮಣ್ಣು ಮಿಶ್ರಮಾಡಿದ ಮಣ್ಣಿನ ಅರ್ಧಡಿ ಎತ್ತರದ ಮಡಿ.

ಚಪ್ಪರಕ್ಕೆ ಹಬ್ಬಿದ ಚೆನ್ನಾಗಿ ಇಳುವರಿ ಬರುವ ಅರ್ಧ ಇಂಚು ದಪ್ಪದ ಬಳ್ಳಿಯಲ್ಲಿ ಒಂದಡಿ ಬಳ್ಳಿಯನ್ನು ತುಂಡರಿಸಿ, ಅದರಲ್ಲಿ ಒಂದು ಗಂಟು ಮಣ್ಣಿನೊಳಗಿರುವಂತೆ ನೆಡುವುದು. 'ಒಂದು ಹೊಂಡದಲ್ಲಿ ಕನಿಷ್ಠ ಐದು ಬಳ್ಳಿ ನೆಡಿ. ಕ್ರಮೇಣ ಎರಡೋ ಮೂರೋ ಬದುಕುಳಿಯುತ್ತದೆ. ಮೂಲ ಬಳ್ಳಿಯಿಂದ ಕಟ್ ಮಾಡಿದ ಇಪ್ಪತ್ತನಾಲ್ಕು ಗಂಟೆಯ ಒಳಗೆ ನೆಡಬೇಕು' ಎನ್ನುತ್ತಾರೆ ಎ.ಎಸ್.ಭಟ್. ಬುಡದಿಂದ ಬುಡಕ್ಕೆ ಮತ್ತು ಸಾಲಿನಿಂದ ಸಾಲಿಗೆ ಇಪ್ಪತ್ತಡಿ ಅಂತರ.

ಬಳ್ಳಿ ಚಿಗುರು ಬಂದ ನಂತರ ಅವಕ್ಕೆ ಆಧಾರ ಕೊಟ್ಟು, ಒಂದು ಬುಡಕ್ಕೆ ಎರಡು ಬುಟ್ಟಿಯಂತೆ ಹಟ್ಟಿಗೊಬ್ಬರ ಉಣಿಕೆ. ಇಪ್ಪತ್ತೇ ದಿವಸಕ್ಕೆ ಬಳ್ಳಿ ಹಬ್ಬಲು ಸುರು. ಚಪ್ಪರಕ್ಕೆ ಬಳ್ಳಿ ಹಬ್ಬಲು ಸುರುವಾದ ನಂತರ ಬುಡದ ಹೊಂಡ ಮುಚ್ಚುವಂತೆ ವಾರದಲ್ಲಿ ಮೂರು ದಿವಸ ನೀರು ನಿಲ್ಲಿಸುತ್ತಾರೆ. 'ಯಾವುದೇ ಕಾರಣಕ್ಕೂ ತೊಂಡೆ ಬಳ್ಳಿಯ ಬುಡ ಒಣಗಿರಬಾರದು. ತೇವವಾಗಿರಬೇಕು' ಇವರ ಅನುಭವದ ಮಾತು.

ತಿಂಗಳೊಳಗೆ ಹೂ ಬಿಡುತ್ತದೆ. ಈ ಹಂತದಲ್ಲಿ ಹೇನು, ನೊಣ ಬಂದುಬಿಡುತ್ತದೆ. ಅದಕ್ಕೆ 1:5ರ ಅನುಪಾತದಲ್ಲಿ ಗೋಮೂತ್ರದ ಸಿಂಪಡಣೆ. 'ಸಮತಟ್ಟಾದ ಭೂಮಿಯಲ್ಲಿ ಕೀಟಗಳ ಹಾವಳಿ ಜಾಸ್ತಿ. ಹಾಗಾಗಿ ತೊಂಡೆಕೃಷಿಗೆ ಇಳಿಜಾರಾದ ಭೂಮಿ ಒಳ್ಳೆಯದು. ಕೀಟ ಬಾಧೆ ಕಡಿಮೆ.'

ಇವರ ತೊಂಡೆ ಇಳುವರಿಯ ಲೆಕ್ಕಾಚಾರ - ಒಂದು ಬುಡದಲ್ಲಿ ಆರಂಭದ ದಿವಸಗಳಲ್ಲಿ ಒಂದು ವಾರಕ್ಕೆ ಎರಡು ಕಿಲೋದಿಂದ ಇಳುವರಿ ಆರಂಭ. ಬಳ್ಳಿಗೆ ಎರಡು ತಿಂಗಳು ಕಳೆದಾಗ ವಾರಕ್ಕೆ 5-7 ಕಿಲೋ ಸಿಗುತ್ತದೆ. ನಂತರದ ದಿವಸಗಳಲ್ಲಿ 15-17 ಕಿಲೋ ಖಚಿತ. ವಾರಕ್ಕೆ ಎರಡು ಕೊಯಿಲು. ಈ ಹಂತದಲ್ಲಿ ಗಿಡ ಸದೃಢವಾಗಲು ಮತ್ತು ಇಳುವರಿ ಜಾಸ್ತಿಯಾಗಲು ಒಂದೊಂದು ಬುಡಕ್ಕೆ ಒಂದು ಕಿಲೋದಷ್ಟು ರಾಸಾಯನಿಕ ಗೊಬ್ಬರ ಉಣಿಕೆ. ವಾರಕ್ಕೆ ಎರಡು ಕೊಯಿಲು ಮಾಡಿದರೆ ಗಿಡದಲ್ಲೇ ತೊಂಡೆಕಾಯಿ ಹಣ್ಣಾಗುವ ಸಾಧ್ಯತೆ ಕಡಿಮೆ. ಜನವರಿ-ಫೆಬ್ರವರಿ ತಿಂಗಳಲ್ಲಿ ಇಳುವರಿ ಕಡಿಮೆ.

ಎರಡೆಕ್ರೆ ಜಾಗದಲ್ಲಿ 72 ತೊಂಡೆ ಬುಡಗಳಿವೆ. ಜೂನ್ ತಿಂಗಳಲ್ಲಿ ನಾಟಿ. ನೀರು, ಗೊಬ್ಬರ, ಕೊಯಿಲು ಮತ್ತು ಇತರ ನಿರ್ವಹಣಾ ಕೆಲಸಕ್ಕೆ ವಾರಕ್ಕೆ ಇಪ್ಪತ್ತು ಮಂದಿಯ ಶ್ರಮ. 'ಕಳೆದ ವರುಷ ಸುಮಾರು ಒಂದೂಕಾಲು ಲಕ್ಷ ರೂಪಾಯಿ ತೊಂಡೆ ಗಳಿಸಿಕೊಟ್ಟಿದೆ. ಇದರಲ್ಲಿ ನಲವತ್ತು ಸಾವಿರದಷ್ಟು ಖರ್ಚು.’ ಎನ್ನುತ್ತಾರೆ.

ಶೇ.40ರಷ್ಟು ತೊಂಡೆಕಾಯಿ ಸಮಾರಂಭಗಳಿಗೆ ವಿತರಿಸುತ್ತಾರೆ. ಮಿಕ್ಕುಳಿದುದು ಪುತ್ತೂರಿನಲ್ಲಿ ಮಾರಾಟ. 'ಚಪ್ಪರದಲ್ಲಿ ಬಳ್ಳಿಗಳು ಯೂನಿಫಾರ್ಮಿನಲ್ಲಿದೆಯೋ ಎಂಬುದನ್ನು ಗಮನಿಸಬೇಕು. ಯಾವುದಾದರೂ ಬಳ್ಳಿ ಸೊರಗಿದರೆ ತಕ್ಷಣ ಗೊಬ್ಬರ, ನೀರು ಕೊಟ್ಟು ಆರೈಕೆ ಮಾಡಬೇಕು.'

ನೈಲಾನ್ ಹಗ್ಗ ಮತ್ತು ತಂತಿ ಬಳಸಿ ಚಪ್ಪರ. ಆರಂಭದಲ್ಲಿ ಅವರಿಗಾದ ವೆಚ್ಚ ಇಪ್ಪತ್ತು ಸಾವಿರ ರೂಪಾಯಿ. ಒಮ್ಮೆ ಚಪ್ಪರ ಹಾಕಿದರೆ ಮುಂದಿನ ಐದು ವರುಷಕ್ಕೆ ತೊಂದರೆಯಿಲ್ಲ. ಮತ್ತೆ ಪುನಃ ತಂತಿ, ಹಬ್ಬ ಬದಲಿಸಬೇಕು.

ಈ ವರುಷ ನೆಟ್ಟ ಹೊಂಡದಲ್ಲಿ ಮುಂದಿನ ವರುಷ ನೆಡುವುದಿಲ್ಲ. ಅದರ ಪಕ್ಕವೇ ಹೊಸ ಹೊಂಡದಲ್ಲಿ ನಾಟಿ. ನಂತರದ ವರುಷ ಹಳೆ ಹೊಂಡದಲ್ಲೇ ಪುನರಾವರ್ತನೆ. ಇದರಿಂದಾಗಿ ಇಳುವರಿಯಲ್ಲಿ ಹೆಚ್ಚಳ ಕಂಡಿದ್ದಾರಂತೆ. ಜತೆಗೆ ಮಣ್ಣಿನ ಫಲವತ್ತತೆಯೂ.
'ನಮ್ಮಲ್ಲಿಗೆ ಘಟ್ಟದ ಮೇಲಿನಿಂದ ತರಕಾರಿ ಬರುವುದು ಹೆಚ್ಚು. ಈಗೀಗ ಸಾಕಷ್ಟು ಕೃಷಿಕರು ತರಕಾರಿ ಕೃಷಿಯತ್ತ ಒಲವು ತೋರಿಸುತ್ತಿದ್ದಾರೆ. ಊರಿನ ತರಕಾರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕೆಲವೊಮ್ಮೆ ಪೂರೈಸಲು ಕಷ್ಟವಾಗುತ್ತಿದೆ. ನಾನು ಯಾವುದೇ ವಿಷ ಸಿಂಪಡಣೆ ಮಾಡದಿರುವುದರಿಂದ ತೊಂಡೆಕಾಯಿ ಖರೀದಿಸಲು ನನ್ನಲ್ಲಿಗೆ ಹುಡುಕಿ ಬರುತ್ತಾರೆ. ಅಡಿಕೆಯ ದರದ ಸೋಲನ್ನು ತೊಂಡೆ ಭರಿಸಿದೆ' ಎನ್ನುವಾಗ ಎ.ಎಸ್.ಭಟ್ಟರ ಮುಖ ಅರಳುತ್ತದೆ!