Wednesday, October 28, 2009

ಚಿತ್ತಕುಂಚದಲ್ಲಿ ಮಿಂದೆದ್ದ ಅಡಿಕೆಸಿಪ್ಪೆ ಚಿತ್ತಾರ


ಅಡಿಕೆ ಸಿಪ್ಪೆಯ ಈ ಚಿತ್ತಾರಗಳು ಕೇರಳದ ಅರಣ್ಮೂಲಾದ ಜಯಕೃಷ್ಣನ್ ಅವರ ಕೈಚಳಕ. ಮಣ್ಣಲ್ಲಿ ಮಣ್ಣಾಗಿ ಹೋಗುವ ಅಡಿಕೆ ಸಿಪ್ಪೆಗೆ ಅಂದವರ್ಧನೆ ಮಾಡುವುದರ ಮೂಲಕ ಮೌಲ್ಯವರ್ಧನೆ ಮಾಡಿದ್ದಾರೆ.
ಜಯಕೃಷ್ಣರಿಗೆ ಚಿತ್ರಕಲೆ ಬಾಲ್ಯಾಸಕ್ತಿ. ಇವರ ಕೈಯಿಂದ ಸ್ಕೆಚ್ ಪೆನ್ ತಪ್ಪುವುದೇ ಇಲ್ಲ! ಬಿಳಿ ಹಾಳೆ ಹಾಳೆಯಾಗಿಯೇ ಇರುವುದು ಇವರಿಗೆ ಇಷ್ಟವಾಗುವುದಿಲ್ಲ! ಅದರಲ್ಲಿ ಏನಾದರೊಂದನ್ನು ಬಿಡಿಸಿದರಷ್ಟೇ ಅವರಿಗೆ ಸಮಾಧಾನ. ಈ ಗೀಳು `ವಿಪರೀತ ಎನಿಸಿದರೂ, ಮಗನಲ್ಲಿದ್ದ ಅವ್ಯಕ್ತ ಕಲಾವಿದ ಅನಾವರಣಗೊಳ್ಳುತ್ತಿರುವುದನ್ನು ಕಂಡ ತಂದೆ-ತಾಯಿಯರಿಂದ ಪ್ರೋತ್ಸಾಹ.`
'ನನ್ನ ಅಜ್ಜನಿಗೆ ಬೀಡಾ ಅಂಗಡಿ ಇದೆ. ಏನಿಲ್ಲವೆಂದರೂ ವಾರಕ್ಕೆ ನೂರು ಅಡಿಕೆ ಬೀಡಾಕ್ಕೆ ಬೇಕು. ಒಮ್ಮೆ ಹೀಗಾಯಿತು - ಅಂಗಡಿಯ ಎದುರು ಅಡಿಕೆ ಸಿಪ್ಪೆ ಬಿಸಾಡಿದ್ದರು. ನನಗದು ಹಕ್ಕಿ ಬಾಲದಂತೆ ಕಂಡಿತು. ಇದನ್ಯಾಕೆ ಚಿತ್ತಾರ ಮಾಡಬಾರದು? ರಟ್ಟಿನಲ್ಲಿ ಹಕ್ಕಿಯಾಕಾರದ ಸ್ಕೆಚ್ ಸಿದ್ದವಾಯಿತು. ಅಡಿಕೆ ಸಿಪ್ಪೆಯನ್ನು ಅದಕ್ಕೆ ಅಂಟಿಸುತ್ತಾ ಜೀವಕಳೆ. ಧ್ಯೆರ್ಯ ಬಂತು. ಹಕ್ಕಿ ಕುಟುಂಬವೊಂದನ್ನು ಇದರಿಂದ ತಯಾರಿಸಿದೆ. ಅದುವೇ ನನ್ನ ಮೊದಲ ಅಡಿಕೆ ಸಿಪ್ಪೆ ಚಿತ್ತಾರ ಎನ್ನುತ್ತಾರೆ ಜಯಕೃಷ್ಣನ್.
ಕಳೆದೆರಡು ವರುಷದಲ್ಲಿ ಇಪ್ಪತ್ತೈದಕ್ಕೂ ಮಿಕ್ಕಿದ ಚಿತ್ತಾರಗಳ ಸೃಷ್ಟಿ. ಗಣಪತಿ, ರಾಷ್ಟ್ರಪಿತ ಗಾಂಧೀಜಿ, ಡಾ.ಅಬ್ದುಲ್ ಕಲಾಂ, ರಾಜಾ ರವಿವರ್ಮನ ವರ್ಣಕೃತಿ, ಹುಲಿಮುಖ, ಸಿಂಹಮುಖ, ಗೂಬೆ, ಒಂಟೆಕುಟುಂಬ, ಹದ್ದು, ಜಿಂಕೆಯನ್ನು ಬೇಟೆಯಾಡುವ ನರಿ, ಅಳಿಲು, ಹಾವಿನ ಬೇಟೆಯಲ್ಲಿರುವ ಹದ್ದು.....ಚಿತ್ತಾರಗಳು `ಅಡಿಕೆ ಸಪ್ಪೆಯ ರಚನೆಗಳೋ ಎಂದು ನಿಬ್ಬೆರಗಾಗಿಸುತ್ತವೆ! ಅಷ್ಟು ಆಕರ್ಷಕ ಮತ್ತು ಸಹಜ ಗುಣ.
ಕನಿಷ್ಟ ಆರು ತಿಂಗಳಾದರೂ ನೀರಿನಲ್ಲಿದ್ದ ಹಣ್ಣಡಿಕೆಯ (ನೀರಡಿಕೆ) ಸಿಪ್ಪೆಯನ್ನು ಚಿತ್ತಾರಕ್ಕೆ ಆಯ್ದುಕೊಳ್ಳುತ್ತಾರೆ. ಸಾಮಾನ್ಯವಾಗಿ ಬೀಡಾ ಅಂಗಡಿಗಳಲ್ಲಿ ಈ ರೀತಿಯ ಅಡಿಕೆಯನ್ನೇ ಬಳಸುತ್ತಾರೆ. (ಹಣ್ಣಡಿಕೆಯನ್ನೂ ಬಳಸುತ್ತಾರೆ) `ತನ್ನ ಅಜ್ಜನ ಬೀಡಾ ಅಂಗಡಿಯ ಅಡಿಕೆ ಸಿಪ್ಪೆ ಈಗ ತ್ಯಾಜ್ಯವಾಗುವುದಿಲ್ಲ ಎನ್ನುವ ಜಯಕೃಷ್ಣನ್, ಹತ್ತಿರದ ಚೆಂಗನೂರು ಪೇಟೆಯಲ್ಲಿ ಅವರ ಆವಶ್ಯಕತೆಗೆ ಬೇಕಾದ ಅಡಿಕೆ ಸಿಪ್ಪೆ ಸಿಗುತ್ತಿದೆ.
ತನ್ನೂರಿನಲ್ಲಿ ಜರುಗಿದ ಪ್ರದರ್ಶನವೊಂದರಲ್ಲಿ ಚಿತ್ತಾಕರ್ಷಕವಾದ ಇವರ ಚಿತ್ತಾರಗಳಿಗೆ ಮಾರುಹೋದವರು ಅಧಿಕ. `ಹಣಕೊಟ್ಟು ಪಡಕೊಳ್ಳಲು ಹಲವು ಮಂದಿ ಮುಂದಾದರು. ನನ್ನಲ್ಲಿ ಅಷ್ಟು ಪ್ರಮಾಣದಲ್ಲಿ ಚಿತ್ತಾರಗಳಿಲ್ಲ. ತಯಾರಿಸಲು ಸಮಯವೂ ಬೇಕು. ನನ್ನ ವಿದ್ಯಾಭ್ಯಾಸದ ಮಧ್ಯದಲ್ಲಿ ಈ ಕೆಲಸವಾಗಬೇಕು. ಹಾಗಾಗಿ ಪ್ರದರ್ಶನದಲ್ಲಿ ಯಾರಿಗೂ ಚಿತ್ತಾರವನ್ನು ಮಾರಾಟ ಮಾಡಿಲ್ಲ. ಪ್ರದರ್ಶನದ ಕೊನೆಗೆ `ಮಾರಾಟಕ್ಕಿಲ್ಲ, ಪ್ರದರ್ಶನ ಮಾತ್ರ ಅಂತ ಫಲಕ ಹಾಕಬೇಕಾಯಿತು ಎಂದು ನೆನಪಿಸಿಕೊಳ್ಳುತ್ತಾರೆ.
`ಪ್ರಸಿದ್ಧ ದೇವಸ್ಥಾನವೊಂದರಲ್ಲಿದ್ದ ರಾಮಾಯಣ-ಭಾಗವತದ ಭಿತ್ತಿ ಚಿತ್ರಗಳನ್ನು ನೋಡಿ ಅದರ ಕಥೆಯನ್ನು ಅಮ್ಮ ಹೇಳಿದರು. ಅದರಿಂದ ರೂಪುಗೊಂಡಿತು - ಪೂತನಾಸಂಹಾರ ಮತ್ತು ಸೀತಾಪಹಾರ ದೃಶ್ಯಗಳ ಜಲವರ್ಣಚಿತ್ರಗಳು ಜಯಕೃಷ್ಣ. ಅರಣ್ ಮೂಲಾದ ವಾಸ್ತುವಿದ್ಯಾ ಗುರುಕುಲದಲ್ಲಿ `ಭಿತ್ತಿಚಿತ್ರಗಳನ್ನು ಜಯಕೃಷ್ಣ ಅಭ್ಯಸಿಸುತ್ತಿದ್ದಾರೆ. ಕಲಿಕೆಯೊಂದಿಗೆ ಬಿಡುವು ಮಾಡಿಕೊಂಡು `ಅಡಿಕೆ ಸಿಪ್ಪೆ ಅರಸುತ್ತಾರೆ, ಚಿತ್ತಾರಕ್ಕಾಗಿ. ಹಲವು ಬಹುಮಾನಗಳು ಅರಸಿ ಬಂದಿವೆ.
ಚಿತ್ರ ಯಾರಿಗೂ ಬಿಡಿಸಬಹುದು(!) ಅಂತ ಸುಲಭದಲ್ಲಿ ಹೇಳಿಬಿಡಬಹುದು. ಆದರೆ ಹಾಳಾಗಿ ಹೋಗುವ ಯಾರೂ ಅಷ್ಟಾಗಿ ಗಮನಿಸದ ಅಡಿಕೆ ಸಿಪ್ಪೆಯು ಚಿತ್ತಾರದ ಮೂಲಕ ತನ್ನ ಅಂದವನ್ನು ವೃದ್ಧಿಸಿಕೊಳ್ಳುವುದು ಒಂದು ಎಕ್ಸ್ಕ್ಲೂಸಿವ್ ಅಲ್ವಾ. ನೋಡುವ ಒಳಕಣ್ಣಿದ್ದರೆ ಜಯಕೃಷ್ಣನ್ ಶ್ರಮ ಆರ್ಥವಾಗುತ್ತದೆ.

0 comments:

Post a Comment