Sunday, December 20, 2009

ಮಾಣಿಯಲ್ಲಿ 'ಕೃಷಿ ಉತ್ಸವ'


ಬಂಟ್ವಾಳದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ 'ಕೃಷಿ ಉತ್ಸವ'ವು ಮಾಣಿಯಲ್ಲಿಂದು ಜರುಗಿತು. ಸಂಸದ ಶ್ರೀ ನಳಿನ್ ಕುಮಾರ್ ಕಟೀಲು ದೀಪ ಬೆಳಗಿಸಿ, ವೇದಿಕೆಯಲ್ಲಿ ಮುಂಭಾಗದಲ್ಲಿ ರೂಪಿಸಲಾಗಿದ್ದ 'ಬಾಕಿಮಾರು ಗದ್ದೆ'ಗೆ ಹಾಲೆರೆದು, ವೇದಿಕೆಯಲ್ಲಿದ್ದ ತುಳಸಿ ಕಟ್ಟೆಗೆ ದೀಪ ಜ್ವಲಿಸಿ ಉತ್ಸವಕ್ಕೆ ಚಾಲನೆ ಕೊಟ್ಟರು. ಶಾಸಕ ಶ್ರೀ ರಮಾನಾಥ ರೈ, ಹಿರಿಯರಾದ ಶ್ರೀ ಸಂಕಪ್ಪ ರೈ ವೇದಿಕೆಯಲ್ಲಿ ಉಪಸ್ಥಿತಿ.

ನಂತರ ವಿಚಾರ ಗೋಷ್ಠಿಗಳು. ವಿವಿಧ ವಿಚಾರಗಳ ಮಂಡನೆ. ಶ್ರೀ ಬಡೆಕ್ಕಿಲ ಶ್ಯಾಮಪ್ರಸಾದ್ ಶಾಸ್ತ್ರಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗಂಧ ಬೆಳೆದ ಕೃಷಿಕ. ಅವರ ಅನುಭವ ಕಥನ - ಇಡೀ ಕೃಷಿ ಉತ್ಸವದ ಹೈಲೈಟ್! ಪವರ್ ಪಾಯಿಂಟ್ ಮೂಲಕ ವಿಚಾರದ ಪ್ರಸ್ತುತಿ.

ನಲವತ್ತಕ್ಕೂ ಮಿಕ್ಕಿದ ಮಳಿಗೆಗಳು. ಕಬ್ಬಿನ ಹಾಲಿನಿಂದ ಸ್ಪ್ರೇಯರ್ ತನಕ! ತರಕಾರಿ ಬೀಜಗಳಿಗೆ ಸ್ವಲ್ಪ ಮಟ್ಟಿನ ಆಸಕ್ತಿ. ಮಹಿಳೆಯರ ಒಲವು ನರ್ಸರಿಗಳತ್ತ - ಹೂ ಗಿಡಗಳತ್ತ!

'ಇಂತಹ ಕೃಷಿ ಉತ್ಸವಗಳಿಂದ ಕೃಷಿಯತ್ತ ಹೆಚ್ಚು ಆಸಕ್ತಿ ಹುಟ್ಟಿಸುವ ಮತ್ತು ಕೃಷ್ಯುತ್ಪನ್ನಗಳಿಗೆ ಗ್ರಾಹಕರನ್ನು ಸೆಳೆಯುವ ಅಜ್ಞಾತ ಕೆಲಸವಾಗುತ್ತಿದೆ. ಇದೊಂದು ಖುಷಿ ಉತ್ಸವ' - ಒಂದೇ ವಾಕ್ಯದಲ್ಲಿ ಮೇಳದ ಆಶಯವನ್ನು ಕಟ್ಟಿಕೊಟ್ಟರು ನಳಿನ್ ಕುಮಾರ್ ಕಟೀಲ್.

ಒಟ್ಟೂ ವ್ಯವಸ್ಥೆಯಲ್ಲಿ ಅಚ್ಚುಕಟ್ಟು-ಶಿಸ್ತು ಉತ್ಸವದ ಧನಾಂಶ.






0 comments:

Post a Comment