Tuesday, April 21, 2015

ಮಲೇಶ್ಯಾ ಮೂಲದ ಹಳದಿ ಕಲ್ಲಂಗಡಿ!

                                                                   ಉತ್ತಮ ನೋಟ





         ಕಲ್ಲಂಗಡಿ ಹಣ್ಣಿನ ತಿರುಳು ಗಾಢ ಹಳದಿ!
        ಕೆಂಪು ವರ್ಣದ ತಿರುಳಿನ ಕಲ್ಲಂಗಡಿ ಹಣ್ಣು ನಮಗೆಲ್ಲಾ ಗೊತ್ತು. ಇದರ ಜ್ಯೂಸ್ ಬೇಸಿಗೆಯ ನೆಂಟ. ದಾಹ ಶಮನಕ್ಕೆ ಸಹಕಾರಿ. ವಿವಿಧ ಕಂಪನಿಗಳು ಬೀಜಗಳನ್ನು ಪೂರೈಸಿ ಬೆಳೆಸಲು ಪ್ರೋತ್ಸಾಹಿಸುತ್ತಿವೆ.
         ಇಲ್ಲಿ ನೋಡಿ, ಮಲೇಶ್ಯಾದಿಂದ ಹಳದಿ ತಿರುಳಿನ ಕಲ್ಲಂಗಡಿ ತಳಿಯೊಂದು ಹಾರಿ ಬಂದು ಕರಾವಳಿಯಲ್ಲಿ ಬೇರು ಬಿಟ್ಟಿದೆ.  ಉಡುಪಿ ಸನಿಹದ ಅತ್ರಾಡಿಯ ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯ, ಯುವ ಕೃಷಿಕ ಅನಿಲ್ ಬಳೆಂಜರಲ್ಲಿ ಬೆಳೆದಿದೆ. ಹಣ್ಣು ಬಿಟ್ಟಿದೆ.
       ನಮ್ಮೂರಿನಲ್ಲಿ ಬೆಳೆವ ಕಲ್ಲಂಗಡಿಯ ಗುಣವೇ ಹಳದಿಯದ್ದಕ್ಕಿದೆ. ಗಾತ್ರ, ಎಲೆಯ ಬಣ್ಣ, ಗಿಡದ ಬೆಳವಣಿಗೆಗಳಲ್ಲಿ ವ್ಯತ್ಯಾಸವಿಲ್ಲ. ಒಳಗಿನ ಹೂರಣ ಮಾತ್ರ ಕೆಂಪಿನ ಬದಲು ಹಳದಿ. ಆಕರ್ಷಕ ನೋಟ. ಸಾಧಾರಣ ಸಿಹಿ. ಸಿಪ್ಪೆ ತೆಳು. ಕಪ್ಪು ವರ್ಣದ ಬೀಜ.
       ಬಾಳ್ತಿಲ್ಲಾಯರ ಸಹೋದರ ಮಲೇಶ್ಯಾಕ್ಕೆ ಹೋಗಿದ್ದಾಗ ಹಣ್ಣು ಸೆಳೆದಿತ್ತು.  ಹಣ್ಣನ್ನು ತಿಂದು ಬೀಜವನ್ನು ತಂದಿದ್ದರು. ಮಲೇಶ್ಯಾ ಮೂಲದ ರಂಬುಟಾನ್ ಇಲ್ಲಿ ಹೇರಳವಾಗಿ ಬೆಳೆಯುತ್ತದೆ ಎಂದಾದರೆ ಕಲ್ಲಂಗಡಿಯೂ ಬೆಳೆಯಬಹುದು ಎನ್ನುವ ವಿಶ್ವಾಸ.
     ಅನಿಲರು ಪಡೆದ ನಾಲ್ಕು ಬೀಜಗಳಲ್ಲಿ ಮೂರು ಮೊಳಕೆ ಬಂದಿತ್ತು. ಕಳೆದ ವರುಷ ನಾಲ್ಕು ಕಾಯಿ ಕೊಟ್ಟಿತ್ತು. ಈ ವರುಷ ಹೂ ಬಿಡುತ್ತಿದೆ. ಕೆಲವು ಮಿಡಿಗಳು ಬಲಿಯಬೇಕಷ್ಟೇ. ಕಳೆದ ವರುಷ ವಿಪರೀತ ಹಣ್ಣಾದ ಬಳಿಕವೇ ಬಳಸಿದ್ದರಿಂದ ಸವಿಯ ಅನುಭವ ಆಗಿಲ್ಲ. ಅದರ ಗುಣ ಸ್ವಭಾವಗಳು ಗೊತ್ತಿಲ್ಲ. ಈ ವರುಷ ನೋಡಬೇಕು' ಎನ್ನುತ್ತಾರೆ ಅನಿಲ್. ಮೇ ಸುಮಾರಿಗೆ ಹಣ್ಣಾಗುವ ಸಾಧ್ಯತೆ ನಿಚ್ಚಳ. ಮಾಮೂಲಿ ಆರೈಕೆ. ಸೌತೆಕಾಯಿ ಸಾಲಿನ ಮಧ್ಯೆಯೂ ಬೆಳೆಸಬಹುದು.
        ಹೈಬ್ರಿಡ್ ತಳಿಗಳ ಭರಾಟೆಗಳ ಮಧ್ಯೆ ಸ್ಥಳೀಯ ತಳಿಗಳು ಅಜ್ಞಾತವಾಗಿವೆ. ಹೊಸತು ಹೆಜ್ಜೆಯೂರುತ್ತಿದೆ. ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಸಮಯದಲ್ಲಿ ಮಾರುವುದಕ್ಕಾಗಿಯೇ ಬೆಳೆಸುವ ಸ್ಥಳೀಯ ತಳಿಗಳ ವೈಭವದ ಕಾಲಮಾನಗಳು ಈಗ ಇತಿಹಾಸ. ಬಾಳ್ತಿಲ್ಲಾಯರು, ಅನಿಲ್ ಮೊದಲಾದ ಯುವ ಉತ್ಸಾಹಿಗಳು ಕೃಷಿ ರಂಗದಲ್ಲಿಂದು ಆಸಕ್ತಿಗಳನ್ನು ಜೀವಂತವಾಗಿಟ್ಟಿರುವುದರಿಂದ ಇಂತಹ ಹೊಸ ತಳಿಗಳ ಹುಡುಕಾಟ, ಅಭಿವೃದ್ಧಿ ಆಗುತ್ತಿರುತ್ತದೆ.
ಕಳೆದ ವರುಷ ಮುಳಿಯದಲ್ಲಿ ಜರುಗಿದ ಸಿರಿಧಾನ್ಯಗಳ ಕಾಯರ್ಾಗಾರದಲ್ಲಿ ಅನಿಲರು ಹಳದಿ ಕಲ್ಲಂಗಡಿಯನ್ನು ಪ್ರದರ್ಶನಕ್ಕಿಟ್ಟಿದ್ದರು. ಈಗ ಅಭಿವೃದ್ಧಿಯ ಹಂತದಲ್ಲಿದೆಯಷ್ಟೇ. ಬೀಜ ನೀಡುವ ಹಂತಕ್ಕೆ ತಲುಪಿಲ್ಲ, ಎಂದು ವಿನೀತರಾಗಿ ಹೇಳುತ್ತಾರೆ.

ಚಿತ್ರ, ಮಾಹಿತಿ : ಅನಿಲ್ ಬಳೆಂಜ

0 comments:

Post a Comment