Monday, August 2, 2021

'ಬಾಕಾಹು' ಆಂದೋಳನ : ಮರೆತ ವಿದ್ಯೆಗೆ ಮರುಜೀವ


 'ಈಗ ಕನ್ನಾಡಿನ ಅಮ್ಮಂದಿರು ಬಿರುಬಿಸಿಲಿಗೆ ಕಾಯುತ್ತಿದ್ದಾರೆ.' ಇದು ಹಾಸ್ಯಾಸ್ಪದ ವಾಕ್ಯವಲ್ಲ, ವಾಸ್ತವ. ಒಂದೂವರೆ ತಿಂಗಳಿನಿಂದ ಹಬ್ಬುತ್ತಿರುವ 'ಬಾಕಾಹು' ಅಲೆಯು ಮಳೆಗಾಲದಲ್ಲೂ ಬಿರು ಬಿಸಿಲಿಗಾಗಿ ಪ್ರಾರ್ಥಿಸುವಂತೆ ಮಾಡಿದೆ!

ಹಲಸಿನಂತೆ ಬದುಕಿನೊಳಗಿದ್ದು ಮರೆವಿಗೆ ಜಾರಿದ ಉತ್ಪನ್ನ 'ಬಾಕಾಹು'. ಇದೇನು, ಹೊಸದೆಂದು ಆಶ್ಚರ್ಯವಾಯಿತೇ? ಬಾಳೆ ಕಾಯಿಯ ಹುಡಿ - 'ಬಾಕಾಹು'. ಕೋವಿಡ್ ಲಾಕ್ಡೌನ್ ಅನ್ಲಾಕ್ ಆಗುತ್ತಿರುವಾಗ ಮರೆತ ವಿದ್ಯೆಗೆ ಮತ್ತೊಮ್ಮೆ ನೆನಪಿನ ಸ್ಪರ್ಶ. ಒಂದೆರಡು ಮನೆಯಲ್ಲಲ್ಲ, ಇಡೀ ಕನ್ನಾಡು ಹಾಗೂ ಕಾಸರಗೋಡು ಪ್ರದೇಶದ ಜಿಲ್ಲೆಗಳಲ್ಲಿ ತಂಗಾಳಿಯಂತೆ ಪಸರಿಸುತ್ತಿದೆ. ಹಿರಿಯರನ್ನು ಮಾತನಾಡಿಸಿದರೆ ಹಿಂದಿನಿಂದಲೂ ಬಾಳೆ ಕಾಯಿ ಹುಡಿಯು ಶಿಶು ಆಹಾರವಾಗಿ ಬಳಸಲ್ಪಡುತ್ತಿದ್ದುವು. ಇದು ತುಂಬಾ ಪೌಷ್ಟಿಕ ಆಹಾರ ಕೂಡಾ. ಮನೆಮಟ್ಟದಲ್ಲಿ ಮಾಡಬಹುದಾದ ಮೌಲ್ಯವರ್ಧಿತ ಉತ್ಪನ್ನ.

 ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಎಡ್ಮಿನ್ ಆಗಿರುವ ವಾಟ್ಸಪ್ ಬಳಗ 'ಏಟಿವಿ' (ಎನಿ ಟೈಮ್ ವೆಜಿಟೇಬಲ್). ಜೂನ್ ಕೊನೆ ವಾರ ತುಮಕೂರಿನ ಗೃಹಿಣಿ ನಯನಾ ಆನಂದ್ ಹಾಕಿದ ಒಂದು ಪೋಸ್ಟ್ ಬಾಕಾಹು ಆಂದೋಳನಕ್ಕೆ ಬೀಜಾಂಕುರವಾಯಿತು. ಅವರು ಬಾಳೆಕಾಯಿ ಹುಡಿ ಮತ್ತು ಅದರ ಕೆಲವು ಖಾದ್ಯಗಳನ್ನು ಚಿತ್ರ ಸಹಿತ ವಾಟ್ಸಿಪ್ಪಿಗೆ ಅಂಟಿಸಿದ್ದರು. ಅಲ್ಲಿಂದೀಚೆಗೆ ಹರಿದ ಬಂದ ಮಾಹಿತಿಗಳೆಲ್ಲವೂ ಕುತೂಹಲಕರ. 'ಬಾಕಾಹು'ವಿನ ಖಾದ್ಯಗಳ ವಿಶ್ವದರ್ಶನವಾಯತು. ಅವರವರು ಮಾಡಿ, ಸವಿದ ರಸರುಚಿಗಳನ್ನು ಹಂಚಿಕೊಂಡರು. ಒಬ್ಬರ ರುಚಿ ಫಾರ್ಮುಲಾ ಇನ್ನೊಬ್ಬರಿಗೆ ಸ್ಫೂರ್ತಿ ತುಂಬಿತು.

ಹೀಗೆ ಸಿದ್ಧವಾದ ಖಾದ್ಯಗಳು ಐವತ್ತಕ್ಕೂ ಮೀರಿವೆ. ತಾಲಿಪ್ಪಟ್ಟು, ರೊಟ್ಟಿ, ಕಡುಬು, ತೆಳ್ಳೇವು, ಉಪ್ಪಿಟ್ಟು, ಚಕ್ಕುಲಿ, ನಿಪ್ಪಟ್ಟು, ಪೂರಿ, ದೋಸೆ, ಬಿಸ್ಕೆಟ್, ಕುಕ್ಕೀಸ್ ಡ್ರೈ ಜಾಮೂನು, ಕೇಕ್, ಶಂಕರಪೊಳಿ, ಇಡ್ಲಿ, ದೂಡ್ಪೇಡಾ, ಗುಳಿಯಪ್ಪ, ಮಾಲ್ಟ್.. ಅಬ್ಬಾ, ಒಂದೇ ಎರಡೇ. 'ಬಾಳೆಕಾಯಿ ಹುಡಿಯು ನಮ್ಮ ಅಡುಗೆ ಮನೆಯಲ್ಲಿ ಇನ್ನು ತಪ್ಪದು.', 'ಬಿಸಾಕು ಕ್ರಯದಿಂದಾಗಿ ಹಾಳಾಗಿ ಹೋಗುತ್ತಿದ್ದ, ದನಗಳ ಮೇವಿಗೆ ಬಳಕೆಯಾಗುತ್ತಿದ್ದ ಬಾಳೆಕಾಯಿ ಇನ್ನು ಹುಡಿಯಾಗಿ ಉದರ ಸೇರುತ್ತದೆ'.. ಹೀಗೆ ಹತ್ತಾರು ಮಾತುಕತೆಗಳಿಗೆ ಚಾಲನೆ ದೊರಕಿತು.

 ಇಡೀ ಬಾಳೆಕಾಯಿ ಅಥವಾ ಸುಲಿದ ಬಾಳೆಕಾಯಿಯನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿ, ಬಿಸಿಲಿನಲ್ಲಿ ಒಣಗಿಸಿ, ಪುಡಿ ಮಾಡಿದರೆ ಆಯಿತು. 'ಬಾಕಾಹು' ರೆಡಿ. ಸುಲಿದ ಬಾಳೆಕಾಯಿ ಹುಡಿ ಅಚ್ಚ ಬಿಳಿಯದಾದರೆ, ಸಿಪ್ಪೆ ಸುಲಿಯದ್ದು ಕಂದು ಬಣ್ಣ. ಮನೆಮಟ್ಟದ ಬಳಕೆಗೆ ಮೇಲಿನ ಸಂಸ್ಕರಣೆ ಸಾಕು. ವಾಣಿಜ್ಯ ದೃಷ್ಟಿಯಿಂದ ಮಾಡುವುದಾದರೆ ಡ್ರೈಯರ್, ಪಲ್ವರೈಸರ್ ಬೇಕಾದೀತು. ಲೀಟರ್ ನೀರಿಗೆ ಕಾಲು ಲೀಟರ್ ಅನ್ನದಿಂದ ಬಸಿದ ತೆಳಿ, ಎರಡು ಚಮಚೆ ಉಪ್ಪು ಸೇರಿಸಿ. ಬಾಳೆಕಾಯಿಯ ಸಿಪ್ಪೆ ತೆಗೆದು ದ್ರಾವಣದಲ್ಲಿ ಕಾಲು ಗಂಟೆ ನೆನೆ ಹಾಕಿ. ಇದರಿಂದಾಗಿ ಅದರ ಅರುಚಿ ಮಾಯವಾಗಿ ಬಣ್ಣ ಬದಲದೆ ಉಳಿಯುತ್ತದೆ ಎನ್ನುವ ಸುಲಭ ಉಪಾಯವನ್ನು ಹಂಚಿಕೊಂಡವರು ಕೇರಳ ಕೃಷಿ ವಿಜ್ಞಾನ ಕೇಂದ್ರದ ಜಿಸ್ಸಿ ಜಾರ್ಜ್.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಕಾಹು ಆಂದೋಳನದ ಕಿಚ್ಚು ಹತ್ತಿಸಿದ್ದು 74 ಹರೆಯದ ಹುಮ್ಮಸ್ಸಿಗ ಊರುತೋಟ ಸುಬ್ರಾಯ ಹೆಗಡೆ. ಇವರು ಬಾಕಾಹು ತಯಾರಿಸಿ ಅದರಿಂದ ತಾಲಿಪ್ಪಿಟ್ಟು, ರೊಟ್ಟಿ, ಶಂಕರ ಪೋಳಿ ಮಾಡಿದ ಸುದ್ದಿ ಜಿಲ್ಲೆಯ ಸಾಮಾಜಿಕ ಮಾಧ್ಯಮಗಳ ಮೂಲಕ ಒಂದೆರಡು ದಿನಗಳಲ್ಲೇ ಮನೆಮಾತಾಗಿಬಿಟ್ಟಿತ್ತು! 

ಆಂದೋಳನ ಹಬ್ಬುತ್ತಿದ್ದಂತೆ ಆಗಲೇ ವಾಣಿಜ್ಯ ದೃಷ್ಟಿಯಿಂದ ಬಾಕಾಹು ಮಾಡುತ್ತಿರುವ ಕೃಷಿಕರ ಮಾಹಿತಿಗಳು ಗೋಚರವಾದುವು. ಶಿರಸಿ ಬಳಿಯ ಕಾನಳ್ಳಿಯ ಪ್ರಭಾಕರ ಹೆಗಡೆ - ವಸುಂಧರಾ ಹೆಗಡೆ ದಂಪತಿ ಬಾಕಾಹುವಿಗೆ ಉದ್ಯಮ ಸ್ವರೂಪ ನೀಡಿದ್ದಾರೆ. ಒಂದು ಕಿಲೋಗೆ ಇನ್ನೂರು ರೂಪಾಯಿಯಂತೆ ಮಾರಾಟ. ಆರು ತಿಂಗಳ ತಾಳಿಕೆ. ಬೆಳಗಾವಿ ಜಿಲ್ಲೆಯ ಕೃಷಿಕ ಅಜ್ಜಪ್ಪ ಕುಲಗೋಡು ಇವರದು ಇನ್ನೂ ಒಂದು ಹೆಜ್ಜೆ ಮುಂದೆ. ಅವರು ಮನೆಯಲ್ಲಿ ಉತ್ಪನ್ನವನ್ನು ತಯಾರಿಸಿದರೆ, ಅವರ ಅಮ್ಮ ಪಾರ್ವತವ್ವರಿಗೆ ಮಾರುಕಟ್ಟೆಯ ಹೊಣೆ.  ತಾವು ಬೆಳೆದ ತರಕಾರಿಗಳ ಮಾರಾಟದ ಜತೆ ಬಾಕಾಹು ಹುಡಿಯನ್ನು ಜನರಿಗೆ ಪರಿಚಯಿಸುತ್ತಿದ್ದಾರೆ.

“ಒಂದು ಕೃಷಿ ವಿಶ್ವವಿದ್ಯಾನಿಲಯ ಕೆಲಸವನ್ನು ಮಾಡಬೇಕಾದರೆ ಅದೆಷ್ಟೋ ಕಾಲ ಬೇಕಾಗುತ್ತದೆ. ಲಾಕ್ಡೌನ್ ಕಾಲಘಟ್ಟದಲ್ಲಿ ಕೃಷಿಕರಿಗೆ ಒದಗಿದ ಬಾಳೆಕಾಯಿ ಹುಡಿ ತಯಾರಿಯ ತಿಳಿವಳಿಕೆಯು ಸಂಕಟ ಕಾಲದ ಸಹಾಯಿ, ಎಂದು ಮೆಚ್ಚುಗೆ ಸೂಚಿಸಿದವರುಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಶ್ಯಾಮಲಮ್ಮ.

ಆಂದೋಳನದ ಸುದ್ದಿಯು ತಿರುಚಿರಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರವನ್ನು ತಲಪಿತು. ಕೇಂದ್ರದ ನಿರ್ದೇಶಕಿ ಡಾ.ಉಮಾ ಸುಬ್ಬರಾಯ ಕರ್ನಾಟಕದ ಕೃಷಿ ಗೃಹಿಣಿಯರನ್ನು ಅಭಿನಂದಿಸಿ, “ಬಾಳೆಯ ಮೌಲ್ಯವರ್ಧಿತ ಉತ್ಪನ್ನದ ನಿಮ್ಮ ಆಂದೋಳನವು ರಾಜ್ಯ ಅಲ್ಲ, ದೇಶ ಮಟ್ಟವನ್ನು ತಲುಪಲಿ. ನಮ್ಮ ಸಂಸ್ಥೆಯಿಂದ ಸಹಕಾರ ನೀಡಲು ಸಿದ್ಧ,” ಎಂದು ಬೆನ್ನು ತಟ್ಟಿದರು.

“ಕೃಷಿಕರು ಮನೆಯಲ್ಲೇ ಸುಲಭದಲ್ಲಿ ಮಾಡಿಕೊಳ್ಳಬಹುದಾದ ತುಂಬ ಪೌಷ್ಟಿಕ ಉತ್ಪನ್ನ ಬಾಳೆಕಾಯಿ ಹುಡಿ. ವರ್ಷವಿಡೀ ಇದರ ಉತ್ಪಾದನೆ ಸಾಧ್ಯ. ಅದೊಂದು ಬಹೂಪಯೋಗಿ ಹಿಟ್ಟು.  ಅದರಿಂದ ಡಜನುಗಟ್ಟಲೆ ವೈವಿಧ್ಯಮಯ ದಿನಬಳಕೆಯ ಆಹಾರ ತಯಾರಿಸಬರುತ್ತದೆ . ಕಾರಣದಿಂದ ವಿದ್ಯೆ ತುಂಬಾ ರೈತಸ್ನೇಹಿ. ಮನೆಗಳಲ್ಲಿ, ಸಮಾರಂಭಗಳಲ್ಲಿ, ಹೋಟೆಲು, ಟೀವಿ ಶೋಗಳಲ್ಲಿ ಬಾಕಾಹು ಬಳಕೆಯಾಗಬೇಕು. ಮನೆಮಟ್ಟದ ಬಾಕಾಹು ತಯಾರಿಯ ತರಬೇತಿ, ಉತ್ಪನ್ನಗಳ ಪ್ರದರ್ಶನದ ಮೇಳಗಳು, ಬಳಕೆಯ ರೀತಿಗಳು ಮತ್ತು ಇದರ ಪೌಷ್ಟಿಕಾಂಶಗಳ ಬಗ್ಗೆ ಅರಿವು ಮೂಡಿಸಬೇಕು. ಈಗ ಬಾಕಾಹು ಕನ್ನಾಡಿನ ಕೃಷಿ ಕೃಷಿ ವಿಜ್ಞಾನ ಕೇಂದ್ರಗಳ ಕದ ತಟ್ಟಿದೆ. ಸರಿಯಾಗಿ ಮುನ್ನಡೆಸಿದರೆ ಇದೊಂದು ದೇಶವ್ಯಾಪಿ ಆಂದೋಳನವಾಗಲು ಸಾಧ್ಯತೆ ಇದೆ; ಆಗುತ್ತದೆ. ಗೋಧಿ, ಮೈದಾಗಳಿಗೆ ಗಣನೀಯ ಪ್ರಮಾಣದಲ್ಲಿ ಬದಲಿ ಆಗುವ ಎಲ್ಲಾ ಲಕ್ಷಣಗಳು ಬಾಕಾಹುವಿಗಿದೆ. ಆಂದೋಳನವನ್ನು ಸರಿಯಾಗಿ ಮುನ್ನಡೆಸಿದರೆ ಇನ್ನು ಮುಂದೆ ಬಾಳೆಕಾಯಿಯ ಬೆಲೆ ಕುಸಿತ ಖಂಡಿತ ರೈತರನ್ನು ಹಿಂದಿನಷ್ಟು ಹತಾಶೆಗೆ ತಳ್ಳದುಎನ್ನುವ ದೂರದೃಷ್ಟಿ ಶ್ರೀ ಪಡ್ರೆಯವರದು.

ಮೂರೇ ವಾರಗಳಲ್ಲಿ ಆಂದೋಳನದ ಸಾತ್ವಿಕ ಕಿಡಿಯು ಅಡುಗೆ ಮನೆಯೊಳಗೆ ಹಣತೆಯನ್ನು ಹಚ್ಚಿದೆ. ಮಳೆ ಕಡಿಮೆಯಾಗಿ ಬಿಸಿಲಿನ ದಿನಗಳಿಗಾಗಿ ಅಮ್ಮಂದಿರು ಕಾಯುತ್ತಿದ್ದಾರೆ! ನವಮಾಧ್ಯಮಗಳನ್ನು ಹೇಗೆ ಸಶಕ್ತವಾಗಿ ಮತ್ತು ಸುದೃಢವಾಗಿ ರೂಪಿಸಬಹುದೆಂಬುದಕ್ಕೆ ಸಾಕ್ಷಿಯಾಗಿ ಮುಂದಿದೆ.

(Udayavani  / 1-8-2021)

1 comments:

Aishwarya S said...

Informative☺

Post a Comment