Sunday, September 5, 2021

ಹಲಸಿನೊಂದಿಗೆ ಫೋಟೋ ಬಹುಮಾನ ವಿತರಣಾ ಕಾರ್ಯಕ್ರಮ


 ಹಲಸು ಒಂದು ಕಾಲದಲ್ಲಿ  ಹಸಿದ ಹೊಟ್ಟೆಯ ಆಹಾರವಾಗಿತ್ತು, ಬದಲಾದ ಪರಿಸ್ಥಿತಿಯಲ್ಲಿ ಮನುಷ್ಯನ ನಿರ್ಲಕ್ಷ್ಯದಿಂದ ಹಲಸು ತೋಟದ ವಸ್ತುವಾಗಿತ್ತು. ಈಗ ಮನೆಯಲ್ಲಿ ಅನ್ನದ ಬಟ್ಟಲಿಗೆ ಬರುತ್ತಿದೆ, ಹಲಸು ಕೂಡಾ ಉತ್ತಮ ಆಹಾರವಾಗಿದೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ವಸಂತ ಬಿ ಬಾಳಿಗಾ ಹೇಳಿದರು.

ಅವರು  ರಾರಾಸಂ ಫೌಂಡೇಶನ್ ಬಂಟ್ವಾಳ ಮತ್ತು ಹಲಸು ಪ್ರೇಮಿ ಕೂಟ, ಬಂಟ್ವಾಳ ಇದರ ಸಹಯೋಗದಲ್ಲಿ ಆಯೋಜಿಸಿದ "ಹಲಸಿನೊಂದಿಗೆ ಫೋಟೋ" ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ  ಮಾತನಾಡಿದರು. ಹಲಸು ಬೆಳೆದರೆ ಮಾತ್ರಾ ಸಾಲದು ಅದರ ಮೌಲ್ಯವರ್ಧನೆ ಹಾಗೂ ಮಾರಾಟವೂ ಅಗತ್ಯವಿದೆ. ಅದನ್ನು  ಅತ್ಯಂತ ಸಮರ್ಥವಾಗಿ ಮಾಡುತ್ತಿರುವ ಹಲಸು ಪ್ರೇಮಿ ಕೂಟದ ಪಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ಎಂದರು.ಹಲಸು ನಮ್ಮ ಜೀವನದ ಒಂದು ಭಾಗ. ನಮ್ಮಲ್ಲಿ ಬೆಳೆದ ಹಲಸುಗಳಿಗೆ ಹೊಸ ರೂಪ ಕೊಟ್ಟು ಜನರಿಗೆ ಬಗೆ ಬಗೆಯ ತಿನಸುಗಳು ಸಿಗಲು  ಹಲಸಿನಂಗಡಿ ತುಂಬಾ ಸಹಕಾರಿ ಎಂದರು.

ಅತಿಥಿಗಳಾಗಿದ್ದ  ಅಂಕಣಗಾರ, ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ ಕಾರಂತ ಪೆರಾಜೆ ಮಾತನಾಡಿ, ಯಾವುದೇ ಆಂದೋಲನಗಳು ಹಂತ ಹಂತವಾಗಿ ಬೆಳೆಯಬೇಕು. ಹಲಸು ಆಂದೋಲನವು ಈಗ ಊಟದ ಬಟ್ಟಲಿಗೆ ಬಂದಿದೆ ಮಾತ್ರವಲ್ಲ ಕಾರ್ಪೋರೇಟ್ವಲಯದಲ್ಲೂ ಹಲಸು ಸ್ಥಾನ ಪಡೆದಿದೆ.ಹಲಸು ಮಾರುಕಟ್ಟೆಯು ಇಂದು ವ್ಯಾಪಿಸಿದೆ. ಮೌಲ್ಯವರ್ಧನೆಯೂ ನಡೆಯುತ್ತಿದೆ ಇದು  ಆಶಾದಾಯಕ ಬೆಳವಣಿಗೆ ಎಂದರು.

ನಿವೃತ್ತ ಅರಣ್ಯ ಅಧಿಕಾರಿ ಮತ್ತು ಹಲಸು ಬೆಳೆಗಾರ ಗ್ಯಾಬ್ರಿಯಲ್ವೇಗಸ್ ಮಾತನಾಡಿ, ಹಲಸು ಕೃಷಿಯೂ ಭವಿಷ್ಯದಲ್ಲಿ  ಉತ್ತಮ ಕೃಷಿಯಾಗುವುದರಲ್ಲಿ  ಸಂದೇಹವಿಲ್ಲ. ಆಹಾರ ಬೆಳೆಯೂ ಆದ ಹಲಸು ಬೆಳೆದು ಬಾರಿ ಆದಾಯಯೂ ಗಳಿಸಿದ್ದೇನೆ. ಹಲಸಿಗೆ ಮಾರುಕಟ್ಟೆ ಇಲ್ಲ ಎಂದು  ಅನೇಕರು ಹೇಳುತ್ತಿದ್ದರು. ವರ್ಷ ನಮ್ಮಲ್ಲಿ  ಬೆಳೆದ ಹಲಸಿಗೆ ಉತ್ತಮ ಬೇಡಿಕೆಯೂ ಬಂದಿತ್ತು ಎಂದರು.

ಕೃಷಿಕ, ಪತ್ರಕರ್ತ ಮಹೇಶ್ಪುಚ್ಚಪ್ಪಾಡಿ ಮಾತನಾಡಿ, ಸಮ್ಮಿಶ್ರ ಕೃಷಿಯಿಂದ ಮಾತ್ರವೇ ಭವಿಷ್ಯದಲ್ಲಿ  ಕೃಷಿಕರ  ಆದಾಯ ದ್ವಿಗುಣವಾಗಲಿದೆ. ಹಲಸು ಮೌಲ್ಯವರ್ಧನೆಯ ಮೂಲಕ ಕೃಷಿಕರಿಗೆ ಉತ್ತಮ ಆದಾಯವಾಗಬಹುದು. ಕೃಷಿಕ,ಮೌಲ್ಯವರ್ಧನೆ, ಮಾರುಕಟ್ಟೆ, ಗ್ರಾಹಕರು ಇದೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವುರಿಂದ ಎಲ್ಲಾ ಕಡೆಯೂ ಗಮನ ಅಗತ್ಯವಿದೆ ಎಂದರು.

ಹಲಸು ಸ್ನೇಹಿ ಕೂಟದ  ಮುಳಿಯ ವೆಂಕಟ ಕೃಷ್ಣ ಶರ್ಮ  ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಪೋನೋಸ್ ಹಲಸಿನಂಗಡಿ ಮಾಲಕರು ಹಾಗೂ ಹಲಸು ಪ್ರೇಮಿಕೂಟದ ಮೌನೇಶ್ ಮಲ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ವಿವಿಧ ಹಲಸು ತಳಿಗಳನ್ನು ಜನರಿಗೆ ನೀಡಿ ಹಲಸು ಸಂರಕ್ಷಣೆ ಹಾಗೂ ಕೃಷಿಕರಿಂದಲೇ ಹಲಸು ಖರೀದಿ ನಡೆಸುವ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲಸಿನೊಂದಿಗೆ ಫೋಟೋ" ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.

ರಾರಾಸಂ ಸಂಸ್ಥೆಯ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ ಸ್ವಾಗತಿಸಿದರು. ರಾರಾಸಂ ನಿರ್ದೇಶಕರಾದ ಕೇಶವ್ ಮಾಸ್ಟರ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ದಾಮೋದರ್ ಮಾಸ್ಟರ್ ನಿರೂಪಿಸಿದರು.

 

0 comments:

Post a Comment