Friday, May 27, 2022

ಹಳ್ಳಿ ಸೊಬಗಿನ 'ಬಾಳೆ ಮಂಟಪ'




   ಉಪನಯನ, ವಿವಾಹದಂತಹ ಶುಭ ಸಮಾರಂಭಗಳಲ್ಲಿ ಚಿತ್ತಾಕರ್ಷಕ ಮಂಟಪ ತಯಾರಿಯೂ ಕಲಾವಿದನ ಕೈಚಳಕದಿಂದ ಮೂಡಿಬರುತ್ತದೆ. ಕಲ್ಯಾಣ ಮಂಟಪಗಳಲ್ಲಿ ಸಿದ್ಧ ಮಾದರಿಯ ಮಂಟಪಗಳಿವೆ.  ಅದನ್ನು ದಿಢೀರಾಗಿ ಅಲಂಕರಿಸುವ ವೃತ್ತಿಜಾಲಗಳಿವೆ. ಆದೇಶ ಕೊಟ್ಟು ಒಂದೆರಡು ಗಂಟೆಯೊಳಗೆ ರೆಡಿ! ಕಿಸೆಯ ಭಾರಕ್ಕೆ ಅನುಗುಣವಾಗಿ ಭ್ರಮೆ ಮೂಡಿಸುವ ಬಣ್ಣಬಣ್ಣದ ಚಿತ್ತಾರಗಳು ಮೋಡಿ ಮಾಡುತ್ತವೆ.

ಇಲ್ಲೊಬ್ಬರು ಕಾಲು ಶತಮಾನದಿಂದ 'ಬಾಳೆ ಮಂಟಪ'ವನ್ನು ಪ್ರಸಿದ್ಧೀಕರಿಸಿದ್ದಾರೆ. ಶೃಂಗೇರಿ ಆನೆಗುಂದದ ಕೃಷಿಕರಾದ ಎಸ್.ವಿ.ಶೃಂಗೇಶ್ವರ ವರೆಗೆ ಒಂದು ಸಾವಿರಕ್ಕೂ ಮಿಕ್ಕಿ ಮಂಟಪಗಳನ್ನು ತಯಾರಿಸಿದ ಹಿರಿಮೆ ಅವರದು. ಬದಲಾದ ಕಾಲಘಟ್ಟದಲ್ಲಿ ಪಾರಂಪರಿಕ ಹಳ್ಳಿಯ ಸೊಗಸಿಗೆ ನಗರದಲ್ಲೂ ಮಾನ ಬಂದಿರುವುದು ಗಮನಾರ್ಹ.

ಬಾಳೆ ಮಂಟಪಕ್ಕೆ 'ಕಲ್ಲು ಬಾಳೆ' (ಇದೊಂದು ಬಾಳೆ ತಳಿ) ದಿಂಡುಗಳ ಬಳಕೆ. ಶೃಂಗೇರಿ ಪ್ರದೇಶದಲ್ಲಿ ಅಡಿಕೆ ಗಿಡಗಳಿಗೆ ನೆರಳು ಒದಗಿಸಲು ಎತ್ತರವಾಗಿಯೂ, ವಿಶಾಲವಾಗಿಯೂ ಬೆಳೆಯುವ ಕಲ್ಲುಬಾಳೆಯನ್ನು ಬೆಳೆಯುತ್ತಾರೆ. ಇದು ಸಮಾರಂಭಗಳ ಭೋಜನದ ಬಾಳೆಯೆಲೆಗಾಗಿಯೇ ಬೆಳೆಯುವವರಿದ್ದಾರೆ.

ಹತ್ತಡಿ ಉದ್ದಗಲದ ಮಂಟಪ ತಯಾರಿಗೆ ಅರುವತ್ತು ಬಾಳೆಗಿಡಗಳು ಬೇಕು. ಬಾಳೆಗಿಡವನ್ನು ತುಂಡರಿಸಿದ ಬಳಿಕ ದಿಂಡು - ದಂಡು, ಟ್ಯೂಬ್ - ಹೊಂದಿರುವ ಬಣ್ಣದ ವ್ಯತ್ಯಾಸವನ್ನು ಗಮನಿಸುತ್ತಾರೆ. ತುಸು ಬಣ್ಣ ಬದಲಾದ ದಿಂಡುಗಳನ್ನು ಬಳಸುವುದಿಲ್ಲ. ಒಂದು ದಿಂಡು ಬಿಳಿಯಾಗಿದ್ದು, ಮತ್ತೊಂದು ನಸು ಬಿಳಿಯಿದ್ದರೆ ಮಂಟಪದ ನೋಟ ಕೆಡುತ್ತದೆ.

ಬಾಳೆದಿಂಡು, ಅಡಿಕೆ ಸಲಕೆಗಳು, ಅಡಿಕೆ ಮರದ ಕಂಬಗಳು - ಮುಖ್ಯ ಕಚ್ಚಾವಸ್ತುಗಳು. ಒಂದೊಂದು ಮಂಟಪಗಳಿಗೆ ಪ್ರತ್ಯೇಕ ಪ್ರತ್ಯೇಕ ವಿನ್ಯಾಸಗಳು. ಕೆಲವರು ಮಂಟಪಕ್ಕೆ ಹಸುರು ಬಣ್ಣವನ್ನು ಬಯಸುತ್ತಾರೆ. ಇದಕ್ಕಾಗಿ ಹಲಸಿನ ಎಲೆಗಳ ಬಳಕೆ. ಕೆಲವೊಮ್ಮೆ ತೆಂಗಿನ ಗರಿಗಳನ್ನೂ ಬಳಸುವುದಿದೆ. ಅದ್ದೂರಿ ಮದುವೆಯಾದರೆ ಮಂಟಪದ ಕಂಬಗಳಿಗೆ ಸೇಬು, ಮುಸುಂಬಿ ಹಣ್ಣುಗಳನ್ನು ಪೋಣಿಸಲು ವಿನಂತಿಸುತ್ತಾರೆ. ಅಲ್ಲದೆ ಎಳೆಯ ತೆಂಗಿನಕಾಯಿ, ಬಣ್ಣದ ಬಣ್ಣದ ಹೂಗಳನ್ನೂ ಸಂಘಟಕರು ಅಪೇಕ್ಷಿಸುತ್ತಾರೆ.

ಹತ್ತಡಿಯಿಂದ ನಲುವತ್ತು ಅಡಿ ಉದ್ದಗಲದ ಮಂಟಪಗಳನ್ನು ಮಾಡಿದ್ದಾರೆ. ಹತ್ತಡಿಯ 'ಬಾಳೆ ಮಂಟಪ' ತಯಾರಿಗೆ ಆರು ಜನ ಸಹಾಯಕರು. ಎಂಟರಿಂದ ಹತ್ತು ಗಂಟೆಗಳ ಅವಧಿ. ನಲುವತ್ತಡಿಯ ತಯಾರಿಗೇ ಒಂದೂವರೆ ದಿವಸ ಬೇಕೇ ಬೇಕು. ಮದುವೆಯ ಸಂಘಟಕರು ಮದುವೆಯ ಮುನ್ನಾ ದಿನವೂ ಚೌಟ್ರಿಯನ್ನು ಹೆಚ್ಚುವರಿಯಾಗಿ ಕಾದಿರಿಸುತ್ತಾರೆ. ಮಂಟಪದ ತಯಾರಿಯಾಗಿ!

ಹತ್ತಡಿಯದಕ್ಕೆ ಸ್ಥಳೀಯವಾದರೆ ಆಜೂಬಾಜು ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿ ದರ. ಶೃಂಗೇರಿ ಕೇಂದ್ರವಾಗಿದ್ದು ಕಲ್ಯಾಣ ಮಂಟಪಗಳ ದೂರವನ್ನು ಲಕ್ಷಿಸಿ ದರಗಳಲ್ಲಿ ಏರಿಳಿತ. ಮಂಟಪಕ್ಕೆ ಹೆಚ್ಚುವರಿ ಪೋಣಿಕೆಗಳಿದ್ದರೆ ದರದಲ್ಲೂ ಏರಿಕೆ. 'ಗರಿಷ್ಠ ನಾಲ್ಕು ಲಕ್ಷ ರೂಪಾಯಿಯ ಮಂಟಪವನ್ನು ಸಿದ್ಧಪಡಿಸಿದ ದಿನಗಳನ್ನು ಜ್ಞಾಪಿಸಿಕೊಂಡರು.' ಶೃಂಗೇಶ್ವರ.

ಆದೇಶ ಬಂದಾಗ ಹೇಗೆ ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತೀರಿ? “ಮೊದಲಿಗೆ ವಿವಾಹ ನಡೆಯಲಿರುವ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಸ್ಥಳದ ಪರೀಶೀಲನೆ ಮಾಡುತ್ತೇನೆ. ಕೆಲವರು ಸಭಾಗೃಹದ ಮಧ್ಯದಲ್ಲಿ ಮಂಟಪವನ್ನು ಬಯಸುತ್ತಾರೆ. ಅಂತಹ ಸಂದರ್ಭದಲ್ಲಿ ಅಳತೆ, ವಿನ್ಯಾಸಗಳಲ್ಲಿ ಬದಲಾವಣೆ ಬೇಕಾಗುತ್ತದೆ. ಕೆಲವು ಸಲ ಸಂಘಟಕರು ಹೊಸ ಯೋಚನೆಗಳನ್ನು ಹಂಚಿಕೊಳ್ಳುತ್ತಾರೆ. ಅದನ್ನು ಗರಿಷ್ಠ ಅಳವಡಿಸಿಕೊಳ್ಳಬೇಕು. ಮುಖ್ಯವಾಗಿ ಅವರು ಅಪೇಕ್ಷಿಸಿದ ದಿನಾಂಕದಂದು ನನಗೆ ಸಿದ್ಧನಾಗಲು ಸಮಯ ಸಾಕೇ? ಇಲ್ಲಾಂದ್ರೆ ಎಷ್ಟು ದುಡ್ಡು ಕೊಡ್ತೇನೆ ಅಂದರೂ ಮಾಡಲು ಸಾಧ್ಯವಿಲ್ಲ.            

ಆರ್ಥಿಕವಾಗಿ ಹಿಂದುಳಿದವರೂ ಮದುವೆಗಳಿಗೆ ಮಂಟಪವನ್ನು ಅಪೇಕ್ಷೆ ಪಡುವುದು ಸಹಜ. ಅಂತಹವರಿಗೆ ಮಿತ ದರದಲ್ಲಿ ಅಂದರೆ ಮೂರು, ನಾಲ್ಕು ಸಾವಿರ ರೂಪಾಯಿಯಲ್ಲಿ ಬಣ್ಣದ ಕಾಗದಗಳಿಂದ ಅಲಂಕಾರ ಮಾಡಿದ ಮಂಟಪವನ್ನು ತಯಾರಿಸುತ್ತಾರೆ. ಹಿಂದೆಲ್ಲಾ ಉಪನಯನ, ಮದುವೆಗಳಲ್ಲಿ ಬಣ್ಣದ ಕಾಗದಗಳ ರಂಗಿನ ಕರಾಮತ್ತುಗಳನ್ನು ಜ್ಞಾಪಿಸಿಕೊಳ್ಳುತ್ತಾರೆ, ಮೊದಮೊದಲು ಬಣ್ಣದ ಕಾಗದಗಳೇ ಮಂಟಪದ ಕಚ್ಚಾವಸ್ತುಗಳು. ಚಪ್ಪರ ಮುಚ್ಚುವ ಬಣ್ಣದ ಕಾಗದಗಳ ಚಿತ್ತಾರಗಳು ಹೊಸ ಲೋಕವನ್ನು ಸೃಷ್ಟಿಸುತ್ತಿದ್ದುವು. ಕಾಲಘಟ್ಟದ ಮಂದಿ ಸಂತೋಷದಿಂದ ಸ್ವೀಕರಿಸಿದ್ದರು ಕೂಡಾ.

'ಸಭಾಗೃಹದಲ್ಲಿರುವ ಸಿದ್ಧ ಮಂಟಪದಲ್ಲಿ ಅದೆಷ್ಟೋ ವಿವಾಹಗಳು ಆಗಿ ಹೋಗಿರುತ್ತದೆ. ನಮ್ಮ ಮಗನ/ಮಗಳ ಮದುವೆಗೆ ಪ್ರತ್ಯೇಕವಾಗಿ ಮಂಟಪವನ್ನು ಕಟ್ಟಿಯೇ ಅದರಲ್ಲಿ ವಿವಾಹ ಮಾಡೋದು ಎಂಬ ಸಂಕಲ್ಪದವರೂ ಶೃಂಗೇಶ್ವರರ ಪಟ್ಟಿಯಲ್ಲಿದ್ದಾರೆ.

ಬದಲಾದ ಕಾಲಘಟ್ಟ ಮತ್ತು ಯುವ ಮನಸ್ಸುಗಳು ಸಭಾಗೃಹದಲ್ಲಿ ರಂಗಿರಂಗಿನ ಬಣ್ಣಗಳನ್ನು ಬಯಸುವುದು ಸಹಜ. ಪಾರಂಪರಿಕ ಹಿನ್ನೆಲೆಯುಳ್ಳ ಮತ್ತು ಹಳ್ಳಿಯ ಸೊಬಗಿನ ಪರಿಚಯವುಳ್ಳ ಮಂದಿ ಒಮ್ಮೆ ಬಾಳೆ ಮಂಟಪವನ್ನು ನೋಡಿದರೆ, ತಮ್ಮ ಸಮಾರಂಭಗಳಲ್ಲೂ ಮಂಟಪವನ್ನು ಬಯಸಿ ಆರ್ಡರ್ ಮಾಡುವುದಿದೆ.

ಸುಮಾರು ಇಪ್ಪತ್ತು ಜಿಲ್ಲೆಗಳಲ್ಲಿ ಶೃಂಗೇಶ್ವರರ ಬಾಳೆ ಮಂಟಪ ಪರಿಚಿತ. ಬಾಯಿಂದ ಬಾಯಿಗೆ ಪ್ರಚಾರ. ಎಷ್ಟೋ ಕಡೆ ಅದರ ಸೆಳೆನೋಟದಿಂದಾಗಿ 'ಮಂಟಪ ಚೆನ್ನಾಗಿದೆ. ಯಾರು ಮಾಡಿದ್ದು' ಎನ್ನುವ ಕೌತುಕ ಹಲವರದು. ನಮ್ಮ ಮದುವೆಗಿಂತ ನಿಮ್ಮ ಮಂಟಪವೇ ಮೇಲಾಯಿತಲ್ಲಾ, ಮದುವೆ ಸಂಘಟಕರ ಸಾತ್ವಿಕ ಛೇಡನೆ!  

ಬೆಂಗಳೂರಿನ ದೇವನಹಳ್ಳಿ ಸನಿಹದ ರೆಸಾರ್ಟ್  ಒಂದರಲ್ಲಿ ಮದುವೆ ಸಮಾರಂಭ. ಆಸ್ಟ್ರೇಲಿಯಾದ ಕುಟುಂಬವೊಂದು ಭಾಗವಹಿಸಿತ್ತು. ಮಂಟಪದ ಸೌಂದರ್ಯವು ಅವರನ್ನು ಸೆಳೆದು, 'ಆಸ್ಟ್ರೇಲಿಯಾಗೆ ಬಂದು ಮಂಟಪ ಮಾಡಿ ಕೊಡ್ತೀರಾ' ಅಂತ ಬೇಡಿಕೆ ಮುಂದಿಟ್ಟರಂತೆ! ದೂರದ ದೇಶವಲ್ವಾ.. ನಯವಾಗಿ ಮತ್ತು ಗೌರವಪೂರ್ವಕವಾಗಿ ಸಾಧ್ಯವಾಗದು ಎಂದೆ. ಎನ್ನುತ್ತಾರೆ.

ನನ್ನನ್ನು ನೋಡಿ ಕೆಲವರು ಮಂಟಪ ತಯಾರಿಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡವರಿದ್ದಾರೆ. ಎಂದು ಖುಷಿಪಡುತ್ತಾ, ಒಂದು ದಿವಸಕ್ಕೆ ಒಂದೇ ಪ್ರೋಗ್ರಾಂ. ಹೆಚ್ಚು ಬೇಡಿಕೆ ಬಂದರೆ ಒಪ್ಪಿಕೊಳ್ಳಲಾಗುತ್ತಿಲ್ಲ. ಯಾಕೆಂದರೆ ಸ್ವತಃ ನಾನೇ ಇದ್ದು ಮಾಡುವ ಜಾಣ್ಮೆಯ ಕೆಲಸ. ಎಂದರು.

ಶೃಂಗೇಶ್ವರ - 96325 50763


 

0 comments:

Post a Comment