Thursday, March 4, 2021

ನೈಜ ಘಟನೆಗಳ ನಿದರ್ಶನ

 - ಡಾ . ಬಿ . . ವಿವೇಕ ರೈ 

ಮಂಗಳೂರು

ಕೊರೋನ ಉಂಟುಮಾಡಿದ ಬಹುರೂಪಿ ಪಾಸಿಟಿವ್ ಪರಿಣಾಮಗಳನ್ನು ನೈಜ ಘಟನೆಗಳ ನಿದರ್ಶನಗಳ ಮೂಲಕ ಮನಮುಟ್ಟುವಂತೆ ವರ್ಣಿಸಿದ್ದೀರಿ . ಪುಸ್ತಕದ ಒಂದೊಂದು ಕಿರು ಕಥನವೂ ಬದುಕು ಕಟ್ಟುವ ಒಂದೊಂದು ಸಾಹಸಗಾಥೆಯಾಗಿದೆ . ಸಂಕಷ್ಟದ ಕಾಲದಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ , ಹೊಸ ಬದುಕನ್ನು ಕಟ್ಟಬಹುದು ಎಂದು ಮಾಡಿ ತೋರಿಸಿದ ಜನರು ನಮಗೆ ನಿಜವಾದ ಮಾರ್ಗದರ್ಶಕರಾಗಿದ್ದಾರೆ . ನೂರು ಉಪದೇಶಗಳಿಗಿಂತ ಇಂತಹ ಒಂದು ದಿಟ್ಟಹೆಜ್ಜೆ ಹೆಚ್ಚು ಆತ್ಮವಿಶ್ವಾಸವನ್ನು ಉಂಟುಮಾಡುತ್ತದೆ

ಇಲ್ಲಿನ ಕಥನಗಳ ಇನ್ನೊಂದು ಪಾಸಿಟಿವ್ ಅಂಶವೆಂದರೆ ಕೊರೋನ ಪೀಡಿತ ಕಾಲಾವಧಿಯಲ್ಲಿ ಜನರು ಹಳ್ಳಿಗಳೆಗೆ ಮರಳಿದ್ದು , ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು , ಗ್ರಾಮೀಣ ಬದುಕಿನ ಜೊತೆಗೆ ಮನುಷ್ಯ ಸಂಬಂಧಗಳನ್ನು ಬೆಸೆದದ್ದು . ಅಂತರ್ಜಾಲದ ನೆಟ್ವರ್ಕ್  ಮತ್ತು ಮನುಷ್ಯ ಸಂಬಂಧದ ನೆಟ್ವರ್ಕ್ ಗಳು ಮುಖಾಮುಖಿಯಾದದ್ದು , ಕೆಲವೊಮ್ಮೆ ಪೂರಕವಾದದ್ದು

ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆ ಮತ್ತು ಪರ್ಯಾಯ ವ್ಯವಸ್ಥೆಗಳ ದೃಷ್ಟಿಯಿಂದ  ನಾಗೇಂದ್ರರ ಮೊಬೈಲ್ ದಾನದ ಉಪಕ್ರಮ , ಧರ್ಮಸ್ಥಳದ ಧರ್ಮಾಧಿಕಾರಿ ಡಾವೀರೇಂದ್ರ ಹೆಗ್ಗಡೆ ಅವರ ಜ್ಞಾನತಾಣದ ಮೂಲಕ ವಿದ್ಯಾರ್ಥಿಗಳಿಗೆ  ಟ್ಯಾಬ್ ವಿತರಣೆ , ಚಿಕ್ಕೇನಹಳ್ಳಿಯ ಮಾತೃಭೂಮಿ ಸೇವಾ ಪೌಂಡೇಶನ್ ರೂಪಿಸಿದ ವೈ ಫೈ ಹಳ್ಳಿ , ನೆಟ್ ವರ್ಕ್ ಇಲ್ಲದ ಮನೆಗಳಿಗೆ ಶಿಕ್ಷಕರು ಹೋಗಿ ಮಕ್ಕಳಿಗೆ ಪಾಠಮಾಡಿದ ಸುಳ್ಯದ ಪ್ರಯೋಗ - ಇವು ಹಣದ ದೃಷ್ಟಿಯ 'ಧನಾತ್ಮಕ ಚಿಂತನೆಗಳು ' ಅಲ್ಲ ! ಇವೆಲ್ಲ ಶಿಕ್ಷಣ ಪ್ರೀತಿಯ ಸಕಾರಾತ್ಮಕ ಮನೋಧರ್ಮದ ಧನಾತ್ಮಕ ಹೆಜ್ಜೆಗಳು

ಮರಳಿ ಹಳ್ಳಿಗೆ ಬಂದು ಕೃಷಿಯನ್ನು ಬದುಕಿನ ಜೀವಧಾತುವಾಗಿ ಸ್ವೀಕರಿಸಿದವರ ಕಥನಗಳು ಸಾಕಷ್ಠಿವೆ : ಅಡಿಕೆ ಮರ ಏರುವ ವಿದ್ಯೆ ಕಲಿತ ಯುವಕರು , ನಗರದಿಂದ ಹಳ್ಳಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿದ ರಮೇಶ , ಬೆಂಗಳೂರಿನಿಂದ ಹಳ್ಳಿಗೆ ಬಂದು ತರಕಾರಿ ಬೆಳೆದು ಮಾರಾಟಮಾಡಿ ಹೊಸ ಬದುಕು ಕಂಡ  ರವಿ , ಹಳ್ಳಿಗೆ ಬಂದು ಅಡಿಕೆ ಕೃಷಿಯೊಂದಿಗೆ  ತರಕಾರಿ ಬೆಲೆ ಬೆಳೆದು ಬದುಕು ಸಾಗಿಸಲು ನಿರ್ಧರಿಸಿದ ಇಂಜಿನಿಯರ್ ದಂಪತಿಗಳು ನಿಖಿಲ್ - ಲತಾ , ಅಧ್ಯಾಪಕ ವೃತ್ತಿ ಬಿಟ್ಟು ಹಳ್ಳಿಯಲ್ಲಿ ಭತ್ತದ ಕೃಷಿ ಶುರುಮಾಡಿದ ಕಿಶೋರ್ ಕುಮಾರ್ : ಈರೀತಿ ಮಣ್ಣಿನ ಪ್ರೀತಿಯೇ ಅವರ ಅನ್ನದ ಬಟ್ಟಲನ್ನು ತುಂಬಿದ ಸಂತೃಪ್ತಿಯ ಕಥನಗಳು ಇಲ್ಲಿವೆ

     ಲಾಕ್ ಡೌನ್ ಅವಧಿಯಲ್ಲಿ ಮತ್ತು ಬಳಿಕ ಜನರು ಹೆಚ್ಚು ಹಂಬಲಿಸಿದ್ದು ತರಕಾರಿಗಳಿಗೆ . ಹೊರಗಿನಿಂದ ತರಕಾರಿಗಳ ಪೂರೈಕೆ  ಇರಲಿಲ್ಲ .ಸ್ಥಳೀಯವಾಗಿ ತರಕಾರಿಗಳನ್ನು ಹೆಚ್ಚು ಬೆಳೆಯುತ್ತಿರಲಿಲ್ಲ . ಹಾಗಾಗಿ ತರಕಾರಿಗಳನ್ನೇ ಬೆಳೆಸಲು ಮತ್ತು ಜನರಿಗೆ ಪೂರೈಸಲು ನಡೆಸಿದ ಸಾಹಸಗಳ ಕಥನಗಳು ಸಂಕಲನದಲ್ಲಿ ಸಾಕಷ್ಟಿವೆ : 'ತರಕಾರಿ ಕೃಷಿಕರ ಮಾತಿನ ತಾಣ 'ದಲ್ಲಿ ಶ್ರೀಪಡ್ರೆಯವರ ನೇತೃತ್ವದಲ್ಲಿ ನಿರ್ಮಾಣವಾದ ಏಟಿವಿ ಎಂಬ ವಾಟ್ಸ್ ಅಪ್ ಗುಂಪಿನ ಮೂಲಕ ತರಕಾರಿ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿದ್ದು , ಮಹಾರಾಷ್ಟ್ರದ ಅವಿನಾಶ್ ಪ್ರಯತ್ನದಿಂದ ಕೃಷಿಕರೇ ಗ್ರಾಹಕರ ಮನೆಬಾಗಿಲಿಗೆ ತರಕಾರಿ ಹಣ್ಣುಗಳನ್ನು ಒಯ್ದು ಮಾರಿದ್ದು , 'ನಮ್ಮ ಊಟಕ್ಕೆ ನಮ್ಮದೇ ತರಕಾರಿ ' ಎನ್ನುವ ಮನಸ್ಥಿತಿಯಿಂದ ಸಾವಯವ ತರಕಾರಿ ಬೆಳೆಸಲು ಶುರುಮಾಡಿದ ಕೃಷಿಕರ ಸ್ವಾವಲಂಬನೆಯ ಬೇರಿಳಿಸುತ್ತಿರುವ ಕರಾವಳಿ , ಧಾರವಾಡ ಮಾಲತಿ ಮುಕುಂದ ಅವರು ಮಾವಿನಹಣ್ಣುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸಿ ಅವುಗಳ ಮಾರಾಟದಿಂದ ಲಕ್ಷ ಮೀರಿದ ಸಂಪಾದನೆ ಮಾಡಿದ್ದು , ಮೀಯಪದವಿನ ಚೌಟರ ಚಾವಡಿಯಲ್ಲಿ ಸೇರಿದ ಕೃಷಿಕರು ವಾಟ್ಸ್ ಅಪ್ ಬಳಗ ಮಾಡಿಕೊಂಡು ಸಾವಯವ ಕೃಷಿ ಮಳಿಗೆಗಳನ್ನು ತೆರೆದದ್ದು, ಕುಳಾಯಿ ಬಳಿ ಖಾಲಿ ಜಾಗದಲ್ಲಿ ನಿವೃತ್ತ ಹಿರಿಯರು ಕೈತೋಟ ಮಾಡಿ ತರಕಾರಿ ಬೆಳೆಸಿದ್ದು  - ಇಂತಹ ಹೊಸ ಆವಿಷ್ಕಾರದ ಸಂಗತಿಗಳು ಇಲ್ಲಿವೆ

ಅಡಿಕೆ ಕೃಷಿಗೆ ಸಂಬಂಧಿಸಿದಂತೆ 'ಕೈಹಿಡಿದ ಅಡಿಕೆ ಖೇಣಿ ' ಮತ್ತು 'ಮರುಜೀವಗೊಂಡ ಅಡಿಕೆ ತೋಟ ' ಕತೂಹಲಕಾರಿಯಾಗಿವೆ . ಡಿಜಿಟಲ್ ತಂತ್ರಜ್ನಾದ ಪಾಸಿಟಿವ್ ಪ್ರಯೋಜನಗಳಲ್ಲಿ 'ದಿನಸಿ ವ್ಯಾಪಾರಕ್ಕೆ ಡಿಜಿಟಲ್ ಸ್ಪರ್ಶ ' ಲೇಖನ ಒಳ್ಳೆಯ ಉದಾಹರಣೆ .ಹಾಗೆಯೇ ಹಳೆಯ ಸಹಪಾಠಿಗಳು ಮತ್ತೆ  ಒಗ್ಗೂಡುವ ಮತ್ತು ಸಂಬಂಧ ಬೆಸೆದ ಗಾಥೆಯೂ ಹ್ರದಯಸ್ಪರ್ಶಿಯಾಗಿದೆ . ಅಲ್ಲಿ ಕೇವಲ ಒಟ್ಟಿಗೆ ಸೇರುವುದಷ್ಟೇ  ಅಲ್ಲದೆ ಕಷ್ಟದಲ್ಲಿ ಇರುವವರಿಗೆ ಪರಸ್ಪರ ನೆರವಾಗುವ ಮಾನವೀಯ ಸ್ಪರ್ಶ  ಇದೆ

     ಕೊರೋನ ಕಾಲದಲ್ಲಿ ಮನೆಯಲ್ಲೇ ಉಳಿಯಬೇಕಾಗಿ ಬಂದವರು ಅಡುಗೆ ಮಾಡಲು ಕಲಿತದ್ದು , ಮನೆಯ ಊಟದಲ್ಲಿ ರುಚಿ ಕಂಡದ್ದು , ಊಟ ಬೇಕಾದವರಿಗೆ ಬುತ್ತಿ ಊಟವನ್ನು ಪೂರೈಕೆಮಾಡಿದ್ದು , ಬಾಬಣ್ಣ ಉಣ್ಣಿಯಪ್ಪ ಮಾಡಿ ತಾನೂ  ಉಣ್ಣುವ ಸಂತೃಪ್ತಿ ಪಡೆದದ್ದು : ಇವು ಕೂಡಾ ಕೊರೋನ ಯುಗದ ಇತ್ಯಾತ್ಮಕ ಉತ್ಪನ್ನಗಳು

   ಯಕ್ಷಗಾನದ ಕ್ಷೇತ್ರದಲ್ಲಿ ನಡೆಸಿದ ಪ್ರಯೋಗಗಳನ್ನು ನಾನು ಸ್ವತಃ ಆನ್ ಲೈನ್ ನಲ್ಲಿ ನೋಡಿದ್ದೇನೆ .ನಾ ಕಾರಂತ ಪೆರಾಜೆ ಅವರು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ವತಿಯಿಂದ ಸಿರಿಬಾಗಿಲು ರಾಮಕೃಷ್ಣ ಮಯ್ಯರು ನಡೆಸಿದ ಪ್ರಯೋಗಗಳನ್ನು ವಿವರಿಸಿದ್ದಾರೆ . ಎಲ್ಲ ಪ್ರಯೋಗಳನ್ನು ನಾನು ಆನ್ ಲೈನ್ ನಲ್ಲಿ ನೋಡಿದ್ದೇನೆ .ಹಾಗೆಯೇ ಪಟ್ಲ ಸತೀಶ ಶೆಟ್ಟರು ನಡೆಸಿದ ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟಗಳನ್ನೂ ನೋಡಿದ್ದೇನೆ .ಅದೇ ರೀತಿ  ಉಜಿರೆ ಅಶೋಕ ಭಟ್ಟರು ನಡೆಸಿದ ತಾಳಮದ್ದಳೆ ಪ್ರದರ್ಶನಗಳನ್ನೂ ಆನ್ ಲೈನ್ ನಲ್ಲಿ ವೀಕ್ಷಿಸಿದ್ದೇನೆ . ಇವರು ಎಲ್ಲರೂ ಮಾಡಿದ ಸಾಹಸದ ಪ್ರಯೋಗಳಿಂದಾಗಿ ಈಗ ಆನ್ ಲೈನ್ ನಲ್ಲಿ ಯಕ್ಷಗಾನವನ್ನು ನೋಡುವವರ ಪ್ರಮಾಣ  ಹೆಚ್ಚಾಗಿದೆ . ಯಕ್ಷಜಾಗೃತಿಯ ಬಗ್ಗೆ ನಾ ಕಾರಂತ ಪೆರಾಜೆಯವರು  ಕೊಟ್ಟ ಮಾಹಿತಿಗಳು ಸಾಂಸ್ಕೃತಿಕ ಸಂಗತಿಗಳ ದಾಖಲೀಕರಣದ ನೆಲೆಯಿಂದಲೂ ಮುಖ್ಯವಾಗಿವೆ

ಬದುಕನ್ನು ಹೊಸತಾಗಿ ಕಟ್ಟುವವರು , ಹಳ್ಳಿಗಳ ನೈಸರ್ಗಿಕ ಸುಖವನ್ನು ಅರಸುವವರು , ಕೃಷಿಯ ಮೂಲಕ ಜೀವನಪ್ರೀತಿಯನ್ನು ಬೆಳೆಸಿಕೊಳ್ಳುವವರು , ಸಾವಯವ ಸಾಮೂಹಿಕ ಜೀವನಕ್ಕೆ ಒಲಿಯುವವರು ಓದಬೇಕಾದ ಪುಸ್ತಕ ' ಮುಸ್ಸಂಜೆಯ ಹೊಂಗಿರಣ ' . ಅದು ಗಾತ್ರದಲ್ಲಿ ಕಿರಿದಾದುದು , ಸೂತ್ರದಲ್ಲಿ ಹಿರಿದಾದುದು


ಹೊಸ ಪುಸ್ತಕ: ಕೊರೊನಾ ಕಾಲದ ಸ್ಫೂರ್ತಿಯ ಕ್ಯಾಪ್ಸೂಲ್ ‘ಮುಸ್ಸಂಜೆಯ ಹೊಂಗಿರಣ’

 

ದೀಪ್ತಿ ಗಣಪತಿ ಪಳ್ಳತ್ತಡ್ಕ

ಪಾಸಿಟಿವ್ಎಂಬೊಂದು ಪದ ನಮ್ಮನ್ನು ಅತೀವ ಆತಂಕಕ್ಕೀಡುಮಾಡಿದ ಸನ್ನಿವೇಶವಿದು. ಕಾರಣಕೋವಿಡ್-19’ ಸಾಂಕ್ರಾಮಿಕ. ಪಾಸಿಟಿವ್ಬಗ್ಗೆನೆಗೆಟಿವ್ಬಿತ್ತರಿಸಿ ಜನರನ್ನು ಮತ್ತಷ್ಟು ಭೀತಿಗೆ ಒಳಗಾಗುವಂತೆ ಮಾಡಿದ ಕುಖ್ಯಾತಿ ದೃಶ್ಯ ಮಾಧ್ಯಮಗಳದ್ದು.

ಒಂದೆಡೆ ಲಾಕ್ಡೌನ್, ಮತ್ತೊಂದೆಡೆ ಸೋಂಕು ಹರಡುವಿಕೆಯ ಆತಂಕ, ಉದ್ಯೋಗ ನಷ್ಟ, ಆರ್ಥಿಕ ಹಿನ್ನಡೆ ಇತ್ಯಾದಿ ನಕಾರಾತ್ಮಕ ಸುದ್ದಿಗಳೇ ಮೆರೆಯುತ್ತಿದ್ದ ಮತ್ತು ಜನರನ್ನು ಮತ್ತಷ್ಟು ಗಾಬರಿ ಹುಟ್ಟಿಸುತ್ತಿದ್ದ ಇದೇ ಸಂದರ್ಭದಲ್ಲಿ ಅದೆಷ್ಟೋ ಸಕಾರಾತ್ಮಕ ಸಂಗತಿಗಳೂ ನಮ್ಮ ನಡುವೆ ಆಗಿಹೋಗಿವೆ. ಆದರೆ ಬೆಳಕಿಗೆ ಬಂದದ್ದು ಕಡಿಮೆ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡದ, ಆದರೆ ಅದೆಷ್ಟೋ ಮಂದಿಯ ಬಾಳು ಬೆಳಗಿದ ವಿದ್ಯಮಾನಗಳ ಹಾಗೂ ಯಶೋಗಾಥೆಗಳ ಗುಚ್ಛವೇ ಹಿರಿಯ ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆಯವರ ಲೇಖನಿಯಲ್ಲಿ ಅರಳಿದಮುಸ್ಸಂಜೆಯ ಹೊಂಗಿರಣ; ಕೊರೋನಾ ಕೃಪೆಯ ವರಗಳತ್ತ ಇಣುಕುನೋಟಕೃತಿ.

ಕೋವಿಡ್ ಲಾಕ್ಡೌನ್ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ ನಡೆದಿರುವ ಸಕಾರಾತ್ಮಕ ಸಂಗತಿಗಳನ್ನು, ಸಾಧನೆಗಳನ್ನು, ಸ್ವ-ಉದ್ಯೋಗ ಕ್ಷೇತ್ರದ ಹೊಸ ಹೊಳಹುಗಳನ್ನು, ಬದುಕಿನ ಹೊಸ ದಾರಿಗಳನ್ನು ಕೃತಿಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಕೋವಿಡ್ ಸಾಂಕ್ರಾಮಿಕ ಒಂದೆಡೆ ಜನರು ಅಂತರ ಕಾಯ್ದುಕೊಳ್ಳುವಂತೆ ಮಾಡಿದರೆ, ಮತ್ತೊಂದೆಡೆ ಹೊಸ ಸಾಧ್ಯತೆಗಳ ಮೂಲಕ ಹೇಗೆ ಜನ ಒಗ್ಗೂಡುವಂತೆ ಮಾಡಿತು ಎಂಬುದನ್ನೂ ಕೃತಿಯಲ್ಲಿ ಕಾಣಬಹುದು.

ಕೃಷಿ, ಸ್ವ ಉದ್ಯೋಗದ ಮೂಲಕ ಹೊಸ ಬದುಕು ಕಟ್ಟಿಕೊಳ್ಳಬೇಕೆಂದು ಬಯಸುವವರಿಗೆ ಹಲವು ಸಾಧ್ಯತೆಗಳನ್ನು ಕೃತಿ ಕಟ್ಟಿಕೊಡಲಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಇದಕ್ಕೆ ಕೃತಿಯಲ್ಲಿರುವ, ಐಟಿ ಕಂಪನಿ ತೊರೆದುಅಡಿಕೆ ಖೇಣಿಆರಂಭಿಸಿ ಯಶಸ್ಸುಕಂಡ ದಾವಣಗೆರೆಯ ಶಿವಕುಮಾರ್, ಲಾಕ್ಡೌನ್ ವೇಳೆ ಮನೆಮನೆಗೆ ಊಟ ತಲುಪಿಸುವ ಪುತ್ತೂರಿನ ಆದರ್ಶ ಎಂಬವರಬುತ್ತಿಯೂಟಪರಿಕಲ್ಪನೆಯ ನವೋದ್ಯಮದ ಕುರಿತಾದ ಲೇಖನಗಳೇ ಉತ್ತಮ ಉದಾಹರಣೆ.

ಉಳಿದಂತೆ, ಸವಾಲುಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೂ ಹಲವು ನಿದರ್ಶನಗಳನ್ನು ಇಲ್ಲಿ ಕಾಣಬಹುದು. ಚನ್ನಪಟ್ಟಣದವೈಫೈ ಹಳ್ಳಿ’, ‘ದಿನಸಿ ವ್ಯಾಪಾರಕ್ಕೆ ಡಿಜಿಟಲ್ ಸ್ಪರ್ಶ!’ ಇತ್ಯಾದಿ ಲೇಖನಗಳ ಮೂಲಕ ಬದುಕಿನ ಹೊಸ ಸಾಧ್ಯತೆಗಳು, ನವೀನ ಚಿಂತನೆಗಳ ಕುರಿತಾದ ಸೂಕ್ಷ್ಮಗಳನ್ನು ವಿವರಿಸಲಾಗಿದೆ.

ಎಂಜಿನಿಯರ್ ದಂಪತಿಯನ್ನು ಸೆಳೆದ ಮಣ್ಣಿನ ಗಂಧಲೇಖನವು ಉದ್ಯಾನ ನಗರಿಯಿಂದ ಉದ್ಯೋಗ ಬಿಟ್ಟು ಹಳ್ಳಿಗೆ ಬಂದ ದಂಪತಿಯು ಕೃಷಿಯಲ್ಲಿ ಹೊಸ ಸಾಧ್ಯತೆಯನ್ನು ಕಂಡುಕೊಳ್ಳುತ್ತಿರುವ ಬಗ್ಗೆ ಬೆಳಕು ಚೆಲ್ಲಿದೆ.

ಕಲೆ, ಸಾಹಿತ್ಯ ಚಟುವಟಿಕೆಗಳು ಕೋವಿಡ್ ಕಾಲದ ಏಕತಾನತೆಯನ್ನು ಹೋಗಲಾಡಿಸುವಲ್ಲಿ ಮತ್ತು ಜನಜಾಗೃತಿ ಮೂಡಿಸುವಲ್ಲಿ ಕ್ರಿಯಾತ್ಮಕವಾಗಿ ಹೇಗೆ ಕೆಲಸ ಮಾಡಿವೆ ಎಂಬುದನ್ನುಯಕ್ಷ ಜಾಗೃತಿ’, ‘ಅಂತರಂಗದ ಕಥನ ಮಾತಿನ ಮಂಟಪಇತ್ಯಾದಿ ಲೇಖನಗಳ ಮೂಲಕ ವಿವರಿಸಲಾಗಿದೆ.

ಒಟ್ಟಿನಲ್ಲಿ, ಲೇಖಕರೇ ಹೇಳಿರುವಂತೆ ಕೃತಿಯು ಕೋವಿಡ್ ಕಾಲದ ಪಾಸಿಟಿವ್ ಅಂಶಗಳನ್ನೊಳಗೊಂಡಸ್ಫೂರ್ತಿಯ ಕ್ಯಾಪ್ಸೂಲ್’. ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಅವರ ಮುನ್ನುಡಿ, ಡಾ. ಪಿ.ಮನೋಹರ ಉಪಾಧ್ಯರ ಬೆನ್ನುಡಿ, ದಿನೇಶ ಹೊಳ್ಳ ಅವರು ರಚಿಸಿರುವ ಮುಖಪುಟ ಚಿತ್ರದೊಂದಿಗೆ ಹೊರಬಂದಿರುವ ಕ್ಯಾಪ್ಸೂಲ್ನೊಂದ ಸಮಾಜಕ್ಕೆ ಭರವಸೆಯ ವಿಟಮಿನ್ ನೀಡುವುದು ಖಂಡಿತ.

ಪುಸ್ತಕದ ಹೆಸರುಮುಸ್ಸಂಜೆಯ ಹೊಂಗಿರಣ
ಲೇಖಕರುನಾ. ಕಾರಂತ ಪೆರಾಜೆ
ಪುಟಗಳು – 108
ಮುದ್ರಣಕೋಡ್ವರ್ಡ್ಪ್ರೊಸೆಸ್ ಆಂಡ್ ಪ್ರಿಂಟರ್ಸ್, ಮಂಗಳೂರು
ಬೆಲೆರೂ. 100


 

 

Tuesday, December 8, 2020

ಡಾ. ನಾ. ಮೊಗಸಾಲೆಯವರಿಗೆ ‘ಬೋಳಂತಕೋಡಿ ಕನ್ನಡ ಪ್ರಶಸ್ತಿ’


                         ಕಾಂತಾವರದಲ್ಲಿ ಕನ್ನಡ ಸಂಸ್ಕೃತಿಯ ಲೋಕವನ್ನು ರೂಪಿಸಿದ ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಇವರು 2020ನೇ ಸಾಲಿನ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಶಂಬರ 13ರಂದು ಕಾಂತಾವರದಲ್ಲಿ ಜರುಗಲಿದೆ.

                    ದಿ.ಬೋಳಂತಕೋಡಿ ಈಶ್ವರ ಭಟ್ಟರು ಪುತ್ತೂರು ಕರ್ನಾಟಕ  ಸಂಘಕ್ಕೆ ಹೊಸ ಆಯಾಮವನ್ನು ನೀಡಿದವರು. ಪ್ರಕಾಶನದ ಮೂಲಕ, ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಪುತ್ತೂರಿನಲ್ಲಿ ಅಕ್ಷರ ಮೆರವಣಿಗೆಯನ್ನು ಮಾಡಿದವರು. ಬೋಳಂತಕೋಡಿ ಅಭಿಮಾನಿ ಬಳಗವು ಪ್ರತಿವರುಷ ಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಹಿಂದಿನ ವರುಷಗಳಲ್ಲಿ ಪಳಕಳ ಸೀತಾರಾಮ ಭಟ್, ಸಿದ್ಧಮೂಲೆ ಶಂಕರನಾರಾಯಣ ಭಟ್ (ದಿ.), ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ(ದಿ.) ಹರೇಕಳ ಹಾಜಬ್ಬ, ಕುಂಞಿಹಿತ್ಲು ಸೂರ್ಯನಾರಾಯಣ ಭಟ್, ಕವಯಿತ್ರಿ ನಿರ್ಮಲಾ ಸುರತ್ಕಲ್, ಕು.ಗೋ.ಉಡುಪಿ, ಬಿ.ಶ್ರೀನಿವಾಸ ರಾವ್-ಸಾವಿತ್ರೀ ಎಸ್.ರಾವ್ ಮತ್ತು ಅಂಬಾತನಯ ಮುದ್ರಾಡಿಯವರಿಗೆ ಪ್ರದಾನಿಸಲಾಗಿದೆ.

                ಪ್ರಶಸ್ತಿ ಪುರಸ್ಕೃತರ ಪರಿಚಯ : ಡಾ.ನಾ.ಮೊಗಸಾಲೆಯವರಿಗೆ ಈಗ 76 ವರುಷ. ಕಾಂತಾವರದಲ್ಲಿ ಕನ್ನಡದ ನಿತ್ಯ ಆರಾಧನೆಯೊಂದಿಗೆ ಮಾತು ಮತ್ತು ಕೃತಿಗಳ ಪ್ರಕಟಣೆ ಮೂಲಕ ಕನ್ನಾಡು ಹೆಮ್ಮೆ ಪಡುವಂತಹ ಕೆಲಸ ಮಾಡಿದವರು. ಕಾಂತಾವರ ಕನ್ನಡ ಸಂಘ, ಅಲ್ಲಮ ಪ್ರಭು ಪೀಠ, ಮುದ್ದಣ ಕಾವ್ಯ ಪ್ರಶಸ್ತಿ, ವರ್ಧಮಾನ ಪ್ರಸಸ್ತಿ, ನಾಡಿಗೆ ನಮಸ್ಕಾರ ಸರಣಿ ಪ್ರಕಟಣೆಗಳ ಹಿಂದೆ ಮೊಗಸಾಲೆಯವರ ನೇತೃತ್ವ. ಕಾದಂಬರಿ, ಕಥಾ ಸಂಕಲನ, ಲೇಖನಗಳು, ವೈದ್ಯಕೀಯ ಕೃತಿಗಳು, ಸಂಪಾದನಾ ಕೃತಿಗಳು, ಬಯಲು ಬೆಟ್ಟ ಎನ್ನುವ ಆತ್ಮ ಕಥನಗಳ ರಚಯಿತರು.

                'ತೊಟ್ಟಿ' ಕಾದಂಬರಿಯು ತೆಲುಗಿಗೆ, 'ದೃಷ್ಟಿ, ಉಲ್ಲಂಘನೆ' ಕಾದಂಬರಿಯು ತೆಲುಗು, ಮರಾಠಿ, ಇಂಗ್ಲೀಷಿಗೆ ಹಾಗೂ 'ನನ್ನದಲ್ಲದು' ಮಲೆಯಾಳಕ್ಕೆ ಅನುವಾದಗೊಂಡಿದೆ. 'ಮೊಗಸಾಲೆ 50 ಮತ್ತು ಆಯಸ್ಕಾಂತಾವರ' ಮೊಗಸಾಲೆಯವರಿಗೆ ಸಲ್ಲಲ್ಪಟ್ಟ ಅಬಿನಂದನಾ ಕೃತಿಗಳು. ಮೂರು ಬಾರಿ ಸಾಹಿತ್ಯ ಅಕಾಡೆಮಿ ಪ್ರಸಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ಕುವೆಂಪು ಪ್ರಶಸ್ತಿ.. ಹೀಗೆ ಹಲವಾರು ಗೌರವಗಳಿಂದ ಪುರಸ್ಕೃತರು.