Thursday, September 15, 2016

ಜಲದಾಯಿ ಕೊಂಬುಗಿಂಡಿ ಈಗ ಜಲಸಾಕ್ಷರತೆಯ ಟೂಲ್

             ಕೊಂಬುಗಿಂಡಿ - ದೇವರ ನಾಡಿನ ಸಂಸ್ಕೃತಿಯ ಒಂದಂಗ. ಮಲೆಯಾಳದಲ್ಲಿದು 'ವಾಲ್ಕಿಂಡಿ'. ಕಾಲುದೀಪ, ಗಿಂಡಿಗಳಿಲ್ಲದ ಮನೆಯಿಲ್ಲ. ಮನೆಮಂದಿಗೆ, ಅತಿಥಿಗಳಿಗೆ ಕೈಕಾಲು, ಬಟ್ಟಲು-ಪಾತ್ರೆ ತೊಳೆಯಲು ಕೊಂಬುಗಿಂಡಿಯನ್ನೇ ಬಳಸುತ್ತಿರುವುದು ಪಾರಂಪರಿಕವಾಗಿತ್ತು. ಹೊಸ ವ್ಯವಸ್ಥೆಗಳು ಕೊಂಬುಗಿಂಡಿಯ ಜಾಗವನ್ನು ಅತಿಕ್ರಮಿಸಿದೆ. ಕೆಲವೊಂದು ಧಾರ್ಮಿಕ ಆಚರಣೆಗಳಿಗಷ್ಟೇ ಅಟ್ಟದಿಂದ ಇಳಿದು ಬರುತ್ತದೆ! ಬದಲಾದ ಕಾಲಘಟ್ಟದಲ್ಲೂ ಹಿರಿ ಮನೆಗಳಲ್ಲಿ ಗಿಂಡಿಯ ಬಳಕೆ ಈಗಲೂ ಊರ್ಜಿತ.
              ಅವಶ್ಯವಿದ್ದಷ್ಟೇ ನೀರು ಹೊರಹರಿಸಿ ಬಳಸುವುದು ಗಿಂಡಿಯ ವಿಶೇಷ. ಒಂದರ್ಥದಲ್ಲಿ ಹಿರಿಯರು ಹಾಕಿಕೊಟ್ಟ ನೀರಿನರಿವು. ನಳ್ಳಿ ನೀರು ಬರುವುದಕ್ಕಿಂತ ಮೊದಲು ಕೊಂಬಿನಗಿಂಡಿಯು ಕೇರಳದ ಮನೆಮನೆಯ ಜಲದಾಯಿ. ಒಂದೊಂದು ಮನೆಯಲ್ಲಿ ಕನಿಷ್ಠ ನಾಲ್ಕೈದು ಗಿಂಡಿಗಳು ಇದ್ದೇ ಇರುತ್ತಿದ್ದುವು. ಕಾಲುದೀಪ, ಆರತಿಗಳು, ಗಿಂಡಿಗಳೆಲ್ಲಾ ಕಂಚಿನಿಂದ ಸಿದ್ಧಪಡಿಸಿದವುಗಳು. ವಿವಿಧ ವಿನ್ಯಾಸದ ರಚನೆಗಳಲ್ಲಿ ಸೂಕ್ಷ್ಮ ಕಸೂತಿಗಳು ಹಿರಿಯರ ಕಲಾಗಾರಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
                ಅದು ಕಣ್ಣೂರು ಜಿಲ್ಲೆಯ ಮುಳಕ್ಕುನ್ನು ಸರಕಾರಿ ಪ್ರಾಥಮಿಕ ಶಾಲೆ. ಹಳ್ಳಿ ಪರಿಸರ. ಶಾಲೆಯಲ್ಲಿ ಹದಿನೈದಕ್ಕೂ ಮಿಕ್ಕಿದ ಡಿವಿಜನ್ಗಳಿವೆ. ಐನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಕೊಂಬುಗಿಂಡಿಗೆ ಇಲ್ಲಿ ಜಲಸಾಕ್ಷರತೆಯ ಕೆಲಸ. ಪುಟ್ಟ ಮಕ್ಕಳಿಗೆ ಎತ್ತಿ ಬಳಸಲು ಕಂಚಿನ ಗಿಂಡಿಯು ಭಾರವಾಗುತ್ತದೆ. ಬದಲಿಗೆ ಅದನ್ನೇ ಹೋಲುವ ಪ್ಲಾಸ್ಟಿಕ್ಕಿನ ಗಿಂಡಿಯನ್ನು ತಯಾರಿಸಿ ಮಕ್ಕಳ ಕೈಗೆ ನೀಡಿದ್ದಾರೆ. ಅಲ್ಲಿನ ಮಕ್ಕಳು ಬಟ್ಟಲು, ಕೈಕಾಲು ಅಲ್ಲದೆ ಉದ್ಯಾನದ ಹಸಿರಿಗೆ ನೀರುಣಿಸುವುದೂ ಇದರಲ್ಲೇ. ಇದು ಎಳೆ ಮನಸ್ಸುಗಳೊಳಗೆ ನೀರಿನ ಎಚ್ಚರ ಮತ್ತು ಜಲ ಸಂರಕ್ಷಣೆಗೆ ಬೀಜಾಂಕುರ. ಅವಶ್ಯವಿದ್ದಷ್ಟೇ ನೀರು ಬಳಸಿ ಎಂಬ ಪರೋಕ್ಷ ಪಾಠ.
               ಈ ಶಾಲೆಯು ನೀರಿನ ಅರಿವನ್ನು ಬಿತ್ತುವ ಚಟುವಟಿಕೆಗಳನ್ನು ನಡೆಸುತ್ತಿದೆ. ಆಡಳಿತದ ಗಮನ ಸೆಳೆದಿದೆ. ಮಾಧ್ಯಮಗಳು ಬೆಳಕು ಹಾಕಿವೆ. ಪ್ರತಿ ತಿಂಗಳು ವಿದ್ಯಾರ್ಥಿಗಳು 'ನೀರರಿವು' ಭಿತ್ತಪತ್ರವನ್ನು ಸಿದ್ಧಪಡಿಸುತ್ತಾರೆ. ಅದು ಜಲತರಂಗ ಹಸ್ತಪತ್ರಿಕೆಯಾಗಿ ರೂಪುಗೊಂಡು ಚಿಣ್ಣರು ಓದುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನೀರುಳಿತಾಯದ ಸಂದೇಶವನ್ನು ಸಾರುವ ಕವನಗಳು ಪ್ರಕಟಗೊಳ್ಳುತ್ತಿವೆ. ಕೇರಳದ ಅನೇಕ ಪ್ರಸಿದ್ಧ ಕವಿಗಳಿಂದ ಬರೆಸಿದ ಕವನಗಳು ಕಂದಮ್ಮಗಳ ಜ್ಞಾನಕ್ಕೊಂದು ಉಪಾಧಿ. ಈ ಕವನಗಳ ಸಂಕಲನವು ಅಚ್ಚು ಕಂಡಿದೆ. ಆರಂಭದಲ್ಲಿ ಒಂದೆರಡು ಕೈ ಬರಹದ ಪುಸ್ತಿಕೆ. ಈಗದು ಸುಂದರ ವಿನ್ಯಾಸದಿಂದ ಮುದ್ರಣವಾಗಿ ಮಕ್ಕಳ ಕೈ ಅಲಂಕರಿಸುತ್ತಿದೆ. ವಿದ್ಯಾರ್ಥಿಗಳಿಗೆ ಓದುವುದಕ್ಕಾಗಿಯೇ ಪ್ರತ್ಯೇಕವಾದ 'ಜಲ ಲೈಬ್ರರಿ'ಯಿದೆ.
                ಬಳಸಿ ಬಿಸಾಕುವ ಬಾಟ್ಲಿ, ಪೆಟ್ಟಿಗೆಗಳು ಇಲ್ಲಿ ವಿಜ್ಞಾನದ ಮಾದರಿಗಳು. ಪ್ರತೀ ತರಗತಿಗೆ ನೀರಿನ ಪ್ರಯೋಗದ ಮಾರ್ಗದರ್ಶನ ಮಾಡುವ ಅಧ್ಯಾಪಕರು. 'ಲೋ ಕೋಸ್ಟ್-ನೋ ಕೋಸ್ಟ್' ಕಿಟ್ ನಿರ್ಮಿಸುವ ಇಂತಹ ಪಾಠ ಪಠ್ಯೇತರ. ನ್ಯೂಟನ್ನಿನ ನಿಯಮ, ಜಾದೂಗಾರರ 'ವಾಟರ್ ಆಫ್ ಇಂಡಿಯಾ' ಮಸೂರದಲ್ಲಿ ಎದುರಿನ ಬಿಂಬ ಕಾಣುವ ಬಗೆ, ಮೋಡದಿಂದ ಮಳೆ ಹೇಗೆ.. ಇಂತಹ ಕುತೂಹಲಕಾರಿ ಪ್ರಯೋಗಗಳು. ಇದಕ್ಕೆಲ್ಲಾ ದುಬಾರಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿದ್ದಲ್ಲ ಎನ್ನುವುದು ಗಮನೀಯ.
               ಬಾಟ್ಲಿಗೆ ಸುತ್ತಲೂ ರಂಧ್ರ ಕೊರೆದು ನೀರು ತುಂಬಿ ಮೇಲೆತ್ತಿದ್ದಾಗ ಹೊರ ಚಿಮ್ಮುವ ನೀರಿನ ಧಾರೆಯು ಬಾಟ್ಲಿಯನ್ನು ತನ್ನ ಅಕ್ಷದಲ್ಲಿ ತಿರುಗಿಸುತ್ತದೆ. ಅಂದರೆ ಪ್ರತಿಯೊಂದು ಕ್ರಿಯೆಗೂ ಸಮ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂಬ ನ್ಯೂಟನ್ನದ ಮೂರನೇ ನಿಯಮವನ್ನು ಮನದಟ್ಟು ಮಾಡಲು ಇಂತಹ ಪ್ರಯೋಗಗಳು. ಇದಕ್ಕೂ ಜಲಸಂರಕ್ಷಣೆಗೂ ನೇರಾನೇರ ಸಂಬಂಧವಿಲ್ಲ. ಆದರೆ ವಿದ್ಯಾರ್ಥಿಗಳ ಮನಸೆಳೆಯುವ ಕೆಣಿ. ಜತೆಜತೆಗೆ ನೀರಿನ ಪಾಠ. ವಿಜ್ಞಾನದ ಇಂತಹ ಐವತ್ತಕ್ಕೂ ಮಿಕ್ಕಿದ ಸೂತ್ರಗಳ 'ಜಲಸೂತ್ರ' ಪ್ರಕಟವಾಗಿದೆ.  ಅದರಲ್ಲಿ ನೀರುಳಿತಾಯದ ಸಂದೇಶಕ್ಕೆ ಮೊದಲ ಮಣೆ.
                 ಶಾಲೆಯ ಎಲ್ಲಾ ಡಿವಿಜನ್ನಿಗೊಂದು 'ಕಿಂಡಿ ಲೀಡರ್' ಇದ್ದಾರೆ. ಎಲ್ಲಾ ಲೀಡರುಗಳಿಗೆ ಮತ್ತೊಬ್ಬ ಮುಖ್ಯಸ್ಥ. ಮಕ್ಕಳ ಮೇಲೆ ಎಷ್ಟು ಪರಿಣಾಮ ಎಂದರೆ ಲೀಡರ್ಗಳು ಮನೆಯಲ್ಲಿ ಆಧುನಿಕವಾದ ನಲ್ಲಿ ವ್ಯವಸ್ಥೆ ಇದ್ದರೂ ಕೊಂಬುಗಿಂಡಿಯನ್ನೇ ಬಳಸುತ್ತಾರೆ. ಹೆತ್ತವರಿಗೆ ನೀರಿನ ಅರಿವಿನ ಮಹತ್ವ ಅರಿವಾಗಿದೆ. 'ಇಂತಹ ಕೊಂಬುಗಿಂಡಿಯನ್ನು ಖರೀದಿಸಿ ಬಳಸುತ್ತೇವೆ, ಎನ್ನುವವರ ಸಂಖ್ಯೆ ದಿನೇದಿನೇ ವೃದ್ಧಿಸುತ್ತಿದೆ. ಮಕ್ಕಳ ಮನಸ್ಸನ್ನು ತಟ್ಟಿದ ನೀರಿನ ಎಚ್ಚರ ಮನೆಯ ಕದವನ್ನೂ ತಟ್ಟಿದೆ.
                ಕೇರಳದ ಶಿಕ್ಷಣ ಇಲಾಖೆಯು ಮುಳಕ್ಕುನ್ನು ಶಾಲೆಯ ನೀರಿನ ಪಾಠವನ್ನು ಶ್ಲಾಘಿಸಿದೆ. ಅಧ್ಯಾಪಕರಿಗೆ ವಿತರಿಸುವ ಇಲಾಖೆಯ ಮಾರ್ಗದರ್ಶನದಲ್ಲಿ ಕೊಂಬುಗಿಂಡಿ ಪ್ರಯೋಗವನ್ನು ಉಲ್ಲೇಖಿಸಿದ್ದಾರೆ. ಕೊಂಬುಗಿಂಡಿಯು ಜಲಸಂರಕ್ಷಣೆಯ ಒಂದು ಸಂಕೇತ ಮಾತ್ರ. ಇಂತಹ ಚಟುವಟಿಕೆಗಳಿಗೆ ಊರಿನವರ ಸಹಕಾರ ಸ್ಮರಣೀಯ. ಎಲ್ಲಾ ಕೊಂಬುಗಿಂಡಿಗಳೂ ದೇಣಿಗೆಯಾಗಿಯೇ ಬಂದಿವೆ, ಎನ್ನಲು ಅಧ್ಯಾಪಕರಿಗೆ ಹೆಮ್ಮೆ. ಈ ಶಾಲೆಯಲ್ಲಿ ನೀರಿನ ಕೊರತೆಯಿಲ್ಲ. ಆದರೆ ಹತ್ತಿರದ ಶಾಲೆಗಳು ಈ ಪ್ರಯೋಗವನ್ನು ತಮ್ಮಲ್ಲೂ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಕೆಲವರು ಅನುಷ್ಠಾನದತ್ತ ಹೆಜ್ಜೆ ಊರಿದ್ದಾರೆ.
                ಶಾಲೆಯ 'ಕೊಂಬುಗಿಂಡಿ'ಯ ಮೂಲಕ ನೀರಿನೆಚ್ಚರದ ಕಾವು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಊರಿನ ಮನೆಗಳಿಗೂ ಹಬ್ಬಿವೆ. ನೀರು ವ್ಯರ್ಥ ಮಾಡಬಾರದು. ಇದು ಜೀವಜಲ. ಎಚ್ಚರದಿಂದ ಬಳಸಬೇಕು, ಅರಿವು ಮೂಡುತ್ತಿದೆ. ನೂರಕ್ಕೂ ಮಿಕ್ಕಿ ಮನೆಗಳಲ್ಲಿ ಕಂಚಿನ ಕೊಂಬುಗಿಂಡಿ ಅಟ್ಟದಿಂದ ಕೆಳಗೆ ಇಳಿದಿವೆಯಂತೆ. ಜಲಸಾಕ್ಷರತೆಯಲ್ಲಿ ಶಾಲೆಯ ಸಾಧನೆಗೆ ಅಲ್ಲಿನ ಪ್ರಸಿದ್ಧ ಪತ್ರಿಕೆ ಮಲೆಯಳ ಮನೋರಮಾ ನಗದು ಪುರಸ್ಕಾರವನ್ನು ನೀಡಿ ಬೆನ್ನುತಟ್ಟಿದೆ.
                 ಹವಾಮಾನ ಬದಲಾಗುತ್ತಿದೆ. ವಾತಾವರಣದಲ್ಲಿ ಬಿಸಿ ಏರುತ್ತಿದೆ. ಮಳೆಗಾಲದಲ್ಲೂ ಮಳೆಯ ಕಣ್ಣುಮುಚ್ಚಾಲೆ. ಬೇಸಿಗೆಯಲ್ಲಿ ಬಾವಿ, ಕೆರೆಗಳು ಬತ್ತುತ್ತಿವೆ. ಕೊಳವೆ ಬಾವಿಗಳಲ್ಲಿ ನೀರು ಪಾತಾಳ ಸೇರಿವೆ. ಕೆಲವದರಲ್ಲಿ ಗಾಳಿ ಮಾತ್ರ! ನೀರಿನ ಬರದತ್ತ ವಾಲುತ್ತಿರುವ ಬದುಕಿಗೆ ನೀರಿನ ಎಚ್ಚರ, ಜಲ ಸಾಕ್ಷರತೆ ಭವಿಷ್ಯ ಬದುಕಿಗೆ ಅನಿವಾರ್ಯ. ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ನೀರಿನ ಪಾಠವನ್ನು ಹೊಸೆದ ಮುಳಕ್ಕುನ್ನು ಶಾಲೆಯ ಸಣ್ಣ ಕೆಲಸ ಕೇರಳಕ್ಕೆ ಮಾತ್ರವಲ್ಲ, ದೇಶಕ್ಕೆ ಮಾದರಿ. ಅಧ್ಯಾಪಕರಲ್ಲಿ ಇಂತಹ ಅರಿವು ಮೂಡಿದರೆ ಎಷ್ಟೋ ದೊಡ್ಡ ಪರಿಣಾಮ ಸಾಧಿಸಬಹುದು ಎನ್ನುವುದನ್ನು ಸಾರಿದೆ.
              ಕನ್ನಾಡಿನಲ್ಲೂ ಈ ಬಾರಿ ಬರದ ನೇರ ಅನುಭವ ನೋಡಿದ್ದೇವೆ. ಕುಡಿ ನೀರಿಗೂ ಒದ್ದಾಡುವಂತಹ ಸಂಕಷ್ಟವು ಬದುಕನ್ನು ನೇವರಿಸಿದೆ. ಈ ವರುಷ ಶೈಕ್ಷಣಿಕ ಸಂಸ್ಥೆಗಳಲ್ಲಿ ನೀರಿನ ಪಾಠದ ಸಂಚಲನ ಆರಂಭವಾಗಿದೆ. ಗಿಡ ನೆಡುವ, ನೀರಿಂಗಿಸುವ ನೀರಿನ ಎಚ್ಚರ ಹೆಜ್ಜೆಯೂರಿದೆ. ಕಳೆದೆರಡು ದಶಕದಿಂದ ಜಲತಜ್ಞ  ಶ್ರೀಪಡ್ರೆಯವರು ರಾಜ್ಯದ್ಯಂತ ನೀರಿನ ಯಶೋಗಾಥೆಗಳನ್ನು, ನೀರಿನ ಎಚ್ಚರಗಳನ್ನು ಚಿತ್ರ ಸಹಿತ ಜನರ ಮುಂದೆ ಹಿಡಿದಿದ್ದರು. ಸಾಕಷ್ಟು ಮಂದಿ ಜಲಯೋಧರು ರೂಪುಗೊಂಡರು. ಮಾಧ್ಯಮಗಳು ಸ್ಪಂದಿಸಿದುವು.
               ಸುಳ್ಯ ತಾಲೂಕಿನ ಗುತ್ತಿಗಾರು ಯುವಕ ಮಂಡಲವು ಕಳೆದ ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಬಿರ ಏರ್ಪಡಿಸಿತ್ತು. ಬತ್ತಿದ ನದಿಗಳ ದರ್ಶನ, ಕುಡಿಯುವ ನೀರಿನ ಬವಣೆಯನ್ನು ಕ್ಷೇತ್ರ ದರ್ಶನದಿಂದ ತೋರಿಸಿತ್ತು.  ಕಾಡುಗಳಿಗೆ ಮಕ್ಕಳನ್ನು ಕರೆದೊಯ್ದಿತ್ತು. ನಿಸರ್ಗದ ಪಾಠವನ್ನು ಮಾಡಿತ್ತು. ಯುವಕ ಮಂಡಲಗಳು ತಮ್ಮ ಚಟುವಟಿಕೆಗಳಲ್ಲಿ ಜಲಸಾಕ್ಷರತೆಯನ್ನೂ ಹಮ್ಮಿಕೊಳ್ಳಬಹುದು ಎಂದು ಗುತ್ತಿಗಾರು ಯುವಕ ಮಂಡಲ ತೋರಿದೆ. ಅತ್ತ ಶಿರಸಿಯ ಶಿವಾನಂದ ಕಳವೆ ಸಾರಥ್ಯದ 'ಕಾನ್ಮನೆ'ಯಲ್ಲಿ ನೀರಿನ ಪಾಠ ನಿರಂತರ.
                ಯಾವುದೇ ಸದ್ದು ಮಾಡದೆ ನೀರಿನ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದ ನೂರಾರು ಜಲಯೋಧರ ಪರಿಶ್ರಮ ಅಜ್ಞಾತ. ಮನಸ್ಸು ಮಾಡಿದರೆ ಕನ್ನಾಡಿನ ಶಾಲೆಗಳಲ್ಲೂ ಜಲ ಸಾಕ್ಷರತೆಯ ಥಿಯರಿ ಮತ್ತು ಪ್ರಾಕ್ಟಿಕಲ್ ಎರಡನ್ನೂ ಮಾಡಬಹುದು. ಕೇಳುವ ಮಕ್ಕಳಿದ್ದಾರೆ. ಅನುಷ್ಠಾನಿಸುವ ಹೆತ್ತವರಿದ್ದಾರೆ. ಆದರೆ ಹೇಳಿ ಕೊಡುವ ಅಧ್ಯಾಪಕರು ಬೇಕಾಗಿದ್ದಾರೆ!
(ಉದಯವಾಣಿ/ನೆಲದ ನಾಡಿ/೨-೯-೨೦೧೬)
  

0 comments:

Post a Comment