Thursday, September 1, 2016

ಬಟ್ಟಲು ತುಂಬಿದ ಹಣ್ಣುಗಳ 'ಫಲಾಹಾರ'


               'ದಿನಕ್ಕೊಂದು ಸೇಬು ತಿನ್ನಿ, ಆರೋಗ್ಯವಂತರಾಗಿ' - ಚಿಕಿತ್ಸಾಲಯವೊಂದರಲ್ಲಿದ್ದ ಫಲಕದ ವಾಕ್ಯವಿದು. ಜತೆಗೆ ಸೇಬುಹಣ್ಣನ್ನು ಕೈಯಲ್ಲಿ ಹಿಡಿದುಕೊಂಡ ಮಗುವಿನ ನಗು ಭಂಗಿಯ ಚಿತ್ರ.
             ಇದನ್ನು ದಂಪತಿ ಓದುತ್ತಿದ್ದಾರೆ. ತಮ್ಮ ಮಗುವಿನ ಮುಖ ನೋಡುತ್ತಾರೆ. ಸೇಬು ತಿನ್ನಿಸಿದ್ದು ಅಪಥ್ಯವಲ್ಲವೆಂಬ ಸಂತೋಷ. ದೂರದ ಸಿಮ್ಲಾ, ಅಮೇರಿಕಾದ ಸೇಬಿಗೆ ಸಂದಿತು, ಮಾನ! ರಾಸಾಯನಿಕಗಳಲ್ಲಿ ಮಿಂದೆದ್ದು ಉದರ ಸೇರುವ ಸೇಬಿನ ತಾಜಾತನವು ಈ ಖುಷಿಯಲ್ಲಿ ಲೀನವಾಯಿತು.
               ಬಂಟ್ವಾಳ ತಾಲೂಕಿನ ಮುಳಿಯ ಶಾಲೆಯಲ್ಲಿ ಜರುಗಿದ 'ಹಣ್ಣುಗಳೊಂದಿಗೆ ಒಂದು ದಿನ' ಕಲಾಪದ ಪ್ರದರ್ಶನ ಮಳಿಗೆಯಲ್ಲಿದ್ದ ಸಾಲುಸಾಲು ಹಣ್ಣುಗಳು ಚಿಕಿತ್ಸಾಲಯದ ಫಲಕವನ್ನು ಅಣಕಿಸಿದುವು! ಅಂದು ಹಿತ್ತಿಲು, ತೋಟ, ಗುಡ್ಡಗಳಲ್ಲಿ ಲಭಿಸುವ ನೂರಾರು ಹಣ್ಣುಗಳ ವೈವಿಧ್ಯಗಳಿದ್ದುವು.  ಊಟದ ಬಟ್ಟಲಿಗೆ  ಸ್ಥಳೀಯ ಹಣ್ಣುಗಳು ಮಿಳಿತಗೊಂಡುವು.
ಕಾಡುಹಣ್ಣುಗಳು ಕಾಡುವ ದಿನಗಳಿದ್ದುವು. ಸಾರಿಗೆ ವಿರಳವಾಗಿದ್ದಾಗ ಕಾಲ್ನಡಿಗೆ ಸಹಜ. ಒಂದೆರಡು ಕಿಲೋಮೀಟರ್ ಕಾಲ್ನಡಿಗೆಯ ಶಾಲಾ ಪಯಣದಲ್ಲಿ ಹೊಟ್ಟೆಗಿಳಿವ ಕಾಡುಹಣ್ಣುಗಳನ್ನು ಲೆಕ್ಕ ಇಟ್ಟವರಾರು? ಅದರೊಂದಿಗೆ ಬದುಕನ್ನು ಅರಳಿಸಿಕೊಂಡ ನೆನಪುಗಳು ಎಷ್ಟಿಲ್ಲ? ಸೇಬು, ಮುಸುಂಬಿ, ದ್ರಾಕ್ಷಿಯೊಳಗೆ ಒದ್ದಾಡುವ ಆಸೆಗಳಿಗೆ ಕಾಡುಹಣ್ಣುಗಳ ಪರಿಚಯ ಎಲ್ಲಿದೆ? .
              ಹಣ್ಣುಗಳ ಸೇವನೆಯು ಆರೋಗ್ಯದಾಯಕ. ವೈದ್ಯರ ಶಿಫಾರಸ್ಸು ಪೂರಕ. ಆಯಾಯ ಋತುವಿಗೆ ಅನುಗುಣವಾದ ಹಣ್ಣುಗಳನ್ನು ತಿನ್ನುವುದು ಪ್ರಕೃತಿ ತೋರಿದ ಹಾದಿ. ಆಧುನಿಕ ಜೀವನ ಶೈಲಿಯು ಈ ಹಾದಿಯನ್ನು ಮಸುಕಾಗಿಸಿದೆ. ಕಾಲಾಕಾಲದ ವಿವೇಚನೆಯಿಲ್ಲದೆ, ಋತುಗಳ ಪರಿವೆಯಿಲ್ಲದೆ ಎಲ್ಲವನ್ನೂ ಹೊಟ್ಟೆಗಿಳಿಸುವ ಯಾಂತ್ರಿಕ ಬದುಕಿನಿಂದ ರುಚಿಗಳು ಮಾಯವಾಗಿವೆ.
               ಒಂದೊಂದು ಹಣ್ಣಿನಲ್ಲಿ ಒಂದೊಂದು ರುಚಿ. ಅದರೊಳಗೆ ದೇಹಕ್ಕೆ ಬೇಕಾದ ವಿವಿಧ ವಿಟಮಿನ್ಗಳೋ, ಪ್ರೋಟೀನ್ಗಳೋ ಮಿಳಿತವಾಗಿರುತ್ತವೆ. ಗುಡ್ಡಕ್ಕೆ ಹೋದರೆ ನೇರಳೆ, ಕೇಪುಳು ಹಣ್ಣುಗಳು; ತೋಟದಲ್ಲಾದರೆ ಮಾವು, ಹಲಸು, ಪೇರಳೆ, ಚಿಕ್ಕು; ಅಂಗಳದಲ್ಲೋ ಚವಿ, ಚೆರ್ರಿಯಂತಹ ಹಣ್ಣುಗಳು. ಇವುಗಳ ರುಚಿಯನ್ನು ನಾಲಗೆಯು ಒಮ್ಮೆ ಹಿಡಿದುಬಿಟ್ಟರೆ ಆಯಿತು, ನೈಸರ್ಗಿಕ ಶಕ್ತಿಯನ್ನು ತಾವೇ ಆವಾಹಿಸಿಕೊಳ್ಳುತ್ತವೆ.
             'ಹಣ್ಣುಗಳೊಂದಿಗೆ ಒಂದು ದಿನ' ಮಾತುಕತೆಯನ್ನು ಆಯೋಜಿಸಿದ ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಹೇಳುತ್ತಾರೆ, ಬದಲಾದ ಜೀವನಶೈಲಿಯಲ್ಲಿ ರುಚಿಯನ್ನು ಕಳೆದುಕೊಂಡಿದ್ದೇವೆ. ಆಹಾರ ವೈವಿಧ್ಯಗಳು ಟೀವಿಗೆ ಸೀಮಿತ. ಮಕ್ಕಳಿಗೆ ರುಚಿಗಳ ಪರಿಚಯವಿಲ್ಲ. ಹಿರಿಯರು ಹೇಳಿಲ್ಲ. ಹೇಳಲು ಪುರುಸೊತ್ತಿಲ್ಲ. ಯಾಕೆ ಹೇಳಿ? ಮಗ ನೂರಕ್ಕೆ ನೂರು ಅಂಕ ತೆಗೆದಿದ್ದಾನೆ. ಇದಕ್ಕಿಂತ  ಮಿಕ್ಕ ಯೋಚನೆ, ಯೋಜನೆಗಳು ಬೇಕಾಗಿಲ್ಲ ಎನ್ನುವ ಮಾನಸಿಕ ತಡೆ. ಈ ಹಿನ್ನೆಲೆಯಲ್ಲಿ ಹಣ್ಣುಗಳ ಸೇವನೆಯು ನಿಯಮಿತವಾಗಬೇಕು. ಅದಕ್ಕೆ ಪ್ರೇರಣೆ ನೀಡಲು ಈ ಹಣ್ಣುಗಳೊಂದಿಗೆ ಒಂದು ದಿನ.
             ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸರು ಕನ್ನಾಡಿಗೆ ವಿವಿಧ ಹಣ್ಣುಗಳ ಕೃಷಿ ಸಾಧ್ಯತೆಯನ್ನು ಮನದಟ್ಟು ಮಾಡಿದ ಕೃಷಿಕರು. ತಮ್ಮ ಫಾರ್ಮಿನಲ್ಲಿ ಬೆಳೆದು, ಇತರರೂ ಬೆಳೆಯುವಂತೆ ಪ್ರೋತ್ಸಾಹಿಸಿದವರು. ಮಲೇಶ್ಯಾ ಮೂಲಕ ರಂಬುಟಾನ್, ಡೂರಿಯನ್, ಮ್ಯಾಂಗೋಸ್ಟಿನ್.. ಹಣ್ಣುಗಳ ಕೃಷಿಯನ್ನು ಸ್ವತಃ ಬೆಳೆದು ತೋರಿಸಿದವರು. ಮೌಲ್ಯವರ್ಧನೆಯನ್ನು ಮಾಡಿದ ಮೇಲ್ಪಂಕ್ತಿ. ಬೆಳೆಯುವವನೇ ಮಾರಬಹುದು ಎಂದು ತೋರಿಕೊಟ್ಟರು. ಕನ್ನಾಡಿಗೆ ಹೊಂದುವ ವಿವಿಧ ಅಪೂರ್ವ ದೇಸಿ, ವಿದೇಶಿ ಹಣ್ಣುಗಳ ನರ್ಸರಿ ಮಾಡಿದವರು. ಇಷ್ಟು ಹಿನ್ನೆಲೆ ಯಾಕೆ? ಇಂದು ಕೃಷಿಕರ ಹೊಲದಲ್ಲಿ ರಂಬುಟಾನ್ನಂತಹ ಹಣ್ಣುಗಳು ಫಲ ಕೊಡುವುದರ ಹಿಂದೆ ಸೋನ್ಸರ ಅಜ್ಞಾತ ಶ್ರಮವಿದೆ.
               ಹವಾಯ್ ಹಣ್ಣುಗಳ ಊರು. ಬೆಳೆಯುವಲ್ಲಿಂದ ಮಾರುವ ತನಕದ ವ್ಯವಸ್ಥಿತ ಜಾಲ ಅಚ್ಚರಿ. ಅಲ್ಲಿನ ಹಣ್ಣು ಕೃಷಿಕ ಕೆನ್ಲವ್ ಕನ್ನಾಡಿಗೆ ಬಂದಿದ್ದಾಗ ಸೋನ್ಸರನ್ನು ಭೇಟಿಯಾಗಿದ್ದರು. ಹಣ್ಣುಗಳ ವೈವಿಧ್ಯ ನೋಡಿ ಬೆರಗಾಗಿದ್ದರು. 'ಭಾರತದಲ್ಲೂ ನನಗೊಬ್ಬ ಸ್ನೇಹಿತ ಸಿಕ್ಕಿದ' ಅಂತ ಜಾಲತಾಣಗಳಲ್ಲಿ ಬರೆದುಬಿಟ್ಟಿದ್ದರು. ಇಷ್ಟೆಲ್ಲಾ ಯಾಕೆ ಹೇಳಿದೆ ಅಂದರೆ ಹಣ್ಣುಗಳ ಕುರಿತಾದ ಅರಿವು ಭಾರತಕ್ಕಿಂತಲೂ ವಿದೇಶಗಳಲ್ಲಿ ಹೆಚ್ಚಿವೆ. ಮೂಲಿಕಾ ತಜ್ಞ ವೆಂಕಟರಾಮ ದೈತೋಟ ಒಮ್ಮೆ ಹೇಳಿದ್ದರು, ನಾವು ಯಾವ ಪ್ರದೇಶದಲ್ಲಿ ವಾಸಿಸುತ್ತೇವೆಯೋ ಅದೇ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳಿಂದ ಆರೋಗ್ಯ ವೃದ್ಧಿ.
              ವಿವಿಧ ರಾಸಾಯನಿಕಗಳಿಂದ ತೋಯಿಸಿಕೊಂಡು, ಹಾರ್ಮೋನು ಲೇಪಿಸಿಕೊಂಡು, ತಾಳಿಕೆಯನ್ನು ದೀರ್ಘಗೊಳಿಸಿದ ಹಣ್ಣುಗಳತ್ತ  ಒಂದು ದೃಷ್ಟಿ ಇರಲಿ. ಇಂದು ಆದೇಶ ನೀಡಿದರೆ ನಾಳೆ ಬೆಳ್ಳಂಬೆಳಿಗ್ಗೆ ಬಾಳೆಹಣ್ಣು ರೆಡಿ ಮಾಡಿಕೊಡುವ ಕ್ಷಿಪ್ರ ವ್ಯವಸ್ಥೆಯನ್ನು ವೈಭವೀಕರಿಸಲು ಎಷ್ಟೊಂದು ಹೆಮ್ಮೆ ಪಡುತ್ತೇವಲ್ಲಾ. ತಾಜಾ ಹಣ್ಣುಗಳ ಸೇವನೆಯು ಬದುಕಿನ ಅಂಗವಾಗಬೇಕು. ಅದಕ್ಕಾಗಿ ಊಟದ ಬಟ್ಟಲಿಗೆ ಹಣ್ಣುಗಳು ಸೇರಲಿ.
               ಮುಳಿಯ ಕಾರ್ಯಕ್ರಮದಲ್ಲಿ ಸೋನ್ಸರು ಮುಖ್ಯ ವಿಚಾರದತ್ತ ಗಮನ ಸೆಳೆದರು _" ಅಮೇರಿಕಾ ದೇಶವು ಗೋಧಿ, ಅಕ್ಕಿಗಳನ್ನು ರಫ್ತು ಮಾಡುತ್ತವೆ. ಆಹಾರದಲ್ಲಿ ಇವುಗಳ ಸೇವನೆಗಿಂತಲೂ ಹಣ್ಣುಗಳ ಬಳಕೆ ವ್ಯಾಪಕವಾಗಿವೆ. ಹಾಗಾಗಿ ಅವರಿಗೆ ಗೋಧಿಯನ್ನು ರಫ್ತು ಮಾಡಲು ಸಾಧ್ಯವಾಯಿತು. ಹಣ್ಣುಗಳನ್ನು ಕನಿಷ್ಠ ಸಂಸ್ಕರಣೆ ಮಾಡಿ ಬೆಳೆದವನೇ ಮಾರುವಂತಾಗಬೇಕು. ಎಂದರು. ಸೋನ್ಸರಲ್ಲಿ ಬಹುತೇಕ ಹಣ್ಣುಗಳು ಮೌಲ್ಯವರ್ಧನೆಗೊಳ್ಳುತ್ತವೆ.
              ಬದುಕಿನಲ್ಲಿ ಅನುಷ್ಠಾನಕ್ಕೆ ಎಷ್ಟೋ ಬಾರಿ ಮಾದರಿಗಳು ಬೇಕಾಗಿವೆ. ಮುಳಿಯದ ಹಣ್ಣಿನ ಹಬ್ಬವು ಹೊಸ ಮಾದರಿಯನ್ನು ಸೃಷ್ಟಿಸಿದೆ. ಅಂದು ಹಣ್ಣುಗಳೇ ಊಟದ ತಟ್ಟೆಯನ್ನು ಆಕ್ರಮಿಸಿದ್ದುವು, ಅಲಂಕರಿಸಿದ್ದುವು. ಅನಾನಸು, ಪಪ್ಪಾಯಿ, ಗೇರುಹಣ್ಣು, ವಿವಿಧ ನಕ್ಷತ್ರನೇರಳೆ, ಹೂಬಾಳೆ, ಚಂದ್ರಬಾಳೆ, ಭಾಸ್ಕರ ಬಾಳೆ, ಜಾಂಜೀಬಾರ್, ಕಾವೇರಿ, ಲಾಂಗ್ಸಾಟ್ ಕರಬೂಜ, ದಾರೆಹುಳಿ, ಚಿಕ್ಕು, ಕಲ್ಲಂಗಡಿ.. ಹೀಗೆ ವಿವಿಧ ವೈವಿಧ್ಯ. ನಿಜಾರ್ಥದ 'ಫಲಾಹಾರ'. ಮೀಯಪದವಿನ ಕೃಷಿಕ ಡಾ.ಚಂದ್ರಶೇಖರ ಚೌಟರು ಈಚೆಗಷ್ಟೇ ಸ್ನೇಹಿತಗಡಣದೊಂದಿಗೆ ಮಲೇಶ್ಯಾ ದೇಶಕ್ಕೆ ಹೋಗಿ ಬಂದಿದ್ದರು. ಅಲ್ಲಿನ ತಾಜಾ ಹಣ್ಣುಗಳ ಮಾರುಕಟ್ಟೆಯತ್ತ ವಿಸ್ಮಯ ನೋಟ ಬೀರಿದರು.
              ಹಣ್ಣುಗಳ ಗುಂಗು ಹಿಡಿಸಿಕೊಂಡು ಓಡಾಡುತ್ತಿರುವಾಗ ಸ್ನೇಹಿತ ಕುಳಮರ್ವ ಶಂಕರ ಭಟ್ಟರು 'ನಿಮ್ಮೆದುರಲ್ಲೇ ಸಂಜೀವಿನಿ' ಎನ್ನುವ ಪುಸ್ತಕ ನೀಡಬೇಕೇ. ಅದರಲ್ಲಿ ಡಾ.ನಡಿಬೈಲು ಉದಯಶಂಕರರು ಹಣ್ಣುಗಳಿಗೆ ಸೇರುವ ರಾಸಾಯನಿಕ ವಿಷಗಳನ್ನು ಉಲ್ಲೇಖಿಸುತ್ತಾರೆ. "ದ್ರಾಕ್ಷಿಯ ಬೆಳೆಯನ್ನು ವರ್ಧಿಸಲು ಅದಕ್ಕೆ 'ಸಿಟೋಫೆಕ್ಸ್' ಸುರಿಯುತ್ತಾರೆ. ಮಾವಿನ ಮರವು ಹೆಚ್ಚು ಹೂ ಬಿಟ್ಟು ಹೆಚ್ಚಿ ಕಾಯಿಗಳು ಹಿಡಿಯುವಂತೆ ಮಾಡಲು 'ಪ್ಲಾಕ್ಲೋಬುಟ್ರಾಜಾಲ್' ಬಳಕೆ. ಕೀಟಗಳ ನಿಯಂತ್ರಣಕ್ಕೆ ಪ್ಯಾರಾಥಿಯಾನ್, ಮ್ಯಾಲಾಥಿಯಾನ್, ಡೈಮಿತೋಯೇಟ್, ಮೆಥಾಮಿಲ್, ಕಾಬರ್ಾರಿಲ್.. ಸಿಂಪಡಣೆ. ಇವೆಲ್ಲಾ ಒಂದೊಂದು ರೀತಿಯ ಘೋರ ವಿಷಗಳು."
             ವಿಷಬೇಡದ, ಸಿಂಪಡಣೆ ಬೇಕಾಗದ ಹಣ್ಣುಗಳು ನಮ್ಮ ಸುತ್ತ ಎಷ್ಟಿಲ್ಲ? ಹೆಚ್ಚೇಕೆ, ಹಲಸಿನ ಹಣ್ಣು, ಮಾವು, ಪಪ್ಪಾಯಿ ಸಾಲದೇ? ಹೆಚ್ಚು ಪ್ರತಿಷ್ಠೆಯನ್ನು ಹುಟ್ಟಿಸದ ಇಂತಹ ಹಣ್ಣುಗಳಳತ್ತ ಒಲವಿಲ್ಲ. ಬಲವಂತದಿಂದ ಒಲವು ಮೂಡಿಸಬೇಕಾದ ದಿನಮಾನಗಳಲ್ಲಿದ್ದೇವೆ. ಮುಳಿಯದ ಕಲಾಪದಲ್ಲಿ ಹಣ್ಣು ಕೃಷಿಕ ಅನಿಲ್ ಬಳೆಂಜರು ನೀಡಿದ ಚಿತ್ರ ಸಹಿತ ಮಾಹಿತಿಯು ಪ್ರಾಕ್ಟಿಕಲ್. ವಿವಿಧ ನಮೂನೆಯ ಹಣ್ಣುಗಳ ಗಿಡಗಳನ್ನು ತಂದು, ಅವುಗಳನ್ನು ಅಭಿವೃದ್ಧಿಗೊಳಿಸಿವ ಯುವ ಸಾಹಸಿ. ವಿದೇಶಿ ಹಣ್ಣುಗಳೂ ಕನ್ನಾಡಿಗೆ ಒಗ್ಗಿಕೊಳ್ಳುತ್ತವೆ ಎಂದು ಸೋನ್ಸರಂತೆ  ಸ್ವತಃ ಅನುಭವ ಪಡೆದಿದ್ದಾರೆ. ಇವರ ಬೆಳೆದ ಹಣ್ಣುಗಳ ಪ್ರದರ್ಶನ ಆಕರ್ಶಿಸಿತು.
               ಹಣ್ಣುಗಳೊಂದಿಗೆ ಒಂದು ದಿನವಲ್ಲ, ವರುಷವಿಡೀ ಸಿಗುವ ಸಂಪನ್ಮೂಲ ನಮ್ಮಲ್ಲಿದೆ. ಅದಕ್ಕೆ ಬೆಳಕು ಹಾಕಿದೆ, ಮುಳಿಯದ ಕಾರ್ಯಕ್ರಮ. ಹಲಸು ಸ್ನೇಹಿ ಕೂಟಕ್ಕೀಗ ಆರರ ಹರೆಯ. ತರಕಾರಿ, ಹಲಸು, ಮಾವು, ಕಾಡುಮಾವು, ಗೆಡ್ಡೆಗೆಣಸು, ಸಿರಿಧಾನ್ಯ.. ಹೀಗೆ ಒಂದೊಂದು ವಿಷಯಾಧಾರಿತವಾದ ಕಲಾಪಗಳನ್ನು ನಡೆಸುತ್ತಿದೆ. ಮಾವು, ಹಲಸು ಮತ್ತು ಇತರ ಹಣ್ಣುಗಳ ಹುಚ್ಚನ್ನು ಅಂಟಿಸಿಕೊಂಡ ಚಿಕ್ಕ ಬಳಗವಿದೆ. ನಾವೇನೂ ದೊಡ್ಡ ಪರಿವರ್ತನೆ ತರುತ್ತೇವೆ ಎನ್ನುವ ಹುಚ್ಚು ಇಲ್ಲ. ನಂನಮ್ಮ ಅಡುಗೆಮನೆಗಳು, ಜೀವನಶೈಲಿಗಳು ಬದಲಾಗಬೇಕು ಎನ್ನುವ ಆಶಯ.  ಅದು ಹಳಿ ಸೇರುತ್ತಿವೆಷ್ಟೇ, ಎಂದರು ವೆಂಕಟಕೃಷ್ಣ ಶರ್ಮ.
               ಕರಾವಳಿಯ ಮಣ್ಣು ಹಣ್ಣುಗಳ ಕೃಷಿಗೆ ಉತ್ತಮ. ಪ್ರಕೃತಿ ನಮ್ಮ ಪರವಾಗಿದೆ, ಎಂದವರು ಚೆಟ್ಟಳ್ಳಿ  ಐಐಹೆಚ್ ಮುಖ್ಯಸ್ಥ ಡಾ.ಸೆಂತಿಲ್ ಕುಮಾರ್. ಇನ್ಯಾಕೆ ತಡ..!

(ಉದಯವಾಣಿ-ನೆಲದನಾಡಿ ಅಂಕಣ)
 


0 comments:

Post a Comment