Tuesday, December 23, 2014

krishi yantha mela - 24th to 26th 2015 at Puttur (D.K.)

ಕೃಷಿ ಗೋಷ್ಠಿಗಳಿಗೆ ಕೃಷಿಕರು ಬೇಕಾಗಿದ್ದಾರೆ!

                ಅದೊಂದು ಗುಲಾಬಿ ಕೃಷಿಯ ವಿಚಾರಗೋಷ್ಠಿ. ನೂರಕ್ಕೂ ಮಿಕ್ಕಿ ಮಹಿಳೆಯರ ಉಪಸ್ಥಿತಿ. ಗುಲಾಬಿ ಕೃಷಿಯಿಂದ ಮಾರುಕಟ್ಟೆ ತನಕದ ಮಾಹಿತಿ ಪ್ರಸ್ತುತಿ. ಸುಮಾರು ಒಂದು ಗಂಟೆಯ ಕಂಠತ್ರಾಣದ ಪರಿಣಾಮ ನೋಡೋಣ ಎಂದು 'ನಿಮ್ಮಲ್ಲಿ ಎಷ್ಟು ಮಂದಿ ಹೂವಿನ ಕೃಷಿ ಮಾಡ್ತೀರಿ,' ಎಂದು ಪ್ರಶ್ನಿಸಿದೆ. ಯಾರೂ ಸ್ಪಂದಿಸಲಿಲ್ಲ. ಕೊನೆಗೆ ತಿಳಿಯಿತು, ಇವರಾರಿಗೂ ಕೃಷಿ ಮಾಡಲು ಜಾಗವಿಲ್ಲ. ಆಯೋಜಕರ ವಿನಂತಿಯಂತೆ ಆಗಮಿಸಿದ್ದಾರೆ. ಹುಬ್ಬಳ್ಳಿಯ ಜಯಶಂಕರ್ ತಮಗಾದ ಕಸಿವಿಸಿಯನ್ನು ಹಂಚಿಕೊಂಡರು.
               ಗುಲಾಬಿ ಕೃಷಿಯ ಮಾಹಿತಿ ಬೆಳೆಯುವವರಿಗೆ ಸಹಾಯಿ. ಮಾಹಿತಿಯನ್ನು ಅನುಷ್ಠಾನ ಮಾಡುವ ಕೃಷಿಕರೇ ಗೋಷ್ಠಿಗೆ ಬರಬೇಕೇ ವಿನಾ ಇತರರಿಗದು ಹೊಂದದು. ಕೃಷಿಕರೇ ಇಲ್ಲದೆ ಮೇಲೆ ಯಾರಿಗಾಗಿ? ಬಹುತೇಕ ಆಯೋಜಕರಲ್ಲಿ 'ಸಭಾಭವನ ತುಂಬಿದರೆ ಸಾಕು' ಎನ್ನುವ ಮನೋಭಾವ. ಸ್ಮರಣಿಕೆ, ಹೂ, ಹಾರಗಳ ಭರಾಟೆಯಲ್ಲಿ ಜಯಶಂಕರರ ಒಂದು ಗಂಟೆಯ ಮರುಭರ್ತಿ ಹೇಗೆ? ಇಂತಹ ಕಾರ್ಯಕ್ರಮದಿಂದ ಏನು ಪ್ರಯೋಜನ? ಊಟೋಪಚಾರ, ಪ್ರಚಾರ, ಆಮಂತ್ರಣ, ಸಭಾ ಕಲಾಪ.. ಹೀಗೆ ಸಾವಿರಾರು ರೂಪಾಯಿ ಖರ್ಚು. ಪರಿಣಾಮ? ಕೃಷಿ ಕ್ಷೇತ್ರದಲ್ಲಿ ನಡೆಯುವ ಬಹುತೇಕ ಕೃಷಿ ಉತ್ಸವ, ಮೇಳಗಳ ಹಣೆಬರಹವಿದು.
              ಎರಡು ವರುಷಗಳ ಹಿಂದೆ ಕಾಫಿನಾಡಲ್ಲೊಂದು ಹಲಸು ಮೇಳ. ಪವರ್ ಪಾಯಿಂಟ್ ಸಿದ್ಧತೆಯೊಂದಿಗೆ ಮುನ್ನಾ ದಿನವೇ ಲಗ್ಗೆ ಹಾಕಿದ್ದೆ. ಮರುದಿವಸ ಸಮಯಕ್ಕೆ ಸರಿಯಾಗಿ ಹಾಜರಿದ್ದೆ. ರಕ್ತದೊತ್ತಡ ಏರಿಸಿಕೊಂಡ ಒಂದಿಬ್ಬರು ಸಿಬ್ಬಂದಿಗಳು ಮೇಲಧಿಕಾರಿಗಳನ್ನು  ಕಾಯುತ್ತಿದ್ದರು.  ಒಂಭತ್ತೂವರೆಯ ಕಾರ್ಯಕ್ರಮ ಹನ್ನೊಂದಕ್ಕೆ ಶುರುವಾಯಿತು. ಸಂಬಂಧಪಡದ ಗಣ್ಯರು, ಹಲಸಿನ ಹಣ್ಣನ್ನು ತಿನ್ನದ ಮಹಾನುಭಾವರು, ರಾಜಕೀಯ ಅಂಟಿಸಿಕೊಂಡವರಿಂದ ಕೊರೆತವೋ ಕೊರೆತ. ಉದ್ಘಾಟನೆ ಮುಗಿಯುವಾಗಲೇ ಊಟದ ತಟ್ಟೆ ಸದ್ದುಮಾಡುತ್ತಿತ್ತು.
                   ವಿಚಾರ ಗೋಷ್ಠಿಯ ಶುಭಚಾಲನೆಗೆ ಉದ್ಘೋಷಕರಿಂದ ಹಸಿರು ನಿಶಾನೆ. ಸಭಾಭವನದಲ್ಲಿದ್ದವರು  ಊಟದ ಟೇಬಲಿನ ಮುಂದೆ ಕ್ಯೂ ನಿಂತಿದ್ದರು. ಸಂಘಟಕರ, ಸಂಪನ್ಮೂಲ ವ್ಯಕ್ತಿಗಳ ಮೇಲಿನ ಗೌರವದಿಂದ ಉಪಸ್ಥಿತರಿದ್ದ ಹತ್ತಾರು ಮಂದಿ ಆಕಳಿಸುತ್ತಾ ಗೋಷ್ಠಿಗೆ ಸಾಕ್ಷಿಯಾದರು. ಊಟ ಮುಗಿಸಿ, ವೀಳ್ಯ ಜಗಿಯುತ್ತಾ, ಹರಟುತ್ತಾ ಬಹ್ವಂಶ ಕರಗಿಹೋದರು. ಗೋಷ್ಠಿ ನಡೆಯುತ್ತಾ ಇರುವಾಗ  ಸಮಾರೋಪಕ್ಕೆ ತರಾತುರಿ. ಮೂರು ದಿವಸದಿಂದ ನನ್ನಂತೆ ತಯಾರಿ ನಡೆಸಿ ಬಂದಿದ್ದ  ಸಂಪನ್ಮೂಲ ವ್ಯಕ್ತಿಗಳ ಸಮಯವು ಸಂಘಟಕರ ಅವಜ್ಞೆಯಿಂದಾಗಿ ಟುಸ್ಸಾಯಿತು!
                 ಬಹಳ ದೂರದಿಂದ ಆಗಮಿಸಿ ಹಲಸಿನ ಕುರಿತು ಉಪಯುಕ್ತವಾದ ಮಾಹಿತಿ ನೀಡಿದ್ದಾರೆ. ಇದು ಕೃಷಿಕರ ಅಭಿವೃದ್ಧಿಗೆ ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ,' ಉದ್ಘೋಷಕರ ತೀರ್ಪು ಆಲಿಸುತ್ತಿದ್ದಂತೆ  ಚೂರಿಯಿಂದ ಇರಿದ ಅನುಭವ. ಸಭಾಭವನದಲ್ಲಿದ್ದ ಹತ್ತೋ ಇಪ್ಪತ್ತೋ ಮಂದಿ ಇದ್ದರಲ್ಲಾ, ಅವರೆಲ್ಲಾ ಕೃಷಿಕರಲ್ಲ. ಮೇಳದ ಅನ್ಯಾನ್ಯ ವಿಭಾಗಗಳನ್ನು ನಿಭಾಯಿಸುತ್ತಿದ್ದವರಷ್ಟೇ.
                  ಇಷ್ಟು ಕಾರ್ಯಕ್ರಮಕ್ಕೆ ಲಕ್ಷಗಟ್ಟಲೆ ವೆಚ್ಚ! ಆ ಮೇಳದ ಉದ್ಘಾಟನೆಯಲ್ಲಿ ಭಾಗವಹಿಸಿ ಹೊಟ್ಟೆ ತುಂಬಾ ಉಂಡುಹೋಗಿದ್ರಲ್ಲಾ, ಅವರೆಲ್ಲಾ ಯಾರು? ಇವರು ಗೋಷ್ಠಿ ಬಿಡಿ, ಸಮಾರೋಪದಲ್ಲೂ ಪತ್ತೆ ಇಲ್ಲವಲ್ಲಾ. ವಾರದ ಬಳಿಕ ಸನಿಹದ ಕೃಷಿಕರೊಬ್ಬರು ಮಾತಿಗೆ ಸಿಕ್ಕರು - ಸಂಘಟಕರಿಗೆ ಮಾತ್ರ ಮೇಳದ ಅರಿವಿತ್ತು.  ಕೃಷಿಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಪ್ರಚಾರವಿರಲಿಲ್ಲ. ರಸ್ತೆ ಬದಿಯಲ್ಲಿ ದೊಡ್ಡ ದೊಡ್ಡ ಪ್ಲೆಕ್ಸಿಗಳನ್ನು ತೂಗಿಸಿದರೆ ಏನೂ ಪ್ರಯೋಜನ? 
              ಸರಕಾರಿ ಪ್ರಣೀತ ಕಲಾಪಗಳ ಕತೆನೂ ಇಷ್ಟೇನೇ. ಉದ್ಘಾಟನೆ, ಸಮಾರೋಪ, ಕಿರು ಪುಸ್ತಕ ಬಿಡುಗಡೆ.. ಈ ತ್ರಿದೋಷಗಳು ವಿಚಾರಗೋಷ್ಠಿಗಳಿಗೆ ದೊಡ್ಡ ಶಾಪ. ಇವು ಬೇಡವೆಂದಲ್ಲ, ಕಡಿಮೆ ಅವಧಿಯಲ್ಲಿ ಚೊಕ್ಕವಾಗಿ ಮಾಡಿ ವಿಷಯಕ್ಕೆ ನ್ಯಾಯ ಸಲ್ಲಿಸುವ ಎಷ್ಟು ಕಾರ್ಯಕ್ರಮಗಳು ಬೇಕು? ಶಿಷ್ಠಾಚಾರವನ್ನು ಬಿಡಲಾಗದ ಒದ್ದಾಟ, ಚಡಪಡಿಕೆ. ಆಹ್ವಾನಿಸಿದ ಕೃಷಿಕರಿಗೆ ನೋವಾದರೂ ಪರವಾಗಿಲ್ಲ,  ವರಿಷ್ಠರಿಗೆ ಎಲ್ಲಿ ನೋವಾಗಿಬಿಡುತ್ತದೋ ಎಂಬ ಭಯ. ಕೃಷಿಕಪರ ಮನಸ್ಸಿನ ಅಧಿಕಾರಿಗಳನ್ನೂ ಬಿಡದ   ಶಿಷ್ಠಾಚಾರದ ವೈರಸ್.
               ಗೋಷ್ಠಿಗಳಿಗೆ ಪ್ರಚಾರ ನೀಡಿ, ಕೃಷಿಕರನ್ನು ಸಂಪರ್ಕಿಸಿ, ಅವರನ್ನು ಗೌರವದಿಂದ ಆಹ್ವಾನಿಸುವ, ಗೌರವಿಸುವ ಸಂಘಟಕರು ಸಾಕಷ್ಟಿದ್ದಾರೆ. ಇಲ್ಲೂ 'ಬುದ್ಧಿಪೂರ್ವಕವಾಗಿ' ಎಡವಟ್ಟು ಆಗಿಬಿಡುತ್ತದೆ ಸಂಪನ್ಮೂಲ ವ್ಯಕ್ತಿಗಳು ಅನ್ಯಭಾಷಿಕರವರಾಗಿದ್ದರೆ ಅವರ ಪವರ್ ಪಾಯಿಂಟ್ ಪ್ರಸ್ತುತಿ, ಭಾಷಣಗಳು ಬಹುತೇಕರಿಗೆ ಅರ್ಥವಾಗದು. ಕೆಲವೆಡೆ ಕನ್ನಡಕ್ಕೆ ಭಾಷಾಂತರಿಸುವ ವ್ಯವಸ್ಥೆ ಇದ್ದರೂ ಹೊತ್ತು ಮೀರಿರುತ್ತದೆ. ಆಗ ಚಿತ್ತಸ್ಥಿತಿ ಅಸ್ವಸ್ಥವಾಗಿರುತ್ತವೆ!
                 ಅಕಾಡೆಮಿಕ್ ಉದ್ದೇಶದಿಂದ ಸಿದ್ಧಪಡಿಸಿದ ಪವರ್ಪಾಯಿಂಟ್ ಪ್ರಸ್ತುತಿಗಳಲ್ಲಿ ಸೆಂಟಿಮೀಟರ್ ಲೆಕ್ಕದಲ್ಲಿ ಅಡಿಕೆಯ ಗಾತ್ರ, ಕೊಕ್ಕೋದ ಬೀಜದ ಅಳತೆ, ಗ್ರಾಂಗಳಲ್ಲಿ ಅಡಿಕೆಯ ತೂಕ, ಮರಗಳ ಲೆಕ್ಕಾಚಾರ..ಗಳೇ ತುಂಬಿರುತ್ತವೆ. ಕೃಷಿಕರಿಗೆ ಇದು  ಅರ್ಥವಾದರೂ ತಮ್ಮ ಅನುಭವಕ್ಕೆ ನಿಲುಕದ್ದರಿಂದ ಆಸಕ್ತಿ ಕಳೆದುಕೊಳ್ಳುತ್ತಾರೆ. ಮಧ್ಯೆ ವಿತರಿಸುವ ಚಹ, ಬಿಸ್ಕತ್ತಿನಿಂದಲೂ ಆಸಕ್ತಿ ಕುದುರದು! ವಿಜ್ಞಾನಿಗಳ ಭಾಷೆ-ಭಾವ ಕೃಷಿಕರಿಗೆ ಅರ್ಥವಾಗದು. ಹಾಗೆಂದು ಸಂವಹನ ದೃಷ್ಟಿಯಿಂದ ಕೃಷಿಕರ ಬಾಷೆಯನ್ನೂ ಕಲಿಯುವ ಅಗತ್ಯವಿದೆ. ಆಗ ಮಂಡಿಸುವ ವಿಚಾರಗಳು ಅರ್ಥವಾಗುತ್ತವೆ. ಅನುಷ್ಠಾನ ಯೋಗ್ಯವೋ, ಅಲ್ವೋ ಎಂದು ತನ್ನ ಮಿತಿಯಲ್ಲಿ ನಿರ್ಧರಿಸಲು ಸಹಯವಾಗುತ್ತವೆ. ಅಪ್ಡೇಟ್ ಆಗದ ಪವರ್ಪಾಯಿಂಟ್ಗಳನ್ನು ಪದೇ ಪದೇ ತೋರಿಸುವ ಜಾಣರೂ ಇದ್ದಾರೆನ್ನಿ.
               ಗೋಷ್ಠಿಗಳ ಆಯೋಜನೆಯಲ್ಲಿ ಪ್ರೇಕ್ಷಕರ ಆಸಕ್ತಿ ಏನು ಎನ್ನುವುದು ಮುಖ್ಯ. ಪ್ರಸ್ತುತಿಯಾಗುವ ವಿಷಯ, ಆಸಕ್ತಿ - ಇವರೆಡೂ ಮಿಳಿತವಾಗದಿದ್ದರೆ ಕಲಾಪವೇ ಗುಳುಂ. ಸಭಾಭವನ ತುಂಬಿದೆ ಎಂದ ಮಾತ್ರಕ್ಕೆ ಒತ್ತಾಯದ ಮಾಘಸ್ನಾನವೂ ಸಮಂಜಸವಲ್ಲ. ಯಾವ ವಿಚಾರದ ಸುತ್ತ ಗೋಷ್ಠಿ ಏರ್ಪಸಿರುತ್ತೇವೋ, ಅದರಲ್ಲಿ ಆಸಕ್ತಿಯಿರುವ ಕೃಷಿಕರನ್ನಷ್ಟೇ ಆಹ್ವಾನಿಸಿದರೆ ಉದ್ದೇಶ ಸಾರ್ಥಕವಾಗುತ್ತದೆ. ಇಂತಹ ವ್ಯವಸ್ಥೆ ಮಾಡಿಕೊಳ್ಳಲು ತ್ರಾಸವಾದರೂ ಅನಿವಾರ್ಯ.
                ಪ್ರತಿಷ್ಠಿತ ಸಂಸ್ಥೆಗಳು ತಮ್ಮ ಮಹಾಸಭೆ, ಪ್ರದರ್ಶನ, ಬೆಳ್ಳಿ-ಚಿನ್ನದ ಹಬ್ಬಗಳನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳುವುದುಂಟು. ವಿಚಾರಗೋಷ್ಠಿಗಳೇ ಕಾರ್ಯಕ್ರಮದ ಜೀವಾಳ ಅಂತ ಮುಜುಗರವಾಗುವಷ್ಟೂ ಹೇಳುತ್ತಾರೆ. ಗೌಜಿ-ಗಮ್ಮತ್ತುಗಳ ಮಧ್ಯೆ ಗೋಷ್ಠಿಗಳು ನರಳುತ್ತಿರುತ್ತವೆ.  ಜತೆಗೆ ಜವಾಬ್ದಾರಿ ಹೊತ್ತ ವ್ಯಕ್ತಿಯೂ ನೋವಿಂದ ನರಳುವ ದೃಶ್ಯವನ್ನು ಹತ್ತಿರದಿಂದ ನೋಡಿದ್ದೇನೆ. ಪತ್ರಿಕೆಗಳಲ್ಲಿ  ಪೂರ್ಣಪುಟದ ಜಾಹೀರಾತು ಪ್ರಕಟವಾಗುತ್ತವೆ. ಅದರಲ್ಲಿ ಪದಾಧಿಕಾರಿಗಳ, ಅತಿಥಿಗಳ ಭಾವಚಿತ್ರಗಳು ಯಥೇಷ್ಟ.  ಉದ್ಘಾಟನೆ, ಸಮಾರೋಪ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿಚಾರಗಳು ಕಣ್ಣಿಗೆ ರಾಚುವಷ್ಟು ಮುದ್ರಿತವಾಗಿರುತ್ತವೆ. ಆದರೆ ಜಾಹೀರಾತಿನಲ್ಲಿ ಗೋಷ್ಠಿಗಳ ವಿವರಗಳಿಗೆ ಜಾಗವೇ ಇಲ್ಲ! ಗೋಷ್ಠಿಗಳಲ್ಲಿ ಆಯೋಜಕರ ಅನುಪಸ್ಥಿತಿಯೂ ದೊಡ್ಡ ವಿಪರ್ಯಾಸ.   
                 ಸರಕಾರದ ಮಟ್ಟದಲ್ಲಿ 'ರೈತ' ಎನ್ನುವ ಪದಪುಂಜ ಹೇಗೆ ಬಳಕೆಯಾಗುತ್ತದೋ, ಅದೇ ರೀತಿ ದೊಡ್ಡ ಸಮಾರಂಭಗಳಲ್ಲಿ 'ಕೃಷಿ ಗೋಷ್ಠಿ' ಎನ್ನುವುದು ಹೇಳಿಕೊಳ್ಳಲು ಇರುವ ವ್ಯವಸ್ಥೆಯಷ್ಟೇ. ಕೃಷಿ ಗೋಷ್ಠಿಯ ಇನ್ನೊಂದು ಸೋಲು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯಲ್ಲೂ ಆಗುವುದಿದೆ. 'ಇಂತಹವರ ಒತ್ತಾಯಕ್ಕೆ ನಾನು ಬಂದಿದ್ದೇನೆ' ಎನ್ನುವವರೂ ಇದ್ದಾರೆ. ಯಾರು ಯಾವ ವಿಷಯದಲ್ಲಿ ಪರಿಣತರೋ ಅಂತಹವರನ್ನು ಆಹ್ವಾನಿಸಿದರೆ ಸಂಘಟಕರಿಗೂ, ಕೃಷಿಕರಿಗೂ ಪ್ರಯೋಜನ.
ಕೃಷಿಕರ ಔದಾಸೀನ್ಯವೂ ಗೋಷ್ಠಿಗಳ ವಿಫಲತೆಗೆ ಮತ್ತೊಂದು ಕಾರಣ. ಗೋಷ್ಠಿ ನಡೆಯುವ ದಿನ, ವಿಷಯಗಳು ತಲುಪದಿರುವುದೇ ಹೆಚ್ಚು. ಒಂದು ವೇಳೆ ಎಲ್ಲವೂ ಗೊತ್ತಾಗಿದ್ದರೂ, ಅಲ್ಲಿಗೆ ಹೋಗಿ ಮಾಡುವುದೇನಿದೆ? ನಮ್ಮ ಅನುಭವದ ಮುಂದೆ ಅವೆಲ್ಲಾ ಏನು? ನಮಗೆ ಅವರು ಹೇಳಬೇಕಾಗಿಲ್ಲ... ಇಂತಹ ಮನಃಸ್ಥಿತಿಗಳೂ ಇಲ್ಲದಿಲ್ಲ. ತುಂಬಿದ ಕೊಡ ಎಂದೂ ತುಳುಕದು ಅಲ್ವಾ. ಮಾಹಿತಿಗಳು ಅಪ್ಡೇಟ್ ಆಗುವ ಕಾಲವಿದು. ಅನುಭವಕ್ಕೆ ವರ್ತಮಾನ ಸೇರಿಕೊಂಡರೆ ವೃತ್ತಿಯಲ್ಲಿ ಸುಭಗತೆ ಕಾಣುವುದಕ್ಕೆ ಸಾಧ್ಯ.
              ನಾಲ್ಕು ಅಡಿಕೆ ಗೊನೆ, ಕೊಕ್ಕೋ, ಬಾಳೆ, ಅಕ್ಕಿ ಮುಡಿ, ಗದ್ದೆ ಬೇಸಾಯದ ಸಲಕರಣೆಗಳು, ಜತೆಗೆ ಭೀಮ ಗಾತ್ರದ ಪ್ರೆಕ್ಸಿಗಳು.. ಇವಿಷ್ಟನ್ನು 'ಕೃಷಿ ಮೇಳ-ಉತ್ಸವ' ಎಂದು ಕರೆಯುವ ಚಾಳಿ ಬೇಕಾಗಿಲ್ಲ. ಬದಲಿಗೆ, ನಿಜವಾದ ಕೃಷಿಕರು ಉಪಸ್ಥಿತರಿರಲಿ. ಅವರನ್ನು ಗೌರವದಿಂದ ಕಾಣುವಂತಾಗಬೇಕು. ಆಹ್ವಾನಿಸಿದ ಸಂಪನ್ಮೂಲ ವ್ಯಕ್ತಿಗಳ ಅನುಭವದ ಮಾತಿಗೆ ಕಿವಿಗಳು ಸಾಕ್ಷಿಯಾಗಲಿ. ಕೃಷಿಕರ ಸಮಯಕ್ಕೂ ಬೆಲೆಯಿದೆ ಅಲ್ವಾ. ಹಸಿವು ನೀಗಲು ಊಟೋಪಚಾರ ಸಾಕು. ಕಾಂಚಾಣವೇ ನುಂಗುವ ಅದ್ದೂರಿತನದಿಂದ ಬರಿಗುಲ್ಲು-ನಿದ್ದೆಗೇಡು. ಕೃಷಿ ಕಾರ್ಯಕ್ರಮಗಳಿಗೆ 'ಜನ ಸೇರಿಸುವ' ಯತ್ನಕ್ಕಿಂತ 'ಜನರು ಬರುವಂತೆ ಮಾಡುವ' ಜಾಣ್ಮೆ ಮುಖ್ಯ.