Thursday, January 15, 2009

ರಟ್ಟೆ ಬಲದ ಅಕ್ಕಿ ರವೆ

'ನೋಡಿ ಸಾರ್, ರಾಜಮುಡಿ ಅಕ್ಕಿಯ ರವೆ. ಕಲಬೆರಕೆ ಇಲ್ಲ. ಒಳ್ಳೆ ರುಚಿ.' ಬೆಂಗಳೂರು ಕೃಷಿಮೇಳದ ಮಳಿಗೆಯೊಂದರಲ್ಲಿ ಹೊಯ್ಸಳ ಎಸ್. ಅಪ್ಪಾಜಿ ವಿವರಣೆ.

'ಏನ್ರೀ ನಿಮ್ ರವೆಯ ವಿಶೇಷ' - ಒಬ್ಬರ ಕೀಟಲೆ ಪ್ರಶ್ನೆ.

'ಸರ್, ಇದು ಮಿಲ್ಲಿನದಲ್ಲ; ರಾಗಿ ಕಲ್ಲಲ್ಲಿ ಬೀಸಿರೋ ರವೆ.' ಅಷ್ಟರೊಳಗೆ ಪ್ರಶ್ನೆ ಕೇಳಿದವರೇ ನಾಪತ್ತೆ! ಇರಲಿ, ಕಲ್ಲಿನಲ್ಲಿ ಬೀಸಿದ್ದಕ್ಕೆ ಏನು ಪ್ರತ್ಯೇಕತೆ?

ಅಪ್ಪಾಜಿ ಹೇಳುತ್ತಾರೆ: ಯಂತ್ರದೊಳಗೆ ರವೆಯಾಗುವಾಗ ಸಹಜವಾಗಿ ಅಕ್ಕಿಯೂ ಬಿಸಿಯಾಗುತ್ತದೆ. ಇದರಿಂದ ರವೆಯ ಸಹಜ ರುಚಿ ಮತ್ತು ಪರಿಮಳ ಕಡಿಮೆಯಾಗುತ್ತದೆ. ಒಂದರ್ಥದಲ್ಲಿ ರವೆ ಬೆಂದ ಹಾಗೆ. ರುಚಿ, ಪರಿಮಳ ಉಳಿಯಲು ಸಾವಯವ ಕೃಷಿಯ ಪಾಲೂ ಇರಬಹುದು.
ಮತ್ತೆ ತಿರುಗಿತು ರಾಗಿಕಲ್ಲು

ಇವರು ಅಕ್ಕಿ ತೊಳೆದು ಮೊದಲು ಎರಡು-ಎರಡೂವರೆ ಗಂಟೆ ಕಾಲ ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ರಾಗಿ ಕಲ್ಲಲ್ಲಿ ಬೀಸುತ್ತಾರೆ. 'ಯಾವ ಕಾರಣಕ್ಕೂ ಅಕ್ಕಿ ನೀರಿನಲ್ಲಿ ನೆನೆಯಬಾರದು' ಎಚ್ಚರಿಸುತ್ತಾರೆ ಅಪ್ಪಾಜಿ. ನೆರಳಿನಲ್ಲಿ ಒಣಗಿಸಿದರೆ ನಂತರ ಸಣ್ಣ ಅಡ್ಡವಾಸನೆ ಬರುತ್ತದಂತೆ. ಸಿದ್ಧ ರವೆಯನ್ನಿವರು ಜರಡಿಯಲ್ಲಿ ಗಾಳಿಸಿ ದಪ್ಪ ತರಿ, ಸಣ್ಣ ರವೆ ಮತ್ತು ನಯ ರವೆ - ಹೀಗೆ ಮೂರು ವಿಧ. ಸಣ್ಣ ತರಿಗಳು ಉಪ್ಪಿಟ್ಟಿಗೆ, ನಯವಾದದ್ದು ಇಡ್ಲಿಗೆ.

ಉಣ್ಣೇನಹಳ್ಳಿಯ ವಸುಂಧರೆ ಜೈವಿಕ ಕೃಷಿಕರ ಸೇವಾ ಸಂಸ್ಥೆಯ ಸ್ವಸಹಾಯ ಗುಂಪುಗಳು ಈ ರವೆಯ ತಯಾರಕರು. ಅನುಕ್ರಮವಾಗಿ ಹದಿನೈದು ಮತ್ತು ಹದಿನಾಲ್ಕು ಮಂದಿಯಿರುವ 'ವಸುಂಧರೆ' ಮತ್ತು 'ವಾರಿಧಿ' - ಪುರುಷರ ಸ್ವಸಹಾಯ ಗುಂಪುಗಳು ಮತ್ತು ಹದಿನಾಲ್ಕು ಮಂದಿಯಿರುವ 'ವಸುಂಧರೆ' ಸ್ತ್ರೀ ಸ್ವಸಹಾಯ ಗುಂಪಿನ ಉತ್ಪನ್ನವಿದು. ಪುರುಷ ಗುಂಪಿನವರು ಸಾವಯವ ರೀತಿಯಲ್ಲಿ ಬೆಳೆಸುವ ರಾಜಮುಡಿ ಅಕ್ಕಿಯನ್ನು 'ಪುಡಿಗಟ್ಟುವವರು' ಸ್ತ್ರೀ ಗುಂಪಿನವರು.

ಮೂರು ವಿಭಾಗಗಳ ಕೆಲಸವಿದು. ಒಂದು ವಿಭಾಗ ಅಕ್ಕಿ ತೊಳೆದು, ಒಣಗಿಸಿಕೊಡುತ್ತದೆ. ಮತ್ತೊಂದು ತಂಡ ಕಲ್ಲಿನಲ್ಲಿ ಬೀಸಿ ರವೆ ಮಾಡುತ್ತದೆ. ಮೂರನೆಯದು ಪ್ಯಾಕಿಂಗ್ ವಿಭಾಗ.

ಐವತ್ತು ಕಿಲೋ ಅಕ್ಕಿಯು ರವೆಯಾಗುವಾಗ ಮೂರು ಕಿಲೋ ಲುಕ್ಸಾನು! ಅಕ್ಕಿಯ ಬೆಲೆ ಇಪ್ಪತೈದು ರೂಪಾಯಿ. ರವೆಗೆ ಇಪ್ಪತ್ತೆಂಟು. ಮೂರು ರೂಪಾಯಿ ಉತ್ಪಾದನಾ ವೆಚ್ಚ. ಇದರಲ್ಲಿ ಅಕ್ಕಿ ಬೀಸಿದವರಿಗೆ ಕಿಲೋಗೆ ಒಂದು ರೂಪಾಯಿ. ಉಳಿದೆರಡು ರೂಪಾಯಿಯಲ್ಲಿ ತಲಾ ಇಪ್ಪತ್ತೈದು ಪೈಸೆ ಮಾತೃಸಂಸ್ಥೆಗೆ ಮತ್ತು ಸ್ತ್ರೀಶಕ್ತಿ ಗುಂಪಿಗೆ. ಮಿಕ್ಕುಳಿದದ್ದರ ಸಮಾನ ಹಂಚಿಕೆ.
'ಕೇವಲ ಭತ್ತ ಮಾರಾಟ ಮಾಡುವುದಲ್ಲ, ಮೌಲ್ಯವರ್ಧನೆ ಮಾಡಬೇಕು ಎಂದು ಸ್ಥಳೀಯ ಸಂಪನ್ಮೂಲ ಬಳಸಿ ಕೆಲಸ ಶುರು ಮಾಡಿದೆವು' ಎನ್ನುತ್ತಾರೆ ಅಪ್ಪಾಜಿ.

ಆದೇಶ ಬಂದಂತೆ ರವೆ ತಯಾರಿ. ಸಿದ್ಧ ಮಾಡಿಟ್ಟುಕೊಳ್ಳುವುದಿಲ್ಲ. 'ಕನಿಷ್ಠ ಐವತ್ತು ಕಿಲೋಕ್ಕೆ ಆದೇಶ ಬರಬೇಕು. ಅದಕ್ಕಿಂತ ಕಡಿಮೆಯಾದರೆ ತಯಾರಿ ವೆಚ್ಚವೇ ಹೆಚ್ಚಾಗುತ್ತದೆ.'

ಕಿಲೋ, ಅರ್ಧ ಕಿಲೋಗಳ ಪ್ಯಾಕಿಂಗ್. ಆದೇಶ ಕೊಟ್ಟು, ಮೊತ್ತವನ್ನು ಬ್ಯಾಂಕಿಗೆ ಪಾವತಿಸಿದರೆ ಲಾರಿ ಮೂಲಕ ಪಾರ್ಸೆಲ್ ಪಾರ್ಸೆಲ್. 'ವರುಷದಲ್ಲಿ ಕನಿಷ್ಠ ಒಂದೂವರೆ ಟನ್ ಬಿಕರಿ.' ಮಳೆಗಾಲದಲ್ಲಿ ತಯಾರಿ ಕಷ್ಟ. ಬಿಸಿಲು ಬಾರದಿದ್ದರೆ ಗುಣಮಟ್ಟ ಕೆಡುತ್ತದೆ.

'2007ರ ಜಿಕೆವಿಕೆ ಕೃಷಿಮೇಳದಲ್ಲಿ ಉಚಿತ ಮಳಿಗೆ ಸಿಕ್ಕಿತ್ತು. ಒಳ್ಳೆ ಪ್ರತಿಕ್ರಿಯೆಯೂ. ಒಯ್ದವರು ಪುನಃ ಫೋನಿಸಿ ಬೇಕು ಎಂದರು.' ಸ್ಥಳೀಯ ಮಾರಾಟವಷ್ಟೇ ಆಗುತ್ತಿದ್ದ ಅಕ್ಕಿ ರವೆ ರಾಜಧಾನಿ ಹೊಕ್ಕಿತು!

ಬೆಂಗಳೂರಿನ ಸಹಜ ಸಮೃದ್ಧ, ಗ್ರೀನ್ ಫೌಂಡೇಶನ್, ಜೈವಿಕ ಕೃಷಿಕರ ಸೊಸೈಟಿ ಮೊದಲಾದ ಸಂಸ್ಥೆಗಳ ಸಂಪರ್ಕ. 'ಅವರಿಂದ ಪಡೆದ ಗ್ರಾಹಕರು ಈಗ ನೇರ ಸಂಪರ್ಕಿಸುತ್ತಿದ್ದಾರೆ. ಬೆಂಗಳೂರಲ್ಲೇ ದೊಡ್ಡ ಗ್ರಾಹಕವರ್ಗವಿದೆ. ಮೈಸೂರು, ಹಾಸನಗಳಲ್ಲಿ ನಮ್ಮ ರವೆಯನ್ನೇ ನಿತ್ಯ ತಿನ್ನುವವರಿದ್ದಾರೆ!' ಎಂಬ ಸಂತಸ ಇವರದು.
ರಾಜಮುಡಿ
ಹಿಂದೆ ಮೈಸೂರು ಮಹಾರಾಜರಿಗೆ ಹೊಳೆನರಸೀಪುರದಿಂದ ಸರಬರಾಜಾಗುತ್ತಿದ್ದ ಅಕ್ಕಿಯಿದು. ರಾಜರಿಗೆ ಮುಡಿಪಾದುದರಿಂದ 'ರಾಜಮುಡಿ'. ನಾಲ್ಕೂವರೆ ಅಡಿ ಬೆಳೆಯುತ್ತದೆ. ಅಕ್ಕಿ ಸಿಹಿ. 'ಒಂದು ಕಪ್ನಿಂದ ನಾಲ್ಕು ಕಪ್ ಅನ್ನ ಆಗುವಷ್ಟು ಒದಗು.' ಕೆಂಪು ತಳಿಯೂ ಇದೆ - 'ರಾಜಭೋಗ'. 'ಇತ್ತೀಚೆಗೆ ಕಡಿಮೆ ಅವಧಿಯ ಹೈಬ್ರಿಡ್ ತಳಿಗಳು ದಾಂಗುಡಿಯಿಡುತ್ತಿವೆ. ರಾಜಮುಡಿ ಹಂತಹಂತವಾಗಿ ಕೃಷಿಕ ಒಲವು ಕಳಕೊಳ್ಳುತ್ತಿದೆ' - ಹೊಯ್ಸಳರ ಖೇದ ಒಂದೆಡೆ. 'ವರುಷಕ್ಕೆ 50-60 ಕ್ವಿಂಟಾಲ್ ಅಕ್ಕಿ ಮಾರಾಟವಾಗುತ್ತದೆ' ಎಂಬ ಸಂತಸ ಮತ್ತೊಂದೆಡೆ.

(94494 62397, 08175-272525)

ಮುಳುಗಿದ ನೌಕೆ ತೇಲಿತು

ಆಡಳಿತ ಯಂತ್ರವು 'ಬಡತನದ ರೇಖೆಗಿಂತ ಕೆಳಗಿನವರು' ಎಂಬ ಶಬ್ಧವನ್ನು ಆಗಾಗ್ಗೆ ಬಳಸುತ್ತಿರುತ್ತದೆ. ಸರಿ, ಈ 'ಕೆಳಗಿನವರಿಗಿಂತಲೂ ಕೆಳಗಿನ'ವರಿಗೆ ಯಾವ ರೇಖೆ?

ಇಲ್ಲಿ ನೋಡಿ, ಪುತ್ತೂರು ಕೆಮ್ಮಾಯಿಯ ರಾಮಣ್ಣ ಗೌಡರು ಯಾವ 'ರೇಖೆಗೆ' ಸೇರುತ್ತಾರೋ ಗೊತ್ತಿಲ್ಲ! ಅದೊಂದು ಜೋಪಡಿ. ಅಲ್ಲ, ಕೋಣೆ! ಹಳೆ ಕಟ್ಟಡದ ಒಂದು ಪಾರ್ಶ್ವ. ಮತ್ತೊಂದು ಪಾರ್ಶ್ವದಲ್ಲಿ ಅಂಗಡಿಯಿತ್ತು. ಲೋಟ ನೆಲದಲ್ಲಿಟ್ಟರೆ ನೆಟ್ಟಗೆ ನಿಲಲಾಗದ ನೆಲ. ಅರೆ ಬಿರಿದ ಗೋಡೆಗಳು. ಮುರಿದ ಬಾಗಿಲು, ಸೋರುವ ಸೂರು. ಮಳೆಗಾಲದಲ್ಲಿ ಕೊಡೆ ಹಿಡಿದೇ ಬೆಳಗು ಮಾಡುವ ಸ್ಥಿತಿ.

ಸ್ನಾನ-ಶೌಚಕ್ಕೆ ಬಟ್ಟೆಯ ತೆರೆ-ಮರೆ. ಯಾವುದಕ್ಕೂ ರಿಪೇರಿಗೆ ಬಗ್ಗದ ಸೂರು. ಕಳೆದ ಮಳೆಗಾಲಾರಂಭದಲ್ಲಂತೂ ಗೋಡೆಯೂ ಬೀಳಬೇಕೇ. ಇದಕ್ಕೆ ತಿಂಗಳಿಗೆ ಐವತ್ತು ರೂಪಾಯಿ ಬಾಡಿಗೆ! ಇದು ರಾಮಣ್ಣ ಗೌಡರ ಮನೆ. ಹೆಂಡತಿ, ಮಗಳೊಂದಿಗೆ 17 ವರುಷದ ವಾಸ. ಬಂಧು-ಬಳಗ ಇದ್ದರೂ ಅವರನ್ನು ಮರೆತು ಎರಡು ದಶಕ ಸಂದಿತು.

ಜೊತೆಗೆ ಅಂಟಿದ ಅನಾರೋಗ್ಯ. ನಡೆಯಲು ಸಾಹಸಪಡುವ, ಎಲ್ಲರಂತೆ ಉಣ್ಣಲು ಪರದಾಡುವ ದೇಹಸ್ಥಿತಿ. ಯಾರೊಬ್ಬರೂ ಹತ್ತಿರ ಸೇರಿಸಿಕೊಳ್ಳಲಾಗದ ಬದುಕು. ಪತ್ನಿ ರುಕ್ಮಿಣಿ. ಅಂಗನವಾಡಿ ಸಹಾಯಕಿ. ಗಂಡ ಅಶಕ್ತನಾದಾಗ ನೆರಳಾದರು. ಹೋಟೆಲ್, ಕೂಲಿ, ಮೇಸ್ತ್ರಿಯಾಗಿ....ಕುಟುಂಬವನ್ನು ಹೇಗೋ ನಿಭಾಯಿಸುತ್ತಿದ್ದ ಗಂಡನ ಅಶಕ್ತತೆ ರುಕ್ಮಿಣಿಯವರಿಗೆ ಅಗ್ನಿಪರೀಕ್ಷೆಯಾಗಿತ್ತು

ಅಂಗನವಾಡಿಯಲ್ಲಿ ಅರ್ಧಹೊತ್ತು ಕೆಲಸ. ಉಳಿದ ಹೊತ್ತಲ್ಲಿ ಕೂಲಿಕೆಲಸ. ತನಗೆ ಸಿಗುವ ಒಂಭೈನೂರು ಮತ್ತು ಗಂಡನಿಗೆ ಸರಕಾರದಿಂದ ಬರುವ ನಾಲ್ಕುನೂರು ರೂಪಾಯಿ, ಕೂಲಿಯಲ್ಲಿ ಸಿಕ್ಕುವ ನಾಲ್ಕು ಕಾಸು - ಇವಿಷ್ಟೇ ಸಂಪಾದನೆ. ಇದರಲ್ಲಿ ಸಂಸಾರದ ನೌಕೆ ತೇಲಬೇಕು! ನೌಕೆ ಮುಳುಗುತ್ತಿದ್ದಾಗ ಎತ್ತಿ ಹಿಡಿವವರೇ ಇಲ್ಲದ ದಿನಗಳನ್ನು ರುಕ್ಮಿಣಿ ನೆನೆಯುತ್ತಾರೆ - 'ಒಲೆ ಮೇಲೆ ನೀರಿಟ್ಟು, ಗಂಡ ತರುವ ಅಕ್ಕಿಗಾಗಿ ಕಾದು ಕಾದು ಬೇಸತ್ತು, ಬರಿಗೈಯಲ್ಲಿ ಬಂದಾಗ ಪಕ್ಕದ ಮನೆಯಿಂದ ಅಕ್ಕಿ ಸಾಲ ತಂದು ಹೊಟ್ಟೆ ತುಂಬಿಸುತ್ತಿದ್ದೆವು.'

ಮಗಳು ವನಿತಾ. ಪಿ.ಯು.ಸಿ.ಉತ್ತೀರ್ಣಳಾಗಿದ್ದಾಳೆ! ಇಂತಹ ಸ್ಥಿತಿಯಲ್ಲೂ ದಂಪತಿಗಳು ಮಗಳನ್ನು ಶಾಲೆಗೆ ಕಳುಹಿಸಿರುವುದು ನಿಜಕ್ಕೂ ಶಹಬ್ಬಾಸ್! ಗೌಡರು ರಾತ್ರಿ ಹೊತ್ತು ಹೆಂಡತಿ ಮತ್ತು ಮಗಳನ್ನು ಮನೆಯ ಯಜಮಾನರ ಮನೆಗೆ 'ತಂಗಲು' ಕಳುಹಿಸುತ್ತಿದ್ದರು. 'ನಾನಾದರೋ ಗಂಡನ ಜತೆ ಉಳಿಯಬಹುದಿತ್ತು. ಆದರೆ ಬೆಳೆಯುತ್ತಿರುವ ಮಗಳ ಜವಾಬ್ದಾರಿ-ರಕ್ಷಣೆ ಮುಖ್ಯ ಅಲ್ವಾ' - ಇಬ್ಬರ ಕಾಳಜಿ.

ಅಲ್ಲಿ ಅಲ್ಪಸ್ವಲ್ಪ ಕೆಲಸ. ಕೊಟ್ಟ ತಿಂಡಿ ಮಗಳಿಗೆ ಬುತ್ತಿಗೆ. ಮಿಕ್ಕುಳಿದುದನ್ನು ಗಂಡ-ಹೆಂಡತಿ ಹಂಚಿ ತಿನ್ನುತ್ತಿದ್ದರು. ಉಡಲು ಒಂದೇ ವಸ್ತ್ರ. 'ನಮ್ಮ ಸ್ಥಿತಿ ನೋಡಿ ಮರುಗಿ ಸೀರೆ ಕೊಟ್ಟವರೂ ಇದ್ದಾರೆ' ಎನ್ನುವ ರುಕ್ಮಿಣಿ ಅಮ್ಮನಿಗೆ, 'ಇಷ್ಟೆಲ್ಲಾ ಬಡತನವಿದ್ದರೂ ಮಗಳು ಶಾಲೆಗೆ ಹೋಗಬೇಕು' ಎಂಬ ಛಲ. ಕಳೆದ ವರುಷದ ಪಠ್ಯ ಪುಸ್ತಕ ವನಿತಾಳಲ್ಲಿ ಹೊಸತಾಗುತ್ತದೆ. ಬರೆಯುವ ಪುಸ್ತಕ, ಶಾಲಾ ಶುಲ್ಕಗಳನ್ನು ದಾನಿಗಳು ನೀಡಿದ್ದಾರೆ.

ಮಧ್ಯಂತರ ಮತ್ತು ಬೇಸಿಗೆ ರಜಾದಲ್ಲಿ ವನಿತಾ ಎಲ್ಲರಂತೆ 'ರಜಾಮಜಾ' ಕಳೆಯುವುದಿಲ್ಲ! ಬದಲಿಗೆ, ಗೇರು ಫ್ಯಾಕ್ಟರಿಯಲ್ಲಿ ದುಡಿದು ಅಷ್ಟಿಷ್ಟು ಸಂಪಾದಿಸಿದುದರಲ್ಲಿ ತನ್ನ ಆವಶ್ಯಕತೆಯನ್ನು ಸರಳವಾಗಿ ಪೂರೈಸಿಕೊಳ್ಳುತ್ತಾಳೆ. ಅಪ್ಪಾಮ್ಮಂದಿರ ಸಂಕಷ್ಟ ನೋಡಿದ ವನಿತಾ, 'ನಾನು ಶಾಲೆಗೆ ಹೋಗದೆ ದುಡಿದು ನಿಮ್ಮಿಬ್ಬರನ್ನು ಸಾಕುತ್ತೇನೆ' ಅಂದಾಗ ಗೌಡರು ಬಿಕ್ಕಿಬಿಕ್ಕಿ ಅಳುತ್ತಾರೆ. ಮಗಳು ಆಗಾಗ್ಗೆ ಈ ಮಾತನ್ನು ಹೇಳುವುದು ಅವರಿಗೆ ಸಮ್ಮತವಾಗುವುದಿಲ್ಲ.

ಓಟು ಪಟ್ಟಿಯಲ್ಲಿ ಈ ಕುಟುಂಬದ ದಾಖಲಾತಿ ಇದೆ. ಮತ್ತೆಲ್ಲಿಯೂ ಇಲ್ಲ. ಜನಮಾನಸದಲ್ಲಿಯೂ ಕೂಡಾ! 'ಬಡತನ ಇರಲಿ, ಆದರೆ ತೀರಾ ಬಡತನ ಬೇಡ.' ತಮಗೆ ಸೂರಿಗಾಗಿ ಈ ದಂಪತಿಗಳು ಅಲೆಯದ ಕಚೇರಿಯಿಲ್ಲ. ಅರ್ಜಿ ಸಲ್ಲಿಸಿ ಸಲ್ಲಿಸಿ ಅವರ ಲೇಖನಿಯ ಮಸಿ ಆರಿಹೋಗಿದೆ! ಓಟು ಕೇಳಲು ಬಂದವರ ಆಶ್ವಾಸನೆ ಕೊಟ್ಟವರ ಮುಖಪರಿಚಯ ಇವರಿಗಿದೆ. ಓಟಿನ ಬಳಿಕ 'ಕಿರು ನಗು'ವೂ ಇಲ್ಲವಂತೆ. ಇದುವರೆಗೆ ಸಂಪಾದಿಸಿದ್ದು 'ಅನುಕಂಪ' ಮಾತ್ರ.

ಸ್ಥಳೀಯ ಆರೋಗ್ಯ ಸಹಾಯಕಿ ಶ್ರೀಮತಿ ಚಂಚಲಾಕ್ಷಿಯವರು ಈ ಕುಟುಂಬವನ್ನು ಹತ್ತಿರದಿಂದ ಬಲ್ಲವರು. ತನ್ನ ಕೈಲಾದಷ್ಟು ಸಹಾಯ-ಸಹಕಾರವನ್ನು ಅಷ್ಟಿಷ್ಟು ಮಾಡುತ್ತಾ ಬಂದವರು. ಬಹುಶಃ ಇವರ ಕಷ್ಟಕ್ಕೆ ಸ್ಪಂದಿಸುತ್ತಾ ಬಂದವರು ಇವರು ಮಾತ್ರ ಎಂದರೂ ಅತಿಶಯವಲ್ಲ. ಚಂಚಲಾಕ್ಷಿಯವರ ಮೂಲಕ ಗೌಡರ ದುಃಖದ ಕಥೆ ಪುತ್ತೂರಿನ ರೋಟರಿ ಅಧ್ಯಕ್ಷ ಎಂ.ಎಸ್. ರಘುನಾಥ ರಾಯರನ್ನು ತಲಪಿತು.

ಅಷ್ಟು ಹೊತ್ತಿಗೆ ಯೋಗಾಯೋಗವೋ ಎಂಬಂತೆ ರುಕ್ಮಿಣಿಯವರ ಪಾಲಿನ ಹತ್ತು ಸೆಂಟ್ಸ್ ಜಾಗವೂ ಅವರಿಗೆ ಒದಗಿತು. ಅದರಲ್ಲಿ ತಲೆಎತ್ತಿತು - 'ರೋಟರಿ ಮನೆ.' ಗಟ್ಟಿಮುಟ್ಟಾದ ಕಿಟಕಿ ಬಾಗಿಲುಗಳು, ಟೈಲ್ಸ್ ಹಾಕಿದ ನೆಲ, ಮೇಲೆ ಸೀಲಿಂಗ್, ಅಡುಗೆಮನೆ, ಸ್ನಾನದ ಕೊಠಡಿ, ಶೌಚಾಲಯ, ಸುಣ್ಣ-ಬಣ್ಣಗಳಿಂದ ಕೂಡಿದ ಮನೆ! ಈ ಮನೆಯೊಳಗೆ ರುಕ್ಮಿಣಿ-ವನಿತಾ ಪ್ರವೇಶಿಸಿದ ತಕ್ಷಣ ಆಡಿದ ಮಾತುಗಳು ಇವು - 'ಅಬ್ಬಾ...ಇನ್ನು ನಿರ್ಭಿತಿಯಿಮ್ದ ಸ್ನಾನ ಮಾಡಬಹುದಲ್ಲಾ!'. ಮನದಲ್ಲಿ ಮಡುಗಟ್ಟಿನ ಮೌನ ಅಂದು ಮಾತಾಡಿತು.

ಇಷ್ಟು ಸುಲಭದಲ್ಲಿ ಮನೆ ಹೇಗಾಯಿತು? ಋಣಾನುಬಂಧ ರೂಪೇಣ ಪಶುಪತ್ನಿಸುತಾಲಯ - ಇದು ರಾಮಣ್ಣ ಗೌಡರ ಪಾಲಿಗೆ ಸತ್ಯವಾಯಿತು. ಇಷ್ಟು ವರ್ಷ ತಮ್ಮ ಅಳಿಯನ ದುಸ್ಥಿತಿಯನ್ನು ನೋಡುತ್ತಾ, ಅಸಹಾಯಕರಾಗಿದ್ದ ಅತ್ತೆ ಕೊರಪ್ಪೊಳು ಕರೆದು ಜಾಗ ನೀಡಿದರು. ರೋಟರಿ ಕ್ಲಬ್ ಮನೆ ಕಟ್ಟಿ ಕೊಡುವ ಸಂಕಲ್ಪ ತೊಟ್ಟಿತು. ರೋಟರಿ ಹಿರಿಯ ಸದಸ್ಯ ಡಾ. ಶ್ಯಾಮ್ ಪೂರ್ಣ ಬೆಂಬಲದ ಭರವಸೆ. ಉಮೇಶ್ ಆಚಾರ್, ಡಾ.ಶ್ರೀಪ್ರಕಾಶ್ ಹೆಗಲೆಣೆ. ಆಸ್ಕರ್ ಆನಂದ್ ವಯರಿಂಗ್. ಖ್ಯಾತ ಇಂಜಿನಿಯರ್ ಹಾಗೂ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದರವರು ನಲವತ್ತು ಸಾವಿರದಷ್ಟು ಹೆಚ್ಚುವರಿ ಹಣ ನೀಡಿ ಮನೆಯನ್ನು ನಿರ್ಮಣದ ಜವಾಬ್ದಾರಿ ಹೊತ್ತರು. ನ್ಯಾಯವಾದಿ ಕೆ.ಆರ್.ಆಚಾರ್ ದಾಖಲೆ ಪತ್ರಗಳನ್ನು ಸರಿಪಡಿಸಿದರು - ಕೇವಲ ಮೂರೇ ವಾರಗಳಲ್ಲಿ ಮನೆ ಸಿದ್ಧ.

'ಈಗಿದ್ದ ಜೋಪಡಿ ಮನೆಯಿಂದ ಎದ್ದೇಳಲು ಹೇಳಿದ್ದಾರೆ. ಮುಂದೇನು ಮಾಡಬೇಕೆಂದು ಕಾಣುತ್ತಿರಲಿಲ್ಲ ಈ ಹೊತ್ತಲ್ಲಿ ನಮಗೆ ಮನೆ ಸಿಗದಿರುತ್ತಿದ್ದರೆ, ಮರದ ಬುಡದಲ್ಲೋ, ರಸ್ತೆ ಬದಿಯಲ್ಲೋ ನರಳಬೇಕಿತ್ತು' ಎನ್ನುವಾಗ ಇಡೀ ಕುಟುಂಬ ಕಣ್ಣೀರಿಡುತ್ತದೆ. 'ಚಂದದ ಮನೆ ಸಿಕ್ಕಿದರೆ ಸಾಲದು, ರಾಮಣ್ಣ ಗೌಡರ ಬದುಕು ಹಸನಾಗಬೇಕು. ಅದಕ್ಕಾಗಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಆರೋಗ್ಯ ಸುಧಾರಿಸಲು, ಮಗಳು ಉನ್ನತ ಶಿಕ್ಷಣ ಪಡೆದು ಉದ್ಯೋಗ ಅರಸಿಕೊಳ್ಳಲು ರೋಟರಿ ನೆರವಾಗಲಿದೆ' ಎಂಬ ಸಂಕಲ್ಪ ಅಧ್ಯಕ್ಷ ರಘುನಾಥ ರಾಯರದು.

'ರೋಟರಿ ಮನೆ'ಯಲ್ಲಿ ಗೃಹಪ್ರವೇಶವಾಗಿದೆ. ಹೊಸ ಜೀವನ ಶುರುವಾಗಿದೆ. ನಿತ್ಯ ಬದುಕಿನ ಸಂಸ್ಕಾರಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಸುದ್ದಿ ಕೇಳಿದ ಗೌಡರ ಬಂಧುಗಳೆನಿಸಿಕೊಂಡವರು ಈಗ ಬರಲಾರಂಭಿಸಿದ್ದಾರಂತೆ! ಇದು ಜೀವನ. ಇದುವೇ ಜೀವನ. ಈ ಕುಟುಂಬಕ್ಕೆ ಈಗ ಬೇಕಾಗಿರುವುದು ಅನುಕಂಪವಲ್ಲ. ನೆರವಿನ ಆಸರೆ.

ಎಮ್ಮೆ ಕಥನ

1973, ಫೆಬ್ರವರಿ. ಪುತ್ತೂರಿನ ಬಳ್ಳಿಕಾನದಲ್ಲೊಂದು ಸಭೆ. 'ಹಸುಗಳ ಜತೆಗೆ ಎಮ್ಮೆ ಸಾಕಿದರೆ ತುಂಬಾ ಲಾಭದಾಯಕ. ಹಸುವಿನ ಹಾಲಿನಲ್ಲಿ ಕೊಬ್ಬಿನ ಅಂಶ ಕಡಿಮೆ. ಎಮ್ಮೆಯ ಹಾಲಿನಲ್ಲಿ ಕೊಬ್ಬಿನ ಅಂಶ ಜಾಸ್ತಿ. ಎಮ್ಮೆ ಸಾಕಿ ಜೀವನಮಟ್ಟವನ್ನು ಸುಧಾರಿಸಬೇಕು' - ಇದು ಸಭಾನಿರ್ಣಯ.

ಗುಜರಾತ್ ರಾಜ್ಯದ ಕೈರಾ ಜಿಲ್ಲೆಯ ಆನಂದ್ನಲ್ಲಿದೆ-ಅಮುಲ್ ಪ್ಯಾಕ್ಟರಿ. ಕೈರಾದಲ್ಲಿ ಮನೆಮನೆಯಲ್ಲಿ ಸೂರ್ತಿ ಜಾತಿ'ಯ ಎಮ್ಮೆ ಸಾಕಣೆ ವಿಶೇಷ. 'ಇವು ನಮ್ಮ ಕರಾವಳಿಗೂ ಒಗ್ಗುವಂತಹುದು. ಅದನ್ನೇ ತಂದರೆ ಹೇಗೆ' ಒಕ್ಕೊರಲ ಅಭಿಪ್ರಾಯ. ಎಮ್ಮೆ ಖರೀದಿಗೆ ಒಂದಷ್ಟು ಮಂದಿ ತಯಾರಾದರು. ಬ್ಯಾಂಕು ಸಾಲ ಮಂಜೂರಾಯಿತು. 160 ಎಮ್ಮೆ ತರುವ ನೀಲನಕ್ಷೆ ಸಿದ್ಧ.

ಯಡಕತ್ತೋಡಿ ನಾರಾಯಣ ರೈಯವರ ಉಸ್ತುವಾರಿಕೆ. 'ಎರಡು ಅಂಬಾಸಿಡರ್ ಕಾರ್ನಲ್ಲಿ ಗುಜರಾತ್ಗೆ ಹೋಗುವುದು, ಅನಂದ ಎಂಬಲ್ಲಿ ವಾಸ್ತವ್ಯ. ಎರಡು ಬ್ಯಾಚ್ನಲ್ಲಿ ನಿರ್ವಹಣೆ. ಎಮ್ಮೆ ವ್ಯವಹಾರ ಕುದುರಿದ ತಕ್ಷಣ ಊರಿಗೆ ಟೆಲಿಗ್ರಾಂ. ಇಲ್ಲಿಂದ ಇಪ್ಪತ್ತು ಜನ ಬಸ್ಸಲ್ಲಿ ಗುಜರಾತ್ಗೆ' ಇವೇ ಮೊದಲಾದ ಪ್ರಾಕ್ಟಿಕಲ್ ವಿಚಾರಗಳು ನಿರ್ಧಾರವಾದ ತಕ್ಷಣ ಹೊರಟರು ಎಮ್ಮೆಪ್ರಿಯರು!

ಕೈರಾ ಜಿಲ್ಲೆಯ ನಾನಾ ಭಾಗದಲ್ಲಿ ಹುಡುಕಾಟ. ಒಂದೊಂದು ಎಮ್ಮೆಗೆ 850ರಿಂದ 1250 ರೂಪಾಯಿ. ಸೂರ್ತಿ ಜಾತಿಯವು. ಕೆಲವು ಗಬ್ಬದವು, ಮತ್ತೆ ಕೆಲವು ಸಂಸಾರಿಗಳು. ಮೊದಲ ಬ್ಯಾಚ್ಗೆ ಬೇಕಾದ ಎಂಭತ್ತು ಎಮ್ಮೆಗಳು ಅನಂದ್ ಸೇರಲು ಲಾರಿಯೇರಿದುವು. ಸಂಜೆ ಗೂಡ್ಸ್ ರೈಲು ಬರುವುದಿತ್ತು. ಗ್ರಹಚಾರ ನೋಡಿ... ಭಾರತ-ಪಾಕಿಸ್ಥಾನ ಯುದ್ಧ ಭೀತಿಯಿಂದ ರೈಲು ಎಂಟು ದಿವಸ ತಡ! ಎಮ್ಮೆಗಳು ಗೋಳಿಮರದ ಬುಡದಲ್ಲಿ! ಜತೆಗಿದ್ದವರ ಪಾಡು ಪ್ರತ್ಯೇಕ ಹೇಳಬೇಕೆ. ಅಲ್ಲೇ ಗಂಜಿ, ಊಟ, ನಿದ್ರೆ, ಸ್ನಾನ.. ಬಿಟ್ಟು ಬರುವ ಹಾಗಿಲ್ಲ! ಅದೂ ಸಾಲದೆಂಬತ್ತೆ ಕೆಲವು ಎಮ್ಮೆಗಳಿಗೆ ಪುತ್ರೋತ್ಸವ! ಗೌಜಿಯೋ ಗೌಜಿ.

ಅಂತೂ ಹನ್ನೊಂದು ಬೋಗಿಗಳ ರೈಲು ನಿಲ್ದಾಣಕ್ಕೆ ಬಂತು. ಅದರಲ್ಲಿ ಹತ್ತು ಎಮ್ಮೆಗಳಿಗೆ, ಮತ್ತೊಂದು ಅವುಗಳ ಆಹಾರ ದಾಸ್ತಾನಿಗೆ. ಮನುಷ್ಯರಿಗೆ ಪ್ರತ್ಯೇಕ ಬೋಗಿಯಲ್ಲ. ಎಮ್ಮೆಗಳ ಜತೆಗೆ! ಪ್ರತೀ ಬೋಗಿಯಲ್ಲೀ ಇಬ್ಬರು ವಾಸ. ಅಂತೂ ಆನಂದ್ನಿಂದ ಹೊರಟಿತು. ಬಲ್ಸಾರ್ ತಲುಪಿತು., ಇಲ್ಲಿಂದ ಹತ್ತು ಬೋಗಿ ಮುಂಬಯಿ ರೈಲಿಗೆ ಲಿಂಕ್. ದಾದರ್ನಲ್ಲಿ ಒಂದು ದಿನ ಠಿಕಾಣಿ. 'ಈಗಾಗಲೇ ಎಮ್ಮೆಯೊಂದಿಗೆ ಐದು ದಿವಸ ಕಳೆದಿತ್ತು!' ಅಲ್ಲಿಂದ ಪೂನಾಕ್ಕೆ. ಎಂಟನೇ ದಿನಕ್ಕೆ ಕನ್ನಾಡು ದರ್ಶನ. ಅಂತೂ ಇಂತೂ ಹದಿಮೂರು ದಿವಸದ ಪ್ರಯಾಣದಲ್ಲಿ ಹಾಸನ ತಲುಪಿತು ಎಮ್ಮೆ ಸಂಸಾರ.

ಪೂರ್ವನಿರ್ಧರಿತದಂತೆ ಪುತ್ತೂರಿನಿಂದ ಎಂಟು ಲಾರಿಗಳು ಹಾಸನಕ್ಕೆ ಹೋದುವು. ಶುಭಮುಹೂರ್ತದಲ್ಲಿ ಎಮ್ಮೆಯೇರಿದ ಲಾರಿಗಳು ಹೊರಟವು. 'ಲಾರಿಯಲ್ಲಿ ಎಲ್ಲಾ ಎಮ್ಮೆಗಳು ಲಾರಿ ಇಳಿಯುವಾಗ ಮುಂಭಾಗಕ್ಕೆ ಬರುವುದು, ಸಮತಟ್ಟು ಪ್ರದೇಶದಲ್ಲಿ ಎಮ್ಮೆಗಳು ಸರಿಯಾಗಿ ನಿಲ್ಲುತ್ತವೆ. ಘಾಟಿ ಇಳಿಯುವಾಗ ಅದಕ್ಕೆ ಸರಿಯಾಗಿ ನಿಲ್ಲಲು ಆಗದೆ ಪ್ರಯಾಣ ಕಷ್ಟವೋ ಕಷ್ಟ!'

ಲಾರಿ ಪುತ್ತೂರು ನಗರ ಪ್ರವೇಶಿಸಿತು. ಲಾರಿಗೆ ಸೂರು ಇಲ್ಲದ್ದರಿಂದ ಎಲ್ಲರಿಗೂ ಎಮ್ಮೆ ಗೋಚರ. ಎಮ್ಮೆ ನೋಡಲು ಜನಸಂದಣಿ. ತಲುಪಬೇಕಾದ 'ಮುಗೇರು' ಎಂಬಲ್ಲಿಗೆ ಎಂಭತ್ತು ಎಮ್ಮೆಗಳು 'ಡೌನ್ಲೋಡ್' ಆದುವು! ಅಬ್ಬಬ್ಬಾ..ಇದೇ ಸ್ಥಿತಿ ಇನ್ನೊಂದು ಬ್ಯಾಚ್ನದು. ಒಂದುನೂರ ಅರುವತ್ತು ಎಮ್ಮೆಗಳು ಪುತ್ತೂರು ತಾಲೂಕಿಗೆ ಬಂದುವು. ಯಾವ್ಯಾವ ಎಮ್ಮೆ ಯಾರ್ಯಾರಿಗೆ ಎಂಬ ಆಯ್ಕೆಗೆ ಲಾಟರಿ ವ್ಯವಸ್ಥೆ. 'ಎಮ್ಮೆಹಾಲು' ಹೊಟ್ಟೆಸೇರಿತು. ಡೈರಿಗೆ ಹೋಯಿತು. ಮಾತಿಗೆ ಸಿಕ್ಕಾಗಲೆಲ್ಲಾ ಎಮ್ಮೆಯದೇ ಸುದ್ದಿ.

ಈ ಎಮ್ಮೆಗಾಥೆಗೆ ಮೂವತ್ತೈದು ವರುಷ. ಆ ಸಾಹಸವನ್ನು 'ಎಮ್ಮೆ ತಂದ ಹೆಮ್ಮೆ' ಪುಸ್ತಕದಲ್ಲಿ ಶ್ರೀ ಕಡಮಜಲು ಸುಭಾಸ್ ರೈಯವರು ಪೋಣಿಸಿದ್ದಾರೆ. ಎಮ್ಮೆ ತರಲು ಹೋದ ಒಂದು ಬ್ಯಾಚ್ನಲ್ಲಿ ಇವರಿದ್ದರು. ಹಾಗಾಗಿ ಇದು ಅನುಭವ ಕಥನ. ಪ್ರವಾಸ ಕಥನವೂ ಹೌದೆನ್ನಿ. 'ಕಳೆದ ಕಾಲದ ಕಥನ' ಎನ್ನೋಣವೇ? ಎಮ್ಮೆ ಕಥನದೊಂದಿಗೆ ಒಂದಷ್ಟು ಹೊರ ವಿಚಾರಗಳು ಹಾದುಹೋಗುತ್ತದೆ. ಮತ್ತೆ ಪುನಃ ಹಳಿಗೆ ಬರುತ್ತದೆ. ಈ ಸಾಹಸದಲ್ಲಿ ಸಂತೋಷವಿತ್ತು. ಸಿಹಿ-ಕಹಿಯಿತ್ತು. ಮಾತುಬಾರದ ಪಶುಗಳ ಜತೆಗೆ ಮಾತು ಬರುವ ಮನುಷ್ಯನ ಸ್ಪಂದನ. ಎಮ್ಮೆ ಪ್ರಯಾಣದ ರೋಚಕತೆಯನ್ನು ರೈಗಳು ಮತ್ತಷ್ಟು ಕಟ್ಟಿಕೊಡುತ್ತಾರೆ - ಬಹಳಷ್ಟು. ಸಮಯ ಕಳೆಯಲೋಸುಗ ಅಂಟಿದ ಸಿಗರೇಟು ಚಟ, ರೈಲ್ವೇ ನಿಲ್ದಾಣದಲ್ಲಿ ಕೈಗಾಸಿಗಾಗಿ ಎಮ್ಮೆಯ ಹಾಲನ್ನು ಕರೆದು ಮಾರಿದ್ದು, ಬ್ರೆಡ್-ಬಿಸ್ಕತ್ತೇ ಊಟ, ಹಿಂಡಿ ಗೋಣಿಯ ಸುಪ್ಪತ್ತಿಗೆ, ಎಮ್ಮೆಗಳಿಗೆ ಶುಶ್ರೂಷೆ, ಹೆರಿಗೆಯಾದವುಗಳಿಗೆ ಆರೈಕೆ. ಲಂಚಾವತಾರ, ..ಹೀಗೆ ಒಂದೇ ಎರಡೇ. ಎಲ್ಲವೂ ಅನುಭವಗಳು.

'ಎಮ್ಮೆಯ ಸಂತತಿ ವೃದ್ಧಿಯಾಗುವ ಬದಲು ಕ್ಷೀಣಿಸಿತು. ಇದು ಇಂದಿನ ಜಾನುವಾರು ಸಾಕುವ ಕಷ್ಟದ ದ್ಯೋತಕ. ಮುಂದಕ್ಕೆ ಗುಜರಾತಿನ ಸೂರ್ತಿ ಜಾತಿಯ ಎಮ್ಮೆಗಳು ನಮ್ಮ ಪ್ರದೇಶದಿಂದ ಕಣ್ಮರೆಯಾದರೂ, ಉಳಿಯುವುದು ಕಣ್ಣಮುಂದೆ ಅಂದು ಎಮ್ಮೆಗಳನ್ನು ಗುಜರಾತಿನಿಂದ ತಂದ ದೃಶ್ಯ ಮಾತ್ರ' - ಕಥನದ ಮಧ್ಯೆ ಬರುವ ರೈಗಳ ಈ ಮಾತಿನಲ್ಲಿ 'ವಾಸ್ತವ'ವಿದೆ.ದೇಶಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನ -ಪುಸ್ತಕವನ್ನು ಪ್ರಕಾಶಿಸಿದೆ.

Monday, January 12, 2009

ಜಯಕ್ಕನಿಗೆ ಕಾಡೇ ತರಕಾರಿ ತೋಟ!


ಅಂದು ಉರ್ವರಾದಲ್ಲಿ ಮಧ್ಯಾಹ್ನದೂಟಕ್ಕೆ ಶಿರಸಿಯ ಶಿವಾನಂದ ಕಳವೆ ಜತೆಗಿದ್ದರು. ಕಾನಕಲ್ಲಟೆ-ಸೌತೆಯ ಕಾಯಿಹುಳಿ, ಕ್ರೋಟಾನ್ ಹರಿವೆಯ ಚಟ್ನಿ, ಕಪ್ಪೆಮೆಣಸು (ನೀರ್ಕಡ್ಡಿ)ಸಾರು, ಪಾಲಿಷ್ ಮಾಡದ ಅಕ್ಕಿಯ ಅನ್ನ.
ಇದರಲ್ಲೇನು ವಿಶೇಷ? ಜಯಕ್ಕನ ಮಾತಲ್ಲೇ ಕೇಳಿ - ಕಾನಕಲ್ಲಟೆ ಉಷ್ಣಗುಣವುಳ್ಳದ್ದು, ಸೌತೆ ತಂಪು. ಎರಡೂ ಸೇರಿದಾಗ ಸಮಧಾತು. ಹಾಗಾಗಿ ಅವರೆಡು ಕಾಂಬಿನೇಶನ್! ಜೀರ್ಣಕ್ರಿಯೆಗೆ ಈ ಪಾಕ. ಕ್ರೋಟಾನ್ ಚಟ್ನಿ ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಸಹಕಾರಿ. ನೀರ್ಕಡ್ಡಿ ಕಫಹರ, ಜ್ವರಹರ. ಒಗ್ಗರಣೆಗೆ ಹಾಕುವ ಕರಿಬೇವಿನಸೊಪ್ಪು ಮೂತ್ರದೋಷ ಶಮನಕ್ಕೆ. ಕಾಫಿಯ ಬದಲಿಗೆ ಪುನರ್ಪುಳಿ ಶರಬತ್ತು. ಇದು ಕೂಡಾ ಹಿಮೋಗ್ಲೋಬಿನ್ ಹೆಚ್ಚಳಕ್ಕೆ.
ಮಧ್ಯಾಹ್ನ ಊಟಕ್ಕೆ ನೆಂಟರು ಬಂದಾಗ ನಾವೇನು ಮಾಡುತ್ತೇವೆ? ಅಂಗಡಿಗೆ ಹೋಗುತ್ತೇವೆ: ರೆಡಿಮೇಟ್ ಹಪ್ಪಳ, ಟೊಮ್ಯಾಟೋ, ಶ್ಯಾವಿಗೆ...ಜತೆಗೆ ಕುರುಕುರು ತಿಂಡಿ ಸ್ವಲ್ಪ....ಇನ್ನು ಏನೇನೋ... ತರುತ್ತೇವೆ. ಆದರೆ ಜಯಕ್ಕ ಹಾಗಲ್ಲ, ನೆಂಟರು ಬಂದರೆ, ಈಗ ಬಂದೆ...ಎನ್ನುತ್ತಾ ಹಿತ್ತಿಲಿಗೆ ಹೋಗುತ್ತಾರೆ.....ಬರುವಾಗ ಕೈಯಲ್ಲೊಂದಷ್ಟು ಸಸ್ಯದ ಚಿಗುರುಗಳು, ಹೂಮಿಡಿಗಳು!
ನೋಡಿ....ಇದು ನುಗ್ಗೆ ಸೊಪ್ಪು. ಹಾಗೆ ಬಾಯಲ್ಲಿ ಹಾಕಿ ಜಗಿಯಿರಿ. ಇದರಲ್ಲಿರುವಷ್ಟು ಕಬ್ಬಿಣದಂಶ ಮತ್ತು ಕ್ಯಾಲ್ಸಿಯಂ ಬೇರ್ಯಾವ ಸೊಪ್ಪಿನಲ್ಲೂ ಇಲ್ಲ. ದೊಡ್ಡವರಿಗೆ ಎಂಟೆಲೆ, ಮಕ್ಕಳಿಗೆ ಮೂರೆಲೆ ಸಾಕು ಎಂದು ಜಗಿಯಲು ಕೊಟ್ಟರು.
ಅಷ್ಟರಲ್ಲಿ ಪತಿ ವೆಂಕಟ್ರಾಮರು ಪೇಟೆಗೆ ಹೋದವರು ಪತ್ರಿಕೆಯಲ್ಲಿದ್ದ ಒಂದು ಸುದ್ದಿಯನ್ನು ಓದಿದರು - ಆಹಾರಗಳೆಲ್ಲಾ ವಿಷಮಯವಾಗುತ್ತಿದೆ. ಹೀಗೆ ಮುಂದುವರಿದರೆ 2016ರಕ್ಕಾಗುವಾಗ ಭಾರತದ ಜನಸಂಖ್ಯೆ ಕ್ಷೀಣವಾಗುತ್ತದಂತೆ. ಉರ್ವರಾದ ಅಡುಗೆ ಮನೆ ಯಾಕೆ ಹಸಿರಾಗಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿತ್ತು!
ಜಯಲಕ್ಷ್ಮೀ ದೈತೋಟ - ಆಪ್ತರಿಗೆ ಜಯಕ್ಕ. ಖ್ಯಾತ ಪಾಣಾಜೆ ಪಂಡಿತ ಕುಟುಂಬದ ಸೊಸೆ. ಸಾಗರದ ಹೆಗ್ಗೋಡು ಸನಿಹದ ಮುಂಡಿಗೇಸರ ತವರು. ಸ್ನಾತಕೋತ್ತರ ಪದವೀಧರೆ. ಪತಿ ಮೂಲಿಕಾ ತಜ್ಞ ವೆಂಕಟ್ರಾಮ ದೈತೋಟ. ಊಟದ ಬಟ್ಟಲಿನಲ್ಲಿ ಅಡವಿ ಪ್ರೀತಿ ಮತ್ತು ಆರೋಗ್ಯವನ್ನು ಕಂಡ ಇವರ ಕೈಗುಣದಿಂದ ನಗುನಗುತ್ತಾ ಬಾಳುವೆ ಮಾಡುವ ಕುಟುಂಬಗಳು ಅಸಂಖ್ಯ. ಜಯಕ್ಕ ಮಾತಿಗಿಳಿದರೆ ಸಾಕು - ಅಡವಿಯೇ ನಮ್ಮ ಮುಂದೆ ಧುತ್ತೆಂದು ನಿಲ್ಲುತ್ತದೆ! ಋತುಮಾನಕ್ಕನುಸಾರವಾಗಿ ಪ್ರಕೃತಿಯಲ್ಲಿ ಸಿಗುವ ಚಿಗುರು, ಹೂ, ಮಿಡಿ, ಕೆತ್ತೆ, ಬೇರು ಬಳಸಿ - ಸಾರು, ಚಟ್ನಿ, ತಂಬುಳಿ, ಕಷಾಯ ಮಾಡಿ ಆರೋಗ್ಯವನ್ನು ಕಾಪಾಡುವ ಮುನ್ನೂರಕ್ಕೂ ಮಿಕ್ಕಿ ಅಡವಿ ಸಸ್ಯಗಳ ಆಹಾರ ಅವರ ಬೊಗಸೆಯಲ್ಲಿದೆ. ಯಾವ ಸಸ್ಯದಲ್ಲಿ ಯಾವ ಗುಣವಿದೆ, ಅವಗುಣವಿದೆ; ಅದನ್ನು ಸರಿದೂಗಿಸುವ ಬಗೆ ಹೇಗೆ - ಇವೆಲ್ಲಾ ಅವರಿಗೆ ರಕ್ತದಲ್ಲೇ ಬಂದಿದೆ.
ತರಕಾರಿ ಮನೆಯಲ್ಲೇ ಬೆಳೆಸಿ. ಮಾರುಕಟ್ಟೆಯಿಂದ ತಂದರೆ ನೀವು ರೋಗವನ್ನು ತಂದಂತೆ - ನಿಖರವಾಗಿ ಹೇಳುತ್ತಾರೆ. ಜಯಕ್ಕನ ಅಡುಗೆ ಮನೆಗೆ ಮಾರುಕಟ್ಟೆಯ ತರಕಾರಿ ಬಾರದೆ ಬಹುಶಃ ಹದಿನೈದು ವರುಷವಾಗಿರಬಹುದು! ಪ್ರಕೃತಿಯೊಂದಿಗೆ ಬದುಕಬೇಕು. ಪ್ರಕೃತಿಯನ್ನು ಬಿಟ್ಟಾಗ ಅದು ನಮ್ಮ ಕೈಬಿಡುತ್ತದೆ. ರೋಗ ಅಟ್ಟಿಸಿಕೊಂಡು ಬರುತ್ತದೆ - ಜಯಕ್ಕ ಆಗಾಗ್ಗೆ ಹೇಳುವ ಮಾತನ್ನು ಅಕ್ಷರಶಃ ಪಾಲಿಸಿದ್ದಾರೆ.
ಹಿಂದೆಲ್ಲಾ ತಂಬುಳಿ-ಕಷಾಯಗಳು ಬದುಕಿನಂಗ. ಈಗ ಅದಕ್ಕೂ ಕ್ಲಾಸ್ ಬೇಕಾಗಿದೆ. ಅತ್ತೆಯಿಂದ ಸೊಸೆಗೆ, ಅಮ್ಮನಿಂದ ಮಗಳಿಗೆ ಪಾರಂಪರಿಕ ಜ್ಞಾನ ಬಾರದೇ ಇರುವುದೂ ಒಂದು ಕಾರಣ - ಇವರ ಮಾತು ಒಗಟಾಗಿ ಕಾಣಬಹುದು, ಅದರೆ ಸತ್ಯ ಅಲ್ವಾ. ಇಂದು ಬಹುತೇಕ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಪುಸ್ತಕ ಇದ್ದೇ ಇರುತ್ತದೆ.
ಬಾಣಂತಿ ಔಷಧಿಯಲ್ಲಿ ಜಯಕ್ಕ ಸ್ಟ್ಪೆಷಲಿಸ್ಟ್. ಕಷಾಯದ ಹುಡಿ, ಸಾರು-ಸಾಂಬಾರು ಹುಡಿ, ತಲೆಹೊಟ್ಟಿಗೆ ಎಣ್ಣೆ, ಬಾಣಂತಿಗೆ ಮೈಗೆ ಹಚ್ಚಲು ಎಣ್ಣೆ, ಮಕ್ಕಳ ಆಹಾರ ಮಣ್ಣಿಹುಡಿ, ಮಕ್ಕಳ ಮೈಗೆ ಹಚ್ಚುವ ಎಣ್ಣೆ, ಮೆಂತೆ ಹಿಟ್ಟು, ಪುಳಿಯೋಗರೆ, ಮಾಲ್ಟ್ ಹುಡಿ, ಚಟ್ನಿ ಹುಡಿ - ತಾವೇ ಸ್ವತಃ ಮಾಡಿ, ಆಸಕ್ತರಿಗೆ ನೀಡುತ್ತಾರೆ. ಆರೋಗ್ಯ ಹದಗೆಡುತ್ತಿದೆ. ಇನ್ನಿನ್ನು ತಯಾರಿಸಲು ಕಷ್ಟ. ಎಷ್ಟೋ ಮಂದಿ ಕೇಳುತ್ತಾರೆ. ಇಲ್ಲವೆನ್ನಲಾಗುವುದಿಲ್ಲ ಎನ್ನುವ ಜಯಕ್ಕನ ಕಾಳಜಿಯ ಹಿಂದೆ ತಾಯಿ ಮನಸ್ಸು ಇದೆ.
ಪತಿ ವೆಂಕಟ್ರಾಮ ದೈತೋಟರ ಜತೆ ಆಹಾರ-ಆರೋಗ್ಯ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿ. ೨೦೦೮ ರಲ್ಲಿ ಶಿರಸಿ ಸನಿಹದ ಕಳವೆಯಲ್ಲಿ ಅಡವಿ ಆರೋಗ್ಯ-ಮನೆಮದ್ದು ಕಾರ್ಯಗಾರ ನಡೆದಿತ್ತು. ಎರಡು ದಿವಸ ನಡೆದ ಸಮಾರಂಭದಲ್ಲಿ ಜಯಕ್ಕನೇ ಹೀರೋ! ವೆಂಕಟ್ರಾಮರೇ ಸ್ವತಃ ಹೇಳಿದ್ದುಂಟು - ತಂಬುಳಿ, ಕಷಾಯಗಳಿಗೆ ಅವಳೇ ಹೈಕಮಾಂಡ್!
ಹೊರಡುವಾಗ ತಮ್ಮ ಗೋಪಾಲಕೃಷ್ಣ ಕೈಗೆ ನೆಲಗಡಲೆ ಸುರುವಿ, ತಿನ್ನುತ್ತಾ ಹೋಗಿ ಎಂದರೆ, ಜಯಕ್ಕ ಜತೆಗೆ ಬೆಲ್ಲ ಸೇರಿಸಿಕೊಳ್ಳಿ. ಕಡಲೆಯ ಪಿತ್ಥವನ್ನು ಬೆಲ್ಲ ಸರಿದೂಗಿಸುತ್ತದೆ-ಎನ್ನುತ್ತಾ ಬೆಲ್ಲ ನೀಡಿದರು. ದೈತೋಟ ಕುಟುಂಬದ ಅಡವಿ ಪ್ರೀತಿ-ಆರೋಗ್ಯ ಕಾಳಜಿಯ ಮುಂದೆ ನಾವು ಮೂಕರಾದೆವು. ತಾವು ಕಹಿಯುಂಡರೂ, ಇತರರ ಬಾಯಿ ಸಿಹಿಯಾಗಿರಬೇಕೆಂದು ಬಯಸುವ ಮನಸ್ಸು ಇದೆಯಲ್ಲಾ.....ಇದು ಎಲ್ಲರಿಗೂ ಬರುವುದಿಲ್ಲ! (ಜಯಲಕ್ಷ್ಮೀ ದೈತೋಟ, ಉರ್ವರಾ, ಅಂಚೆ : ಪಾಣಾಜೆ, ಪುತ್ತೂರು ತಾಲೂಕು - ದ.ಕ.)

Saturday, January 10, 2009

ಕೃಷಿ ಓಡಾಟ ಹಗುರ ಮಾಡಿದ 'ರಾಕಿ'

ಧಾರವಾಡದ ಸುತ್ತೂರಿನ ಮಲ್ಲಯ್ಯ ಹಿರೇಮಠ್ ಇವರ ಮನೆಗೂ, ಹೈನು ಕುಟೀರಕ್ಕೂ ಹತ್ತು ನಿಮಿಷದ ದಾರಿ. ಕೃಷಿ ಕೆಲಸವೆಂದ ಮೇಲೆ ಅತ್ತಿಂದಿತ್ತ, ಇತ್ತಿಂದಿತ್ತ ಪ್ರಯಾಣ ಸಹಜ. ದ್ವಿಚಕ್ರ ವಾಹನವಿದ್ದರೂ ಪೆಟ್ರೋಲ್ ಧಾರಣೆಯಿಂದಾಗಿ ಮಿತ ಬಳಕೆ. ಇವರ 'ರಾಕಿ' ಕುದುರೆಯು ಕೃಷಿ ಓಡಾಟ ಕೆಲಸವನ್ನು ಹಗುರಮಾಡಿದೆ ಎಂದರೆ ನಂಬ್ತೀರಾ?
ರಾಕಿ 2006ರ ಮೋಡೆಲ್! ಮಲ್ಲಯ್ಯರ ಮಗ ಸಂಗಯ್ಯ ರಾಕಿಯ ಚಾಲಕ. ಇವರಿಗೆ ಬಾಲ್ಯದಿಂದಲೂ ಕುದುರೆ ಸಾಕುವ ಮತ್ತು ಸವಾರಿ ಕಲಿವ ಆಸಕ್ತಿ. ರಾಕಿ ಹುಟ್ಟಿದ್ದೇ ಇವರ ಮನೆ ಪಕ್ಕದಲ್ಲಿ. ಅದರ ಒಡೆಯನಿಗೆ 1200 ರೂ. ಕೊಟ್ಟು ಖರೀದಿ. ಅಲ್ಲಿಂದ ಇವರ ಮನೆಯ ಸದಸ್ಯ.

ಸಂಗಯ್ಯರಿಗೆ ಕುದುರೆ ಸವಾರಿಯ ಕಲಿಕೆ ಗೊತ್ತಿಲ್ಲ. ರಾಕಿ ದೊಡ್ಡದಾಗುತ್ತಿದ್ದಂತೆ, 'ಬೆನ್ನೇರುವುದು, ಬೀಳುವುದು, ಗಾಯಮಾಡಿಕೊಳ್ಳುವುದು' ನಡೆದೇ ಇದ್ದಂತೆ, ಸಂಗಯ್ಯ-ರಾಕಿ ಮಧ್ಯೆ ಒಪ್ಪಂದವಾಯ್ತು! ಹಾಗಾಗಿ ಸಂಗಯ್ಯ ಹೊರತಾಗಿ ಯಾರೇ ಬೆನ್ನೇರಿದರೂ ಅವರು ನೇರ ಆಸ್ಪತ್ರೆಗೆ!
ಬೆಳಿಗ್ಗೆ ಮತ್ತು ಸಂಜೆ ಮನೆಗೆ ಹಾಲೊಯ್ಯುವುದು, ಮನೆಯಿಂದ 'ಹಟ್ಟಿ ಕುಟೀರ'ಕ್ಕೆ ತಿಂಡಿ, ಭೋಜನ ತರಲು....ಇವರಿಗೆ ಬೈಕ್ ಬೇಡ. 'ರಾಕಿ ಇದ್ದಾಗ ಕಾಲ್ನಡಿಗೆ ಯಾಕೆ' ಎನ್ನುತ್ತಾ ಬೆನ್ನೇರುತ್ತಾರೆ ಸಂಗಯ್ಯ. ದನಗಳನ್ನು ಗುಡ್ಡಕ್ಕೆ ಮೇಯಲು ಬಿಟ್ಟಾಗ, ಅವುಗಳು ಸಂಜೆ ಹಟ್ಟಿಗೆ ಬಂದಿಲ್ಲವನ್ನಿ, ಅವುಗಳನ್ನು ಹುಡುಕಲು ರಾಕಿಯೇ ಬೇಕು.
ಮನೆಗೆ ನೆಂಟರು ಬಂದರು, ತುರ್ತಾಗಿ ಬೇಕರಿಯಿಂದ ತಿಂಡಿ ಬೇಕು. ಪೇಟೆ ದೂರವಿದೆ. ಆಗ ರಾಕಿಯನ್ನೇರಿ ಪೇಟೆಗೆ ಹೊರಟಾಗಿನ ಸಂಗಯ್ಯ ಇವರ ಠೀವಿ ನೋಡಿಯೇ ಅನುಭವಿಸಬೇಕು! ಇವರಜ್ಜಿ ಗಂಗಮ್ಮ. ನಿತ್ಯ ಹೂಹಾರ ಹಾಕಿ ಪೂಜೆ ಮಾಡ್ತಾರಂತೆ. ಏನಿಲ್ಲವೆಂದರೂ ದಿನಕ್ಕೆ 25 ಕಿಲೋಮೀಟರ್ ಪ್ರಯಾಣ.
ಸಂಜೆ ತೋಟಕ್ಕೆ ಒಂದು ಸುತ್ತು ಇದರಲ್ಲೇ ರೈಡ್. 'ಕತ್ತಲೆಯಲ್ಲೂ ಓಡುತ್ತದೆ. ಲೈಟ್ ಬೇಡ. ಬ್ಯಾಟರಿ ಬೇಡ' ಮಲ್ಲಯ್ಯ ನಗೆಯಾಡುತ್ತಾರೆ. ಇವರ ಮನೆಯಲ್ಲಿ ಜರ್ಸಿ ಹೋರಿ ಒಂದಿದೆ. ಚಕ್ಕಡಿಯಲ್ಲಿ ಹುಲ್ಲು ತರಲು ಹೋರಿ ಮತ್ತು ರಾಕಿಯ ಬಳಕೆ. ಒಳ್ಳೆಯ ಜತೆ! ರಾಕಿ ಬಯಲಲ್ಲಿ ಎಲ್ಲೇ ಮೇಯುತ್ತಿರಲಿ, ಸಂಗಯ್ಯ ಶಿಳ್ಳೆ ಹಾಕಿದರೆ ಸಾಕು, ಓಡಿ ಬಂದುಬಿಡುತ್ತದೆ. ನೀವೊಮ್ಮೆ ಶಿಳ್ಳೆ ಹಾಕಿ. ಉಹೂಂ. ಕದಲದು! ರಾತ್ರಿ ಆವರಣಕ್ಕೆ ಯಾರೇ ಬರಲಿ, ತನ್ನ ಮೂಕಭಾಷೆಯಿಂದ ಸಂಗಯ್ಯರನ್ನು ಎಚ್ಚರಿಸುತ್ತದೆ.
ಹೇಗಿದೆ? ಕೃಷಿಯಲ್ಲೂ ಕುದುರೆಯ ಬಳಕೆ. 'ಇಲ್ಲೆಲ್ಲಾ ಕುದುರೆ ಸಾಕುವುದು ಬಳಕೆಯಲ್ಲಿದೆ. ಅದರೆ ಅದನ್ನು ತಮ್ಮ ಆವಶ್ಯಕತೆಗೆ ತಕ್ಕಂತೆ ಬಳಸುವುದರಲ್ಲಿ ಜಾಣತನ' ದನಿಗೂಡಿಸುತ್ತಾರೆ ಕೃಷಿ ಅಧಿಕಾರಿ ಆರ್.ಬಿ.ಹಿರೇಮಠ್.