Saturday, October 31, 2009

ಅಡಿಕೆ ಯಂತ್ರ ಮೇಳ : ಚಿಂತನ-ಮಂಥನ

ಯಂತ್ರಮೇಳದಲ್ಲಿ ಮ್ಯಾಮ್ಕೋಸ್ ಅಧ್ಯಕ್ಷ ಕೆ.ನರಸಿಂಹ ನಾಯಕ್ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ಜರುಗಿತು. 'ಕೆಂಪಡಿಕೆ - ರೈತರ ಸಮಸ್ಯೆ ಮತ್ತು ಸಂಶೋಧನಾ ಆವಶ್ಯಕತೆ' ಕುರಿತು ತೀರ್ಥಹಳ್ಳಿಯ ಕೃಷಿಕ ಕೂಳೂರು ಸತ್ಯನಾರಾಯಣ, ಮಂಜೇಶ್ವರದ ಹಿರಿಯ ಕೃಷಿಕ ಡಾ.ಚಂದ್ರಶೇಖರ ಚೌಟರಿಂದ 'ಗೋಟಡಿಕೆ' ರೈತರ ಸಮಸ್ಯೆ ಮತ್ತು ಸಂಶೋಧನಾ ಆವಶ್ಯಕತೆ, ಸಾಗರದ ಮಥನ ಇಂಡಸ್ಟ್ರೀಸ್ನ ಉಮೇಶ್ ಬಿ.ಆರ್. ಮತ್ತು ತೀರ್ಥಹಳ್ಳಿಯ ವಿ-ಟೆಕ್ ಯಂತ್ರದ ಸಂಶೋಧಕ ಶ್ರೀ ವಿಶ್ವನಾಥ್ ಕುಂಟುವಳ್ಳಿಯವರಿಂದ 'ಯಂತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಸ್ವಾನುಭವ', ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಸಂಶೋಧನಾ ಇಂಜಿನಿಯರ್ ಡಾ. ಪಳನಿಮುತ್ತು ಅವರು ಅಡಿಕೆ ಸುಲಿತ ಮತ್ತು ಸಿಂಪಡಣೆಯ ಯಾಂತ್ರೀಕರಣದ ಸಾಧನೆ, ಸಾಧ್ಯತೆಗಳು ಹಾಗೂ ಸವಾಲುಗಳು ಮತ್ತು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರು ಫಲಪ್ರದ ಯಾಂತ್ರೀಕರಣದ ದಾರಿಯಲ್ಲಿ ಮಾಧ್ಯಮಗಳ ಪಾತ್ರಗಳ ಕುರಿತು ವಿಚಾರ ಪ್ರವಾಹಗಳು. ಭಾಗವಹಿಸಿದ ಕೃಷಿಕರಿಂದ ಆಲಿಕೆ ಮತ್ತು ಪ್ರಶ್ನೋತ್ತರಗಳ ಮೂಲಕ ಸ್ಪಂದನ.

ಗೋಷ್ಠಿಯ ಅಧ್ಯಕ್ಷತೆಯನ್ನು ಮ್ಯಾಮ್ಕೋಸ್ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್ ವಹಿಸಿದ್ದರು. ರೈತನು ತನ್ನ ಬೆಳೆಗೆ ತಾನೇ ಬೆಲೆ ನಿರ್ಧಾರ ಮಾಡುವ ಅಧಿಕಾರ ಬಂದಾಗ ನಿಜಕ್ಕೂ ದೇಶ ಸುಭಿಕ್ಷವಾಗುತ್ತದೆ. ಬೇರು ಹುಳ, ಹಳದಿ ಎಲೆ ರೋಗ..ಮುಂತಾದ ಪ್ರಾಕೃತಿಕ ತೊಂದರೆಗಳಿಂದ ಅಡಿಕೆ ಬೆಳೆಗಾರನ ಮುಖದಲ್ಲಿ ನಗುವಿಲ್ಲ! ಜತೆಗೆ ಬೆಳೆಗಾರರಲ್ಲಿ ಸಂಘಟನೆಯ ಕೊರತೆಯಿಲ್ಲ ಅಡಿಕೆ ಕೃಷಿ ಮತ್ತು ಕೃಷಿಕರಿಗಾಗಿ ರಾಷ್ಟ್ರ ಮಟ್ಟದಲ್ಲಿ 'ಲಾಬಿ' ವ್ಯವಸ್ಥೆ ಆರಂಭವಾಗಿವೆ. ನಮ್ಮಲ್ಲಿ ಅಡಿಕೆ ಬೆಳೆಗಾರ ಅಂದರೆ ಶ್ರೀಮಂತ ಎಂಬ ಭಾವನೆಯಿದೆ. ವಸ್ತುಸ್ಥಿತಿ ಹೀಗಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಅಡಿಕೆ ಶೇಖರಣಾ ಕೊಠಡಿ ನಿರ್ಮಿಸಲು ನೆರವು ಸಿಗುತ್ತದೆ. ಈ ಮೂಲಕ ಕೃಷಿಕರು ಏಕ ಸಮಯದಲ್ಲಿ ಅಡಿಕೆಯನ್ನು ಮಾರುಕಟ್ಟೆಗೆ ತರುವುದನ್ನು ತಡೆಯಬಹುದು' ಎಂಬ ಅಭಿಪ್ರಾಯ.
ಮೇಳದಲ್ಲಿ ಭಾಗವಿಸಿದ ಕೃಷಿಕರ ಅಭಿಪ್ರಾಯಗಳು
* ಮೇಳದಲ್ಲಿ ಹಸಿ ಅಡಿಕೆ ಸುಲಿ ಯಂತ್ರಗಳ ಸಂಖ್ಯೆ ಕಡಿಮೆ. ಸಿಂಪಡಣಾ ಉಪಕರಣಗಳು ಚೆನ್ನಾಗಿವೆ ಕೊಳ್ಳುವ ಯೋಚನೆಯಲ್ಲಿದ್ದೇವೆ - ಬಸವರಾಜಪ್ಪ, ದಾವಣಗೆರೆ.
* ಭತ್ತದ ಯಂತ್ರಗಳು ಮನುಷ್ಯನ ಸಾಮಥ್ರ್ಯಕ್ಕೆ ಸರಿಯಾಗಿವೆ. ಅಡಿಕೆ ಯಂತ್ರಗಳು ಇನ್ನೂ ಆ ಸ್ಥಿತಿಗೆ ತಲುಪಿಲ್ಲ. ದರವೂ ಜಾಸ್ತಿ. ಗುಣಮಟ್ಟ ಸುಧಾರಿಸಬೇಕಾಗಿದೆ. - ವಿಜಯಾನಂದ ಮಂಗಳೂರು
* ನಮ್ಮಲ್ಲಿ ಕಾರ್ಮಿಕರ ಕೊರತೆ ತುಂಬಾ ಇದ್ದು, ಯಂತ್ರಗಳ ಆವಶ್ಯಕತೆಯಿದೆ. ಯಂತ್ರ ಖರೀದಿಗಾಗಿಯೇ ಬಂದಿದ್ದೇವೆ - ಸಿದ್ಧಲಿಂಗಪ್ಪ, ಚಿಕ್ಕಮಗಳೂರು
* ಯಂತ್ರಗಳಲ್ಲಿ ಅಡಿಕೆ ಸುಲಿಯುವಾಗ ಅಡಿಕೆಗೆ ಪೆಟ್ಟಾಗುತ್ತದೆ. ಬೇಕಾದಲ್ಲಿಗೆ ಒಯ್ಯುಬಹುದಾದ ಯಂತ್ರಗಳು ಬೇಕು - ಯಾಕೂಬ್ ಮುಂಡೂರು
* ಸಣ್ಣ ಯಂತ್ರಗಳು ಚೆನ್ನಾಗಿವೆ. ಕಡಿಮೆ ಕ್ರಯದ, ಕೈ ಚಾಲಿತ ಅಡಿಕೆ ಸುಲಿ ಉಪಕರಣಗಳು ಕೃಷಿಕನಿಗೆ ಉಪಕಾರಿ. ಪ್ರಾಮಾಣಿಕ ಕೆಲಸದವರನ್ನು ಕಳೆದುಕೊಳ್ಳುವ ಭೀತಿಯಲ್ಲಿ ತೆಂಗಿನಂತೆ - ಚಾಲಿ ಅಡಿಕೆ ಸಿಪ್ಪೆ ತೆಗೆಯುವ ಯಂತ್ರ ಚೆನ್ನಾಗಿದೆ - ನಾಗೇಂದ್ರನಾಥ್, ತೀರ್ಥಹಳ್ಳಿ

Friday, October 30, 2009

ಚಾರಿತ್ರಿಕ 'ಅಡಿಕೆ ಯಂತ್ರ ಮೇಳ' ಶುಭಾರಂಭ


ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಪ್ರಥಮ 'ಅಡಿಕೆ ಯಂತ್ರ ಮೇಳ'ವು ಇಂದು ಸಂಜೆ ಗಂಟೆ 3-45ಕ್ಕೆ ಶುಭಾರಂಭಗೊಂಡಿತು. ಮೇಳಕ್ಕೆ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇದರ ಸಾರಥ್ಯ. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್, ಪುತ್ತೂರು - ಇವುಗಳ ಜಂಟಿ ಸಹಯೋಗ.
ಉದ್ಘಾಟನೆ : ಮಂಗಳೂರು ಸಂಸದ ನಳಿನ್ಕುಮಾರ್ ಕಟೀಲು ಇವರಿಂದ ದೀಪಜ್ವಲನ ಮತ್ತು ಯಂತ್ರವೊಂದರ ಗುಂಡಿ ಒತ್ತುವುದರ ಮೂಲಕ ಯಂತ್ರ ಚಾಲೂ ಮಾಡಿ ಮೇಳಕ್ಕೆ ಶುಭಚಾಲನೆ. 'ಭಾರತೀಯರದು ಕೃಷಿ ಮತ್ತು ಋಷಿ ಪರಂಪರೆ. ಭಾರತದಲ್ಲಿ ಐಟಿ ಬಂದ್ ಆದರೆ ಇಲ್ಲಿನ ಕೃಷಿ ಕ್ಷೇತ್ರ ನಲುಗದು. ಕೃಷಿಗೆ ಪೂರಕವಾದ ಉದ್ಯಮಕ್ಕೆ ಸ್ವಾಗತ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ನಾಶಕ್ಕೆ ಮುಂದಾಗುವ ಯಾವುದೇ ಉದ್ಯಮಗಳನ್ನು ವಿರೋಧಿಸುತ್ತೇನೆ.' - ಸಂಸದರ ಮಾತು.
ದಿಕ್ಸೂಚಿ ಭಾಷಣ : ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪಿ.ಜಿ.ಚಂಗಪ್ಪ - ಇವರಿಂದ - ಉತ್ತಮ ಮಾರುಕಟ್ಟೆ ಸೃಷ್ಟಿಯಾಗಲು ಗುಜರಾತಿನಲ್ಲಿದ್ದಂತೆ 'ಫಾರ್ಮರ್ಸ್ ಕಂಪೆನಿ'ಗಳು ನಮ್ಮಲ್ಲೂ ಹುಟ್ಟಿಕೊಳ್ಳಬೇಕು. ದುರಂತವೆಂದರೆ ನಮ್ಮ ಸರಕಾರಗಳು ಅಡಿಕೆಯನ್ನು ತಂಬಾಕಿನ ಜತೆ ಥಳಕು ಹಾಕಿವೆ. ಇದರಿಂದ ಹೊರಗೆ ಬರಲು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಕಂಡುಹಿಡಿಯುವಂತಾಗಬೇಕು.
ಅತಿಥಿಗಳಿಂದ ಶುಭಾಶಂಸನೆ : ಕೆ. ರಾಮ ಭಟ್ ಗೌರವಾಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು; ಡಾ.ಶಿವಣ್ಣ ವಿಶೇಷಾಧಿಕಾರಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಮೈಸೂರು ವಿಭಾಗ.
ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆಯವರ ಸಭಾಧ್ಯಕ್ಷತೆ. 'ಸ್ವಿಡ್ಜರ್ಲ್ಯಾಂಡ್, ರಷ್ಯಾಗಳಲ್ಲಿ ಹುಲುಸಾಗಿ ಬೆಳೆದ ಪೈರು ನೋಡಲು ಸಿಗುತ್ತದೆ. ಆದರೆ ಅದರ ಮಧ್ಯೆ ರೈತ ಕಾಣುವುದಿಲ್ಲ! ಕಾರಣ ಪೈರು ಹುಲುಸಾಗಿ ಬೆಳೆಯಲು ಯಂತ್ರಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಬದಲಾವಣೆಗಳು ಅನಿವಾರ್ಯವಾಗುವ ಈ ಕಾಲಘಟ್ಟದಲ್ಲಿ ಯಂತ್ರಾವಿಷ್ಕಾರಕ್ಕೆ ದೊಡ್ಡ ಸಂಸ್ಥೆಗಳು ಮುಂದೆ ಬರಬೇಕಾಗಿದೆ. ಕೃಷಿಕರೇ ಸಂಶೋಧಕರಾಗಿ ಮುಂದೆ ಬರುತ್ತಿರುವುದು ಸಂತೋಷದ ವಿಚಾರ' ಹೆಗ್ಗಡೆಯವರ ಆಶಯ. ಈ ಸಂದರ್ಭದಲ್ಲಿ ರೈತ ಸಂಶೋಧಕರನ್ನು ಡಾ. ವೀರೇಂದ್ರ ಹೆಗ್ಗಡೆಯವರು ಸಂಮಾನಿಸಿದರು.
ಆರಂಭದಲ್ಲಿ ಕು.ಶಿಲ್ಪಾ ಬಿ. ಮತ್ತು ಬಳಗದವರಿಂದ ಪ್ರಾರ್ಥನೆ. ಪ್ರಸ್ತಾವನೆ ಮತ್ತು ಸ್ವಾಗತ - ಎಸ್.ಆರ್.ರಂಗಮೂರ್ತಿ ಅಧ್ಯಕ್ಷರು, ಕ್ಯಾಂಪ್ಕೋ, ಮ್ಯಾನೇಜಿಂಗ್ ಟ್ರಸ್ಟಿ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ. ಧನ್ಯವಾದ : ಪ್ರೊ. ಅಶೋಕ್ ಕುಮಾರ್. ನಿರ್ವಹಣೆ - ಉಪನ್ಯಾಸಕ ಡಾ.ಶ್ರೀಷಕುಮಾರ್, ಉಪನ್ಯಾಸಕ ರೋಹಿಣಾಕ್ಷ ಮತ್ತು ಶ್ರೀ ಪಡ್ರೆ
ವೇದಿಕೆಯಲ್ಲಿ - ಬಲರಾಮ ಆಚಾರ್ಯ, ಅಧ್ಯಕ್ಷರು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು; ಶ್ರೀಕೃಷ್ಣ ಭಟ್, ಉಪಾಧ್ಯಕ್ಷರು, ಕ್ಯಾಂಪ್ಕೋ ಲಿ.,; ಶಾಂತಾರಾಮ ಹೆಗ್ಡೆ, ಅಧ್ಯಕ್ಷರು, ಟಿ.ಎಸ್.ಎಸ್.ಲಿ. ಶಿರಸಿ; ಕೆ.ನರಸಿಂಹ ನಾಯಕ್, ಉಪಾಧ್ಯಕ್ಷರು, ಮ್ಯಾಮ್ಕೋಸ್ ಲಿ., ಶಿವಮೊಗ್ಗ; ಶಂಕರ ಭಟ್, ಬದನಾಜೆ,ಆಯುರ್ವೇದ ಸಂಶೋಧಕರು; ಮಂಚಿ ಶ್ರೀನಿವಾಸ ಆಚಾರ್, ಅಧ್ಯಕ್ಷರು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್, ಪುತ್ತೂರು ಮತ್ತು ಪಿ.ಮಧುಸೂಧನ ರಾವ್, ಮ್ಯಾನೇಜಿಂಗ್ ಡೈರೆಕ್ಟರ್, ಕ್ಯಾಂಪ್ಕೋ ಲಿ.,
ಮೇಳ ವಿಶೇಷ: * ಗ್ರಾಮೀಣ ಬದುಕಿನ ಹಿನ್ನೆಲೆಯುಳ್ಳ ಸಭಾವೇದಿಕೆ * ರೈತ ಸಂಶೋಧಕರಿಗೆ ಮನ್ನಣೆ - ಉತ್ತಮ ವ್ಯವಸ್ಥೆಯ ಮಳಿಗೆಗಳು * ಪೂರ್ಣಕುಂಭ ಸ್ವಾಗತ ಮತ್ತು ಚೆಂಡೆ ನಿನಾದದೊಂದಿಗೆ ಪರಮಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಸ್ವಾಗತ * ಸಮಾರಂಭದಲ್ಲಿ ರೈತ ಸಂಶೋಧಕರಿಗೆ ಗೌರವಾರ್ಪಣೆ * ಅಡಿಕೆಯಿಂದಲೇ ಸಿದ್ಧವಾದ ಪ್ರವೇಶ ದ್ವಾರ. * ರಾಜ್ಯ ರಾಜಕೀಯದ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಜಕೀಯ ಧುರೀಣರ ಗೈರುಹಾಜರಿ.
ಚಿತ್ರ : ಕೃಷ್ಣ ಸ್ಟುಡಿಯೋ, ಪುತ್ತೂರು


Wednesday, October 28, 2009

ಪುತ್ತೂರಿನಲ್ಲಿ ತ್ರಿದಿನ ಅಡಿಕೆ ಯಂತ್ರ ಮೇಳ -2009




ಕೃಷಿಕರಿಗೆ ಎಲ್ಲಾ ಅಡಿಕೆ ಸುಲಿ ಯಂತ್ರಗಳನ್ನು ಒಂದೇ ಕಡೆ ಕಣ್ಣಾರೆ ಕಾಣುವ ಅವಕಾಶ ಕಲ್ಪಿಸಲು ಅಕ್ಟೋಬರ್ 30ರಿಂದ ಮೂರು ದಿನಗಳ ಕಾಲ ಪುತ್ತೂರಿನಲ್ಲಿ 'ಅಡಿಕೆ ಯಂತ್ರ ಮೇಳ - 2009' ನಡೆಯಲಿದೆ.
ಮಂಗಳೂರಿನ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ನಡೆಸುವ ಈ ಕಾರ್ಯಕ್ರಮಕ್ಕೆ ಫಾರ್ಮರ್ ಫಸ್ಟ್ ಟ್ರಸ್ಟ್ ಸಹಕಾರ ನೀಡಲಿದೆ.
ಪುತ್ತೂರು ನೆಹರುನಗರದ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇಳ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಸಿ ಮತ್ತು ಗೋಟಡಿಕೆ ಸುಲಿಯುವ ಯಂತ್ರ ಮತ್ತು ಅಡಿಕೆಗೆ ಬೋರ್ಡೋ ದ್ರಾವಣ ಸಿಂಪಡಿಸುವ ಉಪಕರಣಗಳ ಪ್ರಾತ್ಯಕ್ಷಿಕೆ ಇರುತ್ತದೆ.
ಈ ವರೆಗೆ ಅಭಿವೃದ್ಧಿಪಡಿಸಲಾಗಿರುವ 30 ಕ್ಕೂ ಹೆಚ್ಚು ಅಡಿಕೆ ಸುಲಿಯುವ ಮತ್ತು ಸಿಂಪಡಣ ಉಪಕರಣ / ಯಂತ್ರಗಳ ಪೈಕಿ ಬೆರಳೆಣಿಕೆಯವನ್ನು ಬಿಟ್ಟರೆ ಉಳಿದವನ್ನೆಲ್ಲಾ ಮೆಕ್ಯಾನಿಕಲ್ ಎಂಜಿನೀರಿಂಗ್ನಲ್ಲಿ ಔಪಚಾರಿಕ ಶಿಕ್ಷಣ ಇಲ್ಲದಿರುವ ಕೃಷಿಕರೇ ಅಭಿವೃದ್ಧಿಪಡಿಸಿರುವುದು ಗಮನಾರ್ಹ.

ಕೃಷಿಕರಿಗೆ ಈ ಯಂತ್ರಗಳ ಪರಿಚಯ ಮಾಡುವುದರ ಜತೆಗೆ ಸಂಶೋಧಕ/ತಯಾರಕರಿಗೆ ತಮ್ಮ ಯಂತ್ರಗಳನ್ನು ನಾಳಿನ ಬಳಕೆದಾರರಿಗೆ ತೋರಿಸಿಕೊಡುವ ಅಪೂರ್ವ ಅವಕಾಶವೂ ಇದಾಗಿದೆ. ಅಡಿಕೆ ಕೃಷಿರಂಗದಲ್ಲಿ ಇಂಥ ಕಾರ್ಯಕ್ರಮ ನಡೆಯುವುದು ಇದೇ ಮೊದಲು.
ಮೇಳದ ಅಂಗವಾಗಿ ವಿಚಾರ ಸಂಕಿರಣ, ಸಂಶೋಧಕರೊಂದಿಗೆ ಮುಖಾಮುಖಿಗಳ ಸಭಾ ಕಾರ್ಯಕ್ರಮವೂ ಇರುತ್ತದೆ. ಮೇಳದ ನಿರ್ವಹಣೆಗಾಗಿ ಸಂಘಟನಾ ಸಮಿತಿಯೊಂದನ್ನು ರೂಪಿಸಿದ್ದು ಅದು ಭರದಿಂದ ಸಿದ್ಧತೆ ನಡೆಸತೊಡಗಿದೆ.
ಈಗಾಗಲೇ ಹೆಚ್ಚಿನ ಯಂತ್ರೋಪಕರಣ ತಯಾರಕರನ್ನು ಆಹ್ವಾನಿಸಿದ್ದು, ಕರೆ ಬಾರದ ಅಡಿಕೆ ಸುಲಿ/ಸಿಂಪಡಣಾ ಯಂತ್ರೋಪಕರಣ ಸಂಶೋಧಕ/ತಯಾರಕರು ಮೇಳ ಸಮಿತಿಯ ಸಂಚಾಲಕ ಪಿ.ಶ್ಯಾಮ ಭಟ್ಟರನ್ನು (94481 22272) ಸಂಪರ್ಕಿಸಬಹುದು.

ಚಿತ್ತಕುಂಚದಲ್ಲಿ ಮಿಂದೆದ್ದ ಅಡಿಕೆಸಿಪ್ಪೆ ಚಿತ್ತಾರ


ಅಡಿಕೆ ಸಿಪ್ಪೆಯ ಈ ಚಿತ್ತಾರಗಳು ಕೇರಳದ ಅರಣ್ಮೂಲಾದ ಜಯಕೃಷ್ಣನ್ ಅವರ ಕೈಚಳಕ. ಮಣ್ಣಲ್ಲಿ ಮಣ್ಣಾಗಿ ಹೋಗುವ ಅಡಿಕೆ ಸಿಪ್ಪೆಗೆ ಅಂದವರ್ಧನೆ ಮಾಡುವುದರ ಮೂಲಕ ಮೌಲ್ಯವರ್ಧನೆ ಮಾಡಿದ್ದಾರೆ.
ಜಯಕೃಷ್ಣರಿಗೆ ಚಿತ್ರಕಲೆ ಬಾಲ್ಯಾಸಕ್ತಿ. ಇವರ ಕೈಯಿಂದ ಸ್ಕೆಚ್ ಪೆನ್ ತಪ್ಪುವುದೇ ಇಲ್ಲ! ಬಿಳಿ ಹಾಳೆ ಹಾಳೆಯಾಗಿಯೇ ಇರುವುದು ಇವರಿಗೆ ಇಷ್ಟವಾಗುವುದಿಲ್ಲ! ಅದರಲ್ಲಿ ಏನಾದರೊಂದನ್ನು ಬಿಡಿಸಿದರಷ್ಟೇ ಅವರಿಗೆ ಸಮಾಧಾನ. ಈ ಗೀಳು `ವಿಪರೀತ ಎನಿಸಿದರೂ, ಮಗನಲ್ಲಿದ್ದ ಅವ್ಯಕ್ತ ಕಲಾವಿದ ಅನಾವರಣಗೊಳ್ಳುತ್ತಿರುವುದನ್ನು ಕಂಡ ತಂದೆ-ತಾಯಿಯರಿಂದ ಪ್ರೋತ್ಸಾಹ.`
'ನನ್ನ ಅಜ್ಜನಿಗೆ ಬೀಡಾ ಅಂಗಡಿ ಇದೆ. ಏನಿಲ್ಲವೆಂದರೂ ವಾರಕ್ಕೆ ನೂರು ಅಡಿಕೆ ಬೀಡಾಕ್ಕೆ ಬೇಕು. ಒಮ್ಮೆ ಹೀಗಾಯಿತು - ಅಂಗಡಿಯ ಎದುರು ಅಡಿಕೆ ಸಿಪ್ಪೆ ಬಿಸಾಡಿದ್ದರು. ನನಗದು ಹಕ್ಕಿ ಬಾಲದಂತೆ ಕಂಡಿತು. ಇದನ್ಯಾಕೆ ಚಿತ್ತಾರ ಮಾಡಬಾರದು? ರಟ್ಟಿನಲ್ಲಿ ಹಕ್ಕಿಯಾಕಾರದ ಸ್ಕೆಚ್ ಸಿದ್ದವಾಯಿತು. ಅಡಿಕೆ ಸಿಪ್ಪೆಯನ್ನು ಅದಕ್ಕೆ ಅಂಟಿಸುತ್ತಾ ಜೀವಕಳೆ. ಧ್ಯೆರ್ಯ ಬಂತು. ಹಕ್ಕಿ ಕುಟುಂಬವೊಂದನ್ನು ಇದರಿಂದ ತಯಾರಿಸಿದೆ. ಅದುವೇ ನನ್ನ ಮೊದಲ ಅಡಿಕೆ ಸಿಪ್ಪೆ ಚಿತ್ತಾರ ಎನ್ನುತ್ತಾರೆ ಜಯಕೃಷ್ಣನ್.
ಕಳೆದೆರಡು ವರುಷದಲ್ಲಿ ಇಪ್ಪತ್ತೈದಕ್ಕೂ ಮಿಕ್ಕಿದ ಚಿತ್ತಾರಗಳ ಸೃಷ್ಟಿ. ಗಣಪತಿ, ರಾಷ್ಟ್ರಪಿತ ಗಾಂಧೀಜಿ, ಡಾ.ಅಬ್ದುಲ್ ಕಲಾಂ, ರಾಜಾ ರವಿವರ್ಮನ ವರ್ಣಕೃತಿ, ಹುಲಿಮುಖ, ಸಿಂಹಮುಖ, ಗೂಬೆ, ಒಂಟೆಕುಟುಂಬ, ಹದ್ದು, ಜಿಂಕೆಯನ್ನು ಬೇಟೆಯಾಡುವ ನರಿ, ಅಳಿಲು, ಹಾವಿನ ಬೇಟೆಯಲ್ಲಿರುವ ಹದ್ದು.....ಚಿತ್ತಾರಗಳು `ಅಡಿಕೆ ಸಪ್ಪೆಯ ರಚನೆಗಳೋ ಎಂದು ನಿಬ್ಬೆರಗಾಗಿಸುತ್ತವೆ! ಅಷ್ಟು ಆಕರ್ಷಕ ಮತ್ತು ಸಹಜ ಗುಣ.
ಕನಿಷ್ಟ ಆರು ತಿಂಗಳಾದರೂ ನೀರಿನಲ್ಲಿದ್ದ ಹಣ್ಣಡಿಕೆಯ (ನೀರಡಿಕೆ) ಸಿಪ್ಪೆಯನ್ನು ಚಿತ್ತಾರಕ್ಕೆ ಆಯ್ದುಕೊಳ್ಳುತ್ತಾರೆ. ಸಾಮಾನ್ಯವಾಗಿ ಬೀಡಾ ಅಂಗಡಿಗಳಲ್ಲಿ ಈ ರೀತಿಯ ಅಡಿಕೆಯನ್ನೇ ಬಳಸುತ್ತಾರೆ. (ಹಣ್ಣಡಿಕೆಯನ್ನೂ ಬಳಸುತ್ತಾರೆ) `ತನ್ನ ಅಜ್ಜನ ಬೀಡಾ ಅಂಗಡಿಯ ಅಡಿಕೆ ಸಿಪ್ಪೆ ಈಗ ತ್ಯಾಜ್ಯವಾಗುವುದಿಲ್ಲ ಎನ್ನುವ ಜಯಕೃಷ್ಣನ್, ಹತ್ತಿರದ ಚೆಂಗನೂರು ಪೇಟೆಯಲ್ಲಿ ಅವರ ಆವಶ್ಯಕತೆಗೆ ಬೇಕಾದ ಅಡಿಕೆ ಸಿಪ್ಪೆ ಸಿಗುತ್ತಿದೆ.
ತನ್ನೂರಿನಲ್ಲಿ ಜರುಗಿದ ಪ್ರದರ್ಶನವೊಂದರಲ್ಲಿ ಚಿತ್ತಾಕರ್ಷಕವಾದ ಇವರ ಚಿತ್ತಾರಗಳಿಗೆ ಮಾರುಹೋದವರು ಅಧಿಕ. `ಹಣಕೊಟ್ಟು ಪಡಕೊಳ್ಳಲು ಹಲವು ಮಂದಿ ಮುಂದಾದರು. ನನ್ನಲ್ಲಿ ಅಷ್ಟು ಪ್ರಮಾಣದಲ್ಲಿ ಚಿತ್ತಾರಗಳಿಲ್ಲ. ತಯಾರಿಸಲು ಸಮಯವೂ ಬೇಕು. ನನ್ನ ವಿದ್ಯಾಭ್ಯಾಸದ ಮಧ್ಯದಲ್ಲಿ ಈ ಕೆಲಸವಾಗಬೇಕು. ಹಾಗಾಗಿ ಪ್ರದರ್ಶನದಲ್ಲಿ ಯಾರಿಗೂ ಚಿತ್ತಾರವನ್ನು ಮಾರಾಟ ಮಾಡಿಲ್ಲ. ಪ್ರದರ್ಶನದ ಕೊನೆಗೆ `ಮಾರಾಟಕ್ಕಿಲ್ಲ, ಪ್ರದರ್ಶನ ಮಾತ್ರ ಅಂತ ಫಲಕ ಹಾಕಬೇಕಾಯಿತು ಎಂದು ನೆನಪಿಸಿಕೊಳ್ಳುತ್ತಾರೆ.
`ಪ್ರಸಿದ್ಧ ದೇವಸ್ಥಾನವೊಂದರಲ್ಲಿದ್ದ ರಾಮಾಯಣ-ಭಾಗವತದ ಭಿತ್ತಿ ಚಿತ್ರಗಳನ್ನು ನೋಡಿ ಅದರ ಕಥೆಯನ್ನು ಅಮ್ಮ ಹೇಳಿದರು. ಅದರಿಂದ ರೂಪುಗೊಂಡಿತು - ಪೂತನಾಸಂಹಾರ ಮತ್ತು ಸೀತಾಪಹಾರ ದೃಶ್ಯಗಳ ಜಲವರ್ಣಚಿತ್ರಗಳು ಜಯಕೃಷ್ಣ. ಅರಣ್ ಮೂಲಾದ ವಾಸ್ತುವಿದ್ಯಾ ಗುರುಕುಲದಲ್ಲಿ `ಭಿತ್ತಿಚಿತ್ರಗಳನ್ನು ಜಯಕೃಷ್ಣ ಅಭ್ಯಸಿಸುತ್ತಿದ್ದಾರೆ. ಕಲಿಕೆಯೊಂದಿಗೆ ಬಿಡುವು ಮಾಡಿಕೊಂಡು `ಅಡಿಕೆ ಸಿಪ್ಪೆ ಅರಸುತ್ತಾರೆ, ಚಿತ್ತಾರಕ್ಕಾಗಿ. ಹಲವು ಬಹುಮಾನಗಳು ಅರಸಿ ಬಂದಿವೆ.
ಚಿತ್ರ ಯಾರಿಗೂ ಬಿಡಿಸಬಹುದು(!) ಅಂತ ಸುಲಭದಲ್ಲಿ ಹೇಳಿಬಿಡಬಹುದು. ಆದರೆ ಹಾಳಾಗಿ ಹೋಗುವ ಯಾರೂ ಅಷ್ಟಾಗಿ ಗಮನಿಸದ ಅಡಿಕೆ ಸಿಪ್ಪೆಯು ಚಿತ್ತಾರದ ಮೂಲಕ ತನ್ನ ಅಂದವನ್ನು ವೃದ್ಧಿಸಿಕೊಳ್ಳುವುದು ಒಂದು ಎಕ್ಸ್ಕ್ಲೂಸಿವ್ ಅಲ್ವಾ. ನೋಡುವ ಒಳಕಣ್ಣಿದ್ದರೆ ಜಯಕೃಷ್ಣನ್ ಶ್ರಮ ಆರ್ಥವಾಗುತ್ತದೆ.

Saturday, October 17, 2009

'ಸುರಂಗ'ಗಳಿಂದ ನೀರ ನೆಮ್ಮದಿ!


ಬಂಟ್ವಾಳ ತಾಲೂಕು ಮಾಣಿಲದ ಮಾಣಿಮೂಲೆ ಅಚ್ಯುತ ಭಟ್ಟರ ಭೂಮಿ ಎಲ್ಲರಂತೆ ಸಮತಟ್ಟಲ್ಲ. ತೀರಾ ಗುಡ್ಡ. ಬಾವಿ ತೋಡುವಂತಿಲ್ಲ. ತೋಡಿದರೂ ನೀರು ಸಿಗಬಹುದೆಂಬ ವಿಶ್ವಾಸವಿಲ್ಲ. ಒಸರುವ ಒರತೆ ನೀರನ್ನು ಹಿಡಿದಿಡಬೇಕು. ಅದು ಬಿಟ್ಟರೆ ಬೇರೆ ನೀರಿನ ಮೂಲವಿಲ್ಲ.
ಕೃಷಿ ಜವಾಬ್ದಾರಿ ಹೆಗಲಿಗೆ ಬಂದಾಗ ತಂದೆಯವರು ಕೊರೆಸಿದ್ದ ಸುರಂಗವೊಂದರ ನೀರೇ ಆಧಾರ. ಅದರ ಕಿರು ಬೆರಳು ಗಾತ್ರದ ಹರಿನೀರನ್ನು ಸಂಗ್ರಹಿಸಿ ಬಳಕೆ. ತೀರಾ ಬೆಟ್ಟವಾದುದರಿಂದ ಅಲ್ಲಲ್ಲಿ ಸಮತಟ್ಟು ಮಾಡಿ ಮನೆ, ಕೃಷಿ. ತಟ್ಟು ಮಾಡಿದಲ್ಲೆಲ್ಲಾ ಅಚ್ಯುತ ಭಟ್ ಸುರಂಗ ಕೊರೆದರು ಈಗವರಲ್ಲಿ 22 ಸುರಂಗಗಳಿವೆ. ಅದರ ನೀರೇ ಆರೆಕ್ರೆ ಅಡಿಕೆ ತೋಟಕ್ಕೆ ಆಧಾರ.
ಸುರಂಗ - ನೆಲದಾಳದ ಹೊಂಡವಲ್ಲ. ಗುಡ್ಡದಡ್ಡಕ್ಕೆ ಕೊರೆದು ಮಾಡಿದ ರಚನೆ. ಆರುವರೆ ಅಡಿ ಎತ್ತರ, ಮೂರಡಿ ಅಗಲದಷ್ಟು - ಮನುಷ್ಯ ಹೋಗುವಷ್ಟು - ಗುಡ್ಡವನ್ನು ಅಡ್ಡಕ್ಕೆ ಕೊರೆಯುವುದು. ಕೃಷಿಯಲ್ಲಿ ಬಳಸುವಂತಹುದೇ, ಆದರೆ ಚಿಕ್ಕದಾದ ಪಿಕ್ಕಾಸಿ ಮುಖ್ಯ ಅಸ್ತ್ರ! ಒಬ್ಬ ಅಗೆಯಲು, ಮತ್ತೊಬ್ಬ ಮಣ್ಣು ತುಂಬಿಸಲು, ಇನ್ನೊಬ್ಬ ಮಣ್ಣನ್ನು ಹೊರ ಸಾಗಿಲು - ಹೀಗೆ ಮೂವರು ಬೇಕು.
ಅಚ್ಯುತ ಭಟ್ಟರ ಗುಡ್ಡದ ಮಣ್ಣು - ಜಂಬಿಟ್ಟಿಗೆ (ಮುರ). ಸುರಂಗ ಕೊರೆಯಲು ಸೂಕ್ತ ಮಣ್ಣು. ಜರಿಯುವುದಿಲ್ಲ, ಕುಸಿಯುವುದಿಲ್ಲ. ಸುರಂಗ ಕೊರೆತ ಎಚ್ಚರ ಬೇಡುವ ಕೆಲಸ. ಕೊರೆಯುತ್ತಾ ಮುಂದೆ ಹೋದಷ್ಟೂ ಬೆಳಕಿನ ಅಭಾವ. ಕ್ಯಾಂಡಲ್, ಲ್ಯಾಟನ್ ಬಳಸುತ್ತಾರೆ. ಕೆಲವೊಂದು ಸಲ ಆಮ್ಲಜನಕ ಅಭಾವವಾಗುತ್ತದೆ. ಆಗ ಒಮ್ಮೆ ಹೊರಗೆ ಬಂದು ಸ್ವಲ್ಪ ಹೊತ್ತು ಇದ್ದು ಪುನಃ ಕೆಲಸ ಆರಂಭ. ಮಣ್ಣಿನಲ್ಲಿ ನೀರಿನ ಪಸೆ ದೊರೆತರೆ 'ಮುಂದೆ ನೀರು ಸಿಗುತ್ತದೆ' ಎಂಬ ಸೂಚನೆ. 'ಕೊರೆದಷ್ಟೂ ನೀರಿನ ಪಸೆಯ ಸೂಚನೆ ಸಿಗದಿದ್ದರೆ ಸುರಂಗ ಕೊರೆವ ದಿಕ್ಕನ್ನು ಅಲ್ಲೇ ಸ್ವಲ್ಪ ಬದಲಿಸಿದರೆ ಆಯಿತು. ಅದೆಲ್ಲಾ ಅಲ್ಲಲ್ಲಿನ ನಿರ್ಧಾರ.' ಎನ್ನುತ್ತಾರೆ ಭಟ್.
ನೀರಿನ ಒರತೆ ಸಿಕ್ಕಿದಲ್ಲಿಗೆ ಕೊರೆತ ಬಂದ್. ಒರತೆಯ ಸೆಲೆ ಸಿಕ್ಕಿದಲ್ಲಿ ಮಣ್ಣಿನಿಂದ ಸಣ್ಣ ದಂಡೆ (ಕಟ್ಟ) ಮಾಡಿದರೆ ನೀರು ಅದರಲ್ಲಿ ತುಂಬಲು ಅನುಕೂಲ. ಸುರಂಗದುದ್ದಕ್ಕೂ ಚಿಕ್ಕ ಕಣಿಯನ್ನು ತೆಗದು ನೀರನ್ನು ಹೊರತರಬಹುದು. ಕಣಿಯ ಬದಲಿಗೆ ಅಡಿಕೆಯ ದಂಬೆ ಬಳಕೆ.ಒಳಭಾಗದಿಂದ ನೀರು ಹೊರಬರುವಾಗ, ತಾಪಕ್ಕೆ ನೀರು ಆರಿಹೋಗುತ್ತದೆ. ಇದಕ್ಕಾಗಿ ಪಿವಿಸಿ ಪೈಪನ್ನು ಬಳಸಿದ್ದಾರೆ. ನೀರಿನ ಮೂಲದಿಂದ ಪೈಪ್ ಜೋಡಣೆ. ಪೈಪಿನೊಳಗೆ ಬೇರುಗಳು ಮನೆ ಮಾಡುತ್ತವೆ. ಆಗ ನೀರಿನ ಹರಿವಿಗೆ ತೊಂದರೆ. ವರುಷಕ್ಕೊಮ್ಮೆ ಬೇರು ತೆಗೆದು ಪೈಪನ್ನು ಶುಚಿಗೊಳಿಸುವುದು ಅನಿವಾರ್ಯ.
ಸುರಂಗದೊಳಗೆ ಬಾವಲಿಗಳ ಬಿಡಾರ. ಅವುಗಳ ಹಿಕ್ಕೆಗಳು ನೀರಿನೊಂದಿಗೆ ಟ್ಯಾಂಕಿ ಸೇರುತ್ತವೆ. ತೋಟಕ್ಕೆ ಓಕೆ. ಆದರೆ ಕುಡಿನೀರಿಗೆ? ಒಂದು ಸುರಂಗಕ್ಕೆ ಬಾವಲಿಗಳು ಒಳ ಹೋಗದಂತೆ ಹೊರಮೈಗೆ ಬಲೆ ಹಾಕಿದ್ದಾರೆ. ಇದರ ನೀರು ಮನೆ ಸಮೀಪದಲ್ಲಿರುವ ಕುಡಿ ನೀರಿನ ಟ್ಯಾಂಕಿಯಲ್ಲಿ ಸಂಗ್ರಹವಾಗುತ್ತದೆ.
ಇಪ್ಪತ್ತೆರಡು ಸುರಂಗದಿಂದ ಬರುವ ನೀರು ನಾಲ್ಕು ಟ್ಯಾಂಕಿಗಳಲ್ಲಿ ಸಂಗ್ರಹ. ಒಂದೊಂದು ಟ್ಯಾಂಕಿಗೆ ನಾಲ್ಕೈದು ಸುರಂಗದ ಸಂಪರ್ಕ. ಟ್ಯಾಂಕಿಯಿಂದ ಟ್ಯಾಂಕಿಗೆ ಲಿಂಕ್. ಇಲ್ಲಿಂದ ನೇರ ತೋಟಕ್ಕೆ. ದೇವರ ಪೂಜೆಗೂ ಇದೇ ನೀರು. ಅಡುಗೆ ಮನೆಗೆ ನೇರ ಸಂಪರ್ಕ. ನಲ್ಲಿ ತಿರುತಿಸಿದರೆ ಆಯಿತು.
ಮಾಣಿಲದಲ್ಲಿ ಐನೂರ ಐವತ್ತು ಮನೆಗಳು. ಶೇ.65ರಷ್ಟು ಮನೆಗಳಲ್ಲಿ ಕುಡಿನೀರಿಗೆ 'ಸುರಂಗ'ವೇ ಆಧಾರ. ಅದರಲ್ಲೂ ಮಾಣಿಮೂಲೆಯ ಹದಿನೆಂಟು ಮನೆಗಳ ಬದುಕು - ಸುರಂಗದ ನೀರಿನಲ್ಲಿ! 'ನಮ್ಮೂರಿನಲ್ಲಿ ಸುರಂಗ ಕೊರೆಯಲು ಸ್ಥಳ ಸೂಚಿಸುವುದು ತಂದೆಯವರೇ. ಏನಿಲ್ಲವೆಂದರೂ ನೂರು ಆಗಿರಬಹುದು. ವಿಫಲವಾದುದೇ ಇಲ್ಲ' ಎನ್ನಲು ಗೋವಿಂದ ಭಟ್ಟರಿಗೆ ಹೆಮ್ಮೆ. 'ಇಂತಹ ಜಾಗದಲ್ಲಿ ಸುರಂಗ ಕೊರೆದರೆ ನೀರಿದೆ' ಎಂದು ಅಚ್ಯುತ ಭಟ್ಟರು ಖರಾರುವಾಕ್ಕಾಗಿ ಹೇಳಬಲ್ಲರು.
ಮಾಣಿಮೂಲೆಯಲ್ಲಿ ಸುರಂಗವೊಂದರ ರಚನೆಗೆ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ಸಾವಿರ ವೆಚ್ಚ. ಒಮ್ಮೆ ಬಂಡವಾಳ ಹಾಕಿದರೆ ಆಯಿತು. ಇಂಧನ, ವಿದ್ಯುತ್, ಡೀಸೆಲ್, ಪೆಟ್ರೋಲ್, ಪಂಪ್..ರಗಳೆಯೇ ಇಲ್ಲ. ಪ್ರತಿ ವರುಷ ನಿರ್ವಹಣೆ ಮಾತ್ರ. ಗುಡ್ಡದಲ್ಲಿ ಗೇರು ಗಿಡಗಳನ್ನು ಬೆಳೆಸಿದ್ದಾರೆ. ಸಹಜವಾಗಿ ಇತರ ಗಿಡಗಳು ಬೆಳೆದಿವೆ. ಇದರಿಂದಾಗಿ ನೀರಿಂಗಲು ಅನುಕೂಲ. 'ಗುಡ್ಡದಲ್ಲಿ ಇಂಗುಗುಂಡಿಗಳನ್ನು ಮಾಡಿದರೆ ಮತ್ತೂ ಒಳ್ಳೆಯದು' ಭಟ್ಟರ ಅಭಿಪ್ರಾಯ

ಗಾಣದಾಳು ಶ್ರೀಕಂಠರಿಗೆ 'ಮುರುಘಾ ಶ್ರೀ'

ರಾಜ್ಯಮಟ್ಟದ 'ಮುರುಘಾ ಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯು ಈ ಬಾರಿ ಪ್ರಜಾವಾಣಿಯ ಗಾಣದಾಳು ಶ್ರೀಕಂಠರಿಗೆ ಒಲಿದಿದೆ.
ಒರಿಸ್ಸಾದ ನಟವರ ಸಾರಂಗಿಯವರ ಭತ್ತದ ಕೃಷಿಯ ಕುರಿತು ಅವರು ಸುಧಾದಲ್ಲಿ ಬರೆದ 'ದೇಸಿ ಭತ್ತ ಬ್ರಹ್ಮ' ಪ್ರಶಸ್ತಿ ತಂದುಕೊಟ್ಟ ಬರೆಹ.
ಮೈಸೂರಿನ ಕಾರ್ಯನಿರತ ಪತ್ರಕರ್ತರ ಸಂಘದ ಸಂಯೋಜನೆಯಲ್ಲಿ ಮುಂದಿನ ತಿಂಗಳು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿ ಪುರಸ್ಕೃತ ಶ್ರೀಕಂಠರಿಗೆ ಅಭಿನಂದನೆಗಳು.

ನಾಗೇಂದ್ರ ಸಾಗರ್ ಅವರಿಗೆ 'ಕೃಷಿಪತ್ರಿಕೋದ್ಯಮ ಪ್ರಶಸ್ತಿ'

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಸ್ಥಾಪಿಸಿರುವ ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಚಿಪ್ಪಳಿಯ ನಾಗೇಂದ್ರ ಸಾಗರ್ ಆಯ್ಕೆಯಾಗಿದ್ದಾರೆ.

ಕನ್ನಡದಲ್ಲಿ ಅರ್ಥಪೂರ್ಣ ಕೃಷಿಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಕಳೆದ ಎಂಟು ವರ್ಷಗಳಿಂದ ಕೃಷಿಕರೇ ಬರೆದ ಲೇಖನ ಮತ್ತು ಮುಕ್ತ ವಿಭಾಗ ಹೀಗೆ ಎರಡು ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತಿದೆ. ಈ ಬಾರಿ ಎರಡೂ ವಿಭಾಗಗಳನ್ನೂ ಸೇರಿಸಿ ಒಂದೇ ಪ್ರಶಸ್ತಿ. ನಾಗೇಂದ್ರ ಸಾಗರ್ ಬರೆದ 'ವರಿ ಇಳಿಸಿದ ರಸಾವರಿ' (ಅಡಿಕೆ ಪತ್ರಿಕೆ: ಜೂನ್, 2009) ಲೇಖನ ಕೃಷಿಪತ್ರಿಕೋದ್ಯಮ ಪ್ರಶಸ್ತಿಗಾಗಿ ಆಯ್ಕೆಯಾಗಿದೆ.

ಪ್ರಶಸ್ತಿ ಎರಡು ಸಾವಿರ ರೂಪಾಯಿ ನಗದು ಪುರಸ್ಕಾರ, ಪರಿಸರ ಶಿಲ್ಪ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಅಕ್ಟೋಬರ್ 25, 2009ರಂದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬೆಂಗಳಿ ಗ್ರಾಮದಲ್ಲಿ ನಡೆಯಲಿರುವ ಕೇಂದ್ರದ 9ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ.

ಕೃಷಿ ಮಾಧ್ಯಮ ಕೇಂದ್ರದ 'ನವಮ ಸಂಭ್ರಮ'

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಒಂಭತ್ತನೇ ವಾರ್ಷಿಕೋತ್ಸವವು ಶಿರಸಿ ಸನಿಹದ ಬೆಂಗಳಿಯಲ್ಲಿ ಅಕ್ಟೋಬರ್ 25ರಂದು ಪೂ. ಗಂಟೆ 11.15ಕ್ಕೆ ಜರುಗಲಿದೆ.

ಹಿರಿಯ ಕೃಷಿಕರಾದ ವಾಸುದೇವ. ವೆಂ. ಹೆಗಡೆ, ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ ಮತ್ತು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರ ಉಪಸ್ಥಿತಿ.

ಸಮಾರಂಭದಲ್ಲಿ - ಕೃಷಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ, 'ಕಾಮ್ ಫೆಲೋ' ಪ್ರಮಾಣ ಪತ್ರ ವಿತರಣೆ, 'ಸಾವಯವದ ಹಾದಿ' ಮತ್ತು 'ಕಾಡು ಮಾವು' ಕೃಷಿ ಪುಸ್ತಕಗಳ ಅನಾವರಣ ನಡೆಯಲಿದೆ.

(ಮಾಹಿತಿ : ಅನಿತಾ ಪೈಲೂರು, ಅಧ್ಯಕ್ಷೆ, ಕೃಷಿ ಮಾಧ್ಯಮ ಕೇಂದ್ರ)

'ನಮ್ಮ ಅಡುಗೆಗೆ ನಮ್ಮದೇ ತರಕಾರಿ'


ಸೆಪ್ಟೆಂಬರ್ ಕೊನೆ ವಾರ ನಾಲ್ಕು ದಿವಸ ಧಾರವಾಡ ಕೃಷಿ ವಿಶ್ವವಿದ್ಯಾಲಯದ 'ಕಾಲಾವಧಿ ಕೃಷಿಮೇಳ' ನಡೆಯಿತು. ಐದು ಲಕ್ಷಕ್ಕೂ ಮಿಕ್ಕಿ ರೈತರು ಬಂದಿದ್ದರು ಅಂತ ವಿವಿಗೆ ಸಂತಸ-ಹೆಮ್ಮೆ. ಈ ಸಂಭ್ರಮದ ಮಧ್ಯೆ 'ಮಹಾಮಳೆ'ಗೆ ಕೃಷಿಮೇಳವು ಕೊಚ್ಚಿಹೋದ ವಿಚಾರ ಸದ್ದಾಗಲೇ ಇಲ್ಲ! ಈಗಂತೂ ಈ ಮಧ್ಯೆ ಧಾರವಾಡ ವಿಕಾಸ ಗಾಮೀಣ ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ಸಿಕ್ಕರು. ಅವರು ಸಿಕ್ಕಾಗಲೆಲ್ಲಾ 'ನಮ್ಮಲ್ಲಿ ಈ ವರುಷ ಬರೋಬ್ಬರಿ ಟೊಮೆಟೋ ಆಯ್ತು, ಸಿಕ್ಕಾಪಟ್ಟೆ ಫ್ಯಾಷನ್ಫ್ರುಟ್ ಆಯ್ತು..' ಹೀಗೆ ಹೊಸ ಹೊಸ ಸುದ್ದಿ ಹೇಳುತ್ತಾ ಇರುತ್ತಾರೆ. ಈ ಸಲ ಅವರ 'ಪೇಟೆ ಕೃಷಿ' ನೋಡೇ ಬಿಡೋಣ ಅನ್ನುತ್ತಾ ನಿಂತದ್ದು 'ಕಲ್ಯಾಣಿ' ಮುಂದೆ.
ಗುನಗಾ ಅವರಿಗೆ 'ಕಲ್ಯಾಣಿ' ಎದ್ದು ನಿಂತಾಗ ಖುಷಿಯಾಗಲಿಲವಂತ್ಲೆ! ಕಾರಣ, ಹಸಿರೆಲ್ಲೆಬ್ಬಿಸಲಿ ಎಂಬ ಚಿಂತೆ. 1300 ಚದರಡಿ ಜಾಗದೊಳಗೆ ಬಂಧಿಯಾಗಿದ್ದಳು ಕಲ್ಯಾಣಿ. ಮನೆಸುತ್ತ ಓಡಾಡಲು ಮೂರಡಿ ಅಗಲದಷ್ಟು ಜಾಗ. ಕಲ್ಲುಹಾಸು. ಒಂಚೂರು ಮಣ್ಣಿಲ್ಲ. ಆವರಣಕ್ಕೆ ತಾಗಿಕೊಂಡಿರುವ ಕಲ್ಲುಹಾಸನ್ನು ಎರಡಡಿ ಅಗಲಕ್ಕೆ ಕತ್ತರಿಸಿ, ಅದಕ್ಕೆ ಮಣ್ಣನ್ನು ಪೇರಿಸಿದರು. ಸೊಪ್ಪು-ಬಳ್ಳಿ-ತರಕಾರಿ ಬೀಜಗಳನ್ನು ಹಾಕಿದರು. ಬಾಳೆ, ತೆಂಗು ಊರಿದರು. ಆರು ತಿಂಗಳಲ್ಲಿ ಹಸಿರೆದ್ದಾಗ ಖುಷಿಯೋ ಖುಷಿ. 'ನಾವೀಗ ಅಡುಗೆ ಮನೆಗೆ ಹೊರಗಿನಿಂದ ತರಕಾರಿ ತರುವುದೇ ಇಲ್ಲ' ಮನೆಯೊಡತಿ ಸುಮಾ.
ವಾರಕ್ಕೊಮ್ಮೆ ದಂಪತಿಗಳ ಸೆಗಣಿ ಬೇಟೆ! ರವಿವಾರ ಬೆಳ್ಳಂಬೆಳಗ್ಗೆ ಒಂದು ಗಂಟೆ ಸುತ್ತಾಟ. ಸೆಗಣಿ ಸಂಗ್ರಹ. 'ಈ ಬ್ಯಾಂಕ್ ಅಧಿಕಾರಿಗೆ ಕೈತುಂಬಾ ಸಂಬಳ ಸಿಗುತ್ತೆ. ಸೆಗಣಿಯಿಂದ ಕೈಯೆಲ್ಲಾ ಗಲೀಜು ಮಾಡ್ಕೋತಾರೆ. ಎಂತಾ ಮನುಷ್ಯರಪ್ಪಾ...' ಗೇಲಿ ಮಾಡ್ತಾರಂತೆ.
ಮನೆ ಕಟ್ಟುವಾಗಲೇ ಮಳೆಕೊಯ್ಲಿಗೆ ವ್ಯವಸ್ಥೆ. ಅಡುಗೆ ಮನೆ ನೀರು, ಸ್ನಾನದ ನೀರು ವ್ಯರ್ಥವಾಗದೆ ಗಿಡಗಳಿಗೆ ಉಣಿಕೆ. ಮನೆ ಹಿಂಭಾಗ ಚಿಕ್ಕ-ಚೊಕ್ಕ ಕಂಪೋಸ್ಟ್ ಹೊಂಡ. ಸೆಗಣಿಯೊಂದಿಗೆ ಅಡುಗೆ ತ್ಯಾಜ್ಯ, ಕಸ-ಕಡಿಗಳು ಗೊಬ್ಬರವಾಗುತ್ತವೆ. 'ಒಂದು ಬಕೆಟ್ ದ್ರವಸೆಗಣಿಗೆ ಒಂದು ಕಿಲೋ ಕಡ್ಲೆ ಹಿಟ್ಟನ್ನು ಬೆರೆಸಿ ಮೂರು ದಿವಸ ಇಟ್ಟು, ನಂತರ ಅದನ್ನು ತಿಳಿಗೊಳಿಸಿ ಎಲ್ಲಾ ಗಿಡಗಳಿಗೆ ಹಾಕಿದ್ದೇನೆ. ನಿರೀಕ್ಷೆಗಿಂತ ಮೀರಿ ಇಳುವರಿ ನೀಡುತ್ತಿದೆ. ಎರೆಹುಳ ಹೆಚ್ಚಾಗಿದೆ.' ಎನ್ನುತ್ತಾ ಸಿಹಿಗುಂಬಳ ಬಳ್ಳಿಯನ್ನು ತೋರಿಸುತ್ತಾರೆ ಗುನಗಾ.
ಒಂದೇ ಬಳ್ಳಿಯಲ್ಲಿ ಹತ್ತಕ್ಕೂ ಮಿಕ್ಕಿ ಕಾಯಿಗಳು. 'ಇದಕ್ಕಿಂತಲೂ ಹೆಚ್ಚು ಬೆಳೆಯಬಹುದು. ನನ್ನದೇನೂ ಮಹಾ ಅಲ್ಲ. ಆದರೆ ನಗರದ ಮಧ್ಯೆ ಹೇಳುವಂತಹ ಕೃಷಿ ಸಂಪನ್ಮೂಲಗಳ ಅಲಭ್ಯತೆಯಲ್ಲಿ ಇಷ್ಟು ಕಾಯಿ ಬಿಟ್ಟಿರೋದೇ ಹೆಚ್ಚು' ತಾರಸಿಯಲ್ಲಿ ಟೊಮೆಟೋ ಮಡಿ. ಬೇಕಾದಷ್ಟು ಪ್ರಮಾಣದ ಪ್ಲಾಸ್ಟಿಕ್ ಶೀಟನ್ನು ನೆಲಕ್ಕೆ ಹಾಸುತ್ತಾರೆ. ಅದರ ಸುತ್ತಲೂ ಹೋಮಕುಂಡದಂತೆ ಇಟ್ಟಿಗೆಗಳನ್ನು ಪೇರಿಸುತ್ತಾರೆ. ಮಣ್ಣು ಮತ್ತು ಸೆಗಣಿ ಮಿಶ್ರಣವನ್ನು ಮಧ್ಯಕ್ಕೆ ಹಾಕಿ, ಟೊಮೆಟೋ ಬೀಜ ಬಿತ್ತಿದ್ದಾರೆ. ಎರಡ್ಮೂರು ದಿವಸಗಳಿಗೊಮ್ಮೆ ಬುಡವನ್ನು ಕೆದಕಬೇಕು. 'ಟೊಮೆಟೊ ತಾವೂ ತಿಂದು, ಪಕ್ಕದ ಮನೆಯವರಿಗೂ ಕೊಟ್ಟು ಮತ್ತಷ್ಟು ಉಳಿಯುತ್ತದೆ' ಮಗಳು ಮಧುರಾ.
ಹಸಿರು ತರಕಾರಗೂ ಇಂತಹುದೇ ಮಡಿ. ಹಂಚಿ ತಿನ್ನುವ ಗುಣ ಇವರಿಗಿದ್ದುದರಿಂದ, ತರಕಾರಿ ಹೆಚ್ಚು ಫಲ ಕೊಟ್ಟಷ್ಟೂ ನೆರೆ-ಕರೆಯವರಿಗೆ ಖುಷಿ! ಬದನೆ, ಬೆಂಡೆ, ಅಲಸಂಡೆ, ಒಂದೆಲಗ, ಹರಿವೆ, ಟೊಮೆಟೋ, ಅವರೆ, ಫ್ಯಾಶನ್ಫ್ರುಟ್, ಗಾಂಧಾರಿ, ಬಾಳೆ, ಕೆಸು, ಕುಂಬಳಕಾಯಿ, ಪಪ್ಪಾಯಿ, ಮರಗೆಣಸು....ಒಂದೇ, ಎರಡೇ. 'ನಮ್ಮ ಅಡುಗೆಗೆ ನಮ್ಮದೇ ತರಕಾರಿ.' ಉಂಡಾದ ಬಳಿಕ ವೀಳ್ಯ ಹಾಕಲು ವೀಳ್ಯದೆಲೆ ಬಳ್ಳಿ!
ಗುನಗಾ ಕಸಿ ಅನುಭವಿ. ಕಾಡು ಬದನೆಗೆ ಟೊಮ್ಯಾಟೊ ಕಸಿ. ಒಂದೇ ಗಿಡದಲ್ಲಿ ಬದನೆ ಮತ್ತು ಟೊಮೆಟೋ. ಇನ್ನೊಂದರಲ್ಲ್ಲಿ ಟೊಮೆಟೋ ಮತ್ತು ಊರ ಬದನೆ. ತ್ರೀ ಇನ್ ವನ್! 'ಚಿಕ್ಕ ಜಾಗದ ಕೃಷಿಗೆ ಕಸಿ ಸೂಕ್ತ.' ಗುನಗಾ ಸಲಹೆ. 'ಕಲ್ಯಾಣಿ'ಗಿಂತ ಮೊದಲು ಉಲ್ಲಾಸರಿಗೆ ಬಾಡಿಗೆ ಮನೆ ವಾಸ. ಅಲ್ಲಿಯೂ ಕೃಷಿ, ಕಸಿ. ಸ್ವಂತ ಮನೆಗೆ ಬಂದಾಗ ಯಾವ ಗಿಡವನ್ನೂ ತಂದಿಲ್ಲ. ಎಲ್ಲವೂ ಹೊಸದೇ. ಇವರ ಮನೆಕೃಷಿಯಿಂದ ಒಂದಷ್ಟು ಮಂದಿ ಪ್ರೇರಿತರಾಗಿ ತಾವೂ ಗಿಡ ನೆಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ.
'ಪೇಟೆ ಮನೆಯ ಸುತ್ತ ಕ್ಲೀನ್ ಇರಬೇಕು. ಯಾವುದೇ ಗಿಡ ಇರಬಾರದು. ಗಿಡವಿದ್ದರೆ ಹಾವು ಬರುತ್ತದೆ, ಸೊಳ್ಳೆ ಹೆಚ್ಚಾಗುತ್ತದೆ ಎಂಬ ಒಣಭ್ರಮೆ ಕೆಲವರಿಗಿದೆ.' ಗುನಗಾ ವಿಷಾದ. 'ನನ್ನದು ನಿಜವಾದ ಶೂನ್ಯ ಕೃಷಿ! ಯಾಕೆಂದರೆ ಏನೂ ವೆಚ್ಚ ಮಾಡಿಲ್ಲ.' ಎನ್ನುತ್ತಾರೆ. 'ಮನೆಯಲ್ಲಿ ಜಾಗವಿಲ್ಲ, ನಮಗೆ ಪುರುಸೊತ್ತಿಲ್ಲ, ನೀರೆಲ್ಲಿದೆ....' ಎನ್ನುವ ಮಂದಿಗೆ ಗುನಗಾರ ಮನೆಕೃಷಿಯಲ್ಲಿ ಸಂದೇಶವಿದೆ. ಮನೆಯಲ್ಲಿ ಜಾಗ ಸಿಗಬೇಕಾದರೆ ಮನದಲ್ಲಿ ಜಾಗ ಕೊಡಿ!