Tuesday, October 27, 2015

ಹಸುರು ಮನದ ಹಸಿಯಾದ ಹಸಿರುಕಾಡು

               "ಹಸಿರೆಬ್ಬಿಸುವ ಅಭ್ಯಾಸ ಬದುಕಿನ ಭಾಗವಾಗಬೇಕು. ಕಾಡಿಲ್ಲದೆ ಬದುಕಿಲ್ಲ. ಕಾಡು ಕಾಡುತ್ತಾ ಇರಬೇಕು. ಜಲದ ಮುಖ್ಯ ಸಂಪನ್ಮೂಲವೇ ಮರಗಳು," ಪುತ್ತೂರಿಗೆ 'ಬಾಲವನ ಪ್ರಶಸ್ತಿ' ಸ್ವೀಕಾರಕ್ಕಾಗಿ ಆಗಮಿಸಿದ ಹಿರಿಯ ಪರಿಸರ-ವಿಜ್ಞಾನ ಪತ್ರಕರ್ತ ನಾಗೇಶ ಹೆಗಡೆ ಮಾತಿಗೆ ಸಿಕ್ಕರು. ಹಠಕಟ್ಟಿ ಹಸಿರನ್ನು ನಾಶಮಾಡುತ್ತಿರುವ ರಾಜಧಾನಿಯ ಒಂದು ಜೀವಂತ ಹಸಿರಿನ ಕತೆಗೆ ಕಿವಿಯಾದೆ.   
             ಬೆಂಗಳೂರಿನ ಟಿ.ಜಿ.ಹಳ್ಳಿ ಕೆರೆ ಮತ್ತು ಹೇಸರಘಟ್ಟ ಕೆರೆಗಳು ಬೆಂಗಳೂರಿಗೆ ನೀರೊದಗಿಸುವ ಜಲನಿಧಿಗಳಾಗಿದ್ದುವು. ಕೊಳವೆಬಾವಿಗಳ ಕೊರೆತ ಹೆಚ್ಚಾಯಿತು. ಕೆರೆಗಳು ಬಾಯಾರಿದುವು. ನೀರಿನ ಮಟ್ಟ ಕುಸಿದು ಹನಿ ನೀರಿಗೆ ಬಾಯ್ಬಿಟ್ಟವು. ಹೂಳು ತುಂಬಿತು. ಕೆರೆ ಎನ್ನುವ ಸಮೃದ್ಧ ಸಂಪನ್ನತೆಯ ತೇವ ಪೂರ್ತಿ ಆರಿತು. ಈಗ ಬೆಂಗಳೂರು ಶುದ್ಧ ನೀರಿಗಾಗಿ ಒದ್ದಾಡುತ್ತಿದೆ! ಎಲ್ಲೆಲ್ಲಿಂದಲೋ ನೀರು ಬರುತ್ತೆ ಬಿಡಿ.
            ಬೆಂಗಳೂರಿನ ಲಾಲ್ಭಾಗ್, ಕಬ್ಬನ್ ಪಾರ್ಕ್ - ಈ ಎರಡು ಹೆಸರು ಹೇಳುವಾಗಲೇ ಮಾತು ನಿಂತುಬಿಡುತ್ತದೆ. ಓಡಾಡಬಹುದಾದ, ಪರಿಸರವನ್ನು ಕಣ್ತುಂಬಿಕೊಳ್ಳಬಹುದಾದ ಬೇರೆ ಸ್ಥಳಗಳಿಲ್ಲ. ಹೆಸರಿಸುವಂತಹ ಜಾಗವಿಲ್ಲ. ಮಾರ್ಗದ ಇಕ್ಕೆಲಗಳು ಕಾಂಕ್ರಿಟ್ಮಯ. ವಿವಿಧ ಕನಸುಗಳನ್ನು ಹೊತ್ತು ಬೆಂಗಳೂರಿಗೆ ನುಗ್ಗುತ್ತಿರುವ ಹಸಿ ಮನಸ್ಸುಗಳ ಹಸಿರಿನ ಹುಡುಕಾಟ. ಏದುಸಿರಿನ ಉಸಿರಾಟ. ಅಗಣಿತ ಮ್ಹಾಲ್ಗಳು, ಫ್ಲೈಓವರ್ಗಳು. ಕಟ್ಟಡ ಕಾಮಗಾರಿಗಳು. ಮಣ್ಣೆಂಬುದು ಮರೀಚಿಕೆ.
            ರಾಜಧಾನಿಯಲ್ಲಿ ಗಿಡಗಳನ್ನು ನೆಡಬೇಕೆನ್ನುವ ಆಸಕ್ತರಿದ್ದಾರೆ. ಹಸಿರೆಬ್ಬಿಸುವ ತುಡಿತವಿದೆ. ಮನೆಯ ಸುತ್ತ ಗಿಡಗಳನ್ನು ನೆಟ್ಟು ಪೋಷಿಸುವ ಮನಸ್ಸಿದೆ. ನೆಡಲು ಜಾಗವೇ ಇಲ್ಲ. ಎಲ್ಲಿ ನೆಡಬೇಕು? ಈ ಯೋಚನೆ ಬಂದಾಗ ಟಿ.ಜಿ.ಹಳ್ಳಿ ಕೆರೆ ಸುತ್ತಲಿನ ಐನೂರ ಮೂವತ್ತೆಕ್ರೆ ಕಾಡನ್ನು ಮಾನವ ಹಸ್ತಕ್ಷೇಪದಿಂದ ಮುಕ್ತಗೊಳಿಸಿ ವನವನ್ನಾಗಿ ಪರಿವರ್ತಿಸುವ ನಿರ್ಧಾರ. ಸಂಬಂಧಪಟ್ಟ ವರಿಷ್ಠರಿಗೆ, ಸರಕಾರಕ್ಕೆ ಮನವಿ. "ನಮ್ಮಲ್ಲಿ ದುಡ್ಡು ಕೇಳ್ಬೇಡಿ. ಹಣ ಮಾಡುವ ಉದ್ದೇಶ ಇದಲ್ಲ. ಹಸಿರು ಎಬ್ಬಿಸ್ತೀವಿ. ಮರಗಳ ಕಡಿತವಾಗದಂತೆ ನೋಡಿ ಕೊಳ್ತೀವಿ," ಮುಂತಾದ ಕಾರ್ಯಹೂರಣ ಮುಂದಿಟ್ಟರು. ಉದ್ದೇಶಶುದ್ಧಿಯನ್ನರಿತ ಅಧಿಕಾರಿಗಳಿಂದ ಹಸಿರು ನಿಶಾನೆ.
             ಈಗ ಆ ಕಾಡು ಬರೇ ಕಾಡಲ್ಲ. ಅದು 'ಸ್ಫೂರ್ತಿವನ'. ಎಂಟು ವರುಷದಿಂದ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ನಿರ್ವಹಣೆಗೆ ಹಸಿರು ಮನಸ್ಸಿನ ತಂಡವಿದೆ. ದನ, ಕುರಿ ಮೇಯಿಸುವುದು, ಕಾಡು ಕಡಿಯುವ-ಸವರುವ ಕತ್ತಿಗಳ ಹರಿತ ಕಡಿಮೆಯಾಗಿದೆ. ಗಿಡ ನೆಡುವ ಆಸಕ್ತರಿಗೆ ಮುಕ್ತ ಪ್ರವೇಶ. ಒಬ್ಬರು ಗಿಡ ನೆಡಲು ಮುಂದೆ ಬಂದರೆ ನೆಟ್ಟು, ಅರೈಕೆ ಮಾಡಿ ಬೆಳೆಸಿ, ಅದು ತಾನಾಗಿ ನೆಲಕ್ಕೊರಗುವ ವರೆಗೆ ತಂಡದ್ದೇ ಜವಾಬ್ದಾರಿ.
             ಬೆಂಗಳೂರಿನ ಮೂನ್ನೂರಿಪ್ಪತ್ತು ಶಾಲೆಗಳ ಹೆತ್ತವರು ಈ ಆಂದೋಳನಕ್ಕೆ ಸ್ಪಂದಿಸಿದ್ದಾರೆ. ಹುಟ್ಟುಹಬ್ಬ, ಮಕ್ಕಳಿಗೆ ರ್ರ್ಯಾಂಕ್  ಬಂದಾಗ, ಹಿರಿಯ ನೆನಪಿನಲ್ಲಿ, ವಿವಾಹ ವಾರ್ಶಿಕೋಕೋತ್ಸವ, ಸಮಾರಂಭ.. ಹೀಗೆ ಒಂದೊಂದು ನೆನಪಿನಲ್ಲಿ ಗಿಡಗಳನ್ನು ನೆಡಲು ಉತ್ಸುಕರಾಗಿದ್ದಾರೆ. ಹಸಿರೆಬ್ಬಿಸುವ ಮನಸ್ಸಿದೆ, ಜಾಗವಿಲ್ಲ ಎನ್ನುವ ಚಡಪಡಿಕೆಯ ಮಂದಿಗೆ ಖುಷಿಯಾಗಿದೆ.
              ಗಿಡಗಳನ್ನು ನೆಡುವಲ್ಲಿ 'ಸ್ಫೂರ್ತಿವನ'ವು ದಾನಿಗಳ ಶ್ರಮಹಗುರ ಮಾಡುವ ಉಪಾಯವೊಂದನ್ನು ಮುಂದಿಟ್ಟಿದೆ. ಒಂದು ಗಿಡಕ್ಕೆ ಒಂದೂವರೆ ಸಾವಿರದಂತೆ ಪಾವತಿ ಮಾಡಿದರೆ ಅವರ ಹೆಸರಿನಲ್ಲಿ ಗಿಡ ನೆಟ್ಟು ಆರೈಕೆ ಮಾಡುವ ಜವಾಬ್ದಾರಿ. ಬೆಂಗಳೂರು ಸುತ್ತುಮುತ್ತ ಇಲ್ಲಿನ ಪರಿಸರಕ್ಕೆ ಹೊಂದುವ ಮೂವತ್ತರಿಂದ ನಲವತ್ತು ಜಾತಿಯ ಕಾಡು ಗಿಡಗಳಿವೆ. ಇದರಲ್ಲಿ ಯಾವ ಗಿಡವನ್ನು ಅಪೇಕ್ಷಿಸುತ್ತಾರೋ ಅದನ್ನು ನೆಟ್ಟು ಪಾಲಿಸಲಾಗುತ್ತದೆ. ಈ ವ್ಯವಸ್ಥೆ ಸಾಕಷ್ಟು ಪಾಲಕರಿಗೆ ಸ್ವೀಕೃತಿಯಾಗಿದೆ.
              ಸಮಯ ಹೊಂದಿಸಿಕೊಂಡು ವಿವಾಹ ಮಂಟಪಗಳಿಗೆ ಹೋಗಿ ಮುಖ್ಯಸ್ಥರೊಡನೆ ಮಾತುಕತೆ ಮಾಡ್ತೀವಿ. ಉದ್ದೇಶ ಸ್ಪಷ್ಟಪಡಿಸುತ್ತೇವೆ. ಮದುವೆಗಾಗಿ ಲಕ್ಷಗಟ್ಟಲೆ ಖರ್ಚು ಮಾಡುವಾಗ ಸಾವಿರದೈನೂರು ರೂಪಾಯಿ ಖರ್ಚು ಮಾಡಲು ಹಿಂದೇಟು ಹಾಕುವುದಿಲ್ಲ. ಬಡಾವಣೆಗಳಲ್ಲಿರುವ ವಿದ್ಯಾರ್ಥಿಗಳ ಪಾಲಕರೇ ಹಸಿರೆಬ್ಬಿಸುವ ಈ ಕಾಯಕದ ಪ್ರಚಾರಕರು. ಒಬ್ಬರ ನಿರ್ಧಾಾರ ಇನ್ನೊಬ್ಬರಿಗೆ ಸ್ಫೂರ್ತಿ.  ಹಾಗಾಗಿ ಮುನ್ನೂರಿಪ್ಪತ್ತು ಶೈಕ್ಷಣಿಕ ಸಂಸ್ಥೆಗಳಿಗೆ ವಿಚಾರ ತಲುಪಿದೆ.  ಸ್ಪಂದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಾವಾಗಿ ಬರುತ್ತಾ ಇದ್ದಾರೆ. ತಂಡದಲ್ಲಿ ಬೆರಳೆಣಿಕೆಯ ಸದಸ್ಯರಿದ್ದು ವಿವಿಧ ಜವಾಬ್ದಾರಿಗಳಲ್ಲಿರುವವರು. ವೇಗವಾಗಿ ಕೆಲಸ ಆಗುತ್ತಿಲ್ಲ ಎನ್ನುವ ವಿಷಾದವೂ ಇದೆ.
                ಯಾರ್ಯಾರ ಗಿಡೆ ಎಲ್ಲೆಲ್ಲಿ ಎನ್ನುವ ದಾಖಲೆಯಿದೆ. ಗಿಡಗಳಲ್ಲಿ ಲೇಬಲ್ ಅಂಟಿಸಿಲ್ಲ. ಗಿಡದ ದಾತಾರರ ವಿಳಾಸದಿಂದ ಹಿಡಿದು ಗಿಡದ ಪೂರ್ತಿ ಜಾತಕ, ನೆಟ್ಟ ಜಾಗವನ್ನು ಜಿಪಿಎಸ್ ಮೂಲಕ ನೋಡುವ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನೂರನೇ ವರುಷದ ನೆನಪಿಗೆ ನೂರು ಗಿಡಗಳನ್ನ ಪ್ರಾಯೋಜಿಸಿದ್ದಾರೆ. ಸಾಪ್ಟ್ವೇರ್ ಕಂಪೆನಿಗಳ ಬೆಂಬಲವಿದೆ. ವಿವಿಧ ಕಂಪೆನಿಗಳಲ್ಲಿರುವ ಉದ್ಯೋಗಸ್ಥರು ನೆನಪಿಗಾಗಿ ಸ್ಫೂರ್ತಿವನದತ್ತ ಮುಖ ಮಾಡುತ್ತಿದ್ದಾರೆ.
               ಪ್ರಾಮಾಣಿಕ ಸಹಾಯಕರ ಅಲಭ್ಯತೆ - ಈ ಕಾಯಕದಲ್ಲಿ ಎದುರಾಗುವ ತೊಡಕು. ಸ್ಥಳೀಯರು ಸಿಕ್ತಾ ಇಲ್ಲ. ಸಿಕ್ಕರೂ ಮುಂಗಡ ತೆಕ್ಕೊಂಡು ನಾಪತ್ತೆ! ಸಮಸ್ಯೆಗಳ ಮಧ್ಯೆ ಗಿಡಗಳ ಆರೈಕೆ ನಡೆಯುತ್ತಿದೆ. ಗರಿಷ್ಠ ಭದ್ರತೆ ನೀಡುತ್ತಿದ್ದೇವೆ. ಬೆಂಕಿಯ ಭಯದಿಂದ ಕಾಡನ್ನು ರಕ್ಷಿಸುವುದು ತಲೆನೋವು. ಪ್ರತೀ ಊರಲ್ಲೂ ಇಂತಹ ವನಗಳನ್ನು ರೂಪಿಸುವಂತಹ ಅಗತ್ಯವಿದೆ. ಕಾಡಿರುವ ಮಲೆನಾಡು, ಕರಾವಳಿಗಳಲ್ಲೂ ಗಿಡ ನೆಡುವ ಪರಿಪಾಠ ಶುರುವಾಗಬೇಕು.
              ನಾಗೇಶ ಹೆಗಡೆಯವರು ಮಾತು ನಿಲ್ಲಿಸಿದರು. 'ಹೇಗಿದೆ ಕಾಡಿನ ಕತೆ' ಪ್ರಶ್ನಿಸಿದರು. "ಬೆಂಗಳೂರಿಗರು ವೀಕೆಂಡ್ ಬಂದ್ರೆ ಸಾಕು, ನಗರದಿಂದ ಹೊರಗೆ ಹೋಗೋಕೆ ಕಾದಿರ್ತಾರೆ. ಬಹಳಷ್ಟು ಮಂದಿ ಹೊರವಲಯದಲ್ಲಿ ಜಾಗ ಖರೀದಿಸಿ ವೀಕೆಂಡ್ ಅಗ್ರಿಕಲ್ಚರ್ ಶುರು ಮಾಡಿದ್ದಾರೆ. ಕಾಂಕ್ರಿಟ್ ಕಾಡೊಳಗೆ ಹಸಿರಿಗಾಗಿ ತುಡಿಯುವ ಮನಸ್ಸುಗಳಿವೆ. ಉದ್ಯೋಗದ ಒತ್ತಡವು ಹಸಿರ ಪ್ರೀತಿಗೆ ಬ್ರೇಕ್ ಹಾಕುತ್ತಿದೆ. ನಗರ ಮೋಹದಿಂದ ಬಂದವರು ನಾಲ್ಕೈದು ವರುಷದಲ್ಲೇ ಹಳ್ಳಿಯನ್ನು ನೆನಪು ಮಾಡಿಕೊಳ್ಳುವ ಸ್ಥಿತಿಯಿದೆ," ಬೆಂಗಳೂರಿನ ಪ್ರಕೃತ ಸ್ಥಿತಿಯನ್ನು ನಾಗೇಶ್ ಕಟ್ಟಿಕೊಡುತ್ತಾ ಫಕ್ಕನೆ ಕೋಲಾರವನ್ನು ನೆನಪಿಸಿಕೊಂಡರು, "ನೋಡಿ, ಕೋಲಾರದಲ್ಲಿ ಕ್ಯಾರೆಟ್ ಬೆಳೆಯುತ್ತಾರೆ. ಕ್ಯಾರೆಟನ್ನು ತೊಳೆದು ಸ್ವಚ್ಛಗೊಳಿಸಲು ಎಷ್ಟೊಂದು ನೀರು ಪೋಲು ಆಗುತ್ತದೆ ಗೊತ್ತಾ. ಟ್ಯಾಂಕರ್, ಡೀಸಿಲ್ ಪಂಪ್ಗಳು ಕೆರೆಯಿಂದ ಅವಿರತ ಪಂಪ್ ಮಾಡುತ್ತಲೇ ಇವೆ. ಅಲ್ಲಿನ ನೀರಿನ ಸಮಸ್ಯೆಗೆ ಇದೂ ಒಂದು ಅಜ್ಞಾತ ಕಾರಣ. "
                  ಕನ್ನಾಡಿನಲ್ಲಿ ತೊಂಭತ್ತೆಂಟು ತಾಲೂಕುಗಳಲ್ಲಿ ಸರಕಾರವು ಬರ ಘೋಷಿಸಿದೆ. ಬರ ಪ್ರದೇಶವನ್ನು ಸಮಿತಿಯೊಂದು ಗೊತ್ತುಮಾಡುತ್ತದೆ. ಮುನ್ನೂರ ಇಪ್ಪತ್ತು ಕೋಟಿ ಅನುದಾನಕ್ಕೂ ಸಹಿ ಬಿದ್ದಿದೆ. ಇದು ಹೇಗೆ ಖರ್ಚಾಗುತ್ತೆ ಎನ್ನುವ ಅಂಕಿಅಂಶ ಎಲ್ಲೂ ಸಿಗೋದಿಲ್ಲ. ಒಂದೆಡೆ ಹಣ ಖರ್ಚಾಗುತ್ತೆ. ಇನ್ನೊಂದೆಡೆ ಬರದ ಊರಿನ ಬೆಳಗು-ಸಂಜೆಗಳ ಜತೆ ಕೋಟಿಗಳು ನಗುತ್ತಾ ಕರಗುತ್ತವೆ. ಬೇಸಿಗೆಯ ನೀರಿನ ಬರಕ್ಕೆ ಪರಿಹಾರ ನಂನಮ್ಮಲ್ಲೇ ಇದೆ.  
                  ಸೋಲಾರ್ ವಿದ್ಯುತ್ತಿನ ಮೂಲಕ ಸಮುದ್ರದ ನೀರು ಬಳಕೆ ಮಾಡಲು ಸಾಧ್ಯವಾ? ಸಾಧ್ಯ ಎನ್ನುವುದಕ್ಕೆ ಸಿಂಗಾಪುರದ ಉದಾಹರಣೆ ಮುಂದಿದೆ. ಸಿಂಗಾಪುರದಲ್ಲಿ ನೀರು ಎನ್ನುವುದು ಅಮೃತ. ಪೋಲು ಬಿಡಿ, ಹನಿ ನೀರಿಗೂ ಕೋಟಿ ರೂಪಾಯಿ ಮೌಲ್ಯ. ಸಿಂಗಾಪುರಕ್ಕೆ ಚಿಕ್ಕ ಪ್ರಮಾಣದಲ್ಲಿ ನೀರು ಮಲೇಶ್ಯಾ ಒದಗಿಸುತ್ತದೆ. ಮಳೆ ನೀರಿನ ಕೊಯ್ಲು ವ್ಯಾಪಕವಾಗಿದೆ. ಬಳಸು ನೀರನ್ನು ಶುದ್ಧಗೊಳಿಸಿ ಮರುಬಳಕೆ ಮಾಡುವ ತಂತ್ರಜ್ಞಾನವಿದೆ. ನಗರದ ತ್ಯಾಜ್ಯ ನೀರೆಲ್ಲವನ್ನೂ ಸಂಗ್ರಹಿಸಿ, ಶುದ್ಧೀಕರಿಸಿ, ಪುನಃ ಬಳಕೆ ಮಾಡುವ ವಿಧಾನ. ಸಮುದ್ರದ ನೀರನ್ನು ಶುದ್ಧ ಮಾಡಿ ಕುಡಿಯಲು ಉಪಯೋಗಿಸುವ ವ್ಯವಸ್ಥಿತ ಯೋಜನೆಯಿಂದಾಗಿ ಸಿಂಗಾಪುರ ನೀರಿನ ಬಳಕೆಯಲ್ಲಿ ಪ್ರಪಂಚದಲ್ಲೇ ಐಕಾನ್ ಆಗಿದೆ. ನಮ್ಮಲ್ಲಿ ಅಷ್ಟಾಗದಿದ್ದರೂ ಒಂದಷ್ಟು ಪ್ರಮಾಣದಲ್ಲಿ ಮಾಡಲು ಸಾಧ್ಯವಿಲ್ಲವಾ? ರಾಜಕೀಯ ಶಕ್ತಿ ಮಾತ್ರ ಸಾಲದು. ಇಚ್ಚಾಶಕ್ತಿಯೂ ಬೇಕು. ಮನಸ್ಸಿನಿಂದ ಹುಟ್ಟಿದ ಕಾಳಜಿಯೂ ಬೇಕು.
                ಪುತ್ತೂರಿನಲ್ಲಿ 'ಬಾಲವನ ಪ್ರಶಸ್ತಿ' ಸ್ವೀಕರಿಸಿದ ಬಳಿಕ ನಾಗೇಶ ಹೆಗಡೆಯವರು ಶಾಲಾ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದಿರು. ವಿಜ್ಞಾನ, ಪರಿಸರ, ಸಮಸಾಮಯಿಕ ವಿಚಾರಗಳ ಪ್ರಶ್ನೆಗಳಿಗೆ ಮಗುವಾಗಿ ಉತ್ತರಿಸಿದರು. ವಿಜ್ಞಾನವನ್ನು ಸರಳ ಕನ್ನಡದಲ್ಲಿ ಅರ್ಥವಾಗುವ ಹಾಗೆ ಮಾತನಾಡುವ, ಬರೆಯುವ ನಾಗೇಶ್ ಮಕ್ಕಳನ್ನು ಆವರಿಸಿಕೊಂಡರು.

 (ಉದಯವಾಣಿ/ನೆಲದನಾಡಿ ಅಂಕಣ/24-10-2015)


Sunday, October 4, 2015

ನೀರನ್ನು ಸೃಷ್ಟಿಸಲು ಸಾಧ್ಯವೇ?



            ರಾಜಧಾನಿಗೆ ಪ್ರಯಾಣಿಸುತ್ತಿದ್ದಾಗ ಗೌರಿಬಿದನೂರಿನ ರೈತರೊಬ್ಬರ ಪರಿಚಯವಾಯಿತು. ನೀರಿನ ಸಂಕಟಗಳದ್ದೇ ಮಾತುಕತೆ. ರಾಜಕಾರಣದ ಆಟಗಳ ಆಟೋಪ. ಕರ್ನಾಟಕವನ್ನು ಉತ್ತರ, ದಕ್ಷಿಣ ಎಂದು ವಿಭಾಗಿಸುವ, ಭಾವನೆಗಳಿಗೆ ಘಾಸಿ ಮಾಡುವ, ಸಂಘರ್ಷಗಳನ್ನು ಒಂದು ವ್ಯವಸ್ಥೆಯೊಳಗೆ ಜೀವಂತವಾಗಿಡುವ ಕಾಣದ ಕೈಗಳ ಕರಾಮತ್ತುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಅವರಲ್ಲಿ ನೀರಿಗಾಗಿ ಮನಸ್ಸುಗಳನ್ನು ಒಡೆಯುವ ರಾಜಕೀಯ ವ್ಯವಸ್ಥೆಗಳತ್ತ ಆಕ್ರೋಶವಿತ್ತು.
            "ಅತ್ತ ಕಳಸಾ-ಬಂಡೂರಿ, ಇತ್ತ ನೇತ್ರಾವತಿ, ಮೊತ್ತೊಂದೆಡೆ ಕಾವೇರಿ, ಇನ್ನೊಂದೆಡೆ ಮಹದಾಯಿ.. ಹೀಗೆ ಸಮಸ್ಯೆಗಳನ್ನು ವಿವಾದದ ಸುಳಿಯಲ್ಲಿ ಸಿಲುಕಿಸುವುದೇ ರಾಜಕೀಯ ಶಕ್ತಿಗಳ ಗುರಿ ಎನ್ನುವಂತಾಗಿದೆ. ಇವರಿಗೆಲ್ಲಾ ಪರಿಹಾರಕ್ಕೆ ದಾರಿಗಳು ಗೊತ್ತಿವೆ. ಓಟು ಬ್ಯಾಂಕುಗಳು ಈ ದಾರಿಗಳನ್ನು ವಿಮುಖಗೊಳಿಸುತ್ತಿವೆ. ಸಾರ್ವಜನಿಕ ಆಸ್ತಿಗಳು, ಜನರ ಸಂಕಷ್ಟಗಳು ಅವರಿಗೆ ಬೇಕಾಗಿಲ್ಲ. ಜನರನ್ನು ಕೆರಳಿಸುವ ಹೇಳಿಕೆಗಳಿಂದ ಆಗುವ ವಿಘ್ನಗಳಿಂದ ಖುಷಿ ಪಡುವ ಜನನಾಯಕರು ಇರುವಲ್ಲಿಯ ತನಕ ಸಮಸ್ಯೆಗಳು ಶಾಶ್ವತವಾಗಿರುತ್ತವೆ." ಎಂದರು.
             "ಕೆರೆಗಳಿಂದಾಗಿ ಜೀವಜಲವು ಉಸಿರಾಡುತ್ತಿವೆ. ಕರ್ನಾಟಕದಲ್ಲಿ ಎಷ್ಟೊಂದು ಕೆರೆಗಳಿದ್ದುವು. ಇದಕ್ಕಾಗಿ ಭೂಮಿಯನ್ನು ಉಂಬಳಿ ಬಿಡುವ ಸನ್ಮಸ್ಸಿನವರಿದ್ದರು. ಧಾರ್ಮಿಕ, ಸಾಮಾಜಿಕ ಭಾವನೆಗಳು ಆ ಊರಿನ ನೀರಿನ ಆವಶ್ಯಕತೆಗಳನ್ನು ನೀಗಿಸುತ್ತಿದ್ದುವು. ಹಿಂದಿನ ಕಾಲದಿಂದಲೂ ನೀರಿಗೆ ಮೊದಲಾದ್ಯತೆ. ಆ ಬಳಿಕವೇ ಕೃಷಿ, ಅಭಿವೃದ್ಧಿಯತ್ತ ಯೋಚನೆ. ಇಂತಹ ಸಂಸ್ಕೃತಿಯಿರುವ ಕರ್ನಾಟಕವನ್ನು ರಾಜಕೀಯ ವಾತಾವರಣ ಹಾಳುಮಾಡಿತು. ಮೊದಲಾದ್ಯತೆಯಲ್ಲಿರಬೇಕಾದ ನೀರಿನ ಲಭ್ಯತೆಯು ಕೊನೆಯ ಆಯ್ಕೆಯಾಗಿ ಬದಲಾಯಿತು." ಅವರು ಮಾತನಾಡುತ್ತಿದ್ದಾಗ ಇಡೀ ಕನ್ನಾಡಿನ ನೀರಿನ ಕಣ್ಣೀರಿಗೆ ದನಿಯಾದಂತೆ ಕಂಡಿತು.
           ಸರಕಾರಕ್ಕೆ ಗ್ರಾಮ ಭಾರತದ ಹಿತ ಬೇಕಾಗಿಲ್ಲ. ಕೋಟಿಗಳ ಮುಂದೆ ಎಷ್ಟು ಸೊನ್ನೆಯನ್ನಿಡಬೇಕೆಂಬ ಲೆಕ್ಕಚಾರ. ಎಷ್ಟು ಸೊನ್ನೆಗಳನ್ನಿಡಬೇಕೆಂದು ನಿರ್ಧರಿಸುವ ಅಧಿಕಾರಿಗಳಿದ್ದಾರೆ. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಗಳಾದಾಗ ಅಷ್ಟಿಷ್ಟು ನೀಡಿ ಕೈತೊಳೆದುಕೊಂಡರು. ಕೇಂದ್ರದಿಂದಲೂ ಅಧ್ಯಯನ ತಂಡ ಬಂತು. ಅವೆಲ್ಲಾ ಕಾಗದದಲ್ಲಿ ಉಳಿದು ಬಿಡುತ್ತವಷ್ಟೆ. ನಮ್ಮ ಬದುಕಿಗೆ ಬೇಕಾದ ವ್ಯವಸ್ಥೆಯನ್ನು ನಾವೇ ಪೂರೈಸಿಕೊಳ್ಳಬೇಕು. ನೀರಿನ ವಿಚಾರಕ್ಕೆ ಬಂದರೆ ಅಳಿದುಳಿದ ಕೆರೆಗಳಲ್ಲಿ ನೀರು ಬತ್ತಿವೆ. ಅಂತರ್ಜಲ ಆಳಕ್ಕಿಳಿದಿದೆ. ಕೊಳವೆಬಾವಿಗಳನ್ನು ಕೊರೆಯಲು ಪೈಪೋಟಿ. ನದಿಗಳಲ್ಲಿ ನೀರಿಲ್ಲ. ಇಷ್ಟೆಲ್ಲ ತೊಂದರೆಗಳಿಗೆ ಯಾರು ಕಾರಣ?
         ರೈತರ ಕುರಿತು ಹಗುರವಾಗಿ ಮಾತನಾಡುವ ನಮ್ಮ ನಡುವಿನ ಸಾಕ್ಷರರ ಚಿತ್ರ ಹಾದುಹೋದುವು. ಯಾವುದೇ ಪದವಿಯನ್ನು ಓದದ ಅವರು ಕೃಷಿ, ನೀರಿನ ಜ್ಞಾನದಲ್ಲಿ ಅಪ್ಡೇಟ್ ಆಗಿದ್ದರು. ರಾಜಧಾನಿಯಲ್ಲಿ ಬಸ್ಸಿಳಿದು (ಮೆಜೆಸ್ಟಿಕ್) ಒಂದರ್ಧ ಗಂಟೆ ಮಾತನಾಡುವಾಗ ಹೇಳಿದ ಒಂದೆರಡು ವಾಕ್ಯ ಮರೆಯಲಾರೆ - ರೈತನ ಬೆನ್ನು ತಟ್ಟುವವರು ಯಾರೂ ಇಲ್ಲ. ಅನ್ನದಾತ ಎಂದು ಅಟ್ಟಕ್ಕೇರಿಸುವ ಕೆಟ್ಟ ಚಾಳಿ.  ನಿಜಕ್ಕೂ ರೈತ ಸಮೂಹಕ್ಕೆ ಅವಮಾನ ಮಾಡಿದಂತೆ. ನೋಡಿ, ನಾವು ನಿಂತ ಜಾಗ ಇದೆಯಲ್ಲಾ, ಮೊದಲು ಇದೊಂದು ದೊಡ್ಡ ಕೆರೆಯಾಗಿತ್ತು. ಈಗ ಹೇಗಿದೆ? ಇದೊಂದು ಉದಾಹರಣೆ ಮಾತ್ರ. ರಾಜ್ಯದ ಎಲ್ಲಾ ಕೆರೆಗಳ ಸ್ಥಿತಿಯೂ ಇದೇ. ಕೆರೆಗಳ ಪುನರ್ಜ್ಜೀವನ ಮತ್ತು ನೀರಿಂಗಿಸುವ ಕೆಲಸ ನಡೆಯಬೇಕಾಗಿದೆ. ಜತೆಗೆ ಅರಣ್ಯೀಕರಣವೂ ಕೂಡಾ.
         ಕೆರೆಗಳು - ನೀರೊದಗಿಸುವ ಜಲನಿಧಿಗಳು. ಒಂದು ಕೆರೆ ತುಂಬಿದಾಗ ಸುತ್ತಲಿನ ಬಾವಿ, ಚಿಕ್ಕ ಕೆರೆಗಳು, ಅಂತರ್ಜಲ, ಒರತೆ ತುಂಬಿ ನೀರಿನ ಸಮೃದ್ಧತೆ. ಆ ನೀರಿನ ಸುತ್ತ ಸಾಂಸ್ಕೃತಿಕವಾದ ಭಾವನೆಗಳು. ದೈವಿಕ ದೃಷ್ಟಿಕೋನ. ಒಂದಷ್ಟು ಆಚಾರಗಳು, ವಿಚಾರಗಳು. ಇಂತಹ ಕಟ್ಟುಪಾಡುಗಳನ್ನು ಹಿರಿಯರು ನೀರುಳಿಸುವ ಲಕ್ಷ್ಯದಲ್ಲಿಟ್ಟೇ ರೂಪಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ಅಂತಹ ವ್ಯವಸ್ಥೆಯನ್ನು ಪ್ರಶ್ನಿಸಿದೆವು. ವಿಮರ್ಶಿಸಿದೆವು. ಮೂಢನಂಬಿಕೆ ಎಂದೆವು. ಶೋಷಣೆ ಎನ್ನುವ ಹಣೆಪಟ್ಟಿ ಹಾಕಿದೆವು. ಪರಿಣಾಮ ಕಣ್ಣ ಮುಂದಿದೆ.
         ನಮ್ಮ ಹಿರಿಯರನ್ನು ಮಾತನಾಡಿಸೋಣ. ಅವರಿಗೆ ಭೂಮಿಯು ತಾಯಿ ಸದೃಶ. ನದಿಗಳೆಲ್ಲಾ ಅಕ್ಕ ತಂಗಿಯರು. ಅವರನ್ನು ಆರಾಧಿಸಿದರು. ತಂತಮ್ಮ ಮಿತಿಯ ಜ್ಞಾನದಿಂದ ನೀರಿನ ಹರಿವನ್ನು ತಡೆದು ಭೂಮಿಗೆ ಇಂಗಿಸುವ ಯತ್ನ ಮಾಡಿದರು. ಕೆರೆ, ಮದಕ, ಪಳ್ಳ, ಹಳ್ಳ, ಬಾವಿಗಳಲ್ಲಿರುವ ನೀರಿನ ಲಭ್ಯತೆಯಂತೆ ಕೃಷಿ ಮಾಡಿದರು. ಅರಣ್ಯವನ್ನು ಬೆಳೆಸಿದರು. ಮಳೆಗಾಲದಲ್ಲಿ ಒಸರಾಗಿ ಹರಿಯುವ ನೀರನ್ನು ಬಳಸಿಕೊಂಡರು. ಎಲ್ಲೆಲ್ಲಾ ಸಂಗ್ರಹಿಸಿಕೊಳ್ಳಲು ಸಾಧ್ಯವಿದೆಯೋ ಅಲ್ಲೆಲ್ಲಾ ನೀರನ್ನು ಸಂಗ್ರಹಿಸಿ ಬಳಸಿದರು, ಭೂ ಒಡಲಿಗೆ ಉಣಿಸಿದರು.
         ಕೃಷಿಕ ಡಾ.ಡಿ.ಸಿ.ಚೌಟರು 'ಮದಕ' ಎನ್ನುವ ಪುಸ್ತಕದಲ್ಲಿ ಮಾರ್ಮಿಕವಾಗಿ ಹೇಳುತ್ತಾರೆ, "ನಮ್ಮ ಜಲಮೂಲಗಳು ಬತ್ತುತ್ತಿವೆ. ಕಾಡು ಕಡಿದು ಮೂಲನಿವಾಸಿಗಳನ್ನು ಓಡಿಸಿ ಸಹಸ್ರಾರು ಕೋಟಿ ರೂಪಾಯಿಯ ಸಂಪತ್ತನ್ನು ವ್ಯಯಿಸಿ ಅಣೆಕಟ್ಟೆಗಳನ್ನು ಕಟ್ಟಿ ನೀರು ಹಂಚುವ ಕಾರ್ಯಕ್ಕೆ ತೊಡಗಿದ್ದೇವೆ. ಭೂಮಿಯ ಗರ್ಭದಿಂದ ಸಾವಿರ ಅಡಿಯ ಕೊಳವೆಬಾವಿಗಳನ್ನು ಹಾಕಿ ನೀರು ಹೀರಹತ್ತಿದೆವು. ಈಗ ಸಮುದ್ರದ ನೀರಿನ ಉಪ್ಪನ್ನು ಶುದ್ಧಗೊಳಿಸಿಸುವ ಸಾಹಸಕ್ಕೆ ಹೊರಟಿದ್ದೇವೆ. ಈ ಎಲ್ಲಾ ಸಾಹಸಗಳು ಪಟ್ಟಣದ ಅವಶ್ಯಕತೆಗಳನ್ನು ಪೂರೈಸಲು. ಕೃಷಿಗಾಗಿ ಅಲ್ಲ. ಇವು ಸೃಷ್ಟಿಯ ನಿಯಮಗಳನ್ನು ಬದಲಿಸಿ ನಿಸರ್ಗದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸುವ ಮನುಷ್ಯನ ಹುನ್ನಾರ."
         "ಮಳೆನೀರು ಕೆರೆ, ಬಾವಿ, ನದಿಗಳೆಲ್ಲ ಸೇರಿ ಹರಿದು ಸಮುದ್ರ ಸೇರುತ್ತದೆ. ಸಮುದ್ರದ ನೀರು ಆವಿಯಾಗಿ ಆಕಾಶ ಸೇರುತ್ತದೆ. ಆವಿ ಮೋಡವಾಗಿ, ಮೋಡ ಮಳೆಯಾಗಿ ಭೂಮಿ ಸೇರುತ್ತದೆ. ಬಾಯಾರಿದ ಭೂಮಿ ತೃಪ್ತಿಯಿಂದ ನೀರು ಕುಡಿದು ಒಸರಾಗಿ ಹೊರ ಬಿಡುತ್ತದೆ. ಆ ಒಸರು ಮತ್ತೆ ಸಮುದ್ರ ಸೇರುವ ತವಕದಲ್ಲಿರುತ್ತದೆ. ಈ ಸಹಜ ಕ್ರಿಯೆಯನ್ನೇ ಬದಲಿಸ ಹೊರಟ ಮನುಷ್ಯನ ಅಹಂಕಾರಕ್ಕೆ ನೀರನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಇಪ್ಪತ್ತನೇ ಶತಮಾನವು ಅಣೆಕಟ್ಟೆಗಳನ್ನು, ಕಾಲುವೆಗಳನ್ನು, ಕೊಳವೆಬಾವಿಗಳನ್ನು ತಂದು ಪ್ರಕೃತಿ ಸಹಜ ಸಂಪತ್ತಿನೊಂದಿಗೆ ಆಟವಾಡಿತು. ನಮ್ಮ ಸಹಜ ಪ್ರಕೃತಿಯ ನೀರಿನ ಮೇಲೆ ಹಲವು ಅತ್ಯಾಚಾರಗಳನ್ನು ಇಂಜಿನಿಯರುಗಳು ಮಾಡಿದರು. ಅರಣ್ಯಗಳನ್ನು ನಾಶ ಮಾಡಿದರು. ನದಿಗಳು ಬತ್ತಿದುವು. ನೀರಿನ ಬದಲಿಗೆ ವಿದ್ಯುಚ್ಛಕ್ತಿ ಕೊಟ್ಟರು. ಸದಾ ಹರಿಯುತ್ತಿದ್ದ ನದಿಗಳು ಬೇಸಿಗೆಯಲ್ಲಿ ಬತ್ತಿ ಮಳೆಗಾಲದಲ್ಲಿ ಮಾತ್ರ ಹರಿಯುವಂತೆ ಮಾಡಿದರು.."
         ಪ್ರಕೃತ ಕನ್ನಾಡು ಅನುಭವಿಸುವ ಸಂಕಟಗಳ ಹಿಂದೆ ಅಭಿವೃದ್ಧಿ ಮತ್ತು ಅನಿವಾರ್ಯ ಎಂಬೆರಡು ಶಬ್ದಗಳು ಹೊಸೆದುವು. ಹಾಗಾಗಿ ಕೆರೆಗಳ ನಾಡಲ್ಲಿ ಕೆರೆಗಳನ್ನು ಹುಡುಕುವ ದುಃಸ್ಥಿತಿ. ಹೂಳು ತುಂಬಿ ಕೆರೆಗಳೇ ನಾಪತ್ತೆಯಾಗಿವೆ. ಎಷ್ಟೋ ಕೆರೆಗಳು ಅಭಿವೃದ್ಧಿಯಾಗಿರುವುದು ಕಡತದಲ್ಲಿ ಮಾತ್ರ. ಕೋಟಿ ಕೋಟಿಗಳ ಲೆಕ್ಕಣಿಕೆಯಲ್ಲಿರುವ ನಮ್ಮ ಆಡಳಿತ ವ್ಯವಸ್ಥೆಯು ದೂರಗಾಮಿ ಯೋಜನೆಗಳನ್ನು ಹಾಕಿಕೊಳ್ಳದಿರುವುದರಿಂದ ಸಂಕಟಗಳ ಸರಮಾಲೆಗಳು ಅನುಭವಕ್ಕೆ ಬರುತ್ತವೆ. ರಿಸಾರ್ಟ್, ಓಟು ಬ್ಯಾಂಕ್, ಕೆಸರೆರೆಚಾಟ, ಹಗುರ ಮಾತುಗಳೇ ರಾಜಕಾರಣದ ಅರ್ಹತೆಯಾಗಿರುವ ಪ್ರಕೃತ ದಿನಮಾನದಲ್ಲಿ ಗಟ್ಟಿಯಾಗಿ ನೀರಿನ ದನಿ ಎಬ್ಬಿಸುವ ಕಂಠವು ತ್ರಾಣ ಕಳೆದುಕೊಂಡಿದೆ.
         ಆರಂಭದಲ್ಲಿ ಮಾತಿಗೆ ಸಿಕ್ಕ ರೈತರ ಮಾತನ್ನು ಉಲ್ಲೇಖಿಸುತ್ತೇನೆ, ನಂನಮ್ಮ ನೀರಿನ ಸಮಸ್ಯೆಗೆ ನಮ್ಮಲ್ಲೇ ಪರಿಹಾರವಿದೆ. ನಮ್ಮೂರಲ್ಲಿ ಬಹಳ ಮಿತವಾಗಿ ಮಳೆ ಬರುತ್ತದೆ. ಮಳೆ ಬಂದಾಗ ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸರಕಾರ ಸ್ಪಂದಿಸಬೇಕು. ಚಿಕ್ಕಪುಟ್ಟ ಕೆರೆಗಳ ದುರಸ್ತಿಗಳನ್ನು ಆಯಾಯ ವ್ಯಾಪ್ತಿಯ ರೈತರೇ ಪಕ್ಷ, ಜಾತಿಗಳನ್ನು ಮರೆತು ಮಾಡಬೇಕು. ಬಿಗುಮಾನ ತೊರೆದು ಅಧಿಕಾರಿಗಳು ರೈತರನ್ನು ಒಲಿಸಿಕೊಂಡರೆ ಈ ಕೆಲಸ ದೊಡ್ಡದೇನಲ್ಲ. ನೀರಿನ ಮೂಲಗಳ ಸಂರಕ್ಷಣೆಯಾಗಬೇಕು.
         ನೀರಿನ ಹೋರಾಟದ ಕಾವು ಕನ್ನಾಡು ಹಬ್ಬುತ್ತಿದೆ. ಮಳೆಯೂ ಕೈಕೊಡುತ್ತಿದೆ. ಮತಿಯೂ ತಪ್ಪುತ್ತಿದೆ. ಗೌರವಾನ್ವಿತ ಹುದ್ದೆಯಲ್ಲಿರುವವರು ಗೌರವ ಬದಿಗಿರಿಸಿ ಹಗುರವಾಗಿ ಸುದ್ದಿಗಳನ್ನು ಹರಿಯಬಿಡುತ್ತಾರೆ. ರಾಜಕೀಯ ರಕ್ಷಣೆಗಾಗಿ ಸಾಮಾಜಿಕ ಜವಾಬ್ದಾರಿ ಮತ್ತು ವ್ಯವಸ್ಥೆಯನ್ನು ಬಲಿಕೊಡಲು ಹೇಸದ, ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಜನಪರವಾಗಿ ನಿಲ್ಲದಿದ್ದರೆ - ನಮ್ಮ ಇಂಧನ ಸಚಿವರು ಹೇಳಿದಂತೆ 'ದೇವರೇ ಗತಿ'!
        'ಜಲ ಭಾಗ್ಯ' - ಮಾನ್ಯ ಮುಖ್ಯಮಂತ್ರಿಗಳೇ, ಹೊಸ ಭಾಗ್ಯ ಯೋಜನೆಯನ್ನು ಘೋಷಿಸುವಿರಾ? ಇದು ಕನ್ನಾಡಿನ ಜನರ ಆದ್ಯತೆಯ ಕೂಗು. ಹಲವು ಭಾಗ್ಯಗಳನ್ನು ರೂಪಿಸಿದ ತಮಗಿದು ಕಷ್ಟವಾಗಲಾರದು. ಈ ಯೋಜನೆ ನಿಜಾರ್ಥದಲ್ಲಿ ಜನಹಿತವಾಗಿರಲಿ. ಜೀವ ಹಿತವಾಗಿರಲಿ.   
 

ಜಲಸಾಕ್ಷರತೆ ಹೆಚ್ಚಿಸಲು ಜಿಲ್ಲೆಗೊಂದು 'ರೈನ್ ಸೆಂಟರ್' ಬೇಕು





               "ನೀರಿನ ಪ್ರಸ್ತುತ ಸ್ಥಿತಿಗತಿಯ ಅರಿವು ಮೂಡಿಸಿ ಮುಂದಿನ ದಿನಗಳಲ್ಲಿ ಬರಲಿರುವ ಕಠಿಣ ಪರಿಸ್ಥಿತಿ ಎದುರಿಸಲು ರಾಜ್ಯ ಸಜ್ಜಾಗಬೇಕಿದೆ.  ಜಲಸಾಕ್ಷರತೆಯ ಮೂಲಕ ಸಂರಕ್ಷಣೆಯ ಮಾರ್ಗದರ್ಶನಕ್ಕೆ, ನೀರಿನ ಮಿತಬಳಕೆಗೆ  ಜಾಗೃತಿ ಮೂಡಿಸಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ 'ರೈನ್ ಸೆಂಟರ್'ಗಳನ್ನು ತುರ್ತಾಗಿ ಆರಂಭಿಸಬೇಕು" ಎಂದು ರಾಜ್ಯದ ಜಲತಜ್ಞರು, ಪತ್ರಕರ್ತರು ಸರಕಾರವನ್ನು ಆಗ್ರಹಿಸಿದ್ದಾರೆ. ಶಿರಸಿಯ ಕಳವೆಯ ಕಾನ್ಮನೆಯಲ್ಲಿ ನಡೆದ ’ಜಲವರ್ತಮಾನ ಹಾಗೂ ನಾಳಿನ ಭವಿಷ್” ಕುರಿತ ಸಮಾಲೋಚನೆಯಲ್ಲಿ ಜಲಸಂರಕ್ಷಕರು, ಪತ್ರಕರ್ತರು ಜಲಕ್ಷಾಮದ ಸ್ಥಿಗತಿಗಳನ್ನು ಕೂಲಂಕುಶವಾಗಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ.
            1983ರ ಬರಗಾಲದಿಂದ ಈವರೆಗೂ ರಾಜ್ಯದ ಒಂದಿಲ್ಲೊಂದು ಕಡೆ ಜಲಕ್ಷಾಮವಿದೆ. ಇಂದು ರಾಜ್ಯವ್ಯಾಪಿಯಾಗಿ ಭೀಕರ ಬರ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಬರಕ್ಕೆ ಅಂಜದ ಶ್ರೀಸಾಮಾನ್ಯರು ಪ್ರತಿ ಜಿಲ್ಲೆಯಲ್ಲಿದ್ದಾರೆ. ನೀರಿನ ವಿಚಾರಗಳನ್ನು ಮಣ್ಣಿನಲ್ಲಿ ಕಾರ್ಯನಿರ್ವಹಿಸಿ ನೀರ ನೆಮ್ಮದಿ ಕಂಡವರಲ್ಲಿ ಚರ್ಚಿಸಬೇಕು, ಪಾಠ ಕಲಿಯಬೇಕು. ರಾಜ್ಯದ ಬರದ ತುರ್ತು ಸಂದರ್ಭದಲ್ಲಿ ಆಪತ್ಕಾಲಕ್ಕೆ ಆಗಬೇಕಾದ ಬುದ್ಧಿವಂತಿಕೆಯನ್ನು ಬದುಕಿನಲ್ಲಿ ಅಳವಡಿಸಬೇಕಾಗಿದೆ. ಇದಕ್ಕೆ ಪೂರಕವಾಗಿ ಮಾಧ್ಯಮ ಹಾಗೂ ಕೃಷಿಕರಿಗೆ ಜಲಸಂರಕ್ಷಣೆಯ ಮಣ್ಣಿನ ಮಾದರಿ ದರ್ಶನಕ್ಕೆ ನೆರವಾಗುವಂತೆ ಬರ ಗೆದ್ದವರ, ನೀರುಳಿಸಿ ನೆಮ್ಮದಿ ಕಂಡವರ ವಿವರಗಳಿರುವ  'ಜಲಯೋಧರ  ಡೈರಕ್ಟರಿ' ಪ್ರಕಟಿಸಲು ಸಮಾಲೋಚನಾ ಸಭೆ ನಿರ್ಧರಿಸಿದೆ.                
              ರಾಜ್ಯದ ವಿವಿಧ ಪ್ರದೇಶಗಳಿಂದ ಜಲಸಂರಕ್ಷಕರು, ಕೃಷಿ ಸಾಧಕರು, ಜಲಪತ್ರಕರ್ತರು ಭಾಗವಹಿಸಿ ಜಲಪರಂಪರೆ ಮತ್ತು ಪ್ರಸ್ತುತ ಸ್ಥಿತಿಗತಿ ಕುರಿತು ಮಾತುಕತೆ ನಡೆಸಿದರು. 20 ಗೋಷ್ಠಿಗಳಲ್ಲಿ ಸತತ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಿತು. ಕಳವೆಯ ಗ್ರಾಮ ಅರಣ್ಯ ಸಮಿತಿ, ಕರ್ನಾಟಕ ಅರಣ್ಯ ಇಲಾಖೆ ನೇತ್ರತ್ವದಲ್ಲಿ ನಡೆದ ಕಣಿವೆಕೆರೆ, ಕಟ್ ಅಗಳ, ಅರಣ್ಯಾಭಿವೃದ್ಧಿ ಸೇರಿದಂತೆ ವಿವಿಧ ಜಲಸಂರಕ್ಷಣಾ ರಚನಾತ್ಮಕ ಮಾದರಿಗಳನ್ನು ಜಲತಜ್ಞರು ವೀಕ್ಷಿಸಿದರು.
         ಸಮಾರೋಪ ಸಮಾರಂಭ - ಅಕ್ಟೋಬರ್ 4 ರವಿವಾರ ಸಾಯಂಕಾಲ ನಡೆಯಿತು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ ಭಾಗವಹಿಸಿದ್ದರು. "ಪರಿವರ್ತನೆಯೆಂಬುದು ಎಲ್ಲರೂ ಸೇರಿ ಜಾಗೃತರಾಗಿ ಹೋರಾಟದಿಂದ ನಡೆಯುವ ಕೆಲಸವಷ್ಟೇ ಅಲ್ಲ. ಶೇಕಡಾ ಐದರಷ್ಟು ಜನ ಸೇರಿ ರಚನಾತ್ಮಕ ಕಾರ್ಯ ಶುರುಮಾಡಿದರೂ ದೊಡ್ಡ ಸಾಧನೆ ಸಾಧ್ಯವಿದೆ. ಬರದ ಸಂದರ್ಭದಲ್ಲಿ  ಜಲ ಜಾಗೃತಿಯ ವಿಚಾರದಲ್ಲಿ  ರಾಜ್ಯದ ಜಲಸಂರಕ್ಷಣೆಯ ಪರಿಣಿತರು ಒಂದಾಗಿ ಕಳವೆಯ ಕಾನ್ಮನೆಯಲ್ಲಿ ಸಮಾಲೋಚನೆ ನಡೆಸುತ್ತಿರುವದು ಅತ್ಯಂತ ಮಹತ್ವದ ಸಂಗತಿಯಾಗಿದೆ" ಎಂದರು.
           ನೀರಿನ ಸಮಸ್ಯೆಗೆ ಬೃಹತ್ ಯೋಜನೆಗಳು ಮಾತ್ರ ಪರಿಹಾರವಲ್ಲ. ಬಿದ್ದ ಹನಿಯನ್ನು ಬಿದ್ದಲ್ಲಿ ಇಂಗಿಸುವ, ಹಿಡಿದಿಡುವ ಕೆಲಸ ಮುಖ್ಯವಿದೆ. ಚೆನೈ ನಗರದ ಮಳೆಕೊಯ್ಲು ಮಾದರಿಯಿಂದ ಪ್ರೇರಣೆ ಪಡೆದು ಬೆಂಗಳೂರು ನಗರದಲ್ಲಿ ನೀರಿಂಗಿಸುವದನ್ನು ಕಡ್ಡಾಯಗೊಳಿಸುವ ಪ್ರಯತ್ನ  ನಡೆದಿತ್ತು. ಕಾನೂನು ಬಿಗಿಗೊಳಿಸಿ ಪರಿಣಾಮಕಾರಿಯಾಗಿ ಜಲಸಂರಕ್ಷಣಾ ಮಾದರಿ ಅಳವಡಿಸಲು ಸರಕಾರ, ಸಾರ್ವಜನಿಕರು ಪ್ರಯತ್ನಿಸಬೇಕು. ಆಗ ಜಲಕ್ಷಾಮ ಎದುರಿಸಬಹುದು ಎಂದು ಮಸ್ಕಿ ನುಡಿದರು.
       "ನೀರಿಂಗಿಸುವ ಸಕಾಲಿಕ ಮಾರ್ಗದರ್ಶನ ನೀಡುವ ಕಾರ್ಯಕರ್ತರೇ ಕರ್ನಾಟಕ ದೊಡ್ಡ ಆಸ್ತಿ. ಇದರಿಂದಲೇ ಹಲವು ಹಳ್ಳಿಗಳು ಜಲಕ್ಷಾಮ ಎದುರಿಸಲು ಸಾಧ್ಯವಾಗಿದೆ.  ಎರಡು ದಶಕಗಳಿಂದ ಕೆಲಸ ನಡೆಯುತ್ತಿದೆ. ಕಣ್ಣು, ಕಿವಿ, ಹೃದಯವಿದ್ದ ಎಲ್ಲರಿಗೂ ಇಂದು ಜಲಸಂರಕ್ಷಣೆಯ ಮಹತ್ವ ತಿಳಿದಿದೆ, ಮಾಧ್ಯಮಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿವೆ. ಇಷ್ಟಾಗಿಯೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದಿರುವದು ವಿಷಾದದ ಸಂಗತಿಯಾಗಿದೆ" ಎಂದು ಹಿರಿಯ ಪತ್ರಕರ್ತ ಶ್ರೀ'ಪಡ್ರೆ ಹೇಳಿದರು.
         "ಕರ್ನಾಟಕದಲ್ಲಿ ಈಗ ಪ್ರಪ್ರಥಮವಾಗಿ ನೆಲಮೂಲದಲ್ಲಿ ಕಾರ್ಯನಿರ್ವಹಿಸಿದವರು ಒಂದೆಡೆ ಸೇರಿದ್ದೇವೆ. ಶ್ರೀಸಾಮನ್ಯರು ಅಳವಡಿಸಬಹುದಾದ ಸುಲಭ ಸಾಧ್ಯ ವಿಧಾನಗಳನ್ನು  ಮಾಡಿತೋರಿಸಿದವರ ಅನುಭವ ಹಂಚಿಕೆ ನಡೆದಿದೆ. ನೀರಿನ ಸಮಸ್ಯೆ ರಾಜ್ಯ ರಾಜ್ಯಗಳನ್ನು  ಒಡೆಯುತ್ತಿದೆ, ನೀರಿಂಗಿಸುವ ರಚನಾತ್ಮಕ ಕೆಲಸ ಹೃದಯಗಳನ್ನು ಒಟ್ಟಿಗೆ ಸೇರಿಸುತ್ತಿದೆಯೆಂಬುದಕ್ಕೆ  ಬರದ ಸೀಮೆಯ ಜನಗಳೂ ಇಲ್ಲಿ ಸೇರಿರುವದು ಸಾಕ್ಷಿಯಾಗಿದೆ" ಎಂದರು.
            ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಡಾ.ಪ್ರಕಾಶ್ ಭಟ್ ವಹಿಸಿದ್ದರು. "ಇಂದು ಒಬ್ಬ ಸಾಮಾನ್ಯ ಕಾರಿನ ಚಾಲಕನೂ ಮಹದಾಯಿ ನದಿ 'ಪಾಲ್ತೂ(ವ್ಯರ್ಥ)' ಆಗಿ ಸಮುದ್ರ ಸೇರುತ್ತಿದೆಯೆಂದು ಮಾತಾಡುತ್ತಿದ್ದಾನೆ. ಜಲಮೂಲ, ಅರಣ್ಯ ಸಂಬಂಧ, ಜೀವರಾಶಿಗಳ ತಿಳುವಳಿಕೆಯಿಲ್ಲದೇ ಮಾತಾಡುವ 'ಟಿಎಮ್ಸಿ ಮನಸ್ಥಿತಿ'ಯ ಹೋರಾಟದ ಪರಿಣಾಮವಿದು. ನೀರಿನ ಬಳಕೆ ಜ್ಞಾನ ವಿಸ್ತರಿಸುತ್ತಿರುವ ವರ್ತಮಾನದಲ್ಲಿ ನಮ್ಮ ಜ್ಞಾನ ನದಿ ಸಮುದ್ರ ಸೇರುವುದೇ ವ್ಯರ್ಥ ಎನ್ನುವದಕ್ಕೆ ಮಿತಿಗೊಂಡಿದ್ದು ಆತಂಕದ ಸಂಗತಿ" ಎಂದರು. ಇದನ್ನು ಬದಲಿಸಲು ಮಳೆನೀರಿನತ್ತ ಎಲ್ಲರ ಗಮನ ಸೆಳೆಯೋಣ ಎಂದರು.
         ಕೋಲಾರದ ದೊಡ್ಡ ಕಲ್ಲಹಳ್ಳಿಯ ಏಳು ವರ್ಷದ ಬಾಲಕಿ ಟ್ಯಾಂಕರ್ ನೀರಿಗೆ ನಿಂತಿದ್ದು ಕಂಡಾಗ ಕಾನ್ಮನೆಯ ಜಲವರ್ತಮಾನ ಕಾರ್ಯಕ್ರಮಕ್ಕೆ ಮುಖ್ಯ ಪ್ರೇರಣೆಯಾಯಿತು. ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಕಳೆದ 14 ವರ್ಷಗಳಿಂದ ಸತತವಾಗಿ ನಡೆಸುತ್ತಿರುವ ಕಾರ್ಯಕ್ರಮಗಳಿಂದ ನಮ್ಮ ಸಂಪರ್ಕಜಾಲ ರಾಜ್ಯದಲ್ಲಿ  ಬೆಳೆದಿದೆ. ನಾವು ಆಹ್ವಾನಿಸಿದ ಜಲತಜ್ಞರು, ಪತ್ರಕರ್ತರ ಭಾಗವಹಿಸುವಿಕೆಯಿಂದ ಮಾತುಕತೆ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಖೇನ ಜಲಜಾಗೃತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸೋಣವೆಂದು ಕಾರ್ಯಕ್ರಮ ಸಂಘಟಕ ಶಿವಾನಂದ ಕಳವೆ ಹೇಳಿದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹೊಸಪಾಳ್ಯ ಸ್ವಾಗತಿಸಿದರು, ಪೂರ್ಣಪ್ರಜ್ಞ ಬೇಳೂರು ವಂದಿಸಿದರು.