Friday, July 20, 2012

'ಮನೆಗೊಂದು ಚೀಲ - ಪ್ಲಾಸ್ಟಿಕ್ಕಿನಿಂದ ದೂರ'


"ಪ್ಲಾಸ್ಟಿಕ್ ಬ್ಯಾಗಿನಲ್ಲಿ ತರಕಾರಿ ಕೊಡೋದಿಲ್ಲ. ಮಣ್ಣಿನಲ್ಲಿ ಕರಗಬಹುದಾದ, ಆರೊಗ್ಯಕ್ಕೆ ಹಾನಿಯಾಗದ (ಬಯೋಡಿಗ್ರೇಡಬಲ್) ಬ್ಯಾಗ್ ಕೊಡ್ತೀನಿ. ಮೂರು ರೂಪಾಯಿ ಚಾರ್ಜ್. ಮುಂದಿನ ಸಾರಿ ಬರುವಾಗ ಕೈಚೀಲ ತಂದರೆ ಮಾತ್ರ ನನ್ನ ಅಂಗಡಿಯಲ್ಲಿ ತರಕಾರಿ ಸಿಗುತ್ತೆ, ಎನ್ನುತ್ತಾ ಪ್ಲಾಸ್ಟಿಕ್ ದುಷ್ಪರಿಣಾಮದ ವಿವರಗಳುಳ್ಳ ಕರಪತ್ರ ನೀಡುತ್ತಾರೆ, ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ಮತ್ತು ತರಕಾರಿ ವ್ಯಾಪಾರಿ ನಾಗೇಶ್ ಕಾಮತ್.

          ಒಂಭತ್ತು ವರುಷಗಳಿಂದ ಕಾಮತರು 'ಪ್ಲಾಸ್ಟಿಕ್ ಘೋರ'ತೆಯತ್ತ ದನಿ ಎತ್ತುತ್ತಲೇ ಬಂದಿದ್ದಾರೆ. ಪರಿಣಾಮ, ಶೃಂಗೇರಿ ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ನೋಡಲು ಅಪರೂಪ. ತರಕಾರಿಯೋ, ದಿನಸಿಯೋ ಒಯ್ಯಲು ಕೈಚೀಲ ತರುತ್ತಾರೆ. ಒಂದು ಸಾಬೂನು ಖರೀದಿಸಿ, 'ಕ್ಯಾರಿ ಬ್ಯಾಗ್ನಲ್ಲಿ ಹಾಕಿ ಕೊಡಿ' ಎನ್ನುವವರು ಸಿಗುವುದಿಲ್ಲ!

ನಾಗೇಶರು ವಾಕಿಂಗ್ಗೆ, ಶೃಂಗೇರಿ ಬೆಟ್ಟಕ್ಕೆ, ಹೊಳೆ ಸನಿಹದ ಪಾರ್ಕಿಗೆ ಹೋದಾಗಲೆಲ್ಲಾ ಬಿದ್ದಿರುವ ಪ್ಲಾಸ್ಟಿಕ್ಗಳನ್ನು ಹೆಕ್ಕುವುದು ಬದುಕಿನಂಗ. ರೋಟರಿ ಕ್ಲಬ್ನಲ್ಲಿ ಸಕ್ರಿಯ. ಒಂದು ಅವಧಿಯಲ್ಲಿ ಅಧ್ಯಕ್ಷರೂ ಆಗಿದ್ದರು. ಆರಂಭದಲ್ಲಿ ಕ್ಲಬ್ಬಿನ ಸಭೆಗಳಲ್ಲಿ, ಅಂಗಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ಪ್ಲಾಸ್ಟಿಕ್ ತೊಂದರೆಗಳ ಅರಿವು ಮೂಡಿಸುವ ಕೆಲಸ. ವರ್ಷವರ್ಷವೂ ಪುನರಾವರ್ತನೆ. ಪರಿಣಾಮ ಶೂನ್ಯ. 'ಇವೆಲ್ಲಾ ಥಿಯರಿಗಳಾಯಿತು. ಜನರು ಕೇಳಿ ಮರೆಯುತ್ತಾರಷ್ಟೇ. ಅವರಿಗೆ ಪ್ರಾಕ್ಟಿಕಲ್ ಬೇಕು. ಪ್ಲಾಸ್ಟಿಕ್ಕಿಗೆ ಪರ್ಯಾಯವಾಗಿ ಮಾದರಿಗಳನ್ನು ಕೊಡಬೇಕಿತ್ತು. ಅದು ಕಷ್ಟವಾಯಿತು' ಎನ್ನುತ್ತಾರೆ.

          2009-10ರಲ್ಲಿ ಶೃಂಗೇರಿ ಪಟ್ಟಣ ಪಂಚಾಯತಿನ ಅಧ್ಯಕ್ಷರಾದರು. ಪ್ಲಾಸ್ಟಿಕ್ ಆಂದೋಳನ ಹೊಸ ಹಾದಿ ಹಿಡಿಯಿತು. ಥಿಯರಿಗಳು ಮನಸ್ಸಿನಲ್ಲಿದ್ದರೂ ಅದಕ್ಕೆ ರೂಪು ಕೊಡುವ ಕೆಲಸ ವೇಗ ಪಡೆಯಿತು. ತಾಲೂಕಿನ ಒಂಭತ್ತು ಪಂಚಾಯತ್ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಬಯೋಡಿಗ್ರೇಡಬಲ್ ಬ್ಯಾಗನ್ನು ಉಚಿತವಾಗಿ ನೀಡಿದರೆ ಹೇಗೆ - ಎಂಬ ಯೋಚನೆ. ಯೋಜನೆ ಸಿದ್ಧವಾಯಿತು.

          ಪಂಚಾಯತ್ಗಳಲ್ಲಿ ಸಭೆ. ಯೋಜನೆಯ ಪ್ರಸ್ತುತಿ. ಉಚಿತವಾಗಿ ಚೀಲಗಳ ವಿತರಣೆ. 'ಇನ್ನು ಮುಂದೆ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಬಳಸಬೇಡಿ' ಎಂಬ ಸಂದೇಶ. ಜತೆಗೆ ಪ್ಲಾಸ್ಟಿಕ್ ದುಷ್ಪರಿಣಾಮಗಳ ಮಾಹಿತಿಪತ್ರ. ಬಹುತೇಕ ಮನೆಯವರು ಯೋಜನೆಯನ್ನು ಸ್ವೀಕರಿಸಿದರು, ಅನುಷ್ಠಾನ ಮಾಡಿದರು. ಅಂಗಡಿಗೆ, ಸಂತೆಗೆ ಬರುವಾಗಲೆಲ್ಲಾ ಪಂಚಾಯತ್ ನೀಡಿದ ಚೀಲಗಳು, ಬಟ್ಟೆಚೀಲಗಳನ್ನು ತರಲಾರಂಭಿಸಿದರು. ನಾಗೇಶ ಕಾಮತರ ಆರೇಳು ವರುಷದ ಪ್ಲಾಸ್ಟಿಕ್ ವಿರೋಧಿ ಆಂದೋಳನ ಭಾಗಶಃ ಯಶಕಂಡಿತು.

ಒಂದು ಬ್ಯಾಗಿಗೆ ಹನ್ನೆರಡು ರೂಪಾಯಿ ವೆಚ್ಚ. ಪಂಚಾಯತ್ಗಳು ಅರ್ಧದಷ್ಟಾದರೂ ಭರಿಸಬೇಕೆಂದು ಮನವಿ ಮಾಡಿದರೂ ಸ್ಪಂದಿಸಿದವರು ವಿರಳ. ಚೀಲದ ಒಂದು ಬದಿಯಲ್ಲಿ 'ಮನೆಗೊಂದು ಚೀಲ, ಪ್ಲಾಸ್ಟಿಕ್ಕಿನಿಂದ ದೂರ' ಎಂಬ ಘೋಷಣೆ. ಮತ್ತೊಂದು ಬದಿಯಲ್ಲಿ ಆಯಾಯ ಪಂಚಾಯತಿನ ವಿಳಾಸ. 'ಒಂಭತ್ತು ಪಂಚಾಯತ್ಗಳಲ್ಲಿ ಏಳಕ್ಕೆ ಚೀಲ ವಿತರಣೆ ಪೂರ್ಣವಾಗಿದೆ. ಇನ್ನೆರಡು ಪಂಚಾಯತ್ಗೆ ಶೀಘ್ರ ವಿತರಿಸುತ್ತೇವೆ' ಎನ್ನುತ್ತಾರೆ ಕಾಮತ್.

ಈಚೆಗೆ ಪ್ರವಾಸಿಗರು ಬರುವಲ್ಲಿ, ದೇವಾಲಯಗಳಲ್ಲಿ ಕಡ್ಡಾಯವಾಗಿ ನಲವತ್ತು ಮೈಕ್ರಾನ್ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಸರ್ಕಾರದ ಆದೇಶ ನೀಡಿತು. ಕಾಮತರ ಹೋರಾಟಕ್ಕೆ ಇನ್ನಷ್ಟು ಪುಷ್ಠಿ. ಶೃಂಗೇರಿ ಶಾರದಾಂಬಿಕೆ ದೇವಾಲಯದಲ್ಲೂ ಪ್ಲಾಸ್ಟಿಕ್ಕಿಗೆ ವಿದಾಯ. ಬಯೋಡಿಗ್ರೇಡಬಲ್ ಚೀಲಗಳ ಬಳಕೆ. ಈ ಎಲ್ಲಾ ಅಭಿಯಾನಕ್ಕೆ ಶ್ರೀ ಶ್ರೀ ಶೃಂಗೇರಿ ಜಗದ್ಗುರುಗಳ ಬೆಂಬಲ. ಈಗ ಶೃಂಗೇರಿ ದೇವಾಲಯದ ಆವರಣಕ್ಕೆ ಪ್ಲಾಸ್ಟಿಕ್ ಚೀಲ ಹಿಡಕ್ಕೊಂಡು ಹೊಕ್ಕರೆ ಪಹರೆಯವರಿಂದ ನೀವು ತಪ್ಪಿಸಲಾರಿರಿ!

'ಭಕ್ತಾದಿಗಳು ಆನೆಗೆ, ಮೀನಿಗೆ ಸಮರ್ಪಿಸಲು ಹುರಿಯಕ್ಕಿ (ಮಂಡಕ್ಕಿ) ಖರೀದಿಸುತ್ತಾರೆ. ಅದು ಪ್ಲಾಸ್ಟಿಕ್ ಪೊಟ್ಟಣದಲ್ಲಿರುತ್ತಿತ್ತು. ಆನೆಯು ಪೊಟ್ಟಣ ಸಹಿತವಾಗಿ ಹುರಿಯಕ್ಕಿಯನ್ನು ಎಳೆದು ನುಂಗುವ ಸಾಧ್ಯತೆಗಳೇ ಹೆಚ್ಚು. ಇದರಿಂದಾಗಿ ಆನೆಗೆ ಅಪಾಯವೂ ಆಗಿತ್ತು. ಮೀನಿಗೆ ಮಂಡಕ್ಕಿ ಸಮರ್ಪಿಸಿದ ಬಳಿಕ ಪ್ಲಾಸ್ಟಿಕ್ಕನ್ನು ಅಲ್ಲೇ ಬಿಸಾಡುತ್ತಿದ್ದರು,' ಕೃಷಿಕ, ಉದ್ಯಮಿ ಅನಂತಯ್ಯನವರು ಮಾತಿನ ಮಧ್ಯೆ ನೆನಪಿಸಿದರು.

ಸರ್ಕಾರಿ ಆದೇಶವಲ್ವಾ. ಅಂಗಡಿ, ತರಕಾರಿ ಸಂತೆಗಳಿಗೆ ಅಧಿಕಾರಿಗಳಿಂದ ಲಗ್ಗೆ, ತಪಾಸಣೆ. ಸಾತ್ವಿಕವಾದ ವ್ಯವಹಾರ. ಅದಕ್ಕೂ ಬಗ್ಗದಿದ್ದಾಗ ಶುಲ್ಕ ಹೇರಿಕೆ. ಕೆಲವೆಡೆ ವಸ್ತುಗಳನ್ನು ಮುಟ್ಟುಗೋಲು ಮಾಡಿದ್ದೂ ಇದೆ. ಈ ಭಯದಿಂದಾಗಿ ಬಹುತೇಕರು ಬಯೋಡಿಗ್ರೇಡಬಲ್ ಚೀಲಗಳನ್ನು ಬಳಸುತ್ತಾರೆ. ಕಾಮತರು ವರ್ತಕ ಸಂಘದ ಕಾರ್ಯದರ್ಶಿಗಳಾದ್ದರಿಂದ ವರ್ತಕರ ಬಳಗ 'ಪ್ಲಾಸ್ಟಿಕ್ ಬಳಕೆಯಿಲ್ಲ' ಎಂಬ ಸ್ಟಿಕ್ಕರ್ಗಳನ್ನು ಅಂಗಡಿಗಳಲ್ಲಿ ಅಂಟಿಸುವ ಮೂಲಕ ಬೆಂಬಲ ನೀಡಿದ್ದಾರೆ. ಅನುಷ್ಠಾನ ಮಾಡಿದ್ದಾರೆ.

'ಪ್ಲಾಸ್ಟಿಕ್ ವಿರೋಧಿ' ಕಾರ್ಯಗಳನ್ನು ಒಪ್ಪದೇ ಇದ್ದವರೂ ಇದ್ದಾರೆ. 'ಹಾಲು, ಎಣ್ಣೆ, ಸಿದ್ಧವಸ್ತುಗಳು ಪ್ಲಾಸ್ಟಿಕ್ಕಿನಲ್ಲಿ ಬರುವುದಿಲ್ವಾ. ಅದನ್ನು ಮೊದಲು ನಿಷೇಧಿಸಿ, ನಂತರ ನಮಗೆ ಹೇಳಿ' ಎನ್ನುವ ಅಡ್ಡ ಮಾತುಗಳು; 'ನಮಗೆ ಕೈಚೀಲ ಅಭ್ಯಾಸವಿಲ್ಲ, ಅದನ್ನು ಇನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ ಮಾರಾಯ್ರೆ. ಪ್ಲಾಸ್ಟಿಕ್ ಸೇಫ್ ಅಲ್ವಾ, ಮಳೆಗೆ ಒದ್ದೆಯಾಗುವುದಿಲ್ಲ' ಎನ್ನುವ ಮಂದಿ. ಸರಕಾರಿ ಆದೇಶ ಮತ್ತು ಆಂದೋಳನದ ವೇಗಕ್ಕೆ ಇವೆಲ್ಲಾ ಗಣನೆಗೆ ಬಂದಿಲ್ಲ.

'ಶೃಂಗೇರಿ ಪಟ್ಟಣ ಶೇ.80ರಷ್ಟು ಪ್ಲಾಸ್ಟಿಕ್ ಮುಕ್ತವಾಗಿದೆ. ಇನ್ನಷ್ಟು ಕೆಲಸ ಬಾಕಿಯುಳಿದಿವೆ. ಜನರು ಸ್ವಯಂ ಆಗಿ ಭವಿಷ್ಯದತ್ತ ನೋಟ ಹರಿಸಿದರೆ ನೂರಕ್ಕೆ ನೂರರಷ್ಟು ಸಾಧಿಸಬಹುದು. ಎಲ್ಲವೂ ಕಾನೂನಿನಿಂದ, ಅರಿವನ್ನು ಮೂಡಿಸುವುದರಿಂದ ಆಗುವುದಿಲ್ಲ' ಎನ್ನುತ್ತಾರೆ ಕಾಮತ್. ಇವರು ಬಯೋಡಿಗ್ರೇಡಬಲ್ ಚೀಲಕ್ಕೆ ಹೆಚ್ಚು ಒತ್ತು ಕೊಡುವುದರಿಂದ ಅವರ ವಿರುದ್ಧ ಅಪಪ್ರಚಾರವೂ ನಡೆದಿತ್ತು.

 'ಅವರು ಚೀಲದ ಫ್ಯಾಕ್ಟರಿ ಮಾಡ್ತಾರೆ. ಅದಕ್ಕಾಗಿ ಪ್ಲಾಸ್ಟಿಕ್ ವಿರೋಧಿ ನಾಟಕವಾಡ್ತಾ ಇದ್ದಾರೆ' ಎಂಬ ಆರೋಪ! ಆಂದೋಳನದ ಫಲಶೃತಿಗಳು ಬರಲಾರಂಭಿಸಿದಾಗ ಆರೋಪ ಸುಳ್ಳೆಂದು ಜನರಿಗೆ ಮನವರಿಕೆಯಾಯಿತು. 'ಪತನಸುಖಿ'ಗಳು ಎಲ್ಲಾ ಕಾಲದಲ್ಲಿ ಧುತ್ತೆಂದು ಹುಟ್ಟಿಕೊಳ್ಳುತ್ತಾ ಇರುತ್ತಾರಲ್ವಾ.

ಹಳ್ಳಿಗಳಲ್ಲಿ ಹೇಳುವಂತಹ ಅರಿವು ಮೂಡಿಲ್ಲ. ಅಷ್ಟು ಸುಲಭವೂ ಅಲ್ಲ. 'ಪ್ರತೀ ಮನೆಯವರು ಅವರವರ ಮನೆಯ ಕಸವನ್ನು ಒಂದೆಡೆ ಪೇರಿಸಿಟ್ಟುಕೊಳ್ಳಬೇಕು. ಪಂಚಾಯತ್ ಯಾ ಇತರ ಸಂಘಸಂಸ್ಥೆಗಳು ಅಲ್ಲಿಂದ ಸಂಗ್ರಹಿಸಿ ತ್ಯಾಜ್ಯ ವಿಲೆವಾರಿ ಘಟಕಕ್ಕೆ ರವಾನಿಸುವುದು' -  ಮುಂದಿರುವ ಯೋಜನೆಗಳು.

'ಹಾಲಿನ ಪ್ಲಾಸ್ಟಿಕ್, ಇತರ ಬ್ಯಾಗ್ಗಳನ್ನು ಚೆನ್ನಾಗಿ ತೊಳೆದು ತನ್ನಿ. ಅದಕ್ಕೆ ಚಿಕ್ಕ ಮೊತ್ತ ಕೊಡ್ತೇನೆ' ಎಂದು ಕಾಮತರು ವಿನಂತಿಸಿದ್ದರಂತೆ. ಅದಕ್ಕೂ ಸ್ಪಂದನ ಅಷ್ಟಕ್ಕಷ್ಟೇ. ಸಾಮಾಜಿಕ ಕಾರ್ಯಕರ್ತರಾಗಿದ್ದ ಕಾಮತರು 'ತನ್ನ ಬದುಕಿನಲ್ಲಿ ಪ್ಲಾಸ್ಟಿಕ್ಕಿಗೆ ಸ್ಥಾನವಿಲ್ಲ' ಎಂಬ ಪ್ರತಿಜ್ಞೆ ಮಾಡಿದ್ದರಿಂದ ಪ್ಲಾಸ್ಟಿಕ್ ವಿರುದ್ಧದ ಜಾಗೃತಿಗೆ ಬೀಸುಹೆಜ್ಜೆ ಬಂತು. ಈಗಿನ ಶೃಂಗೇರಿ ಪಟ್ಟಣ ಪಂಚಾಯತ್ ಅಧ್ಯಕ್ಷ ಪರಾಶರರು ಪ್ಲಾಸ್ಟಿಕ್ ಅಂದೋಳನವನ್ನು ಮುಂದುವರಿಸುತ್ತಿದ್ದಾರೆ.

'ಚೀಲ ವಿತರಣೆಯಿಂದ ಪ್ಲಾಸ್ಟಿಕ್ ಮುಕ್ತ ಎನ್ನಲು ಸಾಧ್ಯವೇ?' ಎಂಬ ಪ್ರಶ್ನೆ ಮುಂದೆ ಬರುತ್ತದೆ. ಚೀಲ ನೀಡಿಕೆ ಕೇವಲ ಸಂದೇಶವಷ್ಟೇ. ಅದನ್ನು ಅನುಷ್ಠಾನ ಮಾಡಬೇಕೆಂಬುದಕ್ಕೆ ಉಪಾಧಿ. ಕಾನೂನು ಉಂಟಲ್ವಾ, ಪಾಲನೆ ಮಾಡುತ್ತಿದ್ದಾರೆ. ಎಲ್ಲಾ ಸಂಸ್ಥೆಗಳು, ವ್ಯಕ್ತಿಗಳು ಕಾಮತರಿಗೆ ಬೆಂಬಲ, ಪ್ರೋತ್ಸಾಹ ನೀಡಿವೆ. ಇಷ್ಟಿದ್ದರೂ ಚೀಲಗಳ ತಯಾರಿ ಮತ್ತು ಓಡಾಟ ವೆಚ್ಚಗಳಿಗೆ ಸಂಪನ್ಮೂಲಗಳನ್ನು ಅಪೇಕ್ಷಿಸದೆ 'ಅರ್ಧಕ್ಕರ್ಧ' ಕಿಸೆಯಿಂದ ಭರಿಸಿದ್ದೇ ಕೆಲವು ಲಕ್ಷ ರೂಪಾಯಿಗಳಾಗಬಹುದು. ಅದನ್ನವರು ಹೇಳುತ್ತಿಲ್ಲ. ಅವರಿಗದು ಇಷ್ಟವೂ ಇಲ್ಲ. ಈ ವಿಚಾರಗಳು ಆಪ್ತರಿಗೆ, ಸಮಾನಾಸಕ್ತರಿಗೆ ಮಾತ್ರ ಗೊತ್ತು. ಅವರೆಂದು ಸುದ್ದಿ ಮಾಡಿಲ್ಲ, ಸದ್ದು ಮಾಡಿಲ್ಲ ಎಂದು ಆಪ್ತವಾಗಿ ಗುಟ್ಟಲ್ಲಿ ಹೇಳುತ್ತಾರೆ, ಅನಂತಯ್ಯನವರು. 

ಶೃಂಗೇರಿಯಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯ ದಾರಿಗಳನ್ನು ಕಂಡುಕೊಳ್ಳಲಾಗಿದೆ. ನಮ್ಮಿಂದಲೂ ಸಾಧ್ಯವಲ್ವಾ. ಸರಕಾರದಲ್ಲಿ ಫಂಡ್ ಇದೆ. ಸಾಮಾಜಿಕ ಸಂಸ್ಥೆಗಳಲ್ಲೂ ಸಂಪನ್ಮೂಲಗಳಿಗೆ ತೊಂದರೆಯಿಲ್ಲ. ವೇದಿಕೆಗಳಲ್ಲಿ ಪ್ಲಾಸ್ಟಿಕ್ ದುಷ್ಟರಿಣಾಮಗಳ ಕುರಿತು ಮಾತನಾಡುತ್ತೇವೆ. ಏರು ಸ್ವರದಲ್ಲಿ ಉಗ್ರವಾಗಿ ಖಂಡಿಸುತ್ತೇವೆ. ಎಲ್ಲಿಯವರೆಗೆ ಮನಸ್ಸು ಪ್ಲಾಸ್ಟಿಕ್ನ ದುಷ್ಪರಿಣಾಮ, ಭವಿಷ್ಯದ ಆರೋಗ್ಯದ ಬದುಕಿನತ್ತ ವಾಲುವುದಿಲ್ಲವೋ; ಅಲ್ಲಿಯವರೆಗೆ ನಾಗೇಶ ಕಾಮತರಂತಹ ಸಮಾಜಮುಖಿ ವ್ಯಕ್ತಿತ್ವದ ವ್ಯಕ್ತಿಗಳ ಕೆಲಸಗಳೂ ಕಾಣುವುದಿಲ್ಲ.

Tuesday, July 17, 2012

ದೇವರನಾಡಿನ ದೇವಳವೊಂದರಲ್ಲಿ ಹಲಸಿನ ಹಣ್ಣಿಗೆ ಸ್ಥಾನ-ಮಾನ!





ಅದು ಹಳ್ಳಿ ದೇವಸ್ಥಾನ. ದೇವರಿಗಂದು ಹಲಸಿನ ಹಬ್ಬ! ಹಲಸಿನ ಹಣ್ಣಿನಿಂದ ಸಿದ್ಧಪಡಿಸಿದ  ಖಾದ್ಯ 'ಅಪ್ಪ'ದ ನೈವೇದ್ಯ. ಪೂಜೆಯ ಬಳಿಕ ಅಪ್ಪ ಪ್ರಸಾದ ವಿತರಣೆ. ಕಾಸರಗೋಡು (ಕೇರಳ) ಜಿಲ್ಲೆಯ ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ 'ಅಪ್ಪದ ಸೇವೆ'ಗೆ (ಹಲಸಿನ ಹಬ್ಬ) ಆರ್ಧ ಶತಮಾನಕ್ಕೂ ಮೀರಿದ ಇತಿಹಾಸ.

'ಅಪ್ಪ' ಎಂದರೇನು? ಇದೊಂದು ಸಿಹಿ ಖಾದ್ಯ. ಪ್ರಚಲಿತವಿರುವ ಸಿಹಿಖಾದ್ಯ 'ಮುಳುಕ'ದ ಸಹೋದರ. ಅಕ್ಕಿಹುಡಿ, ತೆಂಗಿನತುರಿ, ಬೆಲ್ಲದ ಮಿಶ್ರಣ.  ರುಚಿಗೆ ಏಲಕ್ಕಿ. ಚೂರುಚೂರಾಗಿ ಕೊಚ್ಚಿದ ಹಲಸಿನ ಸೊಳೆಗಳನ್ನು ಬೆರೆಸಿ, ಈ ಪಾಕವನ್ನು ತುಪ್ಪದಲ್ಲಿ ಕರಿದರೆ 'ಅಪ್ಪ' ರೆಡಿ. ಅಕ್ಕಿ ಹುಡಿಯ ಬದಲು ಬೆಳ್ತಿಗೆ ಅಕ್ಕಿಯನ್ನು ಬಳಸಿ ರುಬ್ಬಿದರೂ ಓಕೆ. ಅಪ್ಪವನ್ನು ತಯಾರಿಸಲೆಂದೇ ಗುಳಿಯಿರುವ ಚಿಕ್ಕ ಬಾಣಲೆ(ಉರುಳಿ)ಯಿದೆ. ಇದಕ್ಕೆ ತುಪ್ಪವನ್ನು ಸುರುವಿ, ಕುದಿಯುತ್ತಿರುವಾಗ ಸೌಟಿನಲ್ಲಿ ಗುಳಿ ತುಂಬುವಂತೆ ಪಾಕವನ್ನು ಸುರಿಯುತ್ತಾರೆ. ಕೇರಳ, ದಕ್ಷಿಣ ಕನ್ನಡದ ಬಹುತೇಕ ದೇವಸ್ಥಾನದಲ್ಲಿ 'ಅಪ್ಪ' ಮಾಡುವ ರೀತಿ ಇದಾದರೂ, ಏತಡ್ಕದಲ್ಲಿ ಮಾತ್ರ ವರುಷಕ್ಕೊಮ್ಮೆ ಹಲಸಿನ ಹಣ್ಣಿಗೆ ಮಾನ! 

ಜೂನ್ 15ರಿಂದ ಜುಲೈ 15ರೊಳಗೆ ಅನುಕೂಲಕರ ದಿವಸದಂದು ಹಬ್ಬ ನಡೆಯುತ್ತದೆ. ಹಲಸಿನ ಹಣ್ಣು ಲಭ್ಯವಾಗುವ ಸಮಯವಿದು. ಒಂದು ಕಾಲಘಟ್ಟದಲ್ಲಿ ಆಹಾರ ಭದ್ರತೆಯನ್ನು ನೀಡಿದ ಹಲಸಿಗೆ ಕೃತಜ್ಞತೆ ಸಲ್ಲಿಸಲು ಹಬ್ಬದ ವ್ಯವಸ್ಥೆ ಬಂದಿದೆಯೋ ಏನೋ? 'ಕಳೆದ ಎರಡು ವರುಷದಿಂದ ಬಾಯ್ಮಾತಿನ ಮತ್ತು ಮಾಧ್ಯಮ ಮೂಲಕ ಪ್ರಚಾರ ಪಡೆದಿರುವುದರಿಂದ ಈ ಬಾರಿ ಭಕ್ತರ ಸಂಖ್ಯೆ ಆಧಿಕ' ಎನ್ನುತ್ತಾರೆ, ದೇವಳದ ಮುಖ್ಯಸ್ಥ ಡಾ.ವೈ.ಸುಬ್ರಾಯ ಭಟ್. ಐದಾರು ಅಪ್ಪವನ್ನೊಳಗೊಂಡ ಪ್ಯಾಕೆಟಿಗೆ ಮೂವತ್ತು ರೂಪಾಯಿ.

'ದೇವಸ್ಥಾನಕ್ಕೆ ಬರುವಾಗ ಎಲ್ಲರೂ ಒಂದೊಂದು ಹಲಸಿನ ಹಣ್ಣನ್ನು ತರಬೇಕು' ಎಂಬ ಅಲಿಖಿತ ನಂಬುಗೆ ಇದ್ದರೂ, ಪ್ರಚಲಿತ ಸಮಸ್ಯೆಯಿಂದಾಗಿ ಆಗುತ್ತಿಲ್ಲ. ಮರವನ್ನು ಏರಿ ಹಣ್ಣನ್ನು ಕೊಯ್ಯುವ ಜಾಣ್ಮೆಯ ಕುಶಲಿಗರ ಸಂಖ್ಯೆ ಕಡಿಮೆಯಾಗುತ್ತದೆ. ಮರದಲ್ಲಿ ಹಣ್ಣು ಗೋಚರವಾದರೂ ಕೊಯ್ಯಲು ಅಸಹಾಯಕತೆ.  ಹಣ್ಣು ಲಭ್ಯವಾದರೂ ಸಾಗಾಟ ಸಮಸ್ಯೆ. ಈ ಹಿನ್ನೆಲೆಯಲ್ಲಿ ಮುಂದಿನ ವರುಷದಿಂದ ಹಲಸಿನ ಹಣ್ಣನ್ನು ತರುವ ಬದಲು, ಮನೆಯಲ್ಲೇ ಶುಚಿಯಾಗಿ ಸೊಳೆಯನ್ನು ಆಯ್ದು ತರುವಂತೆ ವಿನಂತಿಸಿದರೆ ಹೇಗೆ? ಎಂಬ ಚಿಂತನೆ ನಡೆಯುತ್ತಿದೆ.

'ಈ ರೀತಿ ಮಾಡಿದರೆ ಅಪ್ಪದ ಜತೆಯಲ್ಲಿ ಎಲ್ಲರಿಗೂ ಹಲಸಿನ ಸೊಳೆಯನ್ನು ಹಂಚಬಹುದು. ಇದರಿಂದಾಗಿ ಉತ್ತಮ ರುಚಿ. ಸ್ವಾದವಿರುವ ತಳಿಯನ್ನು ಆಯ್ಕೆ ಮಾಡಿ, ಅದನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ,' ದೇವಳಕ್ಕೆ ತೀರಾ ಹತ್ತಿರ ಸಂಬಂಧವಿರುವ ಚಂದ್ರಶೇಖರ ಏತಡ್ಕರ ದೂರದೃಷ್ಟಿ.

ಬೇರೆ ಬೇರೆ ಕಾರಣಗಳಿಂದಾಗಿ ಹಿತ್ತಿಲಿನಲ್ಲಿ ಕೊಳೆಯುವ ಹಲಸಿನ ಬಳಕೆ, ಸಂರಕ್ಷಣೆಯ ಅರಿವು ಮೂಡುತ್ತಿದೆ. ಏತಡ್ಕ ಸದಾಶಿವ ದೇವಾಲಯದ 'ಹಲಸಿನ ಹಬ್ಬ'ವು ಹಲಸನ್ನು ಉಳಿಸುವ, ಬಳಸುವ ಸಂದೇಶವನ್ನು ನೀಡುತ್ತದೆ. ಹಬ್ಬದಿಂದಾಗಿ ಊರಿನಲ್ಲಿ ಹಲಸಿನ ಕುರಿತು ಮರುಚಿಂತನೆ ನಡೆಯುತ್ತಿದೆ. ಕಳೆದ ಕಾಲದ ಕಥನದ ಮರುಓದು ಆರಂಭವಾಗುತ್ತದೆ.

ಪೊಳಲಿಯಲ್ಲಿ ಕಲ್ಲಂಗಡಿಗೆ ಸ್ಥಾನ. ಏತಡ್ಕದಲ್ಲಿ ಹಲಸಿನ ಹಣ್ಣಿಗೆ ಮಾನ. ಹೀಗೆ ಒಂದೊಂದು ಹಣ್ಣಿಗೆ ಧಾರ್ಮಿಕ ನಂಟು ಅಂಟಿಸಲ್ಪಟ್ಟರೆ ನಶಿಸುತ್ತಿರುವ ಹಣ್ಣುಗಳಿಗೆ ಉಳಿಗಾಲ. ನಾಡಹಣ್ಣುಗಳ ಜತೆಗೆ ಕಾಡುಹಣ್ಣುಗಳನ್ನು ಉಳಿಸುವುದು ಕಾಲದ ಆವಶ್ಯಕತೆ.

ಚಿತ್ರ, ಮಾಹಿತಿ : ಚಂದ್ರಶೇಖರ ಏತಡ್ಕ

ಹಸಿರ ಪಾಠಕ್ಕೆ ಕಾಯುತ್ತಿವೆ, ಹಸಿದ ಮನಸ್ಸುಗಳು

ಜುಲೈ ಹಸಿರಿನ ತಿಂಗಳು. ಮಳೆಯ ಚುಮುಚುಮು. ಬೇಸಿಗೆಯ ಬೇಗೆಗೆ ಮುರುಟಿದ ಸಸ್ಯ ಸಂಪತ್ತುಗಳಿಗೆ ಮರುಜೀವ. ಸುಪ್ತವಾಗಿ ಮಲಗಿದ್ದ ಬೀಜಗಳಿಗೆ ಮೊಳಕೆಯ ಅವಸರ. ಮನೆಯೊಳಗೆ ಗಿಡಗಳ ಮಾತು. ಮನದೊಳಗೆ ಹಸಿರಿನ ತುಮುಲ. ಹೊಸ ಗಿಡಗಳ ಸ್ವಾಗತಕ್ಕೆ ಹಿತ್ತಿಲು ಸಿದ್ಧವಾಗುತ್ತದೆ. ಆಯವ್ಯಯ ರೂಪುಗೊಳ್ಳುತ್ತದೆ.

ಜುಲೈ ತಿಂಗಳು ವನಮಹೋತ್ಸವ ಪರ್ವ. ಮಹಾಭಾರತದಲ್ಲಾದರೆ ಒಂದು ಪರ್ವದ ಬಳಿಕ ಇನ್ನೊಂದು. ಇಲ್ಲಿ ಮಾತ್ರ ಒಂದೇ ಪರ್ವ! ಇಲಾಖೆಗಳಲ್ಲಿ ಗಿಡಗಳ ಹಂಚೋಣ ಭರಾಟೆ. ಕಾಡುಮರಗಳು ನಾಡೊಳಗೆ ನುಸುಳುವ ಧಾವಂತ. ಅಕೇಶಿಯಾ, ಸಾಗುವಾನಿ, ಮಾಗುವಾನಿಗಳ ದಂಡು. ಸರತಿಯಲ್ಲಿ ಮಾವು, ಹಲಸುಗಳು. ಅವುಗಳ ಬೆನ್ನಿಗೆ ದಾಸವಾಳ, ಗುಲಾಬಿಗಳು.

ಶಾಲೆಗಳಲ್ಲಿ ಹಸಿರಿನ ಪಾಠ. ವನಮಹೋತ್ಸವದ ಕಾರ್ಯಹೂರಣಗಳ ಅನಾವರಣ. ಗಣಿತ, ವಿಜ್ಞಾನದೊಳಗೆ ಹುದುಗಿದ್ದ ಮನಸ್ಸುಗಳನ್ನು ಹಸಿರು ಅಪ್ಪಿಕೊಳ್ಳುವತ್ತ ಒತ್ತಡ. ಒಪ್ಪಿಸುವ ಪ್ರಯತ್ನಗಳಿಗೆ ಆದೇಶದ ಕುಮ್ಮಕ್ಕು! ಶಾಲಾವರಣ ಪೂರ್ತಿ ನುಣುಪಾಗಿರುವುದರಿಂದ ನಾಲ್ಕು ಗೋಡೆಗಳ ಮಧ್ಯೆ ಪರಿಸರದ ಪಾಠ, ಸ್ಪರ್ಧೆಗಳು, ಬಹುಮಾನಗಳು, ಪುರಸ್ಕಾರಗಳು. ಅಬ್ಬಬ್ಬಾ.. ಒಂದೇ ದಿನದಲ್ಲಿ ಧುಮ್ಮಿಕ್ಕುವ ಹಸಿರ ಪ್ರೀತಿ!

ವಾಹಿನಿಯೊಂದರಲ್ಲಿ ರಸಪ್ರಶ್ನೆ ಕಾರ್ಯಕ್ರಮ. ಸೂಟು, ಬೂಟು, ಕತ್ತುಪಟ್ಟಿ ಧರಿಸಿದ 'ಶಿಸ್ತಿನ' ವಿದ್ಯಾರ್ಥಿಗಳು. ನಿರ್ವಾಹಕರು ತುಳಸಿಯ ಕುಡಿಯೊಂದನ್ನು ತೋರಿಸುತ್ತಾ, 'ಇದು ಯಾವ ಗಿಡದ ಕುಡಿ' ಎಂದರು. ನಾಲ್ಕು ಆಯ್ಕೆಗಳಿದ್ದುವು. ಮುಖಮುಖ ನೋಡಿಕೊಂಡರೂ ಹೊಳೆಯದ ಉತ್ತರ. ಮನೆಯ ಮುಂದಿರುವ ತುಳಸಿಯನ್ನು (ಇದ್ದರೆ?) ಗುರುತಿಸಲಾಗದ ಅಸಹಾಯಕತೆ. ನಿರ್ವಾಹಕರೇ ಉತ್ತರ ಹೇಳಿದಾಗ ವಿದ್ಯಾರ್ಥಿಗಳು ಸುಸ್ತು. ಈ ಹಿನ್ನೆಲೆಯಲ್ಲಿ ದಾರಿತಪ್ಪುತ್ತಿರುವ ಶೈಕ್ಷಣಿಕ ಹೂರಣಗಳ ಬಗ್ಗೆ ಮಾತನಾಡುವಾಗ 'ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲದಿರುವುದು ಬೌದ್ಧಿಕ ಮಟ್ಟಕ್ಕೆ ಮಾನದಂಡವಲ್ಲ' ಎಂಬ ಅಡ್ಡಮಾತುಗಳ ಸಮರ್ಥನೆ.

ರಸಪ್ರಶ್ನೆಗಳಲ್ಲಿ ಹಳ್ಳಿ, ಪುರಾಣ, ಪರಿಸರದ ವಿಚಾರಗಳು ಬಂದಾಗ ವಿದ್ಯಾರ್ಥಿಗಳ ಹಣೆಯಲ್ಲಿ ಯಾಕೆ ಬೆವರಿಳಿಯುತ್ತದೆ? 'ತನಗೆ ಗೊತ್ತಿಲ್ಲ, ಹಿರಿಯರು ಹೇಳಿಲ್ಲ, ಪಠ್ಯದಲ್ಲಿ ಇಲ್ಲವೇ ಇಲ್ಲ'! ನಮ್ಮನ್ನು ಬೌದ್ಧಿಕವಾಗಿ ಎತ್ತರಿಸುತ್ತವೆ, ಬದುಕನ್ನು ಅಪ್ಡೇಡ್ ಮಾಡುತ್ತದೆ ಎಂದು ನಂಬಿರುವ 'ವಾಹಿನಿ'ಗಳಲ್ಲಿ ಕೊಲೆ, ದರೋಡೆ, ಎತ್ತಂಗಡಿ, ವಿಚ್ಛೇದನ, ಕೊಳಕು ರಾಜಕೀಯಗಳ ನೇರ ಪಾಠ! 'ಪಠ್ಯದಲ್ಲಿ ಇದ್ದ ಮಾತ್ರಕ್ಕೆ ಹಸಿರು ಪ್ರೀತಿ ಬರುತ್ತದಾ' ಎನ್ನುತ್ತಾ ಮಕ್ಕಳೆದುರೇ ವಿಚಾರಗಳನ್ನು ಹೊಸಕಿಹಾಕುತ್ತೇವೆ.

ಪರಿಸರ, ವೇದಿಕೆಯ ಸರಕಲ್ಲ

ಶಾಲೆಗಳಲ್ಲಿ ಪರಿಸರ ಸಂಘಗಳಿವೆ, ಪರಿಸರ ಕ್ಲಬ್ಗಳಿವೆ. ಉದ್ಘಾಟನೆಯೊಂದಿಗೆ ಸಮಾರೋಪದ ಬೀಜವೂ ನುಸುಳಿರುತ್ತದೆ. ಶಾಲಾರಂಭದಲ್ಲಿ ಮರುಜೀವಗೊಂಡು ಅಲ್ಲಿಂದಿಲ್ಲಿಂದ ಹೆಕ್ಕಿ ಪೋಣಿಸಿದ ವಿಚಾರಗಳನ್ನು ಪ್ರಬಂಧದ ಮೂಲಕವೋ, ಭಾಷಣಗಳ ಮೂಲಕವೋ ಪ್ರಸ್ತುತ ಪಡಿಸಿದರೆ ಮುಗಿಯಿತು. ಪತ್ರಿಕೆಗಳಲ್ಲಿ ವರದಿ ಪ್ರಕಟವಾದಲ್ಲಿಗೆ ಪರಿಸರಾಕ್ಷರ ಅನಾವರಣ! ಎಷ್ಟು ಕ್ಲಬ್ಗಳು, ಸಂಘಗಳು ಮಣ್ಣನ್ನು ಕೈಗೆ ಮೆತ್ತಿಸಿಕೊಂಡಿವೆ. ಇಲ್ಲವೆಂದಲ್ಲ, ಅಪರೂಪಕ್ಕೆ ಬೆರಳೆಣಿಕೆಯ ಶಾಲೆಗಳು ಸದ್ದಿಲ್ಲದೆ ಕೆಲಸ ಮಾಡುತ್ತಿವೆ.

 ವಾರಕ್ಕೊಂದು ಅವಧಿಯಲ್ಲಾದರೂ ಪರಿಸರದ ನೇರ ಪಾಠ ಸಿಗುತ್ತಿದ್ದರೆ ತುಳಸಿಯನ್ನು ಗುರುತಿಸಲಾಗದ 'ಬೌದ್ಧಿಕ ದಾರಿದ್ರ್ಯ' ಎದುರಾಗದು. ವಿದ್ಯಾರ್ಥಿಗಳ ಪಾಲಿಗೆ ಪರಿಸರ, ಹಸಿರಿನ ಕುರಿತಾದ ವಿಚಾರಗಳು ವೇದಿಕೆಯ ಸರಕು. ಸ್ಪರ್ಧೆಗಳಿಗೆ ಉರುಹೊಡೆವ ಉಪಾಧಿ. ಗಿಡಗಳನ್ನು ಗುರುತಿಸುವ, ಕೃಷಿಯ ಕನಿಷ್ಠ ಜ್ಞಾನವನ್ನು ನೀಡುವ, ಹಣ್ಣುಗಳು-ಕಾಯಿಗಳನ್ನು ನೋಡುವ-ತಿನ್ನುವ ಪರಿಪಾಠ ಶಾಲಾವಧಿಯಲ್ಲಿ ರೂಪುಗೊಂಡರೆ 'ಪ್ರೌಢ'ರಾದಾಗ ಒದ್ದಾಡಬೇಕಾಗಿಲ್ಲ.

ಈಚೆಗೆ ದೈತೋಟದ ಜಯಕ್ಕನಲ್ಲಿಗೆ ಹೋಗಿದ್ದೆ. ಅವರು ಹಟ್ಟಿಯಲ್ಲಿ ಹಾಲು ಹಿಂಡುತ್ತಿದ್ದರು. ಅಷ್ಟರಲ್ಲಿ ರಾಜಧಾನಿಯಿಂದ ದಂಪತಿ ಕುಟುಂಬ ಆಗಮಿಸಿತ್ತು. ಅದರಲ್ಲೊಬ್ಬ ಹತ್ತರ ವಿದ್ಯಾರ್ಥಿ, ಮತ್ತೊಬ್ಬನಿಗೆ ಪದವೀಧರನಾಗಲು ಇನ್ನೊಂದೇ ವರ್ಷ. 'ನಾನು ಹಟ್ಟಿಯಲ್ಲಿದ್ದೇನೆ. ಕುಳಿತುಕೊಳ್ಳಿ' ಜಯಕ್ಕ ಉವಾಚ. 'ನೋಡಮ್ಮ, ಅವರು ಪ್ರಾಣಿಯೊಂದಿಗಿದ್ದಾರೆ. ಅವರಿಗೆ ಭಯವಾಗುವುದಿಲ್ವಾ' ಎನ್ನಬೇಕೆ. ಜಯಕ್ಕ ಹಟ್ಟಿಯಿಂದ ಹಾಲಿನೊಂದಿಗೆ ಹೊರಬಂದರು. 'ಹಸು ಹಾಲು ಕೊಡುತ್ತಾ' ಎಂದ ಇನ್ನೊಬ್ಬ! ಜಯಕ್ಕ ದಂಗು. ಪ್ಯಾಕೆಟ್ ಹಾಲು ಕುಡಿದು ಬೆಳೆದ ಮಕ್ಕಳಿಗೆ 'ಹಸು ಹಾಲು ಕೊಡುತ್ತದೆ' ಎಂದು ಅಮ್ಮ ಹೇಳಿಲ್ಲ. ಅಮ್ಮನಿಗೆ ಗೊತ್ತಿದ್ದರೆ ಓಕೆ, ಇಲ್ಲದಿದ್ದರೆ?

'ಪಠ್ಯಪುಸ್ತಕ ಹೀಗಿರಬೇಕು' ಎಂದು ದಿನಕ್ಕೊಂದು ಹೇಳಿಕೆಯಡಿ ಬೊಬ್ಬಿಡುವ 'ಅಕ್ಷರ ಪ್ರೇಮಿ'ಗಳಿಗೆ ಪರಿಸರ ಕಾಣುತ್ತಿಲ. ಅವರ ಪಾಲಿಗೆ ಹಸಿರು ಮಸುಕು. 'ಹಸಿರಿನ ಪಾಠ ಪಠ್ಯದಲ್ಲಿ ಸೇರಲೇ ಬೇಕು' ಎಂದು ಒತ್ತಾಯಿಸುವ, ಒತ್ತಾಯಿಸಿದ ಮನಸ್ಸುಗಳು ನಿಷ್ಕ್ರಿಯವಾಗಿವೆ? ಎಲ್ಲದಕ್ಕೂ ರಾಜಕಾರಣವನ್ನು ತುರುಕಿ, ಗೊಂದಲವಾದಾಗ ಸಂತೋಷಪಡುವ 'ಪತನಸುಖಿ'ಗಳ ಸಾಮ್ರಾಜ್ಯದಲ್ಲಿ ಅಕ್ಷರಗಳಿಗೆ, ಹಸಿರಿಗೆ ಎಲ್ಲಿದೆ ಸ್ಥಾನ-ಮಾನ? ಅಕ್ಷರಸ್ಥರಾಗಿದ್ದೂ ಅನಕ್ಷರಸ್ಥರಂತೆ ವರ್ತಿಸುವ ನಾಡಿನ ದೊರೆಗಳಿಂದ ಏನನ್ನು ನಿರೀಕ್ಷಿಸಬಹುದು? ವಿದ್ಯಾರ್ಥಿಗಳಲ್ಲಿ ಭವಿಷ್ಯದ ಕನಸುಗಳನ್ನು ಬೆಳೆಸುವ ಕಾಯಕ ಅವರಿಗೆ ಬೇಕಾಗಿಲ್ಲ. ನೆನಪಿಡಿ. ಹಸುವಿನ ಪರಿಚಯವಿಲ್ಲದ, ಹಸು ನೀಡುವ ಹಾಲಿನ ಗುರುತಿಲ್ಲದ, ತುಳಸಿ ಗೊತ್ತಿಲ್ಲದ ಅನೇಕ ಹಸಿರು ಮನಸ್ಸುಗಳು ಹಸುರ ಪಾಠಕ್ಕೆ ಕಾಯುತ್ತಿವೆ.

ಹುಡುಕಾಟದ ಹುಡುಗಾಟ!

ಇನ್ನು ಇಲಾಖೆಗಳತ್ತ ಮುಖಮಾಡಿದರೆ ರೋಚಕ ಅನುಭವ. ಜುಲೈ ಹತ್ತಿರವಾದಾಗ ಗಿಡಗಳ ಹುಟುಕಾಟ. ಹತ್ತಿಪ್ಪತ್ತು ಗಿಡಗಳನ್ನು ನೀಡಿ 'ಕೃಷಿಕ ವಲಯಕ್ಕೆ ದೊಡ್ಡ ಕೊಡುಗೆ ನೀಡಿದ್ದೇವೆ' ಎಂದು ಭಾಷಣ ಬಿಗಿಯುವವರ ಹಸಿರು ಬಿಗಿತದ 'ಶುಚಿಮುಖ' ಶುಚಿತ್ವವಾಗುವುದು ಹೇಗೆ? ಕೃಷಿಕನು ಸದ್ದಿಲ್ಲದೆ ತನ್ನ ಜ್ಞಾನದ ನಿಲುಕಿನಲ್ಲಿ ಗುಡ್ಡದೆಲ್ಲೆಡೆ ಗಿಡಗಳನ್ನು ನೆಟ್ಟು ಪೋಶಿಸುತ್ತಾನೆ. ಅದರ ಫಲವನ್ನು ಹೆಂಡತಿ, ಮಕ್ಕಳ ಜತೆ ಸವಿಯುತ್ತಾ ಆನಂದವನ್ನು ಅನುಭವಿಸುತ್ತಿರುವಾಗ 'ವೇದಿಕೆಯ ಭಾಷಣ'ಗಳು ಢಾಳಾಗಿ ಕಾಣುತ್ತದೆ.

ಕಳೆದ ವರುಷ ವನಮಹೋತ್ಸವದಂದು ನೆಟ್ಟ ಹೊಂಡಕ್ಕೆ ಪುನಃ ಈ ವರುಷ ಗಿಡ ನೆಡುವ ದೌರ್ಭಾಗ್ಯ! ಅದೇ ಜಾಗದಲ್ಲಿ ಈ ವರುಷವೂ ಫೋಟೋ ಕ್ಲಿಕ್ಕಿಸಬೇಕಾದ ಸ್ಥಿತಿ. ಗಿಡ ನೆಡುವ ವ್ಯಕ್ತಿ ಮತ್ತು ಗಿಡಗಳು ಮಾತ್ರ ಬದಲಾಗಿರುತ್ತದೆ. ಅಧಿಕಾರಿಗಳು, ನೆಲ, ಹೊಂಡ ಎಲ್ಲವೂ ಹಳೆಯದೆ. ಮರುದಿವಸ ಪತ್ರಿಕೆಗಳಲ್ಲಿ ಫೋಟೋ ಬಂದರೆ ಆಯಿತು, ನಿಸರ್ಗ ಹಸಿರುಡುಗೆ ತೊಟ್ಟು ನಗುತ್ತಿರುತ್ತದೆ! ನೆಟ್ಟ ಗಿಡದ ಪಾಲನೆ, ಪೋಷಣೆಗಳು ಕಡತದೊಳಗೆ ಬೆಚ್ಚಗೆ ಮಲಗಿರುತ್ತದೆ. ಅಪರೂಪಕ್ಕೆಂಬಂತೆ ನೆಟ್ಟ ಗಿಡಗಳನ್ನು ಪೋಶಿಸುವ, ಜೋಪಾನವಾಗಿಡುವ, 'ಗಿಡಗಳನ್ನು ನೆಡಿ' ಎಂಬ ಅರಿವನ್ನು ಮೂಡಿಸುವ ಮನಸ್ಸುಗಳು ಇಲಾಖೆಯಲ್ಲಿರುವುದರಿಂದ ಇಷ್ಟಾದರೂ 'ಹಸುರು' ನಳನಳಿಸುತ್ತಿವೆ.

ಜುಲೈ ತಿಂಗಳಲ್ಲಿ ನರ್ಸರಿಗಳು (ಗಿಡಗಳ ಅಂಗಡಿ) ಬಾಗಿಲು ತೆಗೆಯುತ್ತವೆ. ದೂರದೂರಿನಿಂದ ಗಿಡಗಳನ್ನು ತರಿಸುತ್ತವೆ. ಗಿಡಗಳ ಜಾತಕವನ್ನು ಪಟಪಟನೆ ಉದುರಿಸುವ ಯಜಮಾನನ ಕೈಗೆ ನೂರೋ ಇನ್ನೂರೋ ತೆತ್ತು ಗಿಡಗಳನ್ನು ತರುತ್ತೇವೆ. ನೆಡುತ್ತೇವೆ. ಮರೆತುಬಿಡುತ್ತೇವೆ. ಮುಂದಿನ ಜುಲೈ ಬಂದಾಗ ಮತ್ತೆ ನರ್ಸರಿ ನೆನಪಾಗುತ್ತದೆ. ಮತ್ತದೇ ಹುಡುಕಾಟದ ಹುಡುಗಾಟ!

ಗಿಡಗಳನ್ನು ನೆಡುವ ಪ್ರಕ್ರಿಯೆ ಮನೆಯಿಂದ ಆರಂಭವಾಗಬೇಕು. ಅದಕ್ಕಾಗಿ ಮನ ಸಜ್ಜಾಗಬೇಕು. ಪಕ್ಕದ ಮನೆಯವನ ಮುಂದೆ ಸುಭಗನಾಗುವುದಕ್ಕೆ ನಾಲ್ಕಾರು ಗಿಡಗಳನ್ನು ತಂದು ನೆಟ್ಟಲ್ಲಿಗೆ ಹಸಿರು ಪ್ರೀತಿ ಅನಾವರಣವಾಗದು. ನೆಡುವ ಒಂದೊಂದು ಗಿಡದ ಮುಂದೆ 'ನಾಳೆಗಳು' ಕಣ್ಣೆದುರಿಗೆ ಬಂದು ಬದುಕಿಗದು ಪಾಠವಾಗದಿದ್ದರೆ ಮುಂದಿನ ವರುಷ ಮತ್ತೆ ಜುಲೈ ಬಂದು ಬಿಡುತ್ತದೆ. ತಂದ ಬೀಜಗಳು ಕಿಟಕಿಯ ಸಂದಿನಿಂದ ಭೂಮಿಗೆ ಬೀಳಲಿ.

ಈಚೆಗೆ ಕರಾವಳಿಗೆ ಬಂದ ಸಾಲುಮರದ ತಿಮ್ಮಕ್ಕ 'ಗಿಡಗಳನ್ನು ಮಕ್ಕಳಂತೆ ಪೋಷಿಸಿ' ಎಂದು ಹೇಳಿದ ಕಿವಿಮಾತಿನಲ್ಲಿ ಪಾಠವಿಲ್ವಾ. ಯಾವುದೇ ಅಪೇಕ್ಷೆಯಿಲ್ಲದೆ ಸಾಲುಮರಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕ ಪ್ರಶಸ್ತಿಗಾಗಿ ಹಪಹಪಿಸಲಿಲ್ಲ. ತನಗೊಂದು ಸೈಟ್ ಕೊಡಿ ಎಂದು ದುಂಬಾಲು ಬಿದ್ದಿಲ್ಲ. 'ತನ್ನೂರಿಗೊಂದು ಹೆರಿಗೆ ಆಸ್ಪತ್ರೆ ಮಾಡಿಸಿಕೊಡಿ' ಎಂದಿರುವುದು ಗ್ರೇಟ್ ಅಲ್ವಾ. ಇಂತಹ ಮನಸ್ಸುಗಳು ರೂಪುಗೊಳ್ಳಬೇಕಾದುದು ಭವಿಷ್ಯ ಭಾರತದ ಪ್ರಥಮಾವಶ್ಯಕತೆ.

ಕೃಷಿಕ ಗೊರಗೋಡಿ ಶ್ಯಾಮ ಭಟ್ ಸಮಾರಂಭವೊಂದರಲ್ಲಿ ಸಿಕ್ಕಿ ಹೇಳಿದ್ದೇನು ಗೊತ್ತೇ, 'ನನ್ನಲ್ಲಿಗೆ ಬರುವ ಚಾರಣಿಗರ ಕೈಗೆ ಒಂದಷ್ಟು ಬೀಜಗಳನ್ನು ಕೊಡುತ್ತೇನೆ. ಇದನ್ನು ಕಾಡಿನಲ್ಲಿ ರಾಚಿಬಿಡಿ ಎಂದು ವಿನಂತಿಸುತ್ತೇನೆ'. ಕಣ್ಣಿಗೆ ಫಕ್ಕನೆ ಕಾಣದ, ಸದ್ದು ಮಾಡದ ಇಂತಹ ಚಿಕ್ಕ ಚಿಕ್ಕ ಪ್ರಯತ್ನಗಳು ಪರಿಸರವನ್ನು ಉಳಿಸಲು ಸಹಕಾರಿ. ಇದೇ ಪ್ರಕೃತಿಗೆ ಕೊಡುವ ಕಾಣ್ಕೆ. ಹಸಿದ ಹಸಿರು ಮನಸ್ಸುಗಳಿಗೆ ಇಂತಹ ಪಾಠಗಳು ಬೇಕಾಗಿವೆ.