Wednesday, September 29, 2010

'ಗುರು'ವಿಗೆ ನಮನ


ಪ್ರತೀ ದಿನ ಒಂದಲ್ಲ ಒಂದು 'ದಿನ' ಇದ್ದೇ ಇದೆ! ದಿನದ ಮಹತ್ವವನ್ನು ಸಾರುವ ಬರಹಗಳು, ಚಿಂತನೆಗಳು ಮಾಧ್ಯಮಗಳಲ್ಲಿ, ವಾಹಿನಿಗಳಲ್ಲಿ ಪ್ರಸಾರವಾಗುತ್ತದೆ. ಅಷ್ಟೊತ್ತಿಗೆ ಮತ್ತೊಂದು ದಿನ ಬಂದೇ ಬಿಡುತ್ತದೆ!

ಇಂದು (ಸೆ.೫) ಶಿಕ್ಷಕರ ದಿನ. ಶಿಕ್ಷಕರೆಂದರೆ ಗುರುಗಳು. ಗುರುವೆಂದರೆ ಬದುಕಿನಲ್ಲಿ ಮಹತ್ತನ್ನು ತೋರುವ ತೋರಿಸುವ ದೀವಿಗೆ. ಆ ದೀವಿಗೆಯಿಂದ ಬದುಕಿನ ಸತ್ಯವನ್ನು ಹುಡುಕುವ ಪ್ರಯತ್ನ. ಇದರಲ್ಲಿ ಸಫಲರಾಗುವವರ ಸಂಖ್ಯೆ ವಿರಳ.

ವಿಫಲತೆ ಯಾಕೆ? ಎಲ್ಲಿ? ಗುರು ತೋರಿದ ದಾರಿಯಲ್ಲಿ ಸಾಗಲು ಬೇಕಾದ ಉಪಾಧಿಗಳ ಕೊರತೆ. ಅದು ಬೇರೆ ಬೇರೆ ರೂಪದಲ್ಲಿ ಪ್ರಕಟವಾಗುತ್ತದೆ. ಬಾಲ್ಯದ ಶಿಕ್ಷಣ ವಿದ್ಯಾರ್ಥಿಯ ಮೂಲ ಅಡಿಗಟ್ಟು. ಅದು ಉರು ಹೊಡೆವ ಶಿಕ್ಷಣವಲ್ಲ. ಗ್ರಹಿಸಿ, ಅನುಷ್ಠಾನಿಸುವ ಶಿಕ್ಷಣ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅವೆಲ್ಲಿವೆ? ಪರೀಕ್ಷೆ ಬರೆದು 'ಎ,ಬಿ.ಸಿ.ಡಿ' ಶ್ರೇಣಿಗಳು ಸಿಕ್ಕರೆ ಸಾರ್ಥಕದ ಕ್ಷಣ!

ಕೀರ್ತಿಶೇಷ ಡಾ.ಶೇಣಿ ಅಜ್ಜ ಒಮ್ಮೆ ಹೇಳಿದ್ದರು - ಅವರಮ್ಮ ಪ್ರತಿನಿತ್ಯ ಸಂಜೆ ಭಾರತ, ರಾಮಾಯಣ, ಭಾಗವತಗಳ ಕಥೆಗಳನ್ನು ಹೇಳುತ್ತಿದ್ದರಂತೆ. ಮಕ್ಕಳೆಲ್ಲಾ ಅವರ ಮುಂದೆ ಕುಳಿತು ಕಥೆಗಳನ್ನು ಆಲಿಸುವುದು. ಹೀಗೆ ಕಥೆಗಳ ಮೂಲಕ ಪುಸ್ತಕವನ್ನು ಓದದೆ ಪುರಾಣಗಳ ಪರಿಚಯ ಬಾಲ್ಯದಲ್ಲೇ ನಮಗಾಗಿತ್ತು. ಅದೇ ಮುಂದೆ ನನ್ನನ್ನು ಅರ್ಥಧಾರಿಯನ್ನಾಗಿ ರೂಪಿಸಿತ್ತು.

ಕಥಾಶ್ರವಣ ಬದುಕಿನಿಂದ ಅಜ್ಞಾತವಾಗಿದೆ. ಅಜ್ಜಿಯಂದಿರೇ ಇಲ್ಲದ ಮೇಲೆ ಕಥೆ ಎಲ್ಲಿಂದ ಅಲ್ವಾ! ಕತೆ ಕೇಳುವುದು ಬೇಡವಪ್ಪಾ, ಓದೋಣವೇ? ಆ ಹೊತ್ತಿಗೆ ಆಕಳಿಕೆ ಸುನಾಮಿಯಂತೆ ಅಟ್ಟಿಸಿಕೊಂಡು ಬರುತ್ತದೆ. ಅಕ್ಷರಗಳೆಲ್ಲಾ ಮಯಮಯವಾಗಿ ಕಾಣುತ್ತದೆ.
ಮಕ್ಕಳು ಟಿವಿಯ ದಾಸರಾದರಪ್ಪಾ ಅಂತ ಹಿರಿಯರು ಗೊಣಗಾಟ. ಅವನು ಸೀರಿಯಲ್ ನೋಡದೆ ಊಟ ಮಾಡದು ಎಂಬ ಅಮ್ಮನ ಆಕ್ಷೇಪ. ಅವಳಿಗೆ ಝೀ ಟೀವಿಯೇ ಆಗಬೇಕು ಎನ್ನುವ ಅಪ್ಪ. ಹೀಗೆ ಟಿವಿಯ ಸುತ್ತವೇ ಗಿರಕಿ ಹೊಡೆವ ಚಿಂತನೆ. ಮಗುವನ್ನು ಇಷ್ಟೆಲ್ಲಾ ಆಕ್ಷೇಪ ಮಾಡುವ ಅಪ್ಪಾಮ್ಮಂದಿರಿಗೆ ಸೀರಿಯಲ್ ಎಲ್ಲಾದರೂ ಕಳೆದು ಹೋಯಿತೆಂದರೆ ಗುಡುಗು, ಸಿಡಿಲು! ಇಲ್ಲಿ ಯಾರ ಪರ ವಕಾಲತ್ತು ಮಾಡೋಣ, ಮಗುವಿನ ಮೇಲೋ, ಅಪ್ಪಾಮ್ಮನ ಮೇಲೋ?

ಮಗುವಿನ ಭವಿಷ್ಯದ ಅಡಿಕಟ್ಟು ರೂಪಿತವಾಗುವುದು ಬಾಲ್ಯಶಿಕ್ಷಣದಿಂದ ತಾನೆ. ಇದು ಶಾಲೆಯಲ್ಲೇ ಸಿಗಬೇಕು ಎನ್ನುವ ಹಠ ಒಂದೆಡೆ. ಶಾಲೆಯಲ್ಲಿ ನಿಗದಿಪಡಿಸಿದ ಪಠ್ಯವನ್ನು ಹೊರತು ಪಡಿಸಿ ಬೇರೇನನ್ನು ನಿರೀಕ್ಷಿಸೋಣ. ಅದು ಸರಕಾರಿ ಕೃಪಾಪೋಶಿತ ಪಠ್ಯ. ಮಗುವಿನ ಶಿಕ್ಷಣಕ್ಕೆ ಪೋಷಕವಾಗುವ ವಾತಾವರಣ ಮನೆಯಲ್ಲಿ ರೂಪಿತವಾಗದಿದ್ದರೆ ಗುರು ತೋರಿದ ದಾರಿ ವಿದ್ಯಾರ್ಥಿಗೆ ಮಯಮಯವಾಗಿ ಕಂಡೀತು.

ಇಷ್ಟನ್ನು ಹೇಳುವಾಗ ನನ್ನ ಪ್ರಾಥಮಿಕ ಶಾಲಾ ದಿನಗಳು ಅಸ್ಪಷ್ಟವಾಗಿ ನೆನಪಾಗುತ್ತದೆ. ಅದು ಚಿಕ್ಕ ಹಳ್ಳಿ ಶಾಲೆ. ಗೋದಾಮಿನಂತಿರುವ ಚಿಕ್ಕ ಕಟ್ಟಡ. ಕೋಣೆಯೊಳಗೆ ಒಂದರಿಂದ ನಾಲ್ಕು ತರಗತಿಗಳು. ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಜವಾಬ್ದಾರಿ.

ಶಾಲೆಗೆ ಕಾಂಕ್ರಿಟ್ ಆವರಣವಿಲ್ಲ. ಶಾಲಾ ಕಟ್ಟಡದ ಸುತ್ತ ಚಿಕ್ಕ-ಚೊಕ್ಕ ಹೂದೋಟ. ಅದಕ್ಕೆ ಬಿದಿರಿನ ಬೇಲಿ. ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳಲ್ಲಿ ಕೆಲವು ಸೊಂಟತ್ರಾಣಿಗಳನ್ನು ಸನಿಹದ ಕಾಡಿಗೆ ಅಟ್ಟಿ, ಬಿದಿರಿನ ಮುಳ್ಳನ್ನು ತರುವಂತೆ ಅಧ್ಯಾಪಕರು ಸೂಚಿಸುತ್ತಿದ್ದರು. ಬೇಲಿಗೆ ಆಧಾರವಾಗಿ ಬೇಕಾಗುವ ಗೂಟಗಳನ್ನು ಆಯಲು ಇನ್ನೊಂದಿಷ್ಟು ಮಂದಿ. ಗಿಡಗಳ ಬುಡಕ್ಕೆ ಬೇಕಾಗುವ ಸೊಪ್ಪು, ಗೊಬ್ಬರದ ಹೊಣೆ ಬಡಕಲು ದೇಹದವರಿಗೆ! ಈ ಪಂಕ್ತಿಯಲ್ಲಿ ನಾನೂ ಇದ್ದೆ!

ವಿವಿಧ ತಂಡಗಳಾಗಿ ಹೋದ ವಿದ್ಯಾರ್ಥಿಗಳ ಶ್ರಮದ ಫಲವಾಗಿ ಹೂದೋಟಕ್ಕೆ ಚೊಕ್ಕದಾದ ಬೇಲಿ ತಯಾರಾಗುತ್ತಿತ್ತು. ಇದು ಸುಮಾರು ನಾಲ್ಕು ದಶಕದ ಹಿಂದಿನ ಸ್ಥಿತಿ. ಬೇಲಿಯೂ ತಯಾರಾಗಬೇಕು. ಜೊತೆಗೆ ಮಕ್ಕಳಿಗೂ ನೇರ ಶಿಕ್ಷಣ ಸಿಗುವಂತಿರಬೇಕು ಎಂಬ ಆಶಯ. (ಶಾಲೆಗೆ ಆರ್ಥಿಕ ದುಃಸ್ಥಿತಿಯಿಲ್ಲ) ನಾಲ್ಕು ದಶಕದ ಹಿಂದಿನ ಆ ಪರೋಕ್ಷ ಶಿಕ್ಷಣವನ್ನು 2010ರಲ್ಲಿ ನಾವು ಹೇಗೆ ಆಲೋಚಿಸಿಯೇವು - 'ಛೇ.. ಶಾಲೆಗೆ ಫೀಸ್ ಕೊಡುವುದಿಲ್ವಾ. ನಿಜಕ್ಕೂ ಮಕ್ಕಳನ್ನು ಈ ರೀತಿ ಶೋಷಿಸಬಾರದಪ್ಪಾ' ಎನ್ನುತ್ತೇವೆ. ಆದರೆ ಆ ಕಾಲಘಟ್ಟದಲ್ಲಿ ಯಾವೊಬ್ಬ ಹೆತ್ತವರೂ ಈ ರೀತಿ ಯೋಚಿಸಲಿಲ್ಲ.

ಇದು ಬೇಲಿಯ ಕತೆಯಾದರೆ ಶಾಲಾ ಕ್ರೀಡೋತ್ಸವ, ಶಾರದಾ ಪೂಜೆ, ರಾಷ್ಟ್ರೀಯ ಹಬ್ಬಗಳಂದು ಎಲ್ಲಾ ಮಕ್ಕಳಿಗೂ ಸಂಭ್ರಮ. ಮೆರವಣಿಗೆ ಮೂಲಕ ರಾಷ್ಟ್ರನಾಯಕರ, ದೇಶದ ಕುರಿತಾದ ಗುಣಗಾನ. ಶುಚಿಯಿಂದ ತೊಡಗಿ, ಕಾರ್ಯಕ್ರಮವನ್ನು ನಡೆಸಿಕೊಳ್ಳುವಲ್ಲಿಯ ತನಕದ ಸಮಸ್ತ ಕೆಲಸಗಳನ್ನು ವಿದ್ಯಾರ್ಥಿಗಳು ಮಾಡುತ್ತಿದ್ದರು.

ಆಗ ಅಧ್ಯಾಪಕರಾಗಿದ್ದ ನಾರಾಯಣ ಮಾಸ್ತರರು (ಅವರು ಟೊಪ್ಪಿ ಧರಿಸುತ್ತಿದ್ದುದರಿಂದ ಟೊಪ್ಪಿ ಮಾಸ್ತರೆಂದೇ ಖ್ಯಾತಿ) ನಮ್ಮ ಮನೆಗೆ ಬಂದಿದ್ದಾಗ ಹೇಳಿದ ಮಾತನ್ನು ಅಪ್ಪ ಆಗಾಗ್ಗೆ ಜ್ಞಾಪಿಸಿಕೊಳ್ಳುತ್ತಿದ್ದರು - ಮಕ್ಕಳಿಗೆ ಪಾಠ ಬಾಯಿಪಾಠ ಮಾಡಿದ್ದರಿಂದ ಏನೂ ಪ್ರಯೋಜನವಿಲ್ಲ. ಮಾರ್ಕ್ ಸಿಗಬಹುದಷ್ಟೇ. ಪಾಠಪಠ್ಯದೊಂದಿಗೆ ದುಡಿಯುವ ಶಿಕ್ಷಣವನ್ನು ಶಾಲೆಯಲ್ಲಿ ನೀಡಬೇಕು.' ಟೊಪ್ಪಿ ಮಾಸ್ತರರು ಹೇಳಿದ ಅನುಭವದ ಪಾಠ ಈಗಿನ ಶಿಕ್ಷಣಕ್ಕೆ ಅಗತ್ಯವಾಗಿ ಬೇಕಾದಂತಹ ಸರಕು.

ಗುರು ತೋರಿದ ಕೈದೀವಿಗೆಯಲ್ಲಿ ನಮ್ಮ ಪಾತ್ರಕ್ಕೆ ನಿಲುಕುವಷ್ಟು ಮಾತ್ರ ಬೆಳಕು ಸಿಗಬಲ್ಲುದು. ಹೆಚ್ಚು ಬೆಳಕು ಬೀರಲು ಸಹಾಯಕವಾಗುವ ಸಂಪನ್ಮೂಲಗಳನ್ನು ಬಾಚಿಕೊಳ್ಳಲು ಸಮರ್ಥರಾದರೆ ಅದೇ 'ಗುರು'ವಿಗೆ ಸಲ್ಲಿಸುವ ಪ್ರಣಾಮಗಳು.
ಆಧುನಿಕ ಶಿಕ್ಷಣವೇ ಮೇಲು, ಹಿಂದಿನ ಶಿಕ್ಷಣ ವ್ಯವಸ್ಥೆಗಳೆಲ್ಲಾ ಅರ್ಥಶೂನ್ಯ ಎಂದು ಒಂದೇ ಉಸಿರಿಗೆ ಅಡ್ಡಮಾತಾಡುತ್ತೇವೆಲ್ಲಾ, ಆ ಹೊತ್ತಿಗೆ ಕೈಗೆ ಬರುವುದು ಕಂಪ್ಯೂ 'ಮೌಸ್' ಮಾತ್ರ!

Saturday, September 25, 2010

ದೆಹಲಿಯೆಂಬ ಬೆರಗು

* ಶಿವರಾಂ ಪೈಲೂರು, ದೆಹಲಿ

ರಾಜಧಾನಿಯಲ್ಲಿ ಒಂದೇ ಸಮನೆ ಸುರಿಯುತ್ತಿದ್ದ ಮಳೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಯಮುನೆ, ತಾಸುಗಟ್ಟಲೆ ಟ್ರಾಫಿಕ್ ಜಾಮ್. ಸುತ್ತೆಲ್ಲ ಡೆಂಘಿ, ಚಿಕೂನ್ ಗುನ್ಯಾ, ಜತೆಗೆ ಕಣ್ಣುಜ್ವರ.

ಕಾಮನ್ವೆಲ್ತ್ ಮುಖ್ಯ ಸ್ಟೇಡಿಯಂ ಎದುರು ನಿರ್ಮಾಣಗೊಳ್ಳುತ್ತಿದ್ದ ಕಾಲ್ಸೇತುವೆ ಮುರಿದು ಬಿತ್ತು. ಇತ್ತ ಜಾಮಿಯಾ ಮಸೀದಿ ಎದುರು ತೈವಾನಿಗರಿಗೆ ಗುಂಡೇಟು. ಆಕಾಶವೇ ದೆಹಲಿಯ ತಲೆಮೇಲೆ ಬಿತ್ತೋ ಎಂಬಂತಿರುವ ವರದಿಗಳು ಚಾನೆಲ್ಲುಗಳಲ್ಲಿ ಎಡೆಬಿಡದೆ ಪ್ರಸಾರಗೊಳ್ಳುತ್ತಿದ್ದವು. ಒಂದು ಚಾನೆಲ್ ಅಂತೂ ’ಗೇಮ್ಸ್ ರದ್ದುಮಾಡುವುದೊಂದೇ ನಮಗಿರುವ ದಾರಿ; ಇನ್ನೇನು ಗೇಮ್ಸ್ ರದ್ದಾಗಿಯೇ ಬಿಡುತ್ತದೆ’ ಎನ್ನುತ್ತಿತ್ತು. ಮಿಂಚಂಚೆಯಲ್ಲಿ ಜೋಕ್ಸ್ ಮಹಾಪೂರ. ವಿದೇಶಗಳಲ್ಲಿರುವ ನಮ್ಮ ಜನರಿಂದ ಫೇಸ್ ಬುಕ್ ನಲ್ಲಿ ’ಭಾರತದಲ್ಲೇನಾಗುತ್ತಿದೆ?!’ ಎಂಬ ಪ್ರಶ್ನೆಗಳು. ಅದಕ್ಕೆ ಇಲ್ಲಿನವರ ಉತ್ತರ ’ಶೇಮ್ ಶೇಮ್’. ನಮ್ಮದು ಇದೇ ಜಾಯಮಾನ!!’

ಈ ಮಧ್ಯೆ, ಕಾಮನ್ವೆಲ್ತ್ ವಿಲೇಜಿಗೆ ಬಂದ ಮೊದಲ ತಂಡ ಅಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚಿ ಮಾತನಾಡಿದ್ದು ಪತ್ರಿಕೆಯ ಮೂಲೆಯೊಂದರಲ್ಲಿ ಸಣ್ಣದಾಗಿ ಕಾಣಿಸಿಕೊಂಡಿತು. ಅದರ ಬೆನ್ನಲ್ಲೆ ಸೇನಾ ಇಂಜಿನಿಯರುಗಳು ಕಾಲ್ಸೇತುವೆಯನ್ನು ನಾಲ್ಕೇ ದಿನಗಳಲ್ಲಿ ಕಟ್ಟುತ್ತಾರಂತೆ ಎಂಬ ವರದಿಯೂ ಬಂತು. ಎಲಾ ಅಂದುಕೊಂಡೆ.

ಸುಮಾರು ದಿನಗಳ ಬಳಿಕ ಇಂದು ದೆಹಲಿಯಲ್ಲಿ ಬೆಚ್ಚಗಿನ ಬಿಸಿಲು. ನಾನು ಮಧ್ಯಾಹ್ನ ಊಟ ಮುಗಿಸಿದವನೇ ದೆಹಲಿಯೊಳಕ್ಕೆ ನಡೆದುಬಿಟ್ಟೆ. ಕತ್ತಲಾಗಿ ನಸು ಹಳದಿಯ ದೊಡ್ಡ ಚಂದಿರ ಕಾಣಿಸಿಕೊಳ್ಳುವಾಗ ಮಿಂಟೋ ರೋಡಿಗೆ ವಾಪಸಾಗಿ ಬರೆಯಲು ಕೂತಿದ್ದೇನೆ.

ನಾನು ಇಂದು ನೋಡಿದ ದೆಹಲಿ ನಿಜಕ್ಕೂ ಚೇತೋಹಾರಿ. ಎಲ್ಲ ಟೀಕೆಗಳಿಗೂ ಉತ್ತರಿಸುವ ತವಕದಲ್ಲಿ ದೆಹಲಿ ಮೈಗೊಡವಿ ಎದ್ದಿತ್ತು. ಕಾನಾಟ್ ಪ್ಲೇಸಿನ ಎಂಪೋರಿಯಾದ ಎದುರು ಉದ್ದಕ್ಕೂ ಕುಶಲಕರ್ಮಿಗಳು ಬಿದಿರಿನಿಂದ ನಾನಾಬಗೆಯ ರಚನೆಗಳನ್ನು ರೂಪಿಸುತ್ತಿದ್ದರು. ಒಂದೊಂದೂ ವೈಶಿಷ್ಟ್ಯಪೂರ್ಣ. ನಾನು ಅಂತಹ ರಚನೆಗಳನ್ನು ಈ ವರೆಗೆ ನೋಡಿಯೇ ಇಲ್ಲ. ನಾಲ್ಕಾರು ಎಂಪೋರಿಯಂಗಳ ಒಳಹೊಕ್ಕೆ. ಗೇಮ್ಸ್ ಬ್ಯಾಡ್ಜಿನ ಮಂದಿ ಆಗಲೇ ಖರೀದಿಯಲ್ಲಿ ತೊಡಗಿದ್ದರು. ರಾಜಸ್ತಾನದ ಮಳಿಗೆಯಲ್ಲಿ ವಸ್ತ್ರಗಳ ವರ್ಣವೈವಿಧ್ಯ ನೋಡುತ್ತ ಅವರು ಎಷ್ಟೊಂದು ಖುಷಿಪಡುತ್ತಿದ್ದರು!

ಹಾಗೆಯೇ ಸಂಸದ್ ಮಾರ್ಗ ಹಿಡಿದರೆ. ಅದು ಸೈಕಲ್ ಸ್ಪರ್ಧೆಗೆ ಅಣಿಯಾಗುತ್ತಿತ್ತು. ರಸ್ತೆಯ ಎರಡೂ ಬದಿ ಹೊಸದಾಗಿ ಹಾಕಿದ್ದ ಹುಲ್ಲುಹಾಸು ಸಣ್ಣಗೆ ಚಿಗಿತುಕೊಂಡಿತ್ತು. ಒಂದೆಡೆ ಸಾಲಾಗಿ ಬೆಳ್ಳಗಿನ ಡೇರೆಗಳನ್ನು ಜೋಡಿಸುತ್ತಿದ್ದರು. ಅಲ್ಲೇ ಸಮೀಪ ಹೊಚ್ಚ ಹೊಸದಾದ ದೈತ್ಯಾಕಾರದ ಜನರೇಟರುಗಳು. ಕಾಮನ್ವೆಲ್ತ್ ಗೇಮ್ಸ್ ಕಚೇರಿ ಎದುರಿನ ಎಲೆಕ್ಟ್ರಾನಿಕ್ ಫಲಕ
ಕ್ರೀಡಾಕೂಟಕ್ಕೆ ಇನ್ನು ಏಳೇ ದಿನ ಬಾಕಿ ಎಂದು ಸಾರಿ ಹೇಳುತ್ತಿತ್ತು.


ಮುಂದೆ ನಡೆದರೆ ಪಟೇಲ್ ಚೌಕ ಒಪ್ಪವಾಗಿತ್ತು. ಪಾರಿವಾಳಗಳು ತಮ್ಮ ಪಾಡಿಗೆ ತಾವು ಕಾಳು ತಿನ್ನುತ್ತ ಭರ್ರನೆ ಹಾರಿಹೋಗುತ್ತ ಮತ್ತೆ ಕಾಳಿನತ್ತ ಇಳಿದು ಬರುತ್ತಿದ್ದವು. ನಮ್ಮ ಕಚೇರಿ ಎದುರಿನ ರಾಜಮಾರ್ಗ ಶಿಸ್ತಾಗಿ ಗಂಭೀರವಾಗಿತ್ತು. ಮಸೀದಿ ಹಾಗೂ ರೆಡ್ ಕ್ರಾಸ್ ಸೊಸೈಟಿ ಎದುರು ಆಕರ್ಷಕ ವಿನ್ಯಾಸದಲ್ಲಿ ಗಿಡಗಳನ್ನು ನೆಡಲಾಗಿತ್ತು. ಅಲ್ಲಿರುವ ಮೂರ್ನಾಲ್ಕು ಗೂಡಂಗಡಿಗಳು ಹೊಸ ರೂಪದಲ್ಲಿ ಶೋಭಿಸುತ್ತಿದ್ದವು.

ಸಂಜೆಯಾಗುತ್ತ ಇಂಡಿಯಾ ಗೇಟ್ ತಲುಪಿದರೆ ಅಲ್ಲಿ ದೆಹಲಿಗೆ ದೆಹಲಿಯೇ ನೆರೆದಿತ್ತು. ಫೊಟೋ ಸೆಶನ್ನುಗಳು ಬಿರುಸಾಗಿ ನಡೆಯುತ್ತಿದ್ದವು. ಮಕ್ಕಳು, ಹುಡುಗರು, ಹುಡುಗಿಯರು ನಾಳೆದಿನ ಐಸ್ ಕ್ರೀಂ ಸಿಗಲಾರದೋ ಎಂಬಂತೆ ಮುಗಿಬಿದ್ದು ಐಸ್ ಕ್ರೀಂ ಕೊಳ್ಳುತ್ತಿದ್ದರು. ಅಲ್ಲಿ ಅದೇನು ಲವಲವಿಕೆ! ನಾನು ಮನಸ್ಸಿಲ್ಲದ ಮನಸ್ಸಿನಿಂದ ಬಸ್ಸು ಹತ್ತಿದೆ.

ಇಂದಿನ ದೆಹಲಿ ನೋಡಿದರೆ ಉಳಿದಿರುವ ಏಳು ದಿನಗಳಲ್ಲಿ ರಾಜಧಾನಿ ಸಾಕಷ್ಟು ಸುಂದರಗೊಳ್ಳುವುದರಲ್ಲಿ ಸಂದೇಹವೇನೂ ಇಲ್ಲ. ನಾವೆಲ್ಲ ಅಭಿಮಾನಪಟ್ಟುಕೊಳ್ಳುವ ಹಾಗೆ ಗೇಮ್ಸ್ ಸಾಕಾರಗೊಳ್ಳಲಿ ಎಂತ ಹಾರೈಕೆ. ಉದ್ಘಾಟನಾ ಸಮಾರಂಭದಲ್ಲಿ ರೆಹಮಾನ್ ಹಾಡಿಗಾಗಿ ಕಾಯುತ್ತಿದ್ದೇನೆ.

Friday, September 17, 2010

ಗೀಜಗ ಗೂಡಿಗೆ 'ವಿಘ್ನ'!

ಮೋದಕ ತಿನ್ನಲು ಗಣೇಶ ಕಳೆದ ವರುಷ ಬಂದಿದ್ದ. ಈ ವರುಷ ಬಂದಿದ್ದಾನೆ. ಮುಂದಿನ ವರುಷವೂ ಬರುತ್ತಾನೆ. ಮುಂದೆ ಬರುತ್ತಲೇ ಇರುತ್ತಾನೆ. ಆತ ಬರುವಾಗಲಾದರೂ ನಮ್ಮಲ್ಲಿ ಒಂದಷ್ಟು ದಿವಸ ಧಾರ್ಮಿಕ ಪ್ರಜ್ಞೆ ಜಾಗೃತ(!)ವಾಗಿರುತ್ತದಲ್ಲಾ, ಅಷ್ಟೇ ಸಮಾಧಾನ. ಸಂತೃಪ್ತಿ.

ಕುಡ್ಲಕ್ಕೆ ಹೋಗಿದ್ದೆ. ಹನಿಕಡಿಯದ ಮಳೆ. ಕಾರ್ಸ್ಟ್ರೀಟ್ನಲ್ಲಿ ಹಬ್ಬಕ್ಕೆ ಬೇಕಾದ ಪರಿಕರಗಳ ವ್ಯಾಪಾರ ಜೋರಿತ್ತು. ಒಂದೆಡೆ ಸುಮಾರು ಎಪ್ಪತ್ತರ ಅಜ್ಜಿಯೊಬ್ಬರು ರಸ್ತೆಬದಿ ಕೊಡೆಯಡಿಯಲ್ಲಿ ತುಳಸಿ, ಹಿಂಗಾರ, ಕೇದಗೆ, ಗರಿಕೆಯ ಬುಟ್ಟಿಯಿಟ್ಟುಕೊಂಡು ಕುಳಿತಿದ್ದರು. ಆಗಲೋ ಈಗಲೋ ಜನ ಅಜ್ಜಿಯಿಂದ ಖರೀದಿಸುತ್ತಿದ್ದರು.

ಆ ಅಜ್ಜಿ ಕಾರ್ಸ್ಟ್ರೀಟ್ ವಠಾರದಲ್ಲಿ ಕಳೆದ ಮೂವತ್ತು ವರುಷದಿಂದ ವ್ಯಾಪಾರ ಮಾಡುತ್ತಾರೆ. ಗಣೇಶನ ಹಬ್ಬ, ಅಷ್ಟಮಿ, ನವರಾತ್ರಿ ಸಮಯದಲ್ಲಿ ಭರ್ಜರಿ ವ್ಯಾಪಾರ. ಗರಿಕೆಯಂತಹ ಅಪರೂಪದ ವಸ್ತುಗಳು ಬೇರೆಡೆ ಸಿಗುತ್ತಿಲ್ಲ. ಅದು ಅಜ್ಜಿಯಲ್ಲಿ ಸಿಗುತ್ತದೆಂದು ಗೊತ್ತಿದ್ದವರಿಗೆ ಗೊತ್ತು. ಹಾಗಾಗಿ ಹುಡುಕಿ ಬರುವ ಅಜ್ಞಾತ ಗ್ರಾಹಕರು ಅಜ್ಜಿಯ ಅಸ್ತಿ.

ಅಜ್ಜಿಯ ಮಕ್ಕಳೆಲ್ಲಾ ಐದಂಕೆ ಎಣಿಸುವ ಉದ್ಯೋಗದಲ್ಲಿದ್ದಾರೆ. ಈ ವ್ಯಾಪಾರ ಅಜ್ಜಿಗೆ ಹೊಟ್ಟೆಪಾಡಲ್ಲ. ಮಳೆ ಬರುತ್ತಿದ್ದಾಗ ಬಿಸಿಬಿಸಿ ಕಾಫಿ ಹೀರುತ್ತಾ ಹಾಯಾಗಿ ಮನೆಯಲ್ಲಿರಬಹುದಿತ್ತು. ಅಜ್ಜಿಯ ಪಾಲಿಗೆ ಇದು ದೇವರ ಸೇವೆ. 'ಎಷ್ಟೋ ವರುಷದಿಂದ ಸಾಕಷ್ಟು ಮಂದಿಗೆ ತುಳಸಿ, ಕೇದಗೆ, ಗರಿಕೆ ಒದಗಿಸಿದ್ದೇನೆ. ನನ್ನನ್ನೇ ನಂಬಿದವರು ಅದೆಷ್ಟೋ ಮಂದಿ. ಅವರಿಗೆ ಮೋಸ ಮಾಡಿದಂತೆ ಆಗುತ್ತದೆ' ಎಂದರು.

ಅಜ್ಜಿಯ ವ್ಯಾಪಾರ ಇಲ್ಲದಿದ್ದರೆ, ಅವರಲ್ಲಿಗೆ ಬರುವ ಗ್ರಾಹಕರು ಬೇರೆಡೆ ಹೋಗ್ತಾರೆ ಎಂಬುದು ಬೇರೆ ಮಾತು. 'ನಂಬಿದವರಿಗೆ ತೊಂದರೆಯಾಗಬಾರದು' ಎಂಬ ಅಜ್ಜಿಯ ನಂಬುಗೆ' ಇದೆಯಲ್ಲಾ, ಇದಕ್ಕಿಂತ ದೊಡ್ಡ ಪೂಜೆ ಬೇರಿಲ್ಲ. ತನ್ನಿಂದ ಒಯ್ದ ತುಳಸಿ, ಪುಷ್ಪಗಳು ದೇವರ ಮುಡಿಗೆ ಸೇರುತ್ತದಲ್ಲಾ, ಆ ಪುಣ್ಯ ನನಗೆ ಸಾಕು ಎಂದು ಬಾಯಿ ತುಂಬಾ ನಕ್ಕು, ನಶ್ಯ ಬುರುಡೆ ಕೈಗಿತ್ತು, 'ಬರ್ಸ ಜೋರುಂಡು, ಒಯ್ಪುಲೆ' ಎನ್ನಬೇಕೇ! ನಯವಾಗಿ ತಿರಸ್ಕರಿಸಿದೆ.

ರಂಗುರಂಗಿನ ಬಣ್ಣಗಳ-ಭರಾಟೆಗಳ ಮಧ್ಯೆ ಅಜ್ಜಿಯಂತಹ ಮನಸ್ಸುಗಳು, ನಂಬುಗೆಗಳು ಪ್ರಕಟವಾಗುವುದಿಲ್ಲ. ನೋಟುಗಳ ಮೇಲೆ ಭವಿಷ್ಯ ಬರೆವ ಕಾಲಘಟ್ಟದಲ್ಲಿ ಕಳೆದ ಕಾಲದ ಕಥನಗಳಿಗೆ ಇಂತಹ ಅಜ್ಜಿಯಂದಿರು ಅಲ್ಲಲ್ಲಿ ಸಿಗ್ತಾರೆ. ಇವರೆಲ್ಲಾ ಭೂತಕಾಲದ ಯಶದ ರೂವಾರಿಗಳು.

ಅಜ್ಜಿಯನ್ನು ಜ್ಞಾಪಿಸಿಕೊಳ್ಳುತ್ತಿದ್ದಂತೆ, ದೂರದ ಧಾರವಾಡದಿಂದ ಮಾಧ್ಯಮ ಮಿತ್ರ ಹರ್ಷವರ್ಧನ ಶೀಲವಂತ ಮಿಂಚಂಚೆ ಕಳುಹಿಸಿದ್ದರು. 'ಧಾರವಾಡದಲ್ಲಿ ಗಣಪನ ಮೂರ್ತಿಗಳೆಲ್ಲಾ ಈ ವರುಷ ಸಾವಯವವಾಗಿದ. ಅಂದರೆ ರಾಸಾಯನಿಕ ಬಣ್ಣಗಳಿಂದ ಮುಕ್ತವಾಗಿವೆ' ಎಂದರು.

ಸುಮಾರು ನೂರೈವತ್ತಕ್ಕೂ ಮಿಕ್ಕಿ ಚಿಕ್ಕ-ದೊಡ್ಡ ಗಣಪನ ಮೂರ್ತಿಗಳು ನೈಸರ್ಗಿಕ ಬಣ್ಣಗಳಿಂದ ರೂಪಿಸಲಾಗಿದೆ. ಪರಿಣಾಮ, ಮೂರ್ತಿ ವಿಸರ್ಜನೆ ಮಾಡಿದ ಕೆರೆ ಬಾವಿಗಳು ವಿಷದಿಂದ ಮುಕ್ತ. ಈ ಆಂದೋಳನಕ್ಕೆ ಅಲ್ಲಿನ ಸಮಾನಾಸಕ್ತ ಮನಸ್ಸುಗಳು ಒಂದಾಗಿವೆ. ಜನರಲ್ಲಿ ಅರಿವನ್ನು ಮೂಡಿಸುವ ಕೆಲಸ ಮಾಡಿದೆ. ಕರಪತ್ರಗಳ ಮುಲಕ, ಪತ್ರಿಕಾ ಬರೆಹಗಳ ಮೂಲಕ, ಮನೆಮನೆಭೇಟಿ ಮೂಲಕ ಜನರಲ್ಲಿ ರಾಸಾಯನಿಕದ ಕುರಿತಾದ ತೊಂದರೆಯನ್ನು ವಿಷದೀಕರಿಸಿದೆ. ಇದರಿಂದಾಗಿ ಶೇ.50ಕ್ಕೂ ಮಿಕ್ಕಿ ತಂತಮ್ಮ ಮನೆಗಳಲ್ಲಿ ಆರಾಧನೆಗಿಡುವ ಗಣಪನಿಗೆ ನೈಸರ್ಗಿಕ ಬಣ್ಣವನ್ನು ಆರಿಸಿಕೊಂಡಿದ್ದಾರಂತೆ.

ಈ ಸಂತೋಷದ ನಡುವೆ ಬೇಸರದ ಘಟನೆಯನ್ನೂ ಹೇಳಿದ್ದರು. ಅಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಗಣೇಶನನನ್ನು ಅಲಂಕಾರ ಮಾಡುವಾಗ ಹೂಗಳ ಜತೆ, ಗೀಜಗ ಹಕ್ಕಿಯ ಗೂಡು ಬಳಸುತ್ತಾರೆ. ಇದೊಂದು ಸಂಪ್ರದಾಯವಾಗಿಬಿಟ್ಟಿದೆ. ಬೇಡಿಕೆಯಿದ್ದರೆ ಮಾರುಕಟ್ಟೆಯಲ್ಲಿ ಮಾರುವವರೂ ಇದ್ದಾರೆನ್ನಿ.

ಗೀಜಗದ ಹಕ್ಕಿನ ಒಣಗಿದ ಗೂಡಿಗಿಂತ ಹಸಿ ಗೂಡಿಗೆ ಹೆಚ್ಚು ಬೇಡಿಕೆ. ಜನರ ಮರ್ಮವನ್ನರಿತ ವ್ಯಾಪಾರೀ ಹೊಂತಕಾರಿಗಳಿಗೆ ಮತ್ತೇನು ಕೆಲಸ - ಮರ, ಪೊಟರೆ, ಪೊದರು, ಪಾಳುಬಾವಿ, ಕೆರೆಬದುಗಳಲ್ಲೆಲ್ಲಾ ಜಾಲಾಟ. ಗೂಡಿನಲ್ಲಿದ್ದ ಮರಿ, ಮೊಟ್ಟೆ ಯಾವುದನ್ನೂ ಲೆಕ್ಕಿಸದೆ ನಾಶ ಮಾಡಿ, ಸಿಗುವ ರೊಕ್ಕದ ನಿರೀಕ್ಷೆಯಲ್ಲಿ ಆಯ್ದು ತರುತ್ತಾರೆ. ಪ್ರತೀವರುಷ ಏನಿಲ್ಲವೆಂದರೂ ಎರಡುಸಾವಿರಕ್ಕಿಂತ ಹೆಚ್ಚಿನ ಹಸಿ ಗೂಡುಗಳು ಮಾರಾಟವಾಗುತ್ತವಂತೆ.

ಮಾರಾಟಗಾರರಿಗೆ ಏನೋ ಕಾಸು ಕಿಸೆಗೆ ಸೇರಿತು. ಗಣೇಶನ ಅಲಂಕಾರವೂ ಭರ್ಜರಿಯಾಗಿಯೇ ಆಯಿತೆನ್ನಿ. ಗಣೇಶೋತ್ಸವವೂ ಮುಗಿಯಿತು. ಆದರೆ ಹಸಿ ಗೂಡನ್ನು ಆರಿಸುವಾಗ ಅದರೊಳಗೆ ಬೆಚ್ಚನೆ ಕಾವು ಕೊಡುತ್ತಿದ್ದ, ಹಾರಲಾರದ ಕಂದಮ್ಮಗಳಿಗೆ ಗುಟುಕು ನೀಡುತ್ತಿದ್ದ ತಾಯಿಹಕ್ಕಿಯ ರೋದನವು ಕಾಂಚಣದ ಮುಂದೆ ಕುರುಡು-ಕಿವುಡು. ಹಬ್ಬದ ಅಲಂಕಾರದ ಹಿನ್ನೆಲೆಯಲ್ಲಿ ಎಷ್ಟೊಂದು ಗೂಡು, ಅದರೊಳಗಿದ್ದ ಮೊಟ್ಟೆಗಳು, ಎಷ್ಟೊಂದು ಮರಿಹಕ್ಕಿಗಳ ನಾಶ! ಜೀವವೈವಿಧ್ಯದ ಕೊಂಡಿ ಸಡಿಲವಾಗುತ್ತಿರುವುದು ನಿಜಕ್ಕೂ ಗಣೇಶನಿಗೆ ಖುಷಿ ತಾರದ ವಿಚಾರ.

ಈ ವರುಷ ಪಕ್ಷಿ, ಪರಿಸರ ಪ್ರಿಯರ ಹೋರಾಟ ಫಲಕೊಟ್ಟಿದೆ. ಗೀಜಗನ ಗೂಡು ಮಾರಾಟ ಮಾಡುವ ಯಾರೇ ಆಗಲಿ, ಅವರ ಸುಳಿವು ಸಿಕ್ಕರೆ ಅರಣ್ಯ ಇಲಾಖೆ, ಪೋಲೀಸ್ ಇಲಾಖೆಗೆ ದೂರು ನೀಡಬಹುದೆಂದು ವರಿಷ್ಠರು ತಿಳಿಸಿದ್ದಾರಂತೆ. 'ಈ ಸಲ ಗೀಜಗನ ಗೂಡಿಲ್ಲದೆ ಹಬ್ಬದ ಆಚರಣೆಯಾಗ್ತದೋ ನೋಡಬೇಕು' ಎನ್ನುತ್ತಾರೆ ಹರ್ಷ. ಬಹುಶಃ ಎಂದೋ ಯಾರೋ ಗೂಡನ್ನಿಟ್ಟು ಗಣೇಶನಿಗೆ ಅಲಂಕಾರ ಮಾಡಿರಬೇಕು. ಅದೇ ಮುಂದೆ ಪರಂಪರೆಯಾಗಿ ಬಂತು. ಶ್ರಾದ್ಧದಲ್ಲಿ ಬೆಕ್ಕು ಹಿಡಿದು ಬಂಧಿಸಿದ ಹಾಗೆ!

ಒಂದೆಡೆ 'ಭರ್ಜರಿ-ಬರೋಬ್ಬರಿ' ಉತ್ಸವ' ಮತ್ತೊಂದೆಡೆ ಪರಿಸರ ಕಾಳಜಿ, ಆರೋಗ್ಯ ರಕ್ಷಣೆಯತ್ತ ಮನಮಾಡಿರುವ ಒಳ್ಳೆಯ ಮನಸ್ಸುಗಳ ಕಾಣದ ಕೆಲಸ. ಗಣೇಶನ ರಕ್ಷೆಯಿರುವುದು ಎರಡನೇ ಕೆಲಸಕ್ಕಂತೂ ಖಚಿತ. ಏನಂತೀರಿ?

ಚಿತ್ರ, ಮಾಹಿತಿ: ಹರ್ಷವರ್ಧನ ಶೀಲವಂತ



Wednesday, September 15, 2010

'ಕನ್ನಾಡಿ'ಗೆ ಕನ್ನಾಡಿನ ಅಧ್ಯಯನ ತಂಡ


ಕೇರಳ ಪಾಲಕ್ಕಾಡು ಜಿಲ್ಲೆಯ ಸನಿಹದ ಕನ್ನಾಡಿ ಗ್ರಾಮ ಪಂಚಾಯತ್ ಹಲವು ಚಟುವಟಿಕೆಗಳ ಗೂಡು. ಉತ್ಪಾದಕರಿಂದ ನೆರವಾಗಿ ಗ್ರಾಹಕರಿಗೆ ಹಾಲನ್ನು ವಿತರಿಸುವ ಅಪರೂಪದ ವ್ಯವಸ್ಥೆ. ಮಕ್ಕಳ ಆಹಾರ ತಯರಿ ಘಟಕ, ಹೆಣ್ಮಕ್ಕಳಿಗೆ ಪವರ್ ಹೊಲಿಗೆ ಯಂತ್ರದಲ್ಲಿ ಹೊಲಿಗೆ ತರಬೇತಿ, ನೂಲು ತಯಾರಿ ಘಟಕ, ವೃದ್ಧರಿಗೆ ಹಗಲಾಶ್ರಯದ ಮನೆ.. ಹೀಗೆ ಹಲವು ಜನಪರವಾದ ಕೆಲಸಗಳನ್ನು ಮಾಡುತ್ತಿದೆ.
ಅಡಿಕೆ ಪತ್ರಿಕೆಯು ಅಕ್ಟೋಬರ್ 2009ರ ಸಂಚಿಕೆಯಲ್ಲಿ 'ಕ್ಷೀರೋದ್ಯಮದಲ್ಲೊಂದು ಶಾರ್ಟ್ ಕಟ್ - ಕನ್ನಾಡಿ ಫ್ರೆಶ್' ಎಂಬ ಬರೆಹವನ್ನು ಪ್ರಕಟಿಸಿತ್ತು. ಕನ್ನಾಡಿ ಪಂಚಾಯತಿನ ಕಾರ್ಯವನ್ನು ವೀಕ್ಷಿಸಿಲು ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆಯವರ ನೇತೃತ್ವದಲ್ಲಿ - ಕರ್ನಾಟಕ ಸಾವಯವ ಮಿಶನ್ ಅಧ್ಯಕ್ಷ ಡಾ.ಆ.ಶ್ರೀ.ಆನಂದ್, ರಾಜಶೇಖರ್ ಸಿಂಧೂರ್, ಪೆಲತ್ತಡ್ಕ ಶಿವಸುಬ್ರಹ್ಮಣ್ಯ,, ನಾ. ಕಾರಂತ ಪೆರಾಜೆ - ಇವರನ್ನೊಳಗೊಂಡ ತಂಡವು ಸೆಪ್ಟೆಂಬರ್ ೧೪, ೨೦೧೦ ರಂದು ಕನ್ನಾಡಿಗೆ ಭೇಟಿ ನೀಡಿತ್ತು. ಕನ್ನಾಡಿ ಪಂಚಾಯತ್ ಅಧ್ಯಕ್ಷ ಎಸ್.ರಾಧಾಕೃಷ್ಣನ್, ಕನ್ನಾಡಿ ಫ್ರೆಶ್ಸನ್ನು ಹೆಗಲಿಗೇರಿಸಿಕೊಂಡ ಡಾ.ದಿನೇಶ್ ಮತ್ತು ಸಾವಯವ ಕೃಷಿಕ ನಾರಾಯಣನ್.ಎ. ತಂಡದೊಂದಿಗೆ ಸಾಥ್ ನೀಡಿ ಮಾರ್ಗದರ್ಶನ ನೀಡಿದರು.

ಭೇಟಿಯ ಬಳಿಕ ಡಾ.ಆನಂದರ ಮನದಲ್ಲಿ ಕುಳಿತ ಪ್ರಶ್ನೆ - 'ಕನ್ನಾಡಿನಂತೆ ನಮ್ಮ ಕನ್ನಾಡಿನಲ್ಲೂ ಹಾಲಿನ ಇಂತಹ ವ್ಯವಸ್ಥೆ ಯಾಕೆ ಮಾಡಬಾರದು?'.

Thursday, September 9, 2010

ವಿಷಕಂಠ ಪುತ್ರ ವಿಷಮುಕ್ತ!


ದೇಶವ್ಯಾಪಿ ಗಣೇಶ ಹಬ್ಬ ನಡೆಯುತ್ತಿದೆ. ತಿಂಗಳುಗಟ್ಟಲೆ ಗಣೇಶನ ಆರಾಧನೆ. ಕಲಾವಿದರ ಕೈಚಳಕದಲ್ಲಿ ವಿವಿಧ ವೈವಿಧ್ಯ ಗಣೇಶನ ಮೂರ್ತಿಗಳು ಸಿದ್ಧವಾಗುತ್ತಿವೆ.

ಮೂರ್ತಿ ರಚನೆಗೆ ಆವೆಮಣ್ಣು ಮುಖ್ಯ. ಅಲಂಕಾರಕ್ಕೆ, ಸೌಂದರ್ಯಕ್ಕೆ ಡಿಸ್ಟೆಂಪರ್, ಪೈಂಟ್, ಮೆಟಾಲಿಕ್ ಪುಡಿ, ವಿವಿಧ ಬಗೆಯ ಅಂಟು, ಮಿರುಗುವ ಪುಡಿ.. ಇನ್ನೂ ಏನೇನೋ..? ಪರಿಣಾಮ..? 'ಇದು ಅನಿವಾರ್ಯ' ಎಂದು ಪ್ರತಿಪಾದಿಸುವರೂ ಇಲ್ಲದಿಲ್ಲ.
ಇಲ್ನೋಡಿ. ಇವರು ಧಾರವಾಡದ ಸಾಧನಕೇರಿಯ ಮಂಜುನಾಥ್. ಎಲ್ಲಾ ಕಲಾವಿದರಂತೆ ಇವರೂ ಗಣೇಶನ ಮೂರ್ತಿಯನ್ನು ರಚಿಸುತ್ತಾರೆ! ಮೂರ್ತಿಗೆ ಬಳಸುವ ಬಣ್ಣಗಳನ್ನು ವನಸ್ಪತಿಗಳಿಂದ ತಾವೇ ತಯಾರಿಸಿ ಬಳಸುತ್ತಾರೆ. ಪೂರ್ತಿ ಪರಿಸ್ನೇಹಿ.

ಕುಂಕುಮ ಮತ್ತು ರಕ್ತಚಂದನದಿಂದ 'ಕೆಂಪುಬಣ್ಣ', ಗರಿಕೆ ಹುಲ್ಲು, ನೆಲಬೇವು ಮುಂತಾದ ಹಸಿರು ಎಲೆಗಳಿಂದ 'ಹಸಿರು ಬಣ್ಣ', ಲೋಳೆಸರ ಮತ್ತು ಇದ್ದಿಲು ಬಳಸಿ 'ಕಪ್ಪು ಬಣ್ಣ' ತಯಾರಿ. ಮೂರ್ತಿಯ ಮೈಬಣ್ಣಕ್ಕೆ ಆಶ್ವಗಂಧ, ಶ್ರೀಗಂಧ, ಕೇಸರಿಯ ಬಳಕೆ. ಅಂತೆಯೇ ಇತರ ಬಣ್ಣಗಳು ಕೂಡಾ. 'ಹದಿನೈದು ವನಸ್ಪತಿಗಳಿಂದ ಬಣ್ಣ ತಯಾರಿಸುತ್ತೇನೆ. ಗಣೇಶ ಗರಿಕೆ ಪ್ರಿಯ. ಹಾಗಾಗಿ ಹಸಿರು ಬಣ್ಣಕ್ಕೆ ಗರಿಕೆಯನ್ನೇ ಪ್ರಧಾನವಾಗಿ ಆಯ್ದುಕೊಂಡಿದ್ದೇನೆ. ಔಷಧೀಯ ಗುಣವಿರುವ ಯಾವುದೇ ಹಸಿರೆಲೆಯಿಂದ ಹಸಿರು ಬಣ್ಣ ತಯಾರಿಸುತ್ತೇನೆ' ಎನ್ನುತ್ತಾರೆ ಮಂಜುನಾಥ್.

ಗಣೇಶನ ಆರಾಧನೆ ಮುಗಿದು ನೀರಿನಲ್ಲಿ ಮೂರ್ತಿಯನ್ನು ವಿಸರ್ಜಿಸುತ್ತೇವೆ. ಮೂರ್ತಿಗೆ ಬಳಿದ ಪೈಂಟ್ನಲ್ಲಿರುವ ರಾಸಾಯನಿಕಗಳು ನೀರಿನೊಂದಿಗೆ ಬೆರೆತು ವಿಷಮಯವಾಗುತ್ತದೆ. ಈ ಕುರಿತಾಗಿ 'ಗಣೇಶ ಹಬ್ಬದ ಸಮಯದಲ್ಲಿ' ದೇಶಾದ್ಯಂತ ಕೂಗು ಕೇಳುತ್ತೇವೆ. ಮಂಜುನಾಥರ ಗಣಪತಿಯಲ್ಲಿ ಈ ಆಪಾಯವಿಲ್ಲ.

ವರುಷದ ಹಿಂದೆ ಮಾದರಿಯಾಗಿ ಈ ಪ್ರಯೋಗ ಮಾಡಿದ್ದರು. ಕಳೆದ ಸಲ ಧಾರವಾಡ ಸುತ್ತಮುತ್ತ ಸುಮಾರು ಹದಿನೈದು ಸಾರ್ವಜನಿಕ ಉತ್ಸವಗಳ ಗಣೇಶನನ್ನು 'ಸಾವಯವ'ಗೊಳಿಸಿದ್ದಾರೆ! ಅಂದ್ರೆ ವಿಷರಹಿತಗೊಳಿಸಿದ್ದಾರೆ!

ಮನೆ ಆರಾಧನೆಗೆ ಬಳಸುವ ಸುಮಾರು ಇನ್ನೂರರಷ್ಟು ಸಣ್ಣ ಗಾತ್ರದ ಗಣಪತಿ ಮತ್ತು ಸಾರ್ವಜನಿಕವಾಗಿ ಆಚರಿಸುವ ಐವತ್ತಕ್ಕೂ ಮಿಕ್ಕಿ ದೊಡ್ಡ ಗಾತ್ರದ ಗಣಪತಿಯನ್ನು ಮಂಜುನಾಥ್ ನಿರ್ಮಿಸುತ್ತಾರೆ. 'ಗಣೇಶ ಮೂರ್ತಿಯಲ್ಲಿ ಹೆಚ್ಚು ಸ್ಥಳ ಆವರಿಸುವಷ್ಟು ವಸ್ತ್ರದಿಂದಲೇ ಅಲಂಕಾರ ಮಾಡುತ್ತೇನೆ. ಸ್ಕಿನ್ ಕಾಣುವಲ್ಲಿ ಮಾತ್ರ ಪೈಂಟ್. ಇಡೀ ಮೂರ್ತಿಗೆ ಬಣ್ಣ ಬಳಿಯುವುದಿಲ್ಲ' ಎನ್ನುತ್ತಾರೆ.

ಮನೆಯಲ್ಲಿ ಆರಾಧಿಸುವ ಸಣ್ಣ ಗಾತ್ರದ ಗಣೇಶನನ್ನು ಯಾಕೆ 'ಸಾವಯವ'ಗೊಳಿಸಬಾರದು? ಮಂಜುನಾಥ್ ಹೇಳುತ್ತಾರೆ -'ಮೊದಲಿಗೆ ಮನೆಮಂದಿಗೆ ಪರಿಸರದ ಅರಿವು, ಪ್ರೀತಿ ಬೇಕು ಹಾಗಿದ್ದರೆ ಓಕೆ. ಸಾರ್ವಜನಿಕ ಗಣೇಶೋತ್ಸವದಲ್ಲಾದರೆ ಸಾಕಷ್ಟು ಜನರು ಬರುತ್ತಾರೆ. ವನಸ್ಪತಿಗಳನ್ನು ಬಳಸಿ ತಯಾರಿಸಿದ ಮೂರ್ತಿ ಎಂದು ಪ್ಲೆಕ್ಸಿಗಳನ್ನು ಹಾಕುವುದರಿಂದ ಜನರು ಗಮನಿಸುತ್ತಾರೆ. ಕರಪತ್ರಗಳಿಂದ ಪ್ರಚಾರ ಮಾಡುತ್ತೇನೆ. ಒಟ್ಟಿನಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಹಿಂದಿರುವ ಆಶಯ. ಜತೆಗೆ ಹೊಟ್ಟೆಪಾಡೂ ಕೂಡಾ' ಎನ್ನುತ್ತಾರೆ ಮಂಜುನಾಥ್. ಸ್ಥಳೀಯ 'ಕ್ರಿಯಾಶೀಲ ಗೆಳೆಯರು' ಇವರ ಬೆಂಬಲಕ್ಕಿದ್ದಾರೆ. ಬಹಳಷ್ಟು ಪರಿಸರಪ್ರಿಯರ ಪ್ರೋತ್ಸಾಹವಿದೆ. ಈ ಅರಿವು ಮನೆ ತನಕ ತಲುಪಲು ಗಣೇಶನ ಪ್ರಸಾದದೊಂದಿಗೆ ಕರಪತ್ರವನ್ನೂ ನೀಡುವ ಆಲೋಚನೆಯಲ್ಲಿದ್ದಾರೆ.

ಮಂಜುನಾಥರ 'ವನಸ್ಪತಿ ಗಣಪತಿ' ವಿಗ್ರಹಗಳಿಗೆ ಉಳಿದೆಡೆಗಿಂತ ದರ ಜಾಸ್ತಿ. ಸಣ್ಣವಿಗ್ರಹಕ್ಕೆ 100-200 ರೂಪಾಯಿ ಮತ್ತು ದೊಡ್ಡದಕ್ಕೆ 500-1000ದಷ್ಟು ವ್ಯತ್ಯಾಸ ದರವಿದೆ. 'ಇದಕ್ಕೆ ಕಾರಣ, ವನಸ್ಪತಿಗಳನ್ನು ಸಂಗ್ರಹ ಮಾಡಲು ವೆಚ್ಚವಾಗುತ್ತದೆ. ಗ್ರಹಿಸಿದಾಗ ಸಿಗುವುದಿಲ್ಲ. ಹುಡುಕಾಟ ಹೆಚ್ಚು ಶ್ರಮ ಮತ್ತು ವೆಚ್ಚ ಬೇಡುವಂತಾದ್ದು' ಎನ್ನುತ್ತಾರೆ.

ಅದಕ್ಕೆ ಅವರು ಕೊಡುವ ಸುಲಭೋಪಾಯವೂ ಪರಿಸ್ನೇಹಿ! 'ನೀವು ಗಣೇಶನಿಗೆ ಪ್ರಿಯವಾಗಲಿ ಎನ್ನುತ್ತಾ ಸಾವಿರಾರು ರೂಪಾಯಿಯ ಸುಡುಮದ್ದುಗಳನ್ನು ಸಿಡಿಸುತ್ತೀರಷ್ಟೇ. ಅದನ್ನು ಸ್ವಲ್ಪ ಕಡಿಮೆ ಮಾಡಿ. ಹಾಗೆ ಉಳಿದ ಮೊತ್ತವನ್ನು ವಿಗ್ರಹಕ್ಕೆ ವಿನಿಯೋಗಿಸಿ. ಇದರಿಂದ ಪರಿಸರ ನಾಶವೂ ಕಡಿಮೆಯಾಗುತ್ತದೆ. ಆರೋಗ್ಯಕ್ಕೂ ಹಾನಿಯಿಲ್ಲ'!

ತಮ್ಮ ಮನೆಯಲ್ಲಿ 25-30 ಆಯಿಲ್ ಪೆಯಿಂಟಿಂಗ್ ಗಣೇಶನ ಮೂರ್ತಿಯೊಂದಗೆ ಒಂದು ವನಸ್ಪತಿ ಗಣೇಶನನ್ನೂ ಪ್ರದರ್ಶನಕ್ಕಾಗಿ ಇಟ್ಟಿದ್ದರು. ಜನರು ಲೈಕ್ ಮಾಡಿದ್ದು ವನಸ್ಪತಿ ಗಣೇಶನನ್ನು! 'ಅದರಲ್ಲಿ ಪ್ರಕೃತಿಯ ಜೀವಂತಿಕೆ ಇದೆ' ಎನ್ನುತ್ತಾರೆ ಮಂಜುನಾಥರ ತಂದೆ ಮಲ್ಲಯ್ಯ ಹಿರೇಮಠ್.

ಕೆಲವು ಸರಕಾರಿ ಇಲಾಖೆಗಳು, ಅರಣ್ಯ ಇಲಾಖೆ, ಆರಕ್ಷಕ ಠಾಣೆ, ಜಲಮಂಡಳಿಗಳಲ್ಲಿ ಮಂಜುನಾಥರ 'ವನಸ್ಪತಿ ಗಣಪ'ನ ಆರಾಧನೆ ನಡೆಯುತ್ತಿದೆ. ಜಲಮಂಡಳಿಗಳಂತಹ ಇಲಾಖೆಗಳು ಹೆಚ್ಚು ಮುತುವರ್ಜಿ ವಹಿಸಬೇಕೆಂಬುದು ಇವರ ಅಭಿಲಾಷೆ.