Monday, October 25, 2010

ಕೃಷಿ ಮಾಧ್ಯಮ ಕೇಂದ್ರದ ದಶಮಾನೋತ್ಸವ

ಕಾಮ್ ಫೆಲೋ' ಪ್ರಮಾಣ ಪತ್ರ ವಿತರಣೆ,
ಕಾಮ್ ದಶಮಾನೋತ್ಸವ ಪುರಸ್ಕಾರ ಪ್ರದಾನ, ಪುಸ್ತಕ ಬಿಡುಗಡೆ
ಅಕ್ಟೋಬರ್ 31, 2010 * ಬೆಳಿಗ್ಗೆ ಗಂ.10 * ದೇವವೃಂದ, ಮೂಡಿಗೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ.

ನಮ್ಮೊಂದಿಗೆ-
* ವೈ.ಸಿ.ರುದ್ರಪ್ಪ, ಹಿರಿಯ ಕೃಷಿಕರು, ಯಡೇಹಳ್ಳಿ
* ಎಸ್.ಎಸ್.ಪಾಟೀಲ್, ಸಾವಯವ ಸಾಧಕರು, ಅಥಣಿ
* ನಾಗೇಶ ಹೆಗಡೆ, ಹಿರಿಯ ಪತ್ರಕರ್ತರು, ಬೆಂಗಳೂರು
* ಶ್ರೀ ಪಡ್ರೆ, ಕಾರ್ಯನಿರ್ವಾಹಕ ಸಂಪಾದಕರು, ಅಡಿಕೆ ಪತ್ರಿಕೆ, ಪುತ್ತೂರು.

ಬನ್ನಿ, ನಿಮಗೆ ಪ್ರೀತಿಯ ಸ್ವಾಗತ
ಅನಿತಾ ಪೈಲೂರು, ಅಧ್ಯಕ್ಷೆ, ಕೃಷಿ ಮಾಧ್ಯಮ ಕೇಂದ್ರ
ಕಾಮ್ ದಶಮಾನೋತ್ಸವ ಪುರಸ್ಕಾರ:
* ಹೆಚ್.ಜೆ.ಪದ್ಮರಾಜು ತೋವಿನಕೆರೆ * ಕೆ.ನಾರಾಯಣ ಸ್ವಾಮಿ ಗೌರಿಬಿದನೂರು * ಎಡ್ವರ್ಡ್ ರೆಬೆಲ್ಲೋ ಮೂಡಬಿದಿರೆ * ಮಹೇಶ ದೇಶಪಾಂಡೆ ಗೋಕಾಕ್ * ರೂಪೇಶ್ ರಮೇಶ್ ಕಾಮತ್

ಕಾಮ್ ಫೆಲೋಗಳು:
ರಮಾ ಅರಕಲಗೂಡು * ಕೆ.ಶಶಿಧರ ಹೆಮ್ಮಣ್ಣ * ಕೆ.ವಿ.ಸರಸ್ವತಿ * ಆಶಾಲತಾ ಆರ್.ಕುಲಕರ್ಣಿ * ನಿಂಗದಳ್ಳಿ ಮಲ್ಲಿಕಾರ್ಜುನ * ಪ್ರಮೀಳಾ ಸಿ.ಕೆ. * ಸುರೇಶ್ ನಿ.ಧಾರವಾಡಕರ * ಗಂಗಾ ಅಂಕದ * ಸರವು ಸದಾನಂದ * ಸುಬ್ರಾಯ ಮ. ಹೆಗಡೆ * ಮಧುಮತಿ ದೇ.ಪಾಟೀಲ * ದಿಲೀಪಕುಮಾರ್

ಸಿರಿಧಾನ್ಯ ಕುರಿತ ಲೇಖನಕ್ಕಾಗಿ ಬಹುಮಾನ
* ನಾ. ಕಾರಂತ ಪೆರಾಜೆ * ಜಿ.ಗಣಪತಿ ಭಟ್ * ರವಿ ವಿಶ್ವನಾಥಪುರ

ಬಿಡುಗಡೆಯಾಗಲಿರುವ ಪುಸ್ತಕಗಳು:
* ಚೌಳು ನೆಲದ ಬಂಗಾರ: ಮರೆಯಾಗುತ್ತಿರುವ ಭತ್ತದ ನಾಡಿನ ಭತ್ತ ವೈವಿಧ್ಯ
(ಲೇ: ಮಲ್ಲಿಕಾರ್ಜುನ ಹೊಸಪಾಳ್ಯ)

* ಹಿತ್ತಿಲು : ಕೈತೋಟಕ್ಕೊಂದು ಕೈಪಿಡಿ (ಲೇ: ಅನುಸೂಯಾ ಶರ್ಮ)

ದೇವವೃಂದ ಸಂಪರ್ಕ : ಎಂ.ಜೆ.ದಿನೇಶ್ 9242253960
ಜಯರಾಮ ದೇವವೃಂದ : 9448918687

ಕಾಮ್ ಪರಿಕಲ್ಪನೆಗೆ ದಶಮಾನ

ಕೃಷಿಕಪರ ಪತ್ರಿಕೋದ್ಯಮ - ಎರಡು ದಶಕದ ಈಚೆಗಿನ ಎದ್ದು ಕಾಣಿಸತೊಡಗಿದ ಪರಿಕಲ್ಪನೆ. ಕೃಷಿಯ ಕುರಿತು ವಿಜ್ಞಾನಿಗಳೇ ಬರೆಯಬೇಕು ಎಂದಿದ್ದ ಸ್ಥಿತಿಯನ್ನು ಬದಲಿಸಿ, ರೈತರೂ ತಮ್ಮ ಅನುಭವದ ಮೂಸೆಯಿಂದ ಬರೆಯಬಹುದೆಂದು ಅಡಿಕೆ ಪತ್ರಿಕೆ ತೋರಿಕೊಟ್ಟಿತು. ಈ ಹಾದಿಯಲ್ಲೀಗ ಕೃಷಿ ಮಾಧ್ಯಮ ಕೇಂದ್ರ (ಕಾಮ್ - CAM - Centre for Agricultural Media) ) ದೊಡ್ಡ ಹೆಜ್ಜೆ ಇಟ್ಟಿದೆ. ಮುಖ್ಯವಾಹಿನಿ ಪತ್ರಿಕೆಗಳಿಗೆ 'ಸೆಡ್ಡು ಹೊಡೆಯದೆ' ರೈತರ ದನಿಯಾಗಿ ಪತ್ರಕರ್ತರನ್ನು ರೂಪಿಸುತ್ತಿದೆ.
ಕೃಷಿ ಪತ್ರಿಕೋದ್ಯಮ ಡಿಪ್ಲೊಮಾ
ಕೃಷಿ ಪತ್ರಿಕೋದ್ಯಮ ತರಬೇತಿ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಅನನ್ಯ. ಇಲ್ಲಿ ಸಿದ್ಧ 'ಅಕಾಡೆಮಿಕ್' ಪಠ್ಯಗಳಿಲ್ಲ. ವಿದ್ಯಾರ್ಥಿ ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಬೇಕಿಲ್ಲ. ಅಂಕಪಟ್ಟಿಯಿಲ್ಲ. ವಯಸ್ಸಿನ ಕಟ್ಟುಪಾಡುಗಳಿಲ್ಲ. ಕೇಂದ್ರದ ನಿರ್ದೇಶನಗಳನ್ನು ಅಕ್ಷರಶಃ ಪಾಲಿಸಿದರೆ - 'ಸಚಿವರು ಉತ್ಪಾದನಾ ವೆಚ್ಚ ತಗ್ಗಿಸಲು ಕರೆ ಕೊಟ್ಟರು' ಎಂದು ಬರೆವ 'ಮಾಮೂಲಿ ಪತ್ರಕರ್ತ'ರಿಗಿಂತ ಭಿನ್ನವಾಗಿ ಬರೆಯಬಲ್ಲ ಗಟ್ಟಿತನ ಬಂದುಬಿಡುತ್ತದೆ!
ತರಬೇತಿಗೆ ಮೊದಲು ಆಯ್ಕೆಯ ಪ್ರಕ್ರಿಯೆಯಿದೆ. ಇದಕ್ಕಾಗಿ ವಿದ್ಯಾರ್ಥಿ ಕೃಷಿ/ಗ್ರಾಮೀಣ ಕುರಿತಾದ ಬರೆಹ ಬರೆಯಬೇಕು. ಅದರ ಆಳ-ಎತ್ತರ ಹೊಂದಿ ಆಯ್ಕೆ. ವಶೀಲಿ, ಒತ್ತಡ ತಂತ್ರಗಳಿಗೆ ಎಡೆಯಿಲ್ಲ. ವೆಚ್ಚವನ್ನು ಸರಿದೂಗಿಸಲಷ್ಟೇ ಶುಲ್ಕ. ಒಂದು ವರುಷಕ್ಕೆ ಗರಿಷ್ಠ ಅಂದರೆ ಮೂವತ್ತು ವಿದ್ಯಾರ್ಥಿಗಳು. ಮೆಟ್ರಿಕ್ನಿಂದ ಶುರುವಾಗಿ ಪಿಎಚ್.ಡಿ. ತನಕದ ವಿದ್ಯಾಭ್ಯಾಸ ಹೊಂದಿದ; ಹಾರೆ ಹಿಡಿದು ಕೃಷಿ ಮಾಡುವಲ್ಲಿಂದ ಕೃಷಿರಂಗದಲ್ಲೇ ಪೂರ್ತಿಯಾಗಿ ಇದ್ದೂ ಈ ವರೆಗೆ ಲೇಖನ ಬರೆಯದ ಕೃಷಿ ಅಧಿಕಾರಿಗಳೂ ವಿದ್ಯಾರ್ಥಿಗಳು!
ತರಬೇತಿಯ ಆರಂಭ ನಾಲ್ಕು ದಿವಸಗಳ ಕಾರ್ಯಾಗಾರದ ಮೂಲಕ.
ನಿಮಿಷ ನಿಮಿಷಕ್ಕೂ ಲೆಕ್ಕಣಿಕೆಗೆ ಕೆಲಸ. ಕೃಷಿ/ಗ್ರಾಮೀಣ ಪತ್ರಿಕೋದ್ಯಮದ ಮಹತ್ವ-ಸ್ವರೂಪ, ಬರವಣಿಗೆಯ ತಂತ್ರಗಾರಿಕೆ, ಛಾಯಾ ಪತ್ರಿಕೋದ್ಯಮ, ಕ್ಷೇತ್ರ ಭೇಟಿ, ರೈತರನ್ನು ಸಂದರ್ಶಿಸುವಾಗ ವಹಿಸಬೇಕಾದ ಎಚ್ಚರ ಮೊದಲಾದ ವಿಚಾರಗಳಲ್ಲಿ ಅನುಭವಿಗಳಿಂದ ತಿಳಿವಳಿಕೆ. ಸ್ನೇಹಪೂರ್ಣ ಆದರೆ ಗಂಭೀರ ವಾತಾವರಣ. ಕ್ಲಾಸಿನ ನಂತರವೂ ತರಬೇತಿಯುದ್ದಕ್ಕೂ 'ಮಾತುಕತೆಗೆ ಸಿಗುವ' ಸಂಪನ್ಮೂಲ ವ್ಯಕ್ತಿಗಳು. ಇವರೆಲ್ಲರೂ ಕೃಷಿ ಪತ್ರಿಕೋದ್ಯಮದಲ್ಲಿ ಎದ್ದು ಕಾಣುವ ಹೆಸರುಗಳೇ.
ಸ್ವ-ಮೌಲ್ಯಮಾಪನ
ಎರಡು ದಿವಸ ಕ್ಷೇತ್ರ ಭೇಟಿ. ಅದಕ್ಕೆ ಮುನ್ನ ಭೇಟಿಯಲ್ಲಿ ವಹಿಸಬೇಕಾದ ಎಚ್ಚರದ ಕುರಿತು ಪಾಠ. ಕ್ಷೇತ್ರ ಭೇಟಿಯ ನಂತರ ಲೇಖನ ಬರೆದು ಮರುದಿವಸದ ಸೆಶನ್ ಶುರುವಾಗುವುದರೊಳಗೆ ಒಪ್ಪಿಸಲೇಬೇಕು. ಸಂಪನ್ಮೂಲ ವ್ಯಕ್ತಿಗಳಿಂದ ಮೌಲ್ಯಮಾಪನ. ಶಿಕ್ಷಣ ಸಂಸ್ಥೆಗಳಲ್ಲಿ ಇದ್ದಂತೆ ಕೆಂಪು ಶಾಯಿಯ ಗುರುತು ಹಾಕಿ, ಅಂಕ ಕೊಡುವ ಕ್ರಮವಿಲ್ಲ. ಇದಕ್ಕಾಗಿ ಗುಂಪು ಚರ್ಚೆ. ತಮ್ಮ ಲೇಖನವನ್ನು ತಾವೇ ಓದಿದ ನಂತರ, ಲೇಖನ ಪುಷ್ಟಿಗೊಳಿಸಲು ಬೇಕಾದ ಅಂಶಗಳ ಬಗ್ಗೆ ಇತರ ವಿದ್ಯಾರ್ಥಿ, ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ. ಕೊನೆಗೆ 'ಲೇಖನ ಹೀಗಿರಬೇಕಿತ್ತು' ಎಂಬಲ್ಲಿಗೆ ಮೌಲ್ಯಮಾಪನ ಮುಕ್ತಾಯ.
'ಮೌಲ್ಯಮಾಪನದ ಎರಡನೆ ದಿನಕ್ಕಾಗುವಾಗ ಮೊದಲ ದಿವಸದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಯಿತು' ಎನ್ನುತ್ತಾರೆ ಉಡುಪಿಯ ಶಶಿಧರ ಹೆಮ್ಮಣ್ಣ. ಮೂರು ದಿವಸದ ತರಬೇತಿಯ ನಂತರ, ಅಭ್ಯರ್ಥಿಗಳು ಪ್ರತಿ ತಿಂಗಳು ಒಂದೊಂದು ವಿಚಾರದ ಬಗ್ಗೆ ಲೇಖನ ಬರೆಯಬೇಕು. ಅಂಚೆ ಅಥವಾ ಮಿಂಚಂಚೆ ಮೂಲಕ ರವಾನೆ. ಇದನ್ನು ಕೇಂದ್ರವೇ ಮೌಲ್ಯಮಾಪನ ಮಾಡಿ, ಏನು ಪೂರಕ ಮಾಹಿತಿ ಬೇಕಿತ್ತು, ಎಲ್ಲೆಲ್ಲಿ ತಪ್ಪಿತು, ವಿಷಯದ ಯಾವ ಭಾಗ ಸುಧಾರಣೆಯಾಗಬೇಕು.. ಹೀಗೆ ಲೇಖನದಲ್ಲೇ ತಿದ್ದಿ ಅಭ್ಯರ್ಥಿಗೆ ಮರಳಿಸುತ್ತದೆ. ಸತತ ಎರಡು ತಿಂಗಳು ಅಸೈನ್ಮೆಂಟ್ ಕಳಿಸದ ಅಭ್ಯರ್ಥಿಗಳ ನೊಂದಾವಣೆ ರದ್ದು.
ಸ್ಪೂನ್ ಫೀಡಿಂಗ್!
ಕಾರ್ಯಾಗಾರಕ್ಕೂ ಮೊದಲೇ ವರ್ಷದುದ್ದಕ್ಕೂ ವಹಿಸಬೇಕಾದ ಎಚ್ಚರಗಳನ್ನು ಕಿಟ್ ರೂಪದಲ್ಲಿ ಅಭ್ಯರ್ಥಿಗೆ ನೀಡಲಾಗುತ್ತದೆ. ಪರಿಣಾಮಕಾರಿ ಕೃಷಿಕಪರ ಲೇಖನ ಬರೆಯಲು ಏನೇನು ವಿಚಾರ ಗಮನಿಸಬೇಕು, ಏನು ಮಾಡಬಾರದು, ಲೇಖನ ಬರೆಯುವಾಗ ಮಾರ್ಜಿನ್ ಎಷ್ಟು ಬೇಕು, ಲೇಖನದಲ್ಲಿ ಬರಹಗಾರರ ವಿಳಾಸ ಎಲ್ಲಿರಬೇಕು, ಫೋಟೋದ ಹಿಂದೆ ವಿವರಗಳನ್ನು ಹೇಗೆ ಬರೆಯುವುದು, ಲೇಖನಗಳನ್ನು ಅಂಚೆಗೆ ಹಾಕುವ ಮುನ್ನ ಕವರಿಗೆ ವಿಳಾಸ ಬರೆಯುವುದು ಹೇಗೆ, ಸ್ಟಾಂಪ್ ಎಲ್ಲಿ ಹಚ್ಚಬೇಕು, 'ಇಂದ' ವಿಳಾಸ ಎಲ್ಲಿ ಬರೆಯುವುದು. ಲೇಖನ ಮೂರ್ನಾಲ್ಕು ಪುಟಗಳಿದ್ದರೆ ಅದನ್ನೆಲ್ಲಾ ಜೋಡಿಸುವ ಕುರಿತು ಮಾಹಿತಿಯಿದೆ. ಕಿಟ್ನೊಂದಿಗೆ ಮಾದರಿ ರೂಪದಲ್ಲಿ ಸೂಕ್ತ ಜೆಮ್ ಕ್ಲಿಪ್, ಅಂಟು ಇತ್ಯಾದಿ ಸಾಮಗ್ರಿಗಳನ್ನೂ ಅಭ್ಯರ್ಥಿಗಳಿಗೆ ನೀಡುವಲ್ಲಿಯ ತನಕದ ಕಾಳಜಿ ಕೇಂದ್ರದ್ದು. ಕಿಟ್ನ ಜತೆಗೆ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಬಂದ ಉತ್ತಮ ಕೃಷಿ-ಗ್ರಾಮೀಣ ಲೇಖನಗಳನ್ನೂ ಪರಾಮರ್ಶೆಗಾಗಿ ಕೊಡುತ್ತಾರೆ. ಈ ರೀತಿಯ 'ಸ್ಪೂನ್ ಫೀಡಿಂಗ್' ಪತ್ರಿಕೋದ್ಯಮ ಶಿಕ್ಷಣ ಕ್ಷೇತ್ರದಲ್ಲೇ ಅನನ್ಯ!
'ಇಷ್ಟೆಲ್ಲಾ ವಿವರ ಕೊಟ್ಟರೂ ಹೆಚ್ಚಿನವರೂ ಅದನ್ನು ಓದಿಕೊಂಡು ಬರುವುದಿಲ್ಲ. ಪತ್ರಕರ್ತನಿಗೆ ಓದು ಮುಖ್ಯ' ಎನ್ನುತ್ತಾರೆ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಅಡ್ಡೂರು ಕೃಷ್ಣರಾವ್. ಕೇಂದ್ರ ನೀಡಿದ್ದ ಸೂಚನೆಯನ್ನು ಅಭ್ಯರ್ಥಿ ಎಷ್ಟು ಪಾಲಿಸಿದ್ದಾರೆ, ಬರೆಹ ಎಷ್ಟು ಸುಧಾರಿಸಿದೆ ಎಂಬ ಮಾನದಂಡದಂತೆ 'ಉತ್ತಮ ಅಭ್ಯರ್ಥಿ' ಎಂಬ ಆಯ್ಕೆ. ಇವರಿಗೆ 'ಕಾಮ್ ಫೆಲೋ' ಎಂಬ ಬಿರುದು. ತರಬೇತಿಯ ಕೊನೆಗೆ ಕೆಂದ್ರದ ವಾರ್ಷಿಕೋತ್ಸವ. ಅದರಲ್ಲಿ ಬಿರುದು ಪ್ರದಾನ.
ನಾಗೇಶ ಹೆಗಡೆ, ಆನಂದ ಹೆಚ್.ಎನ್., ಶ್ರೀ ಪಡ್ರೆ, ಶಿವಾನಂದ ಕಳವೆ, ಅಡ್ಡೂರು ಕೃಷ್ಣ ರಾವ್, ಗಾಣಧಾಳು ಶ್ರೀಕಂಠ, ಆನಂದತೀರ್ಥ ಪ್ಯಾಟಿ, ಮಲ್ಲಿಕಾಜರ್ುನ ಹೊಸಪಾಳ್ಯ, ಜಿ. ಕೃಷ್ಣಪ್ರಸಾದ್...ಹೀಗೆ ಕನ್ನಾಡಿನ ಪ್ರಮುಖ ಅಭ್ಯುದಯ ಪತ್ರಕರ್ತರು ಕೇಂದ್ರದ ಸಂಪನ್ಮೂಲ ವ್ಯಕ್ತಿಗಳು.
ಅಕಡೆಮಿಕ್ ಶಿಬಿರಗಳಲ್ಲಿ ತಂತಮ್ಮ 'ಲೆಕ್ಚರ್' ಆದ ನಂತರ ಸಂಪನ್ಮೂಲ ವ್ಯಕ್ತಿಗಳು ತಮ್ಮಷ್ಟಕ್ಕೆ ತೆರಳುತ್ತಾರೆ. ಇಲ್ಲ ಹಾಗಲ್ಲ. ಮೂರೂ ದಿವಸವೂ ಅಭ್ಯರ್ಥಿಗಳೊಂದಿಗೆ ಇರುತ್ತಾರೆ. ಊಟ-ವಸತಿ ಅವರೊಂದಿಗೆ. ಹೀಗಾಗಿ ಪತ್ರಿಕೋದ್ಯಮದ ಕುರಿತಾದ ವಿಚಾರಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶ. ಸಂಪನ್ಮೂಲ ವ್ಯಕ್ತಿಗಳು ಮತ್ತು ಅಭ್ಯರ್ಥಿಗಳ ಮಧ್ಯೆ ಯಾವುದೇ ಅಂತರವಿಲ್ಲ, ಗತ್ತು-ಗೈರತ್ತುಗಳಿಲ್ಲ.
ಕಾಮ್ ಫೆಲೋ!
ಎಪ್ಪತ್ತಕ್ಕೂ ಮಿಕ್ಕಿ 'ಕಾಮ್ ಫೆಲೋ'ಗಳು ಕೃಷಿ ಮಾಧ್ಯಮ ಕೇಂದ್ರದ ದೊಡ್ಡ ಆಸ್ತಿ. ಮುಖ್ಯವಾಹಿನಿಯ ಕೃಷಿ ಪುಟಗಳಲ್ಲಿ ಕೆಲವೊಂದು ಸಲ ಫೆಲೋಗಳ ಬರೆಹಗಳೇ ತುಂಬಿರುವುದು ಯಶಸ್ವೀ ತರಬೇತಿಯ ಫಲ. ಅಡಿಕೆ ಪತ್ರಿಕೆ ಕಾಮ್ ಅಭ್ಯರ್ಥಿಗಳ ಬರೆಹದ ಬೈಲೈನ್ ಜತೆ 'ಕಾಮ್ ಫೆಲೋ' ಅಂತ ಉಲ್ಲೇಖಿಸುವ ಪರಿಪಾಠ ಶುರುಮಾಡಿದೆ. 'ಇದರಿಂದಾಗಿ ಇನ್ನಷ್ಟು ಸ್ಪೂರ್ತಿ ಸಿಗುತ್ತದೆ' ಎನ್ನುತ್ತಾರೆ ಈ ಸಾಲಿನ ಕಾಮ್ ಫೆಲೋ ಪಡೆದ ಬೆಳಗಾವಿಯ ಕೃಷಿ ಅಧಿಕಾರಿ ಲೀಲಾ ಕೌಜಗೇರಿ.
'ಯಾಕೆ ಬರೆಯಬೇಕು, ಯಾರಿಗಾಗಿ ಬರೆಯಬೇಕು ಎಂಬುದನ್ನು ಕಾಮ್ ಕಲಿಸಿಕೊಟ್ಟಿದೆ' ಎಂಬ ಅನುಭವ ಅರುವತ್ತರ ಯೌವನೆ ಅನುಸೂಯಾ ಶರ್ಮಾ ಅವರದು.
ರಾಜ್ಯಮಟ್ಟದ ಪ್ರಶಸ್ತಿ
ಕೃಷಿ-ಗ್ರಾಮೀಣ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಕೇಂದ್ರವು ಪ್ರತೀವರುಷ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಿದೆ. 'ಕೃಷಿಕರ ಅಗತ್ಯಗಳನ್ನಾಧರಿಸಿದ, ಅವರ ನೋವು ನಲಿವುಗಳ ಮೇಲೆ ಬೆಳಕು ಚೆಲ್ಲುವ, ಅವರ ಸಮಸ್ಯೆಗಳ ಬಗ್ಗೆ ಜನಾಭಿಪ್ರಾಯ ಮೂಡಿಸುವ ವಸ್ತುನಿಷ್ಠ ಹಾಗೂ ವಿಚಾರಪೂರ್ಣ ಬರೆಹಗಳು ಕೃಷಿ ಪತ್ರಿಕೋದ್ಯಮವನ್ನು ಸದೃಢಗೊಳಿಸಬೇಕೆಂಬ ಆಶಯದೊಂದಿಗೆ ಪ್ರಶಸ್ತಿ ನೀಡಲಾಗುತ್ತದೆ' ಎನ್ನುತ್ತಾರೆ ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು.
ಇದೀಗ ದೇಶಪಾಂಡೆ ಪೌಂಡೇಶನ್ ನೆರವಿನೊಂದಿಗೆ ಕೇಂದ್ರ ತನ್ನ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತ್ತರಿಸಿದೆ. 'ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ ಸರಣಿ'ಗೆ ಚಾಲನೆ. ವಿವಿಧ ಪತ್ರಿಕೋದ್ಯಮ ವಿಭಾಗಗಳು, ಕೃಷಿ ಸಂಬಂಧಿ ವಿದ್ಯಾಲಯಗಳಲ್ಲಿ ಕಾರ್ಯಾಗಾರ ನಡೆಸುವ ಮೂಲಕ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕುರಿತು ಪ್ರಾಥಮಿಕ ಮಾಹಿತಿ ನೀಡುವುದು ಉದ್ದೇಶ.
ಪ್ರಕಟಣೆಗಳು
ಹತಾಶೆಕವಿದಿರುವ ಒಕ್ಕಲುತನದಲ್ಲಿ ಸ್ಪೂರ್ತಿಯ ಚಿಲುಮೆಗಳಂತಿರುವ ಮೌನ ಸಾಧಕರ ಯಶೋಗಾಥೆಗಳನ್ನು ಪುಸ್ತಕ ರೂಪದಲ್ಲಿ - ಅದರಲ್ಲೂ ಸುಲಭವಾಗಿ ಕೈಗೆಟಕುವ ದರದಲ್ಲಿ ಮುದ್ರಿಸಿ ರೈತರ ಕೈಗಿಡುವತ್ತ ಹೊಸ ಹೆಜ್ಜೆ ಇಟ್ಟಿದೆ. ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ, ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ, ಸಾವಯವದ ಹಾದಿ.. ಹೀಗೆ ಚಿಕ್ಕ ಚೊಕ್ಕ ಪುಸ್ತಕ. ಅಲ್ಲದೆ ಕಾಕೋಳದ ಯಶೋಗಾಥೆ, ನಂದಿ ಹಳ್ಳಿಯ ಉದ್ಯಮಶೀಲ ದಂಪತಿ, ಸಾವಯವ ತಾರಸಿ ತೋಟ, ಜಲನೆಮ್ಮದಿಯತ್ತ ಕಾಕೋಳ ಇತರ ಪ್ರಕಟಣೆಗಳು.
ಕಾಮ್ ಚಟುವಟಿಕೆಗಳ ಮುಖವಾಣಿ 'ಕಾಮ್ ನ್ಯೂಸ್' ಮಾಸಿಕ ಪ್ರಕಟಣೆ. ದಾನಿಗಳ ಸಹಯೋಗ. ಅದರಲ್ಲಿ ಕಾಮ್ ಅಭ್ಯರ್ಥಿಗಳ, ಫೆಲೋಗಳ ಮತ್ತು ಚಟುವಟಿಕೆಗಳ ವರದಿ. ಪತ್ರಿಕೋದ್ಯಮ ತರಬೇತಿಗೆ ನೂರೈವತ್ತಕ್ಕೂ ಮಿಕ್ಕಿ ಪ್ರವೇಶಗಳು ಬರುತ್ತಿವೆ. 'ಬಂದ ಅರ್ಜಿಗಳಲ್ಲಿ 25-30ನ್ನು ಹಿಂಡಿ ತೆಗೆದರೂ ಕೊನೆಯಲ್ಲಿ ಉಳಿಯುವವರು 10-15 ಮಂದಿ ಮಾತ್ರ.
ಕೇಂದ್ರದ ಕೇಂದ್ರಸ್ಥಳ ಧಾರವಾಡ. ಮಾಧ್ಯಮ ಕೇಂದ್ರದ ಸಾರಥ್ಯ ಅನಿತಾ ಪೈಲೂರು. ಆರಂಭದಲ್ಲಿ ಪರ್ಯಾಯ ಕೃಷಿ ಮಾಧ್ಯಮ ಕೇಂದ್ರ ಎಂದಿತ್ತು. ಇತ್ತೀಚೆಗೆ ಹೆಸರು ಹೃಸ್ವವಾಗಿದೆ. ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ಸಂಘಟಕರು ಎದುರು ಕಾಣಿಸಿಕೊಳ್ಳುವುದೇ ಇಲ್ಲ! ನೇಪಥ್ಯದಲ್ಲಿರುತ್ತಾರೆ.
ಸಂಸ್ಥೆ ಈಗ ಹತ್ತರ ಹೊಸ್ತಿಲಲ್ಲಿದೆ. ಅಕ್ಟೋಬರ್ ೩೧ - ಮೂಡಿಗೆರೆ ಸನಿಹದ ದೇವವೃಂದದಲ್ಲಿ ಹತ್ತರ ಸಂಭ್ರಮ ಸಮಾಂಭ ನಡೆಯಲಿದೆ. 'ಕಾಮ್' ಅಜೆಂಡಾದಲ್ಲಿ ಅಮೂರ್ತವಾಗಿರುವ ಕೃಷಿ-ಗ್ರಾಮೀಣ ವಿಚಾರಗಳ ಕುರಿತಾದ ಮನೋಪ್ಯಾಕೇಜ್ನ ಮೂರ್ತತೆಗೆ ಇನ್ನಷ್ಟು ಹೆಗಲುಗಳು ಬೇಕಾಗಿವೆ. ನಮ್ಮ ಪತ್ರಿಕಾ ಸಂಸ್ಥೆಗಳೂ ಈ ಕೆಲಸಕ್ಕೆ ಸಹಕಾರ ಕೊಟ್ಟರೆ ಇನ್ನಷ್ಟು 'ಸಾಮಥ್ರ್ಯವರ್ಧನೆ' ಸಾಧ್ಯವಾಗಬಹುದು.

Wednesday, October 20, 2010

ಮೇಳೈಸಲಿ, 'ರೈತರ ಜ್ಞಾನ - ವಿಜ್ಞಾನಿಯ ಬುದ್ಧಿ'


ಧಾರವಾಡ ಕೃಷಿ ಮೇಳ ಮುಗಿಯಿತು. ಇನ್ನು ಬೆಂಗಳೂರು ಕೃಷಿ ಮೇಳ. ಜತೆಗೆ ಜಿಲ್ಲಾ ಮಟ್ಟದ ಕೃಷಿ ಉತ್ಸವಗಳು. ಕನ್ನಾಡಿನಾದ್ಯಂತ 'ಕೃಷಿ'ಯ ಲೇಬಲ್ನಲ್ಲಿ ನಿರಂತರ ಮೇಳಗಳು ನಡೆಯುತ್ತಲೇ ಇವೆ! ಶ್ಲಾಘನೀಯ.ಇಂತಹ ಮೇಳಗಳಿಗೆ ಎಷ್ಟು ಮಂದಿ 'ಸೇರಿದ್ದರು' ಎಂಬುದೇ ಮಾನದಂಡಗಳಾಗುತ್ತಿವೆ. ಜನ ಸೇರಿಸುವಲ್ಲಿ ಇರುವಂತಹ ಆಸಕ್ತಿ ಹೂರಣದಲ್ಲಿ ಕಾಣುತ್ತಿಲ್ಲ. ಕೃಷಿ ಮೇಳವೊಂದರ ಯಶಸ್ಸು ಅಡಗಿರುವುದು ಹೂರಣದಲ್ಲಿ. ಜನ ಬರ್ತಾರೆ ಬಿಡಿ. ಮೇಳಕ್ಕೂ ಬರ್ತಾರೆ, ಜಾತ್ರೆಗೂ ಬರ್ತಾರೆ!
ಧಾರವಾಡ ಕೃಷಿ ಮೇಳ ಸುತ್ತಾಡಿದಾಗ ನನ್ನನ್ನು ಕಾಡಿದ ವಿಚಾರಗಳು. ನೂರಾರು ಮಳಿಗೆಗಳು. ಗಿಜಿಗುಟ್ಟುವ ಜನಸ್ತೋಮ. ಬಲೂನ್ನಿಂದ ತೊಡಗಿ ದೈತ್ಯ ಯಂತ್ರಗಳ ತನಕ ಮಳಿಗೆಗಳು. ಕೃಷಿಯ ಹೊರತಾದ ಮಳಿಗೆಗಳ ಮುಂದೆ ಕೃಷಿ ಸಂಬಂಧಿ ಮಳಿಗೆಗಳಿಗೆ ಮಸುಕು!
ಕಾರ್ಮಿಕರಿಂದ - ಮಾರುಕಟ್ಟೆ ತನಕದ ಒಂದಲ್ಲ ಒಂದು ಸಮಸ್ಯೆಗಳು ಕೃಷಿಕನನ್ನು ಹೈರಾಣ ಮಾಡುತ್ತಿವೆ. ಪರಿಹಾರಕ್ಕೆ ಸರಕಾರದತ್ತ ನೋಡುವ ಹಾಗಿಲ್ಲ. ಅವರದ್ದೇ ಆದ 'ತಲೆಲೆಕ್ಕ'ದಾಟ! ಕೃಷಿ ಮೇಳದಲ್ಲಿ ಪರಿಹಾರ ಸಿಗುತ್ತೋ ನೋಡೋಣ ಅಂತ ಬಂದಾಗ ಇಲ್ಲೂ ಗೊಂದಲ. ವಿಜ್ಞಾನಿಗಳನ್ನು ಕೇಳೋಣವೋ ಅವರ ಭಾಷೆ ಇವನಿಗೆ ಅರ್ಥವಾಗದು. ಅಂತೂ ಅವರು ಹೇಳಿದ್ದನ್ನು ಏನೋ ಬರಕೊಂಡು ಹೊಲಕ್ಕೆ ಹೋಗಿ ಅನುಷ್ಠಾನ ಮಾಡುವ ಹೊತ್ತಿಗೆ ಲೆಕ್ಕಾಚಾರವೆಲ್ಲಾ ಕೈಕೊಟ್ಟು ಬಿಡುತ್ತದೆ. ಹೀಗಾಗಿ ವಿಜ್ಞಾನಿಗಳ ಸಲಹೆಯೊಂದಿಗೆ 'ಮಾಡಿ ನೋಡಿ ಯಶಸ್ಸಾದ' ರೈತನ ಸಲಹೆಯೂ 'ಹುಡುಕಿ ಹೋಗುವ' ರೈತನಿಗೆ ಸಿಕ್ಕರೆ ಚೆನ್ನಾಗಿರುತ್ತಿತ್ತು.
ಸಬ್ಸಿಡಿ ಭರಾಟೆ
ಯಂತ್ರೋಪಕರಣಗಳಿಗೆ ರೈತೊಲವು ಚೆನ್ನಾಗಿತ್ತು. ಮಿನಿ ಯಂತ್ರಗಳು ಮೇಳದ ಆಕರ್ಷಣೆ. ವಿವಿಧ ಮಿಲ್ಗಳು, ಕೈಗಾಡಿಗಳು, ಹೊಂಡ ತೆಗೆವ, ಕಳೆ ತೆಗೆವ ಯಂತ್ರಗಳ ಸದ್ದಿನೊಂದಿಗೆ ರೈತನ ದನಿಯೂ ಸೇರಿತ್ತು. 'ನಮ್ಮ ಮಿತಿಯಲ್ಲಿ ಯಂತ್ರೋಪಕರಣಗಳು ಕೃಷಿಯಲ್ಲಿ ಬೇಕ್ರಿ. ನಾನು ಕುಣಿ ತೆಗೆವ ಮಿಶನ್ ಪರ್ಚೇಸ್ ಮಾಡ್ದೆ' - ಸಂತಸ ಹಂಚಿಕೊಂಡರು ಹಾವೇರಿಸ ಸಮೀಪದ ಬಸಪ್ಪಶಿವಣ್ಣ.
ಟ್ರಾಕ್ಟರ್ ಮೊದಲಾದ ಆರ್ಥಿಕ ಭಾರದ ಯಂತ್ರಗಳು ಒಂದಷ್ಟು ರೈತರ ಮನಸ್ಸೇಳೆದರೆ; ಚಿಕ್ಕ ಚಿಕ್ಕ ಯಂತ್ರಗಳು, ಸಲಕರಣೆಗಳು, ಸಾಧನಗಳತ್ತ ಹೆಚ್ಚು ಮಂದಿ ಆಸಕ್ತರಾಗಿದ್ದುದು ಕಂಡು ಬಂತು. ಬಹುತೇಕ ಎಲ್ಲಾ ಯಂತ್ರಗಳಲ್ಲೂ 'ಶೇ.50 ರೈತರ ಪಾಲು' ಎಂಬ ಫಲಕ ನಮ್ಮ 'ಸಬ್ಸಿಡಿ' ವ್ಯವಸ್ಥೆಯನ್ನು ಅಣಕಿಸುತ್ತಿತ್ತು.
ಒಂದು ಯಂತ್ರಕ್ಕಿರುವ ನಿಜವಾದ ಬೆಲೆಯನ್ನು ಸಬ್ಸಿಡಿಗಾಗಿ ದುಪ್ಪಟ್ಟುಗೊಳಿಸಿ, 'ಸಬ್ಸಿಡಿ ಪಾಲು, ರೈತನ ಪಾಲು' ಅಂತ ಪಾಲು ವಿಭಾಗಿಸುವ ವ್ಯವಸ್ಥೆಗಳಿವೆಯಲ್ಲಾ, ನಿಜಕ್ಕೂ ಭಾರತಕ್ಕೆ ಇದೊಂದು ಶಾಪ! ಸಬ್ಸಿಡಿ ಫೈಲಿನೊಳಗೆ ಯಂತ್ರಗಳು ನುಸುಳದೆ ರೈತನ ಮನೆಯಂಗಳಕ್ಕೆ ಕಾಲಿಡುವುದೇ ಇಲ್ಲ. 'ಭಾರತದ ಕೃಷಿ ವ್ಯವಸ್ಥೆಯಲ್ಲಿ ರೈತನಿಗೆ ನೀಡುವ ಸಬ್ಸಿಡಿ ವ್ಯವಸ್ಥೆ ದೊಡ್ಡ ರೋಗ. ಅದು ಗುಣವಾಗದೆ ಕೃಷಿ ರಂಗಕ್ಕೆ ಉದ್ದಾರವಿಲ್ಲ' ಎಂದು ಸಾವಯವ ತಜ್ಞ ಡಾ.ನಾರಾಯಣ ರೆಡ್ಡಿಯವರು ಪ್ರಾಸಂಗಿಕವಾಗಿ ಹೇಳಿದ ಮಾತು ಪ್ರಸ್ತುತವಾಗುತ್ತದೆ.
ಮನದ ಮಾತು
ರಸಗೊಬ್ಬರ ಮತ್ತು ಸಿಂಪಡಣಾ ಮಳಿಗೆಗಳ ಕತೆನೇ ಬೇರೆ. ರೈತರನ್ನು ಆಕರ್ಷಿಸಬಹುದಾದ ಎಲ್ಲಾ ಜಾಣ್ಮೆಗಳಲ್ಲಿ ನಿಷ್ಣಾತರಿವರು. 'ಕಳೆದ ವರುಷ ಒಂದು ಟಿನ್ ಒಯ್ದಿದ್ದೆ. ಈ ವರುಷ ಎರಡು ಕೊಡ್ರಿ' ರಾಸಾಯನಿಕ ಸಿಂಪಡಣೆಯೊಂದಕ್ಕೆ ರೈತ ಆರ್ಡರ್ ಮಾಡುತ್ತಿದ್ದುದ್ದನ್ನು ಹತ್ತಿರದಿಂದ ಗಮನಿಸಿದ್ದೆ. 'ತೆಗೊಳ್ರಿ, ಎರಡಕ್ಕೆ ಒಂದು ಫ್ರೀ' ಎನ್ನಬೇಕೇ?
ಕಂಪೆನಿ ತರಕಾರಿ ಬೀಜಗಳ ಮಳಿಗೆಗಳಲ್ಲಿ ರಶ್. ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸುತ್ತಾರೆ. ಎಕ್ರೆಗೆ ಎಷ್ಟು ಬೀಜ ಬೇಕು, ಯಾವ ಗೊಬ್ಬರ ಬೇಕು, ಏನು ಸಿಂಪಡಿಸಬೇಕು ಎಂಬ ಪೂರ್ತಿ ಬಯೋಡಾಟ ಕೊಟ್ಟುಬಿಡುತ್ತಾರೆ. ಹೊಲದ ಯಜಮಾನನೊಂದಿಗೆ ಒಂದಿಬ್ಬರು ಸಹಾಯಕರು ಬಂದಿರುತ್ತಾರೆ. ಅವರ ಸಲಹೆ(!)ಯಂತೆ ಹಣದ ಮುಖ ನೋಡಿದೆ, 'ದುಬಾರಿ' ಬೀಜಗಳನ್ನು ಪ್ಯಾಕ್ ಮಾಡಿಸಿದಾಗಲೇ ಆ ಯಜಮಾನನಿಗೆ ಖುಷಿ.
ಮಳಿಗೆಯಲ್ಲಿ ರಸಗೊಬ್ಬರ, ಕಂಪೆನಿ ಬೀಜಗಳ ಭರಾಟೆ ನಡೆಯುತ್ತಿರುವಾಗಲೇ ಅತ್ತ ವೇದಿಕೆಯಲ್ಲಿ ಸಾವಯವ ಕೃಷಿಯಲ್ಲಿ ಖುಷಿ ಕಂಡ ರೈತರ ಕೃಷಿ ಕಥನ-ಮನದ ಮಾತುಕತೆ ನಡೆಯುತ್ತಿತ್ತು. ಅತ್ತ 'ವಿಷ ಹೊಡೀರಿ' ಅನ್ನುತ್ತಿದ್ದರೆ, ಇತ್ತ 'ಬೇರೆ ಬೇರೆ ಸೊಪ್ಪುಗಳಿಂದ ತಯಾರಿಸಿದ ಕಷಾಯ ಹೊಡೀರಿ' ಅನ್ನುವ ಸಲಹೆ. ಇಬ್ಬರ ಮಾತನ್ನೂ ಮೌಲ್ಯಮಾಪನ ಮಾಡಿದರೆ, ಸಾವಯವ ಕೃಷಿಕನಿಗೇ ಅಂಕ ಹೆಚ್ಚು! ಹಣ ಸುರಿಯದೆ, ವಿಷ ಮುಟ್ಟದೆ ತನ್ನ ಹೊಲದ ಔಷಧೀಯ ಸಸ್ಯಗಳಿಂದ ಕಷಾಯ ಮಾಡಿಕೊಂಡು ಸಿಂಪಡಿಸಿ ಯಶಕಂಡಿದ್ದಾನೆ.
ರೈತನ ದನಿಗೆ ಮಣೆ
'ರೈತರಿಂದ ರೈತರಿಗಾಗಿ' ಎಂಬ ಗೋಷ್ಠಿಯನ್ನು ಕೃಷಿಮೇಳ ಚೆನ್ನಾಗಿ ಆಯೋಜಿಸಿತ್ತು. ಇಲ್ಲಿ ರೈತನ ದನಿಗೆ ಮಣೆ. ಅಧಿಕಾರಿ ಗಡಣವಿಲ್ಲ. ಸಭಾಭವನ ರೈತರಿಂದ ತುಂಬಿತ್ತು. ಒಬ್ಬೊಬ್ಬ ರೈತನಿಂದಲೂ ಸೋಲು-ಗೆಲುವುಗಳ ವಿವರಣೆ. ಲಾಭ-ನಷ್ಟದ ಅಂಕಿಅಂಶ. ಕೀಟ ಹತೋಟಿ, ರೋಗ ಹತೋಟಿಗೆ ದೇಸಿ ಯತ್ನ. ಉತ್ಪನ್ನಗಳಿಗೆ ಸ್ವ-ಮಾರುಕಟ್ಟೆ. ಯಾರೊಡನೆಯೂ ಅಂಗಲಾಚದ ಸ್ವಾವಲಂಬಿ ಬದುಕು ನೀಡಿದ ಯಶೋಗಾಥೆಗಳು ರಾಸಾಯನಿಕ ಮಳಿಗೆಗಳನ್ನು ಅಣಕಿಸುತ್ತಿತ್ತು. ಈಗಾಗಲೇ ರಾಸಾಯನಿಕ ಕೃಷಿಯಲ್ಲಿ ತೊಡಗಿದ್ದ ಒಂದಷ್ಟು ಮಂದಿ ಸಾವಯವದತ್ತ ಆಸಕ್ತಿ ತೋರುತ್ತಿರುವುದು ಗಮನಾರ್ಹ ಅಂಶ. ಇಂತಹ ಗೋಷ್ಠಿ ಹೆಚ್ಚೆಚ್ಚು ನಡೆಯಬೇಕು.
ಈ ಗೋಷ್ಠಿಯ ಕೊನೆಯಲ್ಲಿ ನಿಕಟಪೂರ್ವ ಕುಲಪತಿ ಡಾ.ಪಾಟೀಲ್ ಹೇಳಿದ ಮಾತು ಮೇಳದ ದಿಕ್ಸೂಚಿ - ರೈತರ ಜ್ಞಾನ, ವಿಜ್ಞಾನಿಯ ಬುದ್ಧಿ ಎರಡೂ ಮೇಳೈಸುವ ದಿನಗಳಿವು. ಪೇಪರ್ನಲ್ಲಿನ ರಾಜಕೀಯ ಸುದ್ದಿಗಳ, ರಾಜಕೀಯ ನಾಯಕರ ವಿಚಾರಗಳನ್ನು ವಿಮರ್ಶೆ ಮಾಡುವುದನ್ನು ಬಿಟ್ಟುಬಿಡಿ. ತಲೆ ಲೆಕ್ಕ, ರಿಸಾರ್ಟ್ ಅವರಿಗೇ ಇರಲಿ. ಅನಾವಶ್ಯಕವಾದ ತಿರುಗಾಟ, ಹರಟೆ ಕಡಿಮೆ ಮಾಡಿ. ಆ ಹೊತ್ತನ್ನು ಹೊಲದಲ್ಲಿ ಕಳೆಯಿರಿ. ಒಕ್ಕಲುತನ ಮಾಡಿ. ಮೇಳದಲ್ಲಿ ಸಿಕ್ಕ ಮಾಹಿತಿ ಹೊಲಕ್ಕೆ ಸೂಕ್ತವಾಗುತ್ತೋ ನೋಡಿ. ಅದರಂತೆ ಬೆಳೆಯಿರಿ. ಐದು ಸಾವಿರದಿಂದ ಐವತ್ತು ಸಾವಿರ ತನಕದ ವಿವಿಧ ನಾಯಿಗಳ ಪ್ರದರ್ಶನ-ಮಾರಾಟ, ಐವತ್ತು ಸಾವಿರದಿಂದ ಲಕ್ಷಕ್ಕೂ ಮಿಕ್ಕಿ ಮೌಲ್ಯ ಹೊಂದಿದ ಜಾನುವಾರುಗಳ ಪ್ರದರ್ಶನ, ಆಡು ಪ್ರದರ್ಶನ ಮೇಳದ ಆಕರ್ಷಣೆ. ದೇವಣಿ, ಹಳ್ಳಿಕಾರ್, ಖಿಲಾರ, ಗಿರ್ ತಳಿಗಳ ಹಸುಗಳು. ಈ ಪಶು ಸಂದೋಹದ ಮಧ್ಯೆ 'ನಮ್ಮ ಕಂಪೆನಿಯ ಹಿಂಡಿ ಖರೀದಿಸಿ' ಎನ್ನುವ ಕಂಪೆನಿ ಪ್ರತಿನಿಧಿಗಳು. ಹೂ-ಹಣ್ಣು ತರಕಾರಿಗಳ ಪ್ರದರ್ಶನ ಸೊರಗಿತ್ತು!
ಮೌಲ್ಯವರ್ಧನೆ-ರುಚಿವರ್ಧನೆ
ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಕಿರುಧಾನ್ಯಗಳ ಮೌಲ್ಯವರ್ಧನೆ; ಬಿಜಾಪೂರ ಕೆವಿಕೆಯ ಜೋಳದ ಬಿಸ್ಕತ್, ಪೇಡಾ, ಉಂಡಿ, ನಿಪ್ಪಟ್ಟು, ಚೂಡಾ; ಬೆಳಗಾಗಿ ಕೆವಿಕೆಯ ಶೇಂಗಾ ಸಿಪ್ಪೆ ತೆಗೆಯುವ ಸಲಕರಣೆ; ಧಾರವಾಡ ಕೆವಿಕೆಯ ರಾಗಿ ಉಂಡಿ, ಚಕ್ಕುಲಿ, ಬಿಸ್ಕತ್; ಕೃಷಿ ವಿವಿಯ ಕಿರುಧಾನ್ಯ ಆಧಾರಿತ ಮೌಲ್ಯವರ್ಧನೆ, ಗ್ರಾಮೀಣ ಗೃಹ ವಿಜ್ಞಾನ ವಿಭಾಗದ ಆಹಾರ ಕಲಬೆರಕೆ ಕಂಡು ಹಿಡಿವ ಸರಳ ಉಪಾಯ; ಅರಣ್ಯ ಸಸ್ಯಗಳ-ಬೀಜಗಳ ಮಳಿಗೆಗಳು ಎಕ್ಸ್ಕ್ಲೂಸಿವ್. ಕೃಷಿ ವಿವಿಯ ವಿವಿಧ ತಾಕುಗಳಿಗೆ ರೈತರ ಭೇಟಿ. ಸಂಬಂಧಪಟ್ಟ ಅಧಿಕಾರಿಗಳು, ಸಹಾಯಕರು ಖುದ್ದು ಹಾಜರಿದ್ದು ಮಾಹಿತಿ ನೀಡುತ್ತಿದ್ದರು. ಸೊಂಪಾಗಿ ಬೆಳೆದ ಬೆಳೆಯನ್ನು ನೋಡಿದಾಗ, 'ನಮ್ಮ ಹೊಲದಲ್ಲಿ ಹೀಂಗೆ ಬರೋದಿಲ್ವಲ್ಲಾ' ಅಂತ ಅನ್ನಿಸದೆ ಬಿಡದು. ಸಾವಯವ ಮಳಿಗೆಗಳು ಇನ್ನಷ್ಟು ಬೇಕಿತ್ತು. ವಿವಿ ಕಡೆಯಿಂದ ಮಾತ್ರವಲ್ಲದೆ, ಸಾವಯವ ರೈತರ ಪಾಲುಗಾರಿಕೆಯೂ ಹೆಚ್ಚು ಬೇಕಿತ್ತು. ಸಾವಯವ ವಸ್ತುಗಳ ಮಾರಾಟ, ಮಾಹಿತಿ, ಮಾರುಕಟ್ಟೆಯತ್ತ ಪರಸ್ಪರ ವಿಚಾರ ವಿನಿಮಯಕ್ಕೆ ಮಳಿಗೆ ವೇದಿಕೆಯಾಗುತ್ತಿತ್ತು. ಕೃಷಿ ಸಾಹಿತ್ಯಗಳಿಗೆ ಮೇಳ ಚೆನ್ನಾದ ಅವಕಾಶ ಮಾಡಿಕೊಟ್ಟಿತ್ತು.
'ಟೀಚರ್ ಇಲ್ಲದೆ ಮಕ್ಕಳಿಗೆ ಪಾಠ ಮಾಡಿ ಸಾರ್. ತೆಗೊಳ್ಳಿ ಈ ಸಿಡಿ', 'ಈ ಯಂತ್ರವನ್ನು ಮನೆಯ ಇಂತಹ ದಿಕ್ಕಿನಲ್ಲಿಡಿ. ನೀವು ಶ್ರೀಮಂತರಾಗ್ತೀರಿ - ಈ ಮಳಿಗೆ ನೋಡಿದಾಗ, 'ಡಿಬಾರ್ ಮಾಡಬೇಕು ಅನ್ನಿಸಿತು, ಆದರೆ ಎಲ್ಲಿದೆ ಅಧಿಕಾರ'? ಪಾಪ, ಹೊಟ್ಟೆಪಾಡಲ್ಲವೇ?! ಯಂತ್ರ ಇಟ್ಟು ಶ್ರೀಮಂತರಾಗ್ತಿದ್ರೆ ಕೃಷಿ ಮೇಳವೇ ನಡೆಯುತ್ತಿರಲಿಲ್ಲವೋ ಏನೋ? ಎಲ್ಲಿಯವರೆಗೆ ಜನ ನಂಬ್ತಾರೋ, ಅಲ್ಲಿಯ ವರೆಗೆ ನಂಬಿಸುವವರು ಇದ್ದೇ ಇರ್ತಾರೆ ತಾನೆ.
ಒಟ್ಟಿನಲ್ಲಿ ಕೃಷಿ ಮೇಳ ಅದ್ದೂರಿಯಾಗಿಯೇ ನಡೆದಿದೆ. ರೈತರೂ ಸ್ವತಃ ಭಾಗವಹಿಸುವಂತೆ ಆಕರ್ಷಣೀಯವಾಗಿ ಮಾಡಿದೆ. ಕೃಷಿ ವಿವಿಯ ವರಿಷ್ಠರೂ ಸೇರಿದಂತೆ ಎಲ್ಲರೂ ಮಳಿಗೆ ತುಂಬಾ ಓಡಾಡಿಕೊಂಡು ವಿಚಾರಿಸುತ್ತಿದ್ದರು. ದೊಡ್ಡ ದೊಡ್ಡ ಕಂಪೆನಿಗಳಿಗೆ ಮಣೆ ಹಾಕುವುದು ಆರ್ಥಿಕ ದೃಷ್ಟಿಯಿಂದ ಅನಿವಾರ್ಯ. ಆದರೆ ಚಿಕ್ಕ ಪುಟ್ಟ ಪತ್ರಿಕೆ, ಮೌಲ್ಯವರ್ಧಿತ ಉತ್ಪನ್ನಗಳು, ರೈತಾವಿಷ್ಕಾರ.. ಇಂತಹ ವಸ್ತುಗಳಿಗೆ ಮಳಿಗಾ ಶುಲ್ಕದಲ್ಲಿ ಮನ್ನಾ ಮಾಡಬೇಕು. ಮುಂದಿನ ಕೃಷಿ ಮೇಳಗಳಲ್ಲಿ ಈ ಕುರಿತು ವಿವಿ ವರಿಷ್ಠರು ಆಲೋಚಿಸಿ, ಅನುಷ್ಠಾನಿಸಿದರೆ ಮಳಿಗೆಗಳಲ್ಲಿ ರೈತರ ಪಾಲ್ಗೊಳ್ಳುವಿಕೆಯನ್ನು ಹೆಚ್ಚು ನಿರೀಕ್ಷಿಸಬಹುದು.
ಮೇಳದಲ್ಲಿ ಆಸಕ್ತಿಯಿಂದ ಭಾಗವಹಿಸಿದ ರೈತರಿಗೆ ಮಳೆ ನಿರಾಶೆ ತಂದಿತ್ತು. ಒಬ್ಬರಂತೂ ತಮಾಶೆಗೆ ಹೇಳಿಬಿಟ್ಟರು - 'ಉಮೇಶ ಕತ್ತಿಯವರು ಎಡಗೈಯಲ್ಲಿ ಕ್ಯಾಂಡಲ್ನಿಂದ ದೀಪಜ್ವಲನ ಮಾಡಿ ಕೃಷಿಮೇಳವನ್ನು ಉದ್ಘಾಟಿಸಿದ್ರಲ್ಲಾ, ಹಾಂಗಾಗಿ ಕೃಷಿಮೇಳ ಪೂರ್ತಿ ಮಳೆಯೋ ಮಳೆ'!
'ರೈತರ ಬಳಿಗೇ ಕೃಷಿ ವಿವಿಗಳು ಬರಲಿ' - ಪರಮಪೂಜ್ಯ ಶ್ರೀ ಶ್ರೀ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಮಾತು ಕಾಲದ ಆವಶ್ಯಕತೆ.

Monday, October 18, 2010

ಉಳಿಸಬೇಕಿದೆ, ಈ ಕಿರುಧಾನ್ಯ


'ಜಿಕೆವಿಕೆ ಕೃಷಿ ಮೇಳದಲ್ಲಿ ಮೂವತ್ತಕ್ಕೂ ಮಿಕ್ಕಿ ರೈತರು ಹಾರಕವನ್ನು ಹುಡುಕಿಕೊಂಡು ಬಂದಿದ್ದರು. ಅದರ ಬೀಜಕ್ಕಾಗಿ ಆರ್ಡರ್ ಮಾಡಿದ್ದಾರೆ' - ಸಹಜ ಸಮೃದ್ಧದ ಮಳಿಗೆಯಲ್ಲಿದ್ದ ರವಿ ಸಂತೋಷ ಹಂಚಿಕೊಂಡರು. ಮಳಿಗೆಯಲ್ಲಿ ಹಾರಕದ ಮಾದರಿ ಬೀಜಗಳನ್ನು ನೋಡಿ ರೈತರ ಕುತೂಹಲ. 'ನೋಡ್ರೀ.. ಇದನ್ನು ನೋಡ್ದೆ ಹತ್ತು ವರ್ಷ ಆತು' ಎನ್ನುತ್ತಾ ಅಂಗೈಯಲ್ಲಿ ಹಾರಕದ ಕಾಳುಗಳನ್ನು ಹಾಕಿಕೊಂಡಾಗಲೇ ಸಮಾಧಾನ, ಖುಷಿ.
'ಹಾರಕ' ತುಂಬಾ ಅಪರೂಪದ ಕಿರುಧಾನ್ಯ ಬರಗಾಲದ ಮಿತ್ರ. 'ಆರ್ಕ, ಹಾರ್ಕ, ಆರಕ' ಅಂತಲೂ ಕರೆಯುತ್ತಾರೆ. ಸಸ್ಯಶಾಸ್ತ್ರೀಯ ಹೆಸರು ಪಾಸ್ಪಲಮ್ ಸ್ಕ್ರೋಬಿಕುಲೆಟಮ್ (Paspalum scrobiculatum). ). ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯ ಕೆಲವು ಪ್ರದೇಶಗಳು, ಬೆಂಗಳೂರು ಗ್ರಾಮಾಂತರ ಪ್ರದೇಶವನ್ನುನ್ನು ಬಿಟ್ಟರೆ ಮತ್ತೆಲ್ಲೂ ಹಾರಕದ ಬೆಳೆ ವಿರಳ. 2-3 ದಶಕಗಳ ಹಿಂದೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಹಾರಕದ ಬೆಳೆಯನ್ನು ಉಥೇಷ್ಟವಾಗಿ ಬೆಳೆಯುತ್ತಿದ್ದರು. 'ಹಿಂದೆ ಹಾರ್ಕ ಬಳಸುತ್ತಿದ್ವಿ' ಎನ್ನುವ ಹಿರಿಯರು ಸಾಕಷ್ಟು ಮಂದಿ ಸಿಗ್ತಾರೆ. ರಾಗಿ, ಸಜ್ಜೆ, ಕೊರ್ಲೆ, ನವಣೆ, ಸಾವೆ, ಜೋಳಗಳನ್ನು ಬೆಳೆದು ಬಳಸುವವರಿದ್ದರೂ ಹಾರಕವನ್ನು ಯಾರೂ ಬೆಳೆಯುತ್ತಿಲ್ಲ. ಕಷ್ಟ ಪಟ್ಟು ಹುಡುಕಿದರೆ 10-15 ವರುಷದ ಹಿಂದಿನ ಹಾರಕ ಬೀಜವೇನೋ ಸಿಗಬಹುದು, ಆದರೆ ಬೆಳೆ ಅಪರೂಪ!
ವಾಣಿಜ್ಯ ಬೆಳೆಗಳ ಸುಲಭ ಸಂಸ್ಕರಣೆಯ ವ್ಯವಸ್ಥೆ ಕಿರುಧಾನ್ಯಗಳಿಗೆ ಶಾಪ! ಇವುಗಳ ಜತೆಗೆ ಉಣ್ಣಲೋಸುಗ ಒಂದಷ್ಟು ಜಾಗದಲ್ಲಿ ಬೆಳೆಯುವವರಿದ್ದಾರೆ. ಒರಳಲ್ಲಿ ಕುಟ್ಟಿಯೋ, ರಾಗಿಕಲ್ಲಲ್ಲಿ ಬೀಸಿಯೋ, ಮಿಲ್ಲಿನಲ್ಲಿ ಹುಡಿ ಮಾಡಿ - ಕಿರುಧಾನ್ಯಗಳು ಸಂಸ್ಕರಿತವಾಗಿ ಅನ್ನದ ಬಟ್ಟಲು ಸೇರುತ್ತವೆ. ಹಾರಕ ಅಷ್ಟು ಸುಲಭವಾಗಿ ಸಂಸ್ಕರಣೆಗೆ ಒಗ್ಗಿಕೊಳ್ಳುವ ಕಿರುಧಾನ್ಯವಲ್ಲ. ಕಾಳು ತೀರಾ ಗಟ್ಟಿ. ಕೆಲವು ಕಡೆ ದೇಸಿ ಕ್ರಮದ ಮೂಲಕ ಸಂಸ್ಕರಣೆ ಮಾಡಿ ಬಳಸುತ್ತಾರೆ. ಗಟ್ಟಿ ಹೊರ ಕವಚ ಹಾರಕದ ಕಾಳು ಕಾಫಿ ವರ್ಣವನ್ನು ಹೋಲುತ್ತದೆ. ಅದರಲ್ಲಿ ಏಳು ಪದರಗಳಿವೆ ಎನ್ನಲಾಗಿದೆ. ಪದರ ತೆಗೆದಾಗ ಸಿಗುವ ಕಾಳು - ಹಾರಕದಕ್ಕಿ.
'ಕೊಪ್ಪಳದ ಸಂತೆಯಲ್ಲಿ ಸಾಕಷ್ಟು ಸಿಕ್ತಾ ಇತ್ತು. ಇದನ್ನು ಬೆಳೆದರೆ ಮಾರುಕಟ್ಟೆಯಿಲ್ಲ. ಆಹಾರವಾಗಿ ಸುಲಭವಾಗಿ ಬಳಸೋಣವೆಂದರೆ ಸಂಸ್ಕರಣಾ ಘಟಕಗಳಿಲ್ಲ' - ವಾಸ್ತವದತ್ತ ಬೊಟ್ಟು ಮಾಡುತ್ತಾರೆ ಕೊಪ್ಪಳ-ಕಾಮನೂರಿನ ಕೃಷಿಕ ನಾಗೇಂದ್ರ ಪ್ರಸಾದ್. ಕೊಪ್ಪಳ ಭಾಗದಲ್ಲಿ ಹಾರಕದ ಕಾಳಿಗೆ ಕೆಮ್ಮಣ್ಣು ಹಚ್ಚಿ ಒಂದು ದಿನ ಬಿಸಿಲಿನ ಸ್ನಾನ ಮಾಡಿಸುತ್ತಾರೆ. ಒಣಗಿದ ಹಾರಕವನ್ನು ಬೀಸುಕಲ್ಲಿನಿಂದ (ಹಿಟ್ಟಿನ ಕಲ್ಲು) ಬೀಸಿ ಅಕ್ಕಿ ಮಾಡುತ್ತಾರೆ. ಕಾಳಿನ ಹೊರಪದರ ಎಷ್ಟು ಗಟ್ಟಿಯೆಂದರೆ - ಬೀಸುಕಲ್ಲಿನ ಕೆಳಗಿನ ಕಲ್ಲನ್ನು ತೆಗೆದು, ಗಟ್ಟಿ ಒರಟು ನೆಲದ ಮೇಲೆ ಮೇಲ್ಭಾಗದ ಬೀಸುವ ಕಲ್ಲನ್ನು ಇಟ್ಟು ಬೀಸಿದರೂ ಜಪ್ಪೆನ್ನುವುದಿಲ್ಲ! ಕಲ್ಲಿನಿಂದ ಬೀಸಿದರೂ ಹೊಟ್ಟು ಬಿಟ್ಟುಕೊಡುವುದಿಲ್ಲ. ಒರಳಿಗೆ ಹಾಕಿ ಒನಕೆಯಿಂದ ಕುಟ್ಟಿದರೆ ಹೊಟ್ಟು ಬಿಡುತ್ತದೆ. 'ಕೆಮ್ಮಣ್ಣು ಹಚ್ಚುವುದರಿಂದ ಹಾರಕದ ಹೊರಪದರಗಳು ಮೃದುವಾಗುತ್ತವೆ. ಕೆಲವು ಕಡೆ ಹಾರಕವನ್ನು ರಾತ್ರಿಯಿಡೀ ಕಟ್ಟಿಗೆ ಒಲೆಯ ಮೇಲೆ ಬೇಯಿಸಿ ಒಂದು ದಿನ ಒಣಗಿಸಿ ನಂತರ ಮಿಲ್ಗೆ ಹಾಕಿಸಿ ಅಕ್ಕಿ ಮಾಡಿಸಿ ಬಳಸುತ್ತಾರೆ. ಹೀಗೆ ಮಿಲ್ಗೆ ಹಾಕಿದಾಗ ಕಾಳಿನ ಒಂದೆರಡು ಪದರ ಮಾತ್ರ ಕಳಚಿಕೊಳ್ಳುತ್ತವೆಯಷ್ಟೇ. ನಿಜ ರುಚಿಯ ಸ್ವಾದ ಸಿಗಲು ಅದರ ಎಲ್ಲಾ ಪದರಗಳು ಕಳಚಿಕೊಳ್ಳಬೇಕು' ಎನ್ನುತ್ತಾರೆ ರವಿ.
ರೈತೊಲವು
'ಯಾವಾಗ ಅಕ್ಕಿಯು ಅಗ್ಗದಲ್ಲಿ ಸಿಕ್ಕಲು ಶುರುವಾಯಿತೋ ಅಂದಿನಿಂದ ಪಾರಂಪರಿಕ ಆಹಾರವಾದ ಕಿರುಧಾನ್ಯಗಳು ಮರೆತುಹೋಯಿತು' ಎಂದು ವಿಷಾದಿಸುತ್ತಾರೆ ಮಧುಗಿರಿಯ ಲಕ್ಷ್ಮೀಕಾಂತಪ್ಪ. ಸುಲಭದಲ್ಲಿ ಅಕ್ಕಿ ಲಭ್ಯವಾದರೂ ಇವರ ಮುಖ್ಯ ಆಹಾರ 'ಹಾರಕ'. ತಮಗೆ ಉಣ್ಣುವುದಕ್ಕಾಗಿಯೇ ಬೆಳೆಯುತ್ತಾರೆ.'ಹಾರಕದ ಕಾಳಿಗೆ ಮಣ್ಣು ಕಟ್ಟಿ (ಮೆತ್ತಿ) ಒಣಗಿಸಿ ರಾಗಿ ಮಿಲ್ಲಲ್ಲಿ ಹೊಡೆಸಿದ್ರೆ ಬೆಳ್ಳಗಿನ ಅಕ್ಕಿ ಬರುತ್ತೆ. ಅದನ್ನು ಚೆನ್ನಾಗಿ ನೀರಲ್ಲಿ ತೊಳೆದು ಬೇಯಿಸಿ ಅನ್ನ ಮಾಡಬಹುದು. ಅನ್ನದೊಂದಿಗೆ ಮೊಸರು ಹಕ್ಕೊಂಡು ತಿನ್ನೋಕೆ ಬಹಳ ರುಚಿ. ತುಪ್ಪ ಮತ್ತು ಬೆಲ್ಲದೊಟ್ಟಿಗೆ ಕೂಡಾ ಚೆನ್ನಾಗಿರುತ್ತದೆ. ಅದರ ಮುಂದೆ ಈಗಿರುವ ಅನ್ನ ಏನೂ ಅಲ್ಲ. ಚಿತ್ರಾನ್ನ ಮಾಡಬಹುದು. ಎಂಬ ಅನುಭವ ಕನಕಪುರದ ಕಲ್ಲಿನಕುಪ್ಪೆಯ ಬಸವೇ ಗೌಡ ಅವರದು. 40 ವರ್ಷ ಹಿಂದೆ ಎಕರೆಗೆ 14 ಖಂಡಗ (ಸುಮಾರು ಇನ್ನೂರು ಕಿಲೋ) ಬೆಳೆದ ಅನುಭವಿ. ದೇವರಹಳ್ಳಿಯ ವರದಯ್ಯ ಹೇಳುತ್ತಾರೆ, 'ಆರಿದ್ರೆ ಮಳೆಗೆ ಬಿತ್ತನೆ ಮಾಡಗತಾ ಇದ್ವಿ. ಮರದ ನೇಗಿಲಿನಲ್ಲಿ ಉಳುಮೆ ಮಾಡಿ ಸತ್ತೆ ತೆಗ್ದು ಕೈಯಲ್ಲಿ ಹಲುಬೆ ಹೊಡ್ಕೊಂಡು ಚೆಲ್ತಾ ಇದ್ವಿ.' ಒಂದು ಎಕರೆಗೆ 15 ಸೇರು ಹಾರಕದ ಬೀಜ ಬೇಕು. 7 ದಿವಸಗಳಲ್ಲಿ ಮೊಳಕೆ. ಒಮ್ಮೆ ಕಳೆ ತೆಗೆದರೆ ಸಾಕು. 'ವಿಶಾತಿ ಮಳೆಗೆ ಕೊಯಿಲು. ರಾಗಿ ಥರ ಗುಂಡು ಕಟ್ಟಿ ರಾಶಿ ಮಾಡ್ಬಹುದು. ಎಕರೆಗೆ 25 ಮೂಟೆ ಬಂದದ್ದಿದೆ. ರಾಗಿ ಕಲ್ಲಲ್ಲಿ ಚಿಪ್ಪು ಹೋಗುವ ಹಾಗೆ ಮಾಡಿ ಒನಕೆಯಲ್ಲಿ ಕುಟ್ಟಿ ಚೆನ್ನಾಗಿ ತೊಳೆದು ಅನ್ನ ಮಾಡ್ಬೇಕು. ಈಗಿನ ಸೋನಾ ಮಸ್ಸೂರಿ ಅಕ್ಕಿ ಕೂಡಾ ಸೋಲ್ಬೇಕು ಅಷ್ಟು ರುಚಿ' ಎನ್ನುತ್ತಾರೆ. ಬಿಸಿಲ ಊರಿನಲ್ಲಿ ತಂಪಿಗಾಗಿ ಹಾರಕವನ್ನು ಆಹಾರವಾಗಿ ಬಳಸುತ್ತಾರೆ. ಬಾಣಂತಿಯರಿಗದು ಅಮೃತ! ಪಾಯಸವನ್ನೂ ತಯಾರಿಸುತ್ತಾರೆ. ವಾತ-ಪಿತ್ಥಕ್ಕೆ ಒಳ್ಳೆಯ ಔಷಧಿಯಂತೆ. 'ಕೊಪ್ಪಳದ ಕಿನ್ನಾಳ ಸಂತೆಯಲ್ಲಿ ಹಾರಕ ಈಗಲೂ ಸಿಗುತ್ತೆ' ಎಂದು ಕಿವಿಯಲ್ಲಿ ಗುಟ್ಟಾಗಿ ಹೇಳಿದ ಪ್ರಸಾದ್, 'ಇದರ ಅಕ್ಕಿಯಿಂದ ತಯಾರಿಸಿದ ಅಂಬಲಿ ಒಂದು ಗ್ಲಾಸ್ ಕುಡಿದರೆ ಸಾಕು, ಅರ್ಧ ಹೊತ್ತಿಗೆ ಹೊಟ್ಟೆ ಗಟ್ಟಿ' ಎನ್ನುತ್ತಾರೆ. ಹಾರಕದ ಅನ್ನ ಮೂರು ದಿನದ ತಂಗಳಾದರೂ ರುಚಿ ಕೆಡದು, ಹಳಸಾಗದು.
ಬೆಳೆ-ವಿಧಾನ
ಪಾಳು ಬಿದ್ದ ಜಮೀನು, ಕಲ್ಲುಮಿಶ್ರಿತ ಕೆಂಪು ಮಣ್ಣು, ಸಾರವಿಲ್ಲದ ಬಂಜರು ಭೂಮಿಗಳಲ್ಲಿ ಮಾಡಬಹದಾದ ಬೆಳೆ. ಮೇ-ಜೂನ್ ತಿಂಗಳಲ್ಲಿ ಮೊದಲ ಮಳೆ ಬಿದ್ದ ತಕ್ಷಣ ಹೊಲವನ್ನು ಉಳುಮೆ ಮಾಡಿ, ಕುರಿಗೊಬ್ಬರ ಮಣ್ಣಿಗೆ ಸೇರಿಸುತ್ತಾರೆ. ಮೂರು ಇಂಚುಗಳಷ್ಟು ಆಳದಲ್ಲಿ ಬಿತ್ತನೆ. ನಾಲ್ಕು ದಿನದ ನಂತರ `ದಿಂಡು' ಹೊಡೆಯಬೇಕು. ಅಂದರೆ ಕಬ್ಬಿಣದ ತುಂಡು ಅಥವಾ ಕಟ್ಟಿಗೆಯ ಹಲಗೆಯನ್ನು ಉಳುಮೆ ಮಾಡುವ ಕುಂಟೆಗೆ ಕಟ್ಟಿ, ಒಂದು ಇಂಚು ಮೇಲ್ಮಣ್ಣಿನ ಪದರು ಒಡೆಯುವಂತೆ ಮಾಡುವುದು. ಇದರಿಂದ ಬೀಜ ಮೊಳಕೆಗೆ ಸಹಕಾರಿ.
ಮೂರು ವಾರಗಳ ನಂತರ ಮತ್ತೊಮ್ಮೆ ಎಡೆ ಹೊಡೆದರೆ, ಮುಂದೆ ಸುರಿಯುವ ಮಳೆ ನೀರು ಅಲ್ಲೇ ಇಂಗಲು ಸಹಾಯಕ. ಹಾರಕದ ಬೇರುಗಳು ವಿಶಾಲವಾಗಿ ಹರಡುತ್ತದೆ. ಇದು ಪರಸ್ಪರ ಒಂದನ್ನೊಂದು ಸಂಧಿಸಿದಾಗ, ಅಲ್ಲಿ ಕಳೆ ಸಸ್ಯವೊಂದು ಬೆಳೆಯುತ್ತದೆ. ಇದು ಮಣ್ಣಿನೊಳಗೆ ಅವಿತುಕೊಂಡು, ದಿಢೀರನೆ ಕಾಣಿಸಿಕೊಳ್ಳುತ್ತದೆ. ಹೀಗೆ ಕಳೆ ಕಾಣಿಸಿಕೊಂಡರೆ 'ಹಾರಕ ಬೆಳೆ ಫೈಲ್' ಎಂದರ್ಥ. ಇದಕ್ಕಾಗಿ ಬಿತ್ತನೆಯಾದ ಮೂರು ತಿಂಗಳಲ್ಲಿ ಸಾಲುಗಳ ಮಧ್ಯೆ ಉಳುಮೆ ಮಾಡ್ತಾರೆ. ಇದರಿಂದಾಗಿ ಬೇರುಗಳು ಬೇರ್ಪಡುತ್ತವೆ. 'ಹಾರಕ ಬಿತ್ತಿ ಮೊಳಕೆ ಬಂದು ಒಂದಡಿ ಎತ್ತರಕ್ಕೆ ಬೆಳೆದಾಗ - ಆ ಹೊಲಕ್ಕೆ ದನ, ಕುರಿ, ಆಡುಗಳನ್ನು ಮೇಯಲು ಬಿಡುತ್ತಾರೆ. ಎಳೆ ಹುಲ್ಲನ್ನು ಅವುಗಳು ಚೆನ್ನಾಗಿ ಮೇಯುತ್ತವೆ. ನಂತರದ ಒಂದೇ ತಿಂಗಳಲ್ಲಿ ಮತ್ತೆ ಚಿಗುರುತ್ತವೆ. ಆದರೆ ಗಿಡಗಳ ಬುಡಕ್ಕೆ ಅವುಗಳ ಪಾದಾಘಾತವಾಗಿ ಹಾರಕದ ಗಿಡಗಳು ಹೆಚ್ಚು ತೆಂಡೆ ಬಿಟ್ಟು, ಇಳುವರಿಯೂ ಹೆಚ್ಚು ಬರುತ್ತದೆ' - ಹಾರಕದ ಕುರಿತ ವಿಶೇಷ ಮಾಹಿತಿ ನೀಡುತ್ತಾರೆ ತುಮಕೂರಿನ ಮಲ್ಲಿಕಾರ್ಜುನ ಹೊಸಪಾಳ್ಯ.
ಎರಡರಿಂದ ಮೂರಡಿ ಎತ್ತರಕ್ಕೆ ಬೆಳೆಯುತ್ತದೆ. 5-6 ತಿಂಗಳಲ್ಲಿ ಕಟಾವ್. ಯಾವುದೇ ರೋಗವಿಲ್ಲ. ಸರಾಸರಿ ಇಳುವರಿ ಎಕರೆಗೆ ಐದರಿಂದ ಆರು ಕ್ವಿಂಟಾಲ್. ಹುಲ್ಲು ಜಾನುವಾರುಗಳಿಗೆ ಮೇವಾಗಿ ಬಳಸುವುದುಂಟು. ದನಗಳಿಗೆ ಜ್ವರ ಬಂದಾಗ ಹುಲ್ಲನ್ನು ಸುಟ್ಟು, ಇದರ ಹೊಗೆಯನ್ನು ತಾಗುವಂತೆ ಮಾಡುತ್ತಾರೆ ಇದರಿಂದ ಜ್ವರ ಕಡಿಮೆಯಾಗುತ್ತದಂತೆ. ಕಾಳು ಬೇರ್ಪಟ್ಟ ಹಾರಕದ ಹುಲ್ಲನ್ನು ಮನೆಯ ಮಾಡಿಗೆ ಹಾಸುತ್ತಾರೆ, ಬೀಜ ಸಂಗ್ರಹಿಸಿಡುವ 'ಮೂಡೆ' ಕಟ್ಟಲು ಬಳಸುತ್ತಾರೆ. ಹುಲ್ಲಿನಲ್ಲಿರುವ ಯಾವುದೇ ಪ್ರತಿರೋಧ ಗುಣದಿಂದಾಗಿ ಹುಳುಗಳು ಮೂಡೆಗೆ ಪ್ರವೇಶಿಸುವುದಿಲ್ಲ. ಕುದುರಿದ ಮಾರುಕಟ್ಟೆಹಾರಕಕ್ಕೆ ಇಂತಿಷ್ಟೇ ಅಂತ ಹೇಳುವಂತಹ ಬೆಲೆ ವ್ಯವಸ್ಥೆಯಿಲ್ಲ. ನೆಂಟರಿಷ್ಟರ ಮಧ್ಯೆ ಅಲ್ಲಿಂದಿಲ್ಲಿಂದ ಕೊಳ್ಳುವುದು ವಾಡಿಕೆ. 'ಇತ್ತೀಚೆಗೆ ಆರೋಗ್ಯದ ಕಾಳಜಿಯಿಂದಾಗಿ ಮರೆತುಹೋದ ಹಾರಕವನ್ನು ಹುಡುಕುವುದು ಕಂಡುಬರುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿದೆ. ಈ ವರುಷ ಕ್ವಿಂಟಾಲಿಗೆ ಒಂದು ಸಾವಿರದ ಐನೂರು ರೂಪಾಯಿ ಬೆಲೆಯಿದೆ.' ಎಂಬ ಸಿಹಿಸುದ್ದಿಯನ್ನು ಕೊಪ್ಪಳದ ಪ್ರಸಾದ್ ಹೇಳುತ್ತಾರೆ. ಹಾರಕದ ಅಕ್ಕಿ ಮಾಡಿ ಉಣ್ಣುವುದಕ್ಕೆ ಬಳಸುವುದಿದ್ದರೆ 3-4 ವರುಷದ ಹಳೆಯ ಅಕ್ಕಿಯನ್ನು ಬಳಸಬಹುದು. ಬಿತ್ತನೆಗಾದರೆ
ಆಯಾಯ ವರುಷದ ಬೀಜವೇ ಬೇಕು.ಅತ್ಯಧಿಕ ಪೌಷ್ಠಿಕಾಂಶ ಹೊಂದಿರುವ ಹಾರಕದ ಆಹಾರವನ್ನು ಯಾಕೆ ನಮ್ಮ ಸೈನಿಕರಿಗೆ ನೀಡಬಾರದು? ಪ್ರಸಾದ್ರ ಕೀಟಲೆ ಪ್ರಶ್ನೆ. ಮೈಸೂರಿನಲ್ಲಿ ಸೈನಿಕರಿಗೆ ಆಹಾರವನ್ನು ಸಿದ್ಧಪಡಿಸುವ ಸಂಸ್ಥೆಯ ಅಡುಗೆ ಮುಖ್ಯಸ್ಥರಿಗೆ ಒಂದು ಕ್ವಿಂಟಾಲ್ ಹಾರಕವನ್ನು ನೀಡಿಯೇ ಬಿಟ್ಟರು. 'ಈ ಬಗ್ಗೆ ಸಂಶೋಧನೆ ಮಾಡುತ್ತೇವೆ' ಎಂದರಂತೆ. ಎರಡು ವರುಷವಾಯಿತು, ಇನ್ನೂ ಉತ್ತರ ಬಂದಿಲ್ಲ!
ಬೇಕು, ಕಾಯಕಲ್ಪ
ಹಳೆಯ ತಲೆಮಾರಿನ ರೈತರಲ್ಲಿ ಈಗಲೂ ಸಿರಿಧಾನ್ಯದೊಲವು ಇದೆ. ಆದರೆ ಎಳೆಯರಲ್ಲಿ ಹೈಬ್ರಿಡ್ ಮೋಹ ಎದ್ದು ಕಾಣುತ್ತದೆ. ನವಣೆ, ರಾಗಿ, ಸಾಮೆ ಬೆಳೆಯುತ್ತಿದ್ದ ರೈತರು ಪಡಿತರ ವ್ಯವಸ್ಥೆಯಲ್ಲಿ ಸುಲಭವಾಗಿ ಕಡಿಮೆ ಬೆಲೆಗೆ ಸಿಗುವ ಅಕ್ಕಿಯತ್ತ ಒಲವು ತೋರಿಸುತ್ತಿದ್ದಾರೆ. ಆಹಾರದಲ್ಲಿ ಅನ್ನದ ಬಳಕೆ ಹೆಚ್ಚಾಗಿದೆ. ಮೊದಲೆಲ್ಲಾ ಹಾರಕ ಬೆಳೆಯುವಲ್ಲಿ ಈಗ ನೀರಾವರಿ ಬೆಳೆಗಳು ಬಂದಿವೆ. ಹೀಗೆ ಬೇರೆ ಬೇರೆ ಕಾರಣಗಳಿಂದ ಕಿರುಧಾನ್ಯಗಳ ಬಳಕೆಗೆ ಹಿಂಬೀಳಿಕೆ.ಬದುಕಿನಿಂದ ಹಾರಕ ಮರೆಯಾಗುತ್ತಿದೆ. ಒಂದು ಬೆಳೆ ಅಜ್ಞಾತವಾಗುವುದೆಂದರೆ, ಒಂದು ಸಂಸ್ಕೃತಿಯೇ ಹೊರಟು ಹೋದಂತೆ. ಕೃಷಿಯಲ್ಲಿ ಯಂತ್ರೋಪಕರಣಗಳ ಧಾವಂತದ ಕಾಲಘಟ್ಟದಲ್ಲಿ ನಾವಿರುವಾಗ, ಸಂಸ್ಕರಣ ಘಟಕದ ಆವಿಷ್ಕಾರ ಕಷ್ಟವೇನಲ್ಲ. ಇತರ ಆಹಾರ ವಸ್ತುಗಳಿಗೆ ಸಂಸ್ಕರಣಾ ಘಟಕವಿದ್ದಂತೆ, ಹಾರಕಕ್ಕೂ ಪ್ರತ್ಯೇಕವಾದ 'ಮಿಲ್' ರೂಪೀಕರಣವಾದಲ್ಲಿ, ಮರೆಯಾಗುತ್ತಿರುವ ಈ ಕಿರುಧಾನ್ಯ ಹೊಲಕ್ಕೆ ಮರಳಬಲ್ಲುದು. ಅನ್ನದ ಬಟ್ಟಲು ಸೇರಬಲ್ಲದು. ಹಿರಿಯರಲ್ಲಿದ್ದ ಹಾರಕದ ಅನ್ನ ಉಣ್ಣುವ ಒಲವು ಕಿರಿಯರಲ್ಲೂ ಮೂಡಬಹುದು. ಬಸ್ ವ್ಯವಸ್ಥೆ ಇಲ್ಲದ, ಮಾರುಕಟ್ಟೆ ತಲುಪದ ಹಳ್ಳಿಗಳಗೆ ಇನ್ನೂ ಹೈಬ್ರಿಡ್ ಧಾಂಗುಡಿಯಿಟ್ಟಿಲ್ಲ. ಹಾಗಾಗಿ ಅಧಿಕ ಪೌಷ್ಠಿಕಾಂಶವಿರುವ ಕಿರುಧಾನ್ಯಗಳ ಬೆಳೆ ಮತ್ತು ಬಳಕೆ ಅಲ್ಲಿ ಹೆಚ್ಚು ಉಳಿದುಕೊಂಡಿದೆ.
ಭಾರತದ ರಾಜಸ್ಥಾನ, ಉತ್ತರಪ್ರದೇಶದ ಉತ್ತರ ಭಾಗದಲ್ಲಿ, ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಹಾಗೂ ಪಶ್ಚಿಮ ಬಂಗಾಳದ ಪೂರ್ವ ಭಾಗದಲ್ಲಿ ಮತ್ತು ಮಧ್ಯ ಪ್ರದೇಶ, ಆಂಧ್ರಪ್ರದೇಶಗಳಲ್ಲಿ ಹಾರಕ ಬೆಳೆಯಿದೆ. ರಾಸಾಯನಿಕ ಬಳಸದ, ಸಿಂಪಡಣೆ ಕೇಳದ, ಪ್ರತ್ಯೇಕವಾದ ಯಾವುದೇ ಆರೈಕೆ ಬೇಕಾದ ಈ ಕಿರುಧಾನ್ಯ ಬರಸಹಿಷ್ಣು. ಹಾರಕವೂ ಸೇರಿದಂತೆ ಎಲ್ಲಾ ಕಿರುಧಾನ್ಯಗಳೂ ಅಕ್ಕಿ, ಗೋಧಿಗಿಂತ ಹೆಚ್ಚು ಪೋಷಕಾಂಶ ಹೊಂದಿದೆ. ನೂರು ಗ್ರಾಂ ಹಾರಕದಕ್ಕಿಯಲ್ಲಿ 8.3% ಪ್ರೊಟೀನ್, 9% ನಾರಿನಂಶ, 2.6 ಖನಿಜಾಂಶ, 0.5% ಕಬ್ಬಿಣ, 27 ಮಿ.ಗ್ರಾಂ. ಕ್ಯಾಲ್ಸಿಯಂ ಇದೆ.
(ಸಿರಿಧಾನ್ಯಗಳನ್ನು ಕುರಿತು ಕಾಮ್ ಬಳಗದವರು ಬರೆದಿರುವ ಉತ್ತಮ ಕನ್ನಡ ಲೇಖನಗಳಿಗೆ 'ಮಿಲೆಟ್ ನೆಟ್ ವರ್ಕ್ ಇಂಡಿಯಾ' ನೀಡುತ್ತಿರುವ ಬಹುಮಾನಗಲ್ಲಿ ಮೊದಲನೇ ಬಹುಮಾನ ಪಡೆದ ಬರೆಹ. ಈ ಬರೆಹವು 21-07-2010ರ ಉದಯವಾಣಿಯ ಹುಬ್ಬಳ್ಳಿ ಆವೃತ್ತಿಯಲ್ಲಿ ಪ್ರಕಟವಾಗಿತ್ತು.)



Sunday, October 17, 2010

ಸಾವಯವವಾಗಬೇಕಿದೆ, ಅಡುಗೆ ಮನೆ!


ತೋಟಕ್ಕೆ ರಸಗೊಬ್ಬರ, ವಿಷ ಸಿಂಪಡಣೆ ಮಾಡಿರಬಾರದು. ಒಳಸುರಿಗಳು ಅಲ್ಲಲ್ಲೇ ತಯಾರಾಗಿರಬೇಕು. ಕಂಪೆನಿ ಪ್ರಣೀತ ಯಾವುದೇ ವಸ್ತುಗಳು ತೋಟಕ್ಕೆ ನುಗ್ಗಿರಬಾರದು - ಮೇಲ್ನೋಟಕ್ಕೆ 'ಸಾವಯವ ಕೃಷಿ'ಯ ವ್ಯಾಖ್ಯಾನ ಈ ವ್ಯಾಪ್ತಿಯಲ್ಲಿ ಸುತ್ತುತ್ತಿರುತ್ತದೆ.
'ಮೊದಲು ಸರ್ಕಾರಿ ಗೊಬ್ಬರ ಹಾಕುತ್ತಿದ್ದೆ. ಕೀಟಗಳಿಗೆ ವಿಷ (ಔಷಧ) ಸಿಂಪಡಿಸುತ್ತಿದ್ದೆ. ಈಗ ಐದು ವರ್ಷವಾಯಿತು. ನಾನು ಪೂರ್ತಿ ಸಾವಯವ.' ಹೀಗೆನ್ನುವ ಸಾಕಷ್ಟು ಮಂದಿ ಸಿಗುತ್ತಾರೆ. 'ಕಳೆದೆರಡು ವರುಷದಿಂದ ನಮ್ಮ ತೋಟಕ್ಕೆ ನಾವೇ ಗೊಬ್ಬರ ತಯಾರಿಸುತ್ತಿದ್ದೇವೆ. ರಾಸಾಯನಿಕದಿಂದ ದೂರವಾಗುತ್ತಿದ್ದೇವೆ' ಹೀಗೆನ್ನುವ ವರ್ಗ ಇನ್ನೊಂದು. ಇದೊಂದು ಉತ್ತೇಜಕ ಬೆಳವಣಿಗೆ.
'ನಾನೀಗ ಐದು ವರುಷದಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. ಎರೆಗೊಬ್ಬರ ನನ್ನ ತೋಟದಲ್ಲೇ ರೆಡಿಯಾಗುತ್ತದೆ. ಸ್ಲರಿ ಧಾರಾಳ ಉಂಟು. ಆದರೂ ಗಿಡ ಸೊರಗಬಾರದಲ್ಲಾ, ಹಾಗಾಗಿ ಸ್ಲರಿಯೊಂದಿಗೆ ಸ್ವಲ್ಪ ಯೂರಿಯಾ, ಪೊಟೇಷ್ ಹಾಕಿದ್ದೇನೆ. ಗೆದ್ದಲು ಬಂದಿತ್ತು. ಆಗ್ರೋದಂಗಡಿಯಿಂದ ಬಿಳಿ ಪುಡಿ ತಂದು ಉದುರಿಸಿದ್ದೇನೆ' ಹೀಗೆನ್ನುವ ಸಾವಯವ ಕೃಷಿಕರ ಮುಖಪರಿಚಯ ಚೆನ್ನಾಗಿದೆ. ಅಂತಹವರ ಗೋಡೌನ್ಗೆ ಹೋದರೆ ಸರ್ಕಾರಿ ಗೊಬ್ಬರದ ಖಾಲಿ ಚೀಲಗಳು ರಾಶಿ ಬಿದ್ದಿರುತ್ತವೆ!
ಸರಕಾರವು ಸಾವಯವ ಕೃಷಿಗೆ ಪ್ರೋತ್ಸಾಹ ನೀಡುತ್ತಿದೆ. ಅದರ ಅನುಷ್ಠಾನಕ್ಕೆ 'ಸಾವಯವ ಮಿಶನ್' ಸ್ಥಾಪಿಸಿದೆ. ತಾಲೂಕು ಮಟ್ಟದಲ್ಲಿ ವ್ಯವಸ್ಥಿತವಾಗಿ ಮಿಶನ್ ಕಾರ್ಯವೆಸಗುತ್ತಿದೆ. 'ಒಂದೆರಡು ವರುಷದಲ್ಲಿ ಹೊಲಗಳು ಸಾವಯವವಾಗದು. ಇದು ಆರಂಭ ಮಾತ್ರ. ರಸಗೊಬ್ಬರ ತಿಂದು ರಸಹೀನವಾದ ಮಣ್ಣಿನ ಫಲವತ್ತತೆ ಹೆಚ್ಚಬೇಕು. ವಿಷ ಕುಡಿದು ನಿಸ್ತೇಜವಾದ ಗಿಡಗಳು ಪುನಶ್ಚೇತನಗೊಳ್ಳಬೇಕು. ಅದಕ್ಕಾಗಿ ಐದಾರು ವರುಷ ಕಾಯಬೇಕು'-ರಾಜ್ಯ ಸಾವಯವ ಮಿಶನ್ ಅಧ್ಯಕ್ಷ ಡಾ.ಆ.ಶ್ರೀ.ಆನಂದ್ ಹೇಳಿದ ಮಾತು ವಾಸ್ತವಕ್ಕೆ ಕನ್ನಡಿ.
ಸಾವಯವದ ಕುರಿತು ಆರೋಗ್ಯಕರ ಫಲಶ್ರುತಿ ಕನ್ನಾಡಿನಾದ್ಯಂತ ಕಂಡುಬರುತ್ತಿದೆ. ಉತ್ತಮ ಆರೋಗ್ಯಕ್ಕೆ ಸಾವಯವ ಕೃಷಿಯೊಂದೇ ದಾರಿ. ವಿಷ ಸಿಂಪಡಿಸಿದ ಆಹಾರ ಮೆದ್ದು ನಾವೆಲ್ಲಾ ವಿಷಕಂಠರಾಗಿದ್ದೇವೆ! ಮಾರುಕಟ್ಟೆಯಲ್ಲಿ 'ಶ್ರೇಷ್ಠವೆಂದು ಸಿಗುವ' ಕಾಯಿಪಲ್ಲೆಯ ಅಕರಾಳ-ವಿಕರಾಳ ಮುಖ ಎಷ್ಟು ಮಂದಿಗೆ ಗೊತ್ತು? ಈಚೆಗೆ ಟಿವಿ9 ವಾಹಿನಿಯಲ್ಲಿ 'ತರಕಾರಿಗಳಲ್ಲಿ ವಿಷ' ಎಂಬ ವೈಚಾರಿಕ ಕಾರ್ಯಕ್ರಮ ಪ್ರಸಾರವಾಗಿತ್ತು. ಆ ದಿನ ಕನಿಷ್ಟವೆಂದರೂ ನೂರರ ಹತ್ತಿರ ಆತ್ಮೀಯರ ಕರೆಗಳನ್ನು ಸ್ವೀಕರಿಸಿದ್ದೆ.
ತರಕಾರಿಗೆ ಸಿಂಪಡಿಸುವ ವಿಷಗಳು ದೇಹವನ್ನು ನೇರವಾಗಿ ಹೇಗೆ ಸೇರುತ್ತವೆ, ಅದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಬಿತ್ತರವಾಗಿತ್ತು. ಬಹಳ ಪರಿಣಾಮಕಾರಿಯಾದ ಕಾರ್ಯಕ್ರಮ.
ಇದಾದ ಎರಡೇ ದಿವಸದಲ್ಲಿ ಬಹುತೇಕ ಎಲ್ಲಾ ಮೊಬೈಲ್ಗಳಿಗೂ ದೆಹಲಿ ಮೂಲದಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ 'ಹೂಕೋಸನ್ನು ತಿನ್ನಬೇಡಿ. ತಿಂದರೆ 'ಹೈಬೋನ್ ಫೀವರ್'ನ ವೈರಸ್ ಹರಡುತ್ತದೆ ಎಂದಿತ್ತು. ಈ ಸಂದೇಶವನ್ನು ಡಿಲೀಟ್ ಮಾಡಬಹುದಿತ್ತು. ಹೂಕೋಸು ಎಷ್ಟು ಸಲ ವಿಷದಲ್ಲಿ ಸ್ನಾನ ಮಾಡುತ್ತೆ ಎಂಬ ಪ್ರತ್ಯಕ್ಷ ಅರಿವಿದ್ದುದರಿಂದ ಆ ಸಂದೇಶವನ್ನು ಡಿಲೀಟ್ ಮಾಡಿಲ್ಲ! ಇತ್ತೀಚೆಗೆ ಕೇಂದ್ರ ಸರಕಾರವೇ ತರಕಾರಿಗಳಿಗೆ ಸಿಂಪಡಿಸುವ ವಿಷಗಳ ಕುರಿತು ಆತಂಕ ವ್ಯಕ್ತಪಡಿಸಿತ್ತು.
ಕಳೆದ ವಾರ ಪುತ್ತೂರಿನ ತರಕಾರಿ ಅಂಗಡಿಯೊಂದರಿಂದ ಮುಳ್ಳುಸೌತೆಯ ಚಿಕ್ಕ ಮಿಡಿಗಳನ್ನು ಖರೀದಿಸಿ ತಿಂದಿದ್ದೆ. ತಿಂದದ್ದು ಸ್ವಲ್ಪ ಹೆಚ್ಚೇ ಆಗಿತ್ತು! ಎರಡು ದಿವಸ ನಾಲಗೆ 'ದಡ್ಡು' ಕಟ್ಟಿತ್ತು! ಹಿಂದೊಮ್ಮೆ ಎಳೆ ಜೋಳವನ್ನು ತಿಂದಾಗಲೂ ಇಂತಹುದೇ ಅನುಭವವಾಗಿತ್ತು. ಇದು ವಿಷ ಸಿಂಪಡಣೆಯ ಪ್ರಭಾವ. ಇದರ ಒಟ್ಟೂ ನೇರ ಪರಿಣಾಮ ಅರೋಗ್ಯದ ಮೇಲೆ ಬಾರದೆ ಇದ್ದೀತೇ?'
ನಿಮ್ಮ ಮಕ್ಕಳಿಗೆ ವಿಷವನ್ನು ಕೊಡಬೇಡಿ. ಸಾವಯವ ಕೃಷಿ ತೋಟದಲ್ಲಾದರೆ ಸಾಲದು, ನಮ್ಮ ಅಡುಗೆ ಮನೆಗಳೂ ಸಾವಯವವಾಗಬೇಕು' ಆನಂದ್ ಸಭೆಯೊಂದರಲ್ಲಿ ವಿನಂತಿಸಿದ ಬಗೆ. ಹೌದಲ್ಲಾ, ನಮ್ಮ ಅಡುಗೆ ಮನೆ ಎಷ್ಟು ವಿಷರಹಿತವಾಗಿದೆ? ಒಮ್ಮೆ ಇಣುಕಿದರೆ ಸತ್ಯದರ್ಶನವಾಗುತ್ತದೆ. ತರಕಾರಿ ಅಂಗಡಿಯಲ್ಲಿ ಪೇರಿಸಿಟ್ಟ ಕೆಂಪುರಂಗಿನ ಟೊಮೆಟೋ, ನುಣುಪಾದ ಗುಳ್ಳಬದನೆ, ಮಾರುದ್ದದ ಹೀರೆಕಾಯಿ, ಬೆರಳಗಾತ್ರದ ತೊಂಡೆಕಾಯಿ ಹೀಗೆ ಮಾರುಕಟ್ಟೆಗೆ ಬರುವ 'ಪಾಷ್' ತರಕಾರಿಗಳ ವಿಷದ ಕತೆಗಳು ಹೆಜ್ಜೆಗೊಂದರಂತಿದೆ.
ಪರಿಹಾರ ಹೇಗೆ? ಎಲ್ಲರೂ ಸಾವಯವ ಕೃಷಿ ಮಾಡಲು ಸಾಧ್ಯವೇ? ಎಲ್ಲರೂ ಕೃಷಿಕರಾಗಲು ಸಾಧ್ಯವೇ? ಹೀಗೆ 'ಅಡ್ಡ ಪ್ರಶ್ನೆ'ಗಳು, ತಕ್ಷಣದ ಪ್ರತಿಕ್ರಿಯೆಗಳು ಬಂದುಬಿಡುತ್ತವೆ. 'ನಮಗೆ, ನಮ್ಮ ಮಕ್ಕಳಿಗೆ, ನಮ್ಮ ಕುಟುಂಬದ ಮಂದಿ ಆರೋಗ್ಯವಾಗಿರಬೇಕಾದರೆ ಅಡುಗೆ ಮನೆಗಳು ಸಾವಯವವಾಗಲೇ ಬೇಕು'. ಇದಕ್ಕಾಗಿ ದಿಢೀರ್ ಸಾವಯವ ಕೃಷಿಕರಾಗಿ ನಾವು ರೂಪಾಂತರವಾಗಬೇಕಿಲ್ಲ. ಅಪ್ಪಟ ಸಾವಯವ ಕೃಷಿಕರನ್ನು ಪ್ರೋತ್ಸಾಹಿಸಿದರೆ ಸಾಕು. ಅವರಲ್ಲಿರುವ ವಸ್ತುಗಳನ್ನು, ಉತ್ಪನ್ನಗಳನ್ನು ಕೊಂಡು ಅಡುಗೆ ಮನೆಯನ್ನು ಸಾವಯವಗೊಳಿಸಬಹುದಲ್ಲಾ.
'ಸಾವಯವದ ವಸ್ತುಗಳಿಗೆ ಬೆಲೆ ಜಾಸ್ತಿಯಲ್ವಾ' ಎಂಬ ನಂಬುಗೆ ಇದೆ. ವಿಚಾರ ಹೌದಾದರೂ, ಸಾವಯವ ಕೃಷಿಯ ಕಷ್ಟವನ್ನರಿತರೆ ಇಂತಹ ಪ್ರಶ್ನೆ ಬಾರದು. ನಮ್ಮ ಆರೋಗ್ಯ ಚೆನ್ನಾಗಿರಬೇಕು, ಯಾವುದೇ ಕಾರಣಕ್ಕೂ ಆಸ್ಪತ್ರೆಯ ಬೆಡ್ನಲ್ಲಿ ಮಲಗುವ 'ಯೋಗ' ಬಾರದಿರಲು ಅಡುಗೆ ಮನೆ ಸಾವಯವಗೊಳ್ಳುವುದು ಒಂದೇ ದಾರಿ.ಉತ್ಪನ್ನ 'ಸಾವಯವ' ಎಂದ ಕೂಡಲೇ ಮಾರುಕಟ್ಟೆ ದರಕ್ಕಿಂತ ನಾಲ್ಕೈದು ಪಟ್ಟು ದರ ನಿಗದಿ ಮಾಡುವುದೂ ಸರಿಯಲ್ಲ. ಕೃಷಿಕ-ಗ್ರಾಹಕ ಒಂದೇ ಸರಳರೇಖೆಯ ಬಿಂದುಗಳು. ಉತ್ಪನ್ನದ ಗುಣಮಟ್ಟ ಚೆನ್ನಾಗಿದ್ದರೆ, ಸತತವಾಗಿ ದೊರೆಯುವಂತಿದ್ದರೆ ಗ್ರಾಹಕಪ್ರಭು ಉತ್ಪನ್ನಗಳನ್ನು ಹುಡುಕಿ ಬರುತ್ತಾನೆ. ಆನಂದ್ ಹೇಳುವಂತೆ, ಇದು ಆರಂಭ. ಸಾಗಲು ಇನ್ನೂ ದೂರವಿದೆ. ಸಾವಯವವೆಂದರೆ ವಿಶ್ವಾಸ. ಅದೊಂದು ಬದುಕು. ಮಣ್ಣಿನ ಫಲವತ್ತತೆಯ ಖಾತ್ರಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಿದೆ.