Wednesday, December 7, 2016

'ಶ್ರೀ' ಪಡ್ರೆಯವರಿಗೆ 'ಕುಸುಮಾಶ್ರೀ' ಪ್ರಶಸ್ತಿ


             ಕುಂದಾಪುರ ನಾಗೂರಿನ ಕುಸುಮಾ ಫೌಂಡೇಶನ್ ಇವರು ಪ್ರಾಯೋಜಿಸುವ 'ಕುಸುಮಾಶ್ರೀ' ಪ್ರಶಸ್ತಿಗೆ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಭಾಜನರಾಗಿದ್ದಾರೆ. ದಶಂಬರ 11ರಂದು ಸಂಜೆ ನಾಗೂರಿನ ಕುಸುಮ ಸಂಸ್ಥೆಯ ವಠಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
               ಶ್ರೀ ಪಡ್ರೆಯವರು ನೆಲಜಲ ಸಂರಕ್ಷಣೆ, ಅಲಕ್ಷಿತ ಬೆಳೆ ಹಲಸು, ಕೃಷಿಕರ ಕೈಗೆ ಲೇಖನಿ ಮೊದಲಾದ ಆಂದೋಳನಗಳಿಗೆ ಶ್ರೀಕಾರ ಬರೆದವರು. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ. ಕನ್ನಾಡಿನ ವಿವಿಧ ಪತ್ರಿಕೆಗಳ ಅಂಕಣಗಾರರು. ಈಚೆಗೆ ಪುತ್ತೂರಿನಲ್ಲಿ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಜರುಗಿದ 'ವಾಟ್ಆ್ಯಪ್ ಪತ್ರಿಕೋದ್ಯಮ' ಶಿಬಿರದ ರೂವಾರಿ.
            ತಿರುವನಂತಪುರಂನ ಜಾಕ್ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮ ಸಂಸ್ಥೆಯು ಈಚೆಗೆ ಶ್ರೀ ಪಡ್ರೆಯವರಿಗೆ 'ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ' ಎಂದು ಗೌರವಿಸಿತ್ತು. ಇದಕ್ಕೂ ಮೊದಲು ಕೊಚ್ಚಿಯ ದಿಶಾ ಟ್ರಸ್ಟ್ ಅವರಿಗೆ ಇದೇ ಕೆಲಸಕ್ಕಾಗಿ 'ದಿಶಾ ಗ್ರೀನ್ ಗ್ಲೋಬ್ ಪ್ರಶಸ್ತಿ' ನೀಡಿತ್ತು.
              ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಹದಿನೈದು ಕೃತಿಗಳ ರಚಯಿತರು. ಈಚೆಗೆ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರ ಪ್ರಕಾಶಿಸಿದ 'ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ' ಎನ್ನುವ ಕೃತಿಯು ಹದಿನಾರನೆಯದು.
                ರಾಷ್ಟ್ರೀಯ, ರಾಜ್ಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದೆ ಶ್ರೀ ಪಡ್ರೆಯವರಿಗೆ (೦೪೯೯೮-೨೬೬೧೪೮) ಈಗ 'ಕುಸುಮಾಶ್ರೀ' ಪ್ರಶಸ್ತಿಯ ಗೌರವ.


Tuesday, December 6, 2016

ಆಹಾರ ಸರಪಳಿಯಲ್ಲಿ ಹಲಸೀಗ ಹುಮ್ಮಸಿನ ವಿಷಯ

                ಕೊಟ್ಟಾಯಂ ಜಿಲ್ಲೆಯ ಪಾಲಾದ ಕೃಷಿಕ ಥಾಮಸ್ ಕಟ್ಟಕಯಂ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹಲವಾರು ಮಾತ್ರೆಗಳನ್ನು ನುಂಗಿದರೂ ಪ್ರಯೋಜನವಾಗಿಲ್ಲ. ಹಲಸಿನ ಕಾಯಿಸೊಳೆಯ ಪಲ್ಯ (ಚಕ್ಕ ಪುಳುಕ್ಕ್) ಮತ್ತು ಆಹಾರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಲಸನ್ನು ಸುಮಾರು ಆರು ತಿಂಗಳು ಬಳಸುತ್ತಾ ಬಂದರು. ಈಗವರು ರಕ್ತದೊತ್ತಡದಿಂದ ಪಾರಾಗಿದ್ದಾರೆ! ಮಾತ್ರೆಗಳ ಹಂಗಿಲ್ಲ. ಹಲಸಿನ ಔಷಧೀಯ ಮಹತ್ತನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಹಲಸಿನ ಗಿಡಗಳನ್ನು ಅಭಿವೃದ್ಧಿ ಮಾಡುವತ್ತ ನಿರ್ಧಾರ ಮಾಡಿದ್ದಾರೆ. ಒಂದು ಕಾಲಘಟ್ಟದಲ್ಲಿ ಹಲಸಿನ ಮರಗಳನ್ನು ಕಡಿದು ರಬ್ಬರ್ ಹಬ್ಬಿಸಲಾಗಿತ್ತು. ಈಗ ತನ್ನ ಹತ್ತೆಕ್ರೆಯಲ್ಲಿ ಒಂದೆಕ್ರೆಯಷ್ಟು ಹಲಸಿನ ನೂರಕ್ಕೂ ಮಿಕ್ಕಿ ವಿವಿಧ ತಳಿಗಳನ್ನು ಬೆಳೆಸಿ ಅಭಿವೃದ್ಧಿ ಮಾಡುತ್ತಿದ್ದಾರೆ. ಇತರರಿಗೂ ಈ ಸಂದೇಶವನ್ನು ರವಾನಿಸುತ್ತಿದ್ದಾರೆ.
              ಇನ್ನೊಂದು ಬ್ರೇಕಿಂಗ್ ನ್ಯೂಸ್! ಕೇರಳದ ಕೃಷಿ ಇಲಾಖೆಯಲ್ಲಿರುವ ಮಧುಮೇಹ ಬಾಧಿತ ಸಿಬ್ಬಂದಿಗಳಿಗೆ ಹೊಸ ಸುದ್ದಿ. ತಮ್ಮ ಊಟದೊಂದಿಗೆ ಹಲಸನ್ನು ಗರಿಷ್ಠವಾಗಿ ಹೇಗೆ ಬಳಸಬಹುದು ಎನ್ನುವ 'ಹೊಸ ಪ್ರಯೋಗ'ದ ಕಡತವು ಕೃಷಿ ಇಲಾಖೆಯ ನಿರ್ದೇಶಕ ಬಿಜು ಪ್ರಭಾಕರ್ ಅವರಲ್ಲಿ ತೆರೆದಿದೆ. ಇಲಾಖೆಯ ಮುಖ್ಯ ಕಚೇರಿಯಲ್ಲಿ ದುಡಿಯುವ ಮಧುಮೇಹ ಅನುಭವಿಸುವ ಸಿಬ್ಬಂದಿಗಳಿಗೆ ಹಲಸನ್ನು ದೈನಂದಿನ ಆಹಾರದಲ್ಲಿ ಸೇರಿಸುವ ಚಿಂತನೆ. 'ಇಲ್ಲಿಂದಲೇ ಪ್ರಯೋಗ ಶುರುವಾಗಲಿ' ಎನ್ನುವ ಆಶಯ. ಇಲಾಖೆಯ ಮಟ್ಟದಲ್ಲಿ ಇದೊಂದು ದೊಡ್ಡ ಬೆಳವಣಿಗೆ. ಮುಂದೆ ರಾಜ್ಯಕ್ಕೆ ಹಬ್ಬುವುದರಲ್ಲಿ ಸಂಶಯವಿಲ್ಲ.
               ಕೇರಳ ರಾಜ್ಯವು ಹಲಸಿನ ಮೌಲ್ಯವರ್ಧನೆ ಮತ್ತು ಬಳಕೆಯಲ್ಲಿ ದೇಶದಲ್ಲೇ ಮುಂದು. ಪಂಚತಾರಾ ಹೋಟೆಲಿನಿಂದ ಶ್ರೀಸಾಮಾನ್ಯನವರೆಗೂ ಇದೊಂದು ವಿಷರಹಿತ ತರಕಾರಿ, ಹಣ್ಣು ಎನ್ನುವ ಅರಿವು ಮೂಡಿದೆ, ಮೂಡುತ್ತಿದೆ. ಹಿತ್ತಿಲಲ್ಲಿ ಒಂದು ಮರವಾದರೂ ಇರಬೇಕೆನ್ನುವ ಮನಃಸ್ಥಿತಿಯ ಗಾಢತೆ ದಟ್ಟವಾಗುತ್ತಿದೆ. ಒಬ್ಬ ಆಟೋ ಡ್ರೈವರ್ ಕೂಡಾ ಹಲಸಿನ ಸುದ್ದಿಯನ್ನು ಮಾತನಾಡುತ್ತಾನೆ ಎಂದಾದರೆ ಕೇರಳ ರಾಜ್ಯವು ಹಲಸನ್ನು ಒಪ್ಪಿಕೊಂಡ, ಅಪ್ಪಿಗೊಂಡ ಬಗೆ ಅರ್ಥವಾಗುತ್ತದೆ. ಇದೊಂದು ಆಹಾರ ಸುರಕ್ಷೆ ಎನ್ನುವ ಭಾವ ದೃಢವಾಗುತ್ತಿದೆ.
                  ತಮಿಳುನಾಡಿನ ಪನ್ರುತ್ತಿಯು ಹಲಸಿನ ಕಾಶಿ. ಹಲಸಿಗೆ ಆರ್ಥಿಕತೆಯನ್ನು ತಂದ ಊರು. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಪ್ರವೇಶಿಸಿದರೂ ಕೃಷಿಕನಿಗೆ ಹೆಚ್ಚು ಆದಾಯ ತರುವ ಹಣ್ಣಿದು. ದೇಶಮಟ್ಟದಲ್ಲಿ ಪನ್ರುತ್ತಿಯ ಹಣ್ಣಿಗೆ ಪ್ರತ್ಯೇಕ ಸ್ಥಾನ. ಇಂತಹ ಊರಲ್ಲಿ ಒಂದೇ ಒಂದು ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿಲ್ಲ! ಮೌಲ್ಯವರ್ಧನೆಯ ಸಾಮೂಹಿಕ ಚಿಂತನೆಗಳು ನಡೆದಿಲ್ಲ. ಹಲಸಿನ ಸ್ವರ್ಗಕ್ಕೆ ನೀವೇನಾದರೂ ಹೋದರೆ ಅಲ್ಲಿಂದ ನೆನಪಿಗೆ ತರಬಹುದಾದ ಹಲಸಿನ ಪರಿಮಳಗಳು ಇಲ್ಲವೇ ಇಲ್ಲ. ಈ 'ಇಲ್ಲ'ಗಳು ಈಗ ದೂರವಾಗಿವೆ. ರೈತರ ಆಸಕ್ತಿಯಿಂದ ಎರಡು ಹಬ್ಬಗಳು ನಡೆದಿವೆ. ಕೃಷಿಕ ಚಂದ್ರಶೇಖರ್ ಕಾಯಿಸೊಳೆಯ ಪುಡಿಯನ್ನು ತಯಾರಿಸಿ, ಆಹಾರ ಪೂರಕ ಉತ್ಪನ್ನವಾಗಿ ಪರಿಚಯಿಸಿದ್ದಾರೆ.
               ಚೆನ್ನೈ ಮೂಲದ 'ಶರವಣ ಭವನ್' ದೇಶ, ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿದ ಪ್ರಸಿದ್ಧ ಹೋಟೆಲ್ ಸಮೂಹ. ಇದು ಪನ್ರುತ್ತಿಯ ಕೃಷಿಕ ಕರುಣಾಕರ್ ಅವರಿಂದ ಹಲಸಿನ ಹಣ್ಣನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಹಲಸಿನ ಮಿಲ್ಕ್ಶೇಕ್, ಐಸ್ಕ್ರೀಮನ್ನು ಗ್ರಾಹಕರಿಗೆ ಪರಿಚಯಿಸಹತ್ತಿದೆ. ಪನ್ರುತ್ತಿಯ ರಖಂ ಹಣ್ಣಿನ ವ್ಯಾಪಾರಿಯೊಬ್ಬರು ಪಾಂಡಿಚೇರಿಯಲ್ಲಿ ಮಳಿಗೆ ತೆರೆಯುವ ಯೋಚನೆ ಮಾಡಿದ್ದಾರೆ. ವಯನಾಡಿನ ಹಲಸು ವಿಶೇಷಜ್ಞ ಸುನೀಶ್ ಅವರನ್ನು ಕರೆಸಿ ಹಣ್ಣಿನ ಮಂದರಸ ಮಾಡಿಕೊಡಲು ವಿನಂತಿಸಿದ್ದಾರೆ. ಸುನೀಶ್ ಪ್ರಾಯೋಗಿಕವಾಗಿ ಹಲಸಿನ ಹಣ್ಣು ಮುಖ್ಯ ಕಚ್ಚಾವಸ್ತುವಾಗಿರುವ ಹತ್ತೊಂಭತ್ತು ನಮೂನೆಯ ವಿವಿಧ ರುಚಿಗಳನ್ನು ಸೇರಿಸಿದ ಜ್ಯೂಸ್ ಸಿದ್ಧಪಡಿಸಿದ್ದಾರೆ. ಆ ವ್ಯಾಪಾರಿ ತಮ್ಮ ಆಸಕ್ತರಿಗೆ ಕುಡಿಯಲು ನೀಡಿದ್ದಾರೆ. ಹಿಮ್ಮಾಹಿತಿ ಪಡೆದಿದ್ದಾರೆ. ಇನ್ನೇನು, ಪಾಂಡಿಚೇರಿಯಲ್ಲಿ ಪನ್ರುತ್ತಿಯ ಹಲಸಿನ ಹಣ್ಣಿನ ಪರಿಮಳ ಹಬ್ಬಲಿದೆ.
                ಕೇರಳದ ಆಹಾರ ಸರಪಳಿಯಲ್ಲಿ ಹಲಸಿನ ಬಳಕೆ ಹೆಜ್ಜೆಯೂರಿದೆ.  ಮಸಾಲೆದೋಸೆಗೆ ಪಲ್ಯ(ಬಾಜಿ)ವಾಗಿ ಆಲೂಗೆಡ್ಡೆಯ ಬದಲಿಗೆ ಕಾಯಿಸೊಳೆಯನ್ನು ಬಳಸುವ ಯತ್ನವನ್ನು 'ಪ್ರಿಯಾ' ಎನ್ನುವ ಉದ್ದಿಮೆ ಮಾಡಿ ಯಶಸ್ಸಾಗಿದೆ. ಕೊಚ್ಚಿಯ ಆರ್ಗಾಾನಿಕ್ ರೆಸ್ಟೋರೆಂಟಿನಲ್ಲಿ ಈಚೆಗೆ ದಿನಕ್ಕೊಂದು ಹಲಸಿನ ಐಟಂ ಗ್ರಾಹಕರಿಗೆ ಸಿಗುವಂತೆ ವ್ಯವಸ್ಥೆ ಮಾಡಿಕೊಂಡಿದೆ. 'ವೆಜಿಟೇಬಲ್ ಅಂಡ್ ಫ್ರುಟ್ಸ್ ಪ್ರೊಮೋಶನ್ ಕೌನ್ಸಿಲ್ ಆಫ್ ಕೇರಳ' ಎನ್ನುವ ಖಾಸಗಿ ಸಂಸ್ಥೆಯು ಆದೇಶದ ಮೇರೆಗೆ ಎಳೆಹಲಸನ್ನು 'ಬಳಸಲು ಸಿದ್ಧ' ರೂಪದಲ್ಲಿ ಪೂರೈಸಲು ಶುರು ಮಾಡಿದ್ದಾರೆ.
               ತೋಡುಪುಳದ ರೈತಪರ ಸಂಸ್ಥೆ 'ಕಾಡ್ಸ್' ಹಲಸಿನ ಕಾಯಿಯನ್ನು ತುಂಡರಿಸಿ, ಸೊಳೆ ತೆಗೆದು ಮಾರುಕಟ್ಟೆ ಮಾಡುತ್ತಿದೆ. ಕಾಯಿಯನ್ನು ಹಣ್ಣಾಗಿಸಿ ಮಾರುತ್ತಿದ್ದ ಈ ಸಂಸ್ಥೆಯ ಉತ್ಪನ್ನ ಈಗ ತರಕಾರಿಯಾಗಿ ಅಡುಗೆ ಮನೆ ಸೇರುತ್ತಿದೆ. ಪಾಲಕ್ಕಾಡಿನ ಇನ್ನೊಂದು ಸರಕಾರೇತರ ಸಂಸ್ಥೆಯು ಸುಮಾರು ಎಂಟು ಟನ್ನಿನಷ್ಟು ನಿರ್ಜಲೀಕೃತ ಕಾಯಿಸೊಳೆಯನ್ನು ಉತ್ಪಾದನೆ ಮಾಡಿದೆ. ತನ್ನ ಅರ್ಧ ಡಜನ್ ಘಟಕಗಳ ಮೂಲಕ ಗ್ರಾಹಕರಿಗೆ ವಿತರಿಸುತ್ತಿದೆ.
               ವಯನಾಡಿನ 'ಅಣ್ಣಾ ಫುಡ್ಸ್' ಸಂಸ್ಥೆಯ ಜಾನ್ಸನ್ ಎನ್ನುವವರು ಮೀನಂಗಾಡಿಯಲ್ಲಿ ಮಳಿಗೆ ತೆರೆದಿದ್ದಾರೆ. ಅದರಲ್ಲಿ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ವರ್ಷವಿಡೀ ಸಿಗಬೇಕೆನ್ನುವ ಆಶಯ. ಪಾಲಕ್ಕಾಡಿನಲ್ಲಿ 'ಚಿಕ್ಕೂಸ್ ಐಸ್ಕ್ರೀಂ' ಇದರ ಮೃದುವರ್ಣನ್ ಇದೇ ತರಹದ ಮಳಿಗೆಯನ್ನು ಈಗಾಗಲೇ ತೆರೆದಿದ್ದಾರೆ. ಇದರಲ್ಲಿ ಐಸ್ಕ್ರೀಂ ಮತ್ತು ಇತರ ಉತ್ಪನ್ನಗಳು ಸಿಗುತ್ತಿವೆ. ಎರ್ನಾಕುಳಂನಲ್ಲಿ ಶಾಜಿ ಎನ್ನುವ ಸಾವಯವ ಅಂಗಡಿಯ ಮಾಲಕರು ತಮ್ಮಲ್ಲಿ 'ಜಾಕ್ ಫ್ರುಟ್ ಕಾರ್ನರ್' ಎನ್ನುವ ಪ್ರತ್ಯೇಕ ವಿಭಾಗವನ್ನೇ ತೆರೆದಿದ್ದಾರೆ.
               ವಿದೇಶಿ ಮಲೆಯಾಳಿಗಳ ಬಾಯಿ ರುಚಿಗೆ ಮಾತೃನೆಲದ 'ಅಡುಗೆಗೆ ಸಿದ್ಧ' ಕಾಯಿಸೊಳೆ ರಫ್ತಾಗಿದೆ! ಕೇರಳದ ಪಾಲಾದಲ್ಲಿರುವ ಮಲ್ಟಿಸ್ಟೇಟ್ ಅಗ್ರಿಕಲ್ಚರ್ ಪ್ರೊಡ್ಯೂಸರ್ಸ್  ಪ್ರಾಸೆಸಿಂಗ್ ಅಂಡ್ ಮಾರ್ಕೆಟಿಂಗ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ರೋನಿ ಮ್ಯಾಥ್ಯೂ ಅವರ ಉತ್ಸಾಹದಲ್ಲಿ ಹಲಸು ಕಡಲಾಚೆ ಹಾರಿದೆ. ಹೀಗೆ ಕಳುಹಿಸಿದ ಕಾಯಿಸೊಳೆಯನ್ನು ಪಲ್ಯದಂತಹ ಮುಖ್ಯ ಆಹಾರವಾಗಿ ಬಳಸುತ್ತಾರೆ. ಈ ವರುಷ ಈ ಸೊಸೈಟಿಯು ನೂರಹತ್ತು ಟನ್ ಹಲಸನ್ನು ಸುಲಿದು ಕಾಯಿಸೊಳೆಯಾಗಿ ವಿದೇಶಕ್ಕೆ ಕಳುಹಿಸಿದ್ದು ದೊಡ್ಡ ಸಾಧನೆ.
               ತಿರುವನಂತಪುರದಿಂದ ಹೊರಟ 'ಚಕ್ಕವಂಡಿ'(ಹಲಸಿನ ಉತ್ಪನ್ನಗಳ ಗಾಡಿ)ಯು ದಶಂಬರ  ಐದರಿಂದ ಒಂಭತ್ತರ ತನಕ ಕಾಸರಗೋಡಿನಲ್ಲಿ ಸಂಚರಿಸುತ್ತದೆ. ಇದೇ ಗತಿಯಲ್ಲಿ ಕೇರಳದ ಹಲಸು ಪ್ರೇಮವು ಮುಂದುವರಿದರೆ, 'ತೆಂಗಿನ ನಾಡು' ಎನ್ನುವ ಗರಿಮೆಯನ್ನು ಪಡೆದ ಕೇರಳವು 'ಹಲಸಿನ ನಾಡು' ಎಂದಾಗಲು ಹೆಚ್ಚು ದಿನ ಬೇಕಿಲ್ಲ!  ಹಲಸಿನ ಕುರಿತಾದ ಕೀಳರಿಮೆ ಹೊರಟು ಹೋಗುತ್ತಿದೆ. ಹಲಸಿನ ಕಾಳಜಿ ಎದ್ದು ನಿಂತಿದೆ, ಹೊಸ ಹೊಸ ಸಾಧ್ಯತೆಗಳತ್ತ ನೋಡುತ್ತಿದೆ.
                  ಕೇರಳದ ಸುದ್ದಿ ಹೀಗಾಯಿತು. ದೇಶ, ವಿದೇಶಗಳು ಇನ್ನೂ ಒಂದು ಹೆಜ್ಜೆ ಮುಂದಿರಿಸಿವೆ. ಹಲಸಿನ ಕೆಲಸಗಳು ಜಾಲತಾಣಗಳಲ್ಲಿ ಕಾಣಿಸಿಕೊಂಡು ಹಲಸುಪ್ರಿಯರೊಳಗೆ ಸಂವಹನ ಏರ್ಪಟ್ಟಿವೆ. ಬ್ಲಾಗ್ಗಳಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಹಲಸಿನ ಬಳಕೆಯ ವಿವಿಧ ಯತ್ನಗಳು ವೀಡಿಯೋ ಕ್ಲಿಪ್ಗಳ ಮೂಲಕ ಹರಿದಾಡುತ್ತಿವೆ. ಇದರಿಂದಾಗಿ ವಿಶ್ವಮಟ್ಟದಲ್ಲಿ ಹಲಸು ಮಾತಿಗೆ ವಸ್ತುವಾಗಿದೆ. 
              ಹಲಸಿನ ಮೌಲ್ಯವರ್ಧನೆಯ ಯಶೋಗಾಥೆಗಳು ಜಾಲತಾಣಗಳಲ್ಲಿ ಸಿಗುತ್ತವೆ. ವೃತ್ತಿಪರ ಮತ್ತು ಹವ್ಯಾಸಿ ಪತ್ರಕರ್ತರು ಆಸಕ್ತರಾಗಿದ್ದಾರೆ. ಜಾಲತಾಣಗಳ ಸುಳಿವು ಮೂಲಕ ಕಳೆದ ಮೂರ್ನಾಲ್ಕು ತಿಂಗಳಿಂದೀಚೆಗೆ ಹೊರದೇಶಗಳ ಪತ್ರಕರ್ತರು ಸಂಪರ್ಕಿಸಿದ್ದಾರೆ. ಹಲಸಿನ ರಂಗದ ಹೊಸ ಬೆಳವಣಿಗೆಗಳನ್ನು ಇಡೀ ಜಗತ್ತೇ ಬೆರಗು ಕಣ್ಣುಗಳಿಂದ ನೋಡಲಾರಂಭಿಸಿದೆ. ಎನ್ನುತ್ತಾರೆ ಶ್ರೀ ಪಡ್ರೆ. ಇವರು ದಶಕದ ಹಿಂದೆ ಹಲಸಿನ ಆಂದೋಳನಕ್ಕೆ ಶ್ರೀಕಾರ ಬರೆದವರು.
                  ಈ ಆಂದೋಳನಕ್ಕಾಗಿ ಶ್ರೀ ಪಡ್ರೆಯವರು ದೇಶ, ವಿದೇಶಗಳ ಹಲಸು ಪ್ರಿಯರನ್ನು ಸಂಪರ್ಕಿಸಿದ್ದಾರೆ. ಮಾಹಿತಿ ಕಲೆಹಾಕಿದ್ದಾರೆ. ಅಡಿಕೆ ಪತ್ರಿಕೆಯೂ ಸೇರಿದಂತೆ ಕನ್ನಾಡಿನ ಮಾಧ್ಯಮಗಳಲ್ಲಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದೇಶದ ಪ್ರತಿಷ್ಠಿತ ಪತ್ರಿಕೆಯಲ್ಲೂ ಲೇಖನಗಳು ಪ್ರಕಟವಾಗಿದೆ. ಇಂತಹ ಅಪೂರ್ವವಾದ ಆಯ್ದ ಮಾಹಿತಿಗಳ ಸಂಕಲನ 'ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ' ಪುಸ್ತಕವು ನವೆಂಬರ್ 20ರಂದು ಪುತ್ತೂರಿನಲ್ಲಿ ಅನಾವರಣಗೊಂಡಿದೆ. ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರವು ಪುಸ್ತಕವನ್ನು ಪ್ರಕಾಶಿಸಿದೆ.

ಚಿತ್ರ : ಶ್ರೀ ಪಡ್ರೆ

(ಉದಯವಾಣಿ/ನೆಲದ ನಾಡಿ / ೧-೧೨-೨೦೧೬