Wednesday, January 29, 2014

ಸಿದ್ಧಮೂಲೆ ಮತ್ತು ಬೆಂಡರವಾಡಿಯವರಿಗೆ - 'ಬೋಳಂತಕೋಡಿ ಕನ್ನಡ ಪ್ರಶಸ್ತಿ' ಪ್ರದಾನ



              "ಪುಸ್ತಕ ಪ್ರೀತಿಯಿದ್ದರೆ ಮಾತ್ರ ಸಾಹಿತ್ಯ ಹಿತವಾಗುತ್ತದೆ. ಸಂಮಾನ, ಪ್ರಶಸ್ತಿ, ಹಿರಿಯರ ಸ್ಮರಣೆ, ಸಾಹಿತ್ಯದ ಮಾತುಕತೆಗಳಿಂದ ಕನ್ನಡ ಸಾಹಿತ್ಯದ ಬೇರನ್ನು ಗಟ್ಟಿಮಾಡಿದಂತಾಗುತ್ತದೆ. ಬದುಕಿನಲ್ಲಿ ಅತ್ಯುನ್ನದ ಸಾಧನೆ ಮಾಡಿದವರನ್ನು ಸ್ಮರಿಸುವುದು, ಅವರ ಸಾಧನೆಯನ್ನು ಮೆಲುಕು ಹಾಕುವುದು ಕೂಡ ಸಾಹಿತ್ಯದ ಕೆಲಸವಾಗುತ್ತದೆ," ಎಂದು ಹಿರಿಯ ಸಾಹಿತಿ ಶ್ರೀಮತಿ ಎ.ಪಿ.ಮಾಲತಿ ಹೇಳಿದರು.
               ಅವರು ಜನವರಿ 28ರಂದು ಪುತ್ತೂರಿನ ಟೌನ್ ಬ್ಯಾಂಕ್  ಸಭಾಭವನದಲ್ಲಿ ಬೋಳಂತಕೋಡಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ 'ಬೋಳಂತಕೋಡಿ ಕನ್ನಡ ಪ್ರಶಸ್ತಿ' ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬದುಕಿನ ಸುಭಗತೆಗೆ ಸಾಹಿತ್ಯದ ಓದು, ಪ್ರೀತಿ ಅನಿವಾರ್ಯ ಎಂದರು.
               ವಿದ್ವಾಂಸ ಸಿದ್ಧಮೂಲೆ ಶಂಕರನಾರಾಯಣ ಭಟ್ ಮತ್ತು ಕವಿ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರಿಗೆ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು. ವಿಶ್ರಾಂತ ಉಪನ್ಯಾಸಕ ಪ್ರೊ:ವಿ.ಬಿ.ಅರ್ತಿಕಜೆ ಮತ್ತು ರಂಗಕರ್ಮಿ ಮೂರ್ತಿ ದೇರಾಜೆ ಪ್ರಶಸ್ತಿ ಪುರಸ್ಕೃತರನ್ನು ನುಡಿ ಗೌರವದ ಮೂಲಕ ಅಭಿನಂದಿಸಿದರು. ಪುಸ್ತಕ ಪರಿಚಾರಕ ಲೈನ್ಕಜೆ ರಾಮಚಂದ್ರ ಗುಣಕಥನ ಫಲಕ ವಾಚಿಸಿದರು.
                  ಪುತ್ತೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ, ಪ್ರಕಾಶಕ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರನ್ನು ಸಂಸ್ಮರಿಸಲಾಯಿತು. ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ.ಶ್ರೀಧರ್ ಅವರು ಬೋಳಂತಕೋಡಿಯವರ ಒಡನಾಟಗಳನ್ನು ನೆನಪಿಸಿಕೊಂಡು ನುಡಿನಮನ ಸಲ್ಲಿಸಿದರು.
                 ಶ್ರೀಜ್ಞಾನಗಂಗಾ ಮತ್ತು ದೀಪಾ ಬುಕ್ ಹೌಸ್ ಆಯೋಜನೆಯ ಪುಸ್ತಕ ಹಬ್ಬ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪುತ್ತೂರಿನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಟ್ರಸ್ಟಿ ಶ್ರೀಮತಿ ಶ್ರೀದೇವಿ ಕಾನಾವು ದೀಪಜ್ವಲನದ ಮೂಲಕ ಉದ್ಘಾಟಿಸಿದರು. ಪುತ್ತೂರಿನ ರಾಜೇಶ್ ಪವರ್ ಪ್ರೆಸ್ಸಿನ ಮ್ಹಾಲಕ ಎಂ.ಎಸ್.ರಘುನಾಥ ರಾವ್ ಶುಭಾಶಂಸನೆ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ನಾ. ಕಾರಂತ ಪೆರಾಜೆಯವರ 'ಅವಿಲು, ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಅವರ 'ಬುತ್ತಿ', ಎಂ.ಸತ್ಯಮೂರ್ತಿ ಹೆಬ್ಬಾರ್ ರಚಿತ 'ವಿದ್ಯಾರ್ಥಿಗಳಿಗಾಗಿ ಏನು-ಏಕೆ-ಹೇಗೆ?', ಸಂತೋಷ್ ಅವರ 'ಮುದ್ರಾಜ್ಞಾನ' ಪುಸ್ತಕಗಳ ಅನಾವರಣ ನಡೆಯಿತು.
                  ಬೋಳಂತಕೋಡಿ ಪ್ರತಿಷ್ಠಾನದ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ನ್ಯಾಯವಾದಿ ಕೆ.ಆರ್.ಆಚಾರ್ಯ ಸ್ವಾಗತಿಸಿದರು. ಪ್ರಕಾಶ್ ಕುಮಾರ್ ಕೊಡೆಂಕಿರಿ ವಂದಿಸಿದರು. ಉಪನ್ಯಾಸಕ ಡಾ.ರಾಜೇಶ್ ಬೆಜ್ಜಂಗಳ ನಿರ್ವಹಿಸಿದರು. ಸ್ವಪ್ನಾ ಉದಯಕುಮಾರ್ ಪ್ರಾರ್ಥಿಸಿದರು. ಸುಧಾ ಹೆಬ್ಬಾರ್, ಶಾರದಾ ಭಟ್ ಕೊಡೆಂಕಿರಿ ಅತಿಥಿಗಳಿಗೆ ಸ್ಮರಣಿಕೆ ನೀಡಿದರು.
               ಕೊನೆಯಲ್ಲಿ ಶ್ರೀಮತಿ ಪದ್ಮಾ ಕೆ.ಆರ್.ಆಚಾರ್ಯ ಇವರ ನಿರ್ದೇಶನದಲ್ಲಿ ಪುತ್ತೂರಿನ ಧೀಃಶಕ್ತಿ ಮಹಿಳಾ ಯಕ್ಷ ಬಳಗ ಇವರಿಂದ 'ಮೋಕ್ಷ ಸಂಗ್ರಾಮ' ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರುಗಿತು. ಕಲಾವಿದರಾಗಿ ಕಾವ್ಯಶ್ರೀ ಆಜೇರು, ಶ್ರೀಪತಿ ನಾಯಕ್ ಆಜೇರು, ಪಿ.ಜಿ.ಜಗನ್ನಿವಾಸ ರಾವ್ (ಹಿಮ್ಮೇಳ), ವೀಣಾ ನಾಗೇಶ ತಂತ್ರಿ, ಪದ್ಮಾ ಕೆ.ಆರ್.ಆಚಾರ್ಯ, ಡಾ.ಶೋಭಿತಾ ಸತೀಶ್, ಗೀತಾ ರಾಮಚಂದ್ರ ಕೆದಿಲ, ವೀಣಾ ಸರಸ್ವತಿ ನಿಡ್ವಣ್ಣಾಯ (ಅರ್ಥದಾರಿ) ಭಾಗವಹಿಸಿದ್ದರು.

(ಚಿತ್ರ : ಚೇತನಾ ಸ್ಟುಡಿಯೋ, ಪುತ್ತೂರು)


Sunday, January 26, 2014

ಎಳೆಯೊಳಗೆ ಬಂಧಿಯಾದ ಸಂಹಿತೆ!


            ಆಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜಕ್ಕೆ ವಿಶೇಷ ಗೌರವ. ದೆಹಲಿಯ ಕೆಂಪುಕೋಟೆಯ ಮೇಲೆ ನಿತ್ಯ ರಾರಾಜಿಸುವ ಧ್ವಜವು ರಾಷ್ಟ್ರಭಾವವಿದ್ದ ಮನಸ್ಸುಗಳಿಗೆ ಪುಳಕದ ಅನುಭವ ನೀಡುತ್ತದೆ. ಇತ್ತ ಹಳ್ಳಿಯ ಪಂಚಾಯತಿನಲ್ಲೂ ಅದೇ ಭಾವ, ಏಕಗೌರವ.
            ರಾಷ್ಟ್ರಧ್ವಜದ ಹಿಂದೆ ಬಿಗು ಕಾನೂನಿದೆ. ಬೆಳೆಯುವ ಹತ್ತಿಯಿಂದ ತೊಡಗಿ ಧ್ವಜವನ್ನು ಹಾರಿಸುವ ವರೆಗಿನ ನಡವಳಿಕೆಗಳಿಗೆ ಸಂಹಿತೆಯಿದೆ. ಈ ಪರ್ವದಿನಗಳಲ್ಲಿ ಮಾತ್ರ ಅಲ್ಲೋ ಇಲ್ಲೋ ಕಾನೂನಿನ ಹೆಸರನ್ನು ಉಲ್ಲೇಖಿಸುವುದನ್ನು ಕಾಣುತ್ತೇವೆ. ಅದೂ ಧ್ವಜ ತಲೆಕೆಳಗಾಗಿ ಹಾರಿದಾಗ! ಆಗ ಕಾನೂನು ಪುಸ್ತಕ ತೆರೆಯಲ್ಪಡುತ್ತದೆ, ಸಂಬಂಧಪಟ್ಟವರಲ್ಲಿ ಪುಸ್ತಕ ಲಭ್ಯವಿದ್ದರೆ..!
              ಆಗ ನೋಡಿ, ರಂಪಾಟ. ವಿಧಾನಸೌಧದಲ್ಲೂ ಅನುರಣನ.  ಉಗ್ರಶಬ್ದಗಳಲ್ಲಿ ಖಂಡಿಸುವ ಪರಿ. ಇದನ್ನು ವಾಹಿನಿಗಳು ದಿನಪೂರ್ತಿ ಜಗ್ಗುತ್ತವೆ. ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಬಿಸಿಬಿಸಿ ಚರ್ಚೆಯಾಗುತ್ತವೆ. ಇಲಾಖೆಯ ಮುಖ್ಯಸ್ಥರ ಮುಖದ ನೆರಿಗೆ ಬಿಗುವಾಗುತ್ತದೆ. ಸಿಬ್ಬಂದಿಯನ್ನು ಹೊಣೆ ಮಾಡಿದಲ್ಲಿಗೆ ಪ್ರಹಸನಕ್ಕೆ ತೆರೆ. 
              ಎಷ್ಟು ಸರಕಾರಿ ಕಚೇರಿಯಲ್ಲಿದೆ ಧ್ವಜ ಸಂಹಿತೆ?  ಇದ್ದರೂ ಓದುವ ಮಂದಿ ಓದ್ದಾರಾ? ಅಲ್ಲ, ಬಿಡಿಸಿ ನೋಡಿದ್ದಾರಾ? ಇಂತಹ ಒಂದು ಪುಸ್ತಕ ಇದೆ ಎಂದಾದರೂ ಗೊತ್ತಿದೆಯಾ? ಅವರೆಲ್ಲಾ ಓದುತ್ತಿದ್ದರೆ ಧ್ವಜ ತಲೆಕೆಳಗಾಗಿ ಹಾರುತ್ತಿರಲಿಲ್ಲ. ಸಿಬ್ಬಂದಿಗಳು ಅಮಾನತು ಆಗುತ್ತಿರಲಿಲ್ಲ. ನಮ್ಮ ಬದುಕನ್ನು ನಮಗೆ ಓದಲು ತಿಣುಕಾಡುತ್ತಿರುವಾಗ ಕಾನೂನನ್ನು ಓದಲು, ಗೌರವಿಸಲು ಪುರುಸೊತ್ತು ಎಲ್ಲಿದೆ ಅಲ್ವಾ.
               ದೇಶದ ರಾಷ್ಟ್ರಧ್ವಜ ಎಲ್ಲಿ ತಯಾರಾಗುತ್ತದೆ? ಒಂದು ಅಂಕದ ಪ್ರಶ್ನೆಯನ್ನು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸಿ. ಉತ್ತರ ಸಿಕ್ಕರೆ ಭಾಗ್ಯ! ವಿದ್ಯಾರ್ಥಿಗಳೇಕೆ, ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲೇ ಕೇಳಿ. ಉತ್ತರ ಸಿಗಬಹುದೆನ್ನುವ ವಿಶ್ವಾಸದಿಂದ ನಾನಂತೂ ದೂರ. ಅಪಕ್ವವನ್ನೇ ಪಕ್ವತೆಯೆಂದು ವಾದಿಸುವ ಕಾಲಘಟ್ಟದಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ನಿರೀಕ್ಷಿಸುವುದೂ ಅಪಕ್ವವಾದಿತೇನೋ?
                 2013ರ ಸ್ವಾತಂತ್ರ್ಯ ದಿನಾಚರಣೆ. ಹುಬ್ಬಳ್ಳಿ ಬೆಂಗೇರಿಯ ಸ್ನೇಹಿತರ ಮನೆಯಲ್ಲಿದ್ದೆ. ಅನತಿ ದೂರದಲ್ಲಿತ್ತು, ದೇಶವೇ ಹೆಮ್ಮೆ ಪಡುವಂತಹ 'ರಾಷ್ಟ್ರಧ್ವಜ ನಿರ್ಮಾಣ ಘಟಕ'. ಅಲ್ಲಿನ ಶಿಸ್ತು, ಶ್ರದ್ಧೆ, ಭಕ್ತಿ-ಭಾವ ಎಲ್ಲವೂ ಗಂಟಲ ಮೇಲಿನದ್ದಾಗಿರಲಿಲ್ಲ. ಬಹುಶಃ ಧ್ವಜವೊಂದರ ಹಿಂದೆ ಭಾವನೆಗಳು ಮಡುಗಟ್ಟಿರುವುದು, ಅದಕ್ಕೆ ಸಂಬಂಧಪಟ್ಟ ಕಾನೂನುಗಳು ಪಾಲಿತವಾಗುತ್ತಿರುವುದು ಬಹುಶಃ ಇಲ್ಲಿ ಮಾತ್ರವೇನೋ? 
                 'ಸಾರ್, ರಾಷ್ಟ್ರಧ್ವಜ ತಯಾರಾಗೋ ಊರಿದು. ಸ್ವಾತಂತ್ರೋತ್ಸವದಂದು ಧ್ವಜವನ್ನು ತಲೆಕೆಳಗು ಮಾಡಿ ಹಾರಿಸಿಬಿಟ್ರಲ್ಲಾ,' ಎನ್ನುವ ವಿಷಾದದೊಂದಿಗೆ ಘಟಕದ ಮುಖ್ಯಸ್ಥ ಆರ್.ವಿ.ಮುತಾಲಿಕ್ ದೇಸಾಯಿ ಸ್ವಾಗತಿಸುತ್ತಾ, 'ನಮ್ಮವರಿಗೆ ಧ್ವಜದ ಹಿಂದುಮುಂದಿನ ಮಾಹಿತಿಯಿಲ್ಲ. ಮೂರು ಬಣ್ಣಗಳಲ್ಲಿ ಯಾವುದು ಮೇಲಿರಬೇಕು, ಯಾವುದು ಕೆಳಗಿರಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲವಲ್ಲ' ಎಂದು ಗೊಣಗಾಡುತ್ತಾ ದೇಸಾಯಿಯವರು ಘಟಕದೊಳಗೆ ಕರೆದೊಯ್ದರು.
               ಧ್ವಜದ ಆಯ ಅಳತೆಗೂ ಪ್ರಮಾಣಗಳಿವೆ. ಕೆಂಪುಕೋಟೆ, ರಾಷ್ಟ್ರಪತಿ ಭವನಗಳಲ್ಲಿ ಬಳಸುವ ಧ್ವಜವನ್ನು ಇತರೆಡೆ ಬಳಸುವಂತಿಲ್ಲ. ವಿಧಾನಸೌಧಕ್ಕೊಂದು ಅಳತೆಯ ಧ್ವಜವಾದರೆ, ಜಿಲ್ಲಾಧಿಕಾರಿ ಕಚೇರಿಗೆ ಇನ್ನೊಂದು ಅಳತೆಯ ಧ್ವಜ. ಸಚಿವರ ಕಾರಿನಲ್ಲಿ ಹಾರಾಡುವ ಧ್ವಜಕ್ಕೂ ಕಾನೂನಿನಲ್ಲಿ ಅಳತೆಯಿದೆ.  ಎಲ್ಲೂ ಅಳತೆ ತಪ್ಪುವಂತಿಲ್ಲ. ತಪ್ಪಿದರೆ ಶಿಕ್ಷೆ ಕಟ್ಟಿಟ್ಟದ್ದು!?
              ಪ್ಲಾಸ್ಟಿಕ್ ಧ್ವಜಗಳು ಬೇಕಾಬಿಟ್ಟಿ ಹಾರಾಡುತ್ತಿವೆಯಲ್ಲ ಎಂದದಕ್ಕೆ ದೇಸಾಯಿ ಹೇಳುತ್ತಾರೆ, ಧ್ವಜ ಕಾನೂನಿನಲ್ಲಿ ಕಾಟನ್ ಬಟ್ಟೆಯಿಂದ ತಯಾರಾದ ಧ್ವಜವನ್ನೇ ಬಳಸಬೇಕು. ಪ್ಲಾಸ್ಟಿಕ್ಕಿಗೆ ಅವಕಾಶವಿಲ್ಲ. ಅದು ಶಿಕ್ಷಾರ್ಹ. ಶಿಕ್ಷೆಯನ್ನು ಕೊಡೋವ್ರಿಗೆ ಕಾನೂನಿನ ಅರಿವು ಇಲ್ಲದಿದ್ದರೆ ಅವರೆಲ್ಲಿ ಶಿಕ್ಷೆ ಕೊಡ್ತಾರೆ? ಬಳಸುವ ಅಂಗಡಿಯವ್ರಿಗೂ ಕಾನೂನು ಗೊತ್ತಿಲ್ಲ. ತಿಳಿಹೇಳುವವರು ಯಾರು?'.   
              ಕಳೆದ ಜನವರಿಯಲ್ಲಿ ದೇಸಾಯಿ ದೆಹಲಿಗೆ ಹೋಗಿದ್ದರು. ಪ್ರದರ್ಶನವೊಂದರಲ್ಲಿ ಮಳಿಗೆ ತೆರೆದಿದ್ದು,   ರಾಷ್ಟ್ರಪತಿಗಳೊಂದಿಗೆ ಕಳೆದ ಕ್ಷಣವನ್ನು ನೆನಪು ಮಾಡಿಕೊಳ್ಳುತ್ತಾ, 'ನಮ್ಮ ಭವನದಲ್ಲಿ ನಿಮ್ಮೂರಲ್ಲಿ ತಯಾರಾದ ಧ್ವಜ ಹಾರಾಡ್ತಿದೆ' ಅಂದರಂತೆ. ದೇಸಾಯಿಗೆ ಮೂರು ನಿಮಿಷ ಮಾತನಾಡುವ ಅವಕಾಶವೂ ಲಭ್ಯವಾಗಿತ್ತು.
             ಇಪ್ಪತ್ತೊಂದು ಅಡಿ ಉದ್ದ, ಹದಿನಾಲ್ಕಡಿ ಅಗಲದ ಧ್ವಜ ದೊಡ್ಡದು. ಆರಿಂಚು ಉದ್ದ ನಾಲ್ಕಿಂಚು ಅಗಲದ ಧ್ವಜ ಚಿಕ್ಕದು. ಹುಬ್ಬಳ್ಳಿ ಘಟಕದಲ್ಲಿ ಒಂಭತ್ತು ವಿವಿಧ ಅಳತೆಯ ಧ್ವಜ ತಯಾರಾಗುತ್ತಿವೆ. ತಿಂಗಳಿಗೆ ಸುಮಾರು ಇಪ್ಪತ್ತು ಲಕ್ಷಕ್ಕೂ ಮಿಕ್ಕಿ ಉತ್ಪಾದನೆ.  ವಿವಿಧ ರಾಜ್ಯಗಳಲ್ಲಿರುವ ಖಾದಿ ಮಳಿಗೆಗಳ ಮೂಲಕ ವಿತರಣೆ. ಕನ್ನಾಡಿನ ಐವತ್ತೆರಡು ಘಟಕಗಳ ಮೂಲಕ ಧ್ವಜಗಳು ಹಳ್ಳಿ ತಲಪುತ್ತದೆ.
                ಹತ್ತಿ ಬೆಳೆಯುವಲ್ಲಿಂದ ಧ್ವಜ ಸಿದ್ಧಗೊಳ್ಳುವ ವಿವಿಧ ಮಜಲುಗಳಲ್ಲಿ  ಹದಿನೆಂಟು ವಿಧದ ಪರೀಕ್ಷೆಗಳು. ಎಳೆ, ತೂಕ, ಬಣ್ಣದ ಪ್ರಮಾಣ; ಧ್ವಜದ ಉದ್ದಗಲ, ಹೊಲಿಗೆ, ಬಣ್ಣದ ಗುಣಮಟ್ಟ, ಚಕ್ರ.. ಹೀಗೆ. ಒಂದರಲ್ಲಿ ಅನುತ್ತೀರ್ಣವಾದರೂ ರಿಜೆಕ್ಟ್. 'ಕಟ್ಟುನಿಟ್ಟುಗಳನ್ನು ಮೀರುವಂತಿಲ್ಲ. ಹಾಗಾಗಿ ಶೇ.20ರಷ್ಟು ಉತ್ಪನ್ನಗಳು ರಿಜೆಕ್ಟ್ ಆಗುವುದೇ ಹೆಚ್ಚು' ಎನ್ನುತ್ತಾರೆ. 
              ಘಟಕದಲ್ಲಿ ಬಹುತೇಕ ಕೆಲಸಗಾರರು ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರು. ಬೇಡಿಕೆಯಿದ್ದಾಗ ಅಹೋರಾತ್ರಿ ದುಡಿತ. ಶ್ರಮಕ್ಕೆ ತಕ್ಕ ಫಲಿತ. ಘಟಕದೊಳಗೆ ಚಪ್ಪಲಿ ಧರಿಸಬಾರದು, ಧ್ಜಜ ಸಿದ್ಧವಾಗುತ್ತಿರುವಾಗ ತುಳಿಯಬಾರದು.. ಮೊದಲಾದ ಮಾನದಂಡಗಳನ್ನು ಪಾಲಿಸುತ್ತಾರೆ. ಎಲ್ಲಾ ಶ್ರಮಿಕರಿಗೂ ಧರಿಸಲು ಖಾದಿ ಉಡುಪು.
              ಹರಿದ, ಕೊಳೆಯಾದ, ಡ್ಯಾಮೇಜ್ ಧ್ವಜಗಳ ಮರುಬಳಕೆಯಿಲ್ಲ. ಹರಿದುದನ್ನು ಪುನಃ ಹೊಲಿಗೆ ಹಾಕುವಂತಿಲ್ಲ. ಮತ್ತೆ ಹೊಸತನ್ನೇ ಬಳಸಬೇಕು. ದೇಸಾಯಿ ಒಂದು ಘಟನೆ ಜ್ಞಾಪಿಸಿದರು - ಆರಕ್ಷಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹರಿದ ಧ್ವಜವನ್ನು ತಂದು, 'ಹೊಲಿದು ಕೊಡಿ' ಎಂದರು. 'ಹರಿದ ಧ್ವಜವನ್ನು ಹೊಲಿಯುವುದು ಕಾನೂನನ್ನು ಉಲ್ಲಂಘಿಸಿದಂತೆ. ಹಾಗಾಗಿ ಹೊಸದಾಗಿ ಖರೀದಿಸಿ' ಎಂದರು. 'ಯಾವ ಕಾನೂನಿನಲ್ಲಿದೆ? ಏನಾಗ್ತದೆ', ಕೊಡ್ರಿ' ಎನ್ನುವ ಇಲಾಖಾ ಮರ್ಜಿಯ ಭಾಷಾ ಪ್ರಯೋಗ. ದೇಸಾಯಿ ಧ್ವಜ ಸಂಹಿತೆಯನ್ನು ತೋರಿಸಿದಾಗ ಅಧಿಕಾರಿ ದಂಗು. ಕಾನೂನಿಗೆ ಶರಣಾಗತಿ. ಹೊಸ ಧ್ವಜದ ಖರೀದಿ. 
               ಬಳಸುವ ಬಟ್ಟೆ ಕೈಮಗ್ಗದ್ದಾಗಿರಬೇಕು. ಹತ್ತಿಯೂ ಸಾವಯವದಲ್ಲೇ ಬೆಳೆದಿರಬೇಕು. ಅದಕ್ಕೆ ಹಾಕುವ ಬಣ್ಣವೂ ಕೃತಕವಾಗಿರಬಾರದು. ಕೈಚಾಲಿತವಾಗಿ ಬಣ್ಣ ಲೇಪನ. ಇದಕ್ಕೆ ಯಂತ್ರಗಳು ಲಭ್ಯವಾದರೂ ಬಳಸುವಂತಿಲ್ಲ. ಜಯಧರ್ ಅರಳೆ ತಳಿಯದ್ದೇ ಹತ್ತಿ ಬೆಳೆಯಲು ಕೃಷಿಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅದರಂತೆ ಬೆಳೆದು ಕೊಡುತ್ತಾರೆ. ಅಲ್ಲೇ ದಾರ, ಬಟ್ಟೆ ಸಿದ್ಧಗೊಳಿಸಿ ಹುಬ್ಬಳ್ಳಿಯ ಘಟಕಕ್ಕೆ ಬರುತ್ತದೆ. ಇಲ್ಲಿ ಪುನಃ ಬಟ್ಟೆಯ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ತಯಾರಿಯಲ್ಲಿ ಚಿಕ್ಕ ವ್ಯತ್ಯಾಸವಾದರೂ ತಿರಸ್ಕರಿಸುತ್ತೇವೆ' ಎನ್ನುತ್ತಾರೆ ದೇಸಾಯಿ.
               ಧ್ವಜಸಂಹಿತೆಯಂತೆ ಧ್ವಜಗಳ ಪ್ರಚಾರಕ್ಕೆ ಪತ್ರಿಕೆಯಲ್ಲಿ ಜಾಹೀರಾತು ನೀಡುವಂತಿಲ್ಲ! ಶಾಲೆ, ಇಲಾಖೆಗಳ ಅಧಿಕಾರಿ ಮಟ್ಟದಲ್ಲಷ್ಟೇ ಅರಿವು ಮೂಡಿಸುವ ಕೆಲಸವಾಗಬೇಕು. ಈಚೆಗೆ ತಾಲೂಕು, ಜಿಲ್ಲಾ ಪಂಚಾಯತಿಗಳಲ್ಲಿ ಪ್ರತಿ ದಿವಸ ಧ್ವಜ ಏರಿಸಬೇಕೆನ್ನುವ ಆದೇಶದಿಂದ ಒಂದಷ್ಟು ಸಣ್ಣ ಪ್ರಮಾಣದಲ್ಲಿ ಧ್ವಜದ ಅರಿವು ಮೂಡುತ್ತಿದೆ. 'ಈ ಆದೇಶದಿಂದಾಗಿ ಮೂವತ್ತು ಲಕ್ಷಕ್ಕೂ ಮಿಕ್ಕಿ ಧ್ವಜಗಳನ್ನು ನಾವೇ ಸಿದ್ದಪಡಿಸಬೇಕು.' ಎನ್ನುವ ಖುಷಿ ದೇಸಾಯಿಯವರದು.
                   ಮುತಾಲಿಕ್ ದೇಸಾಯಿ ನಲವತ್ತೆರಡು ದೇಶಗಳ ಧ್ವಜ ಸಂಹಿತೆಯನ್ನು ಅಭ್ಯಸಿಸಿದ್ದಾರೆ. ಎಲ್ಲಾ ಮಾಹಿತಿಗಳು ನಾಲಗೆ ತುದಿಯಲ್ಲಿವೆ. ಬಾಲ್ಯದಿಂದಲೇ ಖಾದಿ, ದೇಶಗಳ ಒಲವಿದ್ದ ಇವರು ಖಾದಿಯನ್ನು, ಧ್ವಜವನ್ನು ಪ್ರೀತಿಸುತ್ತಾರೆ. ಧ್ವಜಸಂಹಿತೆಯು ಎಲ್ಲಾ ನಾಗರಿಕರಿಗೂ ತಿಳಿಯಬೇಕೆನ್ನುವ ಹಪಾಹಪಿ. ಹಾಗಾಗಿ ನೀಡುವ ಧ್ವಜದ ಪ್ಯಾಕೆಟ್ ಒಳಗಡೆ ಕನಿಷ್ಟ ಮಾಹಿತಿಯನ್ನು ಅಚ್ಚುಹಾಕಿಸುವ ಯೋಚನೆಯಿದೆ.
                   ರಾಷ್ಟ್ರಧ್ವಜ ಅವರೋಹಣವಾಗುವಾಗ ಭಕ್ತಿ ಶ್ರದ್ಧೆಗಳನ್ನು ಕ್ಷಣಿಕವಾಗಿ ಆವಾಹಿಸಿಕೊಳ್ಳುತ್ತೇವೆ. ಆ ಕ್ಷಣಕ್ಕೆ ಮರೆತುಬಿಡುತ್ತೇವೆ. ವೇದಿಕೆಯಲ್ಲಿ ದೇಶದ, ಸಂದುಹೋದ ನಾಯಕರ ಕುರಿತು ಭಾಷಣ ನಡೆಯುತ್ತದೆ. ಸಂಜೆಯಾಗುವಾಗ ಎಲ್ಲವೂ ಮಾಮೂಲಿ. ಶಿಸ್ತಿನ ಮೂಟೆಯೊಳಗೆ ಬಂಧಿತವಾದ ಮನಸ್ಸುಗಳಿಗೆ ಆ ದಿವಸದ ಕಲಾಪಗಳು 'ಪಾಠದಿಂದ ಬಿಡುಗಡೆಯಾದ ಸಂತೃಪ್ತಿ'ಯಷ್ಟನ್ನೇ ನೀಡುತ್ತದೆ.
                   ಪ್ರಾಥಮಿಕ ಶಾಲೆಯ ಪಾಠಗಳಲ್ಲಿ ರಾಷ್ಟ್ರಧ್ವಜದ ಪಾಠಗಳನ್ನು ಓದಿದ ನೆನಪಾಗುತ್ತದೆ. ಐದಂಕ ಕೊಡುವ ರಾಷ್ಟ್ರಗೀತೆಯನ್ನು ಬರೆಯುವ ಪ್ರಶ್ನೆಗಳಿರುತ್ತಿದ್ದುವು. ಆಶೋಕ ಚಕ್ರ, ಧ್ವಜದ ಬಣ್ಣಗಳಿಗೆ ನಿರ್ದಿಷ್ಟ ಅರ್ಥವಾಪ್ತಿಗಳಿದ್ದುವು. ಅವೆಲ್ಲವೂ ಸಂಹಿತೆಯೊಳಗೆ ಅಡಗಿವೆಯಷ್ಟೇ. ಅವೇನಾದರೂ ಪಠ್ಯಕ್ಕೆ ಬಂದುಬಿಟ್ಟರೆ ಮತೀಯ, ಜಾತೀಯ, ಪ್ರಾಂತೀಯ ಕೊಳಚೆ ಅಂಟಿ ಗುಲ್ಲಾಗುತ್ತದೆ. ಹಾಗಾಗಿ ಧ್ವಜಸಂಹಿತೆ ವಿಚಾರಗಳು ಹತ್ತಿಯ ನೂಲಿನ ಎಳೆಯಲ್ಲಿ ಬಂಧಿಯಾಗಿದೆ!
ಕನ್ನಾಡಿನಲ್ಲಿ ಬೆಳೆಯುವ ಹತ್ತಿಯಿಂದಲೇ ನಮ್ಮ ರಾಷ್ಟ್ರಧ್ವಜ ಸಿದ್ಧವಾಗುತ್ತಿದೆ ಎನ್ನುವ ಖುಷಿಗೆ ಮಸುಕು ಬಾರದು. ಅದೂ ನೆಲದ ನಾಡಿ ಗೊತ್ತಿದ್ದ ಮನಸ್ಸುಗಳಿಗೆ. (ಉದಯವಾಣಿಯ 23-1-2014ರ ಸಂಚಿಕೆಯ 'ನೆಲದ ನಾಡಿ' - Nelada Nadi -ಅಂಕಣದಲ್ಲಿ ಪ್ರಕಟ)
-
          (ನಾನು ಸಂದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ಅಲ್ಲಿನ ಮುಖ್ಯ ನಿರ್ವಹಣೆ ಘಟಕದ ಮುಖ್ಯಸ್ಥ ಆರ್.ವಿ.ಮುತಾಲಿಕ್ ದೇಸಾಯಿ  ಅವರದ್ದಾಗಿತ್ತು. ಈಗ ಹೊಸಬರು ಬಂದಿದ್ದಾರಂತೆ)
   
 

ಕೃಷಿ ಬದುಕನ್ನು ಮೊಗೆದುಂಡ ಕೃಷಿಕ



           ಈ ದೇಶದಲ್ಲಿ ಲಾಟರಿ ಹೊಡೆದವನು ಅದೃಷ್ಟವಂತ. ಸ್ಮಗ್ಲರ್, ಲೂಟಿ, ಮೋಸಮಾಡಿ ಹಣ ನುಂಗುವ ಕೆಲಸ ಮಾಡುವವನು ಬುದ್ಧಿವಂತ. ಬೆವರು ಸುರಿಸಿ ದುಡಿಯುವವನು ಯಾತಕ್ಕೂ ಬಾರದ ನಿಕೃಷ್ಟನಾಗಿದ್ದಾನೆ, ಡಾ. ಡಿ.ಆರ್. ಪ್ರಫುಲ್ಲಚಂದ್ರರು (80) ಕೃಷಿ, ಕೃಷಿಕ, ಗ್ರಾಮ ಭಾರತವನ್ನು ನೋಡುವ ಆಡಳಿತ ವ್ಯವಸ್ಥೆಯನ್ನು ಕಟುವಾಗಿ ವಿಮರ್ಶಿಸುತ್ತಾರೆ.  ಭಾಷಣ, ವಿಚಾರಗೋಷ್ಠಿ ಹಾಗೂ ತಮ್ಮ ಕೃಷಿ ಕ್ಷೇತ್ರ ವೀಕ್ಷಣೆಗೆ ಬರುವ ಎಲ್ಲರಲ್ಲಿಯೂ ಹೇಳದೆ ಮರೆಯುವುದಿಲ್ಲ.
ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿಯಲ್ಲಿದೆ, ಡಾ.ದೇವಂಗಿ (ಡಿ.ಆರ್.) ಫ್ರಫುಲ್ಲಚಂದ್ರರ ಕೃಷಿ ಕ್ಷೇತ್ರ.  ಕೃಷಿ ಕೆಲಸಗಳನ್ನು ಹಗುರ ಮಾಡುವ ಆವಿಷ್ಕಾರಗಳು, ಯಂತ್ರಗಳು, ಜಾಣ್ಮೆ ಪ್ರಯೋಗ, ಮಣ್ಣು-ನೀರಿನ  ಸಂರಕ್ಷಣೆ.. ಹೀಗೆ ಹಲವು ಸ್ವ-ವಿಧಾನಗಳನ್ನು ಅಳವಡಿಸಿ ಯಶ ಕಂಡ ಕೃಷಿಕ. 'ಇತರರಿಗೆ ತೊಂದರೆ ಕೊಡದೆ, ತಾನು ಹೇಗೆ ಸ್ವತಂತ್ರವಾಗಿ ಬದುಕಬಹುದು' ಎನ್ನುವ ಯೋಜನೆ, ಯೋಚನೆಗಳು ಯಶದ ಅಡಿಗಟ್ಟು. ಇವರ ಕೃಷಿ ವಿಧಾನಗಳು 'ಪ್ರಫುಲ್ಲಚಂದ್ರ ಮಾದರಿ' ಎಂದು ರೈತರಿಂದ ಸ್ವೀಕೃತಿ ಪಡೆದಿದೆ.
               2013, ದಶಂಬರ 11ರಂದು ಪ್ರಫುಲ್ಲಚಂದ್ರರು (Dr.D.R.Prafullachandra)  ದೂರವಾದರು. ಅವರ ಅಂತಿಮ ದರ್ಶನಕ್ಕೆ ಬಂದವರು ನೂರಾರು. ಇವರೆಲ್ಲಾ ಅರ್ಥಿಕವಾಗಿ ಸಿರಿವಂತರೆಂಬ ಕಾರಣಕ್ಕಾಗಿ ಬಂದಿಲ್ಲ. ಕೃಷಿಯಲ್ಲಿ 'ಮಾಡಿ-ಬೇಡಿ'ಗಳನ್ನು, ಮಾದರಿಗಳನ್ನು ಹೇಳಿಕೊಟ್ಟ ಕೃಷಿಕರೆಂಬ ಅಭಿಮಾನದಿಂದ ಕೃಷಿ ಋಷಿಯ ಕೊನೆ ದರ್ಶನಕ್ಕಾಗಿ ಆಗಮಿಸಿದ್ದರು.
'ಯಾವುದೇ ಆಡಳಿತ ವ್ಯವಸ್ಥೆಯು ಕೃಷಿಕರನ್ನು ಉದ್ಧಾರ ಮಾಡಲಾರದು. ಯೋಜನೆ ಮಾಡಿದರೆ ನಮ್ಮಿಂದಲೇ ಸಾಧ್ಯ. ಹೊಟ್ಟೆನೋವು ಬಂದವನು ಮಾತ್ರೆ ನುಂಗುವಂತೆ ಸಮಸ್ಯೆಯ ಸುಳಿಗೆ ಸಿಕ್ಕ ನಾವು ಚಿಂತಿಸುತ್ತಾ ಕುಳಿತರೆ ಪರಿಹಾರ ಸಿಗದು. ನಮ್ಮ ಅಭಿವೃದ್ಧಿಗೆ ನಾವೇ ರೂವಾರಿಗಳು,' ಪ್ರಫುಲ್ಲರ ಕೃಷಿ ಸುಭಗತೆಯ ಸೂತ್ರಗಳು. ಬೆವರ ಶ್ರಮಕ್ಕೆ ತಕ್ಕ ಪ್ರತಿಫಲ ಭೂತಾಯಿ ನೀಡುತ್ತಾಳೆ ಎನ್ನುವ ನಂಬುಗೆ ಹುಸಿಯಾಗಿಲ್ಲ. ಹಾಗಾಗಿ ನೋಡಿ, ಬೆಳೆ ನಷ್ಟ ಬಂದಾಗ ಅವರೆಂದೂ 'ನನಗೆ ಪರಿಹಾರ ಕೊಡಿ' ಎಂದು ಯಾರಿಗೂ ಅರ್ಜಿ ಸಲ್ಲಿಸಿಲ್ಲ, ಪ್ರತಿಭಟನೆ ಮಾಡಿಲ್ಲ!
                 'ನಾನು ಮಾಡಿದ ತಪ್ಪನ್ನು ನೀವು ಮಾಡಬೇಡಿ' ಎಂದು ರೈತರಿಗೆ ಕಿವಿಮಾತು ಹೇಳುತ್ತಿದ್ದರು. ತೆಂಗಿನ ಕೃಷಿಯಲ್ಲಿ ಒಮ್ಮೆ ಎಡವಿದ್ದರು. ಪ್ರಫುಲ್ಲರು ದೇವಾಲಯದ ದರ್ಶನಕ್ಕೆ ಹೋಗಿದ್ದರು. ಭಕ್ತನೊಬ್ಬ ಹರಕೆ ತೀರಿಸಲು ಸಣ್ಣ ಗಾತ್ರದ ತೆಂಗಿನಕಾಯಿಗಳನ್ನು ಒಡೆಯುತ್ತಿದ್ದ. ಕಾಯಿಯ ಗಾತ್ರಕ್ಕೆ ಮರುಳಾದರು. ಬೆಳೆಯಬೇಕೆಂದ ಆಸೆ ಚಿಗುರಿತು. ಹುಡುಕಾಟ ಆರಂಭ. ಸಸಿಗಳ ಸಂಪಾದನೆ. ಸರಿ, ಸಸಿ ಬೆಳೆಯಿತು, ಕಾಯಿ ಬಿಟ್ಟಿತು. ಸಣ್ಣ ಕಾಯಿ ಅಲ್ವಾ, ಯಾರಿಗೆ ಬೇಕು? ಅಂಗಡಿಯಾತ ಬೇಡವೆಂದ. ತಾನೇ ಮಾರೋಣವೋ, ದರ ನಿಶ್ಚಯಿಸಲು ಆಗದಷ್ಟೂ ಸಣ್ಣ ಕಾಯಿಗಳು!  ದೇವಾಲಯದಲ್ಲಿ ಒಡೆಯೋಣವೋ, ಹರಕೆ ಹೇಳಿಕೊಂಡಿಲ್ಲ! ತಾನೇ ನೆಟ್ಟು ಬೆಳೆಸಿದುದನ್ನು ಕಡಿಯಲಾಗದ ಕರುಳಬಳ್ಳಿಯ ಸಂಬಂಧ.
                ಪ್ರಫುಲ್ಲರಿಗೆ 1959ರಿಂದ ಕೃಷಿಯ ಹೊಣೆ. ಆರಂಭದಲ್ಲಿ ಅನುಭವದ ಕೊರತೆಯಿಂದ ಸೋಲು. ಆತ್ಮಾವಲೋಕನ. 'ಸಾವಿರಾರು ಉಳಿಪೆಟ್ಟುಗಳನ್ನು ಸಹಿಸಿದಾಗ ಕಲ್ಲು ವಿಗ್ರಹವಾಗುತ್ತದೆ. ನನ್ನ ಒಂದೊಂದೇ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಕಣ್ಣುಬಿಟ್ಟು ಕಲಿತೆ' ಎಂದು ವಿನೀತರಾಗಿ ಹೇಳುತ್ತಾ, 'ಲ್ಯಾಬ್ ಟು ಲ್ಯಾಂಡ್' ಪದ್ದತಿ ನಮ್ಮಲ್ಲಿದೆ. ಪ್ರತಿ ರೈತನಿಗೂ ತನ್ನ ಹೊಲ ಸಂಶೋಧನಾ ಕೇಂದ್ರವಾಗಬೇಕು. ದುಡಿಮೆ ಮಂತ್ರವಾಗಬೇಕು. ಅದಕ್ಕಾಗಿ ಮನಸ್ಸಿನ ಟ್ಯೂನ್ ಅಗತ್ಯ. ಸಣ್ಣ ಹಿಡುವಳಿದಾರನೆಂಬ ಕೀಳರಿಮೆ ಬೇಡ. ಮಾನವ ಶಕ್ತಿಗೆ ಸಣ್ಣ ಸಣ್ಣ ತಂತ್ರಗಳನ್ನು ಯಂತ್ರಶಕ್ತಿಯಾಗಿಸುವ ಸಾಮಥ್ರ್ಯವಿದೆ - ಎನ್ನುವ ದೇವಂಗಿಯವರ ಮಾತುಗಳಲ್ಲಿ ಅಪ್ಪಟ ಬದುಕಿನ ಅನುಭವ ಸುಳಿಯುತ್ತಿರುತ್ತಿತ್ತು.
                  ಇವರ ಸಾಧನೆಗೆ ಕನ್ನಡಿ ಹಿಡಿಯುವ ಉತ್ತಮ ಕೆಲಸವನ್ನು 2006ರಲ್ಲಿ ಶಿವಮೊಗ್ಗದ ಭಗವಾನ್ (ಎಸ್.ದತ್ತಾತ್ರಿ) ಮಾಡಿದ್ದಾರೆ. ಅನುಭವಗಳಿಗೆ ಮಾತಿನ ರೂಪ ನೀಡಿದ ಭಗವಾನ್ ಹೇಳುತ್ತಾರೆ, 'ಯಾವುದೇ ಕೃಷಿಯಲ್ಲಿ ತೊಡಗಿದರೂ ದಾಖಲೆಗಳ ನಿರ್ಮಾಣ ಇವರ ಗುಣ'. ಹಾಗಾಗಿ ಜಿಲ್ಲೆಯಿಂದ ರಾಷ್ಟ್ರ ಮಟ್ಟದ ತನಕ ಪುರಸ್ಕಾರಗಳ ಮಾಲೆ. ಕರ್ನಾಟಕ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ.
                    ಭಗವಾನ್ ಅವರ 'ಡಾ.ಡಿ.ಆರ್.ಪ್ರಫುಲ್ಲಚಂದ್ರ ಸಮಗ್ರ ಸಾಧನೆ' ಪುಸ್ತಕದಿಂದ ಆಧರಿಸಿದ ಕೆಲವೊಂದು ಎಕ್ಸ್ಕ್ಲೂಸಿವ್ ಪಂಚಿಂಗ್! ಇವರ 'ಶಿಪ್ಟಿಂಗ್ ಪಾಯಿಖಾನೆ' ಮಾದರಿ ಕುತೂಹಲಕರ - ಇವರ ಫಾರಂನ ಕೆಲಸಗಾರರಿಗೆ ಸುಲಭವಾಗಿ ಸಾಗಿಸಬಲ್ಲ ಶೌಚಾಲಯ. ಅಡಿಕೆ ದಬ್ಬೆ ಅಥವಾ ಬಿದಿರು ಮುಖ್ಯ ಕಚ್ಚಾವಸ್ತು. ಆರಡಿ ಉದ್ದದ ನಾಲ್ಕು, ನಾಲ್ಕಡಿ ಅಗಲದ ಎಂಟು ದಬ್ಬೆ. ಮನುಷ್ಯ ನಿಂತರೂ, ಕುಳಿತರೂ ಗೊತ್ತಾಗದಷ್ಟು ಚೌಕಾಕಾರದ ರಚನೆ. ಅತ್ತಿತ್ತ ಒಯ್ಯಬಹುದಾದಷ್ಟು ಹಗುರ. ನಾಲ್ಕು ಬದಿಗೂ ಗೋಣಿ ಅಥವಾ ಪ್ಲಾಸ್ಟಿಕ್ ಹಾಸು. ಮಾನಮುಚ್ಚಲು ಧಾರಾಳ!
                   ತೆಂಗು, ಸಪೋಟ, ಮಾವಿನ ಗಿಡಗಳ ಬಳಿ ಚಿಕ್ಕ ಹೊಂಡ ತೆಗೆದರಾಯಿತು. ದಬ್ಬೆಯ ರಚನೆಯನ್ನು ಹೊಂಡದ ಮೇಲೆ ಇಟ್ಟುಕೊಂಡು ಬಹಿರ್ದೇಶ. ಬಳಿಕ ಹೊಂಡ ಮುಚ್ಚಿದರಾಯಿತು. ಪ್ರತಿದಿನ ಮನುಷ್ಯನಿಂದ ಸರಾಸರಿ ಹೊರಬರುವ ಒಂದುವರೆ ಕಿಲೋ ಘನ ಹಾಗೂ ದ್ರವರೂಪದ ಇದು ದೇಶದ ವಾತಾವರಣ ಹಾಗೂ ಸೂರ್ಯನ ಶಾಖದಿಂದ ಬಹುಬೇಗ ಉತ್ತಮ ಗೊಬ್ಬರವಾಗುತ್ತದೆ. ಒಬ್ಬ ಮನುಷ್ಯ ವರುಷಕ್ಕೆ 550 ಕಿಲೋ ಇಂತಹ ಗೊಬ್ಬರ ತಯಾರು ಮಾಡುತ್ತಾನೆ. ಯಾವುದೇ ಖಚರ್ಿಲ್ಲದೆ ಮುಫತ್ತಾಗಿ ಸಿಗುವ ಗೊಬ್ಬರವು ಕೃಷಿಗೆ ಒದಗುತ್ತದೆ,' ಪಕ್ಕಾ ಲೆಕ್ಕ.
                ಭೇಟಿ ನೀಡಿದ ರೈತರಿಗೆಲ್ಲ ನೀರಿನ ಪ್ರತ್ಯಕ್ಷ ಪಾಠ. ಒಂದೊಂದು ಹನಿಯೂ ಅಮೂಲ್ಯ. ನಿತ್ಯ ಬಳಕೆಯ ನೀರು, ಗಂಜಲ, ಸ್ಲರಿ, ಮನುಷ್ಯರ ತ್ಯಾಜ್ಯ ಒಂದೆಡೆ ಸಂಗ್ರಹ. ಎಲ್ಲವೂ ಮಿಶ್ರ ಆದಾಗ ಸಿಗುವ ದ್ರವರೂಪದ ಗೊಬ್ಬರ ಒಂದೆರಡು ಎಕ್ರೆಗೆ ಸಾಕು. 'ನೀವು ನಿಮ್ಮ ಜಮೀನಿನಲ್ಲಿಯೇ ವಾಸ ಮಾಡಬೇಕು. ಆಗ ಶ್ರಮ, ಸಮಯ, ತ್ಯಾಜ್ಯ ಎಲ್ಲವೂ ಸದುಪಯೋಗ' ಎನ್ನುತ್ತಿದ್ದರು. ಮಳೆನೀರಿನ ಕೊಯ್ಲಿಗೆ ಆದ್ಯತೆ.
              ಕಬ್ಬಿನ ಕೂಳೆ ಬೆಳೆಯು ಪ್ರಫುಲ್ಲರನ್ನು ವಿದೇಶಕ್ಕೆ ಹಾರಿಸಿತು! 1966ರಲ್ಲಿ ಹತ್ತು ಗುಂಟೆಯಲ್ಲಿ ಹತ್ತು ಟನ್ ಕೂಳೆ ಕಬ್ಬು! ಕಬ್ಬಿಗೆ ಟಾನಿಕ್ ರೂಪದಲ್ಲಿ ರಸಗೊಬ್ಬರ ಉಣಿಕೆ. ತುಂಬಾ ಸುಲಭದ ಕೃಷಿ ವಿಧಾನ. ಗೇಲಿ ಮಾಡಿದವರೂ ಇದ್ದಾರೆ! 1982ರಲ್ಲಿ ಹದಿನಾಲ್ಕನೇ ಬಾರಿ ಕೂಳೆ ಕಬ್ಬು ಕೃಷಿ ಮಾಡಿದಾಗ ಮೆಕ್ಸಿಕೋದಲ್ಲಿ ಜರುಗಿದ ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಯಾಗಿ ಆಹ್ವಾನ. ಕೂಳೆ ಕಬ್ಬಿನ ಸಾಧನೆಯ ಪ್ರಸ್ತುತಿ. 'ಪ್ರಪಂಚದಲ್ಲೇ ರವದೆ (ಕಬ್ಬಿನ ಗರಿ) ಸುಡದೆ ಕೂಳೆ ಕಬ್ಬು ಬೆಳೆಯುವವರಲ್ಲೇ ಸರ್ವ ಪ್ರಥಮ'ನೆಂಬ ಪುರಸ್ಕಾರ.
              ಅಡಿಕೆ ಸಿಪ್ಪೆಯನ್ನು ಸುಡುವುದೆಂದರೆ ಪ್ರಫುಲ್ಲರಿಗೆ ಅಸಮಾಧಾನ. ಇದರಲ್ಲಿ ಉತ್ತಮ ಪೋಷಕಾಂಶವಿದೆ. ಸಿಪ್ಪೆಯನ್ನು ಒಂದು ವರ್ಷ ಹಾಗೆ ಬಿಟ್ಟು ನಂತರ ತೆಂಗು, ಅಡಿಕೆ ಮರದ ಬುಡಕ್ಕೆ ಹರಡಿದರೆ ನಿಧಾನಕ್ಕೆ ಗೊಬ್ಬರವಾಗುತ್ತವೆ. ಜಿಗುಟು ಮಣ್ಣಿನ ಭೂಮಿಯಲ್ಲಿ ನಾರಿನಂಶ ಹೆಚ್ಚಾಗುತ್ತದೆ. ಇದೊಂದು ಸಹಜ ಹೊದಿಕೆ. ಬೇಸಿಗೆಯಲ್ಲಿ ಕಡಿಮೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಇದಕ್ಕಿದೆ.
               ತೆಂಗಿನ ನುಸಿರೋಗದ ತಡೆ, ಇಲಿ-ಅಳಿಲು ನಿಯಂತ್ರಣ, ಅಡಿಕೆ ಮೂಟೆ ಸಾಗಿಸುವ ಸಾಧನ, ಅಡಿಕೆ ಉದುರು ಮಾಡುವ ಯಂತ್ರ, ಅಡಿಕೆ ಡ್ರೈಯರ್, ಅಡಿಕೆ ಬಾಯ್ಲರ್, ಕಬ್ಬು ಹೊರಲು ಕತ್ತೆಯ ಬಳಕೆ, ಭತ್ತ ತೂರುವ ಯಂತ್ರ, ಟ್ರಾಕ್ಟರಿನಿಂದ ವಿವಿಧ ಆವಿಷ್ಕಾರಗಳು. ಅಲ್ಲದೆ ತಳ್ಳು ಏಣಿ, ಹೂಳೆತ್ತುವ ಸಾಧನ, ಸ್ಕ್ರಾಪರ್, ಡಂಪರ್, ಲೆವಲರ್, ಪೈಪ್ಲೈನರ್, ಸ್ಲರಿ ಬ್ಲೀಡಿಂಗ್.. ಮುಂತಾದ ಶ್ರಮ ಹಗುರ ಮಾಡುವ, ಕೃಷಿ ಉಪಯೋಗಿ ಸಾಧನಗಳ ಸಂಶೋಧಕರು. ಮಗ ಸವ್ಯಸಾಚಿ, ಇಕ್ಷುಧನ್ವ ಪ್ರಫುಲ್ಲರ ಕೃಷಿ ಕೆಲಸಗಳಿಗೆಲ್ಲಾ ಸಾಥ್.
               ಕೃಷಿಯೊಂದಿಗೆ ಅಪಾರ ಸಾಮಾಜಿಕ ಸಂಪರ್ಕ. ವಿಶ್ವವಿದ್ಯಾಲಯಗಳಲ್ಲಿ ಜವಾಬ್ದಾರಿ. ಸಂಶೋಧನಾ ಕೇಂದ್ರಗಳಲ್ಲಿ ವಿವಿಧ ಹೊಣೆ. ಸರಕಾರದ ಯೋಜನೆಗಳಿಗೆ ಮಾರ್ಗದರ್ಶಕ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿ ನಿಂತ ಕೃಷಿಕ. ಪದವಿಗಳ ಹಂಗಿಲ್ಲದೆ ಅನುಭವ, ಬುದ್ಧಿಯೇ ಬಂಡವಾಳ. ಕೃಷಿಯಲ್ಲಿ ಅವರೊಬ್ಬ ವ್ಯಕ್ತಿಯಲ್ಲ, ವ್ಯಕ್ತಿತ್ವವನ್ನು ಮೀರಿದ ಮೇರು.
ಪ್ರಪುಲ್ಲಚಂದ್ರರು ಕುವೆಂಪು ಅವರ ಪತ್ನಿಯ ಸಹೋದರ. 'ಕೃಷಿ-ಋಷಿ' ಎಂದು ಕುವೆಂಪು ಅವರಿಂದ ಮಾನಿಸಿಕೊಂಡ ಪ್ರಫುಲ್ಲಚಂದ್ರರ ಸಾಧನೆಗಳೆಲ್ಲವೂ ಇನ್ನು ನೆನಪು ಮಾತ್ರ.

Wednesday, January 22, 2014

ಬೋಳಂತಕೋಡಿ ಸ್ಮೃತಿ - 'ಬೋಳಂತಕೋಡಿ ಕನ್ನಡ ಪ್ರಶಸ್ತಿ' ಪ್ರದಾನ








              ಪುತ್ತೂರು ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣ ಸಮಾರಂಭವು ಜನವರಿ 28, ಮಂಗಳವಾರರಂದು ಸಂಜೆ 5 ಗಂಟೆಗೆ ಪುತ್ತೂರು ಟೌನ್ ಬ್ಯಾಂಕ್ ಸಭಾಭವನದಲ್ಲಿ ಜರುಗಲಿದೆ.  ಈ ಸಂದರ್ಭದಲ್ಲಿ ಈಶ್ವರ ಭಟ್ಟರ ನೆನಪಿನ ಬೋಳಂತಕೋಡಿ ಕನ್ನಡ ಪ್ರಶಸ್ತಿ'ಯನ್ನು ವಿದ್ವಾಂಸರಾದ ಶ್ರೀ ಸಿದ್ಧಮೂಲೆ ಶಂಕರನಾರಾಯಣ ಭಟ್ ಮತ್ತು ಶ್ರೀ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಇವರಿಗೆ ಪ್ರದಾನಿಸಲಾಗುವುದು.
          ಸಾಹಿತಿ ಶ್ರೀಮತಿ ಎ.ಪಿ.ಮಾಲತಿಯವರು ಸಮಾರಂಭದ ಅಧ್ಯಕ್ಷರಾಗಿದ್ದು, ವಿಶ್ರಾಂತ ಉಪನ್ಯಾಸಕ ಪ್ರೊ:ವಿ.ಬಿ.ಅರ್ತಿಕಜೆ, ರಂಗಕರ್ಮಿ ಶ್ರೀ ಮೂರ್ತಿ ದೇರಾಜೆಯವರು ಪ್ರಶಸ್ತಿ ಪುರಸ್ಕೃತರ ಕುರಿತು ಶುಭನುಡಿಗಳನ್ನಾಡುತ್ತಾರೆ. ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಜಿ.ಶ್ರೀಧರ್ ಬೋಳಂತಕೋಡಿಯವರ ಸಂಸ್ಮರಣೆ ಮಾಡಲಿದ್ದಾರೆ. ಪುತ್ತೂರು ರಾಜೇಶ್ ಪವರ್ ಪ್ರೆಸ್ಸಿನ ಮ್ಹಾಲಕ ಎಂ.ಎಸ್.ರಘುನಾಥ ರಾವ್ ಶುಭಾಶಂಸನೆ ಮಾಡಲಿದ್ದಾರೆ.
          ಇದೇ ಸಭಾಭವನದಲ್ಲಿ ಶ್ರೀ ಜ್ಞಾನಗಂಗಾ ಪುತ್ತೂರು ಇವರ ಸಂಯೋಜನೆಯ 'ಪುಸ್ತಕ ಹಬ್ಬ'ದ ಉದ್ಘಾಟನೆಯನ್ನು ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಮತಿ ಶ್ರೀದೇವಿ ಕಾನಾವು ನಿರ್ವಹಿಸಲಿದ್ದಾರೆ. ಶ್ರೀ ಎಂ.ಸತ್ಯಮೂರ್ತಿ ಹೆಬ್ಬಾರ್ ಇವರ 'ವಿದ್ಯಾರ್ಥಿಗಾಗಿ : ಏನು? ಏಕೆ? ಹೇಗೆ?' ಎನ್ನುವ ಪುಸ್ತಕ ಅನಾವರಣಗೊಳ್ಳಲಿದೆ.
          ಪುತ್ತೂರಿನ ಬೋಳಂತಕೋಡಿ ಪ್ರತಿಷ್ಠಾನದ ಆಯೋಜನೆಯ ಈ ಸಮಾರಂಭದ ಕೊನೆಯಲ್ಲಿ ಪುತ್ತೂರಿನ ಧೀಃಶಕ್ತಿ ಮಹಿಳಾ ಯಕ್ಷ ಬಳಗದವರಿಂದ 'ಮೋಕ್ಷ ಸಂಗ್ರಾಮ' ಎನ್ನುವ ಪ್ರಸಂಗದ ತಾಳಮದ್ದಳೆ ಜರುಗಲಿದೆ. 2012ರಲ್ಲಿ ಪ್ರಥಮ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಯನ್ನು ಮಕ್ಕಳ ಸಾಹಿತಿ ಶ್ರೀ ಪಳಕಳ ಸೀತಾರಾಮ ಭಟ್ಟರಿಗೆ ಪ್ರದಾನಿಸಲಾಗಿತ್ತು.

ಪ್ರಶಸ್ತಿ ಪುರಸ್ಕೃತರ ಪರಿಚಯ:

ಶ್ರೀ ಸಿದ್ಧಮೂಲೆ ಶಂಕರನಾರಾಯಣ ಭಟ್ : ಬಹುಶ್ರುತ ವಿದ್ವಾಂಸರು. ದೀರ್ಘಕಾಲ ಅಧ್ಯಾಪಕರಾಗಿ ದುಡಿತ. ಹಲವು  ಸಂಘಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಕವನ ಸಂಕಲನ, ಗೀತ-ನೃತ್ಯರೂಪಕ, ಕಾವ್ಯ, ವಿಮರ್ಶೆ, ಸಂಶೋಧನೆ, ಅನುವಾದ, ಪ್ರವಾಸ ಕಥನಗಳ ಜತೆಗೆ ಗೋ-ವಿಶ್ವಕೋಶದಂತಹ ಬೃಹತ್ ಗ್ರಂಥ ರಚಿಸಿದವರು. ಕೊಡುಗೈ ದಾನಿ. ಸ್ವತಃ 'ಶಂಕರ ಪ್ರಶಸ್ತಿ' ಹುಟ್ಟುಹಾಕಿದವರು.

ಶ್ರೀ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ : 'ಕನ್ನಡದಲ್ ಪದ ಹಾಡ್ತಾ ಹಾಡ್ತಾ ಈ ಜೀವ ಕೊನೆಗಾಣಬೇಕು' ಎನ್ನುತ್ತಾ ನಾಡಿನಾದ್ಯಂತ ಮಕ್ಕಳ ಪದ, ಭಾವಗೀತ, ಜನಪದ ಗೀತಗಳನ್ನು ಹಾಡಿ ಜನಮನ ರಂಜಿಸಿದವರು. ಸುಬ್ಬನ ಹಾಡು, ಪೆಪ್ಪರಮಿಂಟು, ಸುಬ್ಬಜ್ಜನ ಪದಗಳ ಮೂಲಕ ಜನಪ್ರಿಯರಾದ ಇವರು ಚೇತೋಹಾರಿ ಚುಟುಕುಗಳ ರಚಯಿತರು. ಕನ್ನಡಕ್ಕಾಗಿ ಜೀವ ಸವೆಸಿದ ಕನ್ನಡದ ಹಿರಿಯ ಸಾಹಿತಿ.

* ಪ್ರಕಾಶ್ ಕೊಡೆಂಕಿರಿ (9480451560 )

Sunday, January 12, 2014

ಶ್ರೀ ಪಡ್ರೆಯವರಿಗೆ 'ದಿಶಾ ಗ್ರೀನ್ ಗೋಲ್ಡ್ ಪ್ರಶಸ್ತಿ'


            ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರಿಗೆ 2013ನೇ ಸಾಲಿನ 'ದಿಶಾ ಗ್ರೀನ್ ಗೋಲ್ಡ್ ಪ್ರಶಸ್ತಿ' ಪ್ರಾಪ್ತವಾಗಿದೆ. ಕೊಚ್ಚಿ ಮೂಲದ ಚಾರಿಟೇಬಲ್ ಟ್ರಸ್ಟ್ 'ದಿಶಾ ಗ್ಲೋಬಲ್' ಪ್ರಶಸ್ತಿಯನ್ನು ಪ್ರದಾನಿಸುತ್ತಿದೆ.
            ಶ್ರೀ ಪಡ್ರೆಯವರ ನೆಲ ಜಲ ಉಳಿಸಿ ಆಂದೋಳನ, ಎಂಡೋ ಮಾರಿ ವಿರುದ್ಧ ಚಳುವಳಿ, ಹಲಸು ಆಂದೋಳನ, ಪತ್ರಿಕೋದ್ಯಮ ಕಾರ್ಯಾಗಾರ, ಮೊದಲಾದ ಸಮಾಜಮುಖಿ ಕೆಲಸಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ದಿಶಾ ಗ್ಲೋಬಲಿನ ಅಧ್ಯಕ್ಷ ಪ್ರೊ: ಮೋಹನ್ ಮೆನನ್ ತಿಳಿಸಿದ್ದಾರೆ.
            ಜನವರಿ 24ರಂದು ಎರ್ನಾಕುಲಂನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಆ ದಿನ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಪ್ರತ್ಯಪ್ರತ್ಯೇಕವಾಗಿ ಹಲಸು ಮೌಲ್ಯವರ್ಧನೆ ಕುರಿತ ಪವರ್ ಪಾಯಿಂಟ್ ಪ್ರಸ್ತುತಿಯಿದೆ.


Friday, January 10, 2014

ಅನ್ನದ ಮೂಲ ಅರಿಯುವ ಪ್ರವೃತ್ತಿ ಹೆಚ್ಚಬೇಕು : - ಹೊಸ್ತೋಟ ಭಾಗವತ


"ಆಳಕ್ಕಿಳಿದು ಆಲೋಚಿಸುವದು ಭಾರತೀಯ ಪರಂಪರೆ, ಇಲ್ಲಿ ಹಣಕ್ಕಿಂತ ಯಾವಾಗಲೂ ಗುಣ ಮಹತ್ವದ್ದಾಗಿದೆ. ನಮ್ಮ ವ್ಯವಹಾರಗಳೆಲ್ಲ ವಸ್ತು ವಿನಿಮಯದ ಮೂಲಕ ನಡೆಯುತ್ತಿದ್ದ ಕಾಲದಲ್ಲಿ ಒಬ್ಬರ ಅಗತ್ಯವನ್ನು ಮತ್ತೊಬ್ಬರ ಕೃಷಿ ಉತ್ಪಾದನೆಯಿಂದ ಪಡೆಯಲಾಗುತ್ತಿತ್ತು. ಹೀಗಾಗಿ ಒಂದಿಲ್ಲೊಂದು ಬೆಳೆ ಬೆಳೆಯುವದು ಅನಿವಾರ್ಯವಾಗಿತ್ತು.  ಆಗ ವಸ್ತು ಉತ್ಪಾದನೆಗೆ ಗೌರವವಿತ್ತು. ಈಗ ವಸ್ತು ಉತ್ಪಾದನೆಯ ಮಹತ್ವ ಕಡಿಮೆಯಾಗಿ ಹಣವೇ ಅತಿಯಾಗಿ ವಿಜ್ರಂಬಿಸುತ್ತಿದೆ" ಎಂದು ಖ್ಯಾತ ಯಕ್ಷಗಾನ ಗುರು ಹೊಸ್ತೋಟ ಮಂಜುನಾಥ ಭಾಗವತ್ ವಿಷಾಯ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡದ ಶಿರಸಿ ತಾಲೂಕಿನ ಕಳವೆಯಲ್ಲಿ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಸಂಘಟಿಸಿರುವ ’ಅನ್ನದ ಚಿತ್ರಗಳ”ರಾಜ್ಯ ಮಟ್ಟದ ಕೃಷಿ ಪತ್ರಿಕೋದ್ಯಮ ಶಿಬಿರವನ್ನು ಇಂದು (ಜನವರಿ 10, ೨೦೧೪) ರಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

ಒಮ್ಮೆ ಆಶ್ರಮವೊಂದರಲ್ಲಿ ಭೋಜನಕ್ಕೆ ಕುಳಿತ ವಿದ್ಯಾರ್ಥಿಯೊಬ್ಬ ಅನ್ನದ ತುತ್ತು ಬಾಯಿಗೆ ಇಡುವ ಸಂದರ್ಭದಲ್ಲಿ ’ಅನ್ನ  ಹೆಣಗವಲಾಗಿದೆ’ ಎನ್ನುತ್ತಾನೆ. ಉಣ್ಣುವ ಅನ್ನಕ್ಕೆ ’ಹೆಣದ ವಾಸನೆ’ ಹೇಗೆ ಸಾಧ್ಯ? ಚರ್ಚೆ ಶುರುವಾಗುತ್ತದೆ. ವಿಚಾರಿಸಿದರೆ ಸ್ಮಶಾನದ ಜಾಗದಲ್ಲಿ ಬೆಳೆದ ಭತ್ತದಿಂದ ತಯಾರಿಸಿದ ಅನ್ನ ಅದಾಗಿತ್ತು! ತುತ್ತು ಕೈಗೆ ಎತ್ತಿಕೊಂಡಾಗ ಅದು ಎಲ್ಲಿ ಹೇಗೆ ಬೆಳೆದದ್ದು ಎಂದು ಮೂಲ ಶೋಧಿಸುವ ತಾಕತ್ತು  ಅತ್ಯಂತ ಸೂಕ್ಷ್ಮವಾದುದು. ಕೃಷಿಕ ಹೇಗೆ ಅನ್ನ ಬೆಳೆದಿದ್ದಾನೆಂದು ಅರಿತಾಗ ಆಹಾರದ ಬೆಲೆ, ಕೃಷಿಯ ಕಷ್ಟ ಅರ್ಥವಾಗುತ್ತದೆ ಎಂದು ಕಥೆಯ ಉದಾಹರಣೆಯ ಮೂಲಕ ಹೊಸ್ತೋಟ ಭಾಗವತ ವಿವರಿಸಿದರು. ’ಕುತೂಹಲವಿದ್ದರೆ ಜ್ಞಾನ ಬೆಳೆಯುತ್ತದೆ. ಪ್ರತಿ ವ್ಯಕ್ತಿಯೂ ಒಂದು ಪುಸ್ತಕವಿದ್ದಂತೆ, ವಿವಿಧ ರಂಗದ ವ್ಯಕ್ತಿಗಳ ಜೊತೆ ಒಡನಾಡಿದರೆ ವ್ಯಕ್ತಿತ್ವ ವಿಕಸನವಾಗುತ್ತದೆ. ಬದುಕಿಗೆ ಸೀಮಿತ ಗಡಿ ಹಾಕಿಕೊಂಡರೆ ಅನುಭವ ಬೆಳೆಯುವದಿಲ್ಲ. ಪತ್ರಿಕೋದ್ಯಮ ಆಸಕ್ತರು ಕೃಷಿಯ ಅರಿವು ಪಡೆಯಲು ಹಳ್ಳಿಗರ ಜೊತೆ ಒಡನಾಡಬೇಕ” ಎಂದರು.

ಶಿಬಿರ ನಿರ್ದೇಶಕ,ಹಿರಿಯ ಬರಹಗಾರ ಅಡ್ಡೂರು ಕೃಷ್ಣರಾವ್ ಮಾತನಾಡಿ ’ಪರಿಸ್ಥಿತಿ ಬದಲಾಗುತ್ತಿದೆ, ತಟ್ಟೆಗೆ ಸುಲಭದಲ್ಲಿ ಅನ್ನ ಬಂದು ಬೀಳುತ್ತದೆಂಬ ಭ್ರಮೆ ಕಳಚುತ್ತಿದೆ. ಕೃಷಿ ಮರೆತು ಓಡುತ್ತಿರುವ ಈ ದಿನಗಳಲ್ಲಿ ಹಸಿವು ಭವಿಷ್ಯದ ದೊಡ್ಡ ಸಮಸ್ಯೆಯಾಗಲಿದೆ’ ಎಂದರು. ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ಸಂಚಾಲಕ ಶಿವಾನಂದ ಕಳವೆ ಸ್ವಾಗತಿಸಿದರು. ಕಳೆದ 11 ವರ್ಷಗಳಿಂದ ಪತ್ರಿಕೋದ್ಯಮ ಶಿಬಿರ ನಡೆಸುತ್ತಿದೆ. ಈವರೆಗೆ 500ಕ್ಕೂ ಹೆಚ್ಚು ಅಭ್ಯರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಕೃಷಿ ಬರವಣಿಗೆಯಲ್ಲಿ ಅಧ್ಯಯನಶೀಲತೆ ಹೆಚ್ಚಿಸುವ ಕಾರಣಕ್ಕಾಗಿ ಅನ್ನದ ಚಿತ್ರ ಶಿಬಿರ ಆಯೋಜಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಬರಹಗಾರರು,ಪತ್ರಿಕೋದ್ಯಮ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲದ ಸಾಮಥ್ರ್ಯ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ.ನಿರಂಜನ ವಾನಳ್ಳಿ, ಬರಹಗಾರ ಪೂರ್ಣಪ್ರಜ್ಞ ಬೇಳೂರು, ಶಿಗ್ಗಾಂವ್ ರಾಕ್ ಗಾರ್ಡನ್ನ ಹಿರಿಯ ಕಲಾವಿದ ಸುಲಬಕ್ಕನವರ್ ಶಿಬಿರ ಸಂಪನ್ಮೂಲ ವ್ಯಕ್ತಿಗಳು. ಜನವರಿ 12ರವರೆಗೆ ಶಿಬಿರ ನಡೆಯಲಿದೆ.