Saturday, November 27, 2010

'ಸುದ್ದಿ'ಗೆ ಬೆಳ್ಳಿಯ ಮೆರುಗು

ಪೆರಾಜೆಯಲ್ಲಿ ಪೇಪರ್ ವಿತರಿಸುವ ಕೆ.ಸಿ.ಸೀತಾರಾಮ ಅಪ್ಪಟ ಅಕ್ಷರಪ್ರಿಯ. ಆತ ಸೋಮವಾರ ಯಾವಾಗಲೂ ಬ್ಯುಸಿ. ಸರಿಯಾಗಿ ಎಂಟಕ್ಕೆ ಬರುವ ತೊಡಿಕಾನ ಬಸ್. ಅದರೊಳಗಿಂದ ರೊಂಯ್ಯನೆ ತೂರಿ-ಹಾರಿ ಬರುವ ಸುದ್ದಿಯ ಬಂಡ್ಲು. ಸೀತಾರಾಮ ಅದನ್ನು ಬಿಡಿಸುವಷ್ಟು ಪುರುಸೊತ್ತಿಲ್ಲ, ಮುತ್ತಿಕೊಳ್ಳುವ ಸುದ್ದಿ ಪ್ರಿಯರು. 'ನಮ್ಮೂರಿನ ಸುದ್ದಿ ಬಂದಿದೆ ಮಾರಾಯ..', 'ನೋಡಿಲ್ಲಿ, ನನ್ನ ಕವನ ಹಾಕಿದ್ದಾರೆ', 'ವಾಯ್..ನಿನ್ನ ಹೆಸರು ಬಂದುಬಿಟ್ಟಿದೆ'.. ಹೀಗೆ ಒಬ್ಬೊಬ್ಬರದು ವಿಭಿನ್ನ ಪ್ರತಿಕ್ರಿಯೆ. ಎಲ್ಲರನ್ನೂ ಸಂಭಾಳಿಸಿ, ಹಣ ತೆಕ್ಕೊಂಡು ಕಳುಹಿಸುವ ಹೊತ್ತಿಗೆ ಸೀತಾರಾಮರ ಮುಖದಲ್ಲಿ ಬೆವರು. ಇದು ಸುಮಾರು ಒಂದೂವರೆ ದಶಕದ ಹಿಂದಿನ ಸ್ಥಿತಿ.

ಮುಖ್ಯವಾಹಿನಿ ಪತ್ರಿಕೆಗಳು ಬರುವಾಗ ಲೇಟ್ ಆದರೆ ಸಹಿಸಿಕೊಳ್ಳುತ್ತಾರೆ. ಸುದ್ದಿ ಎಲ್ಲಾದರೂ ತಡವಾದರೆ ಗೊಣಗುವ ಅದೆಷ್ಟು ಮಂದಿ! ಅಕ್ಷರ ಅಕ್ಷರವನ್ನು ಒದುವ ಪರಿ. 'ಹಾಗಾಗಬೇಕಿತ್ತು, ಹೀಗಾಗಬಾರದಿತ್ತು' ಎಂಬ ವಿಮರ್ಶೆ. ಪತ್ರಿಕೆಯಲ್ಲಿ ಹೆಸರು ಪ್ರಕಟವಾದಂದು ನಾಚಿ ಮುದ್ದೆಯಾಗುವ, 'ಸುದ್ದಿ ಓದಿದ್ರಾ' ಅಂತ ಮಾತಿಗೆಳೆಯುವ, 'ನಾನು ಬೇಡ ಅಂತ ಹೇಳಿದೆ, ಹಾಕ್ಬಿಟ್ರು' ಅಂತ ಒಣಜಂಭ ಪ್ರದರ್ಶಿಸುವ ಹಲವು ಮುಖಗಳು ಮಿಂಚಿ ಮರೆಯಾಗುತ್ತವೆ.
ಇದು ಸುದ್ದಿ ಪತ್ರಿಕೆಗೆ ಸಿಕ್ಕ ಜನ-ದನಿ. ಸುಳ್ಯದಲ್ಲಿ 'ಸುದ್ದಿ ಬಿಡುಗಡೆ' ಪತ್ರಿಕೆಯು ಸಾಪ್ತಾಹಿಕವಾಗಿ ಪ್ರಕಟವಾಗುತ್ತದೆ. ಸುದ್ದಿ, ಕವನ, ಲೇಖನ ಕಳುಹಿಸಿಕೊಟ್ಟಲ್ಲಿಗೆ ಆರಂಭವಾಗುವ ತುಡಿತಕ್ಕೆ ಮುಂದಿನ ವಾರದ ಪತ್ರಿಕೆ ಕೈಗೆ ಬಂದಾಗ ನಿಲುಗಡೆ! ಕಳುಹಿಸಿದ ಸುದ್ದಿ ಪ್ರಕಟವಾಗದೇ ಇದ್ದಾಗ ತಳಮಳ. ಏನನ್ನೋ ಕಳಕೊಂಡ ಅನುಭವ. ಪತ್ರಿಕಾ ಕಚೇರಿಗೆ ದೂರವಾಣಿ, ಸಂಪಾದಕರಲ್ಲಿ ಅಂಜುತ್ತಲೇ ಮಾತನಾಡಿದ ಬಳಿಕವೇ ವಿಶ್ರಾಂತಿ.

'ನಮ್ಮೂರಲ್ಲಿ ಜರುಗಿದ ಕಾರ್ಯಕ್ರಮಗಳ ವರದಿ ಮೊದಲು ಸುದ್ದಿಯಲ್ಲಿ ಬರ್ಬೇಕು' ಎಂಬ ಹಪಹಪಿಕೆಯು ಎಲ್ಲಾ ಗ್ರಾಮಗಳ ಸುದ್ದಿಪ್ರಿಯರಲ್ಲಿತ್ತು. ಪತ್ರಿಕೆಯ ಸಂಪಾದಕರೂ ಅಷ್ಟೇ, 'ಇದು ಸಣ್ಣ ಸುದ್ದಿ, ದೊಡ್ಡ ಸುದ್ದಿ' ಅಂತ ಭೇದ ಮಾಡದೆ ಎಲ್ಲವನ್ನು ಸಮದರ್ಶಿತ್ವದಿಂದ ಕಂಡದ್ದರಿಂದಲೇ ಅವರಿಗಿಂದು ಗ್ರಾಮೀಣ ಪ್ರದೇಶದ ತಳವನ್ನು ಸ್ಪರ್ಶಿಸಲು, 'ಗ್ರಾಮೀಣ ಭಾರತ'ವನ್ನು ಕಾಣಲು ಸಾಧ್ಯವಾಯಿತು.
'ಸುದ್ದಿಗೆ ಬರೆಯೋದು ಅಂದ್ರೆ ಅದೊಂದು ಹೆಮ್ಮೆ' ಅನ್ನುತ್ತಿದ್ದ ದಿನಗಳು ನನ್ನ ಶಾಲಾ ಸಮಯದಲ್ಲಿದ್ದುವು. ಪೆರಾಜೆಯಲ್ಲಿ ಜರುಗಿದ ಚಿಕ್ಕಪುಟ್ಟ ಕಾರ್ಯಕ್ರಮಗಳ ವರದಿ ಕಳುಹಿಸಿ, ಅದು ಪ್ರಕಟವಾದಾಗ ಐದಾರು ಪ್ರತಿಗಳನ್ನು ಖರೀದಿಸಿ, ಪ್ರಕಟಿತ ವರದಿಗೆ ಮಾರ್ಕ್ ಮಾಡಿ ಸ್ನೇಹಿತರಲ್ಲಿ 'ಹೇಳಿಕೊಳ್ಳುವುದು, ಹಂಚುವುದು' ಎಂದರೆ ಖುಷಿ. ಅದನ್ನು ಜೋಪಾನವಾಗಿಟ್ಟುಕೊಂಡು, ಅದರೊಳಗೆ ಆಗಾಗ್ಗೆ 'ಇಣುಕುವುದು' ಮತ್ತೂ ಸಂತೋಷ.
ಇಂದು ನಮ್ಮೆಲ್ಲಾ ವ್ಯವಸ್ಥೆಗಳನ್ನು ಒಮ್ಮೆ ನಿಂತು ನೋಡಿ. ಎಲ್ಲವೂ ನಗರ ಕೇಂದ್ರಿತವಾದ ವ್ಯವಸ್ಥೆ. ಅಭಿವೃದ್ಧಿಯ ಧಾವಂತದಲ್ಲಿ ಗ್ರಾಮೀಣ ಪ್ರದೇಶವನ್ನು ನಾಡಿನ ದೊರೆಗಳು ಪೂರ್ತಿ ಮರೆತಿದ್ದಾರೆ. ನಗರದ ಹೃದಯವಿರುವುದು ಹಳ್ಳಿಗಳಲ್ಲಿ ತಾನೆ. ಹಳ್ಳಿಗಳನ್ನೇ ಮರೆತರೆ?
ಸುದ್ದಿಯ ಸಂಪಾದಕರಿಗೆ ಆ ಎಚ್ಚರ ಇದೆ. ಅವರಿಗೆ ಹಳ್ಳಿಯೇ ಲಕ್ಷ್ಯ. ಊರಿನ ಸತ್ಯನಾರಾಯಣ ಪೂಜೆ, ಜಾತ್ರೆ, ಭೂತದ ಕೋಲ, ಕೋಳಿಅಂಕ, ಸೊಸೈಟಿಯ ಮಹಾಸಭೆ, ಶಾಲಾ ವಾರ್ಶಿಕೋತ್ಸವ.. ಇವೆಲ್ಲಾ ಎಲ್ಲಿ ಸುದ್ದಿಯಾಗುತ್ತಿತ್ತು? 'ಅದೂ ಸುದ್ದಿಯಾಗಲು ಯೋಗ್ಯ' ಎಂಬುದನ್ನು ಪತ್ರಿಕೆ ತೋರಿಸಿಕೊಟ್ಟಿದೆ. ಹಳ್ಳಿಯ ಮೂಲಭೂತ ಸಮಸ್ಯೆಗಳನ್ನು ಪ್ರಕಟಿಸಿ ಇಲಾಖಾ ವರಿಷ್ಠರ ಗಮನ ಸೆಳೆದಿದೆ. ಪರಿಹಾರ ದೊರಕಿಸಿಕೊಡುವಲ್ಲಿ ಶ್ರಮಿಸಿದೆ.
ಬೆಳಕು ಕಾಣದೆ ಮುದುಡಿದ್ದ ಎಷ್ಟೋ ವಿಚಾರಗಳಿಗೆ ಬೆಳಕು ಒಡ್ಡಿದೆ. ಊರಿನ ಭೂತಸ್ಥಾನ, ದೇವಸ್ಥಾನ, ಮಸೀದಿ, ಚರ್ಚ್ .ಗಳ ಪರಿಚಯವನ್ನು ಪ್ರಕಟಿಸಿದೆ. ಪ್ರತಿಭಾವಂತರನ್ನು ಬೆನ್ನುತಟ್ಟಿದೆ. ಸಮಸಾಮಯಿಕ ವಿಚಾರಗಳಿಗೆ ಸಂವಾದವನ್ನು ನಡೆಸಿದೆ.
ಕೆಲವೊಂದು ಸಲ ನಮ್ಮ ರಾಜಕಾರಣದ ಹೊಲಸು ಹಳ್ಳಿಯನ್ನು ಅಶುಚಿ ಮಾಡುವುದಿದೆ. ಅಂತಹ ಸಂದರ್ಭಗಳಲ್ಲಿ ಪತ್ರಿಕೆಗೆ ಸವಾಲೂ ಆದದ್ದಿದೆ. ಇದನ್ನು ಜಾಣ್ಮೆಯಿಂದ ನಿಭಾಯಿಸಿದ ಕೀರ್ತಿ ಸಂಪಾದಕರದು.
ಎಷ್ಟೋ ಪ್ರತಿಭೆಗಳಿಗೆ ಸುದ್ದಿಯೊಂದು ಮಾಧ್ಯಮ. ಕವನ, ಕಥೆಗಳನ್ನು ಪ್ರಕಟಿಸಿ ಬೆನ್ನುತಟ್ಟಿದೆ. ನನಗೆ ಮೊದಲು ಲೇಖನಿ ಕೊಟ್ಟುದು ಸುದ್ದಿ! 'ಇಂತಹ ಲೇಖನ ಬರೆಯಿರಿ. ನಾಡಿದ್ದೇ ಬೇಕು' ಒತ್ತಾಯಪೂರ್ವಕವಾದ ಕರೆ ಬಂದಾಗ ಉಬ್ಬಿ ಉದ್ದಾದ ದಿನಗಳು ಈಗ ನೆನಪು! ಬರೆಯುವ ತುಡಿತವಿದ್ದ ದಿನಗಳಲ್ಲಿ ಸುದ್ದಿಯು ಲೇಖನವನ್ನೋ, ವರದಿಯನ್ನೋ ಪ್ರಕಟಿಸದಿರುತ್ತಿದ್ದರೆ, ಕಸದ ಬುಟ್ಟಿಗೆ ಸೇರಿಸುತ್ತಿದ್ದರೆ ಬಹುಶಃ ಅಕ್ಷರ ಕುರುಡು ಬರುತ್ತಿತ್ತೇನೋ!
ಪತ್ರಿಕೆಯ ಸಂಪಾದಕರು - ಡಾ. ಯು.ಪಿ.ಶಿವಾನಂದ. ಮಾಹಿತಿಗಳ ಹಸಿವಿದ್ದ ಅಪರೂಪದ ಡೈನಮಿಕ್ ಸಂಪಾದಕರು. ಮಾಹಿತಿ ಕಲೆ ಹಾಕುವ, ಗ್ರಾಮೀಣ ಭಾರತವನ್ನು ತಲುಪುವ, ಅವರಿಗೆ ಪ್ರಯೋಜನಕಾರಿಯದಂತಹ ಯೋಜನೆಗಳನ್ನು ಹಾಕಿಕೊಳ್ಳುವಲ್ಲಿ ಅವರ 'ಮೂಡ್' (MOOD) ಎಂದೂ ಕೆಡುವುದಿಲ್ಲ.
ಸುದ್ದಿ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣ - ಗ್ರಾಮೀಣ ಭಾರತದ ಕುರಿತಾದ ಡಾ.ಶಿವಾನಂದರ ದೂರದೃಷ್ಟಿ ಮತ್ತು ಉತ್ತಮ ಸಾರ್ವಜನಿಕ ಸಂಪರ್ಕವುಳ್ಳ ಅವರ ಸಹಕಾರಿಗಳು, ಸಿಬ್ಬಂದಿಗಳು. ಸುದ್ದಿ ಪತ್ರಿಕೆಯಿಂದ ಯಾವುದೇ ವಿಚಾರಕ್ಕೆ ದೂರವಾಣಿ ಬಂದರೆ ತಕ್ಷಣ 'ಓಕೆ' ಅನ್ನುವ ಮನಸ್ಸು ಬರುವುದು
ಈ ಕಾರಣದಿಂದ.

ಸುದ್ದಿಯು ಸುಳ್ಯ, ಬೆಳ್ತಂಗಡಿಯಲ್ಲಿ ಸಾಪ್ತಾಹಿಕವಾಗಿ ಪ್ರಕಟವಾದರೆ, ಪುತ್ತೂರಿನಲ್ಲದು ದೈನಿಕ. ಇಪ್ಪತ್ತೈದು ವರುಷಗಳ ಹಿಂದೆ ಹಚ್ಚಿದ ಹಣತೆಗೀಗ ಬೆಳ್ಳಿಯ ಮೆರುಗು. ಸುಳ್ಯದಲ್ಲಿ ನವೆಂಬರ್ 27, 28ರಂದು ಬೆಳ್ಳಿ ಸಂಭ್ರಮ. 'ಇದು ಸುದ್ದಿಯ ಸಂಭ್ರಮವಲ್ಲ. ಓದುಗರ ಸಂಭ್ರಮ. ಹಳ್ಳಿ ಸಂಭ್ರಮ' ಎಂದು ವಿನೀತವಾಗಿ ಹೇಳುತ್ತಾರೆ ಸಂಪಾದಕ ಡಾ.ಯು.ಪಿ.ಶಿವಾನಂದ.

Wednesday, November 24, 2010

ಜೆಕೆವಿಕೆ ಕೃಷಿ ಮೇಳ 2010 : ನೆನಪು







ನವೆಂಬರ್ 11ರಿಂದ 14ರ ತನಕ ಬೆಂಗಳೂರು ಜೆಕೆವಿಕೆ ಕೃಷಿ ಮೇಳ ಜರುಗಿತು. ಐನೂರಕ್ಕೂ ಮಿಕ್ಕಿ ಮಳಿಗೆಗಳು.
ಮೂರು ಲಕ್ಷಕ್ಕೂ ಮಿಕ್ಕಿದ ಜನ. ಮಾಮಾಲಿ ಹೂರಣಗಳು.
ಉಪ ಕುಲಪತಿ ಡಾ. ನಾರಾಯಣ ಗೌಡರ ನೇತೃತ್ವದಲ್ಲಿ ವ್ಯವಸ್ಥೆಗಳು ಚೆನ್ನಾಗಿತ್ತು

ಜಾಣ ಅಕ್ಷರ ಕುರುಡು

ಶುಭಕಾರ್ಯವೊಂದರಲ್ಲಿ ಭಾಗಿಯಾಗಲು ಕುಟುಂಬದೊಂದಿಗೆ ಕೇರಳದ ತ್ರಿಶೂರಿಗೆ ರೈಲಲ್ಲಿ ಪ್ರಯಾಣಿಸುತ್ತಿದ್ದೆ. ಏಳೆಂಟು ಗಂಟೆ ಪ್ರಯಾಣ. ಸಮಯ ಕೊಲ್ಲಲು (!) ಐದಾರು ದೈನಿಕಗಳಿದ್ದುವು. ರೈಲಿನಲ್ಲಿ ಪತ್ರಿಕೆ ಓದುತ್ತಾ ಇರುವಾಗ ಪಕ್ಕದಲ್ಲಿದ್ದ ಓರ್ವ ಹಿರಿಯರು ಆಗಾಗ್ಗೆ ಇಣುಕುತ್ತಿದ್ದರು. ತಿರುಗಿ ಮುಖವನ್ನು ನೋಡುವಾಗ ಗಂಭೀರರಾಗುತ್ತಿದ್ದರು. ಪತ್ರಿಕೆಯ ಮಧ್ಯದ ಪುಟವನ್ನು 'ತಮ್ಮ ಹಕ್ಕೆಂಬಂತೆ' ಇವರ್ಯಾಕೆ ಕಸಿಯಲಿಲ್ಲ - ಎಂಬ ಚೋದ್ಯ ಕಾಡುತ್ತಿತ್ತು.

ಹಳೆ ಪೇಪರ್ನಲ್ಲಿ ತಿಂಡಿ ಕಟ್ಟಿಕೊಂಡು ಬಂದಿದ್ದರು. ತಿಂಡಿ ತಿಂದಾದ ಬಳಿಕ ಆ ಪೇಪರನ್ನು ಎಸೆಯದೆ ಓದುತ್ತಿದ್ದರು! ಬಸ್ಸಿನಲ್ಲಿ, ರೈಲಲ್ಲಿ ಪತ್ರಿಕೆಗಳಿಗೆ ಸಾಕಷ್ಟು ಮಂದಿ 'ಹಕ್ಕುದಾರರು' ಹಕ್ಕು ಚಲಾಯಿಸಿದ್ದ ಅನುಭವವಿದ್ದುದರಿಂದ ಆ ವೃದ್ಧರ ಓದಿನ ತುಡಿತ ಢಾಳಾಗಿ ಕಂಡಿತು.

ಸರಿ, ತ್ರಿಶೂರು ಸನಿಹವಾಗುತ್ತಿದ್ದಂತೆ, ಗಂಟುಮೂಟೆಗಳನ್ನು ಪೇರಿಸುತ್ತಿದ್ದೆವು. ನಾವು ಇಳಿಯುವ ಸೂಚನೆ ಸಿಕ್ಕಿದ ಆ ವೃದ್ಧರು ಬಳಿಗೆ ಬಂದು, 'ನಿಮಗೆ ಪೇಪರ್ ಓದಿ ಆಯ್ತಲ್ಲಾ. ಅದನ್ನು ಕೊಡ್ತೀರಾ' ಎಂದು ಇಪ್ಪತ್ತು ರೂಪಾಯಿ ನೋಟನ್ನು ಹಿಡಿದಿದ್ದರು. ಅವರ ಬಗ್ಗೆ ತಪ್ಪಾಗಿ ಅರ್ಥ್ಯೆಸಿಕೊಂಡದ್ದಕ್ಕೆ ನಾಚಿಕೆಯಾಯಿತು. ಕೈಯಲ್ಲಿದ್ದ ಐದಾರು ಪತ್ರಿಕೆಗಳನ್ನು ಅವರ ಕೈಗಿತ್ತು, ಹಣವನ್ನು ನಿರಾಕರಿಸಿದೆ. ಅಗವರ ಮುಖ ಅರಳಿತ್ತು. ಅಷ್ಟೂ ಹೊತ್ತು ಓದಿನ ಹಸಿವೆಯನ್ನು ಅದುಮಿಟ್ಟು ಕೊಂಡ ಆವರ ಬಗ್ಗೆ ಗೌರವ ಮೂಡಿತು.

'ಮನೆಗೆ ಎರಡು ಪೇಪರ್ ಬರುತ್ತೆ. ಟ್ರೈನಿಗೆ ಬರುವ ಗಡಿಬಿಡಿಯಲ್ಲಿ ಓದಲಾಗಲಿಲ್ಲ. ಚೀಲಕ್ಕೆ ಹಾಕಲು ಮೊಮ್ಮಗಳಿಗೆ ಹೇಳಿದ್ದೆ. ಮರೆತಿರಬೇಕು. ಏನೋ, ಪೇಪರ್ ಓದದಿದ್ದರೆ ದಿನ ಪೂರ್ಣವಾಗುವುದಿಲ್ಲ' ಎನ್ನುತ್ತಾ ಬಾಯ್ತುಂಬಾ ನಕ್ಕರು. ಸುಮಾರು ಏಳೆಂಟು ಗಂಟೆ ಒಂದೇ ಬೋಗಿಯಲ್ಲಿದ್ದರೂ ಅವರು ನನ್ನ ಕೈಯಲ್ಲಿದ್ದ ಪೇಪರ್ ಕೇಳಿಲ್ಲ, ಕಸಿಯಲಿಲ್ಲ, ಹಕ್ಕು ಚಲಾಯಿಸಲಿಲ್ಲ.

ಈ ಘಟನೆ ಮೆಲುಕು ಹಾಕುತ್ತಾ ಇದ್ದಾಗ, ಪುತ್ತೂರಿನಿಂದ ರಾಜಧಾನಿಗೆ ರೈಲಲ್ಲಿ ಪ್ರಯಾಣಿಸುತ್ತಿದ್ದಾಗಿನ ಅನುಭವ ಹೇಳಲೇ ಬೇಕು. ಎಂದಿನಂತೆ ಐದಾರು ಪತ್ರಿಕೆ ಖರೀದಿಸಿ, ಓದುತ್ತಾ ಕುಳಿತಿದ್ದೆ. ಒಂದೈದು ನಿಮಿಷ ಆಗಿತ್ತಷ್ಟೇ, ಹತ್ತಿರದಲ್ಲಿ ಕುಳಿತಿದ್ದ ಮಹಾನುಭಾವ ಆಗಾಗ್ಗೆ ಪೇಪರ್ನಲ್ಲಿ ಇಣುಕುತ್ತಾ, ನನ್ನ ಕೈಯಲ್ಲಿದ್ದ ಪತ್ರಿಕೆಯನ್ನು ಆತನ ಬಳಿಗೆ ಎಳೆಯುತ್ತಾ ಹಿಂಸೆ ನೀಡುತ್ತಿದ್ದ. ಅಸಹನೆಯನ್ನು ವ್ಯಕ್ತಪಡಿಸಿದ್ದರೂ ಮಗುಮ್ಮಾಗಿ ಹಲ್ಲು ಕಿರಿದಿದ್ದ!

ಕೊನೆಗೊಮ್ಮೆ 'ಸ್ವಲ್ಪ ಕೊಡಿ' ಎನ್ನುವ ಮೊದಲೇ ಮಧ್ಯದ ಪುಟವನ್ನು ಎಳೆಯಬೇಕೇ. ಸ್ವಲ್ಪ ಹೊತ್ತಾದ ಬಳಿಕ ಇನ್ನೊಬ್ಬನಿಗೂ ಈ ಚಾಳಿ ಅಂಟಿತು. ಒಂದು ಪತ್ರಿಕೆ ಕೈಜಾರಿತಲ್ಲಾ, ತೊಂದರೆಯಿಲ್ಲ. ಇನ್ನೊಂದಿದೆ - ಎನ್ನುತ್ತಾ ಕೈಗೆತ್ತಿಕೊಂಡೆ. ಅದಕ್ಕೂ ಅದೇ ಗತಿ. 'ಒಂದು ಪತ್ರಿಕೆ ಕೊಳ್ಳದಷ್ಟು ದಾರಿದ್ರ್ಯ ಯಾಕೆ ಬಂತಪ್ಪಾ' ಎನ್ನುತ್ತಾ ಇನ್ನೊಂದು ಪತ್ರಿಕೆಯ ಓದು ಆರಂಭಿಸುತ್ತಿದ್ದಂತೆ, ಅದಕ್ಕೂ ವಾರೀಸುದಾರರು ಬರಬೇಕೆ. ಅರ್ಧ ಗಂಟೆಯಲ್ಲಿ ಚೀಲದಲ್ಲಿದ್ದ ಎಲ್ಲಾವೂ ಪರರ ಪಾಲು.

'ಪತ್ರಿಕೆಯಲ್ವಾ. ಓದಿ ಹಿಂತಿರುಗಿಸುವುದಿಲ್ವಾ' ಅಂತ ಊಹಿಸಿದರೆ ತಪ್ಪು. ಅವೆಲ್ಲಾ ಮರಳಿ ಕೈಸೇರುವಾಗ, 'ಕಸದ ಬುಟ್ಟಿಯಿಂದ ತೆಗೆದ ಕಾಗದ'ಗಳಂತಿದ್ದುವು. ಅನ್ನದ ಅಗುಳು, ತಿಂಡಿಯ ಶೇಷ ಅಂಟಿಕೊಂಡಿದ್ದುವು. ಮಾನಸಿಕ ವಿಕಾರಗಳು ಪತ್ರಿಕೆಗಳಲ್ಲಿ ಪಡಿಯಚ್ಚು ಮೂಡಿದ್ದುವು. ಪುನಃ ಚೀಲಕ್ಕೆ ಸೇರಿಸುವ ಎಲ್ಲಾ ಅರ್ಹತೆಗಳನ್ನು ಕಳಕೊಂಡಿದ್ದುವು!

ತ್ರಿಶೂರು ಪ್ರಯಾಣದ ಆ ವೃದ್ಧರೂ ಮತ್ತು ರಾಜಧಾನಿ ಪ್ರಯಾಣದ 'ಪತ್ರಿಕಾ ವಾರಸುದಾರ'ರಿಬ್ಬರನ್ನು ಥಳಕು ಹಾಕಿದರೆ, ಆ ವೃದ್ಧರೇ ಮೇಲು. ಯಾಕೆಂದರೆ 'ಪೇಪರ್ ಕೊಡ್ತೀರಾ' ಅಂತ ಕೇಳುವ ಸೌಜನ್ಯ ಮತ್ತು ಪತ್ರಿಕೆಯ ಮೌಲ್ಯ ಕೊಡಲೂ ಸಿದ್ಧರಾದ ಮನಃಸ್ಥಿತಿ. ಯಾವ್ಯಾವುದಕ್ಕೋ ವೆಚ್ಚ ಮಾಡುತ್ತೇವೆ. ಪತ್ರಿಕೆಗಾಗುವಾಗ ನಮ್ಮಲ್ಲಿ 'ಜಿಪುಣತನ' ಧುತ್ತೆನ್ನುತ್ತದೆ.

ತ್ರಿಶೂರಿನಲ್ಲಿ ನಾವು ಉಳಕೊಂಡಿರುವ ಮನೆಯ ಸನಿಹ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು. ಬೆಳಿಗ್ಗೆ ಸುಮಾರು 8-9 ಗಂಟೆಯ ಸಮಯ. ಏಳೆಂಟು ಮಂದಿ ಕಾರ್ಮಿಕರು ಪತ್ರಿಕೆಯನ್ನು ಓದುತ್ತಿದ್ದರು. ಕೆಲವರ ಕಂಕುಳಲ್ಲಿ ಪೇಪರ್ ಭದ್ರವಾಗಿತ್ತು. ಅಷ್ಟೂ ಮಂದಿ ಒಂದೆಡೆ ಕೆಲಸ ಮಾಡುವವರಾದ್ದರಿಂದ, ಎಲ್ಲರಿಗೂ ಒಂದೇ ಪೇಪರ್ ಸಾಕಿತ್ತಲ್ವಾ! ಖರೀದಿಸಿ ಓದುವ ಜಾಯಮಾನ ಅಲ್ಲಿ ಬದುಕಿಗಂಟಿದೆ. ಒಂದು ಪತ್ರಿಕೆಯನ್ನಾದರೂ ಕೊಂಡು ಓದದಿದ್ದರೆ ಬದುಕಿನ ಬಂಡಿ ಓಡುವುದೇ ಇಲ್ಲ!
ಕನ್ನಾಡಿನಲ್ಲಿ ತದ್ವಿರುದ್ಧ. ಪಕ್ಕದ ಮನೆಗೆ ಯಾವಾಗ ದೈನಿಕ, ಸಾಪ್ತಾಹಿಕ, ಮಾಸಿಕಗಳು ಬರುತ್ತದೆ ಅಂತ ಕಾದು ಕುಳಿತುಕೊಳ್ಳುವ 'ಓದುಪ್ರಿಯ'ರು ಸಾಕಷ್ಟು ಮಂದಿ ಸಿಗ್ತಾರೆ. ಓದಿದ ಬಳಿಕ ಸುರಕ್ಷಿತವಾಗಿ ಮರಳಿಸಬೇಕೆಂಬ ಕನಿಷ್ಠ ಸೌಜನ್ಯವೂ ಇಲ್ಲದ ನಡವಳಿಕೆ. ಹೋಟೇಲಿಗೆ ಹೋಗಿ ಐವತ್ತು, ನೂರರ ನೋಟು ಕಿಸೆ ಜಾರಿದಾಗ ಮುಖ ಅಗಲವಾಗುತ್ತದೆ. ಮೂರೋ, ನಾಲ್ಕೋ ರೂಪಾಯಿ ತೆತ್ತು ಒಂದು ಪತ್ರಿಕೆ ಖರೀದಿಸುವಾಗ ಮುಖ ಕಿವುಚುತ್ತದೆ.

ಈ ಮಧ್ಯೆ ಪತ್ರಿಕೆಯ ಓದನ್ನು ನಿಯಮಿತವಾಗಿ ಮಾಡಿಕೊಂಡ ಅಜ್ಞಾತ ವರ್ಗದವರಿಂದ ಕನ್ನಾಡಿನ ಪತ್ರಿಕೆ ಉಳಿದುಕೊಂಡಿದೆ. ಕೇರಳದಂತೆ ಇಲ್ಲೂ ಪತ್ರಿಕಾ ಓದು ಬದುಕಿನಂಗವಾದರೆ?

ಒಂದೆಡೆ ಕನ್ನಡದ ಕುರಿತು ಹೋರಾಟ. ಮತ್ತೊಂದೆಡೆ ಅಕ್ಷರ ಕುರುಡು. ಅದೂ ಜಾಣ ಕುರುಡು. ಟೆಲಿವಿಶನ್, ಅಂತರ್ಜಾಲಗಳು ಓದನ್ನು ಹಾಳು ಮಾಡಿದುವು - ಅಂತ ಢಾಳಾದ ಅಭಿಪ್ರಾಯಕ್ಕೆ ಬರುತ್ತೇವೆ. 'ಅವುಗಳು ನಮ್ಮನ್ನು ಹಾಳು ಮಾಡಿಲ್ಲ. ನಮಗೆ ಅಕ್ಷರ ಕಂಡಾಗ ಮಯಮಯವಾಗಿ ಕಾಣುವುದಕ್ಕೆ ಯಾರನ್ನು ದೂರಿ ಪ್ರಯೋಜನ' - ಶಿಕ್ಷಣ ತಜ್ಞ ಡಾ.ಸುಕುಮಾರ ಗೌಡರ ಮಾತು ಹೆಚ್ಚು ಸೂಕ್ತವಾಗುತ್ತದೆ.

Wednesday, November 17, 2010

`ಕೃಷಿ ಉಳಿದರೆ ಗ್ರಾಮೀಣ ಸಂಸ್ಕೃತಿ ಉಳಿಯುತ್ತದೆ'



`ಅಧಿಕಾರ ವಿಕೇಂದ್ರೀಕರಣದಂತೆ ಪತ್ರಿಕೋದ್ಯಮದ ವಿಕೇಂದ್ರೀಕರಣವೂ ಅಗತ್ಯ. ಎಲ್ಲಾ (ಕನ್ನಡ) ಪತ್ರಿಕೆಗಳಲ್ಲಿ ಇದೀಗ ಸ್ಥಳೀಯ ಸುದ್ದಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ಮೊದಲಿಗಿಂತ ಹೆಚ್ಚು ಗ್ರಾಮೀಣ ಸ್ದುದಿ ಪ್ರಕಟವಾಗುತ್ತಿವೆ. ಇವ್ಲೆಲವೂ ಸ್ವಾಗತಾರ್ಹ ಬೆಳವಣಿಗೆ. ನಮ್ಮ ಸುದ್ದಿಯನ್ನು ಇನ್ನೊಬ್ಬರು ಬರೆಯುವ ಬದಲು ನಾವೇ ನಮ್ಮ ಬದುಕನ್ನು ಮಾಧ್ಯಮದೆದುರು ತರಬೇಕು. ನಮ್ಮಂತೆ ಇರುವವರ ಬದುಕಿನ ಅಗತ್ಯತೆಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಲು ಯತ್ನಿಸಬೇಕು. ಮಾಧ್ಯಮದ ಶಕ್ತಿಯನ್ನು ಬಳಸಿಕೊಳ್ಳಲು ಯತ್ನಿಸಬೇಕು...' - ನೀರಿಂಗಿಸುವ ಪಾಠವನ್ನು ಕಳೆದ ಎರಡು ದಶಕದಿಂದ ಅಚ್ಚುಕಟ್ಟಾಗಿ ಹೇಳುತ್ತಿರುವ ಶ್ರೀ ಪಡ್ರೆಯವರು ಮೂಡಿಗೆರೆ ತ್ಲಾಲೂಕಿನ ದೇವವೃಂದದ್ಲಲಿ ಮಂಡಿಸಿದ ವಿಚಾರಧಾರೆಯಿದು.

ಅ 28ರಿಂದ 31ರವರೆಗೆ ಮೂಡಿಗೆರೆ ತ್ಲಾಲೂಕಿನ ದೇವವೃಂದದ್ಲಲಿ ನಡೆದ `ಗ್ರಾಮೀಣ ಕೃಷಿ ಪತ್ರಿಕೋದ್ಯಮ ಶಿಬಿರ'ದ್ಲಲಿ ಹತ್ತು ಹಲವು ವಿಚಾರಗಳು ವ್ಯಕ್ತವಾದವು. ಕೃಷಿ ಕೇಂದ್ರಿತ ಗ್ರಾಮೀಣ ಬದುಕನ್ನು ಮಾಧ್ಯಮದಲ್ಲಿ ಹೇಗೆ ಬಿಂಬಿಸಬೇಕು? ಮತ್ತು ಏಕೆ ಬಿಂಬಿಸಬೇಕು? ಎಂಬ ಎರಡು ಪ್ರಶ್ನೆಗಳ ಸುತ್ತ 4 ದಿನ ವಿಚಾರ ಮಂಥನ ನಡೆಯಿತು.

ಈ ಶಿಬಿರದ್ಲಲಿ ಪಾಲ್ಗೊಂಡ ಶಿಬಿರಾರ್ಥಿಗಳು ಕೇವಲ ಬರವಣಿಗೆಯ ತಂತ್ರಗಳನ್ನು ಮಾತ್ರವಲ್ಲ ಕೃಷಿ ಜಗತ್ತಿನ ಆಗುಹೋಗುಗಳ ಇಣುಕು ನೋಟವನ್ನೂ ಪಡೆದರು. ಕೃಷಿ ಇಲಾಖೆಯ ಅಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಕೃಷಿಕರು, ಪ್ರಮುಖ ಪತ್ರಿಕೆಗಳಲ್ಲಿ - ಚಾನೆಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು, ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸುವ ಹಂಬಲ ಇರುವವರೂ ಇಲ್ಲಿ ಕೃಷಿ ಪತ್ರಿಕೋದ್ಯಮದ ಪಾಠ ಕಲಿತರು.

`ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹುಲಿ ಸಂರಕ್ಷಣೆ ಹೇಗೆ ಒಂದು ಪ್ರತಿಮೆಯಾಗುತ್ತದೆಯೋ ಹಾಗೆ ಕೃಷಿ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಗ್ರಾಮೀಣ ಸಂಸ್ಕೃತಿಯ ಉಳಿವಿಗೇ ಒಂದು ಪ್ರತಿಮೆಯಾಗುತ್ತದೆ' ಎಂದ ಸಂಪನ್ಮೂಲ ವ್ಯಕ್ತಿಗಳ ಮಾತು ಕೃಷಿಯ ಮಹತ್ವವನ್ನು ಸಾರಿ ಹೇಳಿತ್ತು.

ಕೃಷಿಕರ ಸಮಸ್ಯೆಗಳನ್ನು ಬರೆಯಲು ಹೊರಡುವ ಅನೇಕರು ಎಲ್ಲಾ ಸಮಸ್ಯೆಗೂ ಪರಿಹಾರ ಸೂಚಿಸುವ ಅತ್ಯುತ್ಸಾಹದ್ಲಲಿ ಮುನ್ನುಗ್ಗುತ್ತಾರೆ. ಕೆಲವರು ತಾವೇ ಸ್ವತಃ ಕೃಷಿಕರಾಗಿ ತಮ್ಮ ಅನುಭವಕ್ಕೇ ನಿಷ್ಠರಾಗಿ ಬರೆಯಬೇಕು ಎಂದು ಹಂಬಲಿಸುತ್ತಾರೆ. ಇನ್ನೂ ಕೆಲವರು ಉಪದೇಶಾತ್ಮಕವಾಗಿ ತಮ್ಮ ಅಭಿಪ್ರಾಯಗಳನ್ನು ಹೇರಲು ಲೇಖನವನ್ನು ಸಾಧನವನ್ನಾಗಿಸಿಕೊಳ್ಳುತ್ತಾರೆ. ಕೃಷಿ ಪತ್ರಿಕೋದ್ಯಮ ಅನುಭವಿಸುತ್ತಿರುವ ಈ ಭ್ರಮೆಗಳನ್ನು ಕಳಚಲು ದೇವವೃಂದ ಶಿಬಿರ ಸಾಕಷ್ಟು ಶ್ರಮಿಸಿತು.

`ನಿಮ್ಮ ಮಾಹಿತಿ ಮೂಲಗಳನ್ನು ಗೌರವಿಸಿ. ಅವರಿಂದ ಮಾಹಿತಿ ಪಡೆದು ಲೇಖನ ಬರೆದು ಅದು ಪ್ರಕಟಗೊಂಡ ನಂತರ ಮಾಹಿತಿ ಮೂಲವನ್ನು ನಿರ್ಲಕ್ಷಿಸಬೇಡಿ. ರೈತರನ್ನು ಕೇವಲವಾಗಿ ಕಾಣುವ ಧೋರಣೆಯನ್ನು ಕೈಬಿಡಿ. ಕೃಷಿ ವಿಜ್ಞಾನಿಗಳು ವಿಶ್ವವಿದ್ಯಾಲಯಗಳಲ್ಲಿ ಮಾಡುವ ಸಂಶೋಧನೆಯಷ್ಟೇ ಪ್ರಮುಖವಾದ ಸಾಧನೆಯನ್ನು ಹಲವು ರೈತರು ತಮ್ಮ ಹೊಲದಲ್ಲಿಯೇ ಸಾಧಿಸಿರುವ ಹಲವು ಉದಾಹರಣೆಗಳಿವೆ. ಅಂಥವನ್ನು ಹುಡುಕಿ ಬೆಳಕಿಗೆ ತರಬೇಕು. ನಮ್ಮಿಂದ (ಬರಹಗಾರರಿಂದ) ನಿಮಗೆ (ರೈತರಿಗೆ) ಲಾಭ ಎಂಬ ಮನಸ್ಥಿತಿ ನಿಮ್ಮಲ್ಲಿ ಎಂದಿಗೂ ಮೂಡಬಾರದು' ಎಂದ ಅಂಕಣಕಾರ ಶಿವಾನಂದ ಕಳವೆ ಅವರ ಮಾತು ಮನದಲ್ಲಿ ಅಚ್ಚೊಚ್ಚಿ ನಿಂತಿತು.

`ಮಾಧ್ಯಮಗಳು ಗ್ರಾಮೀಣ ಬದುಕಿನ ಸುದ್ದಿ ಪ್ರಕಟಿಸುತ್ತಿಲ್ಲ, ಹೆಚ್ಚು ಆದ್ಯತೆ ನೀಡುತ್ತಿಲ್ಲ ಎಂದು ಗೊಣಗುವ ಬದಲು ನೀವೇ ಲೇಖನಿ ಹಿಡಿದು ಪತ್ರಿಕೆಗಳಿಗೆ ಬರೆಯಿರಿ. ವಾಚಕರವಾಣಿಯ ಮೂಲಕ ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಿರಿ. ಜಿಲ್ಲಾ ವರದಿಗಾರರು ಅಥವಾ ಸಂಪಾದಕರಿಗೆ ಸುದ್ದಿಯ ಸುಳಿವು ನೀಡಿ. ಮಾಧ್ಯಮಗಳನ್ನು ಹೀಗಳೆಯುವ ಬದಲು ಅದನ್ನು ನಿಮ್ಮ ಅಭ್ಯುದಯಕ್ಕೆ ಬಳಸಿಕೊಳ್ಳಿ' ಎಂದು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಕಿವಿಮಾತು ಹೇಳಿದರು.

ಕೃಷಿ ಪತ್ರಿಕೋದ್ಯಮದಲ್ಲಿ ಛಾಯಾಚಿತ್ರ ಬಳಕೆಯ ಬಗ್ಗೆ ಸಾಗರದ ಪೂರ್ಣಪ್ರಜ್ಞ ಬೇಳೂರು ಹಲವು ಒಳನೋಟಗಳನ್ನು ನೀಡಿದರು. ಪತ್ರಿಕೋದ್ಯಮದ ಭಾಷೆ ಹಾಗೂ ಲೇಖನ ಬರವಣಿಗೆಯ ಬಗ್ಗೆ ಮತ್ತೊಬ್ಬ ಹಿರಿಯ ಪತ್ರಕರ್ತ ಆನಂದ ತಿಳಿಸಿಕೊಟ್ಟರು. ಕನ್ನಡ ಕೃಷಿ ಪತ್ರಿಕೋದ್ಯಮದ ಸ್ಥಿತಿಗತಿಯ ಬಗ್ಗೆ ದೃಶ್ಯ ರೂಪಕ ಪ್ರದರ್ಶಿಸಿದ ಮ್ಲಲಿಕಾರ್ಜುನ ಹೊಸಪಾಳ್ಯ ಮತ್ತು ನಾ. ಕಾರಂತ ಪೆರಾಜೆ ಶಿಬಿರಾರ್ಥಿಗಳ ಮನ ಗೆದ್ದರು. ಶಿಬಿರಾರ್ಥಿಗಳ ಹಲವು ಸಂಶಯಗಳನ್ನು ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು ಮತ್ತು ಶಿವರಾಮ ಪೈಲೂರು ಪರಿಹರಿಸಿದರು.

ಬರೆಹ - ಎನ್.ಎಂ.ನಟರಾಜ್
(ಚಿತ್ರ-ನೆರವು - ಘನಶ್ಯಾಮ್)

Tuesday, November 16, 2010

ಅಶೋಕ ಫೌಂಡೇಶನ್ ಪ್ರತಿನಿಧಿಗಳ ಭೇಟಿ


ಅಮೆರಿಕದ ಅಶೋಕ ಫೌಂಡೇಶನಿನ ಭಾರತೀಯ ವಿಭಾಗವಾದ ಅಶೋಕ ಇಂಡಿಯಾದ ಮನೋಜ್ ಚಂದ್ರನ್ ಮತ್ತು ಶ್ವೇತಾ ಡಾಗಾ ಇಂದು 'ಅಡಿಕೆ ಪತ್ರಿಕೆ' ಕಚೇರಿಗೆ ಭೇಟಿ ಕೊಟ್ಟಿದ್ದರು. 'ಅಶೋಕ ಫೆಲೋ' ಆಗಿರುವ 'ಶ್ರೀ' ಪಡ್ರೆಯವರ ಈಚೆಗಿನ ಗ್ರಾಮೀಣ ಪತ್ರಿಕೋದ್ಯಮ ಚಟುವಟಿಕೆಗಳ ಬಗ್ಗೆ ತಿಳಕೊಳ್ಳುವುದು ಮತ್ತು ಕೃಷಿ - ಗ್ರಾಮೀಣಾಭಿವೃದ್ಧಿಯ ಈಗಿನ ಸ್ಥಿತಿಗತಿ, ಸಮಸ್ಯೆ, ಪರಿಹಾರ ಸಾಧ್ಯತೆಗಳ ಬಗ್ಗೆ ಅಧ್ಯಯನ ಭೇಟಿಯ ಉದ್ದೇಶ.

ತಂಡ ಅಡಿಕೆ ಕೃಷಿಯಲ್ಲಿ ಗರಿಷ್ಠ ಯಾಂತ್ರೀಕರಣ ಸಾಧಿಸಿ ಒಬ್ಬ ಕಾರ್ಮಿಕನ ಸಹಾಯದಿಂದ ಎಂಟು ಎಕ್ರೆ ಅಡಿಕೆ ಕೃಷಿ ನಿಭಾಯಿಸುತ್ತಿರುವ ಬನಾರಿ ಈಶ್ವರ ಪ್ರಸಾದ್ ಅವರ ತೋಟಕ್ಕೆ ಹೋಗಿ ಅಲ್ಲಿನ ವ್ಯವಸ್ಥೆ ಗಮನಿಸಿ ತುಂಬಾ ಮುಚ್ಚುಗೆ ವ್ಯಕ್ತಪಡಿಸಿತು.

ಬನಾರಿ ಗೋಪಾಲಕೃಷ್ಣ ಭಟ್ ಅವರ ಜತೆ ಕೃಷಿಯ ಆಗುಹೋಗುಗಳ ಬಗ್ಗೆ ತಂಡ ವಿಚಾರ ವಿನಿಮಯ ನಡೆಸಿದ ಅಡಿಕೆ ಪತ್ರಿಕೆಯ ಪ್ರಕಾಶಕ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶೀನಿವಾಸ ಆಚಾರ್ ಮತ್ತು ಅಪ ಸಂಪಾದಕೀಯ ಬಳಗದ ಸದಸ್ಯ, ಕೃಷಿಕ ಮತ್ತು ಲೇಖಕ ಪಡಾರು ರಾಮಕೃಷ್ಣ ಶಾಸ್ತ್ರಿ ಕೃಷಿರಂಗದ ಪ್ರಸಕ್ತ ಸವಾಲು, ಅಪ ಮೌಲ್ಯವರ್ಧನೆ, ಹಲಸಿನ ಅಭಿವೃದ್ಧಿ ಮತ್ತು ಕೃಷಿ ಯಾಂತ್ರೀಕರಣಕ್ಕೆ ಪ್ರೇರಣೆ ಕೊಡುತ್ತಿರುವ ರೀತಿಯನ್ನು ತಂಡಕ್ಕೆ ತಿಳಿಸಿಕೊಟ್ಟರು.
(ಚಿತ್ರ: 'ಶ್ರೀ' ಪಡ್ರೆ)

Wednesday, November 10, 2010

ಸಿಲಿಕಾನ್ ಸಿಟಿ ನಡುವೆ ಬೆಳೆದುಣ್ಣುವ ಹಸಿರು ಉದ್ಯಮಿ



ಪದ್ಮನಾಭ ಕೃಷಿಕ. ಮೂಲತಃ ಸುಳ್ಯದವರು. ಕಾವ್ಯನಾಮ ಪದ್ಮಾ ಕೋಲ್ಚಾರ್. ಬೆಂಗಳೂರಿನ ಹುಳಿಮಾವಿನಲ್ಲಿ ಕೈತುಂಬಾ ಗಳಿಸಿ ಕೊಡುವ ಉದ್ಯಮ. ಇಷ್ಟಿದ್ದೂ ತನ್ನ ಊಟದ ಬಟ್ಟಲಿನ ಅನ್ನವನ್ನು ತಾನೇ ಬೆಳೆಯಬೇಕೆನ್ನುವ ತುಡಿತ.

ಬೆಂಗಳೂರಿನ ಸಿ.ಕೆ.ಪಾಳ್ಯದಲ್ಲಿ ಪದ್ಮನಾಭರ ಸುಪರ್ದಿಯ ಸುಮಾರು ಒಂದೆಕರೆ ಗದ್ದೆಯಿದೆ. ವರುಷಕ್ಕೆ ಮೂರು ಬೆಳೆ. ಏನಿಲ್ಲವೆಂದರೂ ಐವತ್ತು ಕ್ವಿಂಟಾಲ್ ಹತ್ತಿರ ಇಳುವರಿ. ಕಳೆದ ಒಂಭತ್ತು ವರುಷದಿಂದ ಅಂಗಡಿಯಿಂದ ಊಟಕ್ಕಾಗಿ ಅಕ್ಕಿ ತಂದದ್ದಿಲ್ಲ! ತನಗೆ ಬಳಸಿ ಮಿಕ್ಕಿದ್ದನ್ನು ಸ್ನೇಹಿತರಿಗೆ ಹಂಚುತ್ತಾರೆ. ಪೂರ್ತಿ
ರಾಸಾಯನಿಕ ರಹಿತವಾಗಿ ಬೆಳೆದ ಭತ್ತವಾದ್ದರಿಂದ ಕೇಳಿ ಪಡೆದ ಚಿಕ್ಕ ಗ್ರಾಹಕ ವಲಯವಿದೆ.

ಸಿ.ಕೆ.ಪಾಳ್ಯದ ಭತ್ತದ ಹೊಲದ ಸುತ್ತಮುತ್ತಲಿನ ಕೆಲವೇ ರೈತರು ಭತ್ತದ ಬೇಸಾಯ ಮಾಡುತ್ತಾರೆ. ಹತ್ತಿರದಲ್ಲಿ ವಿಶಾಲ ಕೆರೆಯಿದೆ. ಬೇಸಾಯಕ್ಕಿದು ಜಲನಿಧಿ. ಹೊಲ ನೋಡಿಕೊಳ್ಳಲು ಒಂದು ಕೃಷಿ ಕುಟುಂಬವಿದೆ. ಗೊಬ್ಬರ, ಬೀಜ ನೀಡಿದರೆ ಆಯಿತು. ಮಿಕ್ಕದ್ದೆಲ್ಲಾ ಅವರೇ ನೋಡಿಕೊಳ್ಳುತ್ತಾರೆ. ಇಳುವರಿಯಲ್ಲಿ ಅವರಿಗರ್ಧ, ಇವರಿಗರ್ಧ. ವಾರಕ್ಕೆ ಎರಡೋ, ಮೂರೋ ಸಲ ಹೊಲಕ್ಕೆ ಭೇಟಿ ನೀಡುತ್ತಾರೆ. ಸಮಯವಿದ್ದರೆ ಪ್ರತಿದಿನವೂ!

'ಇಲ್ಲಿ ಸುತ್ತ ಮುತ್ತ ಸಾಕಷ್ಟು ಹಡಿಲು ಭೂಮಿ ಇದೆ. ಕೃಷಿ ಮಾಡುವಷ್ಟು ಫಲವತ್ತದೆ ಇದೆ. ಕೃಷಿ ಮಾಡಲು ಮನಸ್ಸು ಬೇಕಲ್ವಾ' ಎನ್ನುತ್ತಾರೆ. ಭತ್ತದ ಮೂರು ಬೆಳೆಯಲ್ಲಿ ಒಂದು ಬೆಳೆಯನ್ನು ದ್ವಿದಳ ಧಾನ್ಯಕ್ಕೆ ಪರಿವರ್ತಿಸುವ ಯೋಚನೆಯಲ್ಲಿದ್ದಾರೆ.
ಕಾರ್ಪೋರೇಶನ್ ತ್ಯಾಜ್ಯ ತಂದು ಕಾಂಪೋಸ್ಟ್ ಮಾಡಿ ಟೊಮೆಟೋ, ಬಾಳೆ ಬೆಳೆದಿದ್ದರು. 'ನಗರದ ತ್ಯಾಜ್ಯ ಕಾಂಪೋಸ್ಟ್ ಮಾಡಿ ರೈತರಿಗೆ ನೀಡಿ. ಅವರು ತಾಜಾ ತರಕಾರಿ ಬೆಳೆದು ಕೊಡೋದಿಲ್ವೇ. ನಮ್ಮ ಸರಕಾರಿ ಯಂತ್ರಕ್ಕೆ ಇದೆಲ್ಲಾ ಹೇಗೆ ತಿಳೀಬೇಕು' ವಿಷಾದಿಸುತ್ತಾರೆ ಪದ್ಮನಾಭ.

ರಾಜಧಾನಿಯಲ್ಲಿದ್ದು ದೂರದ ಸುಳ್ಯದ ತನ್ನ ಇಪ್ಪತ್ತನಾಲ್ಕು ಎಕರೆ ಕೃಷಿ ಭೂಮಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಹುಳಿಮಾವಿನ ಜನನಿಬಿಡ ಪ್ರದೇಶದಲ್ಲಿ ಇವರದು ಹಸಿರು ಮನೆ. ಮನೆ ಸುತ್ತ ಗಿಡ ಬಳ್ಳಿಗಳು. ಔಷಧೀಯ ಸಸ್ಯಗಳು. ನೂರಕ್ಕೂ ಮಿಕ್ಕಿ ಗುಬ್ಬಚ್ಚಿ ಸಂಸಾರ. ತನ್ನ ವಾಸದ ಮನೆಯ ಕೆಳ ಅಂತಸ್ತನ್ನು ಗುಬ್ಬಚ್ಚಿಗಳಿಗೆ ಮೀಸಲಿಟ್ಟಿದ್ದಾರೆ.
ಉತ್ತಮ ಕೃಷಿ ಲೈಬ್ರರಿಯಿದೆ. ಮಾಹಿತಿಯನ್ನು ರೈತರಿಗೆ ಹಂಚುವುದೆಂದರೆ ಪದ್ಮನಾಭರಿಗೆ ಪ್ರೀತಿ. ಅವರ ಕೈಯಲ್ಲಿರುವ ಬ್ಯಾಗ್ ಮಾಹಿತಿಯ ಕಣಜ. ಹೊಸ ಹೊಸ ಕೃಷಿ ಮಾಹಿತಿ ಸಿಕ್ಕರೆ ಸಾಕು, ಜೆರಾಕ್ಸ್ ಮಾಡಿಟ್ಟುಕೊಂಡು ಹಂಚಿಬಿಡುತ್ತಾರೆ. ರಾಜಧಾನಿಯಲ್ಲಿ ಜರುಗುವ ಎಲ್ಲಾ ಕೃಷಿ ಸಮಾರಂಭಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
'ನೋಡ್ರಿ, ನನ್ನ ಮನೆಯ ಗುಬ್ಬಚ್ಚಿಗಳಿಗೂ ನನ್ನ ಹೊಲದ ಅಕ್ಕಿಯೇ ಆಗಬೇಕು. ಅವಕ್ಕೆ ಜಾಗ ಫ್ರಿ, ಫುಡ್ ಫ್ರಿ, ವಾಸಿಸಲು ಬಾಡಿಗೆಯಿಲ್ಲ' ಎನ್ನಲು ಅವರಿಗೆ ಖುಷಿ. ರಾಸಾಯನಿಕ ಸಂಪರ್ಕದಿಂದ ದೂರ. ಪ್ರವಾಸ ಹೋದಾಗ, ನೆಂಟರ ಮನೆಗೆ ಹೋದಾಗ ಹೊಸ ಗಿಡಗಳನ್ನು ತಂದು ಮನೆಯಾವರಣದಲ್ಲಿ ನೆಟ್ಟಲ್ಲಿಗೆ ಸಮಾಧಾನ-ಖುಷಿ. ಗಂಡನ ಆಸಕ್ತಿಗೆ ಪತ್ನಿ ವೀಣಾ ಸ್ಪಂದನ.

ಇವರ ಕೃಷಿ ಮತ್ತು ಕೃಷಿ ತುಡಿತದಲ್ಲಿ ನೋಡುವಂತಹದು, ಕೇಳುವಂತಹುದು ಏನಿಲ್ಲದಿರಬಹುದು. ಆದರೆ ತಾನು ಬೆಳೆದು ಉಣ್ಣುವ ಪರಿಕಲ್ಪನೆ. ಪರಿಸ್ನೇಹಿ ಜೀವನ. ಇಂದು ಭತ್ತದ ಗದ್ದೆಗಳಿರುವಲ್ಲಿ ಅಪಾರ್ಟ್ ಮೆಂಟ್ಗಳು ಎದ್ದಿವೆ, ಒತ್ತುವರಿ ಆಗಿದೆ, ಮಾರ್ಗ ಅಗಲೀಕರಣ ನಡೆಯತ್ತಿದೆ. ಊಟದ ಬಟ್ಟಲು ಬರಿದಾಗುವ ದಿವಸಗಳಲ್ಲಿ ಪದ್ಮನಾಭರು ನಗರದ ಮಧ್ಯೆ ಇದ್ದುಕೊಂಡು ಭತ್ತದ ಬೇಸಾಯ ಮಾಡುತ್ತಿರುವುದು ನಿಜಕ್ಕೂ ಬೆನ್ನು ತಟ್ಟಬೇಕಾದ ವಿಚಾರ.

(ಪದ್ಮನಾಭ : 080-26581454)

Saturday, November 6, 2010

ರಾಚಿ ಬರುವ 'ಕಂಗ್ರಾಟ್ಸ್'ಗಳು!

ಸುಳ್ಯ ಸನಿಹದ ಕಲ್ಲುಗುಂಡಿಯಲ್ಲಿ ನಿನ್ನೆ (ನ.6) ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ನೇತೃತ್ವದಲ್ಲಿ 'ವಿಂಶತಿ ಯಕ್ಷೊತ್ಸವ' ಜರುಗಿತು. ಯಕ್ಷಗಾನ ಕಲಾವಿದರಿಗೆ, ವಿದ್ವಾಂಸರಿಗೆ, ವೈದಿಕರಿಗೆ ಪ್ರಶಸ್ತಿ ಪ್ರದಾನ. ಸಂಮಾನ, ಗೌರವಾರ್ಪಣೆ. ವೇದಿಕೆಯಲ್ಲಿ ಪೂಜನೀಯ ಯತಿಗಳ ದಿವ್ಯ ಸಾನ್ನಿಧ್ಯ. ಗಣ್ಯರ ಉಪಸ್ಥಿತಿ. ಇದಕ್ಕೆ ಸಾಕ್ಷಿಯಾದ 'ಕಿಕ್ಕಿರಿದ' ಸಭಾಸದರು.ಬಹಳ ಅರ್ಥಪೂರ್ಣವಾಗಿ, ಅಷ್ಟೇ ಗೌರವಯುತವಾಗಿ ನಡೆದ ಸಮಾರಂಭ.

ಪ್ರಶಸ್ತಿ ಪುರಸ್ಕೃತರಿಗೆ ಪ್ರತ್ಯಪ್ರತ್ಯೇಕವಾದ ಆದರಾತಿಥ್ಯ. ಗೌರವ ಸಮರ್ಪಣೆ. ಶಾಲು, ಹಾರದಿಂದ ತೊಡಗಿ, 'ತುಂಬು ಧನ'ದೊಂದಿಗೆ ಪ್ರಶಸ್ತಿ. ಕಲಾವಿದರಲ್ಲಿ ಸಾರ್ಥಕ ಭಾವ. ವೈದಿಕರಲ್ಲಿ ಕೃತಾರ್ಥ ಭಾವ. ವಿದ್ವಾಂಸರಿಗೆ ಧನ್ಯತಾಭಾವ. ಸಾವಿರಗಟ್ಟಲೆ ಅಭಿಮಾನಿಗಳ ಮುಂದೆ ಪ್ರಶಸ್ತಿ ಸ್ವೀಕರಿಸಿದಾಗಿನ ಕ್ಷಣವನ್ನು ಡಾ.ಎಂ.ಪ್ರಭಾಕರ ಜೋಷಿಯವರು ಕಟ್ಟಿಕೊಟ್ಟದ್ದು ಹೀಗೆ - ಇದೊಂದು ಯಕ್ಷಗಾನಕ್ಕೆ ಹಬ್ಬ. ಈ ಕ್ಷಣವನ್ನು ಮಾತಿನಲ್ಲಿ ಹೇಳುವುದು ಕಷ್ಟ. ಅದು ಅನುಭವಕ್ಕೆ ನಿಲುಕುವಂತಹುದು. ನಿಜಾರ್ಥದ ಪುರಸ್ಕಾರಗಳಿವು'.ಯಕ್ಷಗಾನ ಕಂಡ 'ಮಹೋನ್ನತ' ಸಮಾರಂಭ.

ಇಲ್ಲಿ ಕಲಾವಿದರ ಬಗ್ಗೆ ಆದರವಿದೆ, ಪ್ರೀತಿಯಿದೆ. ಕಲೆಯ ಬಗ್ಗೆ ಆರಾಧನೆಯಿದೆ. ಸಂಘಟಕರು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಕಲಾಪಗಳು ನಡೆಯುತ್ತಲೇ ಸಾಗುತ್ತವೆ. ಈ ಯಕ್ಷಗಾನೋತ್ಸವದಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸುತ್ತಾರೆ. ಸಂಘಟಕರ ಸದ್ದುದ್ದೇಶಕ್ಕೆ 'ಮಾನ' ತಂದುಕೊಟ್ಟವರು ಕಲಾಭಿಮಾನಿಗಳು. ಬೆಳಿಗ್ಗೆ ಹತ್ತಕ್ಕೆ ಏನಿಲ್ಲವೆಂದರೂ ಐದು ಸಾವಿರ ಮೀರಿದ ಪ್ರೇಕ್ಷಕರು ವಿಂಶತಿ ಯಕ್ಷೊತ್ಸವಕ್ಕೆ ಸಾಕ್ಷಿಯಾದರು.

ವೇದಿಕೆಯ ನೇಪತ್ಯದಲ್ಲಿ ಯಕ್ಷಗಾನ ವೇಷಗಳ ಭಾವಚಿತ್ರಗಳ ಪ್ರದರ್ಶನ, ಭಾಗವಹಿಸಿದ ಎಲ್ಲರಿಗೂ ಅನ್ನ ದಾಸೋಹ, ಆಸನ ವ್ಯವಸ್ಥೆ.. ಹೀಗೆ ಒಂದೊಂದು ವಿಭಾಗದಲ್ಲಿ ಅಚ್ಚುಕಟ್ಟು. ಇದೊಂದು ಕಲೋತ್ಸವ. ಸಂಘಟಕರ ಸಾಹಸಕ್ಕೆ ಅಭಿನಂದನೆ. ಮುಂದೆಯೂ ಯಕ್ಷಗಾನಕ್ಕೆ ಇಂತಹ ಮಹೋತ್ಸವ ಭಾಗ್ಯ ಸಿಗಲಿ.

ಸ್ವಲ್ಪ ವಿಷಯಾಂತರ ಮಾಡೋಣ. ಕಳೆದ ವಾರ ಮೂಡಿಗೆರೆ ಸನಿಹದ ದೇವವೃಂದ ಎಂಬ 'ಮೊಬೈಲ್ ನೆಟ್ವರ್ಕ್' ಸಿಕ್ಕದ ಹಳ್ಳಿಯಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಕನ್ನಾಡಿನ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ನಗರದ ಮಧ್ಯದಲ್ಲಿ ನಿಂತು ಹಳ್ಳಿಯ ಕುರಿತು ಮಾತನಾಡುವ, ವಿಶ್ಲೇಷಿಸುವ ಈ ದಿನಗಳಲ್ಲಿ; ಹಳ್ಳಿಯಲ್ಲೇ ಒಂದು ವಾರ ನಿಂತು ಹಳ್ಳಿಗಳ ಬಗ್ಗೆ ಬರೆಯಲು ಲೇಖನಿ ಕೊಟ್ಟವರು ಧಾರವಾಡದ ಕೃಷಿ ಮಾಧ್ಯಮ ಕೇಂದ್ರ.

ಈ ಮಧ್ಯೆ ಮರವನ್ನು ಏರಿಯೋ, ಗುಡ್ಡವನ್ನು ಹತ್ತಿಯೋ ನೆಟ್ವರ್ಕ್ ಸಾಹಸ ಮಾಡಿ ಮನೆಯನ್ನು ಸಂಪರ್ಕಿಸುತ್ತಿದ್ದೆ. ಕೊನೆಯ ಎರಡು ದಿನಗಳಲ್ಲಿ ಅದಕ್ಕೂ ಕುತ್ತು! ಸರಿ, ಕಾರ್ಯಾಗಾರ ಮುಗಿಸಿ ಇನ್ನೇನು ನೆಟ್ವರ್ಕ್ ವ್ಯಾಪ್ತಿಯೊಳಗೆ ಬಂದದ್ದೇ ತಡ, ಅಭಿನಂದನೆಗಳ ಎಸ್.ಎಂ.ಎಸ್.ಗಳು! ಆಶ್ಚರ್ಯವಾಯಿತು. ಆಮೇಲೆ ತಿಳಿಯಿತು, ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿವು 'ಗ್ರಾಮೀಣ ಪತ್ರಿಕೋದ್ಯಮ' ವಿಭಾಗದಲ್ಲಿ ನನಗೆ ಪ್ರಶಸ್ತಿ ಘೋಷಿಸಿತ್ತು. ಅನಿರೀಕ್ಷಿತವಾಗಿ ಬಂದ ಪುರಸ್ಕಾರಕ್ಕೆ ಆಶ್ಚರ್ಯವೂ, ಸಂತೋಷವೂ ಆಯಿತು.

ಇತ್ತ ಕನ್ನಾಡಿನ ಘನ ಸರಕಾರವು ರಾಜ್ಯೋತ್ಸವ ಪ್ರಶಸಿಯ ಅಂತಿಮ ಎರಡು ಪಟ್ಟಿಯನ್ನು ಸಿದ್ಧಪಡಿಸುವ ಹೊತ್ತಿಗೆ ರಾಡಿಯಲ್ಲಿ ಮಿಂದೆದ್ದಿತ್ತು! ಮಾಧ್ಯಮಗಳಲ್ಲಿ, ವಾಹಿನಿಗಳಲ್ಲಿ 'ಪ್ರಶಸ್ತಿ ಮಾರಾಟ, ಇದಕ್ಕಾಗಿ ಹುಟ್ಟಿಕೊಂಡ ಮಧ್ಯವರ್ತಿ'ಗಳ ಕರಾಮತ್ತುಗಳ ಬಗ್ಗೆ ಅವಿರತ ಸ್ಟೋರಿಗಳು ಬಿತ್ತರವಾಗುತ್ತಲೇ ಇದ್ದುವು. ಓರ್ವ ಪ್ರಶಸ್ತಿ ಪಡೆಯಲು ಅರ್ಹತೆಯೊಂದಿದ್ದರೆ ಸಾಲದು, ವಶೀಲಿಯೂ ಬೇಕಾಗುತ್ತದೆ ಎಂಬುದನ್ನು ಹಣೆಗೆ ಅಂಟಿಸಿಕೊಳ್ಳುವಷ್ಟು ಬೀದಿರಂಪವಾಗಿತ್ತು.

ಜಿಲ್ಲಾ ಪುರಸ್ಕಾರವು ಬಂದಾಗ ಎಸ್.ಎಂ.ಎಸ್.ಗಳು, ಕೈಕುಲುಕಾಟ, ಪತ್ರ ಮೂಲಕ.. ಹೀಗೆ ವಿವಿಧ ಸ್ತರದಲ್ಲಿ 'ಕಂಗ್ರಾಟ್ಸ್'ಗಳು ವಿನಿಮಯವಾಗುವುದು ಸಹಜ. ಇದರಲ್ಲಿ ಬಹುಪಾಲು 'ರಸಭಾವ ರಹಿತ' ಶುಷ್ಕ ಕಂಗ್ರಾಟ್ಸ್ಗಳೇ ಹೆಚ್ಚು! ಈ ವಿಚಾರವು ವಿನಿಮಯ ಮಾಡಿಕೊಳ್ಳುವವನಿಗೂ ಗೊತ್ತು, ಪಡೆಯುವವನಿಗೂ ಗೊತ್ತಿರುವುದು ಇದರ ಗಮ್ಮತ್ತು!

ನಿನ್ನೆ ಕಲ್ಲುಗುಂಡಿಯ ಯಕ್ಷೊತ್ಸವಕ್ಕೆ ಹೋಗಿದ್ದಾಗಲೂ ಈ 'ಕಂಗ್ರಾಟ್'ಗಳು ರಾಚಿಕೊಂಡು ಬಂದುವು. 'ಖುಷಿಯಾಯಿತು ಮಾರಾಯ್ರೆ. ನೀವು ಇದಕ್ಕೆ ಯಾರನ್ನು ಹಿಡಿದಿರಿ' ಒಬ್ಬರ ಪ್ರಶ್ನೆ. 'ಬಹುಶಃ ನೀವು ವಿ.ಎಸ್.ಆಚಾರ್ಯರರ ಇನ್ಫ್ಲೆನ್ಸ್ ಮಾಡಿದಿರಾ?', 'ನೀವು ಎಷ್ಟು ಕೊಟ್ರಿ?', 'ಮಾರಾಯ್ರೆ, ನಾನು ಎಷ್ಟು ವರ್ಷದಿಂದ ಟ್ರೈ ಮಾಡ್ತೇನೆ ಗೊತ್ತಿತ್ತಾ'.. ಹೀಗೆ ವಿವಿಧ 'ರಸ'ಪ್ರಶ್ನೆಗಳು! ಒಬ್ಬ ಕಲಾವಿದರಂತೂ ಹುಳಿ ಮುಖದಲ್ಲಿ ಬಲವಂತದ ನಗೆಯನ್ನು ಅರಳಿಸುತ್ತಾ, 'ಓ.. ಕಂಗ್ರಾಟ್ಸ್.. ನಿಮಗೆ ಆಗಾಗ ಬರ್ತಾ ಇರ್ತದಲ್ಲಾ. ತೊಂದರೆಯಿಲ್ಲ ಮಾರಾಯ್ರೆ. ನೀವು ಆದೀತು'! ಅನ್ನಬೇಕೆ. ಅವರ ಮನಸ್ಸಿನ ಕೊಳಕಿಗೆ ನನ್ನ ಪುರಸ್ಕಾರ ಬಲಿಯಾಗಿಬಿಟ್ಟಿತು! ತಿಂಗಳ ಹಿಂದೆ ಲೇಖನವೊಂದಕ್ಕೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುವುದು ಪತ್ರಿಕೆಯಲ್ಲಿ ವರದಿಯಾಗಿತ್ತು. ಬಹುಶಃ ಅದನ್ನು ಉಲ್ಲೇಖಿಸಿ ಈ ಕಲಾವಿದ ಮಹಾಶಯರು ಹೇಳಿರಬೇಕು.

ನಾಡಿನ ರಾಜಕೀಯಗಳು ಸೃಷ್ಟಿಸಿದ 'ಕೊಳಕು ಸಾಮಾಜಿಕ ವ್ಯವಸ್ಥೆ'ಯಿಂದಾಗಿ ಪ್ರಶಸ್ತಿಗಳೂ ಮೌಲ್ಯ ಕಳಿದುಕೊಳ್ಳುತ್ತಿವೆ. ಜನರು ಸಂಶಯದಿಂದ ನೋಡುತ್ತಿದ್ದಾರೆ. ಯಾವುದೇ ವಶೀಲಿ ಇಲ್ಲದೆಯೂ ನಿರಾಯಾಸವಾಗಿ ಪುರಸ್ಕಾರವನ್ನು ಸ್ವೀಕರಿಸೋಣವೆಂದರೆ ಇಂತಹ 'ಸಂಶಯ' ಭೂತ. ಯಾವಾಗ ಸಾಮಾಜಿಕವಾಗಿ ಪ್ರಶಸ್ತಿಗಳ ಬಗ್ಗೆ ಜನರ ಭಾವನೆ ಹೀಗಿರುತ್ತೋ, ಆಗ ಕೊಡಲ್ಪಡುವ ಎಲ್ಲಾ ಸರಕಾರಿ ಪ್ರಶಸ್ತಿಗಳ ಹಿಂದೆ 'ಗುಮಾನಿ ಬೀಜ' ಇದ್ದೇ ಇರುತ್ತದೆ.

ಈ ಹಿನ್ನೆಲೆಯಲ್ಲಿ ಲೇಖನಾರಂಭದಲ್ಲಿ ಉಲ್ಲೇಖಿಸಿದ ಸಂಪಾಜೆಯ ಯಕ್ಷೊತ್ಸವದ ಪುರಸ್ಕಾರ ಇದೆಯಲ್ಲಾ, ಅದು ನಿಜಕ್ಕೂ ರಾಜ್ಯವಲ್ಲ, ರಾಷ್ಟ್ರ ಪುರಸ್ಕಾರಕ್ಕಿಂತಲೂ ಹಿರಿದು.

Wednesday, November 3, 2010

ದೇವವೃಂದದಲ್ಲಿ ಕಾಮ್ ದಶಮಾನ ವೈಭವ



`ಕೃಷಿಕನ ಬದುಕಿನಲ್ಲಿ ಸವಾಲು ನಿತ್ಯ ಎದುರಾಗುತ್ತಿದೆ. ಈ ಸವಾಲುಗಳ ಮಧ್ಯೆ ಪರ್ಯಾಯ ಕೃಷಿಯ ಚಿಂತನೆಗಳು, ಯಾಂತ್ರೀಕರಣದತ್ತ ನೋಟ, ಸಮಸ್ಯೆಗಳನ್ನು ಹಗರು ಮಾಡಿಕೊಳ್ಳುವ ಉಪಾಧಿಗಳತ್ತ ನಿತ್ಯ ಹುಡುಕಾಟ ನಡೆಯುತ್ತಲೇ ಇದೆ. ಆದರೆ ಸಮಸ್ಯೆಯಿಂದ ಪಾರಾಗಬಲ್ಲ ಎಲ್ಲಾ ದಾರಿಗಳು ಮುಚ್ಚಿರುವುದು, ನಮ್ಮ ಆಡಳಿತದ ತಪ್ಪು ನೀತಿಗಳಿಂದಾಗಿ. ಕೃಷಿಕನ ಸಮಸ್ಯೆಯನ್ನು ಎತ್ತಿ ಹಿಡಿದು ಪರಿಹಾರ ಕಂಡುಕೊಳ್ಳುವಲ್ಲಿ ಇವುಗಳು ಸೋತಿವೆ. ಯಾವಾಗ ಸರಕಾರಕ್ಕೆ ಕೃಷಿ ಉಳಿಯಬೆಕು ಎಂಬ ಕಾಳಜಿ ದೂರವಾಯಿತೋ, ಆಗ ಮಾಧ್ಯಮ ಎದುರು ನಿಲ್ಲಲೇ ಬೇಕು. ಮಾಧ್ಯಮಗಳಿಗೂ ಇತಿಮಿತಿಗಳಿವೆ. ಹಾಗೆಂತ ಕೈಚೆಲ್ಲಿ ಕೂಡ್ರುವ ಕಾಲವಲ್ಲ' ಎಂದು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಹೇಳಿದರು.
ಅವರು ಮೂಡಿಗೆರೆ ಸನಿಹದ ದೇವವೃಂದದಲ್ಲಿ ಕೃಷಿ ಮಾಧ್ಯಮ ಕೇಂದ್ರದ ದಶಮಾನ ಸಮಾರಂಭದಲ್ಲಿ ಮಾಧ್ಯಮಗಳ ಪಾತ್ರವನ್ನು ಬಿಚ್ಚಿಟ್ಟರು. `ರೈತನ ಬಗ್ಗೆ ಮಾಧ್ಯಮದಲ್ಲಿ ಬೆಳಕು ಕಾಣುವ ಯಶೋಗಾಥೆಗಳು ಅವನ ಬದುಕನ್ನು ಎತ್ತರಕ್ಕೆ ಏರಿಸಲು ಸಹಕಾರಿ' ಎಂದ ಅಥಣಿಯ ಎಸ್.ಎಂ.ಪಾಟೀಲ್, 'ಪ್ರಕೃತ ಕಾಲಮಾನದ ಕೃಷಿಕ, ಕೃಷಿರಂಗವನ್ನು ಗಮನಿಸಿದಾಗ ಭವಿಷ್ಯ ನಿರಾಶದಾಯಕವಾಗಿ ಕಾಣುತ್ತಿದೆ. ಈ ದಿಸೆಯಲ್ಲಿ ಕೃಷಿಕನ ಆಸರೆಗೆ ಮಾಧ್ಯಮಗಳು ಬರಬೇಕು' ಎಂಬ ಆಶಯ ವ್ಯಕ್ತಪಡಿಸಿದರು ಯಡೇಹಳ್ಳಿಯ ಹಿರಿಯ ಕೃಷಿಕ ವೈ.ಸಿ.ರುದ್ರಪ್ಪ. ಊರಿನ ಹಿರಿಯರಾದ ಡಿ.ಬಿ.ಸುಬ್ಬೇಗೌಡರು ಸಭಾಧ್ಯಕ್ಷತೆ ವಹಿಸಿದ್ದರು. 'ರೈತನು ದೇಶದ ಬೆನ್ನೆಲುಬು ಎನ್ನುವ ಸರಕಾರದಿಂದ ರೈತರ ಏಳಿಗೆ ಸಾಧ್ಯವಿಲ್ಲ. ಬೆಳೆದರೆ ಬೆಲೆಯಿಲ್ಲ, ಬೆಲೆಯಿದ್ದರೆ ಬೆಳೆಯಿಲ್ಲ. ವ್ಯತಿರಿಕ್ತವಾದ ಹವಾಮಾನಗಳು ಕೃಷಿಕನ ಬದುಕನ್ನು ಹೈರಾಣ ಮಾಡುತ್ತಿವೆ.' ಎಂದರು.
ಕಾಮ್ ದಶಮಾನೋತ್ಸವ ಪುರಸ್ಕಾರ : ಹೆಚ್.ಜೆ.ಪದ್ಮರಾಜ್, ಎಡ್ವರ್ಡ ರೆಬೆಲ್ಲೋ, ಕೆ.ನಾರಾಯಣ ಸ್ವಾಮಿ, ಮಹೇಶ್ ದೇಶಪಾಂಡೆ, ರೂಪೇಶ್ ಕಾಮತ್ - ಇವರಿಗೆ ದಶಮಾನೋತ್ಸವ ಪುರಸ್ಕಾರ ನೀಡಿ ಸಂಮಾನಿಸಲಾಯಿತು.
ಪುಸ್ತಕ ಬಿಡುಗಡೆ: ವೇದಿಕೆಯಲ್ಲಿ ಕೆಸುವಿನ ಎಲೆಯ ಎರಡು ಚಿಕ್ಕ ರಚನೆಗಳಿದ್ದುವು. ಎಲ್ಲರಲ್ಲೂ ಕುತೂಹಲ. ವೇದಿಕೆಯ ಗಣ್ಯರು ಅದನ್ನು ಬಿಡಿಸಿ, ಅದರೊಳಗೆ ಅವಿತಿದ್ದ ಹೊಸ ಪುಸ್ತಕಗಳನ್ನು ತೆಗೆದು ಅನಾವರಣಗೊಳಿಸಿದರು. * ಅನುಸೂಯ ಶರ್ಮಾ ಇವರು ಬರೆದ 'ಹಿತ್ತಿಲು-ಕೈತೋಟಕ್ಕೊಂದು ಕೈಪಿಡಿ' ಮತ್ತು ಮಲ್ಲಿಕಾರ್ಜುನ ಹೊಸಪಾಳ್ಯ ಅವರ 'ಚೌಳು ನೆಲದ ಬಂಗಾರ: ಮರೆಯಾಗುತ್ತಿರುವ ಬರದ ನಾಡಿನ ಭತ್ತವೈವಿಧ್ಯ' - ಬಿಡುಗಡೆಗೊಂಡ ಕೃತಿಗಳು.
ಸಿರಿಧಾನ್ಯ ಬಹುಮಾನ: ಸಿರಿಧಾನ್ಯಗಳನ್ನು ಕುರಿತು ಕಾಮ್ ಬಳಗದವರು ಬರೆದಿರುವ ಉತ್ತಮ ಕನ್ನಡ ಲೇಖನಗಳಿಗೆ 'ಮಿಲೆಟ್ ನೆಟ್ ವರ್ಕ್ ಆಫ್ ಇಂಡಿಯಾ' (ಮಿನಿ) ನೀಡುತ್ತಿರುವ ಮೂರು ಬಹುಮಾನಗಳ ವಿತರಣೆ. ನಾ. ಕಾರಂತ ಪೆರಾಜೆ (ಪ್ರಥಮ ಪುರಸ್ಕಾರ), ಗಣಪತಿ ಭಟ್ ಹಾರೋಹಳ್ಳಿ (ದ್ವಿತೀಯ) ಮತ್ತು ರವಿ ವಿಶ್ವನಾಥಪುರ (ತೃತೀಯ ಪುರಸ್ಕಾರ)`
ಕಾಮ್ ಫೆಲೋ'ಗಳ ಕೆಲವು ಅನಿಸಿಕೆ (2009-10) :
ರಮಾ ಅರಕಲಗೂಡು - ಕಾಮ್ ತರಬೇತಿ ಪೂರೈಸಲೇಬೇಕೆಂಬ ಹಠವಿತ್ತು. ಗ್ರಾಮೀಣ ಮಹಿಳೆಯರ ಸಾಧನೆ ಕುರಿತು ಹೆಚ್ಚು ಬೆಳಕು ಹಾಕಲು ಕಾಮ್ ನೆರವಾಯಿತು. ಬರೆಹಗಳ ಕುರಿತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದೆ. ನನ್ನೊಳಗಿದ್ದ ಬರೆಹದ ತುಡಿತಕ್ಕೆ ಕಾಮ್ ರೂಪ ಕೊಟ್ಟಿತು.
ಕೆ.ಶಶಿಧರ ಹೆಮ್ಮಣ್ಣ - ನನ್ನೊಳಗೆ ಹುದುಗಿದ್ದ 'ಪತ್ರಕರ್ತನ ವಿಕಾರ'ಗಳನ್ನು ಕಾಮ್ ಹೊಸಕಿ ಹಾಕಿತು.
ಕೆ.ವಿ.ಸರಸ್ವತಿ - ಕೃಷಿ ಮತ್ತು ಬರವಣಿಗೆ ನನಗೆ ಹೊಸತು, ಆಕಸ್ಮಿಕ. ಸರಕಾರಿ ವೃತ್ತಿಯಲ್ಲಿದ್ದ ನಾನು ನಿವೃತ್ತಳಾದ ಬಳಿಕ ಕೃಷಿಕಳಾದೆ. ಕೃಷಿ ಲೇಖನಗಳನ್ನು ಬರೆಯಬೇಕೆಂಬ ಆಸೆಯಿತ್ತು. ಕೃ.ಮಾ.ಕೇಂದ್ರವು ನನ್ನ ಆಸೆಯನ್ನು ಈಡೇರಿಸಿದೆ.
ಸುರೇಶ ನಿ.ಧಾರವಾಡಕರ - ಮಗುವೊಂದನ್ನು ನೋಡಿಕೊಳ್ಳುವಂತೆ ನೋಡಿಕೊಂಡರು. ಅಂಬೆಗಾಲಿಕ್ಕುವಂತೆ, ನಡೆಯುವಂತೆ ಕಲಿಸಿತು. ಲೇಖನಿ ಕೊಟ್ಟು ಬರೆಸಿತು. ಒಂದು ವರುಷದ ತರಬೇತಿಯಲ್ಲಿ ನಾನಿಷ್ಟು ಪರಿವರ್ತನೆಯಾಗುತ್ತೇನೆಂದು ಭಾವಿಸಿರಲಿಲ್ಲ. ನಾನು ಮತ್ತು ನನ್ನ ಕುಟುಂಬದ ಎಲ್ಲಾ ಸದಸ್ಯರು ಕೃ.ಮಾ.ಕೇಂದ್ರಕ್ಕೆ ಆಭಾರಿ.
ಸರವು ಸದಾನಂದ - ಮೊದಲಿದ್ದ ಬರಹಗಾರ ಈಗ ಜಾಗೃತನಾಗಿದ್ದಾನೆ. ತಪ್ಪನ್ನು ತಿದ್ದಿಕೊಂಡಿದ್ದೇನೆ.
ಸುಬ್ರಾಯ ಮ. ಹೆಗಡೆ - ಪತ್ರಿಕೋದ್ಯಮದ ಅ,ಆ,ಇ.ಈ.. ಕಲಿತುಕೊಂಡೆ.
ಮಧುಮತಿ ದೇ.ಪಾಟೀಲ - ಪತ್ರಕರ್ತೆಯಾಗಬೇಕೆಂಬ ಹಂಬಲವಿತ್ತು. ವಾಟರ್ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಯಶೋಗಾಥೆಗಳನ್ನು ಬರೆಯಬೇಕೆಂಬ ನನ್ನ ಆಸೆ ಈಗ ಈಡೇರಿದೆ.
'ಅಡಿಕೆ ಪತ್ರಿಕೆ' ಬಹುಮಾನ
ಈ ಸಂದರ್ಭದಲ್ಲಿ ಜಿ.ಗಣಪತಿ ಭಟ್, ಲೀಲಾ ನಾ. ಕೌಜಗೇರಿ, ಶಶಿಧರ ಸಕ್ಕರೆಮಕ್ಕಿ, ಪ್ರಕಾಶ್ ಭಟ್ ಕರ್ಕಿ, ಕೆ.ಎಸ್.ಪೂರ್ಣಿಮಾ, ರವಿಶಂಕರ ದೊಡ್ಡಮಾಣಿ - ಇವರಿಗೆ 'ಅಡಿಕೆ ಪತ್ರಿಕೆ' ಬಹುಮಾನ ನೀಡಲಾಯಿತು. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಶ್ರೀ ಪಡ್ರೆ ಬಹುಮಾನ ವಿತರಿಸಿದರು.
'ಕೃಷಿಕ' ಪತ್ರಿಕೆಯ ಪ್ರಕಾಶಕ ಎಂ.ಜೆ.ದಿನೇಶ್ ಅವರಿಂದ ಸ್ವಾಗತ. ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು ಅವರಿದ ಪ್ರಾಸ್ತಾವಿಕ ಮಾತು. ಜಿ.ಶಿವಣ್ಣ ವಂದನಾರ್ಪಣೆ. ಕೆ.ಎಸ್.ಪೂರ್ಣಿಮಾ - ನಿರ್ವಹಣೆ.

ಮನದ ಮಾತು:
ಅಡ್ಡೂರು ಕೃಷ್ಣ ರಾವ್ - ಮಾಹಿತಿಗಳು ನನ್ನೊಳಗೆ ಬೆಚ್ಚಗೆ ಕುಳಿತಿರಬಾರದು. ಅದು ಇನ್ನೊಬ್ಬರಿಗೆ ಹಂಚಲ್ಪಡಬೇಕು ಎಂಬ ಉದ್ದೇಶದಿಂದ ಕಾಮ್ ಹಾದಿಯಲ್ಲಿ ಸಾಗಿ ಬಂದಿದ್ದೇನೆ. ನಾನು ನಂಬಿದ್ದನ್ನೇ ನಂಬಿದವರು ಇಲ್ಲಿ ಸಿಗ್ತಾರೆ ಎಂಬ ಉದ್ದೇಶದಿಂದ ಬಂದಿದ್ದೇನೆ. ನನಗೆ ವಯಸ್ಸಾಗ್ತಾ ಇದೆ. ನನಗಿಂತ ಕಿರಿಯರ ಉತ್ಸಾಹ ನೋಡಿ, ನನಗೂ ಉತ್ಸಾಹ ಮೂಡಿಸಿಕೊಳ್ಳುವ ಉದ್ದೇಶದಿಂದ ಬಂದಿದ್ದೇನೆ.
ಪಡಾರು ರಾಮಕೃಷ್ಣ ಶಾಸ್ತ್ರಿ - ಅಡಿಕೆ ಪತ್ರಿಕೆಯು ಕೃಷಿಕರ ಕೈಗೆ ಲೇಖನಿ ನೀಡಿತು. ಅದೇ ದಾರಿಯನ್ನು ವಿಸ್ತರಿಸುತ್ತಿದ್ದಾರೆ ಕಾಮ್ ಮುಖ್ಯಸ್ಥರಾದ ಅನಿತಾ ಪೈಲೂರು ಮತ್ತು ಶಿವರಾಂ ಪೈಲೂರು. ಹಳ್ಳಿ ಮಂದಿಗೆ ಲೇಖನಿ ನೀಡಿ ನಗರವಾಸಿಗಳ ಕಣ್ತೆರೆಸುತ್ತಿದ್ದಾರೆ. ಹೆಚ್.ಎನ್.ಆನಂದ್ : ಓರ್ವ ಯಶಸ್ವೀ ಪುರಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎಂಬ ಮಾತು ಜನಜನಿತ. ಆದರೆ ಇಲ್ಲಿ ಓರ್ವ ಮಹಿಳೆಯ (ಅನಿತಾ ಪೈಲೂರು) ಹಿಂದೆ ಪುರುಷನೊಬ್ಬನ (ಶಿವರಾಂ ಪೈಲೂರು) ಪ್ರೋತ್ಸಾಹವಿದ್ದರೆ ಅದು ಆ ಮಹಿಳೆಯ ಯಶಸ್ಸಿಗೆ ಕಾರಣವಾಗುತ್ತದೆ ಎಂಬುದು ಇಲ್ಲಿ ಕಾಣುವ ಸತ್ಯ.
ಕಾಮ್ ಚಟುವಟಿಕೆಗಳಲ್ಲಿ ಎಲ್ಲೂ ಕಾಣಿಸಿಕೊಳ್ಳದೆ, ನೇಪಥ್ಯದಲ್ಲೇ ಕಲಾಪಗಳನ್ನು ಮುನ್ನಡೆಸುತ್ತಿರುವ ಶಿವರಾಂ ದಂಪತಿಗಳನ್ನು ಹೆಚ್.ಎನ್. ಆನಂದ್ ಅವರು ವೇದಿಕೆಯ ಮುಂಭಾಗಕ್ಕೆ ಬಲವಂತದಿಂದ ಆಹ್ವಾನಿಸಿ ಬೆನ್ನುತಟ್ಟಿದ ಆ ಕ್ಷಣದಲ್ಲಿ ಪ್ರೋತ್ಸಾಹದ ಚಪ್ಪಾಳೆ ಬಂದರೂ, ಸಭಾಮಧ್ಯದಲ್ಲಿದ್ದ ಅನಿತಾ ಅವರ ಅಮ್ಮ - ಕರುಳಕುಡಿಯ ಕಾಯಕಕ್ಕೆ ತಲೆದೂಗಿ - ಭಾವುಕರಾದರು. ಅವರಿಗರಿಯದಂತೆ ಒಂದೆರಡು ಕಣ್ಣೀರಹನಿ ಜಾರಿದುದು ಯಾರಿಗೂ ತಿಳಿಯಲೇ ಇಲ್ಲ.
'ಭಾವನೆಗಳಿಗೂ ಭಾಷೆಯಿದೆ' ಎಂಬುದು ಪ್ರತೀ ಕಾಮ್ ಶಿಬಿರಗಳಲ್ಲಿ ಎದ್ದು ಕಾಣುವ ಅಂಶ. ದಿನೇಶ್, ಜಯರಾಂ ದೇವವೃಂದ, ತೀರ್ಥಮಲ್ಲೇಶ್ ಮತ್ತು ಊರಿನ ಸಮಾನ ಮನಸ್ಕರ ನೇಪಥ್ಯ ವ್ಯವಸ್ಥೆಗಳು ಶಿಬಿರ ಯಶಸ್ಸಿನ ಹಿಂದಿನ ಗುಟ್ಟು.

Monday, November 1, 2010

ಯಾಕೆ ಆ ದಿವಸಗಳು ನೆನಪಾಗುತ್ತವೆ?

ಯಾಕೋ, ಶಾಲೆಯ ವಿಚಾರ ಬಂದಾಗಲೆಲ್ಲಾ ಪ್ರಾಥಮಿಕ ಶಾಲಾ ದಿನಗಳು, ಅಲ್ಲಿನ ವಾತಾವರಣ, ಅಧ್ಯಾಪಕರ ಆದರ್ಶ-ಒಡನಾಟಗಳು ನೆನಪಾಗುತ್ತವೆ. ಆಗಿನ ಶೈಕ್ಷಣಿಕ ವಾತಾವರಣವನ್ನು ಹಿಂದಿಕ್ಕುವ 'ಪರಿಕರ'ಗಳು ಪ್ರಸ್ತುತ ದಿನಗಳಿಂದ ದೂರವಾದುದೇ ಆ ದಿನಗಳು ಮತ್ತೆ ಮತ್ತೆ ನೆನಪಾಗಲು ಕಾರಣವಿರಬಹುದು.

ದೂರದ ಆಸ್ಟ್ರೇಲಿಯಾದಲ್ಲಿರುವ 'ಬೆಂಚಿಮೇಟ್' ಸುಬ್ಬಣ್ಣ (ಸುಬ್ರಹ್ಮಣ್ಯ ಭಟ್) ಆಗಾಗ್ಗೆ ಮಿಂಚಂಚೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಕೆಲವೊಮ್ಮೆ ಫೋನಿಸಿವುದೂ ಇದೆ. ಆ ರೀತಿ 'ನಿರಾಕಾರ'ವಾಗಿ ಭೇಟಿಯಾದಾಗಲೆಲ್ಲಾ ಸಂದು ಹೋದ ದಿನಗಳನ್ನು ನೆನಪಿಸುವುದು ಖಯಾಲಿ! ಕಳೆದ ದಿವಸಗಳು 'ಸವಿ' ಎಂಬ ಕಾರಣಕ್ಕಾಗಿ ಅಲ್ಲ, ಅಂತಹ ದಿನಗಳ ವಾತಾವರಣಗಳು ನಮ್ಮ ಸಮೀಪವೇ ಬರುತ್ತಿಲ್ಲವಲ್ಲಾ. ಇದನ್ನು ಫಕ್ಕನೆ 'ಕಾಲ'ದ ಮೇಲೆ ಆರೋಪಿಸಿಬಿಡುತ್ತೇವೆ. 'ಕಾಲ ಬದಲಾಯಿತು, ಆಗಿನ ಕಾಲವಲ್ವಾ' ಹೀಗೆ.. ಸುಬ್ಬಣ್ಣ ಪ್ರಾಥಮಿಕ ಶಾಲೆಯಲ್ಲಿ ನವರಾತ್ರಿ ಸಮಯದಲ್ಲಿ ನಡೆಯುತ್ತಿದ್ದ 'ಶಾರದಾ ಪೂಜೆ'ಯನ್ನು ಜ್ಞಾಪಿಸಿದ.

ಪೂಜೆಯ ಎರಡು ದಿವಸಕ್ಕಿಂತ ಮುಂಚೆ ಮಕ್ಕಳಿಗೆಲ್ಲಾ ಸಂಭ್ರಮ. ಎಲ್ಲಾ ಹೆತ್ತವರಿಗೂ ಪ್ರತ್ಯೇಕ ಕರೆಯೋಲೆ. ಅದು ಮುದ್ರಿತ ಕರೆಯೋಲೆಯಲ್ಲ. ಅಧ್ಯಾಪಕರು ಕರೆಯೋಲೆಯ ಮಾದರಿಯನ್ನು ಬೋರ್ಡಿನಲ್ಲಿ ಬರೆಯುತ್ತಾರೆ. ಅದನ್ನು ವಿದ್ಯಾರ್ಥಿಗಳು ನಕಲು ಮಾಡಿದರಾಯಿತು. ಅಧ್ಯಾಪಕರ ಸಹಿಯೊಂದಿಗೆ ಎಲ್ಲಾ ಹೆತ್ತವರಿಗೆ ಮಕ್ಕಳ ಮೂಲಕವೇ ರವಾನೆ.

ನಾಲ್ಕು ತರಗತಿಗಳ ಚಿಕ್ಕ ಸೂರಿನ ಶಾಲೆಯದು. ಅದರೊಳಗಿದ್ದ ದೊಡ್ಡ ವಸ್ತುವೆಂದರೆ ಪುಸ್ತಕವನ್ನು ಒಡಲೊಳಗೆ ತುಂಬಿಕೊಂಡ ಚಿಕ್ಕ ಕಪಾಟು. ಬೆಂಚು, ಕುರ್ಚಿ, ಮೇಜು, ಕರಿ ಹಲಗೆ.. ಒಳಗಿದ್ದ ಎಲ್ಲಾ ವಸ್ತುವನ್ನು ಹೊರಗಿಟ್ಟು, ಸ್ವಚ್ಛವಾಗಿ ನೀರಿನಿಂದ ತೊಳೆದು, ಒಣಬಟ್ಟೆಯಲ್ಲಿ ಒರೆಸುವಲ್ಲಿಗೆ ಒಂದು ದಿನ ಮುಗಿದಿರುತ್ತದೆ.

ಮರುದಿನ ಮೊದಲೇ ಕೊಡುಗೆಯ ಸಹಕಾರವನ್ನು ನೀಡಿದ ಮಹನೀಯರ ಮನೆಗಳಿಂದ ಬಾಳೆ ಕಂದು, ಅಲಂಕಾರಿಕ ವಸ್ತುಗಳು, ಪಂಚಕಜ್ಜಾಯ ತಯಾರಿಸಲು ದೊಡ್ಡ ಪಾತ್ರೆ, ಪಾನೀಯಕ್ಕಾಗಿ ಇನ್ನೊಂದು ಪಾತ್ರೆ, ಬಾಳೆ ಎಲೆ.. ಹೀಗೆ ಒಂದೊಂದು ವಸ್ತುಗಳನ್ನು ತರಲು ಐದಾರು ವಿದ್ಯಾರ್ಥಿಗಳ ದಂಡು. ಹಿಂದಿನ ದಿವಸವೇ ಮುಖ್ಯಗುರುಗಳ ಹಿರಿತನದಲ್ಲಿ ಮಂಟಪ ತಯಾರಿ. ಮರುದಿವಸಕ್ಕೆ ಬಾಡದ, ಒಣಗದ ಹೂಗಳನ್ನು ಕಾಡಿನಿಂದ, ಸುತ್ತಲಿನ ಮನೆಗಳಿಂದ ಆಯಲು ಒಂದು ಗುಂಪು. ತಳಿರು ತೋರಣಕ್ಕಾಗಿ ಮಾವಿನ ಎಲೆಗಳನ್ನು ಅರಸುವುದು ಇನ್ನೊಂದು ಗುಂಪು. ಅದನ್ನು ಹಗ್ಗಕ್ಕೆ ನೇಯ್ದು ತೋರಣ ತಯಾರಿಸುವುದು ಇನ್ನೊಂದಿಷ್ಟು ಮಂದಿ. ಹೀಗೆ ಎಲ್ಲರ ಶ್ರಮಗಳೂ ಸೇರಿ ಶಾರದಾ ಪೂಜೆಗಾಗಿ ಶಾಲೆ ಸಿಂಗಾರಗೊಳ್ಳುತ್ತಿತ್ತು.

'ನಾಳೆ ಎಲ್ಲರೂ ಸ್ನಾನ ಮುಗಿಸಿ ಶುಭ್ರ ವಸ್ತ್ರ ಧರಿಸಿ ಬನ್ನಿ' ಹೊರಡುವಾಗ ಮುಖ್ಯಗುರುಗಳ ಆಜ್ಞೆ. ಆರತಿ ತಟ್ಟೆಗೆ ಹಾಕಲು ಹಿರಿಯರನ್ನು ಕಾಡಿ ಬೇಡಿ ಹತ್ತು ಪೈಸೆಯೋ, ನಾಲ್ಕಾಣೆಯನ್ನೋ ಪಡೆದು ಕಿಸೆಯೊಳಗೆ ಹಾಕಿ, ಶಾಲೆ ಮೆಟ್ಟಿಲು ಏರುತ್ತಿರುವಾಗ ಏನೋ ಬಿಗುಮಾನ! ಮನೆಯಲ್ಲಿರುವ ಹೂವು, ತುಳಸಿ, ತೆಂಗಿನಕಾಯಿ, ಬಾಳೆಹಣ್ಣು.. ಮೊದಲಾವುಗಳನ್ನು ಪಾಲಕರು ಮಕ್ಕಳ ಕೈಯಲ್ಲಿ ಕಳುಹಿಸುತ್ತಿದ್ದರು. ನಿಗದಿತ ಸಮಯಕ್ಕೆ ಪೂಜೆ ಆರಂಭ. ಸ್ಥಳೀಯ ದೇವಳದ ಅರ್ಚಕರು ಪೂಜೆ ನಿರ್ವಹಿಸುತ್ತಿದ್ದರು.

ಸೊಂಟತ್ರಾಣವಿದ್ದ ವಿದ್ಯಾರ್ಥಿಗಳಿಗೆ ತೆಂಗಿನಕಾಯಿಯನ್ನು ಒಡೆದು, ತುರಿಯುವ ಕೆಲಸ. ಇನ್ನು ಕೆಲಸವರಿಗೆ ಕಬ್ಬು, ಕೊಬ್ಬರಿಯನ್ನು ಚಿಕ್ಕಚಿಕ್ಕ ಚೂರುಗಳನ್ನಾಗಿಸುವ ಕಾಯಕ. ತೀರಾ 'ಜಡಧಾರಿ'ಗಳಿಗೆ ತುಳಸಿ, ಹೂಗಳನ್ನು ವಿಂಗಡಿಸುವ ಕೆಲಸ. ಪಂಚಕಜ್ಜಾಯ ಪ್ರಸಾದ ತಯಾರಿಸುವಾಗ ಊರಿನ ಹಿರಿಯರ ಕಣ್ಗಾವಲು ಇತ್ತು! ಹಿರಿಯರು, ಹೆತ್ತವರು, ವಿದ್ಯಾರ್ಥಿಗಳಿಂದ ಭಜನೆ. ಮಧ್ಯಾಹ್ನ ಹೊತ್ತಿಗೆ ಮಂಗಳಾರತಿ. ಗೋವಿಂದ ನಾಮಸ್ಮರಣೆ. ಕಿಸೆಯಲ್ಲಿ ಬಚ್ಚಿಟ್ಟಿದ್ದ ನಾಲ್ಕಾಣೆ ಠಣ್ಣೆಂದು ಆರತಿ ತಟ್ಟೆಗೆ ಬಿದ್ದಾಗ ಆಗುವ ಖುಷಿ. (ಮತ್ತೆ ಸ್ನೇಹಿತರೊಂದಿಗೆ ಹೇಳಿಕೊಳ್ಳಬೇಕಲ್ಲಾ!)

ಬಳಿಕ ಪ್ರಸಾದ, ಪಾನೀಯ ವಿತರಣೆ. ಕೆಲವೊಮ್ಮೆ ಊರಿನ ಗಣ್ಯರು ಲಡ್ಡು ಮುಂತಾದ ಸಿಹಿತಿಂಡಿಯನ್ನು ತರುವುದಿದೆ. ಈ ಸಂದರ್ಭದಲ್ಲಿ ಮುಖ್ಯಗುರುಗಳಿಂದ ಶಾರದಾ ಪೂಜೆ, ಶಿಕ್ಷಣ, ನವರಾತ್ರಿಗಳ ಕುರಿತು ಚಿಕ್ಕ ಉಪನ್ಯಾಸ. ಅಪರಾಹ್ನ ಮನೆಗಳಿಂದ ತಂದ ಎಲ್ಲಾ ವಸ್ತುಗಳನ್ನು ಮರಳಿಸುವ ಕೆಲಸ. ಸಂಜೆಯ ಹೊತ್ತಿಗೆ ಬೆಂಚು, ಕುರ್ಚಿಗಳು ಮೊದಲಿನ ಜಾಗಕ್ಕೆ ಸೇರುತ್ತಿದ್ದವು. ಶಾರದಾ ಪೂಜೆಯ ಮರುದಿವಸದಿಂದ ಶಾಲೆಗೆ ಒಂದು ತಿಂಗಳು ಮಧ್ಯಾವಧಿ ರಜೆ. ಪೂಜೆಗಾಗಿ ಆದ ವೆಚ್ಚವನ್ನು ಊರವರೇ ಭರಿಸುತ್ತಿದ್ದರು. ಖರ್ಚುಗಳನ್ನು ಸರಿದೂಗಿಸುವುದಕ್ಕಾಗಿ ಮಕ್ಕಳಿಂದ ಐವತ್ತು ಪೈಸೆ ತರುವಂತೆ ಮುಖ್ಯ ಗುರುಗಳಿಂದ ಬುಲಾವ್.

ಎಲ್ಲಿಯೂ ಗೊಣಗಾಟವಿಲ್ಲ. ಮಡಿ-ಮೈಲಿಗೆಯಿಲ್ಲ. ಜಾತಿಯ ಸೋಂಕಿಲ್ಲ. ಮತೀಯ ಸ್ಪರ್ಶವಿಲ್ಲ. ನನಗೆ ಈಗಲೂ ನೆನಪಿದೆ - ಸ್ವಂತ ಅಂಗಡಿಯನ್ನು ಹೊಂದಿದ್ದ ಇಬ್ರಾಹಿಂ ಎಂಬವರು ಶಾರದಾ ಪೂಜೆಗಾಗಿ ತನ್ನ ಪಾಲಿನ ದೇಣಿಗೆಯಾದ ಅವಲಕ್ಕಿ, ಬೆಲ್ಲ, ತೆಂಗಿನಕಾಯಿಯನ್ನು ನೀಡುತ್ತಿದ್ದರು. ಸುಮಾರು ಮೂವತೈದು ವರುಷಗಳ ಹಿಂದಿನ ದಿನಗಳ ಸ್ಮರಣೆಯಿದು.

ಇದನ್ನೇ ಈಗಿನ 'ಬದಲಾದ', 'ಅಭಿವೃದ್ಧಿ' ಎಂದು ಹೇಳಲಾಗುವ ದಿನಮಾನಕ್ಕೆ ಹೋಲಿಸೋಣ. ಶಾರದಾ ಪೂಜೆ ಎಂದಾಕ್ಷಣ ಅಲ್ಲೊಂದು 'ಮತೀಯ' ಸೊಲ್ಲು, ಮಕ್ಕಳಿಂದಲೇ ಕೆಲಸ ಅಂದಾಗ ಅದಕ್ಕೆ 'ಬಾಲ ಶೋಷಣೆ' ಯೆಂಬ ಹಣೆಪಟ್ಟಿ ಬಂದುಬಿಡುತ್ತದೆ. ನಾನೋದುತ್ತಿದ್ದ ಶಾಲೆಯಲ್ಲಿ ಎಲ್ಲಾ ಜಾತಿಯ, ಮತದ ವಿದ್ಯಾರ್ಥಿಗಳೂ ಇದ್ದರು. ಯಾವ ದಿವಸವೂ 'ನೀನು ಇಂತಹ ಜಾತಿ' ಎಂದು ಹೇಳಿಕೊಂಡದ್ದಿಲ್ಲ. ಹೇಳಿಸಿಕೊಂಡದ್ದಿಲ್ಲ.

ಈಗ ಇಂತಹ ಪೂಜೆ ಸರಕಾರಿ ಶಾಲೆಯಲ್ಲಿ ಮಾಡಿದರೆ 'ಜಾತಿಪಟ್ಟ'. ಅದಕ್ಕಾಗಿ ಧರಣಿ, ಪ್ರತಿಭಟನೆ. ಮಕ್ಕಳಲ್ಲಿ 'ಕೂಡಿ ಬಾಳುವ' ಸಂದೇಶವನ್ನು ಹೊತ್ತ ಇಂತಹ ಧಾರ್ಮಿಕ ಕಾರ್ಯಕ್ರಮಗಳು 'ವಿದ್ಯಾವಂತರ ನಾಡಿನಲ್ಲಿ' ಯಾಕೆ ಮಸುಕಾಗುತ್ತಿವೆ. ಬಹುಶಃ ಇದು ಅಭಿವೃದ್ಧಿಯ ಸಂಕೇತ!

ಅಲ್ಲ, ಬೌದ್ಧಿಕ ದಿವಾಳಿ.