Saturday, June 30, 2012

ಮೀಯಪದವು : ಹಲಸಿನ ಹಬ್ಬ



ಕಾಸರಗೋಡು ಜಿಲ್ಲೆಯ ಮೀಯಪದವಿನ 'ಚೌಟರ ಚಾವಡಿ'ಯಲ್ಲಿ ಹಲಸಿನ ಹಬ್ಬ. (Jack Fest, Meeyapadavu) ಡಾ.ಡಿ.ಸಿ.ಚೌಟ ಸಹೋದರರ ಉಸ್ತುವಾರಿಕೆ. ಹಿರಿಯರಾದ ಡಿ.ಕೆ.ಚೌಟರು ಹಲಸಿನ ಹಣ್ಣನ್ನು ತುಂಡರಿಸುವುದರ ಮೂಲಕ ಹಬ್ಬದ ಉದ್ಘಾಟನೆ. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಡಾ.ವಾರಣಾಶಿ ಕೃಷ್ಣಮೂರ್ತಿ, ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯರ ಉಪಸ್ಥಿತಿ.

ಮೀಯಪದವು ಸುತ್ತುಮುತ್ತಲಿನ ಮೂವತ್ತೈದು ಹಲಸಿನ ಹಣ್ಣುಗಳು 'ರುಚಿನೋಡಿ-ತಳಿಆಯ್ಕೆ' ಪ್ರಕ್ರಿಯೆಗೆ ಆಗಮಿಸಿದ್ದುವು. ಮುಳಿಯ ವೆಂಕಟಕೃಷ್ಣ ಶರ್ಮರ ನೇತೃತ್ವದ ಎಂಟು ಮಂದಿ ತೀರ್ಪುಗಾರರ ತಂಡವು ನಾಲ್ಕು ಉತ್ತಮ ತಳಿಯನ್ನು ಆಯ್ಕೆ ಮಾಡಿತ್ತು. ಹಲಸಿನ ಬಣ್ಣ, ಪರಿಮಳ, ಫಿಲ್ಲಿಂಗ್, ಹಲಸಿನ ಗಾತ್ರ, ಕ್ರಿಸ್ಪ್. ರುಚಿ - ಹಣ್ಣುಗಳ ಆಯ್ಕೆಗೆ ಮಾನದಂಡಗಳು. ತಿರುಮಲೇಶ್ವರ ಭಟ್ಟರ 'ಮಲ್ಲಿಗೆ ಬಕ್ಕೆ'ಯು ಓಟದಲ್ಲಿ ಮುಂದಿದ್ದರೆ, ಶಿವಕುಮಾರ್ ಆವರ 'ಹೊನ್ನಾಡಿ ಎಲಿಮಲೆ' ತಳಿಗೆ ದ್ವಿತೀಯ ಸ್ಥಾನ. ಶರೀಫ್ ಮತ್ತು ಕೆ.ವಿ.ರಾಧಾಕೃಷ್ಣ ಅವರ ಹಿತ್ತಿಲಿನ ತಳಿಗಳಿಗೆ ತೃಪ್ತಿಕರ ಸ್ಥಾನ.

ಮಧ್ಯಾಹ್ನ ಹಲಸಿನ ಪುಷ್ಕಳ ಭೋಜನ. ಜ್ಯಾಕ್ ಮಂಚೂರಿಯನ್, ಜೆಲ್ಲಿ, ಮುಳುಕ, ಹಲ್ವ, ಪಾಯಸ.. ಹೀಗೆ ಹಲಸುಮಯ. ಅಪರಾಹ್ನ 'ಹಲಸಿನ ಮಾತುಕತೆ'. ಹಲಸಿನ ಮಾರುಕಟ್ಟೆ ಕುರಿತ ಯಶೋಗಾಥೆಯನ್ನು ತೆರೆದಿಟ್ಟವರು ಮುಳಿಯ ವೆಂಕಟಕೃಷ್ಣ ಶರ್ಮ, ಡಾ.ವಾರಣಾಶಿ ಕೃಷ್ಣಮೂರ್ತಿ ಮತ್ತು ಡಾ.ಡಿ.ಸಿ.ಚೌಟ. ಗಿಡಗಳ ಆರೈಕೆಯ ಸೂಕ್ಷ್ಮಗಳತ್ತ ಗುರುರಾಜ ಬಾಳ್ತಿಲ್ಲಾಯ ಬೆಳಕು ಚೆಲ್ಲಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಣೆ. ಪತ್ರಕರ್ತ ಅಡ್ಡೂರು ಕೃಷ್ಣರಾವ್, ಉಬರು ರಾಜಗೋಪಾಲ ಭಟ್ಟ, ಶಿರಂಕಲ್ಲು ನಾರಾಯಣ ಭಟ್ಟರು ತಳಿಆಯ್ಕೆಯಲ್ಲಿ ಮುಂದಿದ್ದ ಹಲಸಿನ ಯಜಮಾನರುಗಳಿಗೆ ಬಹುಮಾನ ವಿತರಿಸಿದರು.

'ಹಣ್ಣು ನೀಡುವ ಹಲಸಿನ ಮರಗಳನ್ನು ಕಡಿಯದೆ ಉಳಿಸಿ' ಎಂದು ಉದ್ಘಾಟನೆ ಮಾಡುತ್ತಾ ಡಿ.ಕೆ.ಚೌಟರು ಹೇಳಿದ್ದರು. ಇದು ಹಬ್ಬದ ಘೋಷವಾಕ್ಯ! ಹಪ್ಪಳ, ಚಿಪ್ಸ್, ಉಪ್ಪುಸೊಳೆ, ಹಲಸಿನ ವೈನ್, ಜ್ಯಾಕ್ ನಟ್.. ಪ್ರದರ್ಶನದಲ್ಲಿ ಗಮನ ಸೆಳೆದವು. ಹಲಸಿನ ಗಿಡಗಳ ಮಾರಾಟವು ಹಬ್ಬದ ಹೈಲೈಟ್.

ಅಧ್ಯಾಪಕ ಶ್ರೀಧರ ರಾವ್, ಜಯಪ್ರಕಾಶ್.. ತಂಡವು ಹಬ್ಬದ ವಿವಿಧ ವಿಭಾಗವನ್ನು ಪ್ರತಿನಿಧಿಸಿತ್ತು. ಮನೋಹರ ಚೌಟ, ಪ್ರಭಾಕರ ಚೌಟ ಅಲ್ಲದೆ ಚೌಟರ ಕುಟುಂಬದ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಚೌಟರ ಚಾವಡಿಯ ಈ ಹಬ್ಬಕ್ಕೆ ಮೀಯಪದವಿನ ಸಾಂಸ್ಕೃತಿಕ ವೇದಿಕೆ, ಕೃಷಿ ವಿಕಾಸ ಚಾರಿಟೇಬಲ್ ವಾಹಿನಿ, ಎನ್.ಎಂ.ಜಿ.ಬ್ಯಾಂಕ್ ಮತ್ತು ನಬಾರ್ಡ್ ಕೈಜೋಡಿಸಿದ್ದುವು.

ಪಂಚ್ ಲೈನ್ : ಡಿ.ಕೆ.ಚೌಟ ಉವಾಚ : 'ಬೆಂಗಳೂರು ಹೊರವಲಯದ ತೂಬುಗೆರೆ ಹಲಸು ಇಂದಿರಾಗಾಂಧಿಯವರಿಗೆ ಪ್ರಿಯವಾಗಿತ್ತು. ಅವರಿಗಾಗಿ ಈ ಹಣ್ಣು ದೆಹಲಿ ಸೇರುತ್ತಿದ್ದುದು ಈಗ ಇತಿಹಾಸ'.

Monday, June 25, 2012

ಹಲಸಿನ 'ಹಳ್ಳಿ ಮಾರುಕಟ್ಟೆ'


ಐದಾರು ವರುಷದಿಂದ ಹಲಸು ಸುದ್ದಿಮಾಡುತ್ತಿದೆ, ಅಡುಗೆಮನೆಯಿಂದ ತೊಡಗಿ ಐಸ್ಕ್ರೀಂ ಪಾರ್ಲರ್ ತನಕ! ಅಕಾಲದಲ್ಲಿ ಹಲಸಿನ ಸ್ವಾದ ಸವಿಯುವ ಹಳ್ಳಿ ಜ್ಞಾನಕ್ಕೆ ತಂತ್ರಜ್ಞಾನದ ಝಲಕ್. ಹಪ್ಪಳ, ಚಿಪ್ಸ್ಗಳು ಹಳ್ಳಿಯಲ್ಲಿ ಮಾತ್ರವಲ್ಲ, ನಗರದ ಚುಮುಚುಮು ಚಳಿಗೆ 'ಕುರುಕುರು' ಸದ್ದು ಮಾಡುತ್ತವೆ. ಮೌಲ್ಯವರ್ಧನೆಯತ್ತ ಒಲವು ಹೆಚ್ಚುತ್ತಿದೆ.
ಕಾಡಿನ ಸರಹದ್ದಿನಲ್ಲಿರುವ ಹಲಸಿನ ಹಣ್ಣುಗಳು ಮಂಗಗಳಿಗೆ ಬಿಟ್ಟುಕೊಡೋಣ. (ಕಾಡು ಇದ್ದರೆ!?) ತೋಟದೊಳಗಿನ ಹಣ್ಣುಗಳು ಕೊಳೆತು, ಬಿದ್ದು ರಣರಂಗ! ಒಂದೆಡೆ ಮೌಲ್ಯವರ್ಧನೆ, ಮತ್ತೊಂದೆಡೆ ದುಃಸ್ಥಿತಿ. ದ.ಕ.ಜಿಲ್ಲೆಯ ವಿಟ್ಲ ಸನಿಹದ ಉಬರು 'ಹಲಸು ಸ್ನೇಹಿ ಕೂಟ'ವು, ಅಡ್ಯನಡ್ಕ ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಸಾರಥ್ಯದಲ್ಲಿ ಹಲಸಿಗೆ ಹಳ್ಳಿ ಮಾರುಕಟ್ಟೆ ನೀಡುವತ್ತ ಸಣ್ಣ ಹೆಜ್ಜೆಯಿಟ್ಟಿದೆ.
ಈ ಋತುವಿನಲ್ಲಿ ಸುಮಾರು ಮೂವತ್ತು ಟನ್ 'ಬಕ್ಕೆ' ಹಲಸಿಗೆ 'ಮಾನ' ತರುವ ಯತ್ನ. ಇವೆಲ್ಲವೂ ಮುಂಬಯಿಯ ಐಸ್ಕ್ರೀಂ ಉದ್ಯಮದ ಯಂತ್ರದ ಬಾಯೊಳಕ್ಕೆ ಬೀಳುತ್ತವೆ. 'ಅಳಿಕೆ ಮತ್ತು ಕೇಪು ಗ್ರಾಮಗಳ ಸೀಮಿತ ಪ್ರದೇಶದಲ್ಲಿ ಈಗಾಗಲೇ ಹದಿನೈದು ಟನ್ನಿನಷ್ಟು ಕಾಯಿಗಳನ್ನು ಪಡೆದು ಮಾರಾಟ ಮಾಡಿದ್ದೇವೆ. ಈಗಿನ ಅನುಭವ ಆಧಾರದಲ್ಲಿ ಮುಂದಿನ ವರುಷ ಐವತ್ತು ಟನ್ ಮೀರಿದರೂ ಆಶ್ಚರ್ಯವಿಲ್ಲ' ಎನ್ನುತ್ತಾರೆ ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ.
ಮರದಿಂದ ಬಲಿತ ಕಾಯನ್ನು ಕೀಳುವುದು ಶ್ರಮ ಬೇಡುವ ಕೆಲಸ. ಕೊಯಿದು ನಾಲ್ಕೈದು ದಿವಸದಲ್ಲಿ ಹಣ್ಣಾಗುವಂತಹ ಕಾಯನ್ನು ಹಗ್ಗದ ಸಹಾಯದಿಂದ ಕೆಳಗಿಳಿಸಬೇಕು. ಎಲ್ಲರಿಗೂ ಈ ಕೆಲಸ ಅಸಾಧ್ಯ. ಜಾಣ್ಮೆಯರಿತ 'ಸ್ಪೆಷಲಿಸ್ಟ್'ಗಳಿಂದ ಸಾಧ್ಯ. ನಂತರ ವಾಹನಕ್ಕೆ ಲೋಡ್. ಮೊದಲು ಅಡಿಕೆ ಸಿಪ್ಪೆಯ ಬೆಡ್. ಅದರ ಮೇಲೆ ಒಂದು ಲೇಯರ್ ಹಲಸಿನ ಕಾಯಿ. ಡ್ಯಾಮೇಜ್ ಆಗದಂತೆ ಪುನಃ ಮೇಲೆ ಬಾಳೆಗಿಡದ ಕೈಗಳು, ಅಡಿಕೆ ಸೋಗೆಗಳ ಪದರ. ನಂತರ ಹಲಸಿನ ಕಾಯಿಯ ಲೇಯರ್.
ಓರ್ವ ಸ್ಪೆಷಲಿಸ್ಟ್ ಒಂದು ದಿವಸದಲ್ಲಿ 100-120 ಕಾಯಿ ಕೆಳಗಿಳಿಸಬಹುದಷ್ಟೇ. ನಮ್ಮೂರಿನಲ್ಲಿ ಉಮಾನಾಥ ನಾಯಕ್ ಎಂಬವರು ಜಾಣ್ಮೆಯ ಕೆಲಸಗಾರರು. ಒಂದು ದಿವಸದ ಶ್ರಮಕ್ಕೆ ಒಂದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನುತ್ತಾರೆ ಶರ್ಮ. ಸುಮಾರು  ಐವತ್ತು ಮನೆಗಳಿಂದ ಹಲಸು ಸಂಗ್ರಹ. ಎರಡು ಕ್ವಿಂಟಾಲಿನಿಂದ ಒಂದು ಟನ್ ತನಕ ಹಲಸು ನೀಡುವ ಕೃಷಿಕರಿದ್ದಾರೆ. 'ನಾವೇ ಕೊಯ್ದರೆ ಕಿಲೋಗೆ ಐದು ರೂಪಾಯಿ, ಕೃಷಿಕರೇ ಕೊಯ್ದು ನಿಗದಿತ ಜಾಗಕ್ಕೆ ತಂದರೆ ಏಳೂವರೆ ರೂಪಾಯಿ ನೀಡಿದ್ದೇವೆ. ಒಂದು ಹಲಸು ಏನಿಲ್ಲವೆಂದರೂ ಕನಿಷ್ಟ ಐದಾರು ಕಿಲೋ ತೂಗುತ್ತದೆ. ಕೃಷಿಕರಿಗೆ ಕಾಯಿಯೊಂದರ ಸರಿಸುಮಾರು 25-30 ರೂಪಾಯಿ ಸಿಕ್ಕದಂತಾಯಿತು' ಎಂಬ ಲೆಕ್ಕಾಚಾರ ಶರ್ಮರದು.
ಕಾಯಿ ಕೀಳುವಾಗ ಬಕ್ಕೆ ಮತ್ತು ತುಳುವ (ಬಿಳುವ, ಅಂಬಲಿ) ಯಾವುದೆಂದು ಫಕ್ಕನೆ ಗುರುತು ಹಿಡಿಯಲು ಕಷ್ಟ.  ಮನೆಯವರು ರುಚಿ ನೋಡಿ 'ಬಕ್ಕೆ' ಮರವನ್ನು ಆಯ್ಕೆ ಮಾಡಿದರೆ ಈ ಗೊಂದಲವನ್ನು ಪರಿಹರಿಸಬಹುದು. ಮಳೆಗಾಲದಲ್ಲಿ ಮರ ಏರುವುದು ದೊಡ್ಡ ಸಮಸ್ಯೆ.
ಈ ಪರಿಸರದಲ್ಲಿ 'ಹಲಸಿನ ಕಾಯಿ ಕೊಳ್ಳುತ್ತೀರಂತೆ, ಹೌದಾ, ತೆಕ್ಕೊಳ್ಳುವುದಿದ್ದರೆ ನನ್ನಲ್ಲಿದೆ ಎಂಬ ಮಾತುಕತೆ ಶುರುವಾಗಿದೆ. 'ನಿಮಗಲ್ವಾ, ಒಳ್ಳೆಯ ರುಚಿಯ ಹಣ್ಣು ತಿನ್ನಲು ಕೊಡುತ್ತೇನೆ' ಎಂದವರು, ಹಲಸಿಗೆ ಚಿಕ್ಕ ಮೌಲ್ಯ ಬಂದಾಗ ಈಗ 'ಉಚಿತ'ದ ಸುದ್ದಿ ಮಾತನಾಡುವುದಿಲ್ಲ!
ಯಾವ್ಯಾವ ಮರ ಎಷ್ಟೆಷ್ಟು ಕಾಯಿ ಕೊಡುತ್ತೆ, ಯಾವ ತಳಿ, ಕಾಯಿಕೊಡುವ ಸಮಯ, ಗುಣಮಟ್ಟವನ್ನು ಗುರುತು ಮಾಡಿಕೊಳ್ಳವ ಕೆಲಸವನ್ನು ಶರ್ಮರು ಜತೆಜತೆಗೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬನೂ ಮಾಹಿತಿ ನೀಡಿದರೆ ಒಂದೊಂದು ಗ್ರಾಮದಲ್ಲಿ ಐವತ್ತು ಟನ್ನಿಗೂ ಮಿಕ್ಕಿ ಹಲಸಿನ ಕಾಯಿಗಳ ಸಂಪನ್ಮೂಲತೆಯಿದೆ.   
ಹಲಸು ಮಾರಾಟ ನಮಗೆ ಉದ್ಯಮವಲ್ಲ. ಅದಕ್ಕೊಂದು ಮೌಲ್ಯ ಬರಬೇಕು ಎನ್ನುವ ದೂರದೃಷ್ಟಿ. ಹಳ್ಳಿಯಲ್ಲಿ ಹಲಸಿಗೂ ಮಾರುಕಟ್ಟೆ ಇದೆ ಎಂಬುದು ಅರಿವಾಗಬೇಕು. ನಮ್ಮ ಈ ಪ್ರಕ್ರಿಯೆಯಿಂದ ಮಾರ್ಕೆಟ್ ಓಪನ್ ಆದರೆ ಶ್ರಮ ಸಾರ್ಥಕ,' ಎನ್ನುತ್ತಾರೆ ಡಾ.ವಾರಣಾಶಿ ಕೃಷ್ಣಮೂರ್ತಿ.
(ಸಂಪರ್ಕ : ಮುಳಿಯ ವೆಂಕಟಕೃಷ್ಣ ಶರ್ಮ : 94802200832)

Wednesday, June 20, 2012

ಹಲಸಿನ ಮಾನವರ್ಧನೆ : 'ಅಡುಗೆಗೆ ಸಿದ್ಧ ಹಲಸು'





ನಮ್ಮೂರ ಪ್ರತಿ ಮನೆಯಲ್ಲಿ ಹಲಸಿನ ಮರಗಳಿವೆ, ಯಥೇಷ್ಟ ಕಾಯಿಗಳಿವೆ. ಮರವೇರಿ ಕೊಯ್ಯುವ ಸ್ಪೆಷಲಿಸ್ಟ್ಗಳಿಲ್ಲ. ಹಾಗಾಗಿ ಹಲಸಿನ ಕಾಯಿ ಮರದಲ್ಲೇ ಹಣ್ಣಾಗಿ, ಕೊಳೆತು ಬಿದ್ದು ಮಣ್ಣು ಸೇರುತ್ತದೆ. ಈ ಹಿನ್ನೆಲೆಯಲ್ಲಿ ಹಲಸಿನ ಕಾಯಿಯ ಸೊಳೆ ತೆಗೆದು ಪ್ಲಾಸ್ಟಿಕ್ನೊಳಗಿಟ್ಟು ಒಂದು, ಎರಡು ಕಿಲೋದ ಪ್ಯಾಕೆಟ್ ಮಾಡಿ ಪ್ರಾಯೋಗಿಕವಾಗಿ ಮಾರಾಟಕ್ಕಿಟ್ಟೆವು. ಒಂದೇ ದಿವಸದಲ್ಲಿ ಐವತ್ತು ಕಿಲೋ ಸೊಳೆ ಮಾರಾಟವಾಯಿತು ಎಂಬ ಹೊಸ ಸುದ್ದಿಯನ್ನು ನೀಡುತ್ತಾರೆ, ಕೇರಳದ ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟ.

ಹೆದ್ದಾರಿಯಿಂದ ಅನತಿ ದೂರದ ಮೀಯಪದವು ಹಳ್ಳಿ. ಹಿತ್ತಿಲಿನ ಮರದಲ್ಲಿ ಹಲಸು ಬಲಿತು ತೂಗಾಡುತ್ತಿದ್ದರೂ ಕೊಯ್ಯಲಾಗದ ಸ್ಥಿತಿ. ಅದರ ಸೊಳೆ ಪ್ರತ್ಯೇಕವಾಗಿ ಸಿಕ್ಕಿದರೆ ಕಾಸು ತೆತ್ತಾದರೂ ಒಯ್ಯುವ ಹಲಸು ಪ್ರಿಯರು! 'ಹಲಸಿನ ಹಣ್ಣಿನ ಸೊಳೆಯನ್ನು ಅಡಿಕೆ ಹಾಳೆಯ ಚಿಕ್ಕ ಪ್ಲೇಟ್ನಲ್ಲಿಟ್ಟು, ಅದಕ್ಕೆ ಕ್ಲಿಂಗ್ಫಿಲ್ಮ್ ಅಂಗಿ ತೊಡಿಸಿದರೆ ಮಾರಾಟವಾಗುತ್ತೋ ಪ್ರಯತ್ನದಲ್ಲಿದ್ದೇನೆ' ಎಂದರು ಚೌಟರು.

ಹಲಸಿನ ಸಂಸ್ಕರಣೆ ಹಲಸಿನ ಬಳಕೆಗಿರುವ ಶಾಪ! ಅದನ್ನು ಬಿಡಿಸಿ, ಮೇಣದಿಂದ ಪಾರಾಗಿ, ಬೇಳೆಯಿಂದ ಬೇರ್ಪಡಿಸಿದ ಸೊಳೆ ಸಿಕ್ಕರೆ ನಮ್ಮ ಅಡುಗೆ ಮನೆಗಳು ಒಳ್ಳೊಳ್ಳೆಯ ಖಾದ್ಯಗಳಿಗೆ ಸಾಕ್ಷಿಗಳಾಗಬಹುದು! ಹಣ್ಣು ಸೊಳೆಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್ನೊಳಗಿಟ್ಟು ನೀಡಿದರೆ ನಗರಗಳು ಯಾಕೆ, ಹಳ್ಳಿಗಳಲ್ಲೂ ಗ್ರಾಹಕರಿದ್ದಾರೆ!

ಅದನ್ನು 'ಮಿನಿಮಲ್ ಪ್ರಾಸೆಸಿಂಗ್' (ಕನಿಷ್ಠ ಸಂಸ್ಕರಣೆ) ಮಾಡಿ, 'ಅಡುಗೆಗೆ ಸಿದ್ಧ'ವಾಗಿ ನೀಡಿದರೆ ಅಮ್ಮಂದಿರಿಗೆ ಎಷ್ಟೊಂದು ಖುಷಿಯಲ್ವಾ. ಕೇರಳದ ಪತ್ತನಾಂತಿಟ್ಟ ಕಾರ್ಡ್ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ಇಂತಹ 'ರೆಡಿ ಟು ಕುಕ್' ಉತ್ಪನ್ನವನ್ನು ಪ್ರಾಯೋಗಿಕವಾಗಿ ಮಾಡಿ ಗೆದ್ದಿದೆ. ತನ್ನ ಮಳಿಗೆಯಲ್ಲಿ ಮಾರಾಟಕ್ಕಿಟ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಎಳೆ ಹಲಸು, ಬಲಿತ ಹಲಸಿನ ಸೊಳೆ ಮತ್ತು ಹಲಸಿನ ಬೀಜಗಳನ್ನು ಅಡುಗೆಗೆ ಸಿದ್ಧ ರೂಪದಲ್ಲಿ ಕೆವಿಕೆ ತಯಾರಿಸುತ್ತಿದೆ. ಈ ಉತ್ಪನ್ನದ ತಾಳಿಕೆ ಒಂದು ದಿವಸ. ತಂಪುಪೆಟ್ಟಿಗೆಯಲ್ಲಿಟ್ಟರೆ ಮೂರು ದಿವಸ. 'ತಾಳಿಕೆ ಕಡಿಮೆಯಾದರೂ ತೊಂದರೆಯಿಲ್ಲ. ರಾಸಾಯನಿಕ ಬಳಸದೇ ಇರುವ ಹಲಸಿನ ಉತ್ಪನ್ನ ಆರೋಗ್ಯಕ್ಕೆ ಉತ್ತಮ' ಎನ್ನುತ್ತಾರೆ ಹಲಸು ಆಂದೋಳನದ ರೂವಾರಿ ಶ್ರೀ ಪಡ್ರೆ.

ಕೆವಿಕೆಗೆ ಅಂದಂದಿಗೆ ಒಯ್ಯುವ ಗ್ರಾಹಕರಿದ್ದಾರೆ. ಸರಳ ಪ್ಯಾಕಿಂಗ್. ಸದ್ಯಕ್ಕೆ ಥರ್ಮೋಕೋಲ್ ಟ್ರೇ ಮತ್ತು ಅದನ್ನು ಮುಚ್ಚಲು ಪಾರದರ್ಶಕ ಕ್ಲಿಂಗ್ ಫೀಲಂ. ಇನ್ನೂರೈವತ್ತು ಗ್ರಾಮಿನ ಎಳೆ ಹಲಸು ಮತ್ತು ಬೀಜದ ಪ್ಯಾಕೆಟ್ಗಳಿಗೆ ತಲಾ ಇಪ್ಪತ್ತು ರೂಪಾಯಿ. ಬಲಿತ ಹಲಸಿಗೆ ಅರ್ಧ ಕಿಲೋ ಪ್ಯಾಕಿಗೆ ಇಪ್ಪತ್ತು ರೂಪಾಯಿ.

ಕೇವೀಕೆ ಈ ಉತ್ಪನ್ನ ತಯಾರಿಯ ವಿಧಾನವನ್ನು ಇನ್ನೂ ಸುಧಾರಿಸಿ ಬೇಗನೆ ಸ್ಟಾಂಡರ್ಡ್ಯೆಸ್ ಮಾಡಬೇಕೆಂದಿದೆ. ಏನಿದ್ದರೂ ಮಾಡಿದ ಕೆಲಸ ದೊಡ್ಡದು. ಹಲಸು ಬೆಳೆಯುವ ಪ್ರದೇಶಕ್ಕೆಲ್ಲಾ ಹೊಸ ಪಾಠ. ದೊಡ್ಡ ಯಂತ್ರ, ಎಕ್ರೆಗಟ್ಟಲೆ ಜಾಗ, ಕೋಟಿಗಟ್ಟಲೆ ಬಂಡವಾಳ ಬೇಡ. ಸ್ಥಳೀಯವಾಗಿಯೇ ಮಾರಾಟವಾಗುವ ಅವಕಾಶ. ಜನಸಾಮಾನ್ಯರೂ ಕೂಡಾ ಖರೀದಿಸಿ ತಿನ್ನಬಹುದಾದುದು. ಪತ್ತನಾಂತಿಟ್ಟದ ಕಾರ್ಡ್ ಕೆವಿಕೆ ಹಲಸಿನ ಮೌಲ್ಯವರ್ಧನೆಯಲ್ಲಿ ಗಣನೀಯ ಕೆಲಸ ಮಾಡಿದೆ.

ನಗರ ಪ್ರದೇಶದಲ್ಲಿ ಬೆಳ್ಳಂಬೆಳಿಗ್ಗೆ ಮನೆಯೆದುರಿಗೆ ಬರುವ ತರಕಾರಿ ಗಾಡಿಗಳಲ್ಲಿ ಹಲಸಿನ 'ಅಡುಗೆಗೆ ಸಿದ್ಧ' ಉತ್ಪನ್ನ ಸಿಕ್ಕರೆ, ರುಚಿಗೊತ್ತಿದ್ದ ಅಮ್ಮಂದಿರು ಖಂಡಿತಾ ಆಯ್ಕೆ ಮಾಡದಿರರು. ವಿಷದಲ್ಲಿ ಮಿಂದೆದ್ದ ತರಕಾರಿಗಳ ಸೇವನೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದೇನೋ!

ಉತ್ಪನ್ನವನ್ನು ಒದಗಿಸುವ ಚಿಕ್ಕ ಚಿಕ್ಕ ಘಟಕಗಳು ಗೃಹ ಉದ್ಯಮಗಳಾಗಿ ರೂಪುಗೊಳ್ಳಬೇಕು. ಮೀಯಪದವಿನಂತಹ ಹಳ್ಳಿಯಲ್ಲಿ ಪತ್ತನಾಂತಿಟ್ಟದಂತೆ ಅಲ್ಲದಿದ್ದರೂ ಸಣ್ಣಮಟ್ಟಿಗೆ 'ಅಡುಗೆಗೆ ಸಿದ್ಧ'ವಾಗಿಸಲು ಸಾಧ್ಯವಾಗಿದೆಯಂತೆ, ಉಳಿದೆಡೆ ಸಾಧ್ಯವಿಲ್ವಾ. ಹಳ್ಳಿಯ ಮಲ್ಲಿಗೆ ಹೂ ನಗರಕ್ಕೆ ಹೋಗುತ್ತದಲ್ಲಾ, ಅಂತಹ ಮಾರಾಟ ಸರಪಳಿಯನ್ನು ಬೆಸೆಯಬಹುದೇನೋ?
cardkvk@yahoo.com
ಬಾಕ್ಸ್


ಕೇರಳದಲ್ಲೇ ಮೊದಲ ಬಾರಿಗೆ ಕಣ್ಣೂರು ಜಿಲ್ಲೆಯ ಹಳ್ಳಿ ಮೂಲೆಯ 'ನಡುವಿಲ್ ಪಂಚಾಯತು' ಈಚೆಗೆ ದ್ವಿದಿನದ ಹಲಸಿನ ಹಬ್ಬ ಸಂಘಟಿಸಿತು. ಬಲಿತ ಹಲಸನ್ನು ಕತ್ತರಿಸಿ ಒಳಗಿನ ಬೀಜದೊಂದಿಗೆ ಇಡೀ ಸೊಳೆ(ಬಲ್ಬ್)ಯನ್ನು ಕೆಲ ಹೆಣ್ಮಕ್ಕಳು ಪ್ಯಾಕೆಟ್ ಮಾಡಿ ಮಾರಲು ತಂದರು. ಹತ್ತು ಹನ್ನೆರಡು ಇಡೀ ಸೊಳೆಗೆ ಹತ್ತು ರೂಪಾಯಿ ಬೆಲೆ. ಎಲ್ಲರಿಗೂ ಹಲಸು ತುಂಡುಮಾಡಿ ಬಳಸಲು ಗೊತ್ತಿರುವ ಈ ಮೂಲೆಯ ಹಳ್ಳಿಯಲ್ಲಿ ಇದು ಮಾರಾಟವಾದೀತೇ ಎಂಬ ಸಂಶಯ ನನಗಿತ್ತು ಎನ್ನುತ್ತಾರೆ ತಿರುವನಂತಪುರದ ಜ್ಯಾಕ್ ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಕಾರ್ಯದರ್ಶಿ ಎಲ್. ಪಂಕಜಾಕ್ಷನ್. ಆದರೆ ಆ ಹೆಣ್ಮಕ್ಕಳು ಎರಡೇ ದಿನಗಳಲ್ಲಿ ಮುನ್ನೂರು ಪ್ಯಾಕೆಟ್ ಮಾರಿ ಮೂರು ಸಾವಿರ ರೂಪಾಯಿ ಸಂಪಾದಿಸಿದರು! ಹಬ್ಬ ಇಲ್ಲದಿದ್ದರೂ ರಸ್ತೆ ಬದಿಯಲ್ಲೊಂದು ಮೇಜಿಟ್ಟು ಮಾರಹೊರಟರೆ ಒಂದು ಕುಟುಂಬದ ಜೀವನ ಈ ಕೆಲಸದಿಂದ ಸಾಗುತ್ತಿತ್ತು!

Sunday, June 17, 2012

'ಹತ್ತು ರೂಪಾಯಿಗೆ ಮೂರು ಸೊಳೆ'!

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ (ಜೂ. 17) ಹಲಸು ಮೇಳ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೂಬುಗೆರೆ ಹಲಸು ಬೆಳೆಗಾರರ ಸಂಘದ ಮಳಿಗೆಯಲ್ಲಿ ಕಾರ್ಯದರ್ಶಿ ರವಿಕುಮಾರ್ ಹಲಸಿನ ಹಣ್ಣನ್ನು ತುಂಡರಿಸುತ್ತಿದ್ದರು. ಅವರ ಸಹಾಯಕರು ಸೊಳೆ ಬಿಡಿಸಿ, ಚಿಕ್ಕ ಟ್ರೇಯಲ್ಲಿಟ್ಟು ಮಾರಾಟ ಮಾಡುತ್ತಿದ್ದರು. 'ಹತ್ತು ರೂಪಾಯಿಗೆ ಮೂರು ಸೊಳೆ'! ಬರೋಬ್ಬರಿ ಮಾರಾಟ. ಹಣ್ಣಿಂದ ಸೊಳೆ ತೆಗೆಯಲು ಪುರುಸೊತ್ತಿಲ್ಲ, ಹಲಸು ಪ್ರಿಯರು ಮುಗಿಬೀಳುತ್ತಿದ್ದರು.


ಹಣ್ಣಿನ ರುಚಿ, ಬಣ್ಣ, ಕ್ರಿಸ್ಪ್ ಮತ್ತು ನೋಟಗಳು ಸೆಳೆಯುತ್ತಿದ್ದುವು. ಸಾಮಾನ್ಯವಾಗಿ ಬೆಂಗಳೂರು, ತಿಪಟೂರು.. ಪ್ರದೇಶಗಳ ಹಲಸು ನಮ್ಮೂರಿನದಕ್ಕಿಂತ ರುಚಿಯಲ್ಲಿ ಮುಂದು. ಈ ರುಚಿಯನ್ನು ಮೀರಿಸುವ ಹಲಸಿನ ಹಣ್ಣುಗಳು ನಮ್ಮೂರಿನಲ್ಲೂ ಇವೆ. ಅದನ್ನು ಗುರುತಿಸುವ ಕೆಲಸಗಳಾಗಿಲ್ಲ. ವಿಟ್ಲ, ಅಳಿಕೆ ಸುತ್ತುಮುತ್ತಲಿನ ಪ್ರದೇಶದಲ್ಲಿ 'ಹಲಸು ಸ್ನೇಹಿ ಕೂಟ'ದ ಮೂಲಕ ಉತ್ತಮ ರುಚಿಯ ಹಣ್ಣನ್ನು ಪತ್ತೆ ಮಾಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.

ಮೇಳ ಅಂದ ಮೇಲೆ ಕೇಳಬೇಕೆ, ಜನಸಂದೋಹ. ದೂರದೂರಿನಿಂದ ಹಲಸು ಪ್ರಿಯರು ಹಲಸಿನ ಕಾಯಿ, ಹಣ್ಣಿನೊಂದಿಗೆ ಆಗಮಿಸಿದ್ದರು. ಮಂಗಳೂರು ಸಂಕೊಳಿಕೆಯ ಶ್ರೀಧರ ಕುಂಬ್ಳೆಯವರು ಈಚೆಗಷ್ಟೇ ಕೇರಳಕ್ಕೆ ಹೋಗಿ ಹಲಸಿನ ರೆಸಿಪಿಗಳನ್ನು ಕಲಿತು ಬಂದು ಪ್ರಯೋಗಕ್ಕೆ ಇಳಿದಿದ್ದರು. ಅದರ ಫಲಶ್ರುತಿಯಾಗಿ ಮೇಳದಲ್ಲಿ ಹಲಸಿನ ಹಣ್ಣಿನ ಸಿರಪ್, ಜ್ಯಾಮ್, ಹಲ್ವ, ಕುಡಿಯಲು ಸಿದ್ಧ ಜ್ಯೂಸ್ಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು.

ಹಪ್ಪಳ, ಚಿಪ್ಸ್..ಗಳ ಮಳಿಗೆಗಳು ಯಥೇಷ್ಟ. ಹಪ್ಪಳವೊಂದರ ಮೂರರಿಂದ ನಾಲ್ಕು ರೂಪಾಯಿ! ಹಣ್ಣು ಹಪ್ಪಳವೊಂದಕ್ಕೆ ಐದು ರೂಪಾಯಿ. ಕಾಯಿ ಸೊಳೆ ಮತ್ತು ಉಪ್ಪುಸೊಳೆಗಳು ಮಾರಾಟಕ್ಕಿಟ್ಟರೂ ಯಾಕೋ ಒಲವು ಕಡಿಮೆ. ಮಳಿಗೆಯನ್ನು ವೀಕ್ಷಿಸುತ್ತಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥ ಡಾ.ಎಲ್.ಹೆಚ್.ಮಂಜುನಾಥ್ ಹೀಗೆಂದರು : 'ಹಲಸು ಹೀಗೆ ರೆಡಿ ಟು ಕುಕ್ ಆಗಿ ಸಿಗಬೇಕು. ಅಮ್ಮಂದಿರಿಗೆ ಮೇಣ ಮೆತ್ತಿಸಿಕೊಳ್ಳಬೇಕಾಗಿಲ್ಲ. ಕೆಲಸ ಸುಲಭ. ಚಿಕ್ಕ ಕುಟುಂಬಕ್ಕೆ ದೊಡ್ಡ ಗಾತ್ರದ ಹಲಸಿನ ಕಾಯಿ ತಲೆನೋವು ತರಿಸುತ್ತದೆ. ಇಂತಹ ಪ್ರಯತ್ನಗಳು ಹಳ್ಳಿ ಹಳ್ಳಿಗಳಲ್ಲಿ ಬರಬೇಕು.'

ವಿಟ್ಲ-ಉಬರು 'ಹಲಸು ಸ್ನೇಹಿ ಕೂಟ'ವು ತಾನು ಹುಡುಕಿ ಅಭಿವೃದ್ಧಿಪಡಿಸುತ್ತಿರುವ ಉತ್ತಮ ತಳಿಗಳ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಆಯಾಯ ಹಲಸಿನ ಪೂರ್ಣ ಜಾತಕವೂ ಜತೆಗಿತ್ತು. ಹಣ್ಣನ್ನು ನೋಡಿದ ಬಹುತೇಕರು 'ಹಲಸಿನ ಗಿಡ ಬೇಕಿತ್ತಲ್ವಾ, ಎಲ್ಲಿ ಸಿಗುತ್ತೆ' ಎಂದು ಕೂಟದ ವೆಂಕಟಕೃಷ್ಣ ಶರ್ಮರವನ್ನು ವಿಚಾರಿಸುತ್ತಿದ್ದರು. ಸಂಜೆ ಹೊತ್ತಿಗೆ ಎಲ್ಲಾ ಹಲಸಿನ ಹಣ್ಣುಗಳು ಆಸಕ್ತರ ಉದರ ಸೇರಿತ್ತು.

ಶಿರಸಿಯ ಕದಂಬ ಸಂಸ್ಥೆಯ ಮಳಿಗೆಯಲ್ಲಿ ಹಲಸಿನ 'ಬ್ರಾಂಡೆಡ್ ಹಪ್ಪಳ', ಹಲಸೇ ಬದುಕಾಗಿರುವ ಶಿರಸಿಯ ರೇಖಾ ಶರಶ್ಚಂದ್ರ ಹೆಗಡೆಯವರ ಮಳಿಗೆ, ಅಂಕುರ್ ನರ್ಸರಿ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ.. ಹೀಗೆ ಸಾಕಷ್ಟು ಮಳಿಗೆಗಳು. ಮತ್ತೊಂದೆಡೆ ಹಲಸಿನ ಖಾದ್ಯಗಳ 'ಲೈವ್' ತಯಾರಿ. ಧರ್ಮಸ್ಥಳ ಸುತ್ತುಮುತ್ತಲಿನ, ಬೆಂಗಳೂರು, ತುಮಕೂರುಗಳ ಉತ್ತಮ ಹಲಸಿನ ಹಣ್ಣುಗಳ ಪ್ರದರ್ಶನ.

ಮಿಕ್ಕಂತೆ ಮಾಮೂಲಿ. ಮಧ್ಯಾಹ್ನ ಭೋಜನಕ್ಕೆ 'ಅನ್ನ, ಮಜ್ಜಿಗೆ ಹೊರತುಪಡಿಸಿ' ಮಿಕ್ಕತೆ ಹಲಸಿಗೆ ಮಣೆ. ಸಭಾಮಂಟಪದಲ್ಲಿ ಭೋಜನದ ಬಳಿಕ ನಿಜವಾದ ಹಲಸು ಪ್ರಿಯರ ಉಪಸ್ಥಿತಿ! ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತಾದ ಪವರ್ಪಾಯಿಂಟ್ ಪ್ರಸ್ತುತಿ. 'ಇಂತಹ ಮೇಳಗಳಲ್ಲಿ ಹಲಸಿನ ಗಿಡಗಳ ಮಾರಾಟ ಬೇಕಿತ್ತು' ಎನ್ನುತ್ತಾರೆ, ಉಡುಪಿಯ ಕೃಷ್ಣ ಸಫಲ್ಯ

ತೂಬುಗೆರೆ ಹಲಸು ಬೆಳೆಗಾರರ ಸಂಘವು ತನ್ನೂರಿನ ಹಲಸಿನ ಸೊಳೆಗಳಿಗೆ 'ಉತ್ತಮ್' ಎಂಬ ಬ್ರಾಂಡೆಡ್ ಹೆಸರನ್ನಿಟ್ಟಿತ್ತು. ತೂಬೆಗೆರೆ ಯಾಕೆ, ನಮ್ಮೂರಿನ ಹಲಸಿಗೂ ಆ ಭಾಗ್ಯ ಇಲ್ವಾ. ಇದೆ, ಹುಡುಕುವ ಮನಸ್ಸುಗಳು ತಯಾರಾಗಬೇಕು. ಕೇವಲ ಋಣಾತ್ಮಕ ಚಿಂತನೆ, ಯೋಚನೆಗಳಿಂದ ಇದೆಲ್ಲಾ ಸಾಧ್ಯವಿಲ್ಲ ಬಿಡಿ.

'ಮೂವತ್ತು ವರುಷಗಳ ಹಿಂದೆ ನಮ್ಮ ಬೀಡಿನಲ್ಲಿ ಹಲಸಿನ ಹಣ್ಣಿನ ಹಲವಾರು ಖಾದ್ಯಗಳನ್ನು ಮಾಡುತ್ತಿದ್ದು, ಅವೆಲ್ಲವನ್ನೂ ಸವಿದಿದ್ದೇನೆ,' ಎಂದು ಕಳೆದ ಕಾಲವನ್ನು ನೆನಪಿಸಿಕೊಂಡರು, ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಲಸು ಬೆಳೆಗಾರರಿಗೆ ಒಂದು ಸಾವಿರ ಕಸಿ ಗಿಡಗಳನ್ನು ವಿತರಿಸಿದ್ದು ಮೇಳದ ಹೈಲೈಟ್. 'ಹಲಸು ಕಲ್ಪವೃಕ್ಷ. ರೆಡಿ ಕು ಕುಕ್ ಆಗಿ ಹಲಸು ಸಿಕ್ಕರೆ ಬೇಡಿಕೆ ಅಪಾರವಿದೆ' ಎಂದು ಮೇಳವನ್ನು ಉದ್ಘಾಟಿಸಿ, ಕೃಷಿಕ ಡಾ.ಡಿ.ಸಿ.ಚೌಟ ಹೇಳಿದರು.

'ಮಳೆಗಾಲದಲ್ಲಿ ಹಲಸಿನ ಹಣ್ಣನ್ನು ಸವಿದರೆ, ತರಕಾರಿಯಂತೆ ಬಳಸಿದರೆ ಕಾಯಿಲೆಗಳು ಹೆಚ್ಚಂತೆ, ಮಕ್ಕಳಿಗೆ ಸೊಳೆ ಕೊಟ್ಟರೆ ಅನಾರೋಗ್ಯ ಕಾಡುತ್ತದಂತೆ, ಹೌದಾ' ಎಂದು ಮಳಿಗೆಯೊಂದರಲ್ಲಿ ಮಹಿಳೆಯೋರ್ವಳು ವಿಚಾರಿಸುತ್ತಿದ್ದರು. ಇಂತಹ ತಪ್ಪು ಸಂದೇಶ ಯಾಕೆ ಆ ಮಹಿಳೆಯ ತಲೆ ಹೊಕ್ಕಿತೋ? ಅತಿಯಾದರೆ ಎಲ್ಲವೂ ವಿಷ!

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ಕೃಷಿಕ ಸಮಾಜ ಮಂಗಳೂರು - ಈ ಎಲ್ಲಾ ಸಂಸ್ಥೆಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಹೆಗಲೆಣೆ ನೀಡಿದ್ದುವು.

ಧರ್ಮಸ್ಥಳ : ಹಲಸು ಮೇಳ






ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾರಥ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ 'ಅಮೃತವರ್ಷಿಣಿ' ಸಭಾಂಗಣದಲ್ಲಿ ಜೂನ್ 17, 18ರಂದು ಹಲಸು ಮೇಳ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ಕೃಷಿಕ ಸಮಾಜ ಮಂಗಳೂರು - ಈ ಎಲ್ಲಾ ಸಂಸ್ಥೆಗಳ ಹೆಗಲೆಣೆ. ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟರಿಂದ ದೀಪಜ್ವಲನದ ಮೂಲಕ ಮೇಳದ ಉದ್ಘಾಟನೆ. ಬೆಂಗಳೂರು ಕೃಷಿ ವಿವಿಯ ಉಪಕುಲಪತಿ ಡಾ.ನಾರಾಯಣ ಗೌಡರಿಂದ ದಿಕ್ಸೂಚಿ ಭಾಷಣ. ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ.

ಹಲಸಿನ ಉತ್ಪನ್ನಗಳ ವಿವಿಧ ಮಳಿಗೆಗಳು. ಹಲಸಿನ ಗಿಡಗಳ ಮಾರಾಟ. ಮಧ್ಯಾಹ್ನದೂಟಕ್ಕೆ ಹಲಸೇ ತರಕಾರಿ. ಧರ್ಮಸ್ಥಳ, ತುಮಕೂರು, ಬೆಂಗಳೂರು, ವಿಟ್ಲ ಸುತ್ತುಮುತ್ತಲಿನ ವಿವಿಧ ರುಚಿಗಳ ಹಲಸಿನ ಪ್ರದರ್ಶನ. ಬೆಂಗಳೂರು ತೂಬುಗೆರೆ ಹಲಸು ಬೆಳೆಗಾರರ ಸಂಘದಿಂದ ಹಲಸಿನ ಸೊಳೆಗಳ ಮಾರಾಟ. ವಿಟ್ಲ-ಉಬರು 'ಹಲಸು ಸ್ನೇಹಿ ಕೂಟ'ದಿಂದ ಆ ಭಾಗದ ಉತ್ತಮ ಹಲಸಿನ ಹಣ್ಣಿನ ಪ್ರದರ್ಶನ ಮತ್ತು ಮಾರಾಟ. ಮಿಕ್ಕುಳಿದಂತೆ ಮಾಮೂಲಿ. ವೇದಿಕೆಯಲ್ಲಿ ಹಲಸಿನ ಮಾತುಕತೆ. ಬೆಳಗ್ಗೆ ಸಭಾಭವನ ತುಂಬಿದರೂ, ನಿಜವಾದ ಹಲಸುಪ್ರಿಯರ ದರ್ಶನವಾದುದು ಭೋಜನದ ಬಳಿಕ.

ಉಬರಿನಲ್ಲಾದಂತೆ 'ರುಚಿ ನೋಡಿ, ತಳಿ ಆಯ್ಕೆ' ಪ್ರಕ್ರಿಯ, ಖಾದ್ಯಗಳ ತಯಾರಿ ಮತ್ತು ಸ್ಪರ್ಧೆ’, ಹಲಸಿನ ಕಾಯಿ ಮತ್ತು ಹಣ್ಣು ಸೊಳೆ, ಬೀಜಗಳ ಮೌಲ್ಯವರ್ಧನೆ ಮಾಡುವತ್ತ ವಿಶೇಷ ಗಮನವನ್ನು ಮೇಳಗಳು ಗಮನ ಹರಿಸಬೇಕು. ವಿಟ್ಲದ 'ಹಲಸು ಸ್ನೇಹಿ ಕೂಟ' ಮತ್ತು ಡಾ.ಡಿ.ಸಿ.ಚೌಟರ ನೇತೃತ್ವದಲ್ಲಿ ಹಲಸಿನ ಕಾಯಿ, ಸೊಳೆಗಳ ಮಾರಾಟದ ಪ್ರಾಯೋಗಿಕ ಪ್ರಯತ್ನಗಳು ಯಶ ಕಂಡಿವೆ. ಇಂತಹುದೇ ಪ್ರಕ್ರಿಯೆಗಳು ಗ್ರಾಮ ಮಟ್ಟದಲ್ಲಿ ನಡೆಯುವಂತಾಗಲು ಹಲಸು ಮೇಳಗಳು ಪ್ರೇರಣೆ ಕೊಡಬೇಕು. 'ಹಲಸು ತಿಂದರೆ ಆರೋಗ್ಯ ಹಾಳಾಗುತ್ತದೆ' ಎಂಬ ಮೈಂಡ್ ಸೆಟ್ಟನ್ನು ದೂರಮಾಡುವುದು ಹಲಸು ಮೇಳಗಳ ಮೊದಲಾದ್ಯತೆಯಾಗಬೇಕು. ತೂಬುಗೆರೆ ಹಲಸು ಬೆಳೆಗಾರರ ಸಂಘವು ತಯಾರಿಸಿದ ಒಂದು ಸಾವಿರ ಹಲಸಿನ ಗಿಡಗಳನ್ನು ಬೆಳೆಗಾರರಿಗೆ ವಿತರಿಸಿರುವುದು ಮೇಳದ ಧನಾಂಶ.

Thursday, June 14, 2012

'ಒಂದು ಖಂಡಿ ಅಡಕೆಗೆ ಒಂದೂವರೆ ಪವನ್ ಚಿನ್ನ!'


'ಡಾ.ಶಿವರಾಮ ಕಾರಂತರು ಬೆಟ್ಟದ ಜೀವ ಕಾದಂಬರಿ ಬರೆಯುವ ಮುನ್ನ ಈ ಮನೆಯಲ್ಲಿ ಹದಿನೈದು ದಿವಸ ಅತಿಥಿಯಾಗಿದ್ದು ಇಲ್ಲಿನ ಬದುಕಿನ, ಪರಿಸರಕ್ಕೆ ಮಾರುಹೋಗಿದರು,' ಎಂದು ಪಳಂಗಾಯ ಸದಾಶಿವ ಗೌಡರು ನೂರೈವತ್ತು ವರುಷದ ಮನೆಯನ್ನು ಪರಿಚಯಿಸುತ್ತಾ, ಹಿರಿಯರ ಬದುಕನ್ನು ಜ್ಞಾಪಿಸಿಕೊಂಡರು.

ಸುಳ್ಯ ತಾಲೂಕಿನ 'ಬಂಟಮಲೆ' ಎಂಟು ಗ್ರಾಮಗಳನ್ನು ಒಳಗೊಂಡಿದ್ದು, ಅದರಲ್ಲೊಂದು 'ಪಳಂಗಾಯ'. ದಟ್ಟ ಕಾನನದ ಮಧ್ಯೆ ಕಳೆದ ಶತಮಾನದ ಆದಿಯಲ್ಲೇ ಅಡಿಕೆ, ತೆಂಗು ಬೆಳೆಸಿ ಗೌರವದ ಬಾಳನ್ನು ಬಾಳಿದ್ದರು. ಬಳಿಕ ಅವರ ಮೊಮ್ಮಕ್ಕಳು ಕೃಷಿಯನ್ನು ಅಭಿವೃದ್ಧಿಪಡಿಸಿದರು. ದೇರಣ್ಣ ಗೌಡರು ವಾಸವಾಗಿದ್ದ ಮನೆಗೀಗ ಶತಮಾನ ದಾಟಿದೆ.

ಪಂಜದಿಂದ ಕೂತ್ಕುಂಜ ದಾರಿಯಾಗಿ ಪಳಂಗಾಯಕ್ಕೆ ಏಳು ಕಿಲೋಮೀಟರ್ ದೂರ. ಕೂತ್ಕುಂಜದಿಂದ ಕಾಡಿನ ಮಧ್ಯೆ ಐದು ಕಿಲೋಮೀಟರ್ ಕಚ್ಚಾರಸ್ತೆ. 1906ರಲ್ಲಿ ಬ್ರಿಟಿಷ್ ಸರಕಾರವಿದ್ದಾಗ ದೇರಣ್ಣ ಗೌಡರು ಎತ್ತಿನ ಗಾಡಿ ಹೋಗುವಷ್ಟು ಅಗಲಕ್ಕೆ ರಸ್ತೆ ನಿರ್ಮಿಸಿದ್ದರು. ಸುತ್ತು ಬಳಸು ದಾರಿ. ವರುಷಕ್ಕೆ ಎರಡು ರೂಪಾಯಿ ತೆರಿಗೆಯನ್ನು ಸರಕಾರಕ್ಕೆ ನೀಡುತ್ತಿದ್ದರು! ದೇರಣ್ಣ ಗೌಡರ ಮೊಮ್ಮಕ್ಕಳಲ್ಲೊಬ್ಬರಾದ ವಾಸುದೇವ ಗೌಡರು 'ಪಿಜ್ಜ'ನ ಕಾಲದ ಕೃಷಿ ಬದುಕನ್ನು ಮೆಲುಕುಹಾಕುತ್ತಾರೆ :

ಬ್ರಿಟಿಷರ ಆಳ್ವಿಕೆಯ ಕಾಲ. ಭದ್ರತೆಗಾಗಿ ಗುಡ್ಡದ ಮಧ್ಯೆ ಜೀವನ ರೂಪೀಕರಣ. ಕಾಲ್ನಡಿಗೆಯಲ್ಲಿ ಪ್ರಯಾಣ. ಕೆಲಸಕ್ಕೆ ಜನ ಯಥೇಷ್ಟ. ಗುಡ್ಡ ಪ್ರದೇಶದಲ್ಲಿ ಅಡಕೆ, ತೆಂಗು; ಕೆಳ ಪ್ರದೇಶದಲ್ಲಿ ಭತ್ತ, ಕಬ್ಬು ಕೃಷಿ. ಭತ್ತದ ಬೇಸಾಯದ ನಂತರ ಅಡಕೆ ಕೃಷಿಯ ಕೆಲಸಕ್ಕೆ ಸಹಾಯಕರು ಬರುತ್ತಿದ್ದರು. ದನಿ, ಆಳು ಸಂಬಂಧ ಗಟ್ಟಿ ಮತ್ತು ಸಮಾನ. ಊಟ-ತಿಂಡಿಗಳು ಬರೋಬ್ಬರಿ.

ಗುಡ್ಡ ಪ್ರದೇಶ. ಕಲ್ಲುಗಳನ್ನು ಒಡೆದು, ಕಟ್ಟಿ ಸಮತಟ್ಟು ಮಾಡಿ ತೋಟ ಎಬ್ಬಿಸಿದ್ದರು. ಅಧಿಕ ಜಲ ಸಂಪತ್ತು. ಅಡಕೆಯನ್ನು ಗಾಡಿಗಳಲ್ಲಿ ಪೇರಿಸಿ ಸಾಗಾಟ. ಒಂಟಿ ಪ್ರಯಾಣ ತ್ರಾಸ, ದರೋಡೆ ಭೀತಿ. ಹಾಗಾಗಿ ಕೃಷಿಕರೆಲ್ಲಾ ಜತೆಸೇರಿ ಎತ್ತಿನಗಾಡಿಗಳಲ್ಲಿ ಅಡಕೆ ಸಾಗಿಸುತ್ತಿದ್ದರು. ಪಳಂಗಾಯದಿಂದ ಪಾಣೆಮಂಗಳೂರಿಗೆ ಗಾಡಿಗಳಲ್ಲಿ ಪ್ರಯಾಣ, ನಂತರ ಬೋಟಿನಲ್ಲಿ ಅಡಕೆ ಗೋಣಿಗಳು ಮಂಗಳೂರು ಸೇರುತ್ತಿತ್ತು. ಐದಾರು ದಿವಸಕ್ಕೆ ಸಾಕಾಗುವಷ್ಟು ಅಡುಗೆ ಪರಿಕರಗಳು ಗಾಡಿಯಲ್ಲಿರುತ್ತಿದ್ದುವು. ಅಡಕೆ ಮಾರಿ ಮರಳುವಾಗ ಮೀನು, ಜೀನಸು ಸಾಮಾನುಗಳು.

ಪಂಜದಲ್ಲಿ ಬ್ರಿಟಿಷರ ಬಂಗ್ಲೆಯಿತ್ತು. ಅದರ ಕುರುಹು ಈಗಲೂ ಇದೆ. ಅವರು ಬಂಟಮಲೆಯನ್ನು ಸರ್ವೇ ಮಾಡಿದ್ದಾರೆ. ಕೋವಿಧಾರಿ ಅಧಿಕಾರಿಗಳು ವರುಷಕ್ಕೆರಡು ಸಲ ತಪಾಸಣೆಗೆ ಬರುತ್ತಿದ್ದರಂತೆ. ಅವರಿಗೆ ಅಂಜಿ ತಲೆಮರೆಸಿಕೊಳ್ಳುವವರೇ ಹೆಚ್ಚು. ದೇರಣ್ಣ ಗೌಡರು ಧೈರ್ಯದಿಂದ ಬರಮಾಡಿಕೊಂಡು, ಕೋಳಿ ಮಾಂಸದೂಟದ ಸಮಾರಾಧನೆ ಮಾಡಿಸುತ್ತಿದ್ದರು. ಕಾಡಿನಿಂದ ಸಂಗ್ರಹಿಸಿದ ಶುದ್ಧ ಜೇನನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳು ಖುಷಿಯಾಗಿ ತಂಟೆ ಬರುತ್ತಿರಲಿಲ್ಲ.

ದೇರಣ್ಣ ಗೌಡರ ಹಳೆಮನೆಗೆ ಆರಂಭದಲ್ಲಿ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಕಟ್ಟಿಸಿದ ಮನೆಯೀಗ ಶತಮಾನ ಆಯುಸ್ಸಿಗೆ ಸಾಕ್ಷಿಯಾಗಿದೆ. ನಿರ್ಮಾಣಕ್ಕೆ ಬೇಕಾದ ಹಂಚುಗಳು ಪಾಣೆಮಂಗಳೂರಿನಿಂದ ಪಂಜದವರೆಗೆ ಗಾಡಿಯಲ್ಲಿ ಬಂದಿತ್ತು. ಅಲ್ಲಿಂದ ಪಳಂಗಾಯಕ್ಕೆ ತಲೆಹೊರೆ. ಮರಮಟ್ಟುಗಳೆಲ್ಲಾ ಕಾಡಿಂದ ಬೇಕಾದಂತೆ ಕಡಿದುಕೊಳ್ಳಬಹುದಿತ್ತು. ಮರದ ಕುರಿತಂತೆ ಕಾನೂನು ಆಗ ರೂಪಿತವಾಗಿರಲಿಲ್ಲ. ಹಾಗಾಗಿಯೇ ಇರಬೇಕು, ಪಿಜ್ಜ ಕಟ್ಟಿಸಿದ ಮನೆಯ ಪಕ್ಕಾಸು, ಬಾಗಿಲು, ಸ್ಥಂಭಗಳು ಒಂದೊಂದು ಮರದಷ್ಟು ದೊಡ್ಡದಾಗಿವೆ!

ಹಿಂದಿನವರ ಲೈಫ್ಸ್ಟೈಲ್ ಭಿನ್ನ. ಅದರಲ್ಲಿ ಗೊಣಗಾಟವಿರಲಿಲ್ಲ, ಆನಂದವಿತ್ತು. ಬಂದುದನ್ನು ಬಂದ ಹಾಗೆ ಸ್ವೀಕರಿಸುವ ಛಾತಿಯಿತ್ತು. ದೇರಣ್ಣ ಗೌಡರು ಕಠಿಣ ದುಡಿಮೆಗಾರ. ಕಾಡಿನ ಮಧ್ಯದ ಐದು ಕಿಲೋಮೀಟರ್ ದೂರದ ಕಚ್ಚಾರಸ್ತೆಯನ್ನು ಸಹಾಯಕರೊಂದಿಗೆ ಸ್ವತಃ ಮಾಡಿದ್ದರು. ಬ್ರಿಟಿಷ್ ಅಧಿಕಾರಿಯ ಸಹಕಾರದಿಂದ ಇಂಜಿನಿಯರ್ ಒಬ್ಬರ ಸಲಹೆಯನ್ನೂ ಪಡದುಕೊಂಡಿದ್ದರು. ಕಲ್ಲನ್ನು ಎಬ್ಬಿಸಲು ಬಳಸುವ ಆರೇಳು ಅಡಿ ಉದ್ದದ ಕಬ್ಬಿಣದ 'ಸಬ್ಬಲ್' ಮಾರ್ಗ ಪೂರ್ತಿಯಾಗುವಾಗ ಸವೆದು ಒಂದು ಅಡಿಗೆ ಇಳಿದಿತ್ತು!

ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡರು ಅಧ್ಯಾಪಕರಾಗಿ ಪಂಜಕ್ಕೆ ವರ್ಗವಾಗಿ ಬಂದರು. ಪಳಂಗಾಯದಲ್ಲಿ ವಸತಿ. ನಿತ್ಯ ಕಾಲ್ನಡಿಗೆಯಲ್ಲಿ ಪಂಜಕ್ಕೆ ಹೋಗಿ ವಾಪಾಸಾಗುತ್ತಿದ್ದರು. ಇವರು ಬಂದ ಮೇಲೆ ಪಿಜ್ಜನಿಗೆ ಭೀಮಬಲ ಬಂದಿತ್ತು. ಕಾರಣ, ಪುಟ್ಟಣ್ಣ ಗೌಡರಿಗೆ ಆಂಗ್ಲ ಭಾಷೆ ಗೊತ್ತಿತ್ತು. ಮುಂದೆ ಬ್ರಿಟಿಷ್ ಅಧಿಕಾರಿಗಳೊಂದಿಗೆ ಸಲೀಸಾದ ವ್ಯವಹಾರ

ಗೌಡರ ತಲೆಯೊಲ್ಲೊಂದು 'ರಾಜ ಮುಟ್ಟಾಳೆ'. ವಿಶೇಷ ವಿನ್ಯಾಸದ, ಅಲಂಕಾರದ ಈ ಮುಟ್ಟಾಳೆಯೊಳಗೆ ಹಣವನ್ನು ಗೌಪ್ಯವಾಗಿಡುವ ವ್ಯವಸ್ಥೆಗಳಿದ್ದುವು. ಉಳ್ಳವರು ಮಾತ್ರ ಮುಟ್ಟಾಳೆಯನ್ನು ಧರಿಸಬಹುದಾಗಿತ್ತು. ಸಮೀಪದ ಜಾತ್ರೆಗಳಿಗೆ ಹೋದರೆ ದಾನದಲ್ಲಿ ಧಾರಾಳಿ. ತಾನು ಧರಿಸಿದ ಅಂಗಿಯನ್ನೇ ದಾನ ಮಾಡಿದ ಕರ್ಣ!

1946ರ ಸುಮಾರಿಗೆ ಒಂಭತ್ತು ಎಕ್ರೆ ಅಡಿಕೆ ಕೃಷಿಯಿತ್ತು. ಮೂವತ್ತೈದು ಖಂಡಿ ಅಡಕೆ ಮಾರಾಟ ಮಾಡುತ್ತಿದ್ದರು. ಅವರೊಂದಿಗೆ ಅಡಕೆ ವ್ಯಾಪಾರ ಮಾಡುತ್ತಿದ್ದವರೊಬ್ಬರು ಹೇಳಿದ್ದರು, 'ಒಂದು ಖಂಡಿ (ಎರಡೂವರೆ ಕ್ವಿಂಟಾಲ್) ಅಡಕೆಗೆ ಒಂದೂವರೆ ಪವನ್ ಚಿನ್ನವನ್ನು ಖರೀದಿಸುತ್ತಿದ್ದರಂತೆ. ನಗದು ಅಂದರೆ ಅವರಿಗೆ ಅಷ್ಟಕ್ಕಷ್ಟೇ'. ಚಿನ್ನದ ಕುರಿತು ಆಗಲೇ ದೂರದೃಷ್ಟಿ ಇತ್ತು.

ಅಡಕೆಯ ಕೊಳೆರೋಗಕ್ಕೆ ಬೋರ್ಡೋ ದ್ರಾವಣ ಸಿಂಪಡಿಸುತ್ತೇವಷ್ಟೇ. ಆಗ ಕೊಳೆರೋಗ ಇತ್ತೋ ಇಲ್ಲವೋ, ದೇರಣ್ಣ ಗೌಡರು 'ರಾಳ ಪಾಕ'ವನ್ನು ಮಾಡಿ ಸಿಂಪಡಿಸುತ್ತಿದ್ದರು. ರಾಳದ ಹುಡಿಗೆ ಏನನ್ನು ಮಿಕ್ಸ್ ಮಾಡುತ್ತಿದ್ದರು ಅಂತ ಗೊತ್ತಿಲ್ಲ. ಆ ಹೊತ್ತಲ್ಲಿ ಪಾಕ ಮಾಡುವವರ ಕೈಯ ಸಿಪ್ಪೆ ಎದ್ದುಹೋಗುತ್ತಿದ್ದುವಂತೆ. ಅಡಕೆ ತೋಟವಿದ್ದವನಿಗೆ ಸಮಾಜದಲ್ಲಿ ಪ್ರತ್ಯೇಕ ಮಣೆ. ಅಡಕೆ ಇದ್ದವರಲ್ಲಿ ಹಣದ ಚಲಾವಣೆಯಿತ್ತು. ಆ ಕಾಲದಲ್ಲೆ ಅಡಕೆ ಬೀಜವನ್ನು ಆಯ್ಕೆ ಮಾಡಿ ನೆಟ್ಟದ್ದರಿಂದ ಉತ್ತಮ ಇಳುವರಿ. ಅಡಿಕೆ ಸಸಿಗಳನ್ನು ಒಯ್ಯಲು ದೂರದೂರಿಂದ ಕೃಷಿಕರು ಬರುತ್ತಿದ್ದರು.

ವರುಷಕ್ಕೊಮ್ಮೆ ಬೇಟೆ. ಕಡವೆ ಸಿಕ್ಕಿದರೆ ಕೊಂದು ಇಡೀ ಊರಿಗೆ ಸಮಾರಾಧನೆ. ಬ್ರಿಟಿಷ್ ಅಧಿಕಾರಿಗಳಿಗೂ ಕೂಡಾ. ಈಗ ಕಾನೂನಿನ ಭೀತಿಯಿತ್ತು. ಪಂಜದಲ್ಲಿರುವ ಬ್ರಿಟಿಷ್ ಬಂಗ್ಲೆಯ ಸೂರಿಗೆ ಊರಿನವರೇ ಗೌರವದಿಂದ ಸೋಗೆ ಹಾಸುತ್ತಿದ್ದುರು. ಅಧಿಕಾರಿಗಳಿಗೆ ಮತ್ತು ದೇರಣ್ಣ ಗೌಡರಿಗೆ ಸಲುಗೆಯಿತ್ತು. ತನ್ನಲ್ಲಿದ್ದ ರೈಫಲ್ ಕೊಟ್ಟು 'ಶೂಟ್ ಮಾಡಿ' ಎಂದಿದ್ದರಂತೆ. ಗೌಡರು ಶೂಟ್ ಮಾಡಿದಾಗ ಬುಲ್ಲೆಟ್ ಮರವನ್ನು ಸೀಳಿ ಹಾರಿ ಹೋದುದನ್ನು ನೋಡಿ ಬೆರಗಾಗಿದ್ದರು. ದೇರಣ್ಣ ಗೌಡರಲ್ಲಿ ಕೋವಿ ಇತ್ತು. ಕಾಡುಪ್ರಾಣಿಗಳ ಮೇಲೆ ಪ್ರಯೋಗಿಸುತ್ತಿದ್ದರು. ಆಗ ಕೋವಿ ಹೊಂದಲು ಲೈಸನ್ಸ್ ಬೇಕಾಗಿರಲಿಲ್ಲ. 1950ರ ಬಳಿಕ ಪಳಂಗಾಯಕ್ಕೆ ವಾಹನ ಸೌಕರ್ಯ ಶುರು. ಪಿಜ್ಜನ ನೆನಪಿಗಾಗಿ ಈಗ ಉಳಿದಿರುವುದು ಮನೆ ಮಾತ್ರ.

ವಾಸುದೇವ ಗೌಡರು ತನ್ನ ಪಿಜ್ಜನ ಜೀವನವನ್ನು ವಿವರಿಸುತ್ತಾ ಹೋದಂತೆ, ಸುಖದೊಂದಿಗೆ ಕಷ್ಟಗಳನ್ನು ಅರಗಿಸಿಕೊಳ್ಳುವ ಲೈಫ್ಸ್ಟೈಲ್ ಗೋಚರಿಸಿತು. ಕಷ್ಟಗಳನ್ನು 'ಸಮಸ್ಯೆ' ಎನ್ನುತ್ತಾ ವೈಭವೀಕರಿಸಲಿಲ್ಲ. 'ತಂದೆ ಕರಿಯಪ್ಪ ಗೌಡರ ಕಾಲದಲ್ಲಿ ತೋಟದ ಕೆಲಸಗಳೆಲ್ಲಾ ವ್ಯವಸ್ಥಿತವಾಗಿ ನಡೆದುವು' ಎನ್ನುತ್ತಾರೆ. ಇಳಿಜಾರು ಪ್ರದೇಶವಾದ್ದರಿಂದ ಅಲ್ಲಲ್ಲಿನ ಬಂಡೆ ಕಲ್ಲನ್ನು ಕತ್ತರಿಸಿ, ಗೋಡೆ ಯಾ ಕಟ್ಟವನ್ನು ರಚಿಸಿರುವುದು ಆ ಕಾಲದ ದೇಸಿ ತಂತ್ರಜ್ಞಾನಕ್ಕೆ ಸಾಕ್ಷಿ. ಸುಮಾರು ಇಪ್ಪತ್ತು ವರ್ಷ ಸತತವಾಗಿ ಕಟ್ಟವನ್ನು ಕಟ್ಟುತ್ತಾ ಇದ್ದರಂತೆ. ಈ ಕೆಲಸಗಳಿಗೆ ಐತ್ತಪ್ಪ ಮೂಲ್ಯರು ಸಾರಥಿಯಗಿದ್ದು, ಈಗ ಸಾಕ್ಷಿಯಾಗಿ ಸಿಗುತ್ತಾರೆ. ಸದಾ ಜಿನುಗುವ ಒರತೆ ನೀರು. 1983ರಲ್ಲಿ ಜುಲಾಯಿ ತಿಂಗಳಲ್ಲಿ ಮಳೆಗಾಲ ಶುರುವಾಗಿತ್ತು. ಬಂಟಮಲೆ ಶಿಖರದಿಂದ ಇಳಿದು ಬರುವ ಒರತೆ ನೀರು ಪಳಂಗಾಯಕ್ಕೆ ನೀರಿನ ಬರವನ್ನು ಕೊಡಲಿಲ್ಲ.

ಈಚೆಗೆ ಏನೆಕಲ್ಲಿನ ಯಶೋಚಂದ್ರರ ಜತೆ ಭೇಟಿಯಿತ್ತೆ. 'ಹಳೆ ಮನೆ. ನಿರ್ವಹಣೆ ಕಷ್ಟವಲ್ವಾ' ಎಂದುದಕ್ಕೆ 'ಹಳೆ ಮನೆಯನ್ನು ಬದಲಾಯಿಸಿದರೆ ಆ ಮನೆಯ ಸಂಸ್ಕೃತಿಯ ಗುಣ ಕಳೆದುಹೋಗುತ್ತದೆ' ಎಂದವರು ಅದರಲ್ಲಿ ವಾಸವಾಗಿರುವ ಸದಾಶಿವ ಗೌಡರು.

ಹಿರಿಯರ ಕೊಡುಗೆಗಳನ್ನು ಮರೆಯದೆ, ಆಧುನಿಕ ಸೌಲಭ್ಯಗಳು ಬದುಕಿನೊಂದಿಗೆ ಥಳಕು ಹಾಕಿಕೊಂಡರೂ ಹಿರಿಯರ ಭೂಮಿಯೊಂದಿಗೆ ಬದುಕುತ್ತಿರುವ ಕುಟುಂಬಗಳನ್ನು ನೋಡಿ 'ಹೀಗೂ ಉಂಟೇ' ಎಂದು ಪ್ರಶ್ನಿಸಿಕೊಂಡೆ. 'ಇಂತಹ ಕಷ್ಟದ ಬದುಕನ್ನು ಮಕ್ಕಳಿಗೆ ಹೇಳಬೇಕು. ಅದನ್ನವರು ಓದಬೇಕು', ಏನಂತೀರಿ?


Sunday, June 3, 2012

ಬದುಕಲ್ಲಿ ಮೊಗೆದ ಪ್ರಕೃತಿಯ ರಸಗಟ್ಟಿ




ವದ್ವ ವೆಂಕಟ್ರಮಣ ಭಟ್ ಅಳಿಕೆಯಲ್ಲಿ (ದ.ಕ.) ಭೌತಶಾಸ್ತ್ರ ಉಪನ್ಯಾಸಕ. ಗಿಡ, ಬಳ್ಳಿ, ಮರಗಳ ಕುರಿತು ಸ್ವಯಾರ್ಜಿತ ಸಸ್ಯಶಾಸ್ತ್ರೀಯ ಅಧ್ಯಯನ. ಪಾಠದಷ್ಟೇ ಹಸಿರಿಗೂ ಮಾನ, ಸಂಮಾನ. ಬದುಕಿನ ಕ್ಷಣವನ್ನೂ ಅನುಭವಿಸುವ ಸೂಕ್ಷ್ಮಸಂವೇದಿ. ಮೂವತೈದು ಹವ್ಯಾಸಗಳ ಸಂಪನ್ನತೆ.

ಸಾವಿರಕ್ಕೂ ಮಿಕ್ಕಿದ ಔಷಧೀಯ ಗಿಡಗಳ ಸಂರಕ್ಷಣೆ ಹವ್ಯಾಸಗಳಲ್ಲೊಂದು. ಅಳಿವಿನಂಚಿನಲ್ಲಿರುವುದಕ್ಕೆ ಆದ್ಯತೆ. ಹಣ ನೀಡಿ ತಂದವುಗಳೇ ಅಧಿಕ. ನೂರು ರೂಪಾಯಿಯಿಂದ ಸಾವಿರದ ತನಕ. ಕೇರಳ-ಕರ್ನಾಟಕದ ನರ್ಸರಿಗಳು ನೆಂಟರ ಮನೆಯಂತೆ! ಅದರೊಳಗೆ ನುಗ್ಗಿ ಹೊರ ಬರುವಾಗ 'ಇದನ್ನು ಹುಡುಕುತ್ತಾ ಇದ್ದೆ, ಸಿಕ್ಕಿತು ನೋಡಿ,' ಸಂತೋಷವನ್ನು ಹಂಚಿಕೊಳ್ಳುತ್ತಾರೆ.

ವದ್ವದವರು ಮಾರುತಿ ಓಮ್ನಿಯಲ್ಲಿ ಹೊರಟರೆಂದರೆ, ಮರಳುವಾಗ ಹೊಸ ಗಿಡಗಳ ಸಂಗ್ರಹ. ಮಡದಿ ಶಾರದಾ ವ್ಯವಸ್ಥಿತವಾಗಿ ಪೇರಿಸಿಡಲು ಸಿದ್ಧರಾಗಿರುತ್ತಾರೆ. ಪ್ರಯಾಣದುದ್ದಕ್ಕೂ ಸಿಗುವ ನರ್ಸರಿಗಳಿಗೆ ಭೇಟಿ. ಬರಿಗೈಯಲ್ಲಿ ಮರಳಿದುದು ಕಡಿಮೆ. ಗಿಡಗಳ ಸಸ್ಯಶಾಸ್ತ್ರೀಯ ಹೆಸರುಗಳು, ಗುಣಧರ್ಮಗಳು ನಾಲಗೆತುದಿಯಲ್ಲಿರುವುದರಿಂದ ನರ್ಸರಿಗಳಲ್ಲಿ ಇವರು ಮೋಸ ಹೋಗುವುದು ಕಡಿಮೆ!

ಮೂರು ದಶಕಗಳ ಸಂಗ್ರಹದ ಫಲವಾಗಿ, ಅವರ ಭೂಮಿಯಲ್ಲಿ ಮೆಟ್ಟಿದ್ದೆಲ್ಲಾ ಕಳೆಯಲ್ಲ. ಮುಟ್ಟಿದ್ದೆಲ್ಲಾ ಕಸವಲ್ಲ! ಎಲ್ಲವೂ ಔಷಧೀಯ ಸಂಬಂಧಿ ಸಸ್ಯಗಳೇ. ಮಾತಿಗೆ ಸಿಕ್ಕಾಗಲೆಲ್ಲಾ ಪರಿಸರದ್ದೇ ಸುದ್ದಿ-ಮಾತುಕತೆ. ಅಂತಹವರ ಒಡನಾಟದ ಹಪಹಪಿಕೆ. ಕಾಡು ಹರಟೆಯಿಂದ ದೂರ. ನಿರಂತರ ಜ್ಞಾನದಾಹ. ಪ್ರಯಾಣ ಹೋಗುವಾಗಲೆಲ್ಲಾ ಸಮಾನ ಆಸಕ್ತರನ್ನು ಒಂದಿಗೆ ಕರೆದೊಯ್ಯುವುದು ಜಾಯಮಾನ. ಚಾಲಕನ ಆಸನದಲ್ಲಿದ್ದರೂ ಹೊಸ ಗಿಡಗಳ ಹುಡುಕಾಟದಲ್ಲಿ ಮೂರನೇ ಕಣ್ಣು ಜಾಗೃತ.

'ನೋಡಿ. ಇದು ಅಶ್ವಗಂಧ, ಮಧುನಾಶಿನಿ, ಮಣಿತೊಂಡೆ, ಭೂತಪಚ್ಚೆ, ಮಾಣಿಕ್ಯ, ಜಾಪಾಳ, ವಿಷಘ್ನ, ಇರುವೇರಿ..' ಎನ್ನುತ್ತಾ ಮಾತಿಗೆಳೆಯುತ್ತಾರೆ. ಒಂದೊಂದು ಗಿಡಗಳ ಹತ್ತಿರ ಹೋದಾಗ ಅವುಗಳ ಪೂರ್ಣ ಪರಿಚಯ ಪ್ರಸ್ತುತಿ. ಗುಣಧರ್ಮಗಳ ವಿಶ್ಲೇಷಣೆ. ಔಷಧೀಯ ಮರ್ಮಗಳ ವಿವರಣೆ. ಹಿರಿಯರು ಬಳಸುತ್ತಿದ್ದ ವಿಧಾನಗಳ ನೆನವರಿಕೆ.

ಹೊಸ ಗಿಡಗಳು ಸೇರ್ಪಡೆಯಾದರೆ, ಅದನ್ನು ಅಭಿವೃದ್ಧಿ ಪಡಿಸಿ ಆಸಕ್ತರಿಗೆ ಹಂಚುತ್ತಾರೆ. ಹಂಚಿದಲ್ಲಿಗೆ ಮುಗಿಯುವುದಿಲ್ಲ. ಫೀಡ್ಬ್ಯಾಕ್ ಪಡೆಯುತ್ತಾರೆ. 'ಎಷ್ಟೋ ಮಂದಿ ಆಸಕ್ತಿಯಿಂದ ಬರುತ್ತಾರೆ. ಸಮಯ ಹೊಂದಿಸಿಕೊಂಡು ಗಿಡಗಳ ಔಷಧೀಯ ವಿಚಾರಗಳನ್ನು ಹೇಳುತ್ತೇನೆ. ಮರಳುವಾಗ ಗಿಡಗಳನ್ನು ಉಚಿತವಾಗಿ ಉಡುಗೊರೆ ಕೊಟ್ಟು ಕಳುಹಿಸುತ್ತೇನೆ. ಅದನ್ನು ಗೇಟಿನ ಪಕ್ಕವೇ ಬಿಸಾಡಿ ಹೋಗುವ ಸಸ್ಯಪ್ರಿಯರೂ ಇದ್ದಾರೆ! ಎನ್ನುತ್ತಾರೆ.

ಪ್ರಕೃತಿಯಲ್ಲಿ ಯಾವುದೂ ಕಳೆಯಿಲ್ಲ. ಎಲ್ಲವೂ ಉಪಯೋಗಿ. ನೋಡುವ ದೃಷ್ಟಿಕೋನ, ಭವಿಷ್ಯದ ನೋಟ ಬೇಕು. ಆಗ ಗಿಡಗಳ, ಪ್ರಕೃತಿಯತ್ತ ಮೋಹ ಹುಟ್ಟುತ್ತದೆ. ವದ್ವ ಮನೆಯಲ್ಲಿ ಪರಿಸರ ಕುರಿತು ಮಾತನಾಡುತ್ತಿದ್ದಂತೆ ನಾವು ಅದೇ ಆಗಿಬಿಡುತ್ತೇವೆ.

'ನಾನು ಯಾವುದಕ್ಕೂ ಶೇಪ್ ಕೊಟ್ಟಿಲ್ಲ. ಕಾಡಿನಂತೆ ಬೆಳೆದಿವೆ. ಕೆಲವೊಂದು ಗಿಡಗಳಿಗೆ ಕಾಡಿನ ವಾತಾವರಣ ಬೇಕು. ಎಲ್ಲವೂ ನ್ಯಾಚುರಲ್ ಆಗಿದೆ. ನನ್ನ ಅಣ್ಣ ಬಂದರೆ ಅವನಿಗೆ ಕಾರು ನಿಲ್ಲಿಸಲು, ತಿರುಗಿಸಲು ಜಾಗವೇ ಇಲ್ಲ!' ಎನ್ನುವಾಗ ಬೇಸರವಿಲ್ಲ, ಖುಷಿ. ಇಲ್ಲ್ಲಿ ಔಷಧೀಯ ಸಸ್ಯಗಳ ಪರಿವಾರದೊಂದಿಗೆ ಬಗೆಬಗೆಯ ಹೂಗಳು, ಆರ್ಕಿಡ್, ಕ್ರೋಟಾನ್, ಹಣ್ಣಿನ ಗಿಡಗಳ ಸಂಸಾರಗಳೂ ಇವೆ.

'ಮೂವತ್ತು ವರುಷದ ಹಿಂದೆ ಇದು ಬೋಳುಗುಡ್ಡ. ನಾನು ಎಂಟನೇ ತರಗತಿಯಲ್ಲಿದ್ದಾಗ ಕೃಷಿಯ ಟಚ್ ಸಿಕ್ಕಿತು. ಆಗ ನೆಟ್ಟ ಮಾವಿನ ಮರಗಳು ಈಗ ಫಲ ಕೊಡುತ್ತವೆ. ಅದನ್ನು ಸವಿಯುವುದು ಎಷ್ಟು ಖುಷಿ ಅಲ್ವಾ. ಗಿಡಗಳೊಂದಿಗೆ ನಾವು ನಿತ್ಯ ಟ್ಯೂನ್ ಆಗುತ್ತಾ ಇರಬೇಕು. ಅಂತಹವರಿಗೆ ಕೃಷಿ ಓಕೆ,' ಅನುಭವ ಸಾರುವ ಸಂದೇಶ.

'ಅಳಿಕೆ ಪರಿಸರದಲ್ಲಿ ಒಂದು ನೂರು ಎಂಭತ್ತೆರಡು ವೆರೈಟಿ ಹಕ್ಕಿಗಳನ್ನು ಗುರುತು ಹಿಡಿದಿದ್ದೇನೆ. ಈಗ ಇಪ್ಪತ್ತು ಸಿಕ್ಕರೆ ಪುಣ್ಯ.' ಕಾರಣ ಕೃಷಿಗೆ, ತೋಟಗಾರಿಕೆಗೆ ವ್ಯಾಪಕವಾಗಿ ಬಳಸುತ್ತಿರುವ ವಿಷ ಸಿಂಪಡಣೆ. ಹಕ್ಕಿಗಳಿಗೆ ಬೇಕಾದ ಹಣ್ಣು ಹಂಪಲುಗಳೆಲ್ಲಾ ವಿಷಮಯವಾಗಿದೆ. ಮೊದಲೆಲ್ಲಾ ಮನೆಗಳಲ್ಲಿ ಗುಬ್ಬಚ್ಚಿ ಗೂಡು ಕಟ್ಟುತ್ತಿತ್ತು. ಈಗೆಲ್ಲಿ? ಜೇನು ಸಂಸಾರವೆಲ್ಲಿ? ಅವುಗಳಿಗೆ ಪ್ರಿಯವಾದ ಹೂಗಳೆಲ್ಲಿ? ಹೀಗೆ ಪ್ರಕೃತಿಯನ್ನು ಓದುತ್ತಾ ಹೋದಂತೆ ಭವಿಷ್ಯದ ಕರಾಳದ ಕ್ಷಣಗಳು ಮಿಂಚಿ ಮರೆಯಾಗುತ್ತವೆ.

ವೆಂಕಟ್ರಮಣ ಭಟ್ಟರಿಗೆ ಗಿಡ, ಸಸ್ಯಗಳು ಅವರ ಮತ್ತೊಂದು ಹೃದಯ. ಅಂತೆಯೇ ಚಿಟ್ಟೆ, ಅಣಬೆ, ಜೇಡಗಳೂ ಕೂಡಾ. ಮೂವತ್ತು ಸಾವಿರಕ್ಕೂ ಮಿಕ್ಕಿದ ಚಿತ್ರಗಳು ಅವರ ಕಂಪ್ಯೂಟರ್ನಲ್ಲಿ ಅಪ್ಡೇಟ್ ಆಗುತ್ತಾ ಇರುತ್ತದೆ. ಇವುಗಳು ನೆಟ್ನಿಂದ ಇಳಿಸಿದವುಗಳಲ್ಲ. ಸ್ವತಃ ಕ್ಲಿಕ್ಕಿಸಿದವುಗಳೇ!

'ಈ ವಾರ ಐನೂರು ಫೋಟೋ ಹೊಡೆದೆ. ಕಳೆದ ನಾಲ್ಕು ತಿಂಗಳಲ್ಲಿ ಮೂರು ಸಾವಿರ ಮೀರಬಹುದು' ಎನ್ನುತ್ತಾರೆ. ರಜೆ ಇದ್ದ ದಿವಸ ಮನೆಯಲ್ಲಿ ಸಿಗರು. ತನ್ನ ಹತ್ತೆಕ್ಕರೆ ತೋಟದಲ್ಲಿ ಸುತ್ತುತ್ತಿರುತ್ತಾರೆ. ತೋಟದ ಕೆಲಸದ ಮೇಲ್ವಿಚಾರಣೆ ಆದಂತೆಯೂ ಆಯಿತು, ಫೋಟೋ ಕ್ಲಿಕ್ಕಿಸಿದಂತೆಯೂ ಆಯಿತು.

ಭೂಮಿಯಲ್ಲಿ ಜೀವವೈವಿಧ್ಯ ಜೀವಂತವಾಗಿದ್ದರೆ ಚಿಟ್ಟೆ, ಹಕ್ಕಿ, ಜೇಡಗಳು ಸದಾ ಸುತ್ತುತ್ತಿರುತ್ತವೆ! ವದ್ವ ಭಟ್ಟರ ಪ್ರಕೃತಿ ಓದಿನಲ್ಲಿ ಸತ್ಯವಿದೆ. ಸೂಕ್ಷ್ಮತೆಯಿದೆ. ತೆಗೆದ ಚಿತ್ರಗಳು ಅವರ ಮನೆಯ ಸುತ್ತಮುತ್ತಲಿನವೇ. ಮುನ್ನೂರು ವಿಧದ ಜೇಡ, ಐವತ್ತು ವಿಧದ ಕಪ್ಪೆಗಳು, ಮುನ್ನೂರು ವೆರೈಟಿ ಅಣಬೆ ಚಿತ್ರಗಳು ನೋಡುವುದೇ ಆನಂದ.

ಸೂಕ್ಷ್ಮ ಜೀವಿಗಳ ಫೋಟೋಗ್ರಫಿಯು ಬದುಕಿನಲ್ಲಿ ತಾಳ್ಮೆಯನ್ನು ಕಲಿಸುತ್ತದೆ. ಕೆಲವೊಂದನ್ನು ಕ್ಲಿಕ್ಕಿಸಲು ಗಂಟೆಗಟ್ಟಲೆ ಕಾಯಬೇಕು. ಕಾದರೂ ನಿರಾಶೆ ತಪ್ಪಿದ್ದಲ್ಲ. ಪ್ರತಿಯೊಂದು ಜೀವಿಯೂ ಕೂಡಾ ತಾವು ವಾಸಿಸುವ ಪ್ರದೇಶವನ್ನು ಗೊತ್ತುಮಾಡಿಕೊಳ್ಳುತ್ತವೆ. ಅದು ಯಾವ ಪ್ರದೇಶ ಎಂಬ ಸೂಕ್ಷ್ಮತೆ ಗೊತ್ತಾಗಿ ಬಿಟ್ಟರೆ ನಾವು ಅರ್ಧ ಯಶಸ್ವಿ.

ಚಿಟ್ಟೆಗಳೆಲ್ಲಾ ಮೇಲ್ನೋಟಕ್ಕೆ ಒಂದೇ. ಸಣ್ಣಪುಟ್ಟ ವ್ಯತ್ಯಾಸವಷ್ಟೇ. ಸುಂದರ ಅಂದ್ರೆ ಸುಂದರ. ಕೆಲವು ಮರ ತೂತು ಮಾಡಿ ಬದುಕುತ್ತವೆ. ಮತ್ತೆ ಕೆಲವು ಎಲೆಗಳನ್ನು ಸುರುಟಿಸಿ ಜೀವಿಸುತ್ತವೆ. ಚಿಟ್ಟೆಗಳು ನಮ್ಮನ್ನು ಗೊಂದಲದಲ್ಲಿ ಸಿಲುಕಿಸುವಷ್ಟು ಜಾಣ್ಮೆ ಹೊಂದಿವೆ. ರಕ್ಷಣೆಗಾಗಿ ಒಂದು ಕೀಟ ಇನ್ನೊಂದನ್ನು ಫೂಲ್ ಮಾಡುತ್ತವೆ. ಇದು ಪ್ರಕೃತಿ ಕೊಟ್ಟ ವರ.

'ಸೂಕ್ಷ್ಮ ಜೀವಿಗಳ ಬದುಕನ್ನು ಓದಲು ನಮ್ಮಲ್ಲೂ ಸೂಕ್ಷ್ಮತೆ ಬೇಕು. ಭಾವನೆ ಬೇಕು. ನೋಡುವ ದೃಷ್ಟಿಕೋನ ಬೇಕು. ಮದ-ಮೋಹ-ಮತ್ಸರ ಬಿಟ್ಟು ಪ್ರಕೃತಿಯೊಂದಿಗೆ ಬೆರೆತರೆ ಅವನ್ನೆಲ್ಲಾ ನೋಡಲು ಸಾಧ್ಯ' ಎನ್ನುವಾಗ, ಈ ಕಾಲಘಟ್ಟದಲ್ಲಿ ಅವೆಲ್ಲವೂ ಸಾಧ್ಯವಾ ಅಂತ ಪ್ರಶ್ನೆ ಎದುರಾಗುತ್ತದೆ. ಆದರೆ ಈ ಪ್ರಶ್ನೆಗೆ ಉತ್ತರವಾಗಿ ವದ್ವದವರೇ ಮುಂದಿದ್ದಾರೆ. ಇವನ್ನೆಲ್ಲಾ ನೋಡಲು ಗ್ರಂಥಗಳು ಬೇಕಾಗಿಲ್ಲ. ಸೂಕ್ಷ್ಮತೆ ಸಾಕು.

ತಾನು ಕ್ಲಿಕ್ಕಿಸುವ ಎಲ್ಲಾ ಸೂಕ್ಷ್ಮಜೀವಿಗಳ ಜಾತಕ ಭಟ್ಟರಲ್ಲಿದೆ. ಅದಕ್ಕೆ ಸಂಬಂಧಪಟ್ಟ ಕನ್ನಡ, ಆಂಗ್ಲ ಪುಸ್ತಕಗಳ ಬೃಹತ್ ಸಂಗ್ರಹ. ಪ್ರತಿಯೊಂದರ ಜೀವನಶೈಲಿ, ಹೆಸರುಗಳು ಕಂಠಸ್ತ. ತೆಗೆದ ಚಿತ್ರಗಳನ್ನು ಪ್ರಿಂಟ್ ಮಾಡಿಟ್ಟುಕೊಂಡಿದ್ದಾರೆ. 'ಇದರ ಹಿಂದಿರುವ ಸೂಕ್ಷ್ಮತೆಗಳು ಜನರಿಗೆ ಅರ್ಥವಾಗುವುದಿಲ್ಲ. ಅವರಿಗದು ಬೇಕಾಗಿಯೂ ಇಲ್ಲ' ಎನ್ನುವಾಗ ನಮ್ಮ ಸಮಾಜ ವ್ಯವಸ್ಥೆಯ ಅನಾಸಕ್ತ ಮುಖವೊಂದು ಮಿಂಚಿ ಮರೆಯಾಗುತ್ತದೆ.

ಇದು ಪೈಸೆ ಪೈಸೆ ಲೆಕ್ಕವಿಟ್ಟು, ಗುಣಾಕಾರ-ಭಾಗಾಕಾರ ಮಾಡಿಟ್ಟುಕೊಳ್ಳುವ ಹವ್ಯಾಸವಲ್ಲ. ಕ್ಯಾಲ್ಯುಕುಲೇಟರ್ ಇಲ್ಲದ ವ್ಯವಹಾರ. ಮನಸ್ಸಿಗೆ ಎಲ್ಲಿ ಸಂತೋಷ ಸಿಗುತ್ತದೋ ಆ ಹವ್ಯಾಸವನ್ನೆಲ್ಲಾ ಮೊಗೆಮೊಗೆದ ವದ್ವದವರಿಗೆ ಎಲ್ಲವೂ ಜ್ಞಾನಕೋಶಗಳು. ಸಸ್ಯಲೋಕದ ಸಂದರ್ಶನಕ್ಕಾಗಿ ಬರುತ್ತಾರೆ. ವಿದ್ಯಾರ್ಥಿಗಳಿಗಂತೂ ಪರಿಸರದ ನೇರ ಪಾಠ ಸಿಗುತ್ತದೆ. ಆದರೆ ತನ್ನ ವೃತ್ತಿ, ತೋಟದ ನಿರ್ವಹಣೆಯ ಮಧ್ಯೆ ಸಮಯ ಕೊಡಲು ತ್ರಾಸ.

ಕನ್ನಡ-ಆಂಗ್ಲ ಭಾಷೆಗಳ ಮೂರು ಸಾವಿರಕ್ಕೂ ಹೆಚ್ಚು ಪತ್ರಿಕೆಗಳು, ಜಾಲತಾಣಗಳಲ್ಲಿ ಸಿಗುವ ಸಾವಿರಗಟ್ಟಲೆ ಮ್ಯಾಗಜಿನ್ಗಳ ಮುಖಪುಟಗಳು, ಅಂಚೆಚೀಟಿಗಳು, ನಾಣ್ಯಗಳು, ಬೇರುಗಳು, ಬೀಜಗಳು, ಕಲ್ಲುಗಳು, ಹೂ, ಕ್ರೊಟನ್, ಬಳ್ಳಿಗಳು, ಹಣ್ಣಿನ ಗಿಡಗಳು.. ಕಾಲದ ಕಥನಗಳು. ಮಕ್ಕಳ ಖಿನ್ನತೆ, ಕೀಳರಿಮೆಗಳನ್ನು ದೂರಗೊಳಿಸುವ ಮನೋವೈದ್ಯ. ಜತೆಗೆ ನಾಟಿವೈದ್ಯರೂ ಕೂಡಾ. ಇವೆಲ್ಲವುಗಳು ಬದುಕಿನ ಮಧ್ಯೆಯೇ ಪ್ರಕೃತಿಯಿಂದ ಮೊಗೆದ ರಸಗಟ್ಟಿಗಳು. 'ವರ್ಕ್ ಇಸ್ ವರ್ಷಿಪ್ ’' ಬದುಕಿನ ಸೂತ್ರ. ಮನೆಯ ಹೆಸರು ಕೂಡ 'ಫ್ಲವರ್ ಕಾಟೇಜ್'. 'ಇವೆಲ್ಲಾ ಎಷ್ಟು ರಿಟರ್ನ್ ಕೊಡ್ತವೆ ಎಂಬ ಲೆಕ್ಕಕ್ಕಿಂತಲೂ ಅವೆಲ್ಲವೂ ನನ್ನ ಜಾಗದಲ್ಲಿ ಇವೆ ಎಂಬ ಸಮಾಧಾನ-ತೃಪ್ತಿ'.

ವದ್ವ ವೆಂಕಟ್ರಮಣ ಭಟ್ಟರ ಮನೆಯಿಂದ ಮರಳಿದ ಬಳಿಕ - ಒಬ್ಬ ವ್ಯಕ್ತಿಯಲ್ಲಿ ಮೂವತ್ತೈದಕ್ಕೂ ಮಿಕ್ಕಿ ಹವ್ಯಾಸಗಳು ಸಜೀವವಾಗಿರಲು ಸಾಧ್ಯವಾ? - ಎಂಬ ಚೋದ್ಯಕ್ಕೆ ಉತ್ತರ ಸಿಕ್ಕಿಲ್ಲ. (08255)239428,  9448150237

ಕೃಷಿಕ ಸಂರಕ್ಷಣೆಯ ಅಪೂರ್ವ ತಳಿ ಕರಿಯಾಲ ಹರಿವೆ


ಕೃಷಿಕ ಕರಿಯಾಲ ರಾಮಪ್ರಸಾದ್ ಮಿಂಚಂಚೆಯಲ್ಲಿ ಫೋಟೋಗಳನ್ನು ಕಳುಹಿಸಿ, 'ಈ ವರುಷ ಒಂಭತ್ತುವರೆ ಅಡಿ ಎತ್ತರಕ್ಕೆ ಹರಿವೆ ಗಿಡ ಬೆಳೆದಿವೆ. ಜಾಗತಿಕ ದಾಖಲೆಗೆ ಕಳುಹಿಸಬಹುದೇ?' ಎಂದು ವಿನೋದವಾಡಿದ್ದರು. ಸಾಮಾನ್ಯ ಹರಿವೆಗಿಂತ ಎತ್ತರವಾಗಿ ಬೆಳೆಯುವ ಇದು 'ಕರಿಯಾಲ ಹರಿವೆ'. ಇದಕ್ಕೆ ಈ ಹೆಸರು ಹೊಸೆದ ಹಾದಿಯನ್ನು ರಾಮಪ್ರಸಾದರ ತಂದೆ ಪುತ್ತೂರಿನ ಕರಿಯಾಲ ಶಿವರಾಮ ಭಟ್ಟರು ಹೀಗೆ ಜ್ಞಾಪಿಸಿಕೊಳ್ಳುತ್ತಾರೆ :

ವಿಟ್ಲದಲ್ಲಿ ನನ್ನ (1943) ಪ್ರಾಥಮಿಕ ವಿದ್ಯಾಭ್ಯಾಸ. ಆರನೇ ತರಗತಿಯಲ್ಲಿ ಓದುತ್ತಿದ್ದೆ. ಪಾಠದೊಂದಿಗೆ ಕೃಷಿಯೂ ಆಗ ಪಠ್ಯವಾಗಿತ್ತು. ಅದರ ನೇರ ಪಾಠವೂ ಇತ್ತು. ಅಧ್ಯಾಪಕ ನಾರಾಯಣ ಶೆಟ್ಟಿಯವರು ತರಕಾರಿ ಕೃಷಿ ವಿಚಾರಗಳನ್ನು ಹೇಳಿ, ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಅವರಿಂದ ಮಾಡಿಸುತ್ತಿದ್ದರು. ಅಲ್ಲದೆ ತಂತಮ್ಮ ಮನೆಗಳಲ್ಲಿ ತರಕಾರಿಗಳನ್ನು ಕಡ್ಡಾಯವಾಗಿ ಮಕ್ಕಳೇ ಬೆಳೆಸಬೇಕೆಂಬ ಅಲಿಖಿತ ನಿಯಮವನ್ನು ಜ್ಯಾರಿಗೆ ತಂದಿದ್ದರು. ಆ ಬಾರಿ ಶಾಲೆಯಲ್ಲಿ ಹರಿವೆ ಕೃಷಿ. ಹರಿವೆ ಗಿಡಗಳನ್ನು ಶಾಲೆಯಿಂದ ಒಯ್ದು ಬೆಳೆಸಿದೆ. ಮನೆಯವರೂ ಪ್ರೋತ್ಸಾಹಿಸಿದರು. ಹರಿವೆ ಸೊಂಪಾಗಿ, ಎತ್ತರವಾಗಿ ಬೆಳೆಯಿತು.

ಆಗಲೇ ಸಾಕಷ್ಟು ಮನೆಗಳಲ್ಲಿ ಹರಿವೆ ಬೆಳೆಯುತ್ತಿದ್ದರೂ ಇದು ಮಾತ್ರ ಉಳಿದವಕ್ಕಿಂತ ಭಿನ್ನವಾಗಿತ್ತು. ಪದಾರ್ಥ ಮಾಡಿದಾಗಲೂ ರುಚಿಯಲ್ಲಿ ಪ್ರತ್ಯೇಕತೆಯಿತ್ತು. ಇದರ ಪೂರ್ವಾಪರ ತಿಳಿಯದು. ಅಂದಿನಿಂದ ನಮ್ಮಲ್ಲಿ ಇದೇ ಹರಿವೆಯ ಬೀಜ ಮರುಬಳಕೆಯಾಗುತ್ತಾ ಇದೆ. ಪರಕೀಯ ಪರಾಗಸ್ಪರ್ಶವಾಗದಂತೆ ಎಚ್ಚರದಿಂದ ಬೆಳೆಸುತ್ತಿದ್ದೆವು. ಹೀಗೆ ಅಭಿವೃದ್ಧಿಯಾದ ಹರಿವೆಯನ್ನು ಗುರುತಿಸಲೋಸುಗ ಮನೆಯ ಹೆಸರನ್ನು ಹೊಸೆದು 'ಕರಿಯಾಲ ಹರಿವೆ' ಎಂದು 'ಅಡಿಕೆ ಪತ್ರಿಕೆ'ಯು ನಾಮಕರಣ ಮಾಡಿತು. ಅಂದಿನಿಂದ ಇದು ಮನೆಮಾತಾಯಿತು.

ಶಿವರಾಮ ಭಟ್ಟರು ಕಳೆದಾರು ದಶಕದಿಂದ ತನ್ನ ಮನೆಯ ಸದಸ್ಯನಂತೆ ಬೆಳೆದ ಹರಿವೆ ತಳಿಯೊಂದರ ಅಭಿವೃದ್ಧಿಯನ್ನು ವಿವರಿಸಿದ ಬಗೆಯಿದು. ಇವರಿಂದ ಪಡೆದ ಬೀಜ ಹಲವರ ಮನೆಯಂಗಳದಲ್ಲಿ ಮೊಳಕೆಯೊಡೆದಿದೆ. ಉದರ ಸೇರಿದೆ. ನನ್ನಿಂದ ಎಲ್ಲರೂ ಬೀಜ ಒಯ್ಯುತ್ತಾರೆ. ಅದನ್ನು ಬೆಳೆಸಿ ಯಾರೂ ಬೀಜ ಉಳಿಸಿಡುವುದಿಲ್ಲ. ನೆನಪಾದಾಗ ಪುನಃ ನನ್ನನ್ನೇ ಕೇಳುತ್ತಾರೆ ಎಂಬ ಖೇದ.

ಕರಿಯಾಲ ಹರಿವೆಯ ಎಲೆ ನಾಲ್ಕರಿಂದ ಆರು ಇಂಚು ಅಗಲ, ಎಂಟರಿಂದ ಹತ್ತಿಂಚು ಉದ್ದ ಬೆಳೆಯುತ್ತದೆ. ಕಾಂಡ ಎಂಟಿಂಚಿಗಿಂತಲೂ ದಪ್ಪ. ಗಿಡ ಸುಮಾರು ಏಳಡಿಗಿಂತಲೂ ಎತ್ತರ. ಉರುಟು ಎಲೆ. ತುದಿಯಲ್ಲಿ ಚೂಪಿಲ್ಲ. ಕಡು ಹಸುರು ಬಣ್ಣದ ದಂಟು ಮತ್ತು ಎಲೆ. ದಂಟಿನಲ್ಲಿ ನಾರಿಲ್ಲ. ಬೆರಳು ಗಾತ್ರಕ್ಕೆ ದಪ್ಪವಾಗುವಲ್ಲಿಯ ತನಕ ಕೈಯಲ್ಲೇ ಇದನ್ನು ಮುರಿಯಬಹುದು. ಸಸಿ ಮಾಡಿದ ಬಳಿಕ ಸಾಲಿನಲ್ಲಿ ನೆಟ್ಟಿದ್ದಾರೆ. ವಿಶೇಷವಾಗಿ ಹಟ್ಟಿ ತೊಳೆದ ನೀರು ಉಣಿಕೆ. ತರಕಾರಿ ಮಧ್ಯೆ ಗಿಡ ನೆಟ್ಟಿದ್ದಾರೆ. ಈ ಬಾರಿ ಹಳದಿ ಚುಕ್ಕೆ ರೋಗ ಬಂದಿಲ್ಲ.

ಮಳೆಗಾಲದ ಮೂರು ತಿಂಗಳು ಹೊರತು, ಉಳಿದೆಲ್ಲಾ ಋತುವಿನಲ್ಲಿ ಹರಿವೆ ಬೆಳೆಯಬಹುದು. ಅಂಗಳದ ಮೂಲೆಯಲ್ಲಿ ನಾಲ್ಕೈದು ಗಿಡವಿದ್ದರೆ ಸಾಕು, ವಾರದಲ್ಲಿ ಮೂರು ದಿವಸ ಪದಾರ್ಥಕ್ಕಾಗಿ ಬಳಸಬಹುದು. ಒಂದು ದಿವಸ ಎಲೆಯ ಪಲ್ಯ, ಮತ್ತೊಂದು ದಿವಸ ಕಾಂಡದ ಹುಳಿ ಪದಾರ್ಥ, ಇನ್ನೊಂದು ದಿವಸ ಎಲೆ ಮತ್ತು ಕಾಂಡ ಸೇರಿಸಿದ ಪದಾರ್ಥ....ಹೀಗೆ ಆಸಕ್ತಿಗೆ ತಕ್ಕಂತೆ ಖಾದ್ಯ ತಯಾರಿಸಬಹುದು. ಎಲೆಯ ಪತ್ರೊಡೆ ಬಹಳ ರುಚಿ.

ಗಿಡವನ್ನು ಮೊಳಕೆ ಬರಿಸಿ, ದೂರದೂರ ನೆಟ್ಟರೆ ರೋಗ ಕಡಿಮೆ. ಗಿಡಗಳ ಮಧ್ಯೆ ರಾವುಬೀಜದ ಮರದ ಗೆಲ್ಲುಗಳನ್ನು ನೆಟ್ಟರೆ, ಹರಿವೆ ಬರುವ ಕೀಟವನ್ನು ಶಿವರಾಮ ಭಟ್ಟರು ನಿಯಂತ್ರಿಸಿದ್ದಾರೆ. ಉಳಿದ ತರಕಾರಿಗಳ ಮಧ್ಯೆ ಮಧ್ಯೆ ಹರಿವೆ ಗಿಡ ನೆಡಬಹುದು.

ಸುಮಾರು 1980ರ ತನಕ ಈ ಹರಿವೆ ಅಲ್ಲಲ್ಲಿ ಚಾಲ್ತಿಯಲ್ಲಿತ್ತು. ಇದರ ಬೀಜವನ್ನು ಆಗ ಯಾರೂ ಉಳಿಸದ ಕಾರಣ ಈ ತಳಿಯೇ ಅಜ್ಞಾತವಾಗಿದೆ. ಅದನ್ನು ಕರಿಯಾಲ ಶಿವರಾಮ ಭಟ್ಟರು ಉಳಿಸಿದ್ದಾರೆ, ಬೆಳೆಸಿದ್ದಾರೆ, ಅಭಿವೃದ್ಧಿಪಡಿಸಿದ್ದಾರೆ. ಅವರಿಗೆ ನಾವೆಲ್ಲಾ ಋಣಿಗಳು. ಈ ಹರಿವೆಯನ್ನು ವರುಷದ ಹನ್ನೊಂದು ತಿಂಗಳು ಬೆಳೆಯಬಹುದು. ಅದರ ದಂಟನ್ನು ಸ್ವಲ್ಪ ಸಂಸ್ಕರಣೆಗೆ ಒಳಪಡಿಸಿ ತಯಾರಿಸಿದ 'ಪೋಡಿ' ಬಹು ಸ್ವಾದಿಷ್ಟ. ಕರಿಯಾಲ ಹರಿವೆಯ ಒಳಗುಟ್ಟನ್ನು ಕರಿಂಗಾಣದ ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತರು ಹೇಳುತ್ತಾರೆ. ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ'ಯ ಮೂಲಕ ಬೀಜವನ್ನು ಸಾಕಷ್ಟು ಬಾರಿ ವಿತರಿಸಿದ್ದಾರೆ.

ಈ ಬಾರಿ ಎಂದಿಗಿಂತಲೂ ಹುಲುಸಾಗಿ ಎತ್ತರಕ್ಕೆ ಬೆಳೆದು ತನ್ನ ಸಾಮರ್ಥ್ಯ ತೋರಿದ ಹರಿವೆಯ ಅಭಿವೃದ್ಧಿ ಜತೆಗೆ, ಸಂರಕ್ಷಣೆಯತ್ತಲೂ ಯೋಚಿಸಬೇಕಾಗಿದೆ. ಈಗಾಗಲೇ ಬೀಜ ಒಯ್ದವರು, ಅಭಿವೃದ್ಧಿಪಡಿಸಿದ ಬಳಿಕ ಪುನಃ ಅದಕ್ಕಿಂತ ಇಮ್ಮಡಿ ಬೀಜವನ್ನು ಮರಳಿಸಿದರೆ ಬೀಜಸಂರಕ್ಷಣೆಯ ಕಾಯಕಕ್ಕೆ ನೆರವಾದಂತಾಗುತ್ತದೆ. (9482205938)

ಕಾಡು ಮಾವಿನ ರುಚಿ ಬಲ್ಲಿರಾ?




'ಕಾಡು ಮಾವಿನ ಮರದ ಗೆಲ್ಲುಗಳಲ್ಲಿ ದುರ್ಮಾಂಸ ಬೆಳೆಯುತ್ತದೆ. ಸಿಪ್ಪೆಗಳು ಒಡೆದ ಹಾಗೆ ಕಾಣುತ್ತದೆ. ಅಂತಹ ಮರದ ಆಯುಸ್ಸು ಮುಗಿಯಿತು ಎಂದರ್ಥ. ಇದರ ಕುಡಿಗಳನ್ನು ಆಯ್ಕೆ ಮಾಡಿ ಕಸಿ ಕಟ್ಟಿ ಅಭಿವೃದ್ಧಿ ಮಾಡುವುದೊಂದೆ ದಾರಿ,' ಎನ್ನುವುದು ಮಾಪಲ್ತೋಟ ಸುಬ್ರಾಯ ಭಟ್ಟರ ಅಭಿಮತ.

ಸುಳ್ಯ ತಾಲೂಕಿನ ಮರ್ಕಂಜದಲ್ಲಿ ಸುಬ್ರಾಯ ಭಟ್ಟರ ತೋಟ. ಅವರ ಜಮೀನಿನಲ್ಲಿ ನೂರಕ್ಕೂ ಮಿಕ್ಕಿ ಕಾಡು ಮಾವಿನ ಮರಗಳಿವೆ. ಎಲ್ಲವೂ ನೆಟ್ಟು ಬೆಳೆಸಿದಂತಾದ್ದು. ಜತೆಗೆ ಹಲಸು, ಮಾವಿನ ಕಸಿ ಗಿಡಗಳು, ಕಾಡು ಹಣ್ಣುಗಳು, ಮರಮಟ್ಟುಗಳು..

ಹೊಸ ಜಾತಿಯ ಮಾವಿನ ಸುಳಿವು ಸಿಕ್ಕರೆ ಸಾಕು, ಅಲ್ಲಿ ಸುಬ್ರಾಯ ಭಟ್ಟರು ರೆಡಿ. ತಿಂದು, ರುಚಿ ನೋಡಿದ ಬಳಿಕವೇ ತಳಿ ಆಯ್ಕೆ. ಹೈಬ್ರಿಡ್ ತಳಿಗಳಂತೆ ಕಾಡು ಮಾವಿಗೆ ಎತ್ತಿ ಹೇಳುವಂತಹ ಹೆಸರಿಲ್ಲ. ರುಚಿ, ಗುಣ ದೋಷಗಳ ಸುತ್ತ ಹೆಸರಿನ ಹೊಸೆಯುವಿಕೆ. ಉದಾ: ಸಾಸಿವೆ ಪರಿಮಳದ್ದು 'ಸಾಸಿವೆ ಮಾವು', ಜೀರಿಗೆ ಪರಿಮಳದ್ದು 'ಜೀರಿಗೆ ಮಾವು', ಮರ ಉದ್ದಕ್ಕೆ ಬೆಳೆದರೆ ಅದು 'ಗಳೆಮಾವು'.. ಹೀಗೆ.

'ಕಾಡು ಮಾವಿನ ರುಚಿಯನ್ನು ಗುರುತಿಸಲು ಕಷ್ಟ. ಹಣ್ಣಾಗುವ ಹೊತ್ತಿಗೆ ಮಳೆ ಬಿದ್ದರೆ ಸಾಕು, ರುಚಿ ವ್ಯತ್ಯಾಸವಾಗುತ್ತದೆ' ಎನ್ನುತ್ತಾರೆ. ಉತ್ಕೃಷ್ಟ ತಳಿ ಯಾವುದು? ಎಂಬ ಪ್ರಶ್ನೆಗೆ ಏನೆನ್ನುತ್ತಾರೆ ಗೊತ್ತೇ? 'ಎಲ್ಲವೂ ಉತ್ಕೃಷ್ಟವೇ. ಒಂದಕ್ಕಿಂತ ಒಂದು ಭಿನ್ನ. ಪ್ರತ್ಯೇಕವಾಗಿ ಶ್ರೇಷ್ಠ ಎನ್ನುವಂತಿಲ್ಲ'.

'ಮಿಡಿಯನ್ನು ಕತ್ತಿಯಲ್ಲಿ ಕೊಯ್ಯುವಾಗಲೇ ಮಿಡಿಯ ಒಳಗಿನ ಬಿಳಿಭಾಗ ಕಪ್ಪಾಯಿತು ಎಂದಾದರೆ ಅದು ಉಪ್ಪಿನಕಾಯಿಗೆ ಆಗುವಂತಹುದಲ್ಲ. ಕೆಲವೊಮ್ಮೆ ಉಪ್ಪು-ಸಾಸಿವೆ ಸೇರಿದಾಗ ಮಿಡಿ ಕಪ್ಪಾಗುತ್ತದೆ. ಹೀಗೆ ಮಿಡಿ ಪರೀಕ್ಷೆ ಮಾಡದೆ ಉಪ್ಪಿನಕಾಯಿ ಹಾಕಬಾರದು' ಎಂಬ ಕಿವಿಮಾತು.

ಇವರ ಗುಡ್ಡದಲ್ಲಿ ಉಪ್ಪಿನಕಾಯಿಗೆ ಆಗುವ ಹನ್ನೆರಡು ಮಾವಿನ ಮರಗಳು, ನೀರು ಮಾವಿಗೆ ಯೋಗ್ಯವಾಗಿರುವ ಎರಡು ತಳಿಗಳಿವೆ. ಹೈಬ್ರಿಡ್, ಕಸಿ ಸಸಿಗಳು ನೂರರ ಹತ್ತಿರವಿದೆ. ಇಷ್ಟೆಲ್ಲಾ ಗಿಡಗಳಲ್ಲಿ ಹಣ್ಣು ಇಳುವರಿ ನೀಡುತ್ತಿದ್ದರೂ ಮಾರಾಟ ಉದ್ದೇಶ ಭಟ್ಟರದ್ದಲ್ಲ. ಅಸಕ್ತರಿಗೆ ಹಂಚುತ್ತಾರೆ. ತನ್ನ ತೋಟದಲ್ಲಿ ಎಲ್ಲಾ ತಳಿಗಳೂ ಬೇಕೆನ್ನುವ ಹಪಹಪಿಕೆ.

ಈಚೆಗೆ ಭಟ್ಟರು ಮಾತುಕತೆಗೆ ಸಿಕ್ಕಾಗ ಕಾಡು ಮಾವಿನ ಕೃಷಿ ಮತ್ತು ಅವುಗಳ ಸೂಕ್ಷ್ಮ ವಿಚಾರಗಳನ್ನು ತೆರೆದಿಟ್ಟರು : ಮಾವಿನ ಹಣ್ಣುಗಳು ಮಾಗಿದಾಗ ಹಣ್ಣು ಹುಳಗಳು ತುಂಬಿರುತ್ತವೆ. ತಿನ್ನಲು ಸಿಗುವುದಿಲ್ಲ. ವಿಷ ಸಿಂಪಡಣೆಯಿಂದ ಪರಿಹಾರ ಕಾಣಬಹುದು. ಆದರೆ ಅದನ್ನೇ ಪುನಃ ನಾವು ತಿನ್ನಬೇಡ್ವೋ? ಕೀಟಗಳು ಅಟ್ಯಾಕ್ ಆಗದಂತೆ ಏನಾದರೂ ದಾರಿಗಳಿವೆಯೇ? ನಾನು ಗೋಅರ್ಕವನ್ನು ಸಿಂಪಡಿಸಿದೆ. ಆದರೆ ಹಣ್ಣು ಗೋಮೂತ್ರದ ಪರಿಮಳ ಬರುತ್ತದೆ. ಪ್ರತೀ ವರುಷವೂ ಗಿಡಗಳನ್ನು ಪ್ರೂನಿಂಗ್ ಮಾಡಿದರೆ ಸ್ವಲ್ಪ ಮಟ್ಟಿಗೆ ಹುಳಗಳು ಅಟ್ಯಾಕ್ ಆಗುವುದನ್ನು ತಪ್ಪಿಸಬಹುದು.

ಕಾಡು ಮಾವಿನ ಗೊರಟಿನ ಗಿಡ ಮರವಾಗಿ ಇಳುವರಿ ಕೊಡಲು ಏನಿಲ್ಲವೆಂದರೂ ಹತ್ತು ವರುಷ ಬೇಕು. ಅದರದ್ದೇ ಕಸಿ ಮಾಡಿದರೆ ಐದಾರು ವರುಷದಲ್ಲಿ ಹಣ್ಣು ಪಡೆಯಬಹುದು. ಸಸಿ ಸದೃಢವಾಗಿ ಬೆಳೆಯಲು ಗೊಬ್ಬರ ಮುಖ್ಯವಲ್ಲ. ಮಣ್ಣು ಮುಖ್ಯ. ಹೊಸದಾದ ಸಸಿ ನೆಡುವವರು ಹೊಸ ಮಣ್ಣನ್ನು ಆರಿಸಿದರೆ ಗಿಡಕ್ಕೂ, ಫಸಲಿಗೂ ಉತ್ತಮ.

ಕಾಡು ಮಾವಿನ ಹಣ್ಣಿನಲ್ಲಿ ಈ ವರುಷದ ರುಚಿ ಮುಂದಿನ ವರುಷ ಇರುವುದಿಲ್ಲ. ವ್ಯತ್ಯಾಸವಾಗುತ್ತದೆ. 'ಹೈಬ್ರಿಡ್ ಮಾವುಗಳು ಇವೆಯಲ್ಲಾ, ಅವು ಜರ್ಸಿ ದನಗಳಂತೆ' ಎಂದು ನಗೆಯಾಡುತ್ತಾರೆ. ನಿಜವಾದ ರುಚಿಯಿರುವುದು ಕಾಡು ಮಾವಿನಲ್ಲಿ. ಮಾಪಲ್ತೋಟದ ಎಲ್ಲಾ ಮರಗಳಲ್ಲಿ ಗುರುತು ಹಿಡಿಯಲು 'ಅವು ಯಾವ ತಳಿಯದ್ದು' ಎಂಬ ಟ್ಯಾಗ್ ಇದೆ. ಲಿಖಿತವಾಗಿ ದಾಖಲಿಸಿಕೊಂಡಿದ್ದಾರೆ.

ಮೂರು ದಶಕಕ್ಕೂ ಮಿಕ್ಕಿದ ಸಾಧನೆ. ಹಲಸು, ಮಾವು, ಕಾಡುಹಣ್ಣುಗಳ ಬಗ್ಗೆ ನಿಖರವಾಗಿ ಮಾತನಾಡಬಲ್ಲ ಅನುಭವಿ. ತಳಿ ಆಯ್ಕೆಗಾಗಿ ಮೂರ್ನಾಲ್ಕು ರಾಜ್ಯಗಳನ್ನು ಓಡಾಡಿದ ಸಾಧಕ. ತನ್ನಲ್ಲಿದ್ದ ಅನುಭವವನ್ನು ಇತರರಿಗೂ ಧಾರೆಯೆರೆಯುವ ಅಪರೂಪದ ಗುಣ. ಈ ಎಲ್ಲಾ ಕಾರಣಕ್ಕಾಗಿ ಬಂಟ್ವಾಳ ತಾಲೂಕಿನ ಉಬರು ರಾಜಗೋಪಾಲ ಭಟ್ಟರ ಮನೆಯಲ್ಲಿ 'ಹಲಸು ಸ್ನೇಹಿ ಕೂಟ' ಏರ್ಪಡಿಸಿದ ಮಾವಿನ ಹಬ್ಬದಲ್ಲಿ ಭಟ್ಟರನ್ನು ಗೌರವಿಸಿರುವುದು ಅರ್ಥಪೂರ್ಣ. (08257-274239)

ಕಾಡು ಮಾವಿನ ನೋವಿಗೆ ದನಿ



ಬಾಲ್ಯ ನೆನಪಾಗುತ್ತದೆ, ಕಾಡು ಮಾವಿನ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದಿನಗಳು. ಸಂಜೆ ಶಾಲೆಯಿಂದ ಹಿಂದಿರುಗುವಾಗ ಮರದಡಿ ಬಿದ್ದ ಹಣ್ಣನ್ನು ತಿನ್ನಲು ಮಕ್ಕಳೊಳಗೆ ಪೈಪೋಟಿ. ಮರಕ್ಕೆ ಕಲ್ಲು ಹೊಡೆದು, ಹಣ್ಣುಗಳನ್ನು ಬೀಳಿಸಿ ಹೊಟ್ಟೆಗಿಳಿಸುವ ಮೋಜು. ಚಡ್ಡಿ ಕಿಸೆಯೊಳಗೆ, ಪುಸ್ತಕದ ಬ್ಯಾಗಿನೊಳಗೆ ಸೇರಿಕೊಂಡ ಮಾವಿನ ಹಣ್ಣು ಅಪ್ಪಚ್ಚಿಯಾಗಿ ಉಂಟು ಮಾಡಿದ ರಾದ್ದಾಂತ.

ಅಡುಗೆ ಮನೆ ಹೊಕ್ಕರೆ ಸಾಕು, ಕಾಡು ಮಾವಿನ ಹಣ್ಣಿನ ಬೇಯಿಸಿದ ಮತ್ತು ಹಸಿ ಗೊಜ್ಜು, ಹಣ್ಣಿನ ರಸಾಯನ..ಗಳ ಸವಿ ಮಾಸಲುಂಟೇ? ಗಂಜಿಯೊಂದಿಗೆ ನೆಂಜಿಕೊಳ್ಳಲು ಕಾಡು ಮಾವಿನ ಹಣ್ಣೇ ಬೇಕು. ಒಂದೊಂದು ಮರದ್ದು ಒಂದೊಂದು ರುಚಿ.

ಈಗ ಮಾವಿನ ಮರಗಳು ಎಲ್ಲಿವೆ? ರಸ್ತೆಯಂಚಿನಲ್ಲಿ ಹಿರಿಯರು ನೆಟ್ಟು ಪೋಷಿಸಿದ ಮಾವು, ಹಲಸು ಮರಗಳು 'ರಸ್ತೆ ಅಭಿವೃದ್ಧಿ'ಗೆ ಬಲಿಯಾಗಿವೆ. ರಬ್ಬರ್ ಕೃಷಿಗಾಗಿ ಗುಡ್ಡ ನುಣುಪಾಗಿ, ಮರಗಳೂ ನೆಲಕ್ಕುರುಳುತ್ತಿವೆ. ಮನೆಯ ಸರಹದ್ದಿನಲ್ಲಿ, ತೋಟದ ಮಧ್ಯದವು ಸದ್ಯ ಬಚಾವ್. ಕಾಡು ಮಾವಿನ ಹಣ್ಣು ಬದುಕಿನಿಂದ ಹಿಂದೆ ಸರಿಯುತ್ತಿದೆ.

ಈ ಹಿನ್ನೆಲೆಯಲ್ಲಿ ಮಾವಿನ ನೋವಿಗೆ ದನಿಯಾಗಲು ಬಂಟ್ವಾಳ ತಾಲೂಕಿನ (ದ.ಕ.) ಕೇಪು ಗ್ರಾಮದ ಉಬರು ರಾಜಗೋಪಾಲ ಭಟ್ಟರ ಮನೆಯಂಗಳಲ್ಲಿ ಮೇ 5ರಂದು 'ಕಾಡು ಮಾವಿನ ಹಣ್ಣಿನ ಹಬ್ಬ ಜರುಗಿತು. 'ಮಾವಿನ ಊಟ-ತಳಿ ಹುಡುಕಾಟ' ಶೀರ್ಷಿಕೆಯ ಹಬ್ಬದಲ್ಲಿ ಬದುಕಿನಿಂದ ಅಜ್ಞಾತವಾಗುತ್ತಿರುವ ಮರಗಳಿಗೆ ಕಾಯಕಲ್ಪ ನೀಡುವ ಸಂಕಲ್ಪ. ಅಳಿದುಳಿದ ಮರಗಳನ್ನು ಸಂರಕ್ಷಿಸುವ ನಿರ್ಧಾರ.

ಆಮಂತ್ರಣ ಪತ್ರ ಅಚ್ಚು ಹಾಕಿಸಿಲ್ಲ. ಪತ್ರಿಕೆಗಳಲ್ಲಿ ಜಾಹೀರಾತು ನೀಡಿಲ್ಲ. ಆಳೆತ್ತರದ ಪ್ಲೆಕ್ಸಿಗಳನ್ನು ಮುದ್ರಿಸಿಲ್ಲ. ಪ್ರಕೃತಿಯನ್ನು ಪ್ರೀತಿಸುವ, ಹಲಸು-ಮಾವಿನ ಸಹವಾಸವಿರುವ ಮಂದಿಗೆ ದೂರವಾಣಿ ಮೂಲಕ ನಿರೂಪ. ಇನ್ನೂರೈವತ್ತಕ್ಕೂ ಅಧಿಕ ಮಂದಿಯ ಉಪಸ್ಥಿತಿ. ದಿನವಿಡೀ ಕಲಾಪ. ಮಾವಿನ ಸುತ್ತ ನೋವು ನಲಿವಿನ ಮಾತುಕತೆ.

ಎರಡು ದಶಕಕ್ಕೂ ಹಿಂದೆ ಮಾವು-ಹಲಸನ್ನು ಬದುಕಿಗಂಟಿಸಿಕೊಂಡ ಮಾಪಲತೋಟ ಸುಬ್ರಾಯ ಭಟ್, ಕರಿಂಗಾಣದ ಡಾ.ಕೆ.ಎಸ್.ಕಾಮತ್ ಮತ್ತು ತಳಿ ಸಂಗ್ರಾಹಕ ಗೊರಗೋಡಿ ಶ್ಯಾಮ ಭಟ್ಟರು ಮಾವಿಗೆ ದನಿಯಾದರು. ತಳಿ ಸಂಗ್ರಹದಲ್ಲಿಂದ ಊಟದ ಬಟ್ಟಲಿನ ತನಕ ವಿವಿಧ ಹಂತದ ಮಾತುಕತೆ-ಚರ್ಚೆ.

ಆಶ್ಚರ್ಯವೆಂದರೆ ಎರಡೂವರೆ ಗಂಟೆ ಕಾಲ ನಡೆದ ಕಲಾಪದಲ್ಲಿ ಪ್ರಶ್ನೆಗಳ ಸುರಿಮಳೆ. ಎಲ್ಲವೂ ಗಟ್ಟಿ ಹೂರಣದವು. ಸಮಯ ಕೊಲ್ಲುವ ಪ್ರಶ್ನೆಗಳಲ್ಲ. ಮಾವಿನ ರೋಗ, ಹತೋಟಿ, ಪುನಶ್ಚೇತನ, ಅಡುಗೆಯಲ್ಲಿ ಬಳಕೆ, ತಳಿ ವೈವಿಧ್ಯ..ಗಳ ಸುತ್ತ ಗಿರಕಿ. ಸಂಪನ್ಮೂಲ ವ್ಯಕ್ತಿಗಳಿಂದ ಅನುಭವಾಧಾರಿತ ನಿಖರ ಉತ್ತರ.

ಚರ್ಚೆಯ ಮುಂದುವರಿದ ಭಾಗವಾಗಿ 'ರುಚಿ ನೋಡಿ-ತಳಿ ಆಯ್ಕೆ' ಪ್ರಕ್ರಿಯೆ. ಮಿಡಿ ಮಾವು ಮತ್ತು ಹಣ್ಣುಗಳೆಂಬ ಎರಡು ವಿಭಾಗ. ಸುಮಾರು ಎಪ್ಪತ್ತು ವಿವಿಧ ರುಚಿಯ, ಸ್ವಾದದ ಮಿಡಿ ತಳಿಗಳು ಮತ್ತು ಅರುವತ್ತೈದು ಹಣ್ಣುಗಳ ತಳಿಗಳ ಪರೀಕ್ಷೆ. ನಿಶ್ಚಿತ ಮಾನದಂಡ. ತಲಾ ಆರು ಯಾ ಏಳು ತಳಿಗಳಂತೆ ಆಯ್ಕೆ. ಕಸಿ ಕಟ್ಟಿ ಅಭಿವೃದ್ಧಿ ಪಡಿಸುವತ್ತ ದೂರದೃಷ್ಟಿ. ಇಷ್ಟೊಂದು ಪ್ರಮಾಣದ ವೆರೈಟಿಗಳನ್ನು ಆಯ್ಕೆ ಮಾಡಿ ಮುಗಿಸುವಾಗ ತೀರ್ಪುಗಾರರ ಹಣೆಯಲ್ಲಿ ಬೆವರು!

ನಮ್ಮ ಮನೆಯಲ್ಲಿರುವ ಕಾಡು ಮಾವಿನ ತಳಿಗಳ ಪೈಕಿ ಹದಿನೇಳರಷ್ಟು ತಳಿಗಳ ಹಣ್ಣುಗಳನ್ನು ಆಯ್ದು ತಂದಿದ್ದೆ. ಇಷ್ಟು ವರುಷ ಇವುಗಳ ರುಚಿ, ಬಣ್ಣ, ಸ್ವಾದ.. ಯಾವುದೂ ಗೊತ್ತಿರಲಿಲ್ಲ. ತಳಿ ಆಯ್ಕೆ ಪ್ರಕ್ರಿಯೆಗಾಗಿಯೆ ನನ್ನ ತೋಟದಲ್ಲಿ ಈ ವರುಷ ಫಲ ನೀಡಿದ ಎಲ್ಲಾ ಮರಗಳ ಹಣ್ಣನ್ನು ರುಚಿ ನೋಡಿ, ಅವುಗಳನ್ನು ತಂದಿದ್ದೆ - ಎನ್ನುತ್ತಾರೆ ಕಡಂಬಿಲ ಕೃಷ್ಣ ಪ್ರಸಾದ್. ಹಬ್ಬಕ್ಕೆ ಹಣ್ಣನ್ನು ತಂದ ಒಬ್ಬೊಬ್ಬರಲ್ಲಿ ಇಂತಹ ರೋಚಕ ಕತೆಗಳಿದ್ದುವು.

ಮಾವಿನ ಮಿಡಿ ವಿಭಾಗದಲ್ಲಿ ಆಯ್ಕೆಯಾದವರು - ಆವರಣದಲ್ಲಿ ಕಾಡು ಮಾವಿನ ತಳಿಗಳ ಪ್ರಾದೇಶಿಕ ಹೆಸರುಗಳಿವೆ. ಅನಿಲ್ಕುಮಾರ್ ಐತನಡ್ಕ (ಬಾಕುಡ), ಅಜಕ್ಕಳ ನಾರಾಯಣ ಭಟ್ (ತುಳಸಿಮೂಲೆ ಅಜಕ್ಕಳ), ಶಂಕರನಾರಾಯಣ ಭಟ್ ಮಲ್ಯ (ಆನಂದರೈ, ಜರಿಮೂಲೆ, ಕೆರೆಬದಿ), ಮುಳಿಯ ರಾಧಾಕೃಷ್ಣ (ನಡುಮನೆ ಜೀರಿಗೆ) ಗಿರೀಶ್ ಬೈಂಕ್ರೋಡು (ದಾಮೋದರ), ಡಾ.ಅಶ್ವಿನಿ ಕೃಷ್ಣಮೂರ್ತಿ (ಪಾರ್ತಿಮೂಲೆ).

ಹಣ್ಣುಗಳ ವಿಭಾಗದಲ್ಲಿ - ಅನಿಲ್ ಕುಮಾರ್ ಐತನಡ್ಕ (ಜೀರಿಗೆ), ಪಡಾರು ರಾಮಕೃಷ್ಣ ಶಾಸ್ತ್ರಿ (ಬರಿಮಾರು ತೋಡು), ಕೇಶವ ಭಟ್ ಕಾಸರಗೋಡು (ಮಲಪ್ಪುರಂ 1), ಶಿರಂಕಲ್ಲು ಆರ್.ಎನ್.ಭಟ್ (ಚೆಂಡೆ ರೆಡ್), ಸದಾಶಿವ ಭಟ್ ಮುಂಡಂತ್ತಜೆ (ಬೊಳ್ಳೆ), ಮೀಯಂದೂರು ಸುಬ್ರಾಯ ಭಟ್ (ಮೀಯಂದೂರು 2) ಒಂದು ಸೀಮಿತ ಪ್ರದೇಶದ ಆಯ್ಕೆಗಳಿವು. ಇಂತಹ ತಳಿ ಆಯ್ಕೆಗಳನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಿದರೆ, ಆ ಊರಿನ ಉತ್ತಮ ತಳಿಯನ್ನು ಆಯ್ಕೆ ಮಾಡಿ ಸಂರಕ್ಷಿಸಬಹುದು. ಉತ್ತಮ ರುಚಿಯ ಹಣ್ಣು ಸಿಗುತ್ತದೆ ಎಂದಾದರೆ ಯಾರಿಗೆ ಬೇಡ ಹೇಳಿ!

ಮಾವಿನ ಹಬ್ಬದಂದು ಮಧ್ಯಾಹ್ನ ಮಾವಿನದ್ದೇ ಖಾದ್ಯ. 'ಹಲಸು ಸ್ನೇಹಿ ಕೂಟ'ದ ಆಯೋಜನೆ. ಕಳೆದೊಂದು ವರುಷದಲ್ಲಿ ಸುತ್ತ ಮುತ್ತ ನಡೆದ ಹಲಸಿನ ಕಾರ್ಯಕ್ರಮದ ಹೂರಣವನ್ನು ಹೊತ್ತ ವಾರ್ತಾಪತ್ರದ ಬಿಡುಗಡೆ. ಕೇರಳ-ಪಡನಕಾಡ್ ಕೃಷಿ ವಿಶ್ವವಿದ್ಯಾಲಯ, ಸೋನ್ಸ್ ಫಾರ್ಮ್, ಮಾಪಲತೋಟ, ಎಡ್ವರ್ಡ್ ಅವರ ತೋಟದವು ಮತ್ತು ಇತರ ಹಣ್ಣುಗಳ ಪ್ರದರ್ಶನ ಹಬ್ಬದ ಹೈಲೈಟ್.

'ಕಾಡು ಮಾವಿನ ಬಗ್ಗೆ ಕಾಳಜಿಯಿಲ್ಲ. ಅದರತ್ತ ಜನರ ಗಮನವನ್ನು ಸೆಳೆದು ಸಂರಕ್ಷಣೆಯತ್ತ ಗಮನ ಹರಿಸಬೇಕಾಗಿದೆ' ಎಂದು ಹಬ್ಬದ ಆಶಯವನ್ನು ಹೇಳುತ್ತಾರೆ, ಸಂಘಟಕರಲ್ಲೊಬ್ಬರಾದ ಮುಳಿಯ ವೆಂಕಟಕೃಷ್ಣ ಶರ್ಮ. (9480200832)

ಕಳೆದ ವರುಷ ಉಬರು ಮನೆಯಂಗಳಲ್ಲಿ ಹಲಸಿನ ಹಣ್ಣಿನ ಹಬ್ಬ ಜರುಗಿತ್ತು. ಅದರ ಫಲಶ್ರುತಿಯಾಗಿ ಮಾವಿನ ಹಬ್ಬದಲ್ಲಿ ಇನ್ನೂರೈವತ್ತಕ್ಕೂ ಮಿಕ್ಕಿ ಹಲಸಿನ ಕಸಿ ಗಿಡಗಳು ಮಾರಾಟವಾಗಿರುವುದು ಹಲಸಿನರಿವು ಮೂಡಿದುದರ ಸಂಕೇತವಲ್ವೇ.

'ನೀರನ್ನು ಬಡವರ ತುಪ್ಪದಂತೆ ಬಳಸಿ'


ತಾರಸಿ ಮನೆಯೊಂದರ ಟ್ಯಾಂಕಿ ತುಂಬಿತ್ತು. ನೀರು ಪೋಲಾಗುತ್ತಿತ್ತು. ಮನೆಯವರು ನಮಗದು ಸಂಬಂಧವೇ ಇಲ್ಲದಂತೆ ತಮ್ಮ ಪಾಡಿಗೆ ಇರುವುದನ್ನು ನೋಡಿ, 'ನೀರು ಕೆಳಗೆ ಬಿದ್ದು ಹಾಳಾಗುತ್ತಿದೆಯಲ್ಲಾ' ಎಂದು ಜ್ಞಾಪಿಸಿದೆ. 'ಹಾಳಾದ್ರೆ ಏನು, ನಮ್ಮ ಮನೆಯದಲ್ವಾ' ಎಂದರು.


ಎರಡು ದಿವಸ ಕಾರ್ಪೋರೇಶನ್ ನೀರು ಬಾರದಿದ್ದರೆ ಬದುಕು ಕಳೆದುಹೋಗುವಷ್ಟು ಬೊಬ್ಬಿಡುತ್ತೇವೆ. ಆದರೆ ನಮ್ಮ ಕೊಳವೆ ಬಾವಿಯ ನೀರು ಟ್ಯಾಂಕಿ ತುಂಬಿ ಗಂಟೆ ಗಟ್ಟಲೆ ತುಳುಕಿದರೂ ಏನೂ ಅನ್ನಿಸುವುದಿಲ್ಲ.

ಮನೆ ನಮ್ಮದು. ಕುಟುಂಬ ನಮ್ಮದು. ಹಿತ್ತಿಲು ನಮ್ಮದು. ಜಾಗವೂ ನಮ್ಮದೇ. ಆದರೆ ನೀರು 'ನನ್ನದು' ಎನ್ನುವುದು ಇದೆಯಾಲ್ಲಾ, ನಿಜಕ್ಕೂ ಅದೊಂದು ಅಹಂಕಾರ. ತಮ್ಮದೇ ಬೋರ್ವೆಲ್ನಿಂದ ಪೋಲಾಗುವ ನೀರು ಭೂಒಡಲಿಂದ ತಾನೆ ಬರಬೇಕು?

ಅಂತರ್ಜಲದ ಮಟ್ಟ ಪ್ರತಿವರ್ಷ ಕುಸಿಯುತ್ತಿದೆ. ಸಾವಿರ, ಸಾವಿರದೈನೂರು ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ನೀರಿಲ್ಲ. ಭೂ ಒಡಲಿಗೆ ನೀರು ಉಣಿಸದಿದ್ದರೆ, ನಮಗೆ ಬೇಕೆಂದಾಗ ಮೊಗೆಯುವುದಕ್ಕೆ ಸಾಧ್ಯವೇ? ನೀರಿಲ್ಲ ಎಂದಾಗ ಕೊರೆವ ಯಂತ್ರದ ಸದ್ದು ನಿಲ್ಲುತ್ತದೆ. ನಮ್ಮ ಪಾಸ್ಬುಕ್ ಬ್ಯಾಲೆನ್ಸ್ ಇಳಿತವಾಗುತ್ತದೆ. ಸ್ವಲ್ಪ ಚೇತರಿಸಿದಾಗ ಮತ್ತೊಮ್ಮೆ ಕೊರೆತ ಯಂತ್ರವನ್ನು ಅಂಗಳಕ್ಕೆ ಬರಮಾಡಿಕೊಳ್ಳುತ್ತೇವೆ. ನೀರಿನ ಅರಿವು ಬಾರದೆ ಇಂತಹ ಸಮಸ್ಯೆಗಳಿಗೆ ಅಂತ್ಯವಿಲ್ಲ.

ಇರಲಿ, ಜಗತ್ತಿನ ನೀರಿನ ಸ್ಥಿತಿ ಗತಿಯನ್ನು ಜಲತಜ್ಞ 'ಶ್ರೀ'ಪಡ್ರೆಯವರು ಹೀಗೆ ಕಟ್ಟಿಕೊಡುತ್ತಾರೆ - ನಮ್ಮ ಒಟ್ಟು ನೀರಿನಲ್ಲಿ ಅತಿ ದೊಡ್ಡ ಪಾಲು ಶೇ. 97.2. ಅದೂ ಉಪ್ಪುಪ್ಪು, ಸಮುದ್ರದಲ್ಲಿದೆ! ಚಿಕ್ಕ ಅಂಶ ಶೇ.2.2 ಮಂಜುಗಡ್ಡೆ ನೀರ್ಗಲ್ಲ ರಾಶಿ. ಇನ್ನು ಉಳಿಯುವುದು ಶೇ. 0.6 ಮಾತ್ರ. ಈ ಗುಟುಕಿನಲ್ಲೂ ಒಂದಷ್ಟು ಪಾಲು! ಇದರಲ್ಲಿ ಶೇ.97.4 ಅಂತರ್ಜಲ. ಸರೋವರದಲ್ಲಿ ತುಂಬಿರುವ ನೀರಿನ ಪಾಲು ಶೇ.1.47. ನದಿ, ಹೊಳೆಗಳಲ್ಲಿರುವ ಪಾಲು ಎಷ್ಟು? ಕೇವಲ ಶೇ. 0.01.

ಜಗತ್ತಿನ ಎಲ್ಲಾ ನೀರನ್ನು ಐದು ಲೀಟರಿನ ಬಾಲ್ದಿಯಲ್ಲಿ ಹಾಕಿದರೆ, ಅದರಲ್ಲಿ ಕುಡಿನೀರು ಒಂದೂವರೆ ಚಮಚ ಮಾತ್ರ. ಕೃಷಿ ಉದ್ದಿಮೆಗಳ ತ್ಯಾಜ್ಯ, ಫ್ಲೋರೈಡ್, ಮನುಷ್ಯತ್ಯಾಜ್ಯ ಇತ್ಯಾದಿ ಸೇರಿದ ಕಲುಷಿತ ನೀರನ್ನು ಇದರಿಂದ ಕಳೆದರೆ?

ಧಾರಾಳ ಮಳೆ ಬೀಳುವ ಊರುಗಳಲ್ಲಿ ನೀರಿನ ಕೊರತೆ ಕಾಣುತ್ತದೆ. ಜನವಸತಿ ಪ್ರದೇಶ, ಜನದೊತ್ತಡ ಇರುವಲ್ಲಿ ನೀರಿನ ಅಭಾವ ತೀವ್ರ. ಎಷ್ಟೇ ಮಳೆ ಬರಲಿ, ಬೇಸಿಗೆಯಲ್ಲಿ ನೀರಿಲ್ಲ. ಇದರಿಂದ ಮುಕ್ತಿ ಹೇಗೆ? ಒಂದೇ ಉಪಾಯ ಮಳೆಕೊಯ್ಲು.

'ಓಡುವ ನೀರನ್ನು ನಡೆಯುವ ಹಾಗೆ ಮಾಡುವುದು, ನಡೆಯುವ ನೀರನ್ನು ತೆವಳುವಂತೆ ಮಾಡುವುದು, ತೆವಳುವ ನೀರನ್ನು ನಿಲ್ಲಿಸುವುದು. ನಿಂತ ನೀರನ್ನು ಇಂಗಿಸುವುದು' ಇದು ಮಳೆ ಕೊಯ್ಲಿನ ಸರಳ ಸೂತ್ರ. ಇದೇನೂ ಹೊಸ ವಿದ್ಯೆಯಲ್ಲ. ನಮ್ಮ ಹಿರಿಯರು ಕಲಿಸಿಕೊಟ್ಟ ಸರಳ ಪಾಠ.

ಕಡಿಮೆ ಖರ್ಚಿನಲ್ಲಿ ಬಡವರೂ ಮಳೆನೀರಿಂಗಿಸಬಹುದು. 'ಮಳೆ ಎಲ್ಲಿ ಬೀಳುತ್ತಿದೆಯೋ, ಅಲ್ಲೇ ಅದನ್ನು ಇಂಗಿಸಿ'. ಇದಕ್ಕೆ ತತ್ಕ್ಷಣದ ಮಳೆಕೊಯ್ಲು ಎನ್ನುತ್ತಾರೆ. ಚಾವಣಿ ನೀರಿನ ಸಂಗ್ರಹ, ಇಂಗುಗುಂಡಿ, ಸಮತಳ ಬದು, ಗಿಡಮರ ನೆಡುವುದು.. ಇವೇ ಮುಂತಾದ ವಿಧಾನಗಳಿಂದ ಮಳೆನೀರನ್ನು ಇಂಗಿಸಬಹುದು.

ಕೊಳವೆ ಬಾವಿ ಮರುಪೂರಣ, ಕೆರೆಗಳು, ಮದಕಗಳು, ಬಾಂದಾರಗಳು.. ನಮ್ಮ ನೀರಿಂಗುವ ಮೂಲಗಳು. ಕೆರೆಗಳು ಮುಚ್ಚಿಹೋಗಿವೆ, ಕಟ್ಟಡಗಳು ಮೇಲೆದ್ದಿವೆ. ಮದಕಗಳ ಕತೆಯೂ ಅಷ್ಟೇ. ಗುಡ್ಡಗಳೆಲ್ಲಾ ನುಣುಪಾಗಿವೆ. ಕಾಡಿಲ್ಲದೆ, ನಮ್ಮ ಮೂಲಪುರುಷರು ಊರು ಸೇರಿದ್ದಾರೆ!

ನೀರಿನೆಚ್ಚರ ಎಲ್ಲಿಂದ ಆರಂಭವಾಗಬೇಕು? ಮನೆಮನೆಗಳಿಂದ, ನಲ್ಲಿಗಳಿಂದ, ಗೃಹಿಣಿಯರಿಂದ. ನೀರಿಗೆ ತೊಂದರೆಯಾದರೆ ಅತೀ ಹೆಚ್ಚು ತೊಂದರೆಗೆ ಒಳಗಾಗುವವರು ಗೃಹಿಣಿಯರು. ಹಾಗಾಗಿ ನೀರಿನ ಮಿತ ಬಳಕೆಯ ಪಾಠ ಮನೆಯಿಂದಲೇ ಆರಂಭವಾಗಬೇಕು.

ರಾಜಸ್ಥಾನದ ಮಳೆಕೊಯ್ಲಿನ ರೂವಾರಿ ಡಾ.ರಾಜೇಂದ್ರ ಸಿಂಗ್ ಆಗಾಗ ಎಚ್ಚರಿಸುವ ಮಾತು - 'ನೀರನ್ನು ಬಡವರ ತುಪ್ಪದಂತೆ ಬಳಸಿ'. ಎಷ್ಟೊಂದು ಅರ್ಥವಲ್ವಾ. ಬಹುಶಃ ಈ ಮಾತಿನ ಅಂತರಾರ್ಥ ಗೊತ್ತಾಗಿ ಬಿಟ್ಟರೆ, 'ಇನ್ನು ಟ್ಯಾಂಕ್ ತುಂಬಿದ ಬಳಿಕವೂ ನೀರು ಕೆಳಗೆ ಬಿದ್ದು ಪೋಲಾಗಲಾರದಲ್ವಾ'.