Wednesday, June 20, 2012

ಹಲಸಿನ ಮಾನವರ್ಧನೆ : 'ಅಡುಗೆಗೆ ಸಿದ್ಧ ಹಲಸು'





ನಮ್ಮೂರ ಪ್ರತಿ ಮನೆಯಲ್ಲಿ ಹಲಸಿನ ಮರಗಳಿವೆ, ಯಥೇಷ್ಟ ಕಾಯಿಗಳಿವೆ. ಮರವೇರಿ ಕೊಯ್ಯುವ ಸ್ಪೆಷಲಿಸ್ಟ್ಗಳಿಲ್ಲ. ಹಾಗಾಗಿ ಹಲಸಿನ ಕಾಯಿ ಮರದಲ್ಲೇ ಹಣ್ಣಾಗಿ, ಕೊಳೆತು ಬಿದ್ದು ಮಣ್ಣು ಸೇರುತ್ತದೆ. ಈ ಹಿನ್ನೆಲೆಯಲ್ಲಿ ಹಲಸಿನ ಕಾಯಿಯ ಸೊಳೆ ತೆಗೆದು ಪ್ಲಾಸ್ಟಿಕ್ನೊಳಗಿಟ್ಟು ಒಂದು, ಎರಡು ಕಿಲೋದ ಪ್ಯಾಕೆಟ್ ಮಾಡಿ ಪ್ರಾಯೋಗಿಕವಾಗಿ ಮಾರಾಟಕ್ಕಿಟ್ಟೆವು. ಒಂದೇ ದಿವಸದಲ್ಲಿ ಐವತ್ತು ಕಿಲೋ ಸೊಳೆ ಮಾರಾಟವಾಯಿತು ಎಂಬ ಹೊಸ ಸುದ್ದಿಯನ್ನು ನೀಡುತ್ತಾರೆ, ಕೇರಳದ ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟ.

ಹೆದ್ದಾರಿಯಿಂದ ಅನತಿ ದೂರದ ಮೀಯಪದವು ಹಳ್ಳಿ. ಹಿತ್ತಿಲಿನ ಮರದಲ್ಲಿ ಹಲಸು ಬಲಿತು ತೂಗಾಡುತ್ತಿದ್ದರೂ ಕೊಯ್ಯಲಾಗದ ಸ್ಥಿತಿ. ಅದರ ಸೊಳೆ ಪ್ರತ್ಯೇಕವಾಗಿ ಸಿಕ್ಕಿದರೆ ಕಾಸು ತೆತ್ತಾದರೂ ಒಯ್ಯುವ ಹಲಸು ಪ್ರಿಯರು! 'ಹಲಸಿನ ಹಣ್ಣಿನ ಸೊಳೆಯನ್ನು ಅಡಿಕೆ ಹಾಳೆಯ ಚಿಕ್ಕ ಪ್ಲೇಟ್ನಲ್ಲಿಟ್ಟು, ಅದಕ್ಕೆ ಕ್ಲಿಂಗ್ಫಿಲ್ಮ್ ಅಂಗಿ ತೊಡಿಸಿದರೆ ಮಾರಾಟವಾಗುತ್ತೋ ಪ್ರಯತ್ನದಲ್ಲಿದ್ದೇನೆ' ಎಂದರು ಚೌಟರು.

ಹಲಸಿನ ಸಂಸ್ಕರಣೆ ಹಲಸಿನ ಬಳಕೆಗಿರುವ ಶಾಪ! ಅದನ್ನು ಬಿಡಿಸಿ, ಮೇಣದಿಂದ ಪಾರಾಗಿ, ಬೇಳೆಯಿಂದ ಬೇರ್ಪಡಿಸಿದ ಸೊಳೆ ಸಿಕ್ಕರೆ ನಮ್ಮ ಅಡುಗೆ ಮನೆಗಳು ಒಳ್ಳೊಳ್ಳೆಯ ಖಾದ್ಯಗಳಿಗೆ ಸಾಕ್ಷಿಗಳಾಗಬಹುದು! ಹಣ್ಣು ಸೊಳೆಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್ನೊಳಗಿಟ್ಟು ನೀಡಿದರೆ ನಗರಗಳು ಯಾಕೆ, ಹಳ್ಳಿಗಳಲ್ಲೂ ಗ್ರಾಹಕರಿದ್ದಾರೆ!

ಅದನ್ನು 'ಮಿನಿಮಲ್ ಪ್ರಾಸೆಸಿಂಗ್' (ಕನಿಷ್ಠ ಸಂಸ್ಕರಣೆ) ಮಾಡಿ, 'ಅಡುಗೆಗೆ ಸಿದ್ಧ'ವಾಗಿ ನೀಡಿದರೆ ಅಮ್ಮಂದಿರಿಗೆ ಎಷ್ಟೊಂದು ಖುಷಿಯಲ್ವಾ. ಕೇರಳದ ಪತ್ತನಾಂತಿಟ್ಟ ಕಾರ್ಡ್ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ಇಂತಹ 'ರೆಡಿ ಟು ಕುಕ್' ಉತ್ಪನ್ನವನ್ನು ಪ್ರಾಯೋಗಿಕವಾಗಿ ಮಾಡಿ ಗೆದ್ದಿದೆ. ತನ್ನ ಮಳಿಗೆಯಲ್ಲಿ ಮಾರಾಟಕ್ಕಿಟ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಎಳೆ ಹಲಸು, ಬಲಿತ ಹಲಸಿನ ಸೊಳೆ ಮತ್ತು ಹಲಸಿನ ಬೀಜಗಳನ್ನು ಅಡುಗೆಗೆ ಸಿದ್ಧ ರೂಪದಲ್ಲಿ ಕೆವಿಕೆ ತಯಾರಿಸುತ್ತಿದೆ. ಈ ಉತ್ಪನ್ನದ ತಾಳಿಕೆ ಒಂದು ದಿವಸ. ತಂಪುಪೆಟ್ಟಿಗೆಯಲ್ಲಿಟ್ಟರೆ ಮೂರು ದಿವಸ. 'ತಾಳಿಕೆ ಕಡಿಮೆಯಾದರೂ ತೊಂದರೆಯಿಲ್ಲ. ರಾಸಾಯನಿಕ ಬಳಸದೇ ಇರುವ ಹಲಸಿನ ಉತ್ಪನ್ನ ಆರೋಗ್ಯಕ್ಕೆ ಉತ್ತಮ' ಎನ್ನುತ್ತಾರೆ ಹಲಸು ಆಂದೋಳನದ ರೂವಾರಿ ಶ್ರೀ ಪಡ್ರೆ.

ಕೆವಿಕೆಗೆ ಅಂದಂದಿಗೆ ಒಯ್ಯುವ ಗ್ರಾಹಕರಿದ್ದಾರೆ. ಸರಳ ಪ್ಯಾಕಿಂಗ್. ಸದ್ಯಕ್ಕೆ ಥರ್ಮೋಕೋಲ್ ಟ್ರೇ ಮತ್ತು ಅದನ್ನು ಮುಚ್ಚಲು ಪಾರದರ್ಶಕ ಕ್ಲಿಂಗ್ ಫೀಲಂ. ಇನ್ನೂರೈವತ್ತು ಗ್ರಾಮಿನ ಎಳೆ ಹಲಸು ಮತ್ತು ಬೀಜದ ಪ್ಯಾಕೆಟ್ಗಳಿಗೆ ತಲಾ ಇಪ್ಪತ್ತು ರೂಪಾಯಿ. ಬಲಿತ ಹಲಸಿಗೆ ಅರ್ಧ ಕಿಲೋ ಪ್ಯಾಕಿಗೆ ಇಪ್ಪತ್ತು ರೂಪಾಯಿ.

ಕೇವೀಕೆ ಈ ಉತ್ಪನ್ನ ತಯಾರಿಯ ವಿಧಾನವನ್ನು ಇನ್ನೂ ಸುಧಾರಿಸಿ ಬೇಗನೆ ಸ್ಟಾಂಡರ್ಡ್ಯೆಸ್ ಮಾಡಬೇಕೆಂದಿದೆ. ಏನಿದ್ದರೂ ಮಾಡಿದ ಕೆಲಸ ದೊಡ್ಡದು. ಹಲಸು ಬೆಳೆಯುವ ಪ್ರದೇಶಕ್ಕೆಲ್ಲಾ ಹೊಸ ಪಾಠ. ದೊಡ್ಡ ಯಂತ್ರ, ಎಕ್ರೆಗಟ್ಟಲೆ ಜಾಗ, ಕೋಟಿಗಟ್ಟಲೆ ಬಂಡವಾಳ ಬೇಡ. ಸ್ಥಳೀಯವಾಗಿಯೇ ಮಾರಾಟವಾಗುವ ಅವಕಾಶ. ಜನಸಾಮಾನ್ಯರೂ ಕೂಡಾ ಖರೀದಿಸಿ ತಿನ್ನಬಹುದಾದುದು. ಪತ್ತನಾಂತಿಟ್ಟದ ಕಾರ್ಡ್ ಕೆವಿಕೆ ಹಲಸಿನ ಮೌಲ್ಯವರ್ಧನೆಯಲ್ಲಿ ಗಣನೀಯ ಕೆಲಸ ಮಾಡಿದೆ.

ನಗರ ಪ್ರದೇಶದಲ್ಲಿ ಬೆಳ್ಳಂಬೆಳಿಗ್ಗೆ ಮನೆಯೆದುರಿಗೆ ಬರುವ ತರಕಾರಿ ಗಾಡಿಗಳಲ್ಲಿ ಹಲಸಿನ 'ಅಡುಗೆಗೆ ಸಿದ್ಧ' ಉತ್ಪನ್ನ ಸಿಕ್ಕರೆ, ರುಚಿಗೊತ್ತಿದ್ದ ಅಮ್ಮಂದಿರು ಖಂಡಿತಾ ಆಯ್ಕೆ ಮಾಡದಿರರು. ವಿಷದಲ್ಲಿ ಮಿಂದೆದ್ದ ತರಕಾರಿಗಳ ಸೇವನೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದೇನೋ!

ಉತ್ಪನ್ನವನ್ನು ಒದಗಿಸುವ ಚಿಕ್ಕ ಚಿಕ್ಕ ಘಟಕಗಳು ಗೃಹ ಉದ್ಯಮಗಳಾಗಿ ರೂಪುಗೊಳ್ಳಬೇಕು. ಮೀಯಪದವಿನಂತಹ ಹಳ್ಳಿಯಲ್ಲಿ ಪತ್ತನಾಂತಿಟ್ಟದಂತೆ ಅಲ್ಲದಿದ್ದರೂ ಸಣ್ಣಮಟ್ಟಿಗೆ 'ಅಡುಗೆಗೆ ಸಿದ್ಧ'ವಾಗಿಸಲು ಸಾಧ್ಯವಾಗಿದೆಯಂತೆ, ಉಳಿದೆಡೆ ಸಾಧ್ಯವಿಲ್ವಾ. ಹಳ್ಳಿಯ ಮಲ್ಲಿಗೆ ಹೂ ನಗರಕ್ಕೆ ಹೋಗುತ್ತದಲ್ಲಾ, ಅಂತಹ ಮಾರಾಟ ಸರಪಳಿಯನ್ನು ಬೆಸೆಯಬಹುದೇನೋ?
cardkvk@yahoo.com
ಬಾಕ್ಸ್


ಕೇರಳದಲ್ಲೇ ಮೊದಲ ಬಾರಿಗೆ ಕಣ್ಣೂರು ಜಿಲ್ಲೆಯ ಹಳ್ಳಿ ಮೂಲೆಯ 'ನಡುವಿಲ್ ಪಂಚಾಯತು' ಈಚೆಗೆ ದ್ವಿದಿನದ ಹಲಸಿನ ಹಬ್ಬ ಸಂಘಟಿಸಿತು. ಬಲಿತ ಹಲಸನ್ನು ಕತ್ತರಿಸಿ ಒಳಗಿನ ಬೀಜದೊಂದಿಗೆ ಇಡೀ ಸೊಳೆ(ಬಲ್ಬ್)ಯನ್ನು ಕೆಲ ಹೆಣ್ಮಕ್ಕಳು ಪ್ಯಾಕೆಟ್ ಮಾಡಿ ಮಾರಲು ತಂದರು. ಹತ್ತು ಹನ್ನೆರಡು ಇಡೀ ಸೊಳೆಗೆ ಹತ್ತು ರೂಪಾಯಿ ಬೆಲೆ. ಎಲ್ಲರಿಗೂ ಹಲಸು ತುಂಡುಮಾಡಿ ಬಳಸಲು ಗೊತ್ತಿರುವ ಈ ಮೂಲೆಯ ಹಳ್ಳಿಯಲ್ಲಿ ಇದು ಮಾರಾಟವಾದೀತೇ ಎಂಬ ಸಂಶಯ ನನಗಿತ್ತು ಎನ್ನುತ್ತಾರೆ ತಿರುವನಂತಪುರದ ಜ್ಯಾಕ್ ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಕಾರ್ಯದರ್ಶಿ ಎಲ್. ಪಂಕಜಾಕ್ಷನ್. ಆದರೆ ಆ ಹೆಣ್ಮಕ್ಕಳು ಎರಡೇ ದಿನಗಳಲ್ಲಿ ಮುನ್ನೂರು ಪ್ಯಾಕೆಟ್ ಮಾರಿ ಮೂರು ಸಾವಿರ ರೂಪಾಯಿ ಸಂಪಾದಿಸಿದರು! ಹಬ್ಬ ಇಲ್ಲದಿದ್ದರೂ ರಸ್ತೆ ಬದಿಯಲ್ಲೊಂದು ಮೇಜಿಟ್ಟು ಮಾರಹೊರಟರೆ ಒಂದು ಕುಟುಂಬದ ಜೀವನ ಈ ಕೆಲಸದಿಂದ ಸಾಗುತ್ತಿತ್ತು!

0 comments:

Post a Comment