Sunday, June 17, 2012

ಧರ್ಮಸ್ಥಳ : ಹಲಸು ಮೇಳ






ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾರಥ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ 'ಅಮೃತವರ್ಷಿಣಿ' ಸಭಾಂಗಣದಲ್ಲಿ ಜೂನ್ 17, 18ರಂದು ಹಲಸು ಮೇಳ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ಕೃಷಿಕ ಸಮಾಜ ಮಂಗಳೂರು - ಈ ಎಲ್ಲಾ ಸಂಸ್ಥೆಗಳ ಹೆಗಲೆಣೆ. ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟರಿಂದ ದೀಪಜ್ವಲನದ ಮೂಲಕ ಮೇಳದ ಉದ್ಘಾಟನೆ. ಬೆಂಗಳೂರು ಕೃಷಿ ವಿವಿಯ ಉಪಕುಲಪತಿ ಡಾ.ನಾರಾಯಣ ಗೌಡರಿಂದ ದಿಕ್ಸೂಚಿ ಭಾಷಣ. ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ.

ಹಲಸಿನ ಉತ್ಪನ್ನಗಳ ವಿವಿಧ ಮಳಿಗೆಗಳು. ಹಲಸಿನ ಗಿಡಗಳ ಮಾರಾಟ. ಮಧ್ಯಾಹ್ನದೂಟಕ್ಕೆ ಹಲಸೇ ತರಕಾರಿ. ಧರ್ಮಸ್ಥಳ, ತುಮಕೂರು, ಬೆಂಗಳೂರು, ವಿಟ್ಲ ಸುತ್ತುಮುತ್ತಲಿನ ವಿವಿಧ ರುಚಿಗಳ ಹಲಸಿನ ಪ್ರದರ್ಶನ. ಬೆಂಗಳೂರು ತೂಬುಗೆರೆ ಹಲಸು ಬೆಳೆಗಾರರ ಸಂಘದಿಂದ ಹಲಸಿನ ಸೊಳೆಗಳ ಮಾರಾಟ. ವಿಟ್ಲ-ಉಬರು 'ಹಲಸು ಸ್ನೇಹಿ ಕೂಟ'ದಿಂದ ಆ ಭಾಗದ ಉತ್ತಮ ಹಲಸಿನ ಹಣ್ಣಿನ ಪ್ರದರ್ಶನ ಮತ್ತು ಮಾರಾಟ. ಮಿಕ್ಕುಳಿದಂತೆ ಮಾಮೂಲಿ. ವೇದಿಕೆಯಲ್ಲಿ ಹಲಸಿನ ಮಾತುಕತೆ. ಬೆಳಗ್ಗೆ ಸಭಾಭವನ ತುಂಬಿದರೂ, ನಿಜವಾದ ಹಲಸುಪ್ರಿಯರ ದರ್ಶನವಾದುದು ಭೋಜನದ ಬಳಿಕ.

ಉಬರಿನಲ್ಲಾದಂತೆ 'ರುಚಿ ನೋಡಿ, ತಳಿ ಆಯ್ಕೆ' ಪ್ರಕ್ರಿಯ, ಖಾದ್ಯಗಳ ತಯಾರಿ ಮತ್ತು ಸ್ಪರ್ಧೆ’, ಹಲಸಿನ ಕಾಯಿ ಮತ್ತು ಹಣ್ಣು ಸೊಳೆ, ಬೀಜಗಳ ಮೌಲ್ಯವರ್ಧನೆ ಮಾಡುವತ್ತ ವಿಶೇಷ ಗಮನವನ್ನು ಮೇಳಗಳು ಗಮನ ಹರಿಸಬೇಕು. ವಿಟ್ಲದ 'ಹಲಸು ಸ್ನೇಹಿ ಕೂಟ' ಮತ್ತು ಡಾ.ಡಿ.ಸಿ.ಚೌಟರ ನೇತೃತ್ವದಲ್ಲಿ ಹಲಸಿನ ಕಾಯಿ, ಸೊಳೆಗಳ ಮಾರಾಟದ ಪ್ರಾಯೋಗಿಕ ಪ್ರಯತ್ನಗಳು ಯಶ ಕಂಡಿವೆ. ಇಂತಹುದೇ ಪ್ರಕ್ರಿಯೆಗಳು ಗ್ರಾಮ ಮಟ್ಟದಲ್ಲಿ ನಡೆಯುವಂತಾಗಲು ಹಲಸು ಮೇಳಗಳು ಪ್ರೇರಣೆ ಕೊಡಬೇಕು. 'ಹಲಸು ತಿಂದರೆ ಆರೋಗ್ಯ ಹಾಳಾಗುತ್ತದೆ' ಎಂಬ ಮೈಂಡ್ ಸೆಟ್ಟನ್ನು ದೂರಮಾಡುವುದು ಹಲಸು ಮೇಳಗಳ ಮೊದಲಾದ್ಯತೆಯಾಗಬೇಕು. ತೂಬುಗೆರೆ ಹಲಸು ಬೆಳೆಗಾರರ ಸಂಘವು ತಯಾರಿಸಿದ ಒಂದು ಸಾವಿರ ಹಲಸಿನ ಗಿಡಗಳನ್ನು ಬೆಳೆಗಾರರಿಗೆ ವಿತರಿಸಿರುವುದು ಮೇಳದ ಧನಾಂಶ.

0 comments:

Post a Comment