Thursday, September 29, 2011

ಕೃಷಿಕನಿಂದ ಕೃಷಿಕರಿಗಾಗಿ..ಅಡಿಕೆ ಸಾಬೂನು


ಕೃಷಿಕ ಬದನಾಜೆ ಶಂಕರ ಭಟ್ ಕೃಷಿ ಸಂಶೋಧಕ. ಅಡಿಕೆಯ ಪರ್ಯಾಯ ಉತ್ಪನ್ನಗಳ ಕುರಿತು ಎರಡು ದಶಕಗಳ ಸಂಶೋಧನೆ. ಅಡಿಕೆಯ (ಪೂಗ) ಸಾಬೂನು ಈಚೆಗಿನ ಯಶಸ್ವೀ ಉತ್ಪನ್ನ.


ಶಿರಸಿಯ ಬಾಲಚಂದ್ರ ಹೆಗಡೆ ಸಾಯಿಮನೆಯವರು ಮಂಗಳೂರಿನ ಕ್ಯಾಂಪ್ಕೋದಲ್ಲಿ ಪ್ರದರ್ಶಿಸಿದ ಚೀನಾ ನಿರ್ಮಿತ ಅಡಿಕೆ ಸಾಬೂನನ್ನು ವೀಕ್ಷಿಸಿದ ಮೇಲೆ, ಬದನಾಜೆಯವರ ಮನದೊಳಗಿದ್ದ ಸಾಬೂನೂ ಫಾರ್ಮುಲಾಕ್ಕೆ ಮರುಜೀವ.


ಕಾಸರಗೋಡು ಜಿಲ್ಲೆಯಲ್ಲಿ ಸಾಬೂನು ಫ್ಯಾಕ್ಟರಿ ಹೊಂದಿದ್ದ ಏತಡ್ಕ ಶ್ರೀಧರ ಭಟ್ಟರ ಫ್ಯಾಕ್ಟರಿಯಲ್ಲಿ ಮೊದಲ ಪ್ರಯೋಗಕ್ಕೆ ನಾಂದಿ. ಅಡಿಕೆ ಸಾರದೊಂದಿಗೆ ಇತರ ಕಚ್ಚಾವಸ್ತುಗಳ ಪೂರೈಕೆ. ಮೊದಲು ಉತ್ಪನ್ನ ಬಾರ್ ಸೋಪು. ಚೊಚ್ಚಲ ಯತ್ನದಲ್ಲೇ ನಿರೀಕ್ಷೆಯ ಯಶ. ಗುಣಮಟ್ಟ ಪ್ರಾಪ್ತಿ. ಸಮಾನ ಮನಸ್ಕ ಆಪ್ತೇಷ್ಟರಿಗೆ ಸಾಬೂನು ನೀಡಿ ಅಭಿಪ್ರಾಯ ಸಂಗ್ರಹಿಸಿದರು.


ಮುಂದಿನ ಹಂತ ಸ್ನಾನದ ಸಾಬೂನು ತಯಾರಿ. ಮಂಗಳೂರು ಯೆಯ್ಯಾಡಿಯ ಅಶೋಕ ಆಗ್ರೋ ಇಂಡಸ್ಟ್ರೀಸ್ ಮಾಲಿಕರಾದ ಗೋಪಿನಾಥ ಮಲ್ಯರೊಡನೆ ಮಾತುಕತೆ. ಫಾರ್ಮುಲಾ ನೀಡಿಕೆ. ತುಳಸಿ, ಮಲ್ಲಿಗೆ, ಗುಲಾಬಿ, ನಿಂಬೆ ಮತ್ತು ಹಣ್ಣಿನ ಪರಿಮಳವಿರುವ ಐದು ಪರಿಮಳಗಳ ಸಾಬೂನು ತಯಾರಾಯಿತು.


ಫೀಡ್ಬ್ಯಾಕ್ ಪಡೆಯಲು ಸಾಬೂನನ್ನು ಹಂಚಿದರು. ಪರಿಚಿತ ಡಾಕ್ಟರ್ಗಳಿಗೆ ನೀಡಿದರು. 'ಏನಿಲ್ಲವೆಂದರೂ ಮೂರು ಸಾವಿರ ಸಾಬೂನು ನೀಡಿರಬಹುದು' ಎನ್ನುತ್ತಾರೆ ಭಟ್. ಗುಣಮಟ್ಟ, ಬಣ್ಣ, ಪರಿಮಳ ಎಲ್ಲರಿಗೂ ಮೆಚ್ಚುಗೆಯಾಯಿತು. ಮಾರುಕಟ್ಟೆ ಮಾಡುವತೆ ವಿನಂತಿಸಿದವರೇ ಅಧಿಕ. ಸಾಬೂನಿನಲ್ಲಿ ಶುದ್ಧ ತೆಂಗಿನೆಣ್ಣೆಯ ಬಳಕೆ ಮತ್ತು ಕೃತಕ ಪರಿಮಳವಿಲ್ಲ.


ಶಂಕರ ಭಟ್ಟರ ಮಗಳು-ಅಳಿಯ ಬಿ.ಸಿ.ರೋಡಿನಲ್ಲಿದ್ದಾರೆ. ಮಗಳು ಡಾ. ಸ್ಮಿತಾ ಆಯುರ್ವೇದ ವೈದ್ಯೆ. ಅಳಿಯ ಮಕ್ಕಳ ತಜ್ಞ ಡಾ.ಮಹೇಶ್. ಇವರಿಂದ ಸಾಬೂನು ಮಾರುಕಟ್ಟೆ ಮಾಡಲು ಒತ್ತಾಸೆ. ಸಾಬೂನಿಗೆ 'ಪೂಗ ಸಿಂಗಾರ್' ಎಂಬ ನಾಮಕರಣ. ಉದ್ಯಮ ಮಾಡುವ ಉಮೇದು ನನಗಿಲ್ಲ. ಅಡಿಕೆಯ ಗುಣ ಎಲ್ಲರಿಗೂ ಗೊತ್ತಾಗಲಿ ಎಂಬುದು ಮುಖ್ಯ ಉದ್ದೇಶ ಎನ್ನುತ್ತಾರೆ.


‘ನಾನು ಗ್ಲಿಸರಿನ್ ಸಾಬೂನು ಬಳಸುತ್ತಿದ್ದೆ. ಈಚೆಗೆ ಅಡಿಕೆ ಸಾಬೂನು ಬಳಸಲು ಆರಂಭಿಸಿದೆ. ಗ್ಲಿಸರಿನ್ ಸಾಬೂನು ಸ್ನಾನದ ನಂತರ ಏನು ಮುದ ನೀಡುತ್ತದೋ, ಅದನ್ನೇ ಈ ಸಾಬೂನೂ ಕೊಡುತ್ತದೆ ಎನ್ನುತ್ತಾರೆ’ ಮಣಿಪಾಲದ ಶ್ಯಾಮ ಭಟ್.


ಚರ್ಮ ಕಪ್ಪಾಗುವ ಸಮಸ್ಯೆಯಿದ್ದವರ ಚರ್ಮ ಸಹಜ ಸ್ಥಿತಿಗೆ ಬಂದಿದೆ. ಕೂದಲು ಉದುರುವ ಪ್ರಮಾಣ ಕಡಿಮೆಯಾಗಿದೆ. ಮೊಡವೆಗಳ, ಕಣ್ಣಿಗೆ ಕಾಣದ ಗಾಯಗಳ ಶಮನವಾಗಿದೆ. ಇವೆಲ್ಲಾ ಬಳಸಿದವರ ಅನುಭವಗಳು. ಅಡಿಕೆಯ ಸಾರಕ್ಕೆ ಚರ್ಮದ ಸೂಕ್ಷ್ಮಗ್ರಂಥಿಗಳಲ್ಲಿರುವ ಕೊಳೆ ತೆಗೆಯುವ ಸಾಮಥ್ರ್ಯವಿದೆ ಎಂದು ವಿಶ್ಲೇಷಿಸುತ್ತಾರೆ ಭಟ್.


ನಮ್ಮಿಂದ ಸಾಬೂನು ಕೊಂಡೊಯ್ದು ಬಳಸಿದವರ ತಲೆಹೊಟ್ಟು, ಮೊಡವೆ, ತುರಿಕಜ್ಜಿ, ಬೆವರುಸಾಲೆಗಳು ಕಡಿಮೆಯಾಗಿವೆಯಂತೆ, ದನಿಗೂಡಿಸುತ್ತಾರೆ ಡಾ.ಮಹೇಶ್.‘


ಶಂಕರ ಭಟ್ಟರ ಪ್ರಕಾರ, ಅಡಿಕೆ ಸಾರಕ್ಕೆ ಯಾವುದೇ ಪರಿಮಳವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿದೆ. ಹೀಗಾಗಿ ಸ್ನಾನದ ನಂತರವೂ ಪರಿಮಳ ಉಳಿದುಕೊಳ್ಳುತ್ತದೆ. ಎಪ್ಪತ್ತೈದು ಗ್ರಾಮಿನ ಸಾಬೂನಿನ ಬೆಲೆ ಇಪ್ಪತ್ತು ರೂಪಾಯಿ. ತುಳಸಿ, ಗುಲಾಬಿ ಮತ್ತು ಮಲ್ಲಿಗೆ ಪರಿಮಳಕ್ಕೆ ಜನರೊಲವು. ನೈಸರ್ಗಿಕ ಪರಿಮಳ ಬಳಸುವ ಕಾರಣ ಸಾಬೂನಿಗೆ ಅಸಲು ಹೆಚ್ಚು.


ಶಂಕರ ಭಟ್ಟರ ಸಹೋದರ ಮಂಗಳೂರಿನ ಮಂಗಳಾ ನರ್ಸಿಂಗ್ ಹೋಮಿನ ಡಾ.ಗಣಪತಿ ತಮ್ಮ ವ್ಯಾಪ್ತಿಯ ವೈದ್ಯರು, ಪರಿಚಿತರಿಗೆ 'ಪೂಗ ಸಿಂಗಾರ್' ಸಾಬೂನು ಪರಿಚಯಿಸುತ್ತಿದ್ದಾರೆ. ಹೀಗೆ ಆಸ್ಪತ್ರೆ, ಮೆಡಿಕಲ್ ಶಾಪ್, ಕೆಎಂಎಫ್ ಬೂತ್, ಸೊಸೈಟಿ, ಹಳ್ಳಿಗಳ ಅಂಗಡಿಗಳಲ್ಲಿ ಸಿಗುವಂತಾದರೆ ಅಡಿಕೆಯ ಸಾಬೂನು ಯಶಸ್ಸು ಗಳಿಸಬಹುದು.


ಬದನಾಜೆಯವರ ಈ ಶ್ರಮದ ಹಿಂದೆ ಎರಡೂವರೆ ವರುಷದ ಬೆವರಿದೆ. ಲಕ್ಷ ರೂಪಾಯಿಗೂ ಹೆಚ್ಚು ಕಿಸೆಯಿಂದಲೇ ವೆಚ್ಚವಾಗಿದೆ. ಪುತ್ರ ದಿ. ಈಶ್ವರ ಕುಮಾರ್ ಅವರ ನೆನಪಿನ 'ಮಂಗಳಾ ಹರ್ಬಲ್ ಪಾರ್ಕ್, ವಿಟ್ಲ' ಮೂಲಕ ನಡೆಯುತ್ತಿರುವ ಈ ಶಾಹಸದಲ್ಲಿ ಬದನಾಜೆ ಕುಟುಂಬ ಸದಸ್ಯರೆಲ್ಲರ ಪ್ರೋತ್ಸಾಹ, ಶ್ರಮವಿದೆ.


'ಎಲ್ಲಾ ಅಡಿಕೆ ಬೆಳೆಗಾರರು ಈ ಸಾಬೂನನ್ನು ಬಳಸಿದರೆ ಸಾಕು, ಅದುವೇ ದೊಡ್ಡ ಮಾರುಕಟ್ಟೆ,' ಸಾಬೂನನ್ನು ಬಳಸುತ್ತಿರುವ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅವರ ಹೇಳಿಕೆಯಲ್ಲಿ ಮಾರುಕಟ್ಟೆ ಸೂಕ್ಷ್ಮವಿದೆ. ಈ ಸಾಬೂನನ್ನು ಬಿಡುಗಡೆ ಮಾಡಿದ್ದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆಯವರು. ಮಾರುಕಟ್ಟೆ ಕುದುರಿಸಲು ಬದನಾಜೆಯವರೊಂದಿಗೆ ಪ್ರತಿಷ್ಠಾನ, ಕ್ಯಾಂಪ್ಕೋ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಫಾರ್ಮರ್ ಫಸ್ಟ್ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಇತರ ಅಡಿಕೆ ಸಂಸ್ಥೆಗಳು ಕೈಜೋಡಿಸಿವೆ.

(08255 - 233231, 239229 )

Monday, September 26, 2011

ಅಪರೂಪದ ಸಸಿ-ಕಸಿ ಪ್ರೇಮಿ : ಗುರುರಾಜ್ ಬಾಳ್ತಿಲ್ಲಾಯ



ಹಣ್ಣು, ಹೂವಿನ ಗಿಡಗಳನ್ನು ನರ್ಸರಿಯಿಂದ ಕೊಳ್ಳುವಾಗ ಕಸಿ ಗಿಡಗಳತ್ತ ಬಹುತೇಕರ ಒಲವು. ಉತ್ತಮ ಹಣ್ಣು, ಹೂಗಳನ್ನು ಕಸಿ ಗಿಡಗಳಿಂದ ಪಡೆಯಹುದೆನ್ನುವ ನಿರೀಕ್ಷೆ. ಒಂದೇ ತಾಯಿ ಗಿಡಗಳಲ್ಲಿ ಹಲವು ತಳಿಗಳ ವೈವಿಧ್ಯಗಳನ್ನು ಕಸಿ ಮೂಲಕ ಪಡೆಯಬಹುದು. ಹಾಗಾಗಿಯೇ ನರ್ಸರಿಗಳತ್ತ ಜನ ಆಕರ್ಷಿತರಾಗುತ್ತಾರೆ.

ಉಡುಪಿಯ ಗುರುರಾಜ ಬಾಳ್ತಿಲ್ಲಾಯರು ಕಸಿ ತಜ್ಞರು. ಬಾಲ್ಯದಿಂದಲೇ ಕಸಿಯ ಆಸಕ್ತ. ಆರಂಭದಲ್ಲಿ ದಾಸವಾಳಕ್ಕೆ ಕಸಿ ಕಟ್ಟಿದರು. ಯಶವಾಯಿತು. ಕಸಿಯ ಹುಚ್ಚು ಇವರೊಳಗೆ ಕಸಿಯಾಗಿ, ಚಿಗುರಿ, ಮರವಾಗಿದೆ!

ಮೂಲತಃ ಧರ್ಮಸ್ಥಳದವರು. ಹೊಟ್ಟೆಪಾಡಿಗಾಗಿ ಹಿರಿಯ ಕಸಿತಜ್ಞ ಆಲಂಕಾರಿನ ನಾರಾಯಣ ಕೆದಿಲಾಯರ ಸಹಾಯಕರಾಗಿ ದುಡಿತ. ಕಸಿಯ ಸೂಕ್ಷ್ಮ ವಿಚಾರಗಳ ಕಲಿಕೆ. ವಾಣಿಜ್ಯಿಕವಾಗಿ ನರ್ಸರಿಯನ್ನು ರೂಪಿಸುವತ್ತ ಅನುಭವ.

2000ನೇ ಇಸವಿಯಲ್ಲಿ ಉಡುಪಿಗೆ ಬಿಡಾರ (ಮನೆ) ಶಿಪ್ಟ್. ಅಲ್ಲಿಂದ ಕಸಿ ಹವ್ಯಾಸವು ವೃತ್ತಿಯಾಯಿತು. ಕೋ.ಲ.ಕಾರಂತರೊಂದಿಗೆ ಒಡನಾಟ. ಅಪರೂಪದ ಗಿಡ, ಹಣ್ಣುಗಳ ಪರಿಚಯ. ತಾನೂ ನರ್ಸರಿ ಹೊಂದಬೇಕೆಂಬ ಸಂಕಲ್ಪ. ಗೇರು, ಮಾವು, ಮೇಣರಹಿತ ಹಲಸು, ಹೂ ಗಿಡಗಳ ತಯಾರಿ. ಈಚೆಗೆ ಹಲಸಿನ ಕಸಿಯತ್ತ ಆಸಕ್ತ. ಹಲಸಿನ ಮೇಳಗಳು ಬಾಳ್ತಿಲ್ಲಾಯರ ಕಸಿ ಹಸಿವಿಗೆ ಪೂರಕವಾಯಿತು.

ಕಸಿಯಲ್ಲಿ ಹಲವು ವಿಧಗಳು. ಮೃದುಕಾಂಡ ಕಸಿ, ಮೊಗ್ಗುಕಸಿ (ಕಣ್ಣುಕಸಿ), ಸೈಡ್ಗ್ರಾಪ್ಟಿಂಗ್.. ಹೀಗೆ. ಒಂದೂವರೆ ತಿಂಗಳು ಪ್ರಾಯದ ಹಲಸಿನ ಬೀಜದ ಗಿಡಕ್ಕೆ ಮೃದುಕಾಂಡ ಕಸಿ ಸೂಕ್ತ. ಕುಡಿಯನ್ನು ಆರಿಸುವಲ್ಲಿ ಎಚ್ಚರ ಬೇಕು, ಬಿಸಿಲು ಬಿದ್ದ ಜಾಗದಿಂದಲೇ ಕುಡಿಯ ಆಯ್ಕೆ, ಅದರಲ್ಲಿ ಚಿಗುರು ಎಲೆ ಇರಬಾರದು, ಯಾವ ಮರದಿಂದ ಕುಡಿ ತೆಗೆಯುತ್ತೀರೋ ಆ ಮರದ ಗೆಲ್ಲು ತೀರಾ ನೆರಳಿನಲ್ಲಿದ್ದರೆ ಅದರ ಕುಡಿ ಬೇಡ - ಎಂಬ ಸಲಹೆ ನೀಡುತ್ತಾರೆ. ಕಸಿ ಕಟ್ಟಿದ ಬಳಿಕ ತಾಯಿ ಗಿಡದ ಬುಡದಲ್ಲಿ ಬರುವ ಚಿಗುರನ್ನು ತೆಗೆಯಬೇಕು.
ತಾಯಿ ಗಿಡಕ್ಕಾಗಿ (ಅಡಿ ಗಿಡ) ಬೀಜವನ್ನು ಮೊಳಕೆಗೆ ಹಾಕುತ್ತೇವೆ. ಒಂದೊಂದರದ್ದೂ ಬೇರೆ ಬೇರೆ ಗುಣ. ಬೀಜದಿಂದ ಹುಟ್ಟುವ ಗಿಡದಲ್ಲಿ ವಂಶವಾಹಿ ಗುಣ ಹೆಚ್ಚು. ಕಸಿ ಕಟ್ಟಿದ ಬಳಿಕ ಯಾವ ವಂಶದ ಗುಣ ಹೆಚ್ಚಿರುತ್ತದೋ ಅದರದ್ದೇ ಆದ ಫಲ ನೀಡುವ ಸಂಭವ ಹೆಚ್ಚಂತೆ.

ಬೀಜದ ಗಿಡದಲ್ಲಿ ಫಲ ಬಿಡಲು ಆರೇಳು ವರುಷವಾದರೆ, ಕಸಿ ಗಿಡದಲ್ಲಿ ನಾಲ್ಕೇ ವರುಷದಲ್ಲಿ ಇಳುವರಿ. ಒಂದು ವರ್ಷದಲ್ಲಿ ನಾಲ್ಕೈದು ಸಾವಿರದಷ್ಟು ಕಸಿ ಗಿಡಗಳನ್ನು ಬಾಳ್ತಿಲ್ಲಾಯರು ತಯಾರಿಸುತ್ತಾರೆ. ನರ್ಸರಿಗಳಿಂದ ಬೇಡಿಕೆ. 'ಹಳ್ಳಿ ಹಳ್ಳಿಯ ಅಂಗಡಿಗಳಲ್ಲಿ ಕಸಿ ಗಿಡಗಳು ಸಿಗುವಂತಾಗಬೇಕು' ಎನ್ನುವ ಆಶೆ.

ಇವರದು ಬಿಡುವಿರದ ದುಡಿಮೆ. ದಿನದ ಹನ್ನೆರಡು ಗಂಟೆ ಬೆವರಿಳಿದರೂ ಕಾಯಕಷ್ಟವಿಲ್ಲ! ದಿವಸಕ್ಕೆ ನಾಲ್ಕುನೂರು ಕಸಿ ಗಿಡ ತಯಾರಿಸಿದ್ದುಂಟು. ಈಚೆಗೆ ದ.ಕ.ಜಿಲ್ಲೆಯ ಉಬರು ಎಂಬಲ್ಲಿ ಜರುಗಿದ ಹಲಸಿನ ಹಬ್ಬದಲ್ಲ್ಲಿ ಕಸಿ ಕಟ್ಟುವ ತರಬೇತಿಯಿತ್ತು. ಕಸಿ ಸಂಶಯಗಳಿಗೆ ಪಟಪಟನೆ ಉತ್ತರಿಸುವ ಬಾಳ್ತಿಲ್ಲಾಯರ ನಿಜವಾದ ಪ್ರತಿಭೆ ಕಂಡು ಎಲ್ಲರೂ ದಂಗು.

ಉತ್ತಮವಾದ ಹಲಸು-ಮಾವು ಪತ್ತೆಯಾದರೆ ಸಾಕು, ಬಾಳ್ತಿಲ್ಲಾಯರು ಕಾಲಿಗೆ ಚಕ್ರಕಟ್ಟಿಕೊಂಡು ಓಡುತ್ತಾರೆ. ಕುಡಿ ತಂದು ಕಸಿ ಕಟ್ಟುತ್ತಾರೆ. ಆಸಕ್ತರಿಗೆ ನೀಡುತ್ತಾರೆ. ಎಲ್ಲರಲ್ಲೂ ಉತ್ತಮವಾದ ಗಿಡಗಳು ಇರಬೇಕೆಂಬ ಹಪಹಪಿಕೆ. ಬೇರೆಯವರು ಕುಡಿಯನ್ನು ಆಯ್ಕೆ ಮಾಡಿದರೆ ಇವರಿಗೆ ಸಮಾಧಾನವಿಲ್ಲ. ನಾನು ಕಟ್ಟುವ ಕಸಿಗೆ ತನ್ನ ಆಯ್ಕೆಯದೇ ಕುಡಿ.

ನಾಲ್ಕೈದು ವರುಷದಿಂದ ಹಲಸಿನ ಕಸಿ ಗಿಡಗಳಿಗೆ ಬೇಡಿಕೆ ಹೆಚ್ಚು. ಅದರಲ್ಲೂ ಮೇಣವಿಲ್ಲದ ಹಲಸಿನತ್ತ ಜನರ ಒಲವು. ಹಲಸಿನ ಕುರಿತು ಜನರಲ್ಲಿ ಅರಿವು ಹೆಚ್ಚುತ್ತಿದೆ.

ತಳಿ ಸಂಗ್ರಹಗಳು ಮೊದಲು ಗ್ರಾಮಮಟ್ಟದಲ್ಲಿ ಆರಂಭವಾಗಬೇಕು. ನಂತರ ತಾಲೂಕು, ಜಿಲ್ಲಾ ಮಟ್ಟದಲ್ಲಿ ತಳಿ ಆಯ್ಕೆಯ ಪ್ರಕ್ರಿಯ ಶುರುವಾದರೆ ಅಂತಹುದನ್ನು ಕಸಿ ಕಟ್ಟಿ ಒಳ್ಳೆಯ ಹಣ್ಣು ಪಡೆಯಬಹುದು. ಮಾರುಕಟ್ಟೆಯನ್ನು ಮಾಡಬಹುದು ಎಂಬುದು ಬಾಳ್ತಿಲ್ಲಾಯರ ಸಲಹೆ.

ಕಸಿ ಗಿಡಗಳಿಗೆ ಬಾಯಿಗೆ ಬಂದ ದರವನ್ನು ಹೇಳಿ ಹಣವನ್ನು 'ದೋಚುವ' ಸ್ವಭಾವದವರಲ್ಲ. ಅವರೆಂದೂ ಹಣದ ಹಿಂದೆ ಓಡಿದವರಲ್ಲ, ಓಡುವವರೂ ಅಲ್ಲ. ಮನುಷ್ಯರಿಗಿಂತಲೂ ಗಿಡಗಳ ಫ್ರೆಂಡ್ಶಿಫ್ ಅವರಿಗೆ ಖುಷಿ ಕೊಡುತ್ತದೆ. ಇವರು ನಮ್ಮ ನಡುವಿನ ಅಪರೂಪದ ಸಸಿ ಪ್ರೇಮಿ.

(ಮೊ : ೯೭೩೧೭೩೪೬೮೮)

Friday, September 23, 2011

ಶ್ರೀ ಪಡ್ರೆ : ಹವಾಯ್ ನೆನಪು













ಹಿರಿಯ ಪತ್ರಕರ್ತ 'ಶ್ರೀ' ಪಡ್ರೆಯವರು ಹವಾಯ್ ಪ್ರವಾಸದ ಬಳಿಕ ಮರಳಿ ಗೂಡಿಗೆ. ಹವಾಯ್ ಹಣ್ಣು ಕೃಷಿಕರ, ಹಣ್ಣುಗಳ ಪರಿಚಯ. ಪ್ರವಾಸ ಅನುಭವವನ್ನು ದಾಖಲಿಸುವ ದೂರದೃಷ್ಟಿ. ಹವಾಯಿ ನೆನಪಿಗೆ ಈ ಚಿತ್ರ ಗುಚ್ಛ.
(ಚಿತ್ರಗಳು : ಕೆನ್ ಲವ್)

Tuesday, September 20, 2011

ಶ್ರೀ ಪಡ್ರೆ ಸ್ವದೇಶಕ್ಕೆ...





ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ‘ಶ್ರೀ’ ಪಡ್ರೆಯವರು ಹದಿನೈದು ದಿವಸಗಳ ಹವಾಯ್ ಪ್ರವಾಸದ ಬಳಿಕ ಸ್ವದೇಶಕ್ಕೆ ಮರಳುವ ಶುಭಘಳಿಗೆ.

ಹವಾಯ್ ಹಣ್ಣುಕೃಷಿಕ, ಪತ್ರಕರ್ತ ಕೆನ್ ಲವ್ ಅವರ ಆಹ್ವಾನದ ಮೇರೆಗೆ ಪಡ್ರೆಯವರು ಸೆಪ್ಟೆಂಬರ್ 3ರಂದು ಹವಾಯಿಗೆ ಪ್ರಯಾಣಿಸಿದ್ದರು. ಹಣ್ಣು ಬೆಳೆಗಾರರ ವಾರ್ಶಿಕ ಸಮ್ಮೇಳನದಲ್ಲಿ ಭಾಗಿ. ಭಾರತದ ಹಣ್ಣುಗಳ ಕುರಿತು ಪವರ್ ಪಾಯಿಂಟ್ ಪ್ರಸ್ತುತಿ. ಕೆನ್ ಸಾರಥ್ಯದಲ್ಲಿ ಹವಾಯ್ ದ್ವೀಪಗಳಿಗೆ ಭೇಟಿ. ಹಣ್ಣಿನ ತೋಟ ವೀಕ್ಷಣೆ. ರೈತ ಮಾರುಕಟ್ಟೆ ಭೇಟಿ. ರೈತರೊಂದಿಗೆ ಮಾತುಕತೆ. 'ನಮ್ಮೂರಲ್ಲಿಲ್ಲದ ಅನೇಕ ಹಣ್ಣುಗಳ ಪರಿಚಯವಾಯಿತು' ಎನ್ನುತ್ತಾರೆ.

ಕೆನ್ ಅವರ ಊರಲ್ಲಿ ಭಾರತದ ಪ್ರತಿಷ್ಠಿತ 'ಅಡಿಕೆ ಪತ್ರಿಕೆ'ಯ ಸಂಪಾದಕರಿಗೆ ಸಿಕ್ಕ ಗೌರವ ನೆಲವನ್ನು ಪ್ರೀತಿಸುವ ಎಲ್ಲರೂ ಖುಷಿ ಪಡುವಂತಾದ್ದು.

ಶ್ರೀ ಪಡ್ರೆಯವರು ಹವಾಯಿಯಲ್ಲಿದ್ದಷ್ಟು ದಿವಸ ಮಿಂಚಂಚೆ ಮಾತುಕತೆ, ತೆಗೆದ ಫೋಟೋಗಳ ರವಾನೆ, ಚುಟುಕಾದ ಪ್ರವಾಸ ಕಥನಗಳನ್ನು ತಿಳಿಸುತ್ತಲೇ ಇದ್ದರು. ತನಗೆ ತಿಳಿದ ವಿಚಾರ, ಚಿತ್ರಗಳನ್ನು ಸಮಾನಾಸಕ್ತರೊಂದಿಗೆ ಹಂಚಿಕೊಳ್ಳುವುದು ಅವರಿಗೆ ಖುಷಿ.

'ಕನ್ನಾಡನ್ನು ಹವಾಯ್'ಗೆ ಬೆಸೆದ ಜಾಲತಾಣ

ನಾಲ್ಕು ವರುಷದ ಹಿಂದೆ. ಹಿರಿಯ ಪತ್ರಕರ್ತ 'ಶ್ರೀ'ಪಡ್ರೆಯವರಿಗೆ ಜಾಲತಾಣದಲ್ಲಿ ಹವಾಯ್ ದ್ವೀಪದ ಹಣ್ಣು ಕೃಷಿಕ, ಪತ್ರಕರ್ತ ಕೆನ್ ಲವ್ ಸಂಪರ್ಕ. ಜಾಲತಾಣದ ಮೂಲಕ ಹವಾಯಿತ ಹಣ್ಣುಗಳ ಲೋಕದ ವೀಕ್ಷಣೆ. ನಿತ್ಯ ಮಿಂಚಂಚೆ (ಈಮೆಯಿಲ್) ವಿನಿಮಯ. ಮಾಹಿತಿಗಳ ಕೊಡುಕೊಳ್ಳುವಿಕೆ. ಕೆನ್ ಚಟುವಟಿಕೆಗಳ ಪೂರ್ಣದರ್ಶನ. ಕೊನೆಗೆ 'ನಾನು ಭಾರತಕ್ಕೆ ಬರಲಿದ್ದೇನೆ' ಎಂಬ ಮಿಂಚಂಚೆ. ತಿಂಗಳೊಳಗೆ ಹವಾಯಿಯಿಂದ ಕನ್ನಾಡಿಗೆ ಕೆನ್ ಹಾರಿ ಬಂದುಬಿಟ್ಟರು. ಇದು ಜಾಲತಾಣ ಬೆಸೆದ ಬಂಧ.

ಭಾರತಕ್ಕೆ ಅದರಲ್ಲೂ ಕನ್ನಾಡಿನ ಕರಾವಳಿಗೆ ಕೆನ್ಲವ್ ಮೂರು ಸಲ ಬಂದರು. ಕೇರಳದ ವಯನಾಡಿನ 'ಉರವು' ಸಂಘಟಿಸಿದ ಹಲಸಿನ ಮೇಳವನ್ನು ಉದ್ಘಾಟಿಸಿದ್ದರು. ಪುತ್ತೂರಿನ ಗಿಡ ಗೆಳೆತನ ಸಂಘ 'ಸಮೃದ್ಧಿ' ಆಯೋಜಿಸಿದ ಸಂವಾದದಲ್ಲಿ ಪಾಲ್ಗೊಂಡರು. ದಕ್ಷಿಣದ ಕನ್ನಡದ ಕೆಲವು ತೋಟಗಳಿಗೆ ಭೇಟಿಯಿತ್ತು ಕೃಷಿಮನೆಯ ಆತಿಥ್ಯವನ್ನು ಅನುಭವಿಸಿದರು. ಈ ವರುಷದ ಆದಿಯಲ್ಲಿ ಕೇರಳದ ರಾಜಧಾನಿಯಲ್ಲಿ ಜರುಗಿದ 'ರಾಷ್ಟ್ರೀಯ ಹಲಸು ಹಬ್ಬ'ದಲ್ಲಿ ಓಡಾಡಿದರು. ಹವಾಯಿಯ ಹಲಸಿನ ಜ್ಞಾನವನ್ನು ಹಂಚಿಕೊಂಡರು. ಹಲಸಿನ ಸೊಳೆಯನ್ನು ಬಹುಕಾಲ ಕಾಪಿಡುವ ರೆಸಿಪಿಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದರು.

ಕೆನ್ ಲವ್ ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಪ್ರೀತಿಸಿ, ಅನುಸರಿಸಲು ಪ್ರಯತ್ನಿಸಿದವರು. ಇಲ್ಲಿಗೆ ಬಂದಿದ್ದಾಗ ಎರಡೂ ಕೈಜೋಡಿಸಿ 'ನಮಸ್ಕಾರ' ಎನ್ನುತ್ತಾ ಬಾಯಿತುಂಬಾ ನಗುತ್ತಿದ್ದ ಕೆನ್ ನಿತ್ಯ ನೆನಪಾಗುತ್ತಾರೆ. 'ಶ್ರೀ'ಪಡ್ರೆಯವರ ಅಮ್ಮ ಬಡಿಸಿದ ಹಲಸಿನ ಕಾಯಿಯ ದೋಸೆ ತಿಂದು, ಅದರೆ ರೆಸಿಪಿಯನ್ನು ಬರೆದುಕೊಂಡು ಹೋಗಿ ತಮ್ಮನೆಯಲ್ಲಿ ಮಾಡಿ ನೋಡಿದ್ದಾರೆ. ಈಚೆಗೆ ಬಂದಿದ್ದಾಗ ಬೆಣ್ಣೆ ಮಾಡುವ ವಿಧಾನ ನೋಡಿ ಬೆರಗಾದರು ಕೆನ್. ಪ್ಯಾಕೆಟ್ ಬೆಣ್ಣೆ ನೋಡಿದ್ದ ಕೆನ್ 'ಮೊಸರಿನಿಂದ ಬೆಣ್ಣೆ ತೆಗೆಯುವುದನ್ನು ಮೊದಲ ಬಾರಿಗೆ ನೋಡಿದೆ' ಎಂದಿದ್ದರು.

ಕನ್ನಾಡಿನ ನಂಟನ್ನು ಹವಾಯಿಯಲ್ಲೂ ಊರಲು ಶ್ರೀ ಪಡ್ರೆಯವರನ್ನು ಹವಾಯಿಗೆ ಕರೆಸಿಕೊಂಡರು. ಸೆಪ್ಟೆಂಬರ್ 11 ಮತ್ತು 13ರಂದು ಪಡ್ರೆಯವರಿಂದ ಭಾರತದ ಹಣ್ಣುಗಳ ಕುರಿತು ಮಾಹಿತಿ, ಪವರ್ಪಾಯಿಂಟ್ ಪ್ರಸ್ತುತಿ. ಇಲ್ಲಿನ 'ಪುನರ್ಪುಳಿ' ಹಣ್ಣು ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳತ್ತ ಆಸಕ್ತರಾದವರೇ ಹೆಚ್ಚು. ಅಲ್ಲಿನ ಹಸುರು, ಕೃಷಿ, ಹಣ್ಣು, ಜೀವನ.. ಮೊದಲಾದ ಕುರಿತು ಶ್ರೀ ಪಡ್ರೆಯವರು ಸ್ಕೈಪ್ ಸಂದರ್ಶನದಲ್ಲಿ ವಿಚಾರ ಬಿಚ್ಚಿಟ್ಟರು. ಅವರೊಂದಿಗಿನ ಮಾತುಕತೆಯ ಆಯ್ದ ಸರಕು.

ಹಸಿರುಡುಗೆಯ ದ್ವೀಪ

ಹವಾಯ್ ಹಲವು ದ್ವೀಪಗಳ ಸಮುಚ್ಚಯ. ಅಮೇರಿಕಾದ ಸ್ವರ್ಗವೆಂದೇ ಪ್ರಸಿದ್ಧ. 'ಬಿಗ್ ಐಲ್ಯಾಂಡ್' ದೊಡ್ಡ ದ್ವೀಪ. ರಜಾ ಕಳೆಯಲು ಬರುವ ಪ್ರವಾಸಿಗರು ಹೆಚ್ಚು. 'ಅಗ್ನಿಪರ್ವತ' - ಪ್ರವಾಸಿ ಆಕರ್ಷಣೆ. ಬಂದವರಿಗೆ ತೋರಿಸುವುದು ಅಲ್ಲಿನವರಿಗೆ ಸಂತೋಷ.

ಅನತಿ ದೂರದಲ್ಲಿರುವ ಸಮುದ್ರದ ಹವೆ, ಹಸುರು ಮತ್ತು ಹೂಹಣ್ಣುಗಳ ವೈವಿಧ್ಯತೆ ಹವಾಯಿಗರ ಬಂಡವಾಳ. ಇದನ್ನು ಪ್ರವಾಸೋದ್ಯಮಕ್ಕಾಗಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಲ್ಲಿನ ಯಾವ ಭಾಗಕ್ಕೆ ಹೋದರೂ ಮುದ ಅರಸಿ ಬರುವವರಿಗೆ ಸಮೃದ್ಧ. ನಮ್ಮ ಕೇರಳದ ಹಾಗೆ.

ಹವಾಯ್ ಎತ್ತರ ತಗ್ಗುಳ್ಳ ಭೂಪ್ರದೇಶ. ಪಶ್ಚಿಮ ಭಾಗದ ಕೊನಾ ಪ್ರದೇಶ ಕಾಫಿ ಬೆಳೆಗೆ ಪ್ರಸಿದ್ಧ. 'ಕೋನಾ ಕಾಫಿ' ಅಂತಲೇ ಜನಪ್ರಿಯ. ಜಗತ್ತಿನ ಮುಂಚೂಣಿ ಶ್ರೇಣಿಯ ಕಾಫಿಗಳಲ್ಲಿ ಒಂದು. ಕೋನಾ ಕಾಫಿಗೆ ಕಿಲೋಗೆ ಎರಡೂವರೆ ಸಾವಿರ ರೂಪಾಯಿ! ಅಷ್ಟೊಂದು ದುಬಾರಿಯಾ..! ಇದರಲ್ಲಿ ರೈತರಿಗೆ ಸಿಗುವುದು ಮಾತ್ರ ಅತ್ಯಲ್ಪ. ಕಾರ್ಮಿಕ ಸಮಸ್ಯೆ, ಬೆರ್ರಿ ಬೋರರ್ ಕಾಟಗಳು ಕಾಫಿ ಉದ್ದಿಮೆಗೆ ದೊಡ್ಡ ಸವಾಲು. ಸುಮಾರು ಏಳುನೂರು ಮಂದಿ ಕಾಫಿ ಕೃಷಿಕರು ಮುನ್ನೂರೈವತ್ತು ಬ್ರಾಂಡ್ಗಳಲ್ಲಿ ಕಾಫಿ ಪುಡಿ ತಯಾರಿಸುತ್ತಾರೆ.

ಉಕ್ಕಿದ ಲಾವಾರಸದ ಗಟ್ಟಿಯಾದ ಪುಡಿ ಮೇಲ್ಮಣ್ಣು. 'ಮಣ್ಣು' ಅಪರೂಪ. ನಮ್ಮ ಗದಗದ ಭಾಗದಲ್ಲಿನ ಕಪ್ಪುಬಣ್ಣದ ಮಣ್ಣು. ಹಣ್ಣಿನ ಕೃಷಿಗೆ ಉತ್ತಮ. ಕಾಫಿಯಂತಹ ಬೆಳೆಗಳಿಗೆ ಮಾತ್ರ ಗೊಬ್ಬರ ಉಣಿಕೆ. ಮಿಕ್ಕಂತೆ ಯಾವ ಹಣ್ಣಿನ ಕೃಷಿಗೂ ಗೊಬ್ಬರ ಬೇಕಾಗಿಲ್ಲ. ಮಣ್ಣೇ ಗೊಬ್ಬರ! ಅಷ್ಟೊಂದು ಫಲವತ್ತತೆ.

ಹವಾಯ್ ಹಣ್ಣು ಕೃಷಿಗೆ ಖ್ಯಾತಿ. ಬೆಳೆಯುತ್ತಿದ್ದರೂ ಕಾನೂನು ಕಟ್ಟಳೆಯಿಂದಾಗಿ ಬಹುತೇಕ ಹಣ್ಣುಗಳು ಆಮದಾಗುತ್ತಿರುವುದು ದುರ್ದ್ಯೆವ. ಕಳೆದ ಶತಮಾನ ಪೂರ್ವಭಾಗದಲ್ಲಿರಬೇಕು, ಒಮ್ಮೆ ಕ್ಯಾಲಿಫೋರ್ನಿಯಾಕ್ಕೆ ಆಮದಾದ ಬೆಣ್ಣೆ ಹಣ್ಣಿನಲ್ಲಿ ಹುಳವೊಂದು ಗೋಚರಿಸಿತಂತೆ. ಅಲ್ಲಿಂದ ಹಣ್ಣುಗಳ ರಫ್ತಿಗೆ ಕೊಕ್. ಈ ನಿರ್ಬಂಧ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನಗಳಿಗೆ ಇಲ್ಲ.

'ಇವರು ಹಣ್ಣುಗಳನ್ನು ಹೆಚ್ಚು ಬೆಳೆಯುತ್ತಾರೆ, ಬಳಸುತ್ತಾರೆ' ಎಂದು ಮೇಲ್ನೋಟಕ್ಕೆ ಕಂಡರೂ ವಾಸ್ತವ ಹಾಗಿಲ್ಲ. ಕಾರ್ಮಿಕರ ಅಲಭ್ಯತೆಯಿಂದಾಗಿ ಹಣ್ಣುಗಳು ಕೊಯ್ಯದೆ ಹಾಳಾಗುವುದೇ ಹೆಚ್ಚು. ರುಚಿರುಚಿಯಾದ ಹಣ್ಣುಗಳಿದ್ದರೂ ಪರದೇಶದ ಹಣ್ಣುಗಳ ರಫ್ತಿನ ಧಾಳಿಯಿಂದಾಗಿ 'ಸ್ಥಳೀಯತೆ' ನಾಶವಾಗುತ್ತಿದೆ. ಉದಾ: ಬೆಣ್ಣೆ ಹಣ್ಣು. ವಿದೇಶದಿಂದ ತರಿಸಿದ್ದಕ್ಕೆ ಜನರು ಹಣದ ಮುಖ ನೋಡುವುದಿಲ್ಲ. ಆ ಹಣ್ಣಿಗಿಂತಲೂ ಗುಣಮಟ್ಟದಲ್ಲಿ, ರುಚಿಯಲ್ಲಿ ದುಪ್ಪಟ್ಟಾಗಿರುವ ಸ್ಥಳೀಯ ಹಣ್ಣು ಅರ್ಧ ಕ್ರಯಕ್ಕೂ ಬೇಡ!
ಲಾಂಗಾನ್, ರಂಬುಟಾನ್, ಕುಮ್ಕಾಟ್, ಮೈಸೂರು ಬೆರಿ, ರಂಗ್ಪುರ್ ಲಿಂಬೆ, ದಾಲ್ಚಿನ್ನಿ, ಲೊಕಾಟ್, ದೀವಿಗುಜ್ಜೆ, ಜಂಬು, ಅಬಿಯು, ಮೊಂಬಿನ್, ಇನ್ನೂರು ಜಾತಿಯ ಬೆಣ್ಣೆಹಣ್ಣು, ನೂರು ವಿಧದ ಬಾಳೆ, ಜಬೋಟಿಕಾಬಾ, ಪ್ಯಾಶನ್ಫ್ರುಟ್, ಸ್ಟಾರ್ಫ್ರುಟ್, ಬುದ್ಧಾಸ್ಹ್ಯಾಂಡ್, ಗ್ರೀನ್ ಸಪೋಟಾ, ಲಿಲಿಕೋ.. ಹೀಗೆ ಒಂದೇ ಎರಡೇ.

ಭಾರತದ ಹತ್ತಾರು ಹಣ್ಣು, ಹೂವುಗಳು ಅಲ್ಲಿವೆ. ನಮಗೆ ಪರಿಚಯವಿಲ್ಲದ ಹವಾಯಿಯದೇ ಸಾಕಷ್ಟಿದೆ. ದಾಸವಾಳಕ್ಕೆ ಮೊದಲ ಮಣೆ. ಅದು ಹವಾಯಿಯ ರಾಷ್ಟ್ರೀಯ ಪುಷ್ಪ. 'ಇದು ಇಲ್ಲಿನ ಮೂಲ ಜಾತಿ' ಎನ್ನುತ್ತಾ ಮನೆಯಂಗಳದಲ್ಲಿ ನೆಡುವುದು ಮಾನಿನಿಯರಿಗೆ ಹೆಮ್ಮೆ. ದಾಸವಾಳಕ್ಕೆ ಎಷ್ಟು ಖ್ಯಾತಿಯಿದೆಯೋ ಅಷ್ಟೇ 'ಗೋಸಂಪಿಗೆ' ಹೂವಿಗೂ ಇದೆ. ನೀರೆಯರು ಹೂಹಾರವನ್ನು ಹೆಮ್ಮೆಯಿಂದ ಧರಿಸಿಕೊಳ್ಳುವುದು, ಕಿವಿಯಲ್ಲಿಟ್ಟು ಸಂಭ್ರಮಿಸುವುದು, ಮನೆಗೆ ಆಗಮಿಸಿದ ಅತಿಥಿಗಳಿಗೆ ನೀಡುವುದು ಪ್ರಿಸ್ಟೇಜ್. ಇದು ರಾಷ್ಟ್ರೀಯ ಪುಷ್ಟವೇನೋ ಅನ್ನಿಸುವಷ್ಟು ವ್ಯಾಪಕತೆ. ಹವಾಯಿಗರಿಗೆ ಗಾಢ ಬಣ್ಣದ ಅಂಗಿ ಇಷ್ಟ. ಅದರ ಮೇಲೊಂದು ಗೋಸಂಪಿಗೆಯ ಚಿತ್ರ.
ಹಣ್ಣುಗಳನ್ನು ಮೌಲ್ಯವರ್ಧನೆ ಮಾಡುವುದು ಹವ್ಯಾಸವಲ್ಲ, 'ಅಭ್ಯಾಸ'. ಇವು ರೈತರ ಮಾರುಕಟ್ಟೆಯಲ್ಲಿ ಮಾರಾಟ. 'ಮೆಕೆಡೇಮಿಯಾ ನಟ್' - ನಮ್ಮಲ್ಲಿನ ಗೇರು ಬೀಜದ ಹಾಗಿರುವಂತಹುದರಿಂದ ನೂರಾರು ಉತ್ಪನ್ನಗಳು. ಸಾಕಷ್ಟು ಪ್ಯಾಕ್ಟರಿಗಳು, ಉದ್ದಿಮೆಗಳು. ಇದಕ್ಕೆ ಕಾಳುಮೆಣಸು ಸೇರಿಸಿದ ಚಾಕೋಲೇಟ್ ತಿನ್ನದವರು ಕಡಿಮೆ. ಗೃಹ ಉದ್ದಿಮೆಗಳೂ ಸಾಕಷ್ಟಿವೆ. ಆಹಾರ ಉದ್ದಿಮೆ ಹವಾಯಿಯಲ್ಲಿ ಬಲವಾಗಿದೆ. ಬಯಸಿ ಬರುವ ಪ್ರವಾಸಿಗರಿಗೆ ಕೈಗೆಟಕುವ ಪೂರೈಕೆ.

ಮನೆಕಟ್ಟಲು ಕಾಡನ್ನು ನಾಶ ಮಾಡುವುದಿಲ್ಲ. ಹಸುರು ಮಧ್ಯೆ ನಡುನಡುವೆ ಮನೆ. ನಗರೀಕರಣ ಬಂದರೂ ಉಳಿದ ಕಡೆ ಇರುವುದಕ್ಕಿಂತ ಹೆಚ್ಚು ವೈವಿಧ್ಯವನ್ನು ಉಳಿಸುವುದರಲ್ಲಿ ಶಕ್ತರು. ಅಮೇರಿಕಾದ ಉಳಿದ ಪ್ರದೇಶದಲ್ಲಿ ಇಂತಹ ಹಸುರು, ತಂಪಿನ ವಾತಾವರಣ ಸಿಗಲಾರದು. ಪೇರಳೆ ಇಲ್ಲಿ ಕಾಡು ಬೆಳೆ. ಕೆಂಪು ಬಣ್ಣ. 'ಪ್ರಥಮ ಬಾರಿಗೆ ನಾನು ಪೇರಳೆ ಜ್ಯೂಸ್ ಕುಡಿದು ಸವಿದೆ' ಎನ್ನುತ್ತಾರೆ ಪಡ್ರೆ.

ಅರ್ಥಪೂರ್ಣ ಸಮ್ಮೇಳನ

'ಹವಾಯ್ ಟ್ರಾಫಿಕಲ್ ಫ್ರುಟ್ ಗ್ರೋವರ್ಸ್' ಸಂಸ್ಥೆಯು ಹಣ್ಣುಗಳ ಮಾರಾಟ, ಕೃಷಿ ಮತ್ತು ರೈತರ ಕಷ್ಟ-ಸುಖಗಳ ವಿನಿಮಯ-ಪರಿಹಾರ ಕುರಿತಾದ ಮಾತುಕತೆಗೆ ಸಮ್ಮೇಳನ ಏರ್ಪಡಿಸುತ್ತಿದೆ. ಈ ವರುಷ ಸೆ.11, 13ರಂದು ನಡೆದಿತ್ತು. ಅರ್ಥಪೂರ್ಣ ಸಮ್ಮೇಳನ. ಉತ್ತಮ ಕಲಾಪ. 'ಸಮಯ ಕೊಲ್ಲುವ' ಕಲಾಪವಲ್ಲ. ಶ್ರೀ ಪಡ್ರೆಯವರಿಂದ ದಿಕ್ಸೂಚಿ ಭಾಷಣ.

'ಹಲಸು ಮತ್ತು ಪುನರ್ಪುಳಿಯ ಕುರಿತು ಹವಾಯಿಗರು ಬಹಳ ಕುತೂಹಲಿಗರು. ಸಮ್ಮೇಳನದ ಪ್ರದರ್ಶನದಲ್ಲಿ ಸಾಕಷ್ಟು ಹಣ್ಣುಗಳ ಪ್ರದರ್ಶನವಿತ್ತು. ಅಲ್ಲಿನ ಹಣ್ಣುಗಳ ಪ್ರದರ್ಶನ ಇದೆಯಲ್ಲಾ, ಇಡೀ ಹವಾಯಿಗೆ ಬೆಳಕಿಂಡಿ' ಎನ್ನುತ್ತಾರೆ ಪಡ್ರೆ. ಅಪರೂಪದ ಹಣ್ಣಿನ ಚಿತ್ರಗಳುಳ್ಳ 2012ರ ಕ್ಯಾಲೆಂಡರನ್ನು ಸುಂದರವಾಗಿ ಮುದ್ರಿಸಿ, ಸಮ್ಮೇಳನದಲ್ಲಿ ಹಂಚಿದ್ದಾರೆ. ಬಹುಕಾಲ ನೆನಪಿಟ್ಟುಕೊಳ್ಳಬಹುದಾದ ಕ್ಯಾಲೆಂಡರ್.

ಭಾರತದ ನಮಗೆ ಇವರು ಶ್ರೀಮಂತರೆಂದು ಕಂಡರೂ, ನಮ್ಮಲ್ಲಿನ ಸಮಸ್ಯೆ, ಸಂವಹನ ಕೊರತೆ ಸಾಕಷ್ಟಿದೆ. ತಂತ್ರಜ್ಞಾನದ ಅತ್ಯಂತ ಗರಿಷ್ಠ ಬಳಕೆ ಮಾಡುವ ಈ ಊರಲ್ಲಿ ಕೂಡಾ ರೈತ-ರೈತರ ನಡುವೆ ಜಗತ್ತಿನ ಉಳಿದ ಕಡೆ ಏನು ನಡೆಯುತ್ತಿದೆ ಎಂಬ ಕುರಿತು ಮಾಹಿತಿಯ ಕತ್ತಲೆಯಿದೆ.

ಹಣ್ಣು ಪ್ರಿಯರಿಗೆ ಹುಚ್ಚು ಕಟ್ಟಿಸುವ ಪ್ರದೇಶ ಹವಾಯ್. ಉಷ್ಣ ಪ್ರದೇಶದ ಹಣ್ಣುಗಳ ಆಸಕ್ತಿ ಇದ್ದವರಿಗೆ ಹವಾಯ್ ಅಧ್ಯಯನ ತಾಣ.
(20-9-2011-ಉದಯವಾಣಿಯಲ್ಲಿ ಪ್ರಕಟವಾದ 'ನೆಲದ ನಾಡಿ' ಅಂಕಣ ಬರಹ )

Monday, September 19, 2011

ದೀವಿಹಲಸಿನ ಸೋದರ 'ನೀರ್ಗುಜ್ಜೆ’



ಮುಳಿಯ ವಾಣೀ ಶರ್ಮರಲ್ಲಿ ಭೋಜನದ ಹೊತ್ತು. 'ಇದು ಯಾವ ತರಕಾರಿಯ ಪದಾರ್ಥ ಅಂತ ಹೇಳಿ' ಎನ್ನುತ್ತಾ ಬಡಿಸುತ್ತಿದ್ದರೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಉತ್ತರ ಹೇಳಿದಂತೆ ಒಂದಿಬ್ಬರು 'ದೀವಿಹಲಸು, ಎಳೆಗುಜ್ಜೆ' ಎಂದರು. ಎಲ್ಲರ ಅಂಕಗಳೂ ಶೂನ್ಯ ಸಂಪಾದನೆ. 'ಇದು ನೀರ್ಗುಜ್ಜೆ' ಅವರೇ ಉತ್ತರ ಹೇಳಿದರು.

ಗುಜ್ಜೆ (ಹಲಸಿನ ಎಳೆ ಕಾಯಿ) ಕೇಳಿದ್ದೇವೆ. ಇದು ನೀರ್ಗುಜ್ಜೆ, ನೀರಿನ ಗುಜ್ಜೆ.. ನೀರಿನಾಶ್ರಯವಿರುವಲ್ಲಿ ಹೆಚ್ಚು ಬೆಳೆಯುವ ಗಿಡವಾದ್ದರಿಂದ 'ನೀರ್ಗುಜ್ಜೆ.' ಪ್ರಾದೇಶಿಕವಾಗಿ 'ನೀರ್ಕುಜುವೆ, ನೀರ್ಹಲಸು, ಹೆಂಬ ಹಲಸು' ಎಂಬ ಹೆಸರಿದೆ. ನಿಜಕ್ಕೂ ಅಪರೂಪದ್ದೇ. ಫಕ್ಕನೆ ನೋಡುವಾಗ ಥೇಟ್ ಎಳೆ ಹಲಸಿನಂತಿದೆ. ಹೆಬ್ಬಲಸಿನ ಹೋಲಿಕೆ. ದೀವೀ ಹಲಸಿನ ಗಾತ್ರ. ಪದಾರ್ಥದೊಂದಿಗಿನ ಹೋಳುಗಳು ಎಳೆ ಹಲಸಿನ ಗುಜ್ಜೆಯದೇ ರುಚಿ, ಸ್ವಾದ.

ಒಳ್ಳೆಯ ನೀರಿರುವ ಜಾಗದಲ್ಲಿ ಬೇಗ ಫಸಲು. ಬಹುವಾರ್ಶಿಕ ತರಕಾರಿ. ಬೀಜದಿಂದಲೇ ಗಿಡ. ಕಾಯಿ ಬಿಟ್ಟು ಒಂದೂವರೆ ತಿಂಗಳ ನಂತರ, ಮೂರು ತಿಂಗಳ ಒಳಗೆ ಬೆಳೆದ ಎಳೆ ಹಲಸು ಬಳಕೆಗೆ ಸೂಕ್ತ. ಬಲಿತರೆ ಅಷ್ಟಕ್ಕಷ್ಟೇ. ಗಿಡಗಳ ಒಂದೊಂದು ಗೆಲ್ಲುಗಳ ತುದಿಯಲ್ಲಿ ಎರಡರಿಂದರಿಂದ ಮೂರು ಕಾಯಿಗಳು. ನೀರ್ಗುಜ್ಜೆಯ ಮೈಮೇಲೆ (ಹಾರ್ಡ್ ಅಲ್ಲದ) ದೊಡ್ಡದಾದ ಮುಳ್ಳುಗಳಿವೆ. ಇದರಿಂದಾಗಿ ಬಾವಲಿಗಳಿಂದ ರಕ್ಷೆ.

ಗಿಡ ಮಾಡಿದ ಐದು ವರ್ಷದಲ್ಲೇ ಫಸಲು. ಆರಂಭದಲ್ಲಿ ಗಂಡು ಹೂಗಳ ಸಂಖ್ಯೆ ಜಾಸ್ತಿ. ಬಳಿಕ ಸರಿಹೋಗುತ್ತದೆ. ಸದೃಢವಾಗಿ ಬೆಳೆಯಲು ಬಿಸಿಲು ಬೇಕು. ತೀರಾ ನೆರಳಿನಲ್ಲಿ ಕಷ್ಟ. ಇದರ ಎಲೆಯು ದೀವೀಹಲಸನ್ನು ಹೋಲುತ್ತದೆ. ಒಂದೊಂದು ಕಾಯಿ ಅರ್ಧದಿಂದ ಒಂದು ಕಿಲೋದವರೆಗೆ ತೂಕ. 'ಆಗಸ್ಟ್ ತಿಂಗಳಲ್ಲಿ ದೀವೀ ಹಲಸು ಮುಗಿದಿರುತ್ತದೆ. ನಂತರ ಇದರ ಸರದಿ. ವರುಷಕ್ಕೆ ಎರಡು-ಮೂರು ಸಲ ಇಳುವರಿ ಕೊಡುತ್ತದೆ' ಎನ್ನುತ್ತಾರೆ ವಿಟ್ಲ (ದ.ಕ.) ಅಳಿಕೆ ಸನಿಹದ ವೆಂಕಟಕೃಷ್ಣ ಶರ್ಮ.

ಒಂದು ಕಾಯಲ್ಲಿ ಸುಮಾರು ಮೂವತ್ತೈದರಿಂದ ನಲವತ್ತು ಬೀಜಗಳು. ಹಲಸಿನ ಬೀಜದಂತೆ ಚಿಕ್ಕವು. ಇದನ್ನು ಕೂಡ ಪದಾರ್ಥ ಮಾಡಬಹುದೇನೋ? ಕಾಯಿ ಬಲಿಯುವುದಕ್ಕಿಂತ ಮೊದಲೇ ನಾವು ಪದಾರ್ಥ ಮಾಡುವುದರಿಂದ ಇನ್ನೂ ಪ್ರಯತ್ನಿಸಿಲ್ಲ ಎನ್ನುತ್ತಾರೆ ವಾಣೀ ಶರ್ಮ. ಮರದಲ್ಲಿ ಕಾಯಿಕಚ್ಚಿ ನಾಲ್ಕು ತಿಂಗಳಾಗುವಾಗ ಹಣ್ಣಾಗಿ ಬೀಳುತ್ತದೆ.

'ನೀರ್ಗುಜ್ಜೆಯ ಸಿಪ್ಪೆಯನ್ನು ಕೆತ್ತಿ, ಎರಡಾಗಿ ಭಾಗ ಮಾಡಿ ನೀರಿನಲ್ಲಿ ಹಾಕಿ. ಅದರ ಹಾಲಿನಂತಹ ಮೇಣ ತೊಳೆದುಹೋಗುತ್ತದೆ. ಹೋಳುಗಳನ್ನಾಗಿ ಮಾಡಿ, ಅರ್ಧ ಗಂಟೆ ಮಜ್ಜಿಗೆಯಲ್ಲಿ ನೆನೆ ಹಾಕಿ. ಹೋಳಲ್ಲಿದ್ದ ಚೊಗರು (ಕನೆರು) ಬಿಟ್ಟುಕೊಡುತ್ತದೆ. ನಂತರ ಮಜ್ಜಿಗೆಯನ್ನು ಚೆಲ್ಲಿ, ಹೋಳುಗಳನ್ನು ಮಾತ್ರ ಪದಾರ್ಥ ಮಾಡಿ. ಒಳ್ಳೆಯ ರುಚಿ. ನಾವು ಪಲ್ಯ, ಗಸಿ, ಸಾಂಬಾರು, ಕಾಯಿಹುಳಿ ಮಾಡುತ್ತೇವೆ' ಎನ್ನುತ್ತಾರೆ ಶರ್ಮ.

ಶರ್ಮರಲ್ಲಿ ಎರಡು ಮರವಿದೆ. ಒಂದರಲ್ಲಿ ಇಳುವರಿ. ಹತ್ತು ವರುಷದ ನಂತರ ಒಂದು ಮರವು ಐವತ್ತರಿಂದ ನೂರು ಕಾಯಿವರೆಗೆ ಬಿಡಬಹುದು ಎಂಬ ಅಂದಾಜು. ಮರ ವಿಶಾಲ. ಅತಿ ಎತ್ತರ. ಉದ್ದಗಲ ವಿಶಾಲ. ನಿತ್ಯ ಹಸುರಿನ ಮರ. ಮಾರಾಟ ದೃಷ್ಟಿಯಿಂದ ಯಶಸ್ಸಾಗದೇನೋ. ಕಾರಣ, ಬಹುತೇಕರಿಗೆ ಇದೊಂದು ತರಕಾರಿ ಅಂತ ಗೊತ್ತಿಲ್ಲ

'ನಮ್ಮಲ್ಲಿ ಮನೆ ಬಳಕೆಗೆ ಮೀರಿದ್ದು ಆತ್ಮೀಯರಿಗೆ, ಸ್ನೇಹಿತರಿಗೆ ನೀಡುತ್ತೇನೆ. ಕೇಳಿದವರಿಗೆ ಗಿಡ ಮಾಡಿ ಕೊಟ್ಟದ್ದುಂಟು. ಇದು ನಿರ್ಲಕ್ಷ್ಯಕ್ಕೆ ಒಳಗಾದ ತರಕಾರಿ' ಎಂದು ನೀರ್ಗುಜ್ಜೆಯ ನಂಟನ್ನು ಶರ್ಮಾ ವಿವರಿಸುತ್ತಾರೆ.

Friday, September 9, 2011

ಹಳ್ಳಿಯೆಂದರೆ ಯಾಕೆ ಅನಾದರ?




ಹಳ್ಳಿ ಮನೆಯೊಂದರ ಸಮಾರಂಭ. ಅಲ್ಲಿಗೆ ರಾಜಧಾನಿಯಲ್ಲಿ ವಾಸವಿರುವ ಒಂದೆರಡು ಕುಟುಂಬಗಳೂ ಬಂದಿದ್ದುವು. ಭೋಜನಕ್ಕೆ ನೆಲದ ಮೇಲೆ ಚಾಪೆ ಹಾಸಿ, ಬಾಳೆಲೆ ಇಟ್ಟು ಬಡಿಸುವ ಪ್ರಕ್ರಿಯೆ ಶುರು. ಹೆಣ್ಮಗಳೊಬ್ಬಳು ಲೋಟಕ್ಕೆ ನೀರು ಸುರಿಯುತ್ತಿದ್ದಂತೆ, ಪಂಕ್ತಿಯ ಮಧ್ಯದಲ್ಲಿದ್ದ ಸುಮಾರು 10-12 ವರುಷದ ಬಾಲಕರಿಬ್ಬರು, 'ಛೀ.. ಈ ನೀರನ್ನು ಕುಡಿಯುವುದಾ.. ನಮಗೆ ಬಾಟಲ್ ನೀರೇ ಬೇಕು' ಅಂತ ರಂಪಾಟ ಮಾಡಿದುವು. ಬಾಟಲ್ ನೀರು ತರಬೇಕೆಂದರೆ ಏನಿಲ್ಲವೆಂದರೂ 15-20 ಕಿಲೋಮೀಟರ್ ದೂರದ ಪೇಟೆಗೆ ಹೋಗಲೇಬೇಕು. 'ಇಲ್ಲವೆಂದರೆ ನಮಗೆ ಊಟವೇ ಬೇಡ' ಅಂತ ದಡಬಡನೆ ಎದ್ದುಹೋದರು.

ನಮ್ಮ ಮಕ್ಕಳಿಗೆ ನಗರ ಕಲಿಸಿಕೊಡುವ ಸಂಸ್ಕಾರ. ಹತ್ತು ಮಂದಿ ಸೇರಿದಲ್ಲಿ ಕನಿಷ್ಠ ಸೌಜನ್ಯವಾದರೂ ಬೇಡವೇ? ಪೇಟೆಯಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ಬಾಟಲಿ ನೀರು ಅಮೃತ! ನೈಸರ್ಗಿಕವಾಗಿ ಸಿಗುವ ಹಳ್ಳಿಯ ಬಾವಿಯ ನೀರು ವಿಷ! ನಗರದ ಬಹುತೇಕ ವ್ಯವಸ್ಥೆಗಳು ಹಳ್ಳಿಯನ್ನು ಕೆಟ್ಟದಾಗಿ ಚಿತ್ರಿಸಿರುವ ಫಲ.

ಅಂದು ಸಂಜೆ ಮಕ್ಕಳೆಲ್ಲಾ ಗದ್ದೆಯಲ್ಲಿ ಆಡುತ್ತಿದ್ದರು. ಈ ಪೇಟೆಯ ಹೈದಗಳು ಗುಂಪಿನಿಂದ ಬೇರೆಯಾಗಿ ಕುಳಿತಿದ್ದರು. ನೀವ್ಯಾಕೆ ಅವರೊಂದಿಗೆ ಆಡುವುದಿಲ್ಲ ಎಂದು ಪ್ರಶ್ನಿಸಿದೆ. 'ಛೇ.. ಅವರು ಆಡುವ ಜಾಗ ನೋಡಿದ್ರಾ.. ಅವರ ಕೈ ಮೈಯೆಲ್ಲಾ ಮಣ್ಣಾಗಿದೆ ನೋಡಿ' ಎಂದು ಮುಖ ಸಿಂಡರಿಸಿಕೊಂಡರು! 'ಎಂತ ಊರು ಮಾರಾಯ್ರೆ. ಇಲ್ಲಿ ರೇಂಜ್ ಕೂಡಾ ಸಿಗ್ತಾ ಇಲ್ಲ' ಅಂತ ಮೊಬೈಲಲ್ಲಿ ಬೆರಳಾಡಿಸುತ್ತಿದ್ದರು.ಮಣ್ಣೆಂದರೆ ಹೇಸಿಗೆ, ಮಣ್ಣಿನಲ್ಲಾಡುವ ಮಕ್ಕಳೆಂದರೆ ಹೇಸಿಗೆ. ನಗರದಲ್ಲಿ ಬೆಳೆದು ಅಲ್ಲಿನ ಮಣ್ಣಿನೊಂದಿಗೆ ಆಡಿದ ಮಕ್ಕಳಿಗೆ ಹಳ್ಳಿಯ ಮಣ್ಣು ಕೆಸರು! ರೋಗರುಜಿನಗಳ ಮೂಲವಂತೆ. ಅಪ್ಪಾಮ್ಮ 'ಕ್ಲೀನ್' ಕುರಿತು ಮಕ್ಕಳಿಗೆ ಬೋಧಿಸಿದ ಪರಿ.

'ಮಣ್ಣಿನಲ್ಲಾಡಿದರೆ ರೋಗ ಬರುತ್ತಂತೆ. ವೈರಸ್ ದೇಹ ಪ್ರವೇಶಿಸುತ್ತದಂತೆ. ನಮ್ಗೆ ನಾಡಿದ್ದು ಪರೀಕ್ಷೆ ಇದೆ. ಎಲ್ಲಾದರೂ ಜ್ವರ ಬಂದರೆ? ಹಾಗಾಗಿ ನಾವು ಅವರೊಂದಿಗೆ ಆಟವಾಡದೆ ಇಲ್ಲೇ ಇದ್ದೇವೆ' ಪಾಪ, ಮುಗ್ಧ ಮನಸ್ಸುಗಳೊಗೆ ಹಳ್ಳಿಯ ಕುರಿತಾಗಿ ಅದೆಷ್ಟು ತಪ್ಪು ಕಲ್ಪನೆ. ಇಲ್ಲೊಂದು ಆಶ್ಚರ್ಯ ನೋಡಿ. ಇದೇ ಅಪ್ಪಾಮ್ಮ, ಈ ಹಳ್ಳಿಯ ನೀರು ಕುಡಿದು, ಮಣ್ಣು ಮೆತ್ತಿಸಿಕೊಂಡೇ ಬಾಲ್ಯವನ್ನು ಕಳೆದವರು. ಅವರೀಗ ನಗರದಲ್ಲಿ ಲವಲವಿಕೆಯಿಂದ ಇರುವುದಕ್ಕೆ ಹಳ್ಳಿಯ ಈ ಮಣ್ಣೂ ಕಾರಣವಲ್ವಾ!

ವರುಷಪೂರ್ತಿ ಮಣ್ಣಿನೊಂದಿಗೆ ಮಾತನಾಡುತ್ತಾ ಜೀವಿಸುವ, ನಗರದ ಹಸಿದ ಹೊಟ್ಟೆಗಳಿಗೆ ತುತ್ತನ್ನೀಯುವ ಕೃಷಿಕನಿರುವುದು ಹಳ್ಳಿಯಲ್ಲಿ ತಾನೆ. ದಿನವಿಡೀ ಮೈಕೈಗೆ ಕೆಸರು ಮೆತ್ತಿಸಿಕೊಂಡು ಬದುಕುತ್ತಿದ್ದರೂ ಒಮ್ಮೆಯೂ ವೈದ್ಯರ ಭೇಟಿಯಾಗದ ಎಷ್ಟು ಮಂದಿ ಬೇಕು? ಅವರಿನ್ನೂ ಆರೋಗ್ಯವಾಗಿದ್ದಾರೆ. ಗಟ್ಟಿಮುಟ್ಟಾಗಿದ್ದಾರೆ. ಶುಗರ್, ಬಿಪಿ ಅವರ ಹತ್ತಿರ ಸುಳಿದಿಲ್ಲ. ಅರುವತ್ತು ವರ್ಷ ದಾಟಿದರೂ ಅರುವತ್ತು ಕಿಲೋ ಭಾರವನ್ನು ನಿರಾಯಾಸವಾಗಿ ಬೆನ್ನಿಗೇರಿಸಬಲ್ಲರು. ಮೈಲುಗಟ್ಟಲೆ ನಡೆಯಬಲ್ಲರು.
ಆ ಸಮಾರಂಭದಲ್ಲಿ ಸಂಜೆ ಎಲ್ಲರಿಗೂ ಕಾಫಿ, ಅವಲಕ್ಕಿ ಸಮಾರಾಧನೆ. ರಾತ್ರಿ ಭೋಜನ. ನಿತ್ಯ ಡೈನಿಂಗ್ ಮೇಜಲ್ಲಿ ಉಂಡ ಈ ಮಕ್ಕಳು ಪಂಕ್ತಿಯಲ್ಲಿ ಕೂರಲು ಪಟ್ಟ ಸಾಹಸ ನೋಡಬೇಕು! ಕೊನೆಗೆ ಎತ್ತರದ ಬೆಂಚನ್ನಿಟ್ಟು, ಅದರಲ್ಲಿ ಡೈನಿಂಗ್ ಮೇಜನ್ನು ಆವಾಹಿಸಿ ಕೂರಿಸಿದಾಗಲೇ ಉಂಡರು.
ಸರಿ ಬೆಳಿಗ್ಗೆಯಾಯಿತು. ಪುಂಡಿ, (ಅಕ್ಕಿಯಿಂದ ಮಾಡುವ ತಿಂಡಿ) ಸಾಂಬಾರು ರೆಡಿ. ಇವಕ್ಕೆ ತಿಂಡಿ ಎಲ್ಲಿ ಗೊತ್ತು? 'ಚಪಾತಿ ಬೇಕೆಂಬ ಹಟ'! 'ಏನ್ರೋ, ಒಂದಿನ ಅಲ್ವಾ. ಸ್ವಲ್ಪ ಅಡ್ಜಸ್ಟ್ ಮಾಡ್ರಪ್ಪಾ' ಅಪ್ಪನ ಮನವಿ. 'ಅವನಿಗೆ ಇದೆಲ್ಲಾ ರೂಢಿಯಿಲ್ಲ' ಅಮ್ಮನ ಸರ್ಟಿಫಿಕೇಟ್. ಚಪಾತಿಯೇನೋ ಸಿದ್ಧವಾಯಿತು. ಗಸಿ ಬೇಕಲ್ವಾ!

ಒಂದು ದಿವಸದಲ್ಲಿ ಯಾವ ವ್ಯವಸ್ಥೆಗೂ ಒಗ್ಗಿಕೊಳ್ಳಲಾಗದೆ ಒದ್ದಾಡಿದ ಆ ಮಕ್ಕಳನ್ನು ಗ್ರಹಿಸಿದಾಗ ಅಯ್ಯೋ ಅನ್ನಬೇಕು. ಇತ್ತ ಹಳ್ಳಿಯ ಬದುಕನ್ನು ಅನುಭವಿಸಿ ಗೊತ್ತಿಲ್ಲ. ನಗರಕ್ಕಿಂತಲೂ ಹೊರತಾದ ಶುಭ್ರ ಬದುಕೊಂದಿದೆ ಅಂತ ಅಪ್ಪಾಮ್ಮ ಹೇಳಿಕೊಟ್ಟಿಲ್ಲ. ಇಂತಹ ಹೊತ್ತಲ್ಲಿ ಪಾಪ, ಮಕ್ಕಳನ್ನು ದೂರಿ ಏನು ಪ್ರಯೋಜನ? ಅವಾದರೂ ಏನು ಮಾಡಿಯಾವು? ನಮ್ಮ ಮಕ್ಕಳಿಗೆ ನಾವೇ ಶತ್ರುಗಳು.

ನಗರವೆಂದರೆ ಶುಚಿ, ರುಚಿ! ಎಲ್ಲಾ ಆಧುನಿಕ ಸೌಲಭ್ಯಗಳು ಬೆರಳ ತುದಿಯಲ್ಲಿವೆ. ಹೊಸ್ತಿಲು ದಾಟಿದರೆ ಅಟೋಗೆ ಕೈ ಮಾಡಿದರಾಯಿತು, ಮನೆಮುಂದೆ ನಿಲ್ಲುತ್ತದೆ. ಪೇಪರ್ ಬೆಳ್ಳಂಬೆಳಿಗ್ಗೆ ಜಗಲಿಯಲ್ಲಿ ಬಿದ್ದಿರುತ್ತದೆ. ಹಾಲೂ ಅಷ್ಟೇ. ದಿನಪೂರ್ತಿ ಕರೆಂಟ್. ಕೆಡದ ದೂರವಾಣಿ. ಕೈತುಂಬಾ ಕಾಂಚಾಣ. ಇಷ್ಟಕ್ಕೆ ಬದುಕು ನಿಂತುಬಿಡುತ್ತದೆ. ನಗರದ ಈ ವ್ಯವಸ್ಥೆಗೆ ಬದುಕು ಒಗ್ಗಿಹೋಗಿರುತ್ತದೆ. ಇದಕ್ಕೆ 'ಅನಿವಾರ್ಯ'ದ ಹಣೆಪಟ್ಟಿ.

ಹಾಗಿದ್ದರೆ ಖುಷಿ ಎಲ್ಲಿದೆ? ಹಳ್ಳಿಯಲ್ಲಿ ಹಲವು ಸಮಸ್ಯೆಗಳಿದ್ದರೂ ಖುಷಿಗೇನೂ ಬರವಿಲ್ಲ. ನಮ್ಮ ಊಟದ ಬಟ್ಟಲನ್ನು ತುಂಬುವುದು ಹಳ್ಳಿ. ಕಾಫಿಗೆ ಹಾಲು ಬರುವುದು ಹಳ್ಳಿಯಿಂದ. ಹಸಿರು ಸೊಪ್ಪು, ತರಕಾರಿಗಳನ್ನು ಯಾವುದೇ ಫ್ಯಾಕ್ಟರಿ ಸಿದ್ಧಮಾಡುವುದಿಲ್ಲ. ಅವೆಲ್ಲಾ ಬರುವುದು ಹಳ್ಳಿಯಿಂದ. ಒಂದು ದಿವಸ ಹಳ್ಳಿಯಿಂದ ನಗರಕ್ಕೆ ತರಕಾರಿ ಹೋಗದಿದ್ದರೆ ನಗರದ ಎಲ್ಲಾ 'ಅಡುಗೆ ಮನೆ'ಗಳು ಬಂದ್!

ಹಳ್ಳಿ ಎಂಬ ಅನಾದರ ಬೇಡ. ನಗರದ ಬೇರು ಇರುವುದು ಹಳ್ಳಿಯಲ್ಲಿ ತಾನೆ. ಹಳ್ಳಿಯಲ್ಲಿದ್ದವರಿಗೂ ಮನಸ್ಸು ಇದೆ. ಬದುಕು ಇದೆ. ಕುಟುಂಬ ಇದೆ. ಅವರಿಗೂ ಬೇಕು ಬೇಡಗಳಿವೆ. ಹಾಗಾಗಿ ಹಳ್ಳಿಯ ಬಗ್ಗೆ ಅನಾದರ ಉಂಟಾಗುವಂತೆ ಬೋಧನೆ ಬೇಡ. ನೀವು ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಈಗ ನಗರದಲ್ಲಿದ್ದರೆ ಕನಿಷ್ಠ ತಿಂಗಳಿಗೊಮ್ಮೆಯಾದರೂ ಸಂಸಾರದೊಂದಿಗೆ ಹಳ್ಳಿಗೆ ಬನ್ನಿ. ಮಕ್ಕಳಿಗೆ ಹಳ್ಳಿಯ ಸೊಬಗನ್ನು, ಶುಚಿ-ರುಚಿಯಾದ ವಾತಾವರಣವನ್ನು ಸವಿಯಲು ಅವಕಾಶ ಮಾಡಿ ಕೊಡಿ.

ಪತ್ರಕರ್ತ ಶಿವಾನಂದ ಕಳವೆ ಒಂದೆಡೆ ಹೇಳುತ್ತಾರೆ - 'ನಮಗೆ ಬದುಕಲು ಅನ್ನ ಬೇಕೇ ಬೇಕು. ಇನ್ನೇನು ನಾಲ್ಕೈದು ವರುಷಗಳಲ್ಲಿ ಒಂದು ಕಿಲೋ ಅಕ್ಕಿಯ ಬೆಲೆ ಐವತ್ತು ರೂಪಾಯಿ ದಾಟಿದರೂ ಆಶ್ಚರ್ಯವಿಲ್ಲ. ಅಂತಹ ಕಾಲಕ್ಕೆ ಮೊಬೈಲ್ ಕರಿ, ಸೀಡಿ ಸಲಾಡ್, ಟಿವಿ ಫ್ರೈ, ಕಂಪ್ಯೂಟರ್ ರಾಯತ, ಕಾರ್ ಬೋಂಡ, ಬೈಕ್ ಬೇಳೆ ಬಾತ್, ಐಪಾಡ್ ತಂಬುಳಿ ಊಟ ಮಾಡಲಾಗುತ್ತದೆಯೇ? ಹಳ್ಳಿ ಮತ್ತು ಅಲ್ಲಿನ ಕೃಷಿಯನ್ನು ಉಳಿಸುವ ಕೆಲಸ ಕೇವಲ ಸರಕಾರದ ಜವಾಬ್ದಾರಿಯಲ್ಲ, ಸಬ್ಸಿಡಿಗಳ ಗುತ್ತಿಗೆಯಲ್ಲ. ಹೈಟೆಕ್ ನಗರ ಸೇರಿದವರ ಪ್ರಥಮ ಕರ್ತವ್ಯ'.

'ನಾನು ನಲವತ್ತಕ್ಕೂ ಮಿಕ್ಕಿ ದೇಶವನ್ನು ಸುತ್ತಿದ್ದೇನೆ. ನಗರದ ಯಾವ ಮೋಹವೂ ನನ್ನನ್ನು ಆವರಿಸಿಲ್ಲ. ರಂಗುರಂಗಿನ ಆಧುನಿಕ ಭರಾಟೆಗಳು ನನ್ನನ್ನು ಸ್ಪರ್ಶಿಸಿಲ್ಲ. ಎಲ್ಲಾ ದೇಶಗಳ ಬದುಕಿನ ಧಾವಂತವನ್ನು ಕಂಡ ನಾನೀಗ ಹಳ್ಳಿ ಮನೆಯಲ್ಲಿ ಸುಖವಾಗಿದ್ದೇನೆ - ಈ ವರುಶದ ಆರಂಭದಲ್ಲಿ ಬಜಗೋಳಿಯಲ್ಲಿ ಜರುಗಿದ ಕೃಷಿ ಮೇಳದಲ್ಲಿ ಕೆ.ಎಂ.ಉಡುಪರು ಮಾತಿನ ಮಧ್ಯೆ ಹೇಳಿದ ಮಾತು ನಿಜಕ್ಕೂ ಮರೆಯಬಾರದಂಥದ್ದು.

ನೀರಿನ ಇನ್ಸೂರೆನ್ಸಿಗೆ 'ಕಾನೂನಿನ' ಪಾಲಿಸಿ!

'ಅಡಿಕೆ ದರ ಹೀಗೆ ನಿಂತರೆ ತೊಂದರೆಯಿಲ್ಲ. ಈ ವರ್ಷ ಎರಡು ಬೋರ್ ತೆಗೆಸಿದೆ. ಎರಡರಲ್ಲೂ ನೀರು ಅಷ್ಟಕ್ಕಷ್ಟೇ. ಮಳೆಗಾಲ ಕಳೆದ ನಂತರ ಮೂರನೆಯದ್ದು ತೆಗೆಸಬೇಕು' - ಸಮಾರಂಭವೊಂದರ ಊಟದ ಪಂಕ್ತಿಯಲ್ಲಿ ಕೇಳಿಸಿಕೊಂಡ ಮಾತು. ಕುಡಿನೀರಿಗೆ ಬಾವಿ, ತೋಟಕ್ಕೆ ಕೆರೆ ನೀರು ಬಳಕೆ. ಇವೆರಡೂ 'ಕೈಕೊಟ್ಟರೆ' ಕೊಳವೆ ಬಾವಿಯದ್ದು ಉಪಯೋಗಕ್ಕೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಮೂರನೇ ಕೊಳವೆ ಬಾವಿಯನ್ನು ತೋಡಲು ಹೊರಟಿದ್ದರು. ಅದರಲ್ಲೂ ನೀರಿಲ್ಲದಿದ್ದರೆ? ನಾಲ್ಕನೆಯದ್ದು...

ಹಣ ಕೈಯಲ್ಲಿ ಓಡುತ್ತಿದ್ದರೂ, ಮನಸ್ಸು ಬಂದಂತೆ ಕೊಳವೆ ಬಾವಿಗಳನ್ನು ಇನ್ನು ಕೊರೆಯುವಂತಿಲ್ಲ. 'ನನ್ನ ಜಮೀನಲ್ವಾ, ಯಾರು ಕೇಳುವವರು, ನನ್ನಿಷ್ಟ' ಎನ್ನುವ ಧಿಮಾಕಿಗೆ ಕಡಿವಾಣ. ಭೂಒಡಲಿಂದ ನೀರೆತ್ತಿದರೆ ಸಾಲದು, ಅದನ್ನು ಮತ್ತೆ ತುಂಬಿಕೊಡಬೇಕಲ್ವಾ. ಅದಕ್ಕಾಗಿ ಹೊಸ ಮನೆಕಟ್ಟುವಾಗ ಕಡ್ಡಾಯವಾಗಿ ಜಲಮರುಪೂರಣದ ವ್ಯವಸ್ಥೆ.

'ಜಲಭರ್ತಿ'ಗಾಗಿ ಕಾನೂನು

ಅಂತರ್ಜಲವನ್ನು ಹೆಚ್ಚಿಸುವ, ಕೊಳವೆ ಬಾವಿಗಳನ್ನು ಕಡಿಮೆಗೊಳಿಸಿ ಭೂಒಡಲನ್ನು ಮತ್ತೆ ತುಂಬಿಕೊಡಲು 'ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011'ಕ್ಕೆ ರಾಜ್ಯಪಾಲರ ಅಂಕಿತ ಬಿದ್ದಿದೆ. 'ಕುಡಿಯುವ ನೀರಿನ ಮೂಲಗಳ ಸಂರಕ್ಷಣೆ' ಹಿಂದಿರುವ ಆಶಯ. 'ವಿವೇಚನೆಯಿಲ್ಲದೆ ಅಂತರ್ಜಲವನ್ನು ಮೇಲೆತ್ತುವುದಕ್ಕೆ' ಲಗಾಮು. ಸರಕಾರಿ ಪ್ರಣೀತ 'ಕರ್ನಾಟಕ ಅಂತರ್ಜಲ ಪ್ರಾಧಿಕಾರ'ಕ್ಕೆ ಶಿಕ್ಷೆ-ರಕ್ಷೆಯ ಹೊಣೆ.

ಅಧಿನಿಯಮದುದ್ದಕ್ಕೂ 'ಅಧಿಸೂಚಿತ ಪ್ರದೇಶ' ಎಂಬ ಶಬ್ದ ಮರುಕಳಿಸುತ್ತದೆ. ಏನಿದು? ನಿಯಮದ ಉದ್ದೇಶ ಈಡೇರಿಕೆಗಾಗಿ ಯಾವ ಪ್ರದೇಶದಿಂದ ಅಂತರ್ಜಲ ತೆಗೆಯುವುದನ್ನು, ಬಳಸುವುದನ್ನು ಅಥವಾ ಇವೆರಡನ್ನು ವಿನಿಯಮಿಸುವುದು ಸಾರ್ವಜನಿಕ ದೃಷ್ಟಿಯಿಂದ ಆವಶ್ಯಕವೆಂದು ಕಂಡು ಬಂದರೆ ಅಂತಹ ಪ್ರದೇಶವು 'ಅಧಿಸೂಚಿತ ಪ್ರದೇಶ'. ವಿವಿಧ ತಜ್ಞ ಸಂಸ್ಥೆಗಳೊಡನೆ ಸಮಾಲೋಚನೆ ನಡೆಸಿಯೇ ಈ ಪ್ರದೇಶವನ್ನು ಗೊತ್ತು ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಇಲ್ಲಿ ಅಂತರ್ಜಲದ ಲಭ್ಯತೆಯು ಹೆಚ್ಚಾದಲ್ಲಿ 'ಕಪ್ಪುಪಟ್ಟಿ'ಯಿಂದ ಹೊರಗಿಡಲೂ ಕಾನೂನಿನಲ್ಲಿ ಅವಕಾಶವಿದೆ.

ಅಧಿಸೂಚಿತ ಪ್ರದೇಶದಲ್ಲಿ ಬೇಕಾದಂತೆ ಕೊಳವೆ ಬಾವಿ ಕೊರೆಯುವಂತಿಲ್ಲ. ನೀರನ್ನು ಎತ್ತುವಂತಿಲ್ಲ. ವೈಯಕ್ತಿಕ ಅಥವಾ ಸಮುದಾಯದ ಬಳಕೆಯ ಉದ್ದೇಶಕ್ಕಾಗಿ ಬಾವಿಯನ್ನು ಕೊರೆಯಬೇಕಾದರೆ ಪ್ರಾಧಿಕಾರದಿಂದ ಅನುಮತಿ ಬೇಕು. ಕೈಗಾರಿಕೆ, ವಾಣಿಜ್ಯ, ಮನೋರಂಜನೆ, ಕೃಷಿ, ಗೃಹಕೃತ್ಯ.. ಹೀಗೆ ವಿವಿಧ ಉದ್ದೇಶಗಳಿಗೆ ಬೇರೆ ಬೇರೆ ಅರ್ಜಿ ನಮೂನೆಗಳು, ಶುಲ್ಕಗಳು.

'ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾದುದಲ್ಲ' ಎಂದು ಪ್ರಾಧಿಕಾರದ ಅಣ್ಣಂದಿರಿಗೆ ಮನದಟ್ಟಾದಲ್ಲಿ ಷರತ್ತಿಗೆ ಒಳಪಟ್ಟು ಅನುಮತಿ ಲಭ್ಯ. ಸರಕಾರಿ ವ್ಯವಸ್ಥೆಯಲ್ವಾ. 'ನಾಳೆ ಬಾ' ಸಂಸ್ಕೃತಿ! ಇಷ್ಟು ಹೊತ್ತಿಗೆ ಅರ್ಜಿದಾರ ಹೈರಾಣ! ಅರ್ಜಿ ನಮೂನೆ, ಶುಲ್ಕಗಳು, ಕಚೇರಿಯ ಅಲೆದಾಟ, ಅಧಿಕಾರಿಗಳ ಸಂಪರ್ಕಗಳನ್ನು ಸರಳಗೊಳಿಸಿ ಒಂದೆರಡು ಭೇಟಿಯಲ್ಲಿ ಅನುಮತಿ ಸಿಗುವ ವ್ಯವಸ್ಥೆ ಬರುವಂತಾಗಬೇಕು. ಇಲ್ಲದಿದ್ದರೆ ಹಳೆ ಬಾಟಲಿ, ಹೊಸ ಮದ್ಯ!

ಈ ನಿಯಮದಿಂದ ಮತ್ತೊಂದು ಪ್ರಯೋಜನವಿದೆ - 'ನಿರ್ದಿಷ್ಟ ಅವಧಿಯೊಳಗೆ ಸೂಕ್ತ ಅಳತೆಯ ಕೃತಕ ಮರುಪೂರಣ ರಚನೆ'ಗಳನ್ನು ಅರ್ಜಿದಾರನು ಮಾಡಿಕೊಳ್ಳಬೇಕೆಂಬುದು ಷರತ್ತಿಯಲ್ಲಿ ಕಡ್ಡಾಯವಾಗಿ ಸೇರಿರಲೇಬೇಕು. ಈ ನೆಪದಲ್ಲಾದರೂ ಒಂದಷ್ಟು ಮರುಪೂರಣ ವ್ಯವಸ್ಥೆಗಳು ಅನುಷ್ಠಾನಗೊಳ್ಳಬಹುದು. ಅದೂ ಷರತ್ತು ವಿಧಿಸುವ ಪ್ರಾಮಾಣಿಕ ಅಧಿಕಾರಿಗಳಿದ್ದರೆ..? ಇಲ್ಲದಿದ್ದರೆ 'ಕಡತದಲ್ಲಿ ಮಾತ್ರ ಮುಗಿದುಹೋದ ರಸ್ತೆ'ಗಳಂತೆ ಆಗಬಹುದು.

ಕೃಷಿ, ಕೃಷಿಕರಿಗೆ ಅಪ್ರಿಯವಾದ ಒಂದು ಪ್ಯಾರಾ ಹೀಗಿದೆ -'ಅಧಿಸೂಚಿತ ಪ್ರದೇಶದಲ್ಲಿ ಭತ್ತ, ಕಬ್ಬುಗಳಂತಹ ಹೆಚ್ಚು ನೀರು ಬೇಕಾದ ಬೆಳೆಗಳಿಗೆ ಅನುಮತಿ ನೀಡತಕ್ಕದ್ದಲ್ಲ'. ಕೃಷಿಗೆ ಬಳಸಿದರೆ ಕುಡಿ ನೀರಿಗೆ ತತ್ವಾರವಾದೀತೆಂಬ ಭಯ. ಹತ್ತಿರದ ಕುಡಿಯುವ ನೀರಿನ ಮೂಲಗಳಿಗೆ ಧಕ್ಕೆಯಾದಿತೆಂಬ ದೂರದೃಷ್ಟಿ. ಆದರೆ ಹನಿನೀರಾವರಿ ಅಥವಾ ತುಂತುರು ನೀರಾವರಿಯಲ್ಲಿ ಕೃಷಿ ಮಾಡಬಹುದೆನ್ನುವ ಹಸಿರು ನಿಶಾನೆಯಿದೆ. ಆದರದು ಅಸ್ಪಷ್ಟ.

ಅಧಿಸೂಚಿತ ಪ್ರದೇಶವೆಂದು ಗೊತ್ತು ಮಾಡುವ ಮೊದಲೇ ಭತ್ತವನ್ನೋ, ಕಬ್ಬನ್ನೋ ಬೆಳೆಯುತ್ತಿದ್ದರೆನ್ನಿ. ಗೊತ್ತು ಮಾಡಿದ ಬಳಿಕ ಭತ್ತ, ಕಬ್ಬಿನ ಬದಲಿಗೆ 'ನೀರು ಕಡಿಮೆ ಬೇಡುವ' ಬೆಳೆಗಳನ್ನು ಬೆಳೆದರೂ ಪ್ರಾಧಿಕಾರಕ್ಕೆ ತಿಳಿಸಲೇ ಬೇಕು. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಭತ್ತ ಬೆಳೆಯುವ ಕುರಿತಾದ ಉಲ್ಲೇಖ ಅಧಿನಿಯಮದಲ್ಲಿಲ್ಲ. ಬಹುಶಃ ಮಳೆ ಕಡಿಮೆ ಬೀಳುವ ಪ್ರದೇಶಗಳ ಲಕ್ಷ್ಯವಿರಬಹುದೇನೋ.

ಕೊಳವೆ ಬಾವಿ ಕೊರೆಯಲು ನಮಗಿಷ್ಟವಾದ ಕೊರೆಯಂತ್ರ ಮ್ಹಾಲಿಕರನ್ನು ಕರೆಯುವಂತಿಲ್ಲ. ಸಂಬಂಧಪಟ್ಟ ಕಂಪೆನಿ, ಮ್ಹಾಲಿಕ ಮತ್ತು ಯಂತ್ರದ ಜಾತಕವನ್ನು ಪ್ರಾಧಿಕಾರದಲ್ಲಿ ನೋಂದಾಯಿಸಬೇಕು. 'ಈ ವೃತ್ತಿಯಲ್ಲಿ ಜ್ಞಾನವಿದೆ' ಎಂದು ಮನದಟ್ಟಾದರೆ ಮಾತ್ರ ಲೈಸನ್ಸ್. ಅದಕ್ಕೂ ಷರತ್ತುಗಳ ಮಾಲೆ.

'ಈ ನೆಲದ ಜ್ಞಾನ ಸಹಿ ಹಾಕುವ ಎಷ್ಟು ಮಂದಿ ಅಧಿಕಾರಿಗಳಿಗೆ ಗೊತ್ತಿದೆ? ಏನಿದ್ದರೂ ಕಡತದ ಆಧಾರ. ದಾಖಲೆ ದಪ್ಪವಾದಷ್ಟೂ ನಂಬಿಕೆ, ವಿಶ್ವಾಸ' ಎಂದು ಛೇಡಿಸುತ್ತಾರೆ ನ್ಯಾಯವಾದಿ ವಿಜಯಕೃಷ್ಣ.

ಮಳೆ ನೀರಿನ ಕೊಯ್ಲು

ಜಲಮರುಪೂರಣ ವ್ಯವಸ್ಥೆಯಲ್ಲಿ ಬಹಳ ಜನಪ್ರಿಯವಾಗುತ್ತಿರುವ ಪದ್ಧತಿ. ಬಹುತೇಕ ಮಂದಿ ಸ್ವ-ಇಚ್ಛೆಯಿಂದ ಸ್ಥಾಪಿಸಿದ್ದಾರೆ, ಸ್ಥಾಪಿಸುತ್ತಿದ್ದಾರೆ. ಮಳೆಗಾಲದಲ್ಲಿ ಕಾಪಿಟ್ಟ ನೀರು ಬೇಸಿಗೆಯಲ್ಲಿ ಬಳಕೆ. ವರುಷದಲ್ಲಿ ಮೂರು ತಿಂಗಳಾದರೂ ಮಳೆನೀರು ಬಳಕೆಯಾದರೆ ಅಷ್ಟು ಅಂತರ್ಜಲವನ್ನು ಕಾಪಾಡಿದಂತೆ.

ಪ್ರಾಧಿಕಾರವು ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯದ ಮೂಲಕ ಅಂತರ್ಜಲ ಮರುಪೂರಣಕ್ಕೆ ಅನುಕೂಲ ಮಾಡಿಕೊಡುತ್ತದೆ. ಅಧಿಸೂಚಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಭಿವೃದ್ಧಿ ಸ್ಕೀಂಗಳಲ್ಲಿ ಮಳೆಕೊಯ್ಲನ್ನು ಸೇರಿಸಲು ನಿರ್ದೇಶ. ನೂರು ಚದರ ಮೀಟರು ಅಥವಾ ಅದಕ್ಕೂ ಹೆಚ್ಚು ವಿಸ್ತಾರವಿರುವ ವಾಸಸ್ಥಳ, ವಾಣಿಜ್ಯ ಮತ್ತು ಇತರ ಆವರಣಗಳಲ್ಲಿ ಮಳೆಕೊಯ್ಲಿನ ರಚನೆ ಕಡ್ಡಾಯ. ಅನುಮೋದನೆ ನೀಡುವ ಹಂತದಲ್ಲೇ ಕಟ್ಟಡ ನಕಾಶೆಯಲ್ಲಿ ಮರುಪೂರಣದ ವ್ಯವಸ್ಥೆ ದಾಖಲಾಗಿಸಬೇಕೆನ್ನುವಲ್ಲಿ ವಿಶೇಷ ಗಮನ. ಈ ನಿರ್ದೇಶನಗಳನ್ನು ಧಿಕ್ಕರಿಸಿದರೆ ನೀರು ಮತ್ತು ವಿದ್ಯುತ್ ಸಂಪರ್ಕಗಳ ಶಾಶ್ವತ ಕಟ್!

ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದ್ದರೂ, ಅನುಷ್ಠಾನದಲ್ಲಿಯೂ ರಾಜಿ ಮಾಡಿಕೊಳ್ಳದ ವ್ಯವಸ್ಥೆ ಆಡಳಿತದಲ್ಲಿ ಬರಬೇಕು. ಇಲ್ಲದಿದ್ದರೆ 'ಕಾನೂನು ನಮಗಲ್ಲ, ನೆರೆಮನೆಗೆ' ಎಂಬಂತಾದೀತು.

ಅನುಮತಿ ಕಡ್ಡಾಯ

ಪ್ರಾಧಿಕಾರದಿಂದ ಅನುಮತಿ ಪತ್ರವನ್ನು ಪಡೆಯದವರಿಗೆ ಹಣಕಾಸು ವ್ಯವಸ್ಥೆ, ವಿದ್ಯುತ್ ಸರಬರಾಜು, ಸರಕಾರದ ಸಬ್ಸಿಡಿಗಳಿಗೆ ಕೊಕ್. ಬಾವಿ ಕೊರೆಯುತ್ತಿದ್ದಂತೆ ಜೆಸಿಬಿ ಯಂತ್ರಗಳ ಮುಟ್ಟುಗೋಲು. ಅರ್ಧದಲ್ಲಿ ಬಾವಿಯ ಕೊರೆತ ನಿಂತಿದ್ದರೂ ಅದನ್ನು ಮುಂದುವರಿಸದಂತೆ ಆದೇಶ.

ಬಾವಿ ತೋಡುವ, ಕೊರೆಯುವ ಆವರಣವನ್ನು ನೀವು ಭದ್ರ ಪಡಿಸಿದರೆ ಅದನ್ನು ಮುರಿದು ಒಳಹೊಕ್ಕು ಸ್ವಾಧೀನ ಪಡಿಸಿಕೊಳ್ಳುವ ಹಕ್ಕು ಪ್ರಾಧಿಕಾರಕ್ಕಿದೆ.

ನೀವು ನೀಡಿದ ಮಾಹಿತಿ ಸುಳ್ಳು ಎಂದು ಮನದಟ್ಟಾದರೆ ಐದು ಸಾವಿರಕ್ಕೂ ಮಿಕ್ಕಿ ಜುಲ್ಮಾನೆ ಅಥವಾ ಆರು ತಿಂಗಳ ಜೈಲು ವಾಸ. ಅನುಮತಿ ಇಲ್ಲದೆ ಬಾವಿ, ಕೊಳವೆ ಬಾವಿ ಕೊರೆದದ್ದಕ್ಕೂ ಇದೇ ಶಿಕ್ಷೆ.

ಇಷ್ಟೆಲ್ಲಾ ಹೇಳಿದರೂ ಇದಕ್ಕೆ ಆಡಳಿತಾತ್ಮಕವಾದ ಸಮಯ, ಮಂಜೂರು, ಹಿಂಬರಹ, ಅಪೀಲು, ಅರ್ಜಿ.. ಮೊದಲಾದ ಪ್ರಕ್ರಿಯೆಗಳು ಜತೆಜತೆಗಿವೆ. ಹಾಗಾಗಿ ಕಾನೂನಿನಿಂದ ತಪ್ಪಿಸಿಕೊಳ್ಳುವ ಜಾಣರಿಗೆ ಜಾಣತನವನ್ನು ಮೆರೆಯಲು ದಾರಿಗಳಿವೆ.

ನೀರೆಚ್ಚರ ಕಾಲದ ಆವಶ್ಯಕತೆ

ಪ್ರಕೃತ ಕಾಲಘಟ್ಟದ ನೀರಿನ ಸ್ಥಿತಿ ಶೋಚನೀಯ. ಕೊಚ್ಚಿಹೋಗುವಷ್ಟು ಮಳೆ ಬಂದರೂ, ಬೇಸಿಗೆಯಲ್ಲಿ ಕುಡಿನೀರಿಗೆ ತತ್ವಾರದ ರಾಜಧಾನಿಯ ಚಿತ್ರ ಮುಂದಿದೆ. ಮೈಲುಗಟ್ಟಲೆ ದೂರದಿಂದ ನೀರು ತುಂಬಿದ ಕೊಡವನ್ನು ಹೊತ್ತು ತರುವ ಗ್ರಾಮೀಣ ದೃಶ್ಯಕ್ಕಿನ್ನೂ ಶಾಪಮೋಕ್ಷವಾಗಿಲ್ಲ. ಎಲ್ಲವೂ ಕಾನೂನಿನಿಂದ ನಿಯಂತ್ರಿಸಲು ಸಾಧ್ಯವಿಲ್ಲವಲ್ಲಾ. ಬದುಕಿನಲ್ಲಿ ನೀರಿನೆಚ್ಚರ ಬಂದಾಗ, ಕಾನೂನು ಬೇಕಾಗದು.

'ಬೋರಿನ ಹಿಂದೆ ಓಡುವ ಸ್ಥಿತಿ ನಿಲ್ಲಬೇಕು. ಹೆಚ್ಚು ಹೆಚ್ಚು ಕೊರೆಯುತ್ತಾ ಹೋದರೆ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ. ನೀರಿಂಗಿಸುವ ಪ್ರಕ್ರಿಯೆಗಳು ಕಾನೂನಿನಿಂದ, ಒತ್ತಡ ಹೇರಿ ತರಬಹುದಾದ ಬದಲಾವಣೆಯಲ್ಲ, ಸ್ವ-ನಿಯಂತ್ರಣ ಮತ್ತು ಸ್ವ-ನಿಧರ್ಾರಗಳಿಂದ ಆಗಬೇಕಾದುದು. ಕೊಳವೆ ಬಾವಿಯಿಂದ ತೆರೆದ ಬಾವಿಗೆ ಮನಸ್ಸು ಟ್ಯೂನ್ ಆಗಬೇಕಾದುದು ಮೊದಲಾದ್ಯತೆಯ ಕೆಲಸ' - ಜಲತಜ್ಞ ಶ್ರೀ ಪಡ್ರೆಯವರ ಅಭಿಮತ.

ಗುಡ್ಡದ ಮೇಲೆ ನೀರಿಂಗಿಸುವುದು, ನೀರಿನ ಅತಿ ಬಳಕೆಗೆ ಕಡಿವಾಣ, ಕಾಡು ಬೆಳೆಸುವುದು, ಮದಕ-ಕೆರೆ-ಹಳ್ಳಗಳ ಅಭಿವೃದ್ಧಿ, ಇಂಗುಬಾವಿ.. ಕಡಿಮೆ ವೆಚ್ಚದಲ್ಲಿ ಮಾಡಿಕೊಳ್ಳಬಹುದಾದ ನೀರಿಂಗಿಸುವ ಮಾದರಿಗಳು. 'ಗುಡ್ಡದ ಎತ್ತರದ ಜಾಗದಲ್ಲಿ ನೀರಿಂಗಿಸುವುದು ಮತ್ತು ಕಾಡು ಬೆಳೆಸುವ ಪ್ರಯತ್ನಗಳು ವೈಯಕ್ತಿಕ ಮಟ್ಟದಲ್ಲಿ ಆಗಬೇಕು. ಇದು ನೀರಿನ ಇನ್ಸೂರೆನ್ಸ್' ಎನ್ನುತ್ತಾರೆ ಪಡ್ರೆ.

ಎಸ್ಸೆಮ್ಮೆಸ್: 'ರಾಜಧಾನಿಯಲ್ಲಿ ಮಳೆ ನೀರಿನ ಕೊಯ್ಲಿಗೆ ಇಪ್ಪತ್ತು ಕೋಟಿ ರೂಪಾಯಿ ಮೀಸಲು' ಸುದ್ದಿ. ** ಇಪ್ಪತ್ತು ಕೋಟಿಯ ಕೆಲಸದಲ್ಲಿ ಭೂಮಿಗೆಷ್ಟು? ಜೇಬಿಗೆಷ್ಟು?

(ದಿನಾಂಕ 6-9-2011ರ ಉದಯವಾಣಿಯ 'ನೆಲದ ನಾಡಿ' ಅಂಕಣದಲ್ಲಿ ಪ್ರಕಟಿತ ಬರೆಹ)

Tuesday, September 6, 2011

ಅಡಿಕೆಗೆ ಹೆಗಲುಕೊಡುವ 'ಚಿಕ್ಕು'



ಪುತ್ತೂರಿನ ಹಣ್ಣಿನಂಗಡಿಯಲ್ಲಿ ಚಿಕ್ಕು ಖರೀದಿಸಿದೆ. ಒಂದು ಕಿಲೋಗೆ ನಾಲ್ಕು ಹಣ್ಣು! ವ್ಯಾಪಾರಿಗೆ ತೂಕದಲ್ಲಿ ತಪ್ಪಿರಬೇಕು ಎಂದು ಮತ್ತೊಮ್ಮೆ ತೂಗಿಸಿದೆ. ಸರಿಯಾಗಿತ್ತು. ತಿಂದು ನೋಡಿದರೆ ಸಕ್ಕರೆಯಂತಹ ಸಿಹಿ. ತಿಂದ ಬಳಿಕವೂ ಒಂದಷ್ಟು ಹೊತ್ತು ಸ್ವಾದ. ಕ್ರಿಕೆಟ್ ಬಾಲ್ನಷ್ಟು ಗಾತ್ರ.

ವ್ಯಾಪಾರಿಯಿಂದ ಚಿಕ್ಕು ಸಹಿತ, ಬೆಳೆದವರ ವಿವರ ಪಡೆದೆ. ಮರುದಿವಸ ಚಿಕ್ಕು ಕೃಷಿಕ ಬಂಟ್ವಾಳ ತಾಲೂಕಿನ ಮೈಕೆ ಗಣೇಶ ಭಟ್ಟರ ಸಂಪರ್ಕ. ಚಿಕ್ಕು ತೋಟ ವೀಕ್ಷಣೆ. ಮಾತನಾಡುತ್ತಿದ್ದಂತೆ ಒಂದಷ್ಟು ಹಣ್ಣುಗಳೂ ಹೊಟ್ಟೆ ಸೇರಿದುವು!

ಮೈಕೆ ಸನಿಹದ ಕರಿಂಕ ಎಂಬಲ್ಲಿ ಗಣೇಶ ಭಟ್ಟರ ಆರೆಕ್ರೆ ಹಣ್ಣಿನ ತೋಟ. ಅದರಲ್ಲಿ ಒಂದೆಕ್ರೆ ಚಿಕ್ಕು. ಮಿಕ್ಕಿದ್ದು ಮಾವು ಮತ್ತು ಸುಮಾರು ನಲವತ್ತು ವಿಧದ ಹಣ್ಣುಗಳು. 'ಇದು ನನ್ನ ಕನಸಿನ ತೋಟ. ದುಬಾರಿ ಬೆಲೆ ತೆತ್ತು ಹಣ್ಣುಗಳನ್ನು ಖರೀದಿಸಬಾರದೆಂಬುದು ನನ್ನ ಬದುಕಿನ ಪಾಲಿಸಿ' ಎನ್ನುತ್ತಾರೆ.

1999ರಲ್ಲಿ ಕುಂದಾಪುರದ ಕೋ.ಲ.ಕಾರಂತರ ಚಿಕ್ಕು ತೋಟದಿಂದ ಐವತ್ತು ಗಿಡಗಳನ್ನು ಗಣೇಶ್ ಭಟ್ ತಂದು ಆರೈಕೆ. ಆರಂಭದಲ್ಲಿ ಹರಳಿಂಡಿ, ನೆಲಗಡಲೆ ಹಿಂಡಿ ಮತ್ತು ಕಹಿಬೇವಿನ ಹಿಂಡಿಗಳನ್ನು ಮಿಶ್ರ ಮಾಡಿ ಉಣಿಕೆ. ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರಾವರಿ. ಒಂದು ಗೇಟ್ವಾಲ್ವ್ ತಿರುಗಿಸಿದರೆ ಸಾಕು, ಮೂವತ್ತು ಗಿಡಗಳ ಬುಡಗಳು ಒದ್ದೆಯಾಗುವಂತಹ ನೀರಾವರಿ ವ್ಯವಸ್ಥೆ. ವರುಷಕ್ಕೊಮ್ಮೆ ಪ್ರತೀ ಗಿಡಕ್ಕೆ ನಾಲ್ಕು ಕಿಲೋದಂತೆ ಹರಳಿಂಡಿ ಉಣಿಕೆ. ಹೆಚ್ಚಿನ ಬೇರ್ಯಾವ ಆರೈಕೆಯೂ ಇಲ್ಲ.

ಕಳೆದ ಐದು ವರುಷದಿಂದ ಇಳುವರಿ. ವರುಷಕ್ಕೆ ಎರಡು ಬೆಳೆ. ಮಳೆಗಾಲದಲ್ಲೂ, ಬೇಸಿಗೆಯಲ್ಲೂ ಒಂದೇ ರುಚಿ, ಒಂದೇ ಗಾತ್ರ. ಮಳೆಗಾಲದಲ್ಲಿ ಬಲಿತ ಕಾಯಿಗಳನ್ನು ಕೊಯಿದು, ಹಣ್ಣಿನ ಮೇಲ್ಮೈಯ ನೀರಿನ ತೇವವನ್ನು ತೆಗೆಯಲು ಒಂದು ದಿವಸ ನೆರಳಿನಲ್ಲಿ ಒಣಗಿಸುತ್ತಾರೆ. ನಂತರವಷ್ಟೇ ಮಾರುಕಟ್ಟೆಗೆ ರವಾನೆ. ನೀರಿನ ಪಸೆ ಇದ್ದುಬಿಟ್ಟರೆ ಮೂರ್ನಾಲ್ಕು ದಿವಸದಲ್ಲಿ ಹಣ್ಣು ಕೊಳೆಯುವ ಸಾಧ್ಯತೆ ಹೆಚ್ಚು.

ಸನಿಹದ ಪುತ್ತೂರು ಮತ್ತು ತನ್ನೂರು ಇಡ್ಕಿದು ಅಂಗಡಿಗಳಲ್ಲಿ ಮಾರಾಟ. ಕಿಲೋಗೆ ಇಪ್ಪತ್ತು ರೂಪಾಯಿ. ಹಣ್ಣಿನ ಗಾತ್ರಕ್ಕೆ ಮಾರುಹೋದ ಗಿರಾಕಿಗಳು ಹುಡುಕಿ ಬರುತ್ತಾರಂತೆ. 'ಹಳ್ಳಿಗಳಲ್ಲಿ ಹಣ್ಣು ತಿನ್ನುವ ಅಭ್ಯಾಸ ಹೆಚ್ಚಾಗಿದೆ. ನನ್ನೂರಿನ ಒಂದು ಅಂಗಡಿಯಲ್ಲಿ ದಿವಸಕ್ಕೆ ಒಂದು ಕ್ವಿಂಟಾಲ್ ಹಣ್ಣುಗಳು (ಚಿಕ್ಕು ಮಾತ್ರವಲ್ಲ) ಮಾರಾಟವಾಗುತ್ತವೆ. ತಿಂದವರು ಫೀಡ್ಬ್ಯಾಕ್ ಹೇಳುತ್ತಾರೆ' ಎನ್ನುತ್ತಾ ಗಣೇಶ್ ಖುಷಿ ಪಡುತ್ತಾರೆ.

'ಕಳೆದ ವರುಷ ನಾಲ್ಕು ಕ್ವಿಂಟಾಲ್ ಹಣ್ಣು ಮಾರಾಟ ಮಾಡಿದೆ. ಈ ವರುಷ ಕೋಳಿಗೊಬ್ಬರ ಸ್ವಲ್ಪ ಹೆಚ್ಚೇ ಉಣಿಸಿದೆ. ಯಾಕೋ ಏನೋ ಇಳುವರಿ ಅರ್ಧಕ್ಕರ್ಧ ಇಳಿಯಿತು. ಬಹುಶಃ ಹೀಟ್ ಹೆಚ್ಚಾಗಿರಬೇಕು' ಎಂಬ ಖೇದ.

ಚಿಕ್ಕು ಹಣ್ಣಿಗೆ ಬಾವಲಿ ಕಾಟ ಇಲ್ಲವೇ? ಗಣೇಶ್ ಭಟ್ ಹೇಳುತ್ತಾರೆ - ಹಣ್ಣಿನ ಗಾತ್ರ ದೊಡ್ಡದಲ್ವಾ, ಹಾಗಾಗಿ ಬಾವಲಿಗೆ ಎತ್ತಿ ಕೊಂಡೊಯ್ಯಲು ಕಷ್ಟ. ಆದರೂ ಸಣ್ಣ ಗಾತ್ರದ ಕಾಯಿಗಳನ್ನು ಅವುಗಳು ಬಿಡುವುದಿಲ್ಲ. ಮಧ್ಯೆ ಮಧ್ಯೆ ಲೋಕಲ್ ತಳಿಯ ಚಿಕ್ಕು ಬೆಳೆದಿದ್ದೇನೆ. ಅವೆಲ್ಲವೂ ಬಾವಲಿಗೆ! ಆದರೂ ಶೇ.20ರಷ್ಟು ಹಾಳಾಗುತ್ತದೆ.

ಗಣೇಶ್ ಬಾಲ್ಯದಲ್ಲಿದಾಗ ಒಂದು ಹಣ್ಣಿನ ತೋಟ ನೋಡಿದ್ದರಂತೆ. ಭವಿಷ್ಯದಲ್ಲಿ ನನಗೂ ಇಂತಹ ತೋಟ ಮಾಡಲೇಬೇಕು ಎಂಬ ಹಠ ತೊಟ್ಟರಂತೆ. ಅದೀಗ ಈಡೇರಿದೆ. ನಮ್ಮ ತೋಟದ ಹಣ್ಣನ್ನು ನಾವೇ ತಿನ್ನುವುದು ಸ್ವಾಭಿಮಾನವಲ್ವಾ.. ಪ್ರಶ್ನಿಸುತ್ತಾರೆ.

ಗಣೇಶ ಭಟ್ಟರ ಮುಖ್ಯ ಕೃಷಿ ಅಡಿಕೆ. ಜತೆಗೆ ತೆಂಗು, ಕೊಕ್ಕೋ, ಜಾಯಿಕಾಯಿ.. 'ಈಗೇನೋ ಅಡಿಕೆ ಧಾರಣೆ ಏರುಗತಿಯಲ್ಲಿದೆ. ಒಂದು ವೇಳೆ ಅಡಿಕೆ ದರ ಬಿದ್ದರೆ? ಏಕಬೆಳೆಯಾದರೆ ಬದುಕು ಅತಂತ್ರ. ಒತ್ತಡದ ಬದುಕು. ಆದರೆ ನನಗೆ ಮಾತ್ರ ಅಂಜಿಕೆಯಿಲ್ಲ. ಎಡೆಬೆಳೆಗಳು (ಉಪಕೃಷಿ) ಖಂಡಿತಾ ಆಧರಿಸುತ್ತವೆ' - ಎಂಬ ಅವರ ಅನುಭವದಲ್ಲಿ ಇತರರಿಗೂ ಕಿವಿಮಾತಿದೆ.
(08255-281193, 9448725829)