Tuesday, November 22, 2016

ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರದ ಝಲಕ್ ಗಳು

 ಹಲಸು ಆಂದೋಳನದ ಸಂದೇಶ ಹೊತ್ತ ಕಾರ್ಡ್ ಬಿಡುಗಡೆ
 ಡಾ.ನರೇಂದ್ರ ರೈ ದೇರ್ಲರಿಂದ ಶಿಬಿರದ ಉದ್ಘಾಟನೆ
 ಶ್ರೀ ಪಡ್ರೆಯವರಿಂದ 'ವಾಟ್ಸಪ್ ಉಪಯುಕ್ತ ಸಂವಹನ ಸಾಧನ' ಸೆಶನ್
 ಡಾ.ಮೋಹನ್ ತಲಕಾಲುಕೊಪ್ಪ ಇವರಿಂದ 'ಸ್ಮಾರ್ಟ್ ಫೋನ್ ಬಳಕೆ' ಪಾಠ
ಮಹೇಶ್ ಪುಚ್ಚಪ್ಪಾಡಿಯವರಿಂದ 'ಮಾಧ್ಯಮ ಸ್ನೇಹಿ ಛಾಯಾಗ್ರಾಹಣ' ಮಾಹಿತಿ

ಹಲಸು ಪುಸ್ತಕ ಮತ್ತು ಸಂದೇಶ ಕಾರ್ಡ್

 ಶ್ರೀ ಪಡ್ರೆಯವರ ಪುಸ್ತಕ - 'ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ
ಹಲಸು ಆಂದೋಳನದ ಸಂದೇಶ ಕಾರ್ಡ್ (ಫ್ಲೈಯಿಂಗ್ ಕಾರ್ಡ್)

ಶ್ರೀ ಪಡ್ರೆಯವರ ಹೊಸ ಪುಸ್ತಕ 'ಹಲಸು' ಬಿಡುಗಡೆಗೊಂಡಿದೆ. ಬೆಲೆ ರೂ. 150-00.
 ಅಡಿಕೆ ಪತ್ರಿಕೆ (08251-231240, 94833 65791) ಕಚೇರಿಯಲ್ಲಿ ಪುಸ್ತಕಗಳು ಲಭ್ಯ.

ದೂರದ ಆಸಕ್ತರು ನೇರ ಪುಸ್ತಕ ಪಡೆದುಕೊಳ್ಳಲು 94483 54177 ಸಂಖ್ಯೆಗೆ ಎಸ್.ಎಂ.ಎಸ್. ಅಥವಾ ವಾಟ್ಸಪ್ ಸಂದೇಶವನ್ನು ಕಳುಹಿಸಿ. 

ಪುತ್ತೂರಿನಲ್ಲಿ ಹಲಸು ಪುಸ್ತಕ ಬಿಡುಗಡೆ; ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ ಸಮಾರೋಪ "ಅಲಕ್ಷಿತ ಹಲಸಿನ ಕಡೆಗೆ ಲಕ್ಷ್ಯ ವಹಿಸೋಣ" - ಡಾ.ಎಸ್.ವಿ.ಹಿತ್ತಲಮನಿ



 "ನಮ್ಮದೇ ಊರಿನ ಹಲಸಿನ ಬಗ್ಗೆ ದೂರದ ದೇಶದ ಮಂದಿ ಹೇಳುವುದು ಬೇಡ. ಹಲಸಿನ ಬಗ್ಗೆ ನಮ್ಮಲ್ಲಿರುವ ಕೀಳರಿಮೆ ಬಿಡೋಣ. ನಮ್ಮ ರಾಜ್ಯದಲ್ಲಿ, ದೇಶದಲ್ಲಿ  ಹಲಸನ್ನು ಅಪರಿಚಿತವಾಗಲು ಬಿಡಬಾರದು" ಎಂದು ಬೆಂಗಳೂರಿನ ಹಿರಿಯ ತೋಟಗಾರಿಕಾ ತಜ್ಞ ಡಾ.ಎಸ್.ವಿ.ಹಿತ್ತಲಮನಿ ಹೇಳಿದರು.

ಅವರು ಭಾನುವಾರ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಹಲಸಿನ ಆಯ್ದ ಮಾಹಿತಿಗಳ ಸಂಕಲನ 'ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ನಮ್ಮ ರೈತರಿಗೆ ಭವಿಷ್ಯದಲ್ಲಿ ಹಲಸಿನ ಬೆಳೆ ಲಾಭ ತರುವ ಬೆಳೆಯಾಗುವುದರಲ್ಲಿ ಸಂದೇಹವೇ ಇಲ್ಲ. ವಿದೇಶಗಳಲ್ಲಿ  ಈಗಾಗಲೇ ಹಲಸಿನ ಬಗ್ಗೆ ಸಾಕಷ್ಟು ಅಧ್ಯಯನವಾಗುತ್ತಿದೆ. ಆದರೆ ನಮ್ಮಲ್ಲಿ ಮಾತ್ರ ಹಲಸಿನ ಬಗ್ಗೆ ಕೀಳರಿಮೆ ಇದೆ. ಇದು ದೂರವಾಗಬೇಕು, ಜೊತೆಗೆ ಅಲಕ್ಷಿತ ಹಲಸಿನ ಕಡೆಗೆ ಲಕ್ಷ್ಯ ವಹಿಸಬೇಕು ಎಂದರು. ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ (WhatsApp Agricultural Journalism Workshop) ವಿಶಿಷ್ಟ ಪ್ರಯತ್ನವಾಗಿದೆ. ಇಲ್ಲಿ ಸಾಕಷ್ಟು ಅವಕಾಶಗಳು ಇವೆ. ವಾಟ್ಸಪ್ ಬಳಕೆಯಲ್ಲಿ  ಕ್ರಿಯಾತ್ಮಕ ಆಯಾಮವನ್ನು ಈ ಶಿಬಿರ ನೀಡಿದೆ, ಇದರಿಂದ ಕೆಟ್ಟ ಅಂಶಗಳು ದೂರವಾಗುತ್ತವೆ" ಎಂದರು.

ಹಲಸು ಆಂದೋಳನ ಮತ್ತು ಪುಸ್ತಕ ಕುರಿತು ಕೃಷಿ ಮಾಧ್ಯಮ ಕೇಂದ್ರದ ಶಿವರಾಂ ಪೈಲೂರು ಮಾತನಾಡಿ, "ಶ್ರೀ ಪಡ್ರೆ ಅವರ ಹಲಸಿನ ಲೇಖನ ಓದಿ  ಕೃಷಿಕನೊಬ್ಬ ಹಲಸು ಕೃಷಿ ಮಾಡಿರುವುದು ಕಂಡುಬಂತು. ಹೀಗಾಗಿ ಈ ಹಲಸು ಪುಸ್ತಕ ಹೊರತರಲು ಪ್ರಯತ್ನ ನಡೆಯಿತು. ಹಲಸು ಸೇರಿದಂತೆ ಇತರ ನಮ್ಮದೇ ಹಣ್ಣುಗಳು ಅಲಕ್ಷಿತವಾಗುತ್ತಿರುವುದು ಸರಿಯಲ್ಲ" ಎಂದರು.
ಹಲಸಿನ ಸಂದೇಶವನ್ನು ಹೊತ್ತ ಕಾರ್ಡನ್ನು ವಿವೇಕಾನಂದ ಶಾಲೆಯ ಅಧ್ಯಕ್ಷ ವೆಂಕಟೇಶ್ವರ ಅಮೈ ಬಿಡುಗಡೆಗೊಳಿಸಿ, "ಅನೇಕ ವಿಷಪೂರಿತ ಹಣ್ಣುಗಳನ್ನು ಖರೀದಿ ಮಾಡುವ ನಾವು ನಮ್ಮ ಮನೆಯ ಪಕ್ಕದ ಹಲಸನ್ನು  ಮರೆತಿರುವುದು  ಸರಿಯಲ್ಲ. ಪುಸ್ತಕದ ಮೂಲಕ ಮತ್ತೆ ಹಲಸಿಗೆ ಜಾಗೃತಿ ಮೂಡಲಿ" ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ,"ಆಂದೋಳನದ ಮೂಲಕ ಹಲಸನ್ನು  ಇಡೀ ರಾಜ್ಯ ಮಾತ್ರವಲ್ಲ ದೇಶಮಟ್ಟದಲ್ಲಿ  ಅಡಿಕೆ ಪತ್ರಿಕೆ ಉತ್ತಮ ಕೆಲಸ ಮಾಡಿದೆ. ಜೊತೆಗೆ ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಮೂಲಕ ಹೊಸ ಬರಹಗಾರರಿಗೆ ಅವಕಾಶ ಮಾಡಿಕೊಟ್ಟಿದೆ" ಎಂದರು.

ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ ಹಾಗೂ ಹಲಸು ಆಂದೋಳನದ ಬಗ್ಗೆ ಮಾತನಾಡಿದ ಪತ್ರಕರ್ತ ಶ್ರೀಪಡ್ರೆ, "ವಾಟ್ಸಪ್ ಬಳಕೆ ಕೃಷಿಗೂ ಬರಬೇಕು ಈ ಮೂಲಮ ಸಂವಹನ ನಡೆಯಬೇಕು ಎಂಬ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ. ಸವಾಲುಗಳು ಇವೆ ನಿಜ, ಆದರೆ ಇದೆಲ್ಲವನ್ನೂ ದಾಟಿ ಮುಂದೆ ಹೋಗಬೇಕಾಗಿದೆ. ಹಲಸು ಬಗ್ಗೆ ಅನೇಕರಿಗೆ ಇಂದಿಗೂ ಕೀಳರಿಮೆ ಇದೆ. ಆದರೆ ಈ ಬಗ್ಗೆ ಪಾಸಿಟಿವ್ ಯೋಚನೆ ಬರಬೇಕಾಗಿದೆ. ಏಕೆಂದರೆ ಭವಿಷ್ಯದಲ್ಲಿ ಈ ಹಣ್ಣಿಗೆ ನಿಶ್ಚಯವಾಗಿಯೂ ಬೆಲೆ ಬರಲಿದೆ" ಎಂದರು.

ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಶಿಬಿರದ ಬಗ್ಗೆ ಶಿಬಿರಾರ್ಥಿಗಳಾದ ಮೈಸೂರಿನ ಹರೀಶ್ ಹಾಗೂ ರೇಖಾ ಸಂಪತ್ ಅನಿಸಿಕೆ ವ್ಯಕ್ತಪಡಿಸಿದರು. ಪುಸ್ತಕವನ್ನು ಪ್ರಕಾಶಿಸಿದ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರವು ಕಾರ್ಯಕ್ರಮವನ್ನು ಆಯೋಜಿಸಿತ್ತು.

ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ನ ಟ್ರಸ್ಟಿ ಪಡಾರು ರಾಮಕೃಷ್ಣ ಶಾಸ್ತ್ರಿ ಸ್ವಾಗತಿಸಿ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಕಾರ್ಯದಶರ್ಿ ಶಂಕರ್ ಸಾರಡ್ಕ ವಂದಿಸಿದರು. ಪತ್ರಕರ್ತ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಗೇರು ಸಂಶೋಧನಾ ಕೇಂದ್ರ ವಿಜ್ಞಾನಿ ಡಾ.ಮೋಹನ ತಲಕಾಲುಕೊಪ್ಪ ಸಹಕರಿಸಿದರು.

ಪುತ್ತೂರಿನಲ್ಲಿ ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ "ಪತ್ರಕರ್ತ ಸಾಮಾಜಿಕ ಜಾಲತಾಣಗಳಲ್ಲೂ ಪರಿಣಿತನಾಗಿರಬೇಕಾಗುತ್ತದೆ" - ನರೇಂದ್ರ ರೈ ದೇರ್ಲ


 "ಜಗತ್ತಿನಲ್ಲಿ ಪತ್ರಕರ್ತರನ್ನು ಹೆಚ್ಚು ಜನ ನಂಬುತ್ತಾರೆ. ಹೀಗಾಗಿ ಪತ್ರಕರ್ತರು ಸಾಮಾಜಿಕ ಬಳಕೆದಾರರು.ಹೀಗಾಗಿ ಇಂದಿನ ವೇಗದ ಜಾಲತಾಣಗಳೂ ಹೆಚ್ಚು ಮಹತ್ವ ಪಡೆಯುತ್ತಿವೆ. ಇದಕ್ಕಾಗಿ ಪತ್ರಕರ್ತರೂ ಸಾಮಾಜಿಕ ಜಾಲತಾಣಗಳಲ್ಲೂ ಪರಿಣಿತನಾಗಿರಬೇಕಾಗುತ್ತದೆ" ಎಂದು ಅಂಕಣಕಾರ, ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಹೇಳಿದರು.

ಅವರು ಭಾನುವಾರ ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟ್ ಹಾಗೂ ಅಡಿಕೆ ಪತ್ರಿಕೆ ವತಿಯಿಂದ ನಡೆದ ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ ಉದ್ಘಾಟಿಸಿ ಮಾತನಾಡಿದರು. "ಕೃಷಿ ಉಳಿಯುವಿಕೆಗೆ ಕಲಿಯುವುದು, ಕಲಿಸುವುದು ಅಗತ್ಯವಾಗಿದೆ. ಇಂದು ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳು ಹೆಚ್ಚು ಮಹತ್ವ ಪಡೆಯುತ್ತಿದೆ. ಹೀಗಾಗಿ ಜಾಲತಾಣಗಳ ಬಗ್ಗೆ ಕೃಷಿಕರೂ ಅರಿವು ಹೊಂದಿರಬೇಕಾಗುತ್ತದೆ. ಹಿಂದೆ ಸಹವಾಸ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿತ್ತು. ಇದರಿಂದ ಅನುಭವ ಹರಿದು ಬರುತ್ತಿತ್ತು. ಆದರೆ ಇಂದು ಸಹವಾಸ ಶಿಕ್ಷಣವು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿದೆ. ವೇಗದ ಜಗತ್ತಿನಲ್ಲಿ ಸಹವಾಸದ ಸಂಬಂಧವನ್ನು ಕೈಯಲ್ಲಿರುವ ಸಣ್ಣ ಉಪಕರಣ ಮೊಬೈಲ್ ಮೂಲಕ ಪಡೆದುಕೊಂಡು ಜಗತ್ತು ಮುಟ್ಟಲು ಸಾಧ್ಯವಿದೆ. ಅದರ ಜೊತೆಗೆ ಸಾಧ್ಯತೆಗಳ, ಮಿತಿಗಳ ಬಗ್ಗೆಯೂ ಯೋಚಿಸಬೇಕು" ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ, "ತಾಂತ್ರಿಕತೆಯನ್ನು ಉಪಯೋಗಪಡಿಸಿಕೊಳ್ಳಬೇಕು. ನಾಲೇಜ್ಗೂ ಮಾಹಿತಿಗೂ ವ್ಯತ್ಯಾಸ ಇದೆ. ನಮಗೆ ಮಾಹಿತಿ ಮಾತ್ರ ಸಾಲದು. ಜ್ಞಾನ ಸಂಪಾದನೆಯೂ ಅಗತ್ಯ. ಸಾಮಾಜಿಕ ತಾಲತಾಣಗಳ ,ತಂತ್ರಜ್ಞಾನಗಳ ಬಳಕೆ ಸೂಕ್ತ. ಆದರೆ ತಂತ್ರಜ್ಞಾನವನ್ನು  ಹದ್ದುಬಸ್ತಿನಲ್ಲಿಡುವ ಬುದ್ದಿವಂತಿಕೆಯನ್ನು  ಬೆಳೆಸಿಕೊಳ್ಳಬೇಕು" ಎಂದರು.

ವೇದಿಕೆಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟ್ ಕಾರ್ಯದರ್ಶಿ ಶಂಕರ್ ಸಾರಡ್ಕ, ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ, ಕೃಷಿ ಮಾಧ್ಯಮ ಕೇಂದ್ರದ  ಶಿವರಾಂ ಪೈಲೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಸ್ಮಾರ್ಟ್ ಫೋನು ಬಳಕೆ ಹಾಗೂ ಜಾಲತಾಣ, ಕಿರುತಂತ್ರಾಂಶಗಳ ಬಗ್ಗೆ ಡಾ.ಮೋಹನ್ ತಲಕಾಲುಕೊಪ್ಪ, ಸುಳಿವು ಹಾಗೂ ಲೇಖನ ತಯಾರಿ ಬಗ್ಗೆ ನಾ.ಕಾರಂತ ಪೆರಾಜೆ, ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಮಿತಿಗಳು ಮತ್ತು ಜವಾಬ್ದಾರಿ ಬಗ್ಗೆ ಶ್ರೀ ಪಡ್ರೆ, ಮಾಧ್ಯಮಸ್ನೇಹಿ ಛಾಯಾಗ್ರಹಣದ ಬಗ್ಗೆ ಮಹೇಶ್ ಪುಚ್ಚಪ್ಪಾಡಿ ಮಾಹಿತಿ ನೀಡಿದರು. ಗೇರು ಸಂಶೋಧನಾ ಕೇಂದ್ರದ ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ಕರ್ಕಿ ಸ್ವಾಗತಿಸಿ, ವಂದಿಸಿದರು.


Friday, November 11, 2016

ಶ್ರೀ ಪಡ್ರೆಯವರ ಹಲಸು ಪುಸ್ತಕ ಬಿಡುಗಡೆ


ಸಂಜ್ಞಾರ್ಥ ತತ್ತ್ವಕೋಶದ ಮೂರನೇ ಆವೃತ್ತಿ ಬಿಡುಗಡೆ

ಡಿ.ವಿ.ಹೊಳ್ಳರ ಪ್ರಸಿದ್ಧ ಕೃತಿ 'ಸಂಜ್ಞಾರ್ಥ ತತ್ತ್ವಕೋಶ'ದ ಮೂರನೇ ಆವೃತ್ತಿಯು 11-11-2016ರಂದು ವಿಟ್ಲದಲ್ಲಿ ಬಿಡುಗಡೆಗೊಂಡಿತು. ಯಕ್ಷಗಾನ ಅರ್ಥಧಾರಿಗಳ ಬ್ಯಾಗಿನಲ್ಲಿ ಇರಲೇಬೇಕಾದ ಪುಸ್ತಕ. ಆಸಕ್ತರು ವಿಟ್ಲದ ಶಂಕರ್ ಕುಳಮರ್ವ - 9535623603 - ಇವರನ್ನು ಸಂಪರ್ಕಿಸಿ.

Sunday, November 6, 2016

ಕೆದಿಲಾಯರ ಕಸಿ ಜಾಣ್ಮೆಗೆ ಅರ್ಧ ಶತಮಾನ

ಕಸಿ ತಜ್ಞ ನಾರಾಯಣ ಕೆದಿಲಾಯ

                  "ಹಿರಿಯರು ಶ್ರಮದಿಂದ ಮಾಡಿಟ್ಟ ಒಂದಿಂಚು ಸ್ಥಳವನ್ನೂ ಮಾರಲು ಹೋಗ್ಬೇಡಿ. ಆಸ್ತಿ ಮಾರುವವರ ಹತ್ರ ನನಗೆ ಅಸಹನೆಯಾಗುತ್ತದೆ," ಕಸಿ ತಜ್ಞ ನಾರಾಯಣ ಕೆದಿಲಾಯರು ಹೇಳುತ್ತಿದ್ದ ಮಾತುಗಳು ಕಾಡುತ್ತದೆ, ಪರಿಹಾಸ್ಯ ಮಾಡುವಾಗ ಎಲ್ಲರಿಗೂ ಸಿಟ್ಟು ಬರ್ತದೆ. ನನಗೆ ಉತ್ಸಾಹ ಇಮ್ಮಡಿಯಾಗುತ್ತದೆ. ಕೆಲಸ ಮಾಡಲು ದುಪ್ಪಟ್ಟು ಶಕ್ತಿ ಬರುತ್ತದೆ. ಸಿಟ್ಟು ಆವರಿಸಿದಾಗ ಉತ್ಸಾಹ ನಾಶವಾಗಬಾರದು. ಕ್ರಮೇಣ ಪರಿಹಾಸ್ಯ ಮಾಡಿದವನು ಮಿತ್ರನೇ ಆಗುತ್ತಾನೆ."
                ಪುತ್ತೂರು ತಾಲೂಕು (ದ.ಕ) ಆಲಂಕಾರಿನ ಬೆದ್ರಾಳ ಕುದ್ಕುಳಿಯ ನಾರಾಯಣ ಕೆದಿಲಾಯರ ಕಸಿಕಾಯಕಕ್ಕೆ  ಆರ್ಧ ಶತಮಾನ. ಇವರು ಕೇವಲ ಗಿಡಗಳಿಗೆ ಕಸಿ ಕಟ್ಟುವವರಲ್ಲ, ಬದುಕಿನ ಮೌಲ್ಯಗಳಿಗೂ ಕಸಿ ಕಟ್ಟುವವರು! ಹಣಕ್ಕಿಂತಲೂ ಮೌಲ್ಯಗಳಿಗೆ ಮಾನ ಕೊಟ್ಟವರು. ತಾನು ನಂಬಿದ ಮೌಲ್ಯಗಳನ್ನು ಬದ್ಧತೆಯ ಅಡಿಗಟ್ಟಿನಲ್ಲಿ ಅನುಷ್ಠಾನಿಸಿದವರು. ಸಾಲ ಸೋಲಗಳಿಲ್ಲದೆ ನಮ್ಮ ಕಾಲ ಮೇಲೆ ನಾವು ನಿಲ್ಲಬೇಕೆನ್ನುವ ಜೀವನಕ್ರಮವನ್ನು ಪ್ರತಿನಿಧಿಸಿದ ಕೆದಿಲಾಯರು ೨೦೧೬ ಅಕ್ಟೋಬರ್ 20ರಂದು ವಿಧಿವಶರಾಗುವಾಗ ತೊಂಭತ್ತಮೂರು ವರುಷ. 
                ಅತಿ ಕಡಿಮೆ ಮೂಲ ಬಂಡವಾಳ ಹೂಡಿ ಕೃಷಿಯಲ್ಲಿ ಹಣ ಸಂಪಾದನೆ ಮಾಡಬಹುದು ಎನ್ನುವುದು ಅವರ ನಂಬಿಕೆಯಾಗಿತ್ತು. ಸಾಲ ಮಾಡಿ ಕೃಷಿ ಮಾಡುವುದಕ್ಕೆ ಬದ್ಧ ವಿರೋಧವಾಗಿದ್ದರು. ಸಾಲ ಮಾಡಿದವ ಏಳಿಗೆಯಾಗಲಾರ. ಅವನ ಲಕ್ಷ್ಯವೆಲ್ಲಾ ಸಾಲವನ್ನು ಮರುಪಾವತಿ ಮಾಡುವುದರಲ್ಲೇ ಕೇಂದ್ರೀಕರಿಸಿರುತ್ತದೆ. ಒಂದು ಸಾಲ ಮುಗಿದಾಗ ಇನ್ನೊಂದು ಸಾಲ. ಹೀಗೆ ಸಾಲದ ಕೂಪದೊಳಗೆ ಸುತ್ತುತ್ತಾ ಆಯುಷ್ಯ ಮುಗಿಸುತ್ತಾನೆ. ಹೀಗಾದರೆ ಏನು ಸಾಧಿಸಿದ ಹಾಗಾಯ್ತು? ಕೆಲವು ವರುಷಗಳ ಹಿಂದೊಮ್ಮೆ ಕಸಿ ತರಬೇತಿ ಕಾರ್ಯಾಗಾರದಲ್ಲಿ ಆಡಿದ ಮಾತು ಮಾರ್ಮಿಕವಾಗಿತ್ತು.
                 ಒಮ್ಮೆ ಮೈತುಂಬ ಸಾಲ ಮಾಡಿಕೊಂಡ ಕೃಷಿಕರೊಬ್ಬರು ಸಾಲ ಮರುಪಾವತಿಗಾಗಿ ತಮ್ಮ ಭೂಮಿಯನ್ನು ಮಾರಲು ನಿರ್ಧರಿಸಿದರು. ಮಾರಿಕೊಡಲು ಕೆದಿಲಾಯರಲ್ಲಿ ವಿನಂತಿಸಿದರು. ಜತೆಗೆ ಕಮಿಶನ್ನಿನ ಆಮಿಷ ಬೇರೆ! ನೀವು ಲಕ್ಷ ರೂಪಾಯಿ ಕೊಟ್ಟರೂ ನಿಮ್ಮ ಜಾಗವನ್ನು ಮಾರಿಸಿ ಕೊಡುವ ಹೊಣೆಯನ್ನು ವಹಿಸಲಾರೆ ಎಂದು ಖಡಕ್ ಆಗಿ ಹೇಳಿದ್ದರು. ನಿಮ್ಮ ಸಾಲಕ್ಕೆ ನೀವು ಹೆದರುವುದು ಬೇಡ, ನಾನು ನೋಡಿ ಕೊಳ್ತೇನೆ ಎಂದು ಹೇಳಿ ಏನೋ ವ್ಯವಸ್ಥೆ ಮಾಡಿದರಂತೆ. ಅವರಿಗೆ ಸ್ವಂತ ದುಡಿಮೆಯಿಂದ ಸಾಲ ತೀರಿಸಿಕೊಳ್ಳುವ 'ಕೆಣಿ'ಗಳನ್ನು ಹೇಳಿದರು. ಕೆದಿಲಾಯರು ಹೇಳಿದಂತೆ ಕೃಷಿ ಮಾಡಿದರು, ಗೆದ್ದರು. ನನ್ನ ಮಾತು ಕೇಳಿ ಅವರು ಜಾಗ ಉಳಿಸಿಕೊಂಡದ್ದೇ ನನಗೆ ಹಣ ಎಂದಿದ್ದರು.
                 ನಿಮ್ಮತ್ರ ಖಾಲಿ ಜಾಗ ಉಂಟೋ? ಎಷ್ಟು ಜಾಗವಿದೆ? ಅದರಲ್ಲಿ ಏನು ನೆಟ್ಟಿದ್ದೀರಿ? - ಈ ಪ್ರಶ್ನೆಗಳಿಲ್ಲದೆ ಮಾತು ಮುಗಿಯುತ್ತಿರಲಿಲ್ಲ. ಬರಡು ನೆಲದಲ್ಲಿ ತೇಗದಂತಹ ಗಿಡಗಳನ್ನು ನೆಡಿ. ಇವೆಲ್ಲಾ ಕೃಷಿಕನ ವಿಮೆ. ಮೊದಲ ನಾಲ್ಕೈದು ವರುಷ ಮಾಡುವ ಆರೈಕೆಯೇ ನಾವು ಕಟ್ಟುವ ಪ್ರೀಮಿಯಂ. ಹದಿನೈದು ಇಪ್ಪತ್ತು ವರುಷಗಳ ಬಳಿಕ ಆ ಪಾಲಿಸಿ ಮೆಚ್ಯುರಿಟಿಯಾಗುತ್ತದೆ. ಕೈತುಂಬಾ ಹಣ ಸಿಗುತ್ತದೆ. ಇದು ಕೆದಿಲಾಯರ ಆರ್ಥಿಕ ಸೂತ್ರ.
                ನಾರಾಯಣ ಕೆದಿಲಾಯರು ಯೌವನದಲ್ಲಿ ವಿಟ್ಲ ಅರಮನೆಯಲ್ಲಿ ಅರ್ಚಕರಾಗಿದ್ದರು. ಒಮ್ಮೆ ಹೂ, ಹಣ್ಣಿನ ಗಿಡಗಳಿಗೆ ಕಸಿ ಕಟ್ಟಲು ಕೇರಳದಿಂದ ತಜ್ಞರು ಆಗಮಿಸಿದ್ದರು.  ಗುಲಾಬಿ, ಮಾವಿನ ಗಿಡಗಳಿಗೆ ಅವರು ಕಸಿ ಮಾಡುವುದನ್ನು ಅವರ ಜತೆಗಿದ್ದು ನೋಡಿದರು, ಕಲಿತರು. ಕಸಿಯ ಸೂಕ್ಷ್ಮಗಳನ್ನು ತಿಳಿದುಕೊಂಡರು. ಪರೀಕ್ಷಾರ್ಥವಾಗಿ ನೋಡಿದ್ದನ್ನು ಮಾಡಿದರು. ಧೈರ್ಯ ಬಂತು. ಕಸಿಯ ಮರ್ಮ ಅಂದು ತಿಳಿದುಕೊಂಡದ್ದರಿಂದ ಅದೇ ನನ್ನ ಮುಂದಿನ ಬದುಕಿಗೆ ದಾರಿಯಾಯಿತು, ಹೆಸರನ್ನು ತಂದು ಕೊಟ್ಟಿತು, ಎಂದಿದ್ದರು.
                 1960ರಿಂದ ಆಲಂಕಾರಿನ ತಮ್ಮ ಕೃಷಿ ಕ್ಷೇತ್ರದಲ್ಲಿ ಕನಸಿನ ಸಾಕಾರಕ್ಕೆ ಶ್ರೀಕಾರ. ಮೊತ್ತಮೊದಲ ಸಾಹಸ - ಉಡುಪಿಯಿಂದ ಎರಡು ಸಾವಿರ 'ಮಟ್ಟುಗುಳ್ಳ' ಸಸಿಗಳನ್ನು ತಂದು ನಾಟಿ ಮಾಡಿದರು. ಉತ್ತಮ ಫಸಲು ದೊರೆಯಿತು.  ಆಗ ಸಾಗಾಟಕ್ಕೆ ವಾಹನಗಳು ತೀರಾ ಕಡಿಮೆ. ಮಂಗಳೂರು ಮಾರುಕಟ್ಟೆಗೆ ಗೂಡ್ಸ್ನಲ್ಲಿ ಗುಳ್ಳವನ್ನು ಕಳುಹಿಸುತ್ತಿದ್ದೆ. ಒಂದು ಬೆಳೆಯಲ್ಲಿ ಹನ್ನೆರಡು ಸಾವಿರ ರೂಪಾಯಿ ಸಿಕ್ಕಿತು. ಆಗದು ದೊಡ್ಡ ಸುದ್ದಿಯಾಯಿತ. ನನ್ನ ಹೆಸರಿನೊಂದಿಗೆ 'ಬದನೆ ಕೆದಿಲಾಯ' ಹೊಸೆಯಿತು ಎಂದು ಬಾಯಿ ತುಂಬಾ ನಕ್ಕ ದಿನಮಾನಗಳು ನೆನಪಾಗುತ್ತದೆ.
                   1980ರಲ್ಲಿ ರಬ್ಬರ್ ಗಿಡಗಳಿಗೆ ಬೇಡಿಕೆ ಶುರು. ಮೂವತ್ತೈದು ಸಾವಿರ ರೂಪಾಯ ಖರ್ಚು ಮಾಡಿ ಜೆಸಿಬಿಯಿಂದ ಜಾಗ ತಟ್ಟು ಮಾಡಿಸಿ ರಬ್ಬರ್ ನರ್ಸರಿ ಶುರು ಮಾಡಿದರು. ಅದರಿಂದ 65000 ರೂಪಾಯಿ ಲಾಭವಾಯಿತು. ನಾವು ಖರ್ಚು ಮಾಡಿದ್ದು ಇದೆಯಲ್ಲಾ, ಅದು ಒಂದು ವರುಷದಲ್ಲಿ ನಮಗೆ ವಾಪಾಸು ಬರಬೇಕು. ಇಂತಹ ಕೆಣಿಗಳನ್ನು ಕೃಷಿಯಲ್ಲಿ ಕಲಿತುಕೊಳ್ಳಬೇಕು. ಆಗ ಮಾತ್ರ ಗೆಲ್ಲುತ್ತೇವೆ ಎನ್ನುವುದು ಕೆದಿಲಾಯರ 'ಕೃಷಿ ಸೂತ್ರ'. 1965ರಿಂದ ಗೇರು ಕಸಿಯತ್ತ ಮನ ಮಾಡಿದ್ದರು.
                  ಆಗಷ್ಟೇ ಕಸಿಯಂತಹ ಹೊಸ ವಿಚಾರಗಳು ಕೃಷಿ ಮೇಳ, ಕೃಷಿ ಕಾರ್ಯಕ್ರಮಗಳಲ್ಲಿ ಸೇರುತ್ತಿದ್ದುವು. ಮಾತುಕತೆಯಲ್ಲೂ ಕಸಿಯದ್ದೇ ವಿಚಾರ. ಒಂದಷ್ಟು ಮಂದಿಗೆ ಕಸಿಯ ಗುಂಗು ಆವರಿಸಿತ್ತು. ಕೆದಿಲಾಯರಿಗೆ ಕಸಿಯ ತರಬೇತಿ ನೀಡಲು ಎಲ್ಲೆಡೆಯಿಂದ ಆಹ್ವಾನ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಸಿಯ ಸೂಕ್ಷ್ಮಗಳ ಪಾಠ ಮಾಡಿದರು. ಕೃಷಿ ಮೇಳ, ಕಾಲೇಜುಗಳಲ್ಲಿ ಉಪನ್ಯಾಸ ಮಾಡಿದರು. ಕಸಿ ಕಟ್ಟುವ ಪ್ರಾಕ್ಟಿಕಲ್ ಕಾರ್ಯಗಾರಗಳಲ್ಲಿ ಭಾಗವಹಿಸಿದರು. ಇದರಿಂದಾಗಿ ಸಾಕಷ್ಟು ಮಂದಿಗೆ ಕಸಿಯ ಒಲವು ಹುಟ್ಟಿತು. ಕೆಲವರು ಸ್ವತಃ ಕಸಿ ಕಟ್ಟಲು ಕಲಿತರು. ನನಗೆ 'ಕಸಿ ಕೆದಿಲಾಯ' ಎನ್ನುವ ಹೆಸರಾಯಿತು, ಖುಷಿಯಿಂದ ಹೇಳುತ್ತಿದ್ದರು.
                    ತಮ್ಮಲ್ಲಿ ಕಸಿ ಮಾವಿನ ಮರ ಫಲ ಬಿಡಲು ಶುರುವಾಗುವಲ್ಲಿಯ ತನಕ ಜನರಿಗೆ ಕಸಿಯ ವಿಚಾರ ಹೇಳಿದರೆ ಏನೋ ಉದಾಸೀನ. ಕಸಿ ಗಿಡ ನೆಡುವವರೂ ಕಡಿಮೆ ಇದ್ದರು. ನರ್ಸರಿಗೆ ಇತರ ಗಿಡಗಳಿಗೆ ಬರುವ ಗಿರಾಕಿಗಳಿಗೆ ಮಾವಿನ ಹಣ್ಣನ್ನು ನೀಡಿ, ಇದು ಕಸಿ ಗಿಡದ ಹಣ್ಣು. ಎಷ್ಟೊಂದು ರುಚಿಯಲ್ವಾ. ನಾಟಿ ತಳಿಗಿಂತ ಕಸಿಯದರಲ್ಲಿ ಫಸಲು ಬಹುಬೇಗ ಬರುತ್ತದೆ. ಒಂದೆರಡು ಗಿಡ ತೆಕ್ಕೊಳ್ಳಿ ಎಂದು ರುಚಿ ತೋರಿಸಿ ಗಿಡ ಮಾರಿದ ಕ್ಷಣಗಳನ್ನು ರೋಚಕವಾಗಿ ಹೇಳುತ್ತಿದ್ದರು.
                       ಕಸಿ ಕಟ್ಟುವ ಜಾಣ್ಮೆ ತಿಳಿಸುವಿರಾ? ಒಮ್ಮೆ ಪ್ರಶ್ನಿಸಿದ್ದೆ. ಒಮ್ಮೆ ಕಸಿ ಕಟ್ಟಲು ನೀವು ಕಲಿತಿರಾ, ಮತ್ತೆಲ್ಲಾ ಗಿಡಗಳಿಗೂ ಮಾಡಬಹುದು. ಒಂದಷ್ಟು ಶ್ರಮ, ಜಾಣ್ಮೆ ಬೇಕಷ್ಟೇ. ಅವೆಲ್ಲಾ ಅನುಭವದಲ್ಲಿ ಬರುವಂಥದ್ದು. ಹಲಸಿಗೆ ಕಸಿ ಕಷ್ಟ. ಅದು ಬಹಳ ಸೂಕ್ಷ್ಮತೆಯನ್ನು ಬೇಡುತ್ತದೆ. ಈ ಭಾಗದಲ್ಲಿ ಮೊದಲು ಹಲಸಿನ ಗಿಡಗಳಿಗೆ ಕಸಿ ಕಟ್ಟಿ ಯಶಸ್ಸಾಗಿದ್ದೇನೆ, ಎಂದು ಉತ್ತರಿಸಿದ್ದರು. ಚಿಕ್ಕು, ರಬ್ಬರ್, ಗುಲಾಬಿ, ಮಾವು, ಹಲಸು.. ಹೀಗೆ ಎಲ್ಲದಕ್ಕೂ ಕಸಿಯ ಟಚ್.
                 ನೆಟ್ಟ ಕಸಿ ಗಿಡ ಸತ್ತುಹೋದರೆ ಅಷ್ಟಕ್ಕೇ ಬಿಡಬಾರದು. ಇನ್ನೊಂದು ಗಿಡ ನೆಟ್ಟು ಪೋಷಿಸಬೇಕು - ಕೆದಿಲಾಯರ ಕಿವಿಮಾತು. ಮಕ್ಕಳೆಲ್ಲಾ ತಂದೆಯವರ ಜತೆಗಿದ್ದು, ಕಲಿತು, ಈಗ ಕಸಿಯ ಎಲ್ಲಾ ಮಗ್ಗುಲುಗಳಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ತಜ್ಞತೆ ರೂಢಿಸಿಕೊಂಡಿದ್ದಾರೆ. ತಮ್ಮ ನರ್ಸರಿಯಲ್ಲಿ ಸ್ವತಃ ಕಸಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಭೇಟಿ ಮಾಡಿದ ನೆನಪನ್ನು ಕೃಷಿಕ ವಸಂತ ಕಜೆ ಜ್ಞಾಪಿಸಿಕೊಂಡರು, ಕೆದಿಲಾಯರದು ಅಡೆತಡೆಯಿಲ್ಲದ, ಅನುಭವಜನ್ಯ ಮಾತುಗಾರಿಕೆ. ಅವರಾಡುವುದರ ಬಗ್ಗೆ ಅವರಿಗೆ ಸಂಶಯವೇ ಇರಲಿಲ್ಲ. ಲಾಭನಷ್ಟಗಳನ್ನು ಅಂಕೆ-ಸಂಖ್ಯೆಗಳ ಸಹಿತ ವಿವರಿಸುತ್ತಿದ್ದರು. ನಂಬಿಕೊಂಡ ಮೌಲ್ಯಗಳ ಜತೆ ರಾಜಿ ಮೋಡಿಕೊಂಡು ದುಡ್ಡ ಸಂಪಾದನೆ ಮಾಡಿದಂತಿಲ್ಲ.
            'ಉತ್ಸಾಹವೇ ಧನ, ಉದಾಸೀನವೇ ದಾರಿದ್ರ್ಯ' ನಾರಾಯಣ ಕೆದಿಲಾಯರ ಅನುಭವ. ತಾನು ಅನುಭವಿಸಿದ ಬದುಕಿನ ಸತ್ಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಖುಷಿ. ಈ ಖುಷಿಯ ಭಾವ ಇನ್ನು ನೆನಪು ಮಾತ್ರ. ಅವರ ಚಿರಂಜೀವಿಗಳು ಕೃಷಿಯನ್ನು ಅಪ್ಪಿಕೊಂಡು, ಒಪ್ಪಿಕೊಂಡು ಮಣ್ಣಿನೊಂದಿಗಿರುವುದು ಇದೆಯಲ್ಲಾ, ಅದು ಕೆದಿಲಾಯರು ನಂಬಿದ ಸತ್ಯಗಳಿಗೆ ಸಲ್ಲುವ ಮಾನ-ಸಂಮಾನ.



Addl Information : Vasanthe Kaje
Published in Udayavani/Nelada Nadi Coloum



ಹಕ್ಕುಗಳಿಗೆ ಕಿವಿಯಾಗುವ ನಾವು ಜವಾಬ್ದಾರಿಗಳಿಗೆ ಕಿವುಡಾಗುವುದೇಕೆ?


               ಮಳೆಗಾಲ ಒಣಗಿತು! ಒಂದು ದಿನ ಮಳೆಯು ರಜೆ ಹಾಕಿದರೂ ಬೇಸಿಗೆಯ ಶಾಖದ ಅನುಭವ. ನದಿ, ಕೆರೆ, ಬಾವಿಗಳಲ್ಲಿ ಈಗಲೇ ನೀರಿನ ಮಟ್ಟ ಅತೃಪ್ತಿದಾಯಕ. ಇನ್ನು ಬೇಸಿಗೆಯ ಚಿತ್ರಣ ಹೇಗಿರಬಹುದು? ಊಹಿಸಿದರೆ ಭಯವಾಗುತ್ತದೆ. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳು ನೆರೆಯ ಮಹಾಪೂರಕ್ಕೆ ತುತ್ತಾದರೆ ಮತ್ತೊಂದು ಭಾಗ ಮಳೆಯಿಲ್ಲದೆ ತತ್ತರವಾಗಿದೆ. ಇತ್ತ ಕಾವೇರಿ ಮಾತೆಯ ರೋದನಕ್ಕೆ ಕನ್ನಾಡು ದನಿಸೇರಿಸಿದೆ. ನ್ಯಾಯಾಲಯದ ತೀರ್ಪುು ರೋದನವನ್ನು ಚಿವುಟಿದೆ.
              ಬಹುಶಃ ಕನ್ನಾಡಿನ ನೀರಿನ ಒದ್ದಾಟ, ಗುದ್ದಾಟಗಳಲ್ಲಿ ಕಾವೇರಿ ಹೆಚ್ಚು ಸದ್ದು ಮಾಡಿತು. ಎಲ್ಲಾ ಪಕ್ಷಗಳು ಒಗ್ಗೂಡಿದುವು. ಮಾಜಿ ಪ್ರಧಾನಿಗಳು ಟೊಂಕ ಕಟ್ಟಿದರು. ಸಮಸ್ಯೆಯು ದೇಶದ ರಾಜಧಾನಿ ತಲುಪಿತು. ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ರೈತರ ದೊಡ್ಡ ದನಿಗೆ ಆಡಳಿತದ ಜಾಣ ಕುರುಡು, ಕಿವುಡನ್ನು ರೈತ ಶಕ್ತಿಯು ಕಿವಿ ಹಿಂಡಿತು. ನ್ಯಾಯಾಲಯದ ಮುಂದೆ ಸಮರ್ಥವಾಗಿ ವಾದ ಮಂಡಿಸುವ ವಕೀಲರು ಆಕಳಿಸಿದ್ದಿರಬಹುದೇ ಎಂದು ಕನ್ನಾಡಿನ ಜನರಾಡಿಕೊಳ್ಳುತ್ತಿದ್ದಾರೆ.
                ಈ ವರುಷ ಬರಗಾಲದಲ್ಲಿ ಕರ್ನಾಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ, ಎಂದು ಜಲ ತಜ್ಞ ರಾಜೇಂದ್ರ ಸಿಂಗ್ ಕೆಂಪು ನಿಶಾನಿ ತೋರುತ್ತಾ ಪ್ರಸ್ತುತ ರಾಜಕೀಯದ ಮೇಲಾಟದತ್ತ ಬೆರಳು ತೋರುತ್ತಾರೆ, ತಮಿಳುನಾಡು ಮತ್ತು ಕರ್ನಾಟಕದ ರಾಜಕಾರಣಿಗಳಿಗೆ ಕಾವೇರಿ ವಿವಾದ ಜೀವಂತ ಇರುವುದೇ ಇಷ್ಟ. ಇದರೊಂದಿಗೆ ಭತ್ತ ಮತ್ತು ಸಕ್ಕರೆಯ ಲಾಬಿ ಸೇರಿದೆ. ಈ ಎರಡೂ ಬೆಳೆಗಳಿಗೆ ನೀರನ್ನು ಒದಗಿಸುವುದು ಕಷ್ಟ ಎಂದು ಎರಡೂ ರಾಜ್ಯಗಳಿಗೆ ಗೊತ್ತಿದೆ. ಸಂಕಷ್ಟ ಗೊತ್ತಿದ್ದೂ ಆ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ವಿವಾದ ಎಬ್ಬಿಸಿ ಅದರ ಲಾಭ ಪಡೆದುಕೊಳ್ಳಲು ರಾಜಕಾರಣಿಗಳಲ್ಲೇ ಪೈಪೋಟಿಯಿದೆ. ಒಟ್ಟೂ ಸಮಸ್ಯೆಯನ್ನು ಮುಂದಿಟ್ಟು ನೋಡುವಾಗ ರಾಜೇಂದ್ರ ಸಿಂಗ್ ಅವರ ಮಾತು ಮರೆತು ಬಿಡುವಂತಹುದಲ್ಲ.
                ಕಾವೇರಿ ಮಾತ್ರ ಏಕೆ? ನಮ್ಮ ನಡುವೆ ಹರಿಯುತ್ತಿರುವ ಚಿಕ್ಕಪುಟ್ಟ ನದಿ, ಹಳ್ಳಗಳನ್ನು ಉಳಿಸಿಕೊಳ್ಳುವುದು ಕೂಡಾ ಕಾಲದ ಆವಶ್ಯಕತೆಯಾಗಿದೆ. ಜನವರಿ ತನಕ ಹರಿಯುವ ನದಿಗಳಲ್ಲಿ ಈಗಲೇ ನೀರು ತಳ ಕಂಡಿವೆ. ಕೆಲವು ಹರಿವು ನಿಲ್ಲಿಸಿದೆ. ಇನ್ನೊಂದಿಷ್ಟು ಕೆಲವು ತಿಂಗಳೊಳಗೆ ಒಣಗುತ್ತವೆ. ಹೀಗಿದ್ದೂ ಬೇಸಿಗೆಯ ಪಾಡು? ಕಾವೇರಿ ನೀರು ವಿವಾದಗಳಿಂದ ರೈತರೊಂದಿಗೆ ಬೆಂಗಳೂರು ನಗರವೂ ಒದ್ದಾಡಬೇಕಾಗಿದೆ. ಸರಕಾರ ಹೇಗಾದರೂ ನೀರು ಕೊಡುತ್ತದೆ. ದುಡ್ಡು ಬಿಸಾಡಿದರಾಯಿತು, ಎನ್ನುವ ಮನಃಸ್ಥಿತಿಯುಳ್ಳವರಿಗೆ ಬಹುಶಃ ಈ ಬೇಸಿಗೆಯು ನೀರಿನ ಬಿಸಿಯನ್ನು ಮುಟ್ಟಿಸಬಹುದು. ಹಾಗಾಗದಿರಲಿ.
                ಕನ್ನಾಡಿನ ಜಲಯೋಧರು ನೆಲ-ಜಲ ಸಂರಕ್ಷಣೆಯ ಪಾಠವನ್ನು ಒಂದೂವರೆ ದಶಕಗಳಿಂದ ಮಾಡುತ್ತಾ ಬಂದಿದ್ದಾರೆ. ಸಂಘಸಂಸ್ಥೆಗಳು ನೀರಿನೆಚ್ಚರ ಮೂಡಿಸುವ ಕೆಲಸ ಮಾಡುತ್ತಿವೆ. ವೈಯಕ್ತಿಕವಾಗಿ ನೀರಿನ ಅರಿವನ್ನು ಮೂಡಿಸುವ, ಯಶೋಗಾಥೆಗಳನ್ನು ದಾಖಲಿಸುವ, ಅವುಗಳನ್ನು ಜನರ ಮನದೊಳಿಗೆ ಹರಿಯಬಿಡುವ ಜಲಯೋಧರ ಸಾಧನೆಗಳು ಅಲಿಖಿತ. ಒಂದು ಕಾಲಘಟ್ಟದಲ್ಲಿ ಜಲಯೋಧರ ಕಾಯಕಗಳಿಗೆ ಗೇಲಿ ಮಾಡುತ್ತಿದ್ದವರು ಇಂದು ಜಲಸಂರಕ್ಷಣೆಯ ಭಾಷಣ ಮಾಡುತ್ತಿದ್ದಾರೆ!
                ಎಲ್ಲಾ ಸಮಸ್ಯೆಗಳಿಗೂ ಸರಕಾರದಲ್ಲಿ ಉತ್ತರವಿದ್ದೀತೇ? ಹಕ್ಕುಗಳನ್ನು ಹೋರಾಟ ಮೂಲಕ ಪಡೆಯುತ್ತೇವೆ.  ಜತೆಗೆ ನಂನಮ್ಮ ಕರ್ತವ್ಯಗಳನ್ನು ನಾಗರಿಕರಾಗಿ ಎಷ್ಟು ಯೋಚಿಸಿದ್ದೇವೆ? ಆದರೆ ಭಾರತದಲ್ಲಿ 'ಕರ್ತವ್ಯ'ಗಳನ್ನು ಜವಾಬ್ದಾರಿ ಎನ್ನುವ ನೆಲೆಯಲ್ಲಿ ಮೈಮೇಲೆ ಎಳೆದುಕೊಂಡ ಅಜ್ಞಾತ ವ್ಯಕ್ತಿಗಳು ಸಾವಿರಾರು ಮಂದಿ ಇದ್ದಾರೆ. ಅವರೆಂದೂ ವಾಹಿನಿಗಳಿಗೆ ಫೋಸ್ ಕೊಡುವುದಿಲ್ಲ. ತಾವೇ ಸ್ವತಃ ವರದಿ-ಚಿತ್ರಗಳನ್ನು ಪತ್ರಿಕಾಲಯಕ್ಕೆ ಒಪ್ಪಿಸುವುದಿಲ್ಲ. ಅವರದು ಜವಾಬ್ದಾರಿ ಅರಿತ ಕಾಯಕ. ನಿಜಾರ್ಥದ ಸಮಾಜ ಸೇವೆ. ಇದಕ್ಕೆ ಉದಾಹರಣೆ - ಮಹಾರಾಷ್ಟ್ರದ ಸತಾರಾದ ಡಾ.ಅವಿನಾಶ್ ಪೋಲ್.  ಗ್ರಾಮಕ್ಕೆ ದನಿಯಾಗಿ ನೀರಿನ ಬರದ ಗುಮ್ಮಕ್ಕೆ ಸಡ್ಡು ಹೊಡೆದ ಸಾಹಸಿ.
                 ನಾಲ್ಕೈದು ವರುಷದ ಹಿಂದೆ ಮಹಾರಾಷ್ಟ್ರದ ಜಾಲ್ನಾ ನಗರದ ಚಿತ್ರ ಕಣ್ಣೀರು ತರುವಂತಾದ್ದು. ನೀರಿಗಾಗಿ ಒದ್ದಾಟ. ಒಂದುವರೆ ಸಾವಿರ ಕೊಳವೆಬಾವಿಗಳು ಬತ್ತಿದ್ದುವು. ಮನೆಗಳಿಗೆ ವಾರಕ್ಕೊಮ್ಮೆ ರೇಶನ್ ನೀರು. ಅದೂ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಉದ್ದಿಮೆಗಳು ಷಟರ್ ಇಳೆದಿದ್ದುವು. ಬಹುತೇಕರು ಉದ್ಯೋಗ ಅರಸಿ ಬೇರೆಡೆ ಗುಳೆ ಹೋದರು. ಊರಿಗೆ ರಾಜಕಾರಣಿಗಳು ಬಂದರು, ಕ್ಯಾಮೆರಾಗಳಿಗೆ ಫೋಸ್ ಕೊಟ್ಟರು, ಹೋದರು! ಸಮಸ್ಯೆಯು ಸಮಸ್ಯೆಯಾಗಿಯೇ ಉಳಿಯಿತು.
                ಜಾಲ್ನಾ ನಗರದಲ್ಲಿ ಹೂಳು ತುಂಬಿದ ನಾಲ್ಕು ಸರೋವರಗಳಿದ್ದುವು. ದೂರದ ಜಾಯ್ವಾಡಿ ಅಣೆಕಟ್ಟಿನಿಂದ ಸರಕಾರವು ನೀರು ತರುವ ಯೋಜನೆಗೆ ಸಹಿ ಮಾಡಿತ್ತು. ಬರೋಬ್ಬರಿ ಇನ್ನೂರೈವತ್ತು ಕೋಟಿ ರೂಪಾಯಿಯ ಯೋಜನೆ! ಎಲ್ಲಾ ಕಾಮಗಾರಿ ಮುಗಿಯುವಾಗ ಅಣೆಕಟ್ಟಿನಲ್ಲಿ ನೀರಿರಲಿಲ್ಲ! ಒಂದು ವೇಳೆ ಇರುತ್ತಿದ್ದರೂ ಐವತ್ತು ಕಿಲೋಮೀಟರ್ ದೂರದಿಂದ ಪೈಪಿನಲ್ಲಿ ತರಬೇಕಾಗಿತ್ತು. ಏನಿಲ್ಲವೆಂದರೂ ದಿನಕ್ಕೆ ಒಂದು ಲಕ್ಷ ಖರ್ಚು. ಜಾಲ್ನಾಕ್ಕೆ ನೀರು ಪೂರೈಕೆಗಾಗಿಯೇ ಘನೆವಾಡಿ ಸರೋವರವನ್ನು ಆಗಿನ ನಿಜಾಮ ಕಟ್ಟಿಸಿದ್ದರು. ಅದು ಹೂಳು ತುಂಬಿತ್ತು.
                ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಘಸಂಸ್ಥೆಗಳು ಒಂದಾದುವು. ನೀರಿನ ಬರಕ್ಕೆ ಘನೆವಾಡಿ ಸರೋವರದ ಪುನರ್ಜೀವವೊಂದೇ ಹಾದಿ ಎಂದು ಕಂಡುಕೊಂಡರು. ಸಾಮಾಜಿಕ ಬದ್ಧತೆಯುಳ್ಳ ದಂತವೈದ್ಯ ಡಾ. ಅವಿನಾಶ್ ಪೋಲ್ ಅವರನ್ನು ಸಂಪಕರಿಸಿರು. ಅವಿನಾಶರು ಕಳೆದ ಎರಡು ದಶಕಗಳಿಂದ ನೀರಿನ ಕೆಲಕ್ಕೆ ಹಳ್ಳಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಊರವನ್ನು ಸಂಘಟಿಸಿ, ಶ್ರಮದಾನದ ಮೂಲಕ ಹಳ್ಳಿ ಉದ್ದಾರಕ್ಕೆ ಟೊಂಕ ಕಟ್ಟಿದ್ದಾರೆ. ಇಲಾಖೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
               ಅವಿನಾಶರ ಸಾರಥ್ಯದಲ್ಲಿ ಜಲ ಕಾಯಕ ಶುರು. ಇಲ್ಲಿ ಬೀಳುವ ಮಳೆ ಕೇವಲ ಮುನ್ನೂರರಿಂದ ನಾಲ್ಕುನೂರು ಮಿಲ್ಲಿಮೀಟರ್. ಬಿದ್ದ ಮಳೆ ನೀರನ್ನು ಇಂಗಿಸಲು ಸಾವಿರಗಟ್ಟಲೆ ರಚನೆಗಳ ನಿರ್ಮಾಣಕ್ಕೆ ಸಲಹೆ ನೀಡಿದರು. ಶ್ರಮದಾನದ ಮೂಲಕ ಹಳ್ಳಿ ಒಂದಾಯಿತು. ಹತ್ತೋ ಹದಿನೈದೋ ಲಕ್ಷ ರೂಪಾಯಿ ವ್ಯಯವಾಗುತ್ತಿದ್ದ ಕಾಮಗಾರಿಗಳು ಎರಡೋ ಮೂರೋ ಲಕ್ಷದಲ್ಲೇ ನಿರ್ಮಾಣವಾದುವು. ಅವಿನಾಶರ ಯೋಜನೆಗಳಿಗೆ ಆರಂಭದಲ್ಲಿ ನಿಧಾನ ಸ್ಪಂದನ ದೊರೆತರೂ ಮುಂದೆ ಅದು ಬೀಸುಹೆಜ್ಜೆಯಾಯಿತು.
               ಅವಿನಾಶರಿಗೆ ಹಳ್ಳಿ ಸುಧಾರಣೆಯು ಆಸಕ್ತಿಯ ವಿಷಯ. ತನ್ನ ಒತ್ತಡಗಳ ಮಧ್ಯೆ ಕಷ್ಟಗಳಿಗೆ ಕಿವಿಯಾಗುತ್ತಾರೆ. ಮೊದಲ ಭೇಟಿಯಲ್ಲೇ ಅವಿನಾಶ್ ಹಳ್ಳಿಯ ಮೂಲೆ ಮೂಲೆಗಳಿಗೂ ಓಡಾಡುತ್ತಾರೆ. ಜಲಮೂಲಗಳನ್ನು ವೀಕ್ಷಿಸುತ್ತಾರೆ. ಆಗಲೇ ಅಲ್ಲಿ ಆಗಬೇಕಾದ ಕಾರ್ಯಕಗಳತ್ತ ಮಾಸ್ಟರ್ಪ್ಲಾನ್ ಮನದಲ್ಲಿ ಸಿದ್ಧವಾಗುತ್ತದೆ. ಅವಿನಾಶರಿಗೆ ಸರಕಾರಿ ಯೋಜನೆಗಳ ಕುರಿತು ಅಗಾಧ ತಿಳುವಳಿಕೆಯಿದೆ. ಸರಕಾರದ ಕೆಂಪುಪಟ್ಟಿ ಸಂಸ್ಕೃತಿಯ ಬೇಲಿಯನ್ನು ದಾಟಿ ಮುಂದಡಿಯಿಡುವುದು ಕಷ್ಟದ ಕೆಲಸ. ಆದರೆ ಕಚೇರಿಯೊಳಗಿರುವ ಕೆಲವು ಸಮಾಜಮುಖಿ ಮನಸ್ಸಿನವರು ಅವಿನಾಶರ ನಿಸ್ವಾರ್ಥ ದುಡಿಮೆಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಸ್ಪಂದಿಸುತ್ತಿದ್ದಾರೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಸರಕಾರಿ ಸ್ಕೀಮನ್ನು ಹಳ್ಳಿಗಳಿಗೆ ಹೊಂದಿಸುತ್ತಿದ್ದಾರೆ.
                ಸರಕಾರದ ಯೋಜನೆಗಳನ್ನು ಆಯಾಯ ಹಳ್ಳಿಗೆ ಜೋಡಿಸುವ ಇವರ ಅನನ್ಯ ಸಾಮಥ್ರ್ಯಕ್ಕೆ, ಇವರ ಸಂಪರ್ಕ ವಲಯದ ಹರವಿನ ಬಗ್ಗೆ, ಯೋಜನೆಗಳ ಒಳಹೊರಗಿನ, ವಿಧಿವಿಧಾನಗಳ ತಿಳಿವಳಿಕೆ ಬಗ್ಗೆ ಅಚ್ಚರಿ ಹುಟ್ಟುತ್ತದೆ, ಎನ್ನುತ್ತಾರೆ ಜಲತಜ್ಞ  ಶ್ರೀ ಪಡ್ರೆ. ಒಂದು ಹಳ್ಳಿಯಲ್ಲಿ ನೀರಿನ ಕೆಲಸ ಇನ್ನೇನು ಅಂತಿಮ ಹಂತಕ್ಕೆ ಬಂತು ಎಂದಾವಾಗ ಅಲ್ಲಿಂದ ಕಾಲ್ಕೀಳುವುದಿಲ್ಲ. ಆ ಊರಿನ ನೈರ್ಮಲ್ಯ, ನೀರುಳಿತಾಯ, ಬೆಳೆ ಆಯ್ಕೆ, ಶಿಕ್ಷಣ, ಸಾವಯವ ಕೃಷಿ - ಇಂಥ ವಿಚಾರದ ಬಗ್ಗೆಯೂ ಗಮನ ಹರಿಸುತ್ತಾರೆ. ಅವಿನಾಶರು ಮಾಧ್ಯಮದಿಂದ ದೂರ. ತಾವಾಯಿತು, ತಮ್ಮ ಕೆಲಸವಾಯಿತು. ತಾವು ಹಾಕಿದ ಯೋಜನೆಗಳಿಗೆ ಬಲ ಬರಲು ಅವರು ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿಲ್ಲ!
              ಡಾ. ಅವಿನಾಶರಂತೆ ಅಲ್ಲದಿದ್ದರೂ, ಹಳ್ಳಿ ಪ್ರೀತಿಯ, ಪರಿಸರ ಕಾಳಜಿಯ, ನೀರಿನೆಚ್ಚರದ ಎಷ್ಟು ಮಂದಿ ದುಡಿಯುತ್ತಿಲ್ಲ. ಅದು ಗ್ರಾಮೀಣ ಭಾರತದ ಸಶಕ್ತತೆ. ಈ ಸಶಕ್ತತೆಗೆ ಸರಕಾರದ ಹಂಗಿಲ್ಲ. ರಾಜಕಾರಣಿಗಳ ಮುಲಾಜಿಲ್ಲ. ಇಲ್ಲಿರುವುದು ಅಪ್ಪಟ ಪ್ರೀತಿ. 'ನನ್ನ ಭಾರತ' ಎನ್ನುವ ಅಭಿಮಾನ. ಸರಕಾರದ ಎಷ್ಟು ಮನಸ್ಸುಗಳಿಗೆ ಇಂತಹ ದುಡಿಮೆಗಳು ಅರ್ಥವಾಗುತ್ತವೆ?

(Photo/Information : Shree Padre/Adike Patrike)
(Published in Nelada Nadi coloum/Udayavani)