Tuesday, November 22, 2016

ಪುತ್ತೂರಿನಲ್ಲಿ ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ "ಪತ್ರಕರ್ತ ಸಾಮಾಜಿಕ ಜಾಲತಾಣಗಳಲ್ಲೂ ಪರಿಣಿತನಾಗಿರಬೇಕಾಗುತ್ತದೆ" - ನರೇಂದ್ರ ರೈ ದೇರ್ಲ


 "ಜಗತ್ತಿನಲ್ಲಿ ಪತ್ರಕರ್ತರನ್ನು ಹೆಚ್ಚು ಜನ ನಂಬುತ್ತಾರೆ. ಹೀಗಾಗಿ ಪತ್ರಕರ್ತರು ಸಾಮಾಜಿಕ ಬಳಕೆದಾರರು.ಹೀಗಾಗಿ ಇಂದಿನ ವೇಗದ ಜಾಲತಾಣಗಳೂ ಹೆಚ್ಚು ಮಹತ್ವ ಪಡೆಯುತ್ತಿವೆ. ಇದಕ್ಕಾಗಿ ಪತ್ರಕರ್ತರೂ ಸಾಮಾಜಿಕ ಜಾಲತಾಣಗಳಲ್ಲೂ ಪರಿಣಿತನಾಗಿರಬೇಕಾಗುತ್ತದೆ" ಎಂದು ಅಂಕಣಕಾರ, ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಹೇಳಿದರು.

ಅವರು ಭಾನುವಾರ ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟ್ ಹಾಗೂ ಅಡಿಕೆ ಪತ್ರಿಕೆ ವತಿಯಿಂದ ನಡೆದ ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ ಉದ್ಘಾಟಿಸಿ ಮಾತನಾಡಿದರು. "ಕೃಷಿ ಉಳಿಯುವಿಕೆಗೆ ಕಲಿಯುವುದು, ಕಲಿಸುವುದು ಅಗತ್ಯವಾಗಿದೆ. ಇಂದು ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳು ಹೆಚ್ಚು ಮಹತ್ವ ಪಡೆಯುತ್ತಿದೆ. ಹೀಗಾಗಿ ಜಾಲತಾಣಗಳ ಬಗ್ಗೆ ಕೃಷಿಕರೂ ಅರಿವು ಹೊಂದಿರಬೇಕಾಗುತ್ತದೆ. ಹಿಂದೆ ಸಹವಾಸ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿತ್ತು. ಇದರಿಂದ ಅನುಭವ ಹರಿದು ಬರುತ್ತಿತ್ತು. ಆದರೆ ಇಂದು ಸಹವಾಸ ಶಿಕ್ಷಣವು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿದೆ. ವೇಗದ ಜಗತ್ತಿನಲ್ಲಿ ಸಹವಾಸದ ಸಂಬಂಧವನ್ನು ಕೈಯಲ್ಲಿರುವ ಸಣ್ಣ ಉಪಕರಣ ಮೊಬೈಲ್ ಮೂಲಕ ಪಡೆದುಕೊಂಡು ಜಗತ್ತು ಮುಟ್ಟಲು ಸಾಧ್ಯವಿದೆ. ಅದರ ಜೊತೆಗೆ ಸಾಧ್ಯತೆಗಳ, ಮಿತಿಗಳ ಬಗ್ಗೆಯೂ ಯೋಚಿಸಬೇಕು" ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ, "ತಾಂತ್ರಿಕತೆಯನ್ನು ಉಪಯೋಗಪಡಿಸಿಕೊಳ್ಳಬೇಕು. ನಾಲೇಜ್ಗೂ ಮಾಹಿತಿಗೂ ವ್ಯತ್ಯಾಸ ಇದೆ. ನಮಗೆ ಮಾಹಿತಿ ಮಾತ್ರ ಸಾಲದು. ಜ್ಞಾನ ಸಂಪಾದನೆಯೂ ಅಗತ್ಯ. ಸಾಮಾಜಿಕ ತಾಲತಾಣಗಳ ,ತಂತ್ರಜ್ಞಾನಗಳ ಬಳಕೆ ಸೂಕ್ತ. ಆದರೆ ತಂತ್ರಜ್ಞಾನವನ್ನು  ಹದ್ದುಬಸ್ತಿನಲ್ಲಿಡುವ ಬುದ್ದಿವಂತಿಕೆಯನ್ನು  ಬೆಳೆಸಿಕೊಳ್ಳಬೇಕು" ಎಂದರು.

ವೇದಿಕೆಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟ್ ಕಾರ್ಯದರ್ಶಿ ಶಂಕರ್ ಸಾರಡ್ಕ, ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ, ಕೃಷಿ ಮಾಧ್ಯಮ ಕೇಂದ್ರದ  ಶಿವರಾಂ ಪೈಲೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಸ್ಮಾರ್ಟ್ ಫೋನು ಬಳಕೆ ಹಾಗೂ ಜಾಲತಾಣ, ಕಿರುತಂತ್ರಾಂಶಗಳ ಬಗ್ಗೆ ಡಾ.ಮೋಹನ್ ತಲಕಾಲುಕೊಪ್ಪ, ಸುಳಿವು ಹಾಗೂ ಲೇಖನ ತಯಾರಿ ಬಗ್ಗೆ ನಾ.ಕಾರಂತ ಪೆರಾಜೆ, ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಮಿತಿಗಳು ಮತ್ತು ಜವಾಬ್ದಾರಿ ಬಗ್ಗೆ ಶ್ರೀ ಪಡ್ರೆ, ಮಾಧ್ಯಮಸ್ನೇಹಿ ಛಾಯಾಗ್ರಹಣದ ಬಗ್ಗೆ ಮಹೇಶ್ ಪುಚ್ಚಪ್ಪಾಡಿ ಮಾಹಿತಿ ನೀಡಿದರು. ಗೇರು ಸಂಶೋಧನಾ ಕೇಂದ್ರದ ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ಕರ್ಕಿ ಸ್ವಾಗತಿಸಿ, ವಂದಿಸಿದರು.


0 comments:

Post a Comment