Saturday, August 29, 2020

‘ಪದಯಾನ' (ಎಸಳು 35)



 (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ)

ತನ್ನ ಏಳ್ಗೆಗೆ ತಾನೇ ಶಿಲ್ಪಿ - 2

ಲೇ : ಪದ್ಯಾಣ ನಾರಾಯಣ ಭಟ್

(ಗಣಪತಿ ಭಟ್ಟರ ಅಣ್ಣ)

ಈ ಸಂದರ್ಭದಲ್ಲಿ ಅಪ್ಪ, ಅಮ್ಮ ಮತ್ತು ನಾನು ಪುಟ್ಟಪರ್ತಿಯ ಪೂಜ್ಯ ಸತ್ಯಸಾಯಿಬಾಬಾ ಅವರ ದರ್ಶನಕ್ಕೆ ಪ್ರವಾಸ ಹೋಗುವುದೆಂದು ನಿಶ್ಚಯವಾಯಿತು. ಚಿಕ್ಕಪ್ಪ ಶಂಕರನಾರಾಯಣ ಭಟ್ಟರು ಸ್ವಾಮಿಯ ಮಹಿಮೆಯನ್ನು ಆಗಾಗ್ಗೆ ಹೇಳುತ್ತಿದ್ದರು. ‘ನಮಗೂ ಒಮ್ಮೆ ಹೋಗಬೇಕು’ ಎನ್ನುವ ತುಡಿತ ಅಮ್ಮನಲ್ಲಿತ್ತು. ಅದು ಈಡೇರುವ ಕ್ಷಣ ಪ್ರಾಪ್ತವಾಯಿತು. ಪುಟ್ಟಪರ್ತಿಗೆ ಹೋಗಿ, ಅಲ್ಲಿ ಸ್ವಾಮಿಯ ದರ್ಶನ ಮಾಡುವಾ, “ಮಕ್ಕಳ ವಿಷಯದಲ್ಲಿ ನಿನಗೆ ಸ್ವಾಸ್ಥ್ಯತೆ ಇಲ್ಲವಲ್ಲಾ. ಅದೆಲ್ಲಾ ನಾನು ನೋಡಿಕೊಳ್ಳುತ್ತೇನೆ. ದೇವರಲ್ಲಿ ನಂಬುಗೆ ಇಡು,” ಎಂದು ತಾಯಿಯಲ್ಲಿ ಸ್ವಾಮೀಜಿ ಹೇಳಿದರು. ಎಲ್ಲರಿಗೂ ಆಶ್ಚರ್ಯ! ನಮ್ಮ ಮನೆಯ ವಿಷಯ ಹೇಗೆ ಇವರಿಗೆ ಗೊತ್ತಾಯಿತು! ಎಲ್ಲವೂ ದೈವೇಚ್ಛೆ. ಕಾಣದ ಶಕ್ತಿಗೆ ಮನಸಾರೆ ವಂದಿಸಿದೆವು. ಊರಿಗೆ ಮರಳಿದೆವು.

          ವಾರ ಕಳೆದಿರಬಹುದಷ್ಟೇ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ತರಬೇತಿಯ ಸುದ್ದಿಯೊಂದು ದಿನಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಅಮ್ಮ ಗಮನಿಸಿದ್ದರು. ಒಂದು ದಿವಸ “ನಾನು ಯಕ್ಷಗಾನ ಕಲಿಯಲು ಧರ್ಮಸ್ಥಳಕ್ಕೆ ಹೋಗುತ್ತೇನೆ,”  ಎಂದು ಗಣಪ ಹೇಳಿದಾಗ, ಪುಟ್ಟಪರ್ತಿಯ ಸ್ವಾಮಿಯ ನೆನಪಾಗಿ ಅಮ್ಮ ಆನಂದಾಶ್ರು ಸುರಿಸಿದ್ದರು. ಈತ ಶಾಲೆಗೂ ಬೇಡ, ಹೇಳಿದ್ದೂ ಕೇಳುವುದಿಲ್ಲ. ಧರ್ಮಸ್ಥಳಕ್ಕೆ ಹೋಗಲಿ ಎಂದು ಅಪ್ಪ ಒಪ್ಪಿಗೆ ಕೊಟ್ಟರು. ಅಮ್ಮ ಹರಸಿ ಕಳುಹಿಸಿದರು.

          ಆ ಮೇಲಿನ ಆತನ ಬದುಕು ಇತಿಹಾಸ. ಮಾಂಬಾಡಿ ನಾರಾಯಣ ಭಾಗವತರ ಗರಡಿಯಲ್ಲಿ ಬೆಳೆದ. ಅವರ ಪ್ರಿಯ ಶಿಷ್ಯನಾಗಿ ರೂಪುಗೊಂಡ. ಆಚಾರ, ವಿಚಾರಗಳು ಬದಲಾಗತೊಡಗಿದುವು. ಮನಸ್ಸಿನಲ್ಲಿ ಯಕ್ಷಗಾನ ಒಂದೇ, ಬೇರೆ ಯಾವ ವಿಷಯಗಳಿರಲಿಲ್ಲ. ಮೊದಲಿನ ಪೋಕ್ರಿತನ ಮಾಯವಾಗಿತ್ತು. ತರಬೇತಿ ಮುಗಿಸಿ ಊರಿಗೆ ಬಂದಾಗ ‘ಬದಲಾದ ಗಣಪ’ನನ್ನು ನಿಬ್ಬೆರಗಾಗಿ ನೋಡಿದ ದಿನಗಳು ನೆನಪಾಗುತ್ತವೆ. ಮನೆಯಲ್ಲಿ ಪ್ರಾಕ್ಟೀಸ್ ಮಾಡುವಾಗ ತಂದೆಯೂ ಸಾಥ್ ಆಗುತ್ತಿದ್ದರು.

          ಮುಂದೆ ಪುಟ್ಟಪರ್ತಿ ಸ್ವಾಮಿಯವರ ಸನ್ನಿಧಾನದಲ್ಲಿ ಗಣಪ ಭಾಗವತಿಕೆ ಮಾಡಿದ್ದಾನೆ. ಮೇಳದ ತಿರುಗಾಟಗಳು ಬೌದ್ಧಿಕ ಗಟ್ಟಿತನಕ್ಕೆ ಸಹಕಾರಿಯಾದುವು. ಆತ ಹೇಗೆ ಕಲಿತ ಎನ್ನುವುದೇ ಬಿಡಿಸಲಾಗದ ಒಗಟು. ಹಿರಿಯರ ಒಡನಾಟ ಪ್ರಾಪ್ತವಾಯಿತು.  ತನ್ನ ಘನಸ್ತಿಕೆಯನ್ನು ಉಳಿಸಿಕೊಳ್ಳಲು ಸ್ವಭಾವದಲ್ಲಿ ಸ್ವಯಂ ಬದಲಾವಣೆ ಮಾಡಿಕೊಂಡು ತನ್ನ ಏಳ್ಗೆಗೆ ತಾನೇ ಶಿಲ್ಪಿಯಾದ. ಒಳ್ಳೆಯದಾಗಬೇಕೆನ್ನುವ ಅನಿವಾರ್ಯವು ಆತನನ್ನು ಒಳ್ಳೆಯವನನ್ನಾಗಿ ರೂಪಿಸಿತು.

          ಅನೇಕ ಕಲಾವಿದರು ಮನೆಗೆ ಬರಲಾರಂಭಿಸಿದರು. ಉದ್ಧಾಮ ದಿಗ್ಗಜರ ಸಂಪರ್ಕ ಮನೆಯವರಿಗಾಯಿತು. ಮನೆಯ ವಾತಾವರಣವು ಬದಲಾಯಿತು. ಮನೆಮಂದಿಯು ಗಣಪನ ಅಭಿಮಾನಿಗಳಾದೆವು. ಆತನ ಭಾಗವತಿಕೆಗೆ ಖಾಯಂ ಶ್ರೋತೃಗಳಾದೆವು. ಆತ ಪದ್ಯಾಣಕ್ಕೆ ಹೆಸರು ತಂದವ ಎನ್ನುವ ಭಾವನೆ ಎಲ್ಲರಲ್ಲೂ ಮೂಡಿತು.

          ಬಹುತೇಕ ಭಾಗವತರನ್ನು ಗಮನಿಸಿ. ಎಲ್ಲರಿಗೂ ಒಂದಲ್ಲ ಒಂದು ವಿಧದ ಸ್ಥಾಪಿತ ಪ್ರೇಕ್ಷಕ ವರ್ಗವಿದೆ. ಗಣಪನಿಗೆ ಹಾಗಲ್ಲ. ಎಲ್ಲಾ ವರ್ಗದ ಅಭಿಮಾನಿಗಳೇ ಪ್ರೇಕ್ಷಕರು.

 

Friday, August 28, 2020

ತನ್ನ ಏಳ್ಗೆಗೆ ತಾನೇ ಶಿಲ್ಪಿ - 1


(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ -  (ಎಸಳು 34) 

ಲೇ : ಪದ್ಯಾಣ ನಾರಾಯಣ ಭಟ್

(ಗಣಪತಿ ಭಟ್ಟರ ಅಣ್ಣ)

            ನನ್ನ ಮೊಬೈಲ್ ಕಳೆದುಹೋಗಿತ್ತು. ಸುಳ್ಯದ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಲು ಹೋಗಿದ್ದೆ. ಅರ್ಧ ಗಂಟೆ ಹೊತ್ತು ಎಲ್ಲರಂತೆ ಸರದಿಯಲ್ಲಿ ನಿಂತು ಕಾಯುತ್ತಿದ್ದೆ. ನನ್ನ ಸರದಿ ಬಂದಾಗ ದಾಖಲೆಯನ್ನು ಸಲ್ಲಿಸಿದೆ. ಅಷ್ಟರಲ್ಲಿ ಆರಕ್ಷಕರು “ಇದರಲ್ಲಿ ಪದ್ಯಾಣ ನಾರಾಯಣ ಭಟ್ ಎಂಬ ಉಲ್ಲೇಖವಿದೆ. ಹಾಗಾದರೆ ಪದ್ಯಾಣ ಗಣಪತಿ ಭಟ್ಟರು ನಿಮಗೇನಾಗಬೇಕು” ಎಂದರು. “ಅವನು ನನ್ನ ತಮ್ಮ” ಎಂದಾಗ ಆರಕ್ಷಕರು ಎಲ್ಲಿಂದಲೋ ಕುರ್ಚಿ ತಂದು ನನಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದರು. “ನಾನು ಗಣಪಣ್ಣರ ಪದ್ಯಕ್ಕೆ ವೇಷ ಮಾಡಿದ್ದೇನೆ” ಎಂದು ಮಾತಿಗೆ ತೊಡಗಿದರು. ಕೊನೆಗೆ “ಸರ್, ಮೊಬೈಲ್ ಕಳೆದುಹೋದ ಅರ್ಜಿ ಯಾರಲ್ಲಿ ಕೊಡಲಿ” ಎಂದು ಅವರನ್ನು ವಾಸ್ತವಕ್ಕೆ ಎಳೆಯಬೇಕಾಯಿತು. ಕ್ಷಿಪ್ರವಾಗಿ ಒಂದೈದು ನಿಮಿಷದಲ್ಲಿ ಕೆಲಸ ಮುಗಿಸಿಕೊಟ್ಟರು.

          ಇದು ‘ಪದ್ಯಾಣ ಗಣಪತಿ ಭಟ್ಟ’ ಈ ಹೆಸರಿನ ತಾಕತ್ತು! ಯಕ್ಷಗಾನ ಕ್ಷೇತ್ರವು ಒದಗಿಸಿದ ಮಾನ. ಅಭಿಮಾನಿಗಳು ನೀಡಿದ ಸಂಮಾನ. ಗಣಪತಿ ಭಟ್ ಯಾ ಗಣಪ ನನ್ನ ತಮ್ಮ ಎನ್ನಲು ಹೆಮ್ಮೆಯಾಗುತ್ತದೆ. ಅವನದು ಮನೆತನಕ್ಕೆ ಗೌರವ ತಂದ ಪ್ರತಿಭೆ. ಬಂಟ್ವಾಳ ತಾಲೂಕಿನ ಕರೋಪಾಡಿ ಸನಿಹದ ಪದ್ಯಾಣ ಮನೆತನವು ಸಾಮಾನ್ಯರಿಗೂ ತಿಳಿಯುವಂತೆ ಮಾಡಿದ ಸಾಧಕ ಗಣಪ. ನಾನು ಮೊದಲು ನಾರಾಯಣ ಭಟ್ ಪಿ ಎಂದಷ್ಟೇ ಬರೆಯುತ್ತಿದ್ದೆ. ಈಗ ಹಾಗಲ್ಲ , ಪದ್ಯಾಣ ನಾರಾಯಣ ಭಟ್ ಎಂದು ಹೇಳಿಕೊಳ್ಳಲು, ಬರೆಯಲು ಖುಷಿಯಾಗುತ್ತದೆ.

          ಸುಳ್ಯ ತಾಲೂಕಿನ ಕಲ್ಮಡ್ಕದ ಗೋಳ್ತಾಜೆಯ ನಮ್ಮ ಮನೆಯು  ಕಲಾ ಮಾತೆಯ ಆರಾಧನೆಯ ತಾಣ. ಮನೆಯ ಸಂಸ್ಕೃತಿಯೊಂದಿಗೆ ಪಾರಂಪರಿಕವಾಗಿ ಹರಿದು ಬಂದ ಕಲೆಯ ಸ್ಪರ್ಶ ಹೊಸೆದಿತ್ತು. ಹಾಡು, ಚೆಂಡೆ, ಮದ್ದಳೆ, ಆಟ, ಕೂಟ.. ಹೀಗೆ ಒಂದಲ್ಲ ಒಂದು ನಿತ್ಯ ಚಟುವಟಿಕೆಗಳು. ಈ ನಾದದ ಗುಂಗಿನಲ್ಲೇ ಬಾಲ್ಯವನ್ನು ಕಳೆದಿದ್ದೆವು. ಹತ್ತಿರದ ಬೊಮ್ಮೆಟ್ಟಿ ಗುಡ್ಡಕ್ಕೆ ತಂದೆ, ಮಕ್ಕಳೆಲ್ಲಾ ಸೇರಿ ಸಂಜೆ ಕೇಳಿ ಬಾರಿಸುತ್ತಿದ್ದ ದಿನಗಳಿದ್ದುವು. ಮನೆಯ ಹತ್ತಿರವೇ ಸಾರ್ವಜನಿಕ ದಾರಿಯು ಹಾದುಹೋಗುವುದರಿಂದ ದಾರಿಹೋಕರು ಸ್ವಲ್ಪ ಹೊತ್ತು ನಿಂತು ಮನೆಯಿಂದ ಹೊರಹೊಮ್ಮುವ ನಾದವನ್ನು ಆಲಿಸಿಯೇ ಮುನ್ನಡೆಯುತ್ತಿದ್ದರು.

          ಗಣಪ ಎಳೆ ವಯಸ್ಸಲ್ಲಿ ತುಂಬಾ ಪೋಕ್ರಿ! ತುಂಟಾಟದ ಸ್ವಭಾವ. ಶಾಲಾಕಲಿಕೆಯಲ್ಲಿ ಒಲವು ಕಡಿಮೆ. ಸಹೋದರರ ಒಡನಾಟ ಇಲ್ಲಂದಲ್ಲ, ಇತ್ತು ಅಷ್ಟೇ. ಸ್ನೇಹಿತರ ಸಂಬಂಧ ಹೆಚ್ಚು. ಆತನ ಆಸಕ್ತಿಗೆ ಬೇಕಾದ ಒಳಸುರಿಗಳು ಸ್ನೇಹಿತರಿಂದ ಸಿಗುತ್ತಿತ್ತು. ಶಾಲೆಯ ಕಲಿಕೆ ಅಷ್ಟಕ್ಕಷ್ಟೇ. ಅಧ್ಯಾಪಕರಿಂದ ನಿತ್ಯ ದೂರು. ನಾನಾಗ ಅಳಿಕೆಯಲ್ಲಿ ಓದುತ್ತಿದ್ದೆ. ಮನೆಯ ಸೆಳೆತದಿಂದ ಆಗಾಗ್ಗೆ ಮನೆಗೆ ಬರುತ್ತಿದ್ದೆ. ತಮ್ಮ ಪರಮೇಶ್ವರನಿಗೆ ಶ್ರವಣ ಶಕ್ತಿ ಸ್ವಲ್ಪ ಕಡಿಮೆ. ಜತೆಗೆ ಗಣಪನ ಕಿತಾಪತಿ ಬೇರೆ. ನಮ್ಮ ಮೂವರ ಸ್ಥಿತಿ ನೋಡಿ ಅಮ್ಮ ಕಂಗಾಲಾಗಿದ್ದರು. ಇವರನ್ನೆಲ್ಲಾ ಹೇಗಪ್ಪಾ ಸರಿಮಾಡೋದು ಎನ್ನುವ ಚಿಂತೆ. ಈಗಿನಂತೆ ಶಾಲಾ ವಿದ್ಯಾಭ್ಯಾಸವು ಪೈಪೋಟಿಯದ್ದಾಗಿರಲಿಲ್ಲ. ‘ಮನೆಯಲ್ಲಿ ಮಕ್ಕಳಿದ್ದಾರೆ, ಶಾಲೆಗೆ ಹೋಗಬೇಕು’ - ಎನ್ನುವ ಮನಃಸ್ಥಿತಿಯ ಕಾಲಘಟ್ಟ.

ಪದಯಾನ ಕೃತಿಯ ಸಂಪಾದಕ ನಾ. ಕಾರಂತ ಪೆರಾಜೆಯ ಬ್ಲಾಗಿನಲ್ಲೂ ಓದಬಹುದು - yakshamatu.blogspot.com


ಕೊರೊನಾ ಸಂಕಟದಲ್ಲೊಂದು ಮೊಬೈಲ್ 'ದಾನ' ಪರಿಕಲ್ಪನೆ


      ನಾಗೇಂದ್ರ ಸಾಗರ್ ಕೃಷಿಕರು. ಸಾಗರದ ಸನಿಹದ ವರದಾಮೂಲ-ಚಿಪ್ಲಿಯವರು. ಸ್ವ-ಶ್ರಮದ  ಬದುಕು. ಅವರ ಸಹಾಯಕ ಉದಯ. ಇವರ ಮಗಳು ನಿಶಾ ಈಗ ಎಸ್.ಎಸ್.ಎಲ್.ಸಿ. ಯಾ ಮೆಟ್ರಿಕ್. ಪ್ರಸ್ತುತ ಕೊರೊನಾದಿಂದಾಗಿ ಶಾಲೆಗಳು ಆರಂಭಗೊಂಡಿಲ್ಲ. ನೇರ ಪಾಠದ ಬದಲಿಗೆ ಆನ್ಲೈನ್ ತರಗತಿಗಳು ಶುರುವಾಗಿವೆ. ಅದು ಸ್ಮಾರ್ಟ್ ಫೋನ್, ಟಿವಿ ಹೊಂದಿದವರಿಗೆ ಅನುಕೂಲ. ನಿಶಾಳಲ್ಲಿ ಇದ್ಯಾವುದೂ ಇಲ್ಲದೆ ಪಾಠದಿಂದ ವಂಚಿತಳಾಗಿದ್ದಳು. 

     ಮಗುವಿನ ಮನಸ್ಸನ್ನರಿತ ನಾಗೇಂದ್ರರು ರೇಖಾಳಿಗೆ ತನ್ನಲ್ಲಿದ್ದ ಹೆಚ್ಚುವರಿ ಮೊಬೈಲನ್ನು ನೀಡಿದರು. ಅದು 3ಜಿ ಸೆಟ್ ಆಗಿತ್ತು. ಯಾಕೋ ಅದು ಉಪಯೋಗಕ್ಕೆ ಬರಲಿಲ್ಲ. ವಿಚಾರವನ್ನು ಜಾಲತಾಣದಲ್ಲಿ ಬರೆದರು. ತಕ್ಷಣ ಸ್ಪಂದಿಸಿದ ಸ್ನೇಹಿತರೊಬ್ಬರು ಮೊಬೈಲು ಕಳುಹಿಸಿಕೊಟ್ಟರು. ಇದು ನಿಶಾಳಿಗೆ ಆನ್ಲೈನ್ ತರಗತಿ ಕಲಿಕೆಗೆ ನೆರವಾಯಿತು. ನಿಶಾ ಈಗ ಖುಷ್. ಖುಷಿಯು ನಾಗೇಂದ್ರರ ಮನದೊಳಗೆ ಹೊಸ ಆಭಿಯಾನದ ಬೀಜವೊಂದನ್ನು ಹುಟ್ಟು ಹಾಕಿತು. ಇವಳಂತೆ ಸ್ಮಾರ್ಟ್ ಫೋನ್ ಹೊಂದಿರದೆ ಆನ್ಲೈನ್ ಪಾಠದಿಂದ ದೂರವಾಗಿರುವ ಮಕ್ಕಳ ಮನಸ್ಸಿನ ಕೊರಗು ಕಾಡಲಾರಂಭಿಸಿತು. 

     ಬಹುತೇಕರು ಒಂದೋ ಎರಡೋ ಸ್ಮಾರ್ಟ್ ಫೋನ್ ಹೊಂದಿರುತ್ತಾರೆ. ಹೆಂಡತಿಗೊಂದು, ಮಗಳಿಗೊಂದು, ಮಗನಿಗೊಂದು ಮೊಬೈಲ್. ಬೇಕಾದರೆ ಇನ್ನೊಂದೆರಡು ಹೆಚ್ಚುವರಿ. ಐದಾರು ತಿಂಗಳಲ್ಲಿ ಅಪ್ಡೇಟ್ ತಂತ್ರಜ್ಞಾನದ ಹೊಸ ಮೊಬೈಲ್ ಬುಕ್ ಆಗಿರುತ್ತದೆ. ಹಳೆಯದು ಉತ್ತಮ ಸ್ಥಿತಿಯಲ್ಲಿದ್ದರೂ ಬದಿಗೆ ಸರಿಯುತ್ತದೆ. ಹೀಗೆ ಸರಿದ, ಸರಿಯುತ್ತಿರುವ ಮೊಬೈಲುಗಳನ್ನು ಸಂಗ್ರಹಿಸಿ, ಮೊಬೈಲ್ ವಂಚಿತ ವಿದ್ಯಾರ್ಥಿಗಳಿಗೆ ಹಂಚಿದರೆ ಅನುಕೂಲ. ಯೋಚನೆಯನ್ನು ಫೇಸ್ಬುಕ್ಕಿನಲ್ಲಿ ಹರಿಯಬಿಟ್ಟರು. ಹತ್ತಾರು ಮಂದಿ ಸ್ಪಂದಿಸಿದರು. ವಿಚಾರಕ್ಕೆ ಮಾಧ್ಯಮ ಬೆಳಕು ಬಿತ್ತು.

     ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಎಪ್ಪತೈದಕ್ಕೂ ಮಿಕ್ಕಿ ಸಹೃದಯಿಗಳಿಂದ ಆಶ್ವಾಸನೆಗಳು ಬಂದುವು. ಈಗಾಗಲೇ ಆತ್ಮೀಯರು, ಸ್ನೇಹಿತರಿಂದ ಪಡೆದ 15-20 ಮೊಬೈಲುಗಳು ವಿದ್ಯಾರ್ಥಿಗಳ ಕೈಸೇರಿವೆ. ಆಶ್ವಾಸನೆ ನೀಡಿದವರಿಂದ ಮೊಬೈಲು ಪಡೆಯಬೇಕಷ್ಟೇ. ಕೆಲವರು ಹೊಸತನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕೊರಗು ದೂರವಾಗುತ್ತಿದೆ. ಎಂಬ ಖುಷಿಯನ್ನು ಹಂಚಿಕೊಂಡರು ನಾಗೇಂದ್ರ.

     ಸಾಗರ ತಾಲೂಕಿನಲ್ಲಿ ಮೂವತ್ತೆಂಟು ಸರಕಾರಿ ಮತ್ತು ಅನುದಾನಿತ ಶಾಲೆಗಳಿವೆ. ಅಭಿಯಾನದ ಸವಲತ್ತು  ಗ್ರಾಮೀಣರಿಗೆ ಮತ್ತು ಗ್ರಾಮೀಣ ಪ್ರದೇಶದಿಂದ ನಗರ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅವಶ್ಯ. ಅದರಲ್ಲೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮೊದಲಾದ್ಯತೆ. ಕೃಷಿಕರ ಮಕ್ಕಳಲ್ಲೂ ಮೊಬೈಲ್ ಇಲ್ಲದವರೂ ಇದ್ದಾರೆ. ಅವರಿಗೆ ಮೊಬೈಲ್ ಇಲ್ಲ ಎನ್ನಲು ಮುಜುಗರ. ಅಂತಹವರು ಯಾರೆಂದು ಮೇಲ್ನೋಟಕ್ಕೆ ಗೊತ್ತಾಗುತ್ತಿಲ್ಲ. ಶಾಲೆಯ ಮುಖ್ಯೋಪಾಧ್ಯಾಯರಲ್ಲಿ ಪ್ರತಿ ಮಗುವಿನ ಡಾಟಾ ಇದ್ದೇ ಇರುತ್ತದೆ. ಅವರ ನೆರವಿನಿಂದ ಸಂಬಂಧಪಟ್ಟವರನ್ನು ಸಂಪರ್ಕಿಸುವ ಕೆಲಸ ಆಗುತ್ತಿದೆ. - ನಾಗೇಂದ್ರ ಸಾಗರ್.

          ದಾನಿಗಳಿಂದ ಮೊಬೈಲು ಪಡೆದ ತಕ್ಷಣ ಅವುಗಳ ಕ್ಷಮತೆಯ ಪರೀಕ್ಷೆ. ಬ್ಯಾಟರಿ ಕೆಟ್ಟರೆ ಹೊಸ ಬ್ಯಾಟರಿ ಅಳವಡಿಕೆ.  ಜತೆಗೆ ಚಾರ್ಜರ್ ಇಲ್ಲದಿದ್ದರೆ ಹೊಸತನ್ನು ಒದಗಿಸುವುದು - ಎಲ್ಲಾ ಕೆಲಸವನ್ನು ನಾಗೇಂದ್ರ ಕುಟುಂಬ (ಮಡದಿ ವಾಣಿ, ಮಗಳು ಶ್ರಾವ್ಯ) ನಿರ್ವಹಿಸುತ್ತಿದೆ. ಕೆಲವು ಹಳ್ಳಿಗಳಲ್ಲಿ ನೆಟ್ ವರ್ಕ್ ಇರುವುದಿಲ್ಲ. ಅಂತಹ ಪ್ರದೇಶದ ಮಕ್ಕಳು ನೆಟ್ ವರ್ಕ್ ಇರುವಲ್ಲಿ ಒಂದಾಗಿ ಆನ್ಲೈನ್ ತರಗತಿಗೆ ಹಾಜರಾಗುತ್ತಾರೆ. ಈಗಾಗಲೇ ಶಿಕ್ಷಣ ಇಲಾಖೆಯು 'ವಠಾರ ತರಬೇತಿ' ಪ್ರಕ್ರಿಯೆಯನ್ನು ಅನುಷ್ಠಾನಿಸುತ್ತಿದೆ.

     ಶಾಲೆಗೆ ನಿಯಮಿತವಾಗಿ ಬರುವ ಮತ್ತು ಕಲಿಕಾ ಬದ್ಧತೆ ಹೊಂದಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಗುರುತಿಸಿ ಅಂತಹವರಿಗೆ ಮೊದಲು ಮೊಬೈಲ್ ಲಭ್ಯವಾಗುವಂತೆ ನೋಡಿಕೊಳ್ಳುತ್ತೇನೆ. ಮೊಬೈಲ್ ಅಲ್ಲದೆ ಕಂಪ್ಯೂಟರ್, ಲ್ಯಾಪ್ಟಾಪ್, ಟಿವಿ.. ಗಳನ್ನು ಕೂಡಾ (ಹೊಸದು, ಬಳಸಿದ್ದು) ನೀಡಲು ಮುಂದೆ ಬಂದಿರುವುದು ಉತ್ತೇಜಿತ ಬೆಳವಣಿಗೆ. ವೈಯಕ್ತಿಕ ನೆಲೆಯ ಅಭಿಯಾನಕ್ಕೆ ಶಿಕ್ಷಣಾಧಿಕಾರಿಗಳು ಕೂಡಾ ಗುಣಾತ್ಮಕವಾಗಿ ಸ್ಪಂದಿಸಿದ್ದಾರೆ. ಏನಿಲ್ಲವೆಂದರೂ ಸಾಗರ ತಾಲೂಕಿನಲ್ಲಿ ಒಂದು ಸಾವಿರ ಮೊಬೈಲ್ಗಳ ಅವಶ್ಯಕತೆಯಿದೆಎನ್ನುತ್ತಾರೆ.

     ಸಾಹಿತ್ಯ, ಸಾಂಸ್ಕೃತಿಕ, ಕೃಷಿ ಚಟುವಟಕೆಗಳನ್ನು ನಡೆಸುತ್ತಿರುವ ತನ್ನ 'ಶ್ರಾವಣ ಚಾವಡಿ' ಸಂಸ್ಥೆಯಡಿ ಅಭಿಯಾನವನ್ನು ನಾಗೇಂದ್ರ ನಡೆಸುತ್ತಿದ್ದಾರೆ.  ಅಭಿಯಾನದ ಬಗ್ಗೆ ತಿಳಿದ ಸಾಗರದ ಹೊರಗಿನ,  ಶಿವಮೊಗ್ಗ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ವಿದ್ಯಾರ್ಥಿ ಪೋಷಕರ ಕಿವಿಗೂ ತಲುಪಿದೆ. 'ನಮಗೂ ಕೊಡಿಸಿ' ಎನ್ನುತ್ತಿದ್ದಾರಂತೆ. ಏನಿದ್ದರೂ ಸಾಗರ ತಾಲೂಕಿಗೆ ಮೊದಲ ಪ್ರಾಶಸ್ತ್ಯ. ಮಿಕ್ಕಡೆಯದ್ದು ಬಳಿಕ. ಕೆಲವರು ನಗದು ಕೊಡುತ್ತೇನೆಂದು ಮುಂದೆ ಬಂದಿದ್ದಾರೆ. ನಾಗೇಂದ್ರರು ಅಂತಹ ಕೊಡುಗೆಯನ್ನು ನಯವಾಗಿ ತಿರಸ್ಕರಿಸಿ, 'ನೀವೇ ಮೊಬೈಲು ಖರೀದಿಸಿ ಕೊಟ್ಟುಬಿಡಿ' ಎಂದು ವಿನಂತಿಸಿದ್ದಾರೆ. ಕಾರಣ, ನಗದು ಅಂದಾಗ ಹಲವಾರು ಊಹಾಪೋಹಗಳು ರಿಂಗಣಿಸುವ ಅಪಾಯದ ಎಚ್ಚರ ಇವರಲ್ಲಿದೆ.

    ಇದೊಂದು ಏಕವ್ಯಕ್ತಿ ಅಭಿಯಾನ. ಚಿಣ್ಣರು ಶಿಕ್ಷಣದಿಂದ ವಂಚಿತರಾಗಕೂಡದು ಎನ್ನುವ ಶೈಕ್ಷಣಿಕ ಎಚ್ಚರ. ಒಂದೆರಡು ತಿಂಗಳಿನಲ್ಲಿ ನೂರು ವಿದ್ಯಾರ್ಥಿಗಳನ್ನು ತಲಪಬೇಕೆನ್ನುವ ಗುರಿ. ಈಗಾಗಲೇ ದಾನಿಗಳು ಮುಂದೆ ಬಂದಿರುವುದರಿಂದ ಗುರಿ ತಲುಪಲು ಕಷ್ಟವಿಲ್ಲ. ಕೋರೋನಾ ಸಂಕಟದ ಕಾಲದ ನಾಗೇಂದ್ರರ ಅಭಿಯಾನ ಶ್ಲಾಘನೀಯ

(ನಾಗೇಂದ್ರ : 81472 99353)