Monday, September 16, 2019

ಒಂದು ರೂಪಾಯಿ ಮತ್ತು ದಾಸವಾಳ ಹೂವಿನ ಮಾಲೆ!


                ಅಂದು ಸುಳ್ಯದ ಸ್ನೇಹ ಶಾಲೆಯಲ್ಲಿ ಶಿಕ್ಷಕ ದಿನಾಚರಣೆ. ಶಾಲೆಗಂದು ರಜೆಯಿಲ್ಲ! ವೇದಿಕೆಯಲ್ಲಿ ಶಿಕ್ಷಕ ವೃಂದದವರು ಆಸೀನರಾಗಿದ್ದಾರೆ. ವಿದ್ಯಾರ್ಥಿನಿಯರು ಆರತಿ ಎತ್ತಿ, ಪುಷ್ಪ ನೀಡಿ, ಅರಸಿನ-ಕುಂಕುಮ ಹಚ್ಚಿ ವಂದಿಸಿದರು. ಹೆತ್ತವರೂ ಕೈಜೋಡಿಸಿದರು. ಶಾಲಾಡಳಿತದಿಂದ ಎಲ್ಲಾ ಶಿಕ್ಷಕರಿಗೂ ಪುಸ್ತಕದ ಉಡುಗೊರೆ. ಅತಿಥಿಗಳಿಂದ ಗುರು-ಶಿಷ್ಯ ಸಂಬಂಧಗಳ ನೆನಪುಗಳು. ಮಾಹಿತಿಯನ್ನು ವಾಟ್ಸಾಪ್ಪಿನಲ್ಲಿ ಹಂಚಿಕೊಂಡರು, ಶಾಲೆಯ ಅಧ್ಯಕ್ಷರಾದ ಡಾ.ಚಂದ್ರಶೇಖರ ದಾಮ್ಲೆ. ಉತ್ತಮ ಪರಂಪರೆಯನ್ನು ಸ್ನೇಹ ಶಾಲೆಯ ಕಾರ್ಯಕ್ರಮ ನೆನಪಿಸಿತು. 
           ಪುತ್ತೂರಿನ ವಿವೇಕಾನಂದ ಕಾಲೇಜಿನ ವಿವಿಧ ವಿಭಾಗಗಳು ಗುರುವಂದನೆ ಕಲಾಪಗಳನ್ನು ಆಚರಿಸಿದ್ದುವು. ಸ್ನೇತಕೋತ್ತರ ಪತ್ರಿಕೋದ್ಯಮ ವಿಭಾಗದ ಆಚರಣೆಯಲ್ಲಿ ನಾನೂ ಭಾಗವಹಿಸಿದ್ದೆ. ಅಂದು ವಿದ್ಯಾರ್ಥಿಗಳೇ ಸ್ವಯಂ ಆಗಿ, ಯಾರದ್ದೇ ಒತ್ತಡವಿಲ್ಲದೆ ಶಿಕ್ಷಕರನ್ನು ಗೌರವಿಸಲು ಚಿಕ್ಕ ಸಮಾರಂಭ ಏರ್ಪಡಿಸಿದ್ದರು. ಶಿಕ್ಷಕರಿಗೆ ಉಡುಗೊರೆ ನೀಡಿದರು. ಶಿಕ್ಷಕರು ತಾವು ಸಾಗಿ ಬಂದ ಹಾದಿಯತ್ತ ಒಮ್ಮೆ ಹೊರಳು ನೋಟ ಬೀರಿದರು. ಶಿಕ್ಷಕರಿಗೆ ಪ್ರತ್ಯೇಕವಾಗಿ ಮೂರ್ನಾಲ್ಕು ಸ್ಪರ್ಧೆಗಳನ್ನೂ ಆಯೋಜಿಸಿದ್ದರು. ಅದು ವಿದ್ಯಾರ್ಥಿ, ಶಿಕ್ಷಕ ಎನ್ನುವ ಅಂತರವಿರಲಿಲ್ಲ. ಬದಲಿಗೆ ನಾವೆಲ್ಲಾಸುಮನಸಿಗರುಎನ್ನುವ ಭಾವಗಳನ್ನು ಕಟ್ಟಿಕೊಟ್ಟರು.
           ಹಿರಿಯರಾದ ಪ್ರೊ. ವಿ.ಬಿ.ಅರ್ತಿಕಜೆಯವರು ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ವಿಭಾಗವಿದ್ದಿರಲಿಲ್ಲ. ಆಗ ಆಸಕ್ತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪತ್ರಿಕೋದ್ಯಮ ತರಗತಿಯನ್ನು ನಡೆಸಿದ ಗುರು. ಅಂದು ತರಬೇತಿ ಪಡೆದವರಲ್ಲಿ  ಅನೇಕರು ಗುರುಗಳನ್ನು ನೆನಪಿಸಿಕೊಳ್ಳುವುದನ್ನು ಗಮನಿಸಿದ್ದೇನೆ. ಶಿಷ್ಯನೊಬ್ಬ ಗುರುವನ್ನು ಅಭಿನಂದಿಸುವುದು, ಸಂಮಾನಿಸುವುದು ಸಹಜ. ಆದರೆ ಗುರು ತನ್ನ ಶಿಷ್ಯಂದಿರನ್ನು ಗೌರವಿಸಿದ್ದು ಇದೆಯಾ? ಇದೆ, ಪ್ರೊ.ಅರ್ತಿಕಜೆಯವರುಶಿಷ್ಯಾಭಿವಂದನಎನ್ನುವ ಹೊಸ ಕಲ್ಪನೆಯನ್ನು ಹುಟ್ಟು ಹಾಕಿದ್ದರು. ಶಿಷ್ಯರನ್ನು ಅಭಿನಂದಿಸಿ ಖುಷಿ ಪಟ್ಟಿದ್ದರು. ಪತ್ರಿಕೋದ್ಯಮಕ್ಕೆ ಪ್ರವೇಶ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಚಿಕ್ಕ ಪುಸ್ತಿಕೆಯನ್ನು ಪ್ರಕಟಿಸಿದ್ದರು.
            ಗುರು-ಶಿಷ್ಯ ಸಂಬಂಧಗಳು ಪಾರಂಪರಿಕ. ಓರ್ವ ಗುರುವಿನ ವರ್ಚಸ್ಸು ಹೇಗಿದೆಯೋ ಹಾಗೆ ಶಿಷ್ಯನೂ ರೂಪುಗೊಳ್ಳುತ್ತಾನೆ. ಗುರುವಿನಲ್ಲಿರುವ ಆಸಕ್ತಿಗಳು ಶಿಷ್ಯರಲ್ಲೂ ಹರಿಯುವುದನ್ನು ಕಾಣುತ್ತೇವೆ. ಶಿಕ್ಷಣ ಸಂಸ್ಥೆಯೊಂದು ಯಶಸ್ವಿಯಾಗಿ ಬೆಳೆಯಲು ಕಾಂಚಾಣ ಒಂದೇ ಉಪಾಧಿಯಲ್ಲ. ಅಲ್ಲಿರುವ ಶಿಕ್ಷಕರು ಹೇಗಿರುತ್ತಾರೆ ಎನ್ನುವುದರ ಮೇಲೆ ವಿದ್ಯೆಯ ಯಶಸ್ಸು. ಐವತ್ತರ ಮೇಲಿನ ವಯೋಮಾನದವರಲ್ಲಿ ಕೇಳಿ, ಅವರ ಪ್ರಾಥಮಿಕ - ಪ್ರೌಢ ಶಾಲೆಯ ಅಧ್ಯಾಪಕರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಗುಣಗಾನವನ್ನು ಮಾಡುತ್ತಾರೆ. ಕಾರಣ, ಶಿಕ್ಷಕರು ಇವರನ್ನು ಆವರಿಸಿಬಿಟ್ಟಿದ್ದಾರೆ!
          ಒಂದು ಘಟನೆ ನೆನಪಾಗುತ್ತದೆ. ನಾನು ಮೂರೋ, ನಾಲ್ಕನೇ ತರಗತಿ ಇದ್ದಿರಬೇಕು. ತುತ್ತಿಗೂ ತತ್ವಾರದ ಕಾಲ. ಸಹಪಾಠಿಗಳು ಚಾಕೊಲೇಟ್ ತಿನ್ನುವಾಗ ಆಸೆಯ ಕಂಗಳಿಂದ ನೋಡಿದ ದಿನಮಾನಗಳು ಮಸುಕುಮಸುಕಾಗಿ ನೆನಪಾಗುತ್ತದೆ. ಇಂತಹ ಹೊತ್ತಿನಲ್ಲಿ ಒಂದು ದಿವಸ ತಂದೆಯವರ ಜೇಬಿನಿಂದ ಐವತ್ತು ಪೈಸೆಯೋ ಒಂದು ರೂಪಾಯಿ ತೆಗೆದಿದ್ದೆ! ಅಂಗಡಿಯಿಂದ ಚಾಕೊಲೇಟ್ ಖರೀದಿಸಿ ಸ್ನೇಹಿತರ ಎದುರೇ ತಿಂದಿದ್ದೆ. ಸಹಪಾಠಿಗಳಿಗೆ ಹಂಚಿದ್ದೆ. ಸರಿ, ಅಪರಾಹ್ಣ ತಂದೆಯವರು ನೇರವಾಗಿ ಶಾಲೆಗೆ ಬಂದರು. ಮುಖ್ಯೋಪಾಧ್ಯಾಯರಾದ ಕೃಷ್ಣಪ್ಪ ಮಾಸ್ತರಲ್ಲಿ ವಿಷಯ ತಿಳಿಸಿದರು.
          ಅಧ್ಯಾಪಕರಿಂದ ಒಂದೆರಡು ಏಟು ಬಿದ್ದಿತ್ತು. ಆದರೆ ಅಷ್ಟಕ್ಕೆ ಮುಗಿಯಲಿಲ್ಲ. ಕೆಂಪು ದಾಸವಾಳದ ಹೂವನ್ನು ಮಾಲೆ ಮಾಡಿ, ಕೊರಳಿಗೆ ಹಾಕಿಇನ್ನು ಮುಂದೆ ನಾನು ಕದಿಯುವುದಿಲ್ಲಎಂದು ಮಕ್ಕಳ ಎದುರಿಗೆ ಶಪಥ ಮಾಡಿಸಿದ್ದರು. ಶಾಲೆಯ ಕಟ್ಟಡದ ಸುತ್ತ ಐದು ಬಾರಿ ಓಡುವ ಶಿಕ್ಷೆ. ಘಟನೆಯು ಬದುಕಿನುದ್ದಕ್ಕೂ ನನಗೆಗೀತೆಇದ್ದಂತೆ. ತಂದೆಯವರ ಅಂದಿನ ಒಂದು ರೂಪಾಯಿಯ ದುಡಿತ ಅಂದರೆ ಸುಲಭವಿದ್ದಿರಲಿಲ್ಲ.
            ಅಂದು ಅಷ್ಟು ಶಿಕ್ಷೆ ನೀಡಿದ ಕೃಷ್ಣಪ್ಪ ಮಾಸ್ತರ್ ಬಹುಶಃ ಈಗ ಪೂರ್ತಿಯಾಗಿ ವಿಶ್ರಾಂತ. ಮೊದಲು ಅವರು ಸಿಕ್ಕಾಗಲೆಲ್ಲಾ ತಲೆ ಬಾಗುತ್ತಿತ್ತು. ಒಂದು ರೀತಿಯ ಅವ್ಯಕ್ತ ಭಯ! ಅಂದು ಬೆತ್ತದ ರುಚಿ ತೋರಿಸಿದ, ಜೀವನ ಪರ್ಯಂತ ನೆನಪಿಡುವಂತಹ ಶಿಕ್ಷೆ ಕೊಟ್ರಲ್ಲಾ, ಅದರ ಪರಿಣಾಮ ಈಗ ಒಂದೊಂದು ಪೈಸೆಯ ಬೆಲೆಯೂ ತಿಳಿಯುತ್ತದೆ. ಹತ್ತು ರೂಪಾಯಿ ಕೈತಪ್ಪಿದಾಗ ಮರುಕವಾಗುತ್ತದೆ. ಹಸಿವಿನ ಪರಿಚಯವಾಗುತ್ತಿದೆ. ನನ್ನಂತೆ ಇತರ ಒಂದಿಬ್ಬರಿಗೂ ಇಂತಹ ಶಿಕ್ಷೆಯಾಗಿತ್ತು.
            ಇನ್ನೊಬ್ಬರು ನಾರಾಯಣ ಮಾಸ್ತರ್. ಅವರು ಕನ್ನಡ ಪಾಠವನ್ನು ಬಹಳ ಸೊಗಸಾಗಿ ಮಾಡುತ್ತಿದ್ದರು. ಪಠ್ಯದಲ್ಲಿದ್ದ ಪುಣ್ಯಕೋಟಿ, ನಳ ಚರಿತ್ರೆ, ಹರಿಶ್ಚಂದ್ರ ಕಾವ್ಯಗಳ ಅಧ್ಯಾಯಗಳನ್ನು ತರಗತಿಯಲ್ಲಿ ಗಟ್ಟಿಯಾಗಿ ಓದುತ್ತಿದ್ದರು. ಭಾವನಾತ್ಮಕವಾಗಿ ಸ್ಪಂದಿಸುತ್ತಿದ್ದರು. ಅದರ ಅರ್ಥ, ಒಳಅರ್ಥಗಳನ್ನು ತಿಳಿಹೇಳಿದ್ದರು. ಹರಿಶ್ಚಂದ್ರ ಕಾವ್ಯದಲ್ಲಿ ಬರುವಚಂದ್ರಮತಿ ವಿಲಾಪವನ್ನು ಹೇಳುತ್ತಾ ಇದ್ದಂತೆ ಮಾಸ್ತರ್ ಕಣ್ಣಲ್ಲಿ ಜಿನುಗಿತ್ತು ಕಣ್ಣೀರು! ದಿವಸಗಳು ನೆನಪಾಗುತ್ತದೆ. ಮೂಲಕ ಭಾವ ಅಂದರೇನು, ಕಣ್ಣೀರು ಅಂದರೇನು ಎಂದು ತೋರಿಕೊಟ್ಟ ಪಾಠ ಮರೆಯುವುದಿಲ್ಲ. ಈಚೆಗೆ ಯಕ್ಷಗಾನವೊಂದರಲ್ಲಿ ಚಂದ್ರಮತಿ ಪಾತ್ರವನ್ನು ಮಾಡುತ್ತಿದ್ದಾಗ ರಂಗದಲ್ಲಿ ಒಂದು ಕ್ಷಣ ನಾರಾಯಣ ಮಾಸ್ತರ್ ನೆನಪಿನಲ್ಲಿ ಮಿಂಚಿ ಮರೆಯಾದರು!
              ಇವೆಲ್ಲಾ ಗುರುವೊಬ್ಬ ಶಿಷ್ಯರನ್ನು ಬದುಕಿನಲ್ಲಿಮನುಷ್ಯನನ್ನಾಗಿ ಮಾಡಲು ಬಳಸುವ ಟೂಲ್ಸ್ಗಳು. ಕಾಲಘಟ್ಟದಲ್ಲಿ ಬೋಧಿಸಿದ ಬಹುತೇಕ ಶಿಕ್ಷಕರು ಇಂದಿಲ್ಲ. ಆದರೆ ಅವರ ಶಿಷ್ಯತ್ವದಲ್ಲಿ ಬದುಕನ್ನು ಕಟ್ಟಿಕೊಂಡ ಅನೇಕ ಮಂದಿ ದಿನಮಾನಗಳ ಘಟನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ. ವರ್ತಮಾನದ ಶಿಕ್ಷಣಕ್ರಮದಲ್ಲಿ ಗುರು-ಶಿಷ್ಯ ಸಂಬಂಧಗಳು ಕೇವಲ ಅಂಕಪಟ್ಟಿಗೆ ಸೀಮಿತವಾಗಿರುವುದು ಶಿಕ್ಷಣದ ಭಾಗ್ಯವೋ, ದೌರ್ಭಾಗ್ಯವೋ?

ಜಂಕ್‍ಫುಡ್ ಪ್ರಿಯ ಮಾರ್ಜಾಲ!

        ಹೃದಯಿಗ ಜಯಶಂಕರ್ ಚಿತ್ರವೊಂದನ್ನು ಕಳುಹಿಸಿದರು. ಮೇಜಿನ ಮೇಲೆ ಮತ್ತು ಕೆಳಗೆ ಎರಡು ಬೆಕ್ಕುಗಳು. ಒಂದು ಸಣಕಲು, ಇನ್ನೊಂದು ಆರೋಗ್ಯದ್ದು. ಚಿತ್ರ ನೋಡಿದಾಗ ಯಾಕೆಂದು ಅರ್ಥವಾಗಲಿಲ್ಲ. ಅಳೆದು ಸುರಿದರೂ ಮನದಟ್ಟಾಗಲಿಲ್ಲ. ಅವರಲ್ಲೇ ಕೇಳಿದೆ.
         “ನಾನು ಸ್ನೇಹಿತನ ಮನೆಗೆ ಹೋಗಿದ್ದೆ. ಎರಡು ಬೆಕ್ಕುಗಳು ಗಮನ ಸೆಳೆದುವು. ಸ್ನೇಹಿತನ ಉತ್ತರ ಕೇಳಿ ನಕ್ಕು ಸುಸ್ತಾಗಿದ್ದೆ. ಗ್ರಹಿಸಿದಾಗ ನಗು ಧಾಂಗುಡಿಯಿಡುತ್ತದೆ. ಎರಡೂ ಒಂದೇ ತಾಯಿಯ ಕಂದಮ್ಮಗಳು. ಸಮಾನ ವಯಸ್ಸು. ಮೇಜಿನ ಮೇಲಿನ ಬೆಕ್ಕು ಜಂಕ್ಫುಡ್ ಪ್ರಿಯ. ಅದಿಲ್ಲದೆ ಊಟವಿಲ್ಲ. ಕೊಡದಿದ್ದರೆ ಮುಷ್ಕರ! ಕೆಳಗಿರುವುದಕ್ಕೆ ಜಂಕ್ಫುಡ್ಡಿನ ಪರಿಮಳ ಅಲರ್ಜಿ! ಅದಕ್ಕೆ ಗಂಜಿ, ಹಾಲು ಮಾತ್ರ ಆಹಾರ.” ಎಂದರು.
          ನಗುವ ಸರದಿ ನನ್ನದು. ಹಾಗೆಂತ ನಕ್ಕು ಖುಷಿ ಪಟ್ಟು ಮರೆಯುವ ವಿಚಾರವಲ್ಲ. ತುಂಬಾ ಗಂಭೀರವಾದ ವಿಚಾರ. ಬದಲಾದ ಕಾಲಘಟ್ಟ, ಜೀವನ ಶೈಲಿಯು ಸಿದ್ಧ ಆಹಾರಗಳತ್ತ ವಾಲುತ್ತಿರುವಾಗ ಬೆಕ್ಕಿನ ಉದಾಹರಣೆ ತುಂಬಾ ಹಗುರವಾಗಿ ಕಾಣಬಹುದು. ಆದರೆ ಕಂಪೆನಿ ಪ್ರಣೀತ ಜಂಕ್ಫುಡ್ ಯಾ ಕರಿದ ತಿಂಡಿಗಳು (ಸಿದ್ಧ ಆಹಾರ) ಮನುಷ್ಯನನ್ನು ಬಿಡಿ, ಪ್ರಾಣಿಗಳ ಬದುಕಿಗೂ ಹೇಗೆ ಎರವಾಗುತ್ತದೆ ಎನ್ನುವುದನ್ನು ಚಿತ್ರ ಬಿಂಬಿಸುತ್ತದೆ.
         ಮಕ್ಕಳಿಗೆ ಸಿದ್ಧ ಆಹಾರಗಳು (ಕುರುಕುರೆ, ಲೇಸ್, ಸ್ಮಿಥ್ಸ್, ಕ್ರನ್ಸಿಪ್ಸ್,...) ತುಂಬಾ ಇಷ್ಟ. ಅವುಗಳ ಪೊಟ್ಟಣಗಳು ದೂರದಿಂದಲೇ ಆಕರ್ಷಿಸುತ್ತದೆ. ಒಮ್ಮೆ ತಿಂದರೆ ಮತ್ತಷ್ಟು ತಿನ್ನಬೇಕೆಂಬ ತುಡಿತ. ತಿಂಡಿಗಳಿಗೆ ಬಳಸುವ ಒಳಸುರಿಗಳೆಲ್ಲಾ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವುದು ದೃಢಪಟ್ಟಿವೆ. ಆದರೆ ತಯಾರಿ ಕಂಪೆನಿಗಳು ಮಾತ್ರ ದುಷ್ಪರಿಣಾಮ ಇಲ್ಲ ಎನ್ನುತ್ತಾ ಜಾಹೀರಾತುಗಳ ಮೂಲಕ ಚಿಣ್ಣರನ್ನು ಸೆಳೆಯುತ್ತಿರುವುದನ್ನು ಸ್ವೀಕರಿಸಿದ್ದೇವೆ. ಮೌನ ಸಮ್ಮತಿ ನೀಡಿದ್ದೇವೆ.
           ಎಲ್.ಕೆ.ಜಿ., ಯು.ಕೆ.ಜಿ.ಗೆ ಹೋಗುವ ಕಂದಮ್ಮಗಳ ಬುತ್ತಿಯನ್ನೊಮ್ಮೆ (ಕ್ಷಮಿಸಿ, ಬುತ್ತಿ ಅಂದರೆ ತಪ್ಪಾದಿತೇನೋ... ‘ಟಿಫಿನ್ ಬಾಕ್ಸ್!) ನೋಡಿ. ಬಹುತೇಕರಲ್ಲಿರುವುದು ಜಂಕ್ ಆಹಾರ! ಹಸಿವಿನ ಹೊತ್ತಲ್ಲಿ ಹೊಟ್ಟೆ ಸೇರುವುದು ದೇಹಕ್ಕೆ ಬೇಡದ ಆಹಾರಗಳು! ಜಂಕ್ ಆಹಾರದ ದುಷ್ಪರಿಣಾಮಗಳನ್ನು ಮಾಧ್ಯಮಗಳು ಬಿತ್ತರಿಸುತ್ತಲೇ ಇವೆ. ವೈದ್ಯರುಗಳು ಹೇಳುತ್ತಲೇ ಇದ್ದಾರೆ. ಜಾಲತಾಣದಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ. ಓದಿ ಮರೆತು ಬಿಡುವ ಜಾಣರಾದ ನಮ್ಮನ್ನು ಮತ್ತೆ ಮತ್ತೆ ಸೆಳೆಯುವುದು ಆಕರ್ಷಕ ಪ್ಯಾಕೆಟ್ಗಳು.
             ಈಚೆಗೆ ಸ್ನೇಹಿತರ ಕುಟುಂಬದೊಂದಿಗೆ ಅವರ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಇಬ್ಬರು ಮಕ್ಕಳು ಅಂಗಡಿ ಕಂಡಾಗಲೆಲ್ಲಾಕುರುಕುರೆಗಾಗಿಚೊರೆ (ಹಠ) ಮಾಡುತ್ತಿದ್ದರು. ಪ್ರಯಾಣದುದ್ದಕ್ಕೂ ಗಲಾಟೆಯೋ ಗಲಾಟೆ. ಕೊನೆಗೆ ಮಕ್ಕಳ ಅಪ್ಪ ಐದಾರು ಪ್ಯಾಕೆಟ್ಗಳನ್ನು ಕೈಗೆ ಕುಕ್ಕಿದಾಗ ಗಲಾಟೆಗೆ ವಿರಾಮ! ತಾಯಿಯ ಮಡಿಲಲ್ಲಿದ್ದ ಎಳೆ ಹಸುಗೂಸಿಗೂ ರುಚಿಯ ಸ್ಪರ್ಶ. “ನೋಡಿ ಸರ್, ಯಾವಾಗಲೂ ಹೀಗೆನೇ ಗಲಾಟೆ.” ಎನ್ನುವ ಸಮರ್ಥನೆ. ಹೌದು... ಕಂದಮ್ಮಗಳಿಗೆ ಇದರ ಪರಿಚಯ ಮಾಡಿಕೊಟ್ಟವರಾರು? ರುಚಿಯನ್ನು ಪರಿಚಯಿಸಿದವರಾರು? ಅತ್ತು ರಂಪಾಟ ಮಾಡಿದಾಗಲೆಲ್ಲಾ ಸಿದ್ಧ ಆಹಾರದ ಪ್ಯಾಕೆಟ್ ನೀಡಿದರೆ ನೀವೇನೋ ಬಚಾವ್. ಆದರೆ ಮಕ್ಕಳ ಆರೋಗ್ಯ?
ಮೂಲಿಕಾ ತಜ್ಞ ದಿ.ವೆಂಕಟರಾಮ ದೈತೋಟರೊಮ್ಮೆ ಎಚ್ಚರಿಸಿದ್ದರು, “ನಮ್ಮ ಮಕ್ಕಳ ಆಹಾರ ಪದ್ಧತಿಗಳನ್ನು ನೋಡಿದರೆ ಭಯವಾಗುತ್ತದೆ. ಹಿರಿಯರ ಹಳಿತಪ್ಪಿದ ಆಹಾರ ಅಭ್ಯಾಸದಿಂದ ಹುಟ್ಟಿನಿಂದಲೇ ಮಕ್ಕಳಿಗೆ ಜೀರ್ಣಾಂಗಗಳ ಕೊರತೆ. ಅವರನ್ನು ಪುಷ್ಟೀಕರಿಸಲು ಪೋಷಕ ಆಹಾರ ನೀಡಲು ಯಾಂತ್ರಿಕ ಲೆಕ್ಕಾಚಾರದ ಅಳವಡಿಕೆ. ಕಾರ್ಖಾನೆಯಲ್ಲಿ ತಯಾರಾದ ಯಂತ್ರಗಳಂತೆ ಮಗುವಿನ ತೂಕ (ವಯಸ್ಸು) ನೋಡಿ ಆಹಾರ ನೀಡಿಕೆ. ಆಹಾರ ತಜ್ಞರ ಲೆಕ್ಕಾಚಾರ ಮಗುವಿನ ಜೀರ್ಣಪ್ರಕ್ರಿಯೆಗೆ ಹೊಂದುವುದೇ? ಮಗುವಿನ ಜೀರ್ಣ ಹಾಗೂ ರಸಪ್ರಕ್ರಿಯೆ ಹೊಂದಿ ತಾನೇ ದೇಹದಲ್ಲಿ ಆಹಾರ ವಿನಿಯೋಗ? ಹೆಚ್ಚಿನ ಆಹಾರಕ್ಕೆ ಒತ್ತು ನೀಡಿದರೆ ಮಗುವಿಗೆ ಹೆಚ್ಚಾದ ಆಹಾರ ಅರೆಜೀರ್ಣವಾಗಿ ವಿಷಪ್ರಾಯವಾಗದೇ?”
          ಇನ್ನು ತರಕಾರಿಗಳತ್ತ ಗಮನ ಹರಿಸಿದರೆ ಅಲ್ಲೂ ರಾಸಾಯನಿಕಗಳ ಮೇಲಾಟ. ಮಾರುಕಟ್ಟೆಗೆ ಬರುವ ಬಹುತೇಕ ತರಕಾರಿಗಳು ರಾಸಾಯನಿಕ, ಕೀಟನಾಶಕಗಳಲ್ಲಿ ಮಿಂದೆದ್ದೇ ಬರುತ್ತಿರುವುದು ಸರ್ವವೇದ್ಯ. ಅಲ್ಲೋ ಇಲ್ಲೋ ಸಾವಯವ ಕ್ರಮದಲ್ಲಿ ಬೆಳೆದರೂ ರಾಸಾಯನಿಕಗಳ ಭರಾಟೆಯಲ್ಲಿ ಅವುಗಳನ್ನು ಗಮನಿಸುವವರಿಲ್ಲ! ಆದರೆ ಸಾವಯವ ತರಕಾರಿಯನ್ನೇ ಬಯಸಿ ಬರುವ ಗ್ರಾಹಕರ ಸಂಖ್ಯೆ ತೀರಾ ತೀರಾ ವಿರಳ. ಮಾರುವವರಿಗೂ, ಕೊಳ್ಳುವ ಅಂಗಡಿಯವರಿಗೂ ಉತ್ಪನ್ನ ಬೇಕಷ್ಟೆ. ಅದು ಸಾವಯವವೋ, ರಾಸಾಯನಿಕವೋ ಬೇಕಾಗಿಲ್ಲ!
          ರಖಂ ಆಗಿ ತರಕಾರಿಯನ್ನು ತಾವೇ ಬೆಳೆದು ಮಾರುವ ಕೃಷಿಕರಿದ್ದಾರೆ. ರಾಸಾಯನಿಕ, ಕೀಟನಾಶಕಗಳನ್ನು ಬಳಸಿ ತುಂಬಾ ಚೆನ್ನಾಗಿ, ಶ್ರದ್ಧೆಯಿಂದ ದುಡಿಯುವವರಿದ್ದಾರೆ. ಅವರ ತನುಶ್ರಮಕ್ಕೆ ಸಲಾಂ. ಆದರೆ ತಮ್ಮ ಸ್ವಂತ ಬಳಕೆಗೆ ಪ್ರತ್ಯೇಕವಾಗಿ ವಿಷ ಸಿಂಪಡಣೆಯ ಸ್ಪರ್ಶವಿಲ್ಲದೆ ಅಪ್ಪಟಸಾವಯವದಲ್ಲಿ ಬೆಳೆದು ಬಳಸುವವರನ್ನು ಕಂಡಿದ್ದೇನೆ. ಹಾಗಾದರೆ ಇವರ ತರಕಾರಿಯನ್ನು ಮಾರುಕಟ್ಟೆಯಿಂದ ಖರೀದಿಸಿದ ಗ್ರಾಹಕನ ಗತಿ! ಇಂತಹ ಮನಃಸ್ಥಿತಿಯವರೊಮ್ಮೆ ಸಾವಯವ ವಿಧಾನದಲ್ಲಿ ವರುಷಪೂರ್ತಿ ತರಕಾರಿ ಬೆಳೆದು ಮಾರುಕಟ್ಟೆ ರೂಪಿಸಿದ, ರೂಪಿಸುತ್ತಿರುವ ಕೃಷಿಕರನ್ನೊಮ್ಮೆ ಮಾತನಾಡಿಸಿದರೆ ಒಳ್ಳೆಯದೇನೋ?