Sunday, October 30, 2011

'ಶ್ರೀ'ಪಡ್ರೆಯವರಿಂದ ಹವಾಯ್ ಅನುಭವ ಪ್ರಸ್ತುತಿ


ಪುತ್ತೂರಿನ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಹಾಸಭೆಯು 29 ಅಕ್ಟೋಬರ್ 2011ರಂದು ಪುತ್ತೂರಿನ ದ.ಕ.ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ನಡೆದಿತ್ತು.

ಅಡಿಕೆ ಪತ್ರಿಕೆಯು ಹೊರತಂದ ತನ್ನ 23ನೇ ಹುಟ್ಟುಹಬ್ಬ ವಿಶೇಷಾಂಕವನ್ನು ಸಂಘದ ಅಧ್ಯಕ್ಷ ಹಾಗೂ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಸುಳ್ಯ ವಿಶ್ವನಾಥ ರಾವ್, ಕೋಟೆ ದಯಾನಂದ, ವಾಟೆ ಮಹಾಲಿಂಗ ಭಟ್, ಗುಂಡ್ಯಡ್ಕ ವೆಂಕಟ್ರಮಣ ಭಟ್.. ಮೊದಲಾದ ಗಣ್ಯರು ಅನಾವರಣಗೊಳಿಸಿದರು.

ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ'ಪಡ್ರೆಯವರು ಈಚೆಗೆ ಹವಾಯ್ ದ್ವೀಪಕ್ಕೆ ಭೇಟಿ ನೀಡಿದ್ದರು. ಅವರ ಪ್ರವಾಸ ಅನುಭವ ಮತ್ತು ಹವಾಯಿಯ ಹಣ್ಣಿನ ಕುರಿತಾಗಿ ಪವರ್ ಪಾಯಿಂಟ್ ಪ್ರಸ್ತುತಿ ನಡೆಯಿತು. ಗಿಡಗೆಳೆತನ ಸಂಘ 'ಸಮೃದ್ಧಿ'ಯ ಸಹಯೋಗ.

(ಚಿತ್ರ : ಪಡಾರು)

ನರಿಕಬ್ಬು ಸೊಪ್ಪಿನ ಪಲ್ಯವೂ.. ನೀರ್ಕಡ್ಡಿ ಸಾರೂ..


'ಶಿರಂಕಲ್ಲು ದೇವಕಿ ಅಮ್ಮನ ಅಡುಗೆ ಮನೆಯಲ್ಲಿ ವರುಷದ ಮುನ್ನೂರು ದಿವಸವೂ ಅವರು ಬೆಳೆದದ್ದೇ ತರಕಾರಿ. ಅಂಗಡಿಯಿಂದ ತರುವುದಿಲ್ಲ,' ಎಂಬ ಹೊಸ ಸುಳಿವನ್ನು ಮುಳಿಯದ ವಾಣಿ ಶರ್ಮ ನೀಡಿದರು. ಕುತೂಹಲ ಹೆಚ್ಚಾಯಿತು, ಆಸಕ್ತಿ ಕೆರಳಿತು. 'ಬನ್ನಿ, ಬಾಳೆದಿಂಡಿನ ಪಲ್ಯ, ನೀರು ಮಾವಿನ ಗೊಜ್ಜು, ಪಪ್ಪಾಯಿ-ಬಾಳೆ ಕುಂಡಿಗೆಯ ಸಮೋಸ ಮಾಡಿದ್ದೇವೆ' ಎನ್ನುತ್ತಾ ಅವರ ಮಗ ನಾರಾಯಣ ಭಟ್ಟರ ಆಹ್ವಾನ. ತೋಟದ ಉತ್ಪನ್ನಗಳ ಖಾದ್ಯಗಳನ್ನು ಸವಿಯುವ ಅವಕಾಶ.

ಟೊಮೆಟೊ ಸಾರು, ಕ್ಯಾಬೇಜ್ ಪಲ್ಯ, ಆಲೂಗೆಡ್ಡೆ ಸಾಂಬಾರು.. ಇವಿಷ್ಟು ಅಡುಗೆ ಮನೆಗೆ ಬಾರದೆ ಸ್ಟೌ ಉರಿಯದ ಮನೆಗಳು ಎಷ್ಟು ಬೇಕು?! ಇದಕ್ಕಿಂತ ಭಿನ್ನವಾದ ಲೋಕವನ್ನು ಶಿರಂಕಲ್ಲಿನಲ್ಲಿ ನೋಡಿದೆ, ಅನುಭವಿಸಿದೆ. 'ಮನೆಯಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಸೇರುವ ಸಮಾರಂಭವಿದ್ದರೆ ಮಾತ್ರ ಮಾರುಕಟ್ಟೆಯಿಂದ ತರಕಾರಿ ತರುವುದು. ಹಾಗೆ ತರುವಾಗಲೂ ಗೆಡ್ಡೆ, ಸೌತೆ.. ಹೀಗೆ ಹೆಚ್ಚು ರಾಸಾಯನಿಕದಲ್ಲಿ ಮೀಯದ ತರಕಾರಿಯನ್ನು ತರುತ್ತೇವೆ' ಎಂದರು.

ತರಕಾರಿ ಕೃಷಿಕರೊಬ್ಬರಲ್ಲಿಗೆ ಭೇಟಿ ನೀಡಿದ್ದೆ. ತೊಂಡೆ ಕೃಷಿಯಲ್ಲಿ ಅನುಭವಿ. ಮಂಗಳೂರು ಮಾರುಕಟ್ಟೆಗೆ ಕ್ವಿಂಟಾಲ್ಗಟ್ಟಲೆ ತೊಂಡೆಕಾಯಿಯನ್ನು ನೀಡುವ ಕೃಷಿಕ. ಮಾತನಾಡುತ್ತಾ ತೊಂಡೆ ಚಪ್ಪರ ಸುತ್ತುತ್ತಾ ಇರುವಾಗ, ಮನೆಯ ಪಕ್ಕ ಸ್ವಲ್ಪ ಜಾಗದಲ್ಲಿ ತೊಂಡೆಯ ಬಳ್ಳಿಯನ್ನು ನೆಟ್ಟಿರುವುದನ್ನು ಕಂಡೆ. 'ಇದು ನಮ್ಮ ಮನೆಯ ಬಳಕೆಗೆ ಮಾತ್ರ' ಎಂದರು ನಗುತ್ತಾ.

ಪ್ರತ್ಯೇಕ ಆರೈಕೆಯ ಮನೆಯ ಬಳಕೆಯ ತೊಂಡೆಗೆ ಯಾವುದೇ ವಿಷ ಸಿಂಪಡಣೆ ಇಲ್ಲ. ಮಾರಾಟ ಮಾಡುವುದಕ್ಕೆ ಮಾತ್ರ ಕೀಟ ನಿಯಂತ್ರಣಕ್ಕಾಗಿ ಔಷಧದ ಹೆಸರಿನ ವಿಷ ಸಿಂಪಡಣೆ. 'ನಾವು ಮಾತ್ರ ಆರೋಗ್ಯದಿಂದಿರಬೇಕು, ಇತರರು ವಿಷ ತಿನ್ನಲಿ, ಬಿಡಲಿ' ಎಂಬ ಮನೋಸ್ಥಿತಿ. ಕಾಲಸ್ಥಿತಿಯೂ ಕೂಡಾ. ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ತರಕಾರಿಗಳ ಹಿಂದೆ ಅದೆಷ್ಟು ಕರಾಳ ವಿಷ ಕತೆಗಳು!

ತಾಜಾತನಕ್ಕೆ ಮಣೆ

ಶಿರಂಕಲ್ಲು (ದ.ಕ.ಜಿಲ್ಲೆಯ ಕನ್ಯಾನ ಸನಿಹ) ಮನೆಯ ಸದಸ್ಯರಿಗೆ ಮಾರುಕಟ್ಟೆ ತರಕಾರಿಗಳ 'ತಾಜಾತನ' ಗೊತ್ತು. ತಾವೇ ಬೆಳೆದ ತರಕಾರಿಯನ್ನು ತಿನ್ನುವುದು, ಉಣ್ಣುವುದು, ಬಳಕೆ ಮೀರಿದ್ದನ್ನು ಸ್ನೇಹಿತರಿಗೆ ಹಂಚುವುದು ಅವರಿಗೆ ಖುಷಿ. ಅಂಗಳ ತುಂಬಾ ಒಂದಲ್ಲ ಒಂದು ತರಕಾರಿಗಳು. 'ಬೆಳೆದರೆ ಸಾಲದಲ್ಲಾ, ತಿನ್ನಲೂ ಗೊತ್ತಿರಬೇಕು. ಬಹು ಮಂದಿ ತಾವು ಬೆಳೆದುದನ್ನು ತಿನ್ನುವುದಿಲ್ಲ. ಮಾರಾಟ ಮಾಡುತ್ತಾರೆ. ಮನೆ ಉಪಯೋಗಕ್ಕೆ ಪೇಟೆಯಿಂದಲೇ ತರುತ್ತಾರೆ. ಇದೊಂದು ಟ್ರೆಂಡ್, ಪ್ರತಿಷ್ಠೆ'!

ಹೌದಲ್ಲಾ.. ಕೃಷಿಕರೊಬ್ಬರ ತೋಟದಲ್ಲಿ ನಿಂತಿದ್ದೆ. ಬಾಳೆಕಾಯಿ ಕಟಾವ್ ಆಗುತ್ತಿತ್ತು. ಲಾರಿಗೆ ಪೇರಿಸುತ್ತಿದ್ದರು. 'ರೀ.. ನಾಡಿದ್ದೇ ಶನಿವಾರ ನಮ್ಮಲ್ಲಿ ಕಾರ್ಯಕ್ರಮವಲ್ವಾ. ಒಂದೆರಡು ಗೊನೆ ಇರಲಿ' ಮನೆಯೊಡತಿಯ ಬುಲಾವ್. 'ತೊಂದರೆಯಿಲ್ಲ ಬಿಡೇ.. ಸಫಲ್ಯರ ಗೂಡಂಗಡಿಯಿಂದ ಹಣ್ಣು ತಂದರೆ ಆಯಿತು, ಅದಕ್ಕೇನಂತೆ ಗಡಿಬಿಡಿ..' ಯಜಮಾನರ ಉತ್ತರ. ಇದು ಕೃಷಿ ಬದುಕಿನ ತಾಳ-ಮೇಳದ ಒಂದು ಎಳೆ!

'ಬಳಕೆಯ ಬಗ್ಗೆ ಜನರಿಗೆ ಗೊತ್ತಿಲ್ಲ. ಬಳಸಿ ತೋರಿಸಬೇಕು.,' ಮಾತಿನ ಮಧ್ಯೆ ದೇವಕಿ ಅಮ್ಮ ಹೇಳಿದಾಗ ಹನುಮಜೆ ಶ್ರೀಕೃಷ್ಣ ಭಟ್ಟರ ಮನೆಯ ಸಮಾರಂಭವೊಂದರಲ್ಲಿ ಬಡಿಸಿದ ಖಾದ್ಯಗಳು ನೆನಪಾಗಿ ಬಾಯಿರುಚಿ ಹೆಚ್ಚಿಸಿತು. ಅಂದು - ಹಲಸಿನ ಉಪ್ಪುಸೊಳೆ ಮತ್ತು ಬಾಳೆದಿಂಡಿನ ಪಲ್ಯ, ಹತ್ತಾರು ಚಿಗುರುಗಳ ತಂಬುಳಿ, ತೆಂಗಿನಕಾಯಿಯ ಸಾರು, ಮುಂಡಿಗೆಡ್ಡೆಯ ಕಾಯಿಹುಳಿ, ಕೆಸುವಿನ ದಂಟು ಮತ್ತು ಹಲಸಿನ ಬೇಳೆ ಸೇರಿಸಿದ ಪದಾರ್ಥ - ಹೀಗೆ ವಿವಿಧ ಪಾಕೇತನಗಳು. 'ಅಂಗಡಿ ಹತ್ತಿರವೇ ಇದೆ. ಬೇಕಾದ ಹಾಗೆ ತರಬಹುದಿತ್ತು. ನಮ್ಮದೇ ತಾಜಾ ಸಂಪನ್ಮೂಲಗಳನ್ನು ಬಳಸದಿದ್ದರೆ ಅವು ಹಾಳಾಗುವುದಿಲ್ವಾ. ಈ ಅಡುಗೆ ಬಹುತೇಕರಿಗೆ ಇಷ್ಟವಾಗಿದೆ. ಗೇಲಿ ಮಾಡಿದವರೂ ಇದ್ದಾರೆ' ಎನ್ನುತ್ತಾರೆ.

ಸಾವಯವದ ಒಲವು ಹೇಗೆ ಹೆಚ್ಚುತ್ತಿದೆಯೋ, ಜತೆ ಜತೆಗೆ ಖಾದ್ಯಗಳ ತಯಾರಿಯ ಅರಿವೂ ಕೂಡಾ ಆಗಬೇಕಾಗಿದೆ. ತರಕಾರಿಯೋ, ಬೇಳೆಯೋ ಸಾವಯವದಲ್ಲಿ ಸಿಕ್ಕಿತೆನ್ನಿ. ಉಣ್ಣುವ ಅನ್ನವೇ ಸಿಂಪಡಣೆಗಳಿಂದ ತೋಯ್ದರೆ? ಹೀಗೆಂದಾಗ 'ಕ್ರಿಮಿಕೀಟಗಳಿಂದ ರಕ್ಷಿಸಲು ರಾಸಾಯನಿಕ ಸಿಂಪಡಣೆ ಅನಿವಾರ್ಯವಲ್ವಾ' ಎಂಬ ಹತ್ತಾರು ಅಡ್ಡಪ್ರಶ್ನೆಗಳಿಗೆ ಅದರದ್ದೇ ಆದ ಪರಿಹಾರೋಪಾಯಗಳಿವೆ ಬಿಡಿ.

ಕಳೆದ ವರುಷ ಬೆಂಗಳೂರಿನ ಕೃಷಿಮೇಳದ ಸಾವಯವ ಅಕ್ಕಿಯ ಮಳಿಗೆಯೊಂದರಲ್ಲಿದ್ದೆ. ವಯೋವೃದ್ಧ ಮಹಿಳೆಯೊಬ್ಬರು 'ಏ ತಮ್ಮಾ.. ಸಾವಯವ ಅಕ್ಕಿ ಬೇಕಾಗಿತ್ತು. ಡಾಕ್ಟ್ರು ಹೇಳಿದ್ದಾರಪ್ಪಾ.. ಪಾಲಿಶ್ ಮಾಡದ ಅಕ್ಕಿ ಎಲ್ಲಿ ಸಿಗುತ್ತೋ'? ದೂರದ ನೆಲಮಂಗಲದಿಂದ ಅಕ್ಕಿಯನ್ನು ಹುಡುಕುತ್ತಾ ಜಿಕೆವಿಕೆ ಆವರಣಕ್ಕೆ ಬಂದಿದ್ದರು. ಅವರ ಮನೆಯ ಪಕ್ಕ ಅಂಗಡಿ ಇರಲಿಲ್ವೇನು? ಸೂಪರ್ ಬಜಾರ್ ಇಲ್ಲವೇನು? ಎಲ್ಲವೂ ಇದ್ದರೂ ಬದುಕಿಗಾಗಿ, ಆರೋಗ್ಯಕ್ಕಾಗಿ ಅಕ್ಕಿಗೂ ಹುಡುಕಾಟ, ಪರದಾಟ.

ಇರಲಿ, ಪುನಃ ಶಿರಂಕಲ್ಲು ಮನೆಗೆ ಬರೋಣ. ಉಣ್ಣುವ ಅನ್ನವನ್ನು ಇವರೇ ಬೆಳೆಯುತ್ತಾರೆ. ಪಾಲಿಶ್ ಮಾಡದ ಅಕ್ಕಿ! ಮನೆಯೊಳಗೆ ಪೇರಿಸಿಟ್ಟ ಭತ್ತದ ಮೂಟೆಯನ್ನು ತೋರಿಸುವುದು ನಾರಾಯಣ ಭಟ್ಟರಿಗೆ ಹೆಮ್ಮೆಯಾದರೂ, 'ನಾನು ಬೆಳೆದಿದ್ದೇನೆ. ನೀವೂ ಬೆಳೆಯಿರಿ. ಇತರರನ್ನು ಬೆಳೆಯಲು ಪ್ರೋತ್ಸಾಹಿಸಿ' ಎಂಬ ಸಂದೇಶವೂ ಇದೆ.

ಸಾತ್ವಿಕ ಆಹಾರದಿಂದ ಆರೋಗ್ಯ

ಆಹಾರವೇ ಔಷಧ. ಅದನ್ನು ಮನೆ ಆಹಾರದಲ್ಲಿ ಅನುಷ್ಠಾನ ಮಾಡಿದ ಇವರು, ಇತರರ ಆರೋಗ್ಯವೂ ಸುಧಾರಿಸಲಿ ಎಂಬ ದೃಷ್ಟಿಯಿಂದ ಖ್ಯಾತ ಮೂಲಿಕಾ ವೈದ್ಯ ಪಾಣಾಜೆಯ ವೆಂಕಟ್ರಾಮ ದೈತೋಟ, ಜಯಲಕ್ಷ್ಮೀ ವಿ. ದೈತೋಟ ಇವರಿಂದ 'ಸಾತ್ವಿಕ ಆಹಾರದಿಂದ ಆರೋಗ್ಯ' ಎಂಬ ಮಾಹಿತಿ ಕಾರ್ಯಾಗಾರವನ್ನು ಮನೆಯ ಜಗಲಿಯಲ್ಲಿ ನಾರಾಯಣ ಭಟ್ ಆಯೋಜನೆ ಮಾಡಿದ್ದರು. ಸುಮಾರು ಐವತ್ತಕ್ಕೂ ಮಿಕ್ಕಿ ಅಮ್ಮಂದಿರ ಉಪಸ್ಥಿತಿ. ಇಲ್ಲಿನ ಮಾಹಿತಿಗಳು ತಂತಮ್ಮ ಅಡುಗೆ ಮನೆಯಲ್ಲಿ ಸಾಕಾರವಾಗಬೇಕೆಂಬ ಕಾಳಜಿ.

ಅಂದಿನ ಅಡುಗೆಯ ಪಾಕೇತನಗಳನ್ನು ನೋಡಿ. ಎಳೆ ನರಿಕಬ್ಬು ಸೊಪ್ಪು ಮತ್ತು ಹಲಸಿನ ಬೇಳೆ ಸೇರಿಸಿ ಮಾಡಿದ ಪಲ್ಯ, ಕ್ರೋಟಾನ್ ಹರಿವೆಯ ಸಾಸಿವೆ, ಸೊರಳೆ ಸೊಪ್ಪಿನ ತಂಬುಳಿ, ನೀರ್ಪಂತಿ (ನೀರ್ಕಡ್ಡಿ) ಸೊಪ್ಪಿನ ಸಾರು, ದೊಡ್ಡಪತ್ರೆ ಮತ್ತು ಹೆಸರು ಕಾಳಿನ ಗಸಿ, ಪಡುವಲ-ಅಕ್ಕಿತರಿಯ ಪಾಯಸ, ಬಾಳೆದಿಂಡಿನ ಪೋಡಿ (ಬಜ್ಜಿ), ರಾಗಿ ಹಾಲುಬಾಯಿ (ಹಲ್ವದಂತೆ), ಬಾಳೆಹಣ್ಣಿನ ಹಲ್ವ, ನೀರ್ಗುಜ್ಜೆ ಹುಳಿ, ಶುಂಠಿ-ನಿಂಬೆ-ಬೆಲ್ಲದ ಪಾನಕ, ನಿಂಬೆಹುಳಿ-ಅರೆಮಾದಲ ಉಪ್ಪಿನಕಾಯಿ.

ಅರೆ.. ಹೆಸರು ಕೇಳದ ಸೊಪ್ಪುಗಳು! ನನ್ನ ಆಶ್ಚರ್ಯ ನೋಡಿ ವೆಂಕಟ್ರಾಮರೇ ಹೇಳಿದರು - ನರಿಕಬ್ಬು ಸೊಪ್ಪು ಜೀರ್ಣಕ್ರಿಯೆ ಮತ್ತು ಕರುಳು ಶುದ್ದೀಕರಣಕ್ಕೆ, ಕ್ರೋಟಾನ್ ರಕ್ತವರ್ಧಕ, ಸೊರಳೆ ಸೊಪ್ಪಿಗೆ ಸಮಗ್ರ ಅನ್ನನಾಳದ ಉರಿಯನ್ನು ಶಮನಿಸುವ ಗುಣ, ನೀರ್ಕಡ್ಡಿ ಜೀರ್ಣಕಾರಿ, ಯಕೃತ್-ಪ್ಲೀಹ ಸಂಬಂಧಿಗಳಿಗೆ ಸಾಂಬ್ರಾಣಿ..

ಇಷ್ಟೆಲ್ಲಾ ಔಷಧೀಯ ಗುಣಗಳ ಸೊಪ್ಪುಗಳನ್ನು ಮುಂದಿಟ್ಟುಕೊಂಡು ವಯೋವೃದ್ಧ ಶಂಕರ ಭಟ್ಟರು ಅಡುಗೆ ಮನೆಯಿಂದ ಉದ್ಗರಿಸಿದ್ದು ಹೀಗೆ - 'ನನ್ನ ಐವತ್ತಾರು ವರುಷದ ಅಡುಗೆ ಅನುಭವದಲ್ಲಿ ಇಂತಹ ಪದಾರ್ಥಗಳನ್ನು ಮಾಡಿಯೇ ಗೊತ್ತಿಲ್ಲ. ಇದೇ ಪ್ರಥಮ. ಹೊಸ ಅನುಭವ' ಎಂದರು.

ಇಂತಹ ವಿಶೇಷ ಕಾರ್ಯಕ್ರಮಗಳಿಗೆ ಹೋಗಿ ಬಂದಾಗ ಮೆಚ್ಚುತ್ತೇವೆ, ಹೊಗಳುತ್ತೇವೆ. ನಮ್ಮ ಮನೆಯಲ್ಲಿ ಅಂತಹ ಖಾದ್ಯಗಳನ್ನು ಮಾಡುವ ಪ್ರಯತ್ನ ಬಿಡಿ, ನೆನಪಾಗುವುದೇ ಇಲ್ಲ. ಮನೆಯ ಹಿತ್ತಿಲಿನ ತರಕಾರಿಗಳು ಕೊಳೆತರೂ 'ಅವರಿಗೆ ಬೇರೆ ಕೆಲಸವಿಲ್ಲ' ಎನ್ನುತ್ತಾ ಬೈಕ್ ಸ್ಟಾರ್ಟ್ ಮಾಡಿ ಪೇಟೆಯತ್ತ ಮುಖಮಾಡುತ್ತೇವೆ. ಬರುವಾಗ ಪ್ಲಾಸ್ಟಿಕ್ ಚೀಲ ತುಂಬಾ ಕ್ಯಾಬೇಜ್, ಕ್ಯಾಲಿಫ್ಲವರ್.. ಇತ್ಯಾದಿ ಅಡುಗೆ ಮನೆ ಸೇರುತ್ತದೆ. ಖಾದ್ಯಗಳು ಬಟ್ಟಲಿಗೆ ಬಂದಾಗ 'ಸೂಪರ್' ಎಂದು ತೇಗುತ್ತೇವೆ.

'ಮುಂಬಯಿಯಲ್ಲಿ ಡಬ್ಬಾವಾಲಾಗಳ ವ್ಯಾಪಾರ ಕಡಿಮೆಯಾಗಿದೆ. ಸಿದ್ಧ ಆಹಾರಗಳತ್ತ ಜನರ ಒಲವು ಹೆಚ್ಚಾಗಿದೆ' ವಾರದ ಹಿಂದೆ ಓದಿದ ಸುದ್ದಿ. ಮನೆಆಹಾರ ಕಡಿಮೆಯಾಗಿದೆ ಅಂದರೆ ಕಾಯಿಲೆಗಳ ಆಹ್ವಾನಕ್ಕೆ ನಾಂದಿ ಎಂದರ್ಥ. ದಿನಕ್ಕೊಂದು ಕಾಯಿಲೆಗಳು ವಕ್ಕರಿಸಿಕೊಂಡು ಬರುತ್ತದೆ. ಆಹಾರದ ಬದಲಾವಣೆ ಕಾಲದ ಅನಿವಾರ್ಯತೆ. ಆಹಾರದಲ್ಲೇ ಔಷಧಿಯಿದೆ. ಪ್ರತ್ಯೇಕ ಗುಳಿಗೆ, ಟಾನಿಕ್ಗಳು ಬೇಕಾಗಿಲ್ಲ. ಆಹಾರವನ್ನು ಕಡೆಗಣಿಸಿದರೆ ಜೀವನಪೂರ್ತಿ ಗುಳಿಗೆ, ಟಾನಿಕ್ಗಳನ್ನು ಬಿಟ್ಟಿರಲು ಸಾಧ್ಯವೂ ಇಲ್ಲ' ಎಂದು ಎಚ್ಚರಿಸುತ್ತಾರೆ ವೆಂಕಟ್ರಾಮ.

Wednesday, October 19, 2011

ಚಿಣ್ಣರ ಓದಿಗೆ ಸೂರ್ಯಂಗೆ ಲಾಳಿಕೆ

'ಮಕ್ಕಳ ವಿದ್ಯಾಭ್ಯಾಸ ಸುಧಾರಿಸಿದೆ. ರಾತ್ರಿ ಹತ್ತು ಗಂಟೆಯ ತನಕವೂ ಅಭ್ಯಾಸ ಮಾಡಬಹುದು. ಮೊದಲೆಲ್ಲಾ ಸೂರ್ಯಾಸ್ತಕ್ಕಾಗುವಾಗ ಹೋಂವರ್ಕ್ ಮುಗಿಸಬೇಕು. ಸೀಮೆಎಣ್ಣೆ ಬುಡ್ಡಿ ಉರಿಸೋಣವೆಂದರೆ ಎಣ್ಣೆನೂ ಇಲ್ಲ. ಮಕ್ಕಳು ಓದುತ್ತಿದ್ದಾಗ ಕಣ್ಣು ತೂಗಿ ಬುಡ್ಡಿ ಮೇಲೆ ಬೀಳದಂತೆ ಕಾಯುವ ಕೆಲಸ ಕೂಡಾ ಇಲ್ಲ' - ಧಾರವಾಡದ ದೇವಗರಿ ಹಳ್ಳಿಯಲ್ಲಿ ಸುತ್ತಾಡುತ್ತಿದ್ದಾಗ ಕಲ್ಮೇಶ ಕಬ್ಬೂರ ಅಭಿಮಾನದಿಂದ ಸೋಲಾರ್ ಕುರಿತು ಹೇಳಿದ ಮಾತು, ಈಚೆಗೆ ಬೆಳ್ತಂಗಡಿಯ ಸವಣಾಲಿಗೆ ಹೋದಾಗ ನೆನಪಾಯಿತು.

ಸವಣಾಲಿನ ನೇತಾಜಿ ಸುಭಾಸ್ಚಂದ್ರ ಭೋಸ್ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಒಂಭತ್ತರ ವಿದ್ಯಾರ್ಥಿನಿಯರಾದ ಪ್ರಜ್ಞಾ ಮತ್ತು ಪಲ್ಲವಿಯ ಅಭಿಪ್ರಾಯ ಮತ್ತು ಕಲ್ಮೇಶರ ಹೇಳಿಕೆ ಹೇಗೆ ಹೊಂದುತ್ತದೆ ನೋಡಿ - 'ಬುಡ್ಡಿಗೆ ಸೀಮೆಎಣ್ಣೆ ಸಿಗದೆ ಓದು ತ್ರಾಸವಾಗುತ್ತಿತ್ತು. ಸೋಲಾರ್ ಲ್ಯಾಂಪ್ ಮನೆಯಲ್ಲಿ ಉರಿದ ಮೇಲೆ ಓದಿನಲ್ಲೂ, ಅಂಕದಲ್ಲೂ ಅಭಿವೃದ್ಧಿಯಾಗಿದೆ'.

ಅಭಿವೃದ್ಧಿಯ ಹರಿಕಾರರು ನಗರದ ಮಧ್ಯೆ ನಿಂತು ಹಳ್ಳಿಗಳ ವಿಶ್ಲೇಷಣೆ ಮಾಡುತ್ತಾರೆ. ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ. ಕಂಪ್ಯೂಟರ್ ಮೇಲೆ ಯೋಜನೆಗಳ ನಕ್ಷೆಗಳನ್ನು ಬಿಡಿಸುತ್ತಾರೆ. ಇಂತಹವರು ಒಮ್ಮೆ ಹಳ್ಳಿಗಳಿಗೆ ಪ್ರವಾಸ ಹೋಗಿ. ನಾಲ್ಕು ದಿನ ತಂಗಿ. ಆಗ ತಿಳಿಯುತ್ತದೆ - ಒಂದೇ ಕೋಣೆಯಲ್ಲಿ ಎಲ್ಲವನ್ನೂ ನಿಭಾಯಿಸುವ ಕುಟುಂಬಗಳು, ಚಿಮಿಣಿ ದೀಪ ಇಲ್ಲದೆ ಸೂರ್ಯಾಸ್ತದ ಮೊದಲೇ ದೈನಂದಿನ ಬದುಕನ್ನು ಮುಗಿಸುವ ಕುಟುಂಬಗಳ ಕಾಯ-ಕಷ್ಟ. ಬೀಡಿಯ ಸುರುಳಿಯಲ್ಲಿ ಬದುಕನ್ನು ರೂಪಿಸುವ ಕುಟುಂಬದ ಕೂಗು ಬೇಲಿಯಾಚೆ ಕೇಳಿಸದು.

ಇಂತಹ ಕುಟುಂಬದ ಬದುಕಿನಲ್ಲಿ ವಿಷಾದವಿದೆ. 'ತಮ್ಮ ಮಕ್ಕಳು ವಿದ್ಯಾವಂತರಾಗಬೇಕು' ಎಂಬ ಭವಿಷ್ಯದ ದಿನಗಳ ಲೆಕ್ಕಣಿಕೆಯಲ್ಲಿ ಸಂತೋಷವೂ ಇದೆ. ಪ್ರಜ್ಞಾಳ ಅಮ್ಮ, 'ಅವಳು ಚೆನ್ನಾಗಿ ಓದುತ್ತಾಳೆ' ಎನ್ನುವ ವಿಶ್ವಾಸದಲ್ಲಿ ಬದುಕಿನ ನಾಳೆಗಳಿವೆ.

ಶಿಕ್ಷಣವೇ ಬೆಳಕು, ಶಿಕ್ಷಣಕ್ಕಾಗಿ ಬೆಳಕು

ವಿದ್ಯುತ್ ಸಂಪರ್ಕ ಇಲ್ಲದ, ನಿಯಮಿತವಾಗಿ ಪವರ್ ಕಟ್ನಿಂದ ಕತ್ತಲೆಯಾದ ಹಳ್ಳಿಗಳ ಮಕ್ಕಳ ಶೈಕ್ಷಣಿಕ ಬದುಕನ್ನು ಬೆಳಗಿಸುವುದು ಸೆಲ್ಕೋ ಯೋಜನೆಗಳ ಒಂದೆಸಳು. ಕನ್ನಾಡಿನಾದ್ಯಂತ ನಲವತ್ತು ಶಾಲೆಗಳ ಎರಡು ಸಾವಿರ ವಿದ್ಯಾರ್ಥಿಗಳಿಗೆ ಆಸರೆಯಾಗುವುದು ಗುರಿ. ಈಗಲೇ ಅರ್ಧದಷ್ಟು ಸಫಲ. 'ಶಿಕ್ಷಣಕ್ಕಾಗಿ ಬೆಳಕು' ಯೋಜನೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆಯವರ ಮಿದುಳ ಮರಿ.

ಕೊಡಗಿನ ಕರಿಕೆಯಲ್ಲಿ ಪ್ರಾಯೋಗಿಕವಾಗಿ ಆರಂಭ. ಕಳೆದ ನವೆಂಬರ್ನಲ್ಲಿ ಆರಂಭವಾದ ಸವಣಾಲು ಶಾಲೆಯ ಯೂನಿಟ್ ಮಾರ್ಚ್ ಗೆ ಮುಕ್ತಾಯವಾಗಬೇಕಿತ್ತು. ಹೆತ್ತವರ, ಮಕ್ಕಳ ಕೋರಿಕೆಯಿಂದಾಗಿ ಈ 'ಡೆಮೋ ಯೂನಿಟ್' ಈಗಲೂ ಚಾಲೂ. ಪ್ರಸ್ತುತ ಅರಂತೋಡು, ನೆರಿಯಾ, ಉಡುಪಿ ಜಿಲ್ಲೆ, ಶಿವಮೊಗ್ಗ, ಬಿಜಾಪುರ, ಗುಲ್ಬರ್ಗಾ..ಗಳ ಆಯ್ದ ವಿದ್ಯಾರರ್ಥಿಗಳ ರಾತ್ರಿ ಓದಿನಲ್ಲಿ ಈಗ ಕತ್ತಲೆಯಿಲ್ಲ.

ಶಾಲೆಗಳಲ್ಲಿ ಪವರ್ ಚಾರ್ಜ್ ಯೂನಿಟ್ ಸ್ಥಾಪನೆ. ಹೆಚ್ಚು ಬ್ಯಾಕ್ಅಪ್ಪಿನ ಬಾಟರಿ. ಮೂರು ಪ್ಯಾನೆಲ್ಗಳು. ಎಲ್.ಇ.ಡಿ.ಬಲ್ಬ್ ಇರುವ, ಕಳಚಿ ಜೋಡಿಸಬಹುದಾದ ಬ್ಯಾಟರಿ ಹೊಂದಿರುವ ಲ್ಯಾಂಪ್. ಸುಮಾರು ಒಂದುಸಾವಿರದ ಆರುನೂರು ರೂಪಾಯಿ ಮೌಲ್ಯದ ಇವಿಷ್ಟನ್ನು ವಿದ್ಯಾರ್ಥಿಗೆ ನೀಡಲಾಗುತ್ತದೆ. ಯೂನಿಟ್ನಲ್ಲಿ ವಿದ್ಯಾರ್ಥಿ ದಿನ ಬಿಟ್ಟು ದಿನ ಬ್ಯಾಟರಿಯನ್ನು ಚಾರ್ಜ್ ಮಾಡುವ ವ್ಯವಸ್ಥೆ. ಚಾರ್ಜರಿಗೆ ಬ್ಯಾಟರಿಯನ್ನು ಮಾತ್ರ ತಂದರಾಯಿತು.

ಒಮ್ಮೆ ಚಾರ್ಜ್ ಮಾಡಿದರೆ ಎಂಟು ಗಂಟೆ ಲ್ಯಾಂಪ್ ಉರಿಯಬಲ್ಲುದು. ಕೆಲವೊಮ್ಮೆ ವಯರ್ ಸರಿಯಾಗಿ ಸಂಪರ್ಕವಾಗದೆ ಚಾರ್ಜ್ ಆಗದಿರುವುದೂ ಇದೆ. 'ಲ್ಯಾಂಪ್ ಸರಿಯಿಲ್ಲ' ಎಂದು ಮಕ್ಕಳ ಹೆತ್ತವರು ತಕ್ಷಣದ ತೀರ್ಮಾನಕ್ಕೆ ಬರುತ್ತಾರೆ. 'ಇಂತಹ ಸಂದರ್ಭಗಳಲ್ಲಿ ಅಧ್ಯಾಪಕರು ಸಹಕರಿಸಿದರೆ ಸಮಸ್ಯೆ ಪರಿಹರಿಸಬಹುದು' ಎನ್ನುತ್ತಾರೆ ಘಟಕ ನಿರ್ವಹಣೆ ಮಾಡುವ ಸೆಲ್ಕೋದ ಸಂದೀಪ್.

ಒಂದು ಯೂನಿಟ್ ಸ್ಥಾಪನೆಗೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ವೆಚ್ಚ. ಬಹುತೇಕ ದಾನಿಗಳಿಂದ ಮೊತ್ತವನ್ನು ಭರಿಸಲಾಗುತ್ತದೆ. ವಿದ್ಯಾರ್ಥಿಗೆ ನೀಡುವ ಲ್ಯಾಂಪ್, ಚಾರ್ಜರ್ಗಳ ನಿರ್ವಹಣೆಗೆ ವರುಷಕ್ಕೆ ನೂರ ಐವತ್ತು ರೂಪಾಯಿ ಶುಲ್ಕ. ಉಚಿತ ಅಂದರೆ ಸಸಾರ ಅಲ್ವಾ! ಶುಲ್ಕ ಕೊಟ್ಟಾಗ 'ಇದು ನಮ್ಮದು' ಅಂತ ಭಾವ ಬಂದುಬಿಡುತ್ತದೆ. ಸಕಾರಣವಾಗಿ ಲ್ಯಾಂಪ್ ಹಾಳಾದರೆ ಹೊಸತನ್ನು ನೀಡುತ್ತಾರೆ.

'ಸೀಮೆಎಣ್ಣೆ, ಕ್ಯಾಂಡಲ್ಗಳಿಗೆ ವೆಚ್ಚ ಮಾಡುವುದಕ್ಕಿಂತ ವರುಷಕ್ಕೆ ಇಷ್ಟು ಸಣ್ಣ ಮೊತ್ತ ಹೊರೆಯಾಗದು. ರಜಾ ದಿನಗಳನ್ನು ಹೊರತು ಪಡಿಸಿದರೆ ದಿನಕ್ಕೆ ಐವತ್ತು ಪೈಸೆ ಕೂಡಾ ಬೀಳದು. ಮಕ್ಕಳ ಪಾಲಕರು ಇದಕ್ಕೆ ತಕರಾರು ಮಾಡದಿದ್ದರೂ, ತಕರಾರು ಮಾಡುವವರೇ ಒಂದಷ್ಟು ಮಂದಿ ಸಮಾಜದಲ್ಲಿ ಇದ್ದಾರಲ್ಲ..' ಜತೆಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯಶಂಕರ ಶರ್ಮ ದನಿಗೂಡಿಸಿದರು.

'ಸವಣಾಲು ಶಾಲೆಯದು ಪ್ರಾತ್ಯಕ್ಷಿಕಾ ಘಟಕ. ಹಾಗಾಗಿ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುತ್ತಿಲ್ಲ' ಎನ್ನುತ್ತಾರೆ ಸೆಲ್ಕೋ ಪೌಂಡೇಶನ್ನಿನ ಆನಂದ ನಾರಾಯಣ. ಲ್ಯಾಂಪನ್ನು ಬಳಸುವ ವಿದ್ಯಾರ್ಥಿಗಳಾದ ಶಿವರಾಂ, ತಸ್ರೀಫಾ, ಪಲ್ಲವಿ, ಪ್ರಜ್ಞಾ ಇವರನ್ನೆಲ್ಲಾ ಮಾತನಾಡಿಸಿದಾಗ 'ಈ ವರುಷ ನಮಗೆ ಮಾರ್ಕ್ ಹೆಚ್ಚು ಸಾರ್' ಎನ್ನುವಾಗ ಅವರ ಮುಖವರಳುತ್ತದೆ.

ಬಯಲು ಸೀಮೆಯಲ್ಲಿ ಸೋಲಾರ್ ಘಟಕಕ್ಕೆ ಉತ್ತಮ ಪ್ರತಿಕ್ರಿಯೆ. ವಿದ್ಯುತ್ತಿನಿಂದ ದೂರವಾದ ಹಳ್ಳಿಗಳೇ ಅಧಿಕ. ದೂರದೂರ ಹಂಚಿಹೋಗಿರುವ ಮನೆಗಳಿಂದಾಗಿ ನಿರ್ವಹಣೆ ತ್ರಾಸ. ಕೆಲವೆಡೆ ದುರ್ಬಳಕೆಯೂ ಆಗುತ್ತಿದೆ. ಲ್ಯಾಂಪ್ ಮಕ್ಕಳಿಗೆ ಸಿಗುವುದೇ ಇಲ್ಲ! ಪಾಲಕರು ಶೌಚಕ್ಕೆ, ಬೆಳಿಗ್ಗೆ ದನದ ಹಾಲು ಹಿಂಡಲು, ಅಡುಗೆ ಮಾಡಲು ಬಳಸುವವರೂ ಇದ್ದಾರೆ!

ಹಳ್ಳಿಗಳಲ್ಲಿದೆ, ಅಭಿವೃದ್ಧಿಯ 'ಬೀಜ'

ಅಭಿವೃದ್ಧಿ ಎಂದಾಕ್ಷಣ ಜೆಸಿಬಿ ಯಂತ್ರಗಳು ಕಣ್ಣ ಮುಂದೆ ಬರುತ್ತವೆ. ಜಲ್ಲಿ, ಸರಳುಗಳು, ಸಿಮೆಂಟ್.. ಇವೆಲ್ಲಾ ಅಭಿವೃದ್ಧಿಯ ಸರಕುಗಳು ಎಂದು ನಂಬುವ ದಿನಗಳು. ನಿಜಕ್ಕೂ ಗ್ರಾಮೀಣ ಭಾರತದ ಬದುಕಿನ ಕತ್ತಲೆಯನ್ನು ದೂರಮಾಡುವ 'ಶೈಕ್ಷಣಿಕ ಆಭಿವೃದ್ಧಿ'ಯತ್ತ ಲಕ್ಷ್ಯವಿಟ್ಟ ಸೆಲ್ಕೋ ಅಭಿನಂದನಾರ್ಹ ಅಂತ ಕಾಣುವುದಿಲ್ವೇ? ಎರಡು ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಕತ್ತಲನ್ನು ದೂರಮಾಡುವಂತಹ ಯೋಜನೆಗಳಲ್ಲೇ ಗ್ರಾಮೀಣ ಅಭಿವೃದ್ಧಿಯ ಬೀಜವಿದೆ.

ಸೀಮೆಎಣ್ಣೆ ದೀಪದ ಹೊಗೆಯನ್ನು ನಿತ್ಯ ನುಂಗುವ ಬೀದಿ ವ್ಯಾಪಾರಿಗಳಿಗೆ ಸೂರ್ಯನ ಬೆಳಕನ್ನು ಹಿಡಿದಿಟ್ಟು ಸೆಲ್ಕೋ ನೀಡುತ್ತಿದೆ. ಊರಲ್ಲೊಂದು ಯೂನಿಟ್. ಗಾಡಿ ವ್ಯಾಪಾರಸ್ಥರಿಗೆ ಲ್ಯಾಂಪ್. ಯೂನಿಟನ್ನು ನಿರ್ವಹಿಸುವ ವ್ಯಕ್ತಿ ಬ್ಯಾಟರಿಯನ್ನು ಚಾರ್ಜರ್ ಮಾಡಿ ಸಂಜೆ ವ್ಯಾಪಾರಸ್ಥರಿಗೆ ತಲಪಿಸಿದರೆ ಇಂತಿಷ್ಟು ಶುಲ್ಕ. ಇದರಿಂದಾಗಿ ಒಬ್ಬ ವ್ಯಕ್ತಿಗೆ ಉದ್ಯೋಗವೂ ಆಯಿತು, ಅಷ್ಟೂ ಬೀದಿ ವ್ಯಾಪಾರಸ್ಥರಿಗೆ ಬೆಳಕೂ ಆಯಿತು. ಜತೆಗೆ ಆರೋಗ್ಯವೂ ಕೂಡಾ. 'ಈಗಾಗಲೇ ಹಾಸನದಲ್ಲಿ ನೂರ ಇಪ್ಪತ್ತು ಮಂದಿ, ಕುಂದಾಪುರದಲ್ಲಿ ಎಪ್ಪತ್ತು, ಧಾರವಾಡದಲ್ಲಿ ಮೂವತ್ತು ಮಂದಿ ಬೀದಿ ವ್ಯಾಪಾರಸ್ಥರು ಸೀಮೆಎಣ್ಣೆ ಬುಡ್ಡಿ ಇಡದೆ ವರ್ಷಗಳೇ ಕಳೆಯಿತು' ಎನ್ನುತ್ತಾರೆ ಸಂದೀಪ್.

ಗ್ರಾಮೀಣ ಅಭಿವೃದ್ಧಿಯ ಕ್ರಾಂತಿಕಾರಿ ಹೆಜ್ಜೆಯಿಟ್ಟ ಕಾರಣದಿಂದಲೇ ಸೆಲ್ಕೋದ ಹರೀಶ್ ಹಂದೆಯವರಿಗೆ ಪ್ರಶಸ್ತಿ ಅರಸಿ ಬಂದಿದೆ. ಗ್ರಾಮೀಣ ಪ್ರದೇಶದವರಾದ ಅವರಿಗೆ ಗ್ರಾಮೀಣ ಭಾರತದ ಬದುಕಿನ ಸ್ಪಷ್ಟ ಚಿತ್ರಣವಿದೆ. ಹದಿನಾರು ವರುಷದ ಹಿಂದೆ ಶುರುವಾದ ಸೆಲ್ಕೋ ಆರಂಭದಲ್ಲಿ ಒಂದು ಸಾವಿರ ಮನೆಗಳಿಗೆ ಸೌರ ವಿದ್ಯುತ್ ಘಟಕವನ್ನು ಅಳವಡಿಸಿದ್ದರು. ಪ್ರಕೃತ ಕರ್ನಾಟಕ, ಕೇರಳ, ಗುಜರಾತ್.. ರಾಜ್ಯಗಳಲ್ಲಿ ಒಂದೂಕಾಲು ಲಕ್ಷ ಮನೆಗಳನ್ನು, ಮನಗಳನ್ನು ಸೂರ್ಯನ ಬೆಳಕು ಬೆಳಗಿಸುತ್ತದೆ.

ಸೆಲ್ಕೋದ 'ಕ್ರಿಯಾತ್ಮಕ ಸಂಶೋಧನಾ ವಿಭಾಗ'ವು ಹಳ್ಳಿಗಳತ್ತ ಮುಖ ಮಾಡಿದೆ. ಪರಿಣಾಮವಾಗಿ ಸೌರ ಶಕ್ತಿಯಿಂದ ಶುದ್ಧೀಕರಿಸಿದ ಕುಡಿನೀರು, ಡ್ರೈಯರ್, ಸುಧಾರಿತ ಅಡುಗೆ ಒಲೆ, ಗೃಹ ಬಳಕೆಯ ಉತ್ಪನ್ನಗಳ ಬಳಕೆ. 'ನಾನು ಸಂಸ್ಥೆ ಕಟ್ಟಿರುವುದು ಹಣ ಮಾಡಿ ಶ್ರೀಮಂತನಾಗುವ ಉದ್ದೇಶದಲ್ಲಲ್ಲ. ಹಣ ಮಾಡಲು ಬೇಕಾದಷ್ಟು ದಾರಿಗಳಿಲ್ವಾ. ನೈಸರ್ಗಿಕ ಬೆಳಕನ್ನು ಬಳಸಿ ಬದುಕಿನ ಕತ್ತಲೆಯಿಂದ ಬಡವರನ್ನು ಹೊರತರುವುದೇ ನನ್ನ ಉದ್ದೇಶ' ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಹರೀಶ್ ಹಂದೆಯವರ ಮನದ ಮಾತು.

'ಕೋಟಿಗಳಲ್ಲಿ ಬದುಕನ್ನು ಅಳೆಯುವ' ಕಾಲಮಾನದ ಪ್ರಸ್ತುತ ಕಾಲಘಟ್ಟದಲ್ಲಿ ಹಂದೆಯವರ ಮಾತು ಕ್ಲೀಷೆಯಾಗಿ ಕಂಡರೆ ಅದಕ್ಕೆ ಅವರ ಮಾತು ಕಾರಣವಲ್ಲ, ಗ್ರಾಮೀಣ ಭಾರತವನ್ನು ಕಾಣುವ, ಓದುವ ನಮ್ಮ ಬೌದ್ಧಿಕ ದಾರಿದ್ರ್ಯವೇ ಕಾರಣವಾಗಬಹುದು.

Monday, October 10, 2011

ಮಾಂಬಳದ ನೂರನೇ ಹೆಜ್ಜೆ





ನೋಡ್ತಾ.. ನೋಡ್ತಾ ಇದ್ದಂತೆ ನೂರು ವಾರ ಕಳೆಯಿತು. ಇದು ಮಾಂಬಳ ಅಂಕಣದ ನೂರನೇ ಕಂತು. 22 ನವೆಂಬರ್ 2009ರಂದು ಅಂಕಣದ ಆರಂಭ. ದಿಗಂತದ ಮಂಗಳೂರಿನ ವರಿಷ್ಠರು ಅಂಕಣದ ಪ್ರಸ್ತಾಪ ಮುಂದಿಟ್ಟಾಗ ಅಂಜುತ್ತಂಜುತ್ತಲೇ ಒಪ್ಪಿಕೊಂಡಿದ್ದೆ.


ಅಂಕಣ ಆರಂಭವಾಯಿತು. ಒಂದು ಬರೆಹ ಕಳುಹಿಸಿದಾಕ್ಷಣ ಮತ್ತೊಂದರ ಹುಡುಕಾಟ. ಒಂದು ವಾರವೂ ಬರೆಹ ತಪ್ಪಬಾರದು ಎಂಬ ಬದ್ಧತೆ ಹುಸಿಯಾಗಲಿಲ್ಲ. ಮಾಂಬಳದ ಲೇಖನ ಓದಿ ಸಾಕಷ್ಟು ಮಂದಿ ದೂರವಾಣಿ, ಮಿಂಚಂಚೆ ಪ್ರತಿಕ್ರಿಯೆ ನೀಡಿದ್ದಾರೆ. ದಿಗಂತದ ಶಿವಮೊಗ್ಗ ಆವೃತ್ತಿ ಆರಂಭವಾದ ಮೇಲಂತೂ ಮಿಂಚಂಚೆಗಳ ಸಂಖ್ಯೆ ಇಮ್ಮಡಿ. ಇದು ಹೊಸದಿಗಂತದ ಜನಪ್ರಿಯತೆ.


ಕನ್ನಡದ ಬೇರೆ ಬೇರೆ ಪತ್ರಿಕೆಗಳಲ್ಲಿ ವಿವಿಧ, ವೈವಿಧ್ಯ ಅಂಕಣಗಳಿವೆ. ಕೃಷಿ/ಗ್ರಾಮೀಣ ಬರೆಹಗಳೂ ಅಚ್ಚಾಗುತ್ತಿವೆ. ಆದರೆ ಕೃಷಿಗೇ ಸೀಮಿತವಾದ, ಸಾಪ್ತಾಹಿಕ ಕೃಷಿ ಅಂಕಣ ಆರಂಭಿಸಿ ಮುಂದುವರಿಸುತ್ತಿರುವುದು ದಿಗಂತದ ಹೆಮ್ಮೆ. ಅವಕಾಶ ಕೊಟ್ಟ ದಿಗಂತದ ಸಂಪಾದಕರಿಗೆ, ಎಲ್ಲಾ ಉಪಸಂಪಾದಕರಿಗೆ, ಓದುಗರಿಗೆ ಅಭಿನಂದನೆಗಳು.


ಮಾಂಬಳ - ಎಂದರೇನು? ಅಂಕಣಾರಂಭಕ್ಕೆ ಬಹುತೇಕರ ಪ್ರಶ್ನೆ. ಇದು ಹಳ್ಳಿ ಬದುಕಿನಲ್ಲಿ ಮರೆಯಾದ, ಮರೆಯಾಗುತ್ತಿರುವ ರುಚಿ. ಧಾವಂತದ ಬದುಕಿನಲ್ಲಿ ಈ ರುಚಿ ಮರೀಚಿಕೆ. ಹಳ್ಳಿಯ ಹಿರಿಯ ಅಮ್ಮಂದಿರ ಕೈಚಳಕದಲ್ಲಿ ಅಲ್ಲೋ ಇಲ್ಲೋ ಮಾಂಬಳ ಸಿದ್ಧವಾಗುತ್ತಿದೆ. ವಾರವಾರವೂ ಅಂಕಣದಲ್ಲಿ ಮಾಂಬಳ ಕಾಣಿಸಿಕೊಂಡಾಗ ರುಚಿಗೊತ್ತಿದ್ದ ಹಲವರಿಗೆ ನೆನಪಾಗದೆ ಇರದು.


ಮಾಂಬಳ ಅಂದರೆ ಕಾಡುಮಾವಿನ ಹಣ್ಣಿನ ರಸದ ಘನ ರೂಪ. ಮಾಡುವ ವಿಧಾನ : ಕಾಡು ಮಾವಿನ ಹಣ್ಣನ್ನು ತೊಳೆದು, ರಸವನ್ನು ಹಿಂಡಿ, ಅದನ್ನು ಬಿಸಿಲಿನಲ್ಲಿ ಒಣಗಿಸುವುದು. ಗೆರಸೆಯ (ಭತ್ತ, ಧಾನ್ಯ ಗೇರುವ) ಮೇಲೆ ಹತ್ತಿ ವಸ್ತ್ರವನ್ನು ಹಾಸಿ ಅದರ ಮೇಲೆ ರಸ ಎರೆಯಬೇಕು. ಮರುದಿವಸ ಹಣ್ಣಿನ ರಸವನ್ನು ಒಣಗಿದ ರಸದ ಮೇಲೆ ಪುನಃ ಎರೆಯುವುದು. ಹೀಗೆ ಹದಿನೈದು ದಿವಸದ ಲೇಯರ್. ಬಿಸಿಲಿನ ಸ್ನಾನದೊಂದಿಗೆ ಹದವಾದ ಘನ ವಸ್ತುವೇ ಮಾಂಬಳ.


ಪ್ರತಿ ಸಲ ಎರೆಯುವಾಗಲೂ ರುಚಿಗೆ ಸ್ವಲ್ಪ ಉಪ್ಪು ಸೇರಿಸಿ. ಬಿಸಿಲಿನಲ್ಲಿ ಒಣಗಿದಷ್ಟೂ ತಾಳಿಕೆ ಹೆಚ್ಚು. ಕೊನೆಗೆ ಮಾಂಬಳವನ್ನು ಕಟ್ ಮಾಡಿ. ಪುನಃ ಐದಾರು ದಿವಸದ ಬಿಸಿಲಿನ ಸ್ನಾನ. ನಂತರ ರೋಲ್ ಮಾಡಿ ಭದ್ರವಾಗಿ ತೆಗೆದಿಡಿ. ರೋಲ್ ಮಾಡುವ ಹೊತ್ತಿಗೆ ಉಪ್ಪಿನ ಹುಡಿಯನ್ನು ತೆಳುವಾಗಿ ಲೇಪಿಸಲು ಮರೆಯದಿರಿ - ಎಂಬ ಅನುಭವ ಹಂಚಿಕೊಳ್ಳುತ್ತಾರೆ ಸಜಂಕಬೆಟ್ಟಿನ (ದ.ಕ.) ಶಾರದಾ ಶರ್ಮ. ಮಾವಿನ ರುಚಿ ಸಿಹಿ-ಹುಳಿಯನ್ನು ಹೊಂದಿಕೊಂಡು ಮಾಂಬಳದ ರುಚಿ.


ಹದಿನೈದು ಲೇಯರ್ನಲ್ಲಿ ಸಿದ್ಧಗೊಂಡ ಮಾಂಬಳವು ಅರ್ಧ ಇಂಚು ದಪ್ಪವಾಗಿರುತ್ತದೆ. ಸರಿಯಾದ ಬಿಸಿಲಿನ ಸ್ನಾನದೊಂದಿಗೆ ಸಿದ್ಧವಾದ ಮಾಂಬಳವು ಒಂದು ವರುಷವಾದರೂ ಕೆಡದು. ತಂಪು ಪೆಟ್ಟಿಗೆಯಲ್ಲಿಟ್ಟರೆ ಬಾಳ್ವಿಕೆ ಹೆಚ್ಚು. ಕಾಡು ಮಾವಿನ ಹಣ್ಣಿನ ರಸ ದಪ್ಪವಾದಷ್ಟು ಒಳ್ಳೆಯದು. ತೆಳುವಾಗಿದ್ದರೆ ಒಣಗುವುದಿಲ್ಲ. ಗುಣಮಟ್ಟವೂ ಸಿಗುವುದಿಲ್ಲ. ಹೈಬ್ರಿಡ್ ಮಾವಿನ ಹಣ್ಣು ಕಾಡು ಮಾವಿನಷ್ಟು ರಸ ಬಿಟ್ಟುಕೊಡದ ಕಾರಣ ಮಾಂಬಳಕ್ಕೆ ಅಷ್ಟಕ್ಕಷ್ಟೇ.


ಐವತ್ತು ವರುಷದ ಹಿಂದೆ ಸೊಸೈಟಿಗೆ ಅಡಿಕೆ ಹಾಕುವ ಮಂದಿ ತಂತಮ್ಮ ಮನೆಯಲ್ಲಿ ಮಾಡಿದ ಮಾಂಬಳವನ್ನು ತಂದು ಅಲ್ಲಿನ ಸಿಬ್ಬಂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಹಳೆಯ ನೆನಪನ್ನು ಕೆದಕಿದರು ಸಜಂಕಬೆಟ್ಟು ಕೃಷ್ಣ ಶರ್ಮ.


ಶಾರದಾ ಶರ್ಮರು ಪ್ರತೀ ವರುಷ ಮಾಂಬಳ ಮಾಡುತ್ತಾರೆ. ಆಪ್ತೇಷ್ಟರಿಗೆ ಹಂಚುತ್ತಾರೆ. ಚಿಕ್ಕಚಿಕ್ಕ ಚೂರುಗಳನ್ನಾಗಿ ಮಾಡಿಟ್ಟುಕೊಂಡರೆ ಮಕ್ಕಳಿಗೆ ಚಾಕೊಲೆಟ್ನಂತೆ ಕೊಡಬಹುದು. ಮಕ್ಕಳು ಇಷ್ಟಪಡುತ್ತಾರೆ. ತೆಂಗಿನಕಾಯಿ ಹಾಕಿದ್ದು ಮತ್ತು ಹಾಕದೇ ಮಾಡುವ ಮಾಂಬಳದ ಗೊಜ್ಜು ಬಹಳ ರುಚಿ. ಬೆಳ್ತಿಗೆ ಅನ್ನಕ್ಕೆ ಒಳ್ಳೆಯ ಕಾಂಬಿನೇಶನ್.


ಕಾಡು ಮಾವಿನ ಹಣ್ಣಿನ ರಸದಿಂದ ಮಾಡಿದ ಕಾರಣ ಮಾಂಬಳ. ಹಲಸಿನ ಹಣ್ಣಿನದ್ದಾದರೆ ಅದು ಹಂಬಳ - ಎಂಬ ಹೊಸ ರುಚಿಯನ್ನು ಪರಿಚಯಿಸುತ್ತಾರೆ ಪಾಕತಜ್ಞೆ ದೈತೋಟದ ಜಯಕ್ಕ.

Tuesday, October 4, 2011

ನವರಾತ್ರಿಯ 'ಸುಂದರ'ನ ವೇಷ

ಸಂಜೆ ಆರರ ಸಮಯ. ಕಚೇರಿಯಲ್ಲಿದ್ದೆ. ಅಸಹ್ಯ ಉಡುಪಿನ 'ಪುರುಷ-ಪ್ರಕೃತಿ' ವೇಷಗಳ ಆಗಮನ. ಆಶ್ಲೀಲವಾದ ಮಾತುಗಳು. ಕಣ್ಣು ಮುಚ್ಚಿಕೊಳ್ಳುವ ವರ್ತನೆಗಳು. ವಾಕರಿಕೆ ತರುವ ಭಂಗಿಗಳು. ಐದು ರೂಪಾಯಿ ಕೈಗೆ ಕುಕ್ಕಿದೆ. ಟಾ ಟಾ ಮಾಡಿಕ್ಕೊಂಡು ಹೊರಟು ಹೋದುವು. ಇದು ನವರಾತ್ರಿ ವೇಷಗಳ ಸುಲಿಗೆಯ ಒಂದು ರೂಪ.

'ನಿಮ್ಮ ಪುಣ್ಯ ಮಾರಾಯ್ರೆ. ಆ ವೇಷಗಳು ಮೈಮೇಲೆ ಬಿದ್ದು ಕಿಸೆಗೆ ಕೈಹಾಕಿ ದೋಚುತ್ತವೆ' ಎಂದು ನೆರೆಯವರು ಅಂದಾಗ 'ಆ ಪ್ರಾರಬ್ಧ ನನಗಾಗಲಿಲ್ಲ, ಬದುಕಿದೆ' ಎಂದು ಸಮಾಧಾನ ಪಟ್ಟುಕೊಂಡೆ. ನವರಾತ್ರಿಯಲ್ಲಿ ಪ್ರತ್ಯಕ್ಷವಾಗುವ 'ದೋಚುವ ಪ್ರವೃತ್ತಿಯ ವೇಷಗಳಿಗೆ ಕಡಿವಾಣ ಹಾಕುವವರಿಲ್ಲವೇ' ಎಂಬ ಮಾಮೂಲಿ 'ಒಣಭಾಷೆ'ಯಲ್ಲಿ ಪತ್ರಿಕೆಗಳ 'ಸಂಪಾದಕರಿಗೆ ಪತ್ರ' ವಿಭಾಗಕ್ಕೆ ಬರೆಯಬಹುದಿತ್ತು. ಪ್ರಯೋಜನ?

ಈ ರೀತಿಯ ವೇಷಗಳ ಉದ್ದೇಶ ಹೊಟ್ಟೆಪಾಡು. ಸಮಯ ಕೊಲ್ಲುವ ಪ್ರಕ್ರಿಯೆ. ದೇವ-ದೇವತೆಯರ ವೇಷ ಹಾಕಿ ಅಸಹ್ಯ ಹುಟ್ಟಿಸುವ ವರ್ತನೆಗಳು ಎಷ್ಟು ಬೇಕು? ರಾಮ, ಕೃಷ್ಣ ವೇಷತೊಟ್ಟು ರಾಜಾರೋಷವಾಗಿ 'ಬೀಡಿ ಸೇದಿ ನಿರುಮ್ಮಳ'ವಾಗಿರುವವರು ಎಷ್ಟು ಬೇಕು? ಪುತ್ತೂರು ಪೇಟೆಯಲ್ಲಿ ಮೂರ್ನಾಲ್ಕು ದಿನಗಳಿಂದ ಮಹಿಷಾಸುರ, ಚಂಡ ಮುಂಡರ ಪ್ರವೇಶವಾಗಿದೆ! ಹುಲಿ, ಸಿಂಹ, ಕರಡಿಗಳು ಆರ್ಭಟಿಸುತ್ತಿವೆ! ಅವುಗಳಲ್ಲಿ ಕೆಲವು ಶಾಂತ, ಕೆಲವು ಘೋರ. ಇನ್ನೂ ಕೆಲವು ಭೀಭತ್ಸ!

ಇರಲಿ, ನವರಾತ್ರಿಯ ವೇಷ ಅಂದಾಗ ನನ್ನ ಹುಟ್ಟೂರಿನ ಸಮಾನ ಪ್ರಾಯದ ಸುಂದರ ನೆನಪಾಗುತ್ತಾನೆ. ನಾಲ್ಕನೇ ತರಗತಿಯ ತನಕ ಒಂದೇ ಅಧ್ಯಾಪಕರಲ್ಲಿ ಓದಿದವರು. ನಂತರ ಅವನು ಯಾಕೋ ಶಾಲೆಗೆ ಕೊಕ್. ಕೂಲಿ ಮಾಡಿ ಜೀವನ. ಅವನ ತಂದೆ ಮಾಂಕು. ನಮ್ಮಲ್ಲಿಗೆ ಆತ್ಮೀಯ. ಸೀಸನ್ನಿನಲ್ಲಿ ಕಾಡುಹಣ್ಣುಗಳನ್ನು ಎಲೆಯಲ್ಲಿ ಕಟ್ಟಿ ತಂದುಕೊಡುವಷ್ಟು, ಜೇನು ತುಪ್ಪವನ್ನು ಎಲೆಯ ದೊನ್ನೆಯಲ್ಲಿ ಹಿಡಿದು ತರುವಷ್ಟು ಆತ್ಮೀಯ.

ಮಾಂಕು ಮನೆಯಿಂದ ಹೊರಟರೆ ಸಾಕು, ಅವರನ್ನು ಕಾದು ಕುಳಿತುಕೊಳ್ಳುವ ಮಕ್ಕಳು ಅನೇಕ. ತೆಂಗಿನ ಹಸಿ ಮಡಲಿನಿಂದ ಗಾಳಿಪಟ, ಗಿಳಿಗಳನ್ನು ಸ್ಥಳದಲ್ಲೇ ತಯಾರು ಮಾಡಿ, ಡೆಮೋ ಕೊಟ್ಟು ಮಕ್ಕಳಿಗೆ ಫ್ರೀಯಾಗಿ ಹಂಚುತ್ತಿದ್ದರು. ದೊಡ್ಡ ಮರದಲ್ಲಿದ್ದ ಹಕ್ಕಿಗಳನ್ನೋ, ಹಣ್ಣನ್ನೋ ಹೊಡೆದುರುಳಿಸಲು ಸಲಕೆಯಿಂದ ಬಿಲ್ಲು-ಬಾಣಗಳನ್ನು ತಯಾರಿಸುತ್ತಿದ್ದರು.

ಸುಂದರ ಹಾಗಲ್ಲ. ಬಾಲ್ಯದಿಂದಲೇ ಕಲಾಪ್ರಿಯ. ಯಕ್ಷಗಾನದ ನಂಟೂ ಇತ್ತು. 'ಅವ ಸುಂದರನ ವೇಷ ಬತ್ತ್ಂಡ್ (ಸುಂದರ ವೇಷ ಪ್ರವೇಶವಾಯಿತು) ಎಂದು ಅವನ ಆಪ್ತರು ಮಲಗಿದ್ದವರನ್ನು ಎಬ್ಬಿಸುತ್ತಿದ್ದ ದೃಶ್ಯ ನೆನಪಾಗುತ್ತದೆ.

ದಿನಗಳು ಉರುಳುತ್ತಿತ್ತು. ನವರಾತ್ರಿ ಸಮಯ. 'ಇನಿ ಸುಂದರನ ಕೊರಗ ವೇಷ ಬರ್ಪುಂಡ್' (ಸುಂದರನ ಕೊರಗ ವೇಷ ಬರುತ್ತದೆ) ಮಕ್ಕಳಾಡಿಕೊಳ್ಳುತ್ತಿದ್ದರು. ಮಾಂಕು, ಸುಂದರ ಸನಿಹದ ಐದಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಳ್ಳೆಯ ಸಂಬಂಧ ಹೊಂದಿದ್ದರಿಂದಲೇ ಸುಂದರನ ಕೊರಗ ವೇಷಕ್ಕೆ ಅಷ್ಟೊಂದು ನಿರೀಕ್ಷೆ, ಜನಪ್ರಿಯತೆ.

ಅಂದು ಬೆಳಿಗ್ಗೆ ಸನಿಹದ ಪಯಸ್ವಿನಿ ನದಿಯಲ್ಲಿ ಮಿಂದು, ಶುಚಿರ್ಭೂತನಾಗಿ, ದೇವಾಲಯಕ್ಕೆ ಹೋಗಿ ಪ್ರಸಾದ ಸ್ವೀಕರಿಸಿದ ಬಳಿದ 'ಕೊರಗ ವೇಷಕ್ಕೆ ತಯಾರಿ' ಮಾಡುತ್ತಿದ್ದ. ಅವನ ಪಾಲಿಗೆ ಅದು ವೇಷವಲ್ಲ, ಹರಕೆ. ಅಲ್ಲಿರುವುದು ಭಯ-ಭಕ್ತಿ. ಮೈಯಲ್ಲೊಂದು ತುಂಡು ಬಟ್ಟೆ, ಕಾಯ ಪೂರ್ತಿ ಕೃಷ್ಣವರ್ಣ. ಶಿರದಲ್ಲೊಂದು ಪೂಗದ ಹಾಳೆಯ ಮುಟ್ಟಾಳೆ, ಅದರ ಎರಡೂ ಬದಿಗೆ ಹೂವಿನ ಗೊಂಚಲು, ಕೊರಳಲ್ಲಿ ಹೂವಿನ ಮಾಲೆ, ಕೈಯಲ್ಲೊಂದು ಕೊಳಲು, ಕಾಲಿಗೆ ಗೆಜ್ಜೆ.. ಇವಿಷ್ಟು ವೇಷದ ಪರಿಕರಗಳು.

ಆರಂಭದಲ್ಲಿ ದೇವಸ್ಥಾನದಲ್ಲಿ ಸೇವೆ. ನಂತರ ಆಪ್ತರ ಮನೆಗಳಿಗೆ ಭೇಟಿ. ಜೊತೆಗೆ ಮಾಂಕೂ ಇರುತ್ತಿದ್ದ. ಒಂದೈದು ನಿಮಿಷ ಕುಣಿದು, ಮನೆಯವರು ಕೊಟ್ಟ ಬಾಯಾರಿಕೆ-ತಿಂಡಿ ತಿನ್ನುತ್ತಾನೆ. ಜತೆಗೆ ಊರಿನ ಸುದ್ದಿಗಳ ವಿನಿಮಯ ಹಣ, ಭತ್ತ, ತರಕಾರಿಗಳನ್ನು ಚೀಲಕ್ಕೆ ಸೇರಿಸುತ್ತಿದ್ದಂತೆ ಸುಖ ದುಃಖ ವಿನಿಮಯ. ಮತ್ತೊಂದು ಮನೆಗೆ ಪ್ರಯಾಣ. ಹೀಗೆ ಸುಮಾರು ಐವತ್ತಕ್ಕೂ ಮಿಕ್ಕಿ ಮನೆಗಳ ಭೇಟಿ.

ಸುಂದರನ ವೇಷ ಬರುವಾಗ ನಮ್ಮ ನಗರದ ಮನೆಗಳಂತೆ ಯಾರೂ ಬಾಗಿಲು ಹಾಕುವುದಿಲ್ಲ. 'ಮನೆಯಲ್ಲಿ ಯಾರೂ ಇಲ್ಲ' ಅಂತ ಮಕ್ಕಳಲ್ಲಿ ಹೇಳಿಸುವುದಿಲ್ಲ. ನಾಣ್ಯವನ್ನು ಬಿಸಾಡುವುದಿಲ್ಲ. ಮುಕ್ತ ಸ್ವಾಗತ. ಒಂದು ವಾರದ ಕುಣಿತದ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ವೇಷ ಕಳಚಿ ಊರಿಗೆ ಮರಳಿದಲ್ಲಿಗೆ 'ಹರಕೆ' ಮುಗಿಯುತ್ತದೆ.

ನಮ್ಮ ತಾತನ ಕಾಲದಿಂದಲೇ 'ಕೊರಗ ವೇಷದ ಹರಕೆ' ಇದೆ. ನನಗೆ ಪ್ರಾಯವಾಯಿತು. ಈಗ ನನ್ನ ಮಗ ಮಾಡ್ತಾನೆ. ಅವನ ನಂತರ ಯಾರೆಂಬುದು ಅವನೇ ನಿರ್ಧಾರ ಮಾಡ್ತಾನೆ' ಎಂದು ಇಳಿ ವಯಸ್ಸಿನ ಮಾಂಕು ಹೇಳಿದ್ದರು.
ಮಾಂಕು ಇದನ್ನೆಂದೂ ಹೊಟ್ಟೆಪಾಡಿನ ವೃತ್ತಿಯನ್ನಾಗಿ ಮಾಡಿಕೊಂಡಿಲ್ಲ. ನಂತರದ ದಿನಗಳಲ್ಲಿ ಸುಂದರ 'ಕರಡಿ, ಹುಲಿ' ಅಂತ ವೇಷಾಂತರವಾಗಿದ್ದ. ಆಗಲೂ 'ಸುಂದರನ ಕೊರಗ' ವೇಷದ ಬದಲಿಗೆ 'ಸುಂದರನ ಕರಡಿ' ಎಂದು ಜನರೇ ಹೆಸರನ್ನು ಬದಲಾಯಿಸಿದ್ದರು.

ಈಚೆಗೊಮ್ಮೆ ಸಿಕ್ಕಿದ್ದ. 'ನವರಾತ್ರಿ ಬಂತಲ್ವಾ ಮಾರಾಯ. ವೇಷ ಇಲ್ವಾ' ಕೇಳಿದೆ. 'ತಂದೆಯವರ ನೆನಪಿಗಾಗಿ ಒಂದು ದಿವಸ ಕೊರಗ ವೇಷ ಹಾಕ್ತೇನೆ' ಎಂದಿದ್ದ. ನಂತರ ಹೊಟ್ಟೆಪಾಡಿಗಾಗಿ ಕರಡಿಯನ್ನು ಆವಾಹಿಸಿಕೊಳ್ಳುತ್ತಾ ಪುತ್ತೂರಿಗೂ ಬರುವುದುಂಟಂತೆ. ಅವನ ವೇಷವನ್ನು ನೋಡಲು ಕಾಯುತ್ತಿದ್ದೇನೆ!

ಸುಂದರನಂತೆ ಮತ್ತೂ ಒಂದಿಬ್ಬರು ಹಿರಿಯರು ಕೊರಗ ವೇಷ ಧರಿಸುತ್ತಿದ್ದರು. ಹರಕೆಯ ಭಯ-ಭಕ್ತಿಯ ಹಿನ್ನೆಲೆಯಲ್ಲಿ ಇವು ರೂಪುಗೊಳ್ಳುತ್ತವೆ. ಇದರಲ್ಲಿ ಆರಾಧನೆಯ ಉದ್ದೇಶವಿದೆ. ಸಾಮಾಜಿಕವಾದ ಸ್ಪಂದನವಿದೆ. ಯಾರೂ ಕೂಡಾ ಜಾತಿ ಎತ್ತಿ ಮಾತನಾಡಿದ್ದನ್ನು ನಾನು ನೋಡಿಲ್ಲ. ಗೇಲಿ ಮಾಡಿದ್ದಿಲ್ಲ. ಬದುಕಿನ ಪಥದಲ್ಲಿ ಹಾದುಹೋಗುವ ಇಂತಹ ಕ್ಷಣಗಳನ್ನು ಪ್ರಶ್ನಿಸುವ, ಪೋಸ್ಟ್ಮಾರ್ಟಂ ಮಾಡುವ, ಅಡ್ಡಮಾತುಗಳಿಂದ ವಿಮರ್ಶಿಸುವ ಪ್ರವೃತ್ತಿ ಎಲ್ಲಿಂದ ಆರಂಭವಾಯಿತೋ; ಅಲ್ಲಿಂದ ವೇಷಗಳ, ಬದುಕಿನ ಅರ್ಥಗಳಿಗೆ ಕ್ಷೀಣನೆ. ಇದನ್ನೇ 'ಬೌದ್ಧಿಕ ಅಭಿವೃದ್ಧಿ' ಎಂದು ನಂಬಿದ್ದೇವೆ.

ಈಗಿನ ಸ್ಥಿತಿಗೆ ಅಂದಿನ ಬದುಕನ್ನು ಸಮೀಕರಿಸೋಣ. ಯಾವುದೇ ವೇಷ ತೊಡಿ. ಅಲ್ಲೆಲ್ಲಾ ಜಾತಿ, ಧರ್ಮದ ಲೇಪ ಅಂಟಿಕೊಳ್ಳುತ್ತದೆ. ರಾಜಕೀಯ ಸ್ಪರ್ಶವಿರುವ ಮಂದಿಯ ಪ್ರವೇಶವಾಗುತ್ತದೆ. ದಿಢೀರ್ ಸಮಾಜ ಸುಧಾರಕರು ಸೃಷ್ಟಿಯಾಗುತ್ತಾರೆ. 'ಜಾತಿ ನಿಂದನೆ, ವ್ಯಕ್ತಿ ನಿಂದನೆ' ಎನ್ನುವ ಹೊಸ ಅವತಾರದ ಆರೋಪಗಳು ರಾಚುತ್ತವೆ. ಇವುಗಳ ಮಧ್ಯೆ ನಿಜವಾದ 'ನವರಾತ್ರಿ ವೇಷ'ದ ಹಿಂದಿನ ಭಾವನೆಗಳು, ಭಕ್ತಿಗಳು ನುಣುಚಿಹೋಗುತ್ತವೆ. ಇದಕ್ಕೆ ಕಾಲದ ಬದಲಾವಣೆ ಎನ್ನಬೇಕೋ, ಕಾಲವೇ ನಮ್ಮನ್ನು ಬದಲಿಸಿತು ಎಂದು ನಂಬೋಣವೋ?

Monday, October 3, 2011

ಇಲ್ಲಿ ತರಕಾರಿ, ಹವಾಯ್ಯಲ್ಲಿ 'ಕಳೆ'!

ಕರಾವಳಿಯ ಅಡುಗೆಗಳಲ್ಲಿ ತೊಂಡೆಕಾಯಿ ವ್ಯಾಪಕ. ಗೇರುಬೀಜ ಸೇರಿಸಿದ ಅದರ ಪಲ್ಯ, ಕಾಯಿಹುಳಿ, ಎಳೆಯದ್ದರ ಉಪ್ಪಿನಕಾಯಿ.. ಹೀಗೆ ಹಲವು. ತೊಂಡೆಯನ್ನೇ ಕೃಷಿ ಮಾಡುವ ಕೃಷಿಕರೂ ಧಾರಾಳ. ಬೇಡಿಕೆ, ಮಾರುಕಟ್ಟೆಯೂ ಚೆನ್ನಗಿದೆ. ಇದು ಕನ್ನಾಡಿನ ಕತೆ.

ಅತ್ತ ಹವಾಯ್ಯಲ್ಲಿ ತೊಂಡೆಕಾಯಿ ಕಳೆ! ಅದನ್ನು ಕಂಡರೆ ಸಾಕು, ಯಾಕೋ ಅಲರ್ಜಿ! ರೌಂಡ್ಅಪ್ ಎಂಬ ವಿಷವನ್ನು ಸಿಂಪಡಿಸಿ ಸಮೂಲ ನಾಶಮಾಡುತ್ತಾರೆ. 'ಅದು ತಿನ್ನಲು ಬರುತ್ತದೆ' ಎಂದು ಗೊತ್ತಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆ ಕರಾವಳಿಗೆ ಬಂದಿದ್ದ ಹವಾಯಿಯ ಹಣ್ಣು ಕೃಷಿಕ ಕೆನ್ಲವ್ ತೊಂಡೆಯ ಖಾದ್ಯವನ್ನು ಸವಿದು, 'ನಮ್ಮೂರಲ್ಲಿ ಇದನ್ನು ನಾಶ ಮಾಡದಂತೆ ಕೃಷಿಕರಿಗೆ ಹೇಳುತ್ತೇನೆ' ಎಂದಿದ್ದರು.

ಈಚೆಗೆ ಹಿರಿಯ ಪತ್ರಕರ್ತ 'ಶ್ರೀ' ಪಡ್ರೆಯವರು ಹವಾಯಿ ದ್ವೀಪ ಸಮೂಹವನ್ನು ಸಂದರ್ಶಿಸಿದ್ದರು. ಅಲ್ಲಿನ ಹಣ್ಣು ಬೆಳೆಗಾರರ ಸಂಘವು ತಮ್ಮ ವಾರ್ಷಿಕ ಸಮಾವೇಶಕ್ಕೆ ಪಡ್ರೆಯವರನ್ನು ಕರೆಸಿ ದಿಕ್ಸೂಚಿ ಭಾಷಣ ಮಾಡಿಸಿತ್ತು. ಭಾರತದ ಹಣ್ಣುಗಳ ಪರಿಚಯ, ಮೌಲ್ಯವರ್ಧನೆಯತ್ತ ಬೆಳಕು. 'ಮುಂದಿನ ಸಮಾವೇಶಕ್ಕೆ ನೀವು ಕರೆಸಿಕೊಳ್ಳುವುದಿದ್ದರೆ, ಅದಕ್ಕಿಂತ ಮುಂಚೆ ನಿಮ್ಮ ಊಟದ ಬಟ್ಟಲಿಗೆ ತೊಂಡೆಕಾಯಿ ಬರಲಿ' ಎಂದು ಹಾರೈಸಿದ್ದರಂತೆ! ಅವರ ಪ್ರವಾಸ ಅನುಭವದ ಕೆಲವು 'ಝಲಕ್' ಇಲ್ಲಿದೆ.

ಹವಾಯ್ಯಲ್ಲಿ ಅರ್ಧ ಎಕರೆಯಿಂದ ಐದು ಎಕರೆ ತನಕ ಕೃಷಿ ಭೂಮಿ ಹೊಂದಿದ ಕೃಷಿಕರಿದ್ದಾರೆ. ಬಹುತೇಕರ ಕೃಷಿ ಹಣ್ಣು. ಕೃಷಿಕರೇ ವ್ಯಾಪಾರಿಗಳು. ಫಾರ್ಮರ್ಸ್ ಮಾರ್ಕೆಟ್ನಲ್ಲಿ ವ್ಯಾಪಾರ ಮಾಡುವ ವಸ್ತುಗಳಿಗೆ ಧಾರಣೆಯನ್ನು ಬೆಳೆದವರೇ ನಿಗದಿ ಮಾಡುತ್ತಾರೆ.
ಹಣ್ಣುಗಳ ವೈವಿಧ್ಯವೇ ಹವಾಯಿಗಳ ಬಂಡವಾಳ. ಹವಾಮಾನ ವ್ಯತ್ಯಾಸದಿಂದಾಗಿ ಒಂದೇ ದೇಶದಲ್ಲಿ ಬೇರೆ ಬೇರೆ ನಮೂನೆಯ ಭೌಗೋಳಿಕ ಸ್ಥಿತಿ. ಹಾಗಾಗಿ ವರುಷದ ಉದ್ದಕ್ಕೂ ವೈವಿಧ್ಯದ ಹಣ್ಣುಗಳು ಲಭ್ಯ. ಬೆಳೆಯುವಷ್ಟು ಪ್ರಮಾಣದಲ್ಲಿ ಮೌಲ್ಯವರ್ಧನೆ ಆಗುತ್ತಿಲ್ಲ.

ಚಿಕ್ಕ ಚಿಕ್ಕ ಯಂತ್ರಗಳ ಬಳಕೆ ಹೆಚ್ಚು. ಹಣ್ಣುಗಳನ್ನು, ಸಾಮಗ್ರಿಗಳನ್ನು ಅತ್ತಿತ್ತ ಒಯ್ಯಲು ತಲೆಹೊರೆ ಬದಲಿಗೆ ಮಡಚು ಕೈಗಾಡಿಗಳು. ಹಣ್ಣು ಕೊಯ್ಯಲು ಉದ್ದನೆಯ ಕೊಕ್ಕೆ. ಅದು ಹಣ್ಣನ್ನು ಕೊಯಿದು, ಅಲ್ಲೇ ಹಿಡಿದಿಟ್ಟುಕೊಳ್ಳುತ್ತದೆ. ಕೆಳಗೆ ಬಿದ್ದು ಹಾಳಾಗದು.
'ನಾನು ವಿಮಾನ ಇಳಿಯುತ್ತಿದ್ದಂತೆಯೇ ನಿಲ್ದಾಣದ ಸುತ್ತ ತೆಂಗಿನಮರಗಳನ್ನು ನೋಡಿದೆ' ಎನ್ನುತ್ತಾರೆ ಪಡ್ರೆ. ತೆಂಗಿನಮರಗಳ ಸಾಕಣೆ ಅಲಂಕಾರಿಕವೂ ಹೌದು, ಕೃಷಿಯೂ ಹೌದು. ವಸತಿಗೃಹಗಳಲ್ಲಿ ಲೋಶನ್, ಸಾಬೂನು, ಎಣ್ಣೆ.. ಹೀಗೆ ಹಲಸು ತೆಂಗಿನ ಉತ್ಪನ್ನಗಳು. ತೆಂಗಿನ ಕಾಯಿಯ ಸಿಪ್ಪೆ ತೆಗೆಯಲು ಅಲ್ಲಿಯವರಿಗೆ ಗೊತ್ತಿಲ್ಲ! ನಮ್ಮೂರಿನ ತೆಂಗಿನ ಸುಲಿ ಸಾಧನ ಹವಾಯ್ಯಲ್ಲಿ ಕ್ಲಿಕ್ ಆಗಬಹುದೋ ಏನೋ!

ಗೋಸಂಪಿಗೆ ಹೂವು ಪ್ರತಿಷ್ಠೆಯ ದ್ಯೋತಕ. ಕಿವಿಯಲ್ಲಿ ಹೂವನ್ನಿಟ್ಟುಕೊಳ್ಳುವುದು, ಮಾಲೆ ಧರಿಸಿಕೊಳ್ಳುವುದು, ಹೂವಿನಂತಹ ರಚನೆಯ ಕಿವಿ ಆಭರಣ..ಗಳು ಜನಪ್ರಿಯ. ಅದನ್ನು ಬೆಳೆಯುವುದು, ಗಿಡಗಳನ್ನು ಹಂಚುವುದು ಪ್ರೀತಿ. ಹೂವನ್ನು ಬಲಕಿವಿಯಲ್ಲಿಟ್ಟರೆ ಅವಿವಾಹಿತೆ, ಎಡಕಿವಿಯಲ್ಲಿಟ್ಟರೆ ವಿವಾಹಿತೆ ಎಂಬರ್ಥವೂ ಇದೆಯಂತೆ.

ನಮ್ಮೂರಿನಲ್ಲಿದ್ದಂತೆ 'ಆಸ್ತಿ ಮಾರಾಟಕ್ಕಿದೆ' ಎಂಬ ಫಲಕಗಳು ಕಾಣಸಿಗುತ್ತವೆ! ಭೂಮಿಯ ಬೆಲೆ ಏರುತ್ತಿದೆ! ಕಾರ್ಮಿಕ ಸಮಸ್ಯೆ ಮತ್ತು ರೋಗಬಾಧೆಯಿಂದಾಗಿ ಮುಖ್ಯ ಆರ್ಥಿಕ ಉತ್ಪನ್ನ ಕಾಫಿಗೆ ಕುತ್ತು. 'ವೈವಿಧ್ಯತೆಯಿಲ್ಲದೆ ಬದುಕಿಲ್ಲ' ಎಂದರಿತ ಹಣ್ಣು ಕೃಷಿಕ ಕೆನ್ಲವ್, ಕೃಷಿಕರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕಾಫಿಯನ್ನು ಮಾತ್ರ ನೆಚ್ಚಿಕೊಂಡರೆ ಸಾಲದು, ಜತೆಗೆ ವರ್ಷಪೂರ್ತಿ ಸಿಗುವ ಹಣ್ಣುಗಳ ಕೃಷಿಯತ್ತ ಕೃಷಿಕ ಒಲವನ್ನು ಪರಿವರ್ತಿಸಿದ ಸಾಹಸಿ.

ಒಂದು ತೆಂಗಿನ ಮರವೇರಿ ಕಾಯಿ ಕೊಯ್ಯಲು, ಮರವನ್ನು ಟ್ರಿಂ ಮಾಡಲು ಒಬ್ಬನಿಗೆ ಗಂಟೆಗೆ ಹತ್ತು ಡಾಲರ್ ಸಂಬಳ. ದಿವಸಕ್ಕೆ ನೂರು ಡಾಲರ್ ಸಂಪಾದನೆ ಮಾಡುವ ತಜ್ಞರೂ ಇದ್ದಾರೆ. ಪ್ರವಾಸಿಗರಿಗೆ ಬೇಕಾದಂತೆ ಆಹಾರ ಉದ್ಯಮ ಅಭಿವೃದ್ಧಿಯಾಗಿದೆ. ಮನೆಮನೆಗಳಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿವೆ. ಕೆನ್ಲವ್ ದಂಪತಿಗಳು ನೂರೈವತ್ತಕ್ಕೂ ಮಿಕ್ಕಿ ಉತ್ಪನ್ನಗಳನ್ನು ಸಿದ್ಧಪಡಿಸುತ್ತಾರೆ.

ವಿಶ್ರಾಂತ ಜೀವನವನ್ನು ಕಳೆಯಲು ಬರುವವರ ಸಂಖ್ಯೆ ಹೆಚ್ಚು. ಹಾಗಾಗಿ ಪ್ರವಾಸೋದ್ಯಮ ದೊಡ್ಡ ರೀತಿಯಲ್ಲಿ ಬೆಳೆದಿದೆ, ಬೆಳೆಯುತ್ತಿದೆ. ನೈಸರ್ಗಿಕ ಸಂಪತ್ತನ್ನು ಸಮರ್ಥವಾಗಿ ಬಳಸಿಕೊಂಡ ದೇಶವದು. ಅಗ್ನಿಪರ್ವತ ಕಂಡರೆ ಬೆಚ್ಚಿ ಬೀಳುವುದಿಲ್ಲ. ಅದು ಅವರಿಗೆ ಸಹ ಜೀವಿ.

ಆಸಕ್ತರಿಗೆ ಜಾಲತಾಣ : www.hawaiitropicalfruitgrowers.org, www.hawaiifruit.net


Saturday, October 1, 2011

ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ನೀಡುತ್ತಿರುವ ರಾಜ್ಯಮಟ್ಟದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಜಿ. ಗಣಪತಿ ಭಟ್ ಹಾಗೂ ಲೀಲಾ ನಾ. ಕೌಜಗೇರಿ ಅವರು ಆಯ್ಕೆಯಾಗಿದ್ದಾರೆ. ಕನ್ನಡದಲ್ಲಿ ಅರ್ಥಪೂರ್ಣ ಕೃಷಿಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಕಳೆದ ಹತ್ತು ವರ್ಷಗಳಿಂದ ಈ ಪ್ರಶಸ್ತಿ ನೀಡುತ್ತಿದೆ.

ರಾಮನಗರ ಜಿಲ್ಲೆ, ಕನಕಪುರ ತಾಲೂಕಿನ ಹಾರೋಹಳ್ಳಿಯ ಕೃಷಿಕ ಜಿ. ಗಣಪತಿ ಭಟ್ ಬರೆದ 'ತೋಟಗಾರಿಕೆಯ ಕುರಿಯನ್ ಡಾ. ಮರಿಗೌಡ' (ಅಡಿಕೆಪತ್ರಿಕೆ, ಏಪ್ರಿಲ್ 2011) ಹಾಗೂ ಬೆಳಗಾವಿಯ ಗೋಕಾಕ್ನಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿರುವ ಲೀಲಾ ನಾ. ಕೌಜಗೇರಿ ಬರೆದ 'ಅಜ್ಜಿಯೇ ಮಾರ್ಕೆಟಿಂಗ್ ಮ್ಯಾನೇಜರ್' (ಅಡಿಕೆ ಪತ್ರಿಕೆ, ನವೆಂಬರ್ 2010) ಲೇಖನಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಗಣಪತಿ ಭಟ್ ಹಾಗೂ ಲೀಲಾ ಕೌಜಗೇರಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಪ್ರಶಸ್ತಿ ಐದು ಸಾವಿರ ರೂಪಾಯಿ ನಗದು ಪುರಸ್ಕಾರ, ಪರಿಸರ ಶಿಲ್ಪ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 13, 2011ರಂದು ಧಾರವಾಡ ಸಮೀಪದ ದಡ್ಡಿಕಮಲಾಪುರ ಗ್ರಾಮದಲ್ಲಿರುವ 'ಸುಮನ ಸಂಗಮ' ಕಾಡುತೋಟದಲ್ಲಿ ನಡೆಯಲಿದೆ.