Monday, July 16, 2018

ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಹಲಸಿನ ಹಬ್ಬ





              ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಾಯದ 'ನಟರಾಜ ವೇದಿಕೆ'ಯಲ್ಲಿ 2018 ಜುಲೈ 11ರಂದು ಹಲಸಿನ ಹಬ್ಬ. ಪುತ್ತೂರಿನಲ್ಲಿ ಪ್ರಥಮವಾಗಿ ನಡೆದ ಹಬ್ಬದಲ್ಲಿ ಎಂಟು ಸಾವಿರಕ್ಕೂ ಮಿಕ್ಕಿ ಹಲಸು ಪ್ರೇಮಿಗಳು ಭಾಗವಹಿಸಿದ್ದರು. ಹಲಸಿನ ಸವಿಯನ್ನು ಉಂಡರು. ಹಲಸಿನ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡರು. ದಿನಪೂರತಿ ನಡೆದ ಹಬ್ಬದಲ್ಲಿ ದೂರದೂರಿನಿಂ ಹಲಸುಪ್ರೇಮಿಗಳು ಆಗಮಿಸಿರುವುದು ವಿಶೇಷ.
          ಕರ್ನಾಟಕದ ಕೇರಳಗಳಲ್ಲಿ ಕಳೆದ ಹತ್ತು ವರುಷಗಳಲ್ಲಿ ಏನಿಲ್ಲವೆಂದರೂ ಇನ್ನೂರಕ್ಕೂ ಮಿಕ್ಕಿ ಉತ್ಪನ್ನಗಳು ಸಿದ್ಧವಾಗಿ ಗ್ರಾಹಕರ ಉದರ ಸೇರುತ್ತಿವೆ, ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೂ ಸೇರುತ್ತಿವೆ. ಮೇಳಗಳು, ಕಾರ್ಯಾಗಾರಗಳು, ತರಬೇತಿ ಶಿಬಿರಗಳು ಖಾಸಗಿಯಾಗಿ ಸದ್ದಿಲ್ಲದೆ  ನಡೆಯುತ್ತಿವೆ. ಕೇರಳದಲ್ಲಿ ಮೂರು ಡಜನ್ನಿನಷ್ಟು ಮೌಲ್ಯವರ್ಧಿತ ಘಟಕಗಳು ಕಾರ್ಯಾಚರಿಸುತ್ತಿವೆ. ಚಿಪ್ಸ್, ಬೆರಟ್ಟಿಯಂತಹ ಸಾಂಪ್ರದಾಯಿಕ ಉತ್ಪನ್ನಗಳ ತಯಾರಿಯಲ್ಲದೆ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸುವ ಪ್ರಯೋಗಶೀಲತೆ ಹಬ್ಬುತ್ತಿದೆ. 
          ಇಷ್ಟೆಲ್ಲಾ ಹಲಸಿನ ವಿಚಾರಗಳನ್ನು ಹೇಳಬೇಕಾದರೆ ಅದಕ್ಕೆ ಆಂದೋಳನ ರೂಪ ನೀಡಿರುವುದು ಪುತ್ತೂರಿನ 'ಅಡಿಕೆ ಪತ್ರಿಕೆ' ಕೃಷಿ ಪತ್ರಿಕೆ. ಕಳೆದ ಹನ್ನೆರಡು ವರುಷಗಳಿಂದ ದೇಶ-ವಿದೇಶಗಳ ಹಲಸಿನ ಮೌಲ್ಯವರದಹಿತ ಉತ್ಪನ್ನಗಳ ಯಶೋಗಾಥೆಗಳನ್ನು ಪ್ರಕಟಿಸಿದೆ. ಪತ್ರಿಕೆಯು ಆಂದೋಳನವನ್ನು ಹುಟ್ಟು ಹಾಕಿದ ನೆಲದಲ್ಲೇ ಹಲಸಿನ ಹಬ್ಬ ನಡೆದಿರುವುದು ಮಹತ್ವದ ವಿಚಾರ.
          ಪುತ್ತೂರಿನ ನವಚೇತನ ಸ್ನೇಹ ಸಂಗಮವು ಹಲಸಿನ ಹಬ್ಬವವನ್ನು ಅನ್ಯಾನ್ಯ ಸಂಸ್ಥೆಗಳ ಪ್ರೋತ್ಸಾಹದಿಂದ ನಡೆಸಿದೆ. ಹಲಸು ಹಬ್ಬದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಎನ್.ಸುಧಾಕರ ಶೆಟ್ಟಿ ವಹಿಸಿದ್ದರು. ಹಿರಿಯ ಪತ್ರಕರ್ತ, ಹಲಸಿನ ಅಂತಾರಾಷ್ಟ್ರಿಯ ರಾಯಭಾರಿ ಶ್ರೀ ಪಡ್ರೆಯವರು ಹಲಸು ಕತ್ತರಿಸುವ ಮೂಲಕ ಹಬ್ಬವನ್ನು ಉದ್ಘಾಟಿಸಿದರು.
 

Thursday, July 12, 2018

ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆ



ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆಯಲ್ಲಿ – ಜುಲೈ 11, 2018 ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ, ಹಲಸಿನ ಜಾಗತಿಕ ರಾಯಭಾರಿ ಶ್ರೀ ಪಡ್ರೆಯವರನ್ನು ಗೌರವಿಸಿದ ಕ್ಷಣ. ಶ್ರೀ ಎಲ್.ಟಿ.ತಿಮ್ಮಪ್ಪ ಹೆಗಡೆಯವರಿಂದ ಗೌರವ ಪ್ರದಾನ. ಈ ಸಂದರ್ಭದಲ್ಲಿ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿಯವರಿಂದ ಉಪನ್ಯಾಸ. ಕ್ಯಾಂಪ್ಕೋ ಅಧ್ಯಕ್ಷ ಶ್ರೀ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆ. ಉಪಾಧ್ಯಕ್ಷ ಶ್ರೀ ಶಂಕರನಾರಾಯಣ ಭಟ್ (ಶಂ.ನಾ.ಖಂಡಿಗೆ), ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಂ.ಸುರೇಶ್ ಭಂಡಾರಿ ಉಪಸ್ಥಿತಿ.

Wednesday, July 4, 2018

ಆರಾಧನೆಗೆ ಥಳಕು ಹಾಕಿದ ಹಲಸು



            ಅದು ಹಳ್ಳಿ ದೇವಸ್ಥಾನ. ದೇವರಿಗಂದು ಹಲಸಿನ ಹಬ್ಬ! ಹಲಸಿನ ಹಣ್ಣಿನಿಂದ ಸಿದ್ಧಪಡಿಸಿದ 'ಅಪ್ಪ'ದ ನೈವೇದ್ಯ. ಪೂಜೆಯ ಬಳಿಕ ಅಪ್ಪ ಪ್ರಸಾದ ವಿತರಣೆ. ಕಾಸರಗೋಡು (ಕೇರಳ) ಜಿಲ್ಲೆಯ ಪಡ್ರೆ ಗ್ರಾಮದ ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ 'ಅಪ್ಪದ ಸೇವೆ'ಗೆ (ಹಲಸಿನ ಹಬ್ಬ) ಆರ್ಧ ಶತಮಾನಕ್ಕೂ ಮೀರಿದ ಇತಿಹಾಸ. ಜೂನ್ ಹದಿನೈದರಿಂದ ಜುಲೈ ಹದಿನೈದರೊಳಗೆ ಅನುಕೂಲಕರ ದಿವಸದಂದು ಆಚರಣೆ. 
            ಆರೇಳು ವರುಷಗಳಿಂದ ಹಬ್ಬಕ್ಕೆ ಮಾಧ್ಯಮ ಬೆಳಕು ಬಿದ್ದಾಗ ಅನೇಕರಿಗೆ ವಿಶೇಷವಾಗಿ ತೋರಿತು. ಹಿಮ್ಮಾಹಿತಿಯನ್ನು ಅಪೇಕ್ಷಿಸಿದರು. ದೂರದೂರಿನ ಆಸ್ತಿಕರು, ಹಲಸು ಪ್ರಿಯರು ಹಬ್ಬದತ್ತ ಉತ್ಸುಕರಾಗಿ ಬರಲಾರಂಭಿಸಿದರು. ಏನಿಲ್ಲವೆಂದರೂ ನೂರರಿಂದ ನೂರೈವತ್ತು ಮಂದಿ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಾರೆ. ಕರಪತ್ರಗಳಿಲ್ಲ, ಫ್ಲೆಕ್ಸಿಗಳಿಲ್ಲ, ಜಾಹೀರಾತಿಲ್ಲ. ಬಾಯ್ಮಾತಿನ ಪ್ರಚಾರ. ಹಿಂದಿನ ವರುಷ ಬಂದವರು ನೆನಪಿಟ್ಟುಕೊಂಡು ಬರುತ್ತಾರೆ. 'ಅಪ್ಪ' ಪ್ರಸಾದವನ್ನು ಸ್ವೀಕರಿಸಿ ಮರಳುತ್ತಾರೆ. ಈ ವರುಷ ೨೦೧೮ ಜೂ.24ರಂದು ಸೇವೆ ಜರುಗಿತ್ತು. ಎನ್ನುವ ಮಾಹಿತಿ ನೀಡಿದರು, ದೇವಳದ ಮೊಕ್ತೇಸರ ಡಾ.ವೈ.ಸುಬ್ರಾಯ ಭಟ್.
          ಹಲಸಿನ ಹಣ್ಣಿನ ಸಿಹಿತಿಂಡಿ 'ಮುಳುಕ'ವು ಪಾರಂಪರಿಕ ತಿಂಡಿ. ಮುಳುಕದ ತಮ್ಮ 'ಅಪ್ಪ'. ಕೇರಳದಲ್ಲಿ 'ನೈಅಪ್ಪ' (ತುಪ್ಪದಲ್ಲಿ ಕರಿದ ಅಪ್ಪ) ಪ್ರಸಿದ್ಧ. ಮಾಡುವ ವಿಧಾನ ಸುಲಭ. ಅಕ್ಕಿಹುಡಿ, ತೆಂಗಿನ ತುರಿ, ಬೆಲ್ಲ, ಏಲಕ್ಕಿ ಮತ್ತು ಸಣ್ಣದಾಗಿ ಕೊಚ್ಚಿದ ಹಲಸಿನ ಹಣ್ಣು - ಇವೆಲ್ಲದರ ಮಂದ ಪಾಕವನ್ನು ತುಪ್ಪದಲ್ಲಿ ಕರಿಯುತ್ತಾರೆ. ಕೆಂಬಣ್ಣದ 'ಅಪ್ಪ' ಸಿದ್ಧ. ಅಕ್ಕಿ ಹುಡಿಯ ಬದಲಿಗೆ ಅಕ್ಕಿ ಮತ್ತು ಇತರೆಲ್ಲಾ ವಸ್ತುಗಳನ್ನು ರುಬ್ಬಿಯೂ ಮಾಡುವುದಿದೆ. ಆಪ್ಪವನ್ನು ತಯಾರಿಸಲೆಂದೇ ಗುಳಿಯಿರುವ ಚಿಕ್ಕ ಬಾಣಲೆ(ಉರುಳಿಯಾಕಾರ)ಯಿದೆ. ಇದಕ್ಕೆ ತುಪ್ಪವನ್ನು ಸುರುವಿ, ಕುದಿಯುತ್ತಿರುವಾಗ ಗುಳಿ ತುಂಬುವಂತೆ ಸೌಟಲ್ಲಿ ಪಾಕವನ್ನು ಸುರುವುತ್ತಾರೆ. ಇದು ಕೇರಳ, ದಕ್ಷಿಣ ಕನ್ನಡದ ಬಹುತೇಕ ದೇವಸ್ಥಾನದಲ್ಲಿ 'ಅಪ್ಪ' ಮಾಡುವ ರೀತಿ. ಕರಾವಳಿ ಮತ್ತು ಕೇರಳದ ಶಿವ, ಗಣಪತಿ ದೇವಾಲಯಗಳಲ್ಲಿ 'ಅಪ್ಪ' ಸೇವೆ ವಿಶೇಷ. ಅದರಲ್ಲೂ ಏತಡ್ಕದ ಸದಾಶಿವನಿಗೆ ಹಲಸಿನದ್ದೇ ಅಪ್ಪ! 
          ದೇಗುಲಕ್ಕೆ ಸಂಬಂಧಪಟ್ಟ ಚಂದ್ರಶೇಖರ ಏತಡ್ಕ ಹಬ್ಬದ ಹಿನ್ನೆಲೆಯನ್ನು ಇತಿಹಾಸದ ಉಲ್ಲೇಖದೊಂದಿಗೆ ನಿರೂಪಿಸುತ್ತಾರೆ - ಪ್ರಾಚೀನ ದೇವಸ್ಥಾನ. 1938ರಲ್ಲಿ ಕ್ಷೇತ್ರದ ಆಡಳಿತದ ವ್ಯವಸ್ಥೆಯ ಹೊಣೆಯು ಗ್ರಾಮದ ಕೊಲ್ಲಂಗಾನ ಸುಬ್ರಹ್ಮಣ್ಯ ಶಾಸ್ತ್ರಿಯವರಿಗಿತ್ತು. ಪೂರ್ವ ಭಾಗದಲ್ಲಿ ನೆಟ್ಟಣಿಗೆಯಿಂದ ಹರಿದು ಬರುತ್ತಿರುವ ಸ್ವಲ್ಪ ದೊಡ್ಡದೇ ಆದ ತೊರೆಯಿದೆ. 1940ರ ಆಜೂಬಾಜು ಇರಬೇಕು. ವಿಪರೀತ ಮಳೆಯಿಂದ ನೆರೆ ಬಂದು ಸುತ್ತಲಿನ ಪ್ರದೇಶಗಳು ಮುಳುಗಡೆಯಾದುವು. ಕೃಷಿ ಭೂಮಿಗಳು ಹೂಳು ತುಂಬಿದುವು. ಕೃಷಿ ಮಾಡಲು ಅಯೋಗ್ಯವಾದುವು. ಜೀವನೋಪಾಯಕ್ಕಾಗಿ ಶಾಸ್ತ್ರಿಗಳು ದೇವಸ್ಥಾನ ಸಹಿತ ಭೂಮಿಯನ್ನು ಏತಡ್ಕ ಸುಬ್ರಾಯ ಭಟ್ಟರಿಗೆ ಮಾರಾಟ ಮಾಡಿ ಬೇರೆಡೆ ನೆಲೆ ಕಂಡರು. ಸುಬ್ರಾಯ ಭಟ್ಟರ  ನೇತೃತ್ವದಲ್ಲಿ 1948ರಲ್ಲಿ ದೇವಾಲಯ ಜೀರ್ಣೋದ್ಧಾರಗೊಂಡಿತು. ಆ ಕಾಲಘಟ್ಟದಲ್ಲಿ ಗ್ರಾಮದಲ್ಲಿ ಬಡತನವಿತ್ತು. ಊಟಕ್ಕೂ ತತ್ವಾರದ ಸ್ಥಿತಿ. 1965ರ ಹಸಿರು ಕ್ರಾಂತಿಯ ತನಕವೂ ಬಡತನ ತೀವ್ರವಾಗಿತ್ತು. ಅಕ್ಕಿ ಸಾಗಾಟಕ್ಕೆ ನಿರ್ಬಂಧವಿತ್ತು. 1970ರ ತನಕವೂ ಆಹಾರ ಅಭಾವ. ಅಂತಹ ಸಮಯದಲ್ಲಿ ಹಲಸು ಗ್ರಾಮದ ಹಸಿವನ್ನು ನೀಗಿಸಿತ್ತು. ಮೂರು ಹೊತ್ತು ಹೊಟ್ಟೆ ತಂಪು ಮಾಡಿತ್ತು. ಅನ್ನವಾಗಿ, ತಿಂಡಿಯಾಗಿ, ತರಕಾರಿಯಾಗಿ, ಹಣ್ಣಾಗಿ ಬದುಕನ್ನು ಆಧರಿಸಿತು. ಹೀಗೆ ಉಸಿರನ್ನು ನಿಲ್ಲಿಸಿದ, ಆಹಾರ ಭದ್ರತೆ ನೀಡಿದ ಹಲಸಿಗೆ ಊರವರು ಕೃತಜ್ಞರಾಗಿರಬೇಕೆಂಬ ಪರಿಕಲ್ಪನೆಯನ್ನು ಏತಡ್ಕ ಸುಬ್ರಾಯ ಭಟ್ಟರಲ್ಲಿದ್ದು, ಅದನ್ನು ಆಚರಣೆಯ ಮೂಲಕ ಅನುಷ್ಠಾನಕ್ಕೆ ತಂದರು. ಬದಲಾದ ಜೀವನ ಶೈಲಿ, ನಂಬುಗೆ, ಮನಸ್ಥಿತಿಗಳ ಮಧ್ಯೆಯೂ ದೇವಾಲಯದ ಸೇವೆ ಮತ್ತು ಹಲಸನ್ನು ಊರವರು ಮರೆಯಲಿಲ್ಲ.
          ದಶಕದೀಚೆಗೆ ಹಲಸು ಆಂದೋಳನವಾಗಿ ಜನಮನದೊಳಗೆ ಇಳಿಯುತ್ತಿದೆ. ವೈಜ್ಞಾನಿಕ ನೆಲೆಗಟ್ಟು ಸಿಕ್ಕಿದೆ. ಗಿಡನೆಡುವಲ್ಲಿಂದ ಮೌಲ್ಯವರ್ಧಿತ ಉತ್ಪನ್ನ ತಯಾರಿ ತನಕ ಬೇರು ಇಳಿಸಿದೆ. ನಿರ್ಲಕ್ಷಿತ ಹಣ್ಣೆಂಬ ಶಾಪದಿಂದ ಕಳಚಿಕೊಳ್ಳುತ್ತಿದೆ. ಅಪವಾದವೂ ಇಲ್ಲದಿಲ್ಲ! ಮೇಳಗಳಿಂದಾಗಿ ಸಾರ್ವಜನಿಕರಲ್ಲಿ ಒಲವು ಹಬ್ಬುತ್ತಿದೆ. ಈ ಎಲ್ಲಾ ಪ್ರಚಾರಗಳ ಹೊರತಾಗಿಯೂ ಏತಡ್ಕದ 'ಅಪ್ಪ ಸೇವೆ'ಯು ವಿಶೇಷ ಮನ್ನಣೆಗೆ ಪಾತ್ರವಾಗಿದೆ. 'ದೇವಸ್ಥಾನಕ್ಕೆ ಬರುವಾಗ ಎಲ್ಲರೂ ಒಂದೊಂದು ಹಣ್ಣು ತರಬೇಕು' ಎನ್ನುವ ನಂಬುಗೆಯಿದೆ. ಒಂದೆಡೆ ಮಳೆಗಾಲ, ಮತ್ತೊಂದೆಡೆ ಮರ ಏರಿ ಕೊಯ್ಯುವ ಜಾಣ್ಮೆಯ ಕುಶಲಿಗರ ಅಭಾವ. ಒಂದು ವೇಳೆ ಹಣ್ಣು ಲಭ್ಯವಾದರೂ ಸಾಗಾಟ ಸಮಸ್ಯೆ. ಇಷ್ಟೆಲ್ಲಾ ಇದ್ದರೂ ಹಣ್ಣಿಗೆ ಕೊರತೆಯಿಲ್ಲ ಬಿಡಿ!
          ದೇವಾಲಯದ ನಂಬುಗೆ ಹೀಗಾದರೆ, ಕುಟುಂಬಗಳಲ್ಲೂ ಹಲಸು ಆರಾಧನೆಯ ಸ್ವರೂಪ ಪಡೆದಿದೆ. ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಅಳಕ್ಕೆ ಕುಟುಂಬದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಮನೆಗಳು. ಕುಟುಂಬದಲ್ಲಿ 'ದೇವರಿಗೆ ಒಪ್ಪಿಸುವುದು' ಎಂಬ ಆರಾಧನೆಯಲ್ಲಿ ಹಲಸಿಗೆ ಮಣೆ. ದೇವರ ಸಮರ್ಪಣೆಗೆ ಹಲಸಿನ ಕಾಯಿಯ ದೋಸೆ. ಅಂದು ಮನೆಮಂದಿ ಮಾತ್ರ ಹಾಜರಿ. ಮನೆ ಮಗಳ ಉಪಸ್ಥಿತಿ. ಆದರೆ ಅಳಿಯನಿಗೂ ಪ್ರವೇಶವಿಲ್ಲ! ಪೂಜೆಯ ಬಳಿಕವಷ್ಟೇ ಪ್ರವೇಶ. ಅಕಸ್ಮಾತ್ ನೆಂಟರು ಬಂದರೆ ಮನೆಯ ಹೊರತಾದ ಕಟ್ಟಡದಲ್ಲಿ ವ್ಯವಸ್ಥೆ! ದೊಡ್ಡ ಕುಟುಂಬವಾದ್ದರಿಂದ ಮರಣ ಮತ್ತು ವೃದ್ಧಿಯ ಸೂತಕಗಳ ಸುದ್ದಿ ಆ ದಿವಸ ಗೊತ್ತಾಗಬಾರದು ಎನ್ನುವ ಕಾರಣದಿಂದ ಹಿರಿಯರು ಶಿಸ್ತಿನಿಂದ ಈ ನಿಯಮ ರೂಢಿಸಿಕೊಂಡಿರಬಹುದು. ಎನ್ನುತ್ತಾರೆ ಚಂದ್ರಶೇಖರ್. ಆರಾಧನೆಯ ಬಳಿಕವಷ್ಟೇ ಆ ಮನೆಯಲ್ಲಿ ಹಲಸಿನ ಖಾದ್ಯಗಳ ತಯಾರಿ, ಸೇವನೆ.
          ಏತಡ್ಕದ ಹಬ್ಬದ ಸುದ್ದಿ ಕೇಳಿ ತುಮಕೂರು ಜಿಲ್ಲೆಯ ತೋವಿನಕೆರೆಯ ಕೃಷಿಕ ಪತ್ರಕರ್ತ ತಮ್ಮೂರಿನ ಹಲಸಿನ ನಂಟನ್ನು ಹಂಚಿಕೊಂಡರು : ಜಿಲ್ಲೆಯಲ್ಲಿ ಹಲಸಿನ ಎಳೆಯ ಕಾಯಿಯಿಂದ ಮಾಡುವ ಅಡುಗೆ 'ಕೆತ್ತುಕಾಯಿ ಸಾರು' (ಸಾಂಬಾರು) ಮನೆಮಾತು. ಇದನ್ನು ರಾಗಿ ಮುದ್ದೆಯ ಜತೆಯಲ್ಲಿ ಸೇವಿಸಿದರೆ ಮುದ್ದೆ ಹೊಟ್ಟೆಗಿಳಿವ ಲೆಕ್ಕ ಸಿಗುವುದೇ ಇಲ್ಲ! ಪ್ರತಿ ವರುಷ ಹೊಲಗಳಲ್ಲಿ ಮಾಡುವ ಪೂಜೆ, ದೇವಾಲಯದ ಜಾತ್ರೆಗಳಲ್ಲಿ ಕೆತ್ತು ಕಾಯಿಯ ಸಾರು ವಿಶೇಷ. ಆಹ್ವಾನವನ್ನು ನೀಡುವಾಗಲೇ 'ಕೆತ್ತುಕಾಯಿ ಸಾರಿನ ಊಟ ಇದೆ, ಬನ್ನಿ' ಎಂದು ಕರೆಯುವುದು ರೂಢಿ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಆಚರಿಸುವ ಏಕಾದಶಿ ಹಬ್ಬಕ್ಕೆ ಹಲಸಿನ ಹಣ್ಣಿನ ರಸಾಯನ ಬೇಕೇ ಬೇಕು.
         ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಅಪ್ಪನಹಳ್ಳಿಯ ನಂಜುಡೇಶ್ವರ ಸ್ವಾಮಿ ದೇವಲಾಯ ಪ್ರಸಿದ್ಧ. ಭಕ್ತರಿಗೆ ಶಿವರಾತ್ರಿಯಂದು ಉಪವಾಸ. ಪೂಜೆಯ ಬಳಿಕ ಹಲಸಿನ ಕೆತ್ತಕಾಯಿ ಸಾರು, ರಾಗಿ ಮುದ್ದೆ ಮತ್ತು ಅನ್ನವನ್ನು ಸೇವಿಸಿದ ಬಳಿಕವೇ ಉಪವಾಸ ಮುಕ್ತಾಯ. ರಾತ್ರಿಯಿಡೀ ಸಾರು ಮಾಡುವ ಪ್ರಕ್ರಿಯೆ ನಡೆಯುತ್ತದೆ. ಬೆಳಿಗ್ಗೆ ರಾಗಿ ಮುದ್ದೆ ಅನ್ನ ಮಾಡಿ ಭಕ್ತರಿಗೆ ಉಣ ಪಡಿಸುತ್ತಾರೆ. ಕೆಲವರು ಸಾಂಬಾರನ್ನು ಕ್ಯಾರಿಯರ್ಗಳಲ್ಲಿ ಮನೆಗೆ ಒಯ್ಯುತ್ತಾರೆ. ಹರಕೆ ಮಾಡಿಕೊಂಡ ಸ್ಥಳಿಯರು ಐದಾರು ಟ್ರಾಕ್ಟರ್ ತುಂಬಾ ಎಳೆ ಹಲಸಿನ ಕಾಯಿಯನ್ನು ದೇವಳಕ್ಕೆ ತಲಪಿಸುತ್ತಾರೆ.
          ಇನ್ನು ವಿದೇಶದತ್ತ ನೋಟ ಹರಿಸಿ. ಅಲ್ಲೂ ಧಾರ್ಮಿಕತೆ ನಂಟು. ಶ್ರೀಲಂಕಾದಲ್ಲಿ ಹಲಸು ದೇವವೃಕ್ಷ. ಸಿಂಹಳ ಭಾಷೆಯಲ್ಲಿ ಹಲಸಿನ ಮರಕ್ಕೆ 'ಬಾತ್ ಗಾಸಾ' ಅಂದರೆ 'ಅನ್ನದ ಮರ' ಎಂದು ಹೆಸರು. ವಿವಾಹ ಸಮಾರಂಭಗಳಲ್ಲಿ ಖಾದ್ಯಗಳಿಗೆ ಮೊದಲಾದ್ಯತೆ. ಅಲ್ಲಿನ ಮುರುಗನ್ ದೇವಾಲಯಗಳ ವಾರ್ಶಿಕ ಉತ್ಸವಗಳಲ್ಲಿ ಹಲಸು ಮುಖ್ಯ ಫಲ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಕೈಯಲ್ಲಿ ಒಂದಾದರೂ ಹಲಸು ಬೇಕೇ ಬೇಕು! ಪ್ರಸಾದವೆಂದು ಸೊಳೆಗಳನ್ನು ತಿಂದು ಬಿಸಾಡಿದ ಬೀಜಗಳು ಮೊಳಕೆಯೊಡೆದು ಮರವಾಗಿ ಬನದ ರೂಪ ಪಡೆದಿದೆಯಂತೆ.
          ಏತಡ್ಕ ಸದಾಶಿವ ದೇವಾಲಯದ 'ಅಪ್ಪ ಸೇವೆ'ಯ ಹಿಂದೆ 'ಹಲಸನ್ನು ಮರೆಯಬೇಡಿ' ಎಂಬ ಸಂದೇಶವಿದೆ. ಹಳ್ಳಿಯಲ್ಲಿ ಹಲಸಿನ ಬಳಕೆ, ಸಂರಕ್ಷಣೆಯ ಮಾತುಕತೆ ನಡೆಯುತ್ತಿದೆ. ಕಳೆದ ಕಾಲದ ಕಥನದ ಮರುಓದು ಆರಂಭವಾಗಿದೆ. ಭಾರತ ಯಾಕೆ, ವಿದೇಶದಲ್ಲೂ ಹಲಸಿಗೆ ಮಾನ ಬಂದಿದೆ. ಬಳಕೆ ವ್ಯಾಪಕವಾಗುತ್ತಿದೆ. ಸಂರಕ್ಷಣೆಯ ಅರಿವು ಮೂಡುತ್ತಿದೆ. ಮೌಲ್ಯವರ್ಧನೆಯತ್ತ ಆಸಕ್ತಿ ಕುದುರುತ್ತಿದೆ. ಹೊಸ ಹೊಸ ಕಂಪೆನಿಗಳು ರೂಪುಗೊಳ್ಳುತ್ತಿವೆ. ನಮ್ಮಲ್ಲಿ ಬಹುತೇಕ ಸಮಾರಂಭಗಳಲ್ಲಿ ಹಲಸು ಒಂದು ಐಟಂ ಆಗಿ ಬಟ್ಟಲೇರಿದೆ. ಮಾತಿಗೆ ಸಿಕ್ಕಾಗ ಸ್ವ-ಪ್ರತಿಷ್ಠೆಯಿಂದ ಹಲಸನ್ನು ಹಗುರವಾಗಿ ಕಾಣುವ ಮನಸ್ಸುಗಳ ಊಟದ ಟೇಬಲ್ಲಿನಲ್ಲಿ ಮೇಣ ಅಂಟಿರುತ್ತದೆ!
      ಎಪ್ರಿಲ್ ತಿಂಗಳಲ್ಲಿ ಪೊಳಲಿಯಲ್ಲಿ ಕಲ್ಲಂಗಡಿ ಹಣ್ಣಿಗೆ ಸ್ಥಾನ-ಮಾನ. ಅಲ್ಲಿನ ರಾಜರಾಜೇಶ್ವರೀ ದೇವಿಯ ಜಾತ್ರೋತ್ಸವ ಸಂದರ್ಭಕ್ಕೆ ಫಸಲು ಬರುವಂತೆ ಕೃಷಿಕರು ಬೆಳೆಯುತ್ತಾರೆ. ಈ ಕೃಷಿಯ ಹಿಂದೆ ಧಾರ್ಮಿಕ ಭಾವನೆ, ನಂಬುಗೆ ಜೀವಂತವಾಗಿದೆ. ಫಲಗಳಿಗಿರುವ ಧಾರ್ಮಿಕ ನಂಟು ನಶಿಸದಂತೆ ಎಚ್ಚರವಹಿಸಬೇಕಾಗಿದೆ. ಮಿಕ್ಕುಳಿದ ಹಣ್ಣುಗಳಿಗೆ ಈ ಭಾಗ್ಯ ಬಂದುಬಿಟ್ಟರೆ ಬದುಕಿನಿಂದ ದೂರವಾಗುತ್ತಿರುವ ಹಣ್ಣುಗಳಿಗೆ ಉಳಿಗಾಲ. ಈ ನಂಬುಗೆಗಳು ಹಿರಿಯರ ಬಳುವಳಿ. ಅನುಭವಿಸಿ ಹೇಳಿದ ಬದುಕಿನ ಪಠ್ಯ. 
(Photos : Chandrashekara Yethadka)
Udayavani / ನೆಲದ ನಾಡಿ / 28-6-2018



Monday, July 2, 2018

ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಜುಲೈ 8ರಂದು ಹಲಸಿನ ಹಬ್ಬ


     ಪುತ್ತೂರಿನಲ್ಲಿ ಪ್ರಥಮ ಬಾರಿಗೆಹಲಸಿನ ಹಬ್ಬವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದನಟರಾಜ ವೇದಿಕೆಯಲ್ಲಿ 2018 ಜುಲೈ 8 ರವಿವಾರದಂದು ಜರುಗಲಿದೆ. ದಿನಪೂರ್ತಿ ನಡೆಯುವ ಹಬ್ಬವನ್ನು ಪುತ್ತೂರಿನ ನವಚೇತನ ಸ್ನೇಹ ಸಂಗಮ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಡಿಕೆ ಪತ್ರಿಕೆ ಪುತ್ತೂರು ಜಂಟಿಯಾಗಿ ಆಯೋಜಿಸಿದ್ದಾರೆ.
        ವಿವಿಧ ಹಲಸಿನ ತಳಿ/ಗಿಡಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಖಾದ್ಯ ವೈವಿಧ್ಯಗಳ ದರ್ಶನ, ಮೌಲ್ಯವರ್ಧಿತ ಉತ್ಪನ್ನಗಳ ಸಮ್ಮಿಲನ, ವಿಶೇಷ ತಳಿಗಳ ಶೋಧ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ, ಮನೆ ತಯಾರಿ ಹಲಸಿನ ಖಾದ್ಯಗಳ ಪ್ರದರ್ಶನ. ಮೊದಲಾದ ವೈಶಿಷ್ಟ್ಯವನ್ನು ಹಬ್ಬವು ಹೊಂದಿದೆ.
     ಒಂದು ಕಾಲಘಟ್ಟದಲ್ಲಿ ಹಲಸು ಹೊಟ್ಟೆಯನ್ನು ತಂಪು ಮಾಡಿ ಬಡತನವನ್ನು ನೀಗಿದ ಫಲ. ಕಳೆದ ಹತ್ತು ವರುಷಗಳಿಂದ ಕೇರಳ, ಕರ್ನಾಟದಲ್ಲಿ ಹಲಸಿನ ಆಂದೋಳನ ಫಲವಾಗಿ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನ ತೋಟವನ್ನು ಎಬ್ಬಿಸುವ ಉತ್ಸಾಹಗಳು, ದೈನಂದಿನ ಅಡುಗೆಯಲ್ಲಿ ಹಲಸಿನ ಖಾದ್ಯಗಳು ಸೇರಿಕೊಂಡಿವೆ. ನೂರಾರು ಹಲಸಿನ ಹಬ್ಬಗಳು ಸಂಪನ್ನವಾಗಿವೆ.
     ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಮೊದಲ ಬಾರಿಗೆ ಹಲಸಿನ ಹಬ್ಬವನ್ನು ಆಯೋಜಿಸಲಾಗಿದೆ. ನವಚೇತನ ಸ್ನೇಹ ಸಂಗಮದ ಉತ್ಸುಕತೆಯಲ್ಲಿ ಪುತ್ತೂರಿನ ಅನ್ಯಾನ್ಯ ಹಲಸು ಪ್ರಿಯ ಮನಸ್ಸುಗಳು ಹಬ್ಬಕ್ಕೆ ಕೈ ಜೋಡಿಸಲಿವೆ. ದೂರದೂರಿನ ಹಲಸು ಪ್ರೇಮಿಗಳು ಆಗಮಿಸಲಿದ್ದಾರೆ.
ಸಂಪರ್ಕ:
ಅನಂತಪ್ರಸಾದ್ ನೈತ್ತಡ್ಕ 9611543386
ಸುಹಾಸ್ ಮರಿಕೆ 9480535708