Monday, May 24, 2010

ಹಳ್ಳಿ ಕಟ್ಟುವ 'ಚಾವಡಿ'

ಕೃಷಿಗೆ ಪೂರಕವಾಗಿಲ್ಲದ ಅಂತರ್ಜಲ ಮಸೂದೆ ಇನ್ನೇನು ಮಂಜೂರಾಗಲಿದೆ. ಮರಗಳನ್ನು ತಮಗಿಷ್ಟ ಬಂದಂತೆ ಕಡಿದು, ಪರಿಸರವನ್ನು ನುಣುಪಾಗಿಸುವ (!) ಮಾರಕ ವಿಧೇಯಕದ ಅಡಿಕಟ್ಟು ಸಿದ್ಧವಾಗುತ್ತಿದೆ. ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ಮಸೂದೆಯು ಚರ್ಚೆಯಲ್ಲಿದೆ. ಇವೆಲ್ಲಾ ತೆರೆಮರೆಯಲ್ಲಿ ಸದ್ದಿಲ್ಲದೆ ತಂಪುಕೋಣೆಯಲ್ಲಿ ರೂಪುಗೊಳ್ಳುತ್ತಿವೆ. ಜಾಲತಾಣಗಳಲ್ಲಿ ಪ್ರಕಟಿಸಿದರೆ 'ಸಾರ್ವಜನಿಕರಿಗೆ ತಿಳಿಸಿದಂತೆ' ಎಂದು ವರಿಷ್ಠರು ತಿಳಿದಂತಿದೆ.

ಇಂದು ಕಂಪ್ಯೂಟರ್ ಪ್ರವೇಶಿಸದ ಹಳ್ಳಿಗಳು ಎಷ್ಟಿಲ್ಲ? ಕಂಪ್ಯೂಟರ್ ಇದ್ದರೂ, ಜಾಲತಾಣ ಸಂದರ್ಶಿಸಲು ಎಷ್ಟು ಮಂದಿಗೆ ಸಾಧ್ಯವಾಗಿದೆ? ಬ್ರಾಡ್ ಬ್ಯಾಂಡ್ಗಳು ಎಷ್ಟು ಹಳ್ಳಿಗಳಿಗೆ ನುಗ್ಗಿವೆ? ಪ್ರತಿಯೊಂದು ವಿಧೇಯಕಗಳಿಗೂ ಸಾರ್ವಜನಿಕ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಇದು ಬಳಕೆದಾರನಿಗೆ ಹೇಗೆ ತಿಳಿಯಬೇಕು? ಪತ್ರಿಕೆಯ ಮೂಲೆಯಲ್ಲೆಲ್ಲೋ ಇಲಾಖೆಯು ಜಾಹೀರಾತು ಕೊಟ್ಟ ಮಾತ್ರಕ್ಕೆ ತಿಳಿಯುತ್ತದೇನು?

ಇಂತಹ ಸಂದರ್ಭದಲ್ಲಿ ಪರಸ್ಪರ ಮಾತುಕತೆಗಳಿಂದ 'ತಮಗೇನು ಬೇಕು', 'ವಿಧೇಯಕದಲ್ಲಿ ಏನು ತೊಂದರೆಗಳಿವೆ', 'ಸರಕಾರದಿಂದ ನಮಗೆ ಎಂತಹ ಸವಲತ್ತುಗಳು ಬಂದಿಲ್ಲ', 'ಬದುಕಿಗೆ ಮಾರಕವಾಗುವಂತಹ ಕಾನೂನುಗಳು ಏನಿವೆ? - ಇಂತಹ ಸಂವಹನಗಳು ಹಳ್ಳಿಗಳಲ್ಲಿ ನಡೆಯದಿದ್ದರೆ; ಪ್ರತಿದಿನ ಒಂದೊಂದು ವಿಧೇಯಕಗಳು ನಮ್ಮ ಕಿಟಕಿಯೊಳಗೆ ಪ್ರವೇಶಿಸಿ ಬದುಕನ್ನು ಕಸಿಯುತ್ತವೆ.

ಪರಸ್ಪರ ಸಿಕ್ಕಾಗ, ಸಮಾರಂಭಗಳಲ್ಲಿ ಮುಖತಃ ಭೇಟಿಯಾದಾಗ ಮಾತ್ರ ಕೃಷಿ ಮಾತುಕತೆಗಳು ನುಸುಳುತ್ತವೆ! ಅದೂ 'ಋಣಾತ್ಮಕ' ವಿಷಯಗಳಲ್ಲಿ, ಪರದೂಷಣೆಯಲ್ಲೇ ಗಿರಕಿ ಹೊಡೆಯುತ್ತಿರುತ್ತವೆ!

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಮೀಯಪದವಿನಲ್ಲಿ ಇಂತಹ ಕೃಷಿ ಮಾತುಕತೆಗಳಿಗಾಗಿ 'ಚೌಟರ ಚಾವಡಿ' ಸಜ್ಜಾಗಿದೆ. ಖಾಸಗಿ ನೆಲೆಯಲ್ಲಿ ರೂಪುಗೊಂಡಿದ್ದರೂ, ಕೃಷಿ ಮಾತುಕತೆಗಳಿಗೆ ಸದಾ ತೆರೆದ ಬಾಗಿಲು.

ಚಾವಡಿಯ ಆಧ್ಯಕ್ಷ ಡಾ.ಡಿ.ಸಿ.ಚೌಟ ಹೇಳುತ್ತಾರೆ - ಹಳ್ಳಿಗಳ ಕೃಷಿ ಸಂಪತ್ತಿಗೆ ನಷ್ಟ ಸಂಭವಿಸದಂತೆ ಹಳ್ಳಿಯ ಬದುಕು ಮತ್ತು ಕೃಷಿ ಸಂಸ್ಕೃತಿಯ ಸುತ್ತ ನಿರಂತರ ಸಂವಾದ ನಡೆಯುತ್ತಲೇ ಇರಬೇಕು. ಸಂವಾದ, ಚರ್ಚೆ ಮತ್ತು ವಿಚಾರ ಸಂಕಿರಣಗಳ ಕೇಂದ್ರಸ್ಥಾನದಲ್ಲಿ ಕೃಷಿಕ ಸಮುದಾಯ ಇರಬೇಕು. ಕೃಷಿಕ ಸಮುದಾಯದ ದೇಶೀಯ ಜ್ಞಾನ ಪರಂಪರೆಯ ಅನಾವರಣ ಮತ್ತು ಬಳಕೆಯನ್ನು ಸಮರ್ಪಕ-ಪರಿಣಾಮಕಾರಿಯಾಗಿ ಮಾಡಬೇಕೆಂಬ ಉದ್ದೇಶಕ್ಕೆ ಅನುಗುಣವಾಗಿ ಕೃಷಿಕರ ಸಮುದಾಯ ಭವನ 'ಚೌಟರ ಚಾವಡಿ' ನಿರ್ಮಾಣವಾಗಿದೆ.

'ಕೃಷಿ ಮತ್ತು ಗ್ರಾಮೀಣ ಬದುಕಿನ ಭವಿಷ್ಯದ ಚಿಂತನ-ಮಂಥನ'ದೊಂದಿಗೆ ಚಾವಡಿ ಶುಭಾರಂಭಗೊಂಡಿತ್ತು. ನಮ್ಮ ಬಹುತೇಕ ಮಾತುಕತೆಗಳಲ್ಲಿ ಕೃಷಿ ಕ್ಷೇತ್ರದ ಗಣ್ಯರು, ಕೃಷಿಕರು, ವಿಜ್ಞಾನಿಗಳು ತಮ್ಮ ಅನುಭವವನ್ನು ಹೇಳುತ್ತಾರೆ. ಇಲ್ಲಿ ಹಾಗಲ್ಲ. ಕೃಷಿ ಕುಟುಂಬದಲ್ಲಿ ಹುಟ್ಟಿ, ಬೆಳೆದು, ಪ್ರಸ್ತುತ ಉದ್ಯೋಗ ನಿಮಿತ್ತ ಅನ್ಯಕ್ಷೇತ್ರದಲ್ಲಿದ್ದು ಸದಾ 'ಕೃಷಿ ತುಡಿತ'ವನ್ನು ಅಂಟಿಸಿಕೊಂಡಿರುವ ಗಣ್ಯರಿಲ್ಲಿ ಮಾತುಕತೆಯಲ್ಲಿ ತೊಡಗಿರುವುದು ಗಮನಾರ್ಹ.

ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೃಷಿ ಮೂಲದಿಂದ ಬೆಳೆದವರು. ಅವರು ಯಾವುದೇ ದೇಶಕ್ಕೆ ಹೋದರೂ ಕೃಷಿಕರನ್ನು ಮಾತನಾಡಿಸುವ ಒಲವು. ಅವರ ಚಿತ್ರಗಳಲ್ಲೆಲ್ಲಾ ಕೃಷಿ/ಹಳ್ಳಿ ಟಚ್.

ಕೃಷಿಯಲ್ಲಿ 'ವಿದ್ಯುತ್, ನೀರು, ಬೆಲೆ' ಇವಿಷ್ಟಕ್ಕೆ ಸರಕಾರ ನಿಗಾ ವಹಿಸಿದರೆ ಸಾಕು, ಮಿಕ್ಕೆಲ್ಲಾ ಪ್ರಕೃತಿಯೊಂದಿಗೆ ರೈತನೇ ನಿಭಾಯಿಸುತ್ತಾನೆ. ಕೃಷಿಯು ಪಾರಂಪರಿಕವಾಗಿ ಬದುಕಿನಲ್ಲಿ ಬೇರೂರಿದ ಕಸುಬು. ಪ್ರಸ್ತುತ ಮಳೆಯನ್ನೇ ನಂಬಿ ಬೆಳೆಯಬೇಕಾದ ಭೂಮಿಗಳಿಗೆ ತೊಂದರೆಯಾಗಿದೆ. ರೈತರು ಕಂಗಾಲಾಗಿದ್ದಾರೆ. ನೀರಿನ ಸಂಕಟ ಬೇರೆ. ಇಂತಹ ತೊಂದರೆಗಳಿಗೆ ಪರಿಹಾರ ಏನು?' ಹೀಗೆ ತಮ್ಮ ಆರೆಕ್ರೆ ಕೃಷಿಯ ಅನುಭವದೊಂದಿಗೆ ವಾಸ್ತವಿಕ ವಿಚಾರಗಳತ್ತ ನೋಟ ಬೀರಿದರು.

ಡಾ.ಬಿ.ಎ.ವಿವೇಕ ರೈಯವರು ಇಂದಿನ ಕೃಷಿ, ಕೃಷಿಕರ ಹಿಂದಿನ ರಾಜಕೀಯ ಹುನ್ನಾರಗಳತ್ತ ಬೆಳಕು ಚೆಲ್ಲುತ್ತಾ, 'ಕೃಷಿಕರೆಂದು ಹೇಳುವ ಕೃಷಿಕರಿಗೆ ಬೇರೆ ಬೇರೆ ಬಣ್ಣ, ಧ್ವಜಗಳಿವೆ! ನಿಜವಾದ ಕಾಳಜಿ ಮಸುಕಾಗಿ ಫ್ಯಾಶನ್ ರೂಪ ಪಡೆದಿವೆ. ಇವೆಲ್ಲಾ ಪಕ್ಷಗಳೊಂದಿಗೆ ಗುರುತಿಸಿಕೊಂಡಿವೆ. ಇಂದಿನ ಜಾಗತಿಕ ವ್ಯವಸ್ಥೆಯು ಕೃಷಿಕನಿಂದ ಭೂಮಿ, ನೀರು, ಬೀಜಗಳನ್ನು ಕಸಿದುಕೊಂಡಿದೆ. ಅದನ್ನು ಮತ್ತೆ ಹೇಗೆ ಮರಳಿ ಪಡೆಯಬೇಕು? ಕೃಷಿಯಿಂದು ದುರುಪಯೋಗವಾಗುತ್ತದೆ. ಇಂಡಿಯಾದಲ್ಲಿ ಭ್ರಷ್ಠಾಚಾರ ನಾಚಿಕೆಯಿಲ್ಲದೆ ನಡೆಯುತ್ತಿವೆ.'

'ಇವರಿಗೇನು ಕೃಷಿ ಗೊತ್ತು' ಎಂದು ಇಂತಹ ಚಿಂತನೆಗಳನ್ನು ಬದಿಗಿಡಬೇಕಾಗಿಲ್ಲ. ಸ್ವಲ್ಪ ಹೊತ್ತು ನಿಂತು ಚಿಂತಿಸಿದರೆ ಗಾಢತೆಯ ಅರಿವಾಗುತ್ತದೆ. 'ನಿಂತು ಚಿಂತಿಸಲು' ನಮಗೆ ಪುರುಸೊತ್ತಿಲ್ಲವಲ್ಲಾ! ತಕ್ಷಣದ ಪ್ರತಿಕ್ರಿಯ ನೀಡುತ್ತಾ, ಋಣಾತ್ಮಕ ಚಿಂತನೆಯನ್ನೇ ಧನಾತ್ಮಕ ಎಂದು ಸ್ವೀಕರಿಸುವ ನಮ್ಮ ಬೌದ್ಧಿಕ ದಿವಾಳಿಗೆ ಯಾರನ್ನು ದೂರಬೇಕು?

ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು - '2025ರ ಹೊತ್ತಿಗೆ ನಮ್ಮ ರಾಜ್ಯದ ಕೃಷಿ ಪರಿಸ್ಥಿತಿ ಹೇಗಿರಬಹುದು' ಎಂಬ ಹೊಸ ಬಾಣ ಬಿಟ್ಟಾಗ, ಒಂದು ಕ್ಷಣ ಮೌನ. 'ಪಟ್ಟಣದ ಕಡೆಗೆ ಜನ ಹೋಗುತ್ತಾರೆ. ಅಲ್ಲಿನ ಸಮಸ್ಯೆಯಿಂದಾಗಿ ಹೆಚ್ಚಿನವರು ಕೃಷಿಗೆ ಮರಳುವುದು ಖಚಿತ. ಹಾಗೆ ಮರಳುವಾಗಿ ಮೊದಲಿನ ತಮ್ಮ ಕೃಷಿ ಭೂಮಿ ನಾಪತ್ತೆಯಾಗಿರುತ್ತದೆ! ಮತ್ತದೇ ತಲ್ಲಣದ ಬದುಕು. 'ಮರಳಿ ಹಳ್ಳಿಗೆ ಹೋಗೋಣ' ಎಂಬ ಹೊಸದೊಂದು ಚಳುವಳಿಯೇ ಬೇಕಾಗಬಹುದೇನೋ?

ರೈತರ ಸಮಸ್ಯೆಗಳಿಗೆ ವೈಯಕ್ತಿಕವಾಗಿ ರೈತರೇ ಚಿಂತಿಸಿದರೆ ಸಾಲದು. ಸಾಧ್ಯವೂ ಇಲ್ಲ. ನೋವಿಗೆ ಮಾತು ಕೊಡುವ ಕೆಲಸ ಇಂತಹ ಹಳ್ಳಿ ಕಟ್ಟುವ ಚಾವಡಿಗಳಿಂದಾಗಬೇಕು. ಈಗಿನ ಕೃಷಿ ತಲ್ಲಣಗಳಿಗೆ ಬೆಳಕಿಂಡಿಯಾದೀತು. ಬದುಕಿನಲ್ಲಿ ಮಾತುಗಳೇ ದೂರವಾಗುತ್ತಿರುವ ಕಾಲಘಟ್ಟದಲ್ಲಿ 'ಮಾತನಾಡೋಣ ಬನ್ನಿ' ಎಂದು ಕರೆಯುತ್ತಿರುವ ಚೌಟರ ಚಾವಡಿ ಒಂದು ಸ್ಟೆಪ್ಪಿಂಗ್ ಸ್ಟೋನ್. ಇಂತಹ ವೇದಿಕೆಗಳು ಹಳ್ಳಿಹಳ್ಳಿಗಳಲ್ಲಿ ರೂಪಗೊಳ್ಳಬೇಕು. ಆದರವು ಬಣ್ಣ, ಧ್ವಜಗಳಿಂದ ಮುಕ್ತವಾಗಿರಲಿ.

Saturday, May 15, 2010

ವಿಷರಹಿತ ಶುಂಠಿ ಕೃಷಿ

ರಾಸಾಯನಿಕ ಗೊಬ್ಬರ ಬಳಸದ, ವಿಷ ಸಿಂಪಡಿಸದೆ ಶುಂಠಿ ಕೃಷಿ ಮಾಡಲು ಸಾಧ್ಯವಾ?
ಸಕಲೇಶಪುರ ಸನಿಹದ ಯಡೆಹಳ್ಳಿ-ಕಾಡುಗದ್ದೆಯ ಚಿದಂಬರಂ ಹತ್ತು ಗುಂಟೆ (ಕಾಲು ಎಕ್ರೆ) ಯಲ್ಲಿ ನಾಲ್ಕು ವರುಷಗಳಿಂದ ವಿಷರಹಿತವಾಗಿ ಶುಂಠಿ ಬೆಳೆಯುತ್ತಿದ್ದಾರೆ.

'ಶುಂಠಿಗೆ ಬೀಜೋಪಚಾರ ಮುಖ್ಯ. ಮಣ್ಣಿನಲ್ಲಿ ಹೆಚ್ಚು ತೇವಾಂಶವಿದ್ದರೆ ರೋಗ ಹುಡುಕಿ ಬರುತ್ತೆ' ಎನ್ನುತ್ತಾರೆ. ಕೇರಳದ ಕೃಷಿಕರೊಬ್ಬರಿಂದ ಕಲಿತುಕೊಂಡ ಬೀಜೋಪಚಾರವನ್ನು ವಿವರಿಸಿದ್ದು ಹೀಗೆ : ಬೇಕಾಗುವ ವಸ್ತುಗಳು - ಬೇವಿನ ಎಣ್ಣೆ 300 ಎಂ.ಎಲ್., ಹಸುವಿನ ಗಂಜಲ ಐದು ಲೀಟರ್ ಮತ್ತು ಹೊಗೆಸೊಪ್ಪು 200 ಗ್ರಾಂ. ನಾಲ್ಕು ಕಿಲೋ ಸೆಗಣಿ - ಮೊದಲು ಹೊಗೆಸೊಪ್ಪನ್ನು ಇಪ್ಪತ್ತು ನಿಮಿಷ ಕುದಿಸಿ ಕಷಾಯ ಮಾಡಿಟ್ಟುಕೊಳ್ಳಿ. ಬೇವಿನೆಣ್ಣೆ, ಗಂಜಲ ಮತ್ತು ಈ ಕಷಾಯವನ್ನು ಅರುವತ್ತು ಲೀಟರ್ ನೀರಿನೊಂದಿಗೆ ಬೆರೆಸಿ. ಇದರಲ್ಲಿ ಹದಿನೈದು ನಿಮಿಷ ಶುಂಠಿಬೀಜವನ್ನು ಅದ್ದಿಡಿ. ನೆರಳಿನಲ್ಲಿ ಯಾವುದೇ ಮರದ ಸೊಪ್ಪನ್ನು ಹರಡಿಟ್ಟುಕೊಳ್ಳಿ. ನೆನೆಸಿದ ಬೀಜವನ್ನು ತೆಗೆದು ಗುಡ್ಡೆಹಾಕಿ. ಇಪ್ಪತ್ತು ದಿವಸದಲ್ಲಿ ಮೊಳಕೆಯೊಡೆಯುತ್ತದೆ.

ನೆಡುವಾಗಲೂ ತಮ್ಮದೇ ವಿಧಾನ. ಹದಿನೈದಡಿ ಉದ್ದ, ಮೂರೂವರೆ ಅಡಿ ಅಗಲ ಬರುವಂತಹ ಹನ್ನೆರಡು ಮಡಿಗಳು. ಪ್ರತಿ ಮಡಿಯ ಮಧ್ಯೆ ಮತ್ತು ಮಡಿಗಳ ಸುತ್ತಲೂ ನೀರು ಹರಿದುಹೋಗುವಂತೆ ಕಣಿಗಳ (ಚಿಕ್ಕ ಕಾಲುವೆ) ವ್ಯವಸ್ಥೆ.

ಮಡಿಯಲ್ಲಿ ಬೇವಿನಹಿಂಡಿ ಹರಡಿ ಮಣ್ಣಿನೊಂದಿಗೆ ಮಿಶ್ರ ಮಾಡುತ್ತಾರೆ. ಅಡಿಗೊಂದರಂತೆ ಶುಂಠಿಯ ಮೊಳಕೆಯನ್ನು ಮೇಲ್ಬದಿ ಬರುವಂತೆ ಮಣ್ಣಿನಲ್ಲಿ ಊರಿ, ಅದರ ಮೇಲೆ ಕೊಟ್ಟಿಗೆ ಗೊಬ್ಬರ ಹಾಕಿ ಮುಚ್ಚುವುದು. ಕಳೆ ಬಾರದಂತೆ ಒಣಹುಲ್ಲನ್ನು ಹರಡಿದರೆ ಆಯಿತು. ಹುಲ್ಲಿನ ಬದಲಿಗೆ ಸೊಪ್ಪನ್ನೂ ಬಳಸಬಹುದು.

ಹದಿನೈದನೇ ದಿವಸದಿಂದ ಸ್ಲರಿ ಮತ್ತು ಜೀವಾಮೃತ ಉಣಿಕೆ. ನಲವತ್ತೈದನೇ ದಿನಗಳಲ್ಲಿ ಗಿಡ ಮೇಲೆದ್ದು ಬರುತ್ತದೆ. ಕಾಂಪೋಸ್ಟ್, ಎರೆಗೊಬ್ಬರ, ದ್ರವರೂಪಿ ಗೊಬ್ಬರಗಳು, ಸ್ಲರಿ, ಜೈವಿಕ ಗೊಬ್ಬರಗಳನ್ನು ಕಾಲ ಕಾಲಕ್ಕೆ ನೀಡಿದ್ದಾರೆ.

ಕೆಲವು ಸಲ ಕೊಳೆ ರೋಗ ಬರುವುದುಂಟು. 'ಸುಣ್ಣ ಮತ್ತು ಮೈಲುತುತ್ತು ಅಥವಾ ಗಂಜಲವನ್ನು ಮಿಶ್ರಮಾಡಿ ಕೊಳೆಯುಕ್ತ ಶುಂಠಿ ಗಿಡಗಳಿಗೆ ಕೊಟ್ಟರೆ ಶಮನವಾಗುತ್ತದೆ' ಇದು ಮಾಡಿ ನೋಡಿದ ಅನುಭವ. 'ತೇವ ಹೆಚ್ಚಾದರೆ ಕೊಳೆ ರೋಗ ಬರುತ್ತದೆ. ಹಾಗಂತ ಆ ರೋಗ ನಿವಾರಣೆಗೆ ಯದ್ವಾತದ್ವಾ ವಿಷ, ಕ್ರಿಮಿನಾಶಕ ಹೊಡೆಯುವ ಅಗತ್ಯವಿಲ್ಲ' ಎನ್ನುವುದು ಕಿವಿಮಾತು.

'ನೆಟ್ಟು 8-9 ತಿಂಗಳಲ್ಲಿ ಶುಂಠಿ ಅಗೆಯಲು ಸಿದ್ಧ. ರೋಗ ಬರಬಹುದೆಂಬ ಭೀತಿಯಿಂದ ಐದಾರು ತಿಂಗಳಲ್ಲೇ ಕೆಲವರು ಶುಂಠಿ ತೆಗೆಯುತ್ತಾರೆ. ಆದರದು ಹೆಚ್ಚು ಬಲಿತಿರುವುದಿಲ್ಲ.'

ಬೀಜದ ಆಯ್ಕೆಯಲ್ಲೂ ಕೆಲವು ಕಟ್ಟುಪಾಡುಗಳು - 'ಕನಿಷ್ಠ ಒಂಭತ್ತು ತಿಂಗಳು ನೆಲದೊಳಗೆ ಇದ್ದ ಶುಂಠಿಯನ್ನು ತೆಗೆಯುವಾಗಲೇ ಮೊಳಕೆಯೊಡೆದ ಕಣ್ಣನ್ನು ಬೀಜಕ್ಕಾಗಿ ತೆಗೆದಿಡಬೇಕು. ಮೊಳಕೆ ದೊಡ್ಡದಾದರೆ ನೆಡುವ ಹಂತದಲ್ಲಿ ಅಜಾಗ್ರತೆಯಿಂದ ಮುರಿಯುತ್ತದೆ. ಅಂತಹುದಕ್ಕೆ ಬೆಳವಣಿಗೆ ಕಡಿಮೆ.'

'ಶುಂಠಿ ಬೀಜವನ್ನು ನಾನು ಕೊಂಡು ತರುವುದಿಲ್ಲ. ನಮ್ಮ ತೋಟದಲ್ಲೇ ಬೇಕಾದಷ್ಟು ಸಾವಯವ ಗೊಬ್ಬರ ತಯಾರಿಸುತ್ತೇನೆ. ಬೇವಿನ ಹಿಂಡಿ, ಬೇವಿನೆಣ್ಣೆ, ಜೀವಾಮೃತಕ್ಕೊಂದಿಷ್ಟು ಬೆಲ್ಲ, ಕೆಲಸಕ್ಕೆ ಅಪರೂಪಕ್ಕೆ ಆಳುಗಳು - ಇವು ಬಿಟ್ಟರೆ ಬೇರೆ ನಗದು ಖರ್ಚೆಲ್ಲ. ಅಂದಾಜು 1000 ರೂಪಾಯಿಯಲ್ಲಿ ಎಲ್ಲವೂ ಮುಗಿಯುತ್ತವೆ. ಪ್ರತಿ ವರ್ಷ ಸರಾಸರಿ ಏಳು ಕ್ವಿಂಟಾಲ್ (ಹನ್ನೆರಡು ಚೀಲ) ಚೀಲ ಶುಂಠಿ ಸಿಗುತ್ತಿದೆ.'

ಮಡಿಯಲ್ಲಿ ಶುಂಠಿ ಬೀಜ ನೆಟ್ಟು ಗಿಡ ಬೆಳೆಯಲು ಹೇಗೂ ಎರಡು ತಿಂಗಳು ಬೇಕು. ಈ ಅವಧಿಯ ಮಧ್ಯೆ ಅಲಸಂಡೆ, ಬೆಂಡೆ, ಹಾಗಲ, ಮೆಣಸು, ಬೂದುಗುಂಬಳ, ಟೊಮೆಟೋ ಇತ್ಯಾದಿ ತರಕಾರಿ ಬೆಳೆದಿದ್ದಾರೆ. ಪ್ರತ್ಯೇಕ ಗೊಬ್ಬರ ಇಲ್ಲ.

ಏಳು ವರ್ಷ ಹಿಂದೆ ಒಂದೆಕೆಯಲ್ಲಿ ರಾಸಾಯನಿಕ ಬಳಸಿ ಶುಂಠಿ ಕೃಷಿ ಮಾಡಿದ್ದರಂತೆ. ಅದಕ್ಕೆ ವಿಷ ಹೊಡೆದು ಸಾಕಾಯ್ತು. ಹೇಳುವಂತಹ ಆದಾಯವೂ ಸಿಗಲಿಲ್ಲ. ಅಲ್ಲಿಂದ ಈ ತನಕ ವಿಷಮುಕ್ತ ಕೃಷಿ. ಅಂದು ರಾಸಾಯನಿಕ ಕೃಷಿಯಲ್ಲಿ ಸಿಕ್ಕಷ್ಟೇ ಇಳುವರಿ ಆಗ ಸಾವಯವದಲ್ಲೂ ಬರುತ್ತಿದೆಯಂತೆ.

ಚಿದಂಬರಂ ನಿವೃತ್ತ ಸೈನಿಕ. ತಂದೆ ತೀರಿಕೊಂಡಾಗ ಮನೆಯ ಜವಾಬ್ದಾರಿ ಹೆಗಲೇರಿತು. ಈ ಕಡೆ ಸಾವಯವ ಕೃಷಿಯ ರೂಢಿಯೇ ಇಲ್ಲ. ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಸಾವಯವದ ಅರಿವು ಕೊಟ್ಟಾಗ ಕಣ್ತೆರೆಯಿತು. ನಾಲ್ಕೆಕರೆಯಲ್ಲಿ ಮೂರೆಕರೆಯಷ್ಟು ಸಾವಯವ ಭತ್ತ ಬೆಳೆಯುತ್ತಿದ್ದಾರೆ.

ಮೂಡಿಗೆರೆ ಸನಿಹದ ಫಲ್ಗುಣಿಯ ಕೆ.ಕೆ.ಗೋಪಾಲ್ ಹದಿನೈದು ವರುಷದಿಂದ ಐದು ಕ್ವಿಂಟಾಲ್ ಶುಂಠಿ ಬೆಳೆಯುತ್ತಾರೆ. ಅವರದು ಅಡಿಕೆ ತೋಟ. ಖಾಲಿ ಜಾಗ ಇರುವಲ್ಲೆಲ್ಲಾ 15-20 ಉದ್ದದ ಮಡಿ ಮಾಡಿ ಶುಂಠಿ ಕೃಷಿ. ಗೌರಿ ಹಬ್ಬ ಬಂದಾಗ ಕೀಳುತ್ತಾರೆ. 'ನಾಟಿ ಶುಂಠಿ ತಳಿಗೆ ರೋಗವಿಲ್ಲ. ಹೈಬ್ರಿಡ್ಗೆ ರೋಗ ಜಾಸ್ತಿ' ಎನ್ನುವ ಗೋಪಾಲ್ ಹಟ್ಟಿ ಗೊಬ್ಬರ, ಎರೆಗೊಬ್ಬರ ಬಳಸಿ ಕೃಷಿ ಮಾಡುತ್ತಾರೆ.

Wednesday, May 5, 2010

ಮೌನ ಮುರಿದ 'ಅನ್ನದ ಬಟ್ಟಲ ಮಾತುಕತೆ'

ಭತ್ತದ ಬೇಸಾಯವು ಭತ್ತ ಬೆಳೆದು, ಅಕ್ಕಿ ಮಾಡಿ ಮಾರುವುದಕ್ಕೋ, ಉಣ್ಣುವುದಕ್ಕೋ ಸೀಮಿತವಲ್ಲ. ಅದೊಂದು ಸಂಸ್ಕೃತಿ. ಇದು ತುಳುನಾಡಿನ ಸಂಸ್ಕೃತಿಯ ಅಡಿಗಲ್ಲು. ಯಾವುದೇ ಸಮಾರಂಭಕ್ಕೆ ಮನೆಯ ಯಜಮಾನ ಹೋಗಲಿ, ಇಳಿಹೊತ್ತಾಗುತ್ತಲೇ, 'ಹಾಲು ಕರೆಯುವುದಕ್ಕಿದೆ' ಎನ್ನುತ್ತಾ ಚಡಪಡಿಸುತ್ತಾನೆ. ಮೇಯಲು ಬಿಟ್ಟ ಹಸು- ಕರು ಸಂಜೆ ಹೊತ್ತಿಗೆ ಹಟ್ಟಿಗೆ ಬಾರದಿದ್ದರೆ, ಮನೆಯೊಡತಿಗೆ ಟೆನ್ಶನ್ ಏರುತ್ತದೆ!

ಇವೆಲ್ಲಾ ಸಂಸ್ಕೃತಿಯೊಂದಿಗೆ ಮಿಳಿತವಾದ ಬದುಕಿನ ಮಾದರಿಗಳು. ಕ್ಯಾಲಿಕ್ಯುಲೇಟರ್ ಕೈಗೆ ಬಂದಾಗ ಭತ್ತದ ಬೇಸಾಯವು 'ಲಾಭ-ನಷ್ಟ'ದ ಲೆಕ್ಕಾಚಾರಕ್ಕೆ ಇಳಿಯಿತು. ಮೊದಲಿದ್ದ ಲವಲವಿಕೆಯ ದಿನಗಳಿಗೆ ಇಳಿಲೆಕ್ಕ ಶುರುವಾಯಿತು. ಭತ್ತದ ಕೃಷಿ, ಸಂಸ್ಕೃತಿಯಿಂದು 'ತೀವ್ರನಿಗಾ' ವಿಭಾಗದಲ್ಲಿದೆ!

ಬರಿದಾಗುತ್ತಿರುವ ಅನ್ನದ ಬಟ್ಟಲಿನ ಕುರಿತು, ಸುಳ್ಯದಲ್ಲೊಂದು ಮಾತುಕತೆ. ಜತೆಗೆ ಡಾ.ಸುಂದರ ಕೇನಾಜೆಯವರ 'ಬತ್ತದ ಲೋಕ' ಕೃತಿ ಬಿಡುಗಡೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂಬಳೆ ಸುಂದರ ರಾಯರು ಒಂದು ಮಾತನ್ನು ಹೇಳಿದರು - ಇಂದು ಭತ್ತ ಉಳಿಸಿ ಆಂದೋಳನ ಕನ್ನಾಡಿನಾದ್ಯಂತ ಹಬ್ಬುತ್ತಿದೆ. ಒಳ್ಳೆಯ ಲಕ್ಷಣ. ಜತೆಜತೆಗೆ 'ಗದ್ದೆ ಉಳಿಸಿ' ಆಂದೋಳನವೂ ಆಗಬೇಕು ಎಂದರು.

ಕರಾವಳಿ ಭತ್ತದ ಕಣಜ! ಈ ಹೆಗ್ಗಳಿಕೆಯಲ್ಲೇ ಕಣಜವನ್ನು ಸೂರೆಗೊಂಡಿದ್ದೇವೆ. ಪ್ರಸ್ತುತ ಮುಡಿಗಟ್ಟಲೆ ಇಳುವರಿ ಕೊಡುವ ಗದ್ದೆಗಳು ಅಡಿಕೆ ತೋಟದಡಿಯಲ್ಲಿವೆ. ಕೆಲವು ಹೆದ್ದಾರಿಯಡಿ ಅಪ್ಪಚ್ಚಿಯಾಗಿವೆ. ಮತ್ತೆಷ್ಟೋ ದೈತ್ಯ ಕಟ್ಟಡಗಳಿಗೆ ಅಡಿಗಟ್ಟಾಗಿದೆ. ಇಂತಹ ಸನ್ನಿವೇಶದಲ್ಲಿ 'ಗದ್ದೆ ಉಳಿಸಿ' ಆಂದೋಳನ ನಿಕಟಭವಿಷ್ಯದ ಆದ್ಯತೆ.

ನಮ್ಮದು ಅನ್ನ ಸಂಸ್ಕೃತಿ. ಆ ಜಾಗದಲ್ಲೀಗ 'ಚಪಾತಿ'ಗೆ ಸ್ಥಾನ. ಚಪಾತಿಯಿಲ್ಲದೆ ಊಟವಿಲ್ಲ. ಅದೇನೂ ಅನಿವಾರ್ಯವಲ್ಲ, ಸ್ಟೈಲ್! ಸಹಜ ಸಮೃದ್ಧದ ಅಧ್ಯಕ್ಷ ಎನ್.ಆರ್.ಶೆಟ್ಟಿ ಹೇಳುತ್ತಾರೆ - 'ಆಹಾರ ಔಷಧಿಯಾಗಬೇಕಿತ್ತು. ಆದರೀಗ ಔಷಧಿಯೇ ಆಹಾರವಾಗಿದೆ'!
ಹೌದಲ್ಲ. ಭತ್ತದಲ್ಲಿ ಎಷ್ಟೊಂದು ವಿಧ-ವೈವಿಧ್ಯ. ಒಂದೊಂದು ರೋಗಕ್ಕೆ ಒಂದೊಂದು ಭತ್ತ. ಬಾಣಂತಿಗೊಂದು, ಸಕ್ಕರೆ ಕಾಯಿಲೆಗೊಂದು, ರಕ್ತದ ಒತ್ತಡದ ಶಮನಕ್ಕೆ ಮತ್ತೊಂದು.. ಇದರ ಅನ್ನವನ್ನು ಸೇವಿಸಿದರೆ ರೋಗಶಮನ. ಗದ್ದೆಗಳೇ ಇಲ್ಲದ ಮೇಲೆ ಭತ್ತವೆಲ್ಲಿ! ಮಾತ್ರೆಗಳೇ ಆಹಾರ! ಒಬ್ಬೊಬ್ಬರ ಹೊಟ್ಟೆಯೊಳಗೆ ಏನಿಲ್ಲವೆಂದರೂ ದಿನಕ್ಕೆ ಕಾಲು ಕಿಲೋ ಗುಳಿಗೆಗಳು ಇಳಿಯುತ್ತವೆ.

ಆರುವತ್ತೈದಕ್ಕೂ ಮಿಕ್ಕಿ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿರುವ ಅಮೈ ದೇವರಾವ್, ಎಪ್ಪತ್ತು ದೇಸೀ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡುತ್ತಿರುವ ಮಂಡ್ಯದ ಬೋರೇಗೌಡರ 'ಅನ್ನದ ಬಟ್ಟಲ ಮಾತುಕತೆ' - ಕೇಳಿ ಮರೆಯುವಂತಹುದಲ್ಲ. ಬೋರೇಗೌಡರಿಗೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನಾಲ್ಕೆಕ್ರೆ ಗದ್ದೆ. ಮಾಧ್ಯಮಗಳಲ್ಲಿ ಬರುವ ಯಶೋಗಾಥೆಗಳ ಹಿಂದೆ ಬಿದ್ದು 'ಭತ್ತದ ಹುಚ್ಚು' ಹಿಡಿಸಿಕೊಂಡವರು. ಇತ್ತ ತಮಿಳುನಾಡು, ಅತ್ತ ಒರಿಸ್ಸಾಕ್ಕೂ ಹೋಗಿ ಭತ್ತದ ಮಾದರಿಗಳನ್ನು ತಂದು ಬೆಳೆದ ಸಾಹಸಿ.
ಭತ್ತದ ಋತು ಮುಗಿದ ಬಳಿಕವೂ ಗದ್ದೆಯ 'ಡೆಮೋ' ಇರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. 'ಇಪ್ಪತ್ತು ದೇಶಗಳ ರೈತರು, ವಿಜ್ಞಾನಿಗಳು ನನ್ನ ಗದ್ದೆಗೆ ಬಂದು ನೋಡಿ ಹೋಗಿದ್ದಾರೆ. ಆದರೆ ಅನತಿ ದೂರದ ಕೃಷಿ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಸಂಶೋಧನಾ ಕೇಂದ್ರಕ್ಕೆ ಈ ವಿಚಾರ ತಿಳಿದಿಲ್ಲ. ಅವರು ಬರಲೂ ಇಲ್ಲ' ಎನ್ನುತ್ತಾರೆ ಬೋರೇಗೌಡರು. ನಮ್ಮ ಸಂಶೋಧನೆಗಳು, ವಿಜ್ಞಾನಿಗಳಿಗೆ ರೈತರ ಹೊಲ, ಬೆವರಿನ ಕತೆಗಳು ಬೇಕಾಗಿಲ್ಲ. ತಮ್ಮ ನಾಲ್ಕು ಗೋಡೆಯ ಮಧ್ಯೆ ಕಂಡುಕೊಂಡ 'ಮಹಾಸತ್ಯ'ವೇ ಅಂತಿಮ! ಹಾಗಾಗಿ ನೋಡಿ - ಸಂಶೋಧನೆ, ವಿಜ್ಞಾನಿ, ರೈತ - ಈ ಸರಳರೇಖೆಗಳು ಎಲ್ಲೂ ಸಂಧಿಸುವುದೇ ಇಲ್ಲ.

'ಎಂತಹ ಬರವೇ ಬರಲಿ, ನಾನು ಮಾತ್ರ ವರುಷಪೂರ್ತಿ ಮೂರು ಹೊತ್ತು ಉಣ್ಣುತ್ತೇನೆ' - ಅಮೈ ದೇವರಾಯರ 'ಗಟ್ಟಿ' ಮಾತು! ಅವರಿಗೆ ವಿಶ್ವಾಸವಿದೆ - ನಾನು ಬೆಳೆದ ಅಕ್ಕಿಯನ್ನು ಉಣ್ಣುವುದಕ್ಕಿಂತ ಹೆಚ್ಚಿನ ಸಂತೃಪ್ತಿ, ನೆಮ್ಮದಿ ಬೇರೇನಿದೆ?
'ನನ್ನ ಅನ್ನಕ್ಕೆ ಪ್ರತ್ಯೇಕ ರುಚಿ. ಯಾವುದೇ ಸಮಾರಂಭಕ್ಕೆ ಹೋದರೂ ಅನ್ನ ರುಚಿಸುವುದಿಲ್ಲ. ನನಗೀಗ ಅರುವತ್ತೈದು ವರುಷ. ಈಗಲೂ ನನ್ನ ಆಹಾರ ಅನ್ನ-ಗಂಜಿ, ಚಪಾತಿಯಲ್ಲ! ಭತ್ತದಷ್ಟು ಶೀಘ್ರ ಇಳುವರಿ ಕೊಡುವ ಬೇರೆ ಯಾವ ಕೃಷಿಯಿದೆ? ಮೂರೇ ತಿಂಗಳಲ್ಲಿ ಇಳುವರಿ ನಿಮ್ಮ ಅಂಗಳಕ್ಕೆ! ಭತ್ತದ ಕೃಷಿ ಲಾಭವಿಲ್ಲದಿದ್ದರೂ ನಷ್ಟವಿಲ್ಲ. ವರ್ಷಪೂರ್ತಿ ಉಣ್ಣಬಹುದಲ್ಲಾ ಮಾರಾಯ್ರೆ - ದೇವರಾಯರ ವಿಶ್ವಾಸದ ಮಾತು. ಇದು ಅನುಭವದಿಂದ ರೂಢಿತವಾದ ವಿಶ್ವಾಸ. ಅಡಿಕೆಗಾಗಿಯೇ ದೊಡ್ಡದೊಡ್ಡ ಅಂಗಳ ಮಾಡ್ತೀರಲ್ಲಾ - ಅಡಿಕೆ ಸಿಪ್ಪೆ ಹಾಸಿ, ಅದರ ಮೇಲೆ ಮಣ್ಣನ್ನು ಹಾಕಿ ಭತ್ತದ ಕೃಷಿ ಮಾಡಬಹುದಲ್ಲಾ - ಮನಸ್ಸು ಬೇಕಷ್ಟೇ. ದೇವರಾಯರ ಹಿರಿ ಕಿವಿಮಾತು, 'ಮಾಜಿ ಭತ್ತದ ಕೃಷಿಕ'ರನ್ನು ಚುಚ್ಚದೆ ಬಿಡದು!

ಮನೆಯ ಚಾವಡಿಯಲ್ಲಿ, ಗದ್ದೆ ಹುಣಿಗಳಲ್ಲಿ, ಊರಿನ ಅಶ್ವತ್ಥಕಟ್ಟೆಯ ಬುಡದಲ್ಲಿ ಎಷ್ಟು ಕೃಷಿ ಮಾತುಕತೆಗಳು ನಡೆದಿಲ್ಲ? ಈಗ ಮನೆಗಳಿಗೆ ಚಾವಡಿಗಳೇ ಇಲ್ಲ, ಗದ್ದೆಯಿಲ್ಲದ ಮೇಲೆ ಹುಣಿಗಳೆಲ್ಲಿ? ಅಶ್ವತ್ಥ ಮರವು ಸಮೂಲ ನಾಶವಾಗಿದೆ? ಹಾಗಾಗಿ ಇಂತಹ ಮಾತುಕತೆಗಳೆಲ್ಲಾ ಮೌನವಾಗಿವೆ! ಅವಕ್ಕೆ ಮಾತುಕೊಡುವ ದಿವಸಗಳು ಬಂದಿದೆ.