Saturday, February 28, 2009

ಕಾಡು ಮಾವಿಗಿಲ್ಲಿ ರಾಜಮರ್ಯಾದೆ : ಮಾಪಲ್ತೋಟ

`ನಮ್ಮ ನಾಲಿಗೆ ಹಳೆ ರುಚಿಯನ್ನು ಕಳಕೊಂಡಿದೆ. ಅದಕ್ಕೆ ಮತ್ತೊಮ್ಮೆ ರುಚಿಯನ್ನು ಹಿಡಿಸುವ ಕೆಲಸ ಸಾಧ್ಯವಾದರೆ ನಮ್ಮಿಂದ ದೂರವಾದ, ದೂರವುಳಿದ ಹಣ್ಣಿನ ತಳಿಗಳು ಮರಳಿ ಬರಬಹುದು' - ಮಾಪಲ್ತೋಟ ಸುಬ್ರಾಯ ಭಟ್ಟರ ಈ ಮಾತು ಅವರ ಕಾಡುಮಾವಿನ ಹುಚ್ಚಿಗೆ ಕನ್ನಡಿ ಹಿಡಿಯುತ್ತದೆ.

ಸುಳ್ಯ ತಾಲೂಕಿನ ಮರ್ಕಂಜದ ಈ ಕೃಷಿಕರ ಜಮೀನಿನಲ್ಲಿ ನೂರಕ್ಕೂ ಹೆಚ್ಚು ಕಾಡುಮಾವಿನ ತಳಿಗಳಿವೆ. ಬಹುತೇಕ ನೆಟ್ಟು ಬೆಳೆಸಿದವುಗಳೇ. ಮಾವು, ಹಲಸು, ವಿವಿಧ ಹಣ್ಣುಗಳು, ಅದರಲ್ಲೂ ಸ್ವದೇಶಿ-ವಿದೇಶಿ ಗುಂಪುಗಳು, ಔಷಧೀಯ, ಕಾಡುಗಿಡಗಳು, ಮರಮಟ್ಟುಗಳು.....ಇವೆಲ್ಲಾ ಇವರ ಆಸಕ್ತಿಯ ಮೂರ್ತರೂಪಗಳು. `ಯಾವುದಿಲ್ಲ' ಎಂದು ಪಟ್ಟಿ ಮಾಡುವುದೇ ಸುಲಭವಾಗುವಷ್ಟು ಹಣ್ಣುಗಳ ಸಸ್ಯಸಂಗ್ರಹ.

ಮಾಂಬಳ, ಗೊಜ್ಜು, ಹುಳಿ ಪದಾರ್ಥಗಳಿಗೆ ಬೇರೆಬೇರೆ ಜಾತಿಯ ಕಾಡುಮಾವುಗಳ ಬಳಕೆ. ಕೆಲವು ಸಿಹಿ, ಕೆಲವು ಹುಳಿ. ನಾವು `ಇದು ನೆಕ್ಕರೆ, ಇದು ಕಾಟು.....' ಹೀಗೆ ಹೆಚ್ಚೆಂದರೆ ಐದಾರು ಜಾತಿಗಳನ್ನು ಗುರುತಿಸುತ್ತೇವೆ. ಇವರ ಮಾತು, ಮನಸ್ಸು, ಜಮೀನುಗಳಲ್ಲಿ ಅದರದ್ದೇ ಅದ ರುಚಿಯ ನೂರಾರು ಕಾಡುಮಾವುಗಳ ವೈವಿಧ್ಯವಿದೆ.

ಕೃಷಿಯ ಖುಷಿ ಬಾಲ್ಯದ ನಂಟು

ತಂದೆಯವರೊಂದಿಗೆ ಇದ್ದು ಕೃಷಿ ಮಾಡಿದ ಸುಬ್ರಾಯ ಭಟ್ಟರಿಗೆ ಮಣ್ಣಿನ ಮಿಡಿತ ಚೆನ್ನಾಗಿ ಗೊತ್ತು. ಕೃಷಿ ಅವರಿಗೆ ಒಂದು ಕೆಲಸವಲ್ಲ. ಅದೊಂದು ಅಭ್ಯಾಸ. ಬಾಲ್ಯದಲ್ಲಿ - ಬೇರೆಡೆ ಯಾವುದೇ ಹಣ್ಣನ್ನು ತಿನ್ನಲಿ, ಅದು ತನ್ನ ತೋಟದಲ್ಲಿ ಇರಬೇಕು, ಬೆಳೆಸಬೇಕು ಎಂಬ ಹಂಬಲ. ಕಣ್ಣೆದುರೇ ಮಾವು-ಹಲಸುಗಳ ತಳಿ ನಾಶವಾಗುವುದು ಕಂಡು ಸಂಕಟ. ಇವನ್ನು ತನ್ನ ತೋಟದಲ್ಲಾದರೂ ಉಳಿಸಬೇಕು-ಬೆಳೆಸಬೇಕು ಎಂಬ ಛಲ. ಇದುವೇ `ಸಂಗ್ರಹ ಹುಚ್ಚಿ'ಗೆ ನಾಂದಿ. ಮೊದಲೇ ಇದ್ದ 32 ಜಾತಿಯ ಕಾಡುಮಾವು ಸಂಸಾರಕ್ಕೆ ಮತ್ತೂ 70ಕ್ಕೂ ಹೆಚ್ಚು ಜಾತಿ ಸೇರಿ ಶತಕ ದಾಟಿತು. ಹದಿನೇಳು ವರುಷದ ತಪಸ್ಸು ಇದು.

ಹೊಸ ಜಾತಿಯ ಮಾವಿನ ಸುಳಿವು ಸಿಕ್ಕರೆ ಸಾಕು. ಅಲ್ಲಿಗೆ ಧಾವಿಸುತ್ತಾರೆ. ಹಣ್ಣನ್ನು ಪಡೆಯುತ್ತಾರೆ. ತಿಂದು, ರುಚಿ ಅನುಭವಿಸಿ ಪಾಸಾದರಷ್ಟೇ ಸ್ವೀಕಾರ. ವಿಶಿಷ್ಟ ರುಚಿಯಿದ್ದರೆ ಅದರ ಕುಡಿ ತಂದು ಕಸಿಕಟ್ಟಿದ ನಂತರವೇ ವಿಶ್ರಾಂತಿ. ಕಸಿ ಕಟ್ಟುವಾಗ ಸ್ವಲ್ಪ ಹೆಚ್ಚೇ ಕಟ್ಟುತ್ತಾರೆ. ತನ್ನ ತಳಿಸಂರಕ್ಷಣೆ ಕಾಯಕಕ್ಕೆ ಬೇಕಾದ 3- 4 ಗಿಡಗಳನ್ನು ನೆಟ್ಟು ಉಳಿದುದನ್ನು `ನಿಜ ಆಸಕ್ತರಿಗೆ' ಹಂಚುತ್ತಾರೆ. `ನನ್ನಲ್ಲಿ ಅಳಿದರೂ ಅವರಲ್ಲಿ ಉಳಿಯಲಿ' ಎಂಬ ದೂರದೃಷ್ಟಿ. `ಈ ಅನ್ವೇಷಣೆಗೆ ನನಗೆ ಮಾಧ್ಯಮಗಳು ಸಹಕರಿಸಿದುವು' ಅಂತ ನೆನೆಯುತ್ತಾರೆ.

ಸ್ವಾದಿಷ್ಟ ರುಚಿ, ಪರಿಮಳ

ಕಸಿ, ಹೈಬ್ರಿಡ್ ಮಾವಿನಂತೆ ಕಾಡುಮಾವಿಗೆ ನಿಶ್ಚಿತವಾದ ಹೆಸರಿಲ್ಲ. ಗುರುತು ಹಿಡಿಯಲೋಸುಗ ಪ್ರ್ರಾದೇಶಿಕ ಹೆಸರು. ಹಣ್ಣಿನ ಗುಣ, ಪರಿಮಳ, ರುಚಿಯನ್ನು ಹೊಂದಿಕೊಂಡು ನಾಮಕರಣ. ಉದಾ: ಸಾಸಿವೆ ಪರಿಮಳವಿರುವ ಮಾವು `ಸಾಸಿವೆ ಮಾವು'. ಇದರಲ್ಲೂ ರುಚಿವ್ಯತ್ಯಾಸ ಹೊಂದಿಕೊಂಡು ನಾಲ್ಕು ಪ್ರಬೇಧಗಳು. ಒಂದು ಚಪ್ಪಟೆಯಾಕಾರ, ಒಂದು ಉರುಟು, ಇನ್ನೊಂದು ಎರಡೂ ಬದಿಯಲ್ಲೂ ಬೇರೆಬೇರೆ ರುಚಿಯುಳ್ಳದ್ದು, ಇನ್ನೊಂದು ಸಣ್ಣಗೊರಟು.... ಜೀರಿಗೆ ಪರಿಮಳವಿರುವ `ಜೀರಿಗೆ ಮಾವು'. `ಕಂಚುಹುಳಿ' ಪರಿಮಳದ್ದು, ಪನ್ನೀರು ಪರಿಮಳದ್ದು ಇವೆ. ಅರಸಿನ, ಸೇಡಿಮಣ್ಣಿನ ಬಣ್ಣದ ಮಾವಿದೆ. ಮರ ಉದ್ದಕ್ಕೆ ಬೆಳೆದದ್ದು `ಗಳೆಮಾವು'. `ಮಾವನ್ನು ಸಂಗ್ರಹಿಸುವ ಆಸಕ್ತಿ ನಿಮಗಿದೆಯೇ? ಹಾಗಾದರೆ ಮಾವಿನ ಗುರುತು ಹಿಡಿಯುವಲ್ಲಿ ಏಕಕಾಲಕ್ಕೆ ಎರಡು ಜಾತಿಯ ಹಣ್ಣು ಮಾತ್ರ ತಿನ್ನಿ. ಹೆಚ್ಚು ಜಾತಿಯ ಮಾವು ತಿಂದರೆ ನಾಲಗೆ ನಿಮಗೆ ಕೈಕೊಡುತ್ತದೆ' ಭಟ್ಟರ ಕಿವಿಮಾತು. `ಎಳೆಯ ಮರದಲ್ಲಿ ಮಾವಿನ ಹಣ್ಣಿನ ಮೂಲ ರುಚಿ ಸಿಗುವುದಿಲ್ಲ. ಮರ ಬೆಳೆದ ನಂತರ ಅದರ ಹಣ್ಣು ಮೂಲ ಗುಣ ಪಡೆಯುತ್ತದೆ.'

`ಮಿಡಿ' ಆಯ್ಕೆ ಹೇಗೆ?

ಕಾಡು ಮಾವಿನ `ಮಿಡಿ ಉಪ್ಪಿನಕಾಯಿ' ಸ್ವಾದಿಷ್ಟ. ಕಾಯನ್ನು ತುಂಡು ಮಾಡಿ ಉಪ್ಪಿನಕಾಯಿ ಹಾಕಬಹುದು. ಇದರ ಮಿಡಿ ಉಪ್ಪಿನಕಾಯಿಗೆ ಹೊಂದುತ್ತದೋ ಇಲ್ಲವೋ ಎಂದು ತಿಳಿಯುವುದು ಹೇಗೆ? ಇವರ ತಂದೆಯವರಲ್ಲಿದ್ದ ಪರೀಕ್ಷಾ ವಿಧಾನ ಹೀಗೆ : ಪದಾರ್ಥಕ್ಕೆ ತರಕಾರಿಯನ್ನು ಹೆಚ್ಚಿ ಅದಕ್ಕೆ ಉಪ್ಪು, ಹುಳಿ ಹಾಕಿ ಬೇಯಿಸುತ್ತೀರಷ್ಟೇ. ಇದಕ್ಕೆ ಪರೀಕ್ಷಿಸಬೇಕಾದ ಕಾಡುಮಾವಿನ ಐದಾರು ಮಿಡಿ ಹಾಕಿ. ಮತ್ತೆ ಐದಾರು ಮಿಡಿಯನ್ನು ತುಂಡು ಮಾಡಿ ಹಾಕಿ ಒಟ್ಟಿಗೆ ಬೇಯಿಸಿ. ಹೀಗೆ ಬೆಂದಾಗ ಮಿಡಿ ಮೃದುವಾಗಬಾರದು-ಗಟ್ಟಿಯಾಗಿರಬೇಕು, ಕಪ್ಪಾಗಬಾರದು, ಬಣ್ಣ ಕಳೆದುಕೊಳ್ಳಬಾರದು, ಸೊನೆ ಬಿಡಬಾರದು, ಪರಿಮಳ ಮೊದಲಿನಂತೆ ಉಳಿದಿರಬೇಕು. ತುಂಡರಿಸಿ ಹಾಕಿದ ಮಿಡಿಯು ಉಪ್ಪು, ಹುಳಿ, ಖಾರ ಎಳೆದದ್ದರಿಂದಾಗಿ ರುಚಿಯಲ್ಲಿ ವ್ಯತ್ಯಾಸವಾಗಬಾರದು, ಬೆಂದಾಗ ರುಚಿಯಲ್ಲಿ ಕಹಿ ಅನುಭವವಾಗಬಾರದು - ಈ ಎಲ್ಲಾ ಗುಣಗಳಿದ್ದರೆ ಮಾತ್ರ ಅದಕ್ಕೆ `ಉಪ್ಪಿನಕಾಯಿ ಮಿಡಿ'ಯಾಗುವ ಅರ್ಹತೆ.

`ಮಿಡಿಯನ್ನು ಕತ್ತಿಯಲ್ಲಿ ಕೊಯ್ಯುವಾಗಲೇ ಮಿಡಿಯ ಒಳಗಿನ ಬಿಳಿಭಾಗ ಕಪ್ಪಾಯಿತು ಎಂದಾದರೆ ಅಗಲೇ ರಿಜೆಕ್ಟ್.. ಮಿಡಿ ಪರೀಕ್ಷೆ ಬೇಕೇಬೇಕು. ಪರೀಕ್ಷೆ ಮಾಡದೆ ಮಿಡಿ ಹಾಕಿದರೆ ಉಪ್ಪಿನಕಾಯಿ ಮಾಡುವ ಹಂತದಲ್ಲಿ ಉಪ್ಪು-ಸಾಸಿವೆ ಸೇರಿದಾಗ ಮಿಡಿ ಕಪ್ಪಗಾಗುತ್ತದೆ.' ಮನೆಯೊಡತಿ ಸತ್ಯವತಿ ದನಿಗೂಡಿಸುತ್ತಾ, `3 ವರುಷದ ವರೆಗೂ ಉಪ್ಪಿನಕಾಯಿ ಕೆಡದೆ, ಮಿಡಿಯ ಮೂಲ ಗುಣದಲ್ಲೇ ಇರುವ ಮಾವಿನ ಜಾತಿ ನಮ್ಮ ಗುಡ್ಡದಲ್ಲಿದೆ' ಎನ್ನುತ್ತಾರೆ. ಇವರ ಸಂಗ್ರಹದಲ್ಲಿ ಉಪ್ಪಿನಕಾಯಿಗೆ ಆಗುವ ಹನ್ನೆರಡು ಮಾವುಗಳಿದ್ದರೆ, ನೀರುಮಾವಿನಕಾಯಿ ಹಾಕಲೆಂದೇ ಎರಡು ಜಾತಿಯಿದೆ.

`ಗುಡ್ಡದಲ್ಲಿ ಮುಖ ಸಿಂಡರಿಸುವಂತಹ ಹುಳಿ ರುಚಿಯ ಮಾವಿನ ಮರವೊಂದಿದೆ. ಅದರ ಹಣ್ಣು ಮನುಷ್ಯರಿಗೆ ಬಿಡಿ, ಮಂಗ ಕೂಡಾ ತಿನ್ನುವುದಿಲ. ಅದರ ಸೊನೆ ತಾಗಿತೋ, ಅಲ್ಲಿ ಹುಣ್ಣಾಗುತ್ತದೆ' ಭಟ್ ಹೇಳುತ್ತಾರೆ. `ಮಾವಿನ ರುಚಿಯನ್ನು ಗುರುತಿಸಲು ಕಷ್ಟ. ಹಣ್ಣಾಗುವ ಹೊತ್ತಿಗೆ ಒಂದು ಮಳೆ ಬಿದ್ದರೂ ಸಾಕು, ರುಚಿ ವ್ಯತ್ಯಾಸವಾಗುತ್ತದೆ' ಎನ್ನುತ್ತಾ, ಮಳೆಯ ಮೊದಲಿನ ಮತ್ತು ನಂತರದ ಒಂದೊಂದು ಹಣ್ಣನ್ನು ಸುಬ್ರಾಯ ಭಟ್ಟರು ನೀಡಿದರು. ಜಾತಿ ಒಂದೇ, ರುಚಿ ಭಿನ್ನ.

ಅಪ್ಪೆಮಿಡಿಯ ಹದಿನಾರು ಜಾತಿಗಳಿವೆ. ಫಲ ಬರಬೇಕಷ್ಟೇ. ನಿರೀಕ್ಷೆಯಲ್ಲಿದ್ದಾರೆ. `ಅಪ್ಪೆಮಿಡಿಯ ಸಹಜ ನೆಲದ ಗುಣ ಇಲ್ಲಿ ಬಂದಿತೋ' ಎಂಬ ಸಂಶಯವೂ ಇದೆ.

ಸಂಚಾರದಿಂದ ಸಂಚಯನ

ಇಷ್ಟು ಮಾವಿನ ಸಂಗ್ರಹ ಏಕಗಂಟಿನಲ್ಲಿ ಆದುದಲ್ಲ. ದಕ್ಷಿಣಕನ್ನಡ, ಉಡುಪಿ, ಶಿರಸಿ, ಸಿದ್ದಾಪುರ...ಹೀಗೆ ದೂರದೂರುಗಳಿಗೂ ಸಂಚರಿಸಿದ್ದಾರೆ. ಇದಕ್ಕಾಗಿ ವ್ಯಯಿಸಿದ ಹಣವೆಷ್ಟೋ, ಸಮಯವೆಷ್ಟೋ.... ಕಸಿಕಟ್ಟಿದ ಮಾವಿನ ಗಿಡಗಳ ಆರೈಕೆ ಹೇಳುವಂತಹ ಕಷ್ಟವಿಲ್ಲ. `ಶುರುವಿನ ಮಳೆಗೆ ಸಸಿ ನೆಡಿ. ಗೊಬ್ಬರ ಕೊಡಿ. ಮುಂದಿನ ಬೇಸಿಗೆಯಲ್ಲಿ ಅಗತ್ಯಬಿದ್ದರೆ ನೀರು ಹಾಕಿ. ಬುಡಕ್ಕೆ ಹೊಸಮಣ್ಣು ಬಿದ್ದಷ್ಟೂ ಒಳ್ಳೆಯದು' ಭಟ್ ಅನುಭವ. ನೆಟ್ಟು ಹತ್ತು ವರುಷದಲ್ಲಿ ಫಲ ಬಿಡಲು ಶುರು.

`ನನ್ನಲ್ಲಿ ಇರುವುದು ಗೌಣ. ಇನ್ನೆಷ್ಟೋ ಜಾತಿಯವು ಇವೆ. ಅವುಗಳನ್ನು ಹುಡುಕುವ ಕಣ್ಣುಬೇಕು. ನನ್ನ ಮಿತಿ ಮತ್ತು ಸಾಮಥ್ರ್ಯದಂತೆ ಬೆಳೆಸಿದ್ದೇನೆ. ಹಾಗಾಗಿ ಕಳೆದ ನಾಲ್ಕು ವರುಷದಿಂದ ನನ್ನ ತಳಿ ಹುಡುಕಾಟಕ್ಕೆ ವಿಶ್ರಾಂತಿ ನೀಡಿದ್ದೇನೆ' ಎನ್ನುತ್ತಾರೆ. ಮಗ ವೆಂಕಟಮುರಳಿ ಪದವೀಧರ. ತಂದೆಯವರ ಸಸ್ಯಕಾಶಿಯ ಉತ್ತರಾಧಿಕಾರಿ. ಆಸಕ್ತಿ ಇದೆ. ತಂದೆಯೊಂದಿಗೆ ಬೆಳೆಯುತ್ತಿದ್ದಾರೆ.

ಭಟ್ಟರ ಸಂಗ್ರಹದಲ್ಲಿ ಕಾಡು ಮಾವು ಇಷ್ಟಾದರೆ; ಹೈಬ್ರಿಡ್, ಕಸಿಮಾವು ಜಾತಿಗಳು ತೊಂಭತ್ತರ ಹತ್ತಿರವಿವೆ. ಗಿಡ, ಮರಗಳಲ್ಲಿ ಮಾವಿನಹಣ್ಣು ತೊನೆಯುತ್ತದೆ, ಬಿದ್ದು ಮಣ್ಣಲ್ಲಿ ಮಣ್ಣಾಗಿ ಹೋಗುತ್ತವೆ. ಅದನ್ನೆಲ್ಲಾ ಮಾರಾಟ ಮಾಡಬಹುದಲ್ಲವೇ?
`ಮಾರಾಟ ಉದ್ದೇಶದಿಂದ ನಾನು ಯಾವುದೇ ಗಿಡಗಳನ್ನು ತೋಟದಲ್ಲಿ ನೆಟ್ಟಿಲ್ಲ. ಕೇವಲ ತಳಿ ಸಂರಕ್ಷಣೆ ಉದ್ದೇಶ ಮಾತ್ರ. ನನ್ನ ತೋಟವಿರುವುದು ತೀರಾ ಹಳ್ಳಿ. ಇಲ್ಲಿ ಮಾರುಕಟ್ಟೆ ರೂಪಿಸಲು ಕಷ್ಟ. ದಲ್ಲಾಳಿಗಳಿಗೆ ಕೊಟ್ಟರೆ ನನಗೆನೋ ಕಾಸು ಸಿಗಬಹುದು. ಆದರೆ ಗಿಡ ಹಾಳಾದರೆ? ನಾನೇ ಹಣ್ಣುಗಳನ್ನು ಆಯ್ದು ಹತ್ತಿರದ ಸುಳ್ಯವೋ, ಪುತ್ತೂರಿಗೆ ಒಯ್ದರೆ ಸರಿಯಾದ ದರ ಸಿಗಬಹುದೆನ್ನುವ ವಿಶ್ವಾಸ ನನಗಿಲ್ಲ. ಯಾಕೆಂದರೆ ಬೆಳೆದವನೇ ಮಾರುವವನಲ್ಲಿಗೆ ಒಯ್ದರೆ ಅದು ಸಸಾರ! ಇದೆಲ್ಲಾ ನಾವು ಕುಟುಂಬ ಸದಸ್ಯರು ಮಾಡುವಂತಹುದಲ್ಲ.

ಮಾವಿನ ಋತುವಿನಲ್ಲಿ ಭಟ್ಟರ ಮನೆಯಲ್ಲಿ ಊಟಕ್ಕೆ ಮಾವಿನಹಣ್ಣಿನ ಪಾಕ ಇದ್ದೇ ಇರುತ್ತದೆ. ಶರಬತ್ ಮಾವಿನ ಹಣ್ಣಿನದೇ. `ಮಾವು, ಹಲಸು ಮತ್ತು ಹಣ್ಣಿನ ಗಿಡಗಳನ್ನು ಸಂರಕ್ಷಿಸಿ, ಅದರ ಹಣ್ಣನ್ನು ತಿಂದ ಸಂತೃಪ್ತಿ ಕೋಟಿ ಹಣಕ್ಕಿಂತಲೂ ಮಿಗಿಲಿನದು. ಹಾಗಾಗಿ ನಾನು ಕೋಟ್ಯಾಧೀಶ್ವರ' ಎನ್ನುವಾಗ ಸುಬ್ರಾಯ ಭಟ್ಟರ ಕಣ್ಣುಗಳು ಇನ್ನಷ್ಟು ಗಿಡಗಳನ್ನು ಅರಸಲು ಸಿದ್ಧವಾಗುತ್ತದೆ!
ವಿಳಾಸ: ಸುಬ್ರಾಯ ಭಟ್, ಮಾಪಲ್ತೋಟ ಮನೆ, ಅಂಚೆ : ಮರ್ಕಂಜ, ಸುಳ್ಯ ತಾಲೂಕು,ದ.ಕ. ಜಿಲ್ಲೆ.
ದೂರವಾಣಿ : 08257-274 239.

(ಸುಳ್ಯ - ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಅರಂತೋಡು ಎಂಬ ಚಿಕ್ಕ ಪೇಟೆಯಿದೆ. ಇಲ್ಲಿಂದ ಅಂದಾಜು 12 ಕಿ.ಮೀ. ದೂರದಲ್ಲಿದೆ ಮರ್ಕಂಜ. ಸರಕಾರಿ ಬಸ್ ಸುಳ್ಯದಿಂದ ಮರ್ಕಂಜಕ್ಕೆ ದಿನಕ್ಕೆ ನಾಲ್ಕು ಟ್ರಿಪ್ ನಡೆಸುತ್ತದೆ; ಜೀಪು ಸವರ್ೀಸೂ ಇದೆ. ದುರ್ಗಮ ರಸ್ತೆ. ಇಲ್ಲಿಂದ ಮಾಪಲ್ತೋಟಕ್ಕೆ ಎರಡು ಕಿಲೋಮೀಟರ್ ಕಚ್ಚಾರಸ್ತೆ. ಯಾರನ್ನೂ ಕೇಳಿದರೂ ತೋರಿಸುತ್ತಾರೆ. ಆಸಕ್ತರು ಮೊದಲೇ ಫೋನಿಸಿ, ದಿನ ನಿಗದಿ ಪಡಿಸಿ ಬನ್ನಿ.)

Wednesday, February 25, 2009

ರಾಕ್ಷಸಾತಿಥ್ಯ!

ಇಪ್ಪತ್ತು ವರುಷದ ಬಳಿಕ ಬಾಲ್ಯ ಸ್ನೇಹಿತನ ದರ್ಶನವಾಯಿತು. ಮನೆಗೆ ಬರುವಂತೆ ಒತ್ತಾಯ. ನಾಲ್ಕೈದು ಕಂತುಗಳಲ್ಲಿ ತಪ್ಪಿಸಿಕೊಂಡೆ. ಕಂತು ಮುಗಿಯಬೇಕಲ್ವಾ! ಮೊದಲೇ ತಿಳಿಸಿ ಹೋದೆ. ಇಪ್ಪತ್ತು ವರುಷದ ಮಾತುಕತೆಯ ಮಹಾಸ್ಪೋಟ! ಪಾಪ, ಆತನ ಮನೆಮಂದಿಗೆ ನಾನು ಅಪರಿಚಿತ! ಅವರ ಸ್ಥಿತಿ ಹೇಗಾಗಬೇಡ. ಸಾವರಿಸಲು ಕೆಲವು ತಾಸು ಬೇಕಾಯಿತು.

ಇರಲಿ. ಮನೆಗೆ ಕಾಲಿಟ್ಟ ತಕ್ಷಣ ಕಾಫಿ, ತಿಂಡಿ ಸಮಾರಾಧನೆ. ಉಭಯಕುಶಲೋಪರಿ. ಮಧ್ಯೆ ಮಧ್ಯೆ 'ಪಾನಿಯ', ಕುರುಕುರು ತಿಂಡಿ, ಹಣ್ಣುಗಳು. ಮಧ್ಯಾಹ್ನ 'ಭಯಂಕರ' ಭೋಜನ! ಎರಡು ಬಗೆ ಪಾಯಸ, ಜತೆಗೆ ಇನ್ನಷ್ಟು ಸಿಹಿ. ಉಂಡು ಎದ್ದಾಗ ನನ್ನೊಳಗೆ 'ಬಕಾಸುರ' ಮಿಂಚಿ ಮರೆಯಾದ!

ಕೈತೊಳೆದು ಬರುತ್ತಿದ್ದಂತೆ ಟ್ರೇಯಲ್ಲಿ ರಸಬಾಳೆಹಣ್ಣಿನ ನಾಲ್ಕೈದು ಪಾಡ. 'ಇದು ನಮ್ಮ ತೋಟದ್ದೇ. ತಿನ್ನು ಮಾರಾಯ' ಎನ್ನುತ್ತಾ ತಿನ್ನಲು ಶುರುಮಾಡಿದ. ಒತ್ತಾಯವೋ ಒತ್ತಾಯ. ಅಂತೂ ಹೊಟ್ಟೆ ಸೇರಿತು. ಸಂಜೆ ಕಾಫಿ-ಎಣ್ಣೆತಿಂಡಿ. ಹೊರಡುವಾಗ ತಂಪುಪೆಟ್ಟಿಗೆಯಿಂದ ಇನ್ನೇನೋ? ಸುಧಾರಿಸಲು ಎರಡು ದಿವಸ ಬೇಕಾಯಿತು! ಒತ್ತಾಯಿಸಿ ತಿನ್ನಿಸುವ ನನ್ನ ಪಾಲಿಗೆ ಇದು 'ರಾಕ್ಷಸಾತಿಥ್ಯ'.

ಒಮ್ಮೆ ಹೋಟೇಲಿನಲ್ಲಿ ಹೀಗಾಯಿತು. ಪರಿಚಿತರ ದಾಕ್ಷಿಣ್ಯಕ್ಕೆ ಗಂಟುಬಿದ್ದಿದ್ದೆ. ಮಸಾಲೆದೋಸೆ, ರೊಟ್ಟಿ, ಗೋಬೀಮಂಚೂರಿ, ಮೊಸರನ್ನ, ಡ್ರೈರ್ರೈಸ್, ಜ್ಯೂಸ್, ಗಡ್ಬಡ್. ಭರ್ಜರಿ! ಬಿಲ್ಲು ಸಾವಿರ!

ಅಲ್ಲ, ನಮ್ಮ ಹೊಟ್ಟೆಯೊಳಗೆ ಇಷ್ಟು ಜಾಗ ಇದೆಯಾ? ಇದೇನು ಹೊಟ್ಟೆಯೋ, ಅಲ್ಲ ಮುನಿಸಿಪಾಲಿಟಿ ಡಬ್ಬಿಯೋ?ಮೂಲಿಕಾತಜ್ಞ ವೆಂಕಟ್ರಾಮ ದೈತೋಟರು ಆಗಾಗ್ಗೆ ಎಚ್ಚರಿಸುತ್ತಾರೆ - 'ನಮ್ಮಹೊಟ್ಟೆ ತ್ಯಾಜ್ಯ ತುಂಬುವ ಚೀಲವಲ್ಲ.' ಹೆಚ್ಚಿನೆಡೆ ವಿಪರೀತ ಆತಿಥ್ಯದಿಂದ ಹೊಟ್ಟೆ ತ್ಯಾಜ್ಯ ತುಂಬುವ ಚೀಲವಾಗುತ್ತದೆ! ಆಹಾರದ ನಿಯಂತ್ರಣ ನಮ್ಮ ಕೈಲಿದ್ದರೆ ಓಕೆ. ನಾಲಗೆಯ ಹಿಡಿತದಲ್ಲಿದ್ದರೆ?

ನಮ್ಮೂರಿನ ಪ್ರತಿಷ್ಠಿತ ಮನೆಯಲ್ಲಿ ಅನಂತ ಚತುರ್ದಶಿ, ನವರಾತ್ರಿ ಪ್ರತೀವರುಷ ಆಚರಿಸಲ್ಪಡುತ್ತಿತ್ತು. ನಳನನ್ನು ನಾಚಿಸುವ ಸೂಪಜ್ಞರ ಅದ್ಭುತ ಕೈರುಚಿ! ಅವರಲ್ಲಿ ಒಬ್ಬರು 'ನಾಲ್ಕು ಕಾವಂಗ ಪಾಯಸ ಕುಡಿದ, ಮೂವತ್ತು ಹೋಳಿಗೆ, ಅರುವತ್ತು ಮೈಸೂರು ಬಾಳೆಹಣ್ಣು ತಿಂದ ಸಾಧಕ'! ನೋಡಲು ಸಣಕಲು ದೇಹ. ಇದು ಉತ್ಪ್ರೇಕ್ಷೆಯಲ್ಲ.

ಕುಳಿತು ಏಳುವುದರೊಳಗೆ ನಲವತ್ತು ಇಡ್ಲಿ ತಿಂದವರನ್ನು ತೀರಾ ಹತ್ತಿರದಿಂದ ಬಲ್ಲೆ. ಸಮಾರಂಭವೊಂದರಲ್ಲಿ ಈ ಪರಂಪರೆಗೆ ಸೇರಿದ ಒಬ್ಬರು ಭೋಜನಕ್ಕೆ ಕುಳಿತಿದ್ದರು. ಪಾಯಸದ ಸರತಿ ಬಂತು. 'ಮಾನವ ಸಹಜ'ವಾಗಿ ಎರಡ್ಮೂರು ಸೌಟು ಹಾಕಿಸಿಕೊಂಡು, 'ಇನ್ನು ಸಾಕು' ಅಂದರು. ಬಡಿಸುವವರು ಗೇಲಿ ಮಾಡಲೋಸುಗ ಇನ್ನೂ 'ಎರಡು ಸೌಟು ಬಡಿಸ್ಲಾ' ಎಂದರು. 'ಬೇಕಾದಷ್ಟು ಬಡಿಸಲು ಸಾಧ್ಯವಾ? ಹಾಗಿದ್ದರೆ ಬಡಿಸಿ' ಎಂದರು. ಇವರು ಬಡಿಸಿದ್ದೇ ಬಡಿಸಿದ್ದು. ಅವರು ಉಂಡದ್ದೇ ಉಂಡದ್ದು. ಪಾಯಸದ ಪಾತ್ರೆ ಖಾಲಿ. ಯಜಮಾನ ಬಂದು, 'ಸ್ವಾಮಿ, ಸುಧಾರಿಸಬೇಕು. ಏನೋ ಎಡವಟ್ಟು ಆಯಿತು. ಕ್ಷಮಿಸಿ. ಉಳಿದವರಿಗೆ ಪಾಯಸ ಇಲ್ಲ' ಎಂದು ವಿನಂತಿಸಿದ ಬಳಿಕ 'ಪಾಯಸ ಆಪೋಶನ' ನಿಲ್ಲಿಸಿದ್ದರು.

ಬಾಲ್ಯದ ಬೆರಗು ಕಣ್ಣುಗಳಿಂದ ನೋಡಿದ ನೆನಪಿನ್ನೂ ಮಾಸಿಲ್ಲ. ಇದೆಲ್ಲವನ್ನೂ ಕಂಡಾಗ, ಕೇಳಿದಾಗ ಯಕ್ಷಗಾನದ 'ಬಾರಣೆ' ನೆನಪಾಗುತ್ತದೆ! ಒಂದು ರೀತಿಯ ರಾಕ್ಷಸ ಪರಂಪರೆ! ಇವೆಲ್ಲವೂ ಆತಿಥ್ಯದ ಮುಖಗಳು.

ಉತ್ತರ ಕನ್ನಡ ಜಿಲ್ಲೆಗೊಮ್ಮೆ ಹೋಗಬೇಕು. ನಿಜವಾದ ಆತಿಥ್ಯ ಗೋಚರವಾಗುತ್ತದೆ. ಅತಿಥಿಗಳು ಬಂದಾಗ ಮನೆಮಂದಿ ಎಲ್ಲವರೂ 'ಬಂದ್ರಾ, ಆರಾಮವಾ' ಅಂತ ವಿಚಾರಿಸಿ, ನೀರು-ಬೆಲ್ಲ ಇಡುತ್ತಾರೆ. ಊಟದಲ್ಲೂ ಅಷ್ಟೇ. ರಾಕ್ಷಸಾತಿಥ್ಯ ಇಲ್ಲ! ಮಾವು, ಹಲಸುಗಳ ಋತುವಿನಲ್ಲಿ ಸಿಗುವ ಹಣ್ಣುಗಳಿಂದ ವಿವಿಧ ಖಾದ್ಯಗಳು. ಮನೆಯ ಸದಸ್ಯನಂತೆ ಮಾತನಾಡಿಸುವ ಪರಿ. ಮಲೆನಾಡಿನ ಸಾಂಪ್ರದಾಯಿಕ ತಿಂಡಿ-ತೀರ್ಥದ ಪರಂಪರೆ ಇನ್ನೂ ಮಾಸಿಲ್ಲ. ನಿಜಕ್ಕೂ ಅನನ್ಯ.

ಅದನ್ನೇ ನಮ್ಮೂರಿಗೆ ಹೋಲಿಸಿ. ಪೇಟೆಯಲ್ಲಿ ಕರೆಗಂಟೆ ಒತ್ತಿ. ಕಿಟಕಿಯಲ್ಲಿ 'ಅಗೋಚರ ಮುಖ' ಕಾಣಿಸಿಕೊಂಡು, 'ಯಾರು ಬೇಕಿತ್ತು' - ಮುಖಕ್ಕೆ ಹೊಡೆದವರಂತೆ ಪ್ರಶ್ನೆ. ಗೋತ್ರ, ಪ್ರವರ ಹೇಳಿದ ಮೇಲೆ ಬಾಗಿಲು ತೆರೆದುಕೊಳ್ಳುತ್ತದೆ. ಕಳ್ಳಕಾಕರ ಭೀತಿಯೂ ಒಂದು ಕಾರಣ. ಅದಕ್ಕಿಂತ ಮುಂಚಿತವಾಗಿ 'ಅತಿಥಿ' ಎಂಬುದು ಪದಕೋಶದಿಂದಲೇ ಡಿಲೀಟ್ ಆಗಿರುವುದು ಮತ್ತೊಂದು.

ಕೆಲವೆಡೆ 'ನಾಯಿಗಳಿವೆ, ಎಚ್ಚರಿಕೆ' ಗೇಟಿನಲ್ಲೇ ಫಲಕ ತೂಗಿರುತ್ತದೆ. ಮತ್ತೆ ಒಳಗೆ ಹೋಗುವ ಪ್ರಮೇಯವೇ ಇಲ್ಲವಲ್ಲ. ಕಾಫಿ, ಚಹ ದೂರದ ಮಾತು. ಅಪರೂಪಕ್ಕೊಮ್ಮೆ ಈ ಭಾಗ್ಯ ಸಿಗುವುದುಂಟು. 'ಮಾತಿಗೂ ಬರಗಾಲ'ದ ಸಮಯದಲ್ಲಿ ಆತಿಥ್ಯಕ್ಕೆ ಎಲ್ಲಿ ಜಾಗ? ಆತಿಥ್ಯವು ಮನೆತನ-ಸಂಸ್ಕಾರದಿಂದ ಬರುವಂತಹ ಬಳುವಳಿ. ಬರೇ ತೋರಿಕೆಯಿಂದ ಪ್ರಯೋಜನವಿಲ್ಲ. ಅದು ಮನಸ್ಸಿನಿಂದ ಬರಬೇಕು. ಆಗಲೇ ಅದಕ್ಕೆ ಮೌಲ್ಯ. ಹಳ್ಳಿಗಳಲ್ಲಿ ಇನ್ನೂ ಉಳಿದುಕೊಂಡಿದೆ.

ಕೆಲವು ಸಮಾರಂಭಗಳ ಭೋಜನವೂ 'ರಾಕ್ಷಸಾತಿಥ್ಯ'ಕ್ಕೆ ಮಾದರಿ! ಐಟಂಗಳ ಸರಮಾಲೆ. ಉಂಡು ಎದ್ದಾಗ ಎಲ್ಲರ ಎಲೆಯಲ್ಲೂ ಉಂಡುಬಿಟ್ಟ 'ತ್ಯಾಜ್ಯದ ಗುಡ್ಡ'! ಊಟದಲ್ಲೂ ಪ್ರತಿಷ್ಠೆ.
ಬದುಕು ಬದಲಾಗುತ್ತಿದ್ದಾಗ ನಮ್ಮ ಪಾರಂಪರಿಕ ಆಚಾರಗಳನ್ನು 'ಅರ್ಥಶೂನ್ಯ' ಎನ್ನುತ್ತಾ ತಳ್ಳುತ್ತೇವೆ. ನಮ್ಮಲ್ಲೊಂದು ಮನಸ್ಸಿದ್ದರೆ, ಅದನ್ನೇ ಕೇಳೋಣ - ಆಗ ಅದು ಹೇಳುತ್ತದೆ 'ಆಚಾರಗಳಿಗೆ ಆರ್ಥವಿದೆ. ಅದನ್ನು ಆಚರಿಸುವ ನಿನ್ನ ಬದುಕೇ ಅರ್ಥಶೂನ್ಯ'!ತುತ್ತಿಗೂ ತತ್ವಾರದ ಎಷ್ಟು ಕುಟುಂಬಗಳು ನಮ್ಮಲ್ಲಿಲ್ಲ. ಹಲಸಿನ ಕಾಯನ್ನು ಬೇಯಿಸಿ ಬದುಕು ಸವೆಸಿದ ಗ್ರಾಮೀಣ ಮಂದಿ ಯಾವುದೇ ಕಾಯಿಲೆ ಇಲ್ಲದೆ ಗಟ್ಟಿಮುಟ್ಟಾಗಿದ್ದಾರೆ. ಒಂದು ಹೊತ್ತು ಉಂಡು ದಿನಕಳೆವ ಕಾಯಕಷ್ಟದವರು ಇಲ್ವಾ. 'ರಾಕ್ಷಸಾತಿಥ್ಯ'ದ ಒಂದು ದಿವಸದ ಐಟಂ ಇದೆಯಲ್ಲಾ, ಅದು ಒಬ್ಬನಿಗೆ 'ಒಂದು ವಾರಕ್ಕೆ' ಸಾಕು! ಇಂತಹ ಮಾದರಿಗಳು ನಮ್ಮ ನಡುವೆ ಎಷ್ಟಿಲ್ಲ?

Wednesday, February 18, 2009

ಹೀಗೊಂದು ಕಲಿಕೆ- 'ಪ್ಲಾಸ್ಟಿಕ್ ಹೆಕ್ಕಿಕೋ'

ಕೃಷಿಕ ಭಾಸ್ಕರ ಅವರಿಗೆ ವಾಕಿಂಗ್ ನಿತ್ಯಾಭ್ಯಾಸ. ಇತ್ತೀಚೆಗೆ ಯಾಕೋ ವಾಕಿಂಗ್ ಜತೆಗೆ ರಸ್ತೆಯಲ್ಲಿದ್ದ ಪ್ಲಾಸ್ಟಿಕ್ ಹೆಕ್ಕಲು ಶುರುಮಾಡಿದ್ದರು! ಎಲ್ಲರಿಗೂ ಆಶ್ಚರ್ಯ. ಇದೇನು? ಅವರಲ್ಲೇ ಪ್ರಶ್ನಿಸಿ. ಶಾಲೆಯತ್ತ ಕೈ ತೋರಿಸುತ್ತಾರೆ.

ಇದು ಪುತ್ತೂರಿನ ಇಡ್ಕಿದು ಗ್ರಾಮದ 'ಸೂರ್ಯ' ಎಂಬ ಹಳ್ಳಿಯ ಸರಕಾರಿ ಶಾಲೆ. ಇಲ್ಲಿನ ಮಕ್ಕಳಿಗೆ ದಾರಿಗುಂಟ ಬಿದ್ದಿರುವ ಪ್ಲಾಸ್ಟಿಕ್ ಅಂದರೆ ಅಲರ್ಜಿ! ಕಂಡರೆ ಸಾಕು, ಮುಗಿಬಿದ್ದು ಹೆಕ್ಕುತ್ತಾರೆ! ಕಾಳುಹೆಕ್ಕುವ ಸ್ಪರ್ಧೆಯಂತೆ. ಶಾಲಾವ್ಯಾಪ್ತಿಯಲ್ಲಿ ಈಗ ಪ್ಲಾಸ್ಟಿಕ್ಕೇ ಇಲ್ಲ. ಮಕ್ಕಳ ಈ ಕೆಲಸ ಭಾಸ್ಕರ ಅವರಿಗೆ ಪ್ರಚೋದನೆ.

ಇಡ್ಕಿದು 'ಜಲಮರುಪೂರಣ'ದ ಗ್ರಾಮ. ಮನೆಮನೆಗಳಲ್ಲಿ ಮಳೆಕೊಯ್ಲು. ನೆಲ-ಜಲ, ಅರಣ್ಯ-ಪರಿಸರ ಇಲ್ಲಿನ ಮಂತ್ರ. ಒಂದರಿಂದ ಹತ್ತರ ತನಕ ತರಗತಿ ಇಲ್ಲಿದೆ. ಮುನ್ನೂರರ ಹತ್ತಿರ ವಿಧ್ಯಾರ್ಥಿಗಳು. ಎಲ್ಲರ ಬಾಯಲ್ಲೂ ಒಂದೇ ಶಬ್ದ - 'ಪ್ಲಾಸ್ಟಿಕ್ ಹೆಕ್ಕಿಕೋ'. ಇದು ಮನೆಯಿಂದಲೇ ಶುರು. ನೆಲ-ಜಲ ಸಂರಕ್ಷಣೆಯ ಆಂದೋಳನ ಪ್ರೇರಣೆಯೇ ಪ್ಲಾಸ್ಟಿಕ್ ಚಳುವಳಿಯ ಮೂಲ.

ಎಲ್ಲಾ ಶಾಲೆಗಳಲ್ಲೂ ರಾಷ್ಟ್ರೀಯ ಹಬ್ಬಗಳಂದು ಶಾಲೆಯಲ್ಲಿ, ಅದರಲ್ಲೂ ಹಳ್ಳಿ ಶಾಲೆಗಳಲ್ಲಿ ಧ್ವಜಾರೋಹಣ, ಸಭೆ, ಸಿಹಿ ಅಂತ ಗೌಜಿ ಇರುತ್ತದೆ. ಆ ದಿವಸ ಸಿಹಿಗಿಂತ ಸಂಗ್ರಹಿತ ಪ್ಲಾಸ್ಟಿಕ್ಕನ್ನು ಶಾಲೆಗೆ ಒಯ್ಯುವುದೇ ಇಲ್ಲಿನ ಮಕ್ಕಳಿಗೆ ಸಂಭ್ರಮ. ಜತೆಯಾಗಿ ಶಾಲಾ ವ್ಯಾಪ್ತಿಯ ಮಾರ್ಗ, ಮನೆ, ತೋಡು, ಕಣಿ..ಹೀಗೆ ಸುತ್ತಾಟ. ಪಾನ್ಪರಾಗ್ ಸ್ಯಾಚೆಟ್ನಿಂದ ತೊಡಗಿ, ದೊಡ್ಡ ದೊಡ್ಡ ತೊಟ್ಟೆ ತನಕ ಸಂಗ್ರಹ. ಶುಚಿಯಾಗಿ ಕೈತೊಳೆದು ಕ್ಲಾಸಿಗೆ ಬಂದ ನಂತರ ಉಳಿದ ಕಲಾಪ, ಸಿಹಿ.

'ಒಂದು ಕಿಲೋದಿಂದ ನಲವತ್ತು ಕಿಲೋದವರೆಗೂ ಸಂಗ್ರಹಿಸುತ್ತಾರೆ. ಅದು ಅವರವರ ಸಾಮರ್ಥ್ಯ. ಈಗಾಗಲೇ ಹತ್ತು ಕ್ವಿಂಟಾಲ್ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ತ್ಯಾಜ್ಯ ವಿಲೇವಾರಿಗಾಗಿ ಇಲಾಖೆಗಳನ್ನು ಸಂಪರ್ಕಿಸಿದ್ದೇವೆ.' ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊಂಕೋಡಿ ಸುಬ್ರಾಯ ಭಟ್.

ಮಕ್ಕಳೆಲ್ಲರೂ ಅಭಿಯಾನದಲ್ಲಿ ಪಾಲ್ಗೊಂಡಿರುವುದರಿಂದ ಎಲ್ಲರಿಗೂ ಬಹುಮಾನ. ಅದು ಲೋಟ, ಪ್ಲೇಟ್...ರೂಪದಲ್ಲಲ್ಲ! ವರ್ಷಕ್ಕೆ ಬೇಕಾಗುವಷ್ಟು ಬರೆಯುವ ಪುಸ್ತಕವನ್ನು ಉಚಿತವಾಗಿ ನೀಡುವ ಮೂಲಕ. ಒಂದರಿಂದ ನಾಲ್ಕರ ತನಕ ಬರೆಯುವ ಪುಸ್ತಕ ಕಡಿಮೆ ಬೇಕಾದುದರಿಂದ ಅವರಿಗೆ ಚೀಲ ಮತ್ತು ಕೊಡೆ ಬೋನಸ್! ಅತೀ ಹೆಚ್ಚು ಸಂಗ್ರಹಿಸಿದ ಮಗುವಿಗೆ ವಿಶೇಷ ಪುರಸ್ಕಾರ.

ಇವೆಲ್ಲವನ್ನೂ ವಿಶೇಷ ಸಮಾರಂಭದಲ್ಲಿ ವಿತರಣೆ. 40 ಕಿಲೋ ಸಂಗ್ರಹಿಸಿದ ತೇಜಸ್ಸಿಗೆ ಈ ಬಾರಿಯ ಪುರಸ್ಕಾರ.ಇಷ್ಟಕ್ಕೇ ಮುಗಿಯಲಿಲ್ಲ. ಪುಸ್ತಕಗಳೊಂದಿಗೆ ಒಂದೊಂದು ಗಿಡ. ಇದನ್ನು ತಂತಮ್ಮ ಮನೆಯಲ್ಲಿ ನೆಡಲೇಬೇಕು. ಉದಾಸೀನ ಮಾಡುವಂತಿಲ್ಲ. ಪರಿವೀಕ್ಷಣೆಗೆ ಶಾಲಾಭಿವೃದ್ಧಿ ಸಮಿತಿಯ 'ಲೋಕಾಯುಕ್ತ' ಇದೆ!

ಸುಬ್ರಾಯ ಭಟ್ ಹೇಳುತ್ತಾರೆ - 'ಈ ಯೋಜನೆಗೆ ಒಂದು ವರ್ಷ ಆಯಿತಷ್ಟೇ. ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಕೈಗೂಡಿಸಿವೆ. ಮಕ್ಕಳಿಗೆ ಪ್ಲಾಸ್ಟಿಕ್, ಪರಿಸರ ಕುರಿತ ನೇರ ಶಿಕ್ಷಣ ಲಭಿಸಿದಂತಾಗುತ್ತದೆ. ಇದಕ್ಕಾಗಿ ಪುಸ್ತಕ ಬಹುಮಾನದ ಕಾರ್ಯ. ಏನಿಲ್ಲವೆಂದರೂ ಮೂವತ್ತೈದು ಸಾವಿರ ವೆಚ್ಚಕ್ಕೆ ಬೇಕು.' ಇಂತಹ ಅರಿವನ್ನು ಹುಟ್ಟಿಸುವ ಕೆಲಸ ಶಾಲಾ ಮಟ್ಟದಲ್ಲಾಗಬೇಕು. ನಮ್ಮ ನಡುವೆ ಇರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಮಾದರಿಯಾಗಿದೆ - ಸೂರ್ಯದ ಸರಕಾರಿ ಸಂಯುಕ್ತ ಪ್ರೌಢ ಶಾಲೆ.

ತಾಲೂಕಿನ ಇರಾ ಎಂಬಲ್ಲಿ ಪಂಚಾಯತ್ ಮಟ್ಟದಲ್ಲಿ ಪ್ಲಾಸ್ಟಿಕ್ ಆಂದೋಳನ ರಾಜ್ಯದ ಗಮನ ಸೆಳೆದಿರುವುದು ಇಲ್ಲಿ ಉಲ್ಲೇಖಾರ್ಹ. ಆದರೆ ಸೂರ್ಯದಲ್ಲಾದುದು ಕೇವಲ ಶಾಲಾ ಮಟ್ಟದಲ್ಲಿ ಎಂಬುದು ಗಮನಿಸಬೇಕಾದ ಅಂಶ. ಶಾಲಾ ಆವರಣದಲ್ಲಿ ಒಂದು ಮಾಹಿತಿ ಫಲಕ ಇದೆ. ಇದರಲ್ಲಿ ಅಡಿಕೆ, ಬಾಳೆಕಾಯಿ ಧಾರಣೆ, ಕೃಷಿ ಸುದ್ದಿ, ಊರಿನ ಹಬ್ಬಗಳ ಮಾಹಿತಿಯಿದೆ. ರಾಜಕೀಯ ಹೊರತುಪಡಿಸಿ. ಇದರಿಂದಾಗ ಊರಿನ ಸುದ್ದಿಯು 'ಪತ್ರಿಕೆ ಇಲ್ಲದೆ' ಎಲ್ಲರಿಗೂ ತಿಳಿದಂತಾಗುವುದು.

'ಇದು ನಮ್ಮ ಶಾಲೆ' ಎಂಬ ಆಭಿಮಾನವನ್ನು ಮಕ್ಕಳಲ್ಲಿ ಮೂಡಿಸುವ ಚಟುವಟಿಕೆಗಳು ವರ್ಷದುದ್ದಕ್ಕೂ ನಡೆಯುತ್ತವೆ. 'ಸರಕಾರಿ ಶಾಲೆ ಅಂದರೆ ಹೆಚ್ಚಿನವರು ಮುಖ ಸಿಂಡರಿಸುತ್ತಾರೆ. ಅದೊಂದು ಫ್ಯಾಷನ್. ನಿಜವಾದ ಅಭಿವೃದ್ಧಿ ಮಕ್ಕಳಿಂದ. ಅವರನ್ನು ಆ ದಿಸೆಯಲ್ಲಿ ತಯಾರುಗೊಳಿಸುವ ಹೊಣೆ ಶಾಲೆಯದು' ಸುಬ್ರಾಯ ಭಟ್ ಅಭಿಮತ. ಸಾಲು ಮರಗಳನ್ನು ನೆಡುವುದು ಮುಂದಿನ ಯೋಜನೆ.ತ್ಯಾಜ್ಯ ಊರಿಂದೇನೋ ಹೋಗುತ್ತದೆ. ಅದರ ಆಮೂಲಾಗ್ರ ನಾಶ ಹೇಗೆ? ಚಿಂತಿಸಬೇಕಾದ ದಿನಗಳು. ರಿಸೈಕಲ್ - ಮುಂದಿರುವ ದಾರಿ!

ಪಿಲಿಕುಳದಲ್ಲಿ ವೆನಿಲ್ಲಾ ಘಮಘಮ!

ಫೆ.14ರ ಸಂಜೆ ಮಂಗಳೂರಿನ 'ಪಿಲಿಕುಳ'ದಲ್ಲಿ ಅಖಿಲ ಭಾರತ ವೆನಿಲ್ಲಾ ಕಾರ್ಯಾಗಾರಕ್ಕೆ ಶುಭಚಾಲನೆ. ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಜಿ.ಕೆ.ವಸಂತಕುಮಾರ್ ದೀಪಜ್ವಲನ. ಕರ್ನಾಟಕ ಬ್ಯಾಂಕ್ ಅಧ್ಯಕ್ಷರಿಂದ ವಸ್ತುಪ್ರದರ್ಶನ ಉದ್ಘಾಟನೆ. ಭಾರತೀಯ ವೆನಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಪಿ.ಎಂ.ರಾಮು ಸಭಾಹಿರಿತನ.

ಭಾರತೀಯ ವೆನಿಲ್ಲಾ ಬೆಳೆಗಾರರ ಸಂಘ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಿಂದ ಕಾರ್ಯಾಗಾರ ಆಯೋಜನೆ. ಹಿರಿಯ ಡಾ.ಡಿ.ಕೆ.ಚೌಟರ ಹೆಗಲೆಣೆ. ಆಹ್ವಾನಿತ ವಂದಿಮಾಗಧರು ನಾಪತ್ತೆ. ಅಧಿಕಾರಿಗಳ ಗೈರು.

ತಾ. 15, 16 - ಎರಡು ದಿವಸ ಬರೋಬ್ಬರಿ ವೆನಿಲ್ಲಾ ಮಾತುಕತೆ. 'ನೇಶನಲ್ ಸೆಮಿನಾರ್' ಅಲ್ವಾ, ಪೂರ್ತಿ ಆಂಗ್ಲಮಯ! ಪವರ್ ಪಾಯಿಂಟ್ ಸಹಿತ ನಿರೂಪಣೆ. ಅಂಕಿಅಂಶಗಳ ದಿಂಞಣ! ಮಾರುಕಟ್ಟೆ ಚರ್ಚೆ.

ಜಿಕೆವಿ ಉವಾಚ : 'ವೆನಿಲ್ಲಾಕ್ಕೆ ಬೆಲೆ ಬಂದಾಗ ಜನರು ಮನ ಬಂದಂತೆ ಬೆಳೆದರು. ಬೆಂಗಳೂರಲ್ಲಿ ತಾರಸಿ ಮೇಲೂ ಬೆಳೆ. ಕೋಲಾರ, ಚಿತ್ರದುರ್ಗಗಳಲ್ಲಿ ಹವಾಮಾನ ಸೂಕ್ತವಲ್ಲದಿದ್ದರೂ ವೆನಿಲ್ಲಾ ಬೆಳೆದು ಕೈಸುಟ್ಟುಕೊಂಡವರೇ ಹೆಚ್ಚು. ಇದಕ್ಕೆ ಕಾರಣ ಸರಿಯಾದ ಯೋಜನೆ ಇಲ್ಲದಿರುವುದು. 4500 ಹೆಕ್ಟೇರ್ನಲ್ಲಿದ್ದ ಬೆಳೆ ಈಗ 2000 ಹೆಕ್ಟೇರ್ಗೆ ಇಳಿದಿದೆ.'

ಅನಂತಕೃಷ್ಣ ಉವಾಚ : 'ಬ್ಯಾಂಕುಗಳು ತಮ್ಮ ಸಾಲದ ಮೊತ್ತದಲ್ಲಿ ಶೇ.18ರಷ್ಟನ್ನು ಕೃಷಿಗೆ ಮೀಸಲಿಡಬೇಕೆಂದು ಸೂಚನೆ. ಇಡೀ ರಾಷ್ಟ್ರದ ಎಲ್ಲಾ ಬ್ಯಾಂಕುಗಳು ಹೀಗೆ ಶೇ.18ರಷ್ಟು ಮೊತ್ತವನ್ನು ಮೀಸಲಿಟ್ಟರೆ 4.50 ಲಕ್ಷ ಕೋಟಿ ರೂ. ಹಣ ಕೃಷಿಗೆ ಲಭ್ಯವಾಗುತ್ತದೆ. ಭಾರತದಲ್ಲಿ ಅಷ್ಟೊಂದು ಪ್ರಮಾಣದ ಹಣವನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುವವರು ಯಾರು? ನಮ್ಮ ದೇಶ ಇನ್ನೂ ಶಕ್ತವಾಗಿಲ್ಲ. ಬೆಳೆಗೆ ಸೂಕ್ತ ಬೆಲೆ ಲಭ್ಯವಾಗುವಂತೆ ಸರಿಯಾದ ಕೃಷಿ ಯೋಜನೆಯನ್ನು ರೂಪಿಸಬೇಕು.'

ಡಾ.ಚೌಟಾಜಿ - 'ಪ್ರಪಂಚದಲ್ಲಿ ಮಡಗಾಸ್ಕರ್, ಇಂಡೋನೇಶ್ಯಾ, ಮೆಕ್ಸಿಕೋ, ಚೀನಾ ಮುಂತಾದ ದೇಶಗಳ ವೆನಿಲ್ಲಾ ಖ್ಯಾತಿ. ಒಟ್ಟು ಉತ್ಪಾದನೆಯಲ್ಲಿ ಮಡಗಾಸ್ಕರ್ ನದು ಸಿಂಹಪಾಲು. ವೆನಿಲ್ಲಾದಲ್ಲಿರುವ 'ವೆನಿಲಿನ್' ಪರಿಮಳಕ್ಕೆ ಮೂಲ. ಮಣ್ಣು, ಹವಾಗುಣ, ಕ್ಯೂರಿಂಗ್, ಒಣಗಿಸುವ ವಿಧಾನಗಳು ವೆನಿಲಿನ್ ಪ್ರಮಾಣವನ್ನು ನಿರ್ಧರಿಸುತ್ತದೆ. ಭಾರತದ ವೆನಿಲ್ಲಾದಲ್ಲಿ ವೆನಿಲಿನ್ ಪ್ರಮಾಣ ಅಧಿಕ. ನಮ್ಮ ವೆನಿಲ್ಲಾಗೆ ಪ್ರತ್ಯೇಕ ಲೇಬಲ್ ಇಲ್ಲದಿರುವುದು ಮಾರುಕಟ್ಟೆ ಸಮಸ್ಯೆ'.

Sunday, February 15, 2009

'ಚೀಲ' ಎಲ್ಲಿ?

ಜೀನಸಿಯ ಪಟ್ಟಿಯೊಂದಿಗೆ ಬಟ್ಟೆಯ ಚೀಲವನ್ನೂ ಒಯ್ದು ಜೀನಸಿ ತಂದ ಬಾಲ್ಯದ ದಿನಗಳಿನ್ನೂ ಹಸಿರಾಗಿವೆ. ಚೀಲತುಂಬಿದಾಗ 'ಏನೋ ವಿಶೇಷ. ಏನುಂಟು' ಎಂದು ಪ್ರಶ್ನಿಸುವ ಹಿರಿಯರು ಬಹುಶಃ ಕಾಲಗರ್ಭ ಸೇರಿರಬೇಕು.

ವಾರದ ಸಂತೆಯಿಂದ ತರಕಾರಿ ತರುವುದೇ ಸಂಭ್ರಮ. ಟೋಮ್ಯಾಟೋಗೆ ಒಂದು ಚೀಲ, ಇತರ ತರಕಾರಿಗೆ ಮತ್ತೊಂದು, ಜೀನಸಿಗೆ ಇನ್ನೊಂದು...ಹೀಗೆ ಹಲವು ಚೀಲ ಹಿಡಿದು ಹೊರಟರೆ ವಾರದ ಸಂತೆಗೆನ್ನುವುದು ಖಚಿತ. ಎಲ್ಲಾ ತುಂಬಿಸಿ ಹೊರಡುವಾಗ ಗಜಗರ್ಭ. ದೇವಸ್ಥಾನಕ್ಕೆ ಬಲಿವಾಡು ಮನೆಯಿಂದಲೇ ತರಬೇಕು - ಎನ್ನುವುದು ಅಲಿಖಿತ ಸಂಪ್ರದಾಯ. ಅದಕ್ಕೋಸ್ಕರ ಪ್ರತ್ಯೇಕವಾದ ಚೀಲ.

ಈ 'ಚೀಲ' ಎಲ್ಲಿ ಮಾಯವಾಗಿದೆ? ಪ್ಲಾಸ್ಟಿಕ್ ಚೀಲ (ತೊಟ್ಟೆ)ಗಳು ಆ ಸ್ಥಾನವನ್ನು ತುಂಬಿವೆ. ಈಗ ಅಂಗಡಿ, ಸಂತೆಗೆ ಕೈಬೀಸಿ ಹೋದರೆ ಸಾಕು. ಪ್ಲಾಸ್ಟಿಕ್ ಚೀಲದೊಳಗೆ ತರಕಾರಿ, ಜೀನಸು ತರಬಹುದು. ದೇವರ ಪ್ರಸಾದಕ್ಕೂ ಪ್ಲಾಸ್ಟಿಕ್. ಕುಂಕುಮವೋ, ಗಂಧವೋ ಅಂಗೈಗೆ ಅಂಟುತ್ತದಲ್ಲಾ! ಅದಕ್ಕೂ 'ಚಿಕ್ಕ ಪ್ಲಾಸ್ಟಿಕ್ ತೊಟ್ಟೆ'! ಸಮಾರಂಭಗಳಲ್ಲಿ ಚಹಾ, ಶರಬತ್ತುಗಳಿಗೆ ಪ್ಲಾಸ್ಟಿಕ್ ಲೋಟ. ಈಗಂತೂ ಊಟಕ್ಕೆ ಸೀಲ್ ಮಾಡಿದ ನೀರಿನ ಪ್ಲಾಸ್ಟಿಕ್ ಬಾಟಲ್/ಗ್ಲಾಸುಗಳು ಬಂದಿವೆ!

ಇತ್ತೀಚೆಗೆ ಅಂಗಡಿಯೊಂದರಲ್ಲಿ ಒಂದು ಕಿಲೋ ಸಕ್ಕರೆಯನ್ನು ಖರೀದಿಸಿದ ಓರ್ವ ವ್ಯಕ್ತಿ ಪ್ಲಾಸ್ಟಿಕ್ ಚೀಲಕ್ಕಾಗಿ 'ಗಲಾಟೆ' ಮಾಡುತ್ತಿದ್ದ. ಹೆಗಲಲ್ಲಿ ಚೀಲವಿದ್ದರೂ, ಸಕ್ಕರೆಯನ್ನು ತೂಗಿಸಿ ಒಯ್ಯಲು ಪ್ಲಾಸ್ಟಿಕ್ ತೊಟ್ಟೆಗಾಗಿ ಗಲಾಟೆ. ಕೊನೆಗೆ ಅಂಗಡಿಯಾತ ನೀಡಿದನೆನ್ನಿ. 'ತೊಟ್ಟೆ ಇಲ್ಲದೆ ಯಾವ ವಸ್ತುವೂ ಮನೆ ಸೇರದು' ಎಂಬ ವ್ಯವಸ್ಥೆಯನ್ನು ಸ್ವ-ರೂಢಿಸಿಕೊಂಡಿದ್ದೇವೆ.

ಬದುಕಿನ ಎಲ್ಲಾ ವ್ಯವಸ್ಥೆಗಳಲ್ಲೂ ಪ್ಲಾಸ್ಟಿಕ್ ಆವರಿಸಿದೆ. ಮಣ್ಣಲ್ಲಿ ಕರಗದ, ಬೆಂಕಿಯಲ್ಲಿ ಬೇಯದ ಇದು ಪರಿಸರಕ್ಕೆ ಮಾರಕ. ಎಲ್ಲಾ ವಿಚಾರಗಳು ಗೊತ್ತಿದ್ದೂ, ಪ್ಲಾಸ್ಟಿಕ್ ದೂರವಿಡಲು ಸಾಧ್ಯವೇ ಇಲ್ಲದಂತಹ ಸ್ಥಿತಿ.

ಮನಸ್ಸಿದ್ದರೆ ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಬಹುದು - ಎಂಬುದನ್ನು ಪುತ್ತೂರು ಕೆದಂಬಾಡಿ ಕೋರಂಗಮನೆಯ ಸಂತೋಷ್ ಕುಮಾರ್ ತೋರಿಸಿಕೊಟ್ಟಿದ್ದಾರೆ. ತಮ್ಮಲ್ಲಿಗೆ ತರುವ ಎಲ್ಲಾ ಪ್ಲಾಸ್ಟಿಕ್ ಚೀಲ(ತೊಟ್ಟೆ)ಗಳನ್ನು ಶೇಖರಿಸಿಡುತ್ತಾರೆ. ಒಂದೆರಡು ಕಿಲೋವಾದ ನಂತರ ಊರಿನ ಅಂಗಡಿಗೆ ಪುನಃ ಬಳಸಲು ನೀಡುತ್ತಾರೆ. ಇದರಿಂದಾಗಿ ಒಂದು ಚೀಲ ಎರಡ್ಮೂರು ಸಾರಿ ಬಳಸಿದಂತಾಗುತ್ತದೆ.

'ನನ್ನಲ್ಲಿ ಯಾವಾಗಲೂ ನಾಲ್ಕೈದು ಬಳಸಿದ ಚೀಲಗಳು ಇದ್ದೇ ಇರುತ್ತದೆ' ಎನ್ನುತ್ತಾರೆ ಸಂತೋಷ್. ಮನೆಗೆ ತಂದ ಚೀಲಗಳನ್ನು ಅವರಮ್ಮ ಜಯಂತಿ ಸಂಗ್ರಹಿಸಿಡುತ್ತಾರೆ. 'ಅವನಿಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿದ್ದಿದ್ದರೆ ಸಹಿಸುವುದಿಲ್ಲ' ಎನ್ನುತ್ತಾ ಸಂಗ್ರಹಿಸಿದ ಪ್ಲಾಸ್ಟಿಕ್ ಖಜಾನೆಯನ್ನು ತೋರಿಸುತ್ತಾರೆ.

ಉಪಯೋಗವಿಲ್ಲದ ಚೀಲಗಳು ಮನೆಯ ಪಕ್ಕದ ಹೊಂಡ ಸೇರುತ್ತವೆ. ತುಂಬಿದಾಗ ಅವಕ್ಕೆ ಮೋಕ್ಷ! ಕಳೆದೆರಡು ವರುಷಗಳಿಂದ ಪ್ಲಾಸ್ಟಿಕಿನ ಮಿತ ಬಳಕೆಗೆ ಸಂತೋಷ್ ಒಗ್ಗಿಹೋಗಿದ್ದಾರೆ. ಕೆಲವರು ಗೇಲಿ ಮಾಡಿದ್ದೂ ಇದೆಯಂತೆ!

'ಪ್ರತೀ ಸಲ ಸಾಮಾನು ತರುವಾಗಲೂ ಹೊಸ ಹೊಸ ಚೀಲಗಳು ಮನೆ ಸೇರುತ್ತವೆ. ಮರುಬಳಸಿ ನಮಗೆ ಅಭ್ಯಾಸವಾಗಿದೆ' ಎನ್ನುತ್ತಾರೆ ಮನೆಯ ಯಜಮಾನ ರಾಜೀವ ರೈಯವರು.ಇಲ್ಲಿ ಅಭಿನಂದನೆ ಹೇಳಬೇಕಾದುದು - ಚೀಲವನ್ನು ಮರುಬಳಸುವ ಅಂಗಡಿಯವರಿಗೆ! ಸಂತೋಷರ ಆಲೋಚನೆಗೆ ಅವರ ಸಹಮತ. ಇವರ ಈ ಕೆಲಸದಲ್ಲಿ ಏನೂ ಕಾಣದಿರಬಹುದು. ಆದರೆ ಒಂದು ಸಂದೇಶವಿದೆ - ಮನಸ್ಸಿದ್ದರೆ, ಪ್ಲಾಸ್ಟಿಕ್ ಕುರಿತ ಅರಿವಿದ್ದರೆ, ಪರಿಸರದ ಬಗ್ಗೆ ಕಾಳಜಿಯಿದ್ದರೆ ಸಂತೋಷರ ದಾರಿ ತುಳಿಯಬಹುದು.

.

Sunday, February 8, 2009

'ಜಲಗಾಂವ್'ನಲ್ಲಿ ಒಂದು ದಿನ






`ಜೈನ್ ಇರಿಗೇಶನ್ ಸಿಸ್ಟಂ ಲಿ.,' ಇದರ ಕೇಂದ್ರ ಕಚೇರಿ ಮಹಾರಾಷ್ಟ್ರದ ಜಲಗಾಂವ್ ನಲ್ಲಿದೆ . ಪದ್ಮಶ್ರೀ ಪುರಸ್ಕೃತ ಭವರ್ಲಾಲ್ ಜೈನ್ ಇದರ ಸ್ಥಾಪಕರು. ಮೂವತ್ತು ವರುಷಗಳ ಹಿಂದೆ 'ಸರಕಾರವೂ ತಿರಸ್ಕರಿಸಿದ' ಭೂಮಿಯನ್ನು ಕೊಂಡು, ಅದರಲ್ಲಿ ಹಸಿರಿನ ತಾರಸೀಕರಣ ಮಾಡಿದರು. ನೀರಾವರಿಯ ಎಲ್ಲಾ ಸಾಧ್ಯತೆಗಳನ್ನು ಪ್ರಯೋಗಕ್ಕೆ ಒಡ್ಡಿ ಯಶ ಪಡೆದರು. ಪೈಪು, ಹನಿ ಮತ್ತು ತುಂತುರು ನೀರಾವರಿ ಉಪಕರಣಗಳು, ಶೀಟುಗಳು, ಹಣ್ಣುಗಳ ಸಂಸ್ಕರಣೆ, ಎರೆಗೊಬ್ಬರ, ಅಂಗಾಂಶ ಬಾಳೆ..ಹೀಗೆ ಒಂದೇ ಎರಡೇ! ನಿಜಾರ್ಥದಲ್ಲಿ 'ಅದ್ಭುತ' ಕೆಲಸ.

ಮೊನ್ನೆ ಜನವರಿ 28, 29ರಂದು ಜಲಗಾಂವ್ಗೆ ಕನ್ನಡ ಪತ್ರಕರ್ತರ 'ಎಕ್ಸ್ಪೋಶರ್' ಭೇಟಿ. ಒಂದು ದಿವಸದಲ್ಲಿ ಜೈನ್ ಅವರ ಸಾಧನೆಗಳ 'ಕಿಟಕಿ' ನೋಟ. ಬರುತ್ತಾ ಅಜಂತಾ, ಎಲ್ಲೋರಾ ಭೇಟಿ. ಔರಂಗಾಬಾದ್ನಿಂದ ಮುಂಬಯಿಗಾಗಿ ಬೆಂಗಳೂರಿಗೆ ವಿಮಾನ ಹಾರಿ ಬಂದ ತಂಡದ ಮುಂದಾಳ್ತನ -ಜೈನ್ ನ ಹಿರಿಯ ಕರ್ನಾಟಕದ ಅಧಿಕಾರಿ ಶ್ರೀ ಚಿದಂಬರ ಜೋಶಿ. ಜೊತೆಗೆ ಇನ್ನೊಬ್ಬ ಅಧಿಕಾರಿ ಆರ್. ಸರ್ವಟೆ.

ಒಣಭೂಮಿಯಲ್ಲಿ ಹಸಿರು`ದ್ವೀಪ'!


ಬೆಂಗಳೂರಿನ ಸುಲ್ತಾನ್ಪಾಳ್ಯದ ಎನ್.ಆರ್.ಶೆಟ್ಟಿ ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ. ಪತ್ನಿ ಸರಸ್ವತಿಕೂಡಾ ಇದೇ ಸಂಸ್ಥೆಯಲ್ಲಿದ್ದು ಈಗ ನಿವೃತ್ತರು. ಸಂಪಾದನೆಯ ಕುಟುಂಬ. ಬೊಗಸೆ ತುಂಬಾ ಕಾಂಚಾಣ!

ಸಮಯ ಕಳೆಯಲು, ನಿವೃತ್ತ ಜೀವನ ಸಾಗಿಸಲು ರಾಜಧಾನಿಯಲ್ಲಿ ಎಷ್ಟೊಂದು ವ್ಯವಸ್ಥೆಗಳಿವೆ, ಅವಕಾಶಗಳಿವೆ. ಆದರೆ ಶೆಟ್ಟಿ ದಂಪತಿಯ ಆಯ್ಕೆ 'ಕೃಷಿ' - ಅಂದ್ರೆ ನಂಬ್ತೀರಾ?
2004ರಲ್ಲಿ ಬೆಂಗಳೂರು ಶಹರಿನ ನೆಲಮಂಗಲ ಬಳಿ ಎರಡು ಲಕ್ಷಕ್ಕೆ ಒಂದೂಕಾಲೆಕ್ರೆ ಜಾಗ ಖರೀದಿ. ಒಣಭೂಮಿ, ನೀರಿಗೆ ತತ್ವಾರ. 'ಈ ಒಣಭೂಮಿಯಲ್ಲಿ ಏನು ತೆಗಿತಿಯಾ' ಕೆಲವರು ಗೇಲಿ ಮಾಡಿದರು ಎನ್ನುವ ಶೆಟ್ರು, 'ಅನಾವಶ್ಯಕ ವೆಚ್ಚ ಮಾಡದೆ, ಹೊರಗಡೆಯಿಂದ ಯಾವುದೇ ಒಳಸುರಿಗಳನ್ನು ಸುರಿಯದೆ, ಸ್ಥಳೀಯ ಲಭ್ಯ ಸಂಪನ್ಮೂಲಗಳನ್ನು ಮಳೆಯಾಧಾರಿತವಾಗಿ ಬೆಳೆಯಬೇಕು - ಎಂಬುದು ನನ್ನ ಕೃಷಿಯ ಗುಟ್ಟು'.

ಮೊದಲಿಗೆ ಆವರಣಕ್ಕೆ ಕಾಡು ಗಿಡಗಳನ್ನು ನೆಟ್ಟರು. ಇಡೀ ಭೂಮಿಯಲ್ಲಿ ಉಳುಮೆ ಮಾಡಿದರು. 8-9 ಗುಂಟೆಯಂತೆ ಆರು ತಾಕುಗಳನ್ನು ಮಾಡಿ - ಹದಿನೈದು ವಿಧದ ಮಾವು, ಸೀತಾಫಲ, ನೆಲ್ಲಿ, ಹಲಸು, ನೇರಳೆ, ನುಗ್ಗೆ. ಗಳನ್ನು ಬೇರೆಬೇರೆಯಾಗಿ ಹಚ್ಚಿದರು. ''ಚಿಕ್ಕು, ಬಾಳೆ, ವಾಣಿಜ್ಯ ಉದ್ದೇಶದವು. 'ಇವು ಆದಾಯ ಕೊಡುವಲ್ಲಿಯ ತನಕ ಉಳಿದುದು ಫಲ ಕೊಡುತ್ತಿರಬೇಕು.' ಎಂಬ ಆಶಯ.

ತಾಕುಗಳ ಹೊರತಾದ ಜಾಗದಲ್ಲಿ ಧಾನ್ಯಗಳ ಬಿತ್ತನೆ. ಕಡ್ಲೆ, ರಾಗಿ, ಮೆಣಸು, ಅವರೆ, ಹುಚ್ಚೆಳ್ಳು, ಉದ್ದು. ಹುರುಳಿ, ಕಡ್ಲೆಕಾಯಿ, ಅಲಸಂಡೆ, ಜೋಳ ಡಯಾಂಚ, ಸೆಣಬು, ನೀಲಿ, ಹರಳುಗಳ ಬೀಜಗಳನ್ನು ಎಸೆಯುವುದು. ಎಲ್ಲೆಂದರಲ್ಲಿ ಅವು ಹುಟ್ಟಿವೆ. ಇವೆಲ್ಲಾ ಹುಟ್ಟಿ ಗಿಡವಾದಾಗ ಗೊಬ್ಬರಕ್ಕೆ ಬಹಳ ಒಳ್ಳೆಯದು. ಇವುಗಳಿಂದ ಇಳುವರಿ ಪಡೆಯಬೇಕೆಂದರೆ ಪ್ರತ್ಯೇಕ ಪ್ರತ್ಯೇಕವಾಗಿ ಬಿತ್ತಿದರಾಯಿತು. ಯಾವಾಗಲೂ ಏಕಬೆಳೆಯನ್ನು ಬೆಳೆದರೆ ಮಣ್ಣಿಗೆ ಫಲವತ್ತತೆ ಕಡಿಮೆ'.

ಗೊಬ್ಬರಗಿಡ ಗ್ಲಿರಿಸೀಡಿಯ ಹೇರಳ. ವರುಷಕ್ಕೆ ನಾಲ್ಕು ಸಲ ಸವರಿ, ಗಿಡಗಳಿಗೆ ಹಾಕುತ್ತಾರೆ. ಶುರುವಿಗೆ ಮಾತ್ರ ತಿಪ್ಪೆಗೊಬ್ಬರ. ಈಗ ಸ್ವಲ್ಪ ಮಟ್ಟಿಗೆ ಕಾಂಪೋಸ್ಟ್ ಗೊಬ್ಬರ. ಸಣ್ಣ ಪ್ರಮಾಣದಲ್ಲಿ ದ್ರವಗೊಬ್ಬರ. ಜತೆಗೆ ಜೀವಾಮೃತ, ಪಂಚಾಮೃತ - ಇವಿಷ್ಟೇ ಗಿಡಗಳಿಗೆ ಆಹಾರ.

ಹಣ್ಣಿನಗಿಡಗಳಲ್ಲಿ ಬಹುತೇಕ ಕಸಿ ಗಿಡಗಳು. ಸೀತಾಫಲ, ಮಾವು, ನೆಲ್ಲಿ, ನುಗ್ಗೆ, ಚಿಕ್ಕು ಫಲ ನೀಡಲು ಆರಂಭವಾಗಿದೆ. ಚೆನ್ನಾಗಿ ಮಳೆ ಬಂದರೆ ಇನ್ನೆರಡು ವರುಷದಲ್ಲಿ ಇಲ್ಲಿನ ಕೆಲವು ಹಣ್ಣುಗಳು ನಗದಾಗಬಹುದು.

ಮಣ್ಣಿಗೆ ನಾವು ಜೀವ ಕೊಡಬೇಕು - ಸ್ನೇಹಿತರು ಸಿಕ್ಕಾಗಲೆಲ್ಲಾ ಅವರಾಡುವ ಮಾತು. ಭೂಮಿ ಫಲವತ್ತಾಗಿರಬೇಕಾದರೆ ಅದಕ್ಕೆ ಒಳ್ಳೆಯ ವಾತಾವರಣ ಕಲ್ಪಿಸಬೇಕು, ಕಾಡು ವಾತಾವರಣ ಕಲ್ಪಿಸಬೇಕು. ವಿಪರೀತ ಗೊಬ್ಬರ, ಆರೈಕೆ ಎನ್ನುತ್ತಾ ಒಳಸುರಿಗಳನ್ನು ಕಡಿಮೆ ಮಾಡಬೇಕು - ಎನ್ನುವ ಶೆಟ್ರು, ಒಂದು ಸಣ್ಣ ಕುಟುಂಬ ಹೇಗೆ ಆಳುಗಳ ಅವಲಂಬನೆಯಿಲ್ಲದೆ, ಕಡಿಮೆ ವೆಚ್ಚದಲ್ಲಿ ಜೀವಿಸಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ.

ಮಧ್ಯ ಮಧ್ಯ ಚೆಂಡುಹೂ, ಸಾಸಿವೆ ಗಿಡ, ಪುಂಡಿಗಿಡ ಬೆಳೆದಿದ್ದಾರೆ. ಕೀಟಗಳಿಗೆ ಇವು ಬಹಳ ಪ್ರೀತಿ. ಆಗ ಉಳಿದ ಬೆಳೆಗಳಿಗೆ ಅವುಗಳ ಕಾಟಕಡಿಮೆಯಾಗುತ್ತದೆೆ. ಮಣ್ಣಿನಲ್ಲಿ ಜೀವಸಾರ ಸೃಷ್ಟಿ ಆದುದರಿಂದ ಗಿಡಗಳು ಚೆನ್ನಾಗಿವೆ. ರೋಗ ಬಂದಿಲ್ಲ. ಜೀವವೈವಿಧ್ಯ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗಿವೆ.' ಶೆಟ್ಟರ ಈ ಮಾತುಗಳಿಗೆ ಅಲ್ಲಿನ ಗಿಡಗಳೇ ಸಾಕ್ಷಿ. ಅವರ ತೋಟದ ಅತ್ತಿತ್ತದ ಕೃಷಿಯೆಲ್ಲಾ ಒಣಒಣ-ಭಣಭಣ. ಇವರದ್ದೊಂದು ಹಸಿರು 'ದ್ವೀಪ'!

'ಮಳೆಯಾಧಾರಿತವಾಗಿ ಕೃಷಿ ಸಾಧ್ಯ ಅಂತ ಕಂಡುಕೊಂಡಿದ್ದೇನೆ. ಈಗ ಧ್ಯೆರ್ಯ ಬಂದಿದೆ' ಎನ್ನುವ ಶೆಟ್ಟರು ಒಂದು ಮಾತು ಸೇರಿಸುತ್ತಾರೆ - 'ನಿಸರ್ಗದ ಕೊಡುಗೆಯನ್ನು ಅನುಭವಿಸಲು ನಿಸರ್ಗದೊಂದಿಗೆ ಇರಬೇಕು.'

ಕೃಷಿಗೆ ಮಳೆನೀರೇ ಆಧಾರ. ಸಿಮೆಂಟ್ ಟ್ಯಾಂಕ್ನಲ್ಲಿ ನೀರನ್ನು ಹಿಡಿದಿಟ್ಟುಕೊಂಡಿದ್ದಾರೆ. ಮಳೆಯಾಧಾರಿತ ಕೃಷಿ. ಮೂರು ಪ್ರತ್ಯೇಕ ಟ್ಯಾಂಕಿಗಳಲ್ಲಿ ಸೋಸಿದ ಕುಡಿನೀರು ಸಂಗ್ರಹ. ಕೊಳವೆ ಬಾವಿ ತೋಡಿಲ್ಲ, ಬಾವಿ ತೆಗೆದಿಲ್ಲ. ಆರು ಕಲ್ಲಿನ ಕಂಬಗಳನ್ನು ಊರಿ ಚಿಕ್ಕ ಮನೆ. ಸೋಲಾರ್ ಇದೆ. ದಿನವಿಡೀ ಕೆಲಸ. ವಿಶ್ರಾಂತಿ ಸಮಯದಲ್ಲಿ ರೇಡಿಯೋ, ಓದು. ಬೆಳಕಿಗೆ ಸೋಲಾರ್ ಬಳಕೆ.

ಬೆಂಗಳೂರು ನಗರದಲ್ಲಿ ಮನೆಯಿದ್ದರೂ ಶೆಟ್ಟರು ಮತ್ತು ಅವರ ಮಡದಿ ತಿಂಗಳಲ್ಲಿ 20-25 ದಿವಸ ಇಲ್ಲೇ ವಾಸ. 'ಮಳೆಸಂಗ್ರಹದ ನೀರು ಹತ್ತು ತಿಂಗಳಿಗೆ ಸಾಕಾಗುತ್ತದೆ. ಉಳಿದ ಎರಡು ತಿಂಗಳಿಗೆ ನೀರನ್ನು ಖರೀದಿಸುತ್ತೇವೆ' ಎನ್ನುತ್ತಾರೆ ಸರಸ್ವತಿ.
ಇವರ ತೋಟಕ್ಕೆ ಸುತ್ತಲಿನವರು ಬಂದು 'ಶಹಬ್ಬಾಸ್' ಅಂತಾರಂತೆ. ಮಾಡುವ ಧ್ಯೇರ್ಯ ಮಾತ್ರ ಇಲ್ಲ! ಒಂದು ಸಣ್ಣ ರೈತ ಕುಟುಂಬ ಸುಖವಾಗಿ ಈ ಪದ್ಧತಿಯಿಂದ ಖಂಡಿತ ಜೀವಿಸಬಹುದು.

ಇಷ್ಟು ಮಾಡಿದ್ದರಿಂದ ಲಾಭ ಏನು ಅಂತ ಪ್ರಶ್ನೆ ಮೂಡುವುದು ಸಹಜ. ಐಷರಾಮದ ನಗರ ಬದುಕನ್ನು ಅಪೇಕ್ಷಿಸುವವರು ದಯವಿಟ್ಟು ಇಂತಹ ಕೃಷಿ ಮಾಡಿ ಹಾಳುಮಾಡಬೇಡಿ. ನಿಮಗೆ ನಿಸರ್ಗದಲ್ಲಿ ಪ್ರೀತಿ ಇದ್ದರೆ, ಸರಳ ಬದುಕಿನ ಆಶಯವಿದ್ದರೆ ಮಾತ್ರ ಇಂತಹ ಕೃಷಿ ಮಾಡಿ' - ಶೆಟ್ಟರ ಕಿವಿಮಾತು. 'ಆವರಣಕ್ಕೆ ನೆಟ್ಟ ಕಾಡುಗಿಡಗಳು ನನ್ನ ಫಿಕ್ಸೆಡ್ ಡಿಪೋಸಿಟ್. ಹತ್ತಿಪ್ಪತ್ತು ವರುಷದಲ್ಲಿ ಅವು ನನಗೆ ದುಡ್ಡು ಕೊಡುತ್ತದೆ!' ಎಂದಾಗ ಶೆಟ್ಟರಲ್ಲಿ ಸಂತೃಪ್ತಿ.

ನಗರದಲ್ಲಿ ವಾಸಿಸಿದ ನಿಮಗೆ ಇಂತಹ ಕಾಡುವಾಸ ಹೇಗೆ ಸಹ್ಯವಾಯಿತು?
'ರೈತರ ಜತೆ ಸೇರಿಕೊಂಡಿದ್ದಾಗ, ಪಡೆದ ಜ್ಞಾನ ಇದೆಯಲ್ಲಾ, ಅದರ ಅನುಷ್ಠಾನಕ್ಕೊಂದು ತಾಣ ಬೇಕಾಗಿತ್ತು. ಅದೀಗ ಪೂರೈಸಿದೆ. ಇಲ್ಲಿನ ವಾಸವನ್ನು ಜೀವನ ಪದ್ದತಿ ಅಂತ ಸ್ವೀಕರಿಸಿದರೆ ಏನೂ ಸಮಸ್ಯೆಯಿಲ್ಲ. ಪ್ರಕೃತಿ ಅದೇ ಕೊಡ್ತದೆ. ಒದ್ದಾಟ ಬೇಡ. ಅದನ್ನು ಅದರ ಪಾಡಿಗೆ ಬಿಟ್ಟುಬಿಡಿ. ಮಣ್ಣನ್ನು ಫಲವತ್ತತೆ ಮಾಡಿ' ಅನ್ನುವಾಗ, ಸರಸ್ವತಿಯವರು 'ಇದು ನಮ್ಮ ತೋಟದ ಕಡ್ಲೆಕಾಯಿ. ಇದು ಪ್ಯಾಶನ್ ಫ್ರುಟ್ ಹಣ್ಣು. ಈಗಷ್ಟೇ ಕಿತ್ತದ್ದು. ಒಯ್ದು, ತಿಂದು ರುಚಿಹೇಳಿ' ಎನ್ನುತ್ತಾ ಕೈಗೆ ನೀಡಿದರು.