Thursday, December 30, 2010

ಮಾತೃಭೂಮಿ, ಮಧುರಾಜ್ ಮತ್ತು ಜೀವನಾಶಿನಿ

















- ಶ್ರೀ ಪಡ್ರೆ
ಚಿತ್ರ ಸೌಜನ್ಯ : ಮಧುರಾಜ್/ಮಾತೃಭೂಮಿ

ಒಂಭತ್ತು ವರ್ಷ ಹಿಂದಿನ ಆ ದಿನ ಈಗಲೂ ಚೆನ್ನಾಗಿ ನೆನಪಿದೆ. ನಾನು, ಮಾತೃಭೂಮಿ ವರದಿಗಾರ ವೇಣುಗೋಪಾಲ್ ಮತ್ತು ಛಾಯಾಗ್ರಾಹಕ ಮಧುರಾಜ್ ಮುಳಿಯಾರಿನ ಆ ಬಡಪಾಯಿಯ ಮನೆ ಹೊಕ್ಕಿದ್ದೆವು. ಎದುರುಗಡೆ ಚಾಪೆಯಲ್ಲಿ ತಲೆ ಊದಿರುವ ಪುಟ್ಟ ಮಗು ಸೈನಬಾ. ಯಾರ ಕರುಳನ್ನೂ ಹಿಂಡುವ ದೃಶ್ಯ. ನಾವಿಬ್ಬರೂ ಜತೆಯಲ್ಲೇ ಕ್ಲಿಕ್ಕಿಸಿದೆವು.

ಮರುದಿನದಿಂದ ಮಾತೃಭೂಮಿ ಮುಖಪುಟದಲ್ಲಿ ಎಂಡೋಸಲ್ಫಾನ್ ದುರಂತದ ಲೇಖನಸರಣಿ ಆರಂಭಿಸಿದ್ದು ಇದೇ ಚಿತ್ರಕತೆಯಿಂದ. ಕೋಝಿಕ್ಕೋಡಿನ ಬೇಬಿ ಆಸ್ಪತ್ರೆ ಉಚಿತವಾಗಿ ಮಗುವಿನ ಶಸ್ತ್ರಚಿಕಿತ್ಸೆ ಮಾಡಲು ಮುಂದೆಬಂತು. ಅದನ್ನು ಮಾಡಿದ್ದೂ ಆಯಿತು. ಶಸ್ತ್ರಚಿಕಿತ್ಸೆ ಫಲಕಾರಿಯಾದರೂ ಸೈನಬಾ ವಾರಗಳೊಳಗೆ ಪರಲೋಕ ಪಯಣಿಸಿದಳು.

ವಾಣಿನಗರದ ಶ್ರುತಿ ಮತ್ತು ಮುಳಿಯಾರಿನ ಸೈನಬಾರ ಚಿತ್ರ ಎಷ್ಟೊಂದು ಮಾಧ್ಯಮಗಳಲ್ಲಿ ಬೆಳಕು ಕಂಡಿತೆಂದರೆ ಇಂದು ಈ ದುರಂತ ಎಂದಾಕ್ಷಣ ಲಕ್ಷಾಂತರ ಮಂದಿಗೆ ನೆನಪಾಗುವುದು ಈ ಬಾಲೆಯರ ಚಿತ್ರಗಳನ್ನು. ಶ್ರುತಿ ‘ಜೈಪುರ ಕೃತಕ’ಕಾಲಿನೊಂದಿಗೆ ನಡೆದಾಡಿ ಹತ್ತನೆ ಕ್ಲಾಸು ಓದುತ್ತಿದ್ದರೆ, ಸೈನಬಾ ನೆನಪು ಮಾತ್ರ.

ಮಧುರಾಜರ ಮನ ಮಿಡಿಯುವ ಚಿತ್ರಗಳು ಅನಂತರ ಇಡೀ ಕೇರಳ ಪ್ರವಾಸ ಮಾಡಿದುವು. ಐನೂರಕ್ಕೂ ಹೆಚ್ಚು ಎಡೆಗಳಲ್ಲಿ ಈ ಚಿತ್ರಗಳ ಪ್ರದರ್ಶನ ನಡೆಯಿತು! ನಂತರ ಅದೆಷ್ಟೋ ಅಸೈನ್ಮೆಂಟುಗಳಿಗಾಗಿ ದೇಶದುದ್ದಗಲ ಓಡಿದರೂ ಮಧುರಾಜ್ಗೆ ಎಂಡೋ ದುರಂತ ಮರೆಯಲು ಆಗಿಯೇ ಇಲ್ಲ.

ಮಾತೃಭೂಮಿ ಆಯ್ಚಪ್ಪದಿಪ್ಪ್ (ವಾರಪತ್ರಿಕೆ) ಈ ದುರಂತದ ಬಗ್ಗೆ ಹಲವು ಕವರ್ ಸ್ಟೋರಿ ಪ್ರಕಟಿಸಿದೆ. ಆದರೆ ಈ ವಾರದ (ದಶಂಬರ 26) ನೂರು ಪುಟದ ವಿಶೇಷ ಸಂಚಿಕೆ ಈ ದುರಂತದ ಚಿತ್ರ-ವಿವರಗಳಿಗೇ ಮೀಸಲು. 'ಜೀವನಾಶಿನಿ - ನಮಗೆ ಕಾಣಲು ಇಷ್ಟವಿಲ್ಲದ ಚಿತ್ರಗಳು. ಮಧುರಾಜ್ ಸೆರೆಹಿಡಿದ ಭಯಾನಕ ಹತ್ತು ವರ್ಷಗಳು' ಎನ್ನುವುದು ಮುಖಪುಟ ಶೀರ್ಷಿಕೆ.
ಕಾಸರಗೋಡು, ಪಾಲಕ್ಕಾಡ್, ಇಡುಕ್ಕಿ ಜಿಲ್ಲೆಗಳಲ್ಲಿ ಓಡಾಡಿದ ಮಧುರಾಜ್ ಈ ದುರಂತದ ಎಳೆಎಳೆಗಳನ್ನು ಹೃದಯ ತಟ್ಟುವಂತೆ ಚಿತ್ರಿಸಿದ್ದಾರೆ. ಸಂಚಿಕೆಯ ಶಬ್ದಗಳನ್ನೂ ಮೀರಿ ಮಧುರಾಜರ ಚಿತ್ರಗಳು ಸಂವಹಿಸುತ್ತವೆ. ದುರಂತದ ಅಧ್ಯಯನಕ್ಕಾಗಿ ಕಾಸರಗೋಡು ಸಂದರ್ಶಿಸಿದ ಒಂದೂವರೆ ಡಜನ್ ಸಮಿತಿಗಳಲ್ಲಿ ಕೆಲವು ಮಾಡಿದ್ದಕ್ಕಿಂತ ಹೆಚ್ಚಿನ ಸತ್ಯಶೋಧನೆಯನ್ನು ಮಧುರಾಜ್ ಅವರ ಕ್ಯಾಮೆರಾ ಮಾಡಿದೆ.

ಈಗಿನ ಚಿತ್ರಗಳ ಜತೆಗೆ 2001ರಲ್ಲಿ ತೆಗೆದವುಗಳನ್ನೂ ಕೊಟ್ಟಿರುವುದು ಒಟ್ಟಾರೆ ಪರಿಣಾಮ ಹೆಚ್ಚಿಸಿದೆ. ಜೀವನಾಶಿನಿಯ ದೂರಪರಿಣಾಮದ ಕಲ್ಪನೆ ಸಿಗಲು.ಚರ್ಮರೋಗದಿಂದ ಕಂಗೆಟ್ಟ ಮುಳಿಯಾರಿನ ಮತ್ತು ಪಾಲಕ್ಕಾಡುಗಳ ಅನುಕ್ರಮವಾಗಿ ಸುಜಿತ್ ಮತ್ತು ಶಕ್ತಿವೇಲು ಅವರ ಎಳೆ ಚರ್ಮ ಬಿರುಕು ಬಿಟ್ಟ ರೀತಿ ನೋಡಿದರೆ ಸಾಕು
.
ತನ್ನ ಛಾಯಾಗ್ರಾಹಕನ ಪ್ರತಿಭೆ ಮತ್ತು ದೇಶದ ಅತಿ ದೊಡ್ಡ ದುರಂತವೊಂದಕ್ಕೇ ಪೂರ್ತಿ ವಿಶೇಷ ಸಂಚಿಕೆ ಮೀಸಲಿಟ್ಟ ಮಾತೃಭೂಮಿ ವಾರಪತ್ರಿಕೆ ಸಂಪಾದಕರು ಮತ್ತು ಆಡಳಿತ ಅಭಿನಂದನೀಯ. ಮಲೆಯಾಳ ಭಾಷೆಯೋ, ಎಂಡೋ ದುರಂತವೋ ಗೊತ್ತಿಲ್ಲದವರಿಗೂ ಈ ಸಂಚಿಕೆ ಸಂಗ್ರಾಹ್ಯ. ದೇಶದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಂತೂ ದೊಡ್ಡದೊಂದು ಪಾಠ.


Tuesday, December 28, 2010

ವಿಷ ಮಳೆಗೆ ಮುರುಟಿದ ಬದುಕು


'ನಮ್ಮ ಧಾರ್ಮಿಕ ವರಿಷ್ಠರು ನೀನ್ಯಾಕೆ ಪ್ರಾರ್ಥನೆಗೆ ಬರುವುದಿಲ್ಲ ಎಂದು ಒತ್ತಾಯಿಸುತ್ತಾರೆ. ನಡೆಯಲಾಗದ, ಮಾತನಾಡಲಾಗದ ಮಗ ಸಂತೋಷನನ್ನು ಬಿಟ್ಟು ಹೇಗೆ ಹೋಗಲಿ. ನನ್ನ ಪಾಲಿಗೆ ಈಗ ಇವನೇ ದೇವರು' ಎನ್ನುತ್ತಾ ಮಗನ ಆರೈಕೆಯಲ್ಲಿ ತೊಡಗುತ್ತಾರೆ ಗ್ರೇಸಿ ಡಿ'ಸೋಜ.

ಗ್ರೇಸಿಯವರ ಮಗ ಸಂತೋಷ್ ಮಿನೆಜಸ್ ಇಪ್ಪತ್ತರ ಹರೆಯದ ಯುವಕ. ದೃಷ್ಟಿ ಮತ್ತು ಶ್ರವಣ ಶಕ್ತಿ ಚೆನ್ನಾಗಿದೆ. ಬಾಲ್ಯಕ್ಕಂಟಿದ ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯತೆಯಿಂದ ಸಂತೋಷ್ ನಡೆದಾಡುವುದು ಬಿಡಿ, ಎದ್ದು ಕುಳಿತುಕೊಳ್ಳಲೂ ಅಮ್ಮನ ಆಸರೆ ಬೇಕು. ಸಂತೋಷನಿಗೆ ತೆಂಡೂಲ್ಕರ್ ಅಂದರೆ ಇಷ್ಟ. ವಿಷ್ಣುವಿರ್ಧನ್ ಫಿಲಂ ಅಂದರೆ ಖುಷಿ. ಆ ಸಂತೋಷವನ್ನು ಹಂಚಿಕೊಳ್ಳಲು ಅವನಿಂದಾಗುತ್ತಿಲ್ಲ. ಭಾವನೆಗಳನ್ನು ವ್ಯಕ್ತಪಡಿಸಲು ಹೊರಡುವಾಗ, ಪಾಪ ಮುಖದ ಮಾಂಸಪೇಶಿಗಳ ಮೇಲೆ ನಿಯಂತ್ರಣವಿಲ್ಲದ ಕಾರಣ ಆತನ ಮುಖ ಹೇಗೆಹೇಗೋ ಆಗುತ್ತದೆ. ನೋಡುವವರಿಗೆ ಅಯ್ಯೋ ಅನಿಸುತ್ತದೆ.

ಸುಬ್ರಹ್ಮಣ್ಯ ಹದಿನಾರರ ಕಟ್ಟುಮಸ್ತಿನ ಯುವಕ. ಬುದ್ಧಿಮಾಂದ್ಯ. ದಿನವಿಡೀ ಟೇಪ್ನಲ್ಲಿ ಹಾಡು ಕೇಳುತ್ತಾ, ಮಾತನಾಡುತ್ತಾ ಅಮ್ಮ, ತಂಗಿಯನ್ನು ಗೋಳಾಡಿಸುತ್ತಾ ಇರುತ್ತಾನೆ. ತಿಂಗಳ ಔಷಧಿಗೆ ಎರಡು ಸಾವಿರ ರೂಪಾಯಿ ಸಾಕಾಗುವುದಿಲ್ಲ. 'ಆತನ ನರದೋಷದಿಂದಾಗಿ ಹೀಗಾಗಿದ್ದಾನೆ' ಎಂದು ದುಃಖಿಸುತ್ತಾರೆ ತಂದೆ ಗಣೇಶ ರಾವ್.

ಇನ್ನೋರ್ವ ದುರದೃಷ್ಟಶಾಲಿ ಹದಿನಾಲ್ಕರ ಬಾಲಕ ಹರೀಶ್ ಏಳನೇ ತಿಂಗಳ ಶಿಶುವಿದ್ದಾಗ ಬಂದ ಜ್ವರದಿಂದ ಚೇತರಿಸಲೇ ಇಲ್ಲ. ನೋಡುನೋಡುತ್ತಿದ್ದಂತೆ ಕೈಕಾಲುಗಳು ಮುರುಟಿದುವು! ನಡೆದಾಡಲೂ ಕಷ್ಟವಾಗುವ ಸ್ಥಿತಿ. ಏನನ್ನಾದರೂ ಆಧರಿಸಿ ಎದ್ದು ನಿಲ್ಲುವುದೇ ಹರಸಾಹಸ. ನಡೆದಾಡಲು ಆಗುವುದಿಲ್ಲ. ಚಲಿಸಬೇಕಾದರೆ ತೆವಳುವುದೊಂದೇ ದಾರಿ.

ಕಾಣುವಾಗ ಅರುವತ್ತು ವರುಷವಾದವರಂತೆ ಕಾಣುವ ಮುವತ್ತೆಂಟರ ಶಾರದಾ ಕಳೆದ ಹತ್ತು ವರುಷಗಳಿಂದ ಬುದ್ಧಿಮಾಂದ್ಯೆ. ತನ್ನಣ್ಣ ಮೂರು ತಿಂಗಳ ಹಿಂದೆ ಮರಣಿಸಿ ಬಳಿಕ, ನಾದಿನಿ ಪ್ರೇಮಾ ಈಗ ಇವರ ರಕ್ಷಕಿ. ತನ್ನ ಆರು ಮಕ್ಕಳೊಂದಿಗೆ ಇವರನ್ನೂ ಪ್ರತ್ಯೇಕ ನಿಗಾದೊಂದಿಗೆ ಇಡಬೇಕಾದ ದುಃಸ್ಥಿತಿ.

ಮುದುಡಿದ ಕುಸುಮಗಳು

ಇವು ವಿಷಮಳೆಯಿಂದ ಜರ್ಝರಿತವಾದ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ, ಪಟ್ರಮೆ ಮತ್ತು ನಿಡ್ಲೆ ಗ್ರಾಮಗಳ ಕೆಲವು ಉದಾಹರಣೆ ಮಾತ್ರ. ಇಂತಹ ಮಕ್ಕಳು, ಬುದ್ಧಿಮಾಂದ್ಯತೆಯವರು ಜೀವಚ್ಛವವಾಗಿ ಬದುಕು ಸವೆಸುತ್ತಿದ್ದಾರೆ. ಇಲ್ಲಿರುವ ಮುದುಡಿದ ಕುಸುಮಗಳು ನಾಲ್ಕುನೂರಕ್ಕೂ ಹೆಚ್ಚು. ಈ ಕುಟುಂಬಗಳಲ್ಲಿಂದು ನಗುವಿಲ್ಲ, ನೆಮ್ಮದಿಯಿಲ್ಲ. ಇವರಿಗೆ ಸಾಂತ್ವನ ಹೇಳುವವರಿಲ್ಲ. ಇಲ್ಲಿ ಇರುವುದು ಕರುಳು ಹಿಂಡುವ ದೃಶ್ಯ ಮತ್ತು ಭೂತಾಕಾರದ ಪ್ರಶ್ನಾ ಚಿಹ್ನೆ ಮಾತ್ರ.

ಹಾಸಿಗೆ ಹಿಡಿದ ರೋಗಿಯ ಆರೈಕೆಗೆ ಒಬ್ಬರಾದರೂ ಬೇಕೇ ಬೇಕು ಅಂದ ಮೇಲೆ ಆರೈಕೆಗೆ ನಿಂತವರಿಗೂ ಸಂಪಾದನೆ ಇಲ್ಲ. ನಿಕಟ ಬಂಧುಗಳ ಮದುವೆ ಮತ್ತಿತರ ಸಮಾರಂಭಗಳಿಗೂ ಹೋಗಲು ಆಗದ ಸಂಕಟ. ಮನೆಗೆ ಅತಿಥಿಗಳನ್ನು ಬರಮಾಡಿಕೊಳ್ಳುವುದು ಮುಜುಗರ.

ಮಕ್ಕಳ ಆರೈಕೆಗೆ ಸಿಗುವುದು ಅಮ್ಮ ಮಾತ್ರ. ಇವರ ಸ್ಥಾನದಲ್ಲೊಮ್ಮೆ ನಿಂತು ನೋಡಿ. ಕಾಯಿಲೆ ಗುಣವಾಗುವುದಿಲ್ಲ. ಚೇತರಿಸುವುದಿಲ್ಲ ಎಂದು ಗೊತ್ತಿದ್ದರೂ ಆರೈಕೆ ಮಾಡದಿರಲು ಆಗುತ್ತದೆಯೇ? ಹೆತ್ತ ಕಂದಮ್ಮನ ಕುರಿತಾದ ವಿವಿಧ ಕನಸುಗಳನ್ನು ಕಟ್ಟಿದ ಆ ಅಮ್ಮ, ಕನಸು ಭಗ್ನವಾದಾಗ ಪಡುವ ಸಂಕಟ
ಹೊರಪ್ರಪಂಚಕ್ಕೆ ತಿಳಿಸುತ್ತಾಳೆಯೇ? ಎಷ್ಟೇ ಸಾಂತ್ವನ, ಪರಿಹಾರ, ಕೊಡುಗೆಗಳನ್ನು ಕೊಟ್ಟರೂ ಅವಳಿಗದು 'ಕ್ಷಣಿಕ'ವಷ್ಟೇ.
ಮನೆಯ ಯಜಮಾನ ದಿನವಿಡೀ ದುಡಿದು ಅಷ್ಟಿಷ್ಟು ಸಂಪಾದಿಸಿ ಮನೆಗೆ ಬಂದಾಗ ಮನೆಮಕ್ಕಳ ದಾರುಣ ಸ್ಥಿತಿಯು ಅವನನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸಿಬಿಡುತ್ತದೆ. ಈ ಮನೋವ್ಯಥೆಯನ್ನು ಯಾರಲ್ಲೂ ಹೇಳಿಕೊಳ್ಳುವಂತಿಲ್ಲ, ಹೇಳಿಕೊಂಡರೂ ಪ್ರಯೋಜನವಾಗುವಂತಿಲ್ಲ.

ಶಾಲಾಭ್ಯಾಸವನ್ನು ಮೊಟಕುಗೊಳಿಸಿ ತನ್ನ ಸಹೋದರರ ಆರೈಕೆಗೆ ನಿಲ್ಲುವ ಎಷ್ಟು ಮಕ್ಕಳು ಬೇಕು? ಒಂದು ವೇಳೆ ಶಾಲೆಗೆ ಹೋದರೂ ಸರಿಯಾಗಿ ಅಭ್ಯಾಸ ಮಾಡಲಾಗದೆ, ಹೋಂ ವರ್ಕ್ ಮಾಡಲಾಗದೆ ಒದ್ದಾಡುವ ಎಳೆಯ ಮನಸ್ಸುಗಳು ಅರಳುವುದರ ಬದಲು ಮುರುಟುತ್ತವೆ.

ಇದು ಕರ್ನಾಟಕ ಗೇರು ಅಭಿವೃದ್ಧಿ ನಿಗಮವು (ಕೆಸಿಡಿಸಿ) ಎರಡು ದಶಕಕ್ಕೂ ಹೆಚ್ಚು ಕಾಲ ಇಲ್ಲಿ ಹೆಲಿಕಾಪ್ಟರ್ ಮುಖಾಂತರ ಸುರಿಸಿದ ವಿಷಮಳೆಯ ಅನಂತರದ ಫಲ. ಏನಿದು ವಿಷದ ಮಳೆ? ಗೇರು ಮರದ ಹೂಗಳಿಗೆ 'ಚಹ ಸೊಳ್ಳೆ' ಬರುವುದಿದೆ. ಇದರ ನಿಯಂತ್ರಣಕ್ಕೆ ಎಂಡೋಸಲ್ಫಾನ್ ಅಥವಾ ಅದಕ್ಕೆ ಸಮನಾದ ವಿಷವನ್ನು ವೈಮಾನಿಕವಾಗಿ ಸಿಂಪಡಿಸುತ್ತಾರೆ.

ಇಲ್ಲಿರುವುದು ಎಂಟುನೂರು ಹೆಕ್ಟೇರ್ ಗೇರು ತೋಪು. ಯಾರೋ ತಿನ್ನಬೇಕಾದ ಒಂದಷ್ಟು ಟನ್ ಗೋಡಂಬಿ ಉತ್ಪಾದನೆಗಾಗಿ ಈ ಮೂರು ಗ್ರಾಮಗಳು ತೆತ್ತ ಬೆಲೆ ಅಗಾಧ. ಮನೆಮನೆಗಳಲ್ಲಿ ಬುದ್ಧಿಮಾಂದ್ಯತೆ, ಬಂಜೆತನ, ಚರ್ಮರೋಗ, ಮೂರ್ಛೆ ರೋಗ, ಜನ್ಮತಃ ಅಂಗವೈಕಲ್ಯ, ರೋಗನಿರೋಧಕ ಶಕ್ತಿಹರಣ - ಹೀಗೆ ಒಂದಲ್ಲ ಒಂದಲ್ಲ ಸಮಸ್ಯೆಗಳು.

ಇಲ್ಲಿನ ಗೇರು ತೋಪು ಪ್ರತ್ಯೇಕವಾಗಿ ಒತ್ತಟ್ಟಿಗೆ ಇಲ್ಲ. ನಡುನಡುವೆ ಜನವಸತಿ, ಗದ್ದೆ, ಕೆರೆ, ಬಾವಿ, ತೋಟಗಳಿವೆ. ಇಂಥ ಜಾಗಗಳಲ್ಲಿ ವೈಮಾನಿಕ ಸಿಂಪಡಣೆ ಮಾಡಲೇ ಬಾರದು ಎಂಬ ನಿಯಮವಿದೆ. ಅವೆಲ್ಲಾ ಗಾಳಿಗೆ ತೂರಿ ಹೋಗಿವೆ.
ಇಲ್ಲಿರುವವರು ಬಹುತೇಕ ಬಡವರು. ಆರ್ಥಿಕವಾಗಿ ಹಿಂದುಳಿದವರು. ಕೆಲವೊಂದು ರೋಗವು ಔಷಧವನ್ನು ಅಪೇಕ್ಷಿಸಿದರೆ, ಮಿಕ್ಕಂತೆ ಎಲ್ಲವೂ 'ಅನುಭವಿಸಲೇ' ಬೇಕಾದಂತಹ ಕಾಯಿಲೆಗಳು!

ಹೋರಾಟಕ್ಕೆ ನಾಂದಿ

'ಕಳೆದ ದಶಕದೀಚೆಗೆ ಇಲ್ಲಿ ಹತ್ತಕ್ಕೂ ಮಿಕ್ಕಿ ಆತ್ಮಹತ್ಯೆಗಳಾಗಿವೆ, ಬ್ಲಡ್ ಕ್ಯಾನ್ಸರ್ಗಳು ಪತ್ತೆಯಾಗಿವೆ. ಎಂದರೆ ನಂಬ್ತೀರಾ' ಎನ್ನುತ್ತಾರೆ ಎಂಡೋಸಲ್ಫಾನ್ ನಿಷೇಧ ಹೋರಾಟದ ಮುಂಚೂಣಿಯಲ್ಲಿರುವ ಶ್ರೀಧರ ಗೌಡ. ನೇರವಾಗಿ ಎಂಡೋ ವಿಷಕ್ಕೂ ಆತ್ಮಹತ್ಯೆಗೂ ಸಂಬಂಧವಿಲ್ಲದಿರಬಹುದು. ಆದರೆ ಹಿಂದೆ ಬಡತನದ ಕುರಿತಾದ, ರೋಗದ ಕುರಿತಾದ ಮಾನಸಿಕ ಒತ್ತಡಗಳು ಕೆಲಸ ಮಾಡಿವೆ.

ಇಲ್ಲಿ ಎಂಡೋಸಲ್ಪಾನ್ ವಿರೋಧಿ ಹೋರಾಟಕ್ಕೆ ಹರಿದಾಸ್ ಮರ್ಲಜೆ, ಜೋಸೆಫ್ ಪಿರೇರಾ, ಡಾ.ಮೋಹನ್ದಾಸ್ ಗೌಡ.. ಮೊದಲಾದ ಗಣ್ಯರು ಆರಂಭಕಾಲದಲ್ಲಿ ನೇತೃತ್ವ ಕೊಟ್ಟವರು. ಈಗ ಶ್ರೀಧರ್ ಗೌಡ ಹೋರಾಟದ ಮುಂಚೂಣಿಯಲ್ಲಿದ್ದಾರೆ.

ಕರ್ನಾಟಕದ ಈ ದುರಂತ ಒಂದು ದಶಕಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಮಾಧ್ಯಮಗಳು ಈ ದುರಂತದ ಆಳಕ್ಕೆ ಅನುಗುಣವಾದಂತಹ ವರದಿಗಳನ್ನು ಹೊರತರಲಿಲ್ಲ. ಸುದ್ದಿಗಳು ಪ್ರಕಟವಾದರೂ ಅವೆಲ್ಲಾ ಪ್ರಾದೇಶಿಕ ಪುಟಗಳಲ್ಲೇ ಸ್ಥಾನ ಪಡೆದಿತ್ತು. ಜನಪ್ರತಿನಿಧಿ ಮತ್ತು ಸರಕಾರಗಳು ಗೊತ್ತಿಲ್ಲದಂತೆ ನಟಿಸಿದ್ದೇ ಹೆಚ್ಚು.

ಇತ್ತ ಕೇರಳದಿಂದ ಎಂಡೋಸಲ್ಫಾನ್ ದುರಂತ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿದ್ದುವು. ಅಲ್ಲಿಯ ಕಾಯಿಲೆ ಲಕ್ಷಣಗಳಂತೆ ಇಲ್ಲೂ ಇರುವ ಕಾರಣ ಇದು ವಿಷದ ಮಳೆಯ ಪರಿಣಾಮ ಎಂದರಿಯಲು ಹೆಚ್ಚು ದಿವಸ ಬೇಕಾಗಲಿಲ್ಲ. ಹೋರಾಟಕ್ಕೆ ಅಣಿಯಾದರು. ಊರಿನ ರಸ್ತೆ, ಸೇತುವೆ ಮೊದಲಾದ ಆವಶ್ಯಕ ಸೌಲಭ್ಯಗಳ ಒತ್ತಾಯಕ್ಕೆ ರೂಪುಗೊಂಡ 'ಸಂಯುಕ್ತ ಸಂಘ ಸಂಸ್ಥೆಗಳು, ಉಪ್ಪಾರಪಳಿಕೆ' - ಸಂಸ್ಥೆಯಿಂದ ಎಂಡೋ ಹೋರಾಟಕ್ಕೆ ನಾಂದಿ.

ಎಂಟುನೂರು ಎಕ್ರೆ ಗೇರು ತೋಪನ್ನು ಅರಣ್ಯ ಇಲಾಖೆಯು ಗೇರು ಅಭಿವೃದ್ಧಿ ನಿಗಮಕ್ಕೆ ದೀರ್ಘಾವಧಿಗೆ ಲೀಸ್ಗೆ ವಹಿಸಿಕೊಟ್ಟಿತ್ತು. ಆರಂಭದಲ್ಲಿ ಇಲಾಖೆ ಸ್ಪಂದಿಸಿದರೂ, ನಂತರದ ದಿವಸಗಳಲ್ಲಿ 'ಅದು ನಮ್ಮದಲ್ಲ, ಅರಣ್ಯದವರನ್ನು ಕೇಳಿ ಎಂದಿತು. ಅವರನ್ನು ಕೇಳಿದಾಗ ನಿಗಮದವರನ್ನು ಕೇಳಿ' ಎನ್ನುತ್ತಾ ಜಾರಿಕೊಂಡುದೇ ಹೆಚ್ಚಂತೆ!

ಡಾ.ಅಬ್ದುಲ್ ಕಲಾಂ ಅವರ ರಾಷ್ಟ್ರಪತಿಗಳಾಗಿದ್ದಾಗ ಕೊಕ್ಕಡದ ಎಂಡೋ ಸ್ಥಿತಿಯನ್ನು ಮನವರಿಕೆ ಮಾಡಲಾಗಿತ್ತು. ಜತೆಗೆ ಹತ್ತು ಸಾವಿರಕ್ಕೂ ಮಿಕ್ಕಿ ಕಾರ್ಡು ಚಳುವಳಿಯೂ ನಡೆದಿತ್ತು. ವಿಷಯದ ಗಾಢತೆಯನ್ನರಿತ ಡಾ.ಕಲಾಂ ಅವರು ಸ್ಪಂದಿಸಿ ಜಿಲ್ಲಾಧಿಕಾರಿಗೆ ಆದೇಶಿಸಿದರು. ಜಿಲ್ಲಾಧಿಕಾರಿಗಳಿಂದ ಫೈಲ್ ತಹಶೀಲ್ದಾರ್ ಟೇಬಲಿಗೆ ಬಂತು. ಆದರೆ ರೋಗಿಗಳ ಸಂಖ್ಯೆ ಗೊತ್ತು ಮಾಡುವ ಸಮೀಕ್ಷೆ ನಡೆದುದು ತೀರಾ ಈಚೆಗೆ. 'ಆಗ ಸ್ಪಷ್ಟವಾಗಿ ಗೊತ್ತಾಯಿತು; ಕೊಕ್ಕಡದಲ್ಲಿ 251, ಪಟ್ರಮೆಯಲ್ಲಿ 103 ಮತ್ತು ನಿಡ್ಲೆಯಲ್ಲಿ 75 ಪೀಡಿತರು ಬಳಲುತ್ತಿರುವ ವಿಚಾರ' ಎನ್ನುತ್ತಾರೆ ಶ್ರೀಧರ್.

ಕಳೆದ ವರುಷ ಇಲ್ಲಿನ ಪರಿಸ್ಥಿತಿಯನ್ನು, ಪೀಡಿತರ ಶೋಚನೀಯ ಬದುಕನ್ನು ಚಿತ್ರೀಕರಿಸಿ ಈಗ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಯವರಿಗೆ ನೀಡಲಾಯಿತು. ಈ ವರುಷದ ಆರಂಭದಲ್ಲಿ ಶೋಭಾ ಅವರು ಈ ದುರಂತದ ಹಿಂದೆ ವೈಯಕ್ತಿಕ ಆಸಕ್ತಿ ವಹಿಸಿ ಕೊಕ್ಕಡಕ್ಕೆ ಬಂದರು, ರೋಗಗ್ರಸ್ತರ ಮನೆಗೆ ಭೇಟಿ ನೀಡಿದರು. ಪರಿಸ್ಥಿತಿಯ ಅವಲೋಕನ ಮಾಡಿದರು. ಸಮಸ್ಯೆಯ ಗಾಢತೆಯನ್ನು ಮನದಟ್ಟು ಮಾಡಿಕೊಂಡರು. ಒಟ್ಟೂ ಪರಿಣಾಮವಾಗಿ 211 ಕುಟುಂಬದ 232 ಪೀಡಿತರಿಗೆ ಐವತ್ತು ಸಾವಿರ ರೂಪಾಯಿಯಂತೆ ಪರಿಹಾರ ಸಿಗ್ತು. ಜತೆಗೆ ಶೇ.70ಕ್ಕೂ ಮಿಕ್ಕಿ ಪೀಡಿತರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿಯಂತೆ ಮಾಸಿಕ ಸಹಕಾರವೂ ಮಂಜೂರಾಯಿತು ಎನ್ನುತ್ತಾರೆ ಶ್ರೀಧರ್
.
ಬೇಕು, ದೀರ್ಘಕಾಲಿಕ ವ್ಯವಸ್ಥೆ

ಪರಿಹಾರದ ಬಳಿಕ ಯಾವೊಬ್ಬ ಮಂತ್ರಿಯಾಗಲೀ, ಅಧಿಕಾರಿಯಾಗಲೀ ಇತ್ತ ಕಡೆ ಸುಳಿದಿಲ್ಲ. ಇದು ಕೇವಲ ತಾತ್ಕಾಲಿಕ ಸಾಂತ್ವನ ಮಾತ್ರ. ಈ ಮಂದಿಯ ದೀರ್ಘಕಾಲೀನ ಪುನರ್ವಸತಿಗೆ ಒಂದು ನೀಲ ನಕಾಶೆ ಆಗಬೇಕು. ಸ್ಥಳದಲ್ಲೇ ಚಿಕಿತ್ಸೆ ಕೊಡಿಸುವ, ಈ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಮತ್ತು ಮಕ್ಕಳಿಗೆ ವಿಶೇಷ ರೀತಿಯ ಶಿಕ್ಷಣ ಕೊಡುವ ಶಾಲೆಗಳು ಈ ಪರಿಸರದಲ್ಲಿ ಆರಂಭ ಆಗಬೇಕಿದೆ.

ಮೊನ್ನೆ ಫೆಬ್ರವರಿಯಲ್ಲಿ ಮುಖ್ಯಮಂತ್ರಿಯವರು ಬಂದು ಒಂದಷ್ಟು ಆರ್ಥಿಕ ಸಹಾಯ ಕೊಟ್ಟ ನಂತರ ಮುಂದಿನ ಪರಿಹಾರ ಕ್ರಮಗಳ ಬಗ್ಗೆ ಏನೂ ನಡೆದಂತಿಲ್ಲ. ಈ ಪ್ರದೇಶದಲ್ಲಿನ ವಿಷಾಂಶವನ್ನು ಕುಗ್ಗಿಸುವ ಡಿ-ಟಾಕ್ಸಿಫಿಕೇಶನ್ ಯತ್ನಗಳು ನಡೆಯಬೇಕು. ತಮ್ಮದಲ್ಲದ ತಪ್ಪಿನಿಂದ ಜೀವನವಿಡೀ ನರಳಬೇಕಾದ ಈ ನತದೃಷ್ಟರಿಗೆ ಕೆಸಿಡಿಸಿ, ರಾಜ್ಯ ಮತ್ತು ಕೇಂದ್ರದ ಕೃಷಿ ಇಲಾಖೆಗಳು ಹಾಗೂ ಎಂಡೋಸಲ್ಫಾನ್ ತಯಾರಕ ಕಂಪೆನಿಗಳು ಸೇರಿ ನಷ್ಟ ಪರಿಹಾರ ಕೊಡಬೇಕಿದೆ.

ಇತ್ತ ನೆರೆಯ ಕೇರಳದಲ್ಲಿ ಹಾಸಿಗೆ ಹಿಡಿದ ಎಂಸೋಸಲ್ಫಾನ್ ಪೀಡಿತರಿಗೆ ಸರಕಾರ ಎರಡು ಸಾವಿರ ರೂಪಾಯಿಗಳ ಮಾಸಿಕ ಸಹಾಯ ಘೋಶಿಸಿದೆ. ಕಿಲೋಗೆ ಎರಡು ರೂಪಾಯಿ ಅಕ್ಕಿ, ಭೂಮಿ ಇಲ್ಲದವರಿಗೆ ಭೂಮಿ, ಮನೆ ಇಲ್ಲದವರಿಗೆ ಮನೆ, ಮೊಬೈಲ್ ಚಿಕಿತ್ಸಾ ವ್ಯಾನ್ ಇತ್ಯಾದಿಗಳನ್ನು ಕೊಡಮಾಡಿದೆ. ಕೇಂದ್ರ ಸಹಾಯದಿಂದ ಇಂತಹವರಿಗಾಗಿಯೇ ವಿಶೇಷ ಪ್ಯಾಕೇಜ್ ಒಂದನ್ನು ರೂಪಿಸಹೊರಟಿದೆ. ಸರಕಾರದ ನೆರವು ತಲಪುವ ಮೊದಲೇ ಸೇವಾಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಮತ್ತು ಸ್ವಾಮೀಜಿ ಮೊದಲಾದವರು ತಮ್ಮ ವತಿಯಿಂದ ಸಹಾಯವನ್ನು ತಲಪಿಸಲು ತೊಡಗಿದ್ದಾರೆ.

ಕೇರಳದ ಮೂಲೆ ಮೂಲೆಗೂ ಈ ದುರಂತದ ಎಳೆಎಳೆಗಳನ್ನು ಸಾರಿ ಹೇಳಿದ ಕೇರಳದ ಮಾಧ್ಯಮಗಳ ಜನಪರ ಕಾಳಜಿಯನ್ನು ಶ್ಲಾಘಿಸಲೇಬೇಕು. ಈ ಮೂರು ನತದೃಷ್ಟ ಗ್ರಾಮಗಳ ಕಂಗೆಟ್ಟ ಕುಟುಂಬಗಳಿಗೆ ಸಾಂತ್ವನ ಹೇಳುವುದರಲ್ಲಿ ನಾವು ಕನ್ನಾಡ ಮಂದಿ, ಮಾಧ್ಯಮಗಳು ಮತ್ತು ಸರಕಾರ ಪೂರ್ತಿ ಹಿಂದೆ ಬಿದ್ದಿದ್ದೇವೆ ಎಂದು ಹೇಳದೆ ವಿಧಿಯಿಲ್ಲ. ಈ ತಪ್ಪನ್ನು ನಾವೆಲ್ಲರೂ ಸೇರಿ ಇನ್ನಾದರೂ ತಿದ್ದಿಕೊಳ್ಳಬೇಕಿದೆ.

ಎಂಡೋ : ಮಾಧ್ಯಮ ಆಕಳಿಕೆ!



(ಚಿತ್ರಗಳು: ಎಂಡೋ ವಿರುದ್ಧ ಕಾರ್ಯಕರ್ತ ಶ್ರೀ ಪಡ್ರೆಯವರ ಸಂದರ್ಶನಕ್ಕಾಗಿ ಅವರ ಮನೆಗೇ ಮೂರು ಕ್ಯಾಮೆರಾ, ಇಪ್ಪತ್ತು ಮಂದಿ ಸಿಬಂದಿಯ ಜತೆ ಬಂದ ಇಂಡಿಯಾವಿಶನ್ ತಂಡದ ಚಟುವಟಿಕೆಗಳು.)

ಕೇರಳದಾದ್ಯಂತ ಈಗ ಎಂಡೋಸಲ್ಫಾನಿನದೇ ಸುದ್ದಿ. ತಿಂಗಳುಗಳ ಕೇವಲ ಕಾಸರಗೋಡು ಜಿಲ್ಲೆಗೆ ಸೀಮಿತವಾದ ಎಂಡೋ ಹೋರಾಟ ರಾಜ್ಯವಿಡೀ ವ್ಯಾಪಿಸಿ, ಜನರ ಮನ-ಕದವನ್ನು ತಟ್ಟಿರುವುದಕ್ಕೆ ಕಾರಣ - ಮಾಧ್ಯಮ. ಅಚ್ಚು ಮಾಧ್ಯಮಗಳಲ್ಲದೆ, ವಾಹಿನಿಗಳ ಮೂಲಕವೂ ನಿರಂತರ ಎಂಡೋ ಹಾನಿಯ ಜಾಗೃತಿ ಮೂಡಿಸುವಂತಹ ಕೆಲಸ ನಡೆಯುತ್ತಿದೆ.

ಇಂಡಿಯಾವಿಷನ್ ವಾಹಿನಿಯಂತೂ ಎಂಡೋ ದುರಂತದ ತಾಜಾ ಚಿತ್ರ, ಜನರ ಸ್ಪಂದನ, ಸಂದರ್ಶನ, ಎಂಡೋ ವಿಷದ ಬಾಧಕಗಳು, ದುಷ್ಪರಿಣಾಮಗಳನ್ನು ಸತತ ಬಿತ್ತರಿಸುತ್ತಲೇ ಇದೆ. ಈ ವಾಹಿನಿಯ ತಂಡಗಳು ಕಾಸರಗೋಡಿಗೆ ಬಂದು ದುರಂತದ ವಿಷಯದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ನಡೆಸಿವೆ. ಮಾಧ್ಯಮದ ಈ ಕೆಲಸ ದುರಂತ ಬಾಧಿತರ ಹೃದಯ ಝಲ್ಲೆನಿಸುವ ಚಿತ್ರಗಳ ಮೂಲಕ ಅಲ್ಲಿನ ಸರಕಾರ ಮತ್ತು ಜನರನ್ನು ಎಚ್ಚರಿಸಿದೆ.

ಜನಪ್ರಿಯ ಮಾತೃಭೂಮಿ ಸಾಪ್ತಾಹಿಕ ಈ ವಾರದ ತನ್ನ ವಿಶೇಷ ಸಂಚಿಕೆಯನ್ನು ಪೂರ್ತಿ ಎಂಡೋ ದುರಂತಕ್ಕೆ ಮೀಸಲಿಟ್ಟಿದೆ. ಬರೆದುಬಿಟ್ಟಿದೆ. ಭಾರತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇದೊಂದು ಸಂಗ್ರಾಹ್ಯ ಸಂಚಿಕೆ.

ಇರಲಿ, ನಮ್ಮ ಕನ್ನಾಡಿನಲ್ಲಿ ಕೇರಳದಂತಹುದೇ ಎಂಡೋ ದುರಂತವು ದ.ಕ.ಜಿಲ್ಲೆಯ ಪಟ್ರಮೆ, ನಿಡ್ಲೆ, ಕೊಕ್ಕಡಗಳಲ್ಲಿ ಕಾಣಿಸಿಕೊಂಡು ದಶಕ ಒಂದು ಸಂದಿದೆ. ಅಲ್ಲಿ ಅಂಗವೈಕಲ್ಯ, ಬುದ್ಧಿಮಾಂದ್ಯ, ಬಂಜೆತನ, ಕಿವುಡುತನದಂತಹ ಕೇಸ್ಗಳು ದಿನದಿನ ಪತ್ತೆಯಾದಾಗಲೂ ಮಾಧ್ಯಮಗಳಿಗೆ ಅದು ಮುಖ್ಯ ಸುದ್ದಿಯಲ್ಲ. ಎಲ್ಲೋ ಒಂದು ಕಾಲಂ ಸುದ್ದಿಯಾಗಿ ಮಾಯವಾಗುತ್ತಿತ್ತು.

ಈ ವರುಷದಾರಂಭದಲ್ಲಿ ಈಗ ಸಚಿವೆಯಾಗಿರುವ ಶೋಭಕ್ಕ ಕೊಕ್ಕಡಕ್ಕೆ ಬಂದರು. ಅಲ್ಲಿನ ಎಂಡೋ ಪೀಡಿತರ ಕಷ್ಟಗಳಿಗೆ ದನಿಯಾದರು. ಒಂದಷ್ಟು ಪ್ರಾಥಮಿಕ ಪರಿಹಾರವನ್ನು ಘೋಷಿಸಿದ್ದು, ಮಾತ್ರವಲ್ಲದೆ ಅದನ್ನು ಅನುಷ್ಠಾನಿಸಿಯೇ ಬಿಟ್ಟರು. ಅವರೊಂದಿಗೆ ಮಾಧ್ಯಮದ ದಂಡು ಕೂಡಾ ಇತ್ತೆನ್ನಿ!

ಪತ್ರಿಕೆಗಳು ಸುದ್ದಿ ಬರೆದುವು. ಶೋಭಕ್ಕ, ಸಿಎಂ ಅವರನ್ನೇ ಹೈಲೈಟ್ ಮಾಡಿದವು. ಪರಿಹಾರದ ಮೊತ್ತವನ್ನು ದೊಡ್ಡ ವಿಚಾರ ಅಂತ ಬಿಂಬಿಸಿದುವು. ಕೆಲವು ಸೀರಿಯಸ್ ಪತ್ರಕರ್ತರು ಎಂಡೋ ದುರಂತದ ಚಿತ್ರಣಗಳನ್ನು ಬರೆದರೂ ಅವೆಲ್ಲಾ ಪ್ರಾದೇಶಿಕ ಪುಟ ಸೇರಿದುವು! ರಾಜಧಾನಿಗೆ ಗೊತ್ತಾಗಲೇ ಇಲ್ಲ.

ಈಚೆಗೆ ಪತ್ರಿಕೆಯೊಳಗಿದ್ದ, ಒಂದಷ್ಟು ಗ್ರಾಮೀಣ ಕಾಳಜಿಯ ಪತ್ರಕರ್ತರು ವಿಷಯವನ್ನು ಹುಡುಕಿ ತಾಜಾ ವರದಿಯನ್ನು ಪ್ರಕಟಿಸಿದರು. ಮುಖ್ಯ ಪುಟಗಳಲ್ಲಿ ಎಂಡೋ ಸುದ್ದಿಗಳು ಬರತೊಡಗಿದುವು. ಸಿಎಂ ಅವರಿಗೂ ವಿಚಾರದ ಗಾಢತೆ ತಿಳಿಯಿತು. ಎಂಡೋ ನಿಷೇಧದ ಆಶ್ವಾಸನೆಯೇನೋ ಸಿಕ್ತು.

ಸಾವಯವ ಮಿಶನ್ ಅಧ್ಯಕ್ಷ ಆ.ಶ್ರೀ.ಆನಂದ್ ಕೊಕ್ಕಡಕ್ಕೆ ಬಂದರು. ಎಂಡೋ ಪೀಡಿತರ ಬದುಕಿಗೆ, ಅವರನ್ನು ಆಧರಿಸುವ ಕುಟುಂಬಕ್ಕೆ ಶಾಶ್ವತವಾದ ವ್ಯವಸ್ಥೆಯನ್ನು ಮಾಡುವ ಕುರಿತು ವರಿಷ್ಠರನ್ನು ಎಚ್ಚರಿಸಲು ಮನಮಾಡಿದ್ದಾರಂತೆ. ಸರಕಾರದ ವೆಚ್ಚದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಎಂಡೋ ಪೀಡಿತರನ್ನು ಪ್ರತ್ಯೇಕವಾದ ಬಸ್ಸಲ್ಲಿ ಕರೆದುಕೊಂಡು ಹೋಗಿ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿಸಲು ನಿರ್ಧರಿಸುವಷ್ಟು ಅವರ ಮನ ಕರಗಿದೆ! ಇದು ಮೀಡಿಯಾ ಇಂಪ್ಯಾಕ್ಟ್.

ಆದರೂ ವಾಹಿನಿಗಳು ಮಾತ್ರ ದಿವ್ಯ ಮೌನ! ಶೋಭಕ್ಕ ಬಂದಾಗ ಸ್ಥಳೀಯ ವರದಿಗಾರರು ಕಳುಹಿಸಿದ ವರದಿಗಳು 'ಸುದ್ದಿಗಳ ಮಧ್ಯೆ' ಮಿಂಚಿ ಮರೆಯಾದುವಷ್ಟೇ! ರಾಜಕೀಯವನ್ನು ಪೋಸ್ಟ್ಮಾರ್ಟಂ ಮಾಡುವ, ಹಗರಣಗಳ ಅಣುಅಣುವನ್ನು ಕೆದಕುವ ವಾಹಿನಿಗಳಿಗೆ ಕೊಕ್ಕಡ, ಪಟ್ರಮೆಗಳ ಎಂಡೋ ಸಮಸ್ಯೆಯು 'ದುರಂತ'ದಂತೆ ಕಾಣಲೇ ಇಲ್ಲ.

ಇರಲಿ, ಇಷ್ಟಾದರೂ ಬಂತಲ್ಲ ಎಂಬುದೇ ಸಮಾಧಾನ. ಎರಡು ರಾಜ್ಯಗಳ ಮಾಧ್ಯಮಗಳ ಸ್ಪಂದನ ರೀತಿಗಳಲ್ಲಿ, ಸಾಮಾಜಿಕ ಕಳಕಳಿಯಲ್ಲಿ ಏಕಿಷ್ಟು ಅಂತರ? . ಕನ್ನಾಡ ಪತ್ರಕರ್ತರು, ಪ್ರಕಟನಾ ಸಂಸ್ಥೆಗಳ ಮುಖ್ಯಸ್ಥರು ಮಾತ್ರೃಭೂಮಿಯ ಈ ವಾರದ ವಿಶೇಷ ಸಂಚಿಕೆಯನ್ನು, 'ಎಂಡೋಸಲ್ಫಾನ್ ನಿಷೇಧಿಸಿ, ಪೀಳಿಗೆಗಳನ್ನು ಉಳಿಸಿ' ಎನ್ನುವ ಇಂಡಿಯಾವಿಶನಿನ ಕ್ಯಾಂಪೈನಿನ ಪರಿಯನ್ನು ಒಮ್ಮೆಯಾದರೂ ನೋಡಬೇಕು.

Tuesday, December 14, 2010

ಕನ್ನಾಡಲ್ಲಿ 'ಹರಿತ ಭಾರತಂ' ತಂಡ




'ಕೃಷಿ ಸಂಬಂಧಿತ ಸೀರಿಯಲ್ಗಳಿಗೆ ವೀಕ್ಷಕರ ಸ್ಪಂದನ ಕಡಿಮೆ. ಇದು ಕಾರ್ಯಕ್ರಮದ ಗುಣಮಟ್ಟದ ಕೊರತೆಯೋ ಅಥವಾ ನಾವು ಚಿತ್ರೀಕರಿಸುವ ವಿಚಾರಗಳು ಜನಗಳಿಗೆ ತಲಪುವುದಿಲ್ಲವೋ. ಏನೂಂತ ಗೊತ್ತಾಗ್ತಾ ಇಲ್ಲ' - ಹೀಗೆಂದವರು ಕೇರಳ ಅಮೃತ ಟೀವಿಯ 'ಹರಿತ ಭಾರತಂ' ಕೃಷಿ ಕಾರ್ಯಕ್ರಮದ ನಿರ್ಮಾಪಕ ಸಾಜ್ ಕುರಿಯನ್.

ರಂಗು ರಂಗಿನ ಸೀರಿಯಲ್ಗಳಿಗೆ ಜನಬೆಂಬಲ ಕಣ್ಣಿಗೆ ರಾಚುತ್ತದೆ. ಸಿನಿಮಾ ಸೀರಿಯಲ್ಗಳನ್ನು ಜನ ಹುಚ್ಚುಕಟ್ಟಿ ನೋಡುತ್ತಾರೆ. ರಿಯಾಲಿಟಿ ಶೋ ಒಂದು ದಿವಸ ಪ್ರಸಾರವಾಗದಿದ್ದರೆ ಟಿವಿ ಕೇಂದ್ರಕ್ಕೆ ದೂರವಾಣಿಗಳ ಸುರಿಮಳೆ. ಆದರೆ ಕೃಷಿ ಕಾರ್ಯಕ್ರಮಕ್ಕೆ ಜನರ ಮೌನ ಯಾಕೆ? ಸನಿಹದಲ್ಲಿದ್ದ ನಿರೂಪಕಿ ದೀಪಾಗೆ ಯಾಕೋ ಈ ಪ್ರಶ್ನೆ ಅಷ್ಟೊಂದು ಸಹ್ಯವಾಗಲಿಲ್ಲ. ಅದೆಲ್ಲಾ ನಮ್ಮ ಭ್ರಮೆ. ನಾವು ಏನೋ ಸಾಧಿಸುತ್ತೇವೆಂಬ 'ಇಗೋ' ಇದೆಯಲ್ಲಾ, ಇದುವೇ ನಿಮ್ಮ ಪ್ರಶ್ನೆಗೆ ಕಾರಣ' ಎನ್ನಬೇಕೇ?

ಹೌದು. ಇದು ಚಿತ್ರ ಮಾಧ್ಯಮದ ಜಗತ್ತಿನ ಮಾತುಕತೆಯಾದರೆ, ಮುದ್ರಣ ಮಾಧ್ಯಮದ ಕತೆಯೂ ಇದಕ್ಕಿಂತ ಹೊರತಿಲ್ಲ. ಓದುಗರಿಗೆ ಅತ್ಯುತ್ತಮ ಹೂರಣದ 'ಎಕ್ಸ್ಕ್ಲೂಸಿವ್' ಯಶೋಗಾಥೆಗಳನ್ನು ಕೊಟ್ಟಾಗಲೂ ಒಂದು ಕಾರ್ಡ್ ಬರೆಯುವಷ್ಟು ಪುರುಸೊತ್ತಿಲ್ಲವಲ್ಲಾ! ಮುಖತಃ ಸಿಕ್ಕಾಗ 'ಚೆನ್ನಾಗಿತ್ತು' ಎನ್ನುವವರೂ ಕಡಿಮೆಯೇ. ಮಾನಸಿಕವಾಗಿ ಈ ಕೊರಗು ಕಾಡುತ್ತಾ ಇದ್ದಾಗ, ಸಾಜ್-ದೀಪಾ ಅವರ ಸಂಭಾಷಣೆ- ಕನ್ನಾಡಲ್ಲಿ ಮಾತ್ರವಲ್ಲ, ದೇವರ ನಾಡಲ್ಲೂ ಇದೇ ಕತೆ - ಎನ್ನುತ್ತಾ ಸಮಾಧಾನ ಪಟ್ಟುಕೊಂಡೆ.

ಸಾಜ್ ಕುರಿಯನ್ ತಂಡ ಕನ್ನಾಡಲ್ಲಿ ದಶಂಬರ 6ರಿಂದ 11ರ ತನಕ ಬೀಡುಬಿಟ್ಟಿತ್ತು. ಪುತ್ತೂರು ಸನಿಹದ ಕಡೆಶ್ವಾಲ್ಯದ ಶ್ಯಾಮ ಶಾಸ್ತ್ರಿಯವರ ಗಂಧದ ಕೃಷಿ, ಅನಂತಾಡಿಯ ಸುರೇಶ್ ಗೌಡರ ಕೃಷಿ, ಹಾಲು ಕರೆಯುವ ಯಂತ್ರಾವಿಷ್ಕಾರದ ಮುರುಳ್ಯದ ಮಿಲ್ಕ್ ಮಾಸ್ಟರ್ ರಾಘವ ಗೌಡ, ಸುಳ್ಯದ ರಾಜಿ ಆರ್.ಕೆ.ಯವರ ಕೊಕೊನಟ್ ಜೆಲ್ಲಿ, ಅಮೈ ಮಹಾಲಿಂಗ ನಾಯ್ಕರ ಬೆವರ ಶ್ರಮ ಮತ್ತು ಮಾಣಿಮೂಲೆ ಅಚ್ಯುತ ಭಟ್ ಅವರ ಇಪ್ಪತ್ತೆರಡು ಸುರಂಗ ಬದುಕಿನ ಯಶೋಗಾಥೆಗಳನ್ನು ತಂಡ ಚಿತ್ರೀಕರಿಸಿತು.

ಸಾಜು, ದೀಪಾ ಜತೆಗೆ ಕ್ಯಾಮೆರಾಮ್ಯಾನ್ ಸಿಜೊ ಮತ್ತು ರಾಜೀವ್ ಸೇರಿದಂತೆ ನಾಲ್ವರ ತಂಡ. 'ಇಪ್ಪತ್ತು ನಿಮಿಷದ ಕಂತಿಗೆ ಕನಿಷ್ಠವೆಂದರೂ ದಿನಪೂರ್ತಿಯ ಶ್ರಮ ಬೇಕು' ಎನ್ನುತ್ತಾರೆ ಸಾಜ್. ನಮ್ಮ ಕನ್ನಾಡಿನ ಕೃಷಿ ಕಾರ್ಯಕ್ರಮಗಳ ಶೂಟರ್ಗೆ ಸಾಜು ಇವರದು ’ಕಿವಿಮಾತು. ತಂಡಕ್ಕೆ 'ಹರಿತ ಭಾರತಂ' ಸಲಹಾ ಮಂಡಳಿ ಸದಸ್ಯ ಶ್ರೀ ಪಡ್ರೆ, ಹಿರಿಯ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ ಸಾಥ್ ನೀಡಿದ್ದರು.

Thursday, December 9, 2010

ಕಾಫಿ ನಾಡಲ್ಲಿ ತಳಮಳ

ದೇವವೃಂದ - ಮೂಡಿಗೆರೆ ಸನಿಹದ ಹಳ್ಳಿ. ಮುಖ್ಯ ಬೆಳೆ ಕಾಫಿ. 300 ಇಂಚು ಮಳೆ ಬೀಳುವ ಪ್ರದೇಶ. ಹೇರಳ ಹಸುರು ವನರಾಜಿ. ಇದು ಏಲಕ್ಕಿ ಕೃಷಿಯ ಕಣಜ. ನಿಧಾನಕ್ಕೆ ಏಲಕ್ಕಿಗೆ ಕಟ್ಟೆರೋಗ ಬಾಧಿಸಿ ನಾಶ. ಜತೆಗೆ ಮಣ್ಣಿನ ಫಲವತ್ತತೆಯ ಕುಸಿತ. ಆಗ ಕಾಫಿ ಬೋರ್ಡ್ ಕಚೇರಿ ಕಾರ್ಯವೆಸಗುತ್ತಿತ್ತು. 'ಕಾಫಿ ಬೆಳೆದ್ರೆ ಮಾತ್ರ ಸಾಲ ಸಿಗುತ್ತೆ. ಸಾಲ ಮಾಡಿಯಾದರೂ ಕಾಫಿ ಬೆಳೆಯೋಣ' ಎಂಬ ನಿರ್ಧಾರಕ್ಕೆ ಕೃಷಿಕರು ಬಂದರು. ಏಲಕ್ಕಿಯ ಸ್ಥಾನವನ್ನು ಕಾಫಿ ಆವರಿಸಿಕೊಂಡಿತು. ಬದುಕಲು ದಾರಿ ಸಿಕ್ತು. ಮುಂದಿನ ಕಾಫಿ ಕೃಷಿಯ ಕತೆ, ಕೃಷಿಕರ ಚಿತ್ರಣ ನಿಮ್ಮ ಮುಂದಿದೆ' - ಕಾಫಿ ಕೃಷಿಕ ಎಂ.ಜೆ.ದಿನೇಶ್ ತನ್ನೂರಿನ 'ಗತ ದೇವವೃಂದ'ದ ಬದುಕನ್ನು ಕೃಷಿ-ಗ್ರಾಮೀಣ ಪತ್ರಕರ್ತರ ಮುಂದಿಟ್ಟರು.

'ಏಲಕ್ಕಿ ಕೃಷಿ ಇದ್ದಾಗ ಹೈನು, ಕೋಳಿ.. ಮುಂತಾದ ಉಪಕಸುಬಿನೊಂದಿಗೆ ಹಳ್ಳಿ ಬದುಕು ನೆಮ್ಮದಿಯನ್ನು ಕಂಡಿತ್ತು. ಏಲಕ್ಕಿ ಕುಸಿದಾಗ ಅವೆಲ್ಲವೂ ಕೈಕೊಟ್ಟಿತು. ಆಗ ಕಾಫಿ ಏನೋ ಪ್ರವೇಶಿಸಿತು. ರೋಬಸ್ಟಾ ಕಾಫಿ ಗಿಡ ಫಸಲು ನೀಡಲು ಏನಿಲ್ಲವೆಂದರೂ 8-10 ವರುಷ ಬೇಕು. ಆ ಸಮಯದಲ್ಲಿ ಬದುಕಲು ಏನಾದರೂ ದಾರಿ ಬೇಕಲ್ವಾ. ಬೇರೆ ಆದಾಯ ಇಲ್ಲ. ಹಾಗಾಗಿ ಹಂತಹಂತವಾಗಿ ಕಾಡಿನಲ್ಲಿರುವ ನಾಟಾಗಳನ್ನು ಕಡಿದು ಮಾರುವಂತಹ ದುಃಸ್ಥಿತಿ ಬಂದಿತ್ತು'

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ತರಬೇತಿ ಶಿಬಿರದ (ಅಕ್ಟೋಬರ್ ೨೭-೩೧) ಸಂದರ್ಭದಲ್ಲಿ ಊರವರ ಕೃಷಿ ದನಿಗೆ ಪತ್ರಕರ್ತರು ಕಿವಿಗೊಟ್ಟರು. 'ಕಾಫಿ ಎಸ್ಟೇಟ್, ಕಾಫಿ ಕೃಷಿಕರು ಅಂದಾಗ ಅಲ್ಲೊಂದು ಶ್ರೀಮಂತ ಲೋಕ ಸೃಷ್ಟಿಯಾಗುತ್ತದೆ, ಸೃಷ್ಟಿಮಾಡಿಕೊಳ್ಳುತ್ತಾರೆ. ಆದರೆ ಬದುಕನ್ನು ಕೆದಕುತ್ತಾ ಸಾಗಿದಂತೆ ಅಲ್ಲೂ ಬಡತನದ ಛಾಯೆ ಗೋಚರಿಸುವಂತಹ ಸನ್ನಿವೇಶಗಳಿವೆ' - ಹೀಗೆ ಅಜ್ಞಾತ ಕಷ್ಟಗಳ ಪೋಸ್ಟ್ಮಾರ್ಟಂ.

ಶಿಬಿರದುದ್ದಕ್ಕೂ ದಿನೇಶ್ ಆಗಾಗ ನೆನಪಿಸಿಕೊಳ್ಳುತ್ತಿರುವ ಈ 'ಶ್ರೀಮಂತಿಕೆ'ಯ ಹಿಂದಿರುವ ಕಹಿಯನ್ನು ಕೆದಕುವುದು ಅಷ್ಟು ಸುಲಭವಾಗಿರಲಿಲ್ಲ. ಕಾಫಿ ಬೆಳೆ ಸಮೃದ್ಧವಾಗಿದ್ದರೂ, ಪ್ರಾಕೃತಿಕ ವಿಕೋಪದಿಂದಾಗಿ ಕೈಗೆ ಬಾರದಂತಹ ಸ್ಥಿತಿ. ಅಕಾಲ ಮಳೆಯು ಕಾಫಿ ಬದುಕನ್ನು ನುಂಗಿ ನೊಣೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ಯಾವ ಇಲಾಖೆಗಳೂ ಕೃಷಿಕನ ಆಸರೆಗೆ ಬರುವುದಿಲ್ಲ. 'ನೀವು ಕಾಫಿ ಬೆಳೀಬೇಡ್ರಿ' ಎಂಬ ಅಹಂಕಾರದ ಉತ್ತರ.

ಇತ್ತೀಚೆಗಂತೂ ಕೃಷಿ ಕಾರ್ಮಿಕ ಸಮಸ್ಯೆ. ನಗರದಿಂದ ಕಾರ್ಮಿಕರನ್ನು ಕಾಫಿ ಎಸ್ಟೇಟಿಗೆ ಕರೆತರಲಾಗುತ್ತದೆ. ಅವರಿಗೆ ವಾಹನ ವ್ಯವಸ್ಥೆ, ಐಷರಾಮಿ ಊಟೋಪಚಾರ, ಕೈತುಂಬಾ ವೇತನ ಕೊಟ್ಟರೂ ನಿರೀಕ್ಷಿಸಿದ ಕೆಲಸವಾಗುತ್ತಿಲ್ಲ.

ಈಗ ಶುಂಠಿ ಕೃಷಿಯ ಭರಾಟೆ. ವಿಷ ಸಿಂಪಡಣೆ ಮಾಡಿದಷ್ಟೂ ಇಳುವರಿ ಜಾಸ್ತಿಯೆಂಬ ಭ್ರಮೆ. ಕೃಷಿಕ ಸುಧಾಕರ್ ಹೇಳುತ್ತಾರೆ, 'ನಮ್ಮ ಜನಗಳಿಗೆ ಏನಾಗಿದೋ ಗೊತ್ತಿಲ್ಲಾರಿ. ಬೇಕೋ ಬೇಡ್ವೋ, ವಿಷ ಸುರೀತಾನೆ ಇರ್ತಾರೆ. ಈ ಕುರಿತು ಅವರಲ್ಲಿ ಜ್ಞಾನದ ಕೊರತೆಯಿದೆ'.
ಶುಂಠಿಗೆ ದರ ಏರಿದಾಗ ಎಲ್ಲರೂ ಅದನ್ನೇ ನೆಚ್ಚಿಕೊಳ್ಳುತ್ತಾರೆ. ದರ ಬಿದ್ದಾಗ ಬಿಟ್ಟುಬಿಡುತ್ತಾರೆ. ಒಂದೇ ಪ್ರದೇಶದಲ್ಲಿ ಕನಿಷ್ಠ ಐದು ವರುಷ ಸತತವಾಗಿ ಬೆಳೆದರೆ ಶುಂಠಿ ಕೃಷಿಯಲ್ಲಿ ನಷ್ಟವಿಲ್ಲ ಎಂಬ ಅನುಭವ ಮುಂದಿಟ್ಟರು ಜಯರಾಂ ದೇವವೃಂದ.
ಕಾಫಿಯೊಂದಿಗೆ ಕಾಳುಮೆಣಸು ಕೃಷಿ ಬದುಕನ್ನು ಸ್ವಲ್ಪ ಮಟ್ಟಿಗೆ ಆಧರಿಸುತ್ತ್ತಿದೆ. ಆದರೆ ಇಲ್ಲೂ ಇಲಾಖೆಗಳ ಆಟ ತಪ್ಪಿದ್ದಲ್ಲ. 'ಕಾಳುಮೆಣಸು ಸಂಬಾರ ಮಂಡಳಿಯ ವ್ಯಾಪ್ತಿಗೆ ಬರುವುದಿಲ್ಲ-ಇತ್ತ ತೋಟಗಾರಿಕೆಯ ವ್ಯಾಪ್ತಿಗೂ ಬರುವುದಿಲ್ಲ. ಹೀಂಗಾದರೆ ಕೃಷಿಕರು ಎಲ್ಲೋಗ್ಬೇಕು ಸ್ವಾಮೀ' ಸುಧಾಕರ್ ಪ್ರಶ್ನೆ.
ಮೂವತ್ತೈದು ಜಾತಿಯ ದೇಸಿ ತಳಿ ಭತ್ತಗಳು ದೇವವೃಂದದ ಸಂಪನ್ನತೆ. ಆದರೆ ಈಗ ಉಳಿದಿರುವುದು 'ರಾಜಮುಡಿ ಮತ್ತು ದಪ್ಪಭತ್ತ' ತಳಿಯೆರಡು ಮಾತ್ರ. ಇಳುವರಿ ಅಬ್ಬಬ್ಬಾ ಎಂದರೂ ಎಕರೆಗೆ 10-12 ಕ್ವಿಂಟಾಲ್.
'ಮೂರು ವರುಷದಿಂದ ಮಳೆ ಸಿಕ್ಕಾಪಟ್ಟೆ ಬಂತಲ್ವಾ. ಮುಂದಿನ ಐದು ವರುಷ ಮಳೆ ಕೈಕೊಟ್ಟರೆ?' ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರಿಂದ ಮರುಪ್ರಶ್ನೆ. '2004ರಲ್ಲಿ ನೂರಿಂಚು ಮಳೆ ಬಂತು. ಕಾಫಿ ಬೆಳೆ ಚೆನ್ನಾಗಿತ್ತು. ನಂತರ ಎರಡ್ಮೂರು ವರುಷವೂ ಇದೇ ಪರಸ್ಥಿತಿಯಿತ್ತು. ಬೆಳೆಯಲ್ಲಿ ತೊಂದರೆಯಾಗಲಿಲ್ಲ. ಮಳೆ ಕಡಿಮೆ ಬಂದರೆ ಬೆಳೆ ಚೆನ್ನಾಗಿ ಬರ್ತದೆ ಎಂಬುದು ಗ್ಯಾರಂಟಿ' ಕೃಷಿಕ ದೀಪಕ್ ಸಮಾಧಾನದ ಉತ್ತರ.

ತಮ್ಮೂರಿನ ಹಲವು ಸಮಸ್ಯೆಗಳ ಬಗ್ಗೆ ತಳಸ್ಪರ್ಶಿಯಾಗಿ ಚಿಂತನೆ. ಮೌನದ ಬದುಕಿಗೆ ಮಾತು ಕೊಡುವ ಪ್ರಯತ್ನ. ಪರಿಹಾರ ಹೇಗೆ? 'ಸಮಸ್ಯೆಯಿದೆ. ಇದರೊಳಗೆ ಅವಕಾಶಗಳನ್ನು ನೋಡುವ, ಸೃಷ್ಟಿಸುವ ಅವಕಾಶವಿದೆ' - ದಿನೇಶ್ ಮಾತುಕತೆಗೆ ಹೊಸ ಎಳೆ ತೋರಿದರು.

'ಹೌದ್ರಿ, ದಾರಿಗಳೇನೋ ಇವೆ. ಅದನ್ನು ತೋರಿಸುವವರಾರು? ಯಾವುದನ್ನು ಮಾಡಬೇಕು ಎಂದು ಹೇಳುವವರಾರು? ಸರ್ಕಾರಿ ಗೊಬ್ಬರ ಬಂದಾಗ 'ಸುರಿಯಿರಿ' ಎಂದು ಅಧಿಕಾರಿಗಳು ಹೇಳಿದರು. ಪತ್ರಿಕೆಗಳೂ ಬರೆದುವು. ಗೊಬ್ಬರ ಸುರಿದದ್ದೇ ಬಂತು. ಗಿಡಗಳು ಹಾಂಗೇ ಇವೆ' ಸುಧಾಕರ್ ಹಾಸ್ಯಮಿಶ್ರಿತವಾಗಿ ಹೇಳಿದ್ದರೂ, ಅವರ ನೋವು ಗ್ರಹಿಸಲು ಕಷ್ಟವಾಗಲಿಲ್ಲ.

ಹಲಸು ಅಭಿವೃದ್ದಿ, ಅದರ ಮೌಲ್ಯವರ್ಧನೆ. ಈ ಪ್ರದೇಶಕ್ಕೆ ತಾಳೆ ಸೂಕ್ತವಾಗಬಹುದೋ ಎಂಬ ಕುರಿತು ಅಧ್ಯಯನ. ಅಪ್ಪೆಮಿಡಿ ಕೃಷಿಗೆ ಅವಕಾಶ. ವಾಣಿಜ್ಯ ದೃಷ್ಟಿಯಿಂದ ಲಿಚ್ಚಿ ಹಣ್ಣು ಸೂಕ್ತವಾಗಿದ್ದು, ಅದನ್ನು ಬೆಳೆಯಲು ಪ್ರಚೋದನೆ. ಅಗ್ರಿಟೂರಿಸಂ ಕುರಿತು ಆಲೋಚನೆ, ಇಲ್ಲಿ ಬೆಳೆಯುವ ಭತ್ತ ಯಾ ಅಕ್ಕಿಯನ್ನು 'ದೇವವೃಂದ ಬ್ರಾಂಡ್' ಮಾಡಿಕೊಂಡರೆ ನಗರದಲ್ಲಿ ಒಳ್ಳೆಯ ಮಾರುಕಟ್ಟೆ ಕುದುರಿಸುವತ್ತ ಪ್ರಯತ್ನ.. ಹೀಗೆ ಹಲವಾರು ಪರ್ಯಾಯ ದಾರಿಗಳು ಮಾತುಕತೆಯಲ್ಲಿ ನುಸುಳಿ ಭರವಸೆ ಮೂಡಿಸಿದುವು.
'ಪರ್ಯಾಯ ಕೃಷಿಯ ಕುರಿತು ಚಿಂತನೆ ಮೂಡಿರುವುದು ಆಶಾದಾಯಕ ಬೆಳವಣಿಗೆ. ಹಾಗೆಂತ ಫಕ್ಕನೆ ಬದಲಾವಣೆಯನ್ನು ನಿರೀಕ್ಷಿಸಕೂಡದು. ಭರವಸೆಯನ್ನು, ಆತ್ಮವಿಶ್ವಾಸವನ್ನು ಬೆಳೆಸುವ ಮೋಡೆಲ್ಗಳು ಸೃಷ್ಟಿಯಾಗಬೇಕು. ಅದರ ಫಾಲೋಅಪ್ ಜತೆಜತೆಗೆ ನಡೆಯಬೇಕು' - ಎನ್ನುತ್ತಾ ಮಾತುಕತೆಗೆ ವಿರಾಮ ಹಾಕಿದರು ಹಿರಿಯ ಪತ್ರಕರ್ತ ಶ್ರೀ ಪಡ್ರೆ.
ಕೃಷಿ, ಕೃಷಿ ಬದುಕಿನತ್ತ ಊರವರೇ ಒಂದೇ ಸೂರಿನಡಿ ಮಾತುಕತೆಗೆ ಸಿದ್ಧರಾಗಿರುವುದು ಮತ್ತು ಸಮಸ್ಯೆಯನ್ನು ಹೇಳುತ್ತ ಕೂರುವುದರ ಬದಲು ಅದರ ಪರಿಹರಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ.

Wednesday, December 1, 2010

ಪುಟಾಣಿ ಸಂಶೋಧಕರಿಗೆ ರಾಷ್ಟ್ರೀಯ ಮನ್ನಣೆ


ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಸಿ.ಎಸ್.ಭಾರ್ಗವ ಮತ್ತು ಎನ್.ವಿ.ಪ್ರಮೋದ್ - ತಮ್ಮ ಪಠ್ಯ ಒಂದಂಗವಾಗಿ ಸಿದ್ಧಪಡಿಸಿದ ವಿಜ್ಞಾನ ಪ್ರಾಜೆಕ್ಟ್ ರಾಷ್ಟ್ರೀಯ ಮನ್ನಣೆ ಗಳಿಸಿದೆ. ಅಳಲೆಕಾಯಿ, ಕುಂಕುಮಕಾಯಿ, ಕಾಡುಗೇರು ಮತ್ತು ಶಂಖಪುಷ್ಪದಿಂದ ಶಾಯಿ ಸಿದ್ಧಪಡಿಸುವ ಪಾರ್ಮುಲಾವನ್ನು ಈ ವಿದ್ಯಾರ್ಥಿಗಳಿಬ್ಬರು ಸಿದ್ಧಪಡಿಸಿದ್ದರು.
ಈ ಪ್ರಾಜೆಕ್ಟನ್ನು - ಭಾರತ ಸರಕಾರದ ವಿಜ್ಞಾನ ಮ್ತು ತಂತ್ರಜ್ಞಾನ ಇಲಾಖೆ, ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಹಾಗೂ ಇಂಟೆಲ್ ಕಂಪೆನಿ ಸಹಯೋಗದಲ್ಲಿ - ಮುಂಬಯಿಯ ನೆಹರೂ ಸಯನ್ಸ್ ಸೆಂಟರ್ ನಲ್ಲಿ ಜರುಗಿದ ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ಪ್ರದರ್ಶಿಸಿ ಪ್ರಶಸ್ತಿವನ್ನು ಪಡೆದಿದ್ದಾರೆ. ಮುಂದಿನ ಮೇ ತಿಂಗಳಲ್ಲಿ ಅಮೆರಿಕಾದ ಲಾಸ್ ಎಂಜಲೀಸ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಅವಕಾಶ ಪ್ರಾಪ್ತವಾಗಿದೆ.
ವರ್ಲಿಯ ಮೇಳದಲ್ಲಿ ದಶದ ಸುಮಾರು 87 ತಂಡಗಳು ಭಾಗವಹಿಸಿದ್ದುವು. ಇದರಲ್ಲಿ ಅಂತಿಮವಾಗಿ ಎಂಟು ತಂಡಗಳು ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಲಾ ಒಂದು ಮಡಿಲ್ಗಣಕ (ಲ್ಯಾಪ್ ಟಾಪ್), ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ದೊರೆತಿದೆ.

ರಾಮಕೃಷ್ಣ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಎ.ವಸಂತಿ ಅವರ ಮಾರ್ಗದರ್ಶನ ಮತ್ತು ಮುಖ್ಯಗುರು ಎಚ್.ಶ್ರೀಧರ ರೈ ಇವರ ಗರಡಿಯಲ್ಲಿ ಪಳಗಿದ ಪ್ರಶಸ್ತಿ ಪುರಸ್ಕೃತ 'ಪುಟಾಣಿ ವಿಜ್ಞಾನಿ'ಗಳಾದ ಭಾರ್ಗವ ಮತ್ತು ಪ್ರಮೋದ್ಗೆ ಅಭಿನಂದನೆಗಳು

ರಾಜೀವ್ ದೀಕ್ಷಿತ್ ನಿಧನ

ಅಝಾದಿ ಬಚಾವೋ ಆಂದೋಲನದ ಚಳವಳಿಕಾರ, ಸ್ವದೇಶಿ ಚಿಂತನೆಯ ಪ್ರಚಾರಕ ರಾಜೀವ್ ದೀಕ್ಷಿತ್ (44) ಹೃದಯಾಘಾತದಿಂದ ಮಂಗಳವಾರ ಮುಂಜಾನೆ ನಿಧನರಾದರು.

ಉತ್ತರ ಪ್ರದೇಶದ ಆಲಿಗಡದಲ್ಲಿ ಜನನ. ಅಲಹಾಬಾದ್ನಲ್ಲಿ ಶಿಕ್ಷಣ ಪೂರ್ಣ. ಕಂಪ್ಯೂಟರ್ ಸೈನ್ಸ್ನಲ್ಲಿ ಬಿಎಸ್ಸಿ ಪದವಿ. ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ನಲ್ಲಿ ಬಿಟೆಕ್ ಪದವಿ, ಇಷ್ಟೆಲ್ಲಾ ಅಕಾಡಮಿಕ್ ಅರ್ಹತೆ ಇದ್ದರೂ, ದೀಕ್ಷಿತ್ ಉದ್ಯೋಗ ಕೈಬೀಸಿ ಕರೆಯಲಿಲ್ಲ.
ಸ್ವದೇಶಿ ಚಳವಳಿಯಲ್ಲಿ ಪೂರ್ಣಾವಧಿಯಾಗಿ ತೊಡಗಿಸಿಕೊಂಡ್ದಿದರು.
1992ರಲ್ಲಿ ಪ್ರೊ: ಧರ್ಮಪಾಲ್ಮತ್ತು ಡಾ.ಭನ್ವರ್ ಲಾಲ್ ಅವರ ಮಾರ್ಗದರ್ಶನದಲ್ಲಿ ಅಝಾದಿ ಬಚಾವೋ ಆಂದೋಲನ ಆರಂಭ. ಬ್ರಿಟನ್, ಫ್ರಾನ್ಸ್, ಜರ್ಮನಿ, ಹಾಲೆಂಡ್ನಂತಹ ಐರೋಪ್ಯ ರಾಷ್ಟ್ರಗಳಲ್ಲಿ ಸಂಚರಿಸಿ ಜನರ ರಾಷ್ಟ್ರಪ್ರೇಮದ ಅಧ್ಯಯನ. `ನಾವು ಕೂಡ ದೇಶ ಪ್ರೀತಿಸುವುದನ್ನು ಕಲಿಯೋಣ. ನಮ್ಮಲ್ಲಿ ಉತ್ಪಾದನೆಯಾಗುವುದನ್ನೇ ಬಳಸೋಣ. ಆ ಮೂಲಕ ಭಾರತವನ್ನು ಸ್ವಾವಲಂಬಿ ರಾಷ್ಟ್ರ ಮಾಡೋಣ. ಗಾಂಧಿಕನಸಿನ ಗ್ರಾಮರಾಜ್ಯ ಕಟ್ಟೋಣ' ಎಂದು ದೇಶದ ಜನರನ್ನು ತಮ್ಮ ವಾಗ್ಝರಿಯ ಮೂಲಕ ಬಡಿದೆಬ್ಬಿಸುತ್ತಿದ್ದರು.
ರಾಜ್ಯದ ಮಹಾನಗರ, ನಗರ, ಪಟ್ಟಣ ಅಷ್ಟೇ ಏಕೆ ಹಳ್ಳಿ ಹಳ್ಳಿಗಳಲ್ಲಿ ಓಡಾಟ. ಸ್ವದೇಶಿ ವಸ್ತುಗಳ ಬಗ್ಗೆ ಜಾಗೃತಿ. ಯುವಕರಲ್ಲಿ ಕೃಷಿ, ಪರಿಸರ, ಗ್ರಾಮೀಣಾಭಿವೃದ್ಧಿ, ವಾಣಿಜ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾ, ರಾಷ್ಟ್ರಚಿಂತನೆಗೆ ಹಚ್ಚುವ ಕಾಯಕ.
ದೀಕ್ಷಿತ್ ಅವರ ಸ್ವದೇಶಿ ಚಳವಳಿಯ ಹರಿತವಾದ ಮಾತು, ಬಹುರಾಷ್ಟ್ರೀಯ ಕಂಪೆನಿಗಳು ಸಾಮಾನ್ಯ ಜನರಿಗೆ ಮಾಡುತ್ತಿರುವ ಮೋಸದ ವಿಶ್ಲೇಷಣೆಗಳು ಲಕ್ಷಾಂತರ ವಿಡಿಯೊ, ಆಡಿಯೊ ಕ್ಯಾಸೆಟ್ಗಳಾದವು. ಅವರ ಭಾಷಣಗಳು ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಪುಸ್ತಕ ರೂಪ ಪಡೆದಿವೆ.